ತುಮಕೂರು, ಜನವರಿ 21: ಸಿದ್ಧಗಂಗಾ ಮಠದಲ್ಲಿ ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಪರಮಪೂಜ್ಯ ಡಾ. ಶಿವಕುಮಾರ ಸ್ವಾಮೀಜಿಗಳ 7ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವು ವೈಶಿಷ್ಟ್ಯಪೂರ್ಣವಾಗಿ ಜರುಗುತ್ತಿದೆ. ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸಿ ಗದ್ದುಗೆ ದರ್ಶನ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಕಲಾವಿದ ಮನು ಅವರು ತೆಂಗಿನ ಗರಿಗಳಿಂದ ರಚಿಸಿದ ಶಿವಕುಮಾರ ಸ್ವಾಮೀಜಿಗಳ ಸುಂದರ ಕಲಾಕೃತಿಯು ಗಮನ ಸೆಳೆದಿದೆ. ಈ ಕಲಾಕೃತಿ, ಸಂಪೂರ್ಣವಾಗಿ ತೆಂಗಿನ ಗರಿಗಳನ್ನು ಬಳಸಿ ತಯಾರಿಸಲಾಗಿದ್ದು, ಇದರ ನಿರ್ಮಾಣಕ್ಕೆ ಎಂಟು ತೆಂಗಿನ ಗರಿಗಳು ಬಳಕೆಯಾಗಿವೆ. ಕಲಾವಿದ ಮನು ಮತ್ತು ಅವರ ಟೀಮ್ ಗಜಸೇನಾ ಕಲಾವಿದರು ಸತತ 48 ಗಂಟೆಗಳ ಕಾಲ ಶ್ರಮವಹಿಸಿ ಈ ಮೂರ್ತಿಯನ್ನು ರೂಪಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಹರಿಯಾಣ, ಜನವರಿ 21: ವ್ಯಕ್ತಿಯೊಬ್ಬ ಹರಿಯಾಣದ ಹಿಸಾರ್ನಲ್ಲಿರುವ ಜಿಂದಾಲ್ ಟವರ್ ಏರಿ ಅಪಾಯಕಾರಿ ಸಾಹಸ(Stunt) ಮಾಡಿರುವ ವಿಡಿಯೋ ವೈರಲ್ ಆಗಿದೆ. ರಾಜಸ್ಥಾನದ ಮೋನು ಎಂಬ ಯುವಕ 282 ಅಡಿ ಎತ್ತರದ ಟವರ್ ಹತ್ತಿ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಅಪಾಯಕಾರಿ ಸ್ಟಂಟ್ ಮಾಡಿದ್ದಾರೆ. ಭದ್ರತೆ ಮತ್ತು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತವಾಗಿದೆ.
ಅಧಿಕಾರಿಗಳ ಪ್ರಕಾರ, ಜನವರಿ 18 ರ ಭಾನುವಾರದಂದು ಈ ಘಟನೆ ನಡೆದಿದ್ದು, ಮೋನು ಜಿಂದಾಲ್ ಟವರ್ ಪ್ರವೇಶಿಸಲು ಭದ್ರತಾ ನಿರ್ಬಂಧಗಳನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.
ವೈರಲ್ ಕ್ಲಿಪ್ನ ದೃಶ್ಯಗಳು ಆತ ಕಟ್ಟುಗಳ ಮೇಲೆ ಇರಿಸಲಾದ ಗಾಜಿನ ಬಾಟಲಿಗಳ ಮೇಲೆ ಸ್ಟಂಟ್ ಮಾಡಿದ್ದಾರೆ. ಭದ್ರತಾ ಸಾನಗಳಿಲ್ಲದೆ ಕೈಗಳನ್ನು ಬಳಸಿ ಟವರ್ನ ಹೊರಗಿನ ಚೌಕಟ್ಟಿನಲ್ಲಿ ತಲೆಕೆಳಗಾಗಿ ನೇತಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಅವರು ಬಿಯರ್ ಬಾಟಲಿಗಳು ಮತ್ತು ಕ್ಯಾನ್ ತುಂಬಿದ್ದ ಚೀಲವನ್ನು ಹೊತ್ತುಕೊಂಡು ಮೇಲೆ ಹೋಗಿದ್ದರು. ಅದನ್ನು ಸಾಹಸ ಪ್ರದರ್ಶನದ ಸಮಯದಲ್ಲಿ ಬಳಸಿದ್ದಾರೆ. ನೆಲದಿಂದ ನೂರಾರು ಅಡಿ ಎತ್ತರದಲ್ಲಿ ನಡೆಸಲಾದ ಈ ಅಪಾಯಕಾರಿ ಸಾಹಸ ಜೀವಕ್ಕೆ ಅಪಾಯ ತಂದೊಡ್ಡಬಹುದಿತ್ತು.
ಮೋನು ಕೆಳಗೆ ಇಳಿಯಲು ಪ್ರಾರಂಭಿಸುತ್ತಿದ್ದಂತೆ ಜಿಂದಾಲ್ ಟವರ್ ಭದ್ರತಾ ಸಿಬ್ಬಂದಿ ಚಟುವಟಿಕೆಯನ್ನು ಗಮನಿಸಿ ತಕ್ಷಣ ಮಧ್ಯಪ್ರವೇಶಿಸಿದರು. ಆತನನ್ನು ಬಂಧಿಸಿ ನಂತರ ಪೊಲೀಸರಿಗೆ ಹಸ್ತಾಂತರಿಸಲಾಯಿತು. ವಿಚಾರಣೆಯ ಸಮಯದಲ್ಲಿ ಯುವಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ ಮತ್ತು ಲಿಖಿತ ಕ್ಷಮೆಯಾಚಿಸಿದ್ದಾನೆ ಎಂದು ಟವರ್ ಆಪರೇಟರ್ ಕುಲದೀಪ್ ಸಿಂಗ್ ಹೇಳಿದ್ದಾರೆ.
ಅಂತಹ ಕೃತ್ಯವನ್ನು ಪುನರಾವರ್ತಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಭರವಸೆ ನೀಡಿದ್ದಾರೆ.
ಭವಿಷ್ಯದಲ್ಲಿ ಇದೇ ರೀತಿಯ ಉಲ್ಲಂಘನೆಗಳನ್ನು ತಡೆಗಟ್ಟಲು ಸ್ಥಳೀಯ ಅಧಿಕಾರಿಗಳು ಒಪಿ ಜಿಂದಾಲ್ ಟವರ್ನಲ್ಲಿ ಭದ್ರತಾ ವ್ಯವಸ್ಥೆಗಳ ಪರಿಶೀಲನೆಯನ್ನು ಪ್ರಾರಂಭಿಸಿದ್ದಾರೆ.
ನೆಲಮಂಗಲ, ಜನವರಿ 21: ಬೆಂಗಳೂರು (Bangalore) ಉತ್ತರ ತಾಲೂಕಿನ ಮಾಕಳಿ ಸಮೀಪ ಭೀಕರ ಸರಣಿ ಅಪಘಾತ ಸಂಭವಿಸಿ, ಬೈಕ್ ಸವಾರನೊಬ್ಬ ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ಬುಧವಾರ ನಡೆದಿದೆ. ಅಪಘಾತದಲ್ಲಿ ಮತ್ತೊಬ್ಬ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಸೊಲ್ಲಾಪುರದಿಂದ ಈರುಳ್ಳಿ ತುಂಬಿಕೊಂಡು ಬರುತ್ತಿದ್ದ ಕ್ಯಾಂಟರ್ ಲಾರಿ, ಆಟೋ ಹಾಗೂ ಎರಡು ಬೈಕ್ಗಳ ನಡುವೆ ಅಪಘಾತ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ರಸ್ತೆಯಲ್ಲಿ ಸಾಗುತ್ತಿದ್ದ ಆಟೋ ಸಡನ್ ಆಗಿ ಬ್ರೇಕ್ ಹಾಕಿದ್ದರಿಂದ ಹಿಂದೆ ಬರುತ್ತಿದ್ದ ಕ್ಯಾಂಟರ್ ಲಾರಿಗೆ ನಿಯಂತ್ರಣ ತಪ್ಪಿದೆ. ಪರಿಣಾಮವಾಗಿ ಲಾರಿ ಮೊದಲು ಆಟೋಗೆ ಡಿಕ್ಕಿ ಹೊಡೆದು, ಬಳಿಕ ಎದುರಿಗೆ ಬರುತ್ತಿದ್ದ ಬೈಕ್ಗಳ ಮೇಲೆ ಬಿದ್ದಿದೆ.
ಲಾರಿ ಬೈಕ್ ಮೇಲೆ ಉರುಳಿದ ಪರಿಣಾಮ ಒಬ್ಬ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಆತನನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ದೃಶ್ಯ ಅತ್ಯಂತ ಭೀಕರವಾಗಿದ್ದು, ರಸ್ತೆ ಮೇಲೆ ಈರುಳ್ಳಿ ಚೀಲಗಳು ಚೆಲ್ಲಾಪಿಲ್ಲಿಯಾಗಿವೆ.
ಮೂಟೆಗಳಲ್ಲಿ ಈರುಳ್ಳಿ ತುಂಬ್ಕೊಂಡು ಹೋದ ಜನ
ಅಚ್ಚರಿಯ ಸಂಗತಿ ಎಂದರೆ, ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದರೂ ಸಹ, ರಸ್ತೆ ಮೇಲೆ ಬಿದ್ದಿದ್ದ ಈರುಳ್ಳಿಯನ್ನು ಹೊತ್ತುಕೊಂಡು ಹೋಗಲು ಜನರು ಮುಗಿಬಿದ್ದರು. ಜನರು ಈರುಳ್ಳಿಗಾಗಿ ಮುಗಿಬಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡಿದ್ದು, ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿವೆ. ಮಾನವೀಯತೆ ಮರೆತ ಈ ವರ್ತನೆ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಘಟನೆ ಕುರಿತು ಮಾಹಿತಿ ಪಡೆದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ಹಾಗೂ ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ.
ವಿಡಿಯೋ & ವರದಿ: ಮಂಜುನಾಥ್, ಟಿವಿ9 ನೆಲಮಂಗಲ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಆಪ್ಟಿಕಲ್ ಇಲ್ಯೂಷನ್ ಚಿತ್ರImage Credit source: Social Media
ಆಪ್ಟಿಕಲ್ ಇಲ್ಯೂಷನ್ (Optical Illusion) ಒಗಟಿನ ಚಿತ್ರಗಳೇ ಹಾಗೆ, ನಮ್ಮನ್ನು ಗೊಂದಲಕ್ಕೀಡು ಮಾಡುತ್ತದೆ. ಕೆಲವೊಮ್ಮೆ ಈ ಒಗಟಿನ ಚಿತ್ರ ತಲೆಗೆ ಹುಳ ಬಿಡುತ್ತದೆ. ಎಷ್ಟೇ ಹರಸಾಹಸ ಪಟ್ಟರೂ ಉತ್ತರವಂತೂ ದೊರೆಯುವುದೇ ಇಲ್ಲ. ಇದೀಗ ಇಂತಹದ್ದೇ ಟ್ರಿಕ್ಕಿ ಒಗಟಿನ ಚಿತ್ರ ವೈರಲ್ ಆಗಿದೆ. ಈ ಚಿತ್ರದಲ್ಲಿರುವ ಸವಾಲು ಪಾರಿವಾಳವನ್ನು ಕಂಡು ಹಿಡಿಯುವುದು. 15 ಸೆಕೆಂಡುಗಳೊಳಗೆ ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯ ಇದೆಯೇ.
ಈ ಚಿತ್ರವು ಏನನ್ನು ಹೇಳುತ್ತದೆ?
ಇಲ್ಯೂಷನ್ ಚಿತ್ರ ನಿಮ್ಮ ಕಣ್ಣನ್ನು ಮೋಸಗೊಳಿಸುತ್ತದೆ. ಈ ಚಿತ್ರವು ಅದೇ ರೀತಿಯಿದ್ದು, ರಸ್ತೆ ಪಕ್ಕದಲ್ಲಿರುವ ದೊಡ್ಡ ದೊಡ್ಡ ಕಟ್ಟಡಗಳನ್ನು ನೀವು ನೋಡಬಹುದು. ಈ ರಸ್ತೆಯಲ್ಲಿ ಕಾರುಗಳು ಓಡಾಡುತ್ತಿದ್ದು, ಅವುಗಳ ಪಕ್ಕದಲ್ಲಿ ಲೈಟ್ ಕಂಬಗಳಿವೆ. ಇದೆಲ್ಲದರ ನಡುವೆ ಪಾರಿವಾಳವೊಂದಿದೆ. ಈ ಒಗಟು ಬಿಡಿಸಲು ನಿಮಗೆ ಹದಿನೈದು ಸೆಕೆಂಡುಗಳಷ್ಟು ಸಮಯವಿದೆ. ಈ ಸವಾಲನ್ನು ಸ್ವೀಕರಿಸಲು ಸಿದ್ಧವಿದ್ರೆ ನಿಮ್ಮ ಸಮಯ ಇದೀಗ ಆರಂಭವಾಗುತ್ತದೆ.
ಇದು ಟ್ರಿಕ್ಕಿ ಒಗಟಿನ ಚಿತ್ರವಾಗಿರುವುದರಿಂದ ಇಲ್ಯೂಷನ್ ಚಿತ್ರ ಬಿಡಿಸುವುದು ಕಷ್ಟ. ನೀವು ಈ ಒಗಟನ್ನು ಬಿಡಿಸುವಲ್ಲಿ ವಿಫಲರಾಗಿದ್ದೀರಬಹುದು. ಸೋತೆ ಎಂದು ಹೆಚ್ಚು ಚಿಂತಿಸಬೇಡಿ. ಈ ಕೆಳಗಿನ ಫೋಟೋವನ್ನು ನೋಡಿ.. ಪಾರಿವಾಳ ಎಲ್ಲಿದೆ ಎಂದು ನಿಮಗೆ ತಿಳಿಯುತ್ತದೆ. ನೀವು ಈ ಚಿತ್ರದಲ್ಲಿ ಪಾರಿವಾಳವನ್ನು ನೋಡಿದ್ದೀರಿ ಎಂದು ಭಾವಿಸುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ವಾಷಿಂಗ್ಟನ್, ಜನವರಿ 21: ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ (JD Vance)ಪತ್ನಿ ಉಷಾ ವ್ಯಾನ್ಸ್(Usha Vance) ನಾಲ್ಕನೇ ಮಗುವಿಗೆ ತಾಯಿಯಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ಉಷಾ ವ್ಯಾನ್ಸ್ ಖುದ್ದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ತಾವು ಗಂಡು ಮಗುವಿನ ಪೋಷಕರಾಗಲಿದ್ದು, ಜುಲೈನಲ್ಲಿ ಮಗುವನ್ನು ಬರಮಾಡಿಕೊಳ್ಳಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಉಷಾ ಮತ್ತು ಮಗು ಚೆನ್ನಾಗಿದ್ದಾರೆ ಮತ್ತು ಜುಲೈ ಅಂತ್ಯದಲ್ಲಿ ಮಗುವನ್ನು ಸ್ವಾಗತಿಸಲು ನಾವೆಲ್ಲರೂ ಎದುರು ನೋಡುತ್ತಿದ್ದೇವೆ.
ಈ ರೋಮಾಂಚಕಾರಿ ಮತ್ತು ಒತ್ತಡದ ಸಮಯದಲ್ಲಿ, ನಮ್ಮ ಕುಟುಂಬವನ್ನು ಅತ್ಯುತ್ತಮವಾಗಿ ನೋಡಿಕೊಳ್ಳುವ ಮಿಲಿಟರಿ ವೈದ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದಿದ್ದಾರೆ. ಜೆಡಿ ವ್ಯಾನ್ಸ್ ದಂಪತಿಗೆ ಈಗಾಗಲೇ ಮೂವರು ಮಕ್ಕಳಿದ್ದಾರೆ. ಮಕ್ಕಳ ಹೆಸರು ಇವಾನ್, ವಿವೇಕ್ ಮತ್ತು ಮಿರಾಬೆಲ್. ಉಷಾಗೆ 40 ವರ್ಷ ವಯಸ್ಸು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಮಾರು 60 ದೇಶಗಳ ಮೇಲೆ ವ್ಯಾಪಕ ಸುಂಕ ವಿಧಿಸಿ ವಿರಾಮಗೊಳಿಸಿದ ನಂತರ ವ್ಯಾನ್ಸ್ ಭಾರತಕ್ಕೆ ಭೇಟಿ ನೀಡಿದ್ದರು. ಜೆಡಿ ವ್ಯಾನ್ಸ್ ಪತ್ನಿ ಉಷಾ ಚಿಲುಕುರಿ ವ್ಯಾನ್ಸ್ ಆಂಧ್ರದವರು. ಉಷಾ ವ್ಯಾನ್ಸ್ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ಹುಟ್ಟಿದ್ದಾರೆ. ಅವರು ಯೇಲ್ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಬಿಎ ಪದವಿ ಪಡೆದರು ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಸ್ಕಾಲರ್ ಆಗಿದ್ದರು.
ಅವರು ಆರಂಭಿಕ ಆಧುನಿಕ ಇತಿಹಾಸದಲ್ಲಿ ಎಂಫಿಲ್ ಪಡೆದರು. ವ್ಯಾನ್ಸ್ ಅವರ ತಾಯಿ ಆಣ್ವಿಕ ಜೀವಶಾಸ್ತ್ರಜ್ಞರಾಗಿದ್ದರೆ, ಅವರ ತಂದೆ ಮೆಕ್ಯಾನಿಕಲ್ ಎಂಜಿನಿಯರ್.
ಉಷಾ ವ್ಯಾನ್ಸ್ ತಂದೆ ಮತ್ತು ಅಜ್ಜ ಇಬ್ಬರೂ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (ಐಐಟಿ) ಕೆಲಸ ಮಾಡಿದ್ದರು. ಅವರ ತಂಗಿ ಸ್ಯಾನ್ ಡಿಯಾಗೋದಲ್ಲಿ ಸೆಮಿಕಂಡಕ್ಟರ್ ಕಂಪನಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದಾರೆ. ಉಷಾ ವ್ಯಾನ್ಸ್ ಅವರ ಪೋಷಕರು 1970 ರ ದಶಕದ ಉತ್ತರಾರ್ಧದಲ್ಲಿ ಆಂಧ್ರಪ್ರದೇಶದಿಂದ ಅಮೆರಿಕಕ್ಕೆ ತೆರಳಿದ್ದರು.
ಉಷಾ ವ್ಯಾನ್ಸ್ ಜೆಡಿ ವ್ಯಾನ್ಸ್ ಅವರನ್ನು ಹೇಗೆ ಭೇಟಿಯಾದರು?
ಉಷಾ 2010 ರಲ್ಲಿ ಯೇಲ್ ಕಾನೂನು ಶಾಲೆಯ ವಿದ್ಯಾರ್ಥಿನಿಯಾಗಿದ್ದಾಗ ಜೆಡಿ ವ್ಯಾನ್ಸ್ ಅವರನ್ನು ಭೇಟಿಯಾದರು. ಒಂದು ಡೇಟ್ ನಂತರ ತಾನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದರು. 2015 ರಲ್ಲಿ, ಉಷಾ ವ್ಯಾನ್ಸ್ ಅಮೆರಿಕದ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರೊಂದಿಗೆ ಕೆಲಸ ಮಾಡುತ್ತಿದ್ದರು.
ನಂತರ ಅವರು ಲಾಸ್ ಏಂಜಲೀಸ್, ಸ್ಯಾನ್ ಫ್ರಾನ್ಸಿಸ್ಕೊ ಮತ್ತು ವಾಷಿಂಗ್ಟನ್, ಡಿಸಿಯಲ್ಲಿ ಕಚೇರಿಗಳನ್ನು ಹೊಂದಿರುವ ಕಾನೂನು ಸಂಸ್ಥೆಯಾದ ಯುಎಸ್ ಕಾನೂನು ಸಂಸ್ಥೆ ಮುಂಗರ್, ಟೋಲೆಸ್ ಓಲ್ಸನ್ ಎಲ್ ಎಲ್ ಪಿ ಯಲ್ಲಿ ವಕೀಲರಾದರು.
ಬೇವಿನ ಮರದ ಮಹತ್ವ ಮತ್ತು ಮನೆ ಹತ್ತಿರ ಇರುವುದರ ಶುಭಫಲಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ, ಸಾಮಾನ್ಯವಾಗಿ, ಬೇವಿನ ಮರವನ್ನು ಮನೆಯ ಹತ್ತಿರ ಇರಿಸುವುದರಿಂದ ಮನಸ್ಸಿನ ವಿಕಾರಗಳುಂಟಾಗಬಹುದು ಅಥವಾ ದುಷ್ಟ ಶಕ್ತಿಗಳು ಆವರಿಸಬಹುದು ಎಂಬಂತಹ ಋಣಾತ್ಮಕ ನಂಬಿಕೆಗಳು ಕೆಲವರಲ್ಲಿ ಇವೆ. ಆದರೆ, ಈ ಮರದ ಬಗ್ಗೆ ಧನಾತ್ಮಕ ಮತ್ತು ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದಾಗ ಅನೇಕ ಶುಭಫಲಗಳು ಗೋಚರಿಸುತ್ತವೆ.
ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಬೇವಿನ ಮರಕ್ಕೆ ವಿಶೇಷ ಸ್ಥಾನಮಾನವಿದೆ. ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಗಳ ಸುತ್ತಮುತ್ತ ಅಥವಾ ಗ್ರಾಮಗಳ ಚಾವಡಿಗಳಲ್ಲಿ (ಸಭೆ ಸೇರುವ ಸ್ಥಳಗಳು) ಬೇವಿನ ಮರಗಳನ್ನು ನೆಡುತ್ತಿದ್ದರು. ಬೇವಿನ ಮರವು ಆಲದ ಮರ ಮತ್ತು ಅರಳಿ ಮರದಂತೆ ಸಮುದಾಯ ಸಭೆಗಳಿಗೆ, ನ್ಯಾಯ ತೀರ್ಮಾನಗಳಿಗೆ ಸಾಕ್ಷಿಯಾಗಿ ನಿಲ್ಲುತ್ತಿತ್ತು.
ವೈಜ್ಞಾನಿಕವಾಗಿ ಹೇಳುವುದಾದರೆ, ಬೇವಿನ ಮರವು ನಮ್ಮ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದು ಶುದ್ಧ ಗಾಳಿಯನ್ನು ನೀಡುವುದರ ಮೂಲಕ ಉಸಿರಾಟದ ಪ್ರಕ್ರಿಯೆಗೆ ನೆರವಾಗುತ್ತದೆ. ಇದರ ತೊಗಟೆ, ಹಣ್ಣು ಮತ್ತು ಎಲೆಗಳು ಆಯುರ್ವೇದದಲ್ಲಿ ಔಷಧೀಯ ಗುಣಗಳನ್ನು ಹೊಂದಿದ್ದು, ಹಲವು ರೋಗಗಳಿಗೆ ಚಿಕಿತ್ಸೆಯಾಗಿ ಬಳಕೆಯಾಗುತ್ತವೆ. ಮನೆಯ ಸುತ್ತ ಬೇವಿನ ಮರ ಇರುವುದರಿಂದ ಕ್ರಿಮಿ ಕೀಟಗಳು ಮತ್ತು ರೋಗರುಜಿನಗಳು ಮನೆಯೊಳಗೆ ಪ್ರವೇಶಿಸುವುದಿಲ್ಲ. ಇದು ನೈಸರ್ಗಿಕ ಕೀಟನಾಶಕವಾಗಿ ಕಾರ್ಯನಿರ್ವಹಿಸುತ್ತದೆ.
ಆಧ್ಯಾತ್ಮಿಕವಾಗಿ, ಬೇವಿನ ಮರವನ್ನು ಸಾಕ್ಷಾತ್ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ, ವಿವಾಹ ಆಗದಿರುವವರು, ಪದೇ ಪದೇ ಕಷ್ಟಗಳು ಎದುರಿಸುತ್ತಿರುವವರು, ಮಾಟಮಂತ್ರದಂತಹ ನಕಾರಾತ್ಮಕ ಶಕ್ತಿಗಳಿಂದ ಬಳಲುತ್ತಿರುವವರು ಈ ಮರದ ಬಳಿ ಅರಿಶಿಣ-ಕುಂಕುಮ ಕಟ್ಟಿ ನಮಸ್ಕರಿಸುವುದರಿಂದ ಶುಭಫಲಗಳು ಪ್ರಾಪ್ತವಾಗುತ್ತವೆ ಎಂದು ನಂಬಲಾಗುತ್ತದೆ. ದೇವಿಯ ಆವಾಹನೆ ಈ ಮರದಲ್ಲಿದೆ ಎಂಬುದು ಪ್ರತೀತಿ.
ಬೇವಿನ ಮರದ ಮತ್ತೊಂದು ಪ್ರಮುಖ ಉಪಯೋಗವೆಂದರೆ ಮಕ್ಕಳಲ್ಲಿ ಸಿಡುಬು (ಅಮ್ಮ) ಕಾಣಿಸಿಕೊಂಡಾಗ. ಹಳ್ಳಿಗಳಲ್ಲಿ ಸಿಡುಬಿನಿಂದ ಬಳಲುತ್ತಿರುವ ಮಕ್ಕಳಿಗೆ ಬೇವಿನ ಸೊಪ್ಪನ್ನು ಹಾಸಿಗೆಯ ಮೇಲೆ ಹಾಕುವುದು ಅಥವಾ ಮನೆ ಬಾಗಿಲಿಗೆ ಕಟ್ಟುವ ಪದ್ಧತಿ ಇದೆ. ಬೇವಿನ ಸೊಪ್ಪನ್ನು ಗೋಮೂತ್ರದೊಂದಿಗೆ ಇಟ್ಟಾಗ, ಅದು ಬ್ಯಾಕ್ಟೀರಿಯಾಗಳ ಪ್ರವೇಶವನ್ನು ತಡೆದು, ರೋಗ ನಿವಾರಣೆಗೆ ಸಹಾಯ ಮಾಡುತ್ತದೆ. ಬೇವಿನ ಸೊಪ್ಪು ದೇವಿಯ ಸ್ವರೂಪ ಎಂದು ನಂಬಲಾಗುತ್ತದೆ.
ಜ್ಯೋತಿಷ್ಯದ ದೃಷ್ಟಿಯಿಂದ, ಬೇವಿನ ಮರವು ಶನಿ, ರಾಹು, ಕೇತು ಗ್ರಹಗಳಿಂದ ಉಂಟಾಗುವ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಕರ್ಮಫಲವನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿಲ್ಲವಾದರೂ, ಇದರ ಪ್ರಭಾವವನ್ನು ತಗ್ಗಿಸಬಹುದು. ಪ್ರಯಾಣಕ್ಕೆ ಹೊರಡುವಾಗ ಎರಡು ಬೇವಿನ ಎಲೆಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳುವುದು ಅಥವಾ ಒಂದು ಎಲೆಯನ್ನು ತಿಂದು ಹೋಗುವುದು ಶುಭಸೂಚಕವೆಂದು ಪರಿಗಣಿಸಲಾಗುತ್ತದೆ. ಬೇವಿನ ಮರವು ಜೀವನದಲ್ಲಿ ಸ್ಥಿರತೆ, ಉತ್ತಮ ಆರೋಗ್ಯ ಮತ್ತು ಮನಃಶಾಂತಿಯನ್ನು ಒದಗಿಸುತ್ತದೆ. ವಾಸ್ತುಶಾಸ್ತ್ರದ ಪ್ರಕಾರ, ಬೇವಿನ ಮರವು ಈಶಾನ್ಯ ಅಥವಾ ನೈಋತ್ಯ ದಿಕ್ಕಿನಲ್ಲಿ ಇದ್ದರೆ ಅತಿ ಹೆಚ್ಚು ಶುಭಫಲಗಳನ್ನು ನೀಡುತ್ತದೆ ಮತ್ತು ಮಂಗಳ ಯೋಗವನ್ನು ತರುತ್ತದೆ. ತಮಿಳುನಾಡು ಮುಂತಾದ ಪ್ರದೇಶಗಳಲ್ಲಿ ಬೇವಿನ ಮರಕ್ಕೆ ಅರಿಶಿಣ ಹಚ್ಚಿ ಕುಂಕುಮದ ಬೊಟ್ಟನ್ನು ಇಟ್ಟು ಪೂಜಿಸುವುದು ಸರ್ವೇಸಾಮಾನ್ಯ. ಒಟ್ಟಾರೆಯಾಗಿ, ಬೇವಿನ ಮರವು ಶುಭದ ಸಂಕೇತವಾಗಿದ್ದು, ಅದು ಮನೆ ಹತ್ತಿರ ಇರುವುದು ಹಲವು ಸಕಾರಾತ್ಮಕ ಲಾಭಗಳನ್ನು ತರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
WPL 2026: ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್ 4 ಅನ್ನು ಸೋಲಿನೊಂದಿಗೆ ಆರಂಭಿಸಿದ್ದ ಮುಂಬೈ ಇಂಡಿಯನ್ಸ್ ಇದೀಗ ಹ್ಯಾಟ್ರಿಕ್ ಸೋಲುಂಡಿದೆ. ಈ ಸೋಲುಗಳ ಹೊರತಾಗಿಯೂ ಹರ್ಮನ್ ಪ್ರೀತ್ ಕೌರ್ ಪಡೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲೇ ಉಳಿದುಕೊಂಡಿದೆ.
ಈ ಬಾರಿಯ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಮೊದಲ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಪರಾಜಯಗೊಂಡಿತ್ತು. ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಜೈಂಟ್ಸ್ ಪರ ಭರ್ಜರಿ ಜಯ ಸಾಧಿಸಿ ಒಟ್ಟು ನಾಲ್ಕು ಅಂಕಗಳನ್ನು ಪಡೆದುಕೊಂಡಿದ್ದರು.
ಈ ಎರಡು ಗೆಲುವುಗಳ ಬಳಿಕ ಮುಂಬೈ ಇಂಡಿಯನ್ಸ್ ಬ್ಯಾಕ್ ಟು ಬ್ಯಾಕ್ ಸೋಲನುಭವಿಸಿದೆ. ಯುಪಿ ವಾರಿಯರ್ಸ್ ವಿರುದ್ಧ ಎರಡೂ ಪಂದ್ಯಗಳಲ್ಲೂ ಸೋತಿದ್ದ ಮುಂಬೈ ಇಂಡಿಯನ್ಸ್ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲೂ ಮುಗ್ಗರಿಸಿದೆ.
ಅಂದರೆ ಮುಂಬೈ ಇಂಡಿಯನ್ಸ್ ಆಡಿದ 6 ಪಂದ್ಯಗಳಲ್ಲಿ 4ರಲ್ಲಿ ಸೋಲನುಭವಿಸಿದೆ. ಈ ಸೋಲಿನ ಹೊರತಾಗಿಯೂ ಮುಂಬೈ ಪಡೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಇದಕ್ಕೆ ಮುಖ್ಯ ಕಾರಣ ಉಳಿದ ಮೂರು ತಂಡಗಳ ನೆಟ್ ರನ್ ರೇಟ್ ಮೈನಸ್ನಲ್ಲಿರುವುದು.
ಅಂದರೆ ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಸ್, ಗುಜರಾತ್ ಜೈಂಟ್ಸ್ ತಲಾ 2 ಮ್ಯಾಚ್ ಗಳಲ್ಲಿ ಮಾತ್ರ ಜಯ ಸಾಧಿಸಿದೆ. ಈ ಎರಡು ಗೆಲುವುಗಳ ಹೊರತಾಗಿಯೂ ಈ ತಂಡಗಳ ನೆಟ್ ರನ್ ರೇಟ್ ಮೈನಸ್ ನಲ್ಲಿದೆ. ಇಲ್ಲಿ ಯುಪಿ ವಾರಿಯರ್ಸ್ -0.483 ನೆಟ್ ರನ್ ರೇಟ್ ಹೊಂದಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ -0.586 ನೆಟ್ನಲ್ಲೇ ಉಳಿದಿದೆ. ಇನ್ನು ಗುಜರಾತ್ ಜೈಂಟ್ಸ್ ಹೊಂದಿರುವ ನೆಟ್ ರನ್ ರೇಟ್ -0.864.
ಆದರೆ ಇತ್ತ ಎರಡು ಪಂದ್ಯಗಳಲ್ಲಿ ಮಾತ್ರ ಗೆದ್ದಿರುವ ಮುಂಬೈ ಇಂಡಿಯನ್ಸ್ +0.046 ನೆಟ್ ರನ್ ರೇಟ್ ಹೊಂದಿದೆ. ಇದೇ ಕಾರಣದಿಂದಾಗಿ ಹ್ಯಾಟ್ರಿಕ್ ಸೋಲುಗಳ ಹೊರತಾಗಿಯೂ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಕಾಯ್ದುಕೊಳ್ಳುವಲ್ಲಿ ಹರ್ಮನ್ಪ್ರೀತ್ ಕೌರ್ ಪಡೆ ಯಶಸ್ವಿಯಾಗಿದೆ.
ಬೆಂಗಳೂರು, ಜನವರಿ 21: ಬೆಂಗಳೂರಿನಲ್ಲಿ (Bangalore) ಮಾದಕವಸ್ತು ಕಳ್ಳಸಾಗಣೆ ಜಾಲದ ಮೇಲೆ ಕೇಂದ್ರ ಅಪರಾಧ ವಿಭಾಗ (CCB) ಪೊಲೀಸರು ದಾಳಿ ನಡೆಸಿದ್ದು, ನೈಜೀರಿಯಾದ ಪ್ರಜೆಯೊಬ್ಬನನ್ನು ಬಂಧಿಸಿ 5.15 ಕೋಟಿ ರೂ. ಮೌಲ್ಯದ 2.5 ಕೆಜಿ ಎಂಡಿಎಂಎ ಜೊತೆಗೆ 300 ಎಕ್ಸ್ಟಸಿ ಪಿಲ್ಸ್ ವಶಪಡಿಸಿಕೊಂಡಿದ್ದಾರೆ. ಮಾರತ್ತಹಳ್ಳಿ ಬಳಿಯ ಮುನೆಕೊಳಲುವಿನ ಬಾಡಿಗೆ ಮನೆಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ನೈಜೀರಿಯಾ ಮೂಲದ ಅರ್ನೆಸ್ಟ್ ಒನ್ಯೆಕಾಚಿ ಉಗಾ (45) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಅಧಿಕಾರಿಗಳು ಅರ್ನೆಸ್ಟ್ ಒನ್ಯೆಕಾಚಿ ಇದ್ದ ಬಾಡಿಗೆ ನಿವಾಸದ ಮೇಲೆ ದಾಳಿ ನಡೆಸಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಕಾಡುಗೋಡಿ ಮತ್ತು ಹೆಣ್ಣೂರು ಪೊಲೀಸರು ಈ ಹಿಂದೆ ಇದೇ ರೀತಿಯ ಡ್ರಗ್ಸ್ ಪ್ರಕರಣಗಳಲ್ಲಿ ಬಂಧಿಸಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಜೈಲಿನಿಂದ ಬಿಡುಗಡೆಯಾದ ನಂತರ ಆತ ಮತ್ತೆ ಡ್ರಗ್ಸ್ ಮಾರಾಟ ಚಟುವಟಿಕೆಗಳನ್ನು ಪ್ರಾರಂಭಿಸಿದ್ದ ಎನ್ನಲಾಗಿದೆ.
ಆತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಸಿಸಿಬಿ ಮಾದಕ ದ್ರವ್ಯ ನಿಗ್ರಹ ವಿಭಾಗವು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಎನ್ಡಿಪಿಎಸ್ ಕಾಯ್ದೆಯಡಿ ಹೆಚ್ಚಿನ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಆತನಿಗೆ ಎಲ್ಲಿಂದ ಡ್ರಗ್ಸ್ ಪೂರೈಕೆಯಾಗುತ್ತಿತ್ತು, ಇತರ ಆರೋಪಿಗಳ ಜತೆಗಿನ ಸಂಪರ್ಕ ಇತ್ಯಾದಿ ಎಲ್ಲ ಮಾಹಿತಿಗಳನ್ನು ಸಿಸಿಬಿ ಪೊಲೀಸರು ಕಲೆಹಾಕುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಚಿತ್ರ ಕಳೆದ ವರ್ಷ ಡಿಸೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಪ್ರೇಕ್ಷಕರು ಈ ಚಿತ್ರವನ್ನು ಸಾಕಷ್ಟು ಇಷ್ಟಪಟ್ಟಿದ್ದಾರೆ. ಬಿಡುಗಡೆಯಾದ ಒಂದೂವರೆ ತಿಂಗಳ ನಂತರವೂ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ‘ಧುರಂಧರ್’ (Dhurandhar) ವಿಶ್ವಾದ್ಯಂತ 1300 ಕೋಟಿ ರೂ. ಗಳಿಸಿದೆ. ಈಗ ಚಿತ್ರದ ಟೀಸರ್ ಬಗ್ಗೆ ಹೊಸ ಮಾಹಿತಿ ಸಿಕ್ಕಿದೆ.
‘ಧುರಂದರ್’ ಚಿತ್ರದಲ್ಲಿ ರಣವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ, ಆರ್. ಮಾಧವನ್, ಅರ್ಜುನ್ ರಾಂಪಾಲ್, ರಾಕೇಶ್ ಬೇಡಿ, ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಧುರಂಧರ್’ ಚಿತ್ರದ ಕೊನೆಯಲ್ಲಿ, ಚಿತ್ರಕ್ಕೆ ಎರಡನೇ ಪಾರ್ಟ್ ಬರಲಿದೆ ಎಂದು ಘೋಷಿಸಲಾಯಿತು. ಎರಡನೇ ಭಾಗವಾದ ‘ಧುರಂಧರ್: ದಿ ರಿವೆಂಜ್’ ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಎರಡನೇ ಭಾಗದ ಟೀಸರ್ ಸಖತ್ ರಾ ಆಗಿರೋ ನಿರೀಕ್ಷೆ ಇದೆ.
ನಿರ್ದೇಶಕ ಆದಿತ್ಯ ಧರ್ ಪ್ರೇಕ್ಷಕರ ನಾಡಿಮಿಡಿತವನ್ನು ಚೆನ್ನಾಗಿ ತಿಳಿದಿದ್ದಾರೆ. ಆದ್ದರಿಂದ, ಪ್ರೇಕ್ಷಕರಿಂದ ಯಾವುದೇ ಅಸಮಾಧಾನವನ್ನು ತಪ್ಪಿಸಲು, ಅವರು ‘ಧುರಂಧರ್ 2: ದಿ ರಿವೆಂಜ್’ ಚಿತ್ರದ ಟೀಸರ್ ಅನ್ನು ಮೊದಲಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಹೆಚ್ಚು ಶಕ್ತಿಶಾಲಿಯಾಗಿ ಮಾಡಿದ್ದಾರೆ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಎ ಪ್ರಮಾಣಪತ್ರ ದೊರೆತಿದೆ.
ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ) ಜನವರಿ 19ರಂದು ಈ ಟೀಸರ್ ಅನ್ನು ಅನುಮೋದಿಸಿ ಎ ಪ್ರಮಾಣಪತ್ರವನ್ನು ನೀಡಿದೆಯಂತೆ. ಈ ಟೀಸರ್ನ ಅವಧಿ ಸುಮಾರು 1 ನಿಮಿಷ 48 ಸೆಕೆಂಡುಗಳು. ಪ್ರೇಕ್ಷಕರು ‘ಧುರಂಧರ್ 2: ದಿ ರಿವೆಂಜ್’ ಚಿತ್ರದ ಟೀಸರ್ನಲ್ಲಿ ಬಹಳಷ್ಟು ಆಕ್ಷನ್ ಮತ್ತು ಹಿಂಸೆಯನ್ನು ನೋಡುತ್ತಾರೆ. ಈ ಮೊದಲು ಬಂದ ‘ಟಾಕ್ಸಿಕ್’ ಟೀಸರ್ ಕೂಡ ರಾ ಆಗಿತ್ತು. ಈಗ ಈ ಟೀಸರ್ ಕೂಡ ಹಾಗೆಯೇ ಇರುವ ನಿರೀಕ್ಷೆ ಇದೆ.
‘ಧುರಂಧರ್ 2: ದಿ ರಿವೆಂಜ್’ ಚಿತ್ರದ ಟೀಸರ್ ಸನ್ನಿ ಡಿಯೋಲ್ ಅವರ ‘ಬಾರ್ಡರ್ 2’ ಜೊತೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂಬ ವರದಿಗಳಿವೆ. ಅಂದರೆ, ಬಾರ್ಡರ್ 2 ಚಿತ್ರವನ್ನು ವೀಕ್ಷಿಸಲು ಚಿತ್ರಮಂದಿರಕ್ಕೆ ಹೋಗುವ ಪ್ರೇಕ್ಷಕರು, ಮಧ್ಯಂತರದಲ್ಲಿ ಅಥವಾ ಆರಂಭದಲ್ಲಿ ಧುರಂಧರ್ 2 ಚಿತ್ರದ ಟೀಸರ್ ಅನ್ನು ನೋಡುತ್ತಾರೆ.
ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರವು ಕಂದಹಾರ್ ವಿಮಾನ ಅಪಹರಣ, 2001 ರ ಸಂಸತ್ತಿನ ದಾಳಿ ಮತ್ತು 26/11 ಮುಂಬೈ ದಾಳಿಯ ನಂತರ ಗುಪ್ತಚರ ಸಂಸ್ಥೆಗಳ ಚಟುವಟಿಕೆಗಳನ್ನು ಆಧರಿಸಿದೆ. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸನ್ನು ಕಂಡಿದೆ.
ಕಾನ್ಪುರ, ಜನವರಿ 21: ಇಬ್ಬರದ್ದೂ ಪ್ರೇಮ ವಿವಾಹ(Love Marriage), ಪೋಷಕರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದರು. ಹಾಲು,ಜೇನಿನಂತೆ ಸುಖವಾಗಿ ಸಂಸಾರ ಮಾಡಿಕೊಂಡಿರಬೇಕಾದ ಮಹಿಳೆ ಪರ ಪುರುಷರ ಸಂಗ ಮಾಡಿ ಕೊಲೆಯಾಗಿದ್ದಾಳೆ. ಮದುವೆಯಾಗಿ ನಾಲ್ಕೇ ನಾಲ್ಕು ತಿಂಗಳು ಕಳೆದಿತ್ತು, ಪತಿ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ತನ್ನ ಪತ್ನಿ ಮೂವರು ಪುರುಷರೊಂದಿಗೆ ಮಲಗಿದ್ದನ್ನು ನೋಡಿ ಆಘಾತಕ್ಕೊಳಗಾದ ಪತಿ ಬೇರೆ ಆಲೋಚನೆಯನ್ನೇ ಮಾಡದೆ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ.
ಮೃತದೇಹವನ್ನು ಕಂಬಳಿಯಲ್ಲಿ ಸುತ್ತಿ ಮರುದಿನ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿ ಸಚಿನ್ ಸಿಂಗ್ ಕಳೆದ ಒಂದು ತಿಂಗಳಿನಿಂದ ತನ್ನ ಪತ್ನಿ ಶ್ವೇತಾ ಸಿಂಗ್ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಅವರುತಮ್ಮ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿದ್ದರು ಮತ್ತು ನ್ಯಾಯಾಲಯದಲ್ಲಿ ತಮ್ಮ ಮದುವೆಯನ್ನು ನೋಂದಾಯಿಸಿದ್ದರು.
ಸಚಿನ್ ಪೊಲೀಸರಿಗೆ ನೀಡಿದ ಹೇಳಿಕೆಯ ಪ್ರಕಾರ, ತನ್ನ ಹೆಂಡತಿಯ ನಡವಳಿಕೆಯ ಬಗ್ಗೆ ಅನುಮಾನ ಮೂಡಿತ್ತು. ತಾನು ಕೆಲಸಕ್ಕೆಂದು ಹೊರಗೆ ಹೋಗಿದ್ದಾಗ, ಮಹಾರಾಜಪುರದ ಎಂಜಿನಿಯರಿಂಗ್ ಕಾಲೇಜು ಬಳಿ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳೊಂದಿಗೆ ಆಕೆ ಸಂಬಂಧ ಬೆಳೆಸಿಕೊಂಡಿದ್ದಳು ಎಂದು ಪತಿ ಆರೋಪಿಸಿದ್ದಾರೆ.
ಎರಡು ದಿನಗಳ ಹಿಂದೆ ತನ್ನ ಪತ್ನಿಗೆ ತಾನು ಹಳ್ಳಿಗೆ ಪ್ರಯಾಣಿಸುತ್ತಿರುವುದಾಗಿ ತಿಳಿಸಿದ್ದಾಗಿಯೂ, ಆ ರಾತ್ರಿ ಹಿಂತಿರುಗಲಿಲ್ಲವೆಂದು ಹೇಳಿ ಮನೆಗೆ ಬಂದಿದ್ದಾಗಿಯೂ ಸಚಿನ್ ಪೊಲೀಸರಿಗೆ ತಿಳಿಸಿದ್ದಾರೆ. ರಾತ್ರಿ ಅನಿರೀಕ್ಷಿತವಾಗಿ ಹಿಂತಿರುಗಿದಾಗ ತನ್ನ ಪತ್ನಿ ಇಬ್ಬರು ಪುರುಷರೊಂದಿಗೆ ಹಾಸಿಗೆಯ ಮೇಲೆ ಮಲಗಿರುವುದನ್ನು ಕಂಡಿದ್ದಾಗಿ ಹೇಳಿಕೊಂಡಿದ್ದಾರೆ.
ತನ್ನ ಮೊಬೈಲ್ ಫೋನ್ನಲ್ಲಿ ವೀಡಿಯೊ ರೆಕಾರ್ಡ್ ಮಾಡಲು ಪ್ರಾರಂಭಿಸಿದೆ, ನಂತರ ತನ್ನ ಪತ್ನಿ ಆ ವ್ಯಕ್ತಿಗಳನ್ನು ತನ್ನ ಮೇಲೆ ಹಲ್ಲೆ ಮಾಡಿದ್ದರು ಎಂದರು. ಪೊಲೀಸರು ಎಲ್ಲರನ್ನೂ ಠಾಣೆಗೆ ಕರೆದುಕೊಂಡು ಹೋಗಿದ್ದರು. ಸಚಿನ್ ಅಧಿಕಾರಿಗಳಿಗೆ ಈ ವಿಷಯವನ್ನು ಮುಂದುವರೆಸಲು ಇಷ್ಟವಿಲ್ಲ ಇದನ್ನು ಪರಿಹರಿಸಲು ಬಯಸುತ್ತೇನೆ ಎಂದು ಹೇಳಿ ಮನೆಗೆ ಬಂದಿದ್ದರು.
ಮನೆಗೆ ಹಿಂದಿರುಗಿದ ನಂತರ, ಪತ್ನಿ ಆತನನ್ನು ಬಿಟ್ಟು ಆ ಇಬ್ಬರೊಂದಿಗೆ ವಾಸಿಸುವುದಾಗಿ ಬೆದರಿಕೆ ಹಾಕಿದ್ದಳು ನಂತರ ಇಬ್ಬರ ನಡುವೆ ಜಗಳ ನಡೆದಿತ್ತು. ಕೋಪದ ಭರದಲ್ಲಿ ತನ್ನ ಹೆಂಡತಿಯನ್ನು ಕತ್ತು ಹಿಸುಕಿ ಕೊಂದನೆಂದು ಸಚಿನ್ ಹೇಳಿದ್ದಾನೆ. ಆಕೆಯ ದೇಹವನ್ನು ಕಂಬಳಿಯಲ್ಲಿ ಸುತ್ತಿ ಬಾಡಿಗೆ ಕೋಣೆಯಲ್ಲಿ ಬಿಟ್ಟು ಹೋಗಿದ್ದ.
ಮರುದಿನ, ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಕಂಬಳಿಯಲ್ಲಿ ಶವ ಪ್ತತೆಯಾಗಿತ್ತು, ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಲಾಗಿದೆ. ಮೃತದೇಹದ ಪ್ರಾಥಮಿಕ ಪರೀಕ್ಷೆ ನಡೆಯುತ್ತಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.