‘ಹೇರಾ ಫೇರಿ 3’ ಚಿತ್ರದಿಂದ ಪರೇಶ್ ಹೊರ ನಡೆದ ವಿಚಾರ; ಅಚ್ಚರಿಯ ಹೇಳಿಕೆ ನೀಡಿದ ನಿರ್ದೇಶಕ – Kannada News | Hera Pheri 3 Controversy: Paresh Rawal Exits? Priyadarshan Reacts to Bollywood Rumors

ಬಾಲಿವುಡ್‌ನ ಅತ್ಯಂತ ಜನಪ್ರಿಯ ಕಾಮಿಡಿ ಫ್ರಾಂಚೈಸಿ ‘ಹೇರಾ ಫೇರಿ’ಯಲ್ಲಿ ಮೂರನೇ ಸಿನಿಮಾ ಬರುತ್ತಿದೆ. ಈ ಸಿನಿಮಾ ಆರಂಭದಿಂದಲೂ ಒಂದಲ್ಲಾ ಒಂದು ವಿವಾದಗಳಿಂದಲೇ ಸುದ್ದಿಯಾಗುತ್ತಿದೆ. ಚಿತ್ರದ ಹಕ್ಕುಗಳ ವಿಚಾರವಾಗಿ ಕಾನೂನು ಹೋರಾಟ ನಡೆಯುತ್ತಿರುವ ಬೆನ್ನಲ್ಲೇ, ಚಿತ್ರದ ಮುಖ್ಯ ಪಾತ್ರಧಾರಿ, ‘ಬಾಬುರಾವ್’ ಖ್ಯಾತಿಯ ಪರೇಶ್ ರಾವಲ್ ಈ ಚಿತ್ರದಿಂದ ಹೊರನಡೆದಿದ್ದಾರೆ ಎಂಬ ಬಲವಾದ ವದಂತಿ ಹಬ್ಬಿದೆ. ಅಷ್ಟೇ ಅಲ್ಲದೆ, ಅವರು ಪಡೆದಿದ್ದ 11 ಲಕ್ಷ ರೂ. ಸೈನಿಂಗ್ ಅಮೌಂಟ್ ಅನ್ನು ಶೇ. 15 ರಷ್ಟು ಬಡ್ಡಿಯೊಂದಿಗೆ ವಾಪಸ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಚಿತ್ರದ ನಿರ್ದೇಶಕ ಪ್ರಿಯದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ.

ಪರೇಶ್ ರಾವಲ್ ಚಿತ್ರದಿಂದ ಹೊರಹೋಗಿರುವ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಚಿತ್ರದ ನಿರ್ದೇಶಕ ಪ್ರಿಯದರ್ಶನ್ , ‘ಈ ವಿಷಯದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ’ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಬೆಂಕಿ ಇಲ್ಲದೆ ಹೊಗೆ ಆಡೋದಿಲ್ಲ ಎಂಬುದು ನೆಟ್ಟಿಗರ ವಾದ.

ಇದನ್ನೂ ಓದಿ: ‘ಹೇರಾ ಪೇರಿ 3’: ಮುನಿಸು ಮರೆತು ಅಕ್ಷಯ್ ಜೊತೆ ಕೈಜೋಡಿಸಿದ ಪರೇಶ್ ರಾವಲ್

ಪರೇಶ್ ರಾವಲ್ ಚಿತ್ರದಿಂದ ಹೊರನಡೆಯುತ್ತಿರುವುದು ಇದೇ ಮೊದಲೇನಲ್ಲ. 2025ರಲ್ಲೂ ಅವರು ಚಿತ್ರದಿಂದ ದಿಢೀರ್ ಹೊರನಡೆದಾಗ, ಮುಖ್ಯ ಭೂಮಿಕೆಯಲ್ಲಿದ್ದ ಅಕ್ಷಯ್ ಕುಮಾರ್ ಅವರು ಪರೇಶ್ ವಿರುದ್ಧ 25 ಕೋಟಿ ರೂ.ಗಳ ಮೊಕದ್ದಮೆ ಹೂಡಿದ್ದರು. ಆದರೆ ನಂತರ ಆ ಸಮಸ್ಯೆ ಬಗೆಹರಿದು ಪರೇಶ್ ರಾವಲ್ ಚಿತ್ರಕ್ಕೆ ಮರಳಿದ್ದರು.

ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟ ಅಕ್ಷಯ್ ಕುಮಾರ್, ‘ಹೇರಾ ಫೇರಿ 3 ಸದ್ಯಕ್ಕೆ ಸೆಟ್ಟೇರುತ್ತಿಲ್ಲ’ ಎಂದಿದ್ದರು. ಈ ಸಿನಿಮಾ 2027ರಲ್ಲಿ ಆರಂಭ ಆಗುವ ನಿರೀಕ್ಷೆ ಇದೆ.

ಪರೇಶ್ ಹಿಂದೇಟಿಗೆ ಕಾರಣ ಏನು?

ವರದಿಗಳ ಪ್ರಕಾರ, ಸಿನಿಮಾದ ಚಿತ್ರೀಕರಣ 2027ರಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಅಂದರೆ, ‘ಹೇರಾ ಫೇರಿ 3’ ತೆರೆಗೆ ಬರಲು 2027ರ ಅಂತ್ಯ ಅಥವಾ 2028ರ ತನಕ ಕಾಯಬೇಕಾಗುತ್ತದೆ. ಇನ್ನು ಸಂಭಾವನೆಯ ಒಪ್ಪಂದದ ಅನ್ವಯ, ಪರೇಶ್ ರಾವಲ್ ಅವರು ತಮ್ಮ ಪೂರ್ಣ ಪೇಮೆಂಟ್ ಪಡೆಯಲು ಕನಿಷ್ಠ ಎರಡು ವರ್ಷ ಕಾಯಬೇಕಾದ ಪರಿಸ್ಥಿತಿ ಇತ್ತು. ಇಷ್ಟು ಸುದೀರ್ಘ ಸಮಯ ಕಾಯಲು ಸಿದ್ಧರಿಲ್ಲದ ಕಾರಣವೇ ಅವರು ಚಿತ್ರದಿಂದ ಹೊರಹೋಗುವ ತೀರ್ಮಾನ ತಗೆದುಕೊಂಡಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉದ್ಯೋಗ ಭವಿಷ್ಯ: ಈ ವಾರ ಬಾಸ್‌ನಿಂದ ಮೆಚ್ಚುಗೆಯೋ ಅಥವಾ ಕೆಲಸದಲ್ಲಿ ಕಿರಿಕಿರಿಯೋ?: ಕೆರಿಯರ್ ಗ್ರಹಗತಿಯಲ್ಲಿ ಮಹತ್ವದ ಬದಲಾವಣೆ – Kannada News | Career Forecast May 24 30: Astrological Insights for Your Job Future

ಮೇ 24ರಿಂದ ಮೇ 30ರವರೆಗಿನ ಕೊನೆಯ ವಾರವಾಗಿದ್ದು ಗ್ರಹರ ದೃಷ್ಟಿಯಿಂದ ಉದ್ಯೋಗದಲ್ಲಿ ಉನ್ನತಿ, ಅವನತಿಗಳು ಆಗಲಿವೆ. ದೃಷ್ಟಿದೋಷವನ್ನು ಗ್ರಹರ ಸ್ತೋತ್ರದ ಮೂಲಕ ಕಡಿಮೆ ಮಾಡಿಕೊಳ್ಳಬಹುದು.

​​ಮೇಷ ರಾಶಿ :

​ಸ್ವಕ್ಷೇತ್ರದ ಮಂಗಳನ ಪ್ರಭಾವದಿಂದ ಉದ್ಯೋಗದಲ್ಲಿ ಧೈರ್ಯ ಹಾಗೂ ನಾಯಕತ್ವ ಗುಣ ಹೆಚ್ಚಲಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದ್ದು, ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಅಧಿಕಾರದಲ್ಲಿ ಪ್ರಗತಿ ಕಂಡುಬರಲಿದೆ.

​ವೃಷಭ ರಾಶಿ :

​ಸೂರ್ಯನ ಸ್ಥಿತಿಯಿಂದಾಗಿ ಉದ್ಯೋಗ ಬದಲಾವಣೆಗೆ ಯೋಚಿಸುವಿರಿ. ಮೇಲಾಧಿಕಾರಿಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬರಬಹುದು, ತಾಳ್ಮೆ ಇರಲಿ. ನವಮ ಸ್ಥಾನದ ಗ್ರಹಬಲದಿಂದಾಗಿ ವಿದೇಶಿ ಮೂಲದ ಕೆಲಸಗಳು ಅಥವಾ ದೂರದ ಪ್ರಯಾಣದ ಉದ್ಯೋಗ ಲಾಭದಾಯಕ.

​ಮಿಥುನ ರಾಶಿ :

​ಬುಧ, ಶುಕ್ರ, ಗುರುಗಳ ಶುಭ ಸಂಯೋಜನೆಯಿಂದ ಉದ್ಯೋಗದಲ್ಲಿ ಅತ್ಯುತ್ತಮ ಪ್ರಗತಿ ಕಾಣುವಿರಿ. ಬೌದ್ಧಿಕ ಕ್ಷೇತ್ರ, ಶಿಕ್ಷಣ, ಮತ್ತು ಸೃಜನಶೀಲ ಕೆಲಸಗಳಲ್ಲಿರುವವರಿಗೆ ಹೆಚ್ಚಿನ ಗೌರವ, ಪದೋನ್ನತಿ ಹಾಗೂ ಆರ್ಥಿಕ ಲಾಭ ಖಚಿತವಾಗಿ ಸಿಗಲಿದೆ.

​ಕರ್ಕಾಟಕ ರಾಶಿ :

​ರಾಶ್ಯಾಧಿಪತಿ ಚಂದ್ರನು ನೀಚಸ್ಥಾನದಲ್ಲಿದ್ದರೂ, ಉದ್ಯೋಗ ಸ್ಥಾನದ ಮೇಲಿರುವ ಮಂಗಳನ ದೃಷ್ಟಿಯಿಂದಾಗಿ ವೃತ್ತಿಯಲ್ಲಿ ದಿಢೀರ್ ಬದಲಾವಣೆಗಳಾಗಬಹುದು. ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಸಹೋದ್ಯೋಗಿಗಳನ್ನು ನಂಬುವಾಗ ಎಚ್ಚರಿಕೆ ವಹಿಸಿ.

ಸಿಂಹ ರಾಶಿ

​ನಿಮ್ಮ ರಾಶಿಯಲ್ಲಿ ಕೇತುವಿನ ಸ್ಥಿತಿಯಿದ್ದರೂ, ರಾಶ್ಯಾಧಿಪತಿ ಸೂರ್ಯನ ಬಲದಿಂದ ಉದ್ಯೋಗದಲ್ಲಿ ಸ್ಥಿರತೆ ಇರಲಿದೆ. ಸ್ವತಂತ್ರ ವೃತ್ತಿ ಅಥವಾ ವ್ಯಾಪಾರಸ್ಥರಿಗೆ ಉತ್ತಮ ಆದಾಯ ಬರಲಿದೆ. ಸರ್ಕಾರಿ ಕೆಲಸದ ಪ್ರಯತ್ನಗಳಿಗೆ ಸೂಕ್ತ ಫಲ ಸಿಗುವ ಸಾಧ್ಯತೆ ಇದೆ.

​ಕನ್ಯಾ ರಾಶಿ :

​ಉದ್ಯೋಗದಲ್ಲಿ ಕಠಿಣ ಸವಾಲುಗಳು ಎದುರಾಗಬಹುದು. ಆದರೆ ಶನಿಯ ಆರನೇ ರಾಶಿಯ ಪ್ರಭಾವದಿಂದಾಗಿ ಶತ್ರುಗಳು ಮತ್ತು ಸ್ಪರ್ಧಿಗಳ ಮೇಲೆ ಜಯ ಸಾಧಿಸುವಿರಿ. ಹಿರಿಯ ಅಧಿಕಾರಿಗಳ ಪ್ರೋತ್ಸಾಹದಿಂದ ಬಾಕಿ ಇರುವ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ.

​ತುಲಾ ರಾಶಿ :

​ಇದು ಲಗ್ನ ರಾಶಿಯಾಗಿದ್ದು, ನವಮದ ಶುಭ ಗ್ರಹಗಳ ದೃಷ್ಟಿ ಪೂರಕವಾಗಿದೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಕಲಾತ್ಮಕ, ವ್ಯಾಪಾರ ಹಾಗೂ ಸಲಹಾತ್ಮಕ ವೃತ್ತಿಯಲ್ಲಿರುವವರಿಗೆ ಅಪಾರ ಯಶಸ್ಸು ಮತ್ತು ಕೀರ್ತಿ ದೊರೆಯಲಿದೆ.

​ವೃಶ್ಚಿಕ ರಾಶಿ :

​ಚಂದ್ರನ ಇರುವಿಕೆಯಿಂದ ಮನಸ್ಸಿನಲ್ಲಿ ಉದ್ಯೋಗದ ಬಗ್ಗೆ ಅಸ್ಥಿರತೆ ಮೂಡಬಹುದು. ಆದರೆ ರಾಶ್ಯಾಧಿಪತಿ ಮಂಗಳನು ಷಷ್ಠದಲ್ಲಿ ಸ್ವಕ್ಷೇತ್ರ ಸ್ಥಿತನಾಗಿರುವುದರಿಂದ, ಪಾಲುದಾರಿಕೆ ವ್ಯವಹಾರ ಅಥವಾ ಸಾರ್ವಜನಿಕ ಸಂಪರ್ಕದ ಉದ್ಯೋಗಗಳಲ್ಲಿ ಉತ್ತಮ ಆರ್ಥಿಕ ಪ್ರಗತಿ ಮತ್ತು ಯಶಸ್ಸು ಸಿಗಲಿದೆ.

​ಧನು ರಾಶಿ :

​ರಾಶ್ಯಾಧಿಪತಿ ಗುರುವಿನ ದೃಷ್ಟಿಯಿಂದ ಹಾಗೂ ಶುಭ ಗ್ರಹರು ಸಂಯೋಗ ಹೊಂದುವುದರಿಂದ ವೃತ್ತಿಜೀವನದಲ್ಲಿ ದೊಡ್ಡ ತಿರುವು ಸಿಗಲಿದೆ. ಬ್ಯಾಂಕಿಂಗ್, ಬೋಧನೆ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿರುವವರಿಗೆ ಸಂಬಳ ಹೆಚ್ಚಳ ಹಾಗೂ ಉನ್ನತ ಸ್ಥಾನಮಾನ ದೊರೆಯಲಿದೆ.

​ಮಕರ ರಾಶಿ :

​ವೃತ್ತಿ ರಾಶಿಯಾಗಿದ್ದು, ಶನಿಯು ತೃತೀಯ ಸ್ಥಾನದಲ್ಲಿದ್ದು ಶ್ರಮಕ್ಕೆ ತಕ್ಕ ಪ್ರತಿಫಲ ತಡವಾಗಿ ಸಿಗಬಹುದು. ಉದ್ಯೋಗದಲ್ಲಿ ಕಠಿಣ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನಿರಂತರ ಪ್ರಯತ್ನದಿಂದಾಗಿ ಕೆಲಸದಲ್ಲಿ ಉನ್ನತ ಮಟ್ಟ ತಲುಪುವಿರಿ.

ಕುಂಭ ರಾಶಿ :

​ರಾಹು ನಿಮ್ಮ ರಾಶಿಯಲ್ಲಿ, ದ್ವಿತೀಯದಲ್ಲಿ ರಾಶಿಯ ಅಧಿಪತಿಯಾದ ಇದ್ದುದರಿಂದ ಶನಿಯು ಉದ್ಯೋಗದಲ್ಲಿ ರಕ್ಷಣೆಯನ್ನು ನೀಡುತ್ತಾನೆ. ತಾಂತ್ರಿಕ, ಸಂಶೋಧನೆ ಹಾಗೂ ಐಟಿ ಕ್ಷೇತ್ರದಲ್ಲಿರುವವರಿಗೆ ಹೊಸ ಆವಿಷ್ಕಾರಗಳಿಗೆ ಮನ್ನಣೆ ಸಿಗಲಿದೆ. ಶ್ರಮ ಹೆಚ್ಚಿದ್ದರೂ, ಆರ್ಥಿಕವಾಗಿ ಸ್ಥಿರತೆ ಮತ್ತು ಅಭಿವೃದ್ಧಿ ಕಂಡುಬರಲಿದೆ.

ಇದನ್ನೂ ಓದಿ: ಲಕ್ಷ್ಮಿ ನಾರಾಯಣ ಯೋಗ; ಮೇ 29 ರಿಂದ ಈ 4 ರಾಶಿಯವರು ಮುಟ್ಟಿದೆಲ್ಲಾ ಚಿನ್ನ!

ಮೀನ ರಾಶಿ :

​ಶನಿಯ ಪ್ರಭಾವದಿಂದಾಗಿ ಕೆಲಸದ ಒತ್ತಡ ಹೆಚ್ಚಿರಲಿದೆ. ಆದರೆ ಗುರು-ಬುಧ-ಶುಕ್ರರ ಶುಭ ದೃಷ್ಟಿಯಿಂದಾಗಿ ಹಿರಿಯರ ಮಾರ್ಗದರ್ಶನ ಸಿಗಲಿದ್ದು, ಕಷ್ಟದ ಪರಿಸ್ಥಿತಿಯನ್ನೂ ನಿಭಾಯಿಸುವಿರಿ. ಬರಹಗಾರರು, ಸಲಹೆಗಾರರು ಹಾಗೂ ಉಪನ್ಯಾಸಕರಿಗೆ ಇದು ಯಶಸ್ಸಿನ ಕಾಲ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡು ಸರ್ಕಾರದಿಂದಲೇ ಒಟಿಟಿ ಆರಂಭಿಸಲು ಸಿಎಂ ವಿಜಯ್‌ಗೆ ವಿಜಯ್ ಸೇತುಪತಿ ಮನವಿ – Kannada News | Kollywood actor Vijay Sethupathi requests Tamil Nadu CM Vijay to launch Government OTT Platform

ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಸೇತುಪತಿ ಇತ್ತೀಚೆಗೆ ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ (CM Vijay) ಅವರಿಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಪ್ರಾದೇಶಿಕ ಸಿನಿಮಾಗಳ ಪ್ರೋತ್ಸಾಹಕ್ಕಾಗಿ ತಮಿಳುನಾಡು ಸರ್ಕಾರವೇ ಸ್ವಂತ ಒಟಿಟಿ (OTT) ಪ್ಲಾಟ್‌ಫಾರ್ಮ್ ಪ್ರಾರಂಭಿಸುವ ಬಗ್ಗೆ ಯೋಚಿಸಬೇಕು ಎಂದು ಅವರು ವಿನಂತಿಸಿದ್ದಾರೆ. ವಿಜಯ್ ಸೇತುಪತಿ (Vijay Sethupathi) ಅವರ ಈ ಹೇಳಿಕೆಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಚಿತ್ರರಂಗದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.

ಇತ್ತೀಚಿನ ದಿನಗಳಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಬೆಳವಣಿಗೆಯ ಬಗ್ಗೆ ಮಾತನಾಡಿದ ಸೇತುಪತಿ, ಪ್ರಸ್ತುತ ಹಲವು ಒಟಿಟಿ ಸಂಸ್ಥೆಗಳು ಮಂದಗತಿಯನ್ನು ಎದುರಿಸುತ್ತಿವೆ. ಮೊದಲಿನಂತೆ ಚಂದಾದಾರರ ಸಂಖ್ಯೆ ಹೆಚ್ಚುತ್ತಿಲ್ಲ ಮತ್ತು ದೊಡ್ಡ ಮೊತ್ತದ ಹಣವನ್ನು ಕಂಟೆಂಟ್‌ಗಳ ಮೇಲೆ ಹೂಡಿಕೆ ಮಾಡಲು ಕಂಪನಿಗಳು ಹಿಂಜರಿಯುತ್ತಿವೆ. ಪ್ರಾದೇಶಿಕ ಚಿತ್ರೋದ್ಯಮ ಮತ್ತು ಸರ್ಕಾರಗಳು ತಮ್ಮದೇ ಆದ ಸ್ವಂತ ಡಿಜಿಟಲ್ ವೇದಿಕೆಯನ್ನು ಹೊಂದಲು ಇದುವೇ ಸರಿಯಾದ ಸಮಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ಈ ಹಿಂದೆ ಹಿರಿಯ ನಟ ಕಮಲ್ ಹಾಸನ್ ಅವರು ತಮಿಳು ಸಿನಿಮಾಗಳಿಗಾಗಿಯೇ ಪ್ರತ್ಯೇಕ ಒಟಿಟಿ ವೇದಿಕೆ ಇರಬೇಕು ಎಂದು ಹೇಳಿದ್ದನ್ನು ವಿಜಯ್ ಸೇತುಪತಿ ನೆನಪಿಸಿಕೊಂಡರು. ಕಮಲ್ ಹಾಸನ್ ಅವರ ಆಲೋಚನೆಯನ್ನು ಬೆಂಬಲಿಸಿದ ಅವರು, ತಮಿಳುನಾಡು ಸರ್ಕಾರದ ಒಡೆತನದ ಒಟಿಟಿ ವೇದಿಕೆಯು ಸ್ಥಳೀಯ ಚಿತ್ರ ನಿರ್ಮಾಪಕರು, ಕಲಾವಿದರು ಮತ್ತು ತಂತ್ರಜ್ಞರಿಗೆ ಆರ್ಥಿಕವಾಗಿ ಹಾಗೂ ವೃತ್ತಿಪರವಾಗಿ ಹೊಸ ಆಸರೆಯಾಗಲಿದೆ ಎಂದು ಹೇಳಿದರು.

ದೊಡ್ಡ ದೊಡ್ಡ ಒಟಿಟಿ ಸಂಸ್ಥೆಗಳಲ್ಲಿ ಸೂಕ್ತ ಪ್ರದರ್ಶನ ಕಾಣಲು ಹೆಣಗಾಡುವ ಸಣ್ಣ ಬಜೆಟ್‌ನ ಸಿನಿಮಾಗಳಿಗೆ ಮತ್ತು ಪ್ರಾದೇಶಿಕ ಕಥೆಗಳಿಗೆ ಇಂತಹ ಸರ್ಕಾರಿ ಒಟಿಟಿಗಳು ಹೊಸ ಜೀವ ನೀಡಬಲ್ಲವು. ಅಷ್ಟೇ ಅಲ್ಲದೆ, ಸಿನಿಮಾ ಮತ್ತು ಡಿಜಿಟಲ್ ಮಾಧ್ಯಮಗಳ ಮೂಲಕ ಸ್ಥಳೀಯ ಸಂಸ್ಕೃತಿ ಹಾಗೂ ಭಾಷೆಯನ್ನು ಮುಂದಿನ ಪೀಳಿಗೆಗೆ ಉಳಿಸಲು ಇದು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ‘ನಾನು ಅಷ್ಟು ಚೀಪ್ ಅಲ್ಲ, ಸಿಎಂ ವಿಜಯ್ ಮೇಲೆ ಅಸೂಯೆ ಇಲ್ಲ’: ರಜನಿಕಾಂತ್ ಸ್ಪಷ್ಟನೆ

ಈ ಹಿಂದೆ ಲೋಕೇಶ್ ಕನಕರಾಜ್ ನಿರ್ದೇಶನದ ಸೂಪರ್ ಹಿಟ್ ‘ಮಾಸ್ಟರ್’ ಸಿನಿಮಾದಲ್ಲಿ ವಿಜಯ್ ಮತ್ತು ವಿಜಯ್ ಸೇತುಪತಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. ಇವರಿಬ್ಬರ ಮುಖಾಮುಖಿಯನ್ನು ಪ್ರೇಕ್ಷಕರು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಇದೀಗ ವಿಜಯ್ ಸೇತುಪತಿ ಅವರು ತಮ್ಮ ಮಾಜಿ ಸಹನಟ ಹಾಗೂ ಮುಖ್ಯಮಂತ್ರಿ ವಿಜಯ್‌ಗೆ ಒಟಿಟಿ ಬಗ್ಗೆ ಸಲಹೆ ನೀಡಿರುವುದರಿಂದ ಈ ಸುದ್ದಿ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಾಂಗ್ಲಾದೇಶದಲ್ಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್ ಪಲ್ಟಿ, 15 ಮಂದಿ ಸಾವು, 10 ಜನರಿಗೆ ಗಾಯ – Kannada News | Bangladesh Truck Crash: 15 Laborers Dead, 10 Injured Traveling for Eid

ಢಾಕಾ, ಮೇ 25: ಬಾಂಗ್ಲಾದೇಶ(Bangladesh)ದಲ್ಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್ ಪಲ್ಟಿಯಾದ ಪರಿಣಾಮ 15 ಮಂದಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಈದ್ ಅಲ್-ಅಧಾ’ ಆಚರಣೆಗಾಗಿ ತಮ್ಮ ಕುಟುಂಬಗಳನ್ನು ಸೇರಲು ತಾಯ್ನಾಡಿಗೆ ಹೊರಟಿದ್ದ ಬಡ ದಿನಗೂಲಿ ಕಾರ್ಮಿಕರಿದ್ದ ಟ್ರಕ್ ಪಲ್ಟಿಯಾಗಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ. ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ವಾಯುವ್ಯಕ್ಕೆ ಸುಮಾರು 83 ಕಿಲೋಮೀಟರ್ ದೂರದಲ್ಲಿರುವ ತಂಗೈಲ್ ಜಿಲ್ಲೆಯ ಸೊರಾಟೊಯಿಲ್ ಹೆದ್ದಾರಿಯಲ್ಲಿ ಸೋಮವಾರ ಮುಂಜಾನೆ 5 ಗಂಟೆ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ.

ನಡೆದಿದ್ದೇನು?
ಪೊಲೀಸ್ ಅಧಿಕಾರಿ ಫುವಾದ್ ಹೊಸೈನ್ ಅವರು ನೀಡಿರುವ ಮಾಹಿತಿ ಪ್ರಕಾರ, ಕಬ್ಬಿಣದ ಸರಳುಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಒಂದರಲ್ಲಿ ಹಬ್ಬದ ರಜೆಗೆ ಮನೆಗೆ ಮರಳುತ್ತಿದ್ದ ಪ್ರಯಾಣಿಕರು ‘ಹಿಚ್‌ಹೈಕಿಂಗ್’ (ಲಿಫ್ಟ್ ಪಡೆದು) ಮೂಲಕ ಪ್ರಯಾಣಿಸುತ್ತಿದ್ದರು. ಈ ಟ್ರಕ್ ಢಾಕಾದಿಂದ ಉತ್ತರ ಪ್ರಾಂತ್ಯಗಳ ಕಡೆಗೆ ಚಲಿಸುತ್ತಿದ್ದಾಗ, ಸೊರಾಟೊಯಿಲ್ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ. ಕಬ್ಬಿಣದ ಸರಳುಗಳ ಭಾರ ಮತ್ತು ವಾಹನದ ಭೀಕರ ಅಪಘಾತದಿಂದಾಗಿ 15 ಜನರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮುಂಜಾನೆ ಭೀಕರ ಶಬ್ದ ಕೇಳುತ್ತಿದ್ದಂತೆ ಸ್ಥಳೀಯ ನಿವಾಸಿಗಳು ತಕ್ಷಣವೇ ಅಪಘಾತದ ಸ್ಥಳಕ್ಕೆ ಧಾವಿಸಿದ್ದಾರೆ. ಟ್ರಕ್ ಹಾಗೂ ಕಬ್ಬಿಣದ ಸರಳುಗಳ ನಡುವೆ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ರಕ್ಷಿಸಲು ಅವರು ತಕ್ಷಣವೇ ಕಾರ್ಯಾಚರಣೆ ಆರಂಭಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಟಿವಿ ವಾಹಿನಿಗಳಿಗೆ ತಿಳಿಸಿದ್ದಾರೆ. ಗಾಯಗೊಂಡಿರುವ 10 ಕ್ಕೂ ಹೆಚ್ಚು ಜನರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮತ್ತಷ್ಟು ಓದಿ: ಬಾಂಗ್ಲಾದೇಶ: ವೈರಲ್ ಆಗಿರುವ ‘ಡೊನಾಲ್ಡ್​ ಟ್ರಂಪ್’ ಎಮ್ಮೆಯನ್ನು ಬಲಿಕೊಡಲು ಮುಂದಾದ ಮಾಲೀಕ

ಹಬ್ಬದ ಸಬ್ರಮದ ನಡುವೆ ಆವರಿಸಿದ ಶೋಕ
ಮುಂಬರುವ ಗುರುವಾರ ಬಕ್ರೀದ್ ಹಬ್ಬವಿದ್ದ ಹಿನ್ನೆಲೆಯಲ್ಲಿ ಅತ್ಯಂತ ಖುಷಿಯಿಂದ ಮನೆಗೆ ಮರಳುತ್ತಿದ್ದ ಬಡ ಕಾರ್ಮಿಕರು ಹೀಗೆ ಅರ್ಧ ಹಾದಿಯಲ್ಲೇ ಹೆಣವಾಗಿ ಬಿದ್ದಿರುವುದು ಇಡೀ ಪ್ರದೇಶವನ್ನು ತೀವ್ರ ದುಃಖ ಮತ್ತು ಆಕ್ರಂದನದಲ್ಲಿ ಮುಳುಗಿಸಿದೆ.

ಸುಮಾರು 17 ಕೋಟಿಗೂ (170 ದಶಲಕ್ಷ) ಹೆಚ್ಚು ಜನಸಂಖ್ಯೆ ಹೊಂದಿರುವ ಬಾಂಗ್ಲಾದೇಶದಲ್ಲಿ, ಸಂಚಾರ ನಿಯಮಗಳ ಸಡಿಲವಾದ ಜಾರಿ, ರಸ್ತೆಗಳ ಕಳಪೆ ಸ್ಥಿತಿ ಹಾಗೂ ಕೌಶಲ್ಯರಹಿತ ಚಾಲಕರಿಂದಾಗಿ ಪ್ರತಿ ವರ್ಷ ಇಂತಹ ರಸ್ತೆ ಅಪಘಾತಗಳು ಸಾವಿರಾರು ಅಮಾಯಕರ ಪ್ರಾಣವನ್ನು ಬಲಿ ತೆಗೆದುಕೊಳ್ಳುತ್ತಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಂಡ್ಯ: ಜಿಂಕೆ ನುಂಗಿದ್ದ 10 ಅಡಿ ಉದ್ದದ ಬೃಹತ್ ಹೆಬ್ಬಾವು ಸೆರೆ! – Kannada News | 10 Foot Long Python Swallows Deer, Rescued Near Water Pipeline

ಮಂಡ್ಯ, ಮೇ 25: ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ಬೆಂಗಳೂರು ಜಲಮಂಡಳಿಯ ನೀರು ಸರಬರಾಜು ಮಾಡುವ ಪೈಪ್‌ಲೈನ್ ಬಳಿ ಬೃಹತ್ ಗಾತ್ರದ ಹೆಬ್ಬಾವೊಂದು ಪತ್ತೆಯಾಗಿದೆ. ಸುಮಾರು 10 ಅಡಿ ಉದ್ದ ಹಾಗೂ 30 ಕೆಜಿಗೂ ಹೆಚ್ಚು ತೂಕವಿದ್ದ ಈ ಹೆಬ್ಬಾವು, ಜಿಂಕೆಯೊಂದನ್ನು ಸಂಪೂರ್ಣವಾಗಿ ನುಂಗಿ ಮುಂದೆ ಹೋಗಲಾರದೆ ಒಂದೇ ಕಡೆ ಮಲಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಉರಗ ತಜ್ಞರು ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆಹಿಡಿದು, ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಮುಕ್ತವಾಗಿ ಬಿಟ್ಟಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೈಕಮಾಂಡ್​ನಿಂದ ಸಿಎಂಗೆ ಬುಲಾವ್ ಬಗ್ಗೆ ಜಾರಕಿಹೊಳಿ ಶಾಕಿಂಗ್ ಮಾತು

ಬೆಂಗಳೂರು, (ಮೇ 25): ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ನಡುವಿನ ಕುರ್ಚಿ ಕಾಳಗ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಶೀತಲ ಸಮರ ಕೇವಲ ರಾಜ್ಯ ರಾಜಕಾರಣಕ್ಕೆ ಸೀಮಿತವಾಗಿಲ್ಲ. ಇದರ ಪ್ರತಿಧ್ವನಿ ರಾಷ್ಟ್ರ ರಾಜಧಾನಿ ದಿಲ್ಲಿಯವರೆಗೂ ತಲುಪಿದೆ. ರಾಜ್ಯ ಕಾಂಗ್ರೆಸ್‌ನ ಈ ಪವರ್ ಶೇರಿಂಗ್ ಗೊಂದಲದ ನಡುವೆ ಸಿಎಂಗೆ ಹೈಕಮಾಂಡ್ ಬುಲಾವ್‌ ನೀಡಿದೆ. ಹೀಗಾಗಿ ಕಾಂಗ್ರೆಸ್​​ನಲ್ಲಿನ ಕುರ್ಚಿ ಗುದ್ದಾಟಕ್ಕೆ ತೆರೆ ಬೀಳುತ್ತಾ ಎನ್ನುವ ಚರ್ಚೆ ಶುರುವಾಗಿದೆ. ಇನ್ನು ಈ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ನಾಳೆ 11 ಗಂಟೆಗೆ ಹೈಕಮಾಂಡ್ ಪ್ರಶ್ನೆ ಪತ್ರಿಕೆ ಕೊಡುತ್ತೆ. ಆ ಬಳಿಕ ಪ್ರಶ್ನೆಗೆ ಉತ್ತರ ಟಿಕ್ ಮಾಡ್ತಾರೆ. ಮೊದಲೇ ಪ್ರಶ್ನೆ ಪತ್ರಿಕೆ ಲೀಕ್ ಮಾಡಲ್ಲ ಬಿಡಿ ಎಂದು ಪರೋಕ್ಷವಾಗಿ ಅಧಿಕಾರ ಹಂಚಿಕೆ ಚರ್ಚೆಗೆ ಬ್ರೇಕ್ ಬೀಳಲಿದೆ ಎನ್ನುವ ಅರ್ಥದಲ್ಲಿ ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದಲ್ಲಿ ಆದ ಪೆಟ್ರೋಲ್ ಬೆಲೆ ಏರಿಕೆ ಬಹಳ ದೊಡ್ಡ ಹೆಚ್ಚಳವಾ? ಇಲ್ಲಿದೆ ವಾಸ್ತವ ಸ್ಥಿತಿ – Kannada News | Despite oil crisis, India’s petrol, diesel price hike is the smallest globally

ನವದೆಹಲಿ, ಮೇ 25: ಸರ್ಕಾರ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆ (Petrol and Diesel rates) ಮಾಡಿರುವ ಕ್ರಮಕ್ಕೆ ಬಹಳಷ್ಟು ವಿರೋಧಗಳು ವ್ಯಕ್ತವಾಗುತ್ತಿವೆ. ಆದರೆ, ಈ ವಿರೋಧಗಳಲ್ಲಿ ಸತ್ಯವೆಷ್ಟು ಮಿಥ್ಯವೆಷ್ಟು? ಅಂಕಿ ಅಂಶಗಳು ಬೇರೆಯೇ ಕಥೆ ಹೇಳುತ್ತವೆ. ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಂತರ ತೈಲ ಬೆಲೆ ಏರಿಕೆಯಾದರೂ ಭಾರತದಲ್ಲಿ ತಿಂಗಳುಗಟ್ಟಲೆ ಪೆಟ್ರೋಲ್, ಡೀಸಲ್ ಬೆಲೆ ಏರಿಸದೇ ತಡೆಯಲಾಗಿತ್ತು. ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿಮೆ ಕೂಡ ಮಾಡಿತು. ತೈಲ ಕಂಪನಿಗಳು ದಿನಕ್ಕೆ ಸಾವಿರಾರು ಕೋಟಿ ರೂ ನಷ್ಟ ಕಾಣುತ್ತಿದ್ದಾಗ್ಯೂ ಸರ್ಕಾರ ಇತ್ತೀಚೆಗಷ್ಟೇ ಅಲ್ಪ ಹೆಚ್ಚಳಕ್ಕೆ ಅನುವು ಮಾಡಿತ್ತು. 2026ರ ಫೆಬ್ರವರಿಯಲ್ಲಿ ‘ಸ್ಟೇಟ್ ಆಫ್ ಹಾರ್ಮುಜ್’ (Strait of Hormuz) ಮುಚ್ಚಲ್ಪಟ್ಟ ನಂತರ ಜಗತ್ತಿನಾದ್ಯಂತ ತೈಲ ಬೆಲೆಗಳು (crude oil prices) ಗಗನಕ್ಕೇರಿದರೂ, ಭಾರತವು ಸತತ 78 ದಿನಗಳ ಕಾಲ ಬೆಲೆಯನ್ನು ಹೆಚ್ಚಿಸದೆ ಸ್ಥಿರವಾಗಿಟ್ಟಿತ್ತು. ತದನಂತರ ಮೇ ತಿಂಗಳಲ್ಲಿ 4 ಹಂತಗಳಲ್ಲಿ ಮಾಡಿದ ಒಟ್ಟು ₹7 ರವರೆಗಿನ ಪರಿಷ್ಕರಣೆಯು ಜಗತ್ತಿನಲ್ಲೇ ಅತ್ಯಂತ ಕಡಿಮೆ ಬೆಲೆ ಏರಿಕೆಯಾಗಿದೆ.

ಜಾಗತಿಕ ಹೋಲಿಕೆ: ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆ ಏರಿಕೆ

ತೈಲ ಬಿಕ್ಕಟ್ಟಿನ ಸಮಯದಲ್ಲಿ ಇಡೀ ಜಗತ್ತು ಶೇ. 10 ರಿಂದ ಶೇ. 90 ರಷ್ಟು ಬೆಲೆ ಹೆಚ್ಚಳ ಮಾಡಿದರೆ, ಭಾರತವು ತನ್ನ ಇಂಧನ ಬೆಲೆಗಳನ್ನು ಬಹುತೇಕ ಬದಲಾಯಿಸದೆ ಗ್ರಾಹಕರಿಗೆ ನೆರವಾಯಿತು.

ಮೇ 15, 19, 23 ಮತ್ತು 25 ರಂದು ಒಟ್ಟು ನಾಲ್ಕು ಬಾರಿ ತೈಲ ಕಂಪನಿಗಳು ಬೆಲೆ ಪರಿಷ್ಕರಣೆ ಮಾಡಿದವು. ಇದರಿಂದಾಗಿ ಪೆಟ್ರೋಲ್ ಮೇಲೆ ಪ್ರತಿ ಲೀಟರ್‌ಗೆ ₹7.35 ಮತ್ತು ಡೀಸೆಲ್ ಮೇಲೆ ₹7.53 ರಷ್ಟು ಮಾತ್ರ ಹೆಚ್ಚಳವಾಗಿದೆ.

ಈ ಪರಿಷ್ಕರಣೆಯ ನಂತರ ದೆಹಲಿಯಲ್ಲಿ ಪೆಟ್ರೋಲ್ ದರ ₹94.77 ರಿಂದ ₹102.12 ಕ್ಕೆ ಹಾಗೂ ಡೀಸೆಲ್ ದರ ₹87.67 ರಿಂದ ₹95.20 ಕ್ಕೆ ತಲುಪಿದೆ.

ಯೂರೋಪ್‌ನ ಪ್ರಮುಖ ದೇಶಗಳಲ್ಲಿ ಪೆಟ್ರೋಲ್ ದರ ಲೀಟರ್‌ಗೆ ₹180 ಕ್ಕಿಂತ ಹೆಚ್ಚಿದ್ದರೆ, ಭಾರತವು ಅಭಿವೃದ್ಧಿ ಹೊಂದುತ್ತಿರುವ ಬಹುತೇಕ ದೇಶಗಳಿಗಿಂತ ಕಡಿಮೆ ದರದಲ್ಲಿ ಇಂಧನವನ್ನು ನೀಡುತ್ತಿದೆ. ನೆರೆರಾಷ್ಟ್ರಗಳಾದ ಪಾಕಿಸ್ತಾನ ಮತ್ತು ನೇಪಾಳಗಳಲ್ಲೂ ಪೆಟ್ರೋಲ್ ದರ ಲೀಟರ್‌ಗೆ ₹135 ಕ್ಕಿಂತ ಹೆಚ್ಚಿದೆ.

ಜಾಗತಿಕ ಸರಾಸರಿ ಪೆಟ್ರೋಲ್ ಬೆಲೆ ಏರಿಕೆ ಶೇ. 22ಕ್ಕೂ ಹೆಚ್ಚಿದೆ. 27 ದೇಶಗಳಿರುವ ಯೂರೋಪಿಯನ್ ಯೂನಿಯನ್​ನಲ್ಲಿ ಶೇ. 18ರಷ್ಟು ಏರಿದೆ. ತೈಲ ಉತ್ಪಾದನೆ ನಡೆಯುವ ಅಮೆರಿಕದಲ್ಲೇ ಗ್ಯಾಸೊಲಿನ್ ಬೆಲೆ ಶೇ. 44ರಷ್ಟು ಹೆಚ್ಚಿದೆ. ಪ್ರಮುಖ ತೈಲ ರಫ್ತು ದೇಶವಾದ ಯುಎಇ ಕೂಡ ಶೇ. 52ರಷ್ಟು ಬೆಲೆ ಹೆಚ್ಚಳ ಮಾಡಿದೆ.

ಮಯನ್ಮಾರ್, ಮಲೇಷ್ಯಾ, ಪಾಕಿಸ್ತಾನ, ಯುಎಇ ದೇಶಗಳಲ್ಲಿ ಪೆಟ್ರೋಲ್ ಬೆಲೆ ಶೇ. 50ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಆಗಿದೆ.

ಇದನ್ನೂ ಓದಿ: ಭರವಸೆ ಮೂಡಿಸಿದ ಅಮೆರಿಕ-ಇರಾನ್ ಡೀಲ್; ಗರಿಗೆದರಿದ ಷೇರುಬಜಾರು

ಕರ್ನಾಟಕ ಮೊದಲಾದ ಕೆಲ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಸರಾಸರಿಗಿಂತ ಹೆಚ್ಚಿರುವುದು ಹೇಗೆ?

ದೇಶದ ಎಲ್ಲಾ ರಾಜ್ಯಗಳಲ್ಲೂ ಕೇಂದ್ರ ಸರ್ಕಾರ ವಿಧಿಸುವ ಅಬಕಾರಿ ಸುಂಕ ಒಂದೇ ಆಗಿರುತ್ತದೆ. ಆದರೆ, ವಿವಿಧ ರಾಜ್ಯಗಳು ವಿಧಿಸುವ ಮೌಲ್ಯವರ್ಧಿತ ತೆರಿಗೆ (VAT) ಮತ್ತು ಸೆಸ್ (Cess) ಪ್ರಮಾಣದಲ್ಲಿನ ವ್ಯತ್ಯಾಸದಿಂದಾಗಿ ವಿವಿಧ ನಗರಗಳಲ್ಲಿ ಇಂಧನ ಬೆಲೆಗಳು ಬೇರೆಯಾಗಿರುತ್ತವೆ.

ವರದಿಯ ಪ್ರಕಾರ, ಪ್ರತಿಪಕ್ಷಗಳು (ಕಾಂಗ್ರೆಸ್ / ಇಂಡಿಯಾ ಕೂಟ / TVK / AAP) ಆಳುವ ರಾಜ್ಯಗಳಲ್ಲಿ ಇಂಧನ ದರಗಳು, ಎನ್‌ಡಿಎ (NDA/BJP) ಆಡಳಿತವಿರುವ ರಾಜ್ಯಗಳಿಗಿಂತ ಹೆಚ್ಚಿವೆ.

ಹೆಚ್ಚು ದರವಿರುವ ರಾಜ್ಯಗಳು: ತೆಲಂಗಾಣ (ಕಾಂಗ್ರೆಸ್) ಮತ್ತು ಕೇರಳ (ಇಂಡಿಯಾ ಕೂಟ) ರಾಜ್ಯಗಳಲ್ಲಿ ವ್ಯಾಟ್ ಅತ್ಯಂತ ಹೆಚ್ಚಾಗಿದ್ದು, ಅಲ್ಲಿ ಪೆಟ್ರೋಲ್ ದರ ₹112 ಕ್ಕಿಂತ ಹೆಚ್ಚಿದೆ. ಕರ್ನಾಟಕದಲ್ಲೂ ಪೆಟ್ರೋಲ್ ದರ ₹110.3 ರಷ್ಟಿದೆ.

ಕಡಿಮೆ ದರವಿರುವ ರಾಜ್ಯಗಳು: ಗುಜರಾತ್, ಉತ್ತರ ಪ್ರದೇಶ, ದೆಹಲಿ, ಹರಿಯಾಣ, ಗೋವಾ ಮತ್ತು ಅಸ್ಸಾಂನಂತಹ ಬಿಜೆಪಿ ಆಡಳಿತವಿರುವ ಆರು ರಾಜ್ಯಗಳಲ್ಲಿ ಪೆಟ್ರೋಲ್ ದರ ₹102 ಅಥವಾ ಅದಕ್ಕಿಂತ ಕಡಿಮೆಯಿದೆ.

ಡೀಸೆಲ್ ಮೇಲಿನ ತೆರಿಗೆ

ಸರಕು ಸಾಗಣೆ, ಕೃಷಿ ಮತ್ತು ಸಾರ್ವಜನಿಕ ಸಾರಿಗೆಗೆ ಬಳಕೆಯಾಗುವ ಡೀಸೆಲ್ ಮೇಲಿನ ವ್ಯಾಟ್ ಅನ್ನು ಬಿಜೆಪಿ ಆಡಳಿತದ ರಾಜ್ಯಗಳು ಕಡಿಮೆ ಇಟ್ಟಿವೆ. ಆದರೆ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಡೀಸೆಲ್ ದರ ಪ್ರತಿ ಲೀಟರ್‌ಗೆ ₹15 ರಿಂದ ₹16 ರಷ್ಟು ಹೆಚ್ಚಾಗಿದೆ. ಇದು ಶ್ರಮಿಕ ವರ್ಗದ ಮೇಲೆ ಹೆಚ್ಚಿನ ಹೊರೆ ಉಂಟುಮಾಡುತ್ತಿದೆ ಎಂದು ವರದಿ ಹೇಳುತ್ತದೆ.

ಇದನ್ನೂ ಓದಿ: ಮೊದಲ ಬಾರಿ ಇನ್ವೆಸ್ಟ್​ಮೆಂಟ್​ಗೆ ಪ್ರಯತ್ನಿಸುತ್ತಿದ್ದೀರಾ? ಹೇಗೆ ಆರಂಭಿಸೋದು, ಎಲ್ಲಿ ಹೂಡಿಕೆ ಮಾಡೋದು? ಇಲ್ಲಿದೆ ಟಿಪ್ಸ್

ಇಂಧನ ಬಿಕ್ಕಟ್ಟುಗಳ ನಿರ್ವಹಣೆ ಮತ್ತು ಸುಂಕ ಕಡಿತ

2022 ರ ರಷ್ಯಾ-ಉಕ್ರೇನ್ ಯುದ್ಧ ಮತ್ತು 2026 ರ ಹಾರ್ಮುಜ್ ಬಿಕ್ಕಟ್ಟಿನ ಸಂದರ್ಭದಲ್ಲಿ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 120 ಡಾಲರ್ ದಾಟಿದ್ದರೂ, ಭಾರತ ಸರ್ಕಾರವು ಕಳೆದ ನಾಲ್ಕು ವರ್ಷಗಳಲ್ಲಿ ನಾಲ್ಕು ಬಾರಿ ಚಿಲ್ಲರೆ ಇಂಧನ ಬೆಲೆಯನ್ನು ಕಡಿತಗೊಳಿಸಿದೆ.

ಕೇಂದ್ರ ಸುಂಕ ಕಡಿತದ ಇತಿಹಾಸ

  • 4 ನವೆಂಬರ್ 2021: ಪೆಟ್ರೋಲ್ ₹5, ಡೀಸೆಲ್ ₹10 ಕಡಿತ.
  • 21 ಮೇ 2022: ಪೆಟ್ರೋಲ್ ₹8, ಡೀಸೆಲ್ ₹6 ಕಡಿತ.
  • 14 ಮಾರ್ಚ್ 2024: ತೈಲ ಕಂಪನಿಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ತಲಾ ₹2 ಕಡಿತ.
  • 27 ಮಾರ್ಚ್ 2026: ಹಾರ್ಮುಜ್ ಬಿಕ್ಕಟ್ಟಿನ ಮುನ್ನ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತಲಾ ₹10 ರಷ್ಟು ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (SAED) ಕಡಿತಗೊಳಿಸಲಾಯಿತು. ಇದರಿಂದಾಗಿ ಡೀಸೆಲ್ ಮೇಲಿನ ಕೇಂದ್ರ ಸುಂಕ ಶೂನ್ಯಕ್ಕಿಳಿಯಿತು. ಈ ಹೊರೆಯನ್ನು ಸರ್ಕಾರವೇ ಭರಿಸಿದೆ.

ಯುಪಿಎ ಅವಧಿಯ ‘ತೈಲ ಬಾಂಡ್‌ಗಳು’ ಮತ್ತು ಪ್ರಸ್ತುತ ನೀತಿ

2014 ರಲ್ಲಿ ಪೆಟ್ರೋಲ್ ಬೆಲೆ ₹71 ಇತ್ತು ಎಂದು ಕಾಂಗ್ರೆಸ್ ವಾದಿಸುತ್ತದೆ. ಆದರೆ ಆ ಬೆಲೆಯು ಅಂದಿನ ಯುಪಿಎ ಸರ್ಕಾರವು (2005-2010ರ ನಡುವೆ) ತೈಲ ಕಂಪನಿಗಳಿಗೆ ನೀಡಿದ್ದ ₹1.34 ಲಕ್ಷ ಕೋಟಿ ಮೌಲ್ಯದ ‘ಆಯಿಲ್ ಬಾಂಡ್‌ಗಳ’ ಪರಿಣಾಮವಾಗಿತ್ತು. ಇದು ಮುಂದಿನ ಪೀಳಿಗೆಯ ಮೇಲೆ ಹೊರಿಸಲಾದ ಸಾಲವಾಗಿತ್ತು.

ಪ್ರಸ್ತುತ ಮೋದಿ ಸರ್ಕಾರವು ಆ ಹಳೆಯ ತೈಲ ಬಾಂಡ್‌ಗಳ ಅಸಲು ಮತ್ತು ಬಡ್ಡಿಯನ್ನು ತೀರಿಸುತ್ತಿದೆ. 2021 ರಿಂದ ಈವರೆಗೆ 1.30 ಲಕ್ಷ ಕೋಟಿಗೂ ಅಧಿಕ ಅಸಲು ಹಣವನ್ನು ಸರ್ಕಾರ ಮರುಪಾವತಿಸಿದೆ.

ಈಗಿನ ಸರ್ಕಾರವು ಯಾವುದೇ ಹೊಸ ಸಾಲದ ಬಾಂಡ್‌ಗಳನ್ನು ಸೃಷ್ಟಿಸದೆ, ನೇರವಾಗಿ ಕೇಂದ್ರ ಅಬಕಾರಿ ಸುಂಕವನ್ನು ಕಡಿತಗೊಳಿಸುವ ಮೂಲಕ ತೈಲ ಬೆಲೆಯ ಹೊರೆಯನ್ನು ಬಜೆಟ್‌ನಲ್ಲೇ ಹೀರಿಕೊಳ್ಳುತ್ತಿದೆ. 27 ಮಾರ್ಚ್ 2026 ರ ಒಂದೇ ಒಂದು ಸುಂಕ ಕಡಿತದಿಂದ ಕೇಂದ್ರ ಸರ್ಕಾರಕ್ಕೆ ಸುಮಾರು ₹30,000 ಕೋಟಿ ರಾಜಸ್ವದ ನಷ್ಟವಾಗಿದೆ.

ಜಾಗತಿಕ ಯುದ್ಧ ಮತ್ತು ಬಿಕ್ಕಟ್ಟುಗಳ ನಡುವೆಯೂ ಭಾರತವು ತನ್ನ ಗ್ರಾಹಕರನ್ನು ರಕ್ಷಿಸಲು ಗರಿಷ್ಠ ಪ್ರಯತ್ನ ಮಾಡಿದೆ. ಕೇಂದ್ರ ಸರ್ಕಾರವು ತನ್ನ ತೆರಿಗೆಯನ್ನು ಕಡಿತಗೊಳಿಸಿ ಹಳೆಯ ತೈಲ ಬಾಂಡ್‌ಗಳ ಸಾಲವನ್ನೂ ತೀರಿಸುತ್ತಿದ್ದರೆ, ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳು ತಮ್ಮ ವ್ಯಾಟ್ (VAT) ದರವನ್ನು ಕಡಿಮೆ ಮಾಡದೆ ಇರುವುದರಿಂದ ಅಲ್ಲಿನ ಗ್ರಾಹಕರು ಹೆಚ್ಚಿನ ಹಣ ನೀಡಬೇಕಾಗಿ ಬಂದಿದೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

2+3+6 ಸಂಯೋಜನೆಯಲ್ಲಿ ಕಣಕ್ಕಿಳಿಯಲಿದೆ RCB – Kannada News | IPL 2026: RCB Playing XI For GT Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ನಾಳೆ (ಮೇ 26) ಧರ್ಮಶಾಲಾದ ಹೆಚ್​ಪಿಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಮ್ಯಾಚ್​ನಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್​ಗೆ ಎಂಟ್ರಿ ಕೊಡಲಿದೆ. ಹೀಗಾಗಿ ಆರ್​ಸಿಬಿ ತಂಡವು ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಅನ್ನೇ ಕಣಕ್ಕಿಳಿಸಲಿದೆ.

ಇಲ್ಲಿ ಆರ್​ಸಿಬಿ ತಂಡವು 6+2+3 ಸಂಯೋಜನೆಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಏಕೆಂದರೆ ಧರ್ಮಶಾಲಾ ಪಿಚ್ ಬ್ಯಾಟಿಂಗ್​ಗೆ ಪೂರಕ. ಹೀಗಾಗಿ ಆರ್​ಸಿಬಿ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿಯನ್ನು ಆರಂಭಿಕರಾಗಿ ಕಣಕ್ಕಿಳಿಸಲಿದ್ದಾರೆ.

ಇನ್ನು ಮೂರನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಕಾಣಿಸಿಕೊಳ್ಳಲಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ರಜತ್ ಪಾಟಿದಾರ್ ಬ್ಯಾಟ್ ಬೀಸಿದರೆ, ಐದನೇ ಕ್ರಮಾಂಕದಲ್ಲಿ ಟಿಮ್ ಡೇವಿಡ್ ಕಾಣಿಸಿಕೊಳ್ಳಲಿದ್ದಾರೆ. ಅದೇ ರೀತಿ ವಿಕೆಟ್ ಕೀಪರ್ ಆಗಿ ಜಿತೇಶ್ ಶರ್ಮಾ ಆಡುವ ಬಳಗದಲ್ಲಿ ಇರಲಿದ್ದಾರೆ.

ಹಾಗೆಯೇ ಆಲ್​ರೌಂಡರ್​ಗಳಾಗಿ ಕೃನಾಲ್ ಪಾಂಡ್ಯ ಹಾಗೂ ರೊಮಾರಿಯೊ ಶೆಫರ್ಡ್ ಅನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚು.  ಇನ್ನು ಬೌಲರ್​ಗಳಾಗಿ ಜೋಶ್ ಹೇಝಲ್​ವುಡ್, ಭುವನೇಶ್ವರ್ ಕುಮಾರ್ ಹಾಗೂ ರಾಸಿಖ್ ಸಲಾಂ ಕಣಕ್ಕಿಳಿಯಲಿದ್ದಾರೆ.

ಇವರೊಂದಿಗೆ ಇಂಪ್ಯಾಕ್ಟ್ ಪ್ಲೇಯರ್ ಪಟ್ಟಿಯಲ್ಲಿ ವೆಂಕಟೇಶ್ ಅಯ್ಯರ್ ಹಾಗೂ ಸುಯಶ್ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿ ಬ್ಯಾಟರ್​ನನ್ನು ಬಳಸಬೇಕಿದ್ದರೆ ವೆಂಕಟೇಶ್ ಅಯ್ಯರ್ ಅವರನ್ನು ಕಣಕ್ಕಿಳಿಸಬಹುದು. ಇಲ್ಲಾ ಬೌಲರ್​ನ ಅವಶ್ಯಕತೆ ಇದ್ದರೆ ದೇವದತ್ ಪಡಿಕ್ಕಲ್ ಬದಲಿಗೆ ಸುಯಶ್ ಶರ್ಮಾ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯಲಿದ್ದಾರೆ.

ಅಂದರೆ ಆರ್​ಸಿಬಿ ತಂಡವು 6 ಬ್ಯಾಟರ್​ಗಳು, 2 ಆಲ್​ರೌಂಡರ್​ಗಳು ಹಾಗೂ 3 ಬೌಲರ್​ಗಳನ್ನು ಒಳಗೊಂಡಂತೆ ಪ್ಲೇಯಿಂಗ್ ಇಲೆವೆನ್ ರೂಪಿಸಲಿದೆ. ಅದರಂತೆ ಆರ್​ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  1. ವಿರಾಟ್ ಕೊಹ್ಲಿ
  2. ಫಿಲ್ ಸಾಲ್ಟ್
  3. ದೇವದತ್ ಪಡಿಕ್ಕಲ್
  4. ರಜತ್ ಪಾಟಿದಾರ್ (ನಾಯಕ)
  5. ಟಿಮ್ ಡೇವಿಡ್
  6. ಜಿತೇಶ್ ಶರ್ಮಾ (ವಿಕೆಟ್ ಕೀಪರ್)
  7. ಕೃನಾಲ್ ಪಾಂಡ್ಯ
  8. ರೊಮಾರಿಯೊ ಶೆಫರ್ಡ್​
  9. ಜೋಶ್ ಹೇಝಲ್​ವುಡ್​
  10. ಭುವನೇಶ್ವರ್ ಕುಮಾರ್
  11. ರಾಸಿಖ್ ಸಲಾಂ
  12. ವೆಂಕಟೇಶ್ ಅಯ್ಯರ್ ಅಥವಾ ಸುಯಶ್ ಶರ್ಮಾ (ಇಂಪ್ಯಾಕ್ಟ್ ಪ್ಲೇಯರ್)

ಇದನ್ನೂ ಓದಿ: IPL 2026: ಐಪಿಎಲ್ ಇತಿಹಾಸದಲ್ಲೇ ಈ ರೀತಿಯ ಪ್ಲೇಆಫ್ ಇದೇ ಮೊದಲು..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್,  ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್, ರಿಚರ್ಡ್ ಗ್ಲೀಸನ್.

Source link

ಅಭಿಮಾನವಲ್ಲ, ಇದು ಅಭಿಮಾನಿಗಳ ವಿಕೃತಿ: ಟ್ರಾವಿಸ್ ಹೆಡ್ ಪತ್ನಿಯ ಆಳಲು! – Kannada News | Travis Head’s wife exposes ugly fallout from Virat Kohli IPL spat

“ಕ್ರೀಡೆಯಲ್ಲಿ ಭಾವನೆ ಮತ್ತು ಉದ್ವೇಗ ಇರುವುದು ಸಹಜ. ಆದರೆ ಆಟದ ಹಿಂದೆ ನಿಜವಾದ ಮನುಷ್ಯರು ಮತ್ತು ಅವರ ಕುಟುಂಬಗಳು ಇರುತ್ತವೆ ಎಂಬುದನ್ನು ಮರೆಯಬಾರದು.” ಇದು ಐಪಿಎಲ್ 2026ರ ಆನ್‌ಲೈನ್ ಕಿರುಕುಳಕ್ಕೆ ಬೇಸತ್ತು ಆಸ್ಟ್ರೇಲಿಯಾದ ಕ್ರಿಕೆಟರ್ ಟ್ರಾವಿಸ್ ಹೆಡ್ ಅವರ ಪತ್ನಿ ಜೆಸ್ಸಿಕಾ ಹೆಡ್ (Jessica Head) ಆಸ್ಟ್ರೇಲಿಯಾದ ಮಾಧ್ಯಮವೊಂದಕ್ಕೆ ನೀಡಿರುವ ಹೃದಯವಿದ್ರಾವಕ ಹೇಳಿಕೆ.

ಘಟನೆಯ ಹಿನ್ನೆಲೆ ಏನು?

ಐಪಿಎಲ್ 2026ರ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಪಂದ್ಯದ ವೇಳೆ ಟ್ರಾವಿಸ್ ಹೆಡ್ ಮತ್ತು ವಿರಾಟ್ ಕೊಹ್ಲಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಪಂದ್ಯ ಮುಗಿದ ಬಳಿಕ ಕೊಹ್ಲಿ ಹಸ್ತಲಾಘವ ಮಾಡಲು ನಿರಾಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಆದರೆ, ಕ್ರೀಡಾಂಗಣದೊಳಗಿನ ಈ ಸ್ಲೆಡ್ಜಿಂಗ್ ಮತ್ತು ಪೈಪೋಟಿ ಪಂದ್ಯ ಮುಗಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹೊಸ  ರೂಪ ಪಡೆದುಕೊಂಡಿದೆ. ಕೆಲವು ಅತಿರೇಕದ ಅಭಿಮಾನಿಗಳು ಟ್ರಾವಿಸ್ ಹೆಡ್ ಮಾತ್ರವಲ್ಲದೆ ಅವರ ಪತ್ನಿ ಜೆಸ್ಸಿಕಾ, ಅವರ ಸ್ನೇಹಿತರು ಮತ್ತು ಕುಟುಂಬದವರ ಖಾತೆಗಳ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ.

ಜೆಸ್ಸಿಕಾ ಹೆಡ್ ಆಕ್ರೋಶ:

ಈ ಇಡೀ ಘಟನೆಯಿಂದ ತೀವ್ರ ಬೇಸರಗೊಂಡಿರುವ ಜೆಸ್ಸಿಕಾ ಹೆಡ್, “ವಿಶ್ವಕಪ್ ಮುಗಿದ ನಂತರ ನಡೆದ ದೌರ್ಜನ್ಯ ಮತ್ತೊಮ್ಮೆ ಮರುಕಳಿಸಿದಂತೆ ಭಾಸವಾಗುತ್ತಿದೆ. ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ನನ್ನ ಸೋಶಿಯಲ್ ಮೀಡಿಯಾ ಖಾತೆಗಳು ತುಂಬಿಹೋಗಿವೆ. ನನ್ನ ಸ್ನೇಹಿತರು ಮತ್ತು ಕುಟುಂಬದವರನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ,” ಎಂದು ನೋವು ತೋಡಿಕೊಂಡಿದ್ದಾರೆ.

ಮುಂದುವರಿದು ಮಾತನಾಡಿದ ಅವರು, “ಈ ಘಟನೆಯಾದರೂ ಜನರ ಮನಸ್ಸಿನಲ್ಲಿ ಪರಸ್ಪರರ ಬಗ್ಗೆ ಸ್ವಲ್ಪ ದಯೆ ಮತ್ತು ಗೌರವವನ್ನು ಮೂಡಿಸಲಿ ಎಂದು ನಾನು ಭಾವಿಸುತ್ತೇನೆ,” ಎಂದು ಆಶಿಸಿದ್ದಾರೆ.

ಇದು ಮೊದಲ ಬಾರಿಯೇನಲ್ಲ!

ಜೆಸ್ಸಿಕಾ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿರುವಂತೆ, ಇದು ಅವರಿಗೆ ಮೊದಲ ಕಹಿ ಅನುಭವವೇನಲ್ಲ. 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಟ್ರಾವಿಸ್ ಹೆಡ್ ಶತಕ ಬಾರಿಸಿ ಭಾರತದ ವಿರುದ್ಧ ಆಸ್ಟ್ರೇಲಿಯಾವನ್ನು ಗೆಲ್ಲಿಸಿದ್ದರು. ಆ ಪಂದ್ಯ ಮುಗಿದ ತಕ್ಷಣವೂ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಒಂದು ಸಣ್ಣ ವರ್ಗ ಜೆಸ್ಸಿಕಾ ಮತ್ತು ಅವರ ಪುಟಾಣಿ ಮಗಳ ಇನ್‌ಸ್ಟಾಗ್ರಾಮ್ ಖಾತೆಗಳಿಗೆ ನುಗ್ಗಿ ಅತ್ಯಂತ ನಿಂದನಾತ್ಮಕ ಸಂದೇಶಗಳನ್ನು ಹಾಗೂ ಜೀವ ಬೆದರಿಕೆಗಳನ್ನು ಹಾಕಿದ್ದರು.

ಇದನ್ನೂ ಓದಿ: IPL 2026: ಐಪಿಎಲ್ ಇತಿಹಾಸದಲ್ಲೇ ಈ ರೀತಿಯ ಪ್ಲೇಆಫ್ ಇದೇ ಮೊದಲು..!

 ‘ಅಂಧಾಭಿಮಾನ’ವಾಗದಿರಲಿ!

“ಆಟಗಳು ಕೇವಲ ಗೆಲುವು-ಸೋಲುಗಳ ಪ್ರದರ್ಶನವಲ್ಲ. ಅವು ಮಾನವೀಯತೆ, ಶಿಸ್ತು ಮತ್ತು ಪರಸ್ಪರ ಗೌರವವನ್ನು ಕಲಿಸುವ ವೇದಿಕೆಗಳು. ಮೈದಾನದ ಪೈಪೋಟಿ ಮೈದಾನದಲ್ಲೇ ಕೊನೆಗೊಳ್ಳಬೇಕು. ಆಟಗಾರರ ಕುಟುಂಬಗಳನ್ನು, ಮಹಿಳೆಯರನ್ನು ಮತ್ತು ಮಕ್ಕಳನ್ನು ಗುರಿಯಾಗಿಸಿ ಆನ್‌ಲೈನ್‌ನಲ್ಲಿ ವಿಷ ಕಾರುವ ವಿಕೃತ ಮನಸ್ಥಿತಿಗೆ ಈಗಲೇ ಬ್ರೇಕ್ ಬೀಳಬೇಕಿದೆ. ಕ್ರೀಡೆಯ ಮೇಲಿರುವ ನಮ್ಮ ‘ಅಭಿಮಾನ’ ಇನ್ನೊಬ್ಬರ ನೆಮ್ಮದಿಯನ್ನು ಕದಡುವ ‘ಅಂಧಾಭಿಮಾನ’ವಾಗದಿರಲಿ. ಜೆಸ್ಸಿಕಾ ಹೆಡ್ ಅವರ ಮಾತುಗಳು ಕೇವಲ ಒಂದು ಅಳಲಲ್ಲ; ಅದು ಪ್ರತಿಯೊಬ್ಬ ಕ್ರೀಡಾಪ್ರೇಮಿಯೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಎಚ್ಚರಿಕೆಯ ಗಂಟೆ.”

Source link

ಪೆಟ್ರೋಲ್ ಡೀಸೆಲ್ ಬೆಲೆ ಇನ್ನೂ ಏರಿಕೆಯಾಗುತ್ತಾ? ಇಂಧನ ದರದಲ್ಲಿ ಕೇಂದ್ರ, ರಾಜ್ಯಕ್ಕೆಷ್ಟು ಪಾಲು ಎಂಬ ಮಾಹಿತಿ ಇಲ್ಲಿದೆ – Kannada News | Petrol Diesel Prices may Keep Rising! Understanding Central Excise Duty and State VAT Share in Total Fuel Tax

ಬೆಂಗಳೂರು, ಮೇ 25: ಕಳೆದ 11 ದಿನಗಳಲ್ಲಿ ನಾಲ್ಕನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 2.83 ರೂಪಾಯಿ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 2.82 ರೂಪಾಯಿ ಹೆಚ್ಚಳವಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಪೆಟ್ರೋಲ್ ದರ 110.44 ರೂಪಾಯಿ ಮತ್ತು ಡೀಸೆಲ್ ದರ 98.39 ರೂಪಾಯಿಗೆ ತಲುಪಿದೆ. ಭಾರತವು ತನ್ನ ಕಚ್ಚಾ ತೈಲದ ಶೇ 85ಕ್ಕೂ ಹೆಚ್ಚು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಪಶ್ಚಿಮ ಏಷ್ಯಾದಲ್ಲಿ ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷ, ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಸಾಗಣೆಯ ಅಡಚಣೆ, ಹಾಗೂ ರೂಪಾಯಿ ಅಪಮೌಲ್ಯವು ಜಾಗತಿಕ ಕಚ್ಚಾ ತೈಲದ ಬೆಲೆ ಏರಿಕೆಗೆ ಕಾರಣವಾಗಿದೆ. ಅಲ್ಲದೆ, ತೈಲ ಕಂಪನಿಗಳು 76 ದಿನಗಳ ಕಾಲ ನಷ್ಟವನ್ನು ಭರಿಸಿದ್ದು, ಈಗ ಅದನ್ನು ಗ್ರಾಹಕರಿಗೆ ವರ್ಗಾಯಿಸುತ್ತಿವೆ.

ಪೆಟ್ರೋಲ್ ಡೀಸೆಲ್ ದರದಲ್ಲಿ ರಾಜ್ಯ, ಕೇಂದ್ರದ ಪಾಲು

ಪೆಟ್ರೋಲ್, ಡೀಸೆಲ್ ಬೆಲೆಯ ಅರ್ಧದಷ್ಟು ಭಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆ ಹಾಗೂ ಸೆಸ್ ರೂಪದಲ್ಲಿರುತ್ತದೆ. ಉದಾಹರಣೆಗೆ, 100 ರೂಪಾಯಿ ಪೆಟ್ರೋಲ್‌ನಲ್ಲಿ ತೈಲ ಕಂಪನಿಗಳು ಕಚ್ಚಾ ಮತ್ತು ಸಂಸ್ಕರಣಾ ವೆಚ್ಚ, ಲಾಜಿಸ್ಟಿಕ್ಸ್‌ಗಾಗಿ 50-55 ರೂಪಾಯಿ ಪಡೆಯುತ್ತವೆ. ಪಂಪ್ ಡೀಲರ್‌ಗಳಿಗೆ ಮಾರಾಟ ಕಮಿಷನ್ ರೂಪದಲ್ಲಿ 3-4 ರೂಪಾಯಿ ಸಿಗುತ್ತದೆ. ಕೇಂದ್ರ ಸರ್ಕಾರ ಅಬಕಾರಿ ಸುಂಕ ಮತ್ತು ಸೆಸ್ ರೂಪದಲ್ಲಿ 11-15 ರೂಪಾಯಿ ಸಂಗ್ರಹಿಸಿದರೆ, ರಾಜ್ಯ ಸರ್ಕಾರಗಳು ವ್ಯಾಟ್ ಮತ್ತು ಲೇವಿಗಳ ಮೂಲಕ 25-30 ರೂಪಾಯಿ ಪಡೆಯುತ್ತವೆ.

ಸದ್ಯದ ಪರಿಸ್ಥಿತಿಯಲ್ಲಿ ತಕ್ಷಣದ ಪರಿಹಾರ ಬೇಕಿದ್ದರೆ ಸರ್ಕಾರಗಳು ಅಬಕಾರಿ ಸುಂಕ ಮತ್ತು ವ್ಯಾಟ್ ಕಡಿತಗೊಳಿಸುವುದು ಅನಿವಾರ್ಯ. ಇಲ್ಲದಿದ್ದರೆ ಸಾರಿಗೆ ವೆಚ್ಚ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಮತ್ತಷ್ಟು ಆರ್ಥಿಕ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version