ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು? – Kannada News | What is future plans of Bigg Boss Kannada runner up Rakshita Shetty

ರಕ್ಷಿತಾ ಶೆಟ್ಟಿ (Rakshita Shetty) ಬಿಗ್​​ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ಆಗಿದ್ದಾರೆ. ಮೊದಲ ದಿನವೇ ಶೋನಿಂದ ಹೊರ ಹಾಕಲ್ಪಟ್ಟ ರಕ್ಷಿತಾ ಶೆಟ್ಟಿ ಮತ್ತೆ ರೀ ಎಂಟ್ರಿ ಆಗಿ ಕೊನೆಯ ದಿನದ ವರೆಗೆ ಇದ್ದಿದ್ದು ಸಾಮಾನ್ಯ ಸಾಧನೆಯಲ್ಲ. ಚಿತ್ರರಂಗದ ಹಿನ್ನೆಲೆ ಇಲ್ಲದ, ಕನ್ನಡ ಭಾಷೆ ತಿಳಿಯದೆ, ಅನುಭವದ ಕೊರತೆ ಹೀಗೆ ಹಲವು ತೊಡಕುಗಳು ಇದ್ದಾಗಿಯೂ ಸಹ ರಕ್ಷಿತಾ ಶೆಟ್ಟಿ ಅತ್ಯದ್ಭುತವಾಗಿ ಆಡಿ ರನ್ನರ್ ಅಪ್ ಆದರು. ಇದೀಗ ಶೋ ಮುಗಿದಿದೆ. ಆದರೆ ಮುಂದೇನು? ಯೂಟ್ಯೂಬ್ ಮುಂದುವರೆಸುತ್ತಾರಾ? ಮನೊರಂಜನಾ ಕ್ಷೇತ್ರಕ್ಕೆ ಕಾಲಿಡುತ್ತಾರಾ? ರಕ್ಷಿತಾ ಮುಂದಿರುವ ಆಯ್ಕೆಗಳು ಏನೇನು? ಅವರೇ ಹೇಳಿದ್ದಾರೆ ಕೇಳಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

 

Source link

ಧರ್ಮಸ್ಥಳ ಬುರುಡೆ ಕೇಸ್​​: ಬಂಗ್ಲೆಗುಡ್ಡದಲ್ಲಿ ಸಿಕ್ಕ ಅಸ್ಥಿಪಂಜರಗಳು FSLಗೆ ರವಾನೆ, ಸಿಕ್ಕಿದ್ದೇಷ್ಟು – Kannada News | Dharmasthala Mass Burial Case: 7 Skeletons from Banglegudde Forest Sent to FSL for Probe

ಮಂಗಳೂರು, ಜನವರಿ 20: ಧರ್ಮಸ್ಥಳದ (Dharmasthala) ವಿರುದ್ಧ ಷಡ್ಯಂತ್ರ ಮತ್ತು ಅಪಪ್ರಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಬಂಗ್ಲೆಗುಡ್ಡದಲ್ಲಿ ಸಿಕ್ಕ 7 ಅಸ್ಥಿಪಂಜರಗಳನ್ನು ಎಸ್​​ಐಟಿ ಅಧಿಕಾರಿಗಳು ಎಫ್​ಎಸ್​ಎಲ್​​​ (FSL) ಗೆ ರವಾನೆ ಮಾಡಿದ್ದಾರೆ. ಹೆಚ್ಚಿನ ತನಿಖೆಗಾಗಿ ಬೆಂಗಳೂರಿನ ಮಡಿವಾಳದಲ್ಲಿರುವ ಎಫ್​ಎಸ್​ಎಲ್​​​ ಕಚೇರಿಗೆ ಅಸ್ಥಿಪಂಜರ ರವಾನೆ ಮಾಡಲಾಗಿದ್ದು, ಸದ್ಯ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಮಾನವನ 7 ಅಸ್ಥಿಪಂಜರಗಳು ಪತ್ತೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಸಮೀಪದ ಬಂಗ್ಲೆಗುಡ್ಡ ಅರಣ್ಯದಲ್ಲಿ ಎಸ್​​ಐಟಿ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಮಾನವನ 7 ಅಸ್ಥಿಪಂಜರ ಪತ್ತೆಯಾಗಿದ್ದವು. 2025ರ ಸೆಪ್ಟೆಂಬರ್​ 17ರಂದು 5 ಮತ್ತು ಸೆ.18ರಂದು 2 ಒಟ್ಟು ಏಳು ಅಸ್ಥಿಪಂಜರಗಳನ್ನು ಎಸ್​ಐಟಿ ಅಧಿಕಾರಿಗಳು ಪತ್ತೆಹಚ್ಚಿದ್ದರು.

ಇದನ್ನೂ ಓದಿ: ಬುರುಡೆ ಕೇಸ್​​ಗೆ ಎಂಟ್ರಿಕೊಟ್ಟ ಶ್ರೀಕ್ಷೇತ್ರ ಧರ್ಮಸ್ಥಳ: ಕೋರ್ಟ್​​ನಲ್ಲಿ ವಕಾಲತ್ತು ಸಲ್ಲಿಕೆ

ಅರಣ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಿತಿಯಲ್ಲಿ ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಸದ್ಯ ಹೆಚ್ಚಿನ ತನಿಖೆಗಾಗಿ ಬೆಳ್ತಂಗಡಿ ಎಸ್​​ಐಟಿ ಕಚೇರಿಯಿಂದ ಬೆಂಗಳೂರಿನ ಮಡಿವಾಳದಲ್ಲಿರುವ ಎಫ್​ಎಸ್​ಎಲ್ ಕಚೇರಿಗೆ ಅಸ್ಥಿಪಂಜರಗಳನ್ನು ರವಾನಿಸಲಾಗಿದೆ.

ಇನ್ನು ಅಸ್ಥಿಪಂಜರದ ಜಾಡು ಹಿಡಿದು ಹೊರಟ್ಟಿದ್ದ ಎಸ್​ಐಟಿ ಮಹತ್ವದ ಮಾಹಿತಿ ಕಲೆ ಹಾಕಿತ್ತು. ಪತ್ತೆಯಾಗಿದ್ದ 7 ಬುರುಡೆಗಳ ಪೈಕಿ ಒಂದು ಬುರುಡೆ ಕೊಡಗಿನ ಯು.ಬಿ.ಅಯ್ಯಪ್ಪ ಎಂಬುದು ಬಹುತೇಕ ಖಚಿತವಾಗಿತ್ತು. ಅಸ್ಥಿಪಂಜರ ಪತ್ತೆಯಾದ ಜಾಗದಲ್ಲಿ ಹಿರಿಯ ನಾಗರಿಕರೊಬ್ಬರ ಗುರುತಿನ ಚೀಟಿ ಪತ್ತೆಯಾಗಿತ್ತು. ಜೊತೆಗೆ ತ್ರಿ ಲೆಗ್ ಬ್ಯಾಲೆನ್ಸ್ ವಾಕಿಂಗ್ ಸ್ಟಿಕ್​ ಕೂಡ ಪತ್ತೆಯಾಗಿತ್ತು.

ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್​​ಗೆ ಮೇಜರ್​​ ಟ್ವಿಸ್ಟ್​​: SIT ತನಿಖೆಯಿಂದ ಕೊನೆಗೂ ಬಯಲಾಯ್ತು ಸತ್ಯ!

ಗುರುತಿನ ಚೀಟಿ ಕೊಡಗು ಮೂಲದ ಯು.ಬಿ. ಅಯ್ಯಪ್ಪ ಎಂಬುವರಿಗೆ ಸೇರಿದ್ದಾಗಿತ್ತು. ಪೊನ್ನಂಪೇಟೆ ತಾಲ್ಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಯು.ಬಿ ಅಯ್ಯಪ್ಪ ಏಳು ವರ್ಷಗಳ ಹಿಂದೆಯೇ ಕಾಣೆಯಾಗಿದ್ದರು. ಮೈಸೂರಿಗೆ ಚಿಕಿತ್ಸೆಗೆಂದು ತೆರಳಿದವರು ನಾಪತ್ತೆಯಾಗಿದ್ದರು. ಅಯ್ಯಪ್ಪ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು‌‌. ಈ ವೇಳೆ ಅವರ ಬಳಿ ತ್ರಿ ಲೆಗ್ ಬ್ಯಾಲೆನ್ಸ್ ವಾಕಿಂಗ್ ಸ್ಟಿಕ್ ಇದ್ದಿದ್ದಾಗಿ ಉಲ್ಲೇಖಿಸಲಾಗಿತ್ತು. ಹಾಗಾಗಿ ಆ ಅಸ್ಥಿಪಂಜರ ಅಯ್ಯಪ್ಪ ಅವರದ್ದೇ ಎಂದು ಎಸ್​ಐಟಿ ಶಂಕಿಸಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On – 5:49 pm, Tue, 20 January 26

Source link

ಡಿಜಿಪಿ ರಾಮಚಂದ್ರ ರಾವ್​​ ರಾಸಲೀಲೆ ಕೇಸ್​​​​: ಸರ್ಕಾರದ ಮುಂದಿರುವ ಸವಾಲುಗಳೇನು? – Kannada News | DGP Ramachandra Rao Scandal: Several Challenges for the Karnataka Government During the Investigation

ಬೆಂಗಳೂರು, ಜನವರಿ 20: ತಮ್ಮ ಕಚೇರಿಯಲ್ಲಿಯೇ ಮಹಿಳೆ ಜೊತೆ ಡಿಜಿಪಿ ರಾಮಚಂದ್ರ ರಾವ್​​ ರಾಸಲೀಲೆ ನಡೆಸಿರುವ ವಿಡಿಯೋ ಮತ್ತು ಆಡಿಯೋ ರಾಜ್ಯಾದ್ಯಂತ ಹಲ್​​ಚಲ್​​ ಸೃಷ್ಟಿಸಿದೆ. ವಿಚಾರ ಭಾರೀ ಮುಜುಗರ ಉಂಟುಮಾಡಿದ ಕಾರಣ ರಾಮಚಂದ್ರರಾವ್ ಅವರನ್ನು ಸರ್ಕಾರ ಅಮಾನತುಗೊಳಿಸಿ ಆದೇಶಿಸಿದೆ. ಮತ್ತೊಂದೆಡೆ ವಿಡಿಯೋ ವೈರಲ್​​ ಬೆನ್ನಲ್ಲೇ ಗೃಹ ಸಚಿವರ ಭೇಟಿಯಾಗಿದ್ದ ಡಿಜಿಪಿ 10 ದಿನಗಳ ಕಾಲ ರಜೆ ಹಾಕಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಅಧಿಕಾರಿ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸರ್ಕಾರ ಹೇಳುತ್ತಿದ್ದರೂ ಒಂದಿಷ್ಟು ಪ್ರಶ್ನೆಗಳು ಈ ವಿಚಾರದಲ್ಲಿ ಉದ್ಭವಿಸಿವೆ.

ಪ್ರಶ್ನೆ 1: ಪ್ರಕರಣದ ತನಿಖೆ ಯಾರಿಂದ?

ಹೇಳಿಕೇಳಿ ರಾಮಚಂದ್ರ ರಾವ್​​ ಹಿರಿಯ ಐಪಿಎಸ್​​ ಅಧಿಕಾರಿ. ಡಿಜಿಪಿ ಹುದ್ದೆಯ ಅಧಿಕಾರಿ. ಹೀಗಾಗಿ ಅವರಿಗಿಂತ ಜೂನಿಯರ್​​ ಅಧಿಕಾರಿಯಿಂದ ತನಿಖೆ ಒಪ್ಪಲಾಗದ ಮಾತು. ಹೀಗಾಗಿ ಪ್ರಕರಣದ ತನಿಖೆ ಮತ್ತೋರ್ವ ಡಿಜಿಪಿಯಿಂದಲೇ ಆಗಬೇಕಾದ ಅನಿವಾರ್ಯತೆ ಇದೆ. ತನಿಖಾ ವರದಿ ಬಳಿಕ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಕ್ಕೆ ಮುಜುಗರ ಆಗಿದ್ದಕ್ಕೆ ಸಸ್ಪೆಂಡ್ ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್​​ ಹೇಳಿದ್ದರೂ ಸಹ ಪ್ರಕರಣದ ತನಿಖೆಗೆ ಯಾರನ್ನು ಇನ್ನೂ ನೇಮಕ ಮಾಡಿಲ್ಲ ಎಂಬುದನ್ನೂ ಸ್ಪಷ್ಟವಾಗಿ ಉಲ್ಲೇಖಿಸಿರೋದಿಲ್ಲಿ ಗಮನಾರ್ಹ.

ಇದನ್ನೂ ಓದಿ: ಯಾರು ಈ ರಾಮಚಂದ್ರ ರಾವ್​​? ಕಚೇರಿಯಲ್ಲೇ ರಾಸಲೀಲೆ ಮಾಡಿ ಸಿಕ್ಕಿಬಿದ್ದ ಡಿಜಿಪಿ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ

ಪ್ರಶ್ನೆ 2: ಸಂತ್ರಸ್ತ ಮಹಿಳೆ ದೂರು ಕೊಡದಿದ್ದಲ್ಲಿ ಮುಂದೇನು?

ವೈರಲ್​​ ಆಗಿರುವ ವಿಡಿಯೋದಲ್ಲಿ ರಾಮಚಂದ್ರರಾವ್​​ ಜೊತೆಗಿರುವ ಸಂತ್ರಸ್ತ ಮಹಿಳೆ ಬೆಳಗಾವಿ ಮೂಲದ ಪ್ರಾಧ್ಯಾಪಕಿಯಾಗಿದ್ದರು ಎಂಬುದು ಗೊತ್ತಾಗಿದೆ. ಗಂಡ ಮತ್ತು ಹೆಂಡತಿ ನಡುವೆ ಗಲಾಟೆ ಹಿನ್ನೆಲೆ ಆಕೆ ಪೊಲೀಸ್​​ ಠಾಣೆ ಮೆಟ್ಟಿಲೇರಿದ್ದರು. ಅಲ್ಲಿ ಸರಿಯಾದ ರೀತಿಯಲ್ಲಿ ನ್ಯಾಯ ಸಿಗದ ಕಾರಣ 6 ವರ್ಷದ ಹಿಂದೆ ಬೆಳಗಾವಿಯ ಐಜಿಯಾಗಿದ್ದ ರಾಮಚಂದ್ರರಾವ್ ಅವರನ್ನು ಸಂಪರ್ಕಿಸಿದ್ದರು. ಬಳಿಕ ಆಕೆ ಮತ್ತು ರಾಮಚಂದ್ರರಾವ್​​ ನಡುವೆ ಸಲುಗೆ ಬೆಳೆದಿತ್ತು ಎನ್ನಲಾಗಿದೆ. ಆದರೆ ಅಧಿಕಾರಿಯಿಂದ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ ಎಂದು ಸಂತ್ರಸ್ತೆ ಈವರೆಗೂ ದೂರು ಕೊಟ್ಟಿಲ್ಲ.

ಪ್ರಶ್ನೆ 3: ಅಧಿಕಾರಿ ಮೇಲೆ ಕ್ರಮಕ್ಕೆ ವಿಡಿಯೋ ಅಸಲೀಯತ್ತು ಸಾಕಲ್ಲವೇ?

ಒಂದೊಮ್ಮೆ ಸಂತ್ರಸ್ತೆ ದೂರು ನೀಡಲು ಹಿಂದೇಟು ಹಾಕಿದರೂ ವೈರಲ್​​ ಆಗಿರುವ ವಿಡಿಯೋ ಅಸಲೀಯತ್ತನ್ನು ಸರ್ಕಾರ ತಿಳಿದುಕೊಳ್ಳಬಹುದು. FSL ವರದಿ ಆಧರಿಸಿ ಘಟನೆ ಸತ್ಯ ಎಂಬುದು ಸಾಭೀತಾದರೂ ರಾಮಚಂದ್ರರಾವ್​​ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬಹುದು. ಸರ್ಕಾರಿ ಕಚೇರಿಯಲ್ಲಿ ಅದರಲ್ಲೂ ಸಮವಸ್ತ್ರದಲ್ಲೇ ಅಧಿಕಾರಿ ಚಕ್ಕಂದ ಆಡಿರುವುದು ಪೊಲೀಸ್​​ ಯೂನಿಫಾರಂಗೇ ಮಾಡಿರುವ ದೊಡ್ಡ ಅವಮಾನ.

ಪ್ರಶ್ನೆ 4: ಸೇವಾ ಅವಧಿ ಉಳಿದುರುವುದೇ ಕೆಲ ತಿಂಗಳು; ಕ್ರಮ ಯಾವಾಗ?

ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಾಮಚಂದ್ರ ರಾವ್​​ ಅವರ ಸೇವಾ ಅವಧಿ ಉಳಿದಿರುವುದೇ ಇನ್ನು ಕೆಲವು ತಿಂಗಳುಗಳು ಮಾತ್ರ. ಹೀಗಿರುವಾಗ ಘಟನೆಯ ತನಿಖೆಯ ಬಗ್ಗೆ ಇನ್ನೂ ತನಿಖಾಧಿಕಾರಿಯನ್ನೇ ನೇಮಿಸದ ಸರ್ಕಾರ ಪ್ರಕರಣದ ಸತ್ಯಾಸತ್ಯತೆ ತಿಳಿಯೋದು ಯಾವಾಗ? ತನಿಖೆ ಮುಗಿದು ಅದರ ವರದಿ ಅಧಾರದಲ್ಲಿ ಕ್ರಮ ಜರುಗಿಸೋದು ಯಾವಾಗ ಎನ್ನುವ ಪ್ರಶ್ನೆ ಸದ್ಯ ಸಾರ್ವಜನಿಕರನ್ನು ಕಾಡುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Chanakya Niti: ಮಾನಸಿಕವಾಗಿ ಬಲಿಷ್ಠರಾಗಲು ಚಾಣಕ್ಯರು ಹೇಳಿರುವ ಈ ತತ್ವಗಳನ್ನು ಪಾಲಿಸಿ – Kannada News | Chanakya Niti: Follow these principles of Chanakya to become mentally strong

ಆಚಾರ್ಯ ಚಾಣಕ್ಯರು (Acharya Chanakya) ಮಾನಸಿಕ ಶಕ್ತಿಯನ್ನು ಯಶಸ್ಸಿನ ದೊಡ್ಡ ಕೀಲಿಕೈ ಎಂದು ಬಣ್ಣಿಸಿದ್ದಾರೆ. ಬಲವಾದ ಮನಸ್ಸು ವ್ಯಕ್ತಿಯನ್ನು ಕಠಿಣ ಸಂದರ್ಭಗಳಲ್ಲಿಯೂ ಶಾಂತವಾಗಿರಲು, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ತಮ್ಮ ಗುರಿಗಳನ್ನು ಸಾಧಿಸಲು ಸಬಲಗೊಳಿಸುತ್ತದೆ. ಆದ್ದರಿಂದ ಮಾನಸಿಕವಾಗಿ ಬಲಿಷ್ಠರಾಗಲು ಚಾಣಕ್ಯರು ಹೇಳಿರುವ ಈ ಕೆಲವು ಸಲಹೆಗಳನ್ನು ಅನುಸರಿಸಿ. ಖಂಡಿತವಾಗಿಯೂ ಇದು ನಿಮ್ಮ ಆಲೋಚನೆ, ಆತ್ಮವಿಶ್ವಾಸ ಮತ್ತು ಜೀವನಶೈಲಿಯನ್ನು ಸಂಪೂರ್ಣವಾಗಿ ಪರಿವರ್ತಿಸಬಹುದು.

ಮಾನಸಿಕವಾಗಿ ಬಲಿಷ್ಠರಾಗಿರಲು ಏನು ಮಾಡಬೇಕು?

ಪ್ರತಿದಿನ ಯೋಚಿಸುವ ಅಭ್ಯಾಸ ಬೆಳೆಸಿಕೊಳ್ಳಿ: ಉತ್ತಮವಾಗಿ ಯೋಚಿಸುವ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯರು ಹೇಳುತ್ತಾರೆ.  ನಿಮ್ಮ ಮಾನಸಿಕ ಶಕ್ತಿಯನ್ನು ಹೆಚ್ಚಿಸಲು ನೀವು ಬಯಸಿದರೆ, ನಿಮ್ಮ ಆಲೋಚನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಯೋಚಿಸಬೇಕು. ಯೋಚಿಸಲು ಪ್ರತಿದಿನ ಒಂದಷ್ಟು ಸಮಯವನ್ನು ಮೀಸಲಿಡಬೇಕು. ಈ ಸಣ್ಣ ಅಭ್ಯಾಸವು ನಿಮ್ಮನ್ನು ಹೆಚ್ಚು ಸಹಿಷ್ಣು ಮತ್ತು ಬುದ್ಧಿವಂತರನ್ನಾಗಿ ಮಾಡಬಹುದು ಮತ್ತು ನೀವು ತೆಗೆದುಕೊಳ್ಳುವ ನಿರ್ಧಾರಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಸ್ವಾವಲಂಬಿಯಾಗಿ: ಆಚಾರ್ಯ ಚಾಣಕ್ಯರು ಹೇಳುವಂತೆ, ನೀವು ನಿಮ್ಮ ಮಾನಸಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ, ಮೊದಲ ಹೆಜ್ಜೆ ಸ್ವಾವಲಂಬಿಗಳಾಗುವುದು. ನೀವು ನಿಮ್ಮ ಸ್ವಂತ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದಾಗ, ನಿಮ್ಮ ಮನಸ್ಸು ಬಲಗೊಳ್ಳುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ನೀವು ಇತರರನ್ನು ಅವಲಂಬಿಸಲು ಪ್ರಾರಂಭಿಸಿದಾಗ, ಅದು ನಿಮ್ಮನ್ನು ಆಂತರಿಕವಾಗಿ ದುರ್ಬಲಗೊಳಿಸುತ್ತದೆ.  ಸಣ್ಣ ಜವಾಬ್ದಾರಿಗಳನ್ನು ಸಹ ನೀವೇ ತೆಗೆದುಕೊಳ್ಳಲು ಪ್ರಾರಂಭಿಸಿದಾಗ, ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ಇದರಿಂದ ನೀವು ಮಾನಸಿಕವಾಗಿಯೂ ಬಲಶಾಲಿಯಾಗುತ್ತೀರಿ.

ಸಮಯವನ್ನು ಸರಿಯಾದ ಬಳಸಿ:  ಸಮಯವು ಅತ್ಯಮೂಲ್ಯ ಸಂಪನ್ಮೂಲ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಮಾನಸಿಕವಾಗಿ ಬಲಿಷ್ಠರಾಗಿರುವ ಜನರು ಸಮಯವನ್ನು ಗೌರವಿಸುತ್ತಾರೆ ಮತ್ತು ಅದನ್ನು ನಿಷ್ಪ್ರಯೋಜಕ ವಿಷಯಗಳಿಗೆ ವ್ಯರ್ಥ ಮಾಡುವುದಿಲ್ಲ. ಚಾಣಕ್ಯನ ಪ್ರಕಾರ, ಸಮಯಕ್ಕೆ ಸರಿಯಾಗಿ ಎಚ್ಚರಗೊಳ್ಳುವುದು, ಕೆಲಸಗಳಿಗೆ ಆದ್ಯತೆ ನೀಡುವುದು, ಪ್ರತಿಯೊಂದು ಕೆಲಸವನ್ನು ಸಮಯಕ್ಕೆ ಸರಿಯಾಗಿ ಮುಗಿಸುವ ಅಭ್ಯಾಸವು ವ್ಯಕ್ತಿಯನ್ನು ಮಾನಸಿಕವಾಗಿ ಬಲಿಷ್ಠನನ್ನಾಗಿಸುತ್ತದೆ.

ಇದನ್ನೂ ಓದಿ: ಚಾಣಕ್ಯರ ಮೂರು ಸಲಹೆಗಳನ್ನು ಅನುಸರಿಸಿದರೆ ಯಶಸ್ಸು ನಿಮ್ಮದಾಗುತ್ತದೆ

ನಕಾರಾತ್ಮಕ ಚಿಂತನೆಯಿಂದ ದೂರವಿರಿ: ಚಾಣಕ್ಯರ ಪ್ರಕಾರ, ನಿಮ್ಮ ಮನಸ್ಸನ್ನು ಶಾಂತವಾಗಿಡಲು ಮತ್ತು ಮೆಂಟಲಿ ಸ್ಟ್ರಾಂಗ್‌ ಆಗಿರಲು ನೀವು ಮೊದಲು ನಕಾರಾತ್ಮಕ ಚಿಂತನೆಯಿಂದ ದೂರವಿರಬೇಕು. ಹತಾಶೆ, ಭಯ ಮತ್ತು ಕೋಪದಂತಹ ಭಾವನೆಗಳು ನಿಮ್ಮ ಮನಸ್ಸನ್ನು ಸಂಪೂರ್ಣವಾಗಿ ದುರ್ಬಲಗೊಳಿಸುತ್ತವೆ. ನೀವು ಸಕಾರಾತ್ಮಕವಾಗಿ ಯೋಚಿಸಿದರೆ, ನೀವು ಪ್ರತಿಯೊಂದು ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಜಯಿಸುತ್ತೀರಿ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಅಲ್ಲದೆ ಈ ಸಣ್ಣ ಅಭ್ಯಾಸವು ಕ್ರಮೇಣ ನಿಮ್ಮ ಮನಸ್ಸನ್ನು ಬಲಪಡಿಸುತ್ತದೆ.

ಹೊಸ ವಿಷಯಗಳನ್ನು ಕಲಿಯುವ ಅಭ್ಯಾಸ: ನಿಮ್ಮ ಮಾನಸಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ, ನಿಮ್ಮ ಜೀವನದ ಪ್ರತಿ ಹಂತದಲ್ಲೂ ನೀವು ಹೊಸ ವಿಷಯಗಳನ್ನು ಕಲಿಯುತ್ತಲೇ ಇರಬೇಕು ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಅವರ ಪ್ರಕಾರ, ನಿರಂತರವಾಗಿ ಹೊಸ ವಿಷಯಗಳನ್ನು ಕಲಿಯುವ ಮತ್ತು ಹೊಸ ಜ್ಞಾನವನ್ನು ಹೇಗೆಪಡೆದುಕೊಳ್ಳಬೇಕು ಎಂದು ತಿಳಿದಿರುವ ವ್ಯಕ್ತಿಯು ಕ್ರಮೇಣ ಮಾನಸಿಕವಾಗಿ ಬಲಶಾಲಿಯಾಗುತ್ತಾನೆ. ಹೀಗೆ ಜ್ಞಾನವನ್ನು ಹೆಚ್ಚಿಸಲು ನೀವು ಹೊಸ ಪುಸ್ತಕಗಳನ್ನು ಓದಬೇಕು, ಹಿಂದಿನ ಅನುಭವಗಳಿಂದ ಕಲಿಯಬೇಕು ಮತ್ತು ಇತರರಿಂದ ಏನನ್ನಾದರೂ ಒಳ್ಳೆಯ ವಿಚಾರಗಳನ್ನು ಕಲಿಯಲು ಪ್ರಯತ್ನಿಸಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಹ್ಯಾಟ್ರಿಕ್ ಹೀರೋ’ ಜೊತೆ ನಟಿಸಲಿದ್ದಾರೆ ಶ್ರೀಲೀಲಾ – Kannada News | Sreeleela to act with Tamil hero Pradeep Ranganathan

ಶ್ರೀಲೀಲಾ (Sreeleela) ಕನ್ನಡದ ನಟಿ ಆದರೆ ಈಗ ಪರ ಭಾಷೆಗಳಲ್ಲಿ ಹೆಚ್ಚು ಮಿಂಚುತ್ತಿದ್ದಾರೆ. ಕನ್ನಡದ ‘ಕಿಸ್’ ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ, 2022 ರ ಸಿನಿಮಾ ‘ಧಮಾಕ’ ಮೂಲಕ ತೆಲುಗು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡರು. ‘ಧಮಾಕ’ ಸಿನಿಮಾದ ಬಳಿಕ ಬಲು ಬೇಗನೇ ತೆಲುಗು ಚಿತ್ರರಂಗದ ಟಾಪ್ ನಟಿಯಾದ ಶ್ರೀಲೀಲಾ, ಇದೀಗ ಬಾಲಿವುಡ್​ ಹಾಗೂ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದೂ ಎರಡೂ ಕಡೆ ಒಂದರ ಹಿಂದೊಂದು ದೊಡ್ಡ ಸಿನಿಮಾ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈಗಂತೂ ಅವರು ‘ಹ್ಯಾಟ್ರಿಕ್ ಹೀರೋ’ ಜೊತೆಗೆ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ!

‘ಹ್ಯಾಟ್ರಿಕ್ ಹೀರೋ’ ಎಂದೊಡೆ ಶಿವರಾಜ್ ಕುಮಾರ್ ಜೊತೆಗೆ ನಟಿಸುತ್ತಿದ್ದಾರೆ ಎಂದಲ್ಲ. ಬದಲಿಗೆ ಶ್ರೀಲೀಲಾ ನಟಿಸುತ್ತಿರುವುದು ತಮಿಳಿನ ಹ್ಯಾಟ್ರಿಕ್ ಹೀರೋ ಜೊತೆಗೆ. ಅದುವೇ ಪ್ರದೀಪ್ ರಂಗನಾಥನ್. ಸ್ವಂತ ಬಲದ ಮೇಲೆ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪ್ರದೀಪ್ ರಂಗನಾಥ್, ಹಲವು ಅಡೆ-ತಡೆ, ಕುಹುಕ, ವ್ಯಂಗ್ಯ, ಅನುಮಾನ, ಅವಮಾನಗಳನ್ನು ದಾಟಿ ಇದೀಗ ಯಶಸ್ವಿ ನಟ ಎನಿಸಿಕೊಂಡಿದ್ದಾರೆ. ಪ್ರದೀಪ್ ರಂಗನಾಥನ್ ನಾಯಕನಾಗಿ ನಟಿಸಿರುವ ಸತತ ಮೂರು ಸಿನಿಮಾಗಳು 100 ಕೋಟಿಗೂ ಹೆಚ್ಚು ಹಣ ಗಳಿಸಿದ್ದು, ಇದೀಗ ಪ್ರದೀಪ್ ಅವರ ನಾಲ್ಕನೇ ಸಿನಿಮಾಕ್ಕೆ ಕನ್ನಡತಿ ಶ್ರೀಲೀಲಾ ನಾಯಕಿ.

ಶ್ರೀಲೀಲಾ ನಟಿಸಿರುವ ಮೊದಲ ತಮಿಳು ಸಿನಿಮಾ ‘ಪರಾಶಕ್ತಿ’ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಯಶಸ್ಸು ಗಳಿಸಿದೆ. ಅದರ ಬೆನ್ನಲ್ಲೆ ಇದೀಗ ಶ್ರೀಲೀಲಾಗೆ ಎರಡನೇ ತಮಿಳು ಸಿನಿಮಾ ಆಫರ್ ಬಂದಿದ್ದು, ಸಿನಿಮಾದ ನಾಯಕ ಪ್ರದೀಪ್ ರಂಗನಾಥನ್. ವಿಶೇಷವೆಂದರೆ ಈ ಸಿನಿಮಾ ಸಾಮಾನ್ಯಾ ರಾಮ್-ಕಾಮ್ ಸಿನಿಮಾ ಅಲ್ಲ ಬದಲಿಗೆ ಇದೊಂದು ಸೈ-ಫೈ ಸಿನಿಮಾ ಆಗಿದೆ. ಭವಿಷ್ಯದ ಕತೆಯನ್ನು ಸಿನಿಮಾ ಒಳಗೊಂಡಿದೆ.

ಇದನ್ನೂ ಓದಿ:ಶ್ರೀಲೀಲಾ ಅವರು 2025 ಹೀಗಿತ್ತು: ವಿಡಿಯೋನಲ್ಲಿ ನೋಡಿ…

ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ ಆದರೆ ಈ ಸಿನಿಮಾನಲ್ಲಿ ಶ್ರೀಲೀಲಾ ಮಾತ್ರವೇ ಅಲ್ಲದೆ ಮತ್ತೊಬ್ಬ ಖ್ಯಾತ ಯುವನಟಿ ಮೀನಾಕ್ಷಿ ಚೌಧರಿ ಸಹ ನಾಯಕಿ ಆಗಿದ್ದಾರೆ. ಈ ಸಿನಿಮಾಕ್ಕೆ ಕತೆ, ಚಿತ್ರಕತೆಯನ್ನು ಪ್ರದೀಪ್ ಅವರೇ ರಚಿಸಿದ್ದು, ನಿರ್ದೇಶನವನ್ನೂ ಅವರೇ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಶ್ರೀಲೀಲಾ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಹಿಂದಿಯಲ್ಲಿ ಅವರ ನಟನೆಯ ‘ಆಶಿಖಿ 3’ ಸಿನಿಮಾ ಬಿಡುಗಡೆ ಆಗಬೇಕಿದೆ. ಅದರ ಜೊತೆಗೆ ಇನ್ನೂ ಎರಡು ಹೊಸ ಹಿಂದಿ ಸಿನಿಮಾಗಳನ್ನು ಶ್ರೀಲೀಲಾ ಒಪ್ಪಿಕೊಂಡಿದ್ದಾರೆ. ತೆಲುಗಿನಲ್ಲಿ ಪವನ್ ಕಲ್ಯಾಣ್ ಜೊತೆಗೆ ನಟಿಸಿರುವ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾನಲ್ಲಿ ನಟಿಸಿದ್ದು, ಅದು ಶೀಘ್ರವೇ ಬಿಡುಗಡೆ ಆಗಲಿದೆ. ತೆಲುಗಿನಲ್ಲಿ ಮತ್ತೊಂದು ಹೊಸ ಸಿನಿಮಾವನ್ನು ಸಹ ಅವರು ಒಪ್ಪಿಕೊಂಡಿದ್ದಾರೆ. ಇನ್ನು ಪ್ರದೀಪ್ ನಟನೆಯ ‘ಎಲ್​​ಐಕೆ’ (ಲವ್ ಇನ್ಷುರೆನ್ಸ್ ಕಂಪೆನಿ) ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Mutual Funds: ಫ್ಲೆಕ್ಸಿಕ್ಯಾಪ್, ಮಲ್ಟಿಕ್ಯಾಪ್, ಮಲ್ಟಿ ಅಸೆಟ್ ಫಂಡ್​ಗಳ ನಡುವೆ ಏನು ವ್ಯತ್ಯಾಸ? – Kannada News | Know the difference between Multi Cap Funds, Flexi Cap Funds and Multi Asset Funds

ನವದೆಹಲಿ, ಜನವರಿ 20: ಷೇರು ಮಾರುಕಟ್ಟೆ (Stock Market) ಕಳೆದ ಒಂದು ವರ್ಷದಿಂದ ಸಿಕ್ಕಾಪಟ್ಟೆ ಅಲುಗಾಡುತ್ತಿದೆ. ಜಾಗತಿಕ ವಿದ್ಯಮಾನಗಳು ಬಜಾರನ್ನು ಕಂಗೆಡಿಸಿವೆ. ಇದೇ ವೇಳೆ ಗೊಂದಲಕ್ಕೊಳಗಾಗಿರುವ ಹೂಡಿಕೆದಾರರು, ಸುರಕ್ಷತೆಗೆ ಬೇರೆ ಮಾರ್ಗೋಪಾಯ ಕಂಡುಕೊಂಡಿದ್ದಾರೆ. ಮಲ್ಟಿಕ್ಯಾಪ್ ಫಂಡ್​ಗಳು, ಫ್ಲೆಕ್ಸಿಕ್ಯಾಪ್ ಫಂಡ್​ಗಳು ಹಾಗೂ ಮಲ್ಟಿ ಅಸೆಟ್ ಫಂಡ್​ಗಳ ಜನಪ್ರಿಯತೆ ಹೆಚ್ಚುತ್ತಿದೆ. ಈ ಮೂರೂ ಫಂಡ್​ಗಳು ಮ್ಯೂಚುವಲ್ ಫಂಡ್​ನ (Mutual Funds) ಪ್ರಾಕಾರಗಳೇ ಆಗಿವೆ. ಆದರೆ, ಯಾವುದರಲ್ಲಿ ಹೂಡಿಕೆ ಮಾಡಲಾಗುತ್ತದೆ ಎಂಬುದು ವ್ಯತ್ಯಾಸ ಇರುತ್ತದೆ.

ಮಲ್ಟಿಕ್ಯಾಪ್ ಫಂಡ್ ಎಂದರೇನು?

ಮಲ್ಟಿ ಕ್ಯಾಪ್ ಫಂಡ್ ಎಂದರೆ ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಈ ಮೂರು ವಿಭಾಗಗಳಲ್ಲಿ ಕನಿಷ್ಠ ಶೇ. 25ರಷ್ಟು ಹೂಡಿಕೆ ಮಾಡಬೇಕು. ಅಂದರೆ ಮಲ್ಟಿಕ್ಯಾಪ್ ಮ್ಯೂಚುವಲ್ ಫಂಡ್​ಗಳು ಈಕ್ವಿಟಿಯಲ್ಲಿ ಕನಿಷ್ಠ 75ರಷ್ಟಾದರೂ ಹೂಡಿಕೆ ಮಾಡಬೇಕು.

ಇಲ್ಲಿ ಲಾರ್ಜ್ ಕ್ಯಾಪ್ ಎಂದರೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಷೇರುಗಳಲ್ಲಿ ಟಾಪ್-100 ಷೇರುಗಳನ್ನು ಲಾರ್ಜ್ ಕ್ಯಾಪ್ ಎನ್ನಲಾಗುತ್ತದೆ. 101ರಿಂದ 250ನೇ ಸ್ಥಾನದಲ್ಲಿರುವ ಷೇರುಗಳನ್ನು ಮಿಡ್​ಕ್ಯಾಪ್ ಎನ್ನಲಾಗುತ್ತದೆ. ಅದಕ್ಕಿಂತ ಕೆಳಗಿರುವಂಥವು ಸ್ಮಾಲ್ ಕ್ಯಾಪ್ ಎನಿಸುತ್ತವೆ. ಇಲ್ಲಿ ಮಲ್ಟಿಕ್ಯಾಪ್ ಫಂಡ್​ಗಳು ಲಾರ್ಜ್ ಕ್ಯಾಪ್ ಸ್ಟಾಕ್​ಗಳಲ್ಲಿ ಶೇ. 25ರಷ್ಟಾದರೂ ಹೂಡಿಕೆ ಮಾಡಬೇಕು. ಮಿಡ್​ಕ್ಯಾಪ್ ಹಾಗೂ ಸ್ಮಾಲ್​ಕ್ಯಾಪ್ ಸ್ಟಾಕ್​ಗಳ ಮೇಲೂ ತಲಾ ಶೇ. 25ರಷ್ಟಾದರೂ ಹೂಡಿಕೆ ಮಾಡಬೇಕು.

ಇದನ್ನೂ ಓದಿ: 1 ಲಕ್ಷ ರೂನಿಂದ 2.71 ಕೋಟಿ ರೂ; ಭಾರತದ ಅತ್ಯಂತ ಹಳೆಯ ಫಂಡ್​ನಿಂದ ಭರ್ಜರಿ ಆದಾಯ

ಫ್ಲೆಕ್ಸಿ ಕ್ಯಾಪ್ ಫಂಡ್​ಗಳೆಂದರೆ?

ಇಲ್ಲಿ ಮ್ಯೂಚುವಲ್ ಫಂಡ್​ಗಳು ಲಾರ್ಜ್ ಇರಲಿ, ಮಿಡ್ ಇರಲಿ, ಸ್ಮಾಲ್ ಇರಲಿ ಯಾವುದೇ ಸ್ಟಾಕ್​ನಲ್ಲಿ ಹೂಡಿಕೆ ಮಾಡಲು ಸ್ವತಂತ್ರವಾಗಿರುತ್ತವೆ. ಆದರೆ, ಈಕ್ವಿಟಿಗಳಲ್ಲಿ ಒಟ್ಟಾರೆ ಶೇ. 65ರಷ್ಟಾದರೂ ಹೂಡಿಕೆ ಮಾಡಬೇಕು. ಮಲ್ಟಿಕ್ಯಾಪ್​ಗೆ ಹೋಲಿಸಿದರೆ ಫ್ಲೆಕ್ಸಿ ಕ್ಯಾಪ್ ಫಂಡ್​ಗಳಲ್ಲಿ ಮ್ಯಾನೇಜರ್​ಗಳಿಗೆ ಹೆಚ್ಚು ಸ್ವಾತಂತ್ರ್ಯ ಇರುತ್ತದೆ.

ಮಲ್ಟಿ ಅಸೆಟ್ ಫಂಡ್​ಗಳೆಂದರೆ ಏನು?

ಮಲ್ಟಿ ಅಸೆಟ್ ಫಂಡ್​ಗಳು ಈಕ್ವಿಟಿಯೂ ಸೇರಿದಂತೆ ಬೇರೆ ಬೇರೆ ಅಸೆಟ್ ಕ್ಲಾಸ್​ಗಳಲ್ಲಿ ಹೂಡಿಕೆ ಮಾಡಬಹುದು. ಈಕ್ವಿಟಿ, ಡೆಟ್, ಚಿನ್ನ, REITs (ರಿಯಲ್ ಎಸ್ಟೇಟ್ ಇನ್ವೆಸ್ಟ್​ಮೆಂಟ್ ಟ್ರಸ್ಟ್), InvITs (ಇನ್​ಫ್ರಾಸ್ಟ್ರಕ್ಚರ್ ಇನ್ವೆಸ್ಟ್​ಮೆಂಟ್ ಟ್ರಸ್ಟ್), ಅಂತಾರಾಷ್ಟ್ರೀಯ ಸ್ವತ್ತುಗಳು ಹೀಗೆ ಬೇರೆ ಬೇರೆ ರೀತಿಯ ಸ್ವತ್ತುಗಳ ಮೇಲೆ ಹೂಡಿಕೆ ಮಾಡಬಹುದು. ಕನಿಷ್ಠ ಮೂರು ಸ್ವತ್ತುಗಳಲ್ಲಿ ಒಂದೊಂದರಲ್ಲೂ ಕನಿಷ್ಠ ಶೇ. 10ರಷ್ಟಾದರೂ ಹೂಡಿಕೆ ಮಾಡಬೇಕು ಎನ್ನುವ ನಿಯಮ ಇರುತ್ತದೆ.

ಇದನ್ನೂ ಓದಿ: 2010ರಿಂದ ತಿಂಗಳಿಗೆ 15,000 ರೂ ಹೂಡಿಕೆ; ಇವತ್ತು ನೀವು ಕೋಟ್ಯಾಧಿಪತಿ; ಸಿಂಪಲ್ 15x15x15 ಫಾರ್ಮುಲಾದಿಂದ ಸಾಧ್ಯ

ಉದಾಹರಣೆಗೆ, ಈಕ್ವಿಟಿಗಳಲ್ಲಿ ಕನಿಷ್ಠ ಶೇ. 10, ಚಿನ್ನದ ಮೇಲೆ ಶೇ. 10, ಬಾಂಡ್​ಗಳ ಮೇಲೆ ಶೇ. 10 ಹೀಗೆ ಹೂಡಿಕೆಗಳನ್ನು ಹಂಚಬಹುದು. ಅನಿಶ್ಚಿತ ಸಂದರ್ಭಗಳಲ್ಲಿ ಸುರಕ್ಷಿತ ಹೂಡಿಕೆ ಬಯಸುವವರಿಗೆ ಮಲ್ಟಿ ಅಸೆಟ್ ಫಂಡ್ ಬಹಳ ಅನುಕೂಲ ಕೊಡುತ್ತದೆ.

ಫ್ಲೆಕ್ಸಿಕ್ಯಾಪ್ ಫಂಡ್​ಗಳು ಹಾಗೂ ಮಲ್ಟಿ ಅಸೆಟ್ ಫಂಡ್​ಗಳು ಬಹಳ ಜನಪ್ರಿಯತೆ ಪಡೆಯುತ್ತಿವೆ. ಎರಡೂ ರೀತಿಯ ಫಂಡ್​ಗಳು ಪ್ರಸಕ್ತ ಸಂದರ್ಭಗಳಿಗೆ ಹೇಳಿ ಮಾಡಿಸಿದ್ದಂತಿವೆ ಎನ್ನುವುದು ತಜ್ಞರ ಅನಿಸಿಕೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮೂತ್ರ ವಿಸರ್ಜನೆ ಮಾಡುವಾಗ ಅತಿಯಾಗಿ ನೊರೆ ಬರುವುದು ನಿರ್ಜಲೀಕರಣವೇ ಅಥವಾ ಮಧುಮೇಹದ ಸಂಕೇತವೇ ತಿಳಿದುಕೊಳ್ಳಿ – Kannada News | What Causes Foamy Urine? Check Now

ಮೂತ್ರ ವಿಸರ್ಜಿಸುವಾಗ ಮೂತ್ರದಲ್ಲಿ ನೊರೆ ಕಾಣಿಸಿಕೊಂಡರೆ, ಅದು ಸಾಮಾನ್ಯವೇ ಅಥವಾ ಯಾವುದಾದರೂ ರೋಗದ ಲಕ್ಷಣವೇ ಎಂಬ ಗೊಂದಲ ಉಂಟಾಗುವುದು ಸಹಜ. ಅದರಲ್ಲಿಯೂ ಕೆಲವರು ಈ ರೀತಿಯಾಗುವುದರ ಬಗ್ಗೆ ಯೋಚಿಸುವ ಬದಲು ಅದನ್ನು ನಿರ್ಲಕ್ಷ್ಯ ಮಾಡುವವರೇ ಹೆಚ್ಚು. ಸಾಮಾನ್ಯವಾಗಿ ಒತ್ತಡದಲ್ಲಿದ್ದಾಗ ಮೂತ್ರ ವಿಸರ್ಜಿಸುವಾಗ ಕೆಲವು ಸೆಕೆಂಡು ನೊರೆ ಬಂದು ಕಣ್ಮರೆಯಾಗುತ್ತಿದ್ದರೆ, ಅದು ಚಿಂತಿಸಬೇಕಾದ ವಿಷಯವಲ್ಲ. ಆದರೆ ಮೂತ್ರ ವಿಸರ್ಜಿಸಿದಾಗ ನೊರೆ (Foamy Urine) ರೂಪುಗೊಂಡು ಕಣ್ಮರೆಯಾಗುವುದಕ್ಕೆ ಸಮಯ ತೆಗೆದುಕೊಂಡರೆ, ಅದು ದೇಹದಲ್ಲಿ ಆಗಿರುವಂತಹ ಬದಲಾವಣೆ ಮುನ್ಸೂಚನೆಯಾಗಿರುತ್ತದೆ ಎಂಬುದನ್ನು ಮರೆಯಬೇಡಿ. ಹಾಗಾದರೆ ಈ ರೀತಿಯಾಗವುದು ಮಧುಮೇಹದ (Diabetes) ಸಂಕೇತವೇ, ಅಥವಾ ಇದು ಬೇರೆ ಕಾಯಿಲೆಯ ಲಕ್ಷಣವೇ ಎಂಬುದನ್ನು ತಿಳಿದುಕೊಳ್ಳಿ.

ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನ ವೈದ್ಯಕೀಯ ವಿಭಾಗದ ಘಟಕ ಮುಖ್ಯಸ್ಥ ಡಾ. ಎಲ್. ಎಚ್. ಘೋಟೆ ಹೇಳುವ ಪ್ರಕಾರ, ಕೆಲವೊಮ್ಮೆ ಮೂತ್ರ ವಿಸರ್ಜನೆಯ ಸಮಯದಲ್ಲಿ ಶೌಚಾಲಯದ ಸೀಟಿನ ಮೇಲ್ಮೈಯಲ್ಲಿ ಭಾಗಶಃ ಅಥವಾ ಸಂಪೂರ್ಣವಾಗಿ ನೊರೆ ಕಾಣಿಸಿಕೊಳ್ಳಬಹುದು. ಆದರೆ ಇದು ನಿಯಮಿತವಾಗಿ ಕಂಡುಬರುತ್ತಿದ್ದು, ಆ ನೊರೆಯನ್ನು ಹೊರಹಾಕಲು ನೀವು ಒಂದಕ್ಕಿಂತ ಹೆಚ್ಚು ಬಾರಿ ಫ್ಲಶ್ ಮಾಡಬೇಕಾದರೆ, ಅಥವಾ ನೊರೆ ಬಿಳಿಯಾಗಿ ಕಾಣಿಸಿಕೊಂಡರೆ, ಆದಷ್ಟು ಬೇಗೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಮೂತ್ರದಲ್ಲಿ ನೊರೆ ಬರುವುದಕ್ಕೆ ಕಾರಣವೇನು?

ಸಾಮಾನ್ಯವಾಗಿ ಮೂತ್ರದಲ್ಲಿ ನಿಯಮಿತವಾಗಿ ಹೆಚ್ಚು ನೊರೆ ಬರುತ್ತಿದ್ದರೆ, ಅದು ಮೂತ್ರದಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ (ಪ್ರೋಟೀನುರಿಯಾ) ಇರುವುದನ್ನು ಸೂಚಿಸುತ್ತದೆ. ಈ ರೀತಿ ಹೆಚ್ಚುವರಿ ಪ್ರೋಟೀನ್ ಇರುವುದು ಮಧುಮೇಹ ಅಥವಾ ಲೂಪಸ್‌ನಂತಹ ಮೂತ್ರಪಿಂಡಗಳ ಮೇಲೆ ನೇರವಾಗಿ ಪರಿಣಾಮ ಬೀರುವ ಕಾಯಿಲೆಗಳ ಸಂಕೇತವಾಗಿರಬಹುದು. ಇದು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಯ ಮೂನ್ಸೂಚನೆಯೂ ಆಗಿರಬಹುದು.

ಇದನ್ನೂ ಓದಿ: ತಡರಾತ್ರಿ ಊಟ ಮಾಡುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾಗುತ್ತದೆಯೇ? ಇಲ್ಲಿದೆ ತಜ್ಞರ ಮಾಹಿತಿ

ನೊರೆ ಮೂತ್ರ ಮಧುಮೇಹದ ಸಂಕೇತವೇ?

ಕೆಲವೊಮ್ಮೆ ನೊರೆ ಮೂತ್ರವು ಮಧುಮೇಹಕ್ಕೆ ಸಂಬಂಧಿಸಿದ ಮೂತ್ರಪಿಂಡದ ಸಮಸ್ಯೆಗಳ ಲಕ್ಷಣವಾಗಿರಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟ ಆಗಾಗ ಹೆಚುವುದಕ್ಕೆ ಅಥವಾ ದೀರ್ಘಕಾಲದವರೆಗೆ ಹೆಚ್ಚಿದ್ದರೆ, ಅದು ನಿಮ್ಮ ಮೂತ್ರಪಿಂಡಗಳ ಕೆಲವು ಭಾಗಗಳನ್ನು ಹಾನಿಗೊಳಿಸುತ್ತದೆ ಮತ್ತು ರಕ್ತದಿಂದ ಗ್ಲೂಕೋಸ್ ಮತ್ತು ಪ್ರೋಟೀನ್ ಅನ್ನು ಫಿಲ್ಟರ್ ಮಾಡುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ನೊರೆ ಮೂತ್ರಕ್ಕೆ ಕಾರಣವಾಗಬಹುದು. ಕೆಲವು ಸಂದರ್ಭಗಳಲ್ಲಿ, ನಿರ್ಜಲೀಕರಣದಿಂದಲೂ ಮೂತ್ರದಲ್ಲಿ ನೊರೆ ಬರಬಹುದು, ಆದರೆ ಅಂತಹ ಸಂದರ್ಭಗಳಲ್ಲಿ, ಮೂತ್ರವು ಹಳದಿ ಬಣ್ಣದ್ದಾಗಿರಬೇಕು. ಹಾಗಿದ್ದಲ್ಲಿ, ನೀರಿನ ಕೊರತೆಯಿಂದಾಗಿ ನೊರೆ ಬರಬಹುದು. ಈ ಪರಿಸ್ಥಿತಿಯಲ್ಲಿ, ನೀವು ದಿನಕ್ಕೆ ಕನಿಷ್ಠ 7 ರಿಂದ 8 ಗ್ಲಾಸ್ ನೀರು ಕುಡಿಯಲು ಪ್ರಾರಂಭಿಸಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RRB Recruitment 2026: ರೈಲ್ವೆಯಲ್ಲಿ 22,000 ಖಾಲಿ ಹುದ್ದೆಗಳಿಗೆ ನೇಮಕಾತಿ; 10th ಪಾಸಾಗಿದ್ರೆ ಸಾಕು! – Kannada News | RRB Group D Recruitment 2026: 22,000 Posts, Apply Online! 10th Pass and ITI Eligible

ರೈಲ್ವೆ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವವರಿಗೆ, ರೈಲ್ವೆ ನೇಮಕಾತಿ ಮಂಡಳಿ (RRB) ಗ್ರೂಪ್ D ಹುದ್ದೆಗಳಿಗೆ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. RRB ಒಟ್ಟು 22,000 ಹುದ್ದೆಗಳಿಗೆ ಖಾಲಿ ಹುದ್ದೆಗಳನ್ನು ಪ್ರಕಟಿಸಿದೆ. ಹತ್ತನೇ ತರಗತಿ ಮತ್ತು ಐಟಿಐ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಆಸಕ್ತಿ ಹೊಂದಿರುವವರು ಜನವರಿ 31 ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 2. ಅರ್ಜಿ ಪ್ರಕ್ರಿಯೆಯು ಮೊದಲು ಜನವರಿ 20 ರಿಂದ ಫೆಬ್ರವರಿ 20 ರವರೆಗೆ ನಡೆಯಲು ನಿರ್ಧರಿಸಲಾಗಿತ್ತು, ಆದರೆ ಸೋಮವಾರ, ನೇಮಕಾತಿ ಮಂಡಳಿಯು ಪರಿಷ್ಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿತು.

RRB ಗ್ರೂಪ್ D ನೇಮಕಾತಿ ಪ್ರಕ್ರಿಯೆಯು ಹಲವಾರು ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಈ ಹುದ್ದೆಗಳಿಗೆ ಕನಿಷ್ಠ ಶೈಕ್ಷಣಿಕ ಅರ್ಹತೆ 10 ನೇ ತರಗತಿ ಉತ್ತೀರ್ಣ ಮತ್ತು ITI ಡಿಪ್ಲೊಮಾ. ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿ ಪೂರ್ಣಗೊಳಿಸಿದ ಮತ್ತು ITI ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕನಿಷ್ಠ ವಯಸ್ಸಿನ ಮಿತಿ 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 33 ವರ್ಷಗಳು. ಜನವರಿ 1, 2026 ರಿಂದ ವಯಸ್ಸನ್ನು ಲೆಕ್ಕಹಾಕಲಾಗುತ್ತದೆ. ಮೀಸಲು ವರ್ಗದ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗುವುದು.

ಸಂಬಳ ಎಷ್ಟು ಸಿಗಲಿದೆ?

ಆಯ್ಕೆಯಾದ ಅಭ್ಯರ್ಥಿಗಳಿಗೆ ಗ್ರೂಪ್ ಡಿ ಹುದ್ದೆಗಳಿಗೆ ಮಾಸಿಕ 18,000 ರೂ. ವೇತನ ದೊರೆಯಲಿದೆ. ಇದಲ್ಲದೆ, ರೈಲ್ವೆ ನಿಯಮಾವಳಿಗಳ ಪ್ರಕಾರ ಇತರ ಭತ್ಯೆಗಳನ್ನು ಸಹ ಪಡೆಯುತ್ತಾರೆ. ಇದು ಒಟ್ಟಾರೆ ವೇತನ ಮತ್ತು ಪ್ರಯೋಜನಗಳನ್ನು ಆಕರ್ಷಕವಾಗಿಸುತ್ತದೆ. ಅದಕ್ಕಾಗಿಯೇ ಪ್ರತಿ ವರ್ಷ ಲಕ್ಷಾಂತರ ಯುವಕರು ರೈಲ್ವೆ ಗ್ರೂಪ್ ಡಿ ನೇಮಕಾತಿಗಾಗಿ ಕಾಯುತ್ತಿದ್ದಾರೆ.

ಮಾರ್ಚ್ 3 ಕೊನೆಯ ದಿನಾಂಕ:

ಅರ್ಜಿ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿರುತ್ತದೆ. ಅಭ್ಯರ್ಥಿಗಳು ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್‌ಸೈಟ್, rrbchennai.gov.in ಅಥವಾ indianrailways.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬೇಕು. ಪ್ರಮುಖ ದಿನಾಂಕಗಳ ಕುರಿತು, ಸಂಕ್ಷಿಪ್ತ ಅಧಿಸೂಚನೆಯನ್ನು ಡಿಸೆಂಬರ್ 23, 2025 ರಂದು ಬಿಡುಗಡೆ ಮಾಡಲಾಗಿತ್ತು. ಆನ್‌ಲೈನ್ ಅರ್ಜಿಗಳು ಈಗ ಜನವರಿ 31 ರಂದು ತೆರೆಯುತ್ತದೆ ಮತ್ತು ಮಾರ್ಚ್ 2, ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಕ್ರಮ ಮರಳು ದಂಧೆ ವಿರುದ್ಧ ಸಮರ ಸಾರಿದ ಜೆಡಿಎಸ್​ ಶಾಸಕಿ ಮನೆಗೆ ನುಗ್ಗಿ ಧಮ್ಕಿ – Kannada News | Sand mafia In Raichur: A Gang threatens to Devadurga JDS MLA Karemma Nayak, case Book

ರಾಯಚೂರು, (ಜನವರಿ 20): ಅಕ್ರಮ ಮರಳು ದಂಧೆ (illegal sand mining )ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ದೇವದುರ್ಗ (Devadurga) ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಶಾಸಕಿ ಕರೆಮ್ಮ ನಾಯಕ್ (Karemma Nayak) ಮನೆಗೆ ನುಗ್ಗಿ ಧಮ್ಕಿ ಹಾಕಿರುವ ಆರೋಪ ಕೇಳಿಬಂದಿದೆ. ಕೃಷ್ಣಾ ನದಿ ತೀರದಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಕೋರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಪೊಲಿಸರಿಗೆ ಶಾಸಕಿ ಕರೆಮ್ಮ ಸೂಚನೆ ನೀಡಿದ್ದರು. ಈ ಸೂಚನೆ ಮೇರೆಗೆ ಪೊಲೀಸರು, ಅಕ್ರಮ ಮರಳು ದಂಧೆ ಮೇಲೆ ದಾಳಿ ಮಾಡಿದ್ದು, ಜೆಸಿಬಿ,ಟಿಪ್ಪರ್, ಟ್ರಾಕ್ಟರ್ ಗಳು ಸೇರಿದಂತೆ ಏಳು ವಾಹನಗಳನ್ನು ಜಪ್ತಿ ಮಾಡಿ ಕೇಸ್ ದಾಖಲಿಸಿದ್ದರು. ಇದರಿಂದ ಆಕ್ರೋಶಗೊಂಡ ದಂಧೆಕೋರರು ಶಾಸಕಿ ಕರೆಮ್ಮ ನಿವಾಸಕ್ಕೆ ನುಗ್ಗಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕದಂತೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಸ್ವತಃ ಶಾಸಕಿ ಕರೆಮ್ಮ ಆರೋಪಿಸಿದ್ದು, ಈ ಸಂಬಂಧ ದೇವದುರ್ಗ ಠಾಣೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಜನರ ವಿರುದ್ಧ ಎಫ್​​ಐಆರ್ ದಾಖಲಾಗಿದೆ.

ಅಕ್ರಮ ವಿರುದ್ಧ ಸಮರ ಸಾರಿದ್ದಕ್ಕೆ ಬೆದರಿಕೆ

ಕರೆಮ್ಮ ಗೆದ್ದ ಮೇಲಿಂದಲೂ ಸಹ  ಕೃಷ್ಣಾ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ‌ ಮರಳು ದಂಧೆ ವಿರುದ್ಧ ಸಮರ ಸಾರುತ್ತಲೇ ಬಂದಿದ್ದಾರೆ.  ಈ ಸಂಬಂಧ ದೇವದುರ್ಗ ಠಾಣೆಯಲ್ಲಿ ಏಳು ಪ್ರತ್ಯೇಕ ಅಕ್ರಮ ಮರಳು ಸಾಗಾಟ ಪ್ರಕರಣ ದಾಖಲಾಗಿದ್ದವು. ಈ ಪ್ರಕರಣ ಸಂಬಂಧ ಪೊಲೀಸರು ಜನವರಿ‌ 18ರಂದು ಜೆಸಿಬಿ,ಟಿಪ್ಪರ್,ಟ್ರಾಕ್ಟರ್ ಗಳು ಸೇರಿ ಏಳು ವಾಹನಗಳನ್ನು ಜಪ್ತಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ದಂಧೆಕೋರರು, ಶಾಸಕಿ ಕರೆಮ್ಮ ಮನೆಗೆ ನುಗ್ಗಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕದಂತೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಶಾಸಕಿ ಕರೆಮ್ಮ ಸಹ ರಾಯಚೂರು ಎಸ್ ಪಿ ಅರುಣಾಂಗ್ಷುಗಿರಿ ಅವರಿಗೆ ದೂರು ನೀಡಿದ್ದು, ಬೆದರಿಕೆ ಹಾಕಿರುವವರು ಹಾಗೂ ಅಕ್ರಮ ಮರಳು ದಂಧೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ರಾಯಚೂರು: 2 ಕೋಟಿ ರೂ ಬಿಲ್ ಪಾವತಿಸದ ಸಮಾಜ ಕಲ್ಯಾಣ ಇಲಾಖೆಗೆ ಕೋರ್ಟ್ ತಕ್ಕ ಶಾಸ್ತಿ

ಶಾಸಕಿ ಕರೆಮ್ಮ ಹೇಳಿದ್ದೇನು?

ಈ ಬಗ್ಗೆ ಟಿವಿ9ಗೆ ಶಾಸಕಿ ಕರೆಮ್ಮಾ ನಾಯಕ್ ಪ್ರತಿಕ್ರಿಯಿಸಿದ್ದು, ನಿರಂತರವಾಗಿ ಅಕ್ರಮ ಮರಳು ದಂಧೆ ವಿರುದ್ಧ ಕ್ರಮಕ್ಕೆ‌ ಸೂಚಿಸುತ್ತಿದ್ದೇನೆ. ಜಿಲ್ಲಾಧಿಕಾರಿಗಳ ಜೊತೆಗಿನ ಸಭೆಯಲ್ಲಿ ಅಕ್ರಮ ಮರಳು ಸಾಗಾಟದ ಬಗ್ಗೆಯೂ ಪ್ರಸ್ತಾಪಿಸಿದ್ದೇನೆ. ಈ ಬಗ್ಗೆ ಪೊಲೀಸರು ಅಕ್ರಮ ಮರಳು ದಂಧೆ ಬಗ್ಗೆ ಕ್ರಮಕೈಗೊಂಡಿದ್ದಾರೆ. ಹೀಗಾಗಿ ನನ್ನ ಮನೆಗೆ ನುಗ್ಗಿ ಬೆದರಿಕೆ ಹಾಕಿದ್ದಾರೆ. ಈ ಘಟನೆ ಬಗ್ಗೆ ನನ್ನ ಬೆಂಬಲಿಗರೊಬ್ಬರು ದೇವದುರ್ಗ ಠಾಣೆಯಲ್ಲಿ ದೂರು‌ ದಾಖಲಿಸಿದ್ದಾರೆ ಎಂದರು.

2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಶಿವನಗವಡ ನಾಯಕ್​ ಅವರನ್ನು ಕರೆಮ್ಮ ಮಣಿಸಿದ್ದು, ಅಂದಿನಿಂದಲೂ ಇಬ್ಬರ ನಡುವೆಯೂ ಒಂದಲ್ಲ ಒಂದು ಕಾರಣಕ್ಕೆ ರಾಜಕೀಯ ಕಿತ್ತಾಟಗಳು ನಡೆಯುತ್ತಲೇ ಇವೆ. ಅದರಲ್ಲೂ ಮುಖ್ಯವಾಗಿ ಶಿವನಗೌಡ ನಾಯಕ್ ಬೆಂಬಲಿಗರು ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದಾರೆ.  ಇದಕ್ಕೆ ಪೊಲೀಸರು ಸಹ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಈ ಹಿಂದೆಯೇ ಬಹಿರಂಗವಾಗಿಯೇ ಆರೋಪಿಸಿದ್ದರು. ಈ ಸಂಬಂಧ ಪ್ರತಿಭಟನೆ ಸಹ ಮಾಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನಿಯಂತ್ರಣವಿಲ್ಲದ ನಾಲಿಗೆಯೇ ಎಲ್ಲವನ್ನೂ ಹಾಳುಮಾಡಬಲ್ಲದು: ರಾಜೀವ್ ಗೌಡಗೆ ಕೋರ್ಟ್ ತರಾಟೆ – Kannada News | Shidlaghatta City Municipality Commissioner Threat Case: High Court Rebukes Rajeev Gowda Over FIR Quash Plea

ಬೆಂಗಳೂರು, ಜನವರಿ 20: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ಕಾಂಗ್ರೆಸ್​​ ಮುಖಂಡ ರಾಜೀವ್ ಗೌಡ (Rajeev Gowda) ಸದ್ಯ ತಲೆ ಮರೆಸಿಕೊಂಡಿದ್ದಾರೆ. ಕೈ ಮುಖಂಡ ಬಂಧನ ವಿಳಂಬ ಖಂಡಿಸಿ ಬಿಜೆಪಿ ನಾಯಕರು ಕಿಡಿಕಾರುತ್ತಿದ್ದಾರೆ. ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಕ್ಷಮೆ ಕೂಡ ಕೇಳಿದ್ದರು. ಇನ್ನು ಎಫ್​​ಐಆರ್​​ FIR ರದ್ದು ಕೋರಿ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ಪೀಠ ರಾಜೀವ್ ಗೌಡಗೆ ತರಾಟೆ ತೆಗೆದುಕೊಂಡಿದ್ದು, ಆದೇಶ ಕಾಯ್ದಿರಿಸಿದೆ.

ಸಾರ್ವಜನಿಕವಾಗಿ ಕ್ಷಮೆ ಕೇಳಲು ರಾಜೀವ್ ಗೌಡ ಸಿದ್ಧರಿದ್ದಾರೆ: ಹಿರಿಯ ವಕೀಲ ವಿವೇಕ್ ರೆಡ್ಡಿ ವಾದ

ಶಿಡ್ಲಘಟ್ಟ ನಗರಸಭೆ ಆಯುಕ್ತೆಗೆ ಜೀವ ಬೆದರಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ FIR ರದ್ದು ಕೋರಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅರ್ಜಿ ಸಲ್ಲಿಸಿದ್ದರು. ಕಾಂಗ್ರೆಸ್​​ ಮುಖಂಡನ ಪರವಾಗಿ ಹಿರಿಯ ವಕೀಲ ವಿವೇಕ್ ರೆಡ್ಡಿ ವಾದ ಮಂಡಿಸಿದರು. ಫೋನ್ ಮೂಲಕ ಆಡಿದ ಮಾತಿಗೆ ಮಾಧ್ಯಮದಲ್ಲೇ ಕ್ಷಮೆ ಕೇಳಿದ್ದಾರೆ. ಬಿಎನ್‌ಎಸ್‌ ಸೆಕ್ಷನ್ 132 ಈ ಕೇಸಿನಲ್ಲಿ ಅನ್ವಯಿಸುವುದಿಲ್ಲ. ಸಾರ್ವಜನಿಕವಾಗಿ ಕ್ಷಮೆ ಕೇಳಲು ರಾಜೀವ್ ಗೌಡ ಸಿದ್ಧರಿದ್ದಾರೆ. ತನಿಖೆಗೆ ಸಹಕರಿಸಲು ಸಿದ್ಧರಿರುವುದರಿಂದ ರಕ್ಷಣೆಗೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಜೀವ್‌ಗೌಡಗೆ ಜಾಮೀನು ನೀಡಲು ಕೋರ್ಟ್‌ ನಕಾರ: ‘ಕೈ’ ಮುಖಂಡನ ಬಂಧನಕ್ಕೆ ಅಡ್ಡಿ ಆಗಿದ್ದಾರಾ ಸಚಿವ?

ಇನ್ನು ಈ ವೇಳೆ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಅರ್ಜಿದಾರರ ವಿರುದ್ಧ ಬಿಎನ್‌ಎಸ್‌ ಸೆಕ್ಷನ್ 74, 79 ಏಕೆ ಹಾಕಿಲ್ಲ? ಅರ್ಜಿದಾರನಿಗೆ ಮಹಿಳೆಯರೆಂದರೆ ಗೌರವ ಇಲ್ಲವೇ ಎಂದು ಪ್ರಶ್ನೆ ಮಾಡಿದೆ. ಅರ್ಜಿದಾರ ಇಂತಹ ಮಾತನ್ನೆಲ್ಲಾ ಹೇಗೆ ಆಡಲು ಸಾಧ್ಯ? ಒಮ್ಮೆ ಮಾತನಾಡಿದರೆ ವಾಪಸ್ ಪಡೆಯಲು ಆಗುವುದಿಲ್ಲ. ನಿಯಂತ್ರಣವಿಲ್ಲದ ನಾಲಿಗೆಯೇ ಎಲ್ಲವನ್ನೂ ಹಾಳುಮಾಡಬಲ್ಲದು. ನೀವು ಕ್ಷಮೆ ಕೇಳಿದರೂ ಒಡೆದಿರುವುದು ಒಂದಾಗುವುದಿಲ್ಲ ಎಂದು ತರಾಟೆ ತೆಗೆದುಕೊಂಡ ಹೈಕೋರ್ಟ್, ಆ ಮೂಲಕ ರಾಜೀವ್ ಗೌಡ ಅರ್ಜಿ ಸಂಬಂಧ ಆದೇಶ ಕಾಯ್ದಿರಿಸಿದೆ.

ಇದನ್ನೂ ಓದಿ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಕೇಸ್​​: ರಾಜಿಗೆ ಯತ್ನಿಸಿದ್ದನಾ ರಾಜೀವ್​​ ಗೌಡ?

ಇನ್ನು ರಾಜೀವ್ ಗೌಡ ವಿರುದ್ಧ ಶಿಡ್ಲಘಟ್ಟ ಟೌನ್ ಪೊಲೀಸ್ ಠಾಣೆಯಲ್ಲಿ ಎರಡು FIR ದಾಖಲಾಗಿವೆ. ಒಂದು ನಗರಸಭೆ ಪೌರಾಯುಕ್ತೆ ಅಮೃತಾಗೌಡ ನೀಡಿದ ದೂರು, ಮತ್ತೊಂದು ಶಾಸಕ ರವಿಕುಮಾರ್ ಪರ ಜೆಡಿಎಸ್ ಕೊಟ್ಟ ದೂರು. ಈ ನಡುವೆ ರಾಜೀವ್ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version