IND vs SA: ದಕ್ಷಿಣ ಆಫ್ರಿಕಾಕ್ಕೆ ಹಾರಲಿದೆ ಟೀಂ ಇಂಡಿಯಾ; ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ – Kannada News | BCCI Unveils India Women’s SA Tour 2026: 5 Match T20 Series Details

2026 ರ ಐಸಿಸಿ ಪುರುಷರ ಟಿ20 ವಿಶ್ವಕಪ್ (T20 World Cup 2026) ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಈ ಪಂದ್ಯಾವಳಿ ಫೆಬ್ರವರಿ 7 ರಂದು ಭಾರತ ಮತ್ತು ಶ್ರೀಲಂಕಾದಲ್ಲಿ ಪ್ರಾರಂಭವಾಗಲಿದೆ. ಹೀಗಾಗಿ ಎಲ್ಲರ ಕಣ್ಣುಗಳು ಪ್ರಸ್ತುತ ಈ ಟಿ20 ವಿಶ್ವಕಪ್ ಮೇಲಿವೆ. ಟೀಂ ಇಂಡಿಯಾ ಕೂಡ ಅದಕ್ಕಾಗಿ ತಯಾರಿ ನಡೆಸುತ್ತಿದೆ. ಆದಾಗ್ಯೂ, ಈ ವರ್ಷ ಮತ್ತೊಂದು ಟಿ20 ವಿಶ್ವಕಪ್ ನಿಗದಿಯಾಗಿದ್ದು, ಭಾರತ ತಂಡವು ಪ್ರಶಸ್ತಿ ಸ್ಪರ್ಧಿಯಾಗಿ ಆ ಪಂದ್ಯಾವಳಿಯನ್ನು ಪ್ರವೇಶಿಸಲಿದೆ. ಹರ್ಮನ್​ಪ್ರೀತ್ ಕೌರ್ (Harmanpreet Kaur) ನಾಯಕತ್ವದ ಭಾರತ ಮಹಿಳಾ ತಂಡವು ಶೀಘ್ರದಲ್ಲೇ 2026 ರ ಮಹಿಳಾ ಟಿ20 ವಿಶ್ವಕಪ್ ಸಿದ್ಧತೆಗಳನ್ನು ಪ್ರಾರಂಭಿಸಲಿದೆ. ಅದರ ಭಾಗವಾಗಿ ಭಾರತ ಮಹಿಳಾ ಪಡೆ ಏಪ್ರಿಲ್​ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ.

ಟಿ20 ವಿಶ್ವಕಪ್‌ಗೂ ಮುನ್ನ 3 ದೊಡ್ಡ ಸರಣಿಗಳು

ಭಾರತ ಮಹಿಳಾ ತಂಡವು ಏಪ್ರಿಲ್ 2026 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಲಿದ್ದು, ಇದೀಗ ಬಿಸಿಸಿಐ ಕೂಡ ಈ ಪ್ರವಾಸದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಎರಡೂ ತಂಡಗಳು ಏಪ್ರಿಲ್ 17 ರಿಂದ ಪ್ರಾರಂಭವಾಗುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಕಳೆದ ವರ್ಷ ಏಕದಿನ ವಿಶ್ವಕಪ್ ಗೆದ್ದ ನಂತರ ಇದು ಭಾರತದ ಮೂರನೇ ಸರಣಿಯಾಗಿದೆ. ಟೀಂ ಇಂಡಿಯಾ ಡಿಸೆಂಬರ್ 2025 ರಲ್ಲಿ ಶ್ರೀಲಂಕಾ ವಿರುದ್ಧ ಟಿ20 ಸರಣಿಯನ್ನು ಆಡಿತ್ತು. ಇದೀಗ ನಡೆಯುತ್ತಿರುವ ಡಬ್ಲ್ಯುಪಿಎಲ್ ಬಳಿಕ ಫೆಬ್ರವರಿ-ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡಲಿದ್ದು, ಅಲ್ಲಿ ಮೂರು ಸ್ವರೂಪಗಳ ಸರಣಿಯನ್ನು ಆಡಲಿದೆ.

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ

ಆಸ್ಟ್ರೇಲಿಯಾ ಪ್ರವಾಸದ ಬಳಿಕ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಕೈಗೊಳ್ಳಲಿದೆ. ಇದೀಗ ಈ ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದ್ದು, ಅದರ ಪ್ರಕಾರ ಎಲ್ಲಾ ಐದು ಪಂದ್ಯಗಳು ದಕ್ಷಿಣ ಆಫ್ರಿಕಾದ ಮೂರು ವಿಭಿನ್ನ ಸ್ಥಳಗಳಲ್ಲಿ ನಡೆಯಲಿವೆ. ಎರಡು ಪಂದ್ಯಗಳು ಡರ್ಬನ್‌ನಲ್ಲಿ, ಎರಡು ಪಂದ್ಯಗಳು ಜೋಹಾನ್ಸ್‌ಬರ್ಗ್‌ನಲ್ಲಿ ಮತ್ತು ಒಂದು ಪಂದ್ಯ ಬೆನೋನಿಯಲ್ಲಿ ನಡೆಯಲಿದೆ. ಈ ಪ್ರವಾಸದ ನಂತರ, ಟೀಂ ಇಂಡಿಯಾ ಮೇ ಅಂತ್ಯದಲ್ಲಿ ಟಿ20 ವಿಶ್ವಕಪ್‌ಗೆ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ. ಆದಾಗ್ಯೂ, ವಿಶ್ವಕಪ್‌ಗೆ ಮೊದಲು ಭಾರತ ಮತ್ತು ಇಂಗ್ಲೆಂಡ್ ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ವಿಶ್ವಕಪ್ ಜೂನ್ 12 ರಂದು ಆರಂಭವಾಗಲಿದೆ.

ಆಫ್ರಿಕಾ ಪ್ರವಾಸದ ವೇಳಾಪಟ್ಟಿ

  1. ಏಪ್ರಿಲ್ 17 – ಮೊದಲ ಟಿ20, ಡರ್ಬನ್
  2. ಏಪ್ರಿಲ್ 19 – ಎರಡನೇ ಟಿ20, ಡರ್ಬನ್
  3. ಏಪ್ರಿಲ್ 22 – 3ನೇ ಟಿ20, ಜೋಹಾನ್ಸ್‌ಬರ್ಗ್
  4. ಏಪ್ರಿಲ್ 25 – 4ನೇ ಟಿ20, ಜೋಹಾನ್ಸ್‌ಬರ್ಗ್
  5. ಏಪ್ರಿಲ್ 27 – ಐದನೇ ಟಿ20, ಬೆನೋನಿ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:53 pm, Wed, 21 January 26

Source link

‘ಟಾಕ್ಸಿಕ್’ ಸಿನಿಮಾ ಟೀಸರ್​​ನಲ್ಲಿ ಅಶ್ಲೀಲತೆ: ಸಿಬಿಎಫ್​​ಸಿ ಮುಖ್ಯಸ್ಥ ಹೇಳಿದ್ದೇನು? – Kannada News | CBFC Chief talks about Toxic movie teaser and its controversy

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆ ಆಗಿ ಕೆಲ ವಾರಗಳಾಗಿವೆ. ಟೀಸರ್, ಈಗಾಗಲೇ ದಾಖಲೆ ಸಂಖ್ಯೆಯ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಸಹ ಕೋಟ್ಯಂತರ ಮಂದಿ ‘ಟಾಕ್ಸಿಕ್’ ಸಿನಿಮಾದ ಟೀಸರ್ ನೋಡಿದ್ದಾರೆ. ಟೀಸರ್​​ನ ಗುಣಮಟ್ಟವನ್ನು ಬಹುವಾಗಿ ಕೊಂಡಾಡಿದ್ದಾರಾದರೂ ಕೆಲವರು, ಟೀಸರ್​​ನಲ್ಲಿ ಅನವಶ್ಯಕ ಅಶ್ಲೀಲತೆ ಇದೆ ಎಂದು ಮೂಗು ಮುರಿದಿದ್ದಾರೆ. ಕೆಲವರು ಈಗಾಗಲೇ ಮಕ್ಕಳ ಆಯೋಗ, ಮಹಿಳಾ ಆಯೋಗಕ್ಕೆ ಈ ಬಗ್ಗೆ ದೂರು ಸಹ ನೀಡಿದ್ದಾರೆ. ಸಿಬಿಎಫ್​​ಸಿಗೆ ಸಹ ಈ ಬಗ್ಗೆ ದೂರು ನೀಡಲಾಗಿದ್ದು, ‘ಟಾಕ್ಸಿಕ್’ ಸಿನಿಮಾಕ್ಕೆ ಪ್ರಮಾಣ ಪತ್ರವನ್ನೇ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಇದೀಗ ಸ್ವತಃ ಸಿಬಿಎಫ್​​ಸಿಯ ಮುಖ್ಯಸ್ಥ ಪ್ರಸೂನ್ ಜೋಶಿ ‘ಟಾಕ್ಸಿಕ್’ ಸಿನಿಮಾ ಟೀಸರ್​ ಬಗ್ಗೆ ಮಾತನಾಡಿದ್ದಾರೆ.

‘ಸೆನ್ಸಾರ್ ಮಂಡಳಿಗೆ ಸಿನಿಮಾವನ್ನು ನೀಡದ ಹೊರತು ನಾನು ಆ ಬಗ್ಗೆ ಪ್ರತಿಕ್ರಿಯಿಸಲು ಹೋಗುವುದಿಲ್ಲ, ಆದರೆ ಕೆಲವೊಮ್ಮೆ, ಯೂಟ್ಯೂಬ್ ಮತ್ತು ಇತರೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ನೀವು ನೋಡುವ ಬಹಳಷ್ಟು ವಿಷಯಗಳು ಸೆನ್ಸಾರ್ ಆಗಿರುವುದಿಲ್ಲ, ಆದರೆ ಜನರು ಅದು ಸೆನ್ಸಾರ್ ಮಂಡಳಿಯಿಂದ ಸೆನ್ಸಾರ್ ಆಗಿ ಬಂದಿದೆ ಎಂದು ಭಾವಿಸುತ್ತಾರೆ. ಆದರೆ ಅದು ಸೆನ್ಸಾರ್ ಆಗಿರುವುದಿಲ್ಲ ಎಂದು ಸ್ಪಷ್ಟನೆ ನೀಡುತ್ತೇನೆ’ ಎಂದಿದ್ದಾರೆ. ಆ ಮೂಲಕ ‘ಟಾಕ್ಸಿಕ್’ ಟೀಸರ್​​​ನಲ್ಲಿ ಸೆನ್ಸಾರ್ ಆಗಬಹುದಾದ ಅಂಶಗಳು ಇವೆಯೆಂದು ಪರೋಕ್ಷವಾಗಿ ಹೇಳಿದ್ದಾರೆ.

ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಬಾರದು ಎಂಬ ಆಗ್ರಹ ಇದೆ ಎಂಬ ಪ್ರಶ್ನೆಗೆ ಉತ್ತರಿಸಿ, ‘ನಾನು ಈಗಲೇ ಏನನ್ನೂ ಖಡಾ ಖಂಡಿತವಾಗಿ ಹೇಳಲು ಬರುವುದಿಲ್ಲ. ಡಿಜಿಟಲ್ ಮಾಧ್ಯಮಗಳಲ್ಲಿ ಜನ ನೋಡುವ ಬಹಳಷ್ಟು ವಿಷಯಗಳು ಸೆನ್ಸಾರ್ ಪ್ರಕ್ರಿಯೆಯ ಮೂಲಕ ಹಾದು ಹೋಗಿರುವುದಿಲ್ಲ. ಆದರೆ ಜನ ಸೆನ್ಸಾರ್ ಮಂಡಳಿಯಿಂದ ಒಪ್ಪಿಗೆ ಪಡೆದಿವೆ ಎಂದುಕೊಂಡು ಒಟಿಟಿ, ಯೂಟ್ಯೂಬ್​​ಗಳಲ್ಲಿ ಸಿನಿಮಾಗಳನ್ನು ನೋಡುತ್ತಾರೆ, ಇದು ಸರಿಯಲ್ಲ, ಅನ್ಯಾಯ’ ಎಂದಿದ್ದಾರೆ ಆ ಮೂಲಕ ಒಟಿಟಿ ಮತ್ತು ಯೂಟ್ಯೂಬ್ ಕಂಟೆಂಟ್​​ಗಳೂ ಸಹ ಸೆನ್ಸಾರ್ ಪ್ರಕ್ರಿಯೆಗೆ ಒಳಗಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಸೂಸ್ ಜೋಶಿ ಅವರಿಗೆ ‘ಜನ ನಾಯಗನ್’ ಸಿನಿಮಾದ ಬಗ್ಗೆ ಕೇಳಲಾದ ಪ್ರಶ್ನೆಯ ಬಗ್ಗೆ ಉತ್ತರಿಸಲು ನಿರಾಕರಿಸಿದ ಪ್ರಸೂನ್ ಜೋಶಿ, ‘ಆ ಪ್ರಕರಣ ಪ್ರಸ್ತುತ ನ್ಯಾಯಾಲಯದಲ್ಲಿ ಹಾಗಾಗಿ ಆ ಬಗ್ಗೆ ಏನೂ ಹೇಳುವುದಿಲ್ಲ’ ಎಂದರು.

ಇದನ್ನೂ ಓದಿ:ನನ್ನ ಸಿನಿಮಾ ನೋಡಿ ಎಂದು ಪಾಂಪ್ಲೆಂಟ್ ಹಂಚಿದ್ದ ಯಶ್; ಅಪರೂಪದ ಫೋಟೋ ವೈರಲ್

‘ಟಾಕ್ಸಿಕ್’ ಸಿನಿಮಾದ ಟೀಸರ್ ಕುರಿತಾಗಿ ಕರ್ನಾಟಕ ಎಎಪಿ ಮಹಿಳಾ ಘಟಕದ ಸದಸ್ಯೆಯರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಅಲ್ಲದೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬುವರು ಸಿಬಿಎಫ್​​ಸಿಗೆ ಕರೆ ಮಾಡಿದ್ದು, ‘ಟಾಕ್ಸಿಕ್’ ಸಿನಿಮಾನಲ್ಲಿ ಸಾಕಷ್ಟು ಅಶ್ಲೀಲ ದೃಶ್ಯಗಳಿದ್ದು, ಇದು ಮಕ್ಕಳು, ಯುವಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಹಾಗಾಗಿ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಬಾರದು ಎಂದು ಆಗ್ರಹಿಸಿದ್ದಾರೆ.

‘ಟಾಕ್ಸಿಕ್’ ಸಿನಿಮಾ ಅನ್ನು ಗೀತು ಮೋಹನ್​​ದಾಸ್ ನಿರ್ದೇಶನ ಮಾಡಿದ್ದು, ಸಿನಿಮಾಕ್ಕೆ ಯಶ್ ಹಾಗೂ ಕೆವಿಎನ್​​ ಒಟ್ಟಾಗಿ ಬಂಡವಾಳ ತೊಡಗಿಸಿದ್ದಾರೆ. ಸಿನಿಮಾನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾ ಮಾರ್ಚ್ 19ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾಪಾಡಲಿಲ್ಲ ಮಹದೇಶ್ವರ: ಚಿರತೆ ದಾಳಿಗೆ ಭಕ್ತ ಬಲಿ; ಪಾದಯಾತ್ರೆಗೆ 4 ದಿನಗಳ ಕಾಲ ನಿರ್ಬಂಧ – Kannada News | Male Mahadeshwara Pilgrim Killed by Leopard in Chamarajanagar

ಚಿರತೆ ದಾಳಿಗೆ ಬಲಿಯಾದ ಪ್ರವೀಣ್​​

ಚಾಮರಾಜನಗರ, ಜನವರಿ 21: ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದ ಭಕ್ತನೋರ್ವ ಚಿರತೆ ದಾಳಿಗೆ ಬಲಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ನಿವಾಸಿ ಪ್ರವೀಣ್​ ಮೃತ ದುರ್ದೈವಿಯಾಗಿದ್ದು, ತಡರಾತ್ರಿ ತಾಳ ಬೆಟ್ಟದ ಬಳಿ ಪೂಜೆ ಸಲ್ಲಿಸಿ ತೆರಳುವಾಗ ಚಿರತೆ ದಾಳಿ ನಡೆಸಿದೆ.  ಪಾದಯಾತ್ರೆ ಹೊರಟಿದ್ದ ಐವರು  ತೆರಳುವಾಗ ತಡೆಗೋಡೆ ಮೇಲೆ ಕುಳಿತಿದ್ದ ಚಿರತೆ ನೋಡಿ ಬೆಚ್ಚಿ ಬಿದ್ದಿದ್ದಿದ್ದಾರೆ. ಗಾಬರಿಯಿಂದ ಓಡಿ ಹೋಗುವಾಗ ಪ್ರವೀಣ್ ನಾಪತ್ತೆಯಾಗಿದ್ದ. ತಡೆಗೋಡೆಯಿಂದ ಕೆಳಗೆ ಬಿದ್ನಾ, ಇಲ್ಲ ಚಿರತೆ ದಾಳಿ ಮಾಡಿದೆಯಾ? ಎಂಬ ಅನುಮಾನ ಆರಂಭದಲ್ಲಿ ಮೂಡಿತ್ತು. ಆದರೆ ಅಂತಿಮವಾಗಿ ಚಿರತೆ ದಾಳಿಗೆ ಆತ ಬಲಿಯಾಗಿರೋದು ದೃಢಪಟ್ಟಿದೆ.

ಶವದ ಪಕ್ಕವೇ ಕುಳಿತಿದ್ದ ನರಭಕ್ಷಕ ಚಿರತೆ

ತಾಳಬೆಟ್ಟದ ಕಂದಕದಲ್ಲಿ ಪ್ರವೀಣ್ ಶವ ಪತ್ತೆಯಾಗಿದ್ದು, ಮಾದಪ್ಪನ ಭಕ್ತನ ಕೊಂದ ನರಭಕ್ಷಕ ಚಿರತೆ ಆತನ ರಕ್ತ ಹೀರಿದೆ. ಸುಮಾರು 1 ಕಿ.ಮೀ. ಕಾಡಿನೊಳಗೆ ಚಿರತೆ ಶವ ಎಳೆದುಕೊಂಡು ಹೋಗಿದ್ದು, ಶವ ಪತ್ತೆ ವೇಳೆಯೂ ಪ್ರವೀಣ್ ಮೃತದೇಹದ ಪಕ್ಕದಲ್ಲೇ ಕುಳಿತಿತ್ತು. ಹೀಗಾಗಿ ಶವ ಹೊರತೆಗೆಯಲು ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಅಂತಿಮವಾಗಿ ಪಟಾಕಿ ಸಿಡಿಸಿ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಓಡಿಸಿದ್ದು, ಸದ್ಯ ಮರಣೋತ್ತರ ಪರೀಕ್ಷೆಗಾಗಿ ಹನೂರು ಆಸ್ಪತ್ರೆಗೆ ಶವ ರವಾನೆ ಮಾಡಲಾಗಿದೆ. ಬೆಳಗಿನ ಜಾವ 5.30ಕ್ಕೆ ತೆರಳುವಂತೆ ನಮಗೆ ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದರು. ನಾವು 6 ಗಂಟೆ ವೇಳೆಗೆ ಹೋಗುತ್ತಿದ್ದ ವೇಳೆ ಚಿರತೆ ಕಾಣಿಸಿದ್ದು, ಸ್ಥಳದಿಂದ ಓಡಲು ಆರಂಭಿಸಿದ್ದೆವು. ಚಿರತೆ ಚಿರತೆ ಎಂದು ಕಿರುಚಾಡಿದ್ದೆವು ಎಂದು ಪ್ರತ್ಯಕ್ಷದರ್ಶಿಯೋರ್ವರು ತಿಳಿಸಿದ್ದಾರೆ.

ಇದನ್ನೂ ಓದಿ: ಮಕ್ಕಳ ಮೇಲೆ ‌ದಾಳಿ ಮಾಡಿದ್ದ ಚಿರತೆ ಅರಣ್ಯ ಸಿಬ್ಬಂದಿ ಗುಂಡೇಟಿಗೆ ಬಲಿ 

ಪಾದಯಾತ್ರೆಗೆ 4 ದಿನಗಳ ಕಾಲ ನಿರ್ಬಂಧ

ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿಗೆ ಭಕ್ತ ಪ್ರವೀಣ್ ಬಲಿ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ 4 ದಿನಗಳ ಕಾಲ ಪಾದಯಾತ್ರೆಗೆ ನಿರ್ಬಂಧ ವಿಧಿಸಿ ಅರಣ್ಯಾಧಿಕಾರಿಗಳು ಆದೇಶಿಸಿದ್ದಾರೆ. ಚಿರತೆ ಹಿಡಿಯುವವರೆಗೆ 4 ದಿನಗಳ ಕಾಲ ಪಾದಯಾತ್ರೆ ನಿರ್ಬಂಧ ಇರಲಿದೆ ಎಂದು ಮಲೆ ಮಹದೇಶ್ವರ ವನ್ಯಜೀವಿಧಾಮದ ಅರಣ್ಯ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ. ತಾಳಬೆಟ್ಟ ಪ್ರದೇಶದಲ್ಲಿ ಚಿರತೆ ಕೆಲ ದಿನಗಳ ಹಿಂದೆಯೂ ಕಾಣಿಸಿಕೊಂಡಿತ್ತು. ರಸ್ತೆಯ ಬದಿಯಲ್ಲೇ ಇರುವ ಸೇತುವೆ ಮೇಲೆ ಚಿರತೆ ಗಂಟೆಗಟ್ಟಲೆ ಕುಳಿತ ದೃಶ್ಯವನ್ನು ಭಕ್ತರು ಮೊಬೈಲ್​​ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲೇ ಆಗಮಿಸುವುದರಿಂದ ಚಿರತೆಯನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಮಲೆ ಮಹದೇಶ್ವರ ವನ್ಯಜೀವಿಧಾಮದ ಅರಣ್ಯ ಸಿಬ್ಬಂದಿಗೆ ಮನವಿಯನ್ನೂ ಸಲ್ಲಿಸಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಳಗಾವಿ: ಉಪನ್ಯಾಸಕನೊಂದಿಗೆ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ನಾಪತ್ತೆ, ಮಗಳಿಗಾಗಿ ಕಣ್ಣೀರು ಹಾಕಿದ ಹೆತ್ತವರು – Kannada News | Belagavi Shocker: Athani Student Vanishes with Lecturer; Parents Claim Kidnapping

ಚಿಕ್ಕೋಡಿ, ಜ.21: ಉಪನ್ಯಾಸಕನೊಂದಿಗೆ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ನಾಪತ್ತೆಯಾಗಿರುವ (Athani student missing) ಘಟನೆ ಬೆಳಗಾವಿಯ ಅಥಣಿ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದೀಗ ವಿದ್ಯಾರ್ಥಿನಿಯ ಮನೆಯವರು ಉಪನ್ಯಾಸಕ ನಮ್ಮ ಮಗಳನ್ನು ಕಿಡ್ನಾಪ್​​ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೂಡ ದೂರ ದಾಖಲಿಸಿಕೊಂಡಿದ್ದಾರೆ. ಬೆಳಗಾವಿಯ ಅಥಣಿ ಪಟ್ಟಣದ ಕಾಲೇಜ್​​​​ವೊಂದರಲ್ಲಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಕಾಣೆಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆಯು ಸ್ಥಳೀಯವಾಗಿ ಸಾಕಷ್ಟು ಸಂಚಲನ ಮೂಡಿಸಿದೆ. ಹಾಗೂ ಸಾರ್ವಜನಿಕರಲ್ಲೂ ಕೂಡ ಆತಂಕ ವಾತಾವರಣ ಸೃಷ್ಟಿಸಿದೆ. ಕಾಲೇಜಿನಂತಹ ಪವಿತ್ರ ಸ್ಥಳದಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿನಿಯ ನಡುವೆ ಇಂತಹ ಸಂಬಂಧ ಇರಬಾರದು. ಈ ಬಗ್ಗೆ ತಕ್ಷಣ ಕಾಲೇಜಿ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಹೇಳಿದ್ದಾರೆ.

ಇನ್ನು ಈ ಪ್ರಕರಣದಲ್ಲಿ ಆರೋಪ ಹೊತ್ತಿರುವ ಉಪನ್ಯಾಸಕ ಕೂಡ ಅದೇ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದು, ಜನವರಿ 8ರಂದು ವಿದ್ಯಾರ್ಥಿನಿ ನಾಪತ್ತೆಯಾಗಿದ್ದಾಳೆ ಎಂದು ಪೋಷಕರು ಹೇಳಿದ್ದಾರೆ. ಮಗಳು ಕಾಣೆಯಾದ ಮರುದಿನವೇ (ಜ.9) ವಿದ್ಯಾರ್ಥಿನಿ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರ ನೀಡಿ 11 ದಿನವಾದರೂ ವಿದ್ಯಾರ್ಥಿನಿ ಹಾಗೂ ಉಪನ್ಯಾಸಕರು ಪತ್ತೆಯಾಗಿಲ್ಲ. ನಮ್ಮ ಮಗಳನ್ನು ಕಿಡ್ನಾಪ್​​ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಉಪನ್ಯಾಸಕ ಮದುವೆಯ ಆಮಿಷವೊಡ್ಡಿ ಅಥವಾ ಮಗಳಿಗೆ ದಾರಿ ತಪ್ಪಿಸಿ ಕರೆದೊಯ್ದಿರುವ ಸಾಧ್ಯತೆ ಎಂದು ಮನೆಯವರು ಹೇಳಿದ್ದಾರೆ.

ಇದನ್ನೂ ಓದಿ: ಮನೆಯಿಂದ ಹೊರ ಹೋಗಿದ್ದಾಕೆ ಶವವಾಗಿ ಪತ್ತೆ: ಕೊಲೆ ಮಾಡಿ ಆರೋಪಿಗಳು ಎಸ್ಕೇಪ್​?

ವಿದ್ಯಾರ್ಥಿನಿಯ ಮನೆಯವರು ಇದೀಗ ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ಮಗಳು ಕಾಣೆಯಾಗಿದರೂ ನಮಗೆ ವಿಷಯವನ್ನೇ ಹೇಳಿಲ್ಲ. ಇದಕ್ಕೆ ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಕಾರಣ ಎಂದು ಹೇಳಿದ್ದಾರೆ. ಜತೆಗೆ ಕಾಲೇಜಿನ ಮುಂದೆ ಬಂದು ಕುಟುಂಬಸ್ಥರು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ವಿದ್ಯಾರ್ಥಿಗಳನ್ನು ಹೊರ ಕಳುಹಿಸಿ ಕಾಲೇಜು ಮುಚ್ಚಿಸಿದ್ದಾರೆ. ಕಾಲೇಜು ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಡ ಕೂಗಿದ್ದಾರೆ, ನಮ್ಮ ಮಗಳನ್ನು ಹುಡುಕಿಕೊಡಿ ಎಂದು ಮಗಳಿಗಾಗಿ ಪೋಷಕರು ಕಣ್ಣೀರು ಹಾಕಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ. ಪೊಲೀಸರು ವಿದ್ಯಾರ್ಥಿನಿ ಮತ್ತು ಉಪನ್ಯಾಸಕನ ಮೊಬೈಲ್ ಫೋನ್ ಲೊಕೇಶನ್ ಆಧಾರದ ಮೇಲೆ ಪತ್ತೆ ಹಚ್ಚಲು ವಿಶೇಷ ತಂಡಗಳನ್ನು ರಚಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:54 pm, Wed, 21 January 26

Source link

ಮನೆಯಿಂದ ಹೊರ ಹೋಗಿದ್ದಾಕೆ ಶವವಾಗಿ ಪತ್ತೆ: ಕೊಲೆ ಮಾಡಿ ಆರೋಪಿಗಳು ಎಸ್ಕೇಪ್​? – Kannada News | 19 Year Old Girl Found Dead in Dharwad; Murder Suspected

ಧಾರವಾಡ, ಜನವರಿ 21: ನಗರದ ಹೊರವಲಯದಲ್ಲಿ ಯುವತಿಯೋರ್ವಳ ಶವ (Dead Body)  ಪತ್ತೆಯಾಗಿದ್ದು, ಮೃತಳನ್ನು ಗಾಂಧಿ ಚೌಕ್ ಬಡಾವಣೆ ನಿವಾಸಿ ಝಕಿಯಾ ಮುಲ್ಲಾ(19) ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಮನೆಯಿಂದ ಹೊರಹೋಗಿದ್ದ ಝಕಿಯಾ ಮುಲ್ಲಾ ಇಂದು ಮನಸೂರು ರಸ್ತೆಯ ವಿನಯ್ ಡೈರಿ ಬಳಿ ಶವವಾಗಿ ಪತ್ತೆಯಾಗಿದ್ದಾಳೆ. ಹತ್ಯೆ ಮಾಡಿ ಯುವತಿ ಶವ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಧಾರವಾಡ ಗ್ರಾಮೀಣ ಹಾಗೂ ವಿದ್ಯಾಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿವಿಲ್ ಆಸ್ಪತ್ರೆ ಮುಂದೆ ಕುಟುಂಬ ಮತ್ತು ಸಂಬಂಧಿಕರ ಆಕ್ರೋಶ ಮುಗಿಲು ಮುಟ್ಟಿದ್ದು, ಯಾರೋ ಕರೆದುಕೊಂಡು ಹೋಗಿಯೇ ಕೊಲೆ ಮಾಡಿದ್ದಾರೆ. ಆರೋಪಿಯನ್ನು ಪತ್ತೆ ಮಾಡಿ ಶೂಟೌಟ್ ಮಾಡಬೇಕು ಎಂದು ಆಗ್ರಹಿಸಲಾಗಿದೆ. ಝಕಿಯಾ ತಂದೆ ಯೂನುಸ್ ರಿಯಲ್ ಎಸ್ಟೇಟ್ ಬ್ರೋಕರ್ ಆಗಿದ್ದು, ನಿನ್ನೆ ಸಂಜೆ ಮನೆಯಿಂದ ಹೊರ ಹೋಗಿದ್ದ ಝಕಿಯಾ ಮುಲ್ಲಾ ಮರಳಿ ಬಾರದ ಹಿನ್ನೆಲೆ ಕುಟುಂಬಸ್ಥರು ದೂರು ನೀಡಿದ್ದರು. ಧಾರವಾಡ ಸಾಧನಕೇರಿ ನಿವಾಸಿಯಾಗಿರೋ ಯುವಕನ ಜೊತೆ ಮುಂದಿನ ತಿಂಗಳು ಝಕಿಯಾ ನಿಶ್ಚಿತಾರ್ಥಕ್ಕೂ ಕುಟುಂಬ ತಯಾರಿ ನಡೆಸಿತ್ತು ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಜವಾಬ್ದಾರಿಯುತ ದೇಶಗಳ ಸೂಚ್ಯಂಕ; ಅಮೆರಿಕ, ಚೀನಾಗಿಂತ ಭಾರತ ಮೇಲೆ; ಪಾಕಿಸ್ತಾನ ಮತ್ತಿತರ ದೇಶಗಳು ಹೇಗೆ? – Kannada News | RNI Responsible Nations Index, Singapore tops the list, India higher ranking than USA and China

ನವದೆಹಲಿ, ಜನವರಿ 21: ವಿಶ್ವ ಬಲಶಾಲಿ ದೇಶಗಳ ಪಟ್ಟಿಗಳನ್ನು ಮಾಡಿದರೆ ಅದರಲ್ಲಿ ಅಮೆರಿಕ, ಚೀನಾ ಮೊದಲಾದ ದೇಶಗಳು ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ, ಜವಾಬ್ದಾರಿಯುತ ರಾಷ್ಟ್ರಗಳ ಪಟ್ಟಿಯಲ್ಲಿ (RNI- Responsible Nations Index) ಈ ಎರಡು ದೇಶಗಳು ಬಹಳ ಕೆಳಗಿನ ಕ್ರಮಾಂಕದಲ್ಲಿವೆ. ವರ್ಲ್ಡ್ ಇಂಟೆಲೆಕ್ಚುಲ್ ಫೌಂಡೇಶನ್ ವತಿಯಿಂದ ರೂಪಿಸಲಾಗಿರುವ ಆರ್​ಎನ್​ಐ ಇಂಡೆಕ್ಸ್ ಅನ್ನು ಮೊನ್ನೆ ಲೋಕಾರ್ಪಣೆಗೊಳಿಸಲಾಯಿತು. ಮೂರು ವರ್ಷಗಳ ಸಂಶೋಧನೆ ಮತ್ತು ಅಧ್ಯಯನದ ಬಳಿಕ ರೆಸ್ಪಾನ್ಸಿಬಲ್ ನೇಶನ್ಸ್ ಇಂಡೆಕ್ಸ್ ಅನ್ನು ರೂಪಿಸಲಾಗಿದೆ.

ಜವಾಬ್ದಾರಿಯುತ ರಾಷ್ಟ್ರಗಳ ಸೂಚಿಯ ಮೊದಲ ಆವೃತ್ತಿಯಲ್ಲಿ ಸಿಂಗಾಪುರ ಅಗ್ರಸ್ಥಾನ ಪಡೆದಿದೆ. ಟಾಪ್-20ಯಲ್ಲಿ ಹೆಚ್ಚಿನವು ಐರೋಪ್ಯ ರಾಷ್ಟ್ರಗಳೇ ಇವೆ. ಭಾರತ 16ನೇ ಸ್ಥಾನ ಪಡೆದಿದೆ. ಅಮೆರಿಕ, ಚೀನಾ ದೇಶಗಳು ಬಹಳ ಕೆಳಗೆ 66 ಮತ್ತು 68ನೇ ಸ್ಥಾನ ಪಡೆದಿವೆ. ಬಾಂಗ್ಲಾದೇಶದಂತಹ ರಾಷ್ಟ್ರಗಳು ಅಮೆರಿಕಕ್ಕಿಂತ ಮೇಲಿರುವುದು ಗಮನಾರ್ಹ. ಪಾಕಿಸ್ತಾನ 90ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಜಗತ್ತು ಮಂದಗೊಂಡರೂ ಭಾರತದ ಚುರುಕು ಬೆಳವಣಿಗೆ: ಡಾವೊಸ್ ಸಮಿಟ್​ನಲ್ಲಿ ಪ್ರಹ್ಲಾದ ಜೋಷಿ

ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ 2026 – ಟಾಪ್20

  1. ಸಿಂಗಾಪುರ್
  2. ಸ್ವಿಟ್ಜರ್​ಲ್ಯಾಂಡ್
  3. ಡೆನ್ಮಾರ್ಕ್
  4. ಸೈಪ್ರಸ್
  5. ಸ್ವೀಡನ್
  6. ಜೆಕಿಯಾ
  7. ಬೆಲ್ಜಿಯಂ
  8. ಆಸ್ಟ್ರಿಯಾ
  9. ಐರ್ಲ್ಯಾಂಡ್
  10. ಜಾರ್ಜಿಯಾ
  11. ಕ್ರೊವೇಶಿಯಾ
  12. ಜರ್ಮನಿ
  13. ಪೋರ್ಚುಗಲ್
  14. ಬಲ್ಗೇರಿಯಾ
  15. ನಾರ್ವೇ
  16. ಭಾರತ
  17. ಫ್ರಾನ್ಸ್
  18. ಆಲ್ಬೇನಿಯಾ
  19. ಪೋಲ್ಯಾಂಡ್
  20. ನೆದರ್​ಲ್ಯಾಂಡ್ಸ್

ಒಟ್ಟು 154 ದೇಶಗಳನ್ನು ಈ ಸೂಚ್ಯಂಕದಲ್ಲಿ ಒಳಗೊಳ್ಳಲಾಗಿದೆ. ಅನೇಕ ಆಫ್ರಿಕನ್ ಹಾಗೂ ಪಶ್ಚಿಮ ಏಷ್ಯನ್ ದೇಶಗಳು ಕೆಳಗಿನ ಕ್ರಮಾಂಕದಲ್ಲಿವೆ. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಸಿರಿಯಾ ಮತ್ತು ಸೌತ್ ಸುಡಾನ್ ದೇಶಗಳು ಕೊನೆಯಿಂದ ಮೂರು ಸ್ಥಾನಗಳನ್ನು ಪಡೆದಿವೆ.

ಆರ್​ಎನ್​ಐ ಪಟ್ಟಿಯಲ್ಲಿ ತಳಮಟ್ಟದಲ್ಲಿರುವ 10 ದೇಶಗಳು

  1. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್
  2. ಸಿರಿಯಾ
  3. ಸೌತ್ ಸುಡಾನ್
  4. ಯೆಮೆನ್
  5. ಸೊಮಾಲಿಯಾ
  6. ಸುಡಾನ್
  7. ಚಾಡ್
  8. ಪಪುವಾ ನ್ಯೂ ಗಿನಿಯಾ
  9. ನಾರ್ತ್ ಕೊರಿಯಾ
  10. ಅಫ್ಘಾನಿಸ್ತಾನ

ಆರ್​ಎನ್​ಐ: ಇತರ ಪ್ರಮುಖ ದೇಶಗಳ ರ್ಯಾಂಕಿಂಗ್

  • ಯುಕೆ: 25
  • ಇಟಲಿ: 34
  • ಜಪಾನ್: 38
  • ಬಾಂಗ್ಲಾದೇಶ: 42
  • ಕೆನಡಾ: 45
  • ನ್ಯೂಜಿಲ್ಯಾಂಡ್: 48
  • ಲೆಬನಾನ್: 49
  • ಆಸ್ಟ್ರೇಲಿಯಾ: 62
  • ಅಮೆರಿಕ: 66
  • ಚೀನಾ: 68
  • ಯುಎಇ: 75
  • ಶ್ರೀಲಂಕಾ: 77
  • ಮಾಲ್ಡೀವ್ಸ್: 79
  • ಬ್ರೆಜಿಲ್: 81
  • ಸೌತ್ ಆಫ್ರಿಕಾ: 88
  • ಪಾಕಿಸ್ತಾನ್: 90
  • ಟರ್ಕಿ: 94
  • ರಷ್ಯಾ: 96
  • ಭೂತಾನ್: 98
  • ಇರಾನ್: 123
  • ಸೌದಿ ಅರೇಬಿಯಾ: 128
  • ಉಕ್ರೇನ್: 131

ಇದನ್ನೂ ಓದಿ: ಭಾರತದ ಆರ್ಥಿಕ ಬೆಳವಣಿಗೆ ಶೇ. 7.3; ಐಎಂಎಫ್ ಮತ್ತು ಮೂಡೀಸ್ ಏಜೆನ್ಸಿ ಅಂದಾಜು

ಜವಾಬ್ದಾರಿಯುತ ದೇಶಗಳ ಸೂಚ್ಯಂಕಕ್ಕೆ ಏನು ಮಾನದಂಡಗಳು?

ಆರ್​ಎನ್​ಐ ಅನ್ನು ಮೂರು ಪ್ರಮುಖ ತಳಹದಿಯಲ್ಲಿ ರೂಪಿಸಲಾಗಿದೆ. ಆಂತರಿಕ ಜವಾಬ್ದಾರಿ (Internal Responsibility), ಪರಿಸರ ಜವಾಬ್ದಾರಿ (Environmental Responsibility) ಮತ್ತು ಬಾಹ್ಯ ಜವಾಬ್ದಾರಿ (External Responsibility) ಇವು ಈ ಇಂಡೆಕ್ಸ್​ನ ಮೂರು ಮಾನದಂಡಗಳಾಗಿವೆ. ದೇಶವಾಸಿಗಳ ಕಲ್ಯಾಣ, ಪರಿಸರ ರಕ್ಷಣೆಯೊಂದಿಗೆ ಸುಸ್ಥಿರ ಅಭಿವೃದ್ಧಿ, ಅಂತಾರಾಷ್ಟ್ರೀಯವಾಗಿ ದೇಶದ ವರ್ತನೆ ಇತ್ಯಾದಿ ಅಂಶಗಳನ್ನು ಪರಿಗಣಿಸಿ ರ್ಯಾಂಕಿಂಗ್ ಕೊಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

CBI Recruitment 2026: ಸೆಂಟ್ರಲ್ ಬ್ಯಾಂಕ್​​ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ; ಪದವೀಧರರು ಅರ್ಹರು – Kannada News | CBI Recruitment 2026: 350 Forex and Marketing Officer Posts, Apply Online Now!

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಆಸಕ್ತಿ ಹೊಂದಿರುವ ಯುವಜನರಿಗೆ ಇದು ಪ್ರಮುಖ ಅವಕಾಶವಾಗಿದೆ. ದೇಶದ ಅತ್ಯಂತ ಪ್ರತಿಷ್ಠಿತ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ವಿದೇಶಿ ವಿನಿಮಯ ಅಧಿಕಾರಿ ಹಾಗೂ ಮಾರ್ಕೆಟಿಂಗ್ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜನವರಿ 20 ರಿಂದ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದು.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 350 ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಿದೆ. ಅರ್ಜಿಗಳನ್ನು ಸಂಪೂರ್ಣವಾಗಿ ಆನ್‌ಲೈನ್ ಮೂಲಕವೇ ಸಲ್ಲಿಸಬೇಕಿದ್ದು, ಅಭ್ಯರ್ಥಿಗಳು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ centralbank.bank.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 3. ಸಾಮಾನ್ಯ ವರ್ಗದ ಅಭ್ಯರ್ಥಿಗಳು 850 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿದ್ದು, ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಬಿಡಿ (ದಿವ್ಯಾಂಗ) ಮತ್ತು ಮಹಿಳಾ ಅಭ್ಯರ್ಥಿಗಳಿಗೆ 175 ರೂ. ಮಾತ್ರ ಶುಲ್ಕ ನಿಗದಿಪಡಿಸಲಾಗಿದೆ.

ವಿದೇಶಿ ವಿನಿಮಯ ಅಧಿಕಾರಿ ಹುದ್ದೆಗೆ ಯಾವುದೇ ವಿಭಾಗದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆದರೆ, CFA, CA, MBA ಸೇರಿದಂತೆ ಸಂಬಂಧಿತ ವೃತ್ತಿಪರ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಮಾರ್ಕೆಟಿಂಗ್ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು, ಪದವಿಯ ನಂತರ MBA, ಪಿಜಿ ಡಿಪ್ಲೊಮಾ ಇನ್ ಮ್ಯಾನೇಜ್ಮೆಂಟ್, ಬಿಸಿನೆಸ್ ಮ್ಯಾನೇಜ್ಮೆಂಟ್, ಬಿಸಿನೆಸ್ ಅನಾಲಿಟಿಕ್ಸ್ ಅಥವಾ ಸಮಾನ ಸ್ನಾತಕೋತ್ತರ ಅರ್ಹತೆಗಳನ್ನು ಹೊಂದಿರಬೇಕು.

ಇದನ್ನೂ ಓದಿ: ಭಾರತೀಯ ರಿಸರ್ವ್ ಬ್ಯಾಂಕ್​​ನಲ್ಲಿ ಉದ್ಯೋಗವಕಾಶ; 10th ಪಾಸಾಗಿದ್ರೆ ಸಾಕು!

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಒಟ್ಟು 100 ಪ್ರಶ್ನೆಗಳಿದ್ದು, ಗರಿಷ್ಠ 100 ಅಂಕಗಳಿರುತ್ತವೆ. ಪರೀಕ್ಷೆಯ ಅವಧಿ 2 ಗಂಟೆಗಳಾಗಿರುತ್ತದೆ. ಅರ್ಹತಾ ಅಂಕಗಳು ಸಾಮಾನ್ಯ ಹಾಗೂ ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳಿಗೆ ಶೇ.50 ಆಗಿದ್ದು, ಎಸ್‌ಸಿ/ಎಸ್‌ಟಿ/ಒಬಿಸಿ/ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಶೇ.45 ನಿಗದಿಪಡಿಸಲಾಗಿದೆ. ಲಿಖಿತ ಪರೀಕ್ಷೆಯನ್ನು ಫೆಬ್ರವರಿ ಅಥವಾ ಮಾರ್ಚ್ 2026 ರಲ್ಲಿ ಆನ್‌ಲೈನ್ ಮೂಲಕ ನಡೆಸಲಾಗುತ್ತಿದ್ದು, ನಂತರ ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಸಂದರ್ಶನಗಳನ್ನು ಆಯೋಜಿಸಲಾಗುತ್ತದೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸ್ಥಿರ ಮತ್ತು ಗೌರವಯುತ ವೃತ್ತಿಜೀವನವನ್ನು ನಿರ್ಮಿಸಲು ಬಯಸುವ ಅಭ್ಯರ್ಥಿಗಳಿಗೆ ಈ ನೇಮಕಾತಿ ಉತ್ತಮ ಅವಕಾಶವಾಗಿದ್ದು, ಆಸಕ್ತರು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಲಾಗಿದೆ. ಅಧಿಕೃತ ಅಧಿಸೂಚನೆ ಮತ್ತು ಹೆಚ್ಚಿನ ವಿವರಗಳನ್ನು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಬೈಕ್ ಓಡಿಸುತ್ತಿರುವಾಗಲೇ ಪತ್ನಿ ಕೈಯಲ್ಲಿ ಒದೆ ತಿಂದ ಪತಿ, ವೈರಲ್‌ ಆಯ್ತು ದೃಶ್ಯ – Kannada News | Husband gets beats by wife while riding bike

ಗಂಡ ಹೆಂಡಿರ (husband and wife) ಜಗಳ ಉಂಡು ಮಲಗುವ ತನಕ ಎಂದು ಹೇಳ್ತಾರೆ. ಆದರೆ ಇದೀಗ ಗಂಡ ಹೆಂಡಿರ ಜಗಳ (fight) ಬೀದಿಗೆ ಬಂದರೆ ಸಮಾಧಾನ ಎನ್ನುವಂತಾಗಿದೆ. ಇಲ್ಲೊಬ್ಬಳು ಪತ್ನಿಗೆ ತನ್ನ ಪತಿಯ ಮೇಲೆ ಎಷ್ಟು ಕೋಪವಿದೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಬೈಕ್ ಹಿಂದೆ ಕುಳಿತಿದ್ದ ಪತ್ನಿಯು ಸಿಕ್ಕಿದ್ದೇ ಚಾನ್ಸ್ ಎಂದು ಪತಿಯ ತಲೆಗೆ ಹೊಡೆಯುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮನೆ ತಲುಪುವಷ್ಟರಲ್ಲಿ ಈತನ ಕಥೆ ಮುಗಿದಂಗೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ತನ್ಮೋಯ್‌ ಬಾಲ್‌ (Tanmoy Bal) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪತಿ ಪತ್ನಿಯು ಬೈಕ್‌ನಲ್ಲಿ ಹೋಗುತ್ತಿರುವುದನ್ನು ಕಾಣಬಹುದು. ವ್ಯಕ್ತಿಯೊಬ್ಬ ಬೈಕ್ ಓಡಿಸುತ್ತಿದ್ದು, ಆತನ ಹಿಂದೆ ಪತ್ನಿಯು ಕುಳಿತಿದ್ದಾಳೆ. ಈ ವೇಳೆ ಇಬ್ಬರ ನಡುವ ವಾಗ್ವಾದ ನಡೆದಿದೆ. ಬೈಕ್ ಹಿಂಬದಿ ಕುಳಿತು ಕೊಂಡಿದ್ದ ಪತ್ನಿಯ ಪಿತ್ತ ನೆತ್ತಿಗೇರಿದೆ. ಹಿಂಬದಿಯಿಂದ ಗಂಡನ ತಲೆಗೆ ಬಾರಿಸಿದ್ದಾಳೆ. ಕೊನೆಗೆ ಕೋಪದಲ್ಲೇ ಕೂದಲು ಹಿಡಿದು ಎಳೆದಾಡಿದ್ದಾಳೆ. ಹೆಂಡ್ತಿ ಹೊದೆಯನ್ನು ಸಹಿಸಿಕೊಳ್ಳಲಾಗದೇ ಗಂಡ ಬೈಕ್ ನಿಲ್ಲಿಸುವ ದೃಶ್ಯವನ್ನು ನೀವಿಲ್ಲಿ ನೋಡಬಹುದು. ಹಿಂಬದಿ ಬೈಕ್‌ ಸವಾರರು ಗಂಡ ಹೆಂಡಿರ ಜಗಳವನ್ನು ನೋಡಿ ನಗುತ್ತಿರುವುದನ್ನು ಕಾಣಬಹುದು. ವಾಹನ ಸವಾರರು ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ:ಸರಿಯಾದ ಸಮಯಕ್ಕೆ ಸಿಂಧೂರ ತಂದು, ನಿಲ್ಲಬೇಕಿದ್ದ ಮದುವೆಯನ್ನು ಸರಾಗವಾಗಿ ನಡೆಯುವಂತೆ ಮಾಡಿದ ಬ್ಲಿಂಕಿಟ್

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಇಂತಹ ಹೆಂಡ್ತಿಯನ್ನು ಹೇಗೆ ಸಹಿಸಿಕೊಳ್ತೀಯಾ ಎಂದು ಕೇಳಿದ್ದಾರೆ. ಮತ್ತೊಬ್ಬರು, ಇಂತಹ ಹೆಂಡ್ತಿ ಸಿಕ್ಕಿದ್ದು ಪುಣ್ಯ ಎಂದು ವ್ಯಂಗ್ಯವಾಡಿದ್ದಾರೆ. ಇನ್ನೊಬ್ಬರು, ನಿಜಕ್ಕೂ ಈ ವ್ಯಕ್ತಿಯ ಪರಿಸ್ಥಿತಿನಾ ನೆನೆಸಿಕೊಂಡ್ರೆ ಬೇಜಾರ್ ಆಗುತ್ತೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:29 pm, Wed, 21 January 26

Source link

ಲಕ್ಕುಂಡಿ ನಿಧಿಗೆ ಸರ್ಪ ಕಾವಲು? ಮೈಸೂರಿನಿಂದ ಬಂದ ಉರಗ ರಕ್ಷಕರು ಹೇಳಿದ್ದೇನು? – Kannada News | Gold Treasure : snake catchers Came to Lakkundi From Mysuru For serpent found during excavation

ಗದಗ, (ಜನವರಿ 21): ಜಿಲ್ಲೆಯ ಐತಿಹಾಸಿಕ ಗ್ರಾಮ ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವಾಗ ಚಿನ್ನದ ನಿಧಿ (Lakkundi Gold Treasure) ಸಿಕ್ಕಿದ್ದು, ಅಂದಿನಿಂದ ಲಕ್ಕುಂಡಿ  ಗ್ರಾಮ ಭಾರೀ ಸದ್ದು ಮಾಡಿದೆ. ಇನ್ನು ಇನ್ನಷ್ಟು ನಿಧಿ ಸಿಗಬಹುದು ಎಂದು ಪುರಾತತ್ವ ಇಲಾಖೆಯು ಗ್ರಾಮದಲ್ಲಿ ಉತ್ಖನನ ನಡೆಸಿದೆ. ಈ ವೇಳೆ ದಿನದಲ್ಲಿ ಒಂದಲ್ಲ ಒಂದು ವಸ್ತು ದೊರೆಯುತ್ತಿದೆ. ಇದರ ನಡುವೆ ಇದೀಗ ಗ್ರಾಮದಲ್ಲಿ ಸರ್ಪದ (snake) ಆತಂಕ ಮನೆ ಮಾಡಿದೆ. ಹೌದು..ಪುರಾತತ್ವ ಇಲಾಖೆ ಸಿಬ್ಬಂದಿ ನಡೆಸುತ್ತಿದ್ದ ಕಾರ್ಯಾಚರಣೆಯಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದ್ದು, ನಿಗೂಢ ಸರ್ಪವೊಂದು ಕಾಣಿಸಿಕೊಂಡು ನಿಧಿ ಮತ್ತು ನಾಗಬಂಧದ ರಹಸ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ಮೈಸೂರಿನಿಂದ ಉರಗ ರಕ್ಷಕರು ಲಕ್ಕುಂಡಿ ಗ್ರಾಮಕ್ಕೆ ಆಗಮಿಸಿದ್ದಾರೆ.

ಲಕ್ಕುಂಡಿಗೆ ಉರಗ ರಕ್ಷಕರ ಆಗಮನ

ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನ ಬಳಿ ಮೊನ್ನೆ ಬೃಹತ್ ಹಾವು ಕಂಡಿದೆ ಎಂದು ಗ್ರಾಮಸ್ಥರು ಹೇಳಿದ್ದರು. ದೊಡ್ಡ ಪ್ರಮಾಣದ ಹಾವು ಪುರಾತನ ಕೋಟೆ ಗೋಡೆಯಲ್ಲಿ ಹೋಗಿದೆ ಎಂದು ಸ್ಥಳೀಯರು ಟಿವಿ9 ಜತೆ ಮಾಹಿತಿ ಹಂಚಿಕೊಂಡಿದ್ದರು. ಇದರಿಂದ ಮೈಸೂರು ಅರಣ್ಯ ಪರಿಸರ ವನ್ಯ ಜೀವ ಸಂರಕ್ಷಣೆ ಸಂಸ್ಥೆ ಸಿಬ್ಬಂದಿ ಶಿವರಾಜ್ ಹಾಗೂ ಶ್ವೇತಾ ಲಕ್ಕುಂಡಿ ಗ್ರಾಮಕ್ಕೆ ಆಗಮಿಸಿದ್ದು, ಉತ್ಖನನ ನಡೆಯುವ ಸ್ಥಳ ಹಾಗೂ ಕೋಟೆ ಗೋಡೆ ಭಾಗವನ್ನು ಉರಗ ರಕ್ಷಕರು ಪರಿಶೀಲಿಸಿದರು.

ಇದನ್ನೂ ಓದಿ: ನಿಧಿ ಸಿಕ್ಕಿದ್ದೇ ಸಿಕ್ಕಿದ್ದು, ಲಕ್ಕುಂಡಿಯಲ್ಲಿ ಜಮೀನಿನ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ

ಉರಗ ರಕ್ಷಕ ಶಿವರಾಜ್ ಹೇಳಿದ್ದೇನು?

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಉರಗ ರಕ್ಷಕ ಶಿವರಾಜ್, ಕೂದಲು ಇದೆ ಅಂತ ಸುದ್ದಿ ಕೇಳಿ ಕುತೂಹಲ ಹೆಚ್ಚಾಗಿತ್ತು. ಹೀಗಾಗಿ ಮೈಸೂರಿನಿಂದ ಹಾವು ನೋಡಲು ಬಂದಿದ್ದೇವೆ. ಉತ್ಖನನ ಜಾಗ ಹಾಗೂ ಗೋಡೆ ಬಳಿ ಪರಿಶೀಲನೆ ಮಾಡಿದ್ದೇವೆ. ಇನ್ನು ಹಾವಿಗೆ ಕೂದಲು ಇರಲು ಸಾಧ್ಯವಿಲ್ಲ. ಸುಳ್ಳ ಸುದ್ದಿಗೆ ಯಾರೂ ಕಿವಿಗೊಡಬಾರದು‌ ಎಂದರು.

ಉತ್ಖನನ ವೇಳೆ ಮತ್ತೊಂದು ಬಿಲ್ಲೆ ಪತ್ತೆ

ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇಗುಲ ಬಳಿ ಪುರಾತತ್ವ ಇಲಾಖೆ ಅಧಿಕಾರಿಗಳ ಉತ್ಖನನ ಕಾರ್ಯ ಮುಂದುವರೆದಿದ್ದು, ಇಂದು (ಜನವರಿ 21) ಪುರಾತನ ಕಾಲದ ಮತ್ತೊಂದು ಬಿಲ್ಲೆ ಪತ್ತೆಯಾಗಿದೆ. ಸುಟ್ಟ ಮಡಿಕೆಯ ಕುಂಟಾಬಿಲ್ಲೆ ಪತ್ತೆಯಾಗಿದ್ದು, ಇದು ಪುರಾತನ ಕಾಲದ ಬಿಲ್ಲೆ ಎಂದ ಪುರಾತತ್ವ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಚಿನ್ನ ನಿಧಿಯನ್ನು ಸರ್ಪ, ಕಾಡುಹೋಣ, ರಾಕ್ಷಸ ಕಾಯುತ್ತಿರುತ್ತವೆ ಎಂದು ಹಳ್ಳಿಗಳಲ್ಲಿ ಜನ ಮಾತನಾಡುತ್ತಾರೆ. ಇನ್ನು ನಿಧಿ ಸಿಕ್ಕರೆ ಅವರ ಮನೆಯಲ್ಲಿ ಆಗಾಗ ಪೂಜೆ ಪುನಸ್ಕಾರಗಳನ್ನು ಮಾಡಲೇಬೇಕು. ಇಲ್ಲವಾದಲ್ಲಿ ಕುಟುಂಬದಲ್ಲಿ ಒಂದಲ್ಲ ಒಂದು ಅನಾಹುತಗಳು ಸಂಭವಿಸುತ್ತವೆ ಎನ್ನುವುದು ಹಳ್ಳಿಗಳಲ್ಲಿ ಹಿರಿಯರು ಹೇಳುತ್ತಾರೆ.

ಲಕ್ಕುಂಡಿ ಬಗ್ಗೆ ಈಗೀಗ ಹೆಚ್ಚೆಚ್ಚು ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ, ಅಲ್ಲಿನ ಇತಿಹಾಸದ ಜೊತೆಗೆ ಸಿಕ್ಕ ಸಂಪತ್ತು. ಹೌದು.. ಕಳೆದ ಕೆಲವು ದಿನಗಳ ಹಿಂದೆ ಇದೇ ಲಕ್ಕುಂಡಿ ಗ್ರಾಮದ ಗಂಗವ್ವ ಬಸವರಾಜ ರಿತ್ತಿ ಕುಟುಂಬ ಹಳೆಯ ಮನೆಯನ್ನ ಕೆಡವಿ, ಹೊಸ ಮನೆ ಕಟ್ಟಲು ಪಾಯ ಅಗೆಯುತ್ತಿದ್ದ ವೇಳೆ ಮಣ್ಣಿನ ಅಡಿಯಲ್ಲಿ ಒಂದು ಪುಟ್ಟ ತಾಮ್ರದ ಬಿಂದಿಗೆಯಲ್ಲಿ ಚಿನ್ನದ ನಿಧಿ ಪತ್ತೆಯಾಗಿತ್ತು. ಕುತೂಹಲದಿಂದ ಅದನ್ನ ತೆಗೆದು ನೋಡಿದಾಗ ತಾಯಿ-ಮಗ ದಂಗಾಗಿದ್ದು, ಅದರೊಳಗೆ ಬರೋಬ್ಬರಿ 470 ಗ್ರಾಂ ತೂಕದ ಪುರಾತನ ಕಾಲದ ಚಿನ್ನದ ಸರಗಳು, ಉಂಗುರಗಳು, ಕಿವಿಯೋಲೆಗಳು ಹಾಗೂ ವಿಶಿಷ್ಟವಾದ ನಾಗಮುದ್ರೆಗಳಿದ್ದವು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:23 pm, Wed, 21 January 26

Source link

World Bank Internship 2026: ವಿಶ್ವ ಬ್ಯಾಂಕ್‌ನಲ್ಲಿ ವೃತ್ತಿಜೀವನ ಪ್ರಾರಂಭಿಸುವ ಕನಸು ನಿಮಗಿದ್ಯಾ? ಇಲ್ಲಿದೆ ಸುವರ್ಣವಕಾಶ – Kannada News | World Bank Internship 2026: WBG Pioneers Programme Applications Open! Apply by Feb 17

ವಿಶ್ವ ಬ್ಯಾಂಕ್‌ನೊಂದಿಗೆ ಕೆಲಸ ಮಾಡುವ ಆಸೆ ಹೊಂದಿರುವ ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶ. ವಿಶ್ವ ಬ್ಯಾಂಕ್ ಗ್ರೂಪ್ (WBG) ತನ್ನ “World Bank Group (WBG) Pioneers Internship Programme 2026” ಅನ್ನು ಅಧಿಕೃತವಾಗಿ ಘೋಷಿಸಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಫೆಬ್ರವರಿ 17 ಅರ್ಜಿ ಸಲ್ಲಿಸಲು ಅವಕಾಶವಿದೆ.

ಈ ಕಾರ್ಯಕ್ರಮದ ವಿಶೇಷತೆ ಎಂದರೆ, ಆಯ್ಕೆಯಾದ ಅಭ್ಯರ್ಥಿಗಳಿಗೆ ಗಂಟೆಯ ಆಧಾರದ ಮೇಲೆ ಸ್ಟೈಫಂಡ್ ನೀಡಲಾಗುತ್ತದೆ. ಜೊತೆಗೆ, ಜಾಗತಿಕ ಮಟ್ಟದ ಅಭಿವೃದ್ಧಿ ಯೋಜನೆಗಳಲ್ಲಿ ಕೆಲಸ ಮಾಡುವ ಅಮೂಲ್ಯ ಅನುಭವವನ್ನು ವಿದ್ಯಾರ್ಥಿಗಳು ಪಡೆಯುತ್ತಾರೆ.

ಯಾರು ಅರ್ಜಿ ಸಲ್ಲಿಸಬಹುದು?

  • ಪದವಿ (Graduation) ವಿದ್ಯಾರ್ಥಿಗಳು
  • ಸ್ನಾತಕೋತ್ತರ (Post Graduation) ವಿದ್ಯಾರ್ಥಿಗಳು
  • ಅಂತಿಮ ವರ್ಷದ ಪದವಿ / ಸ್ನಾತಕೋತ್ತರ / ಪಿಎಚ್‌ಡಿ ವಿದ್ಯಾರ್ಥಿಗಳು

ವಿಶ್ವ ಬ್ಯಾಂಕ್ ಇಂಟರ್ನ್‌ಶಿಪ್ 2026 ಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಗಂಟೆಯ ಆಧಾರದ ಮೇಲೆ ಸ್ಟೈಫಂಡ್ ನೀಡಲಾಗುತ್ತದೆ. ಆದರೆ, ವಸತಿ ವ್ಯವಸ್ಥೆಯನ್ನು ಇಂಟರ್ನ್‌ಗಳು ತಮ್ಮದೇ ಆದ ರೀತಿಯಲ್ಲಿ ಮಾಡಿಕೊಳ್ಳಬೇಕಾಗುತ್ತದೆ. ಈ ಇಂಟರ್ನ್‌ಶಿಪ್‌ಗಳು ವಾಷಿಂಗ್ಟನ್ ಡಿಸಿ ಹಾಗೂ ವಿಶ್ವ ಬ್ಯಾಂಕ್ ಗ್ರೂಪ್‌ನ ವಿವಿಧ ದೇಶಗಳ ಕಚೇರಿಗಳಲ್ಲಿ ಲಭ್ಯವಿರುತ್ತವೆ.

ಇದನ್ನೂ ಓದಿ: ಭಾರತೀಯ ರಿಸರ್ವ್ ಬ್ಯಾಂಕ್​​ನಲ್ಲಿ ಉದ್ಯೋಗವಕಾಶ; 10th ಪಾಸಾಗಿದ್ರೆ ಸಾಕು!

ಅರ್ಜಿ ಸಲ್ಲಿಸಿದ ನಂತರ ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ಮಾರ್ಚ್ 2026 ರೊಳಗೆ ಸಂದರ್ಶನದ ಮಾಹಿತಿ ನೀಡಲಾಗುತ್ತದೆ. ಅಂತಿಮ ಆಯ್ಕೆಯೂ ಮಾರ್ಚ್ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಇಂಟರ್ನ್‌ಶಿಪ್ ಅವಧಿಯು ಏಪ್ರಿಲ್ 2026 ರಿಂದ ಸೆಪ್ಟೆಂಬರ್ ರವರೆಗೆ ನಡೆಯಲಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ವಿಶ್ವ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್(http://wrld.bg/EEzW50XXvKR) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮತ್ತು ಸಂಶಯ ನಿವಾರಣೆಗೆ ವಿಶ್ವ ಬ್ಯಾಂಕ್ ನಡೆಸುವ ನೇರ ಪ್ರಶ್ನೋತ್ತರ ಅಧಿವೇಶನಗಳಲ್ಲಿ ಭಾಗವಹಿಸುವ ಅವಕಾಶವೂ ಅಭ್ಯರ್ಥಿಗಳಿಗೆ ಲಭ್ಯವಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version