ಹೀಟ್ ಸ್ಟ್ರೋಕ್ ಅಪಾಯ ಹೆಚ್ಚಳ: ತಡೆಗಟ್ಟಲು ಇಲ್ಲಿದೆ ಸಿಂಪಲ್ ಟಿಪ್ಸ್ – Kannada News | How to Prevent Heat Stroke During Heatwaves: Doctor Advice

ದೇಶದ ಹಲವೆಡೆ ಉಷ್ಣಾಂಶ ದಿನೇ ದಿನೇ ಏರುತ್ತಿರುವ ಹಿನ್ನೆಲೆ, ಹೀಟ್ ಸ್ಟ್ರೋಕ್ (Heat Stroke) ಎಂಬ ಗಂಭೀರ ಆರೋಗ್ಯ ಸಮಸ್ಯೆಯ ಅಪಾಯವೂ ಹೆಚ್ಚುತ್ತಿದೆ. ತೀವ್ರ ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆಯುವವರು ಈ ಸಮಸ್ಯೆಗೆ ಹೆಚ್ಚು ಒಳಗಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಹಾಗಾಗಿ ಈ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹಾಗಾದರೆ ಹೀಟ್ ಸ್ಟ್ರೋಕ್ ಎಂದರೇನು, ಲಕ್ಷಣಗಳು ಯಾವ ರೀತಿ ಕಂಡು ಬರುತ್ತದೆ, ಇದನ್ನು ತಡೆಗಟ್ಟುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೀಟ್ ಸ್ಟ್ರೋಕ್ ಎಂದರೇನು?

ಹೀಟ್ ಸ್ಟ್ರೋಕ್ ಎಂದರೆ ದೇಹದ ತಾಪಮಾನವು ಅತಿಯಾಗಿ ಏರಿಕೆ ಆಗಿ, ದೇಹವು ಅದನ್ನು ನಿಯಂತ್ರಿಸಲು ಸಾಧ್ಯವಾಗದ ಸ್ಥಿತಿಯಾಗಿದೆ. ಸಾಮಾನ್ಯವಾಗಿ ತೀವ್ರ ಬಿಸಿಲಿನಲ್ಲಿ ಅಥವಾ ಉಷ್ಣ ವಾತಾವರಣದಲ್ಲಿ ಹೆಚ್ಚು ಕಾಲ ಇರುವುದರಿಂದ ಈ ಸಮಸ್ಯೆ ಉಂಟಾಗುತ್ತದೆ.

ಪ್ರಮುಖ ಲಕ್ಷಣಗಳು:

ದೇಹದ ತಾಪಮಾನ ಏರಿಕೆ, ಚರ್ಮವು ಬಿಸಿ ಮತ್ತು ಒಣಗಿರುವುದು, ತಲೆ ಸುತ್ತು, ತಲೆನೋವು, ದುರ್ಬಲತೆ ಮತ್ತು ಗಾಬರಿ ಪ್ರಮುಖ ಲಕ್ಷಣಗಳಾಗಿವೆ. ಕೆಲವರಿಗೆ ವಾಂತಿ, ಅಸ್ವಸ್ಥತೆ ಮತ್ತು ಹೃದಯ ಬಡಿತ ವೇಗವಾಗಬಹುದು. ಗಂಭೀರ ಪರಿಸ್ಥಿತಿಯಲ್ಲಿ ವ್ಯಕ್ತಿ ಪ್ರಜ್ಞೆ ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ.

ಇದನ್ನೂ ಓದಿ: ಬದಲಾಗುತ್ತಿರುವ ಹವಾಮಾನದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿದೆ ಆಯುರ್ವೇದ ತಜ್ಞರು ನೀಡಿದ ಸಲಹೆ

ಯಾರು ಹೆಚ್ಚು ಅಪಾಯದಲ್ಲಿದ್ದಾರೆ?

ಮಕ್ಕಳು, ವೃದ್ಧರು ಮತ್ತು ಹೊರಗಡೆ ಕೆಲಸ ಮಾಡುವವರು ಹೀಟ್ ಸ್ಟ್ರೋಕ್‌ಗೆ ಹೆಚ್ಚು ಒಳಗಾಗುವ ಸಾಧ್ಯತೆ ಇದೆ. ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮತ್ತು ಕಡಿಮೆಯಾಗುತ್ತಿರುವ ಹಸಿರು ಪ್ರದೇಶಗಳು ಈ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ.

ತಡೆಗಟ್ಟುವ ಕ್ರಮಗಳು:

ಹೀಟ್ ಸ್ಟ್ರೋಕ್ ತಪ್ಪಿಸಲು ಕೆಲವು ಸರಳ ಕ್ರಮಗಳನ್ನು ಪಾಲಿಸಬಹುದು. ಮಧ್ಯಾಹ್ನದ ತೀವ್ರ ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಹೊರಗೆ ಹೋಗುವಾಗ ಹಗುರ ಮತ್ತು ಸಡಿಲ ಬಟ್ಟೆಗಳನ್ನು ಧರಿಸಬೇಕು, ತಲೆಯನ್ನು ಮುಚ್ಚಿಕೊಳ್ಳುವುದು ಉತ್ತಮ. ದಿನಪೂರ್ತಿ ಸಾಕಷ್ಟು ನೀರು ಕುಡಿಯಬೇಕು. ಎಳನೀರು, ನಿಂಬೆಹಣ್ಣಿನ ಜ್ಯೂಸ್ ಮತ್ತು ಮಜ್ಜಿಗೆ ದೇಹವನ್ನು ತಂಪಾಗಿಡಲು ಸಹಕಾರಿ. ಹೆಚ್ಚು ಸಮಯ ಬಿಸಿಲಿನಲ್ಲಿ ಕೆಲಸ ಮಾಡುವವರು ಮಧ್ಯಂತರದಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕು. ಬಿಸಿಲಿನ ಸಮಯದಲ್ಲಿ ಹಗುರವಾದ ಆಹಾರ ಸೇವಿಸುವುದು ಉತ್ತಮ. ತೈಲಯುಕ್ತ ಮತ್ತು ಮಸಾಲೆಯುಕ್ತ ಆಹಾರಗಳನ್ನು ತಪ್ಪಿಸಬೇಕು. ಮನೆಗೆ ಬಂದ ತಕ್ಷಣ ತಣ್ಣೀರನ್ನು ಕುಡಿಯದೆ, ದೇಹ ತಂಪಾಗಲು ಸ್ವಲ್ಪ ಸಮಯ ನೀಡುವುದು ಉತ್ತಮ. ಲಕ್ಷಣಗಳು ಗಂಭೀರವಾಗಿ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಸಮಯಕ್ಕೆ ಸರಿಯಾಗಿ ಎಚ್ಚರಿಕೆ ವಹಿಸಿದರೆ ಹೀಟ್ ಸ್ಟ್ರೋಕ್‌ನಂತಹ ಅಪಾಯಕಾರಿ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

100 ಕೋಟಿ ರೂ. ಮೌಲ್ಯದ ಆಸ್ತಿ ಬಚ್ಚಿಟ್ಟಿದ್ದಾರಾ ನಟ ವಿಜಯ್? ಏನಿದು ಹೊಸ ಆರೋಪ? – Kannada News | Over Rs 100 Crore Mismatch In TVK Chief Vijay election Affidavit

ಚೆನ್ನೈ, ಏಪ್ರಿಲ್ 20: ಟಿವಿಕೆ ಮುಖ್ಯಸ್ಥ ವಿಜಯ್ (Vijay) ತಮ್ಮ ನಾಮಪತ್ರದಲ್ಲಿ ತಮ್ಮ ಆಸ್ತಿ ವಿವರಗಳನ್ನು ಮರೆಮಾಡಿದ್ದಾರೆ ಎಂದು ಆರೋಪಿಸಿ ಪೆರಂಬೂರು ಮತದಾರ ವಿಘ್ನೇಶ್ ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದಾರೆ. 2 ಕ್ಷೇತ್ರಗಳಲ್ಲಿ ಚುನಾವಣೆಗೆ ನಿಂತಿರುವ ವಿಜಯ್ ಎರಡೂ ಕಡೆ ಸಲ್ಲಿಸಿದ ಅಫಿಡವಿಟ್​ನಲ್ಲಿ ಘೋಷಿಸಿದ ಆದಾಯದಲ್ಲಿ 105 ಕೋಟಿ ರೂ. ವ್ಯತ್ಯಾಸ ಕಂಡುಬಂದಿದೆ. ಟಿವಿಕೆ ಮುಖ್ಯಸ್ಥ ಹಾಗೂ ನಟ ವಿಜಯ್ ಅವರ ಚುನಾವಣಾ ಅಫಿಡವಿಟ್‌ಗಳಲ್ಲಿ 100 ಕೋಟಿ ರೂ.ಗಳಿಗೂ ಹೆಚ್ಚು ವ್ಯತ್ಯಾಸವಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯಿಸುವಂತೆ ಮದ್ರಾಸ್ ಹೈಕೋರ್ಟ್ ಆದಾಯ ತೆರಿಗೆ ಇಲಾಖೆಗೆ ಆದೇಶಿಸಿದೆ.

ಡಿಎಂಕೆಯ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಆಡಳಿತವಿರುವ ತಮಿಳುನಾಡು ರಾಜ್ಯದಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ವಿಜಯ್ ಮತ್ತು ಅವರ ಹೊಸ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ)ಗೆ ಹೈಕೋರ್ಟ್‌ನ ಈ ಆದೇಶದಿಂದ ಭಾರೀ ಹಿನ್ನಡೆಯಾಗಿದೆ.

ಇದನ್ನೂ ಓದಿ: ತಮಿಳುನಾಡಲ್ಲಿ ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು

ತಮಿಳುನಾಡು ಚುನಾವಣೆಯಲ್ಲಿ ತಿರುಚ್ಚಿ ಮತ್ತು ಪೆರಂಬೂರು ಎಂಬ 2 ಕ್ಷೇತ್ರಗಳಿಂದ ಸ್ಪರ್ಧಿಸಲು ವಿಜಯ್ ಅರ್ಜಿಗಳನ್ನು ಸಲ್ಲಿಸಿದ್ದರು. ಪೆರಂಬೂರಿನ ಮತದಾರರೊಬ್ಬರು ನ್ಯಾಯಾಲಯದ ಮೊರೆ ಹೋಗಿ ಎರಡು ಸ್ಥಾನಗಳಿಗೆ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ವಿಜಯ್ ಅವರ ಆದಾಯದಲ್ಲಿ ಹೊಂದಾಣಿಕೆಯಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ತಿರುಚ್ಚಿ ಸ್ಥಾನಕ್ಕೆ ಸಲ್ಲಿಸಿದ ವಿಜಯ್ ಅವರ ಅಫಿಡವಿಟ್​​ನಲ್ಲಿ 220.15 ಕೋಟಿ ರೂ. ಆದಾಯವನ್ನು ತೋರಿಸಿದ್ದರೆ, ಇನ್ನೊಂದು ಸ್ಥಾನಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ 115.13 ಕೋಟಿ ರೂ. ಆದಾಯವಿದೆ ಎಂದು ದಾಖಲೆ ನೀಡಲಾಗಿದೆ. ಇವೆರಡೂ ಆದಾಯದಲ್ಲಿ 105 ಕೋಟಿ ರೂ.ಗಳ ವ್ಯತ್ಯಾಸವಿದೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಅಭಿಮಾನಿ ಎಸೆದ ಹೂವಿನ ಮಾಲೆಯನ್ನು ಬಾಂಬ್ ಎಂದು ತಿಳಿದು ಓಡಿದ ದಳಪತಿ ವಿಜಯ್

ನಟ-ರಾಜಕಾರಣಿಯಾಗಿರುವ ವಿಜಯ್ ತಮಿಳುನಾಡು ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಯಲ್ಲಿ ತಮ್ಮ ಚೊಚ್ಚಲ ಪ್ರವೇಶ ಮಾಡುವ ಸಾಧ್ಯತೆಯಿದೆ. ತಿರುಚಿರಾಪಳ್ಳಿ ಪೂರ್ವದಲ್ಲಿ ವಿಜಯ್ ಡಿಎಂಕೆಯ ಇನಿಗೋ ಎಸ್. ಇರುದಯರಾಜ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಪೆರಂಬೂರಿನಲ್ಲಿ, ಅವರು ಡಿಎಂಕೆ ಶಾಸಕ ಆರ್.ಡಿ ಶೇಖರ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 4ರಂದು ಮತ ಎಣಿಕೆ ನಡೆಯಲಿದೆ. ಕಾಂಗ್ರೆಸ್, ಡಿಎಂಡಿಕೆ ಮತ್ತು ವಿಸಿಕೆ ಒಳಗೊಂಡ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ, ಬಿಜೆಪಿ ಮತ್ತು ಪಿಎಂಕೆ ಮೈತ್ರಿಕೂಟಗಳನ್ನು ಹೊಂದಿರುವ ಎಐಎಡಿಎಂಕೆ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ನಡುವೆ ಪ್ರಮುಖ ಸ್ಪರ್ಧೆ ಏರ್ಪಡಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

WhatsApp Plus: ಬರುತ್ತಿದೆ ಹೊಸ ವಾಟ್ಸ್ಆ್ಯಪ್ ಪ್ಲಸ್: ಇದಕ್ಕೆ ಹಣ ಪಾವತಿಸಬೇಕೇ?, ಏನೆಲ್ಲ ಫೀಚರ್ಸ್ ಇದೆ ನೋಡಿ – Kannada News | WhatsApp is introducing a premium subscription service called WhatsApp Plus

ಬೆಂಗಳೂರು (ಏ. 20): ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp), ಈಗ ವಾಟ್ಸ್​ಆ್ಯಪ್ ಪ್ಲಸ್ ಎಂಬ ಹೊಸ ಪ್ರೀಮಿಯಂ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಪಾವತಿಸಿದ ಚಂದಾದಾರಿಕೆಯಾಗಲಿದೆ, ಆದರೆ ಒಳ್ಳೆಯ ಸುದ್ದಿ ಎಂದರೆ ಇದು ಮೂಲ ಅಪ್ಲಿಕೇಶನ್ ಬಳಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಹೊಸ ಯೋಜನೆಯಿಂದಲೂ ಸಂದೇಶ ಕಳುಹಿಸುವಿಕೆ, ಕರೆ ಮಾಡುವಿಕೆ ಮತ್ತು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನಂತಹ ವೈಶಿಷ್ಟ್ಯಗಳು ಬಳಕೆದಾರರಿಗೆ ಉಚಿತವಾಗಿಯೇ ಇರುತ್ತವೆ. ಇದರರ್ಥ ಸಾಮಾನ್ಯ ಬಳಕೆದಾರರು ದೈನಂದಿನ ಕೆಲಸಗಳಿಗೆ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಅಪ್ಲಿಕೇಶನ್‌ನಲ್ಲಿ ಸ್ವಲ್ಪ ಹೆಚ್ಚಿನ ನಿಯಂತ್ರಣ ಮತ್ತು ಕಸ್ಟಮೈಸೇಶನ್ ಬಯಸುವವರಿಗೆ ವಾಟ್ಸ್​ಆ್ಯಪ್ ಪ್ಲಸ್ ವಿಶೇಷವಾಗಿ ಲಭ್ಯವಿದೆ.

ವಾಟ್ಸ್​ಆ್ಯಪ್ ಪ್ಲಸ್​ನಲ್ಲಿ ಏನೆಲ್ಲಾ ವಿಶೇಷತೆಗಳಿವೆ?

ಈ ಚಂದಾದಾರಿಕೆಯು ಬಳಕೆದಾರರಿಗೆ ಸಾಮಾನ್ಯ ಬಳಕೆದಾರರು ಹೊಂದಿರದ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳಿಗೆ ಪ್ರವೇಶವನ್ನು ನೀಡುತ್ತದೆ. ಇವುಗಳಲ್ಲಿ ವಿಶೇಷ ಸ್ಟಿಕ್ಕರ್‌ಗಳು, ವಿಭಿನ್ನ ಥೀಮ್‌ಗಳು ಮತ್ತು ಅಪ್ಲಿಕೇಶನ್‌ನ ಐಕಾನ್ ಅನ್ನು ಬದಲಾಯಿಸುವ ಆಯ್ಕೆ ಸೇರಿವೆ, ಇದು ನಿಮ್ಮ ವಾಟ್ಸ್​ಆ್ಯಪ್​ನ ನೋಟವನ್ನು ಸಂಪೂರ್ಣವಾಗಿ ಬದಲಾಯಿಸಲು ಅನುವು ಮಾಡಿಕೊಡುತ್ತದೆ.

ಹೆಚ್ಚುವರಿಯಾಗಿ, ನೀವು ಬಹು ಚಾಟ್‌ಗಳನ್ನು ಪಿನ್ ಮಾಡಲು ಸಾಧ್ಯವಾಗುತ್ತದೆ, ಪ್ರಮುಖ ಸಂಭಾಷಣೆಗಳನ್ನು ಯಾವಾಗಲೂ ಮೇಲ್ಭಾಗದಲ್ಲಿ ಗೋಚರಿಸುವಂತೆ ಮಾಡುತ್ತದೆ. ಬಳಕೆದಾರರು ತಮ್ಮ ನೆಚ್ಚಿನ ಕಾಂಟೆಕ್ಟ್​ಗಳಿಗೆ ವಿಭಿನ್ನ ರಿಂಗ್‌ಟೋನ್‌ಗಳು ಮತ್ತು ನೋಟಿಫಿಕೇಷನ್ ಅನ್ನು ಹೊಂದಿಸಲು ಸಾಧ್ಯವಾಗುತ್ತದೆ, ಇದು ಚಾಟಿಂಗ್ ಅನುಭವವನ್ನು ಹೆಚ್ಚು ವೈಯಕ್ತಿಕಗೊಳಿಸುತ್ತದೆ.

ವಾಟ್ಸ್​ಆ್ಯಪ್ ಪ್ಲಸ್​ನಲ್ಲಿ ಯಾವ ಬಳಕೆದಾರರು ಈ ವೈಶಿಷ್ಟ್ಯವನ್ನು ಪಡೆಯುತ್ತಾರೆ?

ಈ ವೈಶಿಷ್ಟ್ಯವನ್ನು ಪ್ರಸ್ತುತ ಸೀಮಿತ ಸಂಖ್ಯೆಯ ಬಳಕೆದಾರರೊಂದಿಗೆ ಪರೀಕ್ಷಿಸಲಾಗುತ್ತಿದೆ, ಮುಖ್ಯವಾಗಿ ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ನಲ್ಲಿ. ಇದನ್ನು ಭವಿಷ್ಯದಲ್ಲಿ ಕ್ರಮೇಣ ಇತರ ಬಳಕೆದಾರರಿಗೆ ವಿಸ್ತರಿಸಬಹುದು. ಈ ವೈಶಿಷ್ಟ್ಯವು ವಾಟ್ಸ್​ಆ್ಯಪ್ ಮೆಸೆಂಜರ್‌ನಲ್ಲಿ ಮಾತ್ರ ಲಭ್ಯವಿದೆ, ಬ್ಯುಸಿನೆಸ್ ಅಪ್ಲಿಕೇಶನ್‌ನಲ್ಲಿ ಅಲ್ಲ ಎಂಬುದು ಗಮನಿಸಬೇಕಾದ ಸಂಗತಿ.

Vivo T5 Pro 5G: ಭಾರತದಲ್ಲಿ ಬರೋಬ್ಬರಿ 9,020mAh ಬ್ಯಾಟರಿಯ ಹೊಸ ಸ್ಮಾರ್ಟ್​​ಫೋನ್ ಬಿಡುಗಡೆ: ಬೆಲೆ ಕೇವಲ..

ವಾಟ್ಸ್​ಆ್ಯಪ್ ಪ್ಲಸ್ ಚಂದಾದಾರಿಕೆ ಹೇಗೆ ಕೆಲಸ ಮಾಡುತ್ತದೆ?

ವಾಟ್ಸ್​ಆ್ಯಪ್ ಪ್ಲಸ್ ಮಾಸಿಕ ಚಂದಾದಾರಿಕೆಯಾಗಿದ್ದು, ಬಳಕೆದಾರರು ತಮ್ಮ ಅಪ್ಲಿಕೇಶನ್‌ನ ಸೆಟ್ಟಿಂಗ್‌ಗಳಲ್ಲಿ ಇದನ್ನು ಸಕ್ರಿಯಗೊಳಿಸಬಹುದು. ಒಮ್ಮೆ ಸಕ್ರಿಯಗೊಳಿಸಿದ ನಂತರ, ಬಳಕೆದಾರರು ಅದನ್ನು ರದ್ದುಗೊಳಿಸುವವರೆಗೆ ಅದು ಪ್ರತಿ ತಿಂಗಳು ಸ್ವಯಂಚಾಲಿತವಾಗಿ ನವೀಕರಿಸಲ್ಪಡುತ್ತದೆ. ಪಾವತಿಯನ್ನು ಆಪ್ ಸ್ಟೋರ್ ಮೂಲಕ ಮಾಡಲಾಗುತ್ತದೆ ಮತ್ತು ಎಲ್ಲಾ ವೈಶಿಷ್ಟ್ಯಗಳನ್ನು ಒಂದೇ ಖಾತೆಯಿಂದ ನಿರ್ವಹಿಸಲಾಗುತ್ತದೆ.

ವಾಟ್ಸ್​ಆ್ಯಪ್ ಪ್ಲಸ್ ಬೆಲೆ ಎಷ್ಟು?

ಇದರ ಅಧಿಕೃತ ಬೆಲೆಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ, ಆದರೆ ಆರಂಭಿಕ ಪರೀಕ್ಷೆಯು ಯುರೋಪ್‌ನಲ್ಲಿ ತಿಂಗಳಿಗೆ ಸುಮಾರು €2.49 ಎಂದು ಸೂಚಿಸುತ್ತದೆ. ಭಾರತದಲ್ಲಿ, ಬೆಲೆ ಕಡಿಮೆಯಾಗಬಹುದು, ಅಂದಾಜು €200-250 ಇರಬಹುದು.

ವಾಟ್ಸ್​ಆ್ಯಪ್ ಪ್ಲಸ್ ಅನ್ನು ಅಧಿಕೃತ ಅಪ್ಲಿಕೇಶನ್ ಮೂಲಕ ಮಾತ್ರ ಬಳಸಬಹುದು. ಅನಧಿಕೃತ ಅಥವಾ ಮಾರ್ಪಡಿಸಿದ ಆವೃತ್ತಿಗಳನ್ನು ಬಳಸುವ ಬಳಕೆದಾರರನ್ನು ತಾತ್ಕಾಲಿಕ ಅಥವಾ ಶಾಶ್ವತವಾಗಿ ಬ್ಲಾಕ್ ಮಾಡಬಹುದು. ತಮ್ಮ ಚಾಟಿಂಗ್ ಅನುಭವವನ್ನು ಹೆಚ್ಚಿಸಲು ಬಯಸುವ ಬಳಕೆದಾರರಿಗೆ ವಾಟ್ಸ್​ಆ್ಯಪ್ ಪ್ಲಸ್ ಒಂದು ಹೊಸ ಆಯ್ಕೆಯಾಗಿದೆ. ಆದಾಗ್ಯೂ, ನಿಯಮಿತ ಬಳಕೆದಾರರಿಗೆ ಅಪ್ಲಿಕೇಶನ್ ಉಚಿತವಾಗಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:03 pm, Mon, 20 April 26

Source link

ಹೀಟ್ ವೇವ್​ಗೆ ತತ್ತರಿಸಿದ ರಾಯಚೂರು: ಹೈ ಅಲರ್ಟ್ ಘೋಷಣೆ, ರಿಮ್ಸ್‌ನಲ್ಲಿ ಹೈಟೆಕ್ ವಾರ್ಡ್ ಸಿದ್ಧ – Kannada News | Heatwave: 42°C High Alert for Heat Stroke and Health Risks

ರಾಯಚೂರು, ಏಪ್ರಿಲ್​ 20: ಬಿಸಿಲುನಾಡು ರಾಯಚೂರಿನಲ್ಲಿ (raichur) ಸೂರ್ಯನ ಪ್ರತಾಪ ದಿನೇದಿನೇ ಮಿತಿಮೀರುತ್ತಿದೆ. ತಾಪಮಾನ 42 ಡಿಗ್ರಿ ದಾಟುತ್ತಿರುವುದರ ನಡುವೆಯೇ ಈಗ ಬಿಸಿಗಾಳಿ ಅಂದರೆ ಹೀಟ್ ವೇವ್ (Heat Wave) ಜನರ ಜೀವಕ್ಕೆ ಆಪತ್ತನ್ನು ತಂದೊಡ್ಡುತ್ತಿದೆ. ಬಿಸಿಗಾಳಿಯ ಹೊಡೆತಕ್ಕೆ ಜನರು ‘ಹೀಟ್ ಸ್ಟ್ರೋಕ್’ಗೆ ಒಳಗಾಗುವ ಸಾಧ್ಯತೆ ಹೆಚ್ಚಿರುವುದರಿಂದ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಿದೆ. ಪರಿಸ್ಥಿತಿಯನ್ನು ಎದುರಿಸಲು ರಿಮ್ಸ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಕೂಡ ತೆರೆಯಲಾಗಿದೆ.

42 ಡಿಗ್ರಿಯಷ್ಟು ತಾಪಮಾನ ದಾಖಲು: ಹೈ ಅಲರ್ಟ್

ಗಡಿ ಜಿಲ್ಲೆ ರಾಯಚೂರನ್ನು ಬಿಸಿಲು ನಾಡು ಎಂದು ಕರೆಯಲಾಗುತ್ತದೆ. ಪ್ರತಿ ವರ್ಷ ರಾಯಚೂರಿನಲ್ಲಿ ತಾಪಮಾನ ಹೆಚ್ಚಾಗಿ, ಜನರನ್ನ ಕುಗ್ಗಿಸುತ್ತಿದೆ. ಪ್ರತಿ ಏಪ್ರಿಲ್, ಮೇ ತಿಂಗಳಲ್ಲಿ ರಾಯಚೂರಿನ ಜನ ಅಕ್ಷರಶಃ ಬಿಸಿಲ ಬೇಗೆಗೆ ನಲುಗಿ ಹೋಗುತ್ತಾರೆ. ಅದೇ ರೀತಿ ಈ ಬಾರಿಯೂ ಜಿಲ್ಲೆಯಲ್ಲಿ ತಾಪಮಾನ 42 ಡಿಗ್ರಿಯಷ್ಟು ದಾಖಲಾಗುತ್ತಿದೆ. ಆದರೆ ಈ ಬಾರೀ ಅತೀ ಹೆಚ್ಚು ಬಿಸಿಗಾಳಿ ಕೂಡ ಅಬ್ಬರಿಸುತ್ತಿದೆ. ಇದು ತಾಪಮಾನದ ಹೊಡೆತಕ್ಕಿಂತ ಹೆಚ್ಚು ಭಯಾನಕವಾಗಿದೆ. ಇದೇ ಕಾರಣಕ್ಕೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದ್ದು, ಸಾರ್ವಜನಿಕರು ಎಚ್ಚರದಿಂದಿರಲು ಸೂಚಿಸಿದೆ.

ಇದನ್ನೂ ಓದಿ: ಹುಬ್ಬಳ್ಳಿ, ರಾಯಚೂರಲ್ಲಿ ಕುಡಿಯುವ ನೀರಿಗೂ ಪರದಾಟ: ರಸ್ತೆ ತಡೆದು ಪ್ರತಿಭಟನೆ

ಹೀಟ್ ವೇವ್ ಹೆಚ್ಚಾಗುತ್ತಿರುವುದರಿಂದ ಜನರು ಹೈರಾಣಾಗುವಂತೆ ಮಾಡುತ್ತಿದೆ. ಬಿಸಿಲ ಬೇಗೆಗಿಂತಲೂ ಬಿಸಿಗಾಳಿ ಜನರನ್ನ ಕುಗ್ಗಿಸುತ್ತಿದೆ. ಮಧ್ಯಾಹ್ನದ ವೇಳೆ ಹೊರಗಡೆ ಓಡಾಡದಂತೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಬಿಸಿಗಾಳಿಯಿಂದ ಹೀಟ್ ಸ್ಟ್ರೋಕ್ ಆಗುವ ಸಾಧ್ಯತೆ ಇರತ್ತೆ. ಓರ್ವ ವ್ಯಕ್ತಿಗೆ ಬಿಸಿಲಿನಿಂದ ಹೀಟ್ ಸ್ಟ್ರೋಕ್ ಆದರೆ ಪ್ರಾಣಾಪಾಯ ಸಾಧ್ಯತೆ ಕೂಡ ಇರತ್ತೆ.

ಹೀಟ್ ಸ್ಟ್ರೋಕ್ ವಾರ್ಡ್ ಸಿದ್ಧ

ಮೆದುಳಿನ ಮೇಲೆ ತೀರಾ ಗಂಭೀರ ಸಮಸ್ಯೆಯನ್ನು ಉಂಟುಮಾಡತ್ತೆ. ಹೀಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಹೀಟ್ ಸ್ಟ್ರೋಕ್ ವಾರ್ಡ್ ಸಿದ್ಧಪಡಿಸಲಾಗಿದೆ. ಹೀಟ್ ಸ್ಟ್ರೋಕ್ ವಾರ್ಡ್ ಅನ್ನ ಪ್ರತ್ಯೇಕವಾಗಿರಿಸಿ, ಬಿಸಿಲಿನ ಹೊಡೆತದ ಪರಿಣಾಮದಿಂದಾಗಿ ತೀರಾ ಆರೋಗ್ಯ ಸಮಸ್ಯೆ ಎದುರಿಸುವವರು ಹಾಗೂ ಹೀಟ್ ಸ್ಟ್ರೋಕ್​ಗೆ ಒಳಗಾಗಿರುವವರಿಗಾಗಿಯೇ ಹೀಟ್ ಸ್ಟ್ರೋಕ್ ವಾರ್ಡ್ ಸಿದ್ಧಡಿಸಲಾಗಿದೆ. ಐದು ಹೈಟೆಕ್ ಬೆಡ್​ಗಳನ್ನೊಳಗೊಂಡ ಹೀಟ್ ಸ್ಟ್ರೋಕ್ ವಾರ್ಡ್​ನಲ್ಲಿ ವೆಂಟಿಲೇಟರ್ ಸೇರಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಯಂತ್ರಗಳನ್ನ ಸಿದ್ಧಪಡಿಸಲಾಗಿದೆ.

ತಜ್ಞ ವೈದ್ಯ ಡಾ.ಅರುಣ್ ಮಸ್ಕಿ ಹೇಳಿದ್ದಿಷ್ಟು 

ಹೀಟ್ ಸ್ಟ್ರೋಕ್​​ನಿಂದಾಗುವ ಗಂಭೀರ ಆರೋಗ್ಯ ಸಮಸ್ಯೆಗಳ ಬಗ್ಗೆ ತಜ್ಞ ವೈದ್ಯ ಡಾ.ಅರುಣ್ ಮಸ್ಕಿ ಕಳವಳ ವ್ಯಕ್ತಪಡಿಸಿದ್ದಾರೆ. ಬಿಸಿಗಾಳಿ ಹೊಡೆತಕ್ಕೆ ಮನುಷ್ಯರ ಮೇಲೆ ಹೀಟ್ ಸ್ಟ್ರೋಕ್ ಆಗುವ ಸಾಧ್ಯತೆ ಇರತ್ತೆ. ಇದು ತೀರಾ ಗಂಭೀರ ಸಮಸ್ಯೆಯನ್ನುಂಟು ಮಾಡತ್ತೆ. ಕೆಲವೊಮ್ಮೆ ಜೀವಕ್ಕೆ ಕುತ್ತುತರುವ ಸಾಧ್ಯತೆಯೂ ಇರತ್ತೆ. ಬಿಸಿಲಿನಿಂದ ನಿರ್ಜಲೀಕರಣದ ಜೊತೆಗೆ ಹೀಟ್ ಸ್ಟ್ರೋಕ್ ಸಂಭವಿಸುವ ಸಾಧ್ಯತೆ ಇದ್ದು, ಸಾರ್ವಜನಿಕರು ಎಚ್ಚರದಿಂದಿರಬೇಕು ಅಂತ ತಜ್ಞರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದಳಪತಿ ವಿಜಯ್, ಸಂಗೀತಾ ವಿಚ್ಛೇದನ ಪ್ರಕರಣ: ಜೂನ್ 15ಕ್ಕೆ ವಿಚಾರಣೆ ಮುಂದೂಡಿಕೆ – Kannada News | Actor Thalapthy Vijay Sangeeta Sornalingam Divorce case hearing postponed to June 15

ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ (Thalapthy Vijay) ಹಾಗೂ ಅವರ ಪತ್ನಿ ಸಂಗೀತಾ ಅವರ ವಿಚ್ಛೇದನ (Divorce) ಪ್ರಕರಣವು ಇಡೀ ದಕ್ಷಿಣ ಭಾರತದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯವು ವಿಚಾರಣೆಯನ್ನು ಎರಡನೇ ಬಾರಿಗೆ ಮುಂದೂಡಿದೆ. ವಿಜಯ್ ಮತ್ತು ಸಂಗೀತಾ (Sangeeta Sornalingam) ಅವರ ವಿಚ್ಛೇದನ ಪ್ರಕರಣದ ಮುಂದಿನ ವಿಚಾರಣೆ ಜೂನ್ ತಿಂಗಳ ಮಧ್ಯಭಾಗದಲ್ಲಿ ನಡೆಯಲಿದೆ.

ಸೋಮವಾರ (ಏಪ್ರಿಲ್ 20) ನ್ಯಾಯಾಧೀಶರಾದ ಶಶಿಕಲಾ ಅವರ ಮುಂದೆ ಈ ಪ್ರಕರಣ ವಿಚಾರಣೆಗೆ ಬಂದಿತ್ತು. ಅಲ್ಪ ಸಮಯದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಪ್ರಕರಣವನ್ನು ಜೂನ್ 15ಕ್ಕೆ ಮುಂದೂಡಿ ಆದೇಶ ಹೊರಡಿಸಿದ್ದಾರೆ. ಫೆಬ್ರವರಿ 26ರಂದು ಸಂಗೀತಾ ಅವರು ವಿಚ್ಛೇದನ ಕೋರಿ ಮೊದಲ ಬಾರಿ ಅರ್ಜಿ ಸಲ್ಲಿಸಿದ್ದರು. ಆನಂತರ ಪ್ರಕರಣವನ್ನು ಏಪ್ರಿಲ್ 20ಕ್ಕೆ ನಿಗದಿಪಡಿಸಲಾಗಿತ್ತು. ಈಗ ಎರಡನೇ ಬಾರಿ ಮುಂದೂಡಲ್ಪಟ್ಟಿರುವುದು ಕುತೂಹಲ ಮೂಡಿಸಿದೆ.

ಸಂಗೀತಾ ಅವರು ಸಲ್ಲಿಸಿರುವ ವಿಚ್ಛೇದನ ಅರ್ಜಿಯಲ್ಲಿ ನಟ ವಿಜಯ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವಿಜಯ್ ಅವರು ಬೇರೊಬ್ಬ ನಟಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಅವರು ದೂರಿದ್ದಾರೆ. ‘2021ರಲ್ಲಿ ವಿಜಯ್ ಅವರಿಗೆ ನಟಿಯೊಬ್ಬರ ಜೊತೆ ಸಂಬಂಧವಿರುವುದು ನನಗೆ ತಿಳಿಯಿತು. ಈ ನಂಬಿಕೆ ದ್ರೋಹದಿಂದ ನನಗೆ ತೀವ್ರ ಮಾನಸಿಕ ನೋವು ಉಂಟಾಗಿದೆ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

2021ರಿಂದ ವಿಜಯ್ ತಮ್ಮೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ ಮತ್ತು ಭಾವನಾತ್ಮಕವಾಗಿ ದೂರವಾಗಿದ್ದಾರೆ ಎಂದು ಸಂಗೀತಾ ಆರೋಪಿಸಿದ್ದಾರೆ. ವಿಜಯ್ ಮತ್ತು ಸಂಗೀತಾ 1999ರ ಆಗಸ್ಟ್ ತಿಂಗಳಲ್ಲಿ ವಿವಾಹವಾಗಿದ್ದರು. ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಶಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಕಳೆದ 25 ವರ್ಷಗಳಿಂದ ಅನ್ಯೋನ್ಯವಾಗಿದ್ದ ಈ ಜೋಡಿ ಈಗ ಬೇರ್ಪಡುತ್ತಿರುವುದು ಅಭಿಮಾನಿಗಳಿಗೆ ಶಾಕ್ ನೀಡಿದೆ.

ಇದನ್ನೂ ಓದಿ: ಚುನಾವಣೆ ಹತ್ತಿರ ಆದಾಗಲೇ ಡಿವೋರ್ಸ್ ವಿಷಯ ಬಹಿರಂಗ ಮಾಡಿದ್ದಕ್ಕೆ ದಳಪತಿ ವಿಜಯ್ ಗರಂ

ಜೂನ್ 15ರಂದು ನಡೆಯಲಿರುವ ವಿಚಾರಣೆಯು ಈ ಪ್ರಕರಣದಲ್ಲಿ ಬಹಳ ಮುಖ್ಯವಾಗಿದ್ದು, ನ್ಯಾಯಾಲಯವು ಯಾವ ರೀತಿಯ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಈ ನಡುವೆ ವಿಜಯ್ ಅವರು ಟಿವಿಕೆ ಪಕ್ಷದಿಂದ ಚುನಾವಣೆಗೂ ಸ್ಪರ್ಧಿಸುತ್ತಿದ್ದಾರೆ. ಚುನಾವಣೆ ವೇಳೆಯೇ ಅವರ ಸಂಸಾರದ ಬಿರುಕು ಬಹಿರಂಗ ಆಗಿದ್ದು ಚರ್ಚೆಗೆ ಕಾರಣ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತೀವ್ರ ಸ್ವರೂಪ ಪಡೆದ ದಾವಣಗೆರೆ ದಂಗಲ್: ಬಿಜೆಪಿಗೆ ಸಪೋರ್ಟ್‌, SDPIಗೆ ಹಣ ನೀಡಿದ ವಿಡಿಯೋ ಇದೆ ಎಂದ ಕೈ ನಾಯಕ – Kannada News | Muslim Leader Alleged On Abdul Jabbar And Zameer For Support BJP And SDPI In Davanagere South By Poll

ಬೆಂಗಳೂರು, (ಏಪ್ರಿಲ್ 20): ದಾವಣಗೆರೆ ದಕ್ಷಿಣ ಉಪಚುನಾವಣೆಯ (Davanagere South By Poll) ಟಿಕೆಟ್ ರಾಜ್ಯ ಕಾಂಗ್ರೆಸ್ ಘಟಕದಲ್ಲಿ ತೀವ್ರ ಸ್ವರೂಪದ ಅಸಮಾಧಾನಕ್ಕೆ ಕಾರಣವಾಗಿದೆ. ಮುಖ್ಯವಾಗಿದೆ ಮುಸ್ಲಿಂ ನಾಯಕರ ನಡುವಿನ ಬಣ ರಾಜಕಾರಣ ಈಗ ಬೀದಿಗೆ ಬಂದಂತಿದೆ. ಇದಕ್ಕೆ ಪೂರಕವೆಂಬಂತೆ ಸಲೀಂ ಅಹ್ಮದ್ ಹಾಗೂ ರಿಜ್ವಾನ್ ಅರ್ಷದ್ ಜೊತೆಯಾಗಿ ಅಬ್ದುಲ್ ಜಬ್ಬಾರ್ ಹಾಗೂ ಸಚಿವ ಜಮೀರ ಅಹ್ಮದ್ ಖಾನ್ ವಿರುದ್ಧ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದಾರೆ. ಇದರ ಬೆನ್ನಲ್ಲೇ ಕೆಪಿಸಿಸಿ ಉಪಾಧ್ಯಕ್ಷ ಹುಸೇನ್ ಸಹ ಸುದ್ದಿಗೋಷ್ಠಿ ನಡೆಸಿ ಅಬ್ದುಲ್ ಜಬ್ಬರ್ ಹಾಗೂ ಜಮೀರ್ ವಿರುದ್ಧ ಕಿಡಿಕಾರಿದ್ದು, ಕಲೆವೊಂದಿಷ್ಟು ಆರೋಪಗಳನ್ನು ಮಾಡಿದ್ದಾರೆ.

ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಹುಸೇನ್, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಮನೆಯಲ್ಲಿ ಕುಳಿತುಕೊಂಡು ಬಿಜೆಪಿ ಹಾಗೂ ಎಸ್​​​ಡಿಪಿಐಗೆ ಸಹಾಯ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ವಿಡಿಯೋಗಳಿವೆ. ಅಧ್ಯಕ್ಷರಿಗೆ ಅವುಗಳನ್ನು ನೀಡುತ್ತೇನೆ ಎಂದು ಅಮಾನತುಗೊಂಡ ಅಬ್ದುಲ್ ಜಬ್ಬಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಬೇಷರತ್ ಬೆಂಬಲ ನೀಡಿದ್ದೇ ಅಪರಾಧವೇ? ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಮುಸ್ಲಿಂ ಸಂಘ- ಸಂಸ್ಥೆಗಳು

Source link

ಏಕಕಾಲದಲ್ಲಿ ಭಾರತದ 2 ಟಿ20 ತಂಡಗಳನ್ನು ಕಣಕ್ಕಿಳಿಸಲಿದೆ ಬಿಸಿಸಿಐ – Kannada News | BCCI Plans Dual T20 Teams for India: Boosts Player Development and Opportunities Post IPL 2026

ಭಾರತದಲ್ಲಿ ಐಪಿಎಲ್ (IPL) ಆರಂಭವಾದ ಬಳಿಕ ಕ್ರಿಕೆಟ್​ನಲ್ಲಿ ಕ್ರಾಂತಿ ಶುರುವಾಯಿತು. ಇದರ ಪರಿಣಾಮವಾಗಿ ದೇಶದಲ್ಲಿ ಸಾಕಷ್ಟು ಪ್ರತಿಭೆಗಳು ಹುಟ್ಟಿಕೊಂಡಿವೆ. ಹೀಗಾಗಿಯೇ ಟೀಂ ಇಂಡಿಯಾ, ಐಸಿಸಿ (ICC) ಟೂರ್ನಿಗಳಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಚಾಂಪಿಯನ್‌ ಪಟ್ಟವನ್ನು ಅಲಂಕರಿಸುತ್ತಿದೆ. ಟೀಂ ಇಂಡಿಯಾದಲ್ಲಿ (Team India) ಸ್ಥಾನ ಪಡೆಯಲು ಸಾಕಷ್ಟು ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ಸಾಕಷ್ಟು ಪ್ರತಿಭೆಗಳು ಬೆಂಚ್ ಮೇಲೆಯೇ ಕಾಲ ಕಳೆಯುತ್ತಿವೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ (BCCI), ಎರಡು ಟಿ20 ತಂಡಗಳನ್ನು ಏಕಕಾಲದಲ್ಲಿ ಕಣಕ್ಕಿಳಿಸಲು ಸಜ್ಜಾಗುದೆ.

ಬಿಸಿಸಿಐ ಇದಕ್ಕಾಗಿ ಈಗಾಗಲೇ ಯೋಜನೆ ರೂಪಿಸಲು ಪ್ರಾರಂಭಿಸಿದೆ. ವರದಿಯ ಪ್ರಕಾರ, ಭಾರತದಲ್ಲಿರುವ ಸಾಕಷ್ಟು ಪ್ರತಿಭೆಗಳನ್ನು ಗಮನದಲ್ಲಿಟ್ಟುಕೊಂಡು, ಬಿಸಿಸಿಐ ಈಗ 30 ರಿಂದ 35 ಆಟಗಾರರ ಗುಂಪನ್ನು ಅಭಿವೃದ್ಧಿಪಡಿಸುವ ಬಗ್ಗೆ ಯೋಚಿಸುತ್ತಿದೆ. ಎರಡು ಅಂತರರಾಷ್ಟ್ರೀಯ ಟಿ20 ತಂಡಗಳನ್ನು ರಚಿಸುವುದು ಇದರ ಉದ್ದೇಶವಾಗಿದೆ. ಬಿಸಿಸಿಐನ ಈ ಯೋಜನೆಯನ್ನು ಐಪಿಎಲ್ 2026 ರ ನಂತರ ಜಾರಿಗೆ ತರಲಿದ್ದು, ಇದರಿಂದ ಹೆಚ್ಚಿನ ಆಟಗಾರರಿಗೆ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಗುತ್ತದೆ.

2 ತಂಡಗಳನ್ನು ಕಣಕ್ಕಿಳಿಸಲು ಕಾರಣವೇನು?

ಈಗ ಪ್ರಶ್ನೆ ಏನೆಂದರೆ, ಈ ಯೋಜನೆಯ ಹಿಂದಿನ ಬಿಸಿಸಿಐ ಉದ್ದೇಶವೇನು?. ಈ ವರ್ಷದ ಕೊನೆಯಲ್ಲಿ ಭಾರತವು ಏಷ್ಯನ್ ಕ್ರೀಡಾಕೂಟ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದೆ. ಎನ್‌ಡಿಟಿವಿ ವರದಿಯ ಪ್ರಕಾರ, ಬಿಸಿಸಿಐ ಇದನ್ನು ಗಮನದಲ್ಲಿಟ್ಟುಕೊಂಡು ಎರಡು ತಂಡಗಳನ್ನು ಕಟ್ಟಲು ಗಮನಹರಿಸುತ್ತಿದೆ. ಈ ವರ್ಷದ ಏಷ್ಯನ್ ಕ್ರೀಡಾಕೂಟ ಮತ್ತು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿ ಏಕಕಾಲದಲ್ಲಿ ನಡೆಯಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಎನ್‌ಡಿಟಿವಿಗೆ ತಿಳಿಸಿದ್ದಾರೆ. ಆದ್ದರಿಂದ, ನಾವು ಎರಡು ತಂಡಗಳನ್ನು ಕಣಕ್ಕಿಳಿಸುವತ್ತ ಗಮನಹರಿಸುತ್ತಿದ್ದು, 30 ರಿಂದ 35 ಕ್ರಿಕೆಟಿಗರ ಗುಂಪನ್ನು ಅಭಿವೃದ್ಧಿಪಡಿಸುವುದು ಈಗ ಮುಖ್ಯವಾಗಿದೆ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ ಎಂದು ವರದಿ ಮಾಡಿದೆ.

ಯಾವ ಆಟಗಾರರಿಗೆ ಅವಕಾಶ ಸಿಗಬಹುದು?

ಈಗ ಪ್ರಶ್ನೆ ಏನೆಂದರೆ, 30-35 ಆಟಗಾರರ ಗುಂಪಿನಲ್ಲಿ ಯಾರಿಗೆಲ್ಲ ಅವಕಾಶ ಸಿಗಬಹುದು?. ಈ ಪಟ್ಟಿಯಲ್ಲಿ ಯಾವ ಆಟಗಾರನ ಹೆಸರು ಇರಲಿದೆ ಎಂಬುದನ್ನು ಇನ್ನೂ ಅಧಿಕೃತವಾಗಿ ದೃಢೀಕರಿಸಲಾಗಿಲ್ಲ. ಆದಾಗ್ಯೂ, ಐಪಿಎಲ್ 2026 ರಲ್ಲಿ ಅವರ ಪ್ರದರ್ಶನ ಮತ್ತು ಪ್ರಸ್ತುತ ಫಾರ್ಮ್ ಅನ್ನು ಪರಿಗಣಿಸಿ, ಕೆಲವು ಆಟಗಾರರ ಹೆಸರುಗಳು ಖಂಡಿತವಾಗಿಯೂ ಚರ್ಚೆಗೆ ಬರಲು ಪ್ರಾರಂಭಿಸಿವೆ. ಬ್ಯಾಟಿಂಗ್‌ನಲ್ಲಿ, ವೈಭವ್ ಸೂರ್ಯವಂಶಿ, ಪ್ರಿಯಾಂಶ್ ಆರ್ಯ, ಯಶಸ್ವಿ ಜೈಸ್ವಾಲ್ ಮತ್ತು ರಜತ್ ಪಾಟಿದಾರ್ ಅವರಂತಹ ಆಟಗಾರರು ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಬೌಲಿಂಗ್‌ನಲ್ಲಿ, ಅಶೋಕ್ ಶರ್ಮಾ, ಕಾರ್ತಿಕ್ ತ್ಯಾಗಿ ಮತ್ತು ರವಿ ಬಿಷ್ಣೋಯ್ ಅವರಂತಹ ಹೆಸರುಗಳನ್ನು ಪರಿಗಣಿಸಲಾಗುತ್ತಿದೆ. ಧ್ರುವ್ ಜುರೆಲ್ ಅವರನ್ನು ವಿಕೆಟ್ ಕೀಪಿಂಗ್ ವಿಭಾಗದಲ್ಲಿ ಸೇರಿಸಬಹುದು. ಹಾಗೆಯೇ ಶಶಾಂಕ್ ಸಿಂಗ್ ಮತ್ತು ಅನುಕುಲ್ ರಾಯ್ ಅವರಂತಹ ಹೆಸರುಗಳು ಆಲ್-ರೌಂಡರ್ ಪಟ್ಟಿಯಲ್ಲಿ ಕಾಣಿಸಿಕೊಳ್ಳಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ಮೋದಿಯವರ ‘ಝಲ್ಮುರಿ’ ವಿಡಿಯೋ ವೈರಲ್: ಇನ್ಸ್​ಟಾಗ್ರಾಮ್‌ನಲ್ಲಿ 100 ಮಿಲಿಯನ್ ವೀಕ್ಷಣೆ – Kannada News | PM Modi’s Jhalmuri video sees 100 million views in just 24 hours

ನರೇಂದ್ರ ಮೋದಿ ಇನ್​ಸ್ಟಾ ವಿಡಿಯೋಗಳುImage Credit source: Narendra Modi’s Insta

ಕೋಲ್ಕತಾ, ಏಪ್ರಿಲ್ 20: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ (West Bengal Assembly Elections) ಪ್ರಚಾರದ ಅಬ್ಬರದ ನಡುವೆ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ (ಏಪ್ರಿಲ್ 19, 2026) ಝಾರ್‌ಗ್ರಾಮ್‌ನಲ್ಲಿ (Jhargram) ಸಾಮಾನ್ಯ ಜನರಂತೆ ರಸ್ತೆ ಬದಿಯ ಅಂಗಡಿಗೆ ಭೇಟಿ ನೀಡಿ ಝಲ್ಮುರಿ (Jhalmuri) ಸವಿದಿದ್ದಾರೆ. ಅವರು ಇನ್​​ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಕೇವಲ 24 ಗಂಟೆಗಳಲ್ಲಿ 100 ಮಿಲಿಯನ್​ಗೂ (10 ಕೋಟಿ) ಅಧಿಕ ವೀಕ್ಷಣೆಗಳನ್ನು ಪಡೆಯುವ ಮೂಲಕ ಹೊಸ ದಾಖಲೆ ಬರೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಯಾವ ಸೆಲಬ್ರಿಟಿಗೂ ಕಡಿಮೆ ಇಲ್ಲದ ಜನಪ್ರಿಯತೆ ತನಗಿದೆ ಎಂಬುದನ್ನು ಪ್ರಧಾನಿಗಳು ಮತ್ತೊಮ್ಮೆ ಸಾಬೀತುಪಡಿಸಿದಂತಿದೆ.

ಏನಿದು ಪ್ರಧಾನಿಗಳ ಝಲ್ಮುರಿ ಘಟನೆ?

ಸತತ ನಾಲ್ಕು ಚುನಾವಣಾ ರ‍್ಯಾಲಿಗಳನ್ನು ಮುಗಿಸಿ ಮರಳುತ್ತಿದ್ದ ಪ್ರಧಾನಿ, ಇದ್ದಕ್ಕಿದ್ದಂತೆ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿ ಸ್ಥಳೀಯ ವ್ಯಾಪಾರಿ ವಿಕ್ರಮ್ ಸಾಹ ಅವರ ಝಲ್ಮುರಿ ಅಂಗಡಿಗೆ ತೆರಳಿದರು. ಝಲ್ಮುರಿ ಸವಿಯುತ್ತಾ ವ್ಯಾಪಾರಿಯೊಂದಿಗೆ ಆತ್ಮೀಯವಾಗಿ ಮಾತನಾಡಿದ ಮೋದಿ, “ನಾವು ಎಲ್ಲವನ್ನೂ ತಿನ್ನುತ್ತೇವೆ, ಆದರೆ ಜನರ ತಲೆ ತಿನ್ನುವುದಿಲ್ಲ” (Hum sab kuch khate hai, dimaag nahi khate bas) ಎಂದು ತಮಾಷೆ ಮಾಡಿದ್ದು ನೆಟ್ಟಿಗರ ಮನ ಗೆದ್ದಿದೆ. ವ್ಯಾಪಾರಿ ವಿಕ್ರಮ್ ಸಾಹ ಅವರು ಹಣ ಪಡೆಯಲು ನಿರಾಕರಿಸಿದರೂ, ಪ್ರಧಾನಿಯವರು ಪಟ್ಟು ಹಿಡಿದು 10 ರೂಪಾಯಿ ಪಾವತಿಸಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಬಂಗಾಳ ಚುನಾವಣಾ ಕಣದಲ್ಲಿ ಮೋದಿ ‘ಝಲ್​ಮುರಿ’ ಸವಿ; ಝಾರ್​ಗ್ರಾಮ್​ನಲ್ಲಿ ಜನಸಾಮಾನ್ಯರಂತೆ ಮಿಂಚಿದ ಪ್ರಧಾನಿ

ಸಾಮಾಜಿಕ ಜಾಲತಾಣದಲ್ಲಿ ದಾಖಲೆ

ಪ್ರಧಾನಿ ಮೋದಿ ಅವರು ತಮ್ಮ ಇನ್​​ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡ ತಕ್ಷಣವೇ ಅದು ವೈರಲ್ ಆಗಿದೆ. ಲಕ್ಷಾಂತರ ಲೈಕ್ಸ್ ಮತ್ತು ಕಾಮೆಂಟ್‌ಗಳು ಹರಿದುಬಂದಿದ್ದು, ಪ್ರಧಾನಿಯವರ ಸರಳತೆಯನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. “ಮೋದಿ ಜೀ ಕೂಡ ಝಲ್ಮುರಿಯನ್ನು ಅಪ್ರೂವ್ ಮಾಡಿದ್ದಾರೆ” ಎಂಬಂತಹ ತಮಾಷೆಯ ಕಾಮೆಂಟ್‌ಗಳು ಹರಿದಾಡುತ್ತಿವೆ.

ಪ್ರಧಾನಿಯ ಇನ್​ಸ್ಟಾ ವಿಡಿಯೋ

ರಾಜಕೀಯ ಸಂಚಲನ

ಒಂದೆಡೆ ಈ ವಿಡಿಯೋ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದ್ದರೆ, ಇನ್ನೊಂದೆಡೆ ತೃಣಮೂಲ ಕಾಂಗ್ರೆಸ್ (TMC) ಈ ಭೇಟಿಯನ್ನು ಟೀಕಿಸಿದೆ. ಮೋದಿಯವರ ಈ ಭೇಟಿಯಿಂದಾಗಿ ಹೆಲಿಕಾಪ್ಟರ್ ಹಾರಾಟಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಇದರಿಂದ ಹೇಮಂತ್ ಸೊರೇನ್ ಅವರಂತಹ ಇತರ ನಾಯಕರ ಪ್ರಚಾರಕ್ಕೆ ಅಡ್ಡಿಯಾಯಿತು ಎಂದು ಟಿಎಂಸಿ ಆರೋಪಿಸಿದೆ. ಪ್ರಧಾನಿಯವರ ‘ಝಲ್ಮುರಿ’ ಪ್ರಸಂಗವನ್ನು ಮಮತಾ ಬ್ಯಾನರ್ಜಿ ಕಟುವಾಗಿ ಟೀಕಿಸಿದ್ದು, ಇದೆಲ್ಲಾ ಬರೀ ಡ್ರಾಮಾ ಎಂದು ವ್ಯಂಗ್ಯ ಮಾಡಿದ್ದಾರೆ.

ಇದನ್ನೂ ಓದಿ: ಶ್ರೀಲಂಕಾದಲ್ಲಿ ಚೀನಾಕ್ಕೆ ಟಕ್ಕರ್ ಕೊಡಲು ಭಾರತದ ಮಾಸ್ಟರ್ ಪ್ಲಾನ್: ಬರಲಿದೆ ಬೃಹತ್ ತೈಲ ಪೈಪ್‌ಲೈನ್

ಆದರೆ, ರಾಜಕೀಯ ಏನೇ ಇರಲಿ, ಪ್ರಧಾನಿಯವರ ಈ “ಸ್ಟ್ರೀಟ್ ಫುಡ್ ಡಿಪ್ಲೊಮಸಿ” ಮಾತ್ರ ಡಿಜಿಟಲ್ ಲೋಕದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಗುಜರಾತ್ ವಿರುದ್ಧ ಕಣಕ್ಕಿಳಿಯುತ್ತಾರಾ ರೋಹಿತ್ ಶರ್ಮಾ? – Kannada News | Rohit Sharma Injury Update: MI vs GT IPL Return Status?

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ, ರೋಹಿತ್ ಶರ್ಮಾ ಆಡಲು ಸಾಧ್ಯವಾಗಲಿಲ್ಲ, ಅವರ ಅನುಪಸ್ಥಿತಿಯಲ್ಲಿ ಕ್ವಿಂಟನ್ ಡಿ ಕಾಕ್, ರಿಕಲ್ಟನ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದರು. ಇದು ಡಿ ಕಾಕ್ ಅವರ ಈ ಆವೃತ್ತಿಯ ಮೊದಲ ಪಂದ್ಯವಾಗಿತ್ತು. ಆ ಪಂದ್ಯದಲ್ಲಿ ಅವರು 60 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 8 ಬೌಂಡರಿಗಳೊಂದಿಗೆ 112 ರನ್ ಬಾರಿಸಿದ್ದರು. ಆದಾಗ್ಯೂ, ಕ್ವಿಂಟನ್ ಡಿ ಕಾಕ್ ಅಜೇಯ ಶತಕ ಗಳಿಸಿದರೂ, ಮುಂಬೈ ಇಂಡಿಯನ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ 195 ರನ್‌ಗಳ ಗುರಿಯನ್ನು ತಲುಪಲು ವಿಫಲವಾಗಿ ಸೋತಿತು.

Source link

ಬೇಷರತ್ ಬೆಂಬಲ ನೀಡಿದ್ದೇ ಅಪರಾಧವೇ? ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಮುಸ್ಲಿಂ ಸಂಘ- ಸಂಸ್ಥೆಗಳು – Kannada News | Davanagere By Election Row: Karnataka Muslim organisations letter To Congress Leaders, here Details

ಬೆಂಗಳೂರು, (ಏಪ್ರಿಲ್ 20): ದಾವಣಗೆರೆ ಉಪ ಚುನಾವಣೆಯ (Davanagere By Election Row) ಟಿಕೆಟ್ ಅಸಮಾಧಾನ ಕರ್ನಾಟಕ ಕಾಂಗ್ರೆಸ್ ನಲ್ಲಿ (Karnataka Congress) ಒಂದು ರೀತಿಯಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಟಿಕೆಟ್ ಕೈತಪ್ಪಿದ್ದರಿಂದ ಕೆಲ ಮುಸ್ಲಿಂ ನಾಯಕರು ಅಸಮಾಧಾನಗೊಂಡಿದ್ದು, ಇದೀಗ ಅವರ ವಿರುದ್ಧ ಕಾಂಗ್ರೆಸ್ ಕ್ರಮಕೈಗೊಂಡಿದೆ. ಪರಿಷತ್ ಸದಸ್ಯ ಅಬ್ದುಲ್ ಜಬ್ಬರ್ ಅವರನ್ನ ಪಕ್ಷದಿಂದ ಅಮಾನತು ಮಾಡಲಾಗಿದೆ. ಇನ್ನು ನಸೀರ್ ಅಹ್ಮದ್ ಅವರನ್ನ ಸಿಎಂ ರಾಜಕೀಯ ಕಾರ್ಯದರ್ಶಿಯಿಂದ ವಜಾ ಮಾಡಲಾಗಿದ್ದು, ಇದೀಗ ಸಚಿವ ಜಮೀರ್ ಅಹ್ಮದ್ ಖಾನ್ ಮೇಲೂ ಕ್ರಮಕ್ಕೆ ಚಿಂತನೆಗಳು ನಡೆದಿವೆ. ಈ ಎಲ್ಲಾ ಬೆಳವಣಿಗೆಗಳಿಂದ ಸಿಡಿದೆದ್ದಿರುವ ಮುಸ್ಲಿಂ ಸಮುದಾಯದ ಸಂಘಟನೆ, ಸಂಘ-ಸಂಸ್ಥೆಗಳು ಕಾಂಗ್ರೆಸ್​ ಹೈಕಮಾಂಡ್​ಗೆ ಪತ್ರ ಬರೆದಿವೆ. ಕಾಂಗ್ರೆಸ್ ಪಕ್ಷ ರಾಜ್ಯದ ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಖಂಡಿಸಿ ರಾಜ್ಯದ ವಿವಿಧ ಪ್ರದೇಶಗಳ ಪ್ರಮುಖ ಮುಸ್ಲಿಮ್ ಸಂಘಟನೆಗಳು , ಸಂಘ ಸಂಸ್ಥೆಗಳು ಹಾಗು ಒಕ್ಕೂಟಗಳ ಪ್ರತಿನಿಧಿಗಳ ಜಂಟಿ ಪತ್ರ ಈ ಕೆಳಗಿಂತಿದೆ.

ಯಾರೆಗೆಲ್ಲಾ ಪತ್ರ?

ರಾಜ್ಯಸಭಾ ವಿಪಕ್ಷ ನಾಯಕ ಹಾಗು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮುಖ್ಯಸಚೇತಕ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಸಯ್ಯದ್ ನಾಸಿರ್ ಹುಸೇನ್ ಹಾಗೂ ಎಐಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಮ್ರಾನ್ ಪ್ರತಾಪ್ ಗಢಿ ಇವರಿಗೆ ರಾಜ್ಯದ ವಿವಿಧ ಪ್ರದೇಶಗಳ ಪ್ರಮುಖ ಮುಸ್ಲಿಮ್ ಸಂಘಟನೆಗಳು , ಸಂಘ ಸಂಸ್ಥೆಗಳು ಹಾಗು ಒಕ್ಕೂಟಗಳ ಪ್ರತಿನಿಧಿಗಳ ಜಂಟಿ ಪತ್ರ ಬರೆಯಲಾಗಿದೆ.

ಇದನ್ನೂ ಓದಿ: ಮುಸ್ಲಿಂ ನಾಯಕರ ಬೆನ್ನಿಗೆ ನಿಂತ ಸತೀಶ್ ಜಾರಕಿಹೊಳಿ, ಡಿಕೆಶಿ ಭೇಟಿಯ ಗುಟ್ಟು ರಟ್ಟು

ಪತ್ರದಲ್ಲೇನಿದೆ?

ಕರ್ನಾಟಕದ ಕಾಂಗ್ರೆಸ್ ಸರಕಾರ ಹಾಗೂ ಪಕ್ಷ ರಾಜ್ಯದ ಮುಸ್ಲಿಂ ಸಮುದಾಯವನ್ನು ನಡೆಸಿಕೊಳ್ಳುತ್ತಿರುವ ರೀತಿಯಿಂದ ತೀವ್ರವಾಗಿ ನೊಂದು ರಾಜ್ಯದ ಎಲ್ಲ ಪ್ರದೇಶಗಳ ಪ್ರಮುಖ ಮುಸ್ಲಿಂ ಸಂಘಟನೆಗಳು, ಸಂಘ ಸಂಸ್ಥೆಗಳು ಹಾಗು ಒಕ್ಕೂಟಗಳ ಪರವಾಗಿ ನಾವು ಈ ಪತ್ರ ಬರೆಯುತ್ತಿದ್ದೇವೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಮುಸ್ಲಿಮರು ಇಡೀ ದೇಶಕ್ಕೆ ಮಾದರಿಯಾಗುವಂತಹ ಒಂದು ಧನಾತ್ಮಕ ನಿರ್ಧಾರ ತೆಗೆದುಕೊಂಡು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು. ಕಾಂಗ್ರೆಸ್ ಅಲ್ಲದೆ ಬೇರೆ ಪಕ್ಷಗಳ ಆಯ್ಕೆ ಇದ್ದರೂ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಜಾತ್ಯತೀತ ಸರಕಾರ ಬರಬೇಕು ಎಂಬ ಕಾರಣಕ್ಕಾಗಿ ಮುಸ್ಲಿಮರು ಕಾಂಗ್ರೆಸ್ ಗೆ ಒಗ್ಗಟ್ಟಾಗಿ ಬೆಂಬಲಿಸಿದರು. ಅದರ ಪರಿಣಾಮವಾಗಿಯೇ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಬಂತು. ಆದರೆ ಅಧಿಕಾರಕ್ಕೆ ಬಂದ ದಿನದಿಂದಲೇ ಕಾಂಗ್ರೆಸ್ ಪಕ್ಷ ತನ್ನನ್ನು ಅಧಿಕಾರಕ್ಕೆ ತರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಮುಸ್ಲಿಂ ಸಮುದಾಯವನ್ನು ನಿರ್ಲಕ್ಷಿಸುತ್ತಲೇ ಬಂದಿದೆ. ಸರಕಾರದಲ್ಲಿ, ಆಡಳಿತಶಾಹಿಯಲ್ಲಿ, ಇತರ ಪ್ರಮುಖ ನೇಮಕಾತಿಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಈ ಸರಕಾರ ಸೂಕ್ತ ಪ್ರಾತಿನಿಧ್ಯ ಕೊಡಲೇ ಇಲ್ಲ. ಸಮುದಾಯಕ್ಕೆ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಲಿಲ್ಲ. ಈ ಬಗ್ಗೆ ಆಗಾಗ ಸರಕಾರದ, ಪಕ್ಷದ ಗಮನಕ್ಕೆ ತಂದರೂ ಯಾವುದೇ ಸೂಕ್ತ ಸ್ಪಂದನೆ ಸಿಗಲಿಲ್ಲ ಹಾಗೂ ಕೊರತೆ ತುಂಬುವ ಕ್ರಮ ಕೈಗೊಳ್ಳಲಿಲ್ಲ.

ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಮುಸ್ಲಿಮರ ಕುರಿತ ಕಾಂಗ್ರೆಸ್ ನ ಈ ನಿರಂತರ ನಿರ್ಲಕ್ಷ್ಯ ಧೋರಣೆ ಈಗ ಮುಂದಿನ ಹಂತಕ್ಕೆ ತಲುಪಿರುವುದು ಸ್ಪಷ್ಟವಾಗಿದೆ. ಮುಸ್ಲಿಂ ಸಮುದಾಯದ ಜೊತೆ ಕಾಂಗ್ರೆಸ್ ಪಕ್ಷ ತಾರತಮ್ಯದ ನೀತಿ ಅನುಸರಿಸುವುದು, ಅನ್ಯಾಯಯುತವಾಗಿ ನಡೆದುಕೊಳ್ಳುವುದು ಈಗ ಸರ್ವೇ ಸಾಮಾನ್ಯವಾಗಿದೆ ಎಂಬುದನ್ನು ಬಹಳ ಬೇಸರದಿಂದ ಹೇಳಬೇಕಾಗಿದೆ. ವಿಶೇಷವಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಹಂಚಿಕೆ ಹಾಗೂ ಮತದಾನದ ಬಳಿಕ ಕಾಂಗ್ರೆಸ್ ನಡೆದುಕೊಂಡಿರುವ ರೀತಿಯಿಂದ ರಾಜ್ಯದ ಮುಸ್ಲಿಂ ಸಮುದಾಯಕ್ಕೆ ತೀವ್ರ ಆಘಾತವಾಗಿದೆ.

ಬೇಷರತ್ ಬೆಂಬಲ ನೀಡಿದ್ದೇ ಅಪರಾಧವೇ?

ನಾವು ಇಷ್ಟು ಗಟ್ಟಿಯಾಗಿ ಬೆಂಬಲಿಸಿದ ಪಕ್ಷ ನಮ್ಮೊಂದಿಗೆ ಇಷ್ಟು ಕೆಟ್ಟದಾಗಿ ಹೇಗೆ ನಡೆದುಕೊಳ್ಳಲು ಸಾಧ್ಯ ಎಂಬ ಪ್ರಶ್ನೆ ರಾಜ್ಯದ ಮುಸಲ್ಮಾನರನ್ನು ಕಾಡುತ್ತಿದೆ. ನಾವು ಕಾಂಗ್ರೆಸ್ ಗೆ ಬೇಷರತ್ತಾಗಿ ಬೆಂಬಲ ನೀಡಿದ್ದೇ ನಮ್ಮ ಅಪರಾಧವೇ ಎಂಬ ಭಾವನೆ ಮುಸಲ್ಮಾನರಲ್ಲಿ ಈಗ ಮನೆ ಮಾಡುತ್ತಿದೆ. ಹೀಗೇ ಮುಂದುವರಿದರೆ ನಾವೂ ನಮ್ಮ ರಾಜಕೀಯ ಆಯ್ಕೆಗಳನ್ನು ಮುಕ್ತವಾಗಿಡಬೇಕು ಎಂಬ ಆಲೋಚನೆ ಈಗ ಸಮುದಾಯದಲ್ಲಿ ತೀವ್ರವಾಗಿ ಬೆಳೆಯುತ್ತಿದೆ. ಮೊದಲು ನ್ಯಾಯವಾಗಿ ನೀಡಲೇಬೇಕಾಗಿದ್ದ ಟಿಕೆಟ್ ಅನ್ನು ನಿರಾಕರಿಸಲಾಯಿತು, ಹಾಗೆ ನಿರಾಕರಿಸುವಾಗ ಮುಸ್ಲಿಂ ಸಮುದಾಯದ ನ್ಯಾಯಯುತ ಬೇಡಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಯಿತು. ಅಷ್ಟೇ ಅಲ್ಲ, ಟಿಕೆಟ್ ಕೇಳಿದ್ದೇ ಅಪರಾಧ ಎಂಬಂತೆ ಕಾಂಗ್ರೆಸ್ ವರಿಷ್ಠರು ಮುಸ್ಲಿಂ ಸಮುದಾಯದ ಜೊತೆ ನಡೆದುಕೊಂಡರು.

ಮುಸ್ಲಿಂ ಸಮುದಾಯದ ಜೊತೆ ಹಗೆ

ಇಷ್ಟು ಸಾಲದ್ದಕ್ಕೆ, ಉಪಚುನಾವಣೆಗೆ ಮತದಾನ ಮುಗಿದ ಕೂಡಲೇ ಮುಸ್ಲಿಂ ಸಮುದಾಯದ ಜೊತೆ ಹಗೆ ಸಾಧಿಸುವ ಹಾಗೆ ಕಾಂಗ್ರೆಸ್ ಪಕ್ಷ ನಡೆದುಕೊಂಡಿತು. ದಶಕಗಳಿಂದ ಪಕ್ಷಕ್ಕಾಗಿ ದುಡಿದ ಹಿರಿಯ ಮುಸ್ಲಿಂ ನಾಯಕರನ್ನು ಯಾವುದೇ ಸೂಕ್ತ ಕಾರಣ ನೀಡದೆ, ವಿವರಣೆಗೆ ಅವಕಾಶವನ್ನೂ ನೀಡದೆ ಏಕಾಏಕಿ ವಜಾ ಮಾಡಿ ಮನೆಗೆ ಕಳಿಸಲಾಯಿತು. ಕಾಂಗ್ರೆಸ್ ಪಕ್ಷದ ಈ ನಡೆ ರಾಜ್ಯದ ಮುಸ್ಲಿಂ ಸಮುದಾಯಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಟಿಕೆಟ್ ನೀಡಲಿಲ್ಲ ಎಂಬ ನೋವಿಗೆ ಸಮಾಧಾನ ಮಾಡಿ ಮದ್ದೆರೆಯಬೇಕಾಗಿದ್ದ ಕಾಂಗ್ರೆಸ್, ಸಮುದಾಯದ ಜೊತೆ ಅತ್ಯಂತ ಸಂವೇದನಾರಹಿತವಾಗಿ ನಡೆದುಕೊಂಡಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ವರಿಷ್ಠರಿಂದ ಎತ್ತಿ ಕಟ್ಟುವ ಪ್ರಯತ್ನ

ಈ ಹಿಂದೆ ನೇರವಾಗಿಯೇ ಪಕ್ಷ ವಿರೋಧಿ ಕೆಲಸ ಮಾಡಿದ್ದ ಪ್ರಬಲ ಸಮುದಾಯಗಳ ಮುಖಂಡರ ವಿರುದ್ಧ ಕಾಂಗ್ರೆಸ್ ಪಕ್ಷ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈಗ ಪಕ್ಷ ನಿಷ್ಠ ಮುಸ್ಲಿಂ ನಾಯಕರ ವಿರುದ್ಧ ಇಷ್ಟು ತರಾತುರಿಯಲ್ಲಿ ಅತ್ಯಂತ ಕಠಿಣ ಕ್ರಮ ಕೈಗೊಂಡಿರುವುದನ್ನು ನೋಡಿದರೆ ಕಾಂಗ್ರೆಸ್ ನಲ್ಲಿ ಶಿಸ್ತುಕ್ರಮ ಎಂಬುದು ಕೇವಲ ಒಂದು ಸಮುದಾಯಕ್ಕೆ ಸೀಮಿತವೇ ಎಂಬ ಸಂಶಯ ಮೂಡುತ್ತಿದೆ. ಇನ್ನು ಕಾಂಗ್ರೆಸ್ ನ ಮುಸ್ಲಿಂ ಸಮುದಾಯದ ನಾಯಕರ ವಿರುದ್ಧ ಪಕ್ಷದಲ್ಲಿರುವ ಬೇರೆ ಮುಸ್ಲಿಂ ನಾಯಕರನ್ನೇ ಎತ್ತಿ ಕಟ್ಟುವ ತೀರಾ ಕೆಟ್ಟ ಪ್ರಯತ್ನವೂ ಕಾಂಗ್ರೆಸ್ ವರಿಷ್ಠರಿಂದ ನಡೆಯುತ್ತಿದೆಯೇ ಎಂಬ ಗಂಭೀರ ಅನುಮಾನವೂ ಸಮುದಾಯವನ್ನು ಕಾಡುತ್ತಿದೆ.

ಇದು ಕೇವಲ ಕೆಲವು ವ್ಯಕ್ತಿಗಳ ವಿಚಾರವಲ್ಲ. ಇಡೀ ಮುಸ್ಲಿಮ್ ಸಮುದಾಯದ ಘನತೆಯ ವಿಷಯವಾಗಿದೆ. ಸಮುದಾಯದ ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುವುದು ಸರಿಯಲ್ಲ. ಇದನ್ನು ಕೇವಲ ರಾಜಕೀಯ ನಿರ್ಧಾರವೆಂದು ಸಮರ್ಥಿಸಲು ಸಾಧ್ಯವಿಲ್ಲ. ತನಗೆ ಸುಮಾರು 90% ಮತದಾನ ಮಾಡಿರುವ ಮುಸ್ಲಿಂ ಸಮುದಾಯದ ಜೊತೆ ಕಾಂಗ್ರೆಸ್ ಪಕ್ಷದ ಈ ತೀವ್ರ ತಾರತಮ್ಯ ನೀತಿಯನ್ನು ನಾವು ಖಂಡಿಸುತ್ತೇವೆ.

ಡಿಕೆಶಿ ಹೇಳಿಕೆ ಮುಸ್ಲಿಂ ಸಮುದಾಯ ತಿರುಗೇಟು

ಮುಸಲ್ಮಾನರಿಗೆ ಕಾಂಗ್ರೆಸ್ ಕೊಟ್ಟಷ್ಟು ರಕ್ಷಣೆ ಬೇರೆ ಯಾವುದೇ ಪಕ್ಷ ಕೊಟ್ಟಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ಇದು ಅತ್ಯಂತ ಖಂಡನೀಯವಾಗಿದೆ. ರಕ್ಷಣೆ ಈ ದೇಶದ ಸಂವಿಧಾನವು ಇಲ್ಲಿನ ಪ್ರತಿಯೊಬ್ಬ ಪ್ರಜೆಗೂ ನೀಡಿರುವ ಹಕ್ಕಾಗಿದೆ. ಅದು ಯಾವುದೇ ಪಕ್ಷ ಯಾವುದೇ ಸಮುದಾಯಕ್ಕೆ ನೀಡಿರುವ ಕೊಡುಗೆಯಲ್ಲ. ಅದನ್ನು ಒಂದು ಸರಕಾರ ನೀಡುವುದು ಅದರ ಕರ್ತವ್ಯವೇ ಹೊರತು, ಅದು ಉಪಕಾರ ಅಥವಾ ಸಾಧನೆಯಲ್ಲ.

ಮುಂದಿನ ದಿನಗಳಲ್ಲಿ ದುಬಾರಿಯಾಗಲಿದೆ

ಮತ ಹಾಕಿ ಗೆಲ್ಲಿಸಿದ ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಬೇಕು, ಅಧಿಕಾರದಲ್ಲಿ ಸರಿಯಾದ ಪಾಲು ನೀಡಬೇಕು, ನೀತಿ ನಿರೂಪಣೆಯಲ್ಲಿ ಪಾತ್ರ ನೀಡಬೇಕು, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಬೇಕು. ಅದ್ಯಾವುದನ್ನೂ ಮಾಡದೆ, ಬೆಂಬಲಿಸಿ ಅಧಿಕಾರದ ಶಕ್ತಿ ನೀಡಿದ ಸಮುದಾಯವನ್ನು ಆಟಕ್ಕುಂಟು ಲೆಕ್ಕಕಿಲ್ಲ ಎಂಬಂತೆ ನಡೆಸಿಕೊಳ್ಳುವುದು ಪರಮ ಅನ್ಯಾಯವಾಗಿದೆ. ಜಾತ್ಯತೀತ ಸರಕಾರ ಬರಬೇಕು ಎಂದು ಬೆಂಬಲ ನೀಡಿದ್ದನ್ನೇ ಮುಸ್ಲಿಮರ ದೌರ್ಬಲ್ಯ, ಅವರಿಗೆ ಬೇರೆ ಆಯ್ಕೆಗಳೇ ಇಲ್ಲ ಎಂದು ಕಾಂಗ್ರೆಸ್ ತಿಳಿದುಕೊಂಡರೆ ಅದು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ರಾಜಕೀಯವಾಗಿ ಬಹಳ ದುಬಾರಿಯಾಗಲಿದೆ.

ಕಾಂಗ್ರೆಸ್ ಪಕ್ಷ ಹಾಗೂ ಸರಕಾರ ಈ ಬಗ್ಗೆ ಕೂಡಲೇ ಗಮನ ಹರಿಸಿ ಮುಸ್ಲಿಂ ಸಮುದಾಯದ ಭಾವನೆಗಳನ್ನು ಅರ್ಥ ಮಾಡಿಕೊಂಡು ತನ್ನ ತಪ್ಪುಗಳನ್ನು ತಿದ್ದಿಕೊಳ್ಳುತ್ತದೆ ಎಂದು ಆಶಿಸುತ್ತೇವೆ. 2023ರ ಚುನಾವಣಾ ಸಂದರ್ಭದಲ್ಲಿ ಸಮುದಾಯಕ್ಕೆ ನೀಡಲಾದ ಎಲ್ಲ ಭರವಸೆಗಳನ್ನು ಈಡೇರಿಸಬೇಕು. ಸರಕಾರದಲ್ಲಿ, ಪಕ್ಷದಲ್ಲಿ ನಿರ್ಧಾರ ತೆಗೆದುಕೊಳ್ಳುವ ಪ್ರಮುಖ ಹುದ್ದೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಸಮುದಾಯಕ್ಕೆ ಆಗಿರುವ ನೋವಿಗೆ ಕಾಂಗ್ರೆಸ್ ಪಕ್ಷ ಕೂಡಲೇ ಸ್ಪಂದಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಾವು ಆಗ್ರಹಿಸುತ್ತೇವೆ.

ಹೀಗೆ ಮುಸ್ಲಿಂ ಸಂಘಟನೆಗಳು ವಿವರವಾಗಿ ಪತ್ರದಲ್ಲಿ ಉಲ್ಲೇಖಿಸಿದ್ದು, ಈ ಪತ್ರವನ್ನು ಕಾಂಗ್ರೆಸ್​​ನ ಎಲ್ಲಾ ಹಿರಿಯ ನಾಯಕರಿಗೆ ರವಾನಿಸಿ ಎಚ್ಚರಿಕೆ ಸಂದೇಶ ರವಾನಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version