ಬೆಂಗಳೂರು, ಮಾರ್ಚ್ 24: ಚಿನ್ನದ ದರದಲ್ಲಿ ಗಮನಾರ್ಹ ಕುಸಿತ ಕಂಡುಬಂದಿದ್ದು, ಮಾರ್ಚ್ 24 ರಂದು 22 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂಗೆ 270 ರಷ್ಟು ಕಡಿಮೆಯಾಗಿದೆ. ಪ್ರಸ್ತುತ, 1 ಗ್ರಾಂ 22 ಕ್ಯಾರಟ್ ಚಿನ್ನದ ದರ 12,865 ರೂ. ಆಗಿದೆ. ಈ ಕುಸಿತದಿಂದಾಗಿ ಚಿನ್ನ ಖರೀದಿದಾರರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದಂತೆಯೇ ಬೆಂಗಳೂರು, ಹಾಸನ, ಬೆಳಗಾವಿ ಸೇರಿದಂತೆ ಕರ್ನಾಟಕದ ವಿವಿಧೆಡೆ ಗ್ರಾಹಕರು, ವಿಶೇಷವಾಗಿ ಮಹಿಳೆಯರು ಚಿನ್ನ ಖರೀದಿಗೆ ಮುಗಿಬೀಳುತ್ತಿದ್ದಾರೆ.
ಬೆಲೆ ಇಳಿಕೆಯಾಗಿದ್ದಕ್ಕೆ ಹಲವು ಮಹಿಳಾ ಗ್ರಾಹಕರು ಸಂತಸ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ, ಮಧ್ಯಮ ವರ್ಗದ ಜನರಿಗೆ ಇದು ಚಿನ್ನ ಖರೀದಿಸುವ ಉತ್ತಮ ಅವಕಾಶವೆಂದು ಅಭಿಪ್ರಾಯಪಟ್ಟಿದ್ದಾರೆ. ಈ ಬೆಲೆ ಕುಸಿತಕ್ಕೆ ಜಾಗತಿಕ ಆರ್ಥಿಕ ಕಾರಣಗಳಿವೆ ಎಂದು ಅರ್ಥಶಾಸ್ತ್ರಜ್ಞ ಡಾ. ಎಸ್.ಆರ್. ಕೇಶವ್ ವಿಶ್ಲೇಷಿಸಿದ್ದಾರೆ. ಯುಎಸ್ ಡಾಲರ್ ಬಲವರ್ಧನೆ, ಅಮೆರಿಕಾದ ಫೆಡರಲ್ ರಿಸರ್ವ್ ಬಡ್ಡಿ ದರಗಳನ್ನು ಕಡಿಮೆ ಮಾಡದಿರುವ ನಿರ್ಧಾರ ಮತ್ತು ಗೋಲ್ಡ್ ಪೇಪರ್ಗಳಲ್ಲಿ ಹೂಡಿಕೆ ಮಾಡಿದವರು ಲಾಭ ಗಳಿಸಿ ವಿಥ್ ಡ್ರಾ ಮಾಡುತ್ತಿರುವುದು ಪ್ರಮುಖ ಕಾರಣಗಳಾಗಿವೆ. ಮುಂದಿನ ನಾಲ್ಕೈದು ದಿನಗಳಲ್ಲಿ ಈ ಕುಸಿತದ ಬಗ್ಗೆ ಮತ್ತಷ್ಟು ಸ್ಪಷ್ಟತೆ ಸಿಗುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಮಾರ್ಚ್ 28ರಿಂದ ಐಪಿಎಲ್ ಆರಂಭ ಆಗುತ್ತಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಆರ್ಸಿಬಿ ತಂಡ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಈ ಪಂದ್ಯ ನಡೆಯಲಿದೆ. ಕ್ರಿಕೆಟ್ ಆರಂಭಕ್ಕೂ ಕೆಲವೇ ದಿನ ಮೊದಲು ಬಿಸಿಸಿಐ ನಿಯಮಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಇದು ಈ ಬಾರಿಯ ಸೀಸನ್ ಮೇಲೆ ಸಾಕಷ್ಟು ಪ್ರಭಾವ ಬೀರುವ ಸಾಧ್ಯತೆ ಇದೆ.
ತಂಡಗಳು ತಮ್ಮ ಪಂದ್ಯದ ದಿನಗಳಲ್ಲಿ ಪ್ರ್ಯಾಕ್ಟಿಸ್ ಸೆಷನ್ ನಡೆಸಲು ಅನುಮತಿಸಲಾಗುವುದಿಲ್ಲ ಎಂದು ಬಿಸಿಸಿಐ ಹೇಳಿದೆ. ಪಂದ್ಯಕ್ಕಾಗಿ ಪಿಚ್ ರಕ್ಷಣೆ ಮಾಡೋದು ಇದರ ಪ್ರಮುಖ ಉದ್ದೇಶ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ, ಬಿಸಿಸಿಐ ಅಭ್ಯಾಸ ಪ್ರದೇಶದಲ್ಲಿ ಎರಡು ನೆಟ್ಗಳನ್ನು ನಿರ್ಮಾಣ ಮಾಡಲಿದೆ. ಎರಡು ತಂಡಗಳು ಒಂದೇ ಸ್ಥಳದಲ್ಲಿ ಏಕಕಾಲದಲ್ಲಿ ಅಭ್ಯಾಸ ಮಾಡುತ್ತಿದ್ದರೆ, ಎರಡೂ ತಂಡಕ್ಕೆ ತಲಾ ಎರಡು ಪಿಚ್ಗಳನ್ನು ನೀಡಲಾಗುವುದು.
ತಂಡಗಳು ತಮ್ಮ ಎದುರಾಳಿ ತಂಡಗಳಿಗೆ ಮೀಸಲಿಟ್ಟ ಜಾಗವನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅವು ಖಾಲಿ ಇದ್ದರೂ ಸಹ ಅದನ್ನು ಬಳಸುವಂತಿಲ್ಲ. ನ್ಯಾಯ ಕಾಪಾಡಿಕೊಳ್ಳುವುದು ಇದರ ಮುಖ್ಯ ಉದ್ದೇಶ. ಪಂದ್ಯದ ದಿನಗಳಲ್ಲಿ ತಂಡಗಳು ತಮ್ಮ ಆಟಗಾರರಿಗೆ ಫಿಟ್ನೆಸ್ ಪರೀಕ್ಷೆಗಳನ್ನು ನಡೆಸಲು ಅನುಮತಿ ಇಲ್ಲ.
ಐಪಿಎಲ್ ಸಮಯದಲ್ಲಿ ಆಟಗಾರರ ಕುಟುಂಬದವರ ಇರುವಿಕೆ ಬಗ್ಗೆಯೂ ಕೆಲವು ಮಾರ್ಗಸೂಚಿ ಹೊರಡಿಸಿದೆ. ತಂಡಗಳು ತಂಡದ ಬಸ್ ಮೂಲಕ ಮಾತ್ರ ಮೈದಾನಕ್ಕೆ ಪ್ರಯಾಣಿಸಲು ಅವಕಾಶ ಇದೆ. ಕುಟುಂಬದವರು, ಸ್ನೇಹಿತರು ತರಬೇತಿ ಅವಧಿಯಲ್ಲಿ ಆಟದ ಮೈದಾನಕ್ಕೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ನಿಗದಿಪಡಿಸಿದ ಜಾಗದಲ್ಲಿ ನಿಂತು ಅಭ್ಯಾಸವನ್ನು ವೀಕ್ಷಿಸಬಹುದು. ಆಟಗಾರರು ಡ್ರೆಸ್-ಕೋಡ್ ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.
ನವದೆಹಲಿ, ಮಾರ್ಚ್ 14: ಟಿವಿ9 ನೆಟ್ವರ್ಕ್ ಆಯೋಜಿಸಿದ ನಾಲ್ಕನೇ ಆವೃತ್ತಿಯ ಡಬ್ಲ್ಯುಐಟಿಟಿ ಶೃಂಗಸಭೆಯಲ್ಲಿ (ವಾಟ್ ಇಂಡಿಯಾ ಥಿಂಕ್ಸ್ ಟುಡೇ ಸಮಿಟ್ 2026) ಉದ್ಯಮ ವಲಯದ ಪರಿಣಿತರು ಇಂದಿನ ಸ್ಟಾರ್ಟಪ್ ಲೋಕದ ಬಗ್ಗೆ ವಿಚಾರ ವಿನಿಮಯ ಮಾಡಿದರು. ಯಾವುದೇ ಕಂಪನಿ ಅಥವಾ ಸ್ಟಾರ್ಟಪ್ಗೆ ಮೌಲ್ಯವೇ ಪ್ರಧಾನವಾಗಿರುತ್ತದೆ. ಮೌಲ್ಯದ ಮೇಲೆ ಗಮನ ಕೊಟ್ಟರೆ ಮೌಲ್ಯಮಾಪನ ತನ್ನಂತಾನೆ ಉತ್ತಮವಾಗಿರುತ್ತದ. ಇದು ಡಬ್ಲ್ಯುಐಟಿಟಿ ಸಮಿಟ್ನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಾಲ್ವರು ಪರಿಣಿತರು ಒಮ್ಮತವಾಗಿ ವ್ಯಕ್ತಪಡಿಸಿದ ಅಭಿಪ್ರಾಯವಾಗಿತ್ತು.
ಮೌಲ್ಯ ಮತ್ತು ಮೌಲ್ಯಮಾಪನ (Valuation) ವಿಚಾರ ಕುರಿತು ನಡೆದ ಡಿಬೇಟ್ನಲ್ಲಿ ಟಿಐಇ (TiE) ಎಕ್ಸಿಕ್ಯೂಟಿವ್ ಡೈರೆಕ್ಟರ್ ಉಪಾಸನಾ ಶರ್ಮಾ, ಗ್ಯಾಬಿಟ್ ಸಹ-ಸಂಸ್ಥಾಪಕಿ ಅರ್ಪಣಾ ಶಾಹಿ, ಸ್ಕೈ ಏರ್ ಮೊಬಿಲಿಟಿ ಸಂಸ್ಥಾಪಕ ಅಂಕಿತ್ ಕುಮಾರ್ ಮತ್ತು ಫಂಡಮೆಂಟಂ ಇನ್ವೆಸ್ಟ್ಮೆಂಟ್ ಅಡ್ವೈಸರ್ಸ್ನ ಸಹ-ಸಂಸ್ಥಾಪಕ ಆಶೀಶ್ ಕುಮಾರ್ ಅವರು ಪಾಲ್ಗೊಂಡು ಚರ್ಚೆ ನಡೆಸಿದರು.
ಹೊಸ ಬ್ಯುಸಿನೆಸ್ ಅಥವಾ ಸ್ಟಾರ್ಟಪ್ ಮಾಡಬೇಕೆನ್ನುವವರು ಅನಿಶ್ಚಿತ ಪರಿಸ್ಥಿತಿ ಸಂಭಾಳಿಸುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದಾರೆ ಉಪಾಸನಾ ಶರ್ಮಾ. ಯುದ್ಧ ಇರಲಿ, ಇಲ್ಲದೇ ಇರಲಿ, ಅನಿಶ್ಚಿತತೆ ಎನ್ನುವುದು ಇದ್ದೇ ಇರುತ್ತದೆ. ಯಾವುದೇ ಕ್ಷೇತ್ರದಲ್ಲೂ ಹೊಸ ಬ್ಯುಸಿನೆಸ್ ಮಾಡುವವರು ಇದನ್ನು ಎದುರಿಸಬೇಕಾಗುತ್ತದೆ ಎಂಬುದು ಅವರ ಅನಿಸಿಕೆ.
ಸುಸ್ಥಿರತೆಯ ಪ್ರಶ್ನೆ
ಜಾಗತಿಕ ಲಾಜಿಸ್ಟಿಕ್ಸ್ ಇಕೋಸಿಸ್ಟಂಗಳು ಸ್ಟಾರ್ಟಪ್ಗಲಿಗೆ ಸ್ಥಳೀಯವಾಗಿ ಅನುಕೂಲವಾಗಬಲ್ಲುವು. ಇದರಿಂದ ದೇಶಕ್ಕೂ ಅನುಕೂಲವಾಗುತ್ತದೆ ಎಂದು ಸ್ಕೈ ಏರ್ ಮೊಬಿಲಿಟಿ ಸಿಇಒ ಅಂಕಿತ್ ಕುಮಾರ್ ಅಭಿಪ್ರಾಯಪಟ್ಟರು. ಪ್ಯಾನಲ್ ಡಿಸ್ಕಶನ್ನಲ್ಲಿ ಮುಂದುವರಿದು ಮಾತನಾಡಿದ ಅವರು, ಭಾರತದಲ್ಲಿ ಒಂದು ಉತ್ಪನ್ನ ನಿರ್ಮಿಸಲು ಇರುವ ಸಾಧಕ ಮತ್ತು ಬಾಧಕಗಳನ್ನು ವಿವರಿಸಿದರು.
‘ಭಾರತದಲ್ಲಿ ಮೂರು ವರ್ಷದಲ್ಲಿ ಒಂದು ಉತ್ಪನ್ನ ಕಟ್ಟಲು ಆಗುವುದಿಲ್ಲ. ಅದು 10 ವರ್ಷದ ಪ್ರಕ್ರಿಯೆ. ಜನರು ಮತ್ತು ಪರಿಸರದ ಮೇಲೆ ಪೂರಕ ಪರಿಣಾಮ ಬೀರುವಂಥದ್ದನ್ನು ರಚಿಸುವುದು ಬಹಳ ಮೌಲ್ಯಯುತವೆನಿಸುತ್ತದೆ’ ಎಂದರು.
ಹೂಡಿಕೆದಾರರಿಗೆ ಲಾಭವಾಗಬೇಕಾದರೆ ಮೌಲ್ಯ ಇರಬೇಕು…
ಒಬ್ಬ ಹೂಡಿಕೆದಾರ ದೀರ್ಘಕಾಲದ ಆಸ್ತಿಯಲ್ಲಿ ಹೂಡಿಕೆ ಮಾಡಿದಾಗ, ಅದರ ಮೌಲ್ಯ ಮತ್ತು ಮೌಲ್ಯಮಾಪನವು ಸಾಮ್ಯವಾಗಿದ್ದರೆ ಮಾತ್ರ ಹಣ ಮಾಡಲು ಸಾಧ್ಯ. ಸ್ಟಾರ್ಟಪ್ಗಳು ಆರಂಭವಾಗಿ ಮೊದಲ ಕೆಲ ವರ್ಷ ಸಾಮರ್ಥ್ಯ ನಿರ್ಮಾಣಕ್ಕೆ ಒತ್ತು ಕೊಡುತ್ತವೆ. ನಂತರ ಬೆಳವಣಿಗೆಯನ್ನು ಗಮನಿಸಬಹುದು ಎಂದು ಫಂಡಮೆಂಟಮ್ ಇನ್ವೆಸ್ಟ್ಮೆಂಟ್ ಅಡ್ವೈಸರ್ಸ್ ಕಂಪನಿಯ ಸಹ-ಸಂಸ್ಥಾಪಕ ಆಶೀಶ್ ಕುಮಾರ್ ತಿಳಿಸಿದರು.
ಬ್ರೈನ್ ಸ್ಟ್ರೋಕ್ ಪ್ರಕರಣಗಳು ಇಂದಿನ ಕಾಲದಲ್ಲಿ ವೇಗವಾಗಿ ಹೆಚ್ಚುತ್ತಿದ್ದು, ಇದು ಗಂಭೀರ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಬ್ರೈನ್ ಸ್ಟ್ರೋಕ್ ಅಂದರೆ ಮೆದುಳಿಗೆ ಹೋಗುವ ರಕ್ತದ ಸರಬರಾಜು ಅಕಸ್ಮಾತ್ ಕಡಿಮೆಯಾಗುವುದು ಅಥವಾ ರಕ್ತನಾಳ ಸ್ಫೋಟಗೊಂಡು ಒಳಗೆ ರಕ್ತಸ್ರಾವವಾಗುವುದು. ಇದರಿಂದ ಮೆದುಳಿನ ಸೆಲ್ಗಳು ಹಾನಿಗೊಳಗಾಗುತ್ತವೆ. ಈ ರೀತಿ ಆಗುವುದಕ್ಕೆ ಹಲವು ಕಾರಣಗಳಿವೆ. ಹೈ ಬ್ಲಡ್ ಪ್ರೆಶರ್, ಡಯಾಬಿಟೀಸ್, ಹೈ ಕೊಲೆಸ್ಟ್ರಾಲ್, ಧೂಮಪಾನ, ಅತಿಯಾದ ತೂಕ ಮತ್ತು ಕೆಟ್ಟ ಜೀವನಶೈಲಿಯ ಪರಿಣಾಮ ಬಹಳ ಮುಖ್ಯವಾದವು. ಇದಲ್ಲದೆ, ಹೆಚ್ಚು ಒತ್ತಡ, ಶಾರೀರಿಕ ಚಟುವಟಿಕೆಗಳ ಕೊರತೆ ಮತ್ತು ಸರಿಯಲ್ಲದ ಆಹಾರ ಪದ್ಧತಿಗಳು ಕೂಡ ಬ್ರೈನ್ ಸ್ಟ್ರೋಕ್ ಅಪಾಯವನ್ನು ಹೆಚ್ಚಿಸುತ್ತವೆ.
ಇನ್ನು ಈ ರೋಗಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ವಯಸ್ಸಿನವರಲ್ಲೂ ಇದು ಕಾಣಿಸಿಕೊಳ್ಳಬುದು. ಆದರೆ 50 ವರ್ಷ ಮೇಲ್ಪಟ್ಟವರು, ಹೃದಯ ರೋಗಿಗಳು, ಡಯಾಬಿಟೀಸ್ ಮತ್ತು ಹೈ ಬಿಪಿ ಇರುವವರಿಗೆ ಹೆಚ್ಚಿನ ಅಪಾಯ ಇದ್ದು, ಇತ್ತೀಚಿಗೆ ಯುವಕರಲ್ಲಿಯೂ ಇದರ ಪ್ರಮಾಣ ಹೆಚ್ಚುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯ.
ಮಾತನಾಡಲು ತೊಂದರೆ, ಪದಗಳನ್ನು ಸರಿಯಾಗಿ ಉಚ್ಚರಿಸಲಾಗದಿರುವುದು
ಇತರರ ಮಾತು ಅರ್ಥಮಾಡಿಕೊಳ್ಳಲು ಕಷ್ಟವಾಗುವುದು
ಅಕಸ್ಮಾತ್ ತೀವ್ರ ತಲೆನೋವು
ತಲೆ ಸುತ್ತುವುದು
ಕಣ್ಣುಗಳಿಗೆ ಮಂಕಾಗುವಿಕೆ ಅಥವಾ ಡಬಲ್ ದೃಷ್ಟಿ ಕಾಣುವುದು
ಸಮತೋಲನ ಕಳೆದುಕೊಳ್ಳುವುದು, ನಡೆಯಲು ಕಷ್ಟವಾಗುವುದು
ಕೈ ಅಥವಾ ಕಾಲು ಎತ್ತಲು ದುರ್ಬಲತೆ ಅನುಭವ
ಬ್ರೈನ್ ಸ್ಟ್ರೋಕ್ ಲಕ್ಷಣಗಳು ಕಂಡುಬಂದ ತಕ್ಷಣವೇ ಕ್ರಮ ಕೈಗೊಳ್ಳುವುದು ಅತ್ಯಗತ್ಯ. ಪ್ರತಿಯೊಂದು ನಿಮಿಷವೂ ಬಹಳ ಅಮೂಲ್ಯ. ರೋಗಿಯನ್ನು ಆರಾಮದಾಯಕವಾಗಿ ಮಲಗಿಸಿ, ತಲೆಯನ್ನು ಸ್ವಲ್ಪ ಎತ್ತರದಲ್ಲಿಡಿ. ರೋಗಿಯನ್ನು ಶಾಂತವಾಗಿರಿಸಲು ಪ್ರಯತ್ನಿಸಿ. ಏನನ್ನೂ ತಿನ್ನಲು ಅಥವಾ ಕುಡಿಯಲು ಕೊಡಬೇಡಿ. ಉಸಿರಾಟ, ನಾಡಿ ಮತ್ತು ಪ್ರಜ್ಞೆಯ ಸ್ಥಿತಿಯನ್ನು ಗಮನದಲ್ಲಿಡಿ. ತಕ್ಷಣವೇ ರೋಗಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಿರಿ ಎಂಬುದು ವೈದ್ಯರ ಸಲಹೆ.
ಬ್ರೈನ್ ಸ್ಟ್ರೋಕ್ ತಡೆಗಟ್ಟುವುದು ಹೇಗೆ?
ನಿಯಮಿತವಾಗಿ ವ್ಯಾಯಾಮ ಮಾಡಿ
ತೂಕ ನಿಯಂತ್ರಣದಲ್ಲಿಡಿ
ಹಣ್ಣು, ತರಕಾರಿ, ಸಂಪೂರ್ಣ ಧಾನ್ಯಗಳುಳ್ಳ ಸಮತೋಲನ ಆಹಾರ ಸೇವಿಸಿ
ಉಪ್ಪು ಮತ್ತು ಎಣ್ಣೆಯ ಸೇವನೆ ಕಡಿಮೆ ಮಾಡಿ
ಧೂಮಪಾನ ಮತ್ತು ಮದ್ಯಪಾನ ತ್ಯಜಿಸಿ
ಹೈ ಬಿಪಿ, ಡಯಾಬಿಟೀಸ್ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಇರಲು ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಿ.
ಇನ್ನು ಚಿಕಿತ್ಸೆ ಸ್ಟ್ರೋಕ್ನ ಪ್ರಕಾರಕ್ಕೆ ಅವಲಂಬಿತವಾಗಿರುತ್ತದೆ. ವೈದ್ಯರು ಔಷಧಿ, ಫಿಜಿಯೋಥೆರಪಿ ಅಥವಾ ಅಗತ್ಯವಿದ್ದರೆ ಶಸ್ತ್ರಚಿಕಿತ್ಸೆ ಸಲಹೆ ಮಾಡಬಹುದು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರಕಿದರೆ, ಮೆದುಳಿನ ಹಾನಿ ಕಡಿಮೆ ಆಗಿ ಚೇತರಿಕೆಯ ಸಾಧ್ಯತೆ ಹೆಚ್ಚು ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ.
‘ಧುರಂಧರ್ 2’ (Dhurandhar 2) ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಾ ಸಾಗಿದೆ. 2025 ರಲ್ಲಿ ಬಿಡುಗಡೆ ಆಗಿದ್ದ ‘ಧುರಂಧರ್’ ಸಿನಿಮಾದ ಸೀಕ್ವೆಲ್ ‘ಧುರಂಧರ್ 2’ ಆಗಿದೆ. ಮೊದಲ ಭಾಗಕ್ಕಿಂತಲೂ ಹೆಚ್ಚಿನ ಕಲೆಕ್ಷನ್ ಅನ್ನು ‘ಧುರಂಧರ್ 2’ ಮಾಡುವುದು ಖಾತ್ರಿ ಎನ್ನಲಾಗುತ್ತಿದೆ. ಕೋವಿಡ್ ಬಳಿಕ ಸೀಕ್ವೆಲ್ಗಳ ಅಬ್ಬರ ಜೋರಾಗಿದೆ. ಸಾಮಾನ್ಯ ಸಿನಿಮಾಗಳನ್ನು ಸಹ ಸೀಕ್ವೆಲ್ ಅಥವಾ ಫ್ರಾಂಚೈಸ್ ಸಿನಿಮಾ (ಸರಣಿ) ಮಾಡಲಾಗುತ್ತಿದೆ. ಹಾಲಿವುಡ್ನಲ್ಲಂತೂ ಈ ಸಿನಿಮಾ ಪ್ರಾಂಚೈಸ್ ಬಹಳ ಜನಪ್ರಿಯ. ಇದೀಗ ‘ಧುರಂಧರ್’ ಅನ್ನು ಸಹ ಸಿನಿಮಾ ಸರಣಿ ಮಾಡುವ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ.
‘ಧುರಂಧರ್ 3’ ಸಿನಿಮಾ ಜೂನ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಅದು ಮಾತ್ರವೇ ಅಲ್ಲದೆ, ‘ಧುರಂಧರ್’ ಸಿನಿಮಾ ಸರಣಿ ಹಾಗೆಯೇ ಮುಂದುವರೆಯಲಿದೆ ಎನ್ನಲಾಗುತ್ತಿದೆ. ಇದೀಗ ಸಿನಿಮಾ ತಂಡದ ಪ್ರಮುಖ ಸದಸ್ಯರೊಬ್ಬರು ಈ ಬಗ್ಗೆ ಮಾತನಾಡಿದ್ದು, ‘ಧುರಂಧರ್ 3’ ಬರಲಿದೆಯೇ? ಹಾಗೂ ‘ಧುರಂಧರ್’ ಒಂದು ಪ್ರಾಂಚೈಸ್ ಸಿನಿಮಾ ಸರಣಿಯಾಗಿ ಮುಂದುವರೆಯಲಿದೆಯೇ ಎಂಬ ಬಗ್ಗೆ ಮಾತನಾಡಿದ್ದಾರೆ.
‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಕ್ಕೆ ಕಾಸ್ಟಿಂಗ್ ನಿರ್ದೇಶಕರಾಗಿ ಕೆಲಸ ಮಾಡಿರುವ ಮುಖೇಶ್ ಚಾಬ್ರಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿ, ‘ಧುರಂಧರ್ 3’ ಸಿನಿಮಾ ಬರುವುದಿಲ್ಲ ಎಂದು ಖಾತ್ರಿ ಪಡಿಸಿದ್ದಾರೆ. ‘ಈ ಬಗ್ಗೆ ಸ್ಪಷ್ಟನೆ ನೀಡಲೇಬೇಕಾಗಿದೆ. ಅಂತಹದ್ದೇನೂ (ಧುರಂಧರ್ 3) ನಡೆಯುತ್ತಿಲ್ಲ. ಇವೆಲ್ಲಾ ಕೇವಲ ವದಂತಿಗಳು’ ಎಂದು ಸ್ಪಷ್ಟಪಡಿಸಿದ್ದಾರೆ. ‘ಒಂದು ವೇಳೆ ಅಧಿಕೃತ ಮಾಹಿತಿ ಇದ್ದರೆ ತಾವೇ ಅದನ್ನು ಸಾಮಾಜಿಕ ಜಾಲತಾಣ ದಲ್ಲಿ ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ನಿರ್ದೇಶಕ ಆದಿತ್ಯ ಧರ್ ಸಹ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ‘”ಧುರಂಧರ್ ಭಾಗ 1 ಮತ್ತು 2 ರ ಮೂಲಕ ನಾನು ಹೇಳಬೇಕಾದ ಕಥೆಯನ್ನು ಎಂಟು ಗಂಟೆಗಳ ಕಾಲಾವಧಿಯಲ್ಲಿ ಸಂಪೂರ್ಣವಾಗಿ ಹೇಳಿದ್ದೇನೆ. ಕೇವಲ ಹಣದ ಲಾಭಕ್ಕಾಗಿ ಕಥೆಯನ್ನು ಎಳೆಯಲು ನಾನು ಇಷ್ಟಪಡುವುದಿಲ್ಲ’ ಎಂದಿದ್ದಾರೆ. ಆ ಮೂಲಕ ತಾವು ‘ಧುರಂಧರ್ 3’ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಸ್ಟಿಂಗ್ ನಿರ್ದೇಶಕ ಮುಖೇಶ್, ರಣ್ವೀರ್ ಸಿಂಗ್ ಬಗ್ಗೆ ಸಹ ಮಾತನಾಡಿದ್ದು, ‘ಅವರೊಬ್ಬ ಅದ್ಭತ ನಟ, ಸಿನಿಮಾಕ್ಕಾಗಿ ಬಹಳ ಕಷ್ಟ ಪಡುತ್ತಾರೆ. ರಣ್ವೀರ್ ಅವರ ಆರಂಭದ ದಿನಗಳಲ್ಲಿ ನಾನು ಅವರ ಸ್ಕ್ರೀನ್ ಟೆಸ್ಟ್ಗಳನ್ನು ಸಹ ಮಾಡಿದ್ದೆ. ಅವರ ನಟನೆಯ ‘ಲುಟೇರಾ’ ಸಿನಿಮಾನಲ್ಲಿ ಅವರೊಟ್ಟಿಗೆ ಕೆಲಸ ಮಾಡಿದ್ದೆ, ಬಳಿಕ ‘83’ ಸಿನಿಮಾನಲ್ಲಿಯೂ ಕೆಲಸ ಮಾಡಿದ್ದೆ. ನಮ್ಮದು ಬಹಳ ಹಳೆಯ ಸ್ನೇಹ’ ಎಂದು ಹೇಳಿಕೋಂಡಿದ್ದಾರೆ.
ಬೆಂಗಳೂರು, ಮಾರ್ಚ್ 24: ಐಪಿಎಲ್ 2026 (IPL 2026) ಸೀಸನ್ ಆರಂಭದ ಹಿನ್ನಲೆಯಲ್ಲಿ ಆರ್ಸಿಬಿ (Royal Challengers Bengaluru) ಆಡಳಿತ ಮಂಡಳಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ತಂಡದ ಉಪಾಧ್ಯಕ್ಷ ರಾಜೇಶ್ ಮೆನನ್ ಹಾಗೂ ಕ್ರಿಕೆಟ್ ಡೈರೆಕ್ಟರ್ ಮೋ ಬೋಬಾಟ್ ಹಲವು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜೇಶ್ ಮೆನನ್, ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು. ಸರ್ಕಾರ ನೀಡಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ತಿಳಿಸಿದರು.
ಐಪಿಎಲ್ ಪಂದ್ಯಕ್ಕೆ ಕಠಿಣ ಭದ್ರತಾ ಕ್ರಮಗಳು
ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಗ್ರೌಂಡ್ ಒಳಗೆ ಮತ್ತು ಹೊರಗೆ ಸಿಸಿಟಿವಿ ಕ್ಯಾಮರಾಗಳ ಜೊತೆಗೆ ಎಐ ಆಧಾರಿತ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಜನಸಂದಣಿ ಹೆಚ್ಚಾದ ಸ್ಥಳಗಳನ್ನು ಗುರುತಿಸಿ ತಕ್ಷಣ ಎಚ್ಚರಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಮೂರು ಕಮಾಂಡ್ ಸೆಂಟರ್ಗಳನ್ನು ಸ್ಥಾಪಿಸಲಾಗಿದ್ದು, ಎರಡು ಕ್ರೀಡಾಂಗಣದಲ್ಲಿ ಮತ್ತು ಒಂದು ಕಮಿಷನರ್ ಕಚೇರಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಆರ್ಸಿಬಿ ಆಡಳಿತಮಂಡಳಿ ತಿಳಿಸಿದೆ.
ಟಿಕೆಟ್ ಬುಕಿಂಗ್, ಪ್ರವೇಶ ಮತ್ತು ಪಾರ್ಕಿಂಗ್ ವ್ಯವಸ್ಥೆ ಹೇಗಿರಲಿದೆ?
ಇಂದು ಸಂಜೆ 4 ಗಂಟೆಯಿಂದ ಟಿಕೆಟ್ ಮಾರಾಟ ಆರಂಭವಾಗಲಿದೆ. ಮೆಟ್ರೋ ಟಿಕೆಟ್ ಲಿಂಕ್ ಮಾಡುವ ವ್ಯವಸ್ಥೆ ಜಾರಿಗೆ ತರುವ ಹಿನ್ನೆಲೆಯಲ್ಲಿ ಟಿಕೆಟ್ ಮಾರಾಟ ಸ್ವಲ್ಪ ತಡವಾಗಿದೆ. ಟಿಕೆಟ್ ಜೊತೆ ಪಾರ್ಕಿಂಗ್ ಬುಕ್ಕಿಂಗ್ ಮಾಡುವ ವ್ಯವಸ್ಥೆಯೂ ಇದೆ. ಪಂದ್ಯ ಆರಂಭಕ್ಕೆ ನಾಲ್ಕು ಗಂಟೆಗಳ ಮುಂಚೆಯೇ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುತ್ತದೆ. ಕ್ರೀಡಾಂಗಣದ ಸುತ್ತಮುತ್ತ ಕಾರುಗಳಿಗೆ ಎಂಟ್ರಿ ಇರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಏತನ್ಮಧ್ಯೆ, ಮೋಸದ ವೆಬ್ಸೈಟ್ಗಳ ಮೂಲಕ ಟಿಕೆಟ್ ಖರೀದಿಸಬಾರದು ಎಂದು ಆರ್ಸಿಬಿ ಮನವಿ ಮಾಡಿದೆ. ಅಧಿಕೃತ ತಾಣಗಳಲ್ಲಿಯೇ ಟಿಕೆಟ್ ಖರೀದಿಸಲು ಸೂಚಿಸಿದೆ.
11 ನಂಬರ್ ಜೆರ್ಸಿ, 11 ಸೀಟ್ ಖಾಲಿ ಬಿಟ್ಟು ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಗೌರವ
ಕಳೆದ ವರ್ಷದ ಕಾಲ್ತುಳಿತ ಘಟನೆಯಲ್ಲಿ ಮೃತಪಟ್ಟ 11 ಅಭಿಮಾನಿಗಳ ಸ್ಮರಣಾರ್ಥ, ಆಟಗಾರರು 11 ನಂಬರ್ ಜರ್ಸಿಯಲ್ಲಿ ಅಭ್ಯಾಸ ನಡೆಸಲಿದ್ದಾರೆ. ಜೊತೆಗೆ ಕ್ರೀಡಾಂಗಣದಲ್ಲಿ 11 ಸೀಟ್ಗಳನ್ನು ಖಾಲಿ ಬಿಡುವ ಮೂಲಕ ಗೌರವ ಸಲ್ಲಿಸಲಾಗುತ್ತದೆ ಎಂದು ತಂಡದ ಮ್ಯಾನೇಜ್ಮೆಂಟ್ ತಿಳಿಸಿದೆ.
ಯಶ್ ದಯಾಳ್ ಆಡಲ್ಲ
ಯಶ್ ದಯಾಳ್ ಈ ಬಾರಿ ಪ್ಲೇಯಿಂಗ್ ಸ್ಕ್ವಾಡ್ನಲ್ಲಿ ಇರುವುದಿಲ್ಲ ಎಂದು ಮೋ ಬೋಬಾಟ್ ಸ್ಪಷ್ಟಪಡಿಸಿದರು. ಆದರೆ ಅವರು ತಂಡದ ಜೊತೆ ಮುಂದುವರೆಯಲಿದ್ದಾರೆ ಎಂದರು. ಜೋಶ್ ಹೇಜಲ್ವುಡ್ ಶೀಘ್ರದಲ್ಲೇ ತಂಡ ಸೇರಿಕೊಳ್ಳಲಿದ್ದಾರೆ.
ರಾಯಪುರದಲ್ಲೂ ಪಂದ್ಯ
ಈ ಸೀಸನ್ನಲ್ಲಿ ರಾಯಪುರದಲ್ಲೂ ಆರ್ಸಿಬಿ ಪಂದ್ಯಗಳು ನಡೆಯಲಿವೆ. ಅಲ್ಲಿನ ರಾಜ್ಯ ಸರ್ಕಾರ ಜಿಎಸ್ಟಿ ಸಡಿಲಿಕೆ ನೀಡಿರುವುದಾಗಿ ಮಾಹಿತಿ ನೀಡಲಾಗಿದೆ.
ಮತ್ತೊಂದೆಡೆ, ಆರ್ಸಿಬಿ ತಂಡದ ಮಾಲೀಕತ್ವ ಬದಲಾವಣೆ ಸಾಧ್ಯತೆ ಬಗ್ಗೆ ಮೂಲಗಳಿಂದ ಮಾಹಿತಿ ದೊರೆತಿದ್ದು, ಇಂದ (ಮಾರ್ಚ್ 24) ಸಂಜೆ. ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ. ಸುಮಾರು 15-16 ಸಾವಿರ ಕೋಟಿ ರೂಪಾಯಿಗೆ ತಂಡ ಮಾರಾಟವಾಗುವ ಸಾಧ್ಯತೆ ಇದೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಹೋಂಗ್ರೌಂಡ್ ಅಲ್ಲಿ ಐದು ಪಂದ್ಯಗಳನ್ನು ಆಡುತ್ತಿದೆ ಅನ್ನೋದು ವಿಶೇಷ. ಉಳಿದು ಎರಡು ಹೋಂ ಪಂದ್ಯಗಳನ್ನು ಬೇರೆಡೆ ಆಡುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆಲಿದೆ. ಆರ್ಸಿಬಿ ಹಾಗೂ ಹೈದರಾಬಾದ್ ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲೇ ನಡೆಯಲಿದೆ ಅನ್ನೋದು ವಿಶೇಷ. ಈ ಪಂದ್ಯವನ್ನು ನೊಡಲೇಬೇಕು ಎಂದು ಕಾದು ಕುಳಿತವರಿಗೆ ಟಿಕೆಟ್ ಸಿಗುತ್ತದೆಯೋ ಅಥವಾ ಇಲ್ಲವೋ ಎನ್ನುವ ಆತಂಕ. ಟಿಕೆಟ್ ಬುಕ್ ಮಾಡಬೇಕಾದರೆ ಈ ಕ್ರಮ ಅನುಸರಿಸಿದರೆ ನಿಮಗೆ ಟಿಕೆಟ್ ಸಿಗೋ ಸಾಧ್ಯತೆ ಹೆಚ್ಚು.
ಆರ್ಸಿಬಿ ಹೋಂಗ್ರೌಂಡ್ನಲ್ಲಿ ನಡೆಯುವ ಐದು ಪಂದ್ಯಗಳ ಮ್ಯಾಚ್ ಟಿಕೆಟ್ ಆರ್ಸಿಬಿಯ ಅಧಿಕೃತ ಆ್ಯಪ್ ಹಾಗೂ ಅಧಿಕೃತ ವೆಬ್ಸೈಟ್ ಅಲ್ಲಿ ಲಭ್ಯವಿರುತ್ತದೆ. ಎಲ್ಲಾ ಸ್ಟ್ಯಾಂಡ್ಗಳ ಟಿಕೆಟ್ಗಳು ಮಾರಾಟಕ್ಕೆ ಇರಲಿವೆ. 2,300 ರೂಪಾಯಿ ಇಂದ ಆರಂಭ ಆಗಿ, 42 ಸಾವಿರ ರೂಪಾಯಿವರೆಗೂ ಟಿಕೆಟ್ಗಳು ಲಭ್ಯ. ವಿವಿಧ ಸ್ಟ್ಯಾಂಡ್ಗಳ ಆಧಾರದ ಮೇಲೆ ಟಿಕೆಟ್ ಬೆಲೆ ನಿಗದಿ ಮಾಡಲಾಗುತ್ತದೆ.
ಆರ್ಸಿಬಿ ಮ್ಯಾಚ್ ಟಿಕೆಟ್ ಬುಕ್ ಮಾಡಲು ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳಬೇಕು. ವೆಬ್ಸೈಟ್ ಅಲ್ಲಿ ಲಾಗಿನ್ ಆಗಿ ಕೂಡ ಟಿಕೆಟ್ ಖರೀದಿ ಮಾಡಬಹುದು. ಮೊದಲು ಆ್ಯಪ್ಗೆ ಲಾಗಿನ್ ಆಗಬೇಕು. ಅಂದಾಗ ಮಾತ್ರ ಟಿಕೆಟ್ ಖರೀದಿ ಮಾಡಲು ಸಾಧ್ಯ. ಹೀಗಾಗಿ, ಲಾಗಿನ್ ಆಗಿ ಎಲ್ಲಾ ಮಾಹಿತಿಯನ್ನು ಮೊದಲೇ ತುಂಬಿಡಬೇಕು. ಆಗ ಟಿಕೆಟ್ ಬುಕ್ ಮಾಡಲು ಸುಲಭ ಆಗಲಿದೆ.
ಇನ್ನು, ನೀವು ಟಿಕೆಟ್ ಬುಕ್ ಮಾಡುವಾಗ ತುಂಬಾನೇ ವೇಗದಲ್ಲಿ ಟಿಕೆಟ್ ಬುಕ್ ಮಾಡಬೇಕು. ಅಂದಾಗ ಮಾತ್ರ ನಿಮಗೆ ಟಿಕೆಟ್ ಸಿಗುತ್ತದೆ. ಎಲ್ಲರೂ ಟಿಕೆಟ್ಗಾಗಿ ಕಾದು ಕುಳಿತಿರುವುದರಿಂದ ಸ್ಪರ್ಧೆ ಜೋರಿರುತ್ತದೆ. ಹೀಗಾಗಿ, ಟಿಕೆಟ್ ಬುಕ್ ಮಾಡುವಾಗ ಈ ಕ್ರಮ ಅನುಸರಿದರೆ ಟಿಕೆಟ್ ಸಿಗೋ ಸಾಧ್ಯತೆ ಹೆಚ್ಚು.
ಬೆಂಗಳೂರು, ಮಾರ್ಚ್ 24: ನಗರವು ಪ್ರಸ್ತುತ ಗೃಹಬಳಕೆ LPG ಸಿಲಿಂಡರ್ ಕೊರತೆಯನ್ನು ಎದುರಿಸುತ್ತಿದೆ. ರಾಜಧಾನಿಯ ಲಿಂಗರಾಜಪುರದಲ್ಲಿರುವ ವಿನಯ್ ಗ್ಯಾಸ್ ಏಜೆನ್ಸಿ ಮುಂಭಾಗದಲ್ಲಿ ಸಿಲಿಂಡರ್ಗಳಿಗಾಗಿ ಜನರು ಅರ್ಧ ಕಿಲೋಮೀಟರ್ಗೂ ಹೆಚ್ಚು ದೂರ ಕ್ಯೂ ನಿಂತಿರುವುದು ಕಂಡುಬಂದಿದೆ. ಖಾಲಿ ಸಿಲಿಂಡರ್ಗಳನ್ನು ರಸ್ತೆಯಲ್ಲಿ ಸಾಲಾಗಿ ಇಟ್ಟ ಗ್ರಾಹಕರು ಬೆಳಿಗ್ಗೆ 8:30 ರಿಂದಲೇ ಕಾಯುತ್ತಿದ್ದಾರೆ. ಕಳೆದ ಒಂದು ವಾರದಿಂದ ಸಪ್ಲೈ ಆಗಿಲ್ಲ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು 10 ರಿಂದ 24 ದಿನಗಳವರೆಗೆ ಸಿಲಿಂಡರ್ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಆಹಾರ ಸಚಿವ ಮುನಿಯಪ್ಪ , ಗ್ಯಾಸ್ ಏಜೆನ್ಸಿಗಳ ಮುಂದೆ ಕ್ಯೂ ನಿಲ್ಲಬೇಡಿ, ಮನೆಬಾಗಿಲಿಗೆ ಸಿಲಿಂಡರ್ ತಲುಪಿಸಲಾಗುವುದು ಎಂದು ಹೇಳಿದರೂ, ವಾಸ್ತವದಲ್ಲಿ ಬೆಂಗಳೂರಿನ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿರವಂತೆ ಕಾಣುತ್ತಿದೆ.
ಸಿಲಿಂಡರ್ ವಿತರಣಾ ಏಜೆನ್ಸಿಯ ಹೇಳುವಂತೆ 5000 ಬುಕಿಂಗ್ಗಳಿಗೆ ಕೇವಲ 300-500 ಸಿಲಿಂಡರ್ಗಳು ಬರುತ್ತಿವೆ. ಇದಕ್ಕೆ “ಪ್ಯಾನಿಕ್ ಬುಕಿಂಗ್” ಕಾರಣ ಎಂದು ಹೇಳಲಾಗುತ್ತಿದೆ. ಸರ್ಕಾರವು ದೇಶೀಯ ಸಿಲಿಂಡರ್ಗಳಿಗೆ ಯಾವುದೇ ಕೊರತೆ ಇಲ್ಲ ಎಂದು ಹೇಳುತ್ತಿದ್ದರೂ, ಬೆಂಗಳೂರಿನಲ್ಲಿ ಜನರು ತಮ್ಮ ದೈನಂದಿನ ಕಾರ್ಯಗಳನ್ನು ಬಿಟ್ಟು ಸಿಲಿಂಡರ್ಗಳಿಗಾಗಿ ಕಾಯುತ್ತಿದ್ದಾರೆ. OTP ಬಂದಿದ್ದರೂ ಸಿಲಿಂಡರ್ ಸಿಗದಂತಹ ಪ್ರಕರಣಗಳು ವರದಿಯಾಗಿದೆ.
ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ದೇಶದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಭಾರಿ ದೊಡ್ಡ ಹಿಟ್ ಎನಿಸಿಕೊಂಡಿದೆ. ಸೋಮವಾರವೂ ಸಹ ಶೋಗಳು ಹೌಸ್ಫುಲ್ ಆಗಿವೆ. ಜನ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಬಿಡುಗಡೆ ಆದ ಕೆಲವೇ ದಿನಗಳಲ್ಲಿ ‘ಧುರಂಧರ್ 2’ ಸಿನಿಮಾ 500 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಇಷ್ಟೆಲ್ಲದರ ನಡುವೆಯೂ ‘ಧುರಂಧರ್ 2’ ಸಿನಿಮಾಕ್ಕೆ ಭಾರಿ ನಷ್ಟವೇ ಆಗುತ್ತಿದೆ. ಅದಕ್ಕೆ ಕಾರಣ ಪೈರಸಿ.
ಪಾಕಿಸ್ತಾನದಲ್ಲಿ ಈಗಾಗಲೇ ಸಿನಿಮಾದ ಪೈರಸಿ ಆಗಿದ್ದು, ಗಲ್ಲಿ-ಗಲ್ಲಿಗಳಲ್ಲಿ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾದ ಪೈರಸಿ ಸಿಡಿಗಳು ಸಿಗುತ್ತಿವೆ. ಸಾಮಾನ್ಯ ಜನರು ಮಾತ್ರವೇ ಅಲ್ಲದೆ ಪಾಕಿಸ್ತಾನದ ರಾಜಕಾರಣಿಗಳು ಸಹ ಪೈರಸಿಯಲ್ಲಿ ‘ಧುರಂಧರ್’ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಭಾರತದಲ್ಲಿಯೂ ಸಹ ‘ಧುರಂಧರ್ 2’ ಸಿನಿಮಾಕ್ಕೆ ಪೈರಸಿ ಸಮಸ್ಯೆ ಎದುರಾಗಿದೆ. ಚಿತ್ರತಂಡ ಮೊದಲೇ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರೂ ಸಹ ‘ಧುರಂಧರ್ 2’ ಸಿನಿಮಾಕ್ಕೆ ಪೈರಸಿ ಸಮಸ್ಯೆ ಎದುರಾಗಿದೆ.
ಭಾರತದಲ್ಲಿ ಸಕ್ರಿಯವಾಗಿರುವ ಕ್ಯಾಸ್ಟಲ್, ಮೂವಿರೂಲ್ಜ್ ಇನ್ನೂ ಹಲವಾರು ಪೈರಸಿ ವೆಬ್ಸೈಟ್ ಮತ್ತು ಅಪ್ಲಿಕೇಶನ್ಗಳಲ್ಲಿ ‘ಧುರಂಧರ್ 2’ ಸಿನಿಮಾ ಅಕ್ರಮವಾಗಿ ಪ್ರದರ್ಶನವಾಗುತ್ತಿದೆ. ಕಾಲೇಜುಗಳಲ್ಲಿ, ಕಚೇರಿಗಳಲ್ಲಿ ‘ಧುರಂಧರ್ 2’ ಸಿನಿಮಾದ ಪೈರಸಿ ಕಾಪಿಯ ವರ್ಗಾವಣೆ ಜೋರಾಗಿ ನಡೆಯುತ್ತಿದೆ. ಥಿಯೇಟರ್ ಪ್ರಿಂಟ್ ಅನ್ನೇ ಜನ ಮೊಬೈಲ್ಗಳಲ್ಲಿ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಇದರಿಂದಾಗಿ ಸಿನಿಮಾ ತಂಡಕ್ಕೆ ದೊಡ್ಡ ನಷ್ಟವೇ ಆಗುತ್ತಿದೆ. ಆದರೆ ಈಗಾಗಲೇ ಭಾರಿ ಲಾಭದಲ್ಲಿರುವ ಕಾರಣ ಸಿನಿಮಾ ತಂಡ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಂತಿಲ್ಲ.
ಸಿನಿಮಾ ಬಿಡುಗಡೆಗೆ ಮುಂಚೆಯೇ ಚಿತ್ರತಂಡವು ಸುಮಾರು 12 ಸಾವಿರ ಲಿಂಕ್ಗಳನ್ನು ಡಿಲೀಟ್ ಮಾಡಿಸಿತ್ತು. ಅಲ್ಲದೆ ಮದ್ರಾಸ್ ಹೈಕೋರ್ಟ್ ಇಂಜೆಕ್ಷನ್ ಆರ್ಡಸ್ ಸಹ ನೀಡಿ, ಸಿನಿಮಾದ ಅಕ್ರಮ ಪ್ರದರ್ಶನಕ್ಕೆ ತಡೆ ಹಾಕಿತ್ತು. ಇದೆಲ್ಲದರ ನಡುವೆಯೂ ಸಹ ಸಿನಿಮಾದ ಪೈರಸಿ ಕಾಪಿಗಳು ಯೆಥೇಚ್ಛವಾಗಿ ಹರಿದಾಡುತ್ತಿವೆ.
ಬೆಂಗಳೂರು, ಮಾರ್ಚ್ 24: ವಾಣಿಜ್ಯ ಗ್ಯಾಸ್ ಸಿಲಿಂಡರ್ (Commercial LPG) ಕೊರತೆ ಹಿನ್ನೆಲೆ ಹೊಸೂರಿನಲ್ಲಿ ಒಂದು ಹೋಟೆಲ್ ವಿಭಿನ್ನ ಹಾಗೂ ಗಮನಸೆಳೆಯುವ ಆಫರ್ ಘೋಷಿಸಿದೆ. ‘Help Us Cook, We’ll Feed You’ ಎಂಬ ಅಭಿಯಾನವನ್ನು ಆರಂಭಿಸಿರುವ ಈ ಹೋಟೆಲ್, ಗ್ರಾಹಕರ ಸಹಕಾರ ಪಡೆಯಲು ಹೊಸ ರೀತಿಯ ಪ್ರಯತ್ನಕ್ಕೆ ಮುಂದಾಗಿದೆ. ಹೊಸೂರು ರಸ್ತೆಯ ಗ್ರ್ಯಾಂಡ್ ಸಿನೆಮಾಸ್ ಸಮೀಪದಲ್ಲಿರುವ ಈರೋಡ್ ಅಮ್ಮಾಯಿ ಮೆಸ್ ಹೋಟೆಲ್ನಲ್ಲಿ ಈ ವಿಶೇಷ ಆಫರ್ ಜಾರಿಗೆ ಬಂದಿದೆ. ಗ್ಯಾಸ್ ಕೊರತೆಯಿಂದ ಅಡುಗೆ ಕಾರ್ಯದಲ್ಲಿ ತೊಂದರೆ ಎದುರಿಸುತ್ತಿರುವ ಹೋಟೆಲ್, ಗ್ರಾಹಕರಿಂದಲೇ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತರಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ.
ಹೊಸೂರಿನ ಹೋಟೆಲ್ ಆಫರ್ ಏನು?
ಹೋಟೆಲ್ ನೀಡಿರುವ ಆಫರ್ ವಿವರ ಹೀಗಿದ;
1 ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತಂದರೆ – ಒಂದು ತಿಂಗಳು ಪ್ರತಿದಿನ 1 ಬಿರಿಯಾನಿ ಉಚಿತ
2 ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತಂದರೆ – ಒಂದು ತಿಂಗಳು ಪ್ರತಿದಿನ 2 ಬಿರಿಯಾನಿ ಉಚಿತ
ಈ ಕುರಿತು ಹೋಟೆಲ್ ಮುಂದೆ ಬೋರ್ಡ್ ಹಾಕಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಈ ಆಫರ್ ವೈರಲ್ ಆಗುತ್ತಿದೆ.
ಹೋಟೆಲ್ ಆಫರ್ನ ಪೋಸ್ಟರ್
ಗ್ಯಾಸ್ ಕೊರತೆಯಿಂದ ಹೋಟೆಲ್ ಉದ್ಯಮಕ್ಕೆ ಸಂಕಷ್ಟ
ಇಸ್ರೇಲ್, ಇರಾನ್, ಅಮೆರಿಕ ಯುದ್ಧದಿಂದಾಗಿ ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಸರಬರಾಜಿನಲ್ಲಿ ಉಂಟಾದ ವ್ಯತ್ಯಯದಿಂದ ಹಲವು ಹೋಟೆಲ್ಗಳು ಸಂಕಷ್ಟಕ್ಕೆ ಸಿಲುಕಿವೆ. ಅಡುಗೆ ಕಾರ್ಯ ನಿರ್ವಹಿಸಲು ಗ್ಯಾಸ್ ಅವಶ್ಯಕವಾಗಿದ್ದು, ಸರಬರಾಜು ಕಡಿಮೆಯಾಗಿರುವುದರಿಂದ ಹೋಟೆಲ್ಗಳು ಕಾರ್ಯಾಚರಣೆ ಮುಂದುವರಿಸುವುದು ಕಷ್ಟವಾಗುತ್ತಿದೆ. ಬೆಂಗಳೂರಿನಲ್ಲಂತೂ ಅನೇಕ ಹೋಟೆಲ್ಗಳು ಬಂದ್ ಆಗಿವೆ. ಇನ್ನೂ ಅನೇಕ ಹೋಟೆಲ್ಗಳು ದುಬಾರಿ ದರದಲ್ಲಿ ಕಮರ್ಷಿಯಲ್ ಸಿಲಿಂಡರ್ ಖರೀದಿಸಿ ಗ್ರಾಹಕರಿಗೆ ಹೆಚ್ಚುವರಿ ದರಕ್ಕೆ ತಿಂಡಿ-ತಿನಿಸು ನೀಡುತ್ತಿವೆ. ಹಲವು ಹೋಟೆಲ್ಗಳಲ್ಲಿ ಬಿಲ್ನಲ್ಲಿ ‘ಗ್ಯಾಸ್ ಶುಲ್ಕ’ ಸೇರ್ಪಡೆಯಾಗಿವೆ.
ಒಟ್ಟಿನಲ್ಲಿ, ಗ್ಯಾಸ್ ಕೊರತೆಯಂತಹ ಸಮಸ್ಯೆಯನ್ನು ಸೃಜನಾತ್ಮಕವಾಗಿ ಎದುರಿಸಲು ಹೊಸೂರು ಹೋಟೆಲ್ ಕೈಗೊಂಡಿರುವ ಈ ಪ್ರಯತ್ನ ಇದೀಗ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ