ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳ ಪರಿಷ್ಕರಣೆಗೆ ನಿರ್ಧರಿಸಿದ ರಾಜ್ಯ ಸರ್ಕಾರ – Kannada News | Karnataka Congress to Revise Gruhalakshmi and Gruhajyothi Beneficiary Lists

ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳ ಪರಿಷ್ಕರಣೆ

ಬೆಂಗಳೂರು, ಮೇ 25: ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ನಿನ್ನೆ (ಮೇ 24) ನಡೆದ ಎಸ್ಐಆರ್ ಸಭೆಯಲ್ಲಿ ಈ ಕುರಿತು ವಿಸ್ತೃತವಾಗಿ ಚರ್ಚಿಸಲಾಗಿದ್ದು, ಫಲಾನುಭವಿಗಳ ಅರ್ಹತೆಯನ್ನು ಸಮಗ್ರವಾಗಿ ಪರಿಶೀಲಿಸಲು ಸರಕಾರ ಮುಂದಾಗಿದೆ. ಈ ನಿರ್ಧಾರಕ್ಕೆ ಪ್ರಮುಖ ಕಾರಣಗಳೆಂದರೆ, ಯೋಜನೆಯಲ್ಲಿ ಪಾರದರ್ಶಕತೆ ಮತ್ತು ಅರ್ಹ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ದೊರೆಯುವಂತೆ ಮಾಡುವುದಾಗಿದೆ.

ಗೃಹಲಕ್ಷ್ಮಿ ಯೋಜನೆಯಡಿ ಹಣವು ಮೃತಪಟ್ಟವರ ಹೆಸರಿನಲ್ಲಿಯೂ ಸಂದಾಯವಾಗುತ್ತಿರುವ ಹಲವಾರು ಪ್ರಕರಣಗಳು ವರದಿಯಾಗಿವೆ. ಇದು ಸರಕಾರಿ ಹಣದ ದುರುಪಯೋಗಕ್ಕೆ ಕಾರಣವಾಗುತ್ತಿದೆ. ಅಲ್ಲದೆ, ತೆರಿಗೆ ಪಾವತಿಸುವವರು ಕೂಡ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳ ಲಾಭ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ಯೋಜನೆಗಳ ಮುಖ್ಯ ಉದ್ದೇಶ ಆರ್ಥಿಕವಾಗಿ ಹಿಂದುಳಿದವರಿಗೆ ನೆರವು ನೀಡುವುದಾಗಿದ್ದು, ಹೀಗಾಗಿ ತೆರಿಗೆ ಪಾವತಿಸುವವರನ್ನು ಈ ವ್ಯಾಪ್ತಿಯಿಂದ ಹೊರಗಿಡಲು ಚಿಂತನೆ ನಡೆಸಲಾಗಿದೆ. ಇದಲ್ಲದೆ, ಒಂದೇ ಮನೆಯಲ್ಲಿ ಇಬ್ಬಿಬ್ಬರಿಗೆ ಗೃಹಲಕ್ಷ್ಮಿ ಹಣ ಜಮೆಯಾಗುತ್ತಿರುವ ಅಕ್ರಮಗಳು ಸಹ ಬೆಳಕಿಗೆ ಬಂದಿದ್ದು, ಈ ಬಗ್ಗೆಯೂ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ

ಇದನ್ನೂ ಓದಿ:  ಅನ್ನಭಾಗ್ಯ ಅಕ್ಕಿ ವಿತರಣೆಯಲ್ಲಿ ಗೊಂದಲ, ಸಂಕಷ್ಟದಲ್ಲಿ ಸಿಲುಕಿದ್ಯಾ ಗ್ಯಾರಂಟಿ ಯೋಜನೆ?

ಈ ಎಲ್ಲಾ ಅಕ್ರಮಗಳನ್ನು ಮತ್ತು ಅನರ್ಹ ಫಲಾನುಭವಿಗಳನ್ನು ಗುರುತಿಸಿ ಪಟ್ಟಿಯಿಂದ ಕೈಬಿಡುವ ಸಲುವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​​ ನೇತೃತ್ವದಲ್ಲಿ ಸಮಗ್ರ ಪರಿಶೀಲನೆಗೆ ಚಿಂತನೆ ನಡೆಸಲಾಗಿದೆ. ಪ್ರಸ್ತುತ, ರಾಜ್ಯದಲ್ಲಿ 1.24 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಬೃಹತ್ ಪಟ್ಟಿಯನ್ನು ಹೊಸದಾಗಿ ರೂಪಿಸಲಾಗುವ ಕಂಡೀಷನ್‌ಗಳು ಮತ್ತು ಗೈಡ್‌ಲೈನ್ಸ್‌ಗಳ ಆಧಾರದ ಮೇಲೆ ಸಂಪೂರ್ಣವಾಗಿ ಪರಿಷ್ಕರಿಸಲಾಗುತ್ತದೆ. ಈ ಸಂಬಂಧ ಶೀಘ್ರದಲ್ಲೇ ಹೊಸ ನಿಯಮಾವಳಿಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

RCB ಅಲ್ಲ, ಬಲಿಷ್ಠ ತಂಡವನ್ನು ಹೆಸರಿಸಿದ ಅಕ್ಷರ್ ಪಟೇಲ್ – Kannada News | Axar Patel Backs SRH as the Most Dangerous Team Ahead of IPL Playoffs

IPL 2026: ಐಪಿಎಲ್ 2026ರ ಲೀಗ್ ಹಂತದ ರೋಚಕ ಪಂದ್ಯಗಳು ಮುಕ್ತಾಯಗೊಂಡಿದ್ದು, ಪ್ಲೇಆಫ್ ಹಂತದ ಪೈಪೋಟಿಗೆ ವೇದಿಕೆ ಸಿದ್ಧವಾಗಿದೆ. ಈ ಮಹತ್ವದ ಘಟ್ಟಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡದ ನಾಯಕ ಅಕ್ಷರ್ ಪಟೇಲ್ ಅವರು ನೀಡಿರುವ ಒಂದು ಹೇಳಿಕೆ ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಮೇ 24 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ  ಪಂದ್ಯದಲ್ಲಿ ಕೆಕೆಆರ್ ವಿರುದ್ಧ 40 ರನ್‌ಗಳ ಭರ್ಜರಿ ಜಯ ಸಾಧಿಸಿದ ನಂತರ ಮಾತನಾಡಿದ ಅಕ್ಷರ್, ಮುಂಬರುವ ಪ್ಲೇಆಫ್‌ನಲ್ಲಿರುವ ಬಲಿಷ್ಠ ತಂಡ ಯಾವುದೆಂದು ಹೆಸರಿಸಿದ್ದಾರೆ.

ಪ್ಲೇಆಫ್​ನಲ್ಲಿ ಕಾಣಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್, ಸನ್​ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂದ್ಯಗಳನ್ನಾಡಿದೆ. ಈ ತಂಡಗಳಲ್ಲಿ ಯಾವ ಟೀಮ್ ಬಲಿಷ್ಠ ಎಂಬ ಪ್ರಶ್ನೆಯನ್ನು ಅಕ್ಷರ್ ಪಟೇಲ್ ಮುಂದಿಡಲಾಗಿತ್ತು. ಇದಕ್ಕೆ ಮರು ಯೋಜಿಸದೇ ಅಕ್ಷರ್ ಪಟೇಲ್ ನೀಡಿದ ಉತ್ತರ- ಸನ್‌ರೈಸರ್ಸ್ ಹೈದರಾಬಾದ್ (SRH)

ಅಕ್ಷರ್ ಪಟೇಲ್ ಮಾತುಗಳಲ್ಲೇ ಹೇಳುವುದಾದರೆ…

“ನನ್ನ ಪ್ರಕಾರ ಈ ಬಾರಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಅತ್ಯಂತ ಬಲಿಷ್ಠವಾಗಿ ಕಾಣುತ್ತಿದೆ. ಆ ತಂಡದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಒಮ್ಮೆ ರನ್ ಗಳಿಸಲು ಆರಂಭಿಸಿದರೆ, ಎದುರಾಳಿ ಬೌಲರ್‌ಗಳಿಗೆ ಅವರನ್ನು ತಡೆಯುವುದು ತುಂಬಾ ಕಷ್ಟವಾಗುತ್ತದೆ. ಹೀಗಾಗಿ ಪ್ಲೇಆಫ್‌ನಲ್ಲಿ ಅವರೇ ಅತ್ಯಂತ ಬಲಿಷ್ಠ ತಂಡ.” ಎಂದು ತಿಳಿಸಿದ್ದಾರೆ.

SRH ‘ಟಾಪ್ 3’ ಬ್ಯಾಟರ್‌ಗಳು:

ಅಕ್ಷರ್ ಪಟೇಲ್ ಅವರ ಈ ಮಾತುಗಳಿಗೆ ಈ ಸೀಸನ್‌ನ ಅಂಕಿ-ಅಂಶಗಳೇ ಸಾಕ್ಷಿಯಾಗಿವೆ. ಪ್ರಸ್ತುತ ಐಪಿಎಲ್​ನಲ್ಲಿ SRH ತಂಡದ ಅಗ್ರ ಕ್ರಮಾಂಕದ ಮೂವರು ಬ್ಯಾಟರ್‌ಗಳು ಧೂಳೆಬ್ಬಿಸುತ್ತಿದ್ದಾರೆ…

  • ಅಭಿಷೇಕ್ ಶರ್ಮಾ: ಸನ್​ರೈಸರ್ಸ್ ಹೈದರಾಬಾದ್ ತಂಡ ಆರಂಭಿಕ ದಾಂಡಿಗ ಅಭಿಷೇಕ್ ಶರ್ಮಾ 563 ರನ್ ಕಲೆಹಾಕಿದ್ದಾರೆ.
  • ಇಶಾನ್ ಕಿಶನ್: ಎಸ್​ಆರ್​ಹೆಚ್​ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿರುವ ಇಶಾನ್ ಕಿಶನ್ ಈವರೆಗೆ ಬಾರಿಸಿರುವುದು ಬರೋಬ್ಬರಿ 569 ರನ್​ಗಳು.
  • ಹೆನ್ರಿಕ್ ಕ್ಲಾಸೆನ್: ಸನ್​ರೈಸರ್ಸ್ ಹೈದರಾಬಾದ್ ಪರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿರುವ ಹೆನ್ರಿಕ್ ಕ್ಲಾಸೆನ್ 606 ರನ್​ಗಳಿಸಿ ಅಬ್ಬರಿಸಿದ್ದಾರೆ.

ಇಲ್ಲಿ ಆರಂಭಿಕ ದಾಂಡಿಗ ಟ್ರಾವಿಸ್ ಹೆಡ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರೂ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಹಾಗೂ ಹೆನ್ರಿಕ್ ಕ್ಲಾಸೆನ್ ಭರ್ಜರಿ ಬ್ಯಾಟಿಂಗ್​ನೊಂದಿಗೆ ಸನ್​ರೈಸರ್ಸ್ ಹೈದರಾಬಾದ್ ತಂಡವು ಪ್ಲೇಆಫ್​ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಹೀಗಾಗಿಯೇ ಅಕ್ಷರ್ ಪಟೇಲ್ ಸನ್​ರೈಸರ್ಸ್ ಹೈದರಾಬಾದ್​ನ ಟಾಪ್ ಬ್ಯಾಟರ್​ಗಳು ಡೇಂಜರಸ್. ಅವರ ಒಮ್ಮೆ ಕ್ರೀಸ್ ಕಚ್ಚಿ ನಿಂತರೆ ನಿಯಂತ್ರಿಸುವುದು ಕಷ್ಟ ಎಂದಿದ್ದಾರೆ. ಇದೇ ಕಾರಣದಿಂದಾಗಿ ಸನ್​ರೈಸರ್ಸ್ ಹೈದರಾಬಾದ್​ ತಂಡವು ಪ್ಲೇಆಫ್​ನಲ್ಲಿರುವ ಬಲಿಷ್ಠ ತಂಡ ಅಕ್ಷರ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.

ಸನ್​ರೈಸರ್ಸ್ ಹೈದರಾಬಾದ್ ಎದುರಾಳಿ ಯಾರು?

18 ಅಂಕಗಳೊಂದಿಗೆ ಪ್ಲೇಆಫ್​ಗೆ ಪ್ರವೇಶಿಸಿರುವ ಸನ್​ರೈಸರ್ಸ್ ಹೈದರಾಬಾದ್ ತಂಡವು ಎಲಿಮಿನೇಟರ್ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಎಸ್​ಆರ್​ಹೆಚ್ ಎದುರಾಳಿ ರಾಜಸ್ಥಾನ್ ರಾಯಲ್ಸ್. ಆರ್​ಆರ್ ವಿರುದ್ಧ ಗೆದ್ದರೆ ಎಸ್​ಆರ್​ಹೆಚ್ ದ್ವಿತೀಯ ಕ್ವಾಲಿಫೈಯರ್​ಗೇರಲಿದೆ. ದ್ವಿತೀಯ ಕ್ವಾಲಿಫೈಯರ್​ನಲ್ಲಿ ಮೊದಲ ಕ್ವಾಲಿಫೈಯರ್​ನಲ್ಲಿ ಸೋತ ತಂಡದೊಡನೆ ಮುಖಾಮುಖಿಯಾಗಲಿದೆ.

ಇದನ್ನೂ ಓದಿ:  IPL 2026: ಐಪಿಎಲ್ ಪ್ಲೇಆಫ್ ವೇಳಾಪಟ್ಟಿ ಇಲ್ಲಿದೆ

ಅಂದರೆ ಎಲಿಮಿನೇಟರ್ ಪಂದ್ಯವಾಡುವ ತಂಡವು ಎರಡು ಪಂದಗಳಲ್ಲಿ ಜಯ ಸಾಧಿಸಿದರೆ ಮಾತ್ರ ಫೈನಲ್​ಗೆ ಅರ್ಹತೆ ಪಡೆಯಲಿದೆ. ಅತ್ತ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್​ಗೆ ಎಂಟ್ರಿ ಕೊಡಲಿದೆ. ಹೀಗಾಗಿ ಸನ್​ರೈಸರ್ಸ್ ಹೈದರಾಬಾದ್ ಪಾಲಿಗೆ ಮುಂದಿನ ಮ್ಯಾಚ್ ಮಾಡು ಇಲ್ಲವೇ ಮಡಿ ಪಂದ್ಯ.

Source link

Video: ನೆಲದಿಂದ ನೂರಾರು ಅಡಿ ಎತ್ತರದಲ್ಲಿ ನಡುಕ ಹುಟ್ಟಿಸುವ ಅಪಘಾತ, ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ, ಬೆಚ್ಚಿ ಬೀಳಿಸುವ ವಿಡಿಯೋ – Kannada News | Mid Air Collision in Austria Sends Woman Paraglider Crashing in Terrifying Incident

ವಿಯೆನ್ನಾ, ಮೇ 25: ಆಸ್ಟ್ರಿಯಾದ ರಮಣೀಯ ಸ್ಕ್ಮಿಟೆನ್‌ಹೋಹೆ ಪರ್ವತದ ಮೇಲೆ ಮೇ 23 ರಂದು ಸಂಭವಿಸಿದ ಭೀಕರ ವೈಮಾನಿಕ ಅಪಘಾತದಲ್ಲಿ, 44 ವರ್ಷದ ಸಬ್ರಿನಾ ಎಂಬ ಮಹಿಳೆ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಕೆ ಆಕಾಶದಲ್ಲಿ ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದಾಗ, ‘ಸೆಸ್ನಾ 172’ ಎಂಬ ಸಣ್ಣ ವಿಮಾನವೊಂದು ಇದ್ದಕ್ಕಿದ್ದಂತೆ ಬಂದು ಅವರ ಪ್ಯಾರಾಚೂಟ್‌ಗೆ ಡಿಕ್ಕಿ ಹೊಡೆದಿದೆ.

ವಿಮಾನದ ರೆಕ್ಕೆ ಮತ್ತು ಪ್ರೊಪೆಲ್ಲರ್ ತಗುಲಿ ಪ್ಯಾರಾಗ್ಲೈಡರ್‌ನ ಮೇಲಿನ ಭಾಗ ಸಂಪೂರ್ಣವಾಗಿ ಚೂರುಚೂರಾಗಿ ಮಹಿಳೆ ಸಾವಿರಾರು ಅಡಿ ಎತ್ತರದಿಂದ ನೇರ ನೆಲಕ್ಕೆ ಧುಮುಕಿದ್ದಾರೆ. ಈ ಭಯಾನಕ ಪತನದ ಮಧ್ಯೆಯೂ ಧೈರ್ಯ ಕಳೆದುಕೊಳ್ಳದ ಸಬ್ರಿನಾ, ಕೊನೆಕ್ಷಣದಲ್ಲಿ ತಮ್ಮ ಬ್ಯಾಕಪ್ (ತುರ್ತು ಮೀಸಲು) ಪ್ಯಾರಾಚೂಟ್ ಅನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ ಮಾಡಿದ್ದಾರೆ. ಇದರಿಂದಾಗಿ ಅವರು ಮರಗಳ ಮಧ್ಯೆ ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇಷ್ಟು ದೊಡ್ಡ ಘೋರ ಅಪಘಾತ ನಡೆದರೂ ಸಬ್ರಿನಾ ಅವರಿಗೆ ಕೇವಲ ಸಣ್ಣಪುಟ್ಟ ಮೂಗೇಟುಗಳಾಗಿದ್ದು, ವಿಮಾನದ ಪೈಲಟ್ ಕೂಡ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಬ್ರಿನಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ಬೆಚ್ಚಿಬೀಳಿಸುವ ರಕ್ಷಣೆಯ ವೀಡಿಯೊ ಸದ್ಯ ಜಾಗತಿಕವಾಗಿ ಭಾರಿ ವೈರಲ್ ಆಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ಹುಳುಕು ಹಲ್ಲಿನ ಬದಲು ಸರಿ ಇದ್ದ ಹಲ್ಲು ಕಿತ್ತ ವೈದ್ಯ – Kannada News | Woman Alleges Wrong Tooth Extraction at JLN Hospital

ಅಜ್ಮೀರ್, ಮೇ 25: ಅಜ್ಮೀರ್​ನ ಜವಾಹರಲಾಲ್ ನೆಹರು ಆಸ್ಪತ್ರೆಯ ದಂತ ವಿಭಾಗದಲ್ಲಿ ಶುಕ್ರವಾರ ವೈದ್ಯರ ನಿರ್ಲಕ್ಷ್ಯದಿಂದಾಗಿ ರೋಗಿಯೊಬ್ಬರ ತಪ್ಪು ಹಲ್ಲು ಹೊರತೆಗೆದ ಘಟನೆ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಶಬಾನಾ ಖಾನ್ ಕಳೆದ ಎರಡು ತಿಂಗಳಿನಿಂದ ತೀವ್ರ ಹಲ್ಲು ನೋವಿನಿಂದ ಬಳಲುತ್ತಿದ್ದರು. ಆಸ್ಪತ್ರೆಯ ವೈದ್ಯರು ಅವರ ಒಂದು ಹಲ್ಲು ಹುಳುಕಾಗಿದ್ದು, ಅದನ್ನು ತೆಗೆಯಬೇಕೆಂದು ಸಲಹೆ ನೀಡಿದ್ದರು. ಅದರಂತೆ ಶುಕ್ರವಾರ ಶಬಾನಾ ತಮ್ಮ ಪತಿಯೊಂದಿಗೆ ಚಿಕಿತ್ಸೆಗೆ ಬಂದಿದ್ದರು. ಆದರೆ, ವೈದ್ಯರು ನೋವಿದ್ದ ಹಲ್ಲಿನ ಬದಲಿಗೆ ಪಕ್ಕದಲ್ಲಿದ್ದ ಆರೋಗ್ಯಕರ ಹಲ್ಲನ್ನು ಹೊರತೆಗೆದಿದ್ದಾರೆ ಎಂದು ಶಬಾನಾ ಆರೋಪಿಸಿದ್ದಾರೆ.

ಶಸ್ತ್ರಚಿಕಿತ್ಸೆಯ ಸಮಯದಲ್ಲಿ ತನಗೆ ತೀವ್ರ ನೋವಾಗುತ್ತಿದ್ದು, ತಪ್ಪು ಹಲ್ಲು ತೆಗೆಯಲಾಗುತ್ತಿದೆ ಎಂದು ವೈದ್ಯರಿಗೆ ಪದೇ ಪದೇ ಹೇಳಿದರೂ ಅವರು ಕೇಳಲಿಲ್ಲ. ವೈದ್ಯರು ತಮ್ಮ ಸಹೋದ್ಯೋಗಿಗಳೊಂದಿಗೆ ಮಾತನಾಡುವುದರಲ್ಲಿ ನಿರತರಾಗಿದ್ದರಿಂದಲೇ ಈ ನಿರ್ಲಕ್ಷ್ಯ ನಡೆದಿದೆ ಎಂದು ಶಬಾನಾ ದೂರಿನಲ್ಲಿ ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದ್ದು, ಸಿಬ್ಬಂದಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದರಿಂದ ಆವರಣದಲ್ಲಿ ತೀವ್ರ ಘರ್ಷಣೆ ಮತ್ತು ಗದ್ದಲ ಉಂಟಾಯಿತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Bengaluru Air Quality: ಬೆಂಗಳೂರಿನ ಗಾಳಿ ಈಗ ತುಂಬಾ ಸೇಫ್! ರಾಜ್ಯದ ಈ ಜಿಲ್ಲೆಯಲ್ಲಿದೆ ಅತ್ಯಂತ ಶುದ್ಧ ವಾತಾವರಣ – Kannada News | Karnataka Air Quality Today: Bengaluru Registers ‘Good’ AQI on May 25

ಬೆಂಗಳೂರು, ಮೇ 25: ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ ಚುರುಕಾಗಿರುವುದರಿಂದ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯ (AQI) ಗಣನೀಯವಾಗಿ ಕಡಿಮೆಯಾಗಿದೆ. ಇಂದು ಬಿಡುಗಡೆಯಾದ ವರದಿಯ ಪ್ರಕಾರ, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟವು ಅತ್ಯಂತ ಆರೋಗ್ಯಕರ ಮಟ್ಟದಲ್ಲಿದೆ.

ಮುಖ್ಯಾಂಶಗಳು

  • ಮಳೆಯ ಕಾರಣದಿಂದ ಬೆಂಗಳೂರಿನ ಇಂದಿನ ವಾಯು ಗುಣಮಟ್ಟ ತೃಪ್ತಿಕರವಾಗಿದೆ.
  • ಗದಗ ಜಿಲ್ಲೆಯಲ್ಲಿ ಇಂದು ರಾಜ್ಯದಲ್ಲೇ ಅತಿ ಶುದ್ಧ ಗಾಳಿ ದಾಖಲಾಗಿದೆ.
  • ಕಲಬುರಗಿಯಲ್ಲಿ ವಾಯು ಮಾಲಿನ್ಯ ಸೂಚ್ಯಂಕವು ತೀವ್ರ ಅಪಾಯಕಾರಿ ಮಟ್ಟ ತಲುಪಿದೆ.

ಬೆಂಗಳೂರಿನ ಇಂದಿನ AQI ಮಟ್ಟ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ವಾಯು ಗುಣಮಟ್ಟ ಸೂಚ್ಯಂಕ (AQI) 47ರಷ್ಟಿದೆ. ಇದನ್ನು ಹವಾಮಾನ ಇಲಾಖೆಯ ಮಾನದಂಡಗಳ ಪ್ರಕಾರ ‘ಉತ್ತಮ’ (Good) ವರ್ಗ ಎಂದು ಪರಿಗಣಿಸಲಾಗುತ್ತದೆ. ಕಳೆದ ಕೆಲವು ದಿನಗಳಿಂದ ನಗರದ ಹಲವೆಡೆ ಸುರಿದ ಮಳೆಯಿಂದಾಗಿ ವಾತಾವರಣದಲ್ಲಿದ್ದ ಧೂಳಿನ ಕಣಗಳು (PM2.5 ಮತ್ತು PM10) ನೆಲಕಚ್ಚಿದ್ದು, ಮಾಲಿನ್ಯ ಮುಕ್ತ ಹಸಿರು ವಾತಾವರಣ ನಿರ್ಮಾಣವಾಗಿದೆ. ಸಾರ್ವಜನಿಕರು ಹಾಗೂ ಮಕ್ಕಳು ಯಾವುದೇ ಆರೋಗ್ಯದ ಆತಂಕವಿಲ್ಲದೆ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದಾಗಿದೆ.

ಕರ್ನಾಟಕದ ಇತರೆ ನಗರಗಳ ವಾಯು ಗುಣಮಟ್ಟ ಹೇಗಿದೆ?

ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರೆ ಪ್ರಮುಖ ನಗರಗಳಲ್ಲೂ ಇಂದಿನ ವಾಯು ಗುಣಮಟ್ಟ ತೃಪ್ತಿಕರವಾಗಿದೆ. ಮಳೆಯ ಪ್ರಭಾವದಿಂದಾಗಿ ಉತ್ತರ ಮತ್ತು ಕರಾವಳಿ ಕರ್ನಾಟಕದ ಭಾಗಗಳಲ್ಲಿ ಅತ್ಯಂತ ಶುದ್ಧವಾದ ಗಾಳಿ ದಾಖಲಾಗಿದೆ. ಬೆಳಗಾವಿಯಲ್ಲಿ ಅತ್ಯಂತ ಕಡಿಮೆ ಅಂದರೆ 16 AQI ದಾಖಲಾಗಿದ್ದು, ಅತ್ಯುತ್ತಮ ವಾತಾವರಣವಿದೆ. ಇಂದಿನ ವರದಿಯ ಪ್ರಕಾರ ಗದಗದಲ್ಲಿ 18 AQI ನೊಂದಿಗೆ ಗಾಳಿಯ ಗುಣಮಟ್ಟ ಅತ್ಯಂತ ಶ್ರೇಷ್ಠ ಮಟ್ಟದಲ್ಲಿದೆ.

ಕೊಪ್ಪಳದಲ್ಲಿ 21 ಹಾಗೂ ಚಿಕ್ಕಬಳ್ಳಾಪುರದಲ್ಲಿ 25 AQI ದಾಖಲಾಗಿದೆ. ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ಭಾಗಗಳಲ್ಲೂ ಮಳೆಯ ಮುನ್ಸೂಚನೆ ಇರುವುದರಿಂದ AQI ಮಟ್ಟ 50 ರ ಒಳಗೇ ಕಾಯ್ದುಕೊಂಡಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ದೃಶ್ಯಂ 3’ ಬಜೆಟ್ ಎಷ್ಟು? ಜಾರ್ಜ್‌ಕುಟ್ಟಿ ಪಾತ್ರಕ್ಕೆ ಮೋಹನ್‌ಲಾಲ್ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ – Kannada News | Drishyam 3 Budget Revealed: Mohanlal’s Staggering Salary and Cast Remuneration

ಮೋಹನ್‌ಲಾಲ್ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ದೃಶ್ಯಂ 3’ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ಕಲೆಕ್ಷನ್‌ನಲ್ಲಿ ಹೊಸ ದಾಖಲೆ ಬರೆಯುತ್ತಿರೋದು ಗೊತ್ತೇ ಇದೆ. ಇದರ ನಡುವೆ, ಈ ಚಿತ್ರದ ಒಟ್ಟು ಬಜೆಟ್ ಎಷ್ಟು ಮತ್ತು ಇದರಲ್ಲಿ ನಟಿಸಿರುವ ಪ್ರಮುಖ ಪಾತ್ರಧಾರಿಗಳು ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬ ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ.

ಬಿಗ್ ಬಜೆಟ್‌ನ ಸಿನಿಮಾ

‘ರಿಪಬ್ಲಿಕ್ ವರ್ಲ್ಡ್’ ವರದಿಯ ಪ್ರಕಾರ, ‘ದೃಶ್ಯಂ 3’ ಚಿತ್ರವನ್ನು ಈ ಸರಣಿಯ ಉಳಿದ ಎರಡು ಚಿತ್ರಕ್ಕಿಂತ ಹೆಚ್ಚಿನ ಬಜೆಟ್​​ನಲ್ಲಿ ನಿರ್ಮಿಸಲಾಗಿದೆಯಂತೆ. ನಾಲ್ಕು ದಿನಕ್ಕೆ 141 ಕೋಟಿ ರೂಪಾಯಿ ಗಳಿಸಿರೋ ಈ ಸಿನಿಮಾ, ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ.

ಚಿತ್ರದ ನಟ-ನಟಿಯರ ಸಂಭಾವನೆ ವಿವರ:

ಮೋಹನ್‌ಲಾಲ್ (ಜಾರ್ಜ್‌ಕುಟ್ಟಿ): ಚಿತ್ರದ ಮುಖ್ಯ ನಾಯಕ ಮೋಹನ್‌ಲಾಲ್ ಈ ಭಾಗಕ್ಕೆ ಬರೋಬ್ಬರಿ 20 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. 2013ರ ಮೊದಲ ಭಾಗಕ್ಕೆ ಕೇವಲ 5-6 ಕೋಟಿ ಹಾಗೂ ಎರಡನೇ ಭಾಗಕ್ಕೆ 10-12 ಕೋಟಿ ಪಡೆದಿದ್ದ ಅವರು, ಈ ಬಾರಿ ತಮ್ಮ ಸಂಭಾವನೆಯನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ.

ಅನ್ಸಿಬಾ ಹಾಸನ್ (ಅಂಜು ಜಾರ್ಜ್): ಜಾರ್ಜ್‌ಕುಟ್ಟಿ ಹಿರಿಯ ಮಗಳ ಪಾತ್ರ ಮಾಡಿರುವ ಅನ್ಸಿಬಾ ಅವರಿಗೆ ಈ ಬಾರಿ ಭಾರಿ ಬೇಡಿಕೆ ಸಿಕ್ಕಿದ್ದು, ಸುಮಾರು 1 ಕೋಟಿ ರೂಪಾಯಿ ಸಂಭಾವನೆ ಜೇಬಿಗಿಳಿಸಿದ್ದಾರೆ.

ಮೀನಾ (ರಾಣಿ ಜಾರ್ಜ್): ಜಾರ್ಜ್‌ಕುಟ್ಟಿ ಪತ್ನಿಯಾಗಿ ನಟಿಸಿರುವ ಮೀನಾ ಅವರು 75 ಲಕ್ಷ ರೂಪಾಯಿ ಪಡೆದಿದ್ದಾರೆ. ಹಿಂದಿನ ಭಾಗಗಳಿಗೆ ಇವರು 15 ಮತ್ತು 25 ಲಕ್ಷ ಪಡೆದಿದ್ದರು.

ಸಿದ್ದಿಕಿ (ಪ್ರಭಾಕರ್): ಹಿರಿಯ ನಟ ಸಿದ್ದಿಕಿ ಅವರು ತಮ್ಮ ಅದ್ಭುತ ನಟನೆಗೆ 60 ಲಕ್ಷ ರೂಪಾಯಿ ಸಂಭಾವನೆ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: ‘ದೃಶ್ಯಂ 3’ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಕಣ್ಣೀರು ಹಾಕಿದ ನಟ ಮೋಹನ್‌ಲಾಲ್

ಎಸ್ತರ್ ಅನಿಲ್ (ಅನು ಜಾರ್ಜ್): ಕಿರಿಯ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿರುವ ಎಸ್ತರ್ ಅನಿಲ್ 25 ಲಕ್ಷ ರೂಪಾಯಿ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸ್ಟಾರ್ ಹೀರೋ ನೀಡಿದ ಆ ಒಂದು ಸಲಹೆಯನ್ನು ಇಂದಿಗೂ ಪಾಲಿಸುತ್ತಿದ್ದಾರೆ ಕಾಜಲ್ ಅಗರ್ವಾಲ್ – Kannada News | Kajal Aggarwal: Allu Arjun’s Acting Advice and Prabhas High Heels Story Revealed

ನಟಿ ಕಾಜಲ್ ಅಗರ್ವಾಲ್ (Kajal) ಸದ್ಯ ಸಿನಿಮಾಗಳ ವೇಗವನ್ನು ಕೊಂಚ ಕಡಿಮೆ ಮಾಡಿದ್ದಾರೆ. ಮದುವೆಯ ನಂತರ ಈ ನಟಿ ಆಯ್ದ ಕಥೆಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದಾರೆ. ‘ಭಗವಂತ ಕೇಸರಿ’ ಚಿತ್ರದ ಯಶಸ್ಸಿನ ನಂತರ ಕಾಜಲ್ ತೆಲುಗಿನಲ್ಲಿ ಮತ್ತೊಂದು ಹೊಸ ಸಿನಿಮಾ ಸೈನ್ ಮಾಡಿಲ್ಲ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಅವರು, ತಮ್ಮ ಸಹನಟರ ಬಗ್ಗೆ ಕೆಲವು ಆಸಕ್ತಿದಾಯಕ ಮತ್ತು ಅಪರೂಪದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಸೆಟ್‌ನಲ್ಲಿ ಎಲ್ಲ ಸಹನಟರು ತಮಗೆ ತುಂಬ ಸಹಕಾರ ನೀಡುತ್ತಾರೆ ಹಾಗೂ ತಾವು ಯಾವಾಗಲೂ ಸಹೋದ್ಯೋಗಿಗಳ ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸುವುದಾಗಿ ಕಾಜಲ್ ಹೇಳಿದ್ದಾರೆ.

ಕಟ್ ಎಂದ ತಕ್ಷಣ ಭಾವನೆ ಬಿಡಬೇಡ ಎಂದಿದ್ದ ಅಲ್ಲು ಅರ್ಜುನ್

ತಮ್ಮ ಸಿನಿ ಜರ್ನಿಯಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನೀಡಿದ ಒಂದು ಪ್ರಮುಖ ಸಲಹೆಯನ್ನು ಕಾಜಲ್ ಇಲ್ಲಿ ನೆನಪಿಸಿಕೊಂಡಿದ್ದಾರೆ. ‘ನಾನು ಸ್ವಭಾವತಃ ತುಂಬ ಚಟುವಟಿಕೆಯಿಂದ ಇರುವ ಹಾಗೂ ಕೊಂಚ ಆತಂಕ ಮಾಡಿಕೊಳ್ಳುವ ವ್ಯಕ್ತಿ. ಆರಂಭದಲ್ಲಿ ಶೂಟಿಂಗ್ ಸೆಟ್‌ನಲ್ಲಿ ನಿರ್ದೇಶಕರು ‘ಕಟ್’ ಎಂದು ಹೇಳಿದ ತಕ್ಷಣ ದೃಶ್ಯದ ಭಾವನೆಗಳಿಂದ ಹೊರಬಂದು ರಿಲ್ಯಾಕ್ಸ್ ಆಗಿಬಿಡುತ್ತಿದ್ದೆ. ಆದರೆ ಅಲ್ಲು ಅರ್ಜುನ್ ಒಮ್ಮೆ ನನಗೆ, ‘ನಿರ್ದೇಶಕರು ಕಟ್ ಎಂದ ತಕ್ಷಣ ಭಾವನೆಯನ್ನು ಬಿಡಬೇಡ, ಕ್ಯಾಮೆರಾ ಸಂಪೂರ್ಣವಾಗಿ ಆಫ್ ಆಗುವವರೆಗೂ ಅದೇ ಮೂಡ್‌ನಲ್ಲಿರು ಎಂದು ಸಲಹೆ ನೀಡಿದ್ದರು’ ಎಂದು ಕಾಜಲ್ ಬಹಿರಂಗಪಡಿಸಿದ್ದಾರೆ.

ಎಡಿಟರ್ಸ್‌ಗೆ ಸುಲಭವಾಗುತ್ತೆ!

ಅಲ್ಲು ಅರ್ಜುನ್ ಆ ರೀತಿ ಸಲಹೆ ನೀಡಲು ಒಂದು ಮುಖ್ಯ ಕಾರಣವಿತ್ತು. ನಿರ್ದೇಶಕರು ಕಟ್ ಅಂದ ತಕ್ಷಣ ಮುಖದ ಹಾವಭಾವ ಬದಲಿಸಿದರೆ, ಮುಂದೆ ಸಿನಿಮಾ ಎಡಿಟಿಂಗ್ ಮಾಡುವಾಗ ಎಡಿಟರ್ಸ್‌ಗೆ ಕಷ್ಟವಾಗುತ್ತದೆ. ಸ್ವಲ್ಪ ಸಮಯದವರೆಗೂ ಅದೇ ಭಾವನೆಯನ್ನು ಕಾಯ್ದುಕೊಂಡರೆ ದೃಶ್ಯ ಚೆನ್ನಾಗಿ ಮೂಡಿಬರುತ್ತದೆ ಎಂದು ಬನ್ನಿ ವಿವರಿಸಿದ್ದರಂತೆ. ಈ ಸಲಹೆ ತಮಗೆ ತುಂಬ ಉಪಯುಕ್ತವಾಯಿತು ಮತ್ತು ತಾವು ಇಂದಿಗೂ ಶೂಟಿಂಗ್ ಸೆಟ್‌ನಲ್ಲಿ ಇದನ್ನು ಚಾಚೂ ತಪ್ಪದೆ ಅನುಸರಿಸುತ್ತಿರುವುದಾಗಿ ಕಾಜಲ್ ಹೇಳಿದ್ದಾರೆ.

ಪ್ರಭಾಸ್ ಜೊತೆ ನಟಿಸುವಾಗ ಹೈ ಹೀಲ್ಸ್ ಸಂಭ್ರಮ!

ಇದೇ ವೇಳೆ ತಮ್ಮ ಸಹನಟರ ಎತ್ತರದ ಬಗ್ಗೆಯೂ ಕಾಜಲ್ ತಮಾಷೆಯಾಗಿ ಮಾತನಾಡಿದ್ದಾರೆ. ‘ನನ್ನ ಸಹನಟರು ಸಾಮಾನ್ಯವಾಗಿ ನನಗಿಂತ ತುಂಬ ಎತ್ತರ ಇರುತ್ತಾರೆ. ಹಾಗಾಗಿ ಶೂಟಿಂಗ್ ಸಮಯದಲ್ಲಿ ನನಗೆ ಹೈ ಹೀಲ್ಸ್ ಧರಿಸಲು ಸಾಧ್ಯವಾಗುತ್ತಿರಲಿಲ್ಲ. ಹೆಚ್ಚೆಂದರೆ 1 ರಿಂದ 2 ಇಂಚಿನ ಹೀಲ್ಸ್ ಮಾತ್ರ ಧರಿಸುತ್ತಿದ್ದೆ. ಆದರೆ ರೆಬೆಲ್ ಸ್ಟಾರ್ ಪ್ರಭಾಸ್ ಜೊತೆ ‘ಡಾರ್ಲಿಂಗ್’ ಚಿತ್ರದಲ್ಲಿ ನಟಿಸುವಾಗ ಮಾತ್ರ ನನಗೆ ತುಂಬ ಖುಷಿಯಾಗಿತ್ತು. ಯಾಕಂದರೆ ಅವರು ತುಂಬ ಎತ್ತರ ಇರುವುದರಿಂದ ನಾನು 4 ರಿಂದ 6 ಇಂಚಿನ ಸ್ಟಿಲೆಟ್ಟೊಗಳಂತಹ ಹೈ ಹೀಲ್ಸ್ ಧರಿಸಿ ನಟಿಸುವ ಅವಕಾಶ ಸಿಕ್ಕಿತ್ತು’ ಎಂದು ಸಂತೋಷ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮನೆಯಲ್ಲಿ ಈಸಿಯಾಗಿ ತಯಾರಿಸಬಹುದು ಕೆಮಿಕಲ್‌ ಫ್ರೀ ಕಾಜಲ್‌

ಗ್ಲಾಮರ್ ಪ್ರದರ್ಶನಕ್ಕೊಂದು ಗೆರೆ ಇದೆ!

ನಾಯಕಿಗೆ ಚಿತ್ರರಂಗದಲ್ಲಿ ಯಶಸ್ಸು ಸಿಗಲು ಗ್ಲಾಮರ್ ಮತ್ತು ನಟನಾ ಕೌಶಲ್ಯ ಎರಡೂ ಮುಖ್ಯ ಎಂದಿರುವ ಕಾಜಲ್, ತಾವು ನಟನೆಗೆ ಮೊದಲ ಆದ್ಯತೆ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ. “ಗ್ಲಾಮರ್ ಎಂದರೆ ಕೇವಲ ಸೌಂದರ್ಯ ಪ್ರದರ್ಶನ ಅಥವಾ ಅರೆಬೆತ್ತಲೆ ಬಟ್ಟೆ ಧರಿಸುವುದಲ್ಲ. ಜೀನ್ಸ್ ಹಾಗೂ ಫುಲ್ ಸ್ಲೀವ್ಸ್ ಟಿ-ಶರ್ಟ್ ಅಥವಾ ಸೀರೆಯಲ್ಲಿಯೂ ಒಬ್ಬ ನಟಿ ಗ್ಲಾಮರಸ್ ಆಗಿ ಕಾಣಿಸಬಹುದು. ಸೊಗಸಾಗಿ ಕಾಣುವುದಕ್ಕೂ ಮತ್ತು ಅಸಭ್ಯವಾಗಿ ಕಾಣುವುದಕ್ಕೂ ಮಧ್ಯೆ ಒಂದು ಸಣ್ಣ ಗೆರೆ ಇದೆ. ನಾನು ಎಂದಿಗೂ ಆ ಗೆರೆಯನ್ನು ದಾಟುವುದಿಲ್ಲ. ನನ್ನ ತಂದೆಯ ಜೊತೆ ಕುಳಿತು ನೋಡಲು ಮುಜುಗರವಾಗುವಂತಹ ಯಾವುದೇ ಬಟ್ಟೆಯನ್ನು ನಾನು ಧರಿಸುವುದಿಲ್ಲ,’ ಎಂದು ಖಡಕ್ ಆಗಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Tv9 Kannada News Live: ಕಪ್ಪೆಚಿಪ್ಪು ಹೆಕ್ಕಲು ಹೋಗಿ 10 ಮಂದಿ ಸಾವು, ಮತ್ತೋರ್ವನಿಗಾಗಿ ಶೋಧ, ನಾಗಮಲೆ ಹಾಡಿಯಲ್ಲಿ ಮತ್ತೆ ಚಿರತೆ ದಾಳಿ; ಇಲ್ಲಿವೆ ಈ ಹೊತ್ತಿನ ಪ್ರಮುಖ ಸುದ್ದಿಗಳು – Kannada News | Tv9 Kannada News Live: Missing Person Search Ongoing in Bhatkal Shellfish Tragedy; 602 Bags of Illegal Urea Seized in Mysuru

ಕಪ್ಪೆಚಿಪ್ಪು ಹೆಕ್ಕಲು ಹೋಗಿ 10 ಮಂದಿ ಸಾವುImage Credit source: Tv9 Kannada

ಬೆಂಗಳೂರು, ಮೇ 25: ಕಪ್ಪೆಚಿಪ್ಪು ಹೆಕ್ಕಲು ಹೋಗಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೆಕೋಡಿಯಲ್ಲಿ 10 ಜನ ದಾರುಣವಾಗಿ ಮೃತಪಟ್ಟ ಘಟನೆ ನಿನ್ನೆ ನಡೆದಿತ್ತು. ಇವರ ಜೊತೆಗಿದ್ದ ಮತ್ತೋರ್ವ ವ್ಯಕ್ತಿ ಇನ್ನೂ ನಾಪತ್ತೆಯಾಗಿದ್ದು, ಮಿಸ್​​ ಆಗಿರುವ ಮಾದೇವ ನಾಯ್ಕ್ ಅವರಿಗಾಗಿ ಇಂದು ಶೋಧಕಾರ್ಯ ನಡೆಯಲಿದೆ. 11 ಜನರ ಪೈಕಿ ನಿನ್ನೆ 10 ಮೃತದೇಹಗಳು ಸಿಕ್ಕಿದ್ದವು. ಆದರೆ ಒಬ್ಬರ ಬಗ್ಗೆ ಮಾತ್ರ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಸ್ಥಳೀಯ ಮೀನುಗಾರ ಸಹಾಯದಿಂದ NDRF, ಕರಾವಳಿ ಕಾವಲು ಪಡೆ, ಆಗ್ನಿ ಶಾಮಕ ಹಾಗೂ ಸ್ಥಳೀಯರ ಪೊಲೀಸರಿಂದ ಕಾರ್ಯಾಚರಣೆ ನಡೆಯಲಿದೆ.

ಇದನ್ನೂ ಓದಿ: ಕಪ್ಪೆ ಚಿಪ್ಪುಗಾಗಿ ಹೋದವರು ಜಲಸಮಾಧಿ, ಸಾವಿನ ಸಂಖ್ಯೆ 10ಕ್ಕೆ ಏರಿಕೆ

ಬೂದಿ ಮುಚ್ಚಿದ ಕೆಂಡದಂತಿರುವ ಭಟ್ಕಳ

ಮೂರಿನ ಕಟ್ಟೆ ಧ್ವಂಸ ಪ್ರಕರಣ ಸಂಬಂಧ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಸ್ಥಿತಿ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ. ಕಟ್ಟೆ ಧ್ವಂಸ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಹಿಂದೂ ಸಂಘಟನೆ‌‌ಗಳು, ನಿನ್ನೆ ರಾತ್ರಿ ಮೂರಿನ ಕಟ್ಟೆ ಬಳಿ ಪ್ರತಿಭಟನೆ ಮಾಡಿದ್ದರು. ಪೊಲೀಸರು ವಶಕ್ಕೆ ಪಡೆದು ಬಿಟ್ಟುಕಳುಹಿಸಿದ ಬಳಿಕ ಮತ್ತೆ ಹೋರಾಟಕ್ಕೆ ಮುಂದಾಗಿದ್ದರು. ಈ ವೇಳೆ ಪೊಲೀಸರು ಅವರ ಮನವೊಲಿಸಿ ಕಳುಹಿಸಿದ್ದರು. ಆದರೆ ಇಂದು ಮತ್ತೆ ಅವರು ಪ್ರತಿಭಟನೆ ನಡೆಸುವ ಸಾಧ್ಯತೆ ಇರುವ ಕಾರಣ, ಮುನ್ನೆಚ್ಚರಿಕೆ ಕ್ರಮವಾಗಿ ಭಟ್ಕಳದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. 300ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದ್ದು, ಹೆಚ್ಚುವರಿಯಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪೊಲೀಸರನ್ನು ಕರೆಸಲಾಗಿದೆ.

ಮುಖ್ಯಾಂಶಗಳು

ಅಕ್ರಮವಾಗಿ ಸಂಗ್ರಹಿಸಿದ್ದ ಯೂರಿಯಾ ವಶಕ್ಕೆ

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಕೊಡಗಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಯೂರಿಯ ಸಂಗ್ರಹಿಸಿದ್ದ ತೋಟದ ಮೇಲೆ ದಾಳಿ ನಡೆಸಿರುವ ಕೃಷಿ ಇಲಾಖೆ ಅಧಿಕಾರಿಗಳು, ಬರೋಬ್ಬರಿ 602 ಬ್ಯಾಗ್ ಯೂರಿಯಾ ವಶಕ್ಕೆ ಪಡೆದಿದ್ದಾರೆ. ಕೊಡಗಹಳ್ಳಿಯ ಇದಾಯತ್ ಉಲ್ಲಾ ಎಂಬುವರ ತೋಟದ ಮೇಲೆ ದಾಳಿ ನಡೆಸಲಾಗಿದ್ದು, ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಇದನ್ನು ಸಂಗ್ರಹಿಸಲಾಗಿತ್ತು ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಕೃಷಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಬನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮುಂದುವರಿದ ಚಿರತೆ ದಾಳಿ

ಚಾಮರಾಜನಗರದ ನಾಗಮಲೆ ಹಾಡಿಯಲ್ಲಿ ಚಿರತೆ ದಾಳಿ ಮುಂದುವರಿದಿದ್ದು, ತಡರಾತ್ರಿ 1.30ರ ವೇಳೆ ಕೊಟ್ಟಿಗೆಗೆ ನುಗ್ಗಿರುವ ಚಿರತೆ ಮೇಕೆಯನ್ನು ಕೊಂದು ತಿಂದಿದೆ. ನಿನ್ನೆಯಷ್ಟೇ ಇಂಡಿಗನತ್ತದಲ್ಲಿಟ್ಟಿದ್ದ ಪಂಚರದಲ್ಲಿ ಹೆಣ್ಣು ಚಿರತೆ ಸೆರೆಯಾಗಿತ್ತು. ಚಿರತೆ ಸೆರೆಯಾದ ಬೆನ್ನಲ್ಲೆ ನಿಟ್ಟುಸಿರು ಹಾಡಿಯ ಜನತೆ, ಅರಣ್ಯ ಸಿಬ್ಬಂದಿ ಬಿಟ್ಟಿದ್ದರು. ಘಟನೆ ನಡೆದು 2 ಗಂಟೆಗಳ ಒಳಗಾಗಿ ಸೊಪ್ಪು ತರಲು ಹೋದ ರೈತನ ಮೇಲೆ ಮತ್ತೊಂದು ಚಿರತೆ ದಾಳಿಯತ್ನ ನಡೆಸಿತ್ತು.ಈ ಘಟನೆ ಮಾಸುವ ಮುನ್ನವೇ ಮತ್ತೆ ನಾಗಮಲೆ ಹಾಡಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಐ ಲವ್ ಇಂಡಿಯಾ, ನಾನು ಪಿಎಂ ಮೋದಿಯ ದೊಡ್ಡ ಅಭಿಮಾನಿ ಎಂದ ಡೊನಾಲ್ಡ್​ ಟ್ರಂಪ್ – Kannada News | Donald Trump: I Love India, Big Fan of PM Modi US India Ties Strengthen

ಡೊನಾಲ್ಡ್​ ಟ್ರಂಪ್-ಮೋದಿImage Credit source: Sputnik India

ವಾಷಿಂಗ್ಟನ್, ಮೇ 25: ಪ್ರಧಾನಿ ಮೋದಿಯನ್ನು ತಮ್ಮ ಆಪ್ತ ಸ್ನೇಹಿತ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಕರೆದಿದ್ದಾರೆ. ಅಮೆರಿಕದ 250ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು ತಾನು ಭಾರತವನ್ನು ಪ್ರೀತಿಸುವುದಾಗಿ ಹೇಳಿದ್ದಷ್ಟೇ ಅಲ್ಲದೆ ಪ್ರಧಾನಿ ಮೋದಿಯ ದೊಡ್ಡ ಅಭಿಮಾನಿ ಎಂದು ಕರೆದುಕೊಂಡಿದ್ದಾರೆ. ಭಾರತವು ಅಮೆರಿಕದ ಮೇಲೆ ಶೇಕಡಾ 100 ರಷ್ಟು ಭರವಸೆ ಇಡಬಹುದು ಎಂದು ದ್ವಿಪಕ್ಷೀಯ ಬಾಂಧವ್ಯವನ್ನು ಪುನರುಚ್ಚರಿಸಿದ್ದಾರೆ.

ಸಂವಾದದಲ್ಲಿ ಮಾತನಾಡಿದ ಟ್ರಂಪ್, “ನಾನು ಭಾರತವನ್ನು ಪ್ರೀತಿಸುತ್ತೇನೆ. ಪ್ರಧಾನಿ ಮೋದಿ ಶ್ರೇಷ್ಠರು, ಅವರು ನನ್ನ ಅತ್ಯಂತ ಆಪ್ತ ಸ್ನೇಹಿತ. ನಾನು ಪ್ರಧಾನಿ ಮೋದಿಯವರ ದೊಡ್ಡ ಅಭಿಮಾನಿ” ಎಂದು ಹೆಮ್ಮೆಯಿಂದ ಹೇಳಿದರು. ನಮ್ಮ ನಡುವೆ ಅದ್ಭುತ ಆರ್ಥಿಕತೆ, ದಾಖಲೆಯ ಷೇರು ಮಾರುಕಟ್ಟೆ ಹಾಗೂ ಭಾರತಕ್ಕೆ ಬೇಕಾದ ಎಲ್ಲವೂ ಇದೆ. ಭಾರತ ಏನನ್ನಾದರೂ ಪಡೆಯಲು ಬಯಸಿದರೆ ನೇರವಾಗಿ ಇಲ್ಲಿಗೇ ಕರೆ ಮಾಡಬಹುದು ಎಂದು ಭಾರತದ ಮೇಲಿನ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದರು. ಇದೇ ವೇಳೆ ಅವರು ಭಾರತ ಪ್ರವಾಸದಲ್ಲಿರುವ ತಮ್ಮ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರನ್ನು ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ವಿದೇಶಾಂಗ ಕಾರ್ಯದರ್ಶಿ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತಕ್ಕೆ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಅವರು, ಭಾರತ-ಯುಎಸ್ ಬಾಂಧವ್ಯವು ಹೊಸ ಯುಗದ ಅಡಿಪಾಯವಾಗಿದೆ ಎಂದರು.ಅಮೆರಿಕ ಮೊದಲು ಎಂದರೆ ಅಮೆರಿಕ ಮಾತ್ರ ಎಂದಲ್ಲ ಎಂದು ಸ್ಪಷ್ಟಪಡಿಸಿದ ಅವರು, ಟ್ರಂಪ್ ತಮ್ಮೊಂದಿಗೆ ಮಾತನಾಡುವ ಪ್ರತಿ ಬಾರಿಯೂ ಮೊದಲು ‘ನನ್ನ ಸ್ನೇಹಿತ ಪ್ರಧಾನಿ ಮೋದಿ ಹೇಗಿದ್ದಾರೆ? ಎಂದು ಕೇಳುತ್ತಾರೆ ಎಂದು ನೆನಪಿಸಿಕೊಂಡರು. ಐದು ತಿಂಗಳ ಹಿಂದಷ್ಟೇ ತಾವು ಭಾರತಕ್ಕೆ ಬಂದ ನಂತರ ಪ್ರಮುಖ ‘ಮಧ್ಯಂತರ ವ್ಯಾಪಾರ ಒಪ್ಪಂದದ ಚೌಕಟ್ಟನ್ನು ಸಿದ್ಧಪಡಿಸಲಾಗಿದ್ದು, ಮುಂದಿನ ಕೆಲವು ವಾರಗಳಲ್ಲಿ ಅದಕ್ಕೆ ಸಹಿ ಬೀಳಲಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.

ಮತ್ತಷ್ಟು ಓದಿ: ಅಮೆರಿಕ ನಂಬಿಕೆಗೆ ಯೋಗ್ಯವಲ್ಲ, ಮತ್ತೆ ಯುದ್ಧ ಆರಂಭವಾಗಬಹುದು; ಇರಾನ್ ಸ್ಫೋಟಕ ಹೇಳಿಕೆ

ಜಾಗತಿಕವಾಗಿ ಅಮೆರಿಕಕ್ಕೆ ಹೂಡಿಕೆ ತರುವಲ್ಲಿ ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯು ಭಾರಿ ಸಾಧನೆ ಮಾಡಿದೆ. ಭಾರತದಿಂದ ಅಮೆರಿಕಕ್ಕೆ ಬರೋಬ್ಬರಿ 20.5 ಶತಕೋಟಿ (ಬಿಲಿಯನ್) ಡಾಲರ್ ಹೊಸ ಹೂಡಿಕೆಗಳನ್ನು ತರುವ ಮೂಲಕ ಜಾಗತಿಕ ಮಟ್ಟದಲ್ಲೇ ಭಾರತದ ರಾಯಭಾರ ಕಚೇರಿ ಮೊದಲ ಸ್ಥಾನದಲ್ಲಿದೆ ಎಂದು ಗೋರ್ ಹೆಮ್ಮೆಯಿಂದ ಪ್ರಕಟಿಸಿದರು.

ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಮೇ 26 ರಂದು ನವದೆಹಲಿಯಲ್ಲಿ ನಡೆಯಲಿರುವ ಉನ್ನತ ಮಟ್ಟದ ‘ಕ್ವಾಡ್ (QUAD) ವಿದೇಶಾಂಗ ಸಚಿವರ ಸಭೆ’ಯಲ್ಲಿ ಭಾಗವಹಿಸಲಿದ್ದಾರೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳು ಇಂಡೋ-ಪೆಸಿಫಿಕ್ ಭದ್ರತೆ ಮತ್ತು ಪಶ್ಚಿಮ ಏಷ್ಯಾದ ಪ್ರಸಕ್ತ ಬೆಳವಣಿಗೆಗಳ ಕುರಿತು ಪ್ರಮುಖ ಚರ್ಚೆ ನಡೆಸಲಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:49 am, Mon, 25 May 26

Source link

ಧ್ವನಿ ಕೇಳ್ತಿದೆ ಯಾರೂ ಕಾಣ್ತಿಲ್ಲ, ಸೇಲ್ಸ್​ಗರ್ಲ್​ ಹಾಗೂ ಯುವತಿಯ ಕಣ್ಣಾಮುಚ್ಚಾಲೆ

ವಿಯೆಟ್ನಾಂ, ಮೇ 25: ಯುವತಿಯೊಬ್ಬಳು ಬಟ್ಟೆ ಖರೀದಿಗೆಂದು ಅಂಗಡಿಗೆ ಹೋಗುತ್ತಾಳೆ, ಬಟ್ಟೆ ಬಗ್ಗೆ ಸೇಲ್ಸ್​ಗರ್ಲ್​ ಬಳಿ ವಿಚಾರಿಸುತ್ತಾಳೆ. ಆದರೆ ಸೇಲ್ಸ್​​ಗರ್ಲ್​ಗೆ ಆ ಯುವತಿ ಕಾಣ್ತಿಲ್ಲ ಆ ಯುವತಿಗೆ ಸೇಲ್ಸ್​ಗರ್ಲ್​ ಕಾಣ್ತಿಲ್ಲ, ಬಳಿಕ ಇಬ್ಬರೂ ಐದು ಹತ್ತು ನಿಮಿಷಗಳು ಬಟ್ಟೆಗಳ ನಡುವೆ ಒಬ್ಬರೊನ್ನೊಬ್ಬರು ಹುಡುಕಾಡುತ್ತಾರೆ. ಅಂತಿಮವಾಗಿ ಇಬ್ಬರೂ ಸಿಕ್ಕು ಹೊಟ್ಟೆ ಹುಣ್ಣಾಗುವಷ್ಟು ನಗುತ್ತಾರೆ. ಈ ಹಾಸ್ಯಮಯ ಸನ್ನಿವೇಶದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

Exit mobile version