IPL 2026: ಪ್ಲೇಆಫ್​ನಲ್ಲಿ 4 ತಂಡಗಳ ಸ್ಥಾನ ಖಚಿತ; ಹೇಗಿರಲಿದೆ ಪ್ಲೇಆಫ್‌ ಸುತ್ತು? – Kannada News | IPL 2026 Playoff Fixtures: RCB vs GT, SRH vs RR; Complete Match Schedule and Dates

ಐಪಿಎಲ್ 2026 (IPL 2026) 69 ನೇ ಪಂದ್ಯದಲ್ಲಿ, ರಾಜಸ್ಥಾನ್ ರಾಯಲ್ಸ್ ತಂಡವು ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ (RR vs MI) ತಂಡವನ್ನು 30 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್, ಮುಂಬೈಗೆ 206 ರನ್‌ಗಳ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 175 ರನ್‌ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡ ಕೊನೆಯ ತಂಡವಾಗಿ ಪ್ಲೇಆಫ್ ಟಿಕೆಟ್ ಪಡೆದುಕೊಂಡಿದೆ.

ಈ ಮೂಲಕ ಪ್ಲೇಆಫ್ ಸುತ್ತಿನ ಚಿತ್ರಣ ಸ್ಪಷ್ಟವಾಗಿದೆ. ಅದರಂತೆ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಗುಜರಾತ್ ಟೈಟಾನ್ಸ್ ತಂಡ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವಿದ್ದರೆ, ಇದೀಗ ನಾಲ್ಕನೇ ಸ್ಥಾನಕ್ಕೆ ರಾಜಸ್ಥಾನ್ ಎಂಟ್ರಿಕೊಟ್ಟಿದೆ. ಪ್ಲೇಆಫ್ ಸುತ್ತಿನಲ್ಲಿ ಒಟ್ಟು ಮೂರು ಪಂದ್ಯಗಳು ನಡೆಯಲಿವೆ. ಮೊದಲಿಗೆ ಕ್ವಾಲಿಫೈಯರ್ 1 ನಡೆದರೆ, ಆ ನಂತರ ಎಲಿಮಿನೇಟರ್‌ ಪಂದ್ಯ ನಡೆಯಲಿದೆ. ಈ ಎರಡು ಪಂದ್ಯಗಳ ಬಳಿಕ ಕ್ವಾಲಿಫೈಯರ್ 2 ನಡೆಯಲಿದೆ. ಇದಾದ ಬಳಿಕ ಫೈನಲ್ ಪಂದ್ಯ ನಡೆಯಲಿದೆ.

ಯಾವ ತಂಡಗಳ ನಡುವೆ ಕ್ವಾಲಿಫೈಯರ್ 1?

ಕ್ವಾಲಿಫೈಯರ್ 1 ಪಂದ್ಯವನ್ನು ಆಡುವ ಎರಡು ತಂಡಗಳು ಯಾವುವು ಎಂಬುದು ಈಗಾಗಲೇ ನಿರ್ಧಾರವಾಗಿತ್ತು. ಅದರಂತೆ ಕ್ವಾಲಿಫೈಯರ್ 1ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಏಕೆಂದರೆ ಉಭಯ ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡಿವೆ. ಹೀಗಾಗಿ ಇವೆರಡು ತಂಡಗಳ ಕ್ವಾಲಿಫೈಯರ್ 1 ಆಡಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್​ಗೇರಲಿದೆ. ಸೋತ ತಂಡಕ್ಕೆ ಇನ್ನೊಂದು ಅವಕಾಶವೆಂಬಂತೆ ಕ್ವಾಲಿಫೈಯರ್ 2 ಆಡಲಿದೆ. ಆರ್​ಸಿಬಿ ಹಾಗೂ ಗುಜರಾತ್ ನಡುವಿನ ಕ್ವಾಲಿಫೈಯರ್ 1 ಪಂದ್ಯ ಮೇ 26 ರಂದು ನಡೆಯಲಿದೆ.

ಎಲಿಮಿನೇಟರ್​ನಲ್ಲಿ ಯಾವ ತಂಡಗಳ ಮುಖಾಮುಖಿ?

ಕ್ವಾಲಿಫೈಯರ್ 1 ಬಳಿಕ ಎಲಿಮಿನೇಟರ್‌ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದಿರುವ ತಂಡಗಳು ಮುಖಾಮುಖಿಯಾಗಲಿವೆ. ಅದರಂತೆ ಮೂರನೇ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ನಾಲ್ಕನೇ ಸ್ಥಾನದಲ್ಲಿರುವ ಗುಜರಾತ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಕ್ವಾಲಿಫೈಯರ್ 2 ಆಡಲು ಅರ್ಹತೆ ಪಡೆಯಲಿದೆ. ಇತ್ತ ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಈ ಪಂದ್ಯ ಮೇ 27 ರಂದು ನಡೆಯಲಿದೆ.

MI vs RR IPL 2026 Highlights: ಕೊನೆಯ ಲೀಗ್ ಪಂದ್ಯದಲ್ಲೂ ಸೋತ ಮುಂಬೈ

ಯಾವ ತಂಡಗಳ ನಡುವೆ ಕ್ವಾಲಿಫೈಯರ್ 2?

ಈ ಎರಡು ಪಂದ್ಯಗಳ ಬಳಿಕ ಕ್ವಾಲಿಫೈಯರ್ 2 ಪಂದ್ಯ ನಡೆಯಲಿದೆ. ಮೇಲೆ ಹೇಳಿದಂತೆ ಕ್ವಾಲಿಫೈಯರ್ 1 ರಲ್ಲಿ ಸೋತ ತಂಡ ಕ್ವಾಲಿಫೈಯರ್ 2 ರಲ್ಲಿ ಎಲಿಮಿನೇಟರ್‌ ಪಂದ್ಯವನ್ನು ಗೆದ್ದ ತಂಡವನ್ನು ಎದುರಿಸಲಿದೆ. ಉದಾಹರಣೆಗೆ ಕ್ವಾಲಿಫೈಯರ್ 1 ರಲ್ಲಿ ಆರ್​ಸಿಬಿ ಗೆದ್ದರೆ ನೇರವಾಗಿ ಫೈನಲ್​ಗೇರಲಿದೆ. ಇತ್ತ ಸೋತ ಗುಜರಾತ್ ಕ್ವಾಲಿಫೈಯರ್ 2 ಆಡಬೇಕಾಗುತ್ತದೆ. ಇತ್ತ ಎಲಿಮಿನೇಟರ್​ನಲ್ಲಿ ಸನ್‌ರೈಸರ್ಸ್ ತಂಡವನ್ನು ರಾಜಸ್ಥಾನ್ ಮಣಿಸಿದರೆ, ಆಗ ರಾಜಸ್ಥಾನ್ ಕ್ವಾಲಿಫೈಯರ್ 2 ರಲ್ಲಿ ಗುಜರಾತ್ ತಂಡವನ್ನು ಎದುರಿಸಲಿದೆ. ಈ ಕ್ವಾಲಿಫೈಯರ್ 2 ರಲ್ಲಿ ಗೆದ್ದ ತಂಡ ಫೈನಲ್​ನಲ್ಲಿ ಆರ್​ಸಿಬಿ ತಂಡವನ್ನು ಎದುರಿಸಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:23 pm, Sun, 24 May 26

Source link

ಕಪ್ಪೆ ಚಿಪ್ಪುಗಾಗಿ ಹೋದವರು ಜಲಸಮಾಧಿ, ಸಾವಿನ ಸಂಖ್ಯೆ 10ಕ್ಕೆ ಏರಿಕೆ – Kannada News | Death toll rises to 10 In Bhatkal Hakkalu River Tragedy

ಕಾರವಾರ, (ಮೇ 24): ಕಪ್ಪೆ ಚಿಪ್ಪು ಹೆಕ್ಕಲು ನದಿಗೆ ಹೋದವರು ವಾಪಸ್ ಬಾರಲೇ ಇಲ್ಲ. ನೀರಿನ ಹರಿವು ತಿಳಿಯದೇ ಆಳಕ್ಕಿಳಿದವರು ಮೇಲೇಳಲೇ ಇಲ್ಲ. ಒಬ್ಬರಲ್ಲ ಇಬ್ಬರಲ್ಲ ಇಡೀ ಕುಟುಂಬವೇ ಜಲಸಮಾಧಿಯಾಗಿದೆ. ಉತ್ತರ ಕನ್ನಡದ ಭಟ್ಕಳ (Bhatkal) ತಟ್ಟೆ ಹಕ್ಕಲು ನದಿಯಲ್ಲಿ ಘನಘೋರ ದುರಂತ (Hakkalu River Tragedy) ನಡೆದುಹೋಗಿದ್ದು, ಈ ದುರ್ಘಟನೆಯಲ್ಲಿ ಸಾವನ್ನಪ್ಪಿದವರು ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಹೌದು..ಉತ್ತರ ಕನ್ನಡ ಜಿಲ್ಲೆ ಭಟ್ಕಳ ಬಳಿಯ ತಟ್ಟೆಹಕಲ್ಲು ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಪಡುಶಿರಾಲಿ ಶಾರದಹೊಳೆಯ 14 ಜನ ನದಿಗೆ ಇಳಿದಿದ್ರು. 12 ಮಂದಿ ಮಹಿಳೆಯರು, ಇಬ್ಬರು ಪುರುಷರು ಕಪ್ಪೆಚಿಪ್ಪುಗಳನ್ನ ತೆಗೆಯುತ್ತಿದ್ರು. ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಒಂದಷ್ಟು ಕಪ್ಪೆ ಚಿಪ್ಪುಗಳನ್ನ ಹಾಯ್ದು ನದಿ ತಟದಲ್ಲಿ ಇರಿಸಿದ್ರು. ಆದ್ರೆ, ತಣ್ಣಗೆ ಹರಿಯುತ್ತಿದ್ದ ನದಿ ಒಡಲಿನಲ್ಲಿ, ಏಕಾಏಕಿ ನೀರಿನ ಹರಿವು ಹೆಚ್ಚಾಗಿದ್ದು ನದಿಗೆ ಇಳಿದವರು ಪ್ರಾಣ ಬಿಟ್ಟಿದ್ದಾರೆ. ಒಟ್ಟು 14 ಜನರ ಪೈಕಿ 10 ಮಂದಿ ಮೃತಪಟ್ಟಿದ್ದಾರೆ. ಓರ್ವ ಪುರುಷ ಸೇರಿ 9 ಮಹಿಳೆಯರು ಸಾವಿಗೀಡಾಗಿದ್ದು, ಮೂವರನ್ನ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಒಬ್ಬರಿಗಾಗಿ ತೀವ್ರ ಶೋಧ ಮುಂದುವರೆದಿದೆ.

ಇದನ್ನೂ ಓದಿ: ತಟ್ಟೆಹಕ್ಕಲು ನದಿಯಲ್ಲಿ 8 ಜಲಸಮಾಧಿ: ಓರ್ವ ಪುರುಷ, ಏಳು ಮಹಿಳೆಯರ ಸಾವು: ಅಸಲಿಗೆ ಆಗಿದ್ದೇನು?

Source link

ಇದು ಹಲಸಿನ ಬೀಜದ ಕಾಫಿ; ತಯಾರಿಸೋದು ಬಲು ಸುಲಭ – Kannada News | Delicious coffee can also be made from jackfruit seeds

ಬೇಸಿಗೆಯಲ್ಲಿ ಹೇರಳವಾಗಿ ಹಲಸಿನ ಹಣ್ಣು ಲಭ್ಯವಿರುತ್ತವೆ. ಸಾಮಾನ್ಯವಾಗಿ ಈ ಹಣ್ಣನ್ನು ತಿಂದ ಬಳಿಕ ಅದರ ಬೀಜವನ್ನು ಎಸೆದು ಬಿಡುತ್ತಾರೆ. ಇವುಗಳಲ್ಲಿಯೂ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಹೌದು  ಹಲಸಿನ ಬೀಜಗಳು (jackfruit seeds) ಉತ್ಕರ್ಷಣ ನಿರೋಧಕಗಳು, ಪ್ರೋಟೀನ್, ಕಬ್ಬಿಣ ಮತ್ತು ವಿಟಮಿನ್ ಎ ಯಿಂದ ಸಮೃದ್ಧವಾಗಿರುವುದರಿಂದ ರಕ್ತಹೀನತೆಯನ್ನು ತಡೆಗಟ್ಟಲು, ಚರ್ಮ, ಕೂದಲಿನ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ. ಸಾಮಾನ್ಯವಾಗಿ ಈ ಬೀಜದಿಂದ ಸಾರು, ಪಲ್ಯ, ವಡೆ ಇತ್ಯಾದಿಗಳನ್ನು ತಯಾರಿಸುತ್ತಾರೆ. ಅದೇ ರೀತಿ ಇದರಿಂದ ರುಚಿಕರವಾಗಿರುವ ಕಾಫಿಯನ್ನು ಕೂಡ ತಯಾರಿಸಬಹುದು. ಈ ಹಲಸಿನ ಬೀಜದ ಕಾಫಿ ರೆಸಿಪಿಯ ಫುಲ್‌ ಡಿಟೇಲ್ಸ್‌ ಇಲ್ಲಿದೆ.

ಹಲಸಿನ ಬೀಜದಿಂದಲೂ ತಯಾರಿಸಬಹುದು ಕಾಫಿ:

ಖರ್ಜೂರದ ಬೀಜದಿಂದ ಕಾಫಿಯನ್ನು ತಯಾರಿಸುವಂತೆ ಹಲಸಿನ ಬೀಜದಿಂದಲೂ ರುಚಿಕರ ಕಾಫಿಯನ್ನು ತಯಾರಿಸಬಹುದು. ಈ ಒಂದು ಸ್ಪೆಷಲ್‌ ಕಾಫಿ ರೆಸಿಪಿಯನ್ನು tindipoti_meghana ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ.

ವಿಡಿಯೋ ಇಲ್ಲಿದೆ ನೋಡಿ:‌

ಇದನ್ನೂ ಓದಿ: ಮನೆಯಲ್ಲೇ ಈಸಿಯಾಗಿ ತಯಾರಿಸಬಹುದು ವೈರಲ್‌ ಮೆಲೋಡಿ ಚಾಕೊಲೇಟ್‌; ಇಲ್ಲಿದೆ ರೆಸಿಪಿ

ಹಲಸಿನ ಬೀಜದ ಕಾಫಿ ತಯಾರಿಸೋದು ಹೇಗೆ?

ಮೊದಲಿಗೆ ಹಲಸಿನ ಬೀಜದ ಸಿಪ್ಪೆ ತೆಗೆದು ನಂತರ ಸಣ್ಣದಾಗಿ ತುಂಡರಿಸಿ ಇಟ್ಟುಕೊಳ್ಳಿ. ನಂತರ ಒಂದು ತಳದ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಮೊದಲೇ ಕತ್ತರಿಸಿಟ್ಟ ಹಲಸಿನ ಬೀಜವನ್ನು 8 ರಿಂದ 10 ನಿಮಿಷ ಡ್ರೈ ರೋಸ್ಟ್‌ ಮಾಡಿ. ನಂತರ ಇದು ತಣ್ಣಗಾದ ಬಳಿಕ ಮಿಕ್ಸಿಗೆ ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ನಂತರ ಈ ಪುಡಿಯನ್ನು ಇನ್ನೊಮ್ಮೆ ಡ್ರೈ ರೋಸ್ಟ್‌ ಮಾಡಿಕೊಳ್ಳಿ. ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ನಂತರ ಅದನ್ನು ಇನ್ನೊಂದು ಬಾರಿ ನುಣ್ಣಗೆ ರುಬ್ಬಿಕೊಂಡರೆ ಹಲಸಿನ ಬೀಜದ ಕಾಫಿ ಪೌಡರ್‌ ಸಿದ್ಧ.

ಈ ಹಲಸಿನ ಬೀಜದ ಕಾಫಿಯನ್ನು ತಯಾರಿಸಲು ಮೊದಲು ಒಂದು ಪಾತ್ರೆಯಲ್ಲಿ ಹಾಲನ್ನು ಬಿಸಿ ಮಾಡಲು ಇಟ್ಟುಕೊಳ್ಳಿ. ಅದಕ್ಕೆ ಹಲಸಿನ ಬೀಜದ ಪೌಡರ್‌ ಸ್ವಲ್ಪ ಪೌಡರ್‌ ಹಾಕಿ ಗಂಟು ಕಟ್ಟಿಕೊಳ್ಳದ ಹಾಗೆ ಚೆನ್ನಾಗಿ ಕಲಸಿಕೊಳ್ಳಬೇಕು. ಒಂದು ಕುದಿ ಬಂದರೆ ಸಾಕು, ಇದನ್ನು ಜಾಸ್ತಿ ಬಿಸಿ ಮಾಡಿದರೆ ಗಟ್ಟಿಯಾಗುವ ಸಾಧ್ಯತೆ ಇರುತ್ತದೆ. ಈಗ ಒಂದ ಗ್ಲಾಸ್‌ಗೆ ಸಿಹಿಗೆ ತಕ್ಕಷ್ಟು ಬೆಲ್ಲದ ಪುಡಿ ಹಾಕಿ, ಅದಕ್ಕೆ ಮೊದಲೇ ತಯಾರಿಸಿಟ್ಟ ಕಾಫಿ ಸೇರಿಸಿದರೆ ರುಚಿಕರ ಹಲಸಿನ ಬೀಜದ ಕಾಫಿ ಸವಿಯಲು ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಪರೂಪದ ಮೇಕೆಯನ್ನು ಸಲ್ಮಾನ್ ಖಾನ್​ಗೆ ಮಾರುವಾಸೆ, ಬೆಲೆ ಎಷ್ಟು ಲಕ್ಷ ಗೊತ್ತೆ? – Kannada News | Farmer Dhanaji wants to sell his goat to Salman Khan for 15 lakh rs

ಸಿನಿಮಾ (Cinema) ನಟರನ್ನು ಭೇಟಿಯಾಗುವುದು, ಅವರಿಂದ ಉಡುಗೊರೆ ಪಡೆಯುವುದು, ಉಡುಗೊರೆ ನೀಡುವುದು, ಸೆಲ್ಫಿ ತೆಗೆಸಿಕೊಳ್ಳುವುದು ಅಭಿಮಾನಿಗಳ ಆಸೆ. ಆದರೆ ಇಲ್ಲೊಬ್ಬ ರೈತನಿಗೆ ತಾನು ಸಾಕಿರುವ ಅಪರೂಪದ ಆಡನ್ನು ಸಲ್ಮಾನ್ ಖಾನ್​​ಗೆ ಮಾರಾಟ ಮಾಡಬೇಕು ಎಂಬ ಆಸೆಯಂತೆ. ಅದೂ ಕಡಿಮೆ ಮೊತ್ತಕ್ಕಲ್ಲ ಬರೋಬ್ಬರಿ 15 ಲಕ್ಷ ರೂಪಾಯಿಗಳಿಗೆ. ಮಹಾರಾಷ್ಟ್ರದ ರೈತ ಧನಾಜಿ ವಿರ್ಕರ್ ಈ ರೀತಿಯ ವಿಚಿತ್ರ ಆಸೆಯನ್ನು ಹೊಂದಿರುವ ರೈತ. ಅಷ್ಟಕ್ಕೂ ಆತ ಸಾಕಿರುವ ಆಡಿನ ವಿಶೇಷತೆಯೇನು?

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ರೈತ ಧನಾಜಿ ವಿರ್ಕರ್ ಅಪರೂಪದ ಮೇಕೆ ಸಾಕಿದ್ದು, ಆ ಮೇಕೆಯನ್ನು ಸಲ್ಮಾನ್ ಖಾನ್ ಅವರಿಗೆ ಮಾರಾಟ ಮಾಡಬೇಕು ಎಂಬ ಆಸೆ ಹೊಂದಿದ್ದಾರೆ. ಅದೂ ಬರೋಬ್ಬರಿ 15 ಲಕ್ಷ ರೂಪಾಯಿಗೆ. ತಮ್ಮ ಮೇಕೆಗೆ 15 ಲಕ್ಷ ರೂಪಾಯಿ ಕೇಳುತ್ತಿರಲು ಕಾರಣ, ಆ ಮೇಕೆಯ ವಿಶೇಷತೆ. ಧನಾಜಿ ವೀರ್ಕರ್ ಅವರು ಸಾಕಿರುವ ಮೇಕೆಯ ಹಣೆಯ ಮೇಲೆ ಚಂದ್ರನ ಆಕಾರದ ಮಚ್ಚೆಯಿದೆ. ಬಕ್ರೀದ್ ಹಬ್ಬಕ್ಕಾಗಿ ಬಲಿ ಕೊಡಲು ಸೂಕ್ತವಾದ ಮೇಲೆ ಅದಾಗಿದೆ. ಹಾಗಾಗಿ ತನ್ನ ಮೇಕೆಯನ್ನು 15 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ ರೈತ ಧನಾಜಿ ವೀರ್ಕರ್.

ವಿರ್ಕರ್ ಅವರು ಈ ಮೇಕೆಯನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಮಾರಾಟ ಮಾಡುವ ಮನಸ್ಸು ಹೊಂದಿದ್ದಾರೆ. ತಮ್ಮ ವಿಶೇಷ ಆಡನ್ನು ಬಾಲಿವುಡ್ ಸೂಪರ್ ಸ್ಟಾರ್ ಖರೀದಿಸಬೇಕು ಎಂಬುದು ಅವರ ಆಸೆ. ಆದರೆ ಸಲ್ಮಾನ್ ಖಾನ್ ಅವರನ್ನು ಹೇಗೆ ಸಂಪರ್ಕಿಸಬೇಕು ಎಂಬುದು ಅವರಿಗೆ ತಿಳಿದಿಲ್ಲವಂತೆ. ಆ ಬಗ್ಗೆ ಪ್ರಯತ್ನ ಮಾಡುತ್ತಿರುವುದಾಗಿಯೂ ಧನಾಜಿ ಹೇಳಿದ್ದಾರೆ.

ಪ್ರತಿ ವರ್ಷ ಬಕ್ರೀದ್ ಅಥವಾ ಈದ್ ಸಂದರ್ಭದಲ್ಲಿ ವಿಶೇಷ ಗುರುತುಗಳಿರುವ ಮೇಕೆಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಕೆಲವರು ‘ಅಲ್ಹಾ’ ಅಥವಾ ‘ಮೊಹಮ್ಮದ್’ ಎಂಬ ಆಕಾರದ ಗುರುತುಗಳಿವೆ ಎಂದು ನಂಬುತ್ತಾರೆ. ಇಂತಹ ಮೇಕೆಗಳು ಲಕ್ಷಾಂತರ ರೂಪಾಯಿಗಳಿಗೆ ಮಾರಾಟವಾಗುತ್ತವೆಯಂತೆ. ಈಗ ಧನಾಜಿ ಬಳಿ ಇರುವ ಮೇಕೆಯನ್ನು ಅವರು ಮಾರುಕಟ್ಟೆಯಿಂದ ಖರೀದಿಸಿದ್ದಲ್ಲವಂತೆ. ಸುಮಾರು ಎರಡು ವರ್ಷಗಳ ಹಿಂದೆ ವಿರ್ಕರ್ ಅವರ ಮನೆಯಲ್ಲೇ ಹುಟ್ಟಿದ ಮೇಕೆ ಅದಾಗಿದ್ದು. ಆರಂಭದಲ್ಲಿ ಸಾಮಾನ್ಯ ಮೇಕೆಯಂತೆಯೇ ಕಂಡರೂ, ಬೆಳೆದಂತೆ ಅದರ ನೆತ್ತಿಯ ಮೇಲಿನ ಬಿಳಿ ಗುರುತು ಸ್ಪಷ್ಟವಾಗಿ ಚಂದ್ರಾಕಾರ ಪಡೆಯಿತಂತೆ.

ಇದನ್ನೂ ಓದಿ:ಬ್ಲಾಕ್ ಬಸ್ಟರ್ ಸಿನಿಮಾ ಅವಕಾಶ ನಿರಾಕರಿಸಿದ್ದ ಸ್ಟಾರ್ ನಟ: ಕಾರಣ?

ಗ್ರಾಮದಲ್ಲಿ ಈ ಮೇಕೆಯ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ನೆರೆ ಹೊರೆಯ ಊರುಗಳಿಂದ ಜನ ಮೇಕೆಯನ್ನು ನೋಡಲು ಬರುತ್ತಿದ್ದಾರಂತೆ. ಗ್ರಾಮೀಣ ಪ್ರದೇಶದಲ್ಲಿ ಈ ಮೇಕೆಗೆ ಸರಿಯಾದ ಬೆಲೆ ಸಿಗುವುದಿಲ್ಲ ಎಂದು ವಿರ್ಕರ್, ಇದನ್ನು ದೊಡ್ಡ ನಗರಗಳಿಗೆ ಕೊಂಡೊಯ್ಯುವ ಬಗ್ಗೆ ಯೋಚಿಸಿದರು. ಆದರೆ ಪ್ರಯಾಣ ವೆಚ್ಚ ಮತ್ತು ಇತರ ತೊಂದರೆಗಳಿಂದ ಅದು ಸಾಧ್ಯವಾಗಿರಲಿಲ್ಲ. ನಂತರ ಅವರು ಮೇಕೆಯ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡರು. ಆ ವಿಡಿಯೋ ವೈರಲ್ ಆಗಿ ಮುಂಬೈ, ಪುಣೆ, ಹೈದರಾಬಾದ್ ಸೇರಿದಂತೆ ಹಲವೆಡೆಗಳಿಂದ ಖರೀದಿದಾರರು ಸಂಪರ್ಕಿಸಲು ಆರಂಭಿಸಿದ್ದಾರಂತೆ.

ಕೆಲವು ಮುಸ್ಲಿಮರು ತಮ್ಮ ಮನಸಿನ ಆಶೆಗಳು ಈಡೇರಿದರೆ ಬಕ್ರೀದ್ ಸಮಯದಲ್ಲಿ ಚಂದ್ರಾಕಾರದ ಗುರುತು ಇರುವ ಮೇಕೆಯನ್ನು ಬಲಿ ನೀಡುವ ಪ್ರತಿಜ್ಞೆ ಮಾಡುತ್ತಾರೆ. ಅದರಿಂದ ಇಂತಹ ಮೇಕೆಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನುವ ಧನಾಜಿ, ಈಗಾಗಲೇ ತಮ್ಮ ಮೇಕೆಗೆ 10 ಲಕ್ಷದಿಂದ 12 ಲಕ್ಷದವರೆಗೆ ಆಫರ್‌ಗಳು ಬಂದಿವೆ. ಆದರೆ ವಿರ್ಕರ್ ಅವರಿಗೆ ಸುಮಾರು ರೂ 15 ಲಕ್ಷಕ್ಕೆ ತಮ್ಮ ಮೇಕೆಯನ್ನು ಮಾರಬೇಕು ಎಂದುಕೊಂಡಿದ್ದಾರೆ. ‘ನಮ್ಮ ಮೇಕೆ ಸಲ್ಮಾನ್ ಭಾಯ್‌ ಅವರ ಬಳಿ ಹೋಗಬೇಕು ಎಂಬುದೇ ನಮ್ಮ ಆಸೆ. ಅವರು ಸಂಪರ್ಕಿಸಿದರೆ ಬೆಲೆಯನ್ನು ಕಡಿಮೆ ಮಾಡಲು ಸಿದ್ಧ’ ಎಂದು ರೈತ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

MI vs RR: ಮುಂಬೈ ಮಣಿಸಿ 4ನೇ ತಂಡವಾಗಿ ಪ್ಲೇಆಫ್‌ಗೇರಿದ ರಾಜಸ್ಥಾನ್

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ 2026 ರ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಇದು ಲೀಗ್‌ ಹಂತದಲ್ಲಿ ಎರಡು ತಂಡಗಳ ಕೊನೆಯ ಪಂದ್ಯವಾಗಿತ್ತು. ಪ್ಲೇಆಫ್ ದೃಷ್ಟಿಯಿಂದ ಈ ಪಂದ್ಯ ರಾಜಸ್ಥಾನ್​ಗೆ ಬಹಳ ಮುಖ್ಯವಾಗಿತ್ತು. ಇಂದಿನ ಪಂದ್ಯದಲ್ಲಿ ಗೆದ್ದರಷ್ಟೇ ರಾಜಸ್ಥಾನ್ ಪ್ಲೇಆಫ್​ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳುತ್ತಿತ್ತು. ಅದರಂತೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ರಾಜಸ್ಥಾನ್ ರಾಯಲ್ಸ್ ತಂಡ 4ನೇ ತಂಡವಾಗಿ ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡಿದೆ. ರಾಜಸ್ಥಾನ್ ಗೆಲುವಿನಿಂದ ಪಂಜಾಬ್ ಕಿಂಗ್ಸ್ ಹಾಗೂ ಕೆಕೆಆರ್ ತಂಡಗಳ ಪ್ಲೇಆಫ್‌ಗೇರುವ ಕನಸು ಕಮರಿ ಹೋಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 205 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮುಂಬೈ 175 ರನ್​ಗಳಿಸಲಷ್ಟೇ ಶಕ್ತವಾಗಿ 35 ರನ್​ಗಳಿಂದ ಸೋಲೊಪ್ಪಿಕೊಂಡಿತು.

Source link

ಅನ್ನಭಾಗ್ಯ ಅಕ್ಕಿ ವಿತರಣೆಯಲ್ಲಿ ಗೊಂದಲ, ಸಂಕಷ್ಟದಲ್ಲಿ ಸಿಲುಕಿದ್ಯಾ ಗ್ಯಾರಂಟಿ ಯೋಜನೆ? – Kannada News | Beneficiaries faces Problems for Free Rice Under Anna Bhagya Scheme, what happened?

ಬೆಂಗಳೂರು, (ಮೇ 24): ಅನ್ನಭಾಗ್ಯ ಯೋಜನೆ (Anna Bhagya Scheme). ಸಿಎಂ ಸಿದ್ದರಾಮಯ್ಯಗೆ ಅನ್ನರಾಮಯ್ಯ ಅನ್ನೋ ಕೀರ್ತಿ ತಂದು ಕೊಟ್ಟ ಮಹತ್ವದ ಯೋಜನೆ. ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಮಲಗಬಾರದು ಅನ್ನೋ ಧೇಯೋದ್ದೇಶದಿಂದ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಆದ್ರೆ ಇದೇ ಯೋಜನೆ ಹಲವು ಗೊಂದಲಗಳಿಗೆ ಕಾರಣವಾಗಿದೆ.

ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ, ಪ್ರತಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ಕೊಡಲಾಗುತ್ತೆ. ಅಂದ್ರೆ ಕೇಂದ್ರ ಸರ್ಕಾರದಿಂದ 5 ಕೆಜಿ ಅಕ್ಕಿ, ರಾಜ್ಯ ಸರ್ಕಾರದಿಂದ 5 ಕೆಜಿ ಅಕ್ಕಿ ಸೇರಿಸಿ 10 ಕೆಜಿ ಅಕ್ಕಿಯನ್ನ ವಿತರಣೆ ಮಾಡಲಾಗುತ್ತೆ. ಪ್ರತಿ ತಿಂಗಳೂ ಹೀಗೆ ನಡೆದುಕೊಂಡು ಬರ್ತಿದೆ. ಆದ್ರೆ, ಈ ಬಾರಿ ಕೇಂದ್ರ ಸರ್ಕಾರ ಮೇ ಹಾಗೂ ಜೂನ್ ಸೇರಿಸಿ 2 ತಿಂಗಳ ಅಕ್ಕಿಯನ್ನ ಒಟ್ಟಿಗೆ ನೀಡಿದೆ. ಹೀಗಾಗಿ ರಾಜ್ಯದ ಎಲ್ಲಾ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಕೇಂದ್ರದಿಂದ ಬಂದಿರೋ ದವಸ ಧಾನ್ಯಗಳನ್ನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ 2 ತಿಂಗಳ ಅಕ್ಕಿ ಒಟ್ಟಿಗೆ ಕಳಿಸಿರೋದ್ರಿಂದ, ರಾಜ್ಯ ಸರ್ಕಾರ ಮೇ ತಿಂಗಳ ತನ್ನ ಪಾಲಿನ ಅಕ್ಕಿ ಕೊಡದೆ ಕೈ ಎತ್ತಿದೆ. ಹೀಗಾಗಿ ಸದ್ಯ ಫಲಾನುಭವಿಗಳಿಗೆ ಕೇಂದ್ರ ಕೊಟ್ಟಿರೋ 2 ತಿಂಗಳ ರೇಷನ್ ಮಾತ್ರ ವಿತರಣೆ ಮಾಡ್ತಿದ್ದು, ಮುಂದಿನ ತಿಂಗಳು ಅಕ್ಕಿ ಕೊಡ್ತಾರಾ ಇಲ್ವಾ ಅನ್ನೋ ಗೊಂದಲ ಮನೆ ಮಾಡಿದೆ.

ವಿಷ್ಯ ಏನಪ್ಪ ಅಂದ್ರೆ, ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಹೆಚ್ಚಿನ ಪ್ರಮಾಣದಲ್ಲಿ ರಾಗಿ, ಅಕ್ಕಿ ಖರೀದಿಸಿ ಸಂಗ್ರಹಿಸಿದೆ. ಹೀಗಾಗಿ ಒಟ್ಟಿಗೆ 2 ತಿಂಗಳ ಅಕ್ಕಿ, ರಾಗಿ ಕಳಿಸಿದೆ. ಮುಂದಿನ ತಿಂಗಳು ಕೇಂದ್ರ ತನ್ನ ಪಾಲು ಕಳಿಸಲ್ಲ. ಇದನ್ನರಿತ ರಾಜ್ಯ ಸರ್ಕಾರ, ಮೇ ತಿಂಗಳ ಬಾಕಿ ಅಕ್ಕಿ, ಜೂನ್ ಅಂದ್ರೆ ಮುಂದಿನ ತಿಂಗಳ ಪಡಿತರದ ಜೊತೆ ಸೇರಿಸಿ 2 ತಿಂಗಳ ರೇಷನ್ ಕೊಡಲು ನಿರ್ಧರಿಸಿದೆ. ಆದ್ರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಜೋಶಿ ಸೇರಿದಂತೆ ಬಿಜೆಪಿ ನಾಯಕರು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಒಟ್ನಲ್ಲಿ ಅನ್ನಭಾಗ್ಯ ಅಕ್ಕಿ ಬಗ್ಗೆ ಯಾವುದೇ ಆತಂಕಬೇಡ. ಮುಂದಿನ ತಿಂಗಳು 2 ತಿಂಗಳ ಅಕ್ಕಿ ಸಿಗುತ್ತೆ ಅಂತಾ ಸರ್ಕಾರ ಭರವಸೆ ನೀಡಿದೆ.

Source link

ಫ್ಯಾಟಿ ಲಿವರ್ ಅನ್ನು ನೈಸರ್ಗಿಕವಾಗಿ ಮತ್ತೆ ಮೊದಲಿನ ಸ್ಥಿತಿಗೆ ತರಬೇಕೇ? ಹಾಗಿದ್ರೆ ತಪ್ಪದೆ ಈ ಕೆಲಸಗಳನ್ನು ಮಾಡಿ – Kannada News | How To Reverse Fatty Liver Naturally

ಇತ್ತೀಚಿನ ದಿನಗಳಲ್ಲಿ ಫ್ಯಾಟಿ ಲಿವರ್ (Fatty Liver) ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಅನೇಕ ವರದಿಗಳ ಪ್ರಕಾರ, ಪ್ರತಿ ಮೂವರಲ್ಲಿ ಒಬ್ಬರಿಗೆ ಫ್ಯಾಟಿ ಲಿವರ್ ಸಮಸ್ಯೆ ಕಾಣಿಸುತ್ತಿದೆ. ಅಸ್ವಸ್ಥ ಆಹಾರ ಪದ್ಧತಿ, ವ್ಯಾಯಾಮದ ಕೊರತೆ, ಅತಿಯಾದ ತೂಕ ಮತ್ತು ಮದ್ಯಪಾನದ ಅಭ್ಯಾಸಗಳು ಇದರ ಪ್ರಮುಖ ಕಾರಣಗಳಾಗಿವೆ. ಆದರೆ ತಜ್ಞರ ಪ್ರಕಾರ, ಆರಂಭಿಕ ಹಂತದಲ್ಲೇ ಗಮನಿಸಿದರೆ ಫ್ಯಾಟಿ ಲಿವರ್ ಅನ್ನು ಬಹುಮಟ್ಟಿಗೆ ರಿವರ್ಸ್ ಮಾಡಬಹುದು. ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಮನೀಷ್ ಹೇಳುವ ಪ್ರಕಾರ, ಲಿವರ್‌ನಲ್ಲಿ ಫೈಬ್ರೋಸಿಸ್ ಉಂಟಾಗುವ ಮುನ್ನವೇ ಸರಿಯಾದ ಜೀವನಶೈಲಿ ಅನುಸರಿಸಿದರೆ ಲಿವರ್ ಮೇಲಿನ ಕೊಬ್ಬನ್ನು ಕಡಿಮೆ ಮಾಡಬಹುದು. ಆದರೆ ಸಮಸ್ಯೆ ಗಂಭೀರವಾಗಿ ಸಿರೋಸಿಸ್ ಹಂತಕ್ಕೆ ತಲುಪಿದರೆ ಲಿವರ್ ಟ್ರಾನ್ಸ್‌ಪ್ಲಾಂಟ್ ಅಗತ್ಯವಾಗುವ ಸಾಧ್ಯತೆ ಇದೆ ಎನ್ನುತ್ತಾರೆ. ಹಾಗಾದರೆ ಫ್ಯಾಟಿ ಲಿವರ್ ಅನ್ನು ಮತ್ತೆ ಮೊದಲಿನ ಸ್ಥಿತಿಗೆ ತರಲು ಎಷ್ಟು ಸಮಯ ಬೇಕಾಗುತ್ತದೆ, ಯಾವ ರೀತಿಯ ಆಹಾರವನ್ನು ಸೇವಿಸಬೇಕು ಮತ್ತು ಯಾವುದನ್ನು ಸೇವಿಸಬಾರದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಫ್ಯಾಟಿ ಲಿವರ್ ಸುಧಾರಿಸಲು ಎಷ್ಟು ಸಮಯ ಬೇಕು?

ತಜ್ಞರ ಪ್ರಕಾರ, ಸಾಮಾನ್ಯವಾಗಿ ಫ್ಯಾಟಿ ಲಿವರ್ ಸುಧಾರಿಸಲು ಸುಮಾರು ಮೂರು ತಿಂಗಳು ಬೇಕಾಗಬಹುದು. ಈ ಅವಧಿಯಲ್ಲಿ ಆಹಾರ ಪದ್ಧತಿ, ವ್ಯಾಯಾಮ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡುವುದು ಅತ್ಯಂತ ಮುಖ್ಯ. ಮದ್ಯಪಾನ ಮಾಡುವವರು ಅದನ್ನು ನಿಧಾನವಾಗಿ ಕಡಿಮೆ ಮಾಡಬೇಕು. ಜೊತೆಗೆ ತಿಂಗಳಿಗೆ ಒಮ್ಮೆ SGPT ಪರೀಕ್ಷೆ ಮಾಡಿಸಿಕೊಂಡರೆ ಲಿವರ್ ಆರೋಗ್ಯದಲ್ಲಿ ಆಗುತ್ತಿರುವ ಸುಧಾರಣೆಯನ್ನು ತಿಳಿದುಕೊಳ್ಳಬಹುದು.

ವಾಕ್ ಮಾಡುವುದು ಬಹಳ ಮುಖ್ಯ:

ಪ್ರತಿದಿನ ನಡೆಯುವುದು ಬಹಳ ಮುಖ್ಯ. ಡಾ. ಮನೀಷ್ ಅವರ ಪ್ರಕಾರ, ವಾರಕ್ಕೆ ಕನಿಷ್ಠ ಐದು ದಿನ ಬ್ರಿಸ್ಕ್ ವಾಕ್ ಮಾಡುವುದು ಉತ್ತಮ. ಜೊತೆಗೆ ದಿನಕ್ಕೆ 5 ರಿಂದ 7 ಸಾವಿರ ಹೆಜ್ಜೆ ನಡೆಯಿರಿ, 2 ದಿನ ಸ್ಟ್ರೆಂಗ್ತ್ ಟ್ರೈನಿಂಗ್ ಮಾಡಿ, ಊಟದ ನಂತರ 10 ನಿಮಿಷ ನಡೆಯುವ ಅಭ್ಯಾಸ ಬೆಳೆಸಿಕೊಳ್ಳಿ, ಬೆಳಗಿನ ಸೂರ್ಯನ ಬೆಳಕಿನಲ್ಲಿ ನಡೆಯುವುದರಿಂದ ವಿಟಮಿನ್ D ದೊರೆಯುತ್ತದೆ. ಇದು ಲಿವರ್ ಆರೋಗ್ಯಕ್ಕೆ ಸಹಾಯಕವಾಗಿದೆ.

ಇದನ್ನೂ ಓದಿ: ಪ್ರತಿದಿನ ಕಿತ್ತಳೆ ತಿಂದರೆ ಫ್ಯಾಟಿ ಲಿವರ್ ಕಡಿಮೆಯಾಗುತ್ತದೆಯೇ? ಅಧ್ಯಯನ ಏನು ಹೇಳುತ್ತದೆ?

ಸಕ್ಕರೆ ಸೇವನೆ ಕಡಿಮೆ ಮಾಡುವುದು ಅಗತ್ಯ:

ತಜ್ಞರ ಪ್ರಕಾರ, ಹೆಚ್ಚು ಸಕ್ಕರೆ ಇರುವ ಆಹಾರಗಳು ಲಿವರ್‌ಗೆ ಹಾನಿಕಾರಕ. ಆದ್ದರಿಂದ ಸಿಹಿ ಪದಾರ್ಥಗಳು, ಸಕ್ಕರೆ ಹಾಕಿದ ಚಹಾ ಅಥವಾ ಕಾಫಿ, ಬೇಕರಿ ಆಹಾರಗಳು, ಸಿಹಿ ಪಾನೀಯಗಳು ಇವುಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಸಂಪೂರ್ಣವಾಗಿ ಸಕ್ಕರೆ ಬಿಡುವುದಕ್ಕಿಂತ ನಿಯಂತ್ರಿತ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.

ಹಸಿರು ತರಕಾರಿಗಳು ಲಿವರ್ ಆರೋಗ್ಯಕ್ಕೆ ಉತ್ತಮ:

ಪಾಲಕ್, ಬ್ರೋಕೋಲಿ, ಸೌತೆಕಾಯಿ, ಹೀರೇಕಾಯಿ ಮತ್ತು ಹಾಗಲಕಾಯಿ ಮುಂತಾದ ಹಸಿರು ತರಕಾರಿಗಳು ಲಿವರ್‌ನಲ್ಲಿ ಉಂಟಾಗುವ ಉರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ತಜ್ಞರ ಸಲಹೆಯಂತೆ, ದಿನಕ್ಕೆ ಕನಿಷ್ಠ ಒಂದು ತರಕಾರಿ ಆಹಾರದಲ್ಲಿ ಇರಬೇಕು.

ಪ್ರೋಟೀನ್ ಆಹಾರ ಬಹಳ ಮುಖ್ಯ:

ಫ್ಯಾಟಿ ಲಿವರ್ ಸಮಸ್ಯೆಯಲ್ಲಿ ಪ್ರೋಟೀನ್ ಸಮೃದ್ಧ ಆಹಾರ ಸೇವಿಸುವುದು ಅಗತ್ಯ. ನೀವು ಶಾಕಾಹಾರಿಗಳಾಗಿದ್ದರೆ ಹಸಿರು ಮೂಂಗ್ ದಾಲ್, ಕಡಲೆ, ರಾಜ್ಮಾ, ಸ್ಪ್ರೌಟ್ಸ್,ಪನೀರ್, ಟೋಫು ಸೇವನೆ ಮಾಡಬಹುದು. ನೀವು ಮಾಂಸಾಹಾರಿಗಳಾಗಿದ್ದರೆ ಮೊಟ್ಟೆ, ಗ್ರಿಲ್ ಮಾಡಿದ ಚಿಕನ್ ಮತ್ತು ಮೀನನ್ನು ಸೇವನೆ ಮಾಡಬಹುದು. ಜೊತೆಗೆ ವಿಟಮಿನ್ B12 ಹೊಂದಿರುವ ಆಹಾರಗಳು ಕೂಡ ಲಿವರ್ ಆರೋಗ್ಯ ಸುಧಾರಿಸಲು ಸಹಕಾರಿ.

ತಜ್ಞರು ಹೇಳುವಂತೆ, ಫ್ಯಾಟಿ ಲಿವರ್ ಸಮಸ್ಯೆಯನ್ನು ನಿರ್ಲಕ್ಷಿಸಬಾರದು. ಸರಿಯಾದ ಆಹಾರ, ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಅಭ್ಯಾಸಗಳಿಂದ ಲಿವರ್ ಆರೋಗ್ಯವನ್ನು ಮತ್ತೆ ಉತ್ತಮ ಸ್ಥಿತಿಗೆ ತರಬಹುದು. ಸಮಯಕ್ಕೆ ಗಮನ ಕೊಟ್ಟರೆ ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇದೆಂಥಾ ದುರ್ದೈವ! ಕ್ರಿಕೆಟ್ ಆಡುತ್ತಿರುವಾಗಲೇ ಕುಸಿದು ಬಿದ್ದು ಆಟಗಾರ ಸಾವು – Kannada News | Tragedy at KSCA League Match as Ranji Cricketer Dies of Heart Attack

ಬೆಂಗಳೂರು, ಮೇ 24: ರಾಜಧಾನಿಯಲ್ಲಿ ಭಾನುವಾರ ಅತ್ಯಂತ ದಾರುಣ ಘಟನೆಯೊಂದು ಸಂಭವಿಸಿದೆ. ಕೆಎಸ್​ಸಿಎ (KSCA) ಲೀಗ್ ಪಂದ್ಯಾವಳಿ ವೇಳೆ ರಣಜಿ ಅನುಭವಿ ಕ್ರಿಕೆಟ್ ಆಟಗಾರ ಹೃದಯಾಘಾತದಿಂದ (Heart Attack) ಮೃತಪಟ್ಟಿರುವಂತಹ ಘಟನೆ ಬೆಂಗಳೂರಿನ ಬೊಮ್ಮಸಂದ್ರದ ಎಸ್​​ಎಲ್​​ಎಸ್​ ಮೈದಾನದಲ್ಲಿ ನಡೆದಿದೆ. ಎಸ್.ಎಲ್. ಅಕ್ಷಯ್ (36) ಮೃತ ಕ್ರಿಕೆಟ್ ಆಟಗಾರ. ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು

  • KSCA ಲೀಗ್ ಪಂದ್ಯದ ವೇಳೆ ಆಘಾತಕಾರಿ ಘಟನೆ
  • ಶಿವಮೊಗ್ಗ ಮೂಲದ ಕ್ರಿಕೆಟ್​​ ಆಟಗಾರನಿಗೆ ಹೃದಯಾಘಾತ
  • ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ

ನಡೆದಿದ್ದೇನು?

ಬೆಂಗಳೂರಿನ ಬೊಮ್ಮಸಂದ್ರದ ಎಸ್​ಎಲ್​ಎಸ್ ಕ್ರೀಡಾಂಗಣದಲ್ಲಿ ಕೆಎಸ್​ಸಿಎ ನಸೂರ್ ಸ್ಮಾರಕ ಶೀಲ್ಡ್ ಏಕದಿನ ಲೀಗ್ ಪಂದ್ಯಾವಳಿ ನಡೆಯುತ್ತಿತ್ತು. ಮೂಲತಃ ಶಿವಮೊಗ್ಗದ ಅಕ್ಷಯ್ ಪಂದ್ಯದ ವೇಳೆ ಎಂದಿನಂತೆ ಉತ್ಸಾಹದಿಂದಲೇ ಪಾಲ್ಗೊಂಡು 4 ಓವರ್ ಬೌಲಿಂಗ್ ಮಾಡಿದ್ದರು. ಆದರೆ, ಆ ಬಳಿಕ ತಮಗೆ ಸ್ವಲ್ಪ ಆರೋಗ್ಯ ಸಮಸ್ಯೆ ಕಾಡುತ್ತಿದೆ ಎಂದು ಹೇಳಿ ಮೈದಾನದಿಂದ ಅರ್ಧಕ್ಕೆ ಹೊರಬಂದಿದ್ದರು. ಕ್ರೀಡಾಂಗಣದ ಹೊರಗೆ ಬಂದು ನೀರು ಕುಡಿಯುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಗೋಗುದ್ದು ಗ್ರಾಮದಲ್ಲಿ ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು

ತಕ್ಷಣ ಅಕ್ಷಯ್​​ರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಸದ್ಯ ಮೃತದೇಹವನ್ನು ಅವಲಹಳ್ಳಿಯ ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಘಟನೆ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಣಜಿ ಪಂದ್ಯಾವಳಿಗಳನ್ನು ಆಡಿದ ಉತ್ತಮ ಅನುಭವ ಹೊಂದಿದ್ದ ಪ್ರತಿಭಾವಂತ ಆಟಗಾರನೊಬ್ಬ ಪಂದ್ಯದ ಮಧ್ಯೆಯೇ ಹೀಗೆ ಇಹಲೋಕ ತ್ಯಜಿಸಿರುವುದು ಸದ್ಯ ತೀವ್ರ ಆಘಾತ ಉಂಟುಮಾಡಿದೆ.

ಹೃದಯಾಘಾತದಿಂದ ಉದ್ಯೋಗ ಖಾತ್ರಿ ಕಾರ್ಮಿಕ ಸಾವು

ಹೃದಯಾಘಾತದಿಂದ ಉದ್ಯೋಗ ಖಾತ್ರಿ ಕಾರ್ಮಿಕ ಸಾವನ್ನಪ್ಪಿರುವಂತಹ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ನಾಗಪ್ಪ(51) ಮೃತ ಕಾರ್ಮಿಕ. ನಾಗಪ್ಪ ಇಂದು ಬೆಳಗ್ಗೆ ಎಂದಿನಂತೆ ನರೇಗಾ ಕೆಲಸಕ್ಕೆ ಹೋಗಿದ್ದರು. ಗಿಡಗಂಟಿಗಳನ್ನ ಕಡಿಯುವಾಗ ಎದೆನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪತ್ರಿಕೋದ್ಯಮ-ರಿಯಾಲಿಟಿ ಶೋ, ಸಿನಿಮಾ ರಂಗ ಬಳಿಕ ಈಗ ಹೊಸ ಇನ್ನಿಂಗ್ಸ್ ಆರಂಭಿಸಿದ ಜಾಹ್ನವಿ

ಬೆಂಗಳೂರು, (ಮೇ 24): ಕನ್ನಡ ಬಿಗ್ ಬಾಸ್ ಮೂಲಕ ಜನಪ್ರಿಯರಾದ ನಿರೂಪಕಿ ಜಾಹ್ನವಿ ಇದೀಗ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಹೌದು… ಪತ್ರಿಕೋದ್ಯಮ-ರಿಯಾಲಿಟಿ ಶೋ, ಸಿನಿಮಾ ರಂಗದಿಂದ ಇದೀಗ ಜಾಹ್ನವಿ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಬಿಗ್ ಬಾಸ್ ರಿಯಾಲಿ ಶೋಗಳಿಂದ ಜನಪ್ರಿಯತೆ ಗಳಿಸಿರುವ ಜಾಹ್ನವಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಇಂದು (ಮೇ 24) ಬೆಂಗಳೂರಿನ ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್​​​ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜಾಹ್ನವಿ ಅಧಿಕೃತವಾಗಿ ಜೆಡಿಎಸ್​ ಸೇರ್ಪಡೆಯಾದರು.ಈ ಮೂಲಕ ಪತ್ರಿಕೋದ್ಯಮ-ರಿಯಾಲಿಟಿ ಶೋ, ಸಿನಿಮಾ ರಂಗದಿಂದ ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ.

Source link

ದೇಹದಲ್ಲಿ ಈ ರೀತಿ ಬದಲಾವಣೆ ಕಂಡು ಬಂದ್ರೆ ತಡಮಾಡದೆಯೇ ವೈದ್ಯರನ್ನು ಭೇಟಿ ಮಾಡಿ – Kannada News | Ebola Virus Symptoms: Early Warning Signs & Expert Prevention Tips From WHO

ಇತ್ತೀಚಿನ ದಿನಗಳಲ್ಲಿ ಇಬೋಲಾ (Ebola) ವೈರಸ್‌ ಬಗ್ಗೆ ಜಾಗತಿಕ ಮಟ್ಟದಲ್ಲಿ ಆತಂಕ ಹೆಚ್ಚಾಗಿದೆ. ಇದು ಅತ್ಯಂತ ಅಪಾಯಕಾರಿ ವೈರಲ್ ಸೋಂಕುಗಳಲ್ಲಿ ಒಂದಾಗಿ ಪರಿಗಣಿಸಲಾಗಿದ್ದು, ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಹರಡಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಆರಂಭದಲ್ಲಿ ಸಾಮಾನ್ಯ ಜ್ವರದ ಲಕ್ಷಣಗಳಂತೆ ಕಾಣುವ ಕಾರಣ, ಅನೇಕರು ಇದನ್ನು ನಿರ್ಲಕ್ಷಿಸುವ ಸಾಧ್ಯತೆ ಇದೆ. ಆದರೆ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಈ ಸೋಂಕು ಗಂಭೀರ ರೂಪ ಪಡೆಯಬಹುದು. ತಜ್ಞರ ಪ್ರಕಾರ, ಇಬೋಲಾ ವೈರಸ್‌ನ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸುವುದು ಮತ್ತು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅತ್ಯಂತ ಅಗತ್ಯ. ಇಲ್ಲವಾದಲ್ಲಿ ಇದು ಪ್ರಾಣಕ್ಕೆ ಅಪಾಯಕಾರಿಯಾಗಿಬಹುದು.

ಇಬೋಲಾ ವೈರಸ್‌ನ ಆರಂಭಿಕ ಲಕ್ಷಣಗಳು?

ಗೋರಖ್‌ಪುರದ ರೀಜೆನ್ಸಿ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ತಜ್ಞ ಡಾ. ವಿಜಯ್ ಕುಮಾರ್ ಶರ್ಮಾ ಅವರ ಪ್ರಕಾರ, ಇಬೋಲಾ ವೈರಸ್‌ನ ಆರಂಭಿಕ ಲಕ್ಷಣಗಳು ಸಾಮಾನ್ಯ ವೈರಲ್ ಜ್ವರದಂತೆಯೇ ಕಾಣುತ್ತವೆ. ಆದರೆ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುವುದು, ತೀವ್ರ ತಲೆನೋವು, ದೇಹ ಮತ್ತು ಸ್ನಾಯು ನೋವು, ಅತಿಯಾದ ಆಯಾಸ ಮತ್ತು ದುರ್ಬಲತೆ, ಗಂಟಲು ನೋವು, ವಾಂತಿ ಮತ್ತು ಅತಿಸಾರ, ಹೊಟ್ಟೆ ನೋವು ಬಂದರೆ ನಿರ್ಲಕ್ಷ್ಯ ಮಾಡಬೇಡಿ. ಏಕೆಂದರೆ ಸೋಂಕು ಗಂಭೀರ ಹಂತಕ್ಕೆ ತಲುಪಿದರೆ ಕೆಲವರಲ್ಲಿ ದೇಹದ ಒಳಭಾಗ ಅಥವಾ ಹೊರಭಾಗದಲ್ಲಿ ರಕ್ತಸ್ರಾವ (Bleeding) ಕೂಡ ಕಾಣಿಸಬಹುದು. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಸಹಾಯ ಪಡೆಯುವುದು ಅಗತ್ಯ.

ಇಬೋಲಾ ವೈರಸ್ ಹೇಗೆ ಹರಡುತ್ತದೆ?

ಇಬೋಲಾ ವೈರಸ್ ಸೋಂಕಿತ ವ್ಯಕ್ತಿಯ ರಕ್ತ, ದೇಹದ ದ್ರವಗಳು ಅಥವಾ ನೇರ ಸಂಪರ್ಕದ ಮೂಲಕ ಹರಡಬಹುದು. ಸೋಂಕಿತ ವ್ಯಕ್ತಿಯನ್ನು ಸರಿಯಾದ ಸುರಕ್ಷತಾ ಕ್ರಮಗಳಿಲ್ಲದೆ ನೋಡಿಕೊಳ್ಳುವುದರಿಂದ ಸೋಂಕಿನ ಅಪಾಯ ಹೆಚ್ಚಾಗುತ್ತದೆ.

ಇದನ್ನೂ ಓದಿ: ಕಾಂಗೋ, ಉಗಾಂಡಾದಲ್ಲಿ ಎಬೋಲಾ ರುದ್ರನರ್ತನ: ಕೇಂದ್ರ ಆರೋಗ್ಯ ಸಚಿವಾಲಯದಿಂದ ಪ್ರಯಾಣಿಕರಿಗೆ ಮಹತ್ವದ ಸೂಚನೆ

ಇಬೋಲಾ ವೈರಸ್‌ನಿಂದ ಹೇಗೆ ರಕ್ಷಿಸಿಕೊಳ್ಳಬೇಕು?

  • ಸೋಂಕಿತ ವ್ಯಕ್ತಿಯಿಂದ ದೂರವಿರಿ
  • ಮಾಸ್ಕ್, ಗ್ಲೌವ್ಸ್ ಮತ್ತು ಸುರಕ್ಷತಾ ಸಾಧನಗಳನ್ನು ಬಳಸಿ
  • ಕೈಗಳನ್ನು ಸಾಬೂನು ಮತ್ತು ನೀರಿನಿಂದ ನಿಯಮಿತವಾಗಿ ತೊಳೆಯಿರಿ
  • ಸ್ಯಾನಿಟೈಸರ್ ಬಳಸುವ ಅಭ್ಯಾಸ ಬೆಳೆಸಿಕೊಳ್ಳಿ
  • ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ
  • ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕವಾಗಿ ಇರಿಸಿ
  • ವಿದೇಶಗಳಿಂದ ಬಂದವರು ವಿಶೇಷ ಎಚ್ಚರಿಕೆ ವಹಿಸಬೇಕು

ಇಬೋಲಾ ಸೋಂಕು ಪ್ರಕರಣಗಳು ಕಂಡುಬಂದಿರುವ ದೇಶಗಳಿಂದ ಬಂದಿರುವವರು ತಮ್ಮ ಆರೋಗ್ಯದ ಮೇಲೆ ವಿಶೇಷ ಗಮನಹರಿಸಬೇಕು ಎಂದು ತಜ್ಞರು ಹೇಳಿದ್ದಾರೆ. ಜ್ವರ, ದೌರ್ಬಲ್ಯ ಅಥವಾ ಇತರೆ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ. ತಜ್ಞರ ಅಭಿಪ್ರಾಯದಂತೆ, ಭಯಪಡುವುದಕ್ಕಿಂತ ಜಾಗೃತಿ ಮತ್ತು ಮುನ್ನೆಚ್ಚರಿಕೆ ಅತ್ಯಂತ ಮುಖ್ಯ. ಸಮಯಕ್ಕೆ ಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ಪಡೆದರೆ ಜೀವ ಉಳಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version