GT vs MI: 6ನೇ ಪಂದ್ಯದಲ್ಲೂ ಭರವಸೆ ಕಳೆದುಕೊಂಡಿದ್ದ ಮುಂಬೈಗೆ ಬಲ ತುಂಬಿದ ತಿಲಕ್ ಶತಕ – Kannada News | IPL 2026: Tilak Varma’s Maiden Century Powers MI to 199 vs GT

ಐಪಿಎಲ್ 2026 ರ 30 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಿತ್ತು. ಈ ಆವೃತ್ತಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ ಮುಂಬೈ ಮುಂದಿನ ಹಂತವನ್ನು ತಲುಪಬೇಕೆಂದರೆ ಉಳಿದ ಎಲ್ಲಾ ಪಂದ್ಯವನ್ನು ಗೆಲ್ಲಬೇಕು. ಅದರಂತೆ ಇಂದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ತಂಡ ತಿಲಕ್ ವರ್ಮಾ ಅವರ ಸ್ಫೋಟಕ ಶತಕದ ನೆರವಿನಿಂದ 20 ಓವರ್​ಗಳಲ್ಲಿ 5 ವಿಕೆಟ್​ಗಳನ್ನು ಕಳೆದುಕೊಂಡು 199 ರನ್ ಕಲೆಹಾಕಿತು. ಈ ಮೂಲಕ ಗುಜರಾತ್ ಗೆಲುವಿಗೆ 200 ರನ್​ಗಳ ಗುರಿ ನೀಡಿದೆ.

ಮುಂಬೈಗೆ ಕಳಪೆ ಆರಂಭ

ಎಂದಿನಂತೆ ಈ ಪಂದ್ಯದಲ್ಲೂ ಮುಂಬೈಗೆ ಉತ್ತಮ ಆರಂಭ ಸಿಗಲಿಲ್ಲ. ತಂಡ ಪವರ್‌ಪ್ಲೇನಲ್ಲಿಯೇ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ರಬಾಡ ದಾಳಿಗೆ ತತ್ತರಿಸಿದ ಮುಂಬೈ ಅಗ್ರಕ್ರಮಾಂಕ ಕುಸಿಯಿತು. ಆದಾಗ್ಯೂ ಈ ಸಂಕಷ್ಟದ ಸಮಯದಲ್ಲಿ ತಂಡದ ಇನ್ನಿಂಗ್ಸ್ ಕಟ್ಟಿದ ತಿಲಕ್ ವರ್ಮಾ ಆರಂಭದಲ್ಲಿ ತಾಳ್ಮೆಯ ಆಟಕ್ಕೆ ಮುಂದಾದರು. ನಮನ್ ದೀರ್ ಜೊತೆಗೂಡಿ ತಂಡವನ್ನು ಶತಕದಂಚಿಗೆ ತಂದರು. ಆದರೆ ಅರ್ಧಶತಕದಂಚಿನಲ್ಲಿ ಎಡವಿದ ನಮನ್ 45 ರನ್​ಗಳಿಗೆ ಔಟಾದರು.

ತಿಲಕ್ ಚೊಚ್ಚಲ ಶತಕ

ಇದಾದ ನಂತರ ನಾಯಕ ಹಾರ್ದಿಕ್ ಪಾಂಡ್ಯರಿಂದ ಉತ್ತಮ ಬೆಂಬಲ ಪಡೆದ ತಿಲಕ್ ಗುಜರಾತ್ ವೇಗಿಗಳ ಬೆವರಿಳಿಸಿದರು. ಅದರಲ್ಲೂ ಕೊನೆಯ 4 ಓವರ್‌ಗಳಲ್ಲಿ ಉಗ್ರರೂಪ ತಾಳಿದ ತಿಲಕ್ ತಂಡವನ್ನು 150 ರನ್​ಗಳ ಗಡಿ ದಾಟಿಸಿದಲ್ಲದೆ 200 ರನ್​ಗಳಿಗೆ ಕೊಂಡೊಯ್ದರು. 20 ನೇ ಓವರ್​ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ತಿಲಕ್ ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಶತಕವನ್ನು ಪೂರೈಸಿದರು. ಟಿ20 ಕ್ರಿಕೆಟ್​ನಲ್ಲಿ ಎರಡು ಶತಕಗಳನ್ನು ಬಾರಿಸಿರುವ ತಿಲಕ್​ಗೆ ಇದು ಐಪಿಎಲ್‌ನಲ್ಲಿ ಮೊದಲ ಶತಕವಾಗಿದೆ.

ಅಜೇಯ101 ರನ್

ಮೇಲೆ ಹೇಳಿದಂತೆ 17ನೇ ಓವರ್​ನಿಂದ ತಮ್ಮ ಬ್ಯಾಟಿಂಗ್‌ ಗೇರ್ ಬದಲಿಸಿದ ತಿಲಕ್ ಈ ಓವರ್​ನಲ್ಲಿ ಒಂದು ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು. ಈ ಓವರ್​ಗೂ ಮುನ್ನ ತಿಲಕ್ 28 ಎಸೆತಗಳಲ್ಲಿ 37ರನ್ ಕಲೆಹಾಕಿದ್ದರು. ಇದಾದ ಬಳಿಕ 18ನೇ ಓವರ್​ನಲ್ಲಿ ಬೌಂಡರಿಗಳ ಮಳೆಗರೆದ ತಿಲಕ್ ಈ ಓವರ್​ನಲ್ಲಿ 3 ಸಿಕ್ಸರ್ ಹಾಗೂ 2 ಭರ್ಜರಿ ಬೌಂಡರಿಗಳನ್ನು ಬಾರಿಸಿದರು. ಇದರೊಂದಿಗೆ ಅರ್ಧಶತಕವನ್ನು ಪೂರೈಸಿದರು. 19ನೇ ಓವರ್​ನಲ್ಲಿ ತಿಲಕ್ ಬ್ಯಾಟ್​ನಿಂದ 1 ಬೌಂಡರಿ ಬಂದರೆ, 20ನೇ ಓವರ್​ನಲ್ಲಿ ತಿಲಕ್ 2 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿ ತಮ್ಮ ಶತಕ ಪೂರೈಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 45 ಎಸೆತಗಳನ್ನು ಎದುರಿಸಿದ ತಿಲಕ್ 8 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ ಅಜೇಯ101 ರನ್ ಬಾರಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:33 pm, Mon, 20 April 26

Source link

ಕೇಜ್ರಿವಾಲ್​ಗೆ ಭಾರೀ ಹಿನ್ನಡೆ; ಪ್ರಕರಣದಿಂದ ಹಿಂದೆ ಸರಿಯುವುದಿಲ್ಲ ಎಂದ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ – Kannada News | Setback For Arvind Kejriwal Delhi High Court Dismisses Justice Swarana Kanta Sharma Recusal Plea

ನವದೆಹಲಿ, ಏಪ್ರಿಲ್ 20: ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ (Arvind Kejriwal) ದೊಡ್ಡ ಹಿನ್ನಡೆಯಾಗಿದ್ದು, ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅಬಕಾರಿ ನೀತಿ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಬೇಕೆಂದು ಕೋರಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳ ಮೇಲೆ ಮಾಡಲಾದ ಪಕ್ಷಪಾತದ ಆರೋಪಗಳು ಯಾವುದೇ ವಾಸ್ತವಿಕ ಆಧಾರವನ್ನು ಹೊಂದಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಹಾಗೇ, ಅರವಿಂದ್ ಕೇಜ್ರಿವಾಲ್ ಅವರ ಕೇಸಿನ ವಿಚಾರಣೆಯಿಂದ ನಾನು ಹಿಂದೆ ಸರಿಯುವುದಿಲ್ಲ ಎಂದು ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಘೋಷಿಸಿದ್ದಾರೆ.

ಬದಲಿ ನ್ಯಾಯಾಧೀಶರನ್ನು ಕೋರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ತೀರ್ಪು ನೀಡಿದ ನ್ಯಾಯಮೂರ್ತಿ ಸ್ವರಣ್ ಕಾಂತ ಶರ್ಮಾ ಅವರು ಆ ಅರ್ಜಿಯನ್ನು ವಜಾಗೊಳಿಸಿದರು. “ನಾನು ಈ ಪ್ರಕರಣದಿಂದ ಹಿಂದೆ ಸರಿಯುವುದಿಲ್ಲ. ಈ ಪ್ರಕರಣವನ್ನು ನಾನು ವಿಚಾರಣೆ ನಡೆಸುತ್ತೇನೆ” ಎಂದು ಅವರು ಘೋಷಿಸಿದರು. ಇದಕ್ಕೂ ಮೊದಲು, ಕೇಜ್ರಿವಾಲ್ ಅವರ ಅರ್ಜಿಯ ಕುರಿತು ತೀರ್ಪು ನೀಡುತ್ತಾ, ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರು ತಮ್ಮ ನಿಷ್ಪಕ್ಷಪಾತತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೀವು ಆರ್‌ಎಸ್‌ಎಸ್‌ ಸಂಬಂಧಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೀರಿ; ನ್ಯಾಯಾಧೀಶರ ಕುರಿತು ಕೇಜ್ರಿವಾಲ್ ಆರೋಪ

ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಅಧಿವಕ್ತ ಪರಿಷತ್‌ ಕಾರ್ಯಕ್ರಮಗಳಲ್ಲಿ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಭಾಗಿಯಾಗಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ, ಕಾರ್ಯಕ್ರಮಗಳು ರಾಜಕೀಯವಲ್ಲ. ಕಾನೂನು ವಿಷಯಗಳ ಕುರಿತು ಮಾತನಾಡಲು ಭಾಷಣಕಾರರನ್ನು ಆಹ್ವಾನಿಸಲಾಗಿತ್ತು. ಅದರಲ್ಲಿ ನಾನು ಪಾಲ್ಗೊಂಡಿದ್ದೆ ಅಷ್ಟೇ ಎಂದಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಚುನಾವಣೆ ನಡೆದು, ಬಿಜೆಪಿ 10ಕ್ಕೂ ಹೆಚ್ಚು ಸ್ಥಾನ ಗೆದ್ದರೆ ರಾಜಕೀಯವನ್ನೇ ಬಿಡುತ್ತೇನೆ; ಕೇಜ್ರಿವಾಲ್ ಶಪಥ

“ನಮ್ಮನ್ನು ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತದೆ. ಈ ಸಂವಾದದಲ್ಲಿ ಯಾವುದೇ ರಾಜಕೀಯ ಸಿದ್ಧಾಂತಕ್ಕೆ ಅವಕಾಶವಿರುವುದಿಲ್ಲ. ಬಾರ್ ಮತ್ತು ಬೆಂಚ್ ನಡುವಿನ ಸಂಬಂಧವು ನ್ಯಾಯಾಲಯದ ಕೊಠಡಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಬಾರ್ ಅಸೋಸಿಯೇಷನ್‌ಗಳು ಕಾರ್ಯಗಳನ್ನು ಆಯೋಜಿಸುವುದು ಅಸಾಮಾನ್ಯವೇನಲ್ಲ. ಅದರಲ್ಲಿ ಭಾಗಿಯಾಗಿದ್ದೇವೆ ಎಂದ ಮಾತ್ರಕ್ಕೆ ಪಕ್ಷಪಾತ ಮಾಡುತ್ತಿದ್ದೇವೆ ಎಂದರ್ಥವಲ್ಲ” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:56 pm, Mon, 20 April 26

Source link

Video: ಮನೆಯೊಳಗೆ ಇಟ್ಟರೂ ಬಿಸಿಲಿನ ಶಾಖಕ್ಕೆ ಕರಗಿದ ಕ್ರಯಾನ್ಸ್; ಬೆಂಗಳೂರಿನ ಮಹಿಳೆ ಹೇಳಿದ್ದೇನು? – Kannada News | Crayons melted in the heat of the sun even though they were kept indoors in Bengaluru

ಬೆಂಗಳೂರು, ಏಪ್ರಿಲ್ 20: ಮನೆ ಹೊರಗಡೆ ಕಾಲಿಡಂಗಿಲ್ಲ, ಬಿಸಿಲೋ ಬಿಸಿಲು. ಬಿಸಿಲಿನ ಝಳಕ್ಕೆ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ಫ್ಯಾನ್, ಎಸಿಯಿದ್ರೂ ಉರಿ ಸೆಖೆ ತಡೆಯಲು ಆಗುತ್ತಿಲ್ಲ. ಇಂತಹದ್ದರಲ್ಲಿ ಬೆಂಗಳೂರಿನ (Bengaluru) ಮಹಿಳೆ ಮನೆಯೊಳಗಿದ್ದಾಗಲೇ ತಮಗಾದ ಅನುಭವ ಹಂಚಿಕೊಂಡಿದ್ದಾರೆ. ಹೌದು, ಮನೆಯೊಳಗೆ ಇಟ್ಟ ಕ್ರಯೋನ್ಸ್‌ ಬಿಸಿಲಿನ ತಾಪಮಾನಕ್ಕೆ ಕರಗಿ ಹೋಗಿವೆಯಂತೆ. ತಮ್ಮ ಕಣ್ಣಾರೆ ಈ ದೃಶ್ಯ ಕಂಡು ಶಾಕ್ ಆಗಿದ್ದಾರೆ.

ಗೀತಾ ಶ್ರೀ ನಾಗರಾಜ್ (geethashreenagaraj) ಎಂಬ ಇನ್ಸ್ಟಾಗ್ರಾಮ್ ಬಳಕೆದಾರರು ಬೆಂಗಳೂರಿನಲ್ಲಿ ಬಿಸಿಲಿನ ಝಳ ಎಷ್ಟಿದೆ ಎಂದು ವಿವರಿಸಿರುವುದನ್ನು ಕಾಣಬಹುದು. ಮನೆಯೊಳಗಿದ್ದಾಗಲೇ ತಮಗಾದ ಅನುಭವ ಹಂಚಿಕೊಳ್ಳುತ್ತಾ, ಮನೆಯೊಳಗಿನ ಮೇಜಿನ ಮೇಲೆ ಇರಿಸಲಾದ ಕ್ರಯೋನ್ಸ್‌ಗಳು ಬಿಸಿಲಿನ ಶಾಖಕ್ಕೆ ಕರಗಿ ಹೊಗಿದೆ‌ ಎಂದು ಹೇಳಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಹಲವು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದರೂ, ಇಷ್ಟು ಬಿಸಿಲು ಇರಲಿಲ್ಲ. ಇಂತಹ ಅನುಭವ ಆಗಿರಲಿಲ್ಲ. ಆದರೆ ಒಳಗಿನ ಭಾಗದ ಟೇಬಲ್‌ಟಾಪ್ ಆಮ್ಲೆಟ್ ಬೇಯಿಸುವಷ್ಟು ಬಿಸಿಯಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: “ಕೆಲಸ ಹೋದ ಮೇಲೆ ಸತ್ಯ ಗೊತ್ತಾಯ್ತು!”: ಬೆಂಗಳೂರು ಯುವತಿಯ ಭಾವುಕ ವಿಡಿಯೋ ವೈರಲ್; ಕೆಲಸದ ಒತ್ತಡದ ಬಗ್ಗೆ ಬಿಚ್ಚಿಟ್ಟ ಸತ್ಯ

ಈ ವಿಡಿಯೋ ಆನ್ಲೈನ್ ವೈರಲ್ ಆಗಿದ್ದು ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಬಳಕೆದಾರರು ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರ, ನಾನು ನಮ್ಮ ಹಳೆಯ ಬೆಂಗಳೂರನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಇನ್ನೊಬ್ಬರು, ನಮ್ಮ ಸ್ವಾರ್ಥದಿಂದ ನಾವೇ ಇಂದು ಈ ಪರಿಸ್ಥಿತಿ ತಂದು ಕೊಂಡದ್ದು ಎಂದು ಖಾರವಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ತುಂಬಾ ಉಷ್ಣ ಹವಾಮಾನ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೇವೇಗೌಡ್ರಿಗೆ ರಾಜ್ಯ ಸರ್ಕಾರ ನೀಡಿದ 1.25 ಕೋಟಿ ರೂ. ಬೆಲೆಯ ಕಾರು ಯಾವುದು? ವಿಶೇಷತೆಗಳೇನು? – Kannada News | Karnataka Governmnet buy Rs 1.25 crore Volvo XC 90 car for Former PM HD Devegowda, here Is car details

ಬೆಂಗಳೂರು, (ಏಪ್ರಿಲ್ 20): 92ರ ಇಳಿವಯಸ್ಸಿನಲ್ಲೂ ರಾಜಕೀಯದಲ್ಲಿ ಸಕ್ರಿಯರಾಗಿರುವ, ಜೆಡಿಎಸ್ ಪಕ್ಷ ಸಂಘಟನೆಯಲ್ಲೂ ತೊಡಗಿಸಿಕೊಂಡಿರುವ ಮಾಜಿ ಪ್ರಧಾನಿ ಎಚ್​​ಡಿ ದೇವೇಗೌಡ (HD Devegowda) ಅವರಿಗೆ ರಾಜ್ಯ ಸರ್ಕಾರ (Karnataka Governmnet) ದುಬಾರಿ ಕಾರು ಖರೀದಿಸಿದೆ.  ರಾಜ್ಯ ಸರ್ಕಾರ ಕಳೆದ ವರ್ಷ 1.25 ಕೋಟಿ ರೂ. ಮೌಲ್ಯದ ವೋಲ್ವೋ -XC90 ಕಾರು (XC90  Car) ಖರೀದಿಸಿ ಕೊಟ್ಟಿದೆ. ಪೂರಕ ಅಂದಾಜುಗಳ ಮೂರನೇ ಮತ್ತು ಅಂತಿಮ ಕಂತಿನಲ್ಲಿ ಇದರ ಬಗ್ಗೆ ಮಾಹಿತಿ ನೀಡಲಾಗಿದೆ. ರಾಜಕೀಯ ಕಿತ್ತಾಟ, ಆರೋಪ-ಪ್ರತ್ಯಾರೋಪದ ನಡುವೆಯೂ ದೇವೇಗೌಡ್ರಿಗೆ ದುಬಾರಿ ಬೆಲೆ ಐಷರಾಮಿ ಕಾರು ನೀಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರವಿರೋಧದ ಚರ್ಚೆಗಳು ನಡೆದಿವೆ.

ದೇವೇಗೌಡ್ರಿಗೆ ದುಬಾರಿ ಕಾರು ಏಕೆ?

ದೇವೇಗೌಡರು ದೇಶದ ಪ್ರಧಾನಿಯಾಗಿ ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಅಲ್ಲದೇ ಅವರು ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರ ಭದ್ರತೆ ಮತ್ತು ಅನುಕೂಲಕ್ಕಾಗಿ ದುಬಾರಿ ಕಾರು ಖರೀದಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಬೆಂಗಳೂರಿನ ‘ಮಾರ್ಷಲ್ ಮೋಟಾರ್ಸ್’ನಿಂದ 1.25 ಕೋಟಿ ರೂಪಾಯಿ ವೆಚ್ಚದಲ್ಲಿ ಈ ವಾಹನವನ್ನು ನೇರವಾಗಿ ಖರೀದಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ (DPAR) ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಅದರಂತೆ ದೇವೇಗೌಡ್ರು ಸಹ ಈಗಾಗಲೇ KAXX G3636 ನಂಬರಿನ ಬಿಳಿ ಬಣ್ಣದ ಕಾರು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಸಿಎಂ ನಿರೀಕ್ಷೆಯಲ್ಲಿರುವ ಡಿಕೆಶಿ ಖರೀದಿಸಿದ ಐಷಾರಾಮಿ ಕಾರಿನ ವಿಶೇಷತೆ ಏನು?

ಕಾರಿನ ವಿಶೇಷತೆಗಳೇನು?

ದೇವೇಗೌಡರಿಗೆ ಸರ್ಕಾರ ಖರೀದಿಗೆ ಒಪ್ಪಿಗೆ ನೀಡಿರುವ ವೋಲ್ವೋ ಕಾರು ಹಲವು ವಿಶೇಷತೆಗಳನ್ನು ಹೊಂದಿದೆ. 2.0 ಲೀಟರ್ ಟರ್ಬೋ ಎಂಜಿನ್ ಹೊಂದಿರುವ ಈ ಕಾರು ಮೈಲ್ಡ್ ಹೈಬ್ರಿಡ್ ಪವರ್‌ಟ್ರೇನ್ ಹೊಂದಿದೆ. 250 hp ಪವರ್ ಹಾಗೂ 360 Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ.

ಲೆವೆಲ್ 2 ಅಡಾಸ್ (ADAS) ಫೀಚರ್, ಹಿಲ್ ಸ್ಟಾರ್ಟ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಪಾರ್ಕಿಂಗ್ ಅಸೆಸ್ಟೆಂಟ್, ಎಬಿಎಸ್, ಎಬಿಡಿ, 7 ಏರ್ ಬ್ಯಾಗ್, 360 ಡಿಗ್ರಿ ಕ್ಯಾಮೆರಾ, 12.3 ಇಂಚಿನ್ ಇನ್ಸ್‌ಸ್ಟ್ರುಮೆಂಟ್ ಕ್ಲಸ್ಟರ್, 11.2 ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಪನರೋಮಿಕ್ ಸನ್‌ರೂಫ್, ಕ್ಲೈಮೇಟ್ ಕಂಟ್ರಲ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿವೆ. ಇನ್ನು ಕಾರನ್ನು ಮಾಡಿಫಿಕೇಶನ್ ಮಾಡಲು ಸಾಧ್ಯವಿದೆ. ಸದ್ಯ ದೇವೇಗೌಡರಿಗೆ ವಯಸ್ಸಾಗಿರುವುದರಿಂದಕಾರು ಹತ್ತಿ ಇಳಿಯಲು, ಕಾರಿನಲ್ಲಿ ಕುಳಿತುಕೊಳ್ಳಲು ಕೆಲ ಮಾಡಿಫಿಕೇಶನ್ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಳ್ಳ ಬೇಟೆಯಾಡುವ ವಿಚಾರ ಪೊಲೀಸರಿಗೆ ತಿಳಿಸುವುದಾಗಿ ಧಮ್ಕಿ: ಕಂಠಪೂರ್ತಿ ಕುಡಿಸಿ ಸ್ನೇಹಿತನ ಹೆಣ ಕೆಡವಿದ ಗೆಳೆಯ – Kannada News | Chamarajanagar: a Friend killed his Friend for Threatening to inform the police about poaching

ಚಾಮರಾಜನಗರ, ಏಪ್ರಿಲ್​​ 20: ಆತ ಕೂಲಿ ಮಾಡಿಕೊಂಡು ಇದ್ದ. ಆತನ ಸ್ನೇಹಿತರು ಕಳ್ಳಬೇಟೆ ವಿಚಾರವನ್ನು ಪೊಲೀಸರಿಗೆ ತಿಳಿಸುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ. ಇದರಿಂದ ರೊಚ್ಚಿಗೆದ್ದ ಇನ್ನೊಬ್ಬ ಸ್ನೇಹಿತ ಕಂಠಪೂರ್ತಿ ಕುಡಿಸಿ ಬಳಿಕ ರಾಡಿನಿಂದ ಹೊಡೆದು ಹತ್ಯೆ (Murder) ಮಾಡಿದ್ದಾನೆ. ಚಾಮರಾಜನಗರ (chamarajanagar) ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸುರಪುರದಲ್ಲಿ ಘಟನೆ ನಡೆದಿದೆ. ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಕುಣಗಳ್ಳಿ ಗ್ರಾಮದ ಕಳ್ಳ ಬೇಟೆಗಾರ ಮಲ್ಲಿಕಾರ್ಜುನ ಎಂಬಾತ ತನ್ನ ಸ್ನೇಹಿತ ರಾಮಕೃಷ್ಣ ಎಂಬಾತನನ್ನು ಪಾರ್ಟಿ ಹೆಸರಲ್ಲಿ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಚೆನ್ನಾಗಿ ಕುಡಿಸಿ, ಊಟ ಮಾಡಿಸಿದ ಬಳಿಕ ಅಸಲಿ ಆಟ ಶುರು ಮಾಡಿದ್ದಾನೆ. “ನನ್ನ ಕಳ್ಳ ಬೇಟೆಯ ಮಾಹಿತಿಯನ್ನ ಪೊಲೀಸರಿಗೆ ಯಾಕೆ ಹೇಳುತ್ತಿದ್ದಿಯಾ?” ಎಂದು ಜಗಳ ತೆಗೆದಿದ್ದಾನೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಗುಂಡಿನ ಸದ್ದು: ಫೈರಿಂಗ್​ ಮಾಡಿ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಹತ್ಯೆ

ಮೊದಲೇ ಸಂಚು ರೂಪಿಸಿದ್ದ ಮಲ್ಲಿಕಾರ್ಜುನ, ಕಬ್ಬಿಣದ ರಾಡಿನಿಂದ ರಾಮಕೃಷ್ಣನ ತಲೆಗೆ ಹೊಡೆದು ಸಾಯಿಸಿದ್ದಾನೆ. ವಿಶೇಷ ಅಂದ್ರೆ, ಕೊಲೆ ಮಾಡಿದ ಬಳಿಕ ಎರಡು ಗಂಟೆ ಕಾಲ ಹೆಣದ ಬಳಿಯೇ ಕುಳಿತಿದ್ದ ಆತ, ಸಾವು ಖಚಿತವಾದ ಮೇಲೆ ತಾನೇ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಹೊಂಚು ಹಾಕಿ ಸ್ನೇಹಿತನ ಕೊಲೆ

ಈ ಹಿಂದೆ ಎರಡು ಬಾರಿ ಕಳ್ಳ ಬೇಟೆಗಾಗಿ ಅಕ್ರಮ ನಾಡ ಬಂದೂಕು ಹೊಂದಿರುವ ಪ್ರಕರಣ ದಾಖಲಾಗಿತ್ತು. ಆ ಮಾಹಿತಿಯನ್ನ ಈತನೇ ಪೊಲೀಸರಿಗೆ ನೀಡಿದ್ದಾನೆ ಎಂದು ಖಚಿತ ಪಡೆಸಿಕೊಂಡಿದ್ದ ಮಲ್ಲಿಕಾರ್ಜುನ್, ಇವನನ್ನು ಮುಗಿಸಲೇಬೇಕು ಎಂದು ದೃಢ ನಿರ್ಧಾರ ಮಾಡಿ, ಹೊಂಚು ಹಾಕಿ ನಿನ್ನೆ ಬೆಳಗ್ಗೆಯಿಂದ ಸಂಜೆಯವರೆಗೂ ಕಾದು, ಕೆಲಸ ಮುಗಿದ ಮೇಲೆ ರಾಮಕೃಷ್ಣನ ಮನೆಗೆ ಬಂದು ಪಾರ್ಟಿಗೆ ಹೋಗೋಣ ಎಂದು ಕರೆದುಕೊಂಡು ಹೋಗಿ ಗ್ರಾಮದ ಹೊರವಲಯದಲ್ಲಿ ಕೊಲೆ ಮಾಡಿದ್ದಾನೆ.

ನಾಲ್ಕೈದು ಜನರಿಂದ ಕೊಲೆ: ಕುಟುಂಬಸ್ಥರು ಆರೋಪ

ಇತ್ತ ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬಸ್ಥರು ಗೋಳಾಡಿದ್ದಾರೆ. ಈ ಕೊಲೆಯನ್ನು ಒಬ್ಬರು‌ ಮಾಡಲು ಸಾಧ್ಯವಿಲ್ಲ, ನಾಲ್ಕೈದು ಜನ ಸೇರಿ‌ ಮಾಡಿದ್ದಾರೆ. ಸೂಕ್ತ ತನಿಖೆ ಮಾಡಿ ನಮಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದ್ದಾರೆ. ಇದರ ಹಿಂದೆ ಬೇರೆಯವರ ಕೈವಾಡವಿದೆ, ಸೂಕ್ತ‌ ತನಿಖೆಯಾಗಿ ಎಲ್ಲರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: 2ನೇ ಮದುವೆ ತಯಾರಿಯಲ್ಲಿದ್ದ ವೈದ್ಯನ ಭೀಕರ ಕೊಲೆ: ವಿವಾಹದ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕ!

ಇನ್ನು ಸುದ್ದಿ ತಿಳಿದ ಎಸ್​​ಪಿ ಮುತ್ತುರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಶ್ವಾನದಳ ತರಿಸಿ ತಪಾಸಣೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಮಾಂಬಳ್ಳಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಶವವನ್ನು ಚಾಮರಾಜನಗರದ ಸಿಮ್ಸ್ ಆಸ್ವತ್ರೆಗೆ ರವಾನಿಸಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅನೈತಿಕ ಸಂಬಂಧದ ವೈಭವೀಕರಣ: ಬಾಲಿವುಡ್ ಸಿನಿಮಾದ ಟೀಸರ್​ಗೆ ವಿರೋಧ – Kannada News | Pati Patni Aur Woh Do Teaser Backlash Infidelity Controversy Ayushmann Khurrana

ನಟ ಆಯುಷ್ಮಾನ್ ಖುರಾನಾ (Ayushmann Khurrana) ಅಭಿನಯದ ಸಿನಿಮಾಗಳ ಮೇಲೆ ಪ್ರೇಕ್ಷಕರಿಗೆ ಒಂದು ಭರವಸೆ ಇರುತ್ತದೆ. ಆದರೆ ಈಗ ಅವರು ನಟಿಸಿರುವ ‘ಪತಿ ಪತ್ನಿ ಔರ್ ವೋ ದೋ’ (Pati Patni Aur Woh Do) ಸಿನಿಮಾದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಮೇ 15ರಂದು ಈ ಚಿತ್ರ ರಿಲೀಸ್ ಆಗಲಿದೆ. ಇಂದು (ಏಪ್ರಿಲ್ 20) ಟೀಸರ್ ಬಿಡುಗಡೆ ಮಾಡಲಾಗಿದೆ. ಟೀಸರ್ ನೋಡಿದ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾಲ್ಲಿ ವಿವಾಹೇತರ ಸಂಬಂಧವನ್ನು ವೈಭವೀಕರಿಸಲಾಗಿದೆ ಎಂದು ನೆಟ್ಟಿಗರು ಚಿತ್ರತಂಡದ ವಿರುದ್ಧ ಕಿಡಿಕಾರಿದ್ದಾರೆ.

ಟೀಸರ್‌ನಲ್ಲಿ ಕಥಾನಾಯಕನ ವೈವಾಹಿಕ ಜೀವನದಲ್ಲಿ ಎದುರಾಗುವ ಗೊಂದಲಗಳನ್ನು ತೋರಿಸಲಾಗಿದೆ. ಸಾರಾ ಅಲಿ ಖಾನ್, ರಕುಲ್ ಪ್ರೀತ್ ಸಿಂಗ್ ಮತ್ತು ವಮೀಕಾ ಗಬ್ಬಿ ಅವರು ಈ ಸಿನಿಮಾದಲ್ಲಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ನಾಯಕಿಯರ ಜೊತೆ ಹೀರೋ ಪ್ರೇಮದಾಟ ನಡೆಸುವುದನ್ನು ಕಾಮಿಡಿಯಾಗಿ ಚಿತ್ರಿಸಲಾಗಿದೆ. ಆದರೆ, ಪತ್ನಿಗೆ ದ್ರೋಹ ಮಾಡುವುದನ್ನು ಹಾಸ್ಯದ ರೂಪದಲ್ಲಿ ತೋರಿಸಿದ ಕಾರಣದಿಂದ ಒಂದು ವರ್ಗದ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ.

ಟೀಸರ್ ನೋಡಿದ ಅನೇಕರು ಬಾಲಿವುಡ್‌ನ ಇಂತಹ ಕಥಾವಸ್ತುವಿನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಲವು ನೆಗೆಟಿವ್ ಕಮೆಂಟ್​ಗಳು ಬಂದಿವೆ. ‘ಬಾಲಿವುಡ್ ಗಂಭೀರವಾದ ಸಮಸ್ಯೆಗಳ ಮೇಲೆ ಕಾಮಿಡಿ ಮಾಡುವುದನ್ನು ನಿಲ್ಲಿಸಬೇಕು. ಪತ್ನಿಗೆ ದ್ರೋಹ ಮಾಡುವುದು ಅಥವಾ ಟಾಕ್ಸಿಕ್ ಸಂಬಂಧಗಳನ್ನು ಹಾಸ್ಯದ ರೂಪದಲ್ಲಿ ತೋರಿಸುವುದು ಸರಿಯಲ್ಲ’ ಎಂದು ಒಬ್ಬರು ಕಿಡಿಕಾರಿದ್ದಾರೆ.

‘ಪತಿ ಪತ್ನಿ ಔರ್ ವೋ ದೋ’ ಟೀಸರ್:

‘ಇದೇ ಸಿನಿಮಾದಲ್ಲಿ ಹೆಂಡತಿ ಗಂಡನಿಗೆ ಮೋಸ ಮಾಡುವುದನ್ನು ತೋರಿಸಿದ್ದರೆ ತಕ್ಷಣ ಸಿನಿಮಾ ಬ್ಯಾನ್ ಆಗುತ್ತಿತ್ತು. ಆದರೆ ಗಂಡ ಮಾಡಿದರೆ ಅದು ಕಾಮಿಡಿಯೇ?’ ಎಂದು ಅನೇಕರು ಪ್ರಶ್ನಿಸಿದ್ದಾರೆ. ‘ಗಂಡಂದಿರ ಬುದ್ಧಿಯೇ ಇಷ್ಟು ಎನ್ನುವಂತಹ ಸಂಭಾಷಣೆಗಳ ಮೂಲಕ ಗಂಡಸರ ಬಗ್ಗೆ ತಪ್ಪು ಸಂದೇಶ ರವಾನಿಸಲಾಗುತ್ತಿದೆ’ ಎಂದು ಕೂಡ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಇನ್ನೂ ಬಾಡಿಗೆ ಮನೆಯಲ್ಲೇ ಇದ್ದಾರೆ ಆಯುಷ್ಮಾನ್​ ಖುರಾನಾ; ತಿಂಗಳ ರೆಂಟ್ ಎಷ್ಟು ಲಕ್ಷ?

‘ಬಾಲಿವುಡ್‌ನ ಸೃಜನಶೀಲತೆ ಸಂಪೂರ್ಣವಾಗಿ ನಶಿಸಿ ಹೋಗಿದೆ. ವಿವಾಹೇತರ ಸಂಬಂಧಗಳನ್ನು ವೈಭವೀಕರಿಸುವುದರಲ್ಲೇ ಬಾಲಿವುಡ್ ಕಾಲ ಕಳೆಯುತ್ತಿದೆ’ ಎಂದು ಕೂಡ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಆಯುಷ್ಮಾನ್ ಖುರಾನಾ ಅವರ ಈ ಹೊಸ ಸಿನಿಮಾ ಬಿಡುಗಡೆಗೂ ಮುನ್ನವೇ ವಿವಾದದ ಸುಳಿಗೆ ಸಿಲುಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

GT vs MI: W,W,W.. ಪವರ್‌ಪ್ಲೇನಲ್ಲೇ ಮುಂಬೈ ಪವರ್ ಕಸಿದ ಕಗಿಸೋ ರಬಾಡ – Kannada News | IPL 2026: Rabada’s Fiery Spell Decimates Mumbai Indians’ Top Order vs Gujarat Titans

ಐಪಿಎಲ್ 2026 ರ 30 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ತಂಡಕ್ಕೆ ಎಂದಿನಂತೆ ಕಳಪೆ ಆರಂಭ ಸಿಕ್ಕಿತು. ಪವರ್‌ಪ್ಲೇನಲ್ಲಿಯೇ ತಂಡದ ಪ್ರಮುಖ 3 ವಿಕೆಟ್​ಗಳು ಪತನವಾದವು. ರಬಾಡ ಅವರ ಮಾರಕ ದಾಳಿಗೆ ತತ್ತರಿಸಿದ ಮುಂಬೈ ಟಾಪ್ ಆರ್ಡರ್ ಬಹುಬೇಗನೇ ಪೆವಿಲಿಯನ್ ಸೇರಿಕೊಂಡಿತು.

ವಾಸ್ತವವಾಗಿ ಈ ಪಂದ್ಯಕ್ಕೆ ಮುಂಬೈ ತಂಡದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿತ್ತು. ಅದರಂತೆ ರಿಯಾನ್ ರಿಕಲ್ಟನ್ ಬದಲಿಗೆ ಭಾರತದ ಯುವ ಆಟಗಾರ ಡ್ಯಾನಿಶ್ ಮಾಲೆವಾರ್ ಅವರಿಗೆ ಆಡುವ ಅವಕಾಶ ನೀಡಲಾಯಿತು. ಇದು ಡ್ಯಾನಿಶ್ ಮಾಲೆವಾರ್ ಅವರ ಚೊಚ್ಚಲ ಐಪಿಎಲ್ ಪಂದ್ಯವೂ ಆಗಿತ್ತು. ಆದರೆ ಮೊದಲ ಪಂದ್ಯದಲ್ಲಿ ಎಡವಿದ ಮಾಲೆವಾರ್ 4 ಎಸೆತಗಳನ್ನು ಕೇವಲ 2 ರನ್ ಬಾರಿಸಿ ರಬಾಡ ಬೌಲಿಂಗ್‌ನಲ್ಲಿ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ದರು.

ಇನ್ನು ಕಳೆದ ಪಂದ್ಯದಲ್ಲಿ ಅಬ್ಬರದ ಶತಕ ಬಾರಿಸಿದ ಕ್ವಿಂಟನ್ ಡಿ ಕಾಕ್ ಮೇಲೆ ಈ ಪಂದ್ಯದಲ್ಲೂ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಈ ಪಂದ್ಯದಲ್ಲಿ ನಿರೀಕ್ಷೆ ಪೂರ್ಣಗೊಳಿಸುವಲ್ಲಿ ಎಡವಿದ ಡಿ ಕಾಕ್ ಕೂಡ ರಬಾಡ ಅವರ ಎರಡನೇ ಓವರ್​ನಲ್ಲಿ ಕ್ಯಾಚಿತ್ತು ಔಟಾದರು.

ಈ ಇಬ್ಬರು ಆರಂಭಿಕರು 25 ರನ್​​ಗಳಿಗೆ ಪೆವಿಲಿಯನ್ ಸೇರಿಕೊಂಡ ಬಳಿಕ ಅನುಭವಿ ಸೂರ್ಯಕುಮಾರ್ ಯಾದವ್ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿತು. ಅದರಂತೆ ಸೂರ್ಯ ಕೂಡ ಸಿಕ್ಸರ್ ಬಾರಿಸುವ ಮೂಲಕ ಉತ್ತಮ ಆರಂಭ ಪಡೆದುಕೊಂಡರು. ಆದರೆ ರಬಾಡ ಎಸೆದ ಅವರ ಖೋಟಾದ ಮೂರನೇ ಓವರ್​ನಲ್ಲಿ ಸೂರ್ಯ ಕ್ಲೀನ್ ಬೌಲ್ಡ್ ಆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೀಟ್ ಸ್ಟ್ರೋಕ್ ಅಪಾಯ ಹೆಚ್ಚಳ: ತಡೆಗಟ್ಟಲು ಇಲ್ಲಿದೆ ಸಿಂಪಲ್ ಟಿಪ್ಸ್ – Kannada News | How to Prevent Heat Stroke During Heatwaves: Doctor Advice

ದೇಶದ ಹಲವೆಡೆ ಉಷ್ಣಾಂಶ ದಿನೇ ದಿನೇ ಏರುತ್ತಿರುವ ಹಿನ್ನೆಲೆ, ಹೀಟ್ ಸ್ಟ್ರೋಕ್ (Heat Stroke) ಎಂಬ ಗಂಭೀರ ಆರೋಗ್ಯ ಸಮಸ್ಯೆಯ ಅಪಾಯವೂ ಹೆಚ್ಚುತ್ತಿದೆ. ತೀವ್ರ ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆಯುವವರು ಈ ಸಮಸ್ಯೆಗೆ ಹೆಚ್ಚು ಒಳಗಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಹಾಗಾಗಿ ಈ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹಾಗಾದರೆ ಹೀಟ್ ಸ್ಟ್ರೋಕ್ ಎಂದರೇನು, ಲಕ್ಷಣಗಳು ಯಾವ ರೀತಿ ಕಂಡು ಬರುತ್ತದೆ, ಇದನ್ನು ತಡೆಗಟ್ಟುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೀಟ್ ಸ್ಟ್ರೋಕ್ ಎಂದರೇನು?

ಹೀಟ್ ಸ್ಟ್ರೋಕ್ ಎಂದರೆ ದೇಹದ ತಾಪಮಾನವು ಅತಿಯಾಗಿ ಏರಿಕೆ ಆಗಿ, ದೇಹವು ಅದನ್ನು ನಿಯಂತ್ರಿಸಲು ಸಾಧ್ಯವಾಗದ ಸ್ಥಿತಿಯಾಗಿದೆ. ಸಾಮಾನ್ಯವಾಗಿ ತೀವ್ರ ಬಿಸಿಲಿನಲ್ಲಿ ಅಥವಾ ಉಷ್ಣ ವಾತಾವರಣದಲ್ಲಿ ಹೆಚ್ಚು ಕಾಲ ಇರುವುದರಿಂದ ಈ ಸಮಸ್ಯೆ ಉಂಟಾಗುತ್ತದೆ.

ಪ್ರಮುಖ ಲಕ್ಷಣಗಳು:

ದೇಹದ ತಾಪಮಾನ ಏರಿಕೆ, ಚರ್ಮವು ಬಿಸಿ ಮತ್ತು ಒಣಗಿರುವುದು, ತಲೆ ಸುತ್ತು, ತಲೆನೋವು, ದುರ್ಬಲತೆ ಮತ್ತು ಗಾಬರಿ ಪ್ರಮುಖ ಲಕ್ಷಣಗಳಾಗಿವೆ. ಕೆಲವರಿಗೆ ವಾಂತಿ, ಅಸ್ವಸ್ಥತೆ ಮತ್ತು ಹೃದಯ ಬಡಿತ ವೇಗವಾಗಬಹುದು. ಗಂಭೀರ ಪರಿಸ್ಥಿತಿಯಲ್ಲಿ ವ್ಯಕ್ತಿ ಪ್ರಜ್ಞೆ ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ.

ಇದನ್ನೂ ಓದಿ: ಬದಲಾಗುತ್ತಿರುವ ಹವಾಮಾನದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿದೆ ಆಯುರ್ವೇದ ತಜ್ಞರು ನೀಡಿದ ಸಲಹೆ

ಯಾರು ಹೆಚ್ಚು ಅಪಾಯದಲ್ಲಿದ್ದಾರೆ?

ಮಕ್ಕಳು, ವೃದ್ಧರು ಮತ್ತು ಹೊರಗಡೆ ಕೆಲಸ ಮಾಡುವವರು ಹೀಟ್ ಸ್ಟ್ರೋಕ್‌ಗೆ ಹೆಚ್ಚು ಒಳಗಾಗುವ ಸಾಧ್ಯತೆ ಇದೆ. ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮತ್ತು ಕಡಿಮೆಯಾಗುತ್ತಿರುವ ಹಸಿರು ಪ್ರದೇಶಗಳು ಈ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ.

ತಡೆಗಟ್ಟುವ ಕ್ರಮಗಳು:

ಹೀಟ್ ಸ್ಟ್ರೋಕ್ ತಪ್ಪಿಸಲು ಕೆಲವು ಸರಳ ಕ್ರಮಗಳನ್ನು ಪಾಲಿಸಬಹುದು. ಮಧ್ಯಾಹ್ನದ ತೀವ್ರ ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಹೊರಗೆ ಹೋಗುವಾಗ ಹಗುರ ಮತ್ತು ಸಡಿಲ ಬಟ್ಟೆಗಳನ್ನು ಧರಿಸಬೇಕು, ತಲೆಯನ್ನು ಮುಚ್ಚಿಕೊಳ್ಳುವುದು ಉತ್ತಮ. ದಿನಪೂರ್ತಿ ಸಾಕಷ್ಟು ನೀರು ಕುಡಿಯಬೇಕು. ಎಳನೀರು, ನಿಂಬೆಹಣ್ಣಿನ ಜ್ಯೂಸ್ ಮತ್ತು ಮಜ್ಜಿಗೆ ದೇಹವನ್ನು ತಂಪಾಗಿಡಲು ಸಹಕಾರಿ. ಹೆಚ್ಚು ಸಮಯ ಬಿಸಿಲಿನಲ್ಲಿ ಕೆಲಸ ಮಾಡುವವರು ಮಧ್ಯಂತರದಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕು. ಬಿಸಿಲಿನ ಸಮಯದಲ್ಲಿ ಹಗುರವಾದ ಆಹಾರ ಸೇವಿಸುವುದು ಉತ್ತಮ. ತೈಲಯುಕ್ತ ಮತ್ತು ಮಸಾಲೆಯುಕ್ತ ಆಹಾರಗಳನ್ನು ತಪ್ಪಿಸಬೇಕು. ಮನೆಗೆ ಬಂದ ತಕ್ಷಣ ತಣ್ಣೀರನ್ನು ಕುಡಿಯದೆ, ದೇಹ ತಂಪಾಗಲು ಸ್ವಲ್ಪ ಸಮಯ ನೀಡುವುದು ಉತ್ತಮ. ಲಕ್ಷಣಗಳು ಗಂಭೀರವಾಗಿ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಸಮಯಕ್ಕೆ ಸರಿಯಾಗಿ ಎಚ್ಚರಿಕೆ ವಹಿಸಿದರೆ ಹೀಟ್ ಸ್ಟ್ರೋಕ್‌ನಂತಹ ಅಪಾಯಕಾರಿ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

100 ಕೋಟಿ ರೂ. ಮೌಲ್ಯದ ಆಸ್ತಿ ಬಚ್ಚಿಟ್ಟಿದ್ದಾರಾ ನಟ ವಿಜಯ್? ಏನಿದು ಹೊಸ ಆರೋಪ? – Kannada News | Over Rs 100 Crore Mismatch In TVK Chief Vijay election Affidavit

ಚೆನ್ನೈ, ಏಪ್ರಿಲ್ 20: ಟಿವಿಕೆ ಮುಖ್ಯಸ್ಥ ವಿಜಯ್ (Vijay) ತಮ್ಮ ನಾಮಪತ್ರದಲ್ಲಿ ತಮ್ಮ ಆಸ್ತಿ ವಿವರಗಳನ್ನು ಮರೆಮಾಡಿದ್ದಾರೆ ಎಂದು ಆರೋಪಿಸಿ ಪೆರಂಬೂರು ಮತದಾರ ವಿಘ್ನೇಶ್ ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದಾರೆ. 2 ಕ್ಷೇತ್ರಗಳಲ್ಲಿ ಚುನಾವಣೆಗೆ ನಿಂತಿರುವ ವಿಜಯ್ ಎರಡೂ ಕಡೆ ಸಲ್ಲಿಸಿದ ಅಫಿಡವಿಟ್​ನಲ್ಲಿ ಘೋಷಿಸಿದ ಆದಾಯದಲ್ಲಿ 105 ಕೋಟಿ ರೂ. ವ್ಯತ್ಯಾಸ ಕಂಡುಬಂದಿದೆ. ಟಿವಿಕೆ ಮುಖ್ಯಸ್ಥ ಹಾಗೂ ನಟ ವಿಜಯ್ ಅವರ ಚುನಾವಣಾ ಅಫಿಡವಿಟ್‌ಗಳಲ್ಲಿ 100 ಕೋಟಿ ರೂ.ಗಳಿಗೂ ಹೆಚ್ಚು ವ್ಯತ್ಯಾಸವಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯಿಸುವಂತೆ ಮದ್ರಾಸ್ ಹೈಕೋರ್ಟ್ ಆದಾಯ ತೆರಿಗೆ ಇಲಾಖೆಗೆ ಆದೇಶಿಸಿದೆ.

ಡಿಎಂಕೆಯ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಆಡಳಿತವಿರುವ ತಮಿಳುನಾಡು ರಾಜ್ಯದಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ವಿಜಯ್ ಮತ್ತು ಅವರ ಹೊಸ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ)ಗೆ ಹೈಕೋರ್ಟ್‌ನ ಈ ಆದೇಶದಿಂದ ಭಾರೀ ಹಿನ್ನಡೆಯಾಗಿದೆ.

ಇದನ್ನೂ ಓದಿ: ತಮಿಳುನಾಡಲ್ಲಿ ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು

ತಮಿಳುನಾಡು ಚುನಾವಣೆಯಲ್ಲಿ ತಿರುಚ್ಚಿ ಮತ್ತು ಪೆರಂಬೂರು ಎಂಬ 2 ಕ್ಷೇತ್ರಗಳಿಂದ ಸ್ಪರ್ಧಿಸಲು ವಿಜಯ್ ಅರ್ಜಿಗಳನ್ನು ಸಲ್ಲಿಸಿದ್ದರು. ಪೆರಂಬೂರಿನ ಮತದಾರರೊಬ್ಬರು ನ್ಯಾಯಾಲಯದ ಮೊರೆ ಹೋಗಿ ಎರಡು ಸ್ಥಾನಗಳಿಗೆ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ವಿಜಯ್ ಅವರ ಆದಾಯದಲ್ಲಿ ಹೊಂದಾಣಿಕೆಯಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ತಿರುಚ್ಚಿ ಸ್ಥಾನಕ್ಕೆ ಸಲ್ಲಿಸಿದ ವಿಜಯ್ ಅವರ ಅಫಿಡವಿಟ್​​ನಲ್ಲಿ 220.15 ಕೋಟಿ ರೂ. ಆದಾಯವನ್ನು ತೋರಿಸಿದ್ದರೆ, ಇನ್ನೊಂದು ಸ್ಥಾನಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ 115.13 ಕೋಟಿ ರೂ. ಆದಾಯವಿದೆ ಎಂದು ದಾಖಲೆ ನೀಡಲಾಗಿದೆ. ಇವೆರಡೂ ಆದಾಯದಲ್ಲಿ 105 ಕೋಟಿ ರೂ.ಗಳ ವ್ಯತ್ಯಾಸವಿದೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಅಭಿಮಾನಿ ಎಸೆದ ಹೂವಿನ ಮಾಲೆಯನ್ನು ಬಾಂಬ್ ಎಂದು ತಿಳಿದು ಓಡಿದ ದಳಪತಿ ವಿಜಯ್

ನಟ-ರಾಜಕಾರಣಿಯಾಗಿರುವ ವಿಜಯ್ ತಮಿಳುನಾಡು ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಯಲ್ಲಿ ತಮ್ಮ ಚೊಚ್ಚಲ ಪ್ರವೇಶ ಮಾಡುವ ಸಾಧ್ಯತೆಯಿದೆ. ತಿರುಚಿರಾಪಳ್ಳಿ ಪೂರ್ವದಲ್ಲಿ ವಿಜಯ್ ಡಿಎಂಕೆಯ ಇನಿಗೋ ಎಸ್. ಇರುದಯರಾಜ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಪೆರಂಬೂರಿನಲ್ಲಿ, ಅವರು ಡಿಎಂಕೆ ಶಾಸಕ ಆರ್.ಡಿ ಶೇಖರ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 4ರಂದು ಮತ ಎಣಿಕೆ ನಡೆಯಲಿದೆ. ಕಾಂಗ್ರೆಸ್, ಡಿಎಂಡಿಕೆ ಮತ್ತು ವಿಸಿಕೆ ಒಳಗೊಂಡ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ, ಬಿಜೆಪಿ ಮತ್ತು ಪಿಎಂಕೆ ಮೈತ್ರಿಕೂಟಗಳನ್ನು ಹೊಂದಿರುವ ಎಐಎಡಿಎಂಕೆ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ನಡುವೆ ಪ್ರಮುಖ ಸ್ಪರ್ಧೆ ಏರ್ಪಡಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

WhatsApp Plus: ಬರುತ್ತಿದೆ ಹೊಸ ವಾಟ್ಸ್ಆ್ಯಪ್ ಪ್ಲಸ್: ಇದಕ್ಕೆ ಹಣ ಪಾವತಿಸಬೇಕೇ?, ಏನೆಲ್ಲ ಫೀಚರ್ಸ್ ಇದೆ ನೋಡಿ – Kannada News | WhatsApp is introducing a premium subscription service called WhatsApp Plus

ಬೆಂಗಳೂರು (ಏ. 20): ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp), ಈಗ ವಾಟ್ಸ್​ಆ್ಯಪ್ ಪ್ಲಸ್ ಎಂಬ ಹೊಸ ಪ್ರೀಮಿಯಂ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಪಾವತಿಸಿದ ಚಂದಾದಾರಿಕೆಯಾಗಲಿದೆ, ಆದರೆ ಒಳ್ಳೆಯ ಸುದ್ದಿ ಎಂದರೆ ಇದು ಮೂಲ ಅಪ್ಲಿಕೇಶನ್ ಬಳಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಹೊಸ ಯೋಜನೆಯಿಂದಲೂ ಸಂದೇಶ ಕಳುಹಿಸುವಿಕೆ, ಕರೆ ಮಾಡುವಿಕೆ ಮತ್ತು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನಂತಹ ವೈಶಿಷ್ಟ್ಯಗಳು ಬಳಕೆದಾರರಿಗೆ ಉಚಿತವಾಗಿಯೇ ಇರುತ್ತವೆ. ಇದರರ್ಥ ಸಾಮಾನ್ಯ ಬಳಕೆದಾರರು ದೈನಂದಿನ ಕೆಲಸಗಳಿಗೆ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಅಪ್ಲಿಕೇಶನ್‌ನಲ್ಲಿ ಸ್ವಲ್ಪ ಹೆಚ್ಚಿನ ನಿಯಂತ್ರಣ ಮತ್ತು ಕಸ್ಟಮೈಸೇಶನ್ ಬಯಸುವವರಿಗೆ ವಾಟ್ಸ್​ಆ್ಯಪ್ ಪ್ಲಸ್ ವಿಶೇಷವಾಗಿ ಲಭ್ಯವಿದೆ.

ವಾಟ್ಸ್​ಆ್ಯಪ್ ಪ್ಲಸ್​ನಲ್ಲಿ ಏನೆಲ್ಲಾ ವಿಶೇಷತೆಗಳಿವೆ?

ಈ ಚಂದಾದಾರಿಕೆಯು ಬಳಕೆದಾರರಿಗೆ ಸಾಮಾನ್ಯ ಬಳಕೆದಾರರು ಹೊಂದಿರದ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳಿಗೆ ಪ್ರವೇಶವನ್ನು ನೀಡುತ್ತದೆ. ಇವುಗಳಲ್ಲಿ ವಿಶೇಷ ಸ್ಟಿಕ್ಕರ್‌ಗಳು, ವಿಭಿನ್ನ ಥೀಮ್‌ಗಳು ಮತ್ತು ಅಪ್ಲಿಕೇಶನ್‌ನ ಐಕಾನ್ ಅನ್ನು ಬದಲಾಯಿಸುವ ಆಯ್ಕೆ ಸೇರಿವೆ, ಇದು ನಿಮ್ಮ ವಾಟ್ಸ್​ಆ್ಯಪ್​ನ ನೋಟವನ್ನು ಸಂಪೂರ್ಣವಾಗಿ ಬದಲಾಯಿಸಲು ಅನುವು ಮಾಡಿಕೊಡುತ್ತದೆ.

ಹೆಚ್ಚುವರಿಯಾಗಿ, ನೀವು ಬಹು ಚಾಟ್‌ಗಳನ್ನು ಪಿನ್ ಮಾಡಲು ಸಾಧ್ಯವಾಗುತ್ತದೆ, ಪ್ರಮುಖ ಸಂಭಾಷಣೆಗಳನ್ನು ಯಾವಾಗಲೂ ಮೇಲ್ಭಾಗದಲ್ಲಿ ಗೋಚರಿಸುವಂತೆ ಮಾಡುತ್ತದೆ. ಬಳಕೆದಾರರು ತಮ್ಮ ನೆಚ್ಚಿನ ಕಾಂಟೆಕ್ಟ್​ಗಳಿಗೆ ವಿಭಿನ್ನ ರಿಂಗ್‌ಟೋನ್‌ಗಳು ಮತ್ತು ನೋಟಿಫಿಕೇಷನ್ ಅನ್ನು ಹೊಂದಿಸಲು ಸಾಧ್ಯವಾಗುತ್ತದೆ, ಇದು ಚಾಟಿಂಗ್ ಅನುಭವವನ್ನು ಹೆಚ್ಚು ವೈಯಕ್ತಿಕಗೊಳಿಸುತ್ತದೆ.

ವಾಟ್ಸ್​ಆ್ಯಪ್ ಪ್ಲಸ್​ನಲ್ಲಿ ಯಾವ ಬಳಕೆದಾರರು ಈ ವೈಶಿಷ್ಟ್ಯವನ್ನು ಪಡೆಯುತ್ತಾರೆ?

ಈ ವೈಶಿಷ್ಟ್ಯವನ್ನು ಪ್ರಸ್ತುತ ಸೀಮಿತ ಸಂಖ್ಯೆಯ ಬಳಕೆದಾರರೊಂದಿಗೆ ಪರೀಕ್ಷಿಸಲಾಗುತ್ತಿದೆ, ಮುಖ್ಯವಾಗಿ ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ನಲ್ಲಿ. ಇದನ್ನು ಭವಿಷ್ಯದಲ್ಲಿ ಕ್ರಮೇಣ ಇತರ ಬಳಕೆದಾರರಿಗೆ ವಿಸ್ತರಿಸಬಹುದು. ಈ ವೈಶಿಷ್ಟ್ಯವು ವಾಟ್ಸ್​ಆ್ಯಪ್ ಮೆಸೆಂಜರ್‌ನಲ್ಲಿ ಮಾತ್ರ ಲಭ್ಯವಿದೆ, ಬ್ಯುಸಿನೆಸ್ ಅಪ್ಲಿಕೇಶನ್‌ನಲ್ಲಿ ಅಲ್ಲ ಎಂಬುದು ಗಮನಿಸಬೇಕಾದ ಸಂಗತಿ.

Vivo T5 Pro 5G: ಭಾರತದಲ್ಲಿ ಬರೋಬ್ಬರಿ 9,020mAh ಬ್ಯಾಟರಿಯ ಹೊಸ ಸ್ಮಾರ್ಟ್​​ಫೋನ್ ಬಿಡುಗಡೆ: ಬೆಲೆ ಕೇವಲ..

ವಾಟ್ಸ್​ಆ್ಯಪ್ ಪ್ಲಸ್ ಚಂದಾದಾರಿಕೆ ಹೇಗೆ ಕೆಲಸ ಮಾಡುತ್ತದೆ?

ವಾಟ್ಸ್​ಆ್ಯಪ್ ಪ್ಲಸ್ ಮಾಸಿಕ ಚಂದಾದಾರಿಕೆಯಾಗಿದ್ದು, ಬಳಕೆದಾರರು ತಮ್ಮ ಅಪ್ಲಿಕೇಶನ್‌ನ ಸೆಟ್ಟಿಂಗ್‌ಗಳಲ್ಲಿ ಇದನ್ನು ಸಕ್ರಿಯಗೊಳಿಸಬಹುದು. ಒಮ್ಮೆ ಸಕ್ರಿಯಗೊಳಿಸಿದ ನಂತರ, ಬಳಕೆದಾರರು ಅದನ್ನು ರದ್ದುಗೊಳಿಸುವವರೆಗೆ ಅದು ಪ್ರತಿ ತಿಂಗಳು ಸ್ವಯಂಚಾಲಿತವಾಗಿ ನವೀಕರಿಸಲ್ಪಡುತ್ತದೆ. ಪಾವತಿಯನ್ನು ಆಪ್ ಸ್ಟೋರ್ ಮೂಲಕ ಮಾಡಲಾಗುತ್ತದೆ ಮತ್ತು ಎಲ್ಲಾ ವೈಶಿಷ್ಟ್ಯಗಳನ್ನು ಒಂದೇ ಖಾತೆಯಿಂದ ನಿರ್ವಹಿಸಲಾಗುತ್ತದೆ.

ವಾಟ್ಸ್​ಆ್ಯಪ್ ಪ್ಲಸ್ ಬೆಲೆ ಎಷ್ಟು?

ಇದರ ಅಧಿಕೃತ ಬೆಲೆಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ, ಆದರೆ ಆರಂಭಿಕ ಪರೀಕ್ಷೆಯು ಯುರೋಪ್‌ನಲ್ಲಿ ತಿಂಗಳಿಗೆ ಸುಮಾರು €2.49 ಎಂದು ಸೂಚಿಸುತ್ತದೆ. ಭಾರತದಲ್ಲಿ, ಬೆಲೆ ಕಡಿಮೆಯಾಗಬಹುದು, ಅಂದಾಜು €200-250 ಇರಬಹುದು.

ವಾಟ್ಸ್​ಆ್ಯಪ್ ಪ್ಲಸ್ ಅನ್ನು ಅಧಿಕೃತ ಅಪ್ಲಿಕೇಶನ್ ಮೂಲಕ ಮಾತ್ರ ಬಳಸಬಹುದು. ಅನಧಿಕೃತ ಅಥವಾ ಮಾರ್ಪಡಿಸಿದ ಆವೃತ್ತಿಗಳನ್ನು ಬಳಸುವ ಬಳಕೆದಾರರನ್ನು ತಾತ್ಕಾಲಿಕ ಅಥವಾ ಶಾಶ್ವತವಾಗಿ ಬ್ಲಾಕ್ ಮಾಡಬಹುದು. ತಮ್ಮ ಚಾಟಿಂಗ್ ಅನುಭವವನ್ನು ಹೆಚ್ಚಿಸಲು ಬಯಸುವ ಬಳಕೆದಾರರಿಗೆ ವಾಟ್ಸ್​ಆ್ಯಪ್ ಪ್ಲಸ್ ಒಂದು ಹೊಸ ಆಯ್ಕೆಯಾಗಿದೆ. ಆದಾಗ್ಯೂ, ನಿಯಮಿತ ಬಳಕೆದಾರರಿಗೆ ಅಪ್ಲಿಕೇಶನ್ ಉಚಿತವಾಗಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:03 pm, Mon, 20 April 26

Source link

Exit mobile version