ತೈಲ ಪೂರೈಕೆ ಕುರಿತು ಅಭಯ ನೀಡಿ, ವದಂತಿ ಹರಡುವವರಿಗೆ ಎಚ್ಚರಿಕೆ ಕೊಟ್ಟ ಕೇಂದ್ರ ಸರ್ಕಾರ

ತೈಲ ಪೂರೈಕೆ ಕುರಿತು ಅಭಯ ನೀಡಿ, ವದಂತಿ ಹರಡುವವರಿಗೆ ಎಚ್ಚರಿಕೆ ಕೊಟ್ಟ ಕೇಂದ್ರ ಸರ್ಕಾರ

ನವದೆಹಲಿ, ಮಾರ್ಚ್​ 26: ಭಾರತದಲ್ಲಿ ಪೆಟ್ರೋಲ್(Petrol), ಡೀಸೆಲ್ ಮತ್ತು ಎಲ್‌ಪಿಜಿ ಪೂರೈಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ. ಎಲ್ಲಾ ಪೆಟ್ರೋಲ್ ಪಂಪ್‌ಗಳು ಮತ್ತು ಗ್ಯಾಸ್ ಏಜೆನ್ಸಿಗಳು ಸಾಕಷ್ಟು ದಾಸ್ತಾನು ಹೊಂದಿವೆ ಮತ್ತು ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ. ಅಗತ್ಯ ವಸ್ತುಗಳ ಬಗ್ಗೆ ಸುಳ್ಳು ಮಾಹಿತಿ ಹರಡುವುದು ಕ್ರಿಮಿನಲ್ ಅಪರಾಧ ಮತ್ತು ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ಜನರು ಅಧಿಕೃತ ಮಾಹಿತಿಯನ್ನು ಮಾತ್ರ ನಂಬಬೇಕೆಂದು ಒತ್ತಾಯಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ದಾರಿತಪ್ಪಿಸುವ ಸುದ್ದಿಗಳನ್ನು ನಂಬಬೇಡಿ , ಇದು ಅನಗತ್ಯ ಭೀತಿಯನ್ನು ಹರಡುವ ಗುರಿಯನ್ನು ಹೊಂದಿರುವ ಪ್ಲ್ಯಾನ್ ಆಗಿದೆ ಎಂದು ಸಚಿವಾಲಯ ಹೇಳಿದೆ.
ದೇಶಾದ್ಯಂತ 100,000 ಕ್ಕೂ ಹೆಚ್ಚು ಪೆಟ್ರೋಲ್ ಪಂಪ್‌ಗಳು ತೆರೆದಿದ್ದು, ನಿರಂತರವಾಗಿ ಇಂಧನವನ್ನು ಪೂರೈಸುತ್ತಿವೆ. ಯಾವುದೇ ಪಡಿತರ ವ್ಯವಸ್ಥೆ ಇಲ್ಲ, ಮತ್ತು ಯಾವುದೇ ಪಂಪ್‌ಗಳಿಗೆ ಸರಬರಾಜುಗಳನ್ನು ಮಿತಿಗೊಳಿಸುವಂತೆ ಸೂಚಿಸಲಾಗಿಲ್ಲ.

ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಸಂಸ್ಕರಣಾಗಾರ ಮತ್ತು ಐದನೇ ಅತಿದೊಡ್ಡ ಪೆಟ್ರೋಲಿಯಂ ರಫ್ತುದಾರ. 150 ಕ್ಕೂ ಹೆಚ್ಚು ದೇಶಗಳಿಗೆ ಇಂಧನವನ್ನು ಪೂರೈಸುವ ಮೂಲಕ, ಭಾರತವು ದೇಶೀಯ ಅಗತ್ಯಗಳನ್ನು ಸುಲಭವಾಗಿ ಪೂರೈಸಲು ಸಾಧ್ಯವಾಗುತ್ತದೆ.

ಮತ್ತಷ್ಟು ಓದಿ: ಪೆಟ್ರೋಲ್, ಡೀಸಲ್ ಕೊರತೆ ಇಲ್ಲ, ಗಾಬರಿ ಬೇಡ: ಪೆಟ್ರೋಲಿಯಂ ಕಂಪನಿಗಳಿಂದ ಸ್ಪಷ್ಟನೆ

ಅನೇಕ ದೇಶಗಳು ಹಣದುಬ್ಬರ, ಪಡಿತರ ಮತ್ತು ಇಂಧನ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದರೂ, ಭಾರತವು ಅಂತಹ ಪರಿಸ್ಥಿತಿಯನ್ನು ಎದುರಿಸುತ್ತಿಲ್ಲ. ದೇಶವು ಇಂಧನ ತುರ್ತುಸ್ಥಿತಿಯಂತಹ ಕ್ರಮಗಳನ್ನು ಜಾರಿಗೆ ತರುವ ಅಗತ್ಯವಿರಲಿಲ್ಲ.

ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆಯ ಹೊರತಾಗಿಯೂ, ಭಾರತವು 41 ಕ್ಕೂ ಹೆಚ್ಚು ದೇಶಗಳಿಂದ ಕಚ್ಚಾ ತೈಲವನ್ನು ಪಡೆಯುತ್ತಿದೆ. ಸಂಸ್ಕರಣಾಗಾರಗಳು ಶೇ.100 ಕ್ಕಿಂತ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಮುಂದಿನ 60 ದಿನಗಳವರೆಗೆ ಸರಬರಾಜುಗಳನ್ನು ಈಗಾಗಲೇ ಖಚಿತಪಡಿಸಲಾಗಿದೆ.

ದೇಶವು ಕೇವಲ ಆರು ದಿನಗಳ ಸ್ಟಾಕ್ ಹೊಂದಿದೆ ಎಂಬ ಹೇಳಿಕೆ ಕೇವಲ ವದಂತಿಯಾಗಿದೆ. ಭಾರತವು ಸರಿಸುಮಾರು 60 ದಿನಗಳ ಸ್ಟಾಕ್ ಮತ್ತು ಒಟ್ಟು 74 ದಿನಗಳ ಸಾಮರ್ಥ್ಯವನ್ನು ಹೊಂದಿದೆ.
ಎಲ್‌ಪಿಜಿ ಉತ್ಪಾದನೆಯನ್ನು ಶೇ. 40 ರಷ್ಟು ಹೆಚ್ಚಿಸಲಾಗಿದ್ದು, ಆಮದು ಅಗತ್ಯ ಕಡಿಮೆಯಾಗಿದೆ. ಪ್ರತಿದಿನ 5 ದಶಲಕ್ಷಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ವಿತರಿಸಲಾಗುತ್ತಿದ್ದು, ಹೆಚ್ಚುವರಿ ಸರಬರಾಜಾಗುತ್ತಿವೆ.

ಸುಳ್ಳು ಮಾಹಿತಿ ಹರಡುವುದು ಕ್ರಿಮಿನಲ್ ಅಪರಾಧ ಎಂದು ಸರ್ಕಾರ ಎಚ್ಚರಿಸಿದೆ. ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಾಗರಿಕರು ಅಧಿಕೃತ ಮಾಹಿತಿಯನ್ನು ಮಾತ್ರ ನಂಬಬೇಕೆಂದು ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಆರ್​ಸಿಬಿಗೆ ನವಿ ಯುಪಿಐ ಮತ್ತೊಮ್ಮೆ ಅಧಿಕೃತ ಪೇಮೆಂಟ್ಸ್ ಪಾರ್ಟ್ನರ್; ಈ ಬಾರಿ ಫಾಸ್ಟೆಸ್ಟ್ ಮೊಮೆಂಟ್ ಗೇಮ್

ಬೆಂಗಳೂರು, ಮಾರ್ಚ್ 26: ಹೊಸ ಮಾಲೀಕರನ್ನು ಪಡೆದಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ಐಪಿಎಲ್ ಫ್ರಾಂಚೈಸಿಯು ತನ್ನ ಅಧಿಕೃತ ಪೇಮೆಂಟ್ಸ್ ಪಾರ್ಟ್ನರ್ ಆಗಿ ನವಿ ಯುಪಿಐ (Navi UPI App) ಅನ್ನು ಉಳಿಸಿಕೊಂಡಿದೆ. 2026ರ ಐಪಿಎಲ್ ಸೀಸನ್​ನಲ್ಲಿ ನವಿ ಯುಪಿಐ ‘ಫಾಸ್ಟೆಸ್ಟ್ ಮೊಮೆಂಟ್ ಆಫ್ ದಿ ಮ್ಯಾಚ್’ (Fastest Moment of the Match powered by Navi UPI) ಪ್ರಶಸ್ತಿಯನ್ನು ಪರಿಚಯಿಸಲಿದೆ.

ಪಂದ್ಯಕ್ಕೆ ತಿರುವು ಕೊಟ್ಟಂತಹ ಅತ್ಯಂತ ನಿರ್ಣಾಯಕವಾದ, ಬಹಳ ಪರಿಣಾಮಕಾರಿ ಕ್ಷಣಕ್ಕೆ ಕಾರಣವಾದ ಆಟಗಾರನನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿ ಪಡೆದ ಆಟಗಾರನ ಅಕೌಂಟ್​ಗೆ ನವಿ ಯುಪಿಐ ಮೂಲಕ ತತ್​ಕ್ಷಣವೇ 50,000 ರೂ ಹಣ ಹಾಕಲಾಗುತ್ತದೆ.

‘ಈ ಸೀಸನ್​ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ (RCB) ಜೊತೆ ನಮ್ಮ ಪಾರ್ಟ್ನರ್​ಶಿಪ್ ಮುಂದುವರಿಸಲು ಸಂತೋಷವಾಗಿದೆ. ಕ್ರಿಕೆಟ್ ಎಂಬುದು ಕ್ಷಣಗಳ ಒಂದು ಆಟ. ಪಂದ್ಯದ ಫಲಿತಾಂಶವನ್ನೇ ಬದಲಿಸುವ ಅತ್ಯಂತ ವೇಗದ ಮತ್ತು ಅತ್ಯಂತ ನಿರ್ಣಾಯಕ ಕ್ಷಣ ಆಗಿರುತ್ತದೆ. ನವಿ ಯುಪಿಐ ಎಷ್ಟು ತ್ವರಿತವಾಗಿ ಕೆಲಸ ಮಾಡುತ್ತದೆ ಎಂದರೆ, ಅದನ್ನು ಫಾಸ್ಟೆಸ್ಟ್ ಮೊಮೆಂಟ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಹೋಲಿಸಬಹುದು’ ಎಂದು ನವಿ ಲಿಮಿಟೆಡ್​ನ ಎಂಡಿ ಮತ್ತು ಸಿಇಒ ಆದ ರಾಜೀವ್ ನರೇಶ್ ಹೇಳಿದ್ದಾರೆ.

ಇದನ್ನೂ ಓದಿ: Petrol Diesel Prices: ಭಾರತದಲ್ಲಿ ನಯಾರಾ ಪೆಟ್ರೋಲ್ ದರ ಹೆಚ್ಚಳ; ಲೀಟರ್​ಗೆ 5 ರೂ ಬೆಲೆ ಏರಿಕೆ

ಆರ್​ಸಿಬಿ ಸಿಇಒ ರಾಜೇಶ್ ವಿ ಮೆನನ್ ಕೂಡ ಹೇಳಿಕೆ ನೀಡಿದ್ದು, ‘ಆರ್​ಸಿಬಿಯ ವೇಗ ಮತ್ತು ಪರಿಣಾಮದ ಗುಣವು ಫಾಸ್ಟೆಸ್ಟ್ ಮೊಮೆಂಟ್ ಆಫ್ ಮ್ಯಾಚ್​ಗೆ ಸರಿ ಹೊಂದುತ್ತದೆ’ ಎಂದಿದ್ದಾರೆ.

ಇನ್ನು, ನವಿ ಯುಪಿಐನ ಫಾಸ್ಟೆಸ್ಟ್ ಮೊಮೆಂಟ್ ಆಫ್ ದಿ ಮ್ಯಾಚ್ ಪ್ರಶಸ್ತಿಯು ಆರ್​ಸಿಬಿ ಆಡುವ ಎಲ್ಲಾ ಪಂದ್ಯಗಳಲ್ಲೂ ಇರುತ್ತದೆ. ಇದರಲ್ಲಿ ನವಿ ಯುಪಿಐ ಬಳಕೆದಾರರ ಪಾಲ್ಗೊಳ್ಳುವಿಕೆಗೆ ಅವಕಾಶ ಇದೆಯಾ ಇಲ್ಲವಾ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಆದರೆ, ನವಿ ಯುಪಿಐ ಬಳಕೆದಾರರಿಗೆ ಐಪಿಎಲ್ ಪಂದ್ಯಗಳಲ್ಲಿ ಇತರ ಕೆಲ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶಗಳಿವೆ.

ನವಿ ಆ್ಯಪ್​ನಲ್ಲಿ ಪವರ್​ಪ್ಲೇ ಸ್ಪರ್ಧೆ ಇದ್ದು, ಅದರಲ್ಲಿ ಭಾಗವಹಿಸುವವರು ಯುಪಿಐ ಟ್ರಾನ್ಸಾಕ್ಷನ್ ಮಾಡಿದರೆ ಆರ್​ಸಿಬಿ ಆಟಗಾರರ ಡಿಜಿಟಲ್ ಕಾರ್ಡ್​ಗಳನ್ನು ಸಂಗ್ರಹಿಸಬಹುದು. ಆರ್​ಸಿಬಿ ಜೆರ್ಸಿಗಳು ಮತ್ತು ಆಟಗಾರರಿಂದ ಸಹಿಹಾಕಲಾದ ಕ್ರಿಕೆಟ್ ಬ್ಯಾಟುಗಳನ್ನು ಗೆಲ್ಲಲು ಅವಕಾಶ ಸಿಗುತ್ತದೆ.

ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್; ಕಾರ್ಪೊರೇಟ್ ಪಾಲಿಸಿ ಜೊತೆಗೆ ವೈಯಕ್ತಿಕ ವಿಮೆಯೂ ಇರಲಿ: ನಿತಿನ್ ಕಾಮತ್ ಸಲಹೆ

ಬೆಂಗಳೂರಿನಲ್ಲಿ ನಡೆಯುವ ಆರ್​ಸಿಬಿ ಮ್ಯಾಚುಗಳಲ್ಲಿ ಟಿಕೆಟ್ ಮಾರಾಟವು ಸಾರ್ವಜನಿಕರಿಗೆ ಲಭ್ಯವಾಗುವ 24 ಗಂಟೆ ಮುಂಚೆ ನವಿ ಯುಪಿಐ ಬಳಕೆದಾರರಿಗೆ ಖರೀದಿಗೆ ಲಭ್ಯ ಇರುತ್ತದೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಈ ರಾಶಿಯವರಿಗೆ ಎಪ್ರಿಲ್​​ ತಿಂಗಳು ಲಕ್ಕೋ ಲಕ್ಕು: ಉದ್ಯೋಗ, ವಿದ್ಯಾಭ್ಯಾಸ, ಹಣಕಾಸಿನಲ್ಲಿ ಭರ್ಜರಿ ಅವಕಾಶ

2026ರ ಏಪ್ರಿಲ್ ತಿಂಗಳಲ್ಲಿ ಗ್ರಹಗತಿಗಳ ಬದಲಾವಣೆ ಮತ್ತು ಗೋಚಾರ ಫಲಗಳ ಆಧಾರದ ಮೇಲೆ ವೃಷಭ ರಾಶಿಯವರಿಗೆ ತಿಂಗಳಲ್ಲಿ ಯೋಜನೆಗೆ ಅನುಕೂಲಕರವಾಗಲಿದೆ. ಈ ರಾಶಿಗೆ ಕೃತ್ತಿಕಾದ ಮೂರು ಪಾದ, ರೋಹಿಣಿಯ ನಾಲ್ಕು ಪಾದ ಹಾಗೂ ಮೃಗಶಿರಾದ ಎರಡು ಪಾದಗಳು ಬರಲಿವೆ. ರೋಹಿಣೀ ನಕ್ಷತ್ರಕ್ಕೆ ವೃಷಭ ರಾಶಿಗೆ ಹೇಳಿದ ಪೂರ್ಣ ಫಲ ಸಿಗಲಿದೆ.

​ಉದ್ಯೋಗ ಮತ್ತು ವೃತ್ತಿ ಜೀವನ

​ಉದ್ಯೋಗ ಕ್ಷೇತ್ರದಲ್ಲಿ ಈ ತಿಂಗಳು ಸಮಾಧಾನಕರ ಬೆಳವಣಿಗೆಗಳಿರುತ್ತವೆ. ಹತ್ತನೇ ಮನೆಯ ಮೇಲೆ ಗ್ರಹಗಳ ದೃಷ್ಟಿ ಇರುವುದರಿಂದ ಕೆಲಸದಲ್ಲಿ ಒತ್ತಡವಿದ್ದರೂ ಅದನ್ನು ನಿಭಾಯಿಸುವ ಶಕ್ತಿ ನಿಮಗಿರುತ್ತದೆ. ಸಹೋದ್ಯೋಗಿಗಳೊಂದಿಗೆ ವಿನಾಕಾರಣ ವಾದ ಮಾಡಬೇಡಿ. ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರಿಗೆ ತಿಂಗಳ ದ್ವಿತೀಯಾರ್ಧದಲ್ಲಿ ಉತ್ತಮ ಅವಕಾಶಗಳು ಸಿಗಬಹುದು.

ವಿದ್ಯಾಭ್ಯಾಸ

​ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ಸಮಯ. ಪಂಚಮ ಸ್ಥಾನದ ಮೇಲೆ ಗುರುವಿನ ಶುಭ ದೃಷ್ಟಿ ಇರುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಉನ್ನತ ಮಟ್ಟದ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರಿಗೆ ಈ ತಿಂಗಳು ವಿಷಯಗಳನ್ನು ಆಳವಾಗಿ ಅರ್ಥೈಸಿಕೊಳ್ಳಲು ಸಹಕಾರಿಯಾಗಿದೆ. ಸಂಸ್ಕೃತ ಅಥವಾ ಸಾಂಪ್ರದಾಯಿಕ ವಿಷಯಗಳನ್ನು ಕಲಿಯುವವರಿಗೆ ವಿಶೇಷ ಯಶಸ್ಸು ಸಿಗಲಿದೆ.

​ಹಣಕಾಸು ಸ್ಥಿತಿ

​ಹಣಕಾಸಿನ ವಿಚಾರದಲ್ಲಿ ಏರಿಳಿತಗಳಿರುತ್ತವೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಅಡಿಕೆ ಅಥವಾ ಇತರ ತೋಟಗಾರಿಕಾ ಬೆಳೆಗಳಿಂದ ನಿರೀಕ್ಷಿತ ಲಾಭ ಬರುವ ಸಾಧ್ಯತೆ ಇದೆ. ಹೂಡಿಕೆ ಮಾಡುವ ಮೊದಲು ನುರಿತವರ ಸಲಹೆ ಪಡೆಯುವುದು ಉತ್ತಮ.

​ವಿವಾಹ ಮತ್ತು ಕೌಟುಂಬಿಕ ಜೀವನ

​ಕುಟುಂಬದಲ್ಲಿ ಮಂಗಳ ಕಾರ್ಯಗಳು ನಡೆಯುವ ಸೂಚನೆಗಳಿವೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಸಂಗಾತಿಯೊಂದಿಗೆ ಸಣ್ಣಪುಟ್ಟ ಮನಸ್ತಾಪಗಳಿದ್ದರೂ ಅವು ಬೇಗನೆ ಬಗೆಹರಿಯುತ್ತವೆ. ಮನೆಯ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ವಿದೇಶ ಪ್ರವಾಸ

​ಈ ತಿಂಗಳು ವಿದೇಶ ಪ್ರವಾಸದ ಯೋಗವು ಸ್ವಲ್ಪ ದುರ್ಬಲವಾಗಿದೆ. ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ವೀಸಾ ಅಥವಾ ಪಾಸ್‌ಪೋರ್ಟ್ ತಾಂತ್ರಿಕ ತೊಂದರೆಗಳು ಎದುರಾಗಬಹುದು. ಅನಿವಾರ್ಯವಲ್ಲದಿದ್ದರೆ ವಿದೇಶ ಪ್ರವಾಸವನ್ನು ಮುಂದೂಡುವುದು ಸೂಕ್ತ.

​ಸಾಲ ಮತ್ತು ಆರೋಗ್ಯ

​ಹೊಸದಾಗಿ ಸಾಲ ಮಾಡುವ ಸಾಹಸಕ್ಕೆ ಕೈ ಹಾಕಬೇಡಿ. ಹಳೆಯ ಸಾಲಗಳನ್ನು ತೀರಿಸಲು ಈ ಸಮಯ ಪೂರಕವಾಗಿದೆ. ಕೆಲಸದ ಒತ್ತಡದಿಂದಾಗಿ ಮಾನಸಿಕ ಆಯಾಸವಾಗಬಹುದು. ಪಾದ ಅಥವಾ ಬೆನ್ನಿನ ನೋವಿನ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಏಪ್ರಿಲ್ ತಿಂಗಳಲ್ಲಿ ಶುಭ ದಿನಾಂಕಗಳಿವು – ೪, ೧೩, ೨೨ ಮತ್ತು ೩೦. ​ಅಶುಭ ದಿನಗಳಿವು ೮, ೯ ಮತ್ತು ೧೮.
​ದೋಷಕ್ಕೆ ಪರಿಹಾರವಾಗಿ ಪ್ರತಿದಿನ ಮಹಾಲಕ್ಷ್ಮಿ ಅಷ್ಟಕವನ್ನು ಅಥವಾ ಲಕ್ಷ್ಮೀನಾರಾಯಣ ಸ್ತೋತ್ರವನ್ನು ಮಾಡಿ.

– ಲೋಹಿತ ಹೆಬ್ಬಾರ್

Source link

ಎಸ್​​ಎಸ್​​ಎಲ್​ಸಿ ತೃತೀಯ ಭಾಷೆ ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಏಕೆ ಗೊತ್ತಾ?

ಬೆಂಗಳೂರು, ಮಾರ್ಚ್​ 26: ಕರ್ನಾಟಕದಾದ್ಯಂತ ಮಾರ್ಚ್​ 18ರಿಂದ ಎಸ್​​ಎಸ್​ಎಲ್​ಸಿ ಪರೀಕ್ಷೆ ಆರಂಭವಾಗಿದೆ. ಈಗಾಗಲೇ ಕೆಲ ಪರೀಕ್ಷೆಗಳು ನಡೆದಿವೆ. ಆದರೆ ಮಾ.30ರಂದು ನಡೆಯಬೇಕಿದ್ದ ಹಿಂದಿ ಪರೀಕ್ಷೆಯನ್ನು ಇದೀಗ ಮುಂದೂಡಲಾಗಿದೆ. ಮಾ.30ರಂದು ಮಹಾವೀರ ಜಯಂತಿ ಹಿನ್ನೆಲೆ ಪರೀಕ್ಷೆ ಮುಂದೂಡಲಾಗಿದ್ದು, ಮಾ. 31ರಂದು ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಸುತ್ತೋಲೆ ಹೊರಡಿಸಲಾಗಿದೆ.

 

ಮತ್ತಷ್ಟು ಮಾಹಿತಿ ಅಪ್​ಡೇಟ್ ಆಗಲಿದೆ.

Source link

Video: ಬಾಲಕಿಯ ಮೇಲೆ ಬೀದಿ ನಾಯಿಯಿಂದ ಮಾರಣಾಂತಿಕ ದಾಳಿ

ಥಾಣೆ, ಮಾರ್ಚ್​ 26: ಥಾಣೆಯ ಅಂಬರ್ನಾಥ್ ಪ್ರದೇಶದಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿ ನಾಯಿ ಮಾರಣಾಂತಿಕವಾಗಿ ದಾಳಿ ನಡೆಸಿರುವ ಘಟನೆ ನಡೆದಿದೆ. ಬಾಲಕಿ ತನ್ನ ಆರು ವರ್ಷದ ಸಹೋದರನೊಂದಿಗೆ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.ನಾಯಿ ಇದ್ದಕ್ಕಿದ್ದಂತೆ ಅವಳ ಮೇಲೆ ಹಾರಿ ಅವಳ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತದೆ. ಭಯಗೊಂಡ ಆಕೆ ತಪ್ಪಿಸಿಕೊಳ್ಳಲು ಯತ್ನಿಸುತ್ತಾಳೆ. ಆದರೆ ನಾಯಿ ಆಕೆಯನ್ನು ಗಟ್ಟಿಯಾಗಿ ಕಚ್ಚಿದ್ದು, ಆಕೆ ಕೂಗಿಕೊಂಡಾಗ ನಿವಾಸಿಗಳು ಆಕೆಯನ್ನು ರಕ್ಷಿಸಲು ಓಡಿ ಬಂದಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹಾಡಹಗಲೇ ಕತ್ತು ಕೊಯ್ದು ಪತ್ನಿಯನ್ನ ಹತ್ಯೆಗೈದ ಪತಿ: ಬಳಿಕ ಕಾರು ಹಾಯಿಸಿ ವಿಕೃತಿ

ಕಲಬುರಗಿ, (ಮಾರ್ಚ್ 26): ವ್ಯಕ್ತಿಯೋರ್ವ, ಪತ್ನಿಯ ಕತ್ತು ಕೊಯ್ದು ಬಳಿಕ ಆಕೆ ಮೇಲೆ ಕಾರು ಹಾಯಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಅಫಜಲಪುರ (Afzalpur) ತಾಲೂಕಿನ ಬಳೂರಗಿ ಗ್ರಾಮದ ಬಳಿ ನಡೆದಿದೆ. ಶೈಲಾ (28), ಪತಿಯಿಂದಲೇ ಬರ್ಬರವಾಗಿ ಹತ್ಯೆಯಾದ ಮಹಿಳೆ. ಅಕ್ಷಯ್‌ ಕೊಲೆ ಮಾಡಿದ ಆರೋಪಿ. 28 ವರ್ಷದ ಮಹಿಳೆಯನ್ನ ಕಾರಿನಲ್ಲಿ ಕರೆತಂದು ರಸ್ತೆ ಪಕ್ಕದಲ್ಲಿರುವ ಹೊಲದಲ್ಲಿ ನಿಲ್ಲಿಸಿ ಕುಡುಗೋಲಿನಿಂದ ಆಕೆಯ ಕತ್ತನ್ನು ಕೂಯ್ದಿದ್ದಾನೆ. ಬಳಿಕ ರಕ್ತದ ಮಡುವಿನಲ್ಲಿ ತಪ್ಪಿಸಿಕೊಳ್ಳಲು ಜಮೀನನಲ್ಲಿ ಓಡಿ ಹೋಗಿದ್ದಾಳೆ. ಆದರೂ ಬಿಡಿದ ಪಾಪಿ ಪತಿ ಆಕೆ ಮೇಲೆ ಕಾರು ಹಾಯಿಸಿ ಭೀಕರವಾಗಿ ಕೊಂದಿದ್ದಾನೆ. ಪತಿಯ ಪೈಶಾಚಿಕ ಕೃತ್ಯವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎದೆ ಝಲ್ ಎನ್ನಿಸುವಂತಿದೆ.

ಅನೈತಿಕ ಸಂಬಂಧವೇ ಕೊಲೆಗೆ ಕಾರಣನಾ?

ಅಕ್ಷಯ್​, ಶೈಲಾ ಮಹಾರಾಷ್ಟ್ರ ಮೂಲದವರಾಗಿದ್ದಾರೆ. ಪತ್ನಿಯ ಅನೈತಿಕ ಸಂಬಂಧಕ್ಕೆ ರೊಚ್ಚಿಗೆದ್ದು ಅಕ್ಷಯ್, ಶೈಲಾಳನ್ನ ಕೊಲೆ ಮಾಡಲು ಪಕ್ಕಾ ಪ್ಲ್ಯಾನ್ ಮಾಡಿದ್ದ. ಅದರಂತೆ ಗಾಣಗಾಪುರಕ್ಕೆ ಹೋಗೊಣ ಬಾ ಅಂತ ತಂದೆ ತಾಯಿ ಸಮೇತ ಪತ್ನಿಯನ್ನು ಕರೆದುಕೊಂಡು ಹೋಗಿದ್ದಾನೆ. ಬಳಿಕ ಮಾರ್ಗ ಮಧ್ಯೆ ಕಾರು ನಿಲ್ಲಿಸಿ ಪತ್ನಿಯನ್ನು ಹೊರಗೆ ಎಳೆದು ತನ್ನ ತಂದೆ ತಾಯಿ ಸಮ್ಮುಖದಲ್ಲೇ ಆಕೆಯ ಕುತ್ತಿಗೆಯನ್ನು ಕೊಯ್ದಿದ್ದಾನೆ. ಬಳಿಕ ಶೈಲಾ ಪ್ರಾಣ ಉಳಿಸಿಕೊಳ್ಳಲು ರಕ್ತಸಿಕ್ತದಲ್ಲೇ ಜಮೀನಿನಲ್ಲಿ ಓಡಿ ಹೋಗಿದ್ದಾಲೆ. ಆದರೂ ಬಿಡಿದ ಹಂತಕ ಪತಿ ಕಾರಿನಿಂದ ಗುದ್ದಿ ಬಳಿಕ ಆಕೆಯ ಮೇಲೆ ಹಾಯಿಸಿ ಕೊಂದಿದ್ದಾನೆ.

ಇದನ್ನೂ ಓದಿ: ಅಕ್ರಮ ಸಂಬಂಧ ಪ್ರಶ್ನಿಸಲು ಬಂದ ಅಕ್ಕ, ತಮ್ಮನ ಕೊಲೆ: 16 ವರ್ಷದ ಬಾಲಕನಿಂದ ಕೃತ್ಯ

ಕೊಲೆ ಮಾಡುವ ದೃಶ್ಯ ಮೊಬೈಲ್​ನಲ್ಲಿ ಸೆರೆ

ಮಹಿಳೆಯನ್ನ ಕೊಲೆ ಮಾಡುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಹತ್ಯೆಗೈಯ್ಯುತ್ತಿರುವ ಘೋರ ದೃಶ್ಯವನ್ನು ಜನ ನೋಡುತ್ತಲೇ ನಿಂತಿದ್ದರು. ಆದರೆ ಆಕೆಯನ್ನು ಕಾಪಾಡದ ಸ್ಥಿತಿಯಲ್ಲಿ ಎಲ್ಲರೂ ಗಾಬರಿಯಾಗಿದ್ದರು. ಇನ್ನು ಕೆಲವರು ಹಂತಕನ ಮೇಲೆ ಕಲ್ಲುಗಳನ್ನ ಎಸೆದು ಆಕೆಯ ಪ್ರಾಣವನ್ನು ಉಳಿಸುವ ಪ್ರಯತ್ನಿಸಿದ್ದಾರೆ. ಆದ್ರೆ, ಪ್ರಯೋಜನವಾಗಿಲ್ಲ. ಕೊಲೆಯ ದೃಶ್ಯ ಸ್ಥಳೀಯರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಎದೆ ಝಲ್ ಎನ್ನಿಸುವಂತಿದೆ.

ಸ್ಥಳಕ್ಕೆ ಕಲಬುರಗಿ ಎಸ್​ಪಿ ಅಡ್ಡೂರು ಶ್ರೀನಿವಾಸುಲು ಭೇಟಿ, ಪರಿಶೀಲನೆ ನಡೆಸಿದ್ದು, ಸದ್ಯ ಶೈಲಾ ಪತಿ ಹಂತಕ ಅಕ್ಷಯ್ ಹಾಗೂ ಆತನ ತಂದೆ ತಾಯಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿ ಎಸ್ಪಿ ಹೇಳಿದ್ದೇನು?

ಈ ಬಗ್ಗೆ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಪ್ರತಿಕ್ರಿಯಿಸಿದ್ದು, ಇಂದು (ಮಾರ್ಚ್ 26) ಬೆಳಿಗ್ಗೆ 11 ಗಂಟೆ ಸುಮಾರಿಗೆ ಕೊಲೆ ನಡೆದಿದೆ. ಕೊಲೆ ಮಾಡೋದನ್ನ ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಗಾಣಗಾಪುರಕ್ಕೆ ಹೋಗೊಣ ಅಂತ ಒತ್ನಿಯನ್ನ ಕರೆತಂದಿದ್ದಾರೆ. ಅಲ್ಲಿಗೆ ಹೋಗುವ ಮಾರ್ಗ ಮಧ್ಯ ಕೊಲೆ ಮಾಡಿದ್ದಾರೆ. ಸದ್ಯ ಮೂವರನ್ನ ವಶಕ್ಕೆ ಪಡೆದಿದ್ದೆವೆ. ಮೂವರು ಮಹಾರಷ್ಟ್ರದ ಬಾರಮತಿ ಜಿಲ್ಲೆಯವರು. ಮದುವೆಯಾಗಿ ನಾಲ್ಕು ವರ್ಷ ಆಗಿತ್ತು. ಪತ್ನಿಯ ಅನೈತಿಕ ಸಂಬಂಧದ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದೆವೆ‌ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಏಳು ಗಂಟೆಗಳ ಬಳಿಕ ದೆಹಲಿಗೆ ವಾಪಸಾದ ಲಂಡನ್​ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ

ನವದೆಹಲಿ, ಮಾರ್ಚ್​ 26: ದೆಹಲಿಯಿಂದ ಲಂಡನ್​ಗೆ ಹೊರಟಿದ್ದ ಏರ್ ಇಂಡಿಯಾ(Air India) ವಿಮಾನ ತಾಂತ್ರಿಕ ದೋಷದ ಹಿನ್ನೆಲೆ ಏಳು ಗಂಟೆಗಳ ಬಳಿಕ ದೆಹಲಿಗೆ ಹಿಂದಿರುಗಿದೆ. A350-900 ವಿಮಾನ VT-JRF ಮಾರ್ಚ್ 15 ರಂದು ತಾಂತ್ರಿಕ ಸಮಸ್ಯೆಯನ್ನು ಎದುರಿಸಿತ್ತು.ನ್ಯೂಯಾರ್ಕ್‌ನಿಂದ ದೆಹಲಿಗೆ ಹಾರಾಟ ನಡೆಸುತ್ತಿದ್ದ ವಿಮಾನವನ್ನು ಐರಿಶ್ ಪಟ್ಟಣವಾದ ಶಾನನ್‌ಗೆ ತಿರುಗಿಸಲಾಯಿತು ಎಂದು ಮೂಲಗಳು ತಿಳಿಸಿದ್ದವು.

ಗುರುವಾರ ದೆಹಲಿಯಿಂದ ಲಂಡನ್‌ಗೆ ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ ವಿಮಾನ AI111, ತಾಂತ್ರಿಕ ದೋಷದ ನಂತರ ಮುನ್ನೆಚ್ಚರಿಕೆಯಾಗಿ ರಾಷ್ಟ್ರ ರಾಜಧಾನಿಗೆ ಮರಳಿದೆ ಎಂದು ವಕ್ತಾರರು ತಿಳಿಸಿದ್ದಾರೆ. ವಿಮಾನವು ಸುರಕ್ಷಿತವಾಗಿ ಮತ್ತು ಏರ್ ಇಂಡಿಯಾದ ಉನ್ನತ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಇಳಿಯಿತು. ವಿಮಾನದಳಗೆ ಶಬ್ದಗಳು ಕೇಳಿಬಂದ ನಂತರ ಅದನ್ನು ಬೇರೆಡೆಗೆ ತಿರುಗಿಸಲಾಯಿತು.

ಪ್ರಯಾಣಿಕರು ಲಂಡನ್‌ಗೆ ತಮ್ಮ ಪ್ರಯಾಣವನ್ನು ಆದಷ್ಟು ಬೇಗ ಮುಂದುವರಿಸಲು ಸಾಧ್ಯವಾಗುವಂತೆ ನೋಡಿಕೊಳ್ಳಲು ವಿಮಾನಯಾನ ಸಂಸ್ಥೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದರು. ವಿಮಾನದಲ್ಲಿ ಎಷ್ಟು ಪ್ರಯಾಣಿಕರಿದ್ದಾರೆ ಎಂಬ ವಿವರಗಳು ಸಿಕ್ಕಿಲ್ಲ.

ಮತ್ತಷ್ಟು ಓದಿ: ಏರ್​ ಇಂಡಿಯಾ ಅಪಘಾತದಲ್ಲಿ ಬದುಕುಳಿದಿದ್ದ ಏಕೈಕ ವ್ಯಕ್ತಿಯ ಸ್ಥಿತಿ ಏನಾಗಿದೆ ಗೊತ್ತೇ?

AI111 ವಿಮಾನವು ಸೌದಿ ಅರೇಬಿಯಾ ವಾಯುಪ್ರದೇಶದಲ್ಲಿದ್ದಾಗ ವಿಮಾನವನ್ನು ಬೇರೆಡೆಗೆ ತಿರುಗಿಸುವ ನಿರ್ಧಾರ ತೆಗೆದುಕೊಳ್ಳುವ ಮೊದಲು ಸುಮಾರು ನಾಲ್ಕು ಗಂಟೆಗಳ ಕಾಲ ಹಾರಾಟ ನಡೆಸಿತ್ತು.ವಿಮಾನ ಟ್ರ್ಯಾಕಿಂಗ್ ವೆಬ್‌ಸೈಟ್ Flightradar24.com ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ವಿಮಾನವು ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಇಳಿಯುವ ಮೊದಲು ಸುಮಾರು ಏಳು ಗಂಟೆಗಳ ಕಾಲ ಹಾರಾಟ ನಡೆಸಿತ್ತು.

ಗುರುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ದೆಹಲಿಯಿಂದ ವಿಮಾನ ಹೊರಟು ಮಧ್ಯಾಹ್ನ 12.30 ರ ಸುಮಾರಿಗೆ ವಾಪಸ್ ಬಂದಿಳಿದಿತ್ತು. ಏರ್ ಇಂಡಿಯಾ ಜನವರಿ 2024 ರಿಂದ A350-900 ವಿಮಾನಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

Source link

‘ಧುರಂಧರ್ 2’ ನೋಡದಿದ್ದರೂ ಚಿತ್ರತಂಡದ ಸಾಧನೆಗೆ ಭೇಷ್ ಎಂದ ಆಮಿರ್ ಖಾನ್

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಅವರು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಚಿತ್ರದ ಯಶಸ್ಸನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಪ್ರೇಕ್ಷಕರಿಂದ ಪಡೆಯುತ್ತಿರುವ ಅಭೂತಪೂರ್ವ ಬೆಂಬಲಕ್ಕೆ ಆಮಿರ್ ಖಾನ್ (Aamir Khan) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್, ಸಾರಾ ಅರ್ಜುನ್, ಸಂಜಯ್ ದತ್, ಆರ್. ಮಾಧವನ್, ಅರ್ಜುನ್ ರಾಮ್​ಪಾಲ್, ರಾಕೇಶ್ ಬೇಡಿ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಹೊಗಳುತ್ತಿದ್ದಾರೆ.

ಸುದ್ದಿ ಸಂಸ್ಥೆ ಎಎನ್ಐ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಆಮಿರ್ ಖಾನ್, ಇತ್ತೀಚಿನ ದಿನಗಳಲ್ಲಿ ಧುರಂಧರ್ ಫ್ರಾಂಚೈಸಿ ಒಂದು ಪ್ರಬಲ ವಾಣಿಜ್ಯ ಶಕ್ತಿಯಾಗಿ ಹೊರಹೊಮ್ಮುತ್ತಿರುವುದನ್ನು ಒಪ್ಪಿಕೊಂಡರು. ವಿಶೇಷವೆಂದರೆ, ಆಮಿರ್ ಅವರು ಈ ಎರಡನೇ ಭಾಗವನ್ನು ಇನ್ನೂ ನೋಡಿಲ್ಲದಿದ್ದರೂ, ಚಿತ್ರದ ಬಗ್ಗೆ ಕೇಳಿಬರುತ್ತಿರುವ ಸಕಾರಾತ್ಮಕ ಪ್ರತಿಕ್ರಿಯೆಗಳು ಅವರಿಗೆ ಸಂತಸ ತಂದಿವೆ.

‘ಧುರಂಧರ್ 2 ಸಿನಿಮಾ ಅದ್ಭುತವಾಗಿ ಪ್ರದರ್ಶನ ಕಾಣುತ್ತಿದೆ ಎಂದು ನಾನು ನಂಬುತ್ತೇನೆ. ನಾನು ಇನ್ನೂ ಚಿತ್ರವನ್ನು ನೋಡಿಲ್ಲ. ಆದರೆ ಎಲ್ಲೆಡೆ ಚಿತ್ರದ ಬಗ್ಗೆ ಕೇವಲ ಪ್ರಶಂಸೆಗಳೇ ಕೇಳಿಬರುತ್ತಿವೆ. ಧುರಂಧರ್ 1 ಮತ್ತು ಈಗ ಧುರಂಧರ್ 2 ಎರಡೂ ಸಿನಿಮಾಗಳು ಅಸಾಧಾರಣ ಯಶಸ್ಸು ಕಂಡಿವೆ. ಚಿತ್ರತಂಡಕ್ಕೆ ನನ್ನ ಕಡೆಯಿಂದ ಆಲ್ ದಿ ಬೆಸ್ಟ್’ ಎಂದು ಆಮೀರ್ ಖಾನ್ ಶುಭ ಹಾರೈಸಿದ್ದಾರೆ.

‘ಧುರಂಧರ್: ದಿ ರಿವೆಂಜ್’ ಚಿತ್ರವು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಚಿತ್ರದ ರನ್‌ಟೈಮ್ (ಅವಧಿ) ಸ್ವಲ್ಪ ಹೆಚ್ಚಿದ್ದರೂ ಸಹ, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಿನಿಮಾ ಯಶಸ್ವಿಯಾಗಿದೆ ಎಂದು ಟ್ರೇಡ್ ಅನಾಲಿಸ್ಟ್‌ಗಳು ಅಭಿಪ್ರಾಯಪಟ್ಟಿದ್ದಾರೆ. ಮೊದಲ ಭಾಗದ ಜನಪ್ರಿಯತೆ ಎರಡನೇ ಭಾಗಕ್ಕೆ ದೊಡ್ಡ ಮಟ್ಟದ ಮೈಲೇಜ್ ನೀಡಿದೆ.

ಇದನ್ನೂ ಓದಿ: ಶಿವಣ್ಣ ಬೆನ್ನು ತಟ್ಟಿದ್ದಕ್ಕೆ ಖುಷಿಯಾದ ‘ಧುರಂಧರ್ 2’ ನಿರ್ದೇಶಕ ಆದಿತ್ಯ ಧರ್

ಆಮಿರ್ ಖಾನ್ ಅವರ ವೃತ್ತಿಜೀವನದ ಬಗ್ಗೆ ನೋಡುವುದಾದರೆ, ಅವರು ನಿರ್ಮಾಣ ಮಾಡುತ್ತಿರುವ ‘ಲಾಹೋರ್ 1947’ ಸಿನಿಮಾದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ. ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ಈ ಚಿತ್ರವು ಆಗಸ್ಟ್ 13ರಂದು ತೆರೆಕಾಣಲಿದೆ. ಈ ಚಿತ್ರದಲ್ಲಿ ಸನ್ನಿ ಡಿಯೋಲ್, ಶಬಾನಾ ಆಜ್ಮಿ, ಪ್ರೀತಿ ಜಿಂಟಾ, ಅಲಿ ಫಜಲ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪುರುಷರಿಗಿಂತ ದುರ್ಬಲರೆಂದು ಭಾವಿಸುತ್ತಾರೆ: ಋತುಚಕ್ರ ರಜೆ ಆದೇಶ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಮಹಿಳೆಯರು

ಬೆಂಗಳೂರು, ಮಾರ್ಚ್​ 26: ರಾಜ್ಯ ಸರ್ಕಾರ ಮಹಿಳಾ ನೌಕರರ ಆರೋಗ್ಯ ಮತ್ತು ಕಾರ್ಯದಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಋತುಚಕ್ರ ರಜೆ (Menstrual Leave) ಸೌಲಭ್ಯವನ್ನು ನೀಡಿದೆ. ಈ ಬಗ್ಗೆ ಇತ್ತೀಚೆಗೆ ಸರ್ಕಾರಿ ಪುರುಷ ನೌಕರರು ವಿರೋಧ ವ್ಯಕ್ತಪಡಿಸಿದ್ದರು. ಈ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರದ ಮೂಲಕ ಮನವಿ ಮಾಡಲಾಗಿತ್ತು. ಈ ಬೆನ್ನಲ್ಲೇ ಇದೀಗ ಅಚ್ಚರಿ ಎಂಬಂತೆ ಋತುಚಕ್ರ ರಜೆ ಪ್ರಶ್ನಿಸಿ ವಿವಿಧ ಕಂಪನಿಗಳ ಮಹಿಳಾ ಉದ್ಯೋಗಿಗಳಿಂದಲೇ ಹೈಕೋರ್ಟ್‌ಗೆ (High Court) ರಿಟ್ ಅರ್ಜಿ ಸಲ್ಲಿಸಲಾಗಿದ್ದು, ಆದೇಶ ರದ್ದುಪಡಿಸುವಂತೆ ಮನವಿ ಮಾಡಲಾಗಿದೆ.

ಋತುಚಕ್ರದ ಕಾರಣಕ್ಕೆ ಕಡ್ಡಾಯ ರಜೆ ಅಗತ್ಯ

ಕಡ್ಡಾಯ ಋತುಚಕ್ರ ರಜೆ ಆದೇಶ ರದ್ದುಪಡಿಸುವಂತೆ ಶ್ರೀಮತಿ ವರ್ಷಾ ಸೇರಿ ವಿವಿಧ ಕಂಪನಿಗಳ 17 ಮಹಿಳೆಯರಿಂದ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಲಾಗಿದೆ. ರಾಜ್ಯ ಸರ್ಕಾರದ ಆದೇಶ ಸಮಾನತೆ ಹಕ್ಕಿಗೆ ವಿರುದ್ಧವಾಗಿದೆ. ಮಹಿಳಾ ಉದ್ಯೋಗಿಗಳ ನೇಮಕಕ್ಕೆ ಕಂಪನಿಗಳು ಹಿಂದೇಟು ಹಾಕುತ್ತಾರೆ. ಮಹಿಳೆಯರು ಪುರುಷರಿಗಿಂತ ದುರ್ಬಲರೆಂದು ಭಾವಿಸುತ್ತಾರೆ. ಹೀಗಾಗಿ ಋತುಚಕ್ರದ ಕಾರಣಕ್ಕೆ ಕಡ್ಡಾಯ ರಜೆ ನೀಡುವ ಅಗತ್ಯವಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಋತುಚಕ್ರ ರಜೆಗೆ ಪುರುಷ ನೌಕರರ ವಿರೋಧ, ಮರು ಪರಿಶೀಲನೆಗಾಗಿ ಸರ್ಕಾರಕ್ಕೆ ಪತ್ರ: ಇದಕ್ಕಿದೆ ಹಲವು ಕಾರಣ!

ಸರ್ಕಾರದ ಕ್ರಮ ಲಿಂಗ ತಾರತಮ್ಯಗೆ ಎಡೆ ಮಾಡಿಕೊಡುತ್ತದೆ. ಪ್ರತಿ ಮಹಿಳೆಗೂ ಋತುಚಕ್ರ ರಜೆ ಬೇಕೆಂದು ಸರ್ಕಾರ ಊಹೆ ಮಾಡಿದೆ. ನೀತಿ ರೂಪಿಸುವಾಗ ಸರ್ಕಾರ ಮಹಿಳೆಯರ ಅಭಿಪ್ರಾಯ ಪಡೆದಿಲ್ಲ. ಕಡ್ಡಾಯ ರಜೆಯಿಂದ ಸ್ಪರ್ಧಾತ್ಮಕ ವೃತ್ತಿಜೀವನದಲ್ಲಿ ಮಹಿಳೆಯರಿಗೆ ಹಿನ್ನಡೆ ಉಂಟಾಗಲಿದೆ.

ಇದನ್ನೂ ಓದಿ: ಋತುಚಕ್ರ ರಜೆ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆಗೆ ತಾತ್ಕಾಲಿಕ ಮಾರ್ಪಾಡು ಮಾಡಿದ ಹೈಕೋರ್ಟ್

ಉದ್ಯೋಗದಾತರಿಗೆ ಹೊರೆ ಹೆಚ್ಚುತ್ತದೆ ಮತ್ತು ದಕ್ಷತೆ ಕಡಿಮೆಯಾಗುತ್ತದೆ. ಮಹಿಳೆಯರ ಸಬಲೀಕರಣಕ್ಕೂ ಋತುಚಕ್ರ ರಜೆ ಅಡ್ಡಿಯಾಗುತ್ತದೆ. ಹೀಗಾಗಿ ಕಡ್ಡಾಯ ಋತುಚಕ್ರ ರಜೆ ಆದೇಶ ರದ್ದುಪಡಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತೆಲುಗು ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ರಾಮ್ ಗೋಪಾಲ್ ವರ್ಮಾ

ರಾಮ್ ಗೋಪಾಲ್ ವರ್ಮಾ (Ram Gopal Varma) ಒಂದು ಕಾಲದ ಭಾರತದ ಸ್ಟಾರ್ ಸಿನಿಮಾ ನಿರ್ದೇಶಕ. ಸಿನಿಮಾ ನಿರ್ದೇಶನದಲ್ಲಿ ಹೊಸ ಮಾದರಿ ಹಾಕಿಕೊಟ್ಟ ನಿರ್ದೇಶಕ. ರಾಮ್ ಗೋಪಾಲ್ ವರ್ಮಾ ಹಾದಿ ಹಿಡಿದು ಬಂದ ಹಲವರು ಇಂದು ಸ್ಟಾರ್ ನಿರ್ದೇಶಕರುಗಳಾಗಿದ್ದಾರೆ. ಆದರೆ ಕಳೆದ ಕೆಲ ವರ್ಷಗಳಿಂದ ರಾಮ ಗೋಪಾಲ್ ವರ್ಮಾ ಸಿನಿಮಾಗಳಿಗಿಂತಲೂ ವಿವಾದಗಳಿಂದ, ಟ್ವೀಟ್​​ಗಳಿಂದ, ಸಂದರ್ಶನಗಳಿಂದ ಮಾತ್ರವೇ ಸದ್ದು, ಸುದ್ದಿ ಮಾಡುತ್ತಿದ್ದಾರೆ. ಆದರೆ ಇದೀಗ ವರ್ಮಾ, ಹೊಸ ಘೋಷಣೆ ಮಾಡಿದ್ದು, ತಾವು ತೆಲುಗು ಚಿತ್ರರಂಗವನ್ನು ತ್ಯಜಿಸುತ್ತಿರುವುದಾಗಿ ಘೋಷಿಸಿದ್ದಾರೆ.

ಗಲಾಟ ಪ್ಲಸ್ ಯೂಟ್ಯೂಬ್ ಚಾನೆಲ್ಲಿನ ಸಂದರ್ಶನಗಳಲ್ಲಿ ಈ ಬಗ್ಗೆ ಮಾತನಾಡಿರುವ ರಾಮ್ ಗೋಪಾಲ್ ವರ್ಮಾ, ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಚಿತ್ರವು ಬಿಡುಗಡೆಯಾದ ನಂತರ ತಮ್ಮ ಆಲೋಚನಾ ಕ್ರಮವೇ ಬದಲಾಗಿದೆ ಎಂದಿದ್ದಾರೆ. ಈ ಚಿತ್ರದ ಮೇಕಿಂಗ್ ಮತ್ತು ರಿಯಲಿಸ್ಟಿಕ್ ಶೈಲಿಯನ್ನು ಕಂಡು ಬೆರಗಾಗಿರುವ ಅವರು, ‘ಈ ಚಿತ್ರವು ಭಾರತೀಯ ಚಿತ್ರರಂಗದ ಹಳೆಯ ಸೂತ್ರಗಳನ್ನು ಧೂಳೀಪಟ ಮಾಡಿದೆ’ ಎಂದು ಬಣ್ಣಿಸಿದ್ದಾರೆ.

ಅತಿರಂಜಿತ ಆಕ್ಷನ್, ಅತಿಯಾದ ಹೀರೋಗಿರಿ ಇರುವ ಸಿನಿಮಾಗಳ ಕಾಲ ಮುಗಿದಿದೆ ಎಂದು ಆರ್​​ಜಿವಿ ಅಭಿಪ್ರಾಯ ಪಟ್ಟಿದ್ದು, ‘ನಾನು ಈ ಹಿಂದೆ ಮಾಡಿದ ‘ಗಾಡ್ ಫಾದರ್’ ಮಾದರಿಯ ಸಿನಿಮಾಗಳು ಈಗ ಈ ಹೊಸ ತಲೆಮಾರಿನ ಸಿನಿಮಾಗಳ ಮುಂದೆ ಮಂಕಾಗಿ ಕಾಣುತ್ತಿವೆ’ ಎಂದು ಅವರು ಒಪ್ಪಿಕೊಂಡಿದ್ದಾರೆ. “ನಾನು ಈ ಹಿಂದೆ ಮಾಡಿದ ಸಿನಿಮಾಗಳನ್ನೆಲ್ಲಾ ಮರೆತು, ಧುರಂಧರ್ ನಂತರದ ಕಾಲಘಟ್ಟಕ್ಕೆ ತಕ್ಕಂತೆ ಹೊಸದಾಗಿ ಹುಟ್ಟಿದ ನಿರ್ದೇಶಕನಂತೆ ಕೆಲಸ ಮಾಡಲು ಬಯಸುತ್ತೇನೆ” ಎಂದಿದ್ದಾರೆ. ಅವರ ಪ್ರಕಾರ, ಈಗಿನ ಪ್ರೇಕ್ಷಕರು ಬುದ್ಧಿವಂತರಾಗಿದ್ದು, ಅವರಿಗೆ ಹಳೆಯ ಮಾದರಿಯ ಸಿನಿಮಾಗಳು ಇಷ್ಟವಾಗುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ:‘ಧುರಂಧರ್ 2‘, ‘ಕೆಜಿಎಫ್ 2’ ಚಿತ್ರ ಟೀಕಿಸಿದ ಬಾಲಿವುಡ್ ನಟ

ಅದೇ ಸಂದರ್ಶನದಲ್ಲಿ ಮುಂದೆ ಮಾತನಾಡುತ್ತಾ, ತಾವು ಇನ್ನು ಮುಂದೆ ತೆಲುಗು ಸಿನಿಮಾಗಳನ್ನು ಮಾಡುವುದಿಲ್ಲ ಎಂದಿರುವ ಆರ್​​ಜಿವಿ, ಇದೇ ಕಾರಣಕ್ಕೆ ಹೈದರಾಬಾದ್ ಬಿಟ್ಟು ಮುಂಬೈಗೆ ಬಂದಿರುವುದಾಗಿ ಹೇಳಿದ್ದಾರೆ. ಆರ್​​ಜಿವಿ ಅವರು ಪ್ರಸ್ತುತ ಸಿದ್ಧಪಡಿಸುತ್ತಿರುವ ‘ಸಿಂಡಿಕೇಟ್’ ಹೆಸರಿನ ಸಿನಿಮಾ ನಿರ್ದೇಶನ ಮಾಡುವ ಉಮೇದಿನಲ್ಲಿದ್ದು, ಇದು ಜಾಗತಿಕ ಮಟ್ಟದ ಕಥಾಹಂದರ ಹೊಂದಿದ್ದು, ಅದನ್ನು ಹಿಂದಿ ಮತ್ತು ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ರೂಪಿಸಲು ಅವರು ನಿರ್ಧರಿಸಿದ್ದಾರೆ. ಇದೇ ಕಾರಣಕ್ಕೆ ಅವರು ಹೈದರಾಬಾದ್​​ನಿಂದ ಮುಂಬೈಗೆ ವಾಸ್ತವ್ಯ ಬದಲಾಯಿಸಿದ್ದಾರಂತೆ.

ತಮ್ಮದೇ ಆದ ಹಳೆಯ ಹಿಟ್ ಚಿತ್ರಗಳು ಈಗಿನ ‘ಧುರಂಧರ್’ ಅಂತಹ ಸಿನಿಮಾಗಳ ಮುಂದೆ ಟಿವಿ ಸೀರಿಯಲ್‌ನಂತೆ ಕಾಣುತ್ತವೆ ಎಂದು ಅವರು ನೇರವಾಗಿ ಹೇಳಿದ್ದು, ತಮ್ಮ ಸಂಪೂರ್ಣ ಗಮನ ಈಗ ‘ಸಿಂಡಿಕೇಟ್’ ಸಿನಿಮಾ ಮಾಡುವುದರ ಮೇಲಿದೆ ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version