ಸಚಿವರಾಗಿದ್ದೂ ಸಿನಿಮಾಗಳಲ್ಲಿ ನಟನೆ: ಪವನ್ ಬಗ್ಗೆ ಹೈಕೋರ್ಟ್ ಹೇಳಿದ್ದೇನು?

ಸಚಿವರಾಗಿದ್ದೂ ಸಿನಿಮಾಗಳಲ್ಲಿ ನಟನೆ: ಪವನ್ ಬಗ್ಗೆ ಹೈಕೋರ್ಟ್ ಹೇಳಿದ್ದೇನು?

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಆಗಿರುವ ಪವನ್ ಕಲ್ಯಾಣ್ (Pawan Kalyan), ಕೆಲವು ಪ್ರಮುಖ ಸಚಿವ ಖಾತೆಗಳನ್ನು ನಿಭಾಯಿಸುತ್ತಿದ್ದಾರೆ. ಪವನ್ ಕಲ್ಯಾಣ್ ಅವರ ಮೇಲೆ ಭಾರಿ ದೊಡ್ಡ ಜವಾಬ್ದಾರಿ ಇದೆ. ಜನಸೇವೆಯನ್ನು ಮಾಡಲೆಂದು ಜನ ನಂಬಿಕೆ ಇಟ್ಟು ಅವರನ್ನು ಆರಿಸಿ ಕಳಿಸಿದ್ದಾರೆ. ಆದರೆ ಪವನ್ ಕಲ್ಯಾಣ್ ಅವರು ಡಿಸಿಎಂ ಆದ ಬಳಿಕ ಸಿನಿಮಾನಲ್ಲಿ ನಟಿಸುತ್ತಿದ್ದು, ಡಿಸಿಎಂ ಆದ ಬಳಿಕ ಅವರ ನಟನೆಯ ಮೂರು ಸಿನಿಮಾಗಳು ಬಿಡುಗಡೆ ಆಗಿವೆ. ಆದರೆ ಇದನ್ನು ವಿರೋಧಿಸಿ ನ್ಯಾಯಾಲಯದಲ್ಲಿ ಅರ್ಜಿ ಹಾಕಲಾಗಿತ್ತು. ಜವಾಬ್ದಾರಿಯುತ ಸ್ಥಾನದಲ್ಲಿರುವಾಗ ಸಿನಿಮಾಗಳಲ್ಲಿ ನಟಿಸುವ ಮೂಲಕ ಸಮಯ ಹಾಗೂ ಜನರ ತೆರಿಗೆ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೀಗ ಹೈಕೋರ್ಟ್ ಈ ಬಗ್ಗೆ ತೀರ್ಪು ಪ್ರಕಟಿಸಿದೆ.

ಮಾಜಿ ಐಎಎಸ್ ಅಧಿಕಾರಿ ಜಿ ವಿಜಯ್ ಕುಮಾರ್ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಈ ಬಗ್ಗೆ ಸಲ್ಲಿಸಿದ್ದರು. ‘ಒಬ್ಬ ವ್ಯಕ್ತಿಯು ಸಚಿವ ಅಥವಾ ಉಪಮುಖ್ಯಮಂತ್ರಿಯಂತಹ ಸಾಂವಿಧಾನಿಕ ಹುದ್ದೆಯಲ್ಲಿದ್ದಾಗ ವಾಣಿಜ್ಯ ಉದ್ದೇಶದ ಸಿನಿಮಾಗಳಲ್ಲಿ ನಟಿಸುವುದು ಅಸಂವಿಧಾನಿಕ ಮತ್ತು ನೈತಿಕವಾಗಿ ತಪ್ಪು. ಇದು ಹಿತಾಸಕ್ತಿ ಸಂಘರ್ಷಕ್ಕೆ (Conflict of Interest) ಕಾರಣವಾಗುತ್ತದೆ’ ಎಂದು ಅವರು ವಾದಿಸಿದ್ದರು. ಅಲ್ಲದೆ, ಪವನ್ ಕಲ್ಯಾಣ್ ಅವರ ಸಿನಿಮಾಗಳ ಟಿಕೆಟ್ ದರ ಏರಿಕೆ, ಹೆಚ್ಚುವರಿ ಶೋಗಳ ಪ್ರದರ್ಶನ ಮತ್ತು ಪ್ರಚಾರಕ್ಕಾಗಿ ಸರ್ಕಾರಿ ಯಂತ್ರದ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಆಂಧ್ರ ಪ್ರದೇಶ ಹೈಕೋರ್ಟ್, ಮುಖ್ಯಮಂತ್ರಿಗಳು ಅಥವಾ ಸಚಿವರು ಸಿನಿಮಾಗಳಲ್ಲಿ ನಟಿಸುವುದಕ್ಕೆ ಯಾವುದೇ ಕಾನೂನುಬದ್ಧ ನಿಷೇಧವಿಲ್ಲ ಎಂದಿದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ದಿವಂಗತ ಎನ್ ಟಿ ರಾಮರಾವ್ ಅವರ ವಿರುದ್ಧವೂ ಇಂತಹುದೇ ಪ್ರಕರಣ ದಾಖಲಾಗಿತ್ತು. ಆಗ ಹೈಕೋರ್ಟ್‌ನ ಪೂರ್ಣ ಪೀಠವು ‘ಮುಖ್ಯಮಂತ್ರಿ ಅಥವಾ ಸಚಿವರು ಸಿನಿಮಾಗಳಲ್ಲಿ ನಟಿಸುವುದಕ್ಕೆ ಯಾವುದೇ ಸಾಂವಿಧಾನಿಕ ಅಡ್ಡಿಯಿಲ್ಲ’ ಎಂದು ತೀರ್ಪು ನೀಡಿತ್ತು. ಅದೇ ತೀರ್ಪನ್ನು ಈಗ ಪವನ್ ಕಲ್ಯಾಣ್ ಪ್ರಕರಣದಲ್ಲೂ ಉಲ್ಲೇಖಿಸಲಾಗಿದೆ. ಅರ್ಜಿದಾರರು ಯಾವುದೇ ಬಲವಾದ ಸಾಕ್ಷ್ಯಾಧಾರಗಳನ್ನು ಒದಗಿಸದ ಕಾರಣ ಮತ್ತು ಈ ಅರ್ಜಿಯು ರಾಜಕೀಯ ಪ್ರೇರಿತವಾಗಿ ಕಾಣುತ್ತಿರುವುದರಿಂದ ನ್ಯಾಯಾಲಯವು ಇದನ್ನು ವಜಾಗೊಳಿಸಿದೆ.

ಇದನ್ನೂ ಓದಿ:ಪವನ್ ಕಲ್ಯಾಣ್, ಶ್ರೀಲೀಲಾ ಜೊತೆಗೆ ‘ಉಸ್ತಾದ್ ಭಗತ್ ಸಿಂಗ್’ ನೋಡಿದ ಚಿರಂಜೀವಿ

ಪವನ್ ಕಲ್ಯಾಣ್ ಅವರು ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಆದ ಬಳಿಕ ಅವರ ನಟನೆಯ ‘ಹರಿ ಹರ ವೀರ ಮಲ್ಲು’, ‘OG’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳು ಬಿಡುಗಡೆ ಆದವು. ಉಪ ಮುಖ್ಯಮಂತ್ರಿ ಆಗಿದ್ದಾಗಲೇ ಈ ಸಿನಿಮಾಗಳಲ್ಲಿ ಪವನ್ ಕಲ್ಯಾಣ್ ನಟನೆ ಸಹ ಮಾಡಿದರು. ಆಡಳಿತ, ರಾಜಕೀಯದ ಕೆಲಸಗಳ ನಡುವೆ ಪವನ್ ಅವರು ಸಿನಿಮಾ ಚಿತ್ರೀಕರಣಕ್ಕಾಗಿ ಸಮಯ ಹೊಂದಿಸಿಕೊಂಡಿದ್ದರು. ಅಲ್ಲದೆ, ತಮ್ಮ ಜನಸೇವೆಯ ಕೆಲಸಗಳಿಗೆ ತೊಂದರೆ ಆಗದಂತೆ ಚಿತ್ರೀಕರಣ ಮಾಡಿರುವುದಾಗಿ ಪವನ್ ಅವರು ಹೇಳಿಕೊಂಡಿದ್ದಾರೆ.

ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಟ ಪವನ್ ಕಲ್ಯಾಣ್, ‘ತಮ್ಮ ಜೀವನೋಪಾಯಕ್ಕೆ ಮತ್ತು ಆರ್ಥಿಕವಾಗಿ ಸ್ವತಂತ್ರವಾಗಿರಲು ಸಿನಿಮಾ ವೃತ್ತಿಯ ಅಗತ್ಯವಿದೆ. ಆದರೆ ಆಡಳಿತಕ್ಕೆ ಯಾವುದೇ ತೊಂದರೆಯಾಗದಂತೆ ದಿನಕ್ಕೆ ಕೇವಲ ಕೆಲವು ಗಂಟೆಗಳನ್ನು ಮಾತ್ರ ಸಿನಿಮಾಗಾಗಿ ಮೀಸಲಿಡುತ್ತೇನೆ’ ಎಂದು ತಿಳಿಸಿದ್ದರು. ಅಲ್ಲದೆ, ಚುನಾವಣೆಗೆ ಧುಮುಕುವ ಮೊದಲು ಒಪ್ಪಿಕೊಂಡಿದ್ದ ಸಿನಿಮಾಗಳನ್ನಷ್ಟೆ ಪವನ್ ಕಲ್ಯಾಣ್ ಮುಗಿಸಿ ಕೊಟ್ಟಿದ್ದು, ಇನ್ನು ಮುಂದೆ ಅಧಿಕಾರದಲ್ಲಿ ಇರುವವರೆಗೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪೆಟ್ರೋಲ್, ಡೀಸಲ್ ಕೊರತೆ ಇಲ್ಲ, ಗಾಬರಿ ಬೇಡ: ಪೆಟ್ರೋಲಿಯಂ ಕಂಪನಿಗಳಿಂದ ಸ್ಪಷ್ಟನೆ

ನವದೆಹಲಿ, ಮಾರ್ಚ್ 25: ದೇಶದ ಹಲವೆಡೆ ಎಲ್​ಪಿಜಿಗೆ ತತ್ವಾರವಾಗಿರುವಂತೆ, ಈಗ ಪೆಟ್ರೋಲ್ ಮತ್ತು ಡೀಸಲ್​ಗೂ ಜನರು ಹಾಹಾಕಾರ ಶುರುವಿಟ್ಟುಕೊಂಡಿದ್ದಾರೆ. ಪೆಟ್ರೋಲ್, ಡೀಸಲ್ ಕೊರತೆ ಇದೆ ಎನ್ನುವ ವದಂತೆ ಕೆಲ ನಗರ ಮತ್ತು ಪ್ರದೇಶಗಳಲ್ಲಿ ದಟ್ಟವಾಗಿ ಹಬ್ಬುತ್ತಿದೆ. ಹೈದರಾಬಾದ್ ಇತ್ಯಾದಿ ಕಡೆ ಜನರು ಪೆಟ್ರೋಲ್ ಬಂಕ್​ಗಳಿಗೆ ಮುಗಿಬಿದ್ದು ಫುಲ್ ಟ್ಯಾಂಕ್ ತುಂಬಿಸಿಕೊಳ್ಳಲು ಯತ್ನಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಬೆಂಗಳೂರಿನಲ್ಲೂ ಹಲವೆಡೆ ಜನರು ಪೆಟ್ರೋಲ್ ಬಂಕ್​ಗಳಲ್ಲಿ (Petrol) ಎಂದಿಗಿಂತ ಹೆಚ್ಚು ಕ್ಯೂ ನಿಂತಿರುವ ದೃಶ್ಯಗಳು ಕಂಡು ಬರುತ್ತಿವೆ. ಇದೇ ವೇಳೆ, ಪೆಟ್ರೋಲ್, ಡೀಸಲ್ ಕೊರತೆ ಎಲ್ಲಿಯೂ ಇಲ್ಲ ಎಂದು ತೈಲ ಮಾರುಕಟ್ಟೆ ಕಂಪನಿಗಳು ಇದೇ ವೇಳೆ ಸ್ಪಷ್ಟಪಡಿಸಿವೆ.

‘ಕೆಲ ಪ್ರದೇಶಗಳಲ್ಲಿ ಪೆಟ್ರೋಲ್ ಮತ್ತು ಡೀಸಲ್ ಕೊರತೆ ಇದೆ ಎನ್ನುವ ವದಂತಿ ಆಧಾರ ರಹಿತವಾಗಿದೆ. ದೇಶಾದ್ಯಂತ ಎಲ್ಲಿಯೂ ಇಂಧನ ಕೊರತೆ ಇಲ್ಲ. ಭಾರತವು ಪೆಟ್ರೋಲ್ ಮತ್ತು ಡೀಸಲ್ ರಫ್ತು ಮಾಡುವ ದೇಶವಾಗಿದೆ. ನಮ್ಮಲ್ಲಿ ಸಾಕಷ್ಟು ಪ್ರಮಾಣದ ಕಚ್ಛಾ ತೈಲ, ಪೆಟ್ರೋಲ್, ಡೀಸಲ್ ಮತ್ತು ಎಟಿಎಫ್ ಸಂಗ್ರಹ ಇದೆ. ಸರಬರಾಜು ಸರಪಳಿ ಯಾವುದೇ ವ್ಯತ್ಯಯಗೊಳ್ಳದೆ ಕಾರ್ಯನಿರ್ವಹಿಸುತ್ತಿವೆ’ ಎಂದು ಭಾರತ್ ಪೆಟ್ರೋಲಿಯಂ ನಿಗಮ ಸಂಸ್ಥೆಯು ಹೇಳಿಕೆ ನೀಡಿದೆ.

ಇದನ್ನೂ ಓದಿ: Oil Prices: ಟ್ರಂಪ್ ವರಸೆ ಬದಲು; ಕಚ್ಛಾ ತೈಲ ಬೆಲೆ ದಿಢೀರ್ ಇಳಿಕೆ

‘ಭಾರತ್ ಪೆಟ್ರೋಲಿಯಂ ನಿಗಮ ನಿಯಮಿತ ಸಂಸ್ಥೆಯು ಪೂರ್ಣವಾಗಿ ಕಾರ್ಯಾಚರಿಸುತ್ತಿದ್ದು, ತಡೆರಹಿತವಾಗಿ ಇಂಧನ ಪೂರೈಕೆ ಮಾಡಲು ಬದ್ಧವಾಗಿದೆ. ನಾಗರಿಕರು ಆತಂಕಕ್ಕೊಳಗಾಗಿ ಅನಗತ್ಯವಾಗಿ ಇಂಧನ ಖರೀದಿಗೆ ಮುಂದಾಗಬಾರದೆಂದು ಕೇಳಿಕೊಳ್ಳುತ್ತೇವೆ. ಇಂಧನ ಲಭ್ಯತೆ ಸಾಕಷ್ಟಿದೆ ಮತ್ತು ಸ್ಥಿರವಾಗಿದೆ’ ಎಂದು ಸಂಸ್ಥೆಯು ತಿಳಿಸಿದೆ.

ಕರ್ನಾಟಕದಲ್ಲಿ ಪೆಟ್ರೋಲ್, ಎಲ್​ಪಿಜಿಗೆ ನಾಗರಿಕರ ಹಾಹಾಕಾರ

ಇಂದೋರ್, ಅಹ್ಮದಾಬಾದ್, ಸೂರತ್, ಕಚ್ಛ್, ಹೈದರಾಬಾದ್, ನಾಗಪುರ್ ಮೊದಲಾದ ನಗರಗಳಲ್ಲಿ ಅನೇಕ ಪೆಟ್ರೋಲ್ ಪಂಪ್​ಗಳಲ್ಲಿ ವಾಹನ ಸವಾರರು ಪೆಟ್ರೋಲ್, ಡೀಸಲ್ ತುಂಬಿಸಿಕೊಳ್ಳಲು ಉದ್ದುದ್ದ ಸರದಿಯಲ್ಲಿ ನಿಂತಿರುವ ದೃಶ್ಯಗಳ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಎಲ್​ಪಿಜಿ ಸಿಲಿಂಡರ್ ಬುಕ್ ಆಗುತ್ತಿಲ್ಲದಿರುವುದು, ಬುಕ್ ಆದರೂ ಡೆಲಿವರಿ ಆಗುತ್ತಿಲ್ಲದೇ ಇರುವುದು ಬಹಳ ಜನರಿಗೆ ಆತಂಕ ಮೂಡಿಸಿದೆ. ಅನೇಕ ಹೋಟೆಲ್, ಮುಂಗಟ್ಟುಗಳು ಬಾಗಿಲು ಬಂದ್ ಮಾಡುವ ಸ್ಥಿತಿ ಬಂದಿದೆ. ಪೆಟ್ರೋಲ್ ಮತ್ತು ಡೀಸಲ್​ಗೂ ಇದೇ ಪರಿಸ್ಥಿತಿ ಬರಬಹುದು ಎಂಬುದು ಜನರ ಆತಂಕ.

ಇದನ್ನೂ ಓದಿ: ಸಾಧ್ಯವಿರುವೆಡೆಯೆಲ್ಲಾ ತೈಲ ಮತ್ತು ಅನಿಲ ಪಡೆಯುತ್ತಿದ್ದೇವೆ- ಪ್ರಧಾನಿ ಮೋದಿ

ಎಲ್​ಪಿಜಿಯಾದರೆ ಭಾರತ ಆಮದು ಮೇಲೆ ಹೆಚ್ಚು ಅವಲಂಬಿತವಾಗಿದೆ. ಅದರಲ್ಲೂ ಗಲ್ಫ್ ರಾಷ್ಟ್ರಗಳಿಂದ ಹೆಚ್ಚಿನ ಸರಬರಾಜು ಆಗುತ್ತದೆ. ಹೀಗಾಗಿ, ಎಲ್​ಪಿಜಿಗೆ ಕೊರತೆಯ ಸ್ಥಿತಿ ಇರುವುದು ವಾಸ್ತವವೇ. ಆದರೆ, ಕಚ್ಛಾ ತೈಲಕ್ಕೆ ಭಾರತ ರಷ್ಯಾದಿಂದ ಪೂರೈಕೆ ಪಡೆಯುತ್ತಿದೆ. ಕಚ್ಛಾ ತೈಲ ಪಡೆದು ಅದನ್ನು ಸಂಸ್ಕರಿಸಿ ಪೆಟ್​ರೋಲಿಯಂ ಉತ್ಪನ್ನಗಳನ್ನು ಭಾರತವೇ ತಯಾರಿಸುತ್ತದೆ. ಅನೇಕ ದೇಶಗಳಿಗೆ ರಫ್ತು ಕೂಡ ಮಾಡುತ್ತದೆ. ಹೀಗಾಗಿ, ಪೆಟ್ರೋಲ್ ಮತ್ತು ಡೀಸಲ್ ದಾಸ್ತಾನು ಭಾರತದಲ್ಲಿ ಸಾಕಷ್ಟಿದೆ ಎನ್ನುವುದು ಸರ್ಕಾರದ ವಾದ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಮರ್ಷಿಯಲ್ ಅಷ್ಟೇ ಅಲ್ಲ, ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್ ಕೂಡ ಸಿಗ್ತಿಲ್ಲ: ಏಜೆನ್ಸಿಗಳ ಮುಂದೆ ಕಿಲೋಮೀಟರ್ ಉದ್ದದ ಕ್ಯೂ!

ಬೆಂಗಳೂರು, ಮಾರ್ಚ್ 25: ಕರ್ನಾಟಕದ ವಿವಿಧ ಕಡೆಗಳಲ್ಲಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಸಮಸ್ಯೆ ತೀವ್ರಗೊಂಡಿದೆ. ಹಲವು ಜಿಲ್ಲೆಗಳಲ್ಲಿ ಸಿಲಿಂಡರ್ ಕೊರತೆ ಎದ್ದು ಕಾಣುತ್ತಿದೆ. ಕಲಬುರಗಿ, ಆಳಂದ, ಬಳ್ಳಾರಿ, ಸಂಡೂರು ಮತ್ತು ದಾವಣಗೆರೆಯ ಜಗಳೂರಿನಲ್ಲಿ ಜನರು ಗ್ಯಾಸ್ ಸಿಲಿಂಡರ್‌ಗಳಿಗಾಗಿ ಪರದಾಡುತ್ತಿದ್ದಾರೆ. ಇಂಡಿಯನ್ ಗ್ಯಾಸ್ ಏಜೆನ್ಸಿಗಳ ಮುಂದೆ ರಾತ್ರಿಯಿಡೀ ಸರತಿ ಸಾಲಿನಲ್ಲಿ ನಿಲ್ಲುವ ದೃಶ್ಯಗಳು ಕಂಡುಬಂದಿವೆ. ಮಕ್ಕಳು, ಮಹಿಳೆಯರು ಮತ್ತು ವೃದ್ಧರೂ ಸಹ ಸಿಲಿಂಡರ್ ಪಡೆಯಲು ಮಳೆ, ಗಾಳಿ, ಬಿಸಿಲನ್ನೂ ಲೆಕ್ಕಿಸದೆ ಕಾಯುತ್ತಿದ್ದಾರೆ. ಖಾಲಿ ಸಿಲಿಂಡರ್‌ಗಳನ್ನು ಕಿಲೋಮೀಟರ್‌ಗಟ್ಟಲೆ ದೂರದಲ್ಲಿ ಇಟ್ಟು ಸರದಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಳ್ಳಾರಿಯ ಗಗನಶ್ರೀ ಇಂಡಿಯನ್ ಗ್ಯಾಸ್ ಏಜೆನ್ಸಿ ಮುಂಭಾಗದಲ್ಲಿ 15ರಿಂದ 18 ದಿನಗಳಿಂದ ಸಿಲಿಂಡರ್ ಪೂರೈಕೆಯಾಗದೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದೆ ಏಜೆನ್ಸಿ ಸಿಬ್ಬಂದಿಯೇ ಮನೆಗೆ ಸಿಲಿಂಡರ್ ತಲುಪಿಸುತ್ತಿದ್ದರು. ಆದರೆ, ಈಗ ಗ್ರಾಹಕರು ನೇರವಾಗಿ ಏಜೆನ್ಸಿಗಳಿಗೆ ತೆರಳಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಅಡುಗೆ ಮಾಡಲು ಸಿಲಿಂಡರ್ ಇಲ್ಲದೆ, ಹೋಟೆಲ್‌ಗಳಲ್ಲಿ ದುಪ್ಪಟ್ಟು ಬೆಲೆ ತೆತ್ತು ಊಟ ಮಾಡಬೇಕಾದ ಅನಿವಾರ್ಯತೆ ಕುರಿತು ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ. ಕೆಲವೆಡೆ ಸಿಲಿಂಡರ್ ಸ್ಟಾಕ್ ಬಂದ ತಕ್ಷಣ ಜನರು ಮುಗಿಬಿದ್ದು ಖರೀದಿಸಲು ಯತ್ನಿಸುತ್ತಿದ್ದಾರೆ. ದಾವಣಗೆರೆಯಲ್ಲಿ ಏಜೆನ್ಸಿ ಮಾಲಿಕರೊಂದಿಗೆ ಗ್ರಾಹಕರ ಮಾತಿನ ಚಕಮಕಿ ಕಂಡುಬಂದಿದೆ.

ಕೆಲವು ಗ್ಯಾಸ್ ಏಜೆನ್ಸಿಗಳು ಈ ಪರಿಸ್ಥಿತಿಯ ಲಾಭ ಪಡೆದು ಬ್ಲಾಕ್ ಮಾರ್ಕೆಟ್‌ನಲ್ಲಿ ಸಿಲಿಂಡರ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿವೆ ಎಂಬ ಆರೋಪವೂ ಕೇಳಿಬಂದಿದೆ. 950 ರೂಪಾಯಿ ಬೆಲೆಯ ಸಿಲಿಂಡರ್‌ಗೆ ಹೆಚ್ಚುವರಿ 50 ರೂಪಾಯಿ ನೀಡಿ ಖರೀದಿಸಬೇಕಾದ ಪರಿಸ್ಥಿತಿ ಇದೆ ಎಂದು ಗ್ರಾಹಕರು ದೂರಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ, ಡಿಸಿಎಂ ಜೊತೆ ಸಚಿವರ ಜೊತೆ ಶಾಸಕರ ಫೋಟೋಶೂಟ್ ಹೇಗಿತ್ತು ನೋಡಿ!

ಬೆಂಗಳೂರು, ಮಾರ್ಚ್​ 25: ಕರ್ನಾಟಕ ವಿಧಾನಸಭೆಯ ಮುಂಬರುವ ಬಜೆಟ್ 2026ರ ಅಧಿವೇಶನಕ್ಕೆ ಮುನ್ನ, ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಶಾಸಕರ ಸಮೂಹ ಫೋಟೋಶೂಟ್ ಆಯೋಜಿಸಲಾಗಿತ್ತು. ಈ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ಶಾಸಕರು ಮತ್ತು ಸಚಿವರು ಭಾಗವಹಿಸಿದರು. ವಿಧಾನಸಭೆಯ ಸದಸ್ಯರು ಒಟ್ಟಾಗಿ ಕ್ಯಾಮರಾ ಮುಂದೆ ನಿಂತು ಸ್ಮರಣೀಯ ಕ್ಷಣಗಳನ್ನು ಸೆರೆಹಿಡಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾವು ತಲೆ ಬಾಗುವುದಿಲ್ಲ, ಟ್ರಂಪ್ ಶಾಂತಿ ಪ್ರಸ್ತಾಪಕ್ಕೆ ಕಠಿಣ ಷರತ್ತುಗಳ ವಿಧಿಸಿದ ಇರಾನ್

ಟೆಹ್ರಾನ್, ಮಾರ್ಚ್​ 25:ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಮಧ್ಯೆ ಸಂಭಾವ್ಯ ಕದನ ವಿರಾಮಕ್ಕೆ ಇರಾನ್(Iran) ಹೆಚ್ಚಿನ ಮತ್ತು ಕಠಿಣ ಷರತ್ತುಗಳನ್ನು ವಿಧಿಸಿದೆ. ಡೊನಾಲ್ಡ್ ಟ್ರಂಪ್ ಅವರ ಹೊಸ ಮಾತುಕತೆಗಳ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿ, ಗಲ್ಫ್‌ನಲ್ಲಿನ ಅಮೆರಿಕದ ಮಿಲಿಟರಿ ನೆಲೆಗಳನ್ನು ಮುಚ್ಚುವುದರಿಂದ ಹಿಡಿದು ನಿರ್ಬಂಧಗಳನ್ನು ತೆಗೆದುಹಾಕುವುದು ಮತ್ತು ಪ್ರಮುಖ ಹಡಗು ಮಾರ್ಗದ ಮೇಲೆ ನಿಯಂತ್ರಣ ಸಾಧಿಸುವವರೆಗೆ ಇರಾನ್ ವ್ಯಾಪಕ ಬೇಡಿಕೆಗಳನ್ನು ಮುಂದಿಟ್ಟಿದೆ.

ಅಮೆರಿಕ ಮತ್ತು ಇಸ್ರೇಲ್ ಜತೆಗಿನ ನೇರ ಮುಖಾಮುಖಿ ಸಂದರ್ಭದಲ್ಲಿ ಯಾವುದೇ ಒತ್ತಡಕ್ಕೆ ತಾನು ಮಣಿಯುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಅಮೆರಿಕ ಸಿದ್ಧಪಡಿಸಿದ ಶಾಂತಿ ಪ್ರಸ್ತಾವನೆಯನ್ನು ಇರಾನ್​ಗೆ ಕಳುಹಿಸಲಾಗಿದೆ, ಇರಾನ್‌ನ ಸೇನೆಯು ಅಮೆರಿಕ ನಿರ್ಧಾರಗಳನ್ನು ಸಾರ್ವಜನಿಕವಾಗಿ ಅಪಹಾಸ್ಯ ಮಾಡಿದ್ದರಿಂದ, ಪಶ್ಚಿಮ ಏಷ್ಯಾದಲ್ಲಿ ತೀವ್ರ ಮಾತಿನ ಸಮರ ಭುಗಿಲೆದ್ದಿದೆ.

ಇರಾನ್‌ನ ಸಶಸ್ತ್ರ ಪಡೆಗಳ ಏಕೀಕೃತ ಕಮಾಂಡ್ ಆಗಿರುವ ಖತಮ್ ಅಲ್-ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯ ವಕ್ತಾರ ಇಬ್ರಾಹಿಂ ಝೋಲ್ಫಾಕರಿ, ಅಮೆರಿಕವನ್ನು ಅಪಹಾಸ್ಯ ಮಾಡಿದ್ದರು. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಒಪ್ಪಂದವನ್ನು ಬಯಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಒಂದು ದಿನದ ನಂತರ ಅವರ ಹೇಳಿಕೆಗಳು ಬಂದಿವೆ.

ಮತ್ತಷ್ಟು ಓದಿ: ಇಂಧನದ ಬೆಲೆ ಕಡಿಮೆ ಮಾಡುವ ಪ್ಲಾನ್; ಟ್ರಂಪ್ ಜೊತೆ ಯಾವ ಮಾತುಕತೆಯೂ ನಡೆದಿಲ್ಲ ಎಂದ ಇರಾನ್

ಇರಾನ್ ಬೇಡಿಕೆಗಳೇನು?

ಇರಾನ್​ನ ಮೊದಲ ಬೇಡಿಕೆ ಎಂದರೆ ಅಮೆರಿಕ ಮತ್ತು ಇಸ್ರೇಲ್ ತನ್ನ ಮಿಲಿಟರಿ ನೆಲೆಗಳು, ಇಂಧನ ಮೂಲಸೌಕರ್ಯ ಮತ್ತು ಪರಮಾಣು ಸ್ಥಾವರಗಳ ಮೇಲಿನ ಎಲ್ಲಾ ವಾಯು ಮತ್ತು ಕ್ಷಿಪಣಿದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು. ಇಸ್ರೇಲ್ ಮತ್ತು ಅಮೆರಿಕವು ತಮ್ಮ ಉಳಿದ ಉನ್ನತ ನಾಯಕರನ್ನು ಗುರಿಯಾಗಿಸಬಾರದು. ಹಾಗಾಗಿ ಮಾತುಕತೆಗೆ ಬರುವ ಮುನ್ನ ತಮ್ಮ ನಾಯಕರ ಸುರಕ್ಷತೆ ಬಗ್ಗೆ ಖಾತ್ರಿ ಬಯಸುತ್ತಿದ್ದಾರೆ.

ಗಲ್ಫ್​ ರಾಷ್ಟ್ರಗಳಲ್ಲಿನ ಸೇನಾ ನೆಲೆಗಳನ್ನು ಮುಚ್ಚಬೇಕು, ಯುದ್ಧ ಪರಿಹಾರವನ್ನು ಪಾವತಿಸಬೇಕು, ಇರಾನ್ ಮೇಲಿನ ಎಲ್ಲಾ ಅಂತಾರಾಷ್ಟ್ರೀಯ ಮತ್ತು ಯುಎಸ್ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು. ಇರಾನ್ ತನ್ನ ಕ್ಷಿಪಣಿ ಕಾರ್ಯಗಳನ್ನು ಯಾವುದೇ ನಿರ್ಬಂಧಗಳಿಲ್ಲದೆ ಮುಂದುವರೆಸಲು ಅವಕಾಶ ನೀಡಬೇಕು ಎಂದು ಇರಾನ್ ಕೇಳಿದೆ.

ಯುದ್ಧ ಮತ್ತು ನಿರಂತರ ನಿರ್ಬಂಧಗಳಿಂದಾಗಿ ಇರಾನ್ ಆರ್ಥಿಕತೆಯು ಒತ್ತಡದಲ್ಲಿದೆ. ಯಾವುದೇ ಒಪ್ಪಂದದ ಭಾಗವಾಗಿ ತನ್ನ ತೈಲರಫ್ತು ಮತ್ತು ಇಂಧನಗಳ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ತೆಗೆದುಹಾಕಬೇಕು ಎಂದು ಹೇಳಿದೆ.

ಇತ್ತೀಚೆಗಷ್ಟೇ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಮಾತನಾಡಿ, ಇರಾನ್ ಎಂದಿಗೂ ಕದನವಿರಾಮಕ್ಕಾಗಿ ಅಮೆರಿಕವನ್ನು ಬೇಡಿಕೊಂಡಿಲ್ಲ, ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಗತ್ಯವಿರುವಷ್ಟು ಕಾಲ ಹೋರಾಡಲು ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

ಎಲ್​ಪಿಜಿ ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ, ಕೇಂದ್ರ ಸ್ಪಷ್ಟನೆ

ನವದೆಹಲಿ, ಮಾರ್ಚ್​ 25: ಎಲ್​ಪಿಜಿ(LPG) ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯ ನಡುವೆ, ಅನಿಲ ಕಂಪನಿಗಳು ತಮ್ಮ ಬುಕಿಂಗ್ ನಿಯಮಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿವೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಆದರೆ ಅಂತಹ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಸರ್ಕಾರ  ಹೇಳಿದೆ.

ತಮ್ಮ ಮುಂದಿನ ಸಿಲಿಂಡರ್ ಬುಕ್ ಮಾಡಲು ಹೆಚ್ಚು ಸಮಯ ಕಾಯಬೇಕಾಗುತ್ತದೆ ಎಂದು ಹೇಳಲಾಗಿತ್ತು.
ಗ್ರಾಹಕರು ನಿಗದಿತ ಸಮಯಕ್ಕಿಂತ ಮೊದಲು ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಲು ಸಾಧ್ಯವಾಗುವುದಿಲ್ಲ. ಪೂರೈಕೆಯನ್ನು ಸಮತೋಲನಗೊಳಿಸಲು ಮತ್ತು ಅಗತ್ಯವಿರುವವರಿಗೆ ಅನಿಲ ಲಭ್ಯವಾಗುವಂತೆ ನೋಡಿಕೊಳ್ಳಲು ಈ ರೀತಿ ಮಾಡಲಾಗಿದೆ ಎಂದು ವರದಿಗಳು ಹೇಳಿದ್ದವು.

ವರದಿಗಳಲ್ಲಿ ಏನಿತ್ತು?
14.2 ಕೆಜಿ ಗೃಹಬಳಕೆ ಸಿಲಿಂಡರ್‌ಗಳ ಬುಕಿಂಗ್ ಅಂತರವನ್ನು ಈಗ ಹೆಚ್ಚಿಸಲಾಗಿದೆ. ಹಿಂದಿನ 25 ದಿನಗಳ ಅವಧಿಯನ್ನು ಈಗ 35 ದಿನಗಳವರೆಗೆ ವಿಸ್ತರಿಸಲಾಗಿದೆ. ಇದರರ್ಥ ನೀವು ಒಂದು ಸಿಲಿಂಡರ್ ಖರೀದಿಸಿದ್ದರೆ, ಮುಂದಿನ ಬುಕಿಂಗ್‌ಗಾಗಿ ನೀವು ಕನಿಷ್ಠ 35 ದಿನಗಳು ಕಾಯಬೇಕಾಗುತ್ತದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಡಿಯಲ್ಲಿ, ಈ ನಿಯಮವು ನಿರ್ದಿಷ್ಟವಾಗಿ ಎರಡು ಸಿಲಿಂಡರ್ ಸಂಪರ್ಕವನ್ನು ಹೊಂದಿರುವವರಿಗೆ ಅನ್ವಯಿಸುತ್ತದೆ, ಅಂದರೆ ಡಬಲ್-ಬಾಟಮ್ ಸಂಪರ್ಕವನ್ನು ಹೊಂದಿರುವವರಿಗೆ ಅನ್ವಯವಾಗುತ್ತೆ ಎಂದು ಹೇಳಲಾಗಿತ್ತು.

ಮತ್ತಷ್ಟು ಓದಿ: ಸರ್ಕಾರದಿಂದ ಎಲ್​ಪಿಜಿ ಪೂರೈಕೆ ನಿಯಮದಲ್ಲಿ ಬದಲಾವಣೆ; ಈ ಕುಟುಂಬಗಳಿಗೆ ಎಲ್​ಪಿಜಿ ಗ್ಯಾಸ್ ಸಿಗಲ್ಲ

ಅನಿಲ ಕಂಪನಿಗಳು ವಿವಿಧ ರೀತಿಯ ಗ್ರಾಹಕರಿಗೆ ವಿಭಿನ್ನ ನಿಯಮಗಳನ್ನು ನಿಗದಿಪಡಿಸಿವೆ. ಉಜ್ವಲ ಯೋಜನೆಯ ಫಲಾನುಭವಿಗಳು ಈಗ ಇನ್ನೂ ಹೆಚ್ಚು ಸಮಯ ಕಾಯಬೇಕಾಗುತ್ತದೆ. ಈ ಯೋಜನೆಯಡಿಯಲ್ಲಿ ದಾಖಲಾದವರು ತಮ್ಮ ಮುಂದಿನ ಬುಕಿಂಗ್‌ಗಾಗಿ 45 ದಿನಗಳು ಕಾಯಬೇಕಾಗುತ್ತದೆ. ಸಿಂಗಲ್-ಸಿಲಿಂಡರ್ ಸಂಪರ್ಕ ಹೊಂದಿರುವ ಗ್ರಾಹಕರು ಹಿಂದಿನ ವಿತರಣೆಯ 25 ದಿನಗಳ ನಂತರ ಮಾತ್ರ ಹೊಸ ಸಿಲಿಂಡರ್ ಅನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ ಎನ್ನಲಾಗಿತ್ತು.

ಆದರೆ, ಅಸ್ತಿತ್ವದಲ್ಲಿರುವ ಮರುಪೂರಣ ಬುಕಿಂಗ್ ಸಮಯ ಮಿತಿಗಳು ಬದಲಾಗದೆ ಉಳಿದಿವೆ ಮತ್ತು ಮುಂದುವರಿಯುತ್ತವೆ. ನಗರ ಪ್ರದೇಶಗಳಲ್ಲಿ 25 ದಿನಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳಲ್ಲಿ ಮತ್ತೊಂದು ಸಿಲಿಂಡರ್ ಬುಕ್ ಮಾಡಬಹುದು. ದೇಶದಲ್ಲಿ ಸಾಕಷ್ಟು LPG ಸ್ಟಾಕ್‌ಗಳು ಲಭ್ಯವಿದೆ. ಯಾವುದೇ ವದಂತಿಯನ್ನು ನಂಬಬಾರದು ಎಂದು ಪಿಐಬಿಯಲ್ಲಿ ಬರೆಯಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಾಜಸ್ಥಾನ ರಾಯಲ್ಸ್ ಮಾರಾಟ ಆಗಿದ್ದಕ್ಕೆ ಶೇನ್ ವಾರ್ನ್ ಕುಟುಂಬಕ್ಕೆ ಸಿಗಲಿದೆ 450 ಕೋಟಿ ರೂಪಾಯಿ

ಐಪಿಎಲ್ ಆರಂಭಕ್ಕೂ ಮೊದಲು ಕೆಲವು ಮಹತ್ವದ ಬೆಳವಣಿಗೆ ನಡೆದಿದೆ. ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾರಾಟ ಆಗಿದೆ. ಆರ್​​ಸಿಬಿ ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ ಖರೀದಿಸಿದರೆ, ರಾಜಸ್ಥಾನ ರಾಯಲ್ಸ್ ತಂಡವನ್ನು ಅಮೆರಿಕ ಮೂಲದ ಕಲ್ ಸೋಮಾನಿ ಒಕ್ಕೂಟ ಈ ಕಂಪನಿಯ ಶೇ. 100ರಷ್ಟು ಷೇರನ್ನು ಖರೀದಿ ಮಾಡಿದೆ. ಇದಕ್ಕಾಗಿ 15,290 ಕೋಟಿ ರೂಪಾಯಿ ಪಾವತಿಸಿದೆ. ಈ ಹಣದಲ್ಲಿ ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ದಿವಂಗತ ಶೇನ್ ವಾರ್ನ್​​​ ಕುಟುಂಬಕ್ಕೂ 450 ಕೋಟಿ ರೂಪಾಯಿ ಸಿಗಲಿದೆ.

2008ರಲ್ಲಿ ಶೇನ್ ವಾರ್ನ್ ಅವರು ರಾಜಸ್ಥಾನ ರಾಯಲ್ಸ್ ಪರ ಆಡಿದ್ದರು. ಅವರು ತಂಡದ ಕ್ಯಾಪ್ಟನ್ ಹಾಗೂ ಆಗಿದ್ದರು. ಆ ಬಾರಿ ಆರ್​​ಆರ್​ ತಂಡ ಗೆಲುವು ಕಂಡಿತು. ವಾರ್ನ್​ ಅವರು ತಂಡವನ್ನು ಪ್ರತಿನಿಧಿಸಿದ್ದಕಾಗಿ ಪ್ರತಿ ವರ್ಷ ತಂಡದ ಶೇ.0.75 ಶೇರನ್ನು ಪಡೆದಿದ್ದರು. ‘ನನ್ನ ಒಪ್ಪಂದದ ಭಾಗವಾಗಿ ನಾನು ತಂಡದ ನಾಯಕ, ಕೋಚ್ ಮತ್ತು ನಾನು ಬಯಸಿದ ರೀತಿಯಲ್ಲಿ ಕ್ರಿಕೆಟ್ ತಂಡವನ್ನು ನಡೆಸಲು ಕೇಳಿಕೊಂಡರು. ನಾನು ಎಲ್ಲವೂ ಆಗಿದ್ದೆ’ ಎಂದು ಶೇನ್ ವಾರ್ನ್ ಹೇಳಿದ್ದರು.

ನಾಲ್ಕು ಆವೃತ್ತಿಗಳಲ್ಲಿ ರಾಯಲ್ಸ್ ಅನ್ನು ವಾರ್ನ್ ಪ್ರತಿನಿಧಿಸಿದ್ದರಿಂದ, ಫ್ರಾಂಚೈಸಿಯ ಮಾಲೀಕತ್ವದಲ್ಲಿ ಅವರಿಗೆ ಶೇ.3 ಪಾಲು ನಿಡಲಾಗಿದೆ. ಇದರಿಂದಾಗಿ ಅವರ ಪಾಲಿನ ಮೌಲ್ಯ ಸುಮಾರು $48 ಮಿಲಿಯನ್ (ರೂ. 450-460 ಕೋಟಿ) ಆಗಿತ್ತು. ಹೀಗಾಗಿ, ಕುಟುಂಬದವರಿಗೆ ತಂಡದ ಮಾರಾಟದಿಂದ ದೊಡ್ಡ ಮೊತ್ತ ಸಿಗುತ್ತಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಈ ಡೀಲ್ ಕೊನೆಯಾಗಲಿದೆ.

ಇದನ್ನೂ ಓದಿ:  ಆರ್​​ಸಿಬಿ ಹೆಸರು ಬದಲಾವಣೆ ಪಕ್ಕಾ? ಇಲ್ಲಿದೆ ಕಾರಣ

2022ರಲ್ಲಿ ಸ್ಪಿನ್ ದಿಗ್ಗಜ ಶೇನ್ ವಾರ್ನ್ ನಿಧನರಾದರು. ಅವರು ಮೂವರು ಮಕ್ಕಳನ್ನು ಅಗಲಿದ್ದರು. ಅವರಿಗೆ ಹೃದಯಾಘಾತ ಆಗಿತ್ತು ಎನ್ನಲಾಗಿದೆ. ಅವರ ಸಾವಿನ ಸುತ್ತ ಸಾಕಷ್ಟು ಅನುಮಾನ ಕೂಡ ಮೂಡಿತ್ತು.

Source link

ದುನಿಯಾ ವಿಜಿ ತೆಲುಗು ಸಿನಿಮಾ ಕಾದಿದೆ ಸಂಕಷ್ಟ?

ದುನಿಯಾ ವಿಜಿ (Duniya Viji) ಈಗ ಕೇವಲ ಕನ್ನಡ ನಟರು ಮಾತ್ರವೇ ಅಲ್ಲ. ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿಯೂ ನಟಿಸುತ್ತಾ ಪ್ಯಾನ್ ಇಂಡಿಯಾ ನಟರಾಗುವತ್ತ ದಾಪುಗಾಲು ಹಾಕಿದ್ದಾರೆ. ಈಗಾಗಲೇ ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ಜೊತೆಗೆ ‘ವೀರ ನರಸಿಂಹ ರೆಡ್ಡಿ’ ಸಿನಿಮಾನಲ್ಲಿ ನಟಿಸಿದ್ದಾರೆ. ತಮಿಳಿನ ‘ಮೂಕುತ್ತಿ ಅಮ್ಮನ್ 2’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತೆಲುಗಿನಲ್ಲಿ ಬಹಳ ಪ್ರಮುಖವಾದ ಸಿನಿಮಾ ಒಂದರಲ್ಲಿ ಇದೀಗ ದುನಿಯಾ ವಿಜಿ ನಟಿಸುತ್ತಿದ್ದು, ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ ಆದರೆ ಈ ಸಿನಿಮಾಕ್ಕೆ ಸಂಕಷ್ಟ ಎದುರಾಗುವ ಸಂಭವ ಗೋಚರವಾಗುತ್ತಿದೆ.

ಒಂದು ಕಾಲದಲ್ಲಿ ತೆಲುಗಿನ ಸ್ಟಾರ್ ನಿರ್ದೇಶಕ ಎನಿಸಿಕೊಂಡಿದ್ದ ಪುರಿ ಜಗನ್ನಾಥ್ ನಿರ್ದೇಶನ ಮಾಡಿರುವ ‘ಸ್ಮಂ ಡಾಗ್: 33 ಕಾಲೊನಿ’ ಸಿನಿಮಾನಲ್ಲಿ ದುನಿಯಾ ವಿಜಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾನಲ್ಲಿ ವಿಜಯ್ ಸೇತುಪತಿ ನಾಯಕ. ಆದರೆ ದುನಿಯಾ ವಿಜಿ ಸಹ ಅಷ್ಟೇ ಪ್ರಮುಖವಾದ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಅಂತ್ಯವಾಗಿದೆ. ಆದರೆ ಇದೀಗ ಸಿನಿಮಾಕ್ಕೆ ಸಂಕಷ್ಟ ಎದುರಾಗುವ ಸ್ಪಷ್ಟ ಲಕ್ಷಣ ಕಾಣಿಸಿಕೊಂಡಿದೆ.

ಪುರಿ ಜಗನ್ನಾಥ್ ಅವರು ಕೆಲ ವರ್ಷಗಳ ಹಿಂದೆ ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ ನಟಿಸಿದ್ದ ‘ಲೈಗರ್’ ಸಿನಿಮಾ ನಿರ್ದೇಶಿಸಿದ್ದರು. ಈ ಸಿನಿಮಾವನ್ನು ಭಾರಿ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿತ್ತು. ಆದರೆ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಅಟ್ಟರ್ ಫ್ಲಾಪ್ ಆಯ್ತು. ಸಿನಿಮಾವನ್ನು ಸ್ವತಃ ಪುರಿ ಅವರೇ ಸಹ ನಿರ್ಮಾಣ ಮಾಡಿದ್ದರು, ಭಾರಿ ದೊಡ್ಡ ಮೊತ್ತವನ್ನು ಕಳೆದುಕೊಂಡರು. ಆ ಸಮಯದಲ್ಲಿ ಹಲವು ಸಿನಿಮಾ ವಿತರಕರು ತಮ್ಮ ಹಣ ವಾಪಸ್ಸು ಮಾಡುವಂತೆ ಪುರಿ ಅವರ ಬಳಿ ಜಗಳ ಮಾಡಿದ್ದರು, ಕೆಲವರು ನಿರ್ಮಾಪಕರ ಸಂಘಗಳಿಗೆ ದೂರು ಸಹ ದಾಖಲಾಗಿತ್ತು. ಆದರೆ ಈಗ ಪುರಿ ಅವರ ಹೊಸ ಸಿನಿಮಾ ಬಿಡುಗಡೆ ಸಮಯದಲ್ಲಿ ಅವರೆಲ್ಲ ಮತ್ತೆ ಸಮಸ್ಯೆ ಸೃಷ್ಟಿಸುವ ಸಾಧ್ಯತೆ ಇದೆ.

ಇದನ್ನೂ ಓದಿ:ಬಾಲ್ಯದಲ್ಲಿ ಪಟ್ಟ ಕಷ್ಟಗಳ ನೆನಪಿಸಿಕೊಂಡ ದುನಿಯಾ ವಿಜಿ: ವಿಡಿಯೋ

ಪುರಿ ಜಗನ್ನಾಥ್ ನಿರ್ದೇಶಿಸಿ, ಮಹೇಶ್ ಬಾಬು ನಟಿಸಿದ್ದ ಬ್ಲಾಕ್ ಬಸ್ಟರ್ ಸಿನಿಮಾ ‘ಪೋಕಿರಿ’ಯ ರೀ ರಿಲೀಸ್ ಘೋಷಣೆ ಆಗಿತ್ತು. ಆದರೆ ಆ ಸಿನಿಮಾದ ನಿರ್ದೇಶಕ ಪುರಿ ಅವರಾಗಿರುವ ಕಾರಣ ಹಲವು ವಿತರಕರು ಆ ಸಿನಿಮಾವನ್ನು ವಿತರಣೆ ಮಾಡುವುದಿಲ್ಲ ಎಂದರು. ಕೊನೆಗೆ ‘ಪೋಕಿರಿ’ ಬದಲಿಗೆ ಮಹೇಶ್ ಬಾಬು ಅವರ ‘ಅತಿಥಿ’ ಸಿನಿಮಾವನ್ನು ಮರು ಬಿಡುಗಡೆ ಮಾಡುವ ನಿರ್ಧಾರಕ್ಕೆ ಬರಲಾಯ್ತು. ಪುರಿ ಜಗನ್ನಾಥ್ ಅವರ ‘ಲೈಗರ್’ ಸಿನಿಮಾದ ಲೆಕ್ಕ ತೀರುವವರೆಗೆ ಅವರ ಸಿನಿಮಾಗಳನ್ನು ವಿತರಣೆ ಮಾಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇದರಿಂದಾಗಿ ಅವರ ಮುಂದಿನ ಸಿನಿಮಾಗಳಿಗೆ ಭಾರಿ ಹೊಡೆತ ಬೀಳುವುದು ಖಾತ್ರಿ ಆಗಿದೆ.

‘ಸ್ಲಂ ಡಾಗ್: 33 ಕಾಲೊನಿ’ ಸಿನಿಮಾದ ಬಿಡುಗಡೆ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ಆದರೆ ವಿತರಕರನ್ನು ಎದುರು ಹಾಕಿಕೊಂಡು ಸಿನಿಮಾ ಬಿಡುಗಡೆ ಮಾಡುವುದು ಭಾರಿ ಕಷ್ಟವೇ ಆಗಲಿದೆ ಪುರಿ ಅವರಿಗೆ. ಸಿನಿಮಾನಲ್ಲಿ ದುನಿಯಾ ವಿಜಯ್ ಅವರಿಗೆ ಬಹಳ ಭಿನ್ನವಾದ ಪಾತ್ರವನ್ನು ಪುರಿ ಅವರು ನೀಡಿದ್ದರು. ಆದರೆ ಈಗ ಸಿನಿಮಾದ ಬಿಡುಗಡೆಯೇ ಇಕ್ಕಟ್ಟಿಗೆ ಸಿಲುಕುವಂತೆ ಕಾಣುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆಲಿಕಲ್ಲು ಮಳೆಯಿಂದ ರೈತರು ಕಂಗಾಲು; ನೂರಾರು ಎಕರೆಯಲ್ಲಿ ಬೆಳೆದ ಕಲ್ಲಂಗಡಿ ಬೆಳೆ ಸಂಪೂರ್ಣ ನಾಶ!

Source link

‘ಸನೋಜ್ ಮಿಶ್ರಾ ನನ್ನ ಖಾಸಗಿ ಅಂಗ ಮುಟ್ಟಿದ್ದಾನೆ’; ಮೊನಾಲಿಸಾ ಗಂಭೀರ ಆರೋಪ

ಪ್ರಯಾಗ್ರಾಜ್ ಕುಂಭಮೇಳದಿಂದ ರಾತ್ರೋರಾತ್ರಿ ಖ್ಯಾತಿ ಪಡೆದ ಮೊನಾಲಿಸಾ ಭೋಸ್ಲೆ ಇತ್ತೀಚೆಗೆ ತಮ್ಮ ಮುಸ್ಲಿಂ ಗೆಳೆಯ ಫರ್ಮಾನ್ ಖಾನ್ ಅವರನ್ನು ಮದುವೆ ಆದರು. ಇದರಿಂದಾಗಿ ಮೊನಾಲಿಸಾ ವಿವಾದದ ಸುಳಿಯಲ್ಲಿ ಸಿಲುಕಿದ್ದರು. ಇದೇ ವೇಳೆ ಮೊನಾಲಿಸಾ ಅವರ ಚೊಚ್ಚಲ ಚಿತ್ರ ‘ದಿ ಡೈರಿ ಆಫ್ ಮಣಿಪುರ’ದ ನಿರ್ದೇಶಕ ಸನೋಜ್ ಮಿಶ್ರಾ ಗಂಭೀರ ಆರೋಪ ಮಾಡಿದ್ದರು. ಇದು ಲವ್ ಜಿಹಾದ್ ಎಂದಿದ್ದರು. ಈ ಬಗ್ಗೆ ಮೋನಾಲಿಸಾ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ನಿರ್ದೇಶಕನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

‘ಸನೋಹ್ ಮಿಶ್ರಾ ಚಲನಚಿತ್ರಗಳ ಹೆಸರಿನಲ್ಲಿ ಅಪ್ರಾಪ್ತ ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ನನಗೆ ಮತ್ತು ನನ್ನ ಪತಿಗೆ ಜೀವ ಬೆದರಿಕೆ ಇದೆ’ ಎಂದು ಆರೋಪಿಸಿರುವ ಮೊನಾಲಿಸಾ ಕೇಂದ್ರ, ಕೇರಳ ಮತ್ತು ಮಧ್ಯಪ್ರದೇಶ ರಾಜ್ಯ ಸರ್ಕಾರಗಳಿಂದ ಸಹಾಯವನ್ನು ಕೋರಿದ್ದಾರೆ. ನಿರ್ದೇಶಕರು ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಮತ್ತು ಅವರ ಚಲನಚಿತ್ರಗಳಲ್ಲಿ ಅವಕಾಶ ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

‘ಅವರು ತುಂಬಾ ಕೆಟ್ಟ ಮತ್ತು ಅಸಹ್ಯಕರ ವ್ಯಕ್ತಿ. ಅವರು ಚಲನಚಿತ್ರಗಳ ಹೆಸರಿನಲ್ಲಿ ಅಪ್ರಾಪ್ತ ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಅವರ ಹೆಸರನ್ನು ಹೇಳಲು ನನಗೆ ನಾಚಿಕೆಯಾಗುತ್ತದೆ’ ಎಂದು ಹೇಳಿದರು.

‘ಶೂಟಿಂಗ್ ಸಮಯದಲ್ಲಿ ಸನೋಜ್ ಮಿಶ್ರಾ ಹಲವಾರು ಬಾರಿ ಅವರ ದೇಹದ ಭಾಗಗಳನ್ನು ಸ್ಪರ್ಶಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದರು. ಮನೆಯಲ್ಲಿ ಆ ಕಹಿ ಅನುಭವದ ಬಗ್ಗೆ ನಾನು ಅವರಿಗೆ ಹೇಳಿದಾಗ ಬೆಂಬಲ ಸಿಗಲಿಲ್ಲ. ಅದು ನನ್ನ ಮೊದಲ ಚಿತ್ರ ಮತ್ತು ನಾನು ಹೊಂದಿಕೊಳ್ಳಬೇಕಾಯಿತು. ನಾನು ಯಾರಿಗೂ ಹೇಳಲು ಸಾಧ್ಯವಾಗಲಿಲ್ಲ ಮತ್ತು ಆದ್ದರಿಂದ ನಾನು ಮೌನವಾಗಿದ್ದೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ‘ಇದು ಲವ್ ಜಿಹಾದ್’; ಮೊನಾಲಿಸಾ ನಟನೆಯ ಸಿನಿಮಾ ನಿರ್ದೇಶಕನ ಗಂಭೀರ ಆರೋಪ

ತಮ್ಮ ಮದುವೆಯನ್ನು ಲವ್ ಜಿಹಾದ್ ಎಂದು ಕರೆದಿದ್ದಕ್ಕೆ ಕಾರಣ ತನ್ನ ಮೇಲಿನ ದ್ವೇಷ ಎಂದು ಅವರು ಹೇಳಿದರು. ನನ್ನ ಮದುವೆಯ ಬಗ್ಗೆ ಸುಳ್ಳು ಆರೋಪಗಳನ್ನು ಮಾಡುತ್ತಿರುವ ನಿರ್ದೇಶಕರ ವಿರುದ್ಧ ಪೊಲೀಸ್ ದೂರು ದಾಖಲಿಸುವುದಾಗಿ ಅವರು ಹೇಳಿದರು. ‘ನಾವು ಹಿಂದೂ ಸಂಪ್ರದಾಯಗಳ ಪ್ರಕಾರ ದೇವಾಲಯದಲ್ಲಿ ವಿವಾಹವಾದೆವು. ದೇಶದ ಪ್ರತಿಯೊಬ್ಬರಿಗೂ ಅದು ತಿಳಿದಿದೆ. ನಿರ್ದೇಶಕರು ಭಯೋತ್ಪಾದನೆ ಇರಬೇಕು ಮತ್ತು ಜನರು ಪರಸ್ಪರ ಜಗಳವಾಡಬೇಕು ಎಂದು ಬಯಸುತ್ತಾರೆ. ಅವರು ನಮ್ಮ ಮದುವೆಯನ್ನು ಲವ್ ಜಿಹಾದ್ ಎಂದು ಕರೆಯುತ್ತಿದ್ದಾರೆ. ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’ ಎಂದು ಮೊನಾಲಿಸಾ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

Exit mobile version