ಐಪಿಎಲ್ ನಡುವೆ ನಿವೃತ್ತಿ ಘೋಷಿಸಿದ ಭಾರತದ ಸ್ಟಾರ್ ಆಲ್‌ರೌಂಡರ್ – Kannada News | Vijay Shankar Retires from IPL and Domestic Cricket: Indian All Rounder Ends Career

2026 ರ ಐಪಿಎಲ್ (IPL 2026) ಲೀಗ್ ಹಂತ ಮುಗಿದು ಪ್ಲೇಆಫ್ ಹಂತ ಆರಂಭವಾಗಲು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ಭಾರತದ ಸ್ಟಾರ್ ಆಲ್‌ರೌಂಡರ್ ವಿಜಯ್ ಶಂಕರ್ (Vijay Shankar) ಐಪಿಎಲ್ ಹಾಗೂ ದೇಶಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ದೇಶೀಯ ಕ್ರಿಕೆಟ್​ನಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸಿದ್ದ ವಿಜಯ್ ಶಂಕರ್ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಡೇರ್‌ಡೆವಿಲ್ಸ್, ಗುಜರಾತ್ ಟೈಟಾನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಿವೃತ್ತಿ ವಿಚಾರವನ್ನು ಪ್ರಕಟಿಸಿರುವ ವಿಜಯ್ ಶಂಕರ್ ತಾನು ಉತ್ತಮ ಕ್ರಿಕೆಟಿಗನಾಗಲು ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ

ತಮ್ಮ ಎಕ್ಸ್​ ಖಾತೆಯಲ್ಲಿ ಈ ಬಗ್ಗೆ ವಿವರವಾಗಿ ಬರೆದುಕೊಂಡಿರುವ ವಿಜಯ್ ಶಂಕರ್ , ‘ಕ್ರಿಕೆಟ್ ನನ್ನ ಜೀವನ. 10 ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದ ನಾನು 25 ವರ್ಷ ತುಂಬುವ ಹೊತ್ತಿಗೆ ಎಲ್ಲಾ ಹಂತದ ಕ್ರಿಕೆಟ್ ಆಡಿದ್ದೇನೆ. ನನ್ನ ದೇಶಕ್ಕಾಗಿ ಆಡುವುದು ಯಾವಾಗಲೂ ನನ್ನ ಹೆಮ್ಮೆಯ ಮತ್ತು ಸಂತೋಷದ ಕ್ಷಣಗಳಲ್ಲಿ ಒಂದಾಗಿದೆ. ನಾನು ಕ್ರಿಕೆಟ್ ಆಡುವುದನ್ನು ಮುಂದುವರಿಸಲು ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ನಾನು ಹೆಚ್ಚು ಇಷ್ಟಪಡುವದನ್ನು ಮಾಡಲು ಅವಕಾಶ ನೀಡಿದ್ದಕ್ಕಾಗಿ ಕೇವಲ ಧನ್ಯವಾದ ಹೇಳಿದರೆ ಸಾಕಾಗುವುದಿಲ್ಲ’.

ಮುಂದುವರೆದು, ‘ಬಿಸಿಸಿಐ ಮತ್ತು ಭಾರತೀಯ ಕ್ರಿಕೆಟ್ ತಂಡಕ್ಕೆ ಧನ್ಯವಾದ ಅರ್ಪಿಸಿರುವ ವಿಜಯ್ ಶಂಕರ್, ‘ನಾಗ್ಪುರದಲ್ಲಿ ನಡೆದ ಭಾರತದ 500 ನೇ ಏಕದಿನ ಪಂದ್ಯದಲ್ಲಿ ಕೊನೆಯ ಓವರ್ ಬೌಲಿಂಗ್ ಮಾಡುವುದು ಮತ್ತು 2019 ರ ವಿಶ್ವಕಪ್‌ನಲ್ಲಿ ಮೊದಲ ಎಸೆತದಲ್ಲಿ ಮೊದಲ ವಿಕೆಟ್ ಪಡೆದ ಕ್ಷಣಗಳನ್ನು ನಾನು ಶಾಶ್ವತವಾಗಿ ನೆನಪಿಸಿಕೊಳ್ಳುತ್ತೇನೆ. ನನ್ನ ಐಪಿಎಲ್ ತಂಡಗಳಾದ ಗುಜರಾತ್, ಸನ್​ರೈಸರ್ಸ್​, ಸಿಎಸ್‌ಕೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ಗೆ ವಿಶೇಷ ಧನ್ಯವಾದಗಳು.

ಹಾಗೆಯೇ ತಮಿಳುನಾಡು ಪರ ಅಂಡರ್ 13, ಅಂಡರ್ 15, ಅಂಡರ್ 17, ಅಂಡರ್ 19, ಅಂಡರ್ 22 ಜೊತೆಗೆ ಸೀನಿಯರ್ ತಂಡದಲ್ಲೂ ಆಡಿದ್ದೇನೆ. ಪ್ರತಿ ಹಂತದಲ್ಲೂ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದಿರುವ ಶಂಕರ್, ಎಲ್ಲಾ ತರಬೇತುದಾರರು, ಸಹಾಯಕ ಸಿಬ್ಬಂದಿ, ಫಿಸಿಯೋಗಳು, ತರಬೇತುದಾರರು, ಮೈದಾನದ ಸಿಬ್ಬಂದಿ, ಮಾಧ್ಯಮ ಮತ್ತು ಸ್ನೇಹಿತರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ವಿಜಯ್ ಶಂಕರ್ ವೃತ್ತಿಜೀವನ

ವಿಜಯ್ ಶಂಕರ್ ಭಾರತ ಪರ 12 ಏಕದಿನ ಪಂದ್ಯಗಳಲ್ಲಿ 31.8 ಸರಾಸರಿಯಲ್ಲಿ 223 ರನ್ ಗಳಿಸಿದ್ದಾರೆ. ಒಂಬತ್ತು ಟಿ20 ಪಂದ್ಯಗಳಲ್ಲಿ 25 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 101 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ, ಶಂಕರ್ 13 ಶತಕಗಳು ಸೇರಿದಂತೆ 4,253 ರನ್ ಬಾರಿಸಿದ್ದಾರೆ. ಲಿಸ್ಟ್ ಎ ನಲ್ಲಿ ಎರಡು ಶತಕಗಳು ಸೇರಿದಂತೆ 2,790 ರನ್ ಬಾರಿಸಿರುವ ಶಂಕರ್, ಟಿ20 ಪಂದ್ಯಗಳಲ್ಲಿ 12 ಅರ್ಧಶತಕಗಳು ಸೇರಿದಂತೆ 2,583 ರನ್ ಕಲೆಹಾಕಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:49 pm, Fri, 22 May 26

Source link

ಆರ್.ಅಶೋಕ್​ ಮನೆ ಕಿತ್ತಾಟ ಮುನ್ನೆಲೆಗೆ: ಸಿಡಿದೆದ್ದ ವಿಪಕ್ಷ ನಾಯಕ, ಸಿಎಸ್​​​​ಗೆ ಖಡಕ್ ಎಚ್ಚರಿಕೆ – Kannada News | R Ashok Angry For Karnataka Government Yet To Allot House

ಬೆಂಗಳೂರು, (ಮೇ 22): ರಾಜ್ಯದಲ್ಲಿ ಕಾಂಗ್ರೆಸ್‌‍ (Congress) ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷ ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ (R Ashok) ಅವರಿಗೆ ಇನ್ನೂ ಸರ್ಕಾರಿ ನಿವಾಸವನ್ನು (Governmnet House) ಮಂಜೂರು ಮಾಡಿಲ್ಲ. ಹುದ್ದೆ ಅಲಂಕರಿಸಿದಾಗಿನಿಂದ ಈವರೆಗೆ ಹಲವು ಬಾರಿ ಪತ್ರ ಬರೆದು ಮನವಿ ಮಾಡಿಕೊಂಡಿ ದ್ದರೂ, ರಾಜ್ಯ ಸರ್ಕಾರವು ಸ್ಪಂದಿಸಿಲ್ಲ ಎಂದು ಅವರು ಆಡಳಿತ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು

  • ವಿಪಕ್ಷ ನಾಯಕ ಅರ್. ಅಶೋಕ್ ಗೆ ಸರ್ಕಾರಿ ಮನೆ ಹಂಚಿಕೆ ಮಾಡದಿರುವ ವಿಚಾರ
  • ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅಶೋಕ್ ಪತ್ರ
  • ಮೂರು ಮನೆಗಳ ಪೈಕಿ ಒಂದು ಮನೆ ಹಂಚಿಕೆ ಮಾಡುವಂತೆ ಪತ್ರದ ಮೂಲಕ ಒತ್ತಾಯ
  • ತಮ್ಮ ಆದ್ಯತೆಯ ವಸತಿಗೃಹ ಹಂಚಿಕೆ ಮಾಡದಿದ್ದರೆ ಮನೆ ಬಾಡಿಗೆ ಭತ್ಯೆ ಪಡೆಯುವುದಿಲ್ಲ ಎಂದು ಮಾಹಿತಿ
  • ಏಪ್ರಿಲ್ ತಿಂಗಳಿನಿಂದ ಮನೆ ಬಾಡಿಗೆ ಭತ್ಯೆ ಪಡೆಯದೇ ಪ್ರತಿಭಟಿಸುವುದಾಗಿ ಎಚ್ಚರಿಕೆ

ಮುಖ್ಯ ಕಾರ್ಯದರ್ಶಿಗೆ ಅಶೋಕ್ ಪತ್ರ

ಇನ್ನು ಈ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಮತ್ತೊಮ್ಮೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದು, ನಂ. 1 ಕುಮಾರಕೃಪಾ ಪೂರ್ವ ಬೆಂಗಳೂರು, ನಂ 1 ರೇಸ್ ವ್ಯೂ ಕಾಟೇಜ್ ಮತ್ತು ನಂ 2 ರೇಸ್ ವ್ಯೂ ಕಾಟೇಜ್, ರೇಸ್ ಕೋರ್ಸ್ ರಸ್ತೆ. ಈ ಮೂರು ಮನೆಗಳ ಪೈಕಿ ಒಂದು ಮನೆ ಹಂಚಿಕೆ ಮಾಡಬೇಕೆಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ. ಒಂದು ವೇಳೆ ತಮ್ಮ ಆದ್ಯತೆಯ ವಸತಿಗೃಹ ಹಂಚಿಕೆ ಮಾಡದಿದ್ದರೆ ಮನೆ ಬಾಡಿಗೆ ಭತ್ಯೆ ಪಡೆಯುವುದಿಲ್ಲ. ಏಪ್ರಿಲ್ ತಿಂಗಳಿನಿಂದ ಮನೆ ಬಾಡಿಗೆ ಭತ್ಯೆ ಪಡೆಯದೇ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸಿಎಂ ಮುಂದೆಯೇ ಅಸಮಾಧಾನ

ಗುರುವಾರ ವಿಧಾನಸೌಧದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಆಯ್ಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೇ ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರ್ಣಗೊಳಿಸುತ್ತಿದೆ .ವಿರೋಧ ಪಕ್ಷದ ನಾಯಕನಿಗೆ ನಿಮ್ಮ ಸರ್ಕಾರ ಒಂದು ಸರ್ಕಾರಿ ಬಂಗಲೇ ನೀಡದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಒಬ್ಬ ವಿರೋಧ ಪಕ್ಷದ ನಾಯಕನನ್ನು ಈ ರೀತಿ ನಡೆಸಿಕೊಳ್ಳುವುದೇ? ಎಂದು ಖಾರವಾಗಿ ಪ್ರಶ್ನೆ ಪ್ರಶ್ನಿಸಿದ್ದಾರೆ.

ಶಿಷ್ಟಾಚಾರದ ಪ್ರಕಾರ ವಿಧಾನಸಭೆ ಹಾಗೂ ವಿಧಾನಪರಿಷತ್‌ ವಿಪಕ್ಷದ ನಾಯಕರಿಗೆ ಸರ್ಕಾರಿ ಬಂಗಲೆ ನೀಡಬೇಕು. ಈ ಹಿಂದೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಕುಮಾರ ಕೃಪ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆ ನೀಡಲಾಗಿತ್ತು. ಇದು ಅದೃಷ್ಟದ ಬಂಗಲೆ ಎಂದೇ ನಂಬಲಾಗಿತ್ತು. ಇದೀಗ ಆ ಬಂಗಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಉಳಿದುಕೊಂಡಿದ್ದಾರೆ.

ಆರ್‌.ಅಶೋಕ್‌ ಅವರು ಬೆಂಗಳೂರಿನ ರೇಸ್‌‍ ಕೋರ್ಸ್‌ ರಸ್ತೆಯಲ್ಲಿರುವ ರೇಸ್‌‍ ವ್ಯೂ ಕಾಟೇಜ್‌ ಅಥವಾ ಕುಮಾರ ಪಾರ್ಕ್‌ನಲ್ಲಿರುವ ನಿವಾಸಗಳನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಗೆ ಇದುವರೆಗೆ 5 ರಿಂದ 6 ಬಾರಿ ಅಧಿಕೃತ ಪತ್ರಗಳನ್ನು ಬರೆದಿದ್ದಾರೆ. ಹಲವು ಬಾರಿ ಪತ್ರ ಬರೆದು ಹಾಗೂ ಅಧಿಕಾರಿಗಳನ್ನು ಖುದ್ದಾಗಿ ಭೇಟಿಯಾದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಅಧಿಕೃತ ನಿವಾಸ ಇಲ್ಲದಿರುವುದರಿಂದ, ಅವರು ತಮ ಸ್ವಂತ  ಜಯನಗರದ ನಿವಾಸವಾದಲ್ಲೇ ಉಳಿದುಕೊಂಡಿದ್ದಾರೆ.

ಒಟ್ಟಿನಲ್ಲಿ ಮೂರು ವರ್ಷವಾದರೂ ಅಶೋಕ್ ಅವರ ಮನೆ ಕಿತ್ತಾಟಕ್ಕೆ ಬ್ರೇಕ್ ಬಿದ್ದಿಲ್ಲ.  ಇನ್ನು ಉಳಿದಿರುವುವುದು ಎರಡು ವರ್ಷ ಅವಧಿ.  ಇನ್ನಾದರೂ ಮುಖ್ಯಕಾರ್ಯದರ್ಶಿಗಳು ಅಶೋಕ್ ಅವರಿಗೆ ಸರ್ಕಾರಿ ನಿವಾಸವನ್ನು ಹಂಚಿಕೆ ಮಾಡುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

Source link

‘ದೃಶ್ಯಂ 3’ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಕಣ್ಣೀರು ಹಾಕಿದ ನಟ ಮೋಹನ್‌ಲಾಲ್ – Kannada News | Malayalam star Mohanlal gets emotional at Drishyam 3 Dubai screening Video Goes Viral

ಮಾಲಿವುಡ್‌ನ ಸ್ಟಾರ್ ನಟ ಮೋಹನ್‌ಲಾಲ್ ಅಭಿನಯದ ಬಹುನಿರೀಕ್ಷಿತ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ‘ದೃಶ್ಯಂ 3’ (Drishyam 3) ಇತ್ತೀಚೆಗಷ್ಟೇ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ದುಬೈನಲ್ಲಿ ಆಯೋಜಿಸಲಾಗಿದ್ದ ಚಿತ್ರದ ವಿಶೇಷ ಪ್ರದರ್ಶನವೊಂದರಲ್ಲಿ ಅಭಿಮಾನಿಗಳಿಂದ ವ್ಯಕ್ತವಾದ ಅದ್ಭುತ ಪ್ರತಿಕ್ರಿಯೆಯನ್ನು ಕಂಡು ಮೋಹನ್‌ಲಾಲ್ (Mohanlal) ಭಾವುಕರಾಗಿದ್ದು, ಆನಂದಭಾಷ್ಪ ಸುರಿಸಿದ್ದಾರೆ. ಸದ್ಯ ಥಿಯೇಟರ್‌ ಒಳಗಿನ ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳ ಮನ ಗೆಲ್ಲುತ್ತಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಸಿನಿಮಾ ಮುಗಿಯುತ್ತಿದ್ದಂತೆ ಇಡೀ ಚಿತ್ರಮಂದಿರದಲ್ಲಿದ್ದ ಜನರು ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ, ಶಿಳ್ಳೆ ಹೊಡೆಯುತ್ತಾ ಮೋಹನ್‌ಲಾಲ್ ಅವರಿಗೆ ಗೌರವ ಸಲ್ಲಿಸಿದರು. ಪ್ರೇಕ್ಷಕರು ತೋರಿದ ಈ ಅಪಾರ ಪ್ರೀತಿಯನ್ನು ಕಂಡು ಮೋಹನ್‌ಲಾಲ್ ತೀವ್ರ ಭಾವುಕರಾಗಿದ್ದಾರೆ. ಅವರು ತಮ್ಮ ಕಣ್ಣೀರನ್ನು ಒರೆಸಿಕೊಳ್ಳುತ್ತಾ, ಮುಖದಲ್ಲಿ ದೊಡ್ಡ ನಗು ಬೀರಿದ ದೃಶ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಆ ಚಿತ್ರಮಂದಿರಲ್ಲಿದ್ದ ಅಭಿಮಾನಿಗಳು ತಮ್ಮ ಮೊಬೈಲ್‌ಗಳಲ್ಲಿ ಈ ಅಪೂರ್ವ ಕ್ಷಣವನ್ನು ಸೆರೆಹಿಡಿದಿದ್ದಾರೆ. ಈ ಘಟನೆ ಮೋಹನ್‌ಲಾಲ್ ಅವರಿಗೆ ಭಾರತ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಇರುವ ಭಾರಿ ಕ್ರೇಜ್ ಎಷ್ಟು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ‘ದೃಶ್ಯಂ’ ಮತ್ತು ‘ದೃಶ್ಯಂ 2’ ಸಿನಿಮಾಗಳ ಬಳಿಕ ‘ದೃಶ್ಯಂ 3’ ಕೂಡ ಜನಮನ ಗೆಲ್ಲುತ್ತಿದೆ.

ಕಳೆದ ಹಲವು ವರ್ಷಗಳಿಂದ ‘ದೃಶ್ಯಂ’ ಸರಣಿಯಲ್ಲಿ ಮೋಹನ್‌ಲಾಲ್ ನಿರ್ವಹಿಸಿರುವ ಜಾರ್ಜ್‌ ಕುಟ್ಟಿ ಪಾತ್ರ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ಪಾತ್ರಗಳಲ್ಲಿ ಒಂದಾಗಿದೆ. ಜೀತು ಜೋಸೆಫ್ ನಿರ್ದೇಶನದ ‘ದೃಶ್ಯಂ 3’ ಚಿತ್ರದಲ್ಲಿ ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್, ಮುರಳಿ ಗೋಪಿ, ಸಿದ್ದಿಕ್ ಮತ್ತು ಆಶಾ ಶರತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಡಾ. ರಾಜ್​ಕುಮಾರ್ ಮೇಲಿನ ಅಭಿಮಾನಕ್ಕೆ ಅಮೆರಿಕದಲ್ಲಿ ಕನ್ನಡ ಗೀತೆ ಹಾಡಿದ ಮೋಹನ್​ಲಾಲ್

‘ದೃಶ್ಯಂ 3’ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಕಲೆಕ್ಷನ್ ಮಾಡಿದೆ. ಮಲಯಾಳಂ ಆವೃತ್ತಿಯೊಂದರಲ್ಲೇ ಮೊದಲ ದಿನ ಬರೋಬ್ಬರಿ 13.70 ಕೋಟಿ ರೂ. ಕಲೆಕ್ಷನ್ ಮಾಡಿದೆ. ಉಳಿದಂತೆ ತೆಲುಗಿನಲ್ಲಿ 1.50 ಕೋಟಿ ರೂ., ಕನ್ನಡದಲ್ಲಿ 20 ಲಕ್ಷ ರೂ. ಮತ್ತು ತಮಿಳಿನಲ್ಲಿ 45 ಲಕ್ಷ ರೂ. ಗಳಿಸಿದೆ. ಇನ್ನು ವಿದೇಶಿ ಮಾರುಕಟ್ಟೆಯಿಂದಲೇ ಭರ್ಜರಿ 30 ಕೋಟಿ ರೂ. ಬಾಚಿಕೊಂಡಿರುವ ‘ದೃಶ್ಯಂ 3’, ಒಟ್ಟಾರೆಯಾಗಿ ವಿಶ್ವದಾದ್ಯಂತ ಮೊದಲ ದಿನವೇ ಬರೋಬ್ಬರಿ 48.37 ಕೋಟಿ ರೂ. ಕಲೆಕ್ಷನ್ ಮಾಡಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಜೆಪಿ ಯುವ ಜಿಲ್ಲಾಧ್ಯಕ್ಷನಿಂದ ಅಶ್ಲೀಲ ಪದಬಳಕೆ: ಸಿಡಿದೆದ್ದ ಮುಸ್ಲಿಂ ಸಮುದಾಯ; ಬಂಧನಕ್ಕೆ ಡೆಡ್​​​​ಲೈನ್ – Kannada News | Obscene Remarks by BJP Youth District President Trigger Outrage; Muslim Community Demands Arrest

ಬಿಜೆಪಿ ಯುವ ಮುಖಂಡ ಸಂತೋಷ್Image Credit source: tv9 kannada

ಚಿಕ್ಕಮಗಳೂರು, ಮೇ 22: ಕಾಫಿನಾಡು ಚಿಕ್ಕಮಗಳೂರಿನಲ್ಲಿ (chikkamagaluru) ರಸ್ತೆ ಕಾಮಗಾರಿ ವೀಕ್ಷಣೆ ವೇಳೆ ನಡೆದ ಗಲಾಟೆ ಇದೀಗ ಕೋಮು ಸಂಘರ್ಷಕ್ಕೆ ಕಾರಣವಾಗಿದೆ. ಮುಸ್ಲಿಂ ಸಮುದಾಯದ ಬಗ್ಗೆ ಅಶ್ಲೀಲ ಪದಬಳಕೆ ಮಾಡಿ ನಿಂದಿಸಿದ್ದಾರೆ ಎಂಬ ಗಂಭೀರ ಆರೋಪದಡಿ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು (complaint) ದಾಖಲಾಗಿದೆ. ತಕ್ಷಣವೇ ಸಂತೋಷ್‌ನನ್ನು ಬಂಧಿಸಬೇಕೆಂದು ಮುಸ್ಲಿಂ ಸಮುದಾಯದ ಮುಖಂಡರು ಪಟ್ಟು ಹಿಡಿದಿದ್ದಾರೆ.

ಮುಖ್ಯಾಂಶಗಳು

  • ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ
  • ಮುಸ್ಲಿಂ ಸಮುದಾಯದ ವಿರುದ್ಧ ನಿಂದನೆ
  • ಬಿಜೆಪಿ ಯುವ ಮುಖಂಡ ಸಂತೋಷ್​ ವಿರುದ್ಧ ದೂರು

ಮುಸ್ಲಿಂ ಸಮುದಾಯದ ಬಗ್ಗೆ ಅಶ್ಲೀಲ ಪದಬಳಕೆ ಆರೋಪ

ಚಿಕ್ಕಮಗಳೂರಿನ ರಾಂಪುರದ ಬಳಿ MLC ಸಿ.ಟಿ.ರವಿ ರಸ್ತೆ ಕಾಮಗಾರಿ ವೀಕ್ಷಣೆಗೆ ಬಂದಿದ್ದ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಗಲಾಟೆ ತಾರಕಕ್ಕೇರಿದ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಸಂತೋಷ್, ಸಿಟಿ ರವಿ ಸಮ್ಮುಖದಲ್ಲೇ ಮುಸ್ಲಿಂ ಸಮುದಾಯದ ವಿರುದ್ಧ ಅತ್ಯಂತ ಅಶ್ಲೀಲ ಹಾಗೂ ಆಕ್ಷೇಪಾರ್ಹ ಪದಗಳನ್ನು ಬಳಸಿ ನಿಂದಿಸಿದ್ದಾರೆ ಎನ್ನಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ನಿಪ್ಪಾಣಿ ಬೆನ್ನಲ್ಲೇ ಚಿಕ್ಕಮಗಳೂರಲ್ಲೂ ಕೈ, ಕಮಲ ಸಮರ: ಕಾಮಗಾರಿ ವಿಚಾರವಾಗಿ ಸಿ.ಟಿ.ರವಿ ಎದುರೇ ಹೈಡ್ರಾಮಾ

ಇನ್ನು ವಿಡಿಯೋ ವೈರಲ್ ಬೆನ್ನಲ್ಲೇ ಮುಸ್ಲಿಂ ಸಮುದಾಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಘಟನೆಯನ್ನು ಖಂಡಿಸಿ ಸಮುದಾಯದ ಪ್ರಮುಖ ಮುಖಂಡರು ಒಟ್ಟಾಗಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ಸಂತೋಷ್ ವಿರುದ್ಧ ದೂರು ನೀಡಿದ್ದಾರೆ. ಸಂತೋಷ್​​ನನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.

ಸಂತೋಷ್​ ಬಂಧನಕ್ಕೆ ನಾಳೆವರೆಗೆ ಗಡುವು

ಇನ್ನು ಈ ಬಗ್ಗೆ ಜಾಮಿಯಾ ಮಸೀದಿ ಅಧ್ಯಕ್ಷ ಮುದಸ್ಸಿರ್ ಪಾಷಾ ಮಾತನಾಡಿದ್ದು, ಗಲಾಟೆಯಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಸಂತೋಷ್ ಮಾತನಾಡಿದ್ದಾರೆ. ಇದು ಮುಸ್ಲಿಂ ಸಮುದಾಯದ ಘನತೆಗೆ ಧಕ್ಕೆಯಾಗಿದೆ. ನಾವು ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೂರು ನೀಡಿದ್ದೇವೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಮುಸ್ಲಿಂ ಸಮುದಾಯದ ಬಗ್ಗೆ ಅವಾಚ್ಯ ಪದ ಬಳಸಿದರೂ ಏಕೆ ಕ್ರಮಕೈಗೊಂಡಿಲ್ಲ ಎಂದು ಇಡೀ ಮುಸ್ಲಿಂ ಸಮುದಾಯ ನಮ್ಮನ್ನು ಪ್ರಶ್ನೆ ಮಾಡುತ್ತಿದೆ. ನಾವು ನಾಳೆವರೆಗೆ ಕಾಯುತ್ತೇವೆ, FIR ಮಾಡಿ ಬಂಧಿಸಬೇಕು. ಇಲ್ಲಾಂದರೆ ಉಗ್ರ ಹೋರಾಟವನ್ನ ಮುಸ್ಲಿಂ ಸಮುದಾಯ‌ ಮಾಡುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ಘಟನೆ ಹಿನ್ನೆಲೆ

ರಸ್ತೆ ಕಾಮಗಾರಿಯ ಕ್ರೆಡಿಟ್​​​​ಗಾಗಿ​ ಕಾಫಿನಾಡಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಿನ್ನೆ ಹೈ ಡ್ರಾಮಾ ನಡೆದಿದೆ. ಬಿಜೆಪಿ ಅವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿಗೆ ಕಾಂಗ್ರೆಸ್ ಅವಧಿಯಲ್ಲಿ ವರ್ಕ್ ಆರ್ಡರ್‌ ಪಡೆದು ಹಣ ಬಿಡುಗಡೆಯಾಗಿತ್ತು. ನಿನ್ನೆ ವೀಕ್ಷಣೆ ಮಾಡಲು ಬಂದ ಎಂಎಲ್​​ಸಿ ಸಿ.ಟಿ ರವಿ ಎದುರೇ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದರು. ಚಿಕ್ಕಮಗಳೂರು ನಗರ ಸಮೀಪದ ರಾಂಪುರ ಗ್ರಾಮದಲ್ಲಿ ಹೈಡ್ರಾಮಾವೇ ನಡೆದಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅನಗತ್ಯ ಹೂಡಿಕೆಗಳ ಮೂಲಕ ಮಾರುಕಟ್ಟೆಯಲ್ಲಿ ಹಣ ಕಳೆದುಕೊಳ್ಳದಿರಿ ಜೋಕೆ; ಗಮನಿಸಬೇಕಾದ ಸಂಗತಿಗಳಿವು – Kannada News | Investment Success: How to Avoid Losing Money in the Stock Market

ನವದೆಹಲಿ, ಮೇ 22: ಷೇರು ಮಾರುಕಟ್ಟೆಯಲ್ಲಿ (Stock Market) ಭಾರಿ ಲಾಭ ಗಳಿಸುವುದಕ್ಕಿಂತ ಹೆಚ್ಚಾಗಿ, ಹೂಡಿಕೆ ಮಾಡಿದ ಅಸಲು ಹಣವನ್ನು ನಷ್ಟದಿಂದ ರಕ್ಷಿಸಿಕೊಳ್ಳುವುದು ದೀರ್ಘಾವಧಿಯ ಸಂಪತ್ತು ಸೃಷ್ಟಿಗೆ ಅತ್ಯಂತ ಮುಖ್ಯವಾಗಿದೆ. ಇತ್ತೀಚೆಗೆ ನಡೆದ “ಷೇರು ಮಾರುಕಟ್ಟೆಯಲ್ಲಿ ಹಣ ಕಳೆದುಕೊಳ್ಳದಿರುವ ಕಲೆ” (Art of Not Losing Money) ಎಂಬ ಚರ್ಚಾಗೋಷ್ಠಿಯಲ್ಲಿ ಪಿಪಿಎಫ್‌ಎಎಸ್ ಮ್ಯೂಚುವಲ್ ಫಂಡ್‌ನ ಸಿಐಒ ರಾಜೀವ್ ಠಕ್ಕರ್ ಮತ್ತು ಐಸಿಐಸಿಐ ಪ್ರುಡೆನ್ಷಿಯಲ್ ಎಎಮ್‌ಸಿಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್. ನರೇನ್ ಅವರು ಹೂಡಿಕೆದಾರರಿಗೆ ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.

ದೊಡ್ಡ ನಷ್ಟಗಳನ್ನು ತಪ್ಪಿಸಿ

ರಾಜೀವ್ ಠಕ್ಕರ್ ಅವರು ನಷ್ಟದ ಹಿಂದಿರುವ ಗಣಿತವನ್ನು ವಿವರಿಸುತ್ತಾ, “ಒಂದು ವೇಳೆ ನಿಮ್ಮ ₹100 ರ ಹೂಡಿಕೆ ಕುಸಿದು ₹50 ಕ್ಕೆ ತಲುಪಿದರೆ, ಅದು ಶೇ. 50 ರಷ್ಟು ನಷ್ಟವನ್ನು ಅನುಭವಿಸಿದಂತೆ. ಆದರೆ, ಆ ₹50 ಮತ್ತೆ ₹100 ರ ಸಮೀಪಕ್ಕೆ ಬರಬೇಕಾದರೆ ಶೇ. 100 ರಷ್ಟು ಲಾಭ ಗಳಿಸಬೇಕಾಗುತ್ತದೆ. ನಷ್ಟದ ಆಳ ಹೆಚ್ಚಾದಷ್ಟೂ, ಅದರಿಂದ ಚೇತರಿಸಿಕೊಳ್ಳುವುದು ಕಷ್ಟ,” ಎಂದಿದ್ದಾರೆ. ಪ್ರಸಿದ್ಧ ಹೂಡಿಕೆದಾರ ವಾರೆನ್ ಬಫೆಟ್ ಅವರ ನಿಯಮವನ್ನು ನೆನಪಿಸಿರುವ ಅವರು, “ಮೊದಲ ನಿಯಮ – ಹಣವನ್ನು ಕಳೆದುಕೊಳ್ಳಬೇಡಿ; ಎರಡನೇ ನಿಯಮ – ಮೊದಲ ನಿಯಮವನ್ನು ಎಂದಿಗೂ ಮರೆಯಬೇಡಿ” ಎಂದು ಹೇಳಿದ್ದಾರೆ. ನಷ್ಟದ ಅಪಾಯವನ್ನು ನಿಯಂತ್ರಣದಲ್ಲಿಟ್ಟರೆ, ಲಾಭ ತನ್ನಷ್ಟಕ್ಕೆ ತಾನೇ ಬರುತ್ತದೆ ಎಂಬುದು ಅವರ ಅಭಿಪ್ರಾಯ.

ಇದನ್ನೂ ಓದಿ: ದೇಶದ ಅರ್ಧದಷ್ಟು ಜಿಡಿಪಿಗೆ ಹೊಟ್ಟೆ ತುಂಬಿಸುತ್ತಿರೋದು ಕರ್ನಾಟಕ ಸೇರಿ 5 ರಾಜ್ಯಗಳು ಮಾತ್ರ; ಇಲ್ಲಿವೆ ವರದಿಯ ಅಂಶಗಳು

ಅಸೆಟ್ ಹಂಚಿಕೆ ಅತ್ಯಗತ್ಯ

ಎಸ್. ನರೇನ್ ಅವರ ಪ್ರಕಾರ, ಹೆಚ್ಚಿನ ಹೂಡಿಕೆದಾರರು ಕೇವಲ ‘ಹೆಚ್ಚಿನ ರಿಟರ್ನ್ಸ್’ ಗಳಿಸುವುದರ ಕಡೆಗೆ ಗಮನ ಹರಿಸುತ್ತಾರೆಯೇ ಹೊರತು, ಅಸಲನ್ನು ಉಳಿಸಿಕೊಳ್ಳುವತ್ತ ಗಮನ ಹರಿಸುವುದಿಲ್ಲ. “ವಿವಿಧ ಆಸ್ತಿಗಳಲ್ಲಿ ಹೂಡಿಕೆ ಮಾಡುವುದು (Asset Allocation) ಮಾರುಕಟ್ಟೆಯ ಏರಿಳಿತದ ಸಮಯದಲ್ಲಿ ರಕ್ಷಣೆ ನೀಡುವ ಅತ್ಯುತ್ತಮ ಸಾಧನವಾಗಿದೆ” ಎಂದು ಅವರು ಹೇಳಿದ್ದಾರೆ. ಕೇವಲ ಈಕ್ವಿಟಿ (ಷೇರು) ಮಾರುಕಟ್ಟೆಯಲ್ಲೇ ಸಂಪೂರ್ಣ ಹಣವನ್ನು ಹೂಡುವ ಬದಲಿಗೆ ಡೆಟ್ ಫಂಡ್​ಗಳು (Debt), ಹೈಬ್ರಿಡ್ ಫಂಡ್‌ಗಳು ಮತ್ತು ಚಿನ್ನದಂತಹ ವಿಭಿನ್ನ ವಿಭಾಗಗಳಲ್ಲಿ ಹಂಚಿಕೆ ಮಾಡುವುದು ಅಪಾಯವನ್ನು ಕಡಿಮೆ ಮಾಡುತ್ತದೆ ಎನ್ನುವುದು ಅವರ ಅನಿಸಿಕೆ.

ಮಾರುಕಟ್ಟೆಯ ಭ್ರಮೆಗಳಿಗೆ ಮರುಳಾಗಬೇಡಿ

ಕೆಲವು ವಲಯಗಳು (Sectors) ಅಥವಾ ಥೀಮ್‌ಗಳು ಇತ್ತೀಚೆಗೆ ಭಾರಿ ಲಾಭ ನೀಡಿವೆ ಎಂಬ ಒಂದೇ ಕಾರಣಕ್ಕೆ ಅವುಗಳ ಬೆನ್ನಟ್ಟಬೇಡಿ ಎಂದು ತಜ್ಞರು ಎಚ್ಚರಿಸಿದ್ದಾರೆ. ಮಾರುಕಟ್ಟೆಯಲ್ಲಿ ಪ್ರಸ್ತುತ ಕೆಲವು ಕ್ಷೇತ್ರಗಳು ಅತ್ಯಂತ ದುಬಾರಿ ಮೌಲ್ಯದಲ್ಲಿ (Expensive valuations) ವಹಿವಾಟು ನಡೆಸುತ್ತಿವೆ. ಕೇವಲ ಮಾರುಕಟ್ಟೆಯ ಪ್ರವೃತ್ತಿ ಅಥವಾ ಟ್ರೆಂಡ್ ನೋಡಿ ಕುರುಡಾಗಿ ಹಣ ಹೂಡುವುದು ಅಪಾಯಕಾರಿ.

ತುರ್ತು ನಿಧಿ ನಿಮ್ಮ ಬ್ರೇಕ್ ಇದ್ದಂತೆ

ಹೂಡಿಕೆದಾರರು ಯಾವಾಗಲೂ ಒಂದು ತುರ್ತು ನಿಧಿಯನ್ನು ಪ್ರತ್ಯೇಕವಾಗಿ ಕಾಯ್ದುಕೊಳ್ಳಬೇಕು. ಆರ್ಥಿಕ ಬಿಕ್ಕಟ್ಟು ಎದುರಾದಾಗ ಈ ನಿಧಿ ಇಲ್ಲದಿದ್ದರೆ, ಹೂಡಿಕೆದಾರರು ಅನಿವಾರ್ಯವಾಗಿ ತಮಗೆ ನಷ್ಟವಾಗುತ್ತಿದ್ದರೂ ಷೇರುಗಳನ್ನು ಮಾರಾಟ ಮಾಡಬೇಕಾಗಿ ಬರುತ್ತದೆ. ಇದನ್ನು ಕಾರಿನ ಬ್ರೇಕ್‌ಗೆ ಹೋಲಿಸಿದ ರಾಜೀವ್ ಠಕ್ಕರ್, “ಕಾರಿಗೆ ಬ್ರೇಕ್ ಇರುವುದರಿಂದಲೇ ನಾವು ವೇಗವಾಗಿ ಚಲಿಸಲು ಸಾಧ್ಯವಾಗುತ್ತದೆ. ಬ್ರೇಕ್ ಇಲ್ಲದಿದ್ದರೆ ಅಪಘಾತದ ಭಯದಿಂದ ಅತ್ಯಂತ ನಿಧಾನವಾಗಿ ಚಲಿಸಬೇಕಾಗುತ್ತದೆ. ತುರ್ತು ನಿಧಿಯು ಮಾರುಕಟ್ಟೆಯ ಅನಿಶ್ಚಿತತೆಯ ಸಮಯದಲ್ಲಿ ಧೈರ್ಯವಾಗಿರಲು ಸಹಾಯ ಮಾಡುತ್ತದೆ,” ಎಂದಿದ್ದಾರೆ.

ಇದನ್ನೂ ಓದಿ: ಆರ್​ಬಿಐನಿಂದ ಸರ್ಕಾರಕ್ಕೆ ಈ ವರ್ಷ 2.87 ಲಕ್ಷ ಕೋಟಿ ರೂ ಡಿವಿಡೆಂಡ್; ಇದು ಹೊಸ ದಾಖಲೆ

ಅತಿಯಾದ ಟ್ರೇಡಿಂಗ್ ಬೇಡ

ಚಿಲ್ಲರೆ ಹೂಡಿಕೆದಾರರು (Retail Investors) ಅತಿಯಾಗಿ ಟ್ರೇಡಿಂಗ್ ಮಾಡುವುದರ ವಿರುದ್ಧ ಎಸ್. ನರೇನ್ ಎಚ್ಚರಿಕೆ ನೀಡಿದ್ದಾರೆ. “ನನ್ನ ಇಷ್ಟು ವರ್ಷಗಳ ಮಾರುಕಟ್ಟೆಯ ಅನುಭವದಲ್ಲಿ, ಚಿಲ್ಲರೆ ಹೂಡಿಕೆದಾರರು ಡೆರಿವೇಟಿವ್ಸ್ (F&O) ಮಾರುಕಟ್ಟೆಯಲ್ಲಿ ಹಣ ಗಳಿಸಿರುವುದನ್ನು ನಾನು ನೋಡಿಲ್ಲ,” ಎಂದು ಅವರು ಹೇಳಿದ್ದಾರೆ. ಅತಿಯಾದ ಆಕ್ರಮಣಕಾರಿ ಟ್ರೇಡಿಂಗ್ ಮಾಡುವ ಬದಲು ಶಿಸ್ತುಬದ್ಧ ದೀರ್ಘಾವಧಿಯ ಹೂಡಿಕೆಯೇ ಸಂಪತ್ತು ಸೃಷ್ಟಿಗೆ ಸೂಕ್ತ ಮಾರ್ಗವಾಗಿದೆ.

ಷೇರು ಮಾರುಕಟ್ಟೆಯಲ್ಲಿ ಯಶಸ್ಸು ಎಂದರೆ ಕೇವಲ ಲಾಭ ಗಳಿಸುವ ಷೇರುಗಳನ್ನು ಪತ್ತೆಹಚ್ಚುವುದಷ್ಟೇ ಅಲ್ಲ; ಬದಲಿಗೆ ಶಿಸ್ತು ಕಾಯ್ದುಕೊಳ್ಳುವುದು, ಅನಗತ್ಯ ರಿಸ್ಕ್ ತೆಗೆದುಕೊಳ್ಳದಿರುವುದು ಮತ್ತು ಕಷ್ಟಪಟ್ಟು ದುಡಿದ ಅಸಲು ಹಣವನ್ನು ನಷ್ಟದಿಂದ ರಕ್ಷಿಸಿಕೊಳ್ಳುವುದೇ ಆಗಿದೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 7:15 pm, Fri, 22 May 26

Source link

10 ದಿನಗಳ ಬಳಿಕ ಕೋರ್ಟ್ ಮುಂದೆ ಶರಣಾದ ತ್ವಿಶಾ ಶರ್ಮಾ ಪತಿ ಸಮರ್ಥ್ ಸಿಂಗ್ – Kannada News | Twisha Sharmas husband Samarth Singh absconding for 10 days arrives at Jabalpur court to surrender

ನವದೆಹಲಿ, ಮೇ 22: ತ್ವಿಶಾ ಶರ್ಮಾ (Twisha Sharma) ಅವರ ಕುಟುಂಬಸ್ಥರು ಈ ಮೊದಲಿನಿಂದಲೂ ತಮ್ಮ ಮಗಳ ಸಾವಿನಲ್ಲಿ ಸಮರ್ಥ್ ಸಿಂಗ್ ಅವರದ್ದೇ ವ್ಯವಸ್ಥಿತ ಸಂಚು ಎಂದು ಆರೋಪಿಸುತ್ತಿದ್ದರು. ಈಗ ಪತಿ ಶರಣಾಗಿರುವುದರಿಂದ ಮತ್ತು ಇತ್ತ ದೆಹಲಿ ಏಮ್ಸ್ ತಜ್ಞರು ಎರಡನೇ ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆ ಆರಂಭಿಸಿರುವುದರಿಂದ, ತ್ವಿಶಾ ಅವರದ್ದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬ ನಿಜವಾದ ರಹಸ್ಯ ಸದ್ಯದಲ್ಲೇ ಬಹಿರಂಗಗೊಳ್ಳಲಿವೆ.

ಕಳೆದ 10 ದಿನಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ಸಮರ್ಥ್ ಸಿಂಗ್ ಇಂದು ಮಧ್ಯಪ್ರದೇಶದ ಸ್ಥಳೀಯ ನ್ಯಾಯಾಲಯಕ್ಕೆ ಶರಣಾಗಲು ಆಗಮಿಸಿದ್ದಾರೆ. ದೆಹಲಿ ಏಮ್ಸ್ (AIIMS) ಮೂಲಕ ತ್ವಿಶಾ ಶರ್ಮಾ ಅವರ ಶವದ ಎರಡನೇ ಮರಣೋತ್ತರ ಪರೀಕ್ಷೆಗೆ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಸಮರ್ಥ್ ಸಿಂಗ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಮೊದಲೇ ಆತ ಸಲ್ಲಿಸಿದ್ದ ಮುಂಗಡ ಜಾಮೀನು ಅರ್ಜಿಯನ್ನು ಹಿಂಪಡೆದಿದ್ದರಿಂದ, ಪೊಲೀಸರು ಯಾವುದೇ ಕ್ಷಣದಲ್ಲೂ ತನ್ನನ್ನು ಬಂಧಿಸಬಹುದು ಮತ್ತು ಕಠಿಣ ಪೊಲೀಸ್ ವಿಚಾರಣೆಗೆ ಒಳಪಡಿಸಬಹುದು ಎಂಬುದನ್ನು ಅರಿತು, ಪೊಲೀಸ್ ಬಂಧನದಿಂದ ತಪ್ಪಿಸಿಕೊಳ್ಳಲು ನೇರವಾಗಿ ನ್ಯಾಯಾಲಯದ ಮುಂದೆ ಶರಣಾಗುವ ತಂತ್ರ ಹೂಡಿದ್ದಾರೆ.

ಇದನ್ನೂ ಓದಿ: ದೆಹಲಿ ಏಮ್ಸ್​​ನಿಂದ ತ್ವಿಶಾ ಶರ್ಮಾ 2ನೇ ಮರಣೋತ್ತರ ಪರೀಕ್ಷೆಗೆ ಮಧ್ಯಪ್ರದೇಶ ಹೈಕೋರ್ಟ್ ಅನುಮತಿ

ಸಮರ್ಥ್ ಸಿಂಗ್ ನ್ಯಾಯಾಲಯದ ಆವರಣಕ್ಕೆ ಆಗಮಿಸುತ್ತಿದ್ದಂತೆ ತನಿಖಾಧಿಕಾರಿಗಳು ಮತ್ತು ಪೊಲೀಸರು ಅಲರ್ಟ್ ಆಗಿದ್ದಾರೆ. ನ್ಯಾಯಾಲಯವು ಆತನ ಶರಣಾಗತಿಯನ್ನು ಅಂಗೀಕರಿಸಿದ ತಕ್ಷಣ, ಪೊಲೀಸರು ಆತನನ್ನು ತಮ್ಮ ಕಸ್ಟಡಿಗೆ ನೀಡುವಂತೆ ಕೋರಲಿದ್ದಾರೆ.

ತ್ವಿಶಾ ಶರ್ಮಾ ಅವರ ಸಾವು ಸಾಮಾನ್ಯ ಆತ್ಮಹತ್ಯೆಯಲ್ಲ, ಇದೊಂದು ವ್ಯವಸ್ಥಿತ ಕೊಲೆ ಎಂದು ಅವರ ಪೋಷಕರು ಮತ್ತು ಕುಟುಂಬದವರು ಗಂಭೀರ ಆರೋಪ ಮಾಡಿದ್ದರು. ಮೊದಲನೇ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕೆಲವು ಲೋಪದೋಷಗಳಿರಬಹುದು. ಸತ್ಯವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿರಬಹುದು ಎಂದು ಶಂಕಿಸಿದ ಕುಟುಂಬಸ್ಥರು, ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಪೋರ್ಟ್ಸ್ ಇಂಜುರಿ ತಪ್ಪಿಸಲು ನಿಮ್ಮ ವೈದ್ಯರ ಈ ಸಲಹೆಗಳನ್ನು ತಪ್ಪದೆ ಪಾಲಿಸಿ – Kannada News | Expert Tips From Dr. Skand To Avoid Common Sports Injuries

ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳಲು ಯುವಕರು ಜಿಮ್‌ಗೆ (Gym) ಹೋಗುವುದು, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಹೆಚ್ಚಾಗಿದೆ. ವ್ಯಾಯಾಮ ಮತ್ತು ಆಟಗಳು ಆರೋಗ್ಯಕ್ಕೆ ಒಳ್ಳೆಯದಾದರೂ, ಸರಿಯಾದ ವಿಧಾನ ಅನುಸರಿಸದಿದ್ದರೆ ಸ್ಪೋರ್ಟ್ಸ್ ಇಂಜುರಿ (Injuries) ಅಪಾಯವೂ ಹೆಚ್ಚಾಗುತ್ತದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಸಫ್ದರ್‌ಜಂಗ್ ಆಸ್ಪತ್ರೆಯ ಸ್ಪೋರ್ಟ್ಸ್ ಇಂಜುರಿ ಸೆಂಟರ್‌ನ ಹಿರಿಯ ಪ್ರೊಫೆಸರ್ ಹಾಗೂ ಆರ್ಥೋಪೆಡಿಕ್ಸ್ ತಜ್ಞ ಡಾ. ಸ್ಕಂದ್ ಸಿನ್ಹಾ ಅವರು ಹೇಳುವ ಪ್ರಕಾರ, ತಪ್ಪಾದ ಪೋಶ್ಚರ್, ವಾರ್ಮ್- ಅಪ್ ಮಾಡದೇ ವ್ಯಾಯಾಮ ಆರಂಭಿಸುವುದು ಮತ್ತು ದೇಹದ ಸಾಮರ್ಥ್ಯಕ್ಕಿಂತ ಹೆಚ್ಚು ವರ್ಕೌಟ್ ಮಾಡುವುದು ಗಾಯಗಳಿಗೆ ಪ್ರಮುಖ ಕಾರಣಗಳಾಗಿವೆ. ಆದರೆ ಈ ರೀತಿ ಆಗುವುದನ್ನು ತಡೆಯಲು ಕೆಲವು ಸಲಹೆಗಳನ್ನು ಅನುಸರಿಸುವುದು ಬಹಳ ಒಳ್ಳೆಯದು ಎನ್ನುತ್ತಾರೆ. ಹಾಗಾದರೆ ಸ್ಪೋರ್ಟ್ಸ್ ಇಂಜುರಿ ತಪ್ಪಿಸಲು ಏನು ಮಾಡಬೇಕು, ಹೇಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯುವಕರಲ್ಲಿ ಹೆಚ್ಚು ಕಾಣಿಸುತ್ತಿರುವ ಸ್ಪೋರ್ಟ್ಸ್ ಇಂಜುರಿಗಳು ಯಾವುವು?

ಡಾ. ಸ್ಕಂದ್ ಸಿನ್ಹಾ ಅವರ ಪ್ರಕಾರ, ಇತ್ತೀಚೆಗೆ ಲಿಗಮೆಂಟ್ ಗಾಯ, ಸ್ನಾಯು ಎಳೆದಂತಾಗುವುದು, ಮೊಣಕಾಲು ನೋವು, ಭುಜದ ಗಾಯ ಮತ್ತು ಕೆಳ ಬೆನ್ನು ನೋವು ಹೆಚ್ಚು ಕಾಣಿಸುತ್ತಿವೆ. ಜಿಮ್‌ನಲ್ಲಿ ಸರಿಯಾದ ತಂತ್ರ ಪಾಲಿಸದೇ ವ್ಯಾಯಾಮ ಮಾಡುವುದು ಮತ್ತು ಅಗತ್ಯಕ್ಕಿಂತ ಹೆಚ್ಚು ತರಬೇತಿ ಪಡೆಯುವುದರಿಂದ ಈ ಸಮಸ್ಯೆಗಳು ಉಂಟಾಗುತ್ತವೆ. ಪ್ರತಿಯೊಬ್ಬರ ದೇಹದ ಸಾಮರ್ಥ್ಯ ವಿಭಿನ್ನವಾಗಿರುವುದರಿಂದ, ತಮ್ಮ ದೇಹಕ್ಕೆ ಹೊಂದುವ ರೀತಿಯಲ್ಲಿ ವ್ಯಾಯಾಮ ಮಾಡುವುದು ಬಹಳ ಮುಖ್ಯ ಎಂದು ಅವರು ಹೇಳುತ್ತಾರೆ.

ಸಣ್ಣ ಗಾಯವನ್ನೂ ನಿರ್ಲಕ್ಷಿಸುವುದು ಅಪಾಯಕಾರಿ

ಆರಂಭಿಕ ಹಂತದಲ್ಲಿರುವ ನೋವು, ಊತ ಅಥವಾ ಗಟ್ಟಿತನವನ್ನು ನಿರ್ಲಕ್ಷಿಸಿದರೆ ಅದು ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆಯಾಗಬಹುದು. ಒಂದು ಭಾಗವನ್ನು ಚಲಿಸಲು ತೊಂದರೆ ಆಗುವುದು ಅಥವಾ ನೋವು ದೀರ್ಘಕಾಲ ಮುಂದುವರಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ತಜ್ಞರ ಪ್ರಕಾರ, ಆರಂಭದಲ್ಲೇ ಸರಿಯಾದ ಚಿಕಿತ್ಸೆ ಪಡೆಯುವುದರಿಂದ ದೀರ್ಘಕಾಲದ ಸಮಸ್ಯೆಗಳನ್ನು ತಪ್ಪಿಸಬಹುದು.

ವ್ಯಾಯಾಮಕ್ಕೂ ಮೊದಲು ವಾರ್ಮ್-ಅಪ್ ಏಕೆ ಅಗತ್ಯ?

ಯಾವುದೇ ಫಿಜಿಕಲ್ ಆಕ್ಟಿವಿಟಿ ಅಥವಾ ವರ್ಕೌಟ್ ಆರಂಭಿಸುವ ಮೊದಲು ಕನಿಷ್ಠ 10ರಿಂದ 15 ನಿಮಿಷಗಳ ವಾರ್ಮ್-ಅಪ್ ಮತ್ತು ಸ್ಟ್ರೆಚಿಂಗ್ ಮಾಡಬೇಕು. ಇದರಿಂದ ಸ್ನಾಯುಗಳು ಮತ್ತು ಸಂಧಿಗಳು ವ್ಯಾಯಾಮಕ್ಕೆ ಸಿದ್ಧಗೊಳ್ಳುತ್ತವೆ. ವಾರ್ಮ್-ಅಪ್ ಮಾಡುವುದರಿಂದ ರಕ್ತ ಸಂಚಾರ ಸುಧಾರಿಸಿ ಗಾಯದ ಅಪಾಯ ಕಡಿಮೆಯಾಗುತ್ತದೆ. ವಾರ್ಮ್-ಅಪ್ ನಂತರವೇ ಮುಖ್ಯ ವ್ಯಾಯಾಮ ಆರಂಭಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: 30ರ ಹರಯದಲ್ಲಿ ಮೊಣಕಾಲು ನೋವು ಹೆಚ್ಚಾಗಿ ಕಂಡುಬರುತ್ತಿರುವುದಕ್ಕೆ ಕಾರಣವೇನು? ತಜ್ಞರು ನೀಡಿರುವ ಕಾರಣ ಇಲ್ಲಿದೆ

ಆಟ ಅಥವಾ ವ್ಯಾಯಾಮದ ವೇಳೆ ಗಾಯವಾದರೆ ತಕ್ಷಣ ಏನು ಮಾಡಬೇಕು?

  • ಗಾಯಗೊಂಡ ಭಾಗಕ್ಕೆ ವಿಶ್ರಾಂತಿ ನೀಡಿ
  • ಊತ ಕಡಿಮೆ ಮಾಡಲು ಐಸ್ ಹಾಕಿ
  • ಸೌಮ್ಯವಾಗಿ ಬ್ಯಾಂಡೇಜ್ ಕಟ್ಟಿರಿ
  • ಗಾಯಗೊಂಡ ಭಾಗವನ್ನು ಮೇಲಕ್ಕೆ ಇಡಿ
  • ನೋವು ಅಥವಾ ಊತ ಹೆಚ್ಚಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಸ್ಪೋರ್ಟ್ಸ್ ಇಂಜುರಿ ತಪ್ಪಿಸಿಕೊಳ್ಳಲು ಗಮನಿಸಬೇಕಾದ ವಿಷಯಗಳು:

  • ಸರಿಯಾದ ತಂತ್ರದಲ್ಲಿ ವ್ಯಾಯಾಮ ಮಾಡಬೇಕು
  • ನಿಯಮಿತವಾಗಿ ಸ್ಟ್ರೆಚಿಂಗ್ ಮಾಡಬೇಕು
  • ದೇಹಕ್ಕೆ ಸಾಕಷ್ಟು ವಿಶ್ರಾಂತಿ ನೀಡಬೇಕು
  • ಸಮತೋಲನ ಆಹಾರ ಸೇವಿಸಬೇಕು
  • ಸಾಕಷ್ಟು ನಿದ್ರೆ ಮಾಡಬೇಕು
  • ನೋವು ಅಥವಾ ಊತವನ್ನು ನಿರ್ಲಕ್ಷಿಸಬಾರದು

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SRH vs RCB IPL 2026 Live Score: ಟಾಸ್ ಗೆದ್ದ ಸನ್​​ರೈಸರ್ಸ್​ ಬ್ಯಾಟಿಂಗ್ ಆಯ್ಕೆ

ಹೈದರಾಬಾದ್‌ನಲ್ಲಿ ನಡೆಯುತ್ತಿರುವ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದು, ಅಗ್ರ ಎರಡು ಸ್ಥಾನಗಳಿಸುವ ಗುರಿಯನ್ನು ಹೊಂದಿವೆ. ಆರ್‌ಸಿಬಿ ಪ್ರಸ್ತುತ 18 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹೀಗಾಗಿ ಸನ್‌ರೈಸರ್ಸ್ ವಿರುದ್ಧದ ಗೆಲುವು ಆರ್​ಸಿಬಿಗೆ ಮೊದಲ ಸ್ಥಾನ ಮತ್ತು ಫೈನಲ್ ತಲುಪಲು ಎರಡು ಅವಕಾಶಗಳನ್ನು ನೀಡುತ್ತದೆ. ಇತ್ತ ಸನ್‌ರೈಸರ್ಸ್ ಕೂಡ ಆಡಿರುವ 13 ಪಂದ್ಯಗಳಿಂದ 16 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು ಅಗ್ರ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆಯಲು ಆರ್​ಸಿಬಿ ವಿರುದ್ಧ ಗೆಲ್ಲಲೇಬೇಕಾಗಿದೆ.

Source link

‘ಪೆದ್ದಿ’ ಚಿತ್ರದ ‘ಹೆಲ್ಲಲ್ಲಲ್ಲೋ’ ಹಾಡಿನ ಪ್ರೋಮೋ ರಿಲೀಸ್: ಶ್ರುತಿ ಹಾಸನ್ ಡ್ಯಾನ್ಸ್ ಧಮಾಕಾ – Kannada News | Ram Charan starrer Peddi Movie Hellallallo Song promo released ft Janhvi Kapoor Shruti Haasan

ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ನಟನೆಯ, ಬುಚ್ಚಿ ಬಾಬು ಸನಾ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘ಪೆದ್ದಿ’ (Peddi) ದಿನಕ್ಕೊಂದು ಹೊಸ ಅಪ್‌ಡೇಟ್ ಮೂಲಕ ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸುತ್ತಿದೆ. ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಸಂಗೀತ ಸಂಯೋಜನೆಯ ಈ ಚಿತ್ರದ ಮೊದಲ ಎರಡು ಹಾಡುಗಳು ಈಗಾಗಲೇ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಟ್ರೆಂಡಿಂಗ್‌ನಲ್ಲಿವೆ. ಇದೀಗ ಚಿತ್ರತಂಡ ಸಿನಿಮಾದ ಮೂರನೇ ಹಾಡು ‘ಹೆಲ್ಲಲ್ಲಲ್ಲೋ’ (Hellallallo) ಕೂಡ ಧೂಳೆಬ್ಬಿಸಲು ಸಜ್ಜಾಗಿದೆ. ಹಾಡಿನ ಪ್ರೋಮೋವನ್ನು ಬಿಡುಗಡೆ ಆಗಿದೆ.

ಈ ಪ್ರೋಮೋದಲ್ಲಿ ಎ.ಆರ್. ರೆಹಮಾನ್ ಅವರ ವಿಶಿಷ್ಟ ಶೈಲಿಯ ಮ್ಯೂಸಿಕಲ್ ಮ್ಯಾಜಿಕ್ ಮತ್ತು ನಿರ್ದೇಶಕ ಬುಚ್ಚಿ ಬಾಬು ಸನಾ ಅವರ ರಾ ಶೈಲಿಯ ಸಮ್ಮಿಲನ ಎದ್ದು ಕಾಣುತ್ತಿದೆ. ವೇದಿಕೆಯೊಂದರ ಮೇಲೆ, ಸುತ್ತುವರಿದ ನೂರಾರು ಜನರ ಮಧ್ಯೆ ಅದ್ದೂರಿಯಾಗಿ ಚಿತ್ರೀಕರಿಸಲಾದ ಈ ಹಾಡಿನಲ್ಲಿ ರಾಮ್ ಚರಣ್, ಶ್ರುತಿ ಹಾಸನ್ ಮತ್ತು ಜಾನ್ವಿ ಕಪೂರ್ ಜೊತೆಯಾಗಿ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ.

ಹಾಡಿನಲ್ಲಿ ರಾಮ್ ಚರಣ್ ಅವರು ರಗಡ್ ಲುಕ್‌ನಲ್ಲಿ ಮಿಂಚಿದ್ದಾರೆ. ನಟಿ ಶ್ರುತಿ ಹಾಸನ್ ಗ್ಲಾಮರಸ್ ಉಡುಪಿನಲ್ಲಿ ಕಣ್ಮನ ಸೆಳೆದರೆ, ಜಾನ್ವಿ ಕಪೂರ್ ಕೂಡ ಚಂದದ ಡ್ರೆಸ್ ಧರಿಸಿ ಡ್ಯಾನ್ಸ್ ಮಾಡಿದ್ದಾರೆ. ಈ ಮೂವರ ಎನರ್ಜಿಟಿಕ್ ಡ್ಯಾನ್ಸ್ ಅಭಿಮಾನಿಗಳಿಗೆ ವಿಶುವಲ್ ಟ್ರೀಟ್ ನೀಡಲಿದ್ದು, ಈ ಪ್ರೋಮೋದಿಂದ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.

‘ಹೆಲ್ಲಲ್ಲಲ್ಲೋ’ ಹಾಡಿನ ಪ್ರೋಮೋ:

ಕ್ರೀಡಾ ಲೋಕದ ಕಥಾಹಂದರ ಹೊಂದಿರುವ ‘ಪೆದ್ದಿ’ ಚಿತ್ರವನ್ನು ಬುಚ್ಚಿ ಬಾಬು ಸನಾ ನಿರ್ದೇಶಿಸಿದ್ದು, ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ದಿವ್ಯೇಂದು ಶರ್ಮಾ ಮತ್ತು ಜಗಪತಿ ಬಾಬು ಸಹ ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: ಜೂ.4ಕ್ಕೆ ‘ಪೆದ್ದಿ’ ರಿಲೀಸ್; ‘ಟಾಕ್ಸಿಕ್’ ಬಿಟ್ಟುಕೊಟ್ಟ ದಿನಾಂಕದಲ್ಲಿ ರಾಮ್ ಚರಣ್ ಸಿನಿಮಾ ತೆರೆಗೆ

ಸದ್ಯಕ್ಕೆ ಬಿಡುಗಡೆ ಆಗಿರುವುದು ‘ಹೆಲ್ಲಲ್ಲಲ್ಲೋ’ ಹಾಡಿನ ಪ್ರೋಮೋ ಮಾತ್ರ. ಪೂರ್ಣ ಹಾಡನ್ನು ಮೇ 23ರಂದು ಭೋಪಾಲ್‌ನಲ್ಲಿ ನಡೆಯಲಿರುವ ಅದ್ಧೂರಿ ಸಂಗೀತ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಬಹುಭಾಷೆಗಳಲ್ಲಿ ಸಿದ್ಧವಾಗಿರುವ ಈ ಸಿನಿಮಾ ಜೂನ್ 4ರಂದು ವಿಶ್ವದಾದ್ಯಂತ ತೆರೆಕಾಣಲಿದ್ದು, ಜೂನ್ 3ರಂದೇ ಪ್ರೀಮಿಯರ್ ಶೋಗಳನ್ನು ಆಯೋಜಿಸಲು ನಿರ್ಮಾಪಕರು ಸಜ್ಜಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೇಶದ ಅರ್ಧದಷ್ಟು ಜಿಡಿಪಿಗೆ ಹೊಟ್ಟೆ ತುಂಬಿಸುತ್ತಿರೋದು ಕರ್ನಾಟಕ ಸೇರಿ 5 ರಾಜ್ಯಗಳು ಮಾತ್ರ; ಇಲ್ಲಿವೆ ವರದಿಯ ಅಂಶಗಳು – Kannada News | Maharashtra karnataka gdp dominance state economy impact

ನವದೆಹಲಿ, ಮೇ 22: ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರಿದಿದ್ದರೂ, ದೇಶದ ವಿವಿಧ ರಾಜ್ಯಗಳ ನಡುವಿನ ಆದಾಯ, ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಭಾರಿ ಅಸಮಾನತೆ ಇರುವುದು ವರದಿಯೊಂದರಿಂದ ಬಹಿರಂಗಗೊಂಡಿದೆ. ‘ಕ್ಲೈಂಟ್ ಅಸೋಸಿಯೇಟ್ಸ್’ ಸಂಸ್ಥೆ ಬಿಡುಗಡೆ ಮಾಡಿರುವ ‘ಸ್ಟೇಟ್ ಆಫ್ ಇಂಡಿಯನ್ ಸ್ಟೇಟ್ಸ್: 2026’ (State of Indian States: 2026) ಶ್ವೇತಪತ್ರದ ಪ್ರಕಾರ, ಭಾರತದ ಒಟ್ಟು ಆರ್ಥಿಕ ಚಟುವಟಿಕೆಗಳು ಕೇವಲ ಐದು ರಾಜ್ಯಗಳಲ್ಲಿ ಹೆಚ್ಚು ಕೇಂದ್ರೀಕೃತವಾಗಿವೆ. ದೇಶದ ಅರ್ಧದಷ್ಟು ಜಿಡಿಪಿಗೆ (gdp) ಹೊಟ್ಟೆ ತುಂಬಿಸುತ್ತಿರುವುದು ಕರ್ನಾಟಕ ಸೇರಿ ಐದೇ ರಾಜ್ಯಗಳಂತೆ. ಈ ಐದು ರಾಜ್ಯಗಳು ದೇಶದ ಶೇ. 48ರಷ್ಟು ಜಿಡಿಪಿಗೆ ಕೊಡುಗೆ ನೀಡುತ್ತಿವೆ ಎಂದು ಈ ವರದಿ ಹೇಳುತ್ತಿದೆ. ಪಾಸಿಟಿವ್ ಸಂಗತಿ ಎಂದರೆ, ಉತ್ತರಪ್ರದೇಶದಂತಹ ರಾಜ್ಯಗಳ ಬೆಳವಣಿಗೆಯ ವೇಗ ಸಕಾರಾತ್ಮಕವಾಗಿದೆ.

ಭಾರತೀಯ ಆರ್ಥಿಕತೆಯ ‘ಬಿಗ್ ಫೈವ್’

ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ, ಕರ್ನಾಟಕ ಮತ್ತು ಗುಜರಾತ್, ಈ ಐದು ರಾಜ್ಯಗಳು ಮಾತ್ರವೇ 2025 ರ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ಜಿಡಿಪಿಗೆ (GDP) ಶೇಕಡಾ 48 ರಷ್ಟು ಕೊಡುಗೆ ನೀಡಿವೆ. ಇದಕ್ಕೆ ವ್ಯತಿರಿಕ್ತವಾಗಿ, ದೇಶದ ಕೊನೆಯ ಹತ್ತು ರಾಜ್ಯಗಳ ಒಟ್ಟು ಕೊಡುಗೆ ಕೇವಲ ಶೇ. 3 ಕ್ಕಿಂತ ಕಡಿಮೆಯಿದೆ.

ಭಾರತದ ಆರ್ಥಿಕ ರಾಜಧಾನಿಯಾಗಿರುವ ಮಹಾರಾಷ್ಟ್ರ ರಾಜ್ಯವೊಂದೇ ದೇಶದ ಒಟ್ಟು ಜಿಡಿಪಿಗೆ ಶೇ. 13.3 ರಷ್ಟು ಕೊಡುಗೆ ನೀಡುವ ಮೂಲಕ ಅಗ್ರಸ್ಥಾನದಲ್ಲಿದೆ. ಮಹಾರಾಷ್ಟ್ರದ ಒಟ್ಟು ಆರ್ಥಿಕತೆಯು ಮಿಜೋರಾಂ ರಾಜ್ಯಕ್ಕಿಂತ 133 ಪಟ್ಟು ದೊಡ್ಡದಾಗಿದೆ.

ಇದನ್ನೂ ಓದಿ: ಆರ್​ಬಿಐನಿಂದ ಸರ್ಕಾರಕ್ಕೆ ಈ ವರ್ಷ 2.87 ಲಕ್ಷ ಕೋಟಿ ರೂ ಡಿವಿಡೆಂಡ್; ಇದು ಹೊಸ ದಾಖಲೆ

ಆರ್ಥಿಕ ಬೆಳವಣಿಗೆಯಲ್ಲಿ ಉತ್ತರ ಪ್ರದೇಶದ ರೂಪಾಂತರವು ಎಲ್ಲರ ಗಮನ ಸೆಳೆಯುತ್ತಿದೆ. ಇದರ ಆರ್ಥಿಕತೆಯು ಮೆಕ್ಸಿಕೋ ದೇಶಕ್ಕೆ ಸಮನಾಗಿದ್ದು, ಚೀನಾ ದೇಶಕ್ಕಿಂತಲೂ ವೇಗವಾಗಿ ಬೆಳೆಯುತ್ತಿದೆ.

ಆದಾಯದ ತಾರತಮ್ಯ: ಕೇವಲ ಆರ್ಥಿಕತೆಯ ಗಾತ್ರವಷ್ಟೇ ಜನರ ಏಳಿಗೆಯನ್ನು ನಿರ್ಧರಿಸುವುದಿಲ್ಲ ಎಂಬುದನ್ನು ವರದಿ ಸ್ಪಷ್ಟಪಡಿಸಿದೆ. ಗೋವಾ ಮತ್ತು ಸಿಕ್ಕಿಂ ರಾಜ್ಯಗಳ ತಲಾ ಆದಾಯ ಬಿಹಾರಕ್ಕಿಂತ 8 ಪಟ್ಟು ಹೆಚ್ಚಿದೆ. ಬಿಹಾರದ ತಲಾ ಆದಾಯ 69,321 ರೂ ಆಗಿದ್ದರೆ, ಭಾರತದ ಸರಾಸರಿ ತಲಾ ಆದಾಯ 2.58 ಲಕ್ಷ ರೂ ಆಗಿದೆ. ಕೇವಲ 16 ರಾಜ್ಯಗಳು ಮಾತ್ರ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಆದಾಯ ಹೊಂದಿವೆ.

ವಿದೇಶಿ ನೇರ ಹೂಡಿಕೆ (FDI): 2025 ರ ಹಣಕಾಸು ವರ್ಷದಲ್ಲಿ ಭಾರತಕ್ಕೆ ಹರಿದು ಬಂದ ಒಟ್ಟು 4.22 ಲಕ್ಷ ಕೋಟಿ ರೂ ವಿದೇಶಿ ಹೂಡಿಕೆಯಲ್ಲಿ, ಬರೋಬ್ಬರಿ ಶೇ. 83.3 ರಷ್ಟು ಹೂಡಿಕೆಯನ್ನು ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ದೆಹಲಿ ಮತ್ತು ತಮಿಳುನಾಡು ರಾಜ್ಯಗಳೇ ಹಂಚಿಕೊಂಡಿವೆ. ತಮಿಳುನಾಡು, ಹರಿಯಾಣ ಮತ್ತು ರಾಜಸ್ಥಾನಗಳು ಹೊಸ ಹೂಡಿಕೆ ಹಬ್‌ಗಳಾಗಿ ಹೊರಹೊಮ್ಮುತ್ತಿವೆ.

ಒಟ್ಟಾರೆ ಶ್ರೇಯಾಂಕದಲ್ಲಿ ಗುಜರಾತ್, ಕರ್ನಾಟಕ ಮುಂದು

ಉದ್ಯೋಗ ಸೃಷ್ಟಿ, ಆರ್ಥಿಕ ಶಿಸ್ತು ಮತ್ತು ಹೂಡಿಕೆ ಆಕರ್ಷಣೆಯ ಆಧಾರದ ಮೇಲೆ ಸಿದ್ಧಪಡಿಸಲಾದ ಒಟ್ಟಾರೆ ಶ್ರೇಯಾಂಕದಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ನಂತರದ ಸ್ಥಾನಗಳಲ್ಲಿವೆ. ಆದರೆ ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರಗಳು ಸಾಲದ ಹೊರೆಯಿಂದಾಗಿ ಆರ್ಥಿಕ ಸುಧಾರಣೆಯ ಅಗತ್ಯವಿರುವ ರಾಜ್ಯಗಳ ಪಟ್ಟಿಯಲ್ಲಿವೆ.

ಇದನ್ನೂ ಓದಿ: ಐಟಿಆರ್ ಸಲ್ಲಿಸುತ್ತಿದ್ದೀರಾ? ಎಐಎಸ್ ಪರಿಶೀಲನೆ ಮರೆಯದಿರಿ; ಏನದರ ಮಹತ್ವ? ಇಲ್ಲಿದೆ ಡೀಟೇಲ್ಸ್

ಭಾರತವು 2026 ರಲ್ಲಿ ಶೇ. 7.5 ರಷ್ಟು ಮತ್ತು 2027 ರಲ್ಲಿ ಶೇ. 6.8 ರಷ್ಟು ಜಿಡಿಪಿ ಬೆಳವಣಿಗೆ ಕಾಣುವ ಮುನ್ಸೂಚನೆ ಇದೆ. ಆದರೆ ಈ ಬೆಳವಣಿಗೆಯು ಕೇವಲ ಕೆಲವೇ ರಾಜ್ಯಗಳಿಗೆ ಸೀಮಿತವಾಗದೆ, ಇತರ ರಾಜ್ಯಗಳಿಗೂ ಹರಡಬೇಕಿದೆ. ಹಿಂದುಳಿದ ರಾಜ್ಯಗಳಲ್ಲಿ ಖಾಸಗಿ ವಲಯದ ಹೂಡಿಕೆ, ಕೈಗಾರಿಕೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ಭಾರತವು ಮುಂಬರುವ ದಶಕದಲ್ಲಿ ಎರಡಂಕಿ (double-digit) ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version