ಭಾರತದ ಆರ್ಥಿಕ ಸವಾಲುಗಳಿಗೆ ಬಾಹ್ಯ ಪರಿಣಾಮ ಕಾರಣ: ನಿರ್ಮಲಾ ಸೀತಾರಾಮನ್ – Kannada News | Nirmala Sitharaman: India’s Economy Resilient Amidst Global Challenges & MSME Support

ಮುಂಬೈ (ಮೇ 25): ಭಾರತದ ಪ್ರಸ್ತುತ ಆರ್ಥಿಕ ಸವಾಲುಗಳು ದೇಶದ ಒಳಗಿನದ್ದಲ್ಲ, ಬದಲಿಗೆ ಜಾಗತಿಕ ವಿದ್ಯಮಾನಗಳಿಂದ (ಬಾಹ್ಯವಾಗಿ) ಎದುರಾಗುತ್ತಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದ್ದಾರೆ. ದೇಶದ ವಾಣಿಜ್ಯ ನಗರಿಯಲ್ಲಿ ನಡೆದ ಸಿಡ್ಬಿ (SIDBI – ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್) ಸಂಸ್ಥೆಯ 37ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಆರ್ಥಿಕತೆಯ ಬಗ್ಗೆ ನಕಾರಾತ್ಮಕ ಮತ್ತು ನಿರಾಶಾದಾಯಕ ವಾತಾವರಣ ಸೃಷ್ಟಿಸುತ್ತಿರುವ ವಿಮರ್ಶಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಪಶ್ಚಿಮ ಏಷ್ಯಾ (Middle East) ಬಿಕ್ಕಟ್ಟು ಮತ್ತು ಹಾರ್ಮುಜ್ ಜಲಸಂಧಿಯ ಸಂಘರ್ಷದ ಹಿನ್ನೆಲೆಯಲ್ಲಿ ಭಾರತವು ಪ್ರಸ್ತುತ ಇಂಧನ, ಗೊಬ್ಬರ ಮತ್ತು ವಿದೇಶೀ ವಿನಿಮಯದ ಮೂರು ಪ್ರಮುಖ ಜಾಗತಿಕ ಸವಾಲುಗಳನ್ನು ಎದುರಿಸುತ್ತಿದ್ದು, ಇವುಗಳ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಸಚಿವರು ತಿಳಿಸಿದರು.

ಭಯದ ವಾತಾವರಣ ಸೃಷ್ಟಿಸುವವರ ವಿರುದ್ಧ ಕಿಡಿ

ದೇಶದ ಸಾಮಾನ್ಯ ಜನರು ಮತ್ತು ಉದ್ಯಮಿಗಳು ಸಾಧಿಸುತ್ತಿರುವ ಪ್ರಗತಿಯನ್ನು ಮರೆತು, ಭಾರತದಲ್ಲಿ ಎಲ್ಲವೂ ಕುಸಿದುಬೀಳುತ್ತಿದೆ ಎಂಬಂತೆ ಬಿಂಬಿಸುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಿರ್ಮಲಾ ಸೀತಾರಾಮನ್, “ಭಾರತವು ಸುಳ್ಳು ಭಯ ಮತ್ತು ಆತಂಕದ ವಾತಾವರಣ ಸೃಷ್ಟಿಸುವುದನ್ನು ಸಹಿಸುವುದಿಲ್ಲ. ನಮ್ಮ ಮಾತು ಮತ್ತು ಕೃತಿಗಳ ಮೂಲಕ ಜನರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಬೇಕೇ ಹೊರತು ನಿರಾಶಾವಾದವನ್ನಲ್ಲ” ಎಂದರು.

ಇದನ್ನೂ ಓದಿ: ಭಾರತದಲ್ಲಿ ಆದ ಪೆಟ್ರೋಲ್ ಬೆಲೆ ಏರಿಕೆ ಬಹಳ ದೊಡ್ಡ ಹೆಚ್ಚಳವಾ? ಇಲ್ಲಿದೆ ವಾಸ್ತವ ಸ್ಥಿತಿ

ದೇಶೀಯ ಆರ್ಥಿಕತೆ ಸದೃಢವಾಗಿದೆ

ಬಾಹ್ಯ ಸವಾಲುಗಳಿದ್ದರೂ ಭಾರತದ ಆಂತರಿಕ ಆರ್ಥಿಕತೆ ಪುಟಿದೇಳುವ ಗುಣ (Resilient) ಕೂಡಿದೆ ಎಂದ ಅವರು, ಅದಕ್ಕೆ ಕೆಲ ಉದಾಹರಣೆಗಳನ್ನೂ ಕೊಟ್ಟರು. ದೇಶದ ಜಿಎಸ್‌ಟಿ (GST) ಸಂಗ್ರಹವು ಶೇಕಡಾ 8.3 ರಷ್ಟು ಬೆಳವಣಿಗೆಯೊಂದಿಗೆ 22 ಲಕ್ಷ ಕೋಟಿ ರೂ ದಾಟಿರುವುದು; ದೇಶೀಯವಾಗಿ ಟ್ರ್ಯಾಕ್ಟರ್ ಮಾರಾಟದಲ್ಲಿ ಶೇ. 26 ರಷ್ಟು ಮತ್ತು ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಶೇ. 25 ರಷ್ಟು ಹೆಚ್ಚಳ ಆಗಿರುವುದು; ಹಾಗೂ ರೀಟೇಲ್, ಕೃಷಿ ಮತ್ತು ಎಂಎಸ್‌ಎಂಇ (MSME) ವಲಯಗಳಲ್ಲಿ ಸಾಲದ ಬೆಳವಣಿಗೆ ಉತ್ತಮವಾಗಿರುವುದನ್ನು ಭಾರತದ ಆರ್ಥಿಕತೆಯ ಕ್ಷಮತೆಗೆ ನಿದರ್ಶನೆಗಳಾಗಿ ಹಣಕಾಸು ಸಚಿವೆ ಪ್ರಸ್ತಾಪಿಸಿದರು.

ಸರ್ಕಾರದ ಮುನ್ನೆಚ್ಚರಿಕೆ ಕ್ರಮಗಳು ಮತ್ತು ತೆರಿಗೆ ಕಡಿತ

ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ. ಇದರಿಂದಾಗಿ ಸರ್ಕಾರಕ್ಕೆ ಸುಮಾರು 1 ಲಕ್ಷ ಕೋಟಿ ರೂಗೂ ಅಧಿಕ ರಾಜಸ್ವ (Revenue) ನಷ್ಟವಾಗುತ್ತಿದ್ದರೂ ಜಾಗತಿಕ ತೈಲ ಬೆಲೆ ಏರಿಕೆಯಿಂದ ಸಾಮಾನ್ಯರನ್ನು ರಕ್ಷಿಸಲು ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದ ಸರಕು ಸಾಗಣೆ ತಡವಾಗುತ್ತಿರುವುದರಿಂದ ರಫ್ತುದಾರರಿಗೆ ನೆರವಾಗಲು ಕಸ್ಟಮ್ಸ್ ಪ್ರಕ್ರಿಯೆಗಳನ್ನು ಸರಳಗೊಳಿಸಲಾಗಿದೆ ಎಂದು ಎನ್ ಸೀತಾರಾಮನ್ ವಿವರಿಸಿದರು.

ಇದನ್ನೂ ಓದಿ: ಭರವಸೆ ಮೂಡಿಸಿದ ಅಮೆರಿಕ-ಇರಾನ್ ಡೀಲ್; ಗರಿಗೆದರಿದ ಷೇರುಬಜಾರು

ಎಂಎಸ್‌ಎಂಇ (MSME) ಉದ್ಯಮಗಳಿಗೆ ಬೆಂಬಲ

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (MSMEs) ಅಭಿವೃದ್ಧಿಗೆ ತುರ್ತು ಸಾಲ ಸೌಲಭ್ಯ ಗ್ಯಾರಂಟಿ ಯೋಜನೆ (ECLGS 5.0) ಅಡಿಯಲ್ಲಿ 2.55 ಲಕ್ಷ ಕೋಟಿ ರೂ ಹೆಚ್ಚುವರಿ ಸಾಲ ಒದಗಿಸಲಾಗುತ್ತಿದ್ದು, ಇದಕ್ಕೆ ಸರ್ಕಾರವೇ 100% ಗ್ಯಾರಂಟಿ ನೀಡಲಿದೆ. ಅಲ್ಲದೆ, ಸಾರ್ವಜನಿಕ ವಲಯದ ಸಂಸ್ಥೆಗಳು (PSUs) ಸಣ್ಣ ಉದ್ಯಮಿಗಳಿಗೆ ಬಾಕಿ ಇರುವ ಹಣವನ್ನು 45 ದಿನಗಳ ಒಳಗಾಗಿ ಪಾವತಿಸಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಜಾಗತಿಕ ಯುದ್ಧ ಮತ್ತು ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನಿಂದಾಗಿ ಇಂಧನ ಹಾಗೂ ರಫ್ತು ವೆಚ್ಚ ಹೆಚ್ಚಾಗುತ್ತಿರುವುದು ನಿಜ. ಆದರೆ, ಭಾರತ ಸರ್ಕಾರವು ತೆರಿಗೆ ಕಡಿತ ಮತ್ತು ಉದ್ಯಮಗಳಿಗೆ ರಕ್ಷಣೆ ನೀಡುವ ಮೂಲಕ ಈ ಜಾಗತಿಕ ಹೊರೆಯನ್ನು ದೇಶದ ಜನರ ಮೇಲೆ ಬೀಳದಂತೆ ನಿರ್ವಹಿಸುತ್ತಿದೆ ಎಂದು ವಿತ್ತ ಸಚಿವರು ಈ ವೇಳೆ ಭರವಸೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮೋದಿ ಸರ್ಕಾರ ರಹಸ್ಯವಾಗಿ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ; ಪೆಟ್ರೋಲ್ ಏರಿಕೆ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ – Kannada News | Rahul Gandhi Attack on PM Modi government over Fuel price hike

ನವದೆಹಲಿ, ಮೇ 25: ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ನಿರಂತರ ಏರಿಕೆಯನ್ನು ಖಂಡಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಇಂದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಹಣದುಬ್ಬರ ಮನುಷ್ಯ’ ಎಂದು ಕರೆದಿರುವ ರಾಹುಲ್ ಗಾಂಧಿ ಕೇಂದ್ರ ಸರ್ಕಾರವು ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ.

ಪ್ರಮುಖ ಮುಖ್ಯಾಂಶಗಳು:

  • ಪೆಟ್ರೋಲ್-ಡೀಸೆಲ್ ಬೆಲೆ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ
  • ಮೋದಿ ಸರ್ಕಾರ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದ ಕಾಂಗ್ರೆಸ್
  • 15 ದಿನಗಳಿಂದ ಇಂಧನದ ಬೆಲೆಯಲ್ಲಿ ಭಾರೀ ಏರಿಕೆ

“ಹಣದುಬ್ಬರದ ಮನುಷ್ಯ ಪ್ರಧಾನಿ ಮೋದಿ ಜನರಿಗೆ ತಕ್ಷಣಕ್ಕೆ ತಿಳಿಯದಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕಂತುಗಳಲ್ಲಿ ಹೆಚ್ಚಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಜೇಬಿನಿಂದ ಲೂಟಿ ಮಾಡುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಮೋದಿ, ಬಿಜೆಪಿ, ಆರ್​ಎಸ್​ಎಸ್ ದೇಶದ್ರೋಹಿಗಳು ಎಂದ ರಾಹುಲ್​​ಗೆ ಜೋಶಿ ತಿರುಗೇಟು

“ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಹಾಗೂ ಬೆಲೆ ಏರಿಕೆಯ ಬಿರುಗಾಳಿ ಬರಲಿದೆ ಎಂದು ನಾನು ಕೆಲವು ತಿಂಗಳುಗಳಿಂದ ಎಚ್ಚರಿಸುತ್ತಿದ್ದೆ. ಆದರೆ, ಮೋದಿ ಅವರು ಎಂದಿನಂತೆ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಈಗ ಚುನಾವಣೆಗಳು ಮುಗಿಯುತ್ತಿದ್ದಂತೆ ಪೆಟ್ರೋಲ್-ಡೀಸೆಲ್ ಬೆಲೆಯನ್ನು ಬರೋಬ್ಬರಿ 8 ರೂ.ಗಳಷ್ಟು ಹೆಚ್ಚಿಸಲಾಗಿದೆ. ಚುನಾವಣೆಯ ಸಮಯದಲ್ಲಿ ದೊಡ್ಡ ದೊಡ್ಡ ಭರವಸೆಗಳನ್ನು ನೀಡುವುದು, ಆ ನಂತರದ ಸಮಯದಲ್ಲಿ ಜನರ ಜೇಬಿಗೆ ಕತ್ತರಿ ಹಾಕುವುದೇ ಈ ಸರ್ಕಾರದ ಕೆಲಸ” ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರಿಂದ, ಭಾರತೀಯ ತೈಲ ಕಂಪನಿಗಳು ಮೇ 15ರಿಂದ ಸತತವಾಗಿ ಇಂಧನ ದರವನ್ನು ಪರಿಷ್ಕರಿಸುತ್ತಿವೆ. ಕೇವಲ 10 ದಿನಗಳಲ್ಲಿ ಒಟ್ಟಾರೆ ತೈಲ ಬೆಲೆ ಸುಮಾರು 7.50 ರೂ.ಗಳಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಜಗತ್ತಿಗೆ ಎದುರಾಗಿದೆ ಭೀಕರ ಬಡತನದ ಭೀತಿ, ಕೋವಿಡ್, ಯುದ್ಧ ಮತ್ತು ಇಂಧನ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ಮೋದಿ ಗಂಭೀರ ಎಚ್ಚರಿಕೆ

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಸಹ ಕೇಂದ್ರದ ವಿರುದ್ಧ ಹರಿಹಾಯ್ದಿದ್ದು, ಇದನ್ನು “ಇಂಧನ ಲೂಟಿ” ಎಂದು ಕರೆದಿದ್ದಾರೆ. ಮೋದಿ ಸರ್ಕಾರವು ಸಾಮಾನ್ಯ ಜನರ ಉಳಿತಾಯದ ಹಣವನ್ನು ಸುಟ್ಟು ಹಾಕಲು ಪೆಟ್ರೋಲ್ ಚಿಮುಕಿಸುತ್ತಿದೆ. ತೈಲ ಬೆಲೆ ಏರಿಕೆಯಿಂದಾಗಿ ಸಾರಿಗೆ ವೆಚ್ಚಗಳು ಹೆಚ್ಚಾಗಲಿದ್ದು, ಇದರ ನೇರ ಹೊರೆ ರೈತರು, ಸಣ್ಣ ಉದ್ಯಮಗಳು (MSME) ಮತ್ತು ಮಧ್ಯಮ ವರ್ಗದ ಕುಟುಂಬಗಳ ಬಜೆಟ್ ಮೇಲೆ ಬೀಳಲಿದೆ” ಎಂದು ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಮೌಂಟ್ ಎವರೆಸ್ಟ್ ಏರಿದ ಬೆಂಗಳೂರಿನ ಪರ್ವತಾರೋಹಿಗಳು: ಕೆಎಂಎ 60ನೇ ವರ್ಷಾಚರಣೆ ಪ್ರಯುಕ್ತ ಸಾಧನೆ – Kannada News | Bengaluru Duo Scales Mount Everest: Santhosh Devarajappa and Dr Chinmayee Thrishulamurthy Conquered World’s Highest Peak

ಮೌಂಟ್ ಎವರೆಸ್ಟ್ ತುತ್ತತುದಿಯಲ್ಲಿ ಡಾ. ಚಿನ್ಮಯಿ ತ್ರಿಶೂಲಮೂರ್ತಿ, ಸಂತೋಷ್ ದೇವರಾಜಪ್ಪ ಸಂಭ್ರಮದ ಕ್ಷಣImage Credit source: The New Indian Express

ಬೆಂಗಳೂರು, ಮೇ 25: ಕರ್ನಾಟಕ (Karnataka) ಪರ್ವತಾರೋಹಣ ಸಂಸ್ಥೆಯ (KMA) 60ನೇ ವಾರ್ಷಿಕೋತ್ಸವದ ಸಂಭ್ರಮದ ಸಂದರ್ಭದಲ್ಲಿ ಬೆಂಗಳೂರಿನ ಇಬ್ಬರು ಸಾಹಸಿಗಳು ಜಗತ್ತಿನ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಏರಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಬೆಂಗಳೂರು ಮೂಲದ 40 ವರ್ಷದ ಉದ್ಯಮಿ ಸಂತೋಷ್ ದೇವರಾಜಪ್ಪ ಮತ್ತು 45 ವರ್ಷದ ನೇತ್ರ ತಜ್ಞೆ (Ophthalmologist) ಡಾ. ಚಿನ್ಮಯಿ ತ್ರಿಶೂಲಮೂರ್ತಿ ಅವರೇ ಈ ಅಪೂರ್ವ ಸಾಧನೆ ಮಾಡಿದವರು. ನೇಪಾಳದ ಆಗ್ನೇಯ ಸೌತ್ ಕೋಲ್ ಮಾರ್ಗದ ಮೂಲಕ ಇವರಿಬ್ಬರು ಮೇ 21ರಂದು ಮಧ್ಯಾಹ್ನ 12:10ಕ್ಕೆ 29,031 ಅಡಿ ಎತ್ತರದ ಎವರೆಸ್ಟ್ ಶಿಖರದ ತುತ್ತತುದಿಯನ್ನು ತಲುಪಿದ್ದಾರೆ.

ಮುಖ್ಯಾಂಶಗಳು

  • ಎವರೆಸ್ಟ್ ಶಿಖರ ಏರಿ ಬೆಂಗಳೂರಿಗರ ಸಾಧನೆ.
  • ಕರ್ನಾಟಕ ಪರ್ವತಾರೋಹಣ ಸಂಸ್ಥೆಯ 60ನೇ ವರ್ಷಾಚರಣೆ ಪ್ರಯುಕ್ತ ಚಾರಣ.
  • 46 ದಿನಗಳ ಜರ್ನಿ ಬಳಿಕ ಎವರೆಸ್ಟ್ ಏರಿದ ಉದ್ಯಮಿ ಹಾಗೂ ವೈದ್ಯೆ.

46 ದಿನಗಳ ಕಠಿಣ ಸವಾಲಿನ ಯಾನ

ಈ ಇಬ್ಬರು ಪರ್ವತಾರೋಹಿಗಳು ಏಪ್ರಿಲ್ 4 ರಂದು ಬೆಂಗಳೂರಿನಿಂದ ಸಾಹಸಯಾತ್ರೆ ಆರಂಭಿಸಿದ್ದರು. ಕಠಿಣ ಹವಾಮಾನಕ್ಕೆ ದೇಹವನ್ನು ಒಗ್ಗಿಸಿಕೊಳ್ಳುವ (Acclimatisation) ಭಾಗವಾಗಿ ಇವರು ಮೊದಲು ಏಪ್ರಿಲ್ 22 ರಂದು 20,070 ಅಡಿ ಎತ್ತರದ ಲೋಬುಚೆ ಈಸ್ಟ್ ಶಿಖರವನ್ನು ಏರಿದ್ದರು. ತದನಂತರ ಕಠಿಣ ಸವಾಲುಗಳನ್ನು ಎದುರಿಸಿ 46 ದಿನಗಳ ಸುದೀರ್ಘ ಪರಿಶ್ರಮದ ಬಳಿಕ ಮೌಂಟ್ ಎವರೆಸ್ಟ್ ಏರಿದ್ದಾರೆ. ಈ ಐತಿಹಾಸಿಕ ಪರ್ವತಾರೋಹಣಕ್ಕೆ ಮಾರ್ಚ್ 9 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂಭಾಗ ಚಾಲನೆ ನೀಡಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆರ್ಥಿಕ ಅಪರಾಧಗಳ ಭಾರಿ ಏರಿಕೆ: ಪ್ರತಿ 2.5 ಗಂಟೆಗೆ ದಾಖಲಾಗ್ತಿದೆ ಒಂದು ಆರ್ಥಿಕ ವಂಚನೆ ಕೇಸ್!

ಕರ್ನಾಟಕ ಪರ್ವತಾರೋಹಣ ಸಂಸ್ಥೆಯು60 ವರ್ಷಗಳ ಯಶಸ್ವಿ ಪಯಣದಲ್ಲಿ ಇದುವರೆಗೆ 20,000ಕ್ಕೂ ಹೆಚ್ಚು ಸದಸ್ಯರಿಗೆ ತರಬೇತಿ ನೀಡಿದೆ. ಇದೀಗ 60ನೇ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿಗರು ಎವರೆಸ್ಟ್ ಏರಿ ಸಾಧನೆ ಮಾಡಿದ್ದು, ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದೆ. ಸದ್ಯ ಈ ಪರ್ವತಾರೋಹಿಗಳ ಸಾಧನೆಗೆ ರಾಜ್ಯಾದ್ಯಂತ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ತಾನು 15 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಬ್ಯಾಂಕ್​ನಲ್ಲೇ 8.70 ಕೋಟಿ ರೂ. ದರೋಡೆ ಮಾಡಿ ಸಿಕ್ಕಿಬಿದ್ದ – Kannada News | Bank Official Accused in Massive RBI Currency Chest Heist on Gandhi Road Ahmedabad

ಅಹಮದಾಬಾದ್, ಮೇ 25: ವ್ಯಕ್ತಿಯೊಬ್ಬ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿ(Bank)ನಲ್ಲಿ ದರೋಡೆ ಮಾಡಿ ಸಿಕ್ಕಿಬಿದ್ದಿದ್ದಾನೆ. ಅಹಮದಾಬಾದಿನ ಬ್ಯಾಂಕ್ ಆಫ್ ಬರೋಡಾದಲ್ಲಿ ದರೋಡೆಕೋರರ ಗ್ಯಾಂಗ್ ಒಂದು 8.70 ಕೋಟಿ ರೂ. ದರೋಡೆ ಮಾಡಿದೆ. ಗಾಂಧಿ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಆರ್‌ಬಿಐ ಕರೆನ್ಸಿ ಚೆಸ್ಟ್‌ನಿಂದ (RBI Currency Chest) ಬರೋಬ್ಬರಿ 8.70ಕೋಟಿ ರೂಪಾಯಿ ಹಣವನ್ನು ಅತ್ಯಂತ ಚಾಣಾಕ್ಷತನದಿಂದ ಕದ್ದು, ಯಾರಿಗೂ ಅನುಮಾನ ಬಾರದಂತೆ ಮೂರು ತಿಂಗಳ ಕಾಲ ಅದೇ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಜಾಯಿಂಟ್ ಕಸ್ಟೋಡಿಯನ್ ಕೊನೆಗೂ ಸಿಸಿಟಿವಿ ಕ್ಯಾಮೆರಾದಿಂದಾಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ರೋಚಕ ದರೋಡೆಯ ಸಿಸಿಟಿವಿ ದೃಶ್ಯಾವಳಿಗಳು ಇಂದು ಲೀಕ್ ಆಗಿದ್ದು, ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಬ್ಯಾಂಕ್‌ನ ಆರ್‌ಬಿಐ ಕರೆನ್ಸಿ ಚೆಸ್ಟ್‌ನಲ್ಲಿ ಕಳೆದ 15 ವರ್ಷಗಳಿಂದ ಅತ್ಯಂತ ಜವಾಬ್ದಾರಿಯುತ ಜಂಟಿ ಕಸ್ಟೋಡಿಯನ್ ಹುದ್ದೆಯಲ್ಲಿದ್ದ ಹರಸಿದ್ಧ್ ಕಡಿಯಾರ್ ಎಂಬಾತನೇ ಈ ಮೆಗಾ ದರೋಡೆಯ ಮುಖ್ಯ ಸೂತ್ರಧಾರಿ. ಅತ್ಯಂತ ವಿಲಾಸಿ ಮತ್ತು ಐಷಾರಾಮಿ ಜೀವನ ನಡೆಸಬೇಕೆಂಬ ದುರಾಶೆಗೆ ಬಿದ್ದ ಈತ, ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್‌ಗೇ ಕನ್ನ ಹಾಕಲು ಪಕ್ಕಾ ಪ್ಲಾನ್ ಮಾಡಿದ್ದ.

ತನಿಖಾ ವರದಿಗಳ ಪ್ರಕಾರ, ಈ ಘಟನೆ ನಡೆದಿದ್ದು2026ರ ಜನವರಿ 13ರ ರಾತ್ರಿ. ಕಡಿಯಾರ್ ಕರೆನ್ಸಿ ಚೆಸ್ಟ್‌ನಲ್ಲಿದ್ದ ಬರೋಬ್ಬರಿ 8.70 ಕೋಟಿ ರೂಪಾಯಿ ನಗದು ಹಣವನ್ನು ಒಂದು ದೊಡ್ಡ ಬಾಕ್ಸ್‌ನಲ್ಲಿ ತುಂಬಿಸಿಟ್ಟಿದ್ದ. ಯಾರಿಗೂ ಅನುಮಾನ ಬಾರದಂತೆ ಆ ಹಣದ ಬಾಕ್ಸ್ ಅನ್ನು ಲಗೇಜ್ ವಾಹನಕ್ಕೆ ಲೋಡ್ ಮಾಡಿಸಿ, ಅತ್ಯಂತ ಬಿಗಿ ಭದ್ರತೆ ಇರುವ ಕರೆನ್ಸಿ ಚೆಸ್ಟ್‌ನಿಂದ ಕೋಟ್ಯಂತರ ರೂಪಾಯಿ ಹಣದೊಂದಿಗೆ ರಾಜಾರೋಷವಾಗಿ ಹೊರನಡೆದಿದ್ದಾನೆ.

ಮತ್ತಷ್ಟು ಓದಿ: ಕೊರೊನಾದಲ್ಲಿ ಟ್ರಾವೆಲ್ಸ್ ಲಾಸ್ ಆಗಿದ್ದಕ್ಕೆ ಕಳ್ಳತನಕ್ಕಿಳಿತ ವ್ಯಕ್ತಿ! ಕೆಜಿಗಟ್ಟಲೇ ಚಿನ್ನ ದೋಚಿದ್ದ ಮಾಸ್ಕ್​ಮ್ಯಾನ್ ಅರೆಸ್ಟ್

ಸಾಮಾನ್ಯವಾಗಿ ಬ್ಯಾಂಕ್‌ಗಳ ಸಿಸಿಟಿವಿ ದೃಶ್ಯಾವಳಿಗಳು  90 ದಿನಗಳ ನಂತರ ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗುತ್ತವೆ ಎಂಬ ಬಲವಾದ ನಂಬಿಕೆ ಕಡಿಯಾರ್‌ಗೆ ಇತ್ತು. ಹೀಗಾಗಿ, ದರೋಡೆ ಮಾಡಿದ ನಂತರವೂ ಆತ ಯಾವುದೇ ಭಯವಿಲ್ಲದೆ, ತನಗೇನೂ ತಿಳಿಯದವನಂತೆ ಪ್ರತಿದಿನ ಎಂದಿನಂತೆ ಬ್ಯಾಂಕ್ ಕೆಲಸಕ್ಕೆ ಹಾಜರಾಗುತ್ತಿದ್ದ ತಾನು ಸಿಕ್ಕಿಬೀಳುವುದಿಲ್ಲ ಎಂದು ಆತ ಬೀಗುತ್ತಿದ್ದಾಗಲೇ ಬ್ಯಾಂಕ್‌ನ ಆಡಿಟಿಂಗ್ ವೇಳೆ ಕೋಟ್ಯಂತರ ರೂಪಾಯಿ ವ್ಯತ್ಯಾಸ ಕಂಡುಬಂದಿದೆ.

ಪೊಲೀಸರು ತನಿಖೆ ಆರಂಭಿಸಿ ಬ್ಯಾಂಕ್‌ನ ಹಳೆಯ ಡೇಟಾವನ್ನು ಪರಿಶೀಲಿಸಿದಾಗ, ಡಿಲೀಟ್ ಆಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ತಾಂತ್ರಿಕ ತಜ್ಞರ ಸಹಾಯದಿಂದ ಯಶಸ್ವಿಯಾಗಿ ರಿಕವರಿ  ಮಾಡಿದ್ದಾರೆ. ಈ ದೃಶ್ಯದಲ್ಲಿ ಕಡಿಯಾರ್ ಹಣದ ಬಾಕ್ಸ್ ತೆಗೆದುಕೊಂಡು ಹೋಗುತ್ತಿರುವುದು ಸ್ಪಷ್ಟವಾಗಿ ಸೆರೆಯಾಗಿದ್ದು, ಪೊಲೀಸರಿಗೆ ಇದು ಅತ್ಯಂತ ಪ್ರಮುಖ ಸಾಕ್ಷಿಯಾಗಿದೆ.

ಪ್ರಸ್ತುತ ಆರೋಪಿ ಹರಸಿದ್ಧ್ ಕಡಿಯಾರ್ ವಿರುದ್ಧ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ. ಇಷ್ಟು ದೊಡ್ಡ ಮೊತ್ತದ ದರೋಡೆಯಲ್ಲಿ ಬ್ಯಾಂಕ್‌ನ ಇತರ ಸಿಬ್ಬಂದಿ ಅಥವಾ ಹೊರಗಿನ ಸಹಚರರು ಯಾರಾದರೂ ಭಾಗಿಯಾಗಿದ್ದಾರೆಯೇ ಮತ್ತು ಕದ್ದ ಹಣವನ್ನು ಎಲ್ಲಿ ಬಚ್ಚಿಡಲಾಗಿದೆ ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗೃಹಲಕ್ಷ್ಮಿ ಯೋಜನೆ ಹಣ ದುರ್ಬಳಕೆ ಆರೋಪ: ಡಿಸಿಎಂ ಡಿಕೆ ಶಿವಕುಮಾರ್ ಮಹತ್ವದ ಹೇಳಿಕೆ

ಬೆಂಗಳೂರು, ಮೇ 25: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಗೃಹಲಕ್ಷ್ಮಿ ಯೋಜನೆ ಅನುಷ್ಠಾನದಲ್ಲಿ ಸುಮಾರು 100 ಕೋಟಿ ರೂಪಾಯಿ ದುರುಪಯೋಗ ಆಗುತ್ತಿರುವುದು ಗಮನಕ್ಕೆ ಬಂದಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಮೃತಪಟ್ಟ ಫಲಾನುಭವಿಗಳ ಖಾತೆಗಳಿಗೂ ಹಣ ಜಮೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಯೋಜನೆಯ ಲಾಭವನ್ನು ಸರಿಯಾದ ಫಲಾನುಭವಿಗಳಿಗೆ ತಲುಪಿಸಲು ಸರ್ಕಾರ ಬದ್ಧವಾಗಿದೆ. ಸತ್ತವರಿಗೂ ಹಣ ಹೋಗುತ್ತಿರುವುದು ಮತ್ತು ತಪ್ಪು ದೂರವಾಣಿ ಸಂಖ್ಯೆಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ, ಪರಿಶೀಲನೆಗೆ ಸೂಚಿಸಲಾಗಿದೆ. ಜತೆಗೆ ಫಲಾನುಭವಿಗಳು ತಮ್ಮ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರತಿ ತಾಲೂಕಿನಿಂದಲೂ ಮಾಹಿತಿ ಪಡೆದು, ಯೋಜನೆಯನ್ನು ಪರಿಶೀಲಿಸುವ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧರ್ಮೇಂದ್ರ, ಮಮ್ಮುಟ್ಟಿ, ಮಾಧವನ್, ಅಲ್ಕಾ ಯಾಗ್ನಿಕ್‌ ಸೇರಿ ಹಲವರಿಗೆ ಇಂದು (ಮೇ 25) ಪದ್ಮ ಪ್ರಶಸ್ತಿ ಪ್ರದಾನ – Kannada News | Padma Awards 2026 Dharmendra Mammootty Alka Yagnik R Madhavan honoured on 25 May

Dharmendra, R. Madhavan, Mammootty

ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ‘ಪದ್ಮ ಪ್ರಶಸ್ತಿ 2026’ (Padma Awards 2026) ಪ್ರದಾನ ಸಮಾರಂಭವು ರಾಜಧಾನಿ ನವದೆಹಲಿಯಲ್ಲಿ ಇಂದು (ಮೇ 25) ಸಂಜೆ 5 ಗಂಟೆಗೆ ಅದ್ಧೂರಿಯಾಗಿ ಜರುಗಲಿದೆ. ಈ ಬಾರಿ ಚಿತ್ರರಂಗ, ಸಂಗೀತ, ರಂಗಭೂಮಿ ಮುಂತಾದ ಕ್ಷೇತ್ರದ ಹಲವು ಧೀಮಂತ ಸಾಧಕರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಈ ವರ್ಷ ಕೇಂದ್ರ ಸರ್ಕಾರವು ಒಟ್ಟು 131 ಪದ್ಮ ಪ್ರಶಸ್ತಿಗಳನ್ನು ಘೋಷಿಸಿದ್ದು, ಇದರಲ್ಲಿ 5 ಪದ್ಮವಿಭೂಷಣ, 13 ಪದ್ಮಭೂಷಣ ಹಾಗೂ 113 ಪದ್ಮಶ್ರೀ ಪ್ರಶಸ್ತಿಗಳು ಸೇರಿವೆ.

ಹಿರಿಯ ನಟ ಧರ್ಮೇಂದ್ರ ಅವರಿಗೆ ಪದ್ಮವಿಭೂಷಣ: ಹಿಂದಿ ಚಿತ್ರರಂಗದ ದಶಕಗಳ ಇತಿಹಾಸದಲ್ಲಿ ‘ಶೋಲೆ’ ರೀತಿಯ ಗಮನಾರ್ಹ ಸಿನಿಮಾಗಳ ಮೂಲಕ ಕೋಟ್ಯಂತರ ಪ್ರೇಕ್ಷಕರನ್ನು ರಂಜಿಸಿದ ಎವರ್‌ಗ್ರೀನ್ ಸೂಪರ್‌ಸ್ಟಾರ್ ನಟ ಧರ್ಮೇಂದ್ರ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗುತ್ತಿದೆ. ಚಿತ್ರರಂಗಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಿ ಈ ಗೌರವ ಸಲ್ಲಿಕೆ ಆಗುತ್ತಿದೆ.

ಮಮ್ಮುಟ್ಟಿ ಮತ್ತು ಅಲ್ಕಾ ಯಾಗ್ನಿಕ್‌ಗೆ ಪದ್ಮಭೂಷಣ: ಮಲಯಾಳಂ ಚಿತ್ರರಂಗದ ಹೆಮ್ಮೆಯ ನಟ ಮಮ್ಮುಟ್ಟಿ ಅವರಿಗೆ ಚಿತ್ರರಂಗದಲ್ಲಿನ ಅವರ ಸುದೀರ್ಘ ಹಾಗೂ ಅತ್ಯುತ್ತಮ ಸಾಧನೆಗಾಗಿ ಪದ್ಮಭೂಷಣ ಪ್ರಶಸ್ತಿ ಒಲಿದಿದೆ. ಇವರೊಂದಿಗೆ, 90 ಹಾಗೂ 2000ರ ದಶಕದಲ್ಲಿ ತಮ್ಮ ಮಧುರ ಧ್ವನಿಯ ಮೂಲಕ ಬಾಲಿವುಡ್‌ನಲ್ಲಿ ಅಸಂಖ್ಯಾತ ಸೂಪರ್‌ಹಿಟ್ ಗೀತೆಗಳನ್ನು ನೀಡಿದ ಖ್ಯಾತ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಅವರಿಗೂ ಪದ್ಮಭೂಷಣ ನೀಡಿ ಗೌರವಿಸಲಾಗುತ್ತಿದೆ.

ಇದನ್ನೂ ಓದಿ: ರಾಷ್ಟ್ರಪತಿಗಳಿಂದ ಪದ್ಮ ವಿಭೂಷಣ ಪ್ರಶಸ್ತಿ ಸ್ವೀಕರಿಸಿದ ಚಿರಂಜೀವಿ; ಆ ಕ್ಷಣದ ವಿಡಿಯೋ ನೋಡಿ

ಆರ್. ಮಾಧವನ್ ಹಾಗೂ ಸತೀಶ್ ಶಾ ಅವರಿಗೆ ಪದ್ಮಶ್ರೀ: ‘ರೆಹನಾ ಹೈ ತೇರೆ ದಿಲ್ ಮೇ’, ‘3 ಇಡಿಯಟ್ಸ್’, ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಮುಂತಾದ ಚಿತ್ರಗಳ ಮೂಲಕ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟ ಆರ್. ಮಾಧವನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದಿದೆ. ಇದರೊಂದಿಗೆ, ‘ಸಾರಾಭಾಯ್ ವರ್ಸಸ್ ಸಾರಾಭಾಯ್’ ಹಾಗೂ ಹಲವಾರು ಬಾಲಿವುಡ್ ಚಿತ್ರಗಳಲ್ಲಿ ತಮ್ಮ ಅದ್ಭುತ ಹಾಸ್ಯದ ಮೂಲಕ ಮನೆಮಾತಾಗಿದ್ದ ದಿವಂಗತ ನಟ ಸತೀಶ್ ಶಾ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಗೌರವ ಸಮರ್ಪಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕದ ಅತಿದೊಡ್ಡ ಡಿಜಿಟಲ್ ಅರೆಸ್ಟ್ ಕೇಸ್​​​ ಭೇದಿಸಿದ ಖಾಕಿ​​​: 6 ಆರೋಪಿಗಳ ಬಂಧನ – Kannada News | Karnataka Police Crack State’s Biggest Digital Arrest Scam; 6 Accused Arrested

ಬೆಂಗಳೂರು, ಮೇ 25: ನಿನ್ನೆ ನಗರದಲ್ಲಿ ಕರ್ನಾಟಕದ ಅತಿದೊಡ್ಡ ಡಿಜಿಟಲ್ ಅರೆಸ್ಟ್​​​ ಪ್ರಕರಣವೊಂದು (Digital Arrest Fraud) ಬೆಳಕಿಗೆ ಬಂದಿತ್ತು. ವೃದ್ಧೆಯನ್ನು ಡಿಜಿಟಲ್​ ಅರೆಸ್ಟ್ ಮಾಡಿ ಬರೋಬ್ಬರಿ 24 ಕೋಟಿ ರೂ ವಂಚಿಸಿದ್ದ ಖದೀಮರ ಹೆಡೆಮುರಿ ಕಟ್ಟುವಲ್ಲಿ ಸೈಬರ್ ಕಮಾಂಡ್ ಪೊಲೀಸರು ಯಶಸ್ವಿಯಾಗಿದ್ದಾರೆ. ಒಟ್ಟು ಆರು ಆರೋಪಿಗಳನ್ನು ಬಂಧಿಸಿದ್ದಾರೆ (Arrest). ವಿಚಾರಣೆ ವೇಳೆ ಆರೋಪಿಗಳ ಹಿನ್ನೆಲೆ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ಕರ್ನಾಟಕದಲ್ಲೂ ತನ್ನ ಗ್ಯಾಂಗ್​ನ್ನು​ ವಿಸ್ತರಿಸಿಕೊಂಡಿದ್ದ ಆರೋಪಿಗಳು ರಾಜ್ಯದಲ್ಲಿ ಹುಡುಗರನ್ನು ಇಟ್ಟುಕೊಂಡು ಮಾಹಿತಿ ಪಡೆಯುತ್ತಿದ್ದರು ಎಂಬ ಮಾಹಿತಿ ಬಯಲಾಗಿದೆ.

ಮುಖ್ಯಾಂಶಗಳು

  • ಕರ್ನಾಟಕದ ಅತಿದೊಡ್ಡ ಡಿಜಿಟಲ್ ಅರೆಸ್ಟ್​​​ ಪ್ರಕರಣ ಭೇದಿಸಿದ ಪೊಲೀಸರು
  • 6 ಆರೋಪಿಗಳನ್ನು ಬಂಧಿಸಿರುವ ಸೈಬರ್ ಕಮಾಂಡ್ ಪೊಲೀಸರು
  • ಆರೋಪಿಗಳ ಅಕೌಂಟ್​ನಲ್ಲಿದ್ದ 60 ಲಕ್ಷ ರೂ ಹಣ ಫ್ರೀಜ್

ಹರಿಯಾಣದ ಗುರುಗ್ರಾಮದಲ್ಲಿ ಕಚೇರಿ ಮಾಡಿಕೊಂಡಿದ್ದ ಗ್ಯಾಂಗ್,​ ಈ ಕೇಸ್​ಗೂ ಮುನ್ನ ಹಲವು ಸೈಬರ್ ಅರೆಸ್ಟ್ ಪ್ರಕರಣದಲ್ಲಿ ಭಾಗಿಯಾಗಿದ್ದರು. ಬ್ಯಾಂಕ್​ಗಳ ಮೂಲಕ ಮಾಹಿತಿ ಪಡೆದುಕೊಂಡು ದೊಡ್ಡ ಉದ್ಯೋಗದಲ್ಲಿದ್ದು ನಿವೃತ್ತರಾದವರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಹಣ ಬಂದ ನಂತರ ಹಲವು ಮ್ಯೂಲ್ ಖಾತೆ​ಗಳಿಗೆ ಹಣ ವರ್ಗಾವಣೆ ಮಾಡುತ್ತಿದ್ದರು. ಕರ್ನಾಟಕದಲ್ಲಿ ಮಾತ್ರವಲ್ಲದೆ ಹಲವು ರಾಜ್ಯಗಳಲ್ಲಿ ಈ ಸೈಬರ್ ವಂಚಕರ ಗ್ಯಾಂಗ್ ವಿಸ್ತರಿಸಿಕೊಂಡಿದೆ. ಸದ್ಯ ಆರೋಪಿಗಳ ಅಕೌಂಟ್​ನಲ್ಲಿದ್ದ 60 ಲಕ್ಷ ರೂ ಹಣವನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ.

ಘಟನೆ ಹಿನ್ನೆಲೆ

ಬೆಂಗಳೂರಿನ ಶಿವಾಜಿನಗರ ನಿವಾಸಿ ಲಕ್ಷ್ಮೀ ರಾಮಮೂರ್ತಿಗೆ (74) ಖದೀಮರು ವಂಚಿಸಿದ್ದಾರೆ. ಮನಿ ಲ್ಯಾಂಡರಿಂಗ್ ಕೇಸ್ ಹೆಸರಿನಲ್ಲಿ ತಿಂಗಳಗಟ್ಟಲೆ ಡಿಜಿಟಲ್ ಅರೆಸ್ಟ್ ಮಾಡಿ ಬರೋಬ್ಬರಿ 24 ಕೋಟಿ ರೂ ವಂಚನೆ ಮಾಡಿದ್ದಾರೆ. ಲಕ್ಷ್ಮೀ ರಾಮಮೂರ್ತಿ ಅವರು ಈ ಹಿಂದೆ ದುಬೈನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿ ನಿವೃತ್ತಿಯಾಗಿದ್ದರು.

ಇದನ್ನೂ ಓದಿ: ಡಿಜಿಟಲ್​​ ಅರೆಸ್ಟ್​​ ಹೆಸರಲ್ಲಿ ವೃದ್ಧೆಯಿಂದ 24 ಕೋಟಿ ರೂ. ಸುಲಿಗೆ: ಬ್ಯಾಂಕ್​​ ಮ್ಯಾನೇಜರ್​​ ಸಮಯಪ್ರಜ್ಞೆಯಿಂದ ಪ್ರಕರಣ ಬೆಳಕಿಗೆ

ಬೆಂಗಳೂರು ಮತ್ತು ಮುಂಬೈನಲ್ಲಿ ಇದ್ದ ಆಸ್ತಿಗಳನ್ನು ಮಾರಾಟ ಮಾಡಿ ಅಮೆರಿಕಾದಲ್ಲಿರುವ ಮಕ್ಕಳ ಜೊತೆ ನೆಲೆಸಲು ಮುಂದ್ದಾಗಿದ್ದರು. ಆದರೆ ಇದೇ ಹಣದ ಮೇಲೆ ಕಣ್ಣು ಹಾಕಿದ್ದ ಸೈಬರ್ ಖದೀಮರು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಿಡಿಯೋ ಕರೆ ಮಾಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಮಾಡಿದ್ದೀರಾ, ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ ಮತ್ತು ಅಕೌಂಟ್ ಮನಿ ಲ್ಯಾಂಡರಿಂಗ್‌ಗೆ ಬಳಕೆಯಾಗಿದೆ. ನೀವು ಯಾರ ಜೊತೆಯೂ ಮಾತನಾಡಬಾರದು. ಎಲ್ಲಾ ಹಣವನ್ನು ಪರಿಶೀಲನೆಗೆ ಕಳುಹಿಸಿ ಎಂದು ಆರ್​ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಉಂಡ ಮನೆಗೆ ಕನ್ನ ಹಾಕಿದ ಆಸಾಮಿ: ಕರ್ನಾಟಕ ಬ್ಯಾಂಕ್​ಗೆ 16 ಲಕ್ಷ ರೂ ವಂಚನೆ

ಕಳೆದ ಜನವರಿಯಿಂದ ಮೇ ತಿಂಗಳವರೆಗೆ ನಿರಂತರವಾಗಿ ವೃದ್ದೆಯನ್ನು ಬೆದರಿಸಿದ್ದ ವಂಚಕರು, ಹಂತ ಹಂತವಾಗಿ ಬರೋಬ್ಬರಿ 24 ಕೋಟಿ ರೂ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಲಕ್ಷ್ಮೀ ಅವರಿಂದ ಬಂದ ಹಣವನ್ನು 20ಕ್ಕೂ ಹೆಚ್ಚು ಅಕೌಂಟ್​ಗಳಿಗೆ ಹಣ ವರ್ಗಾವಣೆ ಮಾಡಿದ್ದರು.

ವರದಿ: ವಿಕಾಸ್ ಕ್ರೈಂ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಹೇರಾ ಫೇರಿ 3’ ಚಿತ್ರದಿಂದ ಪರೇಶ್ ಹೊರ ನಡೆದ ವಿಚಾರ; ಅಚ್ಚರಿಯ ಹೇಳಿಕೆ ನೀಡಿದ ನಿರ್ದೇಶಕ – Kannada News | Hera Pheri 3 Controversy: Paresh Rawal Exits? Priyadarshan Reacts to Bollywood Rumors

ಬಾಲಿವುಡ್‌ನ ಅತ್ಯಂತ ಜನಪ್ರಿಯ ಕಾಮಿಡಿ ಫ್ರಾಂಚೈಸಿ ‘ಹೇರಾ ಫೇರಿ’ಯಲ್ಲಿ ಮೂರನೇ ಸಿನಿಮಾ ಬರುತ್ತಿದೆ. ಈ ಸಿನಿಮಾ ಆರಂಭದಿಂದಲೂ ಒಂದಲ್ಲಾ ಒಂದು ವಿವಾದಗಳಿಂದಲೇ ಸುದ್ದಿಯಾಗುತ್ತಿದೆ. ಚಿತ್ರದ ಹಕ್ಕುಗಳ ವಿಚಾರವಾಗಿ ಕಾನೂನು ಹೋರಾಟ ನಡೆಯುತ್ತಿರುವ ಬೆನ್ನಲ್ಲೇ, ಚಿತ್ರದ ಮುಖ್ಯ ಪಾತ್ರಧಾರಿ, ‘ಬಾಬುರಾವ್’ ಖ್ಯಾತಿಯ ಪರೇಶ್ ರಾವಲ್ ಈ ಚಿತ್ರದಿಂದ ಹೊರನಡೆದಿದ್ದಾರೆ ಎಂಬ ಬಲವಾದ ವದಂತಿ ಹಬ್ಬಿದೆ. ಅಷ್ಟೇ ಅಲ್ಲದೆ, ಅವರು ಪಡೆದಿದ್ದ 11 ಲಕ್ಷ ರೂ. ಸೈನಿಂಗ್ ಅಮೌಂಟ್ ಅನ್ನು ಶೇ. 15 ರಷ್ಟು ಬಡ್ಡಿಯೊಂದಿಗೆ ವಾಪಸ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಚಿತ್ರದ ನಿರ್ದೇಶಕ ಪ್ರಿಯದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ.

ಪರೇಶ್ ರಾವಲ್ ಚಿತ್ರದಿಂದ ಹೊರಹೋಗಿರುವ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಚಿತ್ರದ ನಿರ್ದೇಶಕ ಪ್ರಿಯದರ್ಶನ್ , ‘ಈ ವಿಷಯದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ’ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಬೆಂಕಿ ಇಲ್ಲದೆ ಹೊಗೆ ಆಡೋದಿಲ್ಲ ಎಂಬುದು ನೆಟ್ಟಿಗರ ವಾದ.

ಇದನ್ನೂ ಓದಿ: ‘ಹೇರಾ ಪೇರಿ 3’: ಮುನಿಸು ಮರೆತು ಅಕ್ಷಯ್ ಜೊತೆ ಕೈಜೋಡಿಸಿದ ಪರೇಶ್ ರಾವಲ್

ಪರೇಶ್ ರಾವಲ್ ಚಿತ್ರದಿಂದ ಹೊರನಡೆಯುತ್ತಿರುವುದು ಇದೇ ಮೊದಲೇನಲ್ಲ. 2025ರಲ್ಲೂ ಅವರು ಚಿತ್ರದಿಂದ ದಿಢೀರ್ ಹೊರನಡೆದಾಗ, ಮುಖ್ಯ ಭೂಮಿಕೆಯಲ್ಲಿದ್ದ ಅಕ್ಷಯ್ ಕುಮಾರ್ ಅವರು ಪರೇಶ್ ವಿರುದ್ಧ 25 ಕೋಟಿ ರೂ.ಗಳ ಮೊಕದ್ದಮೆ ಹೂಡಿದ್ದರು. ಆದರೆ ನಂತರ ಆ ಸಮಸ್ಯೆ ಬಗೆಹರಿದು ಪರೇಶ್ ರಾವಲ್ ಚಿತ್ರಕ್ಕೆ ಮರಳಿದ್ದರು.

ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟ ಅಕ್ಷಯ್ ಕುಮಾರ್, ‘ಹೇರಾ ಫೇರಿ 3 ಸದ್ಯಕ್ಕೆ ಸೆಟ್ಟೇರುತ್ತಿಲ್ಲ’ ಎಂದಿದ್ದರು. ಈ ಸಿನಿಮಾ 2027ರಲ್ಲಿ ಆರಂಭ ಆಗುವ ನಿರೀಕ್ಷೆ ಇದೆ.

ಪರೇಶ್ ಹಿಂದೇಟಿಗೆ ಕಾರಣ ಏನು?

ವರದಿಗಳ ಪ್ರಕಾರ, ಸಿನಿಮಾದ ಚಿತ್ರೀಕರಣ 2027ರಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಅಂದರೆ, ‘ಹೇರಾ ಫೇರಿ 3’ ತೆರೆಗೆ ಬರಲು 2027ರ ಅಂತ್ಯ ಅಥವಾ 2028ರ ತನಕ ಕಾಯಬೇಕಾಗುತ್ತದೆ. ಇನ್ನು ಸಂಭಾವನೆಯ ಒಪ್ಪಂದದ ಅನ್ವಯ, ಪರೇಶ್ ರಾವಲ್ ಅವರು ತಮ್ಮ ಪೂರ್ಣ ಪೇಮೆಂಟ್ ಪಡೆಯಲು ಕನಿಷ್ಠ ಎರಡು ವರ್ಷ ಕಾಯಬೇಕಾದ ಪರಿಸ್ಥಿತಿ ಇತ್ತು. ಇಷ್ಟು ಸುದೀರ್ಘ ಸಮಯ ಕಾಯಲು ಸಿದ್ಧರಿಲ್ಲದ ಕಾರಣವೇ ಅವರು ಚಿತ್ರದಿಂದ ಹೊರಹೋಗುವ ತೀರ್ಮಾನ ತಗೆದುಕೊಂಡಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉದ್ಯೋಗ ಭವಿಷ್ಯ: ಈ ವಾರ ಬಾಸ್‌ನಿಂದ ಮೆಚ್ಚುಗೆಯೋ ಅಥವಾ ಕೆಲಸದಲ್ಲಿ ಕಿರಿಕಿರಿಯೋ?: ಕೆರಿಯರ್ ಗ್ರಹಗತಿಯಲ್ಲಿ ಮಹತ್ವದ ಬದಲಾವಣೆ – Kannada News | Career Forecast May 24 30: Astrological Insights for Your Job Future

ಮೇ 24ರಿಂದ ಮೇ 30ರವರೆಗಿನ ಕೊನೆಯ ವಾರವಾಗಿದ್ದು ಗ್ರಹರ ದೃಷ್ಟಿಯಿಂದ ಉದ್ಯೋಗದಲ್ಲಿ ಉನ್ನತಿ, ಅವನತಿಗಳು ಆಗಲಿವೆ. ದೃಷ್ಟಿದೋಷವನ್ನು ಗ್ರಹರ ಸ್ತೋತ್ರದ ಮೂಲಕ ಕಡಿಮೆ ಮಾಡಿಕೊಳ್ಳಬಹುದು.

​​ಮೇಷ ರಾಶಿ :

​ಸ್ವಕ್ಷೇತ್ರದ ಮಂಗಳನ ಪ್ರಭಾವದಿಂದ ಉದ್ಯೋಗದಲ್ಲಿ ಧೈರ್ಯ ಹಾಗೂ ನಾಯಕತ್ವ ಗುಣ ಹೆಚ್ಚಲಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದ್ದು, ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಅಧಿಕಾರದಲ್ಲಿ ಪ್ರಗತಿ ಕಂಡುಬರಲಿದೆ.

​ವೃಷಭ ರಾಶಿ :

​ಸೂರ್ಯನ ಸ್ಥಿತಿಯಿಂದಾಗಿ ಉದ್ಯೋಗ ಬದಲಾವಣೆಗೆ ಯೋಚಿಸುವಿರಿ. ಮೇಲಾಧಿಕಾರಿಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬರಬಹುದು, ತಾಳ್ಮೆ ಇರಲಿ. ನವಮ ಸ್ಥಾನದ ಗ್ರಹಬಲದಿಂದಾಗಿ ವಿದೇಶಿ ಮೂಲದ ಕೆಲಸಗಳು ಅಥವಾ ದೂರದ ಪ್ರಯಾಣದ ಉದ್ಯೋಗ ಲಾಭದಾಯಕ.

​ಮಿಥುನ ರಾಶಿ :

​ಬುಧ, ಶುಕ್ರ, ಗುರುಗಳ ಶುಭ ಸಂಯೋಜನೆಯಿಂದ ಉದ್ಯೋಗದಲ್ಲಿ ಅತ್ಯುತ್ತಮ ಪ್ರಗತಿ ಕಾಣುವಿರಿ. ಬೌದ್ಧಿಕ ಕ್ಷೇತ್ರ, ಶಿಕ್ಷಣ, ಮತ್ತು ಸೃಜನಶೀಲ ಕೆಲಸಗಳಲ್ಲಿರುವವರಿಗೆ ಹೆಚ್ಚಿನ ಗೌರವ, ಪದೋನ್ನತಿ ಹಾಗೂ ಆರ್ಥಿಕ ಲಾಭ ಖಚಿತವಾಗಿ ಸಿಗಲಿದೆ.

​ಕರ್ಕಾಟಕ ರಾಶಿ :

​ರಾಶ್ಯಾಧಿಪತಿ ಚಂದ್ರನು ನೀಚಸ್ಥಾನದಲ್ಲಿದ್ದರೂ, ಉದ್ಯೋಗ ಸ್ಥಾನದ ಮೇಲಿರುವ ಮಂಗಳನ ದೃಷ್ಟಿಯಿಂದಾಗಿ ವೃತ್ತಿಯಲ್ಲಿ ದಿಢೀರ್ ಬದಲಾವಣೆಗಳಾಗಬಹುದು. ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಸಹೋದ್ಯೋಗಿಗಳನ್ನು ನಂಬುವಾಗ ಎಚ್ಚರಿಕೆ ವಹಿಸಿ.

ಸಿಂಹ ರಾಶಿ

​ನಿಮ್ಮ ರಾಶಿಯಲ್ಲಿ ಕೇತುವಿನ ಸ್ಥಿತಿಯಿದ್ದರೂ, ರಾಶ್ಯಾಧಿಪತಿ ಸೂರ್ಯನ ಬಲದಿಂದ ಉದ್ಯೋಗದಲ್ಲಿ ಸ್ಥಿರತೆ ಇರಲಿದೆ. ಸ್ವತಂತ್ರ ವೃತ್ತಿ ಅಥವಾ ವ್ಯಾಪಾರಸ್ಥರಿಗೆ ಉತ್ತಮ ಆದಾಯ ಬರಲಿದೆ. ಸರ್ಕಾರಿ ಕೆಲಸದ ಪ್ರಯತ್ನಗಳಿಗೆ ಸೂಕ್ತ ಫಲ ಸಿಗುವ ಸಾಧ್ಯತೆ ಇದೆ.

​ಕನ್ಯಾ ರಾಶಿ :

​ಉದ್ಯೋಗದಲ್ಲಿ ಕಠಿಣ ಸವಾಲುಗಳು ಎದುರಾಗಬಹುದು. ಆದರೆ ಶನಿಯ ಆರನೇ ರಾಶಿಯ ಪ್ರಭಾವದಿಂದಾಗಿ ಶತ್ರುಗಳು ಮತ್ತು ಸ್ಪರ್ಧಿಗಳ ಮೇಲೆ ಜಯ ಸಾಧಿಸುವಿರಿ. ಹಿರಿಯ ಅಧಿಕಾರಿಗಳ ಪ್ರೋತ್ಸಾಹದಿಂದ ಬಾಕಿ ಇರುವ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ.

​ತುಲಾ ರಾಶಿ :

​ಇದು ಲಗ್ನ ರಾಶಿಯಾಗಿದ್ದು, ನವಮದ ಶುಭ ಗ್ರಹಗಳ ದೃಷ್ಟಿ ಪೂರಕವಾಗಿದೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಕಲಾತ್ಮಕ, ವ್ಯಾಪಾರ ಹಾಗೂ ಸಲಹಾತ್ಮಕ ವೃತ್ತಿಯಲ್ಲಿರುವವರಿಗೆ ಅಪಾರ ಯಶಸ್ಸು ಮತ್ತು ಕೀರ್ತಿ ದೊರೆಯಲಿದೆ.

​ವೃಶ್ಚಿಕ ರಾಶಿ :

​ಚಂದ್ರನ ಇರುವಿಕೆಯಿಂದ ಮನಸ್ಸಿನಲ್ಲಿ ಉದ್ಯೋಗದ ಬಗ್ಗೆ ಅಸ್ಥಿರತೆ ಮೂಡಬಹುದು. ಆದರೆ ರಾಶ್ಯಾಧಿಪತಿ ಮಂಗಳನು ಷಷ್ಠದಲ್ಲಿ ಸ್ವಕ್ಷೇತ್ರ ಸ್ಥಿತನಾಗಿರುವುದರಿಂದ, ಪಾಲುದಾರಿಕೆ ವ್ಯವಹಾರ ಅಥವಾ ಸಾರ್ವಜನಿಕ ಸಂಪರ್ಕದ ಉದ್ಯೋಗಗಳಲ್ಲಿ ಉತ್ತಮ ಆರ್ಥಿಕ ಪ್ರಗತಿ ಮತ್ತು ಯಶಸ್ಸು ಸಿಗಲಿದೆ.

​ಧನು ರಾಶಿ :

​ರಾಶ್ಯಾಧಿಪತಿ ಗುರುವಿನ ದೃಷ್ಟಿಯಿಂದ ಹಾಗೂ ಶುಭ ಗ್ರಹರು ಸಂಯೋಗ ಹೊಂದುವುದರಿಂದ ವೃತ್ತಿಜೀವನದಲ್ಲಿ ದೊಡ್ಡ ತಿರುವು ಸಿಗಲಿದೆ. ಬ್ಯಾಂಕಿಂಗ್, ಬೋಧನೆ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿರುವವರಿಗೆ ಸಂಬಳ ಹೆಚ್ಚಳ ಹಾಗೂ ಉನ್ನತ ಸ್ಥಾನಮಾನ ದೊರೆಯಲಿದೆ.

​ಮಕರ ರಾಶಿ :

​ವೃತ್ತಿ ರಾಶಿಯಾಗಿದ್ದು, ಶನಿಯು ತೃತೀಯ ಸ್ಥಾನದಲ್ಲಿದ್ದು ಶ್ರಮಕ್ಕೆ ತಕ್ಕ ಪ್ರತಿಫಲ ತಡವಾಗಿ ಸಿಗಬಹುದು. ಉದ್ಯೋಗದಲ್ಲಿ ಕಠಿಣ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನಿರಂತರ ಪ್ರಯತ್ನದಿಂದಾಗಿ ಕೆಲಸದಲ್ಲಿ ಉನ್ನತ ಮಟ್ಟ ತಲುಪುವಿರಿ.

ಕುಂಭ ರಾಶಿ :

​ರಾಹು ನಿಮ್ಮ ರಾಶಿಯಲ್ಲಿ, ದ್ವಿತೀಯದಲ್ಲಿ ರಾಶಿಯ ಅಧಿಪತಿಯಾದ ಇದ್ದುದರಿಂದ ಶನಿಯು ಉದ್ಯೋಗದಲ್ಲಿ ರಕ್ಷಣೆಯನ್ನು ನೀಡುತ್ತಾನೆ. ತಾಂತ್ರಿಕ, ಸಂಶೋಧನೆ ಹಾಗೂ ಐಟಿ ಕ್ಷೇತ್ರದಲ್ಲಿರುವವರಿಗೆ ಹೊಸ ಆವಿಷ್ಕಾರಗಳಿಗೆ ಮನ್ನಣೆ ಸಿಗಲಿದೆ. ಶ್ರಮ ಹೆಚ್ಚಿದ್ದರೂ, ಆರ್ಥಿಕವಾಗಿ ಸ್ಥಿರತೆ ಮತ್ತು ಅಭಿವೃದ್ಧಿ ಕಂಡುಬರಲಿದೆ.

ಇದನ್ನೂ ಓದಿ: ಲಕ್ಷ್ಮಿ ನಾರಾಯಣ ಯೋಗ; ಮೇ 29 ರಿಂದ ಈ 4 ರಾಶಿಯವರು ಮುಟ್ಟಿದೆಲ್ಲಾ ಚಿನ್ನ!

ಮೀನ ರಾಶಿ :

​ಶನಿಯ ಪ್ರಭಾವದಿಂದಾಗಿ ಕೆಲಸದ ಒತ್ತಡ ಹೆಚ್ಚಿರಲಿದೆ. ಆದರೆ ಗುರು-ಬುಧ-ಶುಕ್ರರ ಶುಭ ದೃಷ್ಟಿಯಿಂದಾಗಿ ಹಿರಿಯರ ಮಾರ್ಗದರ್ಶನ ಸಿಗಲಿದ್ದು, ಕಷ್ಟದ ಪರಿಸ್ಥಿತಿಯನ್ನೂ ನಿಭಾಯಿಸುವಿರಿ. ಬರಹಗಾರರು, ಸಲಹೆಗಾರರು ಹಾಗೂ ಉಪನ್ಯಾಸಕರಿಗೆ ಇದು ಯಶಸ್ಸಿನ ಕಾಲ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡು ಸರ್ಕಾರದಿಂದಲೇ ಒಟಿಟಿ ಆರಂಭಿಸಲು ಸಿಎಂ ವಿಜಯ್‌ಗೆ ವಿಜಯ್ ಸೇತುಪತಿ ಮನವಿ – Kannada News | Kollywood actor Vijay Sethupathi requests Tamil Nadu CM Vijay to launch Government OTT Platform

ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಸೇತುಪತಿ ಇತ್ತೀಚೆಗೆ ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ (CM Vijay) ಅವರಿಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಪ್ರಾದೇಶಿಕ ಸಿನಿಮಾಗಳ ಪ್ರೋತ್ಸಾಹಕ್ಕಾಗಿ ತಮಿಳುನಾಡು ಸರ್ಕಾರವೇ ಸ್ವಂತ ಒಟಿಟಿ (OTT) ಪ್ಲಾಟ್‌ಫಾರ್ಮ್ ಪ್ರಾರಂಭಿಸುವ ಬಗ್ಗೆ ಯೋಚಿಸಬೇಕು ಎಂದು ಅವರು ವಿನಂತಿಸಿದ್ದಾರೆ. ವಿಜಯ್ ಸೇತುಪತಿ (Vijay Sethupathi) ಅವರ ಈ ಹೇಳಿಕೆಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಚಿತ್ರರಂಗದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.

ಇತ್ತೀಚಿನ ದಿನಗಳಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಬೆಳವಣಿಗೆಯ ಬಗ್ಗೆ ಮಾತನಾಡಿದ ಸೇತುಪತಿ, ಪ್ರಸ್ತುತ ಹಲವು ಒಟಿಟಿ ಸಂಸ್ಥೆಗಳು ಮಂದಗತಿಯನ್ನು ಎದುರಿಸುತ್ತಿವೆ. ಮೊದಲಿನಂತೆ ಚಂದಾದಾರರ ಸಂಖ್ಯೆ ಹೆಚ್ಚುತ್ತಿಲ್ಲ ಮತ್ತು ದೊಡ್ಡ ಮೊತ್ತದ ಹಣವನ್ನು ಕಂಟೆಂಟ್‌ಗಳ ಮೇಲೆ ಹೂಡಿಕೆ ಮಾಡಲು ಕಂಪನಿಗಳು ಹಿಂಜರಿಯುತ್ತಿವೆ. ಪ್ರಾದೇಶಿಕ ಚಿತ್ರೋದ್ಯಮ ಮತ್ತು ಸರ್ಕಾರಗಳು ತಮ್ಮದೇ ಆದ ಸ್ವಂತ ಡಿಜಿಟಲ್ ವೇದಿಕೆಯನ್ನು ಹೊಂದಲು ಇದುವೇ ಸರಿಯಾದ ಸಮಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ಈ ಹಿಂದೆ ಹಿರಿಯ ನಟ ಕಮಲ್ ಹಾಸನ್ ಅವರು ತಮಿಳು ಸಿನಿಮಾಗಳಿಗಾಗಿಯೇ ಪ್ರತ್ಯೇಕ ಒಟಿಟಿ ವೇದಿಕೆ ಇರಬೇಕು ಎಂದು ಹೇಳಿದ್ದನ್ನು ವಿಜಯ್ ಸೇತುಪತಿ ನೆನಪಿಸಿಕೊಂಡರು. ಕಮಲ್ ಹಾಸನ್ ಅವರ ಆಲೋಚನೆಯನ್ನು ಬೆಂಬಲಿಸಿದ ಅವರು, ತಮಿಳುನಾಡು ಸರ್ಕಾರದ ಒಡೆತನದ ಒಟಿಟಿ ವೇದಿಕೆಯು ಸ್ಥಳೀಯ ಚಿತ್ರ ನಿರ್ಮಾಪಕರು, ಕಲಾವಿದರು ಮತ್ತು ತಂತ್ರಜ್ಞರಿಗೆ ಆರ್ಥಿಕವಾಗಿ ಹಾಗೂ ವೃತ್ತಿಪರವಾಗಿ ಹೊಸ ಆಸರೆಯಾಗಲಿದೆ ಎಂದು ಹೇಳಿದರು.

ದೊಡ್ಡ ದೊಡ್ಡ ಒಟಿಟಿ ಸಂಸ್ಥೆಗಳಲ್ಲಿ ಸೂಕ್ತ ಪ್ರದರ್ಶನ ಕಾಣಲು ಹೆಣಗಾಡುವ ಸಣ್ಣ ಬಜೆಟ್‌ನ ಸಿನಿಮಾಗಳಿಗೆ ಮತ್ತು ಪ್ರಾದೇಶಿಕ ಕಥೆಗಳಿಗೆ ಇಂತಹ ಸರ್ಕಾರಿ ಒಟಿಟಿಗಳು ಹೊಸ ಜೀವ ನೀಡಬಲ್ಲವು. ಅಷ್ಟೇ ಅಲ್ಲದೆ, ಸಿನಿಮಾ ಮತ್ತು ಡಿಜಿಟಲ್ ಮಾಧ್ಯಮಗಳ ಮೂಲಕ ಸ್ಥಳೀಯ ಸಂಸ್ಕೃತಿ ಹಾಗೂ ಭಾಷೆಯನ್ನು ಮುಂದಿನ ಪೀಳಿಗೆಗೆ ಉಳಿಸಲು ಇದು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ‘ನಾನು ಅಷ್ಟು ಚೀಪ್ ಅಲ್ಲ, ಸಿಎಂ ವಿಜಯ್ ಮೇಲೆ ಅಸೂಯೆ ಇಲ್ಲ’: ರಜನಿಕಾಂತ್ ಸ್ಪಷ್ಟನೆ

ಈ ಹಿಂದೆ ಲೋಕೇಶ್ ಕನಕರಾಜ್ ನಿರ್ದೇಶನದ ಸೂಪರ್ ಹಿಟ್ ‘ಮಾಸ್ಟರ್’ ಸಿನಿಮಾದಲ್ಲಿ ವಿಜಯ್ ಮತ್ತು ವಿಜಯ್ ಸೇತುಪತಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. ಇವರಿಬ್ಬರ ಮುಖಾಮುಖಿಯನ್ನು ಪ್ರೇಕ್ಷಕರು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಇದೀಗ ವಿಜಯ್ ಸೇತುಪತಿ ಅವರು ತಮ್ಮ ಮಾಜಿ ಸಹನಟ ಹಾಗೂ ಮುಖ್ಯಮಂತ್ರಿ ವಿಜಯ್‌ಗೆ ಒಟಿಟಿ ಬಗ್ಗೆ ಸಲಹೆ ನೀಡಿರುವುದರಿಂದ ಈ ಸುದ್ದಿ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version