ಗಾಜಾ ಶಾಂತಿ ಮಂಡಳಿ ಸೇರಲು ನಿರಾಕರಿಸಿದ್ದಕ್ಕೆ ಫ್ರಾನ್ಸ್​​ಗೆ ಶೇ.200ರಷ್ಟು ಸುಂಕದ ಎಚ್ಚರಿಕೆ ಕೊಟ್ಟ ಟ್ರಂಪ್ – Kannada News | Trump Threatens 200Percent Tariff on French Wine Amid Gaza Peace Rift

ವಾಷಿಂಗ್ಟನ್, ಜನವರಿ 20: ಅಮೆರಿಕ ಮತ್ತು ಫ್ರಾನ್ಸ್​ ನಡುವಿನ ರಾಜಕೀಯ ಮತ್ತು ರಾಜತಾಂತ್ರಿಕ ಉದ್ವಿಗ್ನತೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಫ್ರಾನ್ಸ್​ಗೆ ಫ್ರೆಂಚ್ ವೈನ್ ಮತ್ತು ಷಾಂಪೇನ್ ಮೇಲೆ ಶೇ.200ರಷ್ಟು ಸುಂಕ ವಿಧಿಸುವ ಕುರಿತು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ. ಗಾಜಾ ಶಾಂತಿ ಮಂಡಳಿಗೆ ಸೇರಲು ಫ್ರಾನ್ಸ್​ ಅಧ್ಯಕ್ಷ ಇಮ್ಯಾನ್ಯುವಲ್ ಮ್ಯಾಕ್ರನ್ ನಿರಾಕರಿಸಿದ್ದಕ್ಕೆ, ಟ್ರಂಪ್ ಈ ಕ್ರಮ ಕೈಗೊಂಡಿದ್ದಾರೆ.

ಯುದ್ಧಪೀಡಿತ ಪ್ರದೇಶಗಳಲ್ಲಿ, ವಿಶೇಷವಾಗಿ ಗಾಜಾದಲ್ಲಿ ಪುನರ್ನಿರ್ಮಾಣ ಮತ್ತು ಶಾಂತಿ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವುದು ಶಾಂತಿ ಮಂಡಳಿಯ ಉದ್ದೇಶವಾಗಿದೆ ಎಂದು ಟ್ರಂಪ್ ಆಡಳಿತ ಹೇಳಿಕೊಂಡಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ನಾನು ಅವರ ವೈನ್ ಮತ್ತು ಷಾಂಪೇನ್ ಮೇಲೆ ಶೇ.200 ಸುಂಕ ವಿಧಿಸುತ್ತೇನೆ. ಅವರಾಗಿಯೇ ಮಂಡಳಿಗೆ ಸೇರುತ್ತಾರೆ ಅವರನ್ನು ನಾನು ಬಲವಂತಪಡಿಸುವುದಿಲ್ಲ ಎಂದು ಹೇಳಿದರು. ಗಾಜಾದಲ್ಲಿ ಮಂಡಳಿಗೆ ಸೇರಲು ಅಮೆರಿಕದ ಆಹ್ವಾನವನ್ನು ಫ್ರಾನ್ಸ್ ತಿರಸ್ಕರಿಸಿದರೆ, ಸುಂಕದ ರೂಪದಲ್ಲಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.

ಟ್ರಂಪ್ ಅವರ ಈ ಹೇಳಿಕೆಯು ಅಮೆರಿಕ ಮತ್ತು ಫ್ರಾನ್ಸ್ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಬಹುದು, ಏಕೆಂದರೆ ಎರಡೂ ದೇಶಗಳು ಈಗಾಗಲೇ ಗ್ರೀನ್‌ಲ್ಯಾಂಡ್ ವಿಷಯದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿವೆ.
ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾರ್ವೆ ಪ್ರಧಾನಿ ಜೊನಾಸ್ ಗಹರ್ ಅವರಿಗೆ ವೈಯಕ್ತಿಕವಾಗಿ ಕಳುಹಿಸಿದ ಪತ್ರದಲ್ಲಿ ನೊಬೆಲ್ ಪ್ರಶಸ್ತಿ ಸಿಗದಿರುವುದರ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಓದಿ: ಶಾಂತಿ ಪುರಸ್ಕಾರ ಇಲ್ಲ, ಶಾಂತಿ ನನ್ನ ಜವಾಬ್ದಾರಿಯಲ್ಲ ಎನ್ನುತ್ತಾ ಗಾಜಾ ಶಾಂತಿ ಮಂಡಳಿ ತೆರೆದ ಟ್ರಂಪ್, 2 ದಿನಗಳಲ್ಲಿ ಕೊಟ್ಟ ಹೇಳಿಕೆಗಳೇನು?

ಅದರಲ್ಲಿ ನನಗೆ ನೊಬೆಲ್ ಶಾಂತಿ ಪುರಸ್ಕಾರ ಸಿಕ್ಕಿಲ್ಲ, ಹಾಗಾಗಿ ಶಾಂತಿ ಜವಾಬ್ದಾರಿ ನನ್ನದಲ್ಲ, ಗ್ರೀನ್ ಲ್ಯಾಂಡ್​ ಮೇಲೆ ಯಾವಾಗ ಬೇಕಾದರೂ ದಾಳಿ ನಡೆಸಬಹುದು ಎನ್ನುವ ಎಚ್ಚರಿಕೆಯನ್ನು ಕೂಡ ಕೊಟ್ಟಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ಫ್ರಾನ್ಸ್, ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವಲ್ಲಿ ವಿಶ್ವಸಂಸ್ಥೆಯ ಪಾತ್ರವನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಪ್ಯಾರಿಸ್ ಒತ್ತಿ ಹೇಳಿದೆ.

ಗಾಜಾ ಪುನರ್ನಿರ್ಮಾಣಕ್ಕಾಗಿ ಶಾಂತಿ ಮಂಡಳಿಯನ್ನು ಘೋಷಿಸಿದರು ಮತ್ತು ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ಹಲವಾರು ದೇಶಗಳನ್ನು ಸೇರಲು ಆಹ್ವಾನಿಸಿದರು. ಈ ಆಹ್ವಾನವನ್ನು ಜಾಗತಿಕವಾಗಿ ಹೆಚ್ಚು ಉತ್ಸಾಹದಿಂದ ಸ್ವೀಕರಿಸಲಾಗಿಲ್ಲ. ಹೆಚ್ಚಿನ ದೇಶಗಳು ಮೌನವಾಗಿವೆ, ಆದರೆ ಫ್ರಾನ್ಸ್ ಮತ್ತು ಕೆನಡಾ ಸೇರಿದಂತೆ ಕೆಲವು ಭಾಗವಹಿಸಲು ನಿರಾಕರಿಸಿವೆ.

ಈ ಶಾಂತಿ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ಪಡೆಯಲು ದೇಶಗಳು 1 ಬಿಲಿಯನ್ ಡಾಲರ್ ಅಂದರೆ ಸರಿಸುಮಾರು ಒಂಬತ್ತು ಸಾವಿರ ಕೋಟಿ ರೂ. ಪಾವತಿಸಬೇಕಾಗುತ್ತದೆ.

ಅಂತಾರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮೂವರು ಅಲಭ್ಯ: ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ – Kannada News | India Playing XI For 1st T20I against New Zealand

ಭಾರತ ಮತ್ತು ನ್ಯೂಝಿಲೆಂಡ್ ನಡುವಣ 5 ಪಂದ್ಯಗಳ ಟಿ20 ಸರಣಿಯು ಬುಧವಾರದಿಂದ ಶುರುವಾಗಲಿದೆ. ನಾಗ್​ಪುರದಲ್ಲಿ ನಡೆಯಲಿರುವ ಈ ಸರಣಿಯ ಮೊದಲ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​​ನಲ್ಲಿ ಮೂರು ಬದಲಾವಣೆ ಕಂಡು ಬರುವುದು ಖಚಿತ. ಏಕೆಂದರೆ ಭಾರತದ ಪರ ಕೊನೆಯ ಟಿ20 ಪಂದ್ಯದಲ್ಲಿ ಕಣಕ್ಕಿಳಿದಿದ್ದ ಮೂವರು ಆಟಗಾರರು ಈ ಸರಣಿಯಿಂದ ಹೊರಗುಳಿದಿದ್ದಾರೆ.

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಕಣಕ್ಕಿಳಿದಿದ್ದ ತಿಲಕ್ ವರ್ಮಾ, ವಾಷಿಂಗ್ಟನ್ ಸುಂದರ್ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದಾರೆ. ಇನ್ನು ಕೊನೆಯ ಪಂದ್ಯದಲ್ಲಿ ವಿಕೆಟ್ ಕೀಪರ್ ಆಗಿ ಕಣಕ್ಕಿಳಿದಿದ್ದ ಜಿತೇಶ್ ಶರ್ಮಾ ತಂಡದಿಂದ ಹೊರಬಿದ್ದಿದ್ದಾರೆ.  ಹೀಗಾಗಿ ನ್ಯೂಝಿಲೆಂಡ್ ವಿರುದ್ಧ ಭಾರತ ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ.

ಅದರಂತೆ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಕಣಕ್ಕಿಳಿಯಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟ್ ಬೀಸಲಿದ್ದಾರೆ. ಹಾಗೆಯೇ ನಾಲ್ಕನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಬದಲು ಈ ಬಾರಿ ಶ್ರೇಯಸ್ ಅಯ್ಯರ್ ಕಣಕ್ಕಿಳಿಯಲಿದ್ದಾರೆ.

ಇನ್ನು ಆಲ್​ರೌಂಡರ್​​ಗಳಾಗಿ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಹಾಗೂ ಶಿವಂ ದುಬೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಅದೇ ರೀತಿ ಬೌಲರ್​ಗಳಾಗಿ ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ಹಾಗೂ ವರುಣ್ ಚಕ್ರವರ್ತಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  • ಅಭಿಷೇಕ್ ಶರ್ಮಾ
  • ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
  • ಸೂರ್ಯಕುಮಾರ್ ಯಾದವ್
  • ಶ್ರೇಯಸ್ ಅಯ್ಯರ್
  • ಹಾರ್ದಿಕ್ ಪಾಂಡ್ಯ
  • ಅಕ್ಷರ್ ಪಟೇಲ್
  • ಶಿವಂ ದುಬೆ
  • ಜಸ್​ಪ್ರೀತ್ ಬುಮ್ರಾ
  • ಅರ್ಷದೀಪ್ ಸಿಂಗ್
  • ಹರ್ಷಿತ್ ರಾಣಾ
  • ವರುಣ್ ಚಕ್ರವರ್ತಿ.

ಇದನ್ನೂ ಓದಿ: ನೇರವಾಗಿ ಫೈನಲ್​ಗೇರಲು RCB ಇನ್ನೆಷ್ಟು ಪಂದ್ಯ ಗೆಲ್ಲಬೇಕು?

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

Source link

ವಾಹನ ಸವಾರರೇ ಈ ಕಾನೂನಿನ ಬಗ್ಗೆ ಗೊತ್ತಾ?: ನೋ-ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ನಿಲ್ಲಿಸಿದ್ರೆ ಪೊಲೀಸರು ಹೀಗೆ ಮಾಡುವಂತಿಲ್ಲ – Kannada News | Traffic Rules: No Parking Penalties, Your Rights and Illegal Police Actions. Stay Informed!

ನಮ್ಮ ದೇಶದ ಕಾನೂನುಗಳ ಬಗ್ಗೆ ಎಲ್ಲರಿಗೂ ವಿಸ್ತೃತವಾಗಿ ಗೊತ್ತಿರಲ್ಲ, ಆದರೆ ಅದನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಹಕ್ಕು, ಅದರಲ್ಲೂ ಈ ಟ್ರಾಫಿಕ್​​ ರೂಲ್ಸ್​​​​ ಬಗ್ಗೆ ಎಲ್ಲರು ತಿಳಿದುಕೊಳ್ಳಲೇಬೇಕು. ಕೆಲವು ಪೊಲೀಸರಿಗೂ ಈ ಟ್ರಾಫಿಕ್​ ರೂಲ್ಸ್​​​ (No-Parking) ಹಾಗೂ ವಾಹನ ಸಂಚಾರದ ಕಾನೂನಿನ ಬಗ್ಗೆ ತಿಳಿದಿಲ್ಲ. ಹಾಗಾಗಿ ಸಾರ್ವಜನಿಕರು ಈ ಬಗ್ಗೆ ತಿಳಿದುಕೊಂಡು ಸಂಚಾರ ನಿಯಮಗಳು ಹಾಗೂ ಅದಕ್ಕಿರುವ ಕಾನೂನು ಕ್ರಮಗಳೇನು ಎಂಬ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ಈ ನೋ-ಪಾರ್ಕಿಂಗ್ ಬಗ್ಗೆಯೂ ಒಂದು ಕಾನೂನಿನ ನಿಯಮ ಇದೆ. ನೋ-ಪಾರ್ಕಿಂಗ್ ವಲಯದಲ್ಲಿ ವಾಹನ ನಿಲ್ಲಿಸಿದ್ರೆ ಪೊಲೀಸರ ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು. ಈ ಬಗ್ಗೆ ಕಾನೂನಿನಲ್ಲಿ ಯಾವೆಲ್ಲ ನೀತಿ-ನಿಯಮಗಳು ಇದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಇಂತಹ ವಿಚಾರಗಳನ್ನು ಪ್ರತಿಯೊಬ್ಬ ವಾಹನ ಸವಾರರು ಗಮನಿಸಲೇಬೇಕು. ನೋ-ಪಾರ್ಕಿಂಗ್ ವಲಯದಲ್ಲಿ ವಾಹನ ನಿಲ್ಲಿಸಿದ್ರೆ ಈ ಕ್ರಮವನ್ನು ಯಾವುದೇ ಕಾರಣಕ್ಕೂ ಪೊಲೀಸರು ತೆಗೆದುಕೊಳ್ಳಬಾರದು.

ಒಂದು ವೇಳೆ ನೋ-ಪಾರ್ಕಿಂಗ್ ವಲಯದಲ್ಲಿ ವಾಹನ ನಿಲ್ಲಿಸಿದ್ರೆ ಅಧಿಕೃತ ದಂಡದ ರಸೀದಿ (Challan) ನೀಡಬಹುದು. ಸ್ಥಳದಲ್ಲೇ ದಂಡ ಪಾವತಿಸಬಹುದು ಅಥವಾ ಆನ್‌ಲೈನ್ ಮೂಲಕ ಪಾವತಿಸಲು ಅವಕಾಶವಿರುತ್ತದೆ. ವಾಹನದ ಚಕ್ರಕ್ಕೆ ಲಾಕ್ (Wheel Clamp) ಹಾಕಬಹುದು. ಆಗಲೂ ನೀವು ದಂಡ ಪಾವತಿಸಿ ಲಾಕ್​​​​ ತೆಗೆಯಬಹುದು. ಪೊಲೀಸರು ಕ್ರೇನ್ ಬಳಸಿ ವಾಹನವನ್ನು ಟೋ ಮಾಡಿಕೊಂಡು ಹತ್ತಿರದ ಪೊಲೀಸ್ ಠಾಣೆಗೆ ಕೊಂಡೊಯ್ಯಬಹುದು. ಆಗಾ ನೀವು ಪಾರ್ಕಿಂಗ್ ದಂಡದ ಜೊತೆಗೆ ‘ಟೋಯಿಂಗ್ ಶುಲ್ಕ’ವನ್ನೂ (Towing Charges) ಪಾವತಿಸಬೇಕಾಗುತ್ತದೆ. ವಾಹನದ ವಿಂಡ್‌ಶೀಲ್ಡ್ ಮೇಲೆ ನೋಟಿಸ್ ಅಂಟಿಸಬಹುದು. ಇದನ್ನು ಬಿಟ್ಟು ನಿಮ್ಮ ವಾಹನದ ಟೈರ್‌ನಿಂದ ಗಾಳಿಯನ್ನು ತೆಗೆಯುವ ಅಧಿಕಾರವಿಲ್ಲ. ಇದು ಕಾನೂನುಬಾಹಿವಾಗಿರುತ್ತದೆ. ಟೈರ್ ಗಾಳಿ ತೆಗೆಯುವುದು ಇದು ಖಾಸಗಿ ಆಸ್ತಿಗೆ ಹಾನಿ ಉಂಟುಮಾಡುವ ಕ್ರಿಯೆಯಾಗಿದ್ದು, ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 425ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಬಹುದು.

ವಾಹನದ ಟೈರ್‌ನಿಂದ ಗಾಳಿಯನ್ನು ತೆಗೆಯುವುದು ಇದು ನಿಮ್ಮ ವಾಹನಕ್ಕೆ ಮಾಡುವ ಹಾನಿ, ಒಂದು ವೇಳೆ ಗಾಳಿ ತೆಗೆದರೆ ಅದು ಅಪರಾಧ ಎಂದು ಹೇಳಲಾಗಿದೆ. ಈ ಬಗ್ಗೆ ಪ್ರಶ್ನಿಸಿ ಕೋರ್ಟ್​​ಗೂ ಹೋಗಬಹುದು. ಇದರ ಜತೆಗೆ ಚಾಲಕನ ಮೇಲೆ ಕೈ ಮಾಡುವುದು ಅಥವಾ ಅಸಭ್ಯವಾಗಿ ವರ್ತಿಸುವುದು ಶಿಕ್ಷಾರ್ಹ ಅಪರಾಧ. ಬಲವಂತವಾಗಿ ವಾಹನದ ಕೀಲಿಯನ್ನು ಕಸಿದುಕೊಳ್ಳುವ ಅಧಿಕಾರ ಕೂಡ ಪೊಲೀಸರಿಗೆ ಇಲ್ಲ. ಇನ್ನು ಮೋಟಾರು ವಾಹನ ಕಾಯ್ದೆ, 1988 (Motor Vehicles Act) ಮತ್ತು ಕರ್ನಾಟಕ ಸಂಚಾರಿ ನಿಯಂತ್ರಣ ಕಾಯ್ದೆಯಡಿ ಪೊಲೀಸರುನಿಯಮ ಉಲ್ಲಂಘನೆಗಾಗಿ ದಂಡದ ರಸೀದಿ ನೀಡುವುದು. ಹಾಗೂ ವಾಹನವನ್ನು ಜಪ್ತಿ ಮಾಡುವ ಕ್ರಮಗಳನ್ನು ತೆಗೆದುಕೊಳ್ಳಬಹುದು.

ಇದನ್ನೂ ಓದಿ: Viral: ಬೆಂಗಳೂರಿನಲ್ಲಿ 90 ಲಕ್ಷ ರೂ ಉತ್ತಮ ಸಂಬಳವೇ: ಅನಿವಾಸಿ ಭಾರತೀಯ ಹೀಗೆ ಕೇಳಿದ್ದೇಕೆ?

ಪೊಲೀಸರು ವಾಹನ ಗಾಳಿ ತೆಗೆದರೆ ನೀವು ಹೀಗೆ ಮಾಡಬಹುದು?

ಸಾಕ್ಷ್ಯ ಸಂಗ್ರಹಿಸಿ: ಘಟನೆಯ ವೀಡಿಯೊ ಅಥವಾ ಫೋಟೋ ತೆಗೆಯಿರಿ. ಆ ಅಧಿಕಾರಿಯ ಹೆಸರು ಗಮನಿಸಿ.

ದೂರು ನೀಡಿ: ಹತ್ತಿರದ ಸಂಚಾರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಥವಾ ಎಸಿಪಿ (ACP) ಅವರಿಗೆ ಅಧಿಕೃತ ದೂರು ನೀಡಿ.

ಸೋಷಿಯಲ್ ಮೀಡಿಯಾ: ಬೆಂಗಳೂರು ಸಂಚಾರಿ ಪೊಲೀಸರ ಅಧಿಕೃತ ಎಕ್ಸ್ (X) ಖಾತೆಗೆ (@blrechelon ಅಥವಾ @jointcptraffic) ಟ್ಯಾಗ್ ಮಾಡಿ ದೂರನ್ನು ಹಂಚಿಕೊಳ್ಳಿ.

112 ಗೆ ಕರೆ ಮಾಡಿ: ಸ್ಥಳದಲ್ಲೇ ತುರ್ತು ಸಹಾಯಕ್ಕಾಗಿ 112 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ವೋಟ್​​​ ನಂಬರ್ ಆಚೆ ಬಂದ್ರೆ ನಾನೇ ವಿನ್ನರ್’; ಅಶ್ವಿನಿ ಗೌಡ ನೇರ ಮಾತು – Kannada News | Ashwini Gowda Alleges Bigg Boss 12 Vote Manipulation, Calls Gilli’s Win Undeserved

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಅಶ್ವಿನಿ ಗೌಡ (Ashwini Gowda) ಅವರು ಎರಡನೇ ರನ್ನರ್ ಅಪ್ ಆಗಿದ್ದಾರೆ. ಗಿಲ್ಲಿ ನಟ ಅವರು ವಿನ್ನರ್ ಆಗಿದ್ದಾರೆ. ಗಿಲ್ಲಿನೇ ವಿನ್ನರ್ ಎಂಬುದು ಸೀಸನ್ ಆರಂಭದಲ್ಲೇ ಕೆಲವರಿಗೆ ಅನಿಸಿತ್ತು. ಅವರಿಗೆ ಸೃಷ್ಟಿಯಾದ ಅಭಿಮಾನಿ ವರ್ಗವೇ ಇದಕ್ಕೆ ಕಾರಣ. ಆದರೆ, ಗಿಲ್ಲಿ ಗೆಲುವಿನ ಬಗ್ಗೆ ಅಶ್ವಿನಿ ಗೌಡ ಪ್ರಶ್ನೆ ಮಾಡುತ್ತಿದ್ದಾರೆ. ನಿಜವಾದ ವೋಟ್ ಸಂಖ್ಯೆ ಆಚೆ ಬಂದರೆ ವಿನ್ನರ್ ಬದಲಾಗುತ್ತಾರೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಗಿಲ್ಲಿ ನಟನಿಗೆ ವಿನ್ನರ್ ಪಟ್ಟ ಸಿಕ್ಕಿದ್ದನ್ನು ಅಶ್ವಿನಿ ಒಪ್ಪಿಕೊಳ್ಳಲು ರೆಡಿ ಇಲ್ಲ. ಗಿಲ್ಲಿ ಬಡವ ಎಂಬ ಕಾರ್ಡ್​ ಪ್ಲೇ ಮಾಡಿ ವಿನ್ ಆದ ಎಂಬುದು ಅಶ್ವಿನಿ ಆರೋಪ. ‘ಬಡವರ ಮಕ್ಕಳಗೆಲ್ಲಬೇಕು ನಿಜ. ಆದರೆ, ಗಿಲ್ಲಿ ಬಡವನಾ? ಅರ್ಹ ವ್ಯಕ್ತಿಗೆ ವಿನ್ನರ್ ಪಟ್ಟ ಸಿಕ್ಕಿದೆ ಎಂದು ನನಗೆ ಅನಿಸುತ್ತಿಲ್ಲ’ ಎಂದು ಅಶ್ವಿನಿ ಗೌಡ ಹೇಳಿದ್ದಾರೆ.

ಈಗ ಅಶ್ವಿನಿ ಗೌಡ ಬೇರೆ ರೀತಿಯ ಆರೋಪ ಮಾಡಿದ್ದಾರೆ. ಖಾಸಗಿ ಸುದ್ದಿ ವಾಹಿನಿ ಜೊತೆ ಮಾತನಾಡಿದ ಅಶ್ವಿನಿ, ‘ನನಗೂ, ಗಿಲ್ಲಿಗೂ ಬಂದ ಮತಗಳ ಮಧ್ಯೆ ಅಜಗಜಾಂತರ ವ್ಯತ್ಯಾಸ ಇದೆ ಎಂಬುದು ನನಗೆ ಬಂದ ಮಾಹಿತಿ. ಆ ಸಂಖ್ಯೆ ಹೊರಹಾಕಿದೆ ನಾನೇ ವಿನ್ನರ್’ ಎಂದು ಅಶ್ವಿನಿ ಹೇಳಿದ್ದಾರೆ.

‘ಬಿಗ್ ಬಾಸ್’ ಕಾಮಿಡಿ ಶೋ ಅಲ್ಲ ಎಂಬುದು ಅಶ್ವಿನಿ ಅಭಿಪ್ರಾಯ. ‘ಸುದೀಪ್ ಅವರು ಈ ಬಾರಿಯಾದರೂ ಮಹಿಳೆಯರ ಕೈ ಎತ್ತುತ್ತಾರೆ ಎಂದುಕೊಂಡಿದ್ದೆ. ಆದರೆ, ನನ್ನ ಕೈ ಬಿಡ್ತಾರೆ ಅಂತ ಅಂದುಕೊಂಡಿರಲಿಲ್ಲ’ ಎಂದು ಅಶ್ವಿನಿ ಹೇಳಿದ್ದಾರೆ.

ಇದನ್ನೂ ಓದಿ: ‘ಅವರು ಹಾಗೆ ಹೇಳೋಕೆ ಸಾಧ್ಯವಿಲ್ಲ’; ಅಶ್ವಿನಿ ಗೌಡ ಬಗ್ಗೆ ಗಿಲ್ಲಿಗೆ ಎಷ್ಟು ಗೌರವ ನೋಡಿ

ಗಿಲ್ಲಿ ನಟ ಅವರು ಅಶ್ವಿನಿ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಮಾತಿನ ಭರದಲ್ಲಿ ಅವರು ಹಾಗೆ ಹೇಳಿರಬಹುದು’ ಎಂದಷ್ಟೇ ಪ್ರತಿಕ್ರಿಯೆ ನೀಡಿದ್ದಾರೆ. ಗಿಲ್ಲಿ ಅವರಿಗೆ ಅವಾರ್ಡ್ ಜೊತೆ ಸಾಕಷ್ಟು ಹಣ ಸಿಕ್ಕಿದೆ. ಅವರು ತಮ್ಮ ಹುಟ್ಟೂರಲ್ಲಿ ರ್ಯಾಲಿ ನಡೆಸಿದ್ದು ಸಾಕಷ್ಟು ಜನರು ಇದಕ್ಕೆ ಸೇರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನೈಜೀರಿಯಾದಲ್ಲಿ ಕುಳಿತು ಬೆಂಗಳೂರು ಮೂಲದ ವ್ಯಕ್ತಿಗೆ ದೋಖಾ: 2.16 ಕೋಟಿ ರೂ. ಮರಳಿಸಿದ್ದು ಗೋಲ್ಡನ್​​ ಅವರ್​​! – Kannada News | Cyber Scam: 2.16 Cr Saved by Quick Police Response in Bengaluru

ಬೆಂಗಳೂರು, ಜನವರಿ 20: ಸೈಬರ್​​ ವಂಚನೆ ಪ್ರಕರಣಗಳು ಮಾಮೂಲು ಎಂಬಷ್ಟರ ಮಟ್ಟಿಗೆ ಹೆಚ್ಚಿದ್ದು, ಕೋಟಿ ಕೋಟಿ ಹಣವನ್ನು ವಂಚಕರು ಲಪಟಾಯಿಸುವ ಕೇಸ್​​ಗಳು ಮೇಲಿಂದ ಮೇಲೆ ಕೇಳಿ ಬರುತ್ತಲೇ ಇವೆ. ಆದ್ರೆ ವಂಚನೆಗೆ ಒಳಗಾದವರು ತುರ್ತಾಗಿ ಈ ಬಗ್ಗೆ ಕೇಸ್​​ ದಾಖಲಿಸಿದಲ್ಲಿ ಕಳೆದುಕೊಂಡ ಹಣವನ್ನು ಮರಳಿ ಪಡೆಯಲು ಸಾಧ್ಯವಿದೆ ಎಂಬುದನ್ನು ಪ್ರಕರಣವೊಂದು ಸಾಬೀತು ಪಡಿಸಿದೆ. ಗೋಲ್ಡನ್​​ ಅವರ್​​ನಲ್ಲಿ ಕಂಪ್ಲೇಂಟ್​​ ನೀಡಿದ್ದ ಕಾರಣ ವಂಚಕರ ಪಾಲಾಗುತ್ತಿದ್ದ ಬರೋಬ್ಬರಿ 2.16 ಕೋಟಿ ಹಣ ಮರಳಿ ಕೈಸೇರಿದೆ.

ಘಟನೆ ಏನು?

ಗ್ರೂಪ್ ಫಾರ್ಮ್ ಮತ್ತು ರೆಡ್ಡೀಸ್ ಲ್ಯಾಬೋರೇಟರಿ ಎಂಬ ಕಂಪನಿಗಳ ನಡುವೆ ವ್ಯವಹಾರವಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಖದೀಮರು ನಕಲಿ ಇಮೇಲ್ ಐಡಿ ಮೂಲಕ ಸೈಬರ್ ವಂಚನೆ ನಡೆಸಿದ್ದರು. ಗ್ರೂಪ್ ಫಾರ್ಮ್ ಕಂಪನಿಯ ಅಕೌಂಟೆಂಟ್ ಹೆಸರಲ್ಲಿ ರೆಡ್ಡೀಸ್ ಲ್ಯಾಬೋರೇಟರಿಗೆ ಇಮೇಲ್ ಬಂದಿದ್ದು, ಇದನ್ನು ಗಮನಿಸಿದ ರೆಡ್ಡೀಸ್ ಲ್ಯಾಬೋರೇಟರಿ 2.16 ಕೋಟಿ ರೂಪಾಯಿ ಹಣವನ್ನು ಪೇಮೆಂಟ್​​ ಮಾಡಿತ್ತು. ಹಣ ಪಾವತಿ ವಿಚಾರ ಗೊತ್ತಾಗಿದ್ದೇ ತಡ ಗ್ರೂಪ್ ಫಾರ್ಮಾ ಅಕೌಂಟೆಂಟ್ ಈ ಬಗ್ಗೆ ದೂರು ದಾಖಲಿಸಿದ್ದರು. ನೈಜೀರಿಯಾದಲ್ಲಿ ಕುಳಿತ ವಂಚಕನೋರ್ವ ನೀಡಿದ್ದ ಗುಜರಾತ್ ಮೂಲದ ಮಹಿಳೆ ಪಟೇಲ್ ದಕ್ಷ್ಯಾ ಬೆನ್ ಹೆಸರಿನ ನಕಲಿ ಖಾತೆಗೆ ಹಣ ವರ್ಗಾವಣೆ ಆಗಿರೋದು ತನಿಖೆ ವೇಳೆ ಗೊತ್ತಾಗಿತ್ತು.

ಇದನ್ನೂ ಓದಿ: ಸೈಬರ್ ಸ್ಕ್ಯಾಮ್ ಬಗ್ಗೆ ದೂರು ನೀಡುವುದು ಹೇಗೆ?; 24 ಗಂಟೆಗಳ ಕಾಲ ತೆರೆದಿರುತ್ತೆ ಈ ಪೋರ್ಟಲ್

ಇನ್ನು ಈ ಬಗ್ಗೆ ಮಾಹಿತಿ ಸಿಕ್ಕಿದ್ದೇ ತಡ ದೂರು ಪಡೆದ ಒಂದೇ ಗಂಟೆಯಲ್ಲಿ ಅಕೌಂಟ್ ಜಾಲಾಡಿದ್ದ ಸೈಬರ್ ಕ್ರೈಮ್ ಪೊಲೀಸರು, ಹಣ ವರ್ಗಾವಣೆಯಾಗದಂತೆ ಅಕೌಂಟ್ ಫ್ರೀಜ್ ಮಾಡಿದ್ದರು. ಬಳಿಕ ಕೋರ್ಟ್ ಮೂಲಕ 2.16 ಕೋಟಿ ಹಣ ಬಿಡುಗಡೆಗೆ ಆದೇಶ ಪಡೆದು, ಹಣವನ್ನೀಗ ವಾಪಸ್​​ ನೀಡಲಾಗಿದೆ. ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್, ಸೈಬರ್​​ ವಂಚನೆ ಬಗ್ಗೆ ಡಿಸೆಂಬರ್​​ನಲ್ಲಿ ಕೇಸ್​​ ದಾಖಲಾಗಿತ್ತು. ಘಟನೆ ನಡೆದು 30 ನಿಮಿಷಗಳ ಒಳಗೆ ನಮಗೆ ದೂರು ಬಂದಿದ್ದು, ಈ ರೀತಿ ಗೋಲ್ಡನ್ ಅವರ್​​ನಲ್ಲಿ ಕಂಪ್ಲೇಂಟ್​​ ಕೊಟ್ಟರೆ ಅಕೌಂಟ್ ಫ್ರೀಜ್ ಮಾಡಬಹುದು ಎಂದು ತಿಳಿಸಿದ್ದಾರೆ. ಅಲ್ಲದೆ ಪ್ರಕರಣ ಸಂಬಂಧ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಅಕೌಂಟ್ ಹೋಲ್ಡರ್, ಅಕೌಂಟ್ ಕ್ರಿಯೇಟರ್ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ವರದಿ: ಪ್ರದೀಪ್​​ ಚಿಕ್ಕಾಟೆ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಶಾಂತಿ ಪುರಸ್ಕಾರ ಇಲ್ಲ, ಶಾಂತಿ ನನ್ನ ಜವಾಬ್ದಾರಿಯಲ್ಲ ಎನ್ನುತ್ತಾ ಗಾಜಾ ಶಾಂತಿ ಮಂಡಳಿ ತೆರೆದ ಟ್ರಂಪ್, 2 ದಿನಗಳಲ್ಲಿ ಕೊಟ್ಟ ಹೇಳಿಕೆಗಳೇನು? – Kannada News | Trump’s Geopolitical Shake up: Nobel Regret, Gaza Peace and Global Map Redrawn

ವಾಷಿಂಗ್ಟನ್, ಜನವರಿ 20:ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ನಿತ್ಯ ಒಂದಲ್ಲಾ ಒಂದು ಹೇಳಿಕೆ ಕೊಡುತ್ತಾ ಸುದ್ದಿಯಲ್ಲಿರುತ್ತಾರೆ. ಕಳೆದ 48 ಗಂಟೆಗಳಲ್ಲಿ ಯಾವೆಲ್ಲಾ ದೇಶಗಳಿಗೆ ಶಾಂತಿ ಪಾಠ ಮಾಡಿದ್ದಾರೆ, ಯಾವೆಲ್ಲಾ ದೇಶಗಳ ಜತೆ ಯುದ್ಧಕ್ಕೆ ಸಜ್ಜಾಗಿದ್ದಾರೆ, ಏನೆಲ್ಲಾ ಹೇಳಿಕೆಗಳನ್ನು ನೀಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ನನಗೆ ನೊಬೆಲ್ ಶಾಂತಿ ಪುರಸ್ಕಾರ ಕೊಟ್ಟಿಲ್ಲ, ಶಾಂತಿ ಇನ್ನು ನನ್ನ ಜವಾಬ್ದಾರಿಯಲ್ಲ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾರ್ವೆ ಪ್ರಧಾನಿ ಜೊನಾಸ್ ಗಹರ್ ಸ್ಟೋರೆ ಅವರಿಗೆ ವೈಯಕ್ತಿಕವಾಗಿ ಕಳುಹಿಸಿದ ಪತ್ರದಲ್ಲಿ ನೊಬೆಲ್ ಪ್ರಶಸ್ತಿ ಸಿಗದಿರುವುದು ಎಷ್ಟು ನಿರಾಶೆಗೊಂಡಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಪತ್ರದ ವಿಷಯಗಳ ಬಗ್ಗೆ ಆಘಾತಕಾರಿ ಮಾಹಿತಿ ಸೋರಿಕೆಯಾಗಿದ್ದು, ಅದರಲ್ಲಿ ವಿಶ್ವ ಶಾಂತಿಯನ್ನು ಖಚಿತಪಡಿಸುವುದು ತಮ್ಮ ಜವಾಬ್ದಾರಿಯಲ್ಲ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಟ್ರಂಪ್ ಅವರು ನೊಬೆಲ್ ಪ್ರಶಸ್ತಿ ನಿರಾಕರಿಸಲ್ಪಟ್ಟಾಗಿನಿಂದ ಜಾಗತಿಕ ವ್ಯವಹಾರಗಳ ಬಗ್ಗೆ ತಮ್ಮ ದೃಷ್ಟಿಕೋನ ಬದಲಾಗಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಎಂಟಕ್ಕೂ ಹೆಚ್ಚು ಯುದ್ಧಗಳನ್ನು ನಿಲ್ಲಿಸಿದ್ದರೂ, ನನಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡದ ಕಾರಣ, ಶಾಂತಿಯ ಬಗ್ಗೆ ಮಾತ್ರ ಯೋಚಿಸಲು ಸಾಧ್ಯವಿಲ್ಲ. ಶಾಂತಿಗಾಗಿ ಉತ್ತಮ ಕೆಲಸ ಮಾಡಿದರೂ ನೊಬೆಲ್ ಪ್ರಶಸ್ತಿ ಸಿಗಲಿಲ್ಲ, ಆದ್ದರಿಂದ ಈಗ ಅವರು ಗ್ರೀನ್‌ಲ್ಯಾಂಡ್‌ನ ಅಮೆರಿಕದ ಆಕ್ರಮಣದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಟ್ರಂಪ್ ಪತ್ರದಲ್ಲಿ ತಿಳಿಸಿದ್ದಾರೆ.

ಟ್ರಂಪ್ ಗಾಜಾ ಶಾಂತಿ ಮಂಡಳಿ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಾಜಾ ಪಟ್ಟಿಯಲ್ಲಿ ಶಾಶ್ವತ ಶಾಂತಿ, ಪುನರ್ನಿರ್ಮಾಣ ಮತ್ತು ಪರಿವರ್ತನಾ ಆಡಳಿತವನ್ನು ಮೇಲ್ವಿಚಾರಣೆ ಮಾಡಲು ಶಾಂತಿ ಮಂಡಳಿಯನ್ನು ರಚಿಸುವುದಾಗಿ ಘೋಷಿಸಿದರು. ಈ ಗಾಜಾ ಶಾಂತಿ ಮಂಡಳಿಗೆ ಸೇರಲು ಪ್ರಪಂಚದಾದ್ಯಂತದ ಹಲವಾರು ದೇಶಗಳ ನಾಯಕರನ್ನು ಆಹ್ವಾನಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ಸ್ಟೀವ್ ವಿಟ್ಕಾಫ್, ಟ್ರಂಪ್ ಅವರ ವಿಶೇಷ ಸಮಾಲೋಚಕ, ಟ್ರಂಪ್ ಅಳಿಯ ಜೇರೆಡ್ ಕುಶ್ನರ್, ಟೋನಿ ಬ್ಲೇರ್, ಮಾಜಿ ಬ್ರಿಟಿಷ್ ಪ್ರಧಾನಿ, ಮಾರ್ಕ್ ರೋವನ್, ಅಜಯ್ ಬಂಗಾ, ವಿಶ್ವ ಬ್ಯಾಂಕ್ ಅಧ್ಯಕ್ಷರು, ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಟ್ರಂಪ್ ಅವರ ನಿಷ್ಠಾವಂತ ಮಿತ್ರ ರಾಬರ್ಟ್ ಗೇಬ್ರಿಯಲ್ ಇವರಷ್ಟೂ ಜನರಿದ್ದಾರೆ.

ಮತ್ತಷ್ಟು ಓದಿ: ಕೊನೆಗೂ ಡೊನಾಲ್ಡ್​ ಟ್ರಂಪ್​ಗೆ ಸಿಕ್ಕೇ ಬಿಡ್ತು ನೊಬೆಲ್ ಶಾಂತಿ ಪುರಸ್ಕಾರ

ಫ್ರೆಂಚ್ ವೈನ್ ಮೇಲೆ ಶೇ.200ರಷ್ಟು ಸುಂಕ
ಜಾಗತಿಕ ಸಂಘರ್ಷದ ಮಧ್ಯಸ್ಥಿಕೆ ವಹಿಸಲು ಟ್ರಂಪ್ ರಚಿಸಿದ ಶಾಂತಿ ಮಂಡಳಿಯಲ್ಲಿ ಕುಳಿತುಕೊಳ್ಳಲು ಮ್ಯಾಕ್ರನ್ ನಿರಾಕರಿಸಿದ ನಂತರ ಅಮೆರಿಕ ಅಧ್ಯಕ್ಷ ಈ ಪ್ರಸ್ತಾಪವಿಟ್ಟಿದ್ದಾರೆ.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫ್ರೆಂಚ್ ವೈನ್ ಮತ್ತು ಷಾಂಪೇನ್ ಮೇಲೆ 200% ಸುಂಕ ವಿಧಿಸಬಹುದು ಎಂದು ಹೇಳಿದ್ದಾರೆ. ಮ್ಯಾಕ್ರನ್ ಅವರ ಐದು ವರ್ಷಗಳ ಅಧ್ಯಕ್ಷೀಯ ಅವಧಿ ಮೇ 2027 ರಲ್ಲಿ ಕೊನೆಗೊಳ್ಳಲಿದ್ದು, ಫ್ರೆಂಚ್ ಕಾನೂನಿನ ಪ್ರಕಾರ ಅವರು ಮೂರನೇ ಅವಧಿಗೆ ಮತ್ತೆ ಸ್ಪರ್ಧಿಸಲು ಸಾಧ್ಯವಿಲ್ಲ.

ಕೆನಡಾ, ವೆನೆಜುವೆಲಾ ಮತ್ತು ಗ್ರೀನ್‌ಲ್ಯಾಂಡ್‌ಗಳನ್ನು ಅಮೆರಿಕದ ಪ್ರದೇಶಗಳಾಗಿ ತೋರಿಸುವ ಹೊಸ ನಕ್ಷೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಅಮೆರಿಕದ ನಕ್ಷೆಯನ್ನು ಪೋಸ್ಟ್ ಮಾಡಿದ್ದು, ಕೆನಡಾ, ವೆನೆಜುವೆಲಾ ಮತ್ತು ಗ್ರೀನ್‌ಲ್ಯಾಂಡ್‌ಗಳನ್ನು ಅಮೆರಿಕದ ಪ್ರದೇಶಗಳ ಭಾಗವಾಗಿ ತೋರಿಸಿದ್ದಾರೆ. AI-ರಚಿತವಾಗಿರುವಂತೆ ಕಾಣುವ ಈ ನಕ್ಷೆಯನ್ನು ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಗ್ರೀನ್‌ಲ್ಯಾಂಡ್ ಸ್ವಾಧೀನದ ಒತ್ತಡದ ಕುರಿತು ಯುರೋಪಿಯನ್ ಮಿತ್ರರಾಷ್ಟ್ರಗಳೊಂದಿಗೆ ಮಾತಿನ ಚಕಮಕಿಯ ಮಧ್ಯೆ ಇದು ಸಂಭವಿಸಿದೆ.

ಕೆಲವು ನಿಮಿಷಗಳ ನಂತರ, ಟ್ರಂಪ್ ಮತ್ತೊಂದು ಫೋಟೋವನ್ನು ಪೋಸ್ಟ್ ಮಾಡಿದರು, ಅದರಲ್ಲಿ ಅವರು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರೊಂದಿಗೆ ಗ್ರೀನ್‌ಲ್ಯಾಂಡ್‌ನಲ್ಲಿ ಯುಎಸ್‌ಎ ಧ್ವಜ ಹಾರಿಸುತ್ತಿರುವುದನ್ನು ಕಾಣಬಹುದು.

ಕಳೆದ ವರ್ಷ ಅಧಿಕಾರಕ್ಕೆ ಬಂದ ನಂತರ, ಟ್ರಂಪ್ ಕೆನಡಾವನ್ನು ಅಮೆರಿಕದ 51 ನೇ ರಾಜ್ಯವನ್ನಾಗಿ ಮಾಡುವ ಪ್ರಸ್ತಾಪವನ್ನು ಮಾಡಿದ್ದರು. ಆದರೆ, ಕೆನಡಾ ಸರ್ಕಾರ ಈ ಪ್ರಸ್ತಾಪವನ್ನು ತಿರಸ್ಕರಿಸಿತು, ಇದು ಎರಡು ದೇಶಗಳ ನಡುವೆ ಕಹಿ ವ್ಯಾಪಾರ ಯುದ್ಧಕ್ಕೆ ಕಾರಣವಾಯಿತು. ಈ ತಿಂಗಳ ಆರಂಭದಲ್ಲಿ, ಅಮೆರಿಕದ ವಿಶೇಷ ಪಡೆಗಳು ವೆನೆಜುವೆಲಾದಲ್ಲಿ ಕಾರ್ಯಾಚರಣೆ ನಡೆಸಿ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಕ್ಯಾರಕಾಸ್‌ನಿಂದ ಸೆರೆಹಿಡಿದು, ಮಾದಕವಸ್ತು ಆರೋಪದ ವಿಚಾರಣೆಯನ್ನು ಎದುರಿಸಲು ನ್ಯೂಯಾರ್ಕ್‌ಗೆ ಕರೆದೊಯ್ದವು.

ಅಮೆರಿಕವು ಈಗಾಗಲೇ ದ್ವೀಪದಲ್ಲಿ ನೆಲೆಯನ್ನು ಹೊಂದಿದ್ದರೂ ಮತ್ತು ನ್ಯಾಟೋ ಮಿತ್ರ ರಾಷ್ಟ್ರ ಡೆನ್ಮಾರ್ಕ್‌ನೊಂದಿಗೆ ಭದ್ರತಾ ಒಪ್ಪಂದಗಳನ್ನು ಹೊಂದಿದ್ದರೂ, ರಾಷ್ಟ್ರೀಯ ಭದ್ರತೆಗಾಗಿ ಅಮೆರಿಕಕ್ಕೆ ವಿಶಾಲವಾದ, ಖನಿಜ-ಸಮೃದ್ಧ ಗ್ರೀನ್‌ಲ್ಯಾಂಡ್ ಅಗತ್ಯವಿದೆ ಎಂದು ಟ್ರಂಪ್ ಪದೇ ಪದೇ ಹೇಳುತ್ತಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 2:44 pm, Tue, 20 January 26

Source link

ಭಾರತದ ವಿರುದ್ಧದ ಸರಣಿ ಆರಂಭಕ್ಕೂ ಮುನ್ನವೇ ನ್ಯೂಝಿಲೆಂಡ್​ಗೆ ಆಘಾತ – Kannada News | Michael Bracewell in doubt for India T20Is

ಭಾರತ ಮತ್ತು ನ್ಯೂಝಿಲೆಂಡ್ ನಡುವಣ 5 ಪಂದ್ಯಗಳ ಟಿ20 ಸರಣಿಯು ನಾಳೆಯಿಂದ (ಜ.21) ಶುರುವಾಗಲಿದೆ. ಈ ಸರಣಿ ಆರಂಭಕ್ಕೂ ಮುನ್ನವೇ ಕಿವೀಸ್ ಪಡೆಗೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಮೈಕೆಲ್​ ಬ್ರೇಸ್​ವೆಲ್ ಇಡೀ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.

ಇಂದೋರ್​ನಲ್ಲಿ ನಡೆದ ಭಾರತದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಮೈಕೆಲ್ ಬ್ರೇಸ್​ವೆಲ್ ಕಾಲು ನೋವಿಗೆ ಒಳಗಾಗಿ ಮೈದಾನ ತೊರೆದಿದ್ದರು. ಇದೀಗ ಈ ಗಾಯದ ಕಾರಣ ಸಂಪೂರ್ಣ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಮೈಕೆಲ್ ಬ್ರೇಸ್​​ವೆಲ್ ಅಲಭ್ಯತೆಯು ನ್ಯೂಝಿಲೆಂಡ್ ಪಾಲಿಗೆ ಹಿನ್ನಡೆಯಾಗುವುದರಲ್ಲಿ ಡೌಟೇ ಇಲ್ಲ. ಏಕೆಂದರೆ ಭಾರತದ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನಾಯಕನಾಗಿ ಕಣಕ್ಕಿಳಿದಿದ್ದೇ ಬ್ರೇಸ್​ವೆಲ್.

ಭಾರತೀಯ ಬ್ಯಾಟರ್​ಗಳ ವಿರುದ್ಧ ರಣತಂತ್ರ ಹೆಣೆಯುವಲ್ಲಿ ಯಶಸ್ವಿಯಾಗಿದ್ದ ಬ್ರೇಸ್​ವೆಲ್ ಟಿ20 ಸರಣಿಯಲ್ಲಿ ನ್ಯೂಝಿಲೆಂಡ್ ಪಾಲಿಗೆ ಅನಿವಾರ್ಯವಾಗಿತ್ತು. ಆದರೀಗ ಸರಣಿ ಆರಂಭಕ್ಕೆ ದಿನಗಳಿರುವಾಗ ಅವರು ಐದೂ ಮ್ಯಾಚ್​ಗಳಿಂದಲೂ ಹೊರಗುಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಮೈಕೆಲ್ ಬ್ರೇಸ್​ವೆಲ್ ಹೊರಗುಳಿದರೆ ನ್ಯೂಝಿಲೆಂಡ್ ಪರ ಮಧ್ಯಮ ಕ್ರಮಾಂಕದಲ್ಲಿ ಹೇಮ್ಸ್ ನೀಶಮ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಏಕೆಂದರೆ ನೀಶಮ್ ಕೂಡ ಆಲ್​ರೌಂಡರ್ ಆಟಗಾರ. ಅದರಲ್ಲೂ ಅನುಭವಿ ಆಟಗಾರ. ಹೀಗಾಗಿ ಮೊದಲ ಟಿ20 ಪಂದ್ಯದಲ್ಲಿ ಬ್ರೇಸ್​ವೆಲ್ ಬದಲಿಗೆ ಜೇಮ್ಸ್ ನೀಶಮ್​ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.

ನ್ಯೂಝಿಲೆಂಡ್ ಟಿ20 ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೆ (ವಿಕೆಟ್ ಕೀಪರ್), ಜೇಕಬ್ ಡಫಿ, ಝ್ಯಾಕ್ ಫೌಲ್ಕ್ಸ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಬೆವೊನ್ ಜೇಕಬ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಟಿಮ್ ರಾಬಿನ್ಸನ್, ಇಶ್ ಸೋಧಿ, ಮೈಕೆಲ್ ಬ್ರೇಸ್‌ವೆಲ್ (ಡೌಟ್).

ಇದನ್ನೂ ಓದಿ: ಸೌತ್ ಆಫ್ರಿಕಾ ತಂಡಕ್ಕೆ 329 ರನ್​ಗಳ ವಿಶ್ವ ದಾಖಲೆಯ ವಿಜಯ

ಭಾರತ vs ನ್ಯೂಝಿಲೆಂಡ್ ಟಿ20 ಸರಣಿ ವೇಳಾಪಟ್ಟಿ

  • ಮೊದಲ ಟಿ20 ಪಂದ್ಯ – ಜನವರಿ 21 – ನಾಗ್ಪುರ – ರಾತ್ರಿ 7:00 ಗಂಟೆಗೆ ಶುರು
  • ಎರಡನೇ ಟಿ20 ಪಂದ್ಯ – ಜನವರಿ 23 – ರಾಯ್ಪುರ – ರಾತ್ರಿ 7:00 ಗಂಟೆಗೆ ಶುರು
  • ಮೂರನೇ ಟಿ20 ಪಂದ್ಯ – ಜನವರಿ 25 – ಗುವಾಹಟಿ – ರಾತ್ರಿ 7:00 ಗಂಟೆಗೆ ಶುರು
  • ನಾಲ್ಕನೇ ಟಿ20 ಪಂದ್ಯ – ಜನವರಿ 28 – ವಿಶಾಖಪಟ್ಟಣ – ರಾತ್ರಿ 7:00 ಗಂಟೆಗೆ ಶುರು
  • ಐದನೇ ಟಿ20 ಪಂದ್ಯ – ಜನವರಿ 31 – ತಿರುವನಂತಪುರಂ – ರಾತ್ರಿ 7:00 ಗಂಟೆಗೆ ಶುರು.

Source link

ಪವಿತ್ರಾ ಮನೆ ಊಟಕ್ಕೆ ಬ್ರೇಕ್: ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದ ಹೈಕೋರ್ಟ್ – Kannada News | Pavithra Gowda’s Jail Home Food Halted: HC Stresses Equality, Ends Special Privilege

ರೇಣುಕಾ ಸ್ವಾಮಿ (Renuka Swamy) ಕೊಲೆ ಆರೋಪಿ ಪವಿತ್ರಾ ಗೌಡ, ನಾಗರಾಜು ಮತ್ತು ಲಕ್ಷ್ಮಣ್ ಅವರುಗಳು ನ್ಯಾಯಾಂಗ ಬಂಧನದಲ್ಲಿದ್ದು ಅವರಿಗೆ ವಾರಕ್ಕೊಮ್ಮೆ ಮನೆ ಊಟ ಲಭಿಸುತ್ತಿತ್ತು. ಟ್ರಯಲ್ ಕೋರ್ಟ್​​ಗೆ ಅರ್ಜಿ ಸಲ್ಲಿಸಿ ಈ ಮೂವರು ಜೈಲಿನಲ್ಲೇ ಮನೆ ಊಟ ಸಿಗುವಂತೆ ವ್ಯವಸ್ಥೆ ಮಾಡಿಕೊಂಡಿದ್ದರು. ಪೊಲೀಸರ ಮೇಲ್ಮನವಿಯ ಬಳಿಕ ಪ್ರತಿದಿನ ಅಲ್ಲ ಬದಲಿಗೆ ವಾರಕ್ಕೆ ಒಮ್ಮೆ ಮನೆ ಊಟ ಕೊಡಬಹುದು, ವೈದ್ಯರು ಸಲಹೆ ಕೊಟ್ಟರೆ ದರ್ಶನ್ ಸೇರಿದಂತೆ ಪ್ರಕರಣದ ಎಲ್ಲ ಆರೋಪಿಗಳಿಗೂ ಮನೆ ಊಟ ಕೊಡಬಹುದು ಎಂದಿದ್ದರು. ಆದರೆ ಇದೀಗ ಈ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.

ಪವಿತ್ರಾ ಗೌಡ ಮತ್ತು ಇತರೆ ಇಬ್ಬರು ಆರೋಪಿಗಳಿಗೆ ಮನೆ ಊಟ ಕೊಡುವಂತೆ 57ನೇ ಸಿಸಿಎಚ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಜೈಲಧಿಕಾರಿಗಳು ಹೈಕೋರ್ಟ್​​ ಮೊರೆ ಹೋಗಿದ್ದರು. ಇದೇ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಜೈಲಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದು, ಯಾವುದೇ ಆರೋಪಿಗೆ ವಿಶೇಷ ಸವಲತ್ತು ನೀಡಬಾರದು ಎಂದು ಸೂಚಿಸಿದೆ, ವಿಶೇಷ ಸವಲತ್ತು ನೀಡಿದಲ್ಲಿ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದೆ. ಅಲ್ಲದೆ, ಪವಿತ್ರಾ ಗೌಡ ಮತ್ತು ಇರೆ ಇಬಬರು ಆರೋಪಿಗಳಿಗೆ ಮನೆ ಊಟಕ್ಕೆ ಅವಕಾಶ ನೀಡಿದರೆ ಜೈಲಿನ ಇತರೆ ಕೈದಿಗಳೂ ಸಹ ಮನೆ ಊಟಕ್ಕೆ ಬೇಡಿಕೆ ಇಡುತ್ತಾರೆ, ಜೈಲಿನ ಶಿಸ್ತು ಸಡಿಲವಾಗುತ್ತದೆ ಎಂದು ಸರ್ಕಾರಿ ವಕೀಲರು ವಾದಿಸಿದ್ದರು.

ಅಲ್ಲದೆ, ಜೈಲಿನಲ್ಲಿ ಈಗಾಗಲೇ ಎಫ್​​ಎಸ್​​ಎಸ್​​ಎಐ ಸೂಚನೆಯಂತೆ ಫೋರ್ ಸ್ಟಾರ್ ಆಹಾರವನ್ನೇ ಎಲ್ಲ ಕೈದಿಗಳಿಗೂ ನೀಡಲಾಗುತ್ತಿದೆ. ಜೈಲಿನ ಆಹಾರ ಶುಚಿಯಾಗಿಯೂ, ರುಚಿಯಾಗಿಯೂ, ಆರೋಗ್ಯಕರವಾಗಿಯೂ ಇದೆ ಹೀಗಿರುವಾಗ ಮನೆಯಿಂದ ಊಟ ನೀಡುವ ಔಚಿತ್ಯ ಏನಿದೆ? ಎಂದು ಸರ್ಕಾರಿ ವಕೀಲರು ಹೈಕೋರ್ಟ್​​ನಲ್ಲಿ ವಾದ ಮಂಡಿಸಿದ್ದರು.

ಇದನ್ನೂ ಓದಿ:ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ ಪವಿತ್ರಾ ಗೌಡಗೆ ಮತ್ತೆ ಹಿನ್ನಡೆ

ವಾದ ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠವು, 57ನೇ ಸಿಸಿಎಚ್ ನ್ಯಾಯಾಲಯ ನಿಡಿದ್ದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. ಕಾನೂನಿಗೆ ಎಲ್ಲರೂ ಒಂದೇ ಎಂದಿರುವ ನ್ಯಾಯಾಲಯವು, ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿರುವಂತೆ ಯಾರಿಗೂ ಸಹ ವಿಶೇಷ ಸವಲತ್ತು ನೀಡುವಂತಿಲ್ಲ ಎಂದಿದೆ. ಅಲ್ಲದೆ, ಜೈಲು ಕೈಪಿಡಿಯಲ್ಲಿ ಮನೆ ಊಟವನ್ನು ಕೇವಲ ಬಹಳ ವಿಶೇಷ ಸಂದರ್ಭದಲ್ಲಿ ಐಜಿಪಿ ಅವರ ಒಪ್ಪಿಗೆ ಮೇರೆಗೆ ಮಾತ್ರವೇ ನೀಡಬೇಕು, ಅದೂ ಆ ಕಾರಣ ವೈದ್ಯಕೀಯ ಕಾರಣ ಆಗಿರಬೇಕು ಎಂಬುದನ್ನು ಸಹ ಹೈಕೋರ್ಟ್ ಉಲ್ಲೇಖಿಸಿದೆ.

ಪವಿತ್ರಾ ಗೌಡ, ನಾಗರಾಜು ಮತ್ತು ಲಕ್ಷ್ಮಣ್ ಅವರುಗಳು ಜೈಲಿನಲ್ಲಿ ಇದ್ದಾಗಿಯೂ ವಾರಕ್ಕೊಮ್ಮೆ ಮನೆ ಊಟ ಸವಿಯುತ್ತ ವಿಶೇಷ ಸವಲತ್ತನ್ನು ಅನುಭವಿಸುತ್ತಿದ್ದರು ಆದರೆ ನ್ಯಾಯಾಲಯದ ಆದೇಶದಿಂದ ವಿಶೇಷ ಸವಲತ್ತಿಗೆ ಕತ್ತರಿ ಬಿದ್ದಿದ್ದು, ಸಂಪೂರ್ಣವಾಗಿ ಜೈಲೂಟವೇ ಗತಿ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 2:25 pm, Tue, 20 January 26

Source link

ಚಿರಂಜೀವಿ ಕ್ರೇಜ್: ಒಂದೇ ಕುಟುಂಬದ 140 ಮಂದಿಯಿಂದ ಸಿನಿಮಾ ವೀಕ್ಷಣೆ – Kannada News | 140 members of a family watched Chiranjeevi’s Mana Shankara Vara Prasad garu movie

ಮೆಗಾಸ್ಟಾರ್ ಚಿರಂಜೀವಿ (Megastar Chiranjeevi), ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟ. ಆದರೆ ಕಳೆದ ಐದಾರು ವರ್ಷಗಳಿಂದ ಅವರಿಗೆ ಸೂಕ್ತ ಗೆಲುವು ಸಿಕ್ಕಿರಲೇ ಇಲ್ಲ. ನಟಿಸಿದ ಸಿನಿಮಾಗಳು ಒಂದರ ಹಿಂದೊಂದರಂತೆ ಫ್ಲಾಪ್ ಆಗಿದ್ದವು. ಚಿರಂಜೀವಿ ಎಂದರೆ ಕಲೆಕ್ಷನ್ ಇಲ್ಲದ ನಟ ಎಂಬ ಅಭಿಪ್ರಾಯ ಹೊಸ ತೆಲುಗು ಸಿನಿಮಾ ವೀಕ್ಷಕರಲ್ಲಿ ಮೂಡಿಬಿಟ್ಟಿತ್ತು. ಆದರೆ ನಿಜಕ್ಕೂ ಚಿರಂಜೀವಿಯ ಕ್ರೇಜ್ ಎಂಬುದನ್ನು ಮತ್ತೆ ತೋರಿಸಿದೆ ಅವರ ನಟನೆಯ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ. ಇದಕ್ಕೆ ಸಾಕ್ಷಿ ಎಂಬಂತೆ ಒಂದೇ ಕುಟುಂಬದ 140 ಮಂದಿ ಒಟ್ಟಿಗೆ ಚಿತ್ರಮಂದಿರಕ್ಕೆ ಬಂದು ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ವೀಕ್ಷಿಸಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು ಒಂದೇ ಕುಟುಂಬಕ್ಕೆ ಸೇರಿದ 140 ಮಂದಿ ಒಟ್ಟಿಗೆ ಚಿತ್ರಮಂದಿರಕ್ಕೆ ತೆರಳಿ ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ವೀಕ್ಷಿಸಿದ್ದಾರೆ. ಟ್ರ್ಯಾಕ್ಟರ್​, ಕಾರು, ಬಸ್ಸುಗಳಲ್ಲಿ ಒಂದೇ ಕುಟುಂಬದ ಮಂದಿ ಚಿತ್ರಮಂದಿರಕ್ಕೆ ಹೋಗುತ್ತಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಇದಲ್ಲವೇ ‘ಬಾಸ್ ಕ್ರೇಜು’ ಎಂದು ಅಭಿಮಾನಿಗಳು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಅದು ಮಾತ್ರವೇ ಅಲ್ಲದೆ, ತೆಲುಗು ರಾಜ್ಯಗಳಲ್ಲಿಯೇ ಮತ್ತೊಂದೆಡೆ ಒಂದೇ ಕುಟುಂಬದ 70 ಮಂದಿ ಒಟ್ಟಿಗೆ ತೆರಳಿ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ವೀಕ್ಷಿಸಿದ್ದಾರೆ. ಬಸ್ಸಿನಲ್ಲಿ ತೆರಳಿದ್ದ ಈ ಕುಟುಂಬ ದಾರಿಯುದ್ದಕ್ಕೂ ಬಾಸ್​​ಗೆ ಜಯಕಾರ ಹಾಕಿಕೊಂಡು ಹೋಗುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಹಲವು ತೆಲುಗು ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ. ಮುಂಚೆಯೆಲ್ಲ ಹಳ್ಳಿಗಳಿಂದ ಟ್ರ್ಯಾಕ್ಟರ್​​ನಲ್ಲಿ ಪಟ್ಟಣಕ್ಕೆ ಬಂದು ಸಿನಿಮಾ ನೋಡುವ ಪದ್ಧತಿ ಇತ್ತು, ಇದೀಗ ಚಿರಂಜೀವಿಯ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾಕ್ಕೆ ಮತ್ತೆ ಹಳ್ಳಿಯ ಜನ ಟ್ರ್ಯಾಕ್ಟರುಗಳಲ್ಲಿ ಬಂದು ಸಿನಿಮಾ ನೋಡಿಕೊಂಡು ಹೋಗುತ್ತಿದ್ದಾರೆ.

ಇದನ್ನೂ ಓದಿ:ಆ ಒಂದು ಕಾರಣಕ್ಕೆ ರಾಜಮೌಳಿ ಸಿನಿಮಾದಲ್ಲಿ ನಟಿಸುವುದಿಲ್ಲವಂತೆ ಮೆಗಾಸ್ಟಾರ್ ಚಿರಂಜೀವಿ

ಚಿರಂಜೀವಿ, ತೆಲುಗು ರಾಜ್ಯಗಳ ಸ್ಟಾರ್ ನಟ. ಹಲವು ದಶಕಗಳ ಕಾಲ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಚಿತ್ರಮಂದಿರಕ್ಕೆ ಸೆಳೆದಿರುವ ನಟ. ಆದರೆ ಕಳೆದ ಕೆಲ ವರ್ಷಗಳಿಂದ ಅವರ ಸಿನಿಮಾಗಳು ಯಶಸ್ವಿ ಆಗದೆ ಅಭಿಮಾನಿಗಳಿಗೆ ಬೇಸರ ಮೂಡಿತ್ತು, ಆದರೆ ಇದೀಗ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಮೂಲಕ ಮತ್ತೆ ಚಿರಂಜೀವಿಯ ಹಳೆ ಖದರು ಮತ್ತೆ ಮೂಡಿದೆ. ಸಿನಿಮಾ ಬಗ್ಗೆ ಕೆಲ ವಿಮರ್ಶಕರು ಇದೊಂದು ಸಾಮಾನ್ಯ ಸಿನಿಮಾ ಎಂದಿದ್ದಾರೆ ಆದರೆ ಚಿರಂಜೀವಿ ಕೇವಲ ತಮ್ಮ ನಟನೆ ಮತ್ತು ಹಾಸ್ಯದಿಂದಲೇ ಮೋಡಿ ಮಾಡಿದ್ದು, ಪ್ರೇಕ್ಷಕರನ್ನು ಮತ್ತೆ ಮತ್ತೆ ಚಿತ್ರಮಂದಿರದತ್ತ ಸೆಳೆಯುತ್ತಿದ್ದಾರೆ.

‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾವನ್ನು ಅನಿಲ್ ರವಿಪುಡಿ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ನಯನತಾರಾ ನಾಯಕಿ. ಇದೇ ಸಿನಿಮಾನಲ್ಲಿ ವಿಕ್ಟರಿ ವೆಂಕಟೇಶ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಈಗಾಗಲೇ 300 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದ್ದು, ಈ ವರ್ಷದ ಸಂಕ್ರಾಂತಿಯ ಹಿಟ್ ಸಿನಿಮಾ ಎನಿಸಿಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಲ್ಲಿ ಕುಖ್ಯಾತ ಮನೆಗಳ್ಳ ಅರೆಸ್ಟ್​​: ತಲೆಮರೆಸಿಕೊಂಡವನ ಮೇಲಿದೆ 40ಕ್ಕೂ ಹೆಚ್ಚು ಕೇಸ್​! – Kannada News | Notorious house burglar arrested in Bengaluru; gold worth 42 lakh recovered

ಬೆಂಗಳೂರು/ಬೆಳಗಾವಿ, ಜನವರಿ 20: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅಲಗೂರು ಗ್ರಾಮದಲ್ಲಿ ಮನೆ ಬಾಗಿಲು ಒಡೆದು ಚಿನ್ನಾಭರಣ ಕದ್ದಿದ್ದ ಪ್ರಕರಣ ಸಂಬಂಧ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಮಾದನಾಯಕನಹಳ್ಳಿಯ ಅಂಚೆಪಾಳ್ಯದಲ್ಲಿ ಆರೋಪಿಯನ್ನು ಅರೆಸ್ಟ್​​ ಮಾಡಲಾಗಿದ್ದು, ಶ್ರೀಕಾಂತ್​ ಬಂಧಿತ ವ್ಯಕ್ತಿಯಾಗಿದ್ದಾನೆ. 2 ಪ್ರತ್ಯೇಕ ಪ್ರಕರಣಗಳ ಸಂಬಂಧ ಆರೋಪಿಯಿಂದ 42 ಲಕ್ಷ ಮೌಲ್ಯದ 348 ಗ್ರಾಂ ಚಿನ್ನಾಭರಣ ವಶಪಡಿಸಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ಸಿದ್ದುಗಾಗಿ ಪೊಲೀಸರಿಂದ ಹುಡುಕಾಟ ಮುಂದುವರಿದಿದೆ.

ಆರೋಪಿಗಳಾದ ಸಿದ್ದು ಮತ್ತು ಶ್ರೀಕಾಂತ್​​ ಸೇರಿ ಸುಮಾರು 248 ಗ್ರಾಂ. ತೂಕದ ಚಿನ್ನಾಭರಣವನ್ನು ಅಲಗೂರು ಗ್ರಾಮದ ಮನೆಯಿಂದ ಕದ್ದಿದ್ದರು. ಈ ಪೈಕಿ ಸಿದ್ದು ಮೇಲೆ ಈವರೆಗೆ 40ಕ್ಕೂ ಅಧಿಕ ಪ್ರಕರಣಗಳಿವೆ ಎನ್ನಲಾಗಿದ್ದು, ಶ್ರೀಕಾಂತ್ ಮಳವಳ್ಳಿ ಮಾರುಕಟ್ಟೆಯಲ್ಲಿ ಸಣ್ಣಪುಟ್ಟ ಕಳ್ಳತನ ಮಾಡ್ತಿದ್ದ. ಬಳಿಕ ಸಂಬಂಧಿ ಸಿದ್ದು ಜತೆ ಸೇರಿ ಈತನೂ ಮನೆಗಳ್ಳತನಕ್ಕೆ ಇಳಿದಿದ್ದ. ಬೈಕ್​ನಲ್ಲಿ ಬಂದು ಕಳ್ಳತನ ಮಾಡಿ ಖದೀಮರು ಪರಾರಿಯಾಗುತ್ತಿದ್ದರು ಎಂಬುದು ಪೊಲೀಸ್​​ ತನಿಖೆಯಿಂದ ಬಯಲಾಗಿದೆ. ಕಳೆದ ಆಗಸ್ಟ್​​ನಲ್ಲಿ ಮನೆಯವರೆಲ್ಲ ತಮಿಳುನಾಡಿಗೆ ಹೋದಾಗ ಆರೋಪಿಗಳು ಮನೆಗೆ ಕನ್ನ ಹಾಕಿದ್ದರು. ಬಂಧಿತ ಶ್ರೀಕಾಂತ್​​ ವಿಚಾರಣೆ ವೇಳೆ ಕದ್ದ ಚಿನ್ನಾಭರಣವನ್ನು ಇವರು ಗಿರಿವಿಗೆ ಇಟ್ಟಿದ್ದರು ಎಂಬುದು ಕೂಡ ಗೊತ್ತಾಗಿದೆ.

ಇದನ್ನೂ ಓದಿ: ಹುಣಸೂರು ಚಿನ್ನದಂಗಡಿ ದರೋಡೆ ಪ್ರಕರಣ; ಬಿಹಾರ ಮೂಲದ ಮೋಸ್ಟ್ ವಾಂಟೆಡ್ ಆರೋಪಿ ಪೊಲೀಸರ ಬಲೆಗೆ!

ದೇಗುಲದ ಬಾಗಿಲು ಮುರಿದು ಕನ್ನ ಹಾಕಿದ ಖದೀಮರು

ದೇಗುಲದ ಬಾಗಿಲು ಮುರಿದು ಕಳವು

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ದೂಪದಾಳ ಗ್ರಾಮದ ಭೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು, ಬೆಳ್ಳಿ, ಚಿನ್ನಾಭರಣವನ್ನು ಖದೀಮರು ಹೊತ್ತೊಯ್ದಿದ್ದಾರೆ. ದೇಗುಲದ ಬಾಗಿಲು ಮುರಿದು ಒಳಪ್ರವೇಶಿಸಿರುವ ಆರೋಪಿಗಳು 2 ಕೆಜಿ ತೂಕದ ಬೆಳ್ಳಿಯ ಕುದುರೆ ಮತ್ತು ಎರಡು ಚಿನ್ನದ ಸರ ಕಳ್ಳತನ ಮಾಡಿದ್ದಾರೆ. ಬೀರೇಶ್ವರ ದೇವರ ಖಂಚಿನ ಮೂರ್ತಿಯನ್ನೂ ಹೊತ್ತೊಯ್ದಿದ್ದ ಆರೋಪಿಗಳು ಬಳಿಕ ಅದನ್ನು ಗ್ರಾಮದ ಹೊರವಲಯದಲ್ಲಿ ಎಸೆದು ಪರಾರಿಯಾಗಿದ್ದಾರೆ. ಗ್ರಾಮದ ಹೊರ ವಲಯದಲ್ಲಿ ಬಿದ್ದ ದೇವರ ಮೂರ್ತಿ ಕಂಡು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು, ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version