ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ 2026 ರ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಅಜಿಂಕ್ಯ ರಹಾನೆ ಹಾಗೂ ಫಿಲ್ ಅಲೆನ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಮುಂಬೈನ ಬಲಿಷ್ಠ ಬೌಲಿಂಗ್ ವಿಭಾಗದ ಬೆವರಿಳಿಸಿದರು.
ಆರಂಭದಿಂದಲ್ಲೂ ಅಬ್ಬರದ ಬ್ಯಾಟಿಂಗ್ ಮಾಡಿದ ಇವರಿಬ್ಬರು ಮೊದಲ ವಿಕೆಟ್ಗೆ ಕೇವಲ 32 ಎಸೆತಗಳಲ್ಲಿ 69 ರನ್ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಅದರಲ್ಲೂ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ಬೌಂಡರಿಗಳ ಮಳೆಗರೆದ ಈ ಜೋಡಿ ಪಾಂಡ್ಯರ ಒಂದೇ ಓವರ್ನಲ್ಲಿ 26 ರನ್ ಕಲೆಹಾಕಿತು.
ಪವರ್ಪ್ಲೇನಲ್ಲಿ ಹಾರ್ದಿಕ್ ಪಾಂಡ್ಯ ಎರಡು ಓವರ್ಗಳನ್ನು ಬೌಲ್ ಮಾಡಿ ಒಟ್ಟು 29 ರನ್ಗಳನ್ನು ಬಿಟ್ಟುಕೊಟ್ಟರು. ಅದರಲ್ಲೂ ತಮ್ಮ ಖೋಟಾದ ಎರಡನೇ ಓವರ್ನಲ್ಲಿ ಪಾಂಡ್ಯ 26 ರನ್ಗಳನ್ನು ಬಿಟ್ಟುಕೊಟ್ಟರು. ಫಿನ್ ಅಲೆನ್ ಮತ್ತು ರಹಾನೆ ಈ ಓವರ್ನಲ್ಲಿ ಎರಡು ಸಿಕ್ಸರ್ಗಳು ಮತ್ತು ಮೂರು ಬೌಂಡರಿಗಳನ್ನು ಬಾರಿಸಿದರು. ಇದು ಹಾರ್ದಿಕ್ ಪಾಂಡ್ಯ ಅವರ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಓವರ್ ಎನಿಸಿಕೊಂಡಿತು.
ಇವರಿಬ್ಬರ ಈ ಅಬ್ಬರದಿಂಆಗಿ ಕೆಕೆಆರ್ ಕೇವಲ 3.5 ಓವರ್ಗಲ್ಲಿ 50 ರನ್ಗಳ ಗಡಿ ದಾಟಿತು. ಇದು ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ನ ಅತ್ಯಂತ ವೇಗದ ಅರ್ಧಶತಕವಾಗಿದೆ. ಆದಾಗ್ಯೂ ಫಿನ್ ಅಲೆನ್ 17 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ 37 ರನ್ ಗಳಿಸಿ ಔಟಾದರೆ, ರಹಾನೆ ಕೇವಲ 27 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್ಗಳ ಸಹಾಯದಿಂದ ತಮ್ಮ ಐಪಿಎಲ್ ವೃತ್ತಿಜೀವನದ 34 ನೇ ಅರ್ಧಶತಕ ಪೂರೈಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
2025 ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಆರ್ಸಿಬಿ ತಂಡದ ಬೌಲಿಂಗ್ ಜೀವಾಳ ಎನಿಸಿಕೊಂಡಿದ್ದ ವೇಗಿ ಮೊಹಮ್ಮದ್ ಸಿರಾಜ್ (Mohammed Siraj), ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಸೇರಿಕೊಂಡಿದ್ದರು. ಪ್ರಸ್ತುತ ಗುಜರಾತ್ ತಂಡದಲ್ಲಿರುವ ಸಿರಾಜ್, ಐಪಿಎಲ್ನಲ್ಲಿ ಘರ್ಜಿಸಲು ತಯಾರಿ ನಡೆಸುತ್ತಿದ್ದಾರೆ. ಈ ಮೂಲಕ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆಯುವುದು ಸಿರಾಜ್ ಗುರಿಯಾಗಿದೆ. ಆದರೆ ಇದೆಲ್ಲದರ ನಡುವೆ ಸಿರಾಜ್ ತಮ್ಮ ವೈಯಕ್ತಿಕ ಬದುಕಿಗೆ ಸಂಬಂಧಿಸಿದಂತೆ ಸುದ್ದಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ಆಧಾರಿಸಿದ ಸುದ್ದಿಯ ಪ್ರಕಾರ ಸಿರಾಜ್, ಬಿಗ್ ಬಾಸ್ ಬ್ಯೂಟಿ ಮಹಿರಾ ಶರ್ಮಾ (Mahira Sharma) ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ವರದಿಯಾಗಿದೆ.
ಪ್ರೀತಿಯಲ್ಲಿ ಬಿದ್ದ ಸಿರಾಜ್
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೊವೊಂದರಲ್ಲಿ, ಸಿರಾಜ್ ಮತ್ತು ನಟಿ ಮಹಿರಾ ಶರ್ಮಾ ಮುಂಬೈನ ಒಂದೇ ರೆಸ್ಟೋರೆಂಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಇಬ್ಬರೂ ಅಕ್ಕಪಕ್ಕದಲ್ಲಿ ಕಾಣಿಸಿಕೊಂಡಿರಲಿಲ್ಲ. ಬದಲಿಗೆ, ಸಿರಾಜ್ ರೆಸ್ಟೋರೆಂಟ್ ಹೊರಗೆ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡುತ್ತಿದ್ದರೆ, ಇತ್ತ ಮಹಿರಾ ರೆಸ್ಟೋರೆಂಟ್ನಿಂದ ಹೊರಬಂದು ತನ್ನ ಕಾರಿನ ಕಡೆಗೆ ಹೋಗುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
Mohammed Siraj was spotted with Mahira Sharma at the same cafe.
ಸಿರಾಜ್ ಮತ್ತು ಮಹಿರಾ ಶರ್ಮಾಗೆ ಸಂಬಂಧಿಸಿದಂತೆ ಈ ರೀತಿಯ ಸುದ್ದಿ ಹರಿದಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷವೂ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಪರಸ್ಪರರ ಪೋಸ್ಟ್ಗಳಿಗೆ ಲೈಕ್ ಕೊಡುವುದು ಅಭಿಮಾನಿಗಳ ಗಮನ ಸೆಳೆದಿತ್ತು. ಆ ಸಮಯದಲ್ಲಿ, ಮಹಿರಾ ಶರ್ಮಾ ಈ ವರದಿಗಳಿಗೆ ಪ್ರತಿಕ್ರಿಯಿಸಿ, ತಾನು ಯಾರೊಂದಿಗೂ ಡೇಟಿಂಗ್ ಮಾಡುತ್ತಿಲ್ಲ ಮತ್ತು ಯಾರು ವದಂತಿಗಳನ್ನು ಹರಡಬಾರದು ಎಂದು ಮನವಿ ಮಾಡಿದ್ದರು.
ಹಾಗೆಯೇ ಮೊಹಮ್ಮದ್ ಸಿರಾಜ್ ಕೂಡ ಇನ್ಸ್ಟಾಗ್ರಾಮ್ನಲ್ಲಿ ಈ ವದಂತಿ ಬಗ್ಗೆ ಪ್ರತಿಕ್ರಿಯಿಸಿ, ತಮ್ಮ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸಂಪೂರ್ಣವಾಗಿ ಆಧಾರರಹಿತವಾಗಿದೆ ಎಂದು ಪೋಸ್ಟ್ ಮಾಡಿದ್ದರು. ಆದರೆ, ಆಶ್ಚರ್ಯಕರವಾಗಿ, ಈ ಪೋಸ್ಟ್ ಮಾಡಿದ ಸ್ವಲ್ಪ ಸಮಯದ ನಂತರ ಸಿರಾಜ್ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದರು. ಇದು ಅಭಿಮಾನಿಗಳಲ್ಲಿನ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಳಗಾವಿ, ಮಾರ್ಚ್ 29: ಬೆಳಗಾವಿ ತಾಲೂಕಿನ ಬೋಡಕ್ಯಾನಟ್ಟಿ ಗ್ರಾಮದ ರೈತ ಶಿವಲಿಂಗಪ್ಪ ಸಾತಪ್ಪ ಹುದ್ದಾರ ಮೀನು ಸಾಕಾಣಿಕೆಯಲ್ಲಿ (Fish Farming) ಯಶಸ್ಸು ಕಂಡಿದ್ದಾರೆ. ಅವರ ಸಾಧನೆ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಮನ್ ಕಿ ಬಾತ್ನಲ್ಲಿ ಉಲ್ಲೇಖಿಸಿದ್ದಾರೆ. ಆ ಮೂಲಕ ದೇಶಾದ್ಯಂತ ಕನ್ನಡಿಗನ ಹೆಸರು ಮೊಗಿದೆ. ಲಕ್ಷಾಂತರ ರೂ ಆದಾಯ ಗಳಿಸುತ್ತಿರುವ ಶಿವಲಿಂಗಪ್ಪ ಸಾತಪ್ಪ ಹುದ್ದಾರ ಅವರ ಕಥೆ ನಿಜಕ್ಕೂ ರೋಚಕವಾಗಿದೆ. ಸದ್ಯ ಹುದ್ದಾರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.
30 ಲಕ್ಷಕ್ಕೂ ಅಧಿಕ ಖರ್ಚು: ಮೂರು ವರ್ಷದಿಂದ ಮೀನು ಸಾಗಾಣಿಕೆ
ಬೋಡಕ್ಯಾನಟ್ಟಿ ಎನ್ನುವ ಪುಟ್ಟ ಗ್ರಾಮದಲ್ಲಿ ಶಿವಲಿಂಗಪ್ಪ ಅವರು ತಮ್ಮ ಪುತ್ರ ರಾಜು ನೆರವಿನಿಂದ ಒಂದು ಎಕರೆಯಲ್ಲಿ ಕೃಷಿ ಹೊಂಡದಲ್ಲಿ ಬಯೋಪ್ಲಾಕ್ ತಂತ್ರಜ್ಞಾನವನ್ನು ಬಳಸಿ ಕುಚ್ಚು(ಮರಲ್) ಮೀನು ಸಾಕಾಣಿಕೆ ಮಾಡುತ್ತಿದ್ದಾರೆ. ಕೃಷಿ ಮೀನುಗಾರಿಕೆಗೆ 30 ಲಕ್ಷಕ್ಕೂ ಅಧಿಕ ಖರ್ಚು ಮಾಡಿ ಆರಂಭಿಸಿರುವ ಶಿವಲಿಂಗಪ್ಪ, ಕಳೆದ ಮೂರು ವರ್ಷದಿಂದ ಮೀನು ಸಾಗಾಣಿಕೆ ಮಾಡುತ್ತಿದ್ದಾರೆ.
ಒಂದು ಎಕರೆ ಜಮೀನಿನಲ್ಲಿ ನಾಲ್ಕು ಕೃಷಿ ಹೊಂಡ ನಿರ್ಮಿಸಿ 15 ಸಾವಿರ ಮೀನುಗಳನ್ನ ಸಾಗಾಣಿಕೆ ಮಾಡಿದ್ದಾರೆ. ಆಂಧ್ರಪ್ರದೇಶದ ವಿಜಯವಾಡದಿಂದ ಮೀನು ಮರಿಗಳನ್ನ ತರುತ್ತಾರೆ. ಏಳರಿಂದ ಎಂಟು ತಿಂಗಳವರೆಗೆ ಒಂದು ಬ್ಯಾಚ್ ರೆಡಿಯಾಗುತ್ತೆ. ಮೀನು ಬೇಕಾದವರು ಇವರ ಕೃಷಿ ಹೊಂಡಕ್ಕೆ ಬಂದು ತೆಗೆದುಕೊಂಡು ಹೋಗುತ್ತಾರೆ. ಪ್ರತಿ 15 ದಿನಕ್ಕೊಮ್ಮೆ ಕೃಷಿ ಹೊಂಡದ ನೀರು ಬದಲಾವಣೆ ಮಾಡುತ್ತಾರೆ. ಮೊದಲ ಬ್ಯಾಚ್ನಲ್ಲಿ 25 ಲಕ್ಷ, ಎರಡನೇ ಬ್ಯಾಚ್ನಲ್ಲಿ 22 ಲಕ್ಷ ಹೀಗೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.
ಇನ್ನು ಈ ವಿಚಾರ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆದಿದ್ದು ವಿಶೇಷ. ಅಷ್ಟೇ ಅಲ್ಲದೆ ಇಂದು ಮನ್ ಕಿ ಬಾತ್ನಲ್ಲಿ ಶಿವಲಿಂಗಪ್ಪ ಹುದ್ದಾರ ಅವರ ಯಶಸ್ವಿ ಮೀನುಗಾರಿಕೆ ಬಗ್ಗೆ ದೇಶಕ್ಕೆ ಪರಿಚಯಿಸಿದರು. ಈ ರೀತಿ ಎಲ್ಲಾ ರೈತರು ವಿಭಿನ್ನವಾಗಿ ಪ್ರಯತ್ನಿಸಿದರೆ ದೇಶ ಆರ್ಥಿಕವಾಗಿ ಸದೃಢ ಆಗಬಹುದು. ಅಲ್ಲದೇ ದೇಶದ ಆರ್ಥಿಕ ಶಕ್ತಿಗೂ ದೊಡ್ಡ ಕೊಡುಗೆ ನೀಡಬಹುದು ಎಂದು ಕರೆ ನೀಡಿದ್ದಾರೆ.
ಲಕ್ಷಾಂತರ ರೂ ಗಳಿಸಿದಾಗಲೂ ಇಷ್ಟು ಖುಷಿಯಾಗಿರಲಿಲ್ಲ: ಶಿವಲಿಂಗಪ್ಪ ಹುದ್ದಾರ
ಪ್ರಧಾನಿ ಮೋದಿಯವರು ತಮ್ಮ ಹೆಸರು ಉಲ್ಲೇಖ ಮಾಡಿದ ವಿಚಾರ ಶಿವಲಿಂಗಪ್ಪ ಹುದ್ದಾರ ಅವರ ಸಂತಸಕ್ಕೆ ಪಾರವೇ ಇರಲ್ಲ. ದೇಶದ ಪ್ರಧಾನಿ ಮೋದಿ ತಮ್ಮ ಬಗ್ಗೆ ಮಾತನಾಡಿದ್ದು ಹೆಮ್ಮೆ ತಂದಿದೆ ಅಂತಾ ಸಂತಷ ಹಂಚಿಕೊಂಡಿದ್ದಾರೆ. ನಾವು ಲಕ್ಷ ಲಕ್ಷ ಆದಾಯ ಗಳಿಸಿದಾಗಲೂ ಇಷ್ಟು ಖುಷಿ ಆಗಿರಲಿಲ್ಲ. ನಾನು, ನನ್ನ ಮಕ್ಕಳಾದ ರಾಜು ಮತ್ತು ಸಾತೇಶ ಪಟ್ಟ ಪರಿಶ್ರಮಕ್ಕೆ ಇಂದು ಫಲ ಸಿಕ್ಕಿತು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ ರಾಜು ಹುದ್ದಾರ
ಶಿವಲಿಂಗಪ್ಪ ಪುತ್ರ ರಾಜು ಹುದ್ದಾರ ಮಾತನಾಡಿದ್ದು, ಮನ್ ಕಿ ಬಾತ್ನಲ್ಲಿ ಮೋದಿ ಅವರು ನಮ್ಮ ಬಗ್ಗೆ ಮಾತನಾಡಿದ್ದಕ್ಕೆ ಬಹಳಷ್ಟು ಖುಷಿ ಆಗುತ್ತಿದೆ. ಇದನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಆದರೆ, ನಮ್ಮ ಮೀನು ಸಾಕಾಣಿಕೆ ಸಾಧನೆ ಪ್ರಧಾನಮಂತ್ರಿಗಳವರೆಗೂ ಮುಟ್ಟಿದ್ದು ನಮಗೆ ಇನ್ನಿಲ್ಲದ ಸಂತಸ ತಂದಿದೆ. ಬಹಳಷ್ಟು ಜನರು ಫೋನ್ ಮಾಡಿ ಶುಭಾಶಯ ಕೋರುತ್ತಿದ್ದಾರೆ. ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಅಂತಾ ಹೇಳಿದ್ದಾರೆ.
ವರ್ಷದ ಪ್ರತಿ ತಿಂಗಳೂ ಸಹ ಹಬ್ಬ ಹರಿ ದಿನಗಳಿರುವಂತೆ, ಪ್ರತಿ ತಿಂಗಳೂ ಸಹ ಸಾಮಾಜಿಕ, ಸಂಸ್ಕೃತಿ, ಪರಿಸರ, ಕಲೆ, ಹವಾಮಾನ, ಆರೋಗ್ಯ ಇತ್ಯಾದಿಗಳಿಗೆ ಸಂಬಂಧಪಟ್ಟ ಒಂದಷ್ಟು ಜಾಗೃತಿ ದಿನಗಳನ್ನು ಆಚರಿಸಲಾಗುತ್ತದೆ. ಈ ಪ್ರತಿಯೊಂದು ಕಾರ್ಯಕ್ರಮಗಳನ್ನು ನಿರ್ದಿಷ್ಟ ಉದ್ದೇಶಗಳಿಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಆಚರಿಸಲಾಗುತ್ತದೆ. ಇನ್ನೇನು ಏಪ್ರಿಲ್ (April) ತಿಂಗಳು ಆರಂಭವಾಗಲಿದ್ದು, ವರ್ಷದ ಈ ನಾಲ್ಕನೇ ತಿಂಗಳಲ್ಲಿ ಯಾವೆಲ್ಲಾ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.
ಏಪ್ರಿಲ್ನಲ್ಲಿ ಆಚರಿಸಲಾಗುವ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳು:
ಏಪ್ರಿಲ್ 2 – ವಿಶ್ವ ಆಟಿಸಂ ಜಾಗೃತಿ ದಿನ
ಏಪ್ರಿಲ್ 3 – ವಿಶ್ವ ಪಾರ್ಟಿ ದಿನ
ಏಪ್ರಿಲ್ 4 – ಅಂತರರಾಷ್ಟ್ರೀಯ ಕ್ಯಾರೆಟ್ ದಿನ
ಏಪ್ರಿಲ್ 5 – ರಾಷ್ಟ್ರೀಯ ಕಡಲ ದಿನ
ಏಪ್ರಿಲ್ 6 – ಅಭಿವೃದ್ಧಿ ಮತ್ತು ಶಾಂತಿಗಾಗಿ ಅಂತರರಾಷ್ಟ್ರೀಯ ಕ್ರೀಡಾ ದಿನ.
ಏಪ್ರಿಲ್ 7 – ವಿಶ್ವ ಆರೋಗ್ಯ ದಿನ
ಏಪ್ರಿಲ್ 10 – ವಿಶ್ವ ಹೋಮಿಯೋಪತಿ ದಿನ
ಏಪ್ರಿಲ್ 10 – ಒಡಹುಟ್ಟಿದವರ ದಿನ
ಏಪ್ರಿಲ್ 11 – ರಾಷ್ಟ್ರೀಯ ಸುರಕ್ಷಿತ ತಾಯ್ತನ ದಿನ
ಏಪ್ರಿಲ್ 11 – ರಾಷ್ಟ್ರೀಯ ಜಲಾಂತರ್ಗಾಮಿ ದಿನ
ಏಪ್ರಿಲ್ 14 – ಅಂತರರಾಷ್ಟ್ರೀಯ ನಗುವಿನ ದಿನ
ಏಪ್ರಿಲ್ 14 – ರಾಷ್ಟ್ರೀಯ ತೋಟಗಾರಿಕೆ ದಿನ
ಏಪ್ರಿಲ್ 14 – ಸುಗಂಧ ದ್ರವ್ಯ ದಿನ
ಏಪ್ರಿಲ್ 14 – ರಾಷ್ಟ್ರೀಯ ಡಾಲ್ಫಿನ್ ದಿನ.
ಏಪ್ರಿಲ್ 15 – ವಿಶ್ವ ಕಲಾ ದಿನ
ಏಪ್ರಿಲ್ 17 – ವಿಶ್ವ ಹಿಮೋಫಿಲಿಯಾ ದಿನ
ಏಪ್ರಿಲ್ 18 – ವಿಶ್ವ ಪರಂಪರೆಯ ದಿನ
ಏಪ್ರಿಲ್ 19 – ವಿಶ್ವ ಯಕೃತ್ತಿನ ದಿನ
ಏಪ್ರಿಲ್ 21 – ರಾಷ್ಟ್ರೀಯ ನಾಗರಿಕ ಸೇವಾ ದಿನ
ಏಪ್ರಿಲ್ 21 – ಅಂತರರಾಷ್ಟ್ರೀಯ ಸೃಜನಶೀಲತೆ ಮತ್ತು ನಾವೀನ್ಯತೆ ದಿನ
ನವದೆಹಲಿ, ಮಾರ್ಚ್ 29: ಇರಾನ್ ಯುದ್ಧ ಶುರುವಾದ ಬಳಿಕ ಎಲ್ಲರ ಗಮನ ಹಾರ್ಮುಜ್ ಜಲಸಂಧಿಯತ್ತ (Strait of Hormuz) ನೆಟ್ಟಿದೆ. ಗಲ್ಫ್ ರಾಷ್ಟ್ರಗಳಿಂದ ಬರುವ ತೈಲ ಹಡಗುಗಳಿಗೆ ಇರಾನ್ ತಡೆ ಹಾಕಿದೆ. ಇದರಿಂದ ಜಾಗತಿಕವಾಗಿ ತೈಲ ಬೆಲೆ ಏರಿಕೆಯಾಗುವಂತಾಗಿದೆ. ಹಾರ್ಮುಜ್ ಜಲಸಂಧಿ ಮಾರ್ಗವನ್ನು ಮುಕ್ತಗೊಳಿಸಲು ಅಮೆರಿಕ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಪರ್ಷಿಯನ್ ಗಲ್ಫ್ ಮತ್ತು ಅರೇಬಿಯನ್ ಸಮುದ್ರಕ್ಕೆ ಕೊಂಡಿಯಾಗಿರುವ ಈ ಜಲಸಂಧಿ ಮೂಲಕ ವಿಶ್ವದ ಶೇ. 20ರಷ್ಟು ತೈಲವು ಹಡಗುಗಳಿಂದ ಸಾಗಿ ಹೋಗುತ್ತದೆ. ಇದೇ ಹೊತ್ತಲ್ಲಿ ಈಗ ಮತ್ತೊಂದು ಜಲಸಂಧಿ ಸುದ್ದಿಗೆ ಬಂದಿದೆ. ಅದುವೇ ಬಾಬ್ ಎಲ್ ಮಂಡೇಬ್ ಸ್ಟ್ರೇಟ್ (Bab el-Mandeb strait).
ಇದು ರೆಡ್ ಸೀ ಅಥವಾ ಕೆಂಪು ಸಮುದ್ರದಲ್ಲಿರುವ ಒಂದು ಕಿರಿದಾದ ಜಲಮಾರ್ಗ. ಈಜಿಪ್ಟ್ನ ಸೂಜ್ ಕೆನಾಲ್ಗೆ (Suez Canal) ಹೋಗಬೇಕಾದರೆ ಈ ಜಲಸಂಧಿ ಮೂಲಕವೇ ಹಡಗುಗಳು ಸಾಗಬೇಕು. ಕುತೂಹಲ ಎಂದರೆ ಈ ಬಾಬ್ ಎಲ್ ಮಂಡೇಬ್ ಎಂದರೆ ಅರೇಬಿಕ್ ಭಾಷೆಯಲ್ಲಿ ಕಣ್ಣೀರ ದ್ವಾರ. ಇದರ ಆಜುಬಾಜಿನಲ್ಲಿರುವ ದೇಶಗಳಲ್ಲಿ ಯೆಮೆನ್ ಕೂಡ ಒಂದು. ಈ ವಿಚಾರವೇ ಈಗ ಜಾಗತಿಕ ಭೀತಿಗೆ ಕಾರಣವಾಗಿರುವುದು.
ಯೆಮೆನ್ನಲ್ಲಿ ಇರಾನ್ ಬೆಂಬಲಿತ ಹೌತಿ ಬಂಡುಕೋರರ ಸಂಘಟನೆಯ ಉಪಸ್ಥಿತಿ ಇದೆ. ಇರಾನ್ ಸೂಚನೆ ಕೊಟ್ಟರೆ ಹೌತಿ ಬಂಡುಕೋರರು ಈ ಜಲಸಂಧಿಯಲ್ಲಿ ದಾಳಿ ಶುರು ಹಚ್ಚಿಕೊಳ್ಳಬಹುದು. ಬಾಬೆಲ್ ಮಂಡೆಬ್ ಜಲಸಂಧಿ ಬಹಳ ಮುಖ್ಯವಾದ ಟ್ರೇಡಿಂಗ್ ರೂಟ್ನಲ್ಲಿ ಇದೆ. ಇದಕ್ಕೆ ತಡೆ ಬಿದ್ದರೆ ಹಾರ್ಮುಜ್ ಜಲಸಂಧಿಗಿಂತಲೂ ಪರಿಣಾಮ ಘೋರವಾಗಿರುತ್ತದೆ.
ಹಾರ್ಮುಜ್ ಜಲಸಂಧಿಯಲ್ಲಿ ಬಹುತೇಕ ನೌಕೆಗಳು ತೈಲ ಸಾಗಣೆ ಮಾಡುತ್ತವೆ. ಆದರೆ, ಬಾಬೆಲ್ ಮಂಡೇಬ್ ಜಲಸಂಧಿ ಇನ್ನೂ ದೊಡ್ಡ ವ್ಯಾಪಾರ ಮಾರ್ಗಕ್ಕೆ ಬರುತ್ತದೆ. ತೈಲವಷ್ಟೇ ಅಲ್ಲ, ಹಲವು ಸರಕುಗಳ ಸಾಗಣೆಯಾಗುತ್ತದೆ. ಏಷ್ಯಾ ಮತ್ತು ಯೂರೋಪ್ ನಡುವೆ ಹಡಗುಗಳು ಸಾಗಲು ಇದೇ ಜಲಸಂಧಿಯನ್ನು ದಾಟಿ ಹೋಗಬೇಕು. ವಿಶ್ವದ ಅತ್ಯಂತ ನಿರತವಾಗಿರುವ ಮತ್ತು ಬಹಳ ಮುಖ್ಯವಾಗಿರುವ ಜಲಮಾರ್ಗದಲ್ಲಿ ಬಾಬ್ ಎಲ್ ಮಂಡೆಬ್ ಜಲಸಂಧಿ ಇದೆ.
ವಿಶ್ವದ ಶೇ. 10ಕ್ಕಿಂತಲೂ ಹೆಚ್ಚು ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆ, ಶೇ. 12ರಷ್ಟು ಜಾಗತಿಕ ಟ್ರೇಡಿಂಗ್ಗಳು ಈ ಜಲಸಂಧಿಯನ್ನು ಮುಟ್ಟಿ ಹೋಗಬೇಕು.
ರೆಡ್ ಸೀ ಮಾರ್ಗದಲ್ಲಿ ಒಂದು ವರ್ಷದಲ್ಲಿ ಈ ಮೊದಲು 26,000 ಹಡಗುಗಳು ಸಾಗುತ್ತಿದ್ದವು. ಹೌತಿಗಳ ದಾಳಿ ಘಟನೆಗಳು ಶುರುವಾದ ಮೇಲೆ 2025ರಲ್ಲಿ ಇಲ್ಲಿ ಸಾಗುವ ಹಡಗುಗಳ ಸಂಖ್ಯೆ ಅರ್ಧದಷ್ಟು ಕಡಿಮೆ ಆಗಿದೆ. ಭಾರತದ ಬಹಳಷ್ಟು ಸರಕುಗಳನ್ನು ಹೊತ್ತ ಹಡಗುಗಳು ಈ ಮಾರ್ಗದಲ್ಲಿ ಹೋಗುತ್ತವೆ. ಇಲ್ಲಿ ಹೌತಿಗಳಿಂದ ಜಲಸಂಧಿಗೆ ಪೂರ್ಣ ತಡೆ ಬಿದ್ದರೆ ಭಾರತದ ಆರ್ಥಿಕತೆಗೆ ದೊಡ್ಡ ಹೊಡೆತ ಕೊಡುವ ಸಾಧ್ಯತೆ ಇದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
2026 ರ ಐಪಿಎಲ್ನಲ್ಲಿ (IPL 2026) ತನ್ನ ಅಭಿಯಾನವನ್ನು ಆರಂಭಿಸುವ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಸಂಕಷ್ಟಗಳು ಒಂದೊಂದಾಗಿಯೇ ಹೆಚ್ಚಾಗುತ್ತಿವೆ. ಮಾಜಿ ನಾಯಕ ಎಂಎಸ್ ಧೋನಿ (MS Dhoni) ಗಾಯದಿಂದಾಗಿ ಮುಂದಿನ ಕೆಲವು ವಾರಗಳ ಕಾಲ ಆಟದಿಂದ ಹೊರಗುಳಿಯಲಿದ್ದಾರೆ. ಈ ಆಘಾತದಿಂದ ಹೊರಬರುವ ಮುನ್ನವೇ ಸಿಎಸ್ಕೆ ತಂಡಕ್ಕೆ ಮತ್ತೊಬ್ಬ ಸ್ಟಾರ್ ಆಟಗಾರನ ಇಂಜುರಿ ಮರ್ಮಾಘಾತ ನೀಡಿದೆ. ವರದಿಗಳ ಪ್ರಕಾರ, 22 ವರ್ಷದ ದಕ್ಷಿಣ ಆಫ್ರಿಕಾದ ಯುವ ಸ್ಫೋಟಕ ಬ್ಯಾಟ್ಸ್ಮನ್ ಡೆವಾಲ್ಡ್ ಬ್ರೆವಿಸ್ (Dewald Brevis) ಕೂಡ ಫಿಟ್ನೆಸ್ ಸಮಸ್ಯೆಯನ್ನು ಎದುರಿಸುತ್ತಿದ್ದು, ಅವರು ಕೂಡ ತಂಡದ ಮೊದಲ ಎರಡು ಪಂದ್ಯಗಳಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ.
ಬ್ರೆವಿಸ್ಗೆ ಇಂಜುರಿ
ಸ್ಫೋಟಕ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಡೆವಾಲ್ಡ್ ಬ್ರೆವಿಸ್ ಸೈಡ್ ಸ್ಟ್ರೈನ್ನಿಂದ ಬಳಲುತ್ತಿದ್ದು, ಈ ಕಾರಣದಿಂದಾಗಿ ಮೊದಲ ಎರಡು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಮಾರ್ಚ್ 30 ರ ಭಾನುವಾರ ನಡೆಯಲಿರುವ ತಮ್ಮ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದ್ದು, ಧೋನಿ ಮತ್ತು ಬ್ರೆವಿಸ್ ಇಬ್ಬರೂ ಇಲ್ಲದೆ ಆಡಬೇಕಾಗುತ್ತದೆ. ಇದರ ಜೊತೆಗೆ ತಂಡದ ಎರಡನೇ ಪಂದ್ಯದಲ್ಲೂ ಈ ಇಬ್ಬರು ಆಡುವುದು ಅನುಮಾನವಾಗಿದೆ.
ಕಳೆದ ಆವೃತ್ತಿಯಲ್ಲಿ ಸಿಎಸ್ಕೆ ತಂಡದ ಅತ್ಯಂತ ಯಶಸ್ವಿ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿದ್ದ ಬ್ರೆವಿಸ್ ಅವರ ಗಾಯವು ಸಿಎಸ್ಕೆ ತಂಡದ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಿದೆ. ಅವರನ್ನು ಸೀಸನ್ ಮಧ್ಯದಲ್ಲಿ ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಹೀಗೆ ಬದಲಿ ಆಟಗಾರನಾಗಿ ಬಂದಿದ್ದ ಬ್ರೆವಿಸ್ ಕೇವಲ ಆರು ಪಂದ್ಯಗಳಲ್ಲಿ 180 ಸ್ಟ್ರೈಕ್ ರೇಟ್ನಲ್ಲಿ 17 ಸಿಕ್ಸರ್ಗಳು ಮತ್ತು 13 ಬೌಂಡರಿಗಳ ಸಹಾಯದಿಂದ 225 ರನ್ ಬಾರಿಸಿದ್ದರು. ಈಗ, ತಂಡವು ಅವರಿಲ್ಲದೆ ಮೈದಾನಕ್ಕೆ ಇಳಿಯಬೇಕಾಗುತ್ತದೆ, ಇವರ ಜೊತೆಗೆ ಧೋನಿ ಕೂಡ ಇಲ್ಲದಿರುವುದು ಸಿಎಸ್ಕೆ ದೊಡ್ಡ ತಲೆನೋವಾಗಿದೆ.
ಆದಾಗ್ಯೂ ಬ್ರೆವಿಸ್ ಗಾಯದ ಬಗ್ಗೆ ಸಿಎಸ್ಕೆ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಒಂದು ದಿನದ ಹಿಂದೆಯಷ್ಟೇ, ಚೆನ್ನೈ ತಂಡವು ಕಾಲಿನ ಗಾಯದಿಂದಾಗಿ ಧೋನಿ ಸುಮಾರು ಎರಡು ವಾರಗಳ ಕಾಲ ಹೊರಗುಳಿಯಲಿದ್ದಾರೆ ಎಂಬ ಮಾಹಿತಿ ನೀಡಿತ್ತು. ಆದರೀಗ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಧೋನಿ ಲೀಗ್ ಹಂತದ ಮೊದಲ ಆರು ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ವರದಿಯೊಂದು ಬಹಿರಂಗಪಡಿಸಿದೆ. ಈ ಇಬ್ಬರು ಸ್ಟಾರ್ ಆಟಗಾರರ ಜೊತೆಗೆ, ವೇಗದ ಬೌಲರ್ ನಾಥನ್ ಎಲಿಸ್ ಈಗಾಗಲೇ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಅವರ ಬದಲಿಯಾಗಿ ಸಿಎಸ್ಕೆ ಸ್ಪೆನ್ಸರ್ ಜಾನ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಆದರೆ ಅವರು ಇನ್ನೂ ತಂಡವನ್ನು ಸೇರಿಕೊಂಡಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಚಿತ್ರರಂಗದಲ್ಲಿ ಗೆಲ್ಲುತ್ತಿದ್ದವರಿಗೆ ಮಾತ್ರವೇ ಗೌರವ. ಕೆಳಗೆ ಬಿದ್ದರೆ ಸಾಕು ಆಳಿಗೊಂದು ಕಲ್ಲು ಒಗೆಯುತ್ತಾರೆ. ‘ಗಜಿನಿ’, ‘ತುಪಾಕಿ’, ‘ಕತ್ತಿ’, ‘ಸ್ಟಾಲಿನ್’ ಇನ್ನೂ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಖ್ಯಾತ ತಮಿಳು ನಿರ್ದೇಶಕ ಎಆರ್ ಮುರುಗದಾಸ್ ಅವರಿಗೆ ಇತ್ತೀಚೆಗೆ ಸಮಯ ಸರಿ ಇದ್ದಂತಿಲ್ಲ. ಹಿಂದಿಯಲ್ಲಿ ಸಲ್ಮಾನ್ ಖಾನ್ ಜೊತೆಗೆ ಮಾಡಿದ ಸಿನಿಮಾ ಇನ್ನಿಲ್ಲದಂತೆ ಸೋತಿತು. ಸಿನಿಮಾ ಸೋತಿದ್ದಕ್ಕೆ ಸಲ್ಮಾನ್ ಖಾನ್ ಬೇಜವಾಬ್ದಾರಿತನ ಕಾರಣ ಎಂದು ಮುರುಗದಾಸ್ ದೂರಿದ್ದರು. ಬಳಿಕ ಅವರು ತಮಿಳಿನಲ್ಲಿ ನಿರ್ದೇಶಿಸಿದ ‘ಮದರಾಸಿ’ ಸಿನಿಮಾ ಸಹ ತೋಪಾಯ್ತು. ಇದೀಗ ಅದರ ಬೆನ್ನಲ್ಲೆ ಮುರುಗದಾಸ್ ವಿರುದ್ಧ ದೂರು ದಾಖಲಾಗಿದೆ. ಅದೂ ಅವರದ್ದೇ ಸಿನಿಮಾಕ್ಕೆ ಬಂಡವಾಳ ಹೂಡಿದ್ದ ನಿರ್ಮಾಪಕರಿಂದ.
ಮುರುಗದಾಸ್ ನಿರ್ದೇಶಿಸಿದ್ದ ‘ಮದರಾಸಿ’ ಸಿನಿಮಾದ ನಿರ್ಮಾಪಕರು ಇದೀಗ ಮುರುಗದಾಸ್ ವಿರುದ್ಧ ಬಜೆಟ್ಗೆ ಸಂಬಂಧಿಸಿದಂತೆ ಕೇಸು ದಾಖಲಿಸಿದ್ದಾರೆ. ‘ಮದರಾಸಿ’ ಸಿನಿಮಾವನ್ನು ಶ್ರೀ ಲಕ್ಷ್ಮಿ ಫಿಲಮ್ಸ್ ನಿರ್ಮಾಣ ಮಾಡಿತ್ತು. ಶ್ರೀಲಕ್ಷ್ಮಿ ಪ್ರಸಾದ್ ಸಿನಿಮಾದ ನಿರ್ಮಾಪಕರು. ಇದೀಗ ಅವರೇ ಮುರುಗದಾಸ್ ವಿರುದ್ಧ ಕೇಸು ದಾಖಲಿಸಿದ್ದಾರೆ. ‘ಮದರಾಸಿ’ ಸಿನಿಮಾದ ಬಜೆಟ್ ಅನ್ನು ಮುರುಗದಾಸ್ ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಸಲ್ಮಾನ್ ಖಾನ್ ವಿರುದ್ಧ ಬೇಜವಾಬ್ದಾರಿಯ ಆರೋಪ ಮಾಡಿದ್ದ ಮುರುಗದಾಸ್ ವಿರುದ್ಧ ಈಗ ಬೇಜವಬ್ದಾರಿ ಆರೋಪ ಬಂದಿದೆ.
ಮುರುಗದಾಸ್ ಅವರು ಮೊದಲು ಸಿನಿಮಾಕ್ಕೆ 115 ಕೋಟಿ ಬಜೆಟ್ ನಿಗದಿ ಪಡಿಸಿದ್ದರಂತೆ. ಆದರೆ ಮುರುಗದಾಸ್ ಅವರ ಬೇಜವಾಬ್ದಾರಿತನ ಮತ್ತು ಸೂಕ್ತ ಪ್ಲಾನಿಂಗ್ ಇಲ್ಲದ ಕಾರಣದಿಂದಾಗಿ ಸಿನಿಮಾದ ಬಜೆಟ್ 170 ಕೋಟಿ ರೂಪಾಯಿಗಳಾಯ್ತು ಎಂದು ನಿರ್ಮಾಣ ಸಂಸ್ಥೆ ಆರೋಪಿಸಿದೆ. ಮುರುಗದಾಸ್ ಅವರು ಸರಿಯಾಗಿ ಪ್ಲಾನಿಂಗ್ ಮಾಡಲಿಲ್ಲ, ಹಾಗೂ ಒಂದೇ ಸಮಯದಲ್ಲಿ ಎರಡೆರಡು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದರಿಂದ ಬಜೆಟ್ ಹೆಚ್ಚಾಯ್ತು. ಆಗಿರುವ ನಷ್ಟದಲ್ಲಿ 10 ಕೋಟಿ ಹಣವನ್ನು ಮುರುಗದಾಸ್ ಮರಳಿ ಕೊಡಬೇಕು ಎಂದು ನಿರ್ಮಾಪಕರು ಒತ್ತಾಯಿಸಿದ್ದಾರೆ.
ಅನಿರೀಕ್ಷಿತ ಆರ್ಥಿಕ ಹೊರೆಯಿಂದ ಬೇಸತ್ತ ನಿರ್ಮಾಪಕರು ನಿರ್ದೇಶಕರು ಮತ್ತು ನಿರ್ಮಾಪಕರ ಮಂಡಳಿಯನ್ನು ಸಂಪರ್ಕಿಸಿ ಮುರುಗದಾಸ್ ವಿರುದ್ಧ ದೂರು ನೀಡಿದ್ದು, 10 ಕೋಟಿ ರೂ. ಪರಿಹಾರ ಕೊಡಿಸಬೇಕೆಂದು ಕೋರಿದ್ದರು. ಅದರಂತೆ ಈ ಬಗ್ಗೆ ಮಾತುಕತೆ ನಡೆದಿದ್ದು, ಒಂದು ಒಪ್ಪಂದಕ್ಕೆ ಬರಲಾಗಿದೆ. ಇದರನ್ವಯ ಮುರುಗದಾಸ್ ಅವರು ‘ರಮಣ 2’ (ತೆಲುಗು ಆವೃತ್ತಿ) ಚಿತ್ರಕ್ಕೆ ಯಾವುದೇ ಸಂಭಾವನೆ ಪಡೆಯದೆ ಕಥೆಯನ್ನು ಬರೆದುಕೊಡಲು ಒಪ್ಪಿಕೊಂಡಿದ್ದಾರೆ. ಈ ಮೂಲಕ ನಿರ್ಮಾಪಕರಿಗೆ ಉಂಟಾದ ಆರ್ಥಿಕ ನಷ್ಟವನ್ನು ಸರಿಹೂಗಿಸಲು ನಿರ್ಧರಿಸಲಾಗಿದೆ.
ಹುಬ್ಬಳ್ಳಿ, ಮಾರ್ಚ್ 29: ಇರಾನ್ ಇಸ್ರೇಲ್, ಅಮೆರಿಕಾ ನಡುವೆ ನಡೆಯುತ್ತಿರುವ ಯುದ್ದದಿಂದಾಗಿ (War) ನಮ್ಮ ದೇಶದ ಮೇಲೆ ಅನೇಕ ರೀತಿಯ ಪರಿಣಾಮಗಳಾಗುತ್ತಿವೆ. ಈಗಾಗಲೇ ಸಿಲಿಂಡರ್ ಅಭಾವ ಉಂಟಾಗಿದ್ದು, ಆಮದು, ರಫ್ತು ವ್ಯವಹಾರ ಕಡಿಮೆಯಾಗಿರೋದರಿಂದ ಅನೇಕ ವಸ್ತುಗಳ ಬೆಲೆ ಕೂಡ ಹೆಚ್ಚಾಗುತ್ತಿವೆ. ಇದರ ಜೊತೆಗೆ ಇದೀಗ ರಸಗೊಬ್ಬರಕ್ಕೂ ಅಭಾವ(Fertilizer Shortage)ಉಂಟಾಗುವ ಆತಂಕ ಎದುರಾಗಿದೆ. ಈ ಬಾರಿ ಮುಂಗಾರು ಬಿತ್ತನೆಗೆ ರಸಗೊಬ್ಬರ ಸಿಗುತ್ತೋ, ಇಲ್ವೋ ಅನ್ನೋ ಆತಂಕ ರೈತರನ್ನು ಕಾಡುತ್ತಿದೆ.
ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕಾ ನಡೆಸುತ್ತಿರುವ ಯುದ್ದ, ಸದ್ಯಕ್ಕೆ ಮುಗಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ಜಾಗತಿಕ ಮಟ್ಟದ ಎಲ್ಲಾ ದೇಶಗಳ ಮೇಲೆ ಅನೇಕ ವ್ಯತಿರಿಕ್ತ ಪರಿಣಾಮಗಳಾಗುತ್ತಿದ್ದು, ಅದಕ್ಕೆ ಭಾರತ ಕೂಡ ಹೊರತಾಗಿಲ್ಲ. ಈಗಾಗಲೇ ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಅಭಾವ ಕಾಡುತ್ತಿದೆ. ಅನೇಕ ವಸ್ತುಗಳ ಬೆಲೆ ಕೂಡ ಹೆಚ್ಚಾಗಿವೆ. ಇನ್ನು ಈ ಯುದ್ಧ ರೈತರ ಮೇಲೆ ಕೂಡ ಅನೇಕ ದುಷ್ಪರಿಣಾಮ ಬೀರಿದೆ.
ರಫ್ತು ಮಾಡಲಾಗದಿರುವುದರಿಂದ ಟೊಮ್ಯಾಟೋ, ಈರುಳ್ಳಿ ಸೇರಿದಂತೆ ಅನೇಕ ತರಕಾರಿ, ಆಹಾರ ಪದಾರ್ಥಗಳಿಗೆ ಸೂಕ್ತ ಬೆಲೆ ಸಿಗದೇ ರೈತರು ಕಂಗಾಲಾಗಿದ್ದಾರೆ. ಇದರ ಜೊತೆಗೆ ಇದೀಗ ಗೊಬ್ಬರ ಅಭಾವದ ಆತಂಕ ರೈತರನ್ನು ಕಾಡುತ್ತಿದೆ. ರೈತರು ಹೆಚ್ಚಾಗಿ ಬಳಸುವುದು ಯೂರಿಯಾ, ಡಿಎಪಿ ಗೊಬ್ಬರ. ಆದರೆ ಈ ಗೊಬ್ಬರಗಳನ್ನು ಸಿದ್ಧ ಮಾಡಲು ಬೇಕಾಗುವ ಅನೇಕ ಕಚ್ಚಾವಸ್ತುಗಳು ಬರುವುದು ಗಲ್ಫ್ ಸೇರಿದಂತೆ ಅನೇಕ ವಿದೇಶಗಳಿಂದ. ಇದೀಗ ಯುದ್ದದಿಂದಾಗಿ ಕಚ್ಚಾವಸ್ತುಗಳಿಗೆ ತೊಂದರೆಯಾಗಿದ್ದು, ರಸಗೊಬ್ಬರ ತಯಾರಿಕೆಗೆ ಸಮಸ್ಯೆಯಾಗ್ತಿದೆಯಂತೆ. ಇದು ರೈತರ ಆತಂಕವನ್ನು ಹೆಚ್ಚಿಸುತ್ತಿದೆ.
ರಸಗೊಬ್ಬರ ಅಂಗಡಿ ಮಾಲೀಕರು ಹೇಳುವುದೇನು?
ಈಗಾಗಲೇ ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಬೇಸಿಗೆಯ ಮಳೆ ಸುರಿದಿದೆ. ರೈತರು ಕೆಲವೇ ದಿನಗಳಲ್ಲಿ ಭೂಮಿ ಹದಮಾಡುವ ಕೆಲಸ ಆರಂಭಿಸಲಿದ್ದು, ಮೇ ಮೊದಲ ವಾರದಲ್ಲಿಯೇ ಬಿತ್ತನೆ ಆರಂಭಿಸಲಿದ್ದಾರೆ. ಈ ಸಮಯದಲ್ಲಿ ರೈತರಿಗೆ ಹೆಚ್ಚಿನ ಗೊಬ್ಬರದ ಅವಶ್ಯಕತೆ ಇದೆ. ಆದರೆ ಇದೇ ಪರಿಸ್ಥಿತಿ ಮುಂದುವರಿದರೆ ಮೇ, ಜೂನ್ ತಿಂಗಳಲ್ಲಿ ದೇಶದಲ್ಲಿ ರಸಗೊಬ್ಬರ ಅಭಾವ ಕಾಡಲಿದೆ ಎಂಬುವುದು ರಸಗೊಬ್ಬರ ಅಂಗಡಿ ಮಾಲೀಕರಾದ ಲಿಂಬಯ್ಯಸ್ವಾಮಿ ಮಾತು.
ಪರ್ಯಾಯ ಗೊಬ್ಬರಗಳ ಬಳಕೆಗೆ ಉತ್ತೇಜನ
ಧಾರವಾಡ ಜಿಲ್ಲೆಯೊಂದಕ್ಕೆ ವಾರ್ಷಿಕ 57 ಸಾವಿರ ಟನ್ ರಸಗೊಬ್ಬರ ಅವಶ್ಯಕತೆ ಇದೆ. ಸದ್ಯ ರಸಗೊಬ್ಬರ ಇದೆ ಅಂತ ಅಂಗಡಿ ಮಾಲೀಕರು ಹೇಳುತ್ತಿದ್ದರು ಕೂಡ, ಬಹುತೇಕ ಕಡೆ ಯೂರಿಯಾ, ಡಿಎಪಿ ಗೊಬ್ಬರ ಸಿಗುತ್ತಿಲ್ಲ. ಬಿತ್ತನೆ ಆರಂಭವಾದ ಮೇಲೆ ರಸಗೊಬ್ಬರ ಸಿಗದಿದ್ದರೆ ರೈತರ ಆಕ್ರೋಶ ಹೆಚ್ಚಾಗುವ ಸಾಧ್ಯತೆಯಿದೆ. ಈಗಾಗಲೇ ಕೃಷಿ ಇಲಾಖೆ ಅಧಿಕಾರಿಗಳು ರಸಗೊಬ್ಬರ ಅಂಗಡಿ ಮಾಲೀಕರ ಜೊತೆ ಸಭೆ ಕೂಡ ಮಾಡಿದ್ದಾರಂತೆ. ಕೇಂದ್ರ ರಸಗೊಬ್ಬರ ಇಲಾಖೆ ಕೂಡ ಈ ಬಗ್ಗೆ ಸಭೆ ಮಾಡಿದೆ. ಭವಿಷ್ಯದಲ್ಲಿ ಉಂಟಾಗುವ ಸಮಸ್ಯೆ ಬಗ್ಗೆ ಚರ್ಚಿಸಿದ್ದು, ರೈತರು, ಯೂರಿಯಾ, ಡಿಎಪಿ ಬದಲಾಗಿ ಪರ್ಯಾಯ ಗೊಬ್ಬರಗಳ ಬಳಕೆಗೆ ಉತ್ತೇಜಿಸುವಂತೆ ಸೂಚನೆ ನೀಡಲಾಗಿದೆ.
ಕೆಲವೇ ದಿನಗಳಲ್ಲಿ ಬಿತ್ತನೆ ಆರಂಭವಾಗಲಿದ್ದು, ಕೇಂದ್ರ ಸರ್ಕಾರ ಇನ್ನಷ್ಟು ಕ್ರಮಗಳನ್ನು ಕೈಗೊಂಡು, ಆಗುವ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕಿದೆ. ಬಿತ್ತನೆ ಸಮಯದಲ್ಲಿ ಗೊಬ್ಬರದ ಅಭಾವವಾದರೆ ರೈತರಿಗೆ ದೊಡ್ಡ ಮಟ್ಟದಲ್ಲಿ ತೊಂದರೆಯಾಗಲಿದ್ದು, ಈ ನಿಟ್ಟಿನಲ್ಲಿ ಈಗಿನಿಂದಲೇ ರಾಜ್ಯ ಮತ್ತು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕಿದೆ.
ಐಪಿಎಲ್ 19 ನೇ ಸೀಸನ್ನ (IPL 2026) ಎರಡನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್, ಮೂರು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (Mumbai Indians vs Kolkata Knight Riders) ತಂಡವನ್ನು ಎದುರಿಸಿದೆ. ಈ ಆವೃತ್ತಿಯಲ್ಲಿ ಎರಡೂ ತಂಡಗಳಿಗೆ ಇದು ಮೊದಲ ಪಂದ್ಯವಾಗಿದೆ. ಹಾರ್ದಿಕ್ ಪಾಂಡ್ಯ ಮುಂಬೈ ತಂಡವನ್ನು ಮುನ್ನಡೆಸುತ್ತಿದ್ದು, ಅಜಿಂಕ್ಯ ರಹಾನೆ ಕೆಕೆಆರ್ ತಂಡದ ನಾಯಕರಾಗಿದ್ದಾರೆ. ಈ ಪಂದ್ಯ ಮುಂಬೈನ ತವರು ಮೈದಾನದಲ್ಲಿ ನಡೆಯುತ್ತಿದೆ. ಆದ್ದರಿಂದ, ಮುಂಬೈ ಗೆಲುವಿನೊಂದಿಗೆ ಲೀಗ್ ಆರಂಭಿಸಲು ನೋಡುತ್ತಿದ್ದರೆ, ಇತ್ತ ಕೆಕೆಆರ್ ಕೂಡ ಗೆಲುವಿನ ಮೇಲೆ ಗುರಿ ಇಟ್ಟಿದೆ.
ಟಾಸ್ ಗೆದ್ದ ಮುಂಬೈ
ಈ ಪಂದ್ಯದಲ್ಲಿ ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಕೆಕೆಆರ್ ಮೊದಲು ಬ್ಯಾಟಿಂಗ್ ಮಾಡಲಿದೆ. ಇದರ ಜೊತೆಗೆ ಎರಡು ತಂಡಗಳ ಆಡುವ ಹನ್ನೊಂದರ ಬಳಗವೂ ಖಚಿತವಾಗಿದೆ. ಅದರಂತೆ ಮುಂಬೈ ತಂಡದ ಪ್ಲೇಯಿಂಗ್ 11 ನಲ್ಲಿ ಸೂರ್ಯಕುಮಾರ್ ಯಾದವ್ ಸ್ಥಾನ ಪಡೆದಿಲ್ಲ. ಹಾಗಂತ ಅವರು ಪಂದ್ಯದಿಂದ ಹೊರಬಿದ್ದಿಲ್ಲ. ಬದಲಿಗೆ ಅವರು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಲಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ಕಳೆದ ಆವೃತ್ತಿಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ್ದ ರೋಹಿತ್ ಶರ್ಮಾ, ಈ ಪಂದ್ಯದಲ್ಲಿ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದಿದ್ದಾರೆ.
ಹೆಡ್ ಟು ಹೆಡ್ ದಾಖಲೆ
ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಇದುವರೆಗೆ 35 ಪಂದ್ಯಗಳನ್ನು ಆಡಿವೆ. ಈ ಪೈಕಿ ಮುಂಬೈ ಇಂಡಿಯನ್ಸ್ 24 ಪಂದ್ಯಗಳನ್ನು ಗೆದ್ದಿದ್ದರೆ, ಕೋಲ್ಕತ್ತಾ ನೈಟ್ ರೈಡರ್ಸ್ 11 ಪಂದ್ಯಗಳನ್ನು ಗೆದ್ದಿದೆ. ಆದಾಗ್ಯೂ, 2012 ರಿಂದ ಮುಂಬೈ ಇಂಡಿಯನ್ಸ್ ತಮ್ಮ ಮೊದಲ ಪಂದ್ಯವನ್ನು ಗೆದ್ದಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ತನ್ನ ಸೋಲಿನ ಇತಿಹಾಸವನ್ನು ಬದಲಿಸಲು ಮುಂಬೈ ಎದುರು ನೋಡುತ್ತಿದೆ. ಹಾಗೆಯೇ ಇದು ವಾಂಖೆಡೆ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವಿನ 13 ನೇ ಪಂದ್ಯ ಆಗಿದೆ. ಮುಂಬೈ ಇದುವರೆಗೆ 12 ಪಂದ್ಯಗಳಲ್ಲಿ 10 ರಲ್ಲಿ ಗೆದ್ದಿದ್ದರೆ, ಕೋಲ್ಕತ್ತಾ ಕೇವಲ ಎರಡು ಪಂದ್ಯಗಳನ್ನು ಮಾತ್ರ ಗೆದ್ದಿದೆ.
ಬೆಂಗಳೂರನ್ನು (Bengaluru) ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ ಎಂದೆಲ್ಲ ಕರೆಯಲಾಗುತ್ತದೆ. ಇಲ್ಲಿನ ಉದ್ಯಾನಗಳು ಬಹಳ ಜನಪ್ರಿಯ. ಆದರೆ ಅದರಷ್ಟೆ ಜನಪ್ರಿಯ ಬೆಂಗಳೂರಿನ ದೋಸೆಗಳು. ಬೆಂಗಳೂರಿನ ತರ-ತರಹದ ದೋಸೆಗಳನ್ನು ಸವಿಯಲು ನಾನಾ ಕಡೆಗಳಿಂದ ಜನ ಬರುತ್ತಾರೆ. ವಿದೇಶಗಳಿಂದಲೂ ಸಹ ಫುಡ್ ವ್ಲಾಗರ್ಗಳು ಬೆಂಗಳೂರಿಗೆ ಬರುವುದು ಇಲ್ಲಿನ ದೋಸೆಗಳನ್ನು ಎಕ್ಸ್ಪ್ಲೋರ್ ಮಾಡಲೆಂದೇ. ಶತಮಾನಕ್ಕೂ ಹಳೆಯ ಕೆಲ ದೋಸೆ ಹೋಟೆಲ್ಗಳು ಬೆಂಗಳೂರಿನಲ್ಲಿವೆ. ಅರ್ಧ ಶತಮಾನ ದಾಟಿದ ಹಲವು ಹೋಟೆಲ್ಗಳಿವೆ. ಇದೀಗ ಟಾಲಿವುಡ್ನ ಸ್ಟಾರ್ ನಟರೊಬ್ಬರು ದೋಸೆ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಾರೆ.
ವಿಕ್ಟರಿ ವೆಂಕಟೇಶ್ ಎಂದೇ ಖ್ಯಾತರಾಗಿರುವ ಟಾಲಿವುಡ್ನ ಸ್ಟಾರ್ ನಟ ದಗ್ಗುಬಾಟಿ ವೆಂಕಟೇಶ್ ಅವರು ಇತ್ತೀಚೆಗಷ್ಟೆ ಬೆಂಗಳೂರಿಗೆ ಬಂದಿದ್ದರು, ಅದೂ ಬೆಂಗಳೂರಿನ ಬೆಸ್ಟ್ ದೋಸೆ ಸವಿಯಲು. ವೆಂಕಟೇಶ್ ಅವರು ಭೇಟಿ ನೀಡಿದ್ದು ಬೆಂಗಳೂರಿನ ಹೆಮ್ಮೆಯ ವಿದ್ಯಾರ್ಥಿ ಭವನ್ ಹೋಟೆಲಿಗೆ. ಗಾಂಧಿ ಬಜಾರಿನ ಈ ನೂರು ವರ್ಷಕ್ಕೂ ಹಳೆಯ ಹೋಟೆಲ್ಗೆ ಭೇಟಿ ನೀಡಿದ ವೆಂಕಟೇಶ್ ಅವರು ಹೋಟೆಲ್ನ ಹಲವು ಖಾದ್ಯಗಳನ್ನು ಸವಿದಿದ್ದಾರೆ.
ಮೊದಲಿಗೆ ಮೃದುವಾದ ಇಡ್ಲಿ ಮತ್ತು ಗರಿ-ಗರಿಯಾದ ವಡೆಯೊಂದಿಗೆ ಉಪಹಾರ ಆರಂಭಿಸಿದ ವೆಂಕಟೇಶ್. ಆ ಬಳಿಕ ಚೌ-ಚೌ ಬಾತು ಸವಿದಿದ್ದಾರೆ. ಬಳಿಕ ವಿದ್ಯಾರ್ಥಿ ಭವನದ ಬಲು ಫೇಮಸ್ ಮಸಾಲೆ ದೋಸೆ ಸವಿದು, ರುಚಿಗೆ ಮಾರು ಹೋಗಿದ್ದಾರೆ. ಒಂದು ಒಳ್ಳೆಯ ಫಿಲ್ಟರ್ ಕಾಫಿ ಜೊತೆಗೆ ಅಂತ್ಯ ಮಾಡಿದ್ದಾರೆ. ರುವಿಗೆ ಫಿದಾ ಆದ ವೆಂಕಟೇಶ್ ಅವರು ವಿದ್ಯಾರ್ಥಿ ಭವನ ಸಿಬ್ಬಂದಿ ಜೊತೆಗೆ ಹಾಗೂ ಮಾಲೀಕರ ಜೊತೆಗೆ ಮಾತನಾಡಿ, ಅವರೊಟ್ಟಿಗೆ ಚಿತ್ರಗಳನ್ನು ಸಹ ತೆಗೆಸಿಕೊಂಡಿದ್ದಾರೆ.
ವಿಶೇಷವೆಂದರೆ ವೆಂಕಟೇಶ್ ಅವರ ಈ ಹಿಂದಿನ ಸಿನಿಮಾ ‘ಮನ ಶಂಕರ ವರ ಪ್ರಸಾದ್’ನಲ್ಲಿ ವೆಂಕಟೇಶ್ ಅವರು ಕರ್ನಾಟಕದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾನಲ್ಲಿ ಕನ್ನಡದಲ್ಲೇ ಮಾತನಾಡಿದ್ದರು ಸಹ. ಆ ಸಿನಿಮಾ ಮಾತ್ರವಲ್ಲ, ಈ ಹಿಂದೆ ಇನ್ನೂ ಕೆಲವು ಸಿನಿಮಾಗಳಲ್ಲಿ ವೆಂಕಟೇಶ್ ಅವರು ಕನ್ನಡಿಗನಾಗಿ ನಟಿಸಿದ್ದಿದೆ. ತೆಲುಗು ಸಿನಿಮಾಗಳಲ್ಲಿ ಕನ್ನಡದಲ್ಲಿ ಮಾತನಾಡಿದ್ದೂ ಸಹ ಇದೆ.
ವೆಂಕಟೇಶ್ ಅವರ ಪುತ್ರಿ ಆಶ್ರಿತಾ ದಗ್ಗುಬಾಟಿ ಸ್ವತಃ ಬೇಕರ್ ಮತ್ತು ಫುಡ್ ವ್ಲಾಗರ್ ಸಹ ಆಗಿದ್ದಾರೆ. ಭಿನ್ನ-ಭಿನ್ನ ರೀತಿಯ ಖಾದ್ಯಗಳನ್ನು ಎಕ್ಸ್ಪ್ಲೋರ್ ಮಾಡುತ್ತಿರುತ್ತಾರೆ. ತಮ್ಮ ಮನೆಯಲ್ಲಿ ಮಾಡುವ ಅಡುಗೆ ಸೇರಿದಂತೆ ಹಲವು ಭಿನ್ನ ರೀತಿಯ ತಿಂಡಿ-ತಿನಿಸುಗಳ ವ್ಲಾಗಿಂಗ್ ಸಹ ಅವರು ಮಾಡಿದ್ದಾರೆ. ವೆಂಕೇಶ್ ಅವರ ಅಣ್ಣನ ಮಗ, ಖ್ಯಾತ ನಟ ರಾಣಾ ದಗ್ಗುಬಾಟಿ ಸಹ ಒಮ್ಮೆ ಹೇಳಿದಂತೆ ದಗ್ಗುಬಾಟಿ ಕುಟುಂಬದ ಎಲ್ಲರೂ ಆಹಾರ ಪ್ರಿಯರಂತೆ. ಅಂತೆಯೇ ವೆಂಕಟೇಶ್ ಸಹ, ಹಾಗಾಗಿ ಅವರು ದೋಸೆ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಾರೆ.