Bhimana Amavasya: ಭೀಮನ ಅಮಾವಾಸ್ಯೆ ಹಬ್ಬದ ಹಿಂದಿನ ಪೌರಾಣಿಕ ಕಥೆ ಇಲ್ಲಿ ತಿಳಿದುಕೊಳ್ಳಿ – Kannada News | Bhimana Amavasya: Significance and Rituals for Husband’s Longevity and Family Prosperity

ಆಷಾಢ ಮಾಸದ ಕೊನೆಯ ದಿನವಾದ ಕೃಷ್ಣ ಪಕ್ಷದ ಅಮಾವಾಸ್ಯೆಯನ್ನು ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ‘ಭೀಮನ ಅಮಾವಾಸ್ಯೆ‘ ಅಥವಾ ‘ಜ್ಯೋತಿರ್ಭೀಮೇಶ್ವರ ವ್ರತ’ ಎಂದು ಅತ್ಯಂತ ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತದೆ. ಪತಿಯ ದೀರ್ಘಾಯುಷ್ಯ, ಕುಟುಂಬದ ಕ್ಷೇಮ ಮತ್ತು ಸೌಭಾಗ್ಯ ವೃದ್ಧಿಗಾಗಿ ಆಚರಿಸಲಾಗುವ ಈ ವ್ರತಕ್ಕೆ ಸುದೀರ್ಘ ಪೌರಾಣಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಿದೆ. ಪವಿತ್ರ ಶ್ರಾವಣ ಮಾಸದ ಮನೆಬಾಗಿಲಿಗೆ ಬಂದು ನಿಲ್ಲುವ ಈ ದಿನವು ಜಪ, ತಪ, ಪೂಜೆ ಮತ್ತು ದಾನ-ಧರ್ಮಗಳಿಗೆ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲ್ಪಡುತ್ತದೆ.

ಬ್ರಾಹ್ಮಣ ಕನ್ಯೆಯ ನಿಷ್ಠೆ ಮತ್ತು ಪೌರಾಣಿಕ ಹಿನ್ನೆಲೆ:

ಸ್ಕಂದ ಪುರಾಣದ ಪ್ರಕಾರ, ಹಿಂದೆ ಬಡ ಬ್ರಾಹ್ಮಣನೊಬ್ಬ ಅನಿವಾರ್ಯ ಪರಿಸ್ಥಿತಿಯಲ್ಲಿ ತನ್ನ ಮಗಳನ್ನು ಅಕಾಲಿಕವಾಗಿ ಮರಣ ಹೊಂದಿದ್ದ ರಾಜಕುಮಾರನಿಗೆ ನೀಡಿ ವಿವಾಹ ಮಾಡಿಕೊಡುತ್ತಾನೆ. ಸಂಪ್ರದಾಯದಂತೆ ಆ ಬಾಲಕಿಯು ಶ್ಮಶಾನದಲ್ಲಿ ಮೃತದೇಹದ ಬಳಿ ಕಾಲ ಕಳೆಯಬೇಕಾಗುತ್ತದೆ. ಆದರೆ ಧೈರ್ಯಗೆಡದ ಆಕೆ, ತನ್ನ ತಾಯಿ ಪ್ರತೀವರ್ಷ ಆಚರಿಸುತ್ತಿದ್ದ ಆಷಾಢ ಅಮಾವಾಸ್ಯೆಯ ವ್ರತವನ್ನು ನೆನಪಿಸಿಕೊಂಡು, ಗಂಗಾ ನದಿಯ ದಂಡೆಯಲ್ಲಿ ಮಣ್ಣಿನಿಂದ ಶಿವ-ಪಾರ್ವತಿಯರ ಪ್ರತಿರೂಪವಾಗಿ ದೀಪಗಳನ್ನು (ಜ್ಯೋತಿ) ಮಾಡಿ ಭಕ್ತಿಯಿಂದ ಪೂಜಿಸುತ್ತಾಳೆ. ಆಕೆಯ ನಿಷ್ಕಲ್ಮಶ ಪತಿಭಕ್ತಿಗೆ ಪ್ರಸನ್ನರಾದ ಪರಶಿವ ಹಾಗೂ ಪಾರ್ವತಿ ದೇವಿ ಪ್ರತ್ಯಕ್ಷರಾಗಿ ರಾಜಕುಮಾರನಿಗೆ ಮರುಜೀವ ನೀಡುತ್ತಾರೆ. ಇದರಿಂದಾಗಿ ಈ ವ್ರತಕ್ಕೆ ‘ಪತಿ ಸಂಜೀವಿನಿ ವ್ರತ’ ಎಂಬ ಹೆಸರೂ ಬಂದಿದೆ.

ಮಹಾಭಾರತದ ಭೀಮನ ನಂಟು ಮತ್ತು ವ್ರತದ ಹೆಸರು:

ಮಹಾಭಾರತದ ಪರಾಕ್ರಮಿ ಭೀಮನು ದ್ರೌಪದಿಯ ರಕ್ಷಣೆ ಹಾಗೂ ಶ್ರೇಯಸ್ಸಿಗಾಗಿ ಈ ವ್ರತವನ್ನು ಆಚರಿಸಿ, ಭಕ್ತಿಯಿಂದ ಶಿವ-ಪಾರ್ವತಿಯರ ಆಶೀರ್ವಾದ ಪಡೆದಿದ್ದ ಎಂಬ ಉಲ್ಲೇಖಗಳಿವೆ. ಜೊತೆಗೆ, ಸಾರ್ವಜನಿಕರಿಗೆ ಉಪದ್ರ ನೀಡುತ್ತಿದ್ದ ದುಷ್ಟ ರಾಕ್ಷಸ ಬಕಾಸುರನನ್ನು ಭೀಮನು ಸಂಹರಿಸಿ ಜನರನ್ನು ಭೀತ ಮುಕ್ತಗೊಳಿಸಿದ ಪವಿತ್ರ ದಿನವೂ ಇದಾಗಿದೆ. ಹೀಗಾಗಿ ಈ ವಿಶೇಷ ದಿನವನ್ನು ಭೀಮನ ಸಾಹಸ ಮತ್ತು ಭಕ್ತಿಯ ಸಂಕೇತವಾಗಿ ‘ಭೀಮನ ಅಮಾವಾಸ್ಯೆ’ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಪತಿದೇವರ ಪಾದಪೂಜೆ:

ಭೀಮನ ಅಮಾವಾಸ್ಯೆಯ ದಿನದಂದು ಪ್ರತಿಯೊಂದು ಮನೆಯಲ್ಲೂ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗುತ್ತವೆ. ವಿವಾಹಿತ ಮಹಿಳೆಯರು (ಸುಮಂಗಲಿಯರು) ಬೆಳಿಗ್ಗೆ ಉಪವಾಸ ವ್ರತ ಕೈಗೊಂಡು ಶಿವ-ಪಾರ್ವತಿಯರನ್ನು ಪೂಜಿಸಿ, ನಂತರ ತಮ್ಮ ಪತಿಯ ಪಾದಪೂಜೆ ಮಾಡಿ ಆಶೀರ್ವಾದ ಪಡೆಯುತ್ತಾರೆ. ಮದುವೆಯಾಗದ ಯುವತಿಯರು ತಮಗೆ ಸದ್ಗುಣಶೀಲ ಪತಿ ಲಭಿಸಲಿ ಎಂದು ಪ್ರಾರ್ಥಿಸುತ್ತಾರೆ.

ವೈವಾಹಿಕ ಜೀವನದಲ್ಲಿ ಸಾಂಸ್ಕೃತಿಕ ಮಹತ್ವ:

ಭೀಮನ ಅಮಾವಾಸ್ಯೆಯು ಕೇವಲ ಒಂದು ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಕೌಟುಂಬಿಕ ಐಕ್ಯತೆ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಗಟ್ಟಿಗೊಳಿಸುವ ಹಬ್ಬವಾಗಿದೆ. ದಂಪತಿಗಳ ನಡುವಿನ ಪ್ರೀತಿ, ಗೌರವ ಮತ್ತು ನಂಬಿಕೆಯನ್ನು ಪುನಶ್ಚೇತನಗೊಳಿಸುವ ಈ ದಿನವು, ಮನೆಮನಗಳಲ್ಲಿ ಧಾರ್ಮಿಕ ಕಳೆ ಹಾಗೂ ಮಂಗಳಕರ ವಾತಾವರಣವನ್ನು ತರುತ್ತದೆ. ಶ್ರಾವಣ ಮಾಸದ ಆಗಮನದ ಸಂಕೇತವಾಗಿರುವ ಈ ಆಚರಣೆಯು ಸಕಲ ಜನರಿಗೂ ಶ್ರೇಯಸ್ಸು ಮತ್ತು ಸುಖ-ಶಾಂತಿಯನ್ನು ಕರುಣಿಸುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಲ್ಲಿ ಜೀವನ ಸಾಗಿಸಲು ವರ್ಷಕ್ಕೆ 50 ಲಕ್ಷ ರೂ. ಸಂಬಳವೂ ಸಾಕಾಗಲ್ಲವೇ? ಟೆಕ್ಕಿಯ ಲೆಕ್ಕಾಚಾರ ವೈರಲ್ – Kannada News | Techie Sparks Debate on High Cost of Living and Wealth Building in Bengaluru

ಬೆಂಗಳೂರಲ್ಲಿ ಜೀವನ ಸಾಗಿಸಲು ವರ್ಷಕ್ಕೆ 50 ಲಕ್ಷ ರೂ. ಸಂಬಳವೂ ಸಾಕಾಗಲ್ಲವೇ? ಟೆಕ್ಕಿಯ ಲೆಕ್ಕಾಚಾರ ವೈರಲ್

ಬೆಂಗಳೂರು, ಆಗಸ್ಟ್ 12: ದೇಶದ ಪ್ರಮುಖ ಟೆಕ್ ಹಬ್ ಆಗಿರುವ ಬೆಂಗಳೂರಿನಲ್ಲಿ ಕೈತುಂಬ ಸಂಬಳ ಪಡೆಯುತ್ತಿದ್ದರೂ ಶ್ರೀಮಂತರಾಗುವುದು ಕಷ್ಟವೇ? ಇದೀಗ ಟೆಕ್ಕಿಯೊಬ್ಬರು ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವಾರ್ಷಿಕ 50 ಲಕ್ಷ ರೂ. ವೇತನ (50 LPA) ಇದ್ದರೂ ಬೆಂಗಳೂರಿನ ಜೀವನಶೈಲಿ ಹಾಗೂ ಹೆಚ್ಚುತ್ತಿರುವ ಖರ್ಚುಗಳಿಂದಾಗಿ ದೊಡ್ಡ ಪ್ರಮಾಣದಲ್ಲಿ ಸಂಪತ್ತು ಗಳಿಸುವುದು ಕಷ್ಟ ಎಂದು ಟೆಕ್ಕಿ ಅನ್ಮೋಲ್ ಅಗರ್ವಾಲ್ ಹೇಳಿದ್ದಾರೆ.

3 ಲಕ್ಷ ರೂ. ಮಾಸಿಕ ಆದಾಯದಲ್ಲಿ ಎಷ್ಟು ಉಳಿಯುತ್ತೆ?

50 ಲಕ್ಷ ರೂ. ಸಂಪೂರ್ಣವಾಗಿ ಬೇಸಿಕ್ ವೇತನವೆಂದು ಪರಿಗಣಿಸಿ ತಮ್ಮ ಲೆಕ್ಕಾಚಾರವನ್ನು ವಿವರಿಸಿರುವ ಅವರು, ತೆರಿಗೆ ಮತ್ತು EPF ಕಡಿತದ ಬಳಿಕ ಸುಮಾರು 35 ಲಕ್ಷ ರೂ. ಉಳಿಯಬಹುದು ಎಂದು ಹೇಳಿದ್ದಾರೆ. ಅಂದರೆ ತಿಂಗಳಿಗೆ ಸರಿಸುಮಾರು 3 ಲಕ್ಷ ರೂ. ಆದಾಯ ಕೈಗೆ ಸಿಗಬಹುದು. ಆದರೆ ಬೆಂಗಳೂರಿನಲ್ಲಿ 2BHK ಮನೆಯ ಬಾಡಿಗೆಗೆ 60,000-70,000 ರೂ., ಮನೆಕೆಲಸದವರು ಮತ್ತು ಅಡುಗೆ ಕೆಲಸಕ್ಕೆ ತಲಾ ಸುಮಾರು 10,000 ರೂ., ದಿನನಿತ್ಯದ ಖರ್ಚು, ಜಿಮ್, ಶಾಪಿಂಗ್ ಹಾಗೂ ಪ್ರಯಾಣಕ್ಕೆ ಸೇರಿ ತಿಂಗಳಿಗೆ 1.2 ಲಕ್ಷದಿಂದ 1.3 ಲಕ್ಷ ರೂ.ವರೆಗೆ ಖರ್ಚಾಗಬಹುದು ಎಂಬುದು ಅವರ ಅಂದಾಜು.

ಕಾರ್ ಖರೀದಿಸಿದರೆ EMI, ನಿರ್ವಹಣೆ ಸೇರಿದಂತೆ ತಿಂಗಳಿಗೆ ಮತ್ತಷ್ಟು 50,000 ರೂ. ಖರ್ಚಾಗಬಹುದು. ಮಕ್ಕಳಿದ್ದರೆ ಶಿಕ್ಷಣ ಸೇರಿದಂತೆ ವೆಚ್ಚ ಇನ್ನಷ್ಟು ಹೆಚ್ಚಲಿದೆ. ಹೀಗಾಗಿ ತಿಂಗಳಿಗೆ ಸುಮಾರು 1 ಲಕ್ಷದಷ್ಟು ಮಾತ್ರ ಹೂಡಿಕೆಗೆ ಉಳಿಯಬಹುದು ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸ್ವಂತ ಮನೆ ಖರೀದಿಸುವುದೇ ದೊಡ್ಡ ಸವಾಲು?

ಬೆಂಗಳೂರಿನ ದುಬಾರಿ ರಿಯಲ್ ಎಸ್ಟೇಟ್ ಬೆಲೆಗಳನ್ನೂ ಟೆಕ್ಕಿ ಉಲ್ಲೇಖಿಸಿದ್ದಾರೆ. ಪ್ರಸ್ತುತ 3 ಕೋಟಿ ರೂ. ಬೆಲೆ ಇರುವ ಮನೆಯ ಬೆಲೆ ಮುಂದಿನ ದಿನಗಳಲ್ಲಿ 6-7 ಕೋಟಿ ರೂ.ಗೆ ಏರಬಹುದು ಎಂದು ಅವರು ಅಂದಾಜಿಸಿದ್ದಾರೆ. ಹೀಗಾಗಿ ಹೆಚ್ಚಿನ ಆದಾಯವಿದ್ದರೂ ಸ್ವಂತ ಮನೆ ಖರೀದಿಸಿ ಆರ್ಥಿಕವಾಗಿ ಶ್ರೀಮಂತರಾಗುವುದು ಸವಾಲಾಗಬಹುದು ಎಂಬುದು ಅವರ ವಾದ.

ಇದಕ್ಕೆ ಪರ್ಯಾಯವಾಗಿ ಕಡಿಮೆ ಜೀವನ ವೆಚ್ಚವಿರುವ ಟಿಯರ್-3 ನಗರದಲ್ಲಿ ವಾಸಿಸುತ್ತಾ ರಿಮೋಟ್ ಉದ್ಯೋಗ ಮಾಡುವುದು ಅಥವಾ ಸ್ವಂತ ಉದ್ಯಮ ಆರಂಭಿಸುವುದನ್ನು ಅವರು ಸಲಹೆ ನೀಡಿದ್ದಾರೆ. ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಎಂಕೆ ಬಳಿಕ ಎಐಎಡಿಎಂಕೆ ತ್ರಿಷಾ ಬಗ್ಗೆ ಕೀಳು ಹೇಳಿಕೆ, ಅಭಿಮಾನಿಗಳ ಎಚ್ಚರಿಕೆ – Kannada News | AIADMK leader talks ill about actress Trisha Krishnan

ಇತ್ತೀಚೆಗಷ್ಟೆ ಡಿಎಂಕೆ ಮುಖಂಡ, ತಮಿಳುನಾಡು ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್, ನಟಿ ತ್ರಿಷಾ (Trisha) ಕುರಿತಾಗಿ ಕೀಳು ಹೇಳಿಕೆ ನೀಡಿದ್ದರು. ಇದೇ ಕಾರಣಕ್ಕೆ ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು. ಉದಯನಿಧಿ ಹೇಳಿಕೆಗೆ ತೀವ್ರ ಟೀಕೆ, ವಿರೋಧಗಳು ವ್ಯಕ್ತವಾಗಿದ್ದವು. ಘಟನೆ ನಡೆದು ಕೆಲವು ದಿನಗಳಷ್ಟೆ ಆಗಿವೆ. ಅಷ್ಟರಲ್ಲೇ ಇದೀಗ ಎಐಎಡಿಎಂಕೆ ಮುಖಂಡ ನಟಿ ತ್ರಿಷಾ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ಬಾರಿ ತ್ರಿಷಾ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದು, ಎಐಎಡಿಎಂಕೆಗೆ ಎಚ್ಚರಿಕೆ ನೀಡಿದ್ದಾರೆ.

ಎಐಎಡಿಎಂಕೆ ಮುಖಂಡ ಆರ್​​ಬಿ ಉದಯಕುಮಾರ್ ಎಂಬುವರು ತಮಿಳುನಾಡು ಸರ್ಕಾರವನ್ನು ಟೀಕೆ ಮಾಡುತ್ತಾ, ಸರ್ಕಾರದ ಉನ್ನತ ಹುದ್ದೆಗಳಿಗೆ ತಮಿಳುನಾಡು ಸಿನಿಮಾ ಗಣ್ಯರನ್ನು ನೇಮಿಸುತ್ತಿರುವುದನ್ನು ಖಂಡಿಸಿ ಹೇಳಿಕೆ ನೀಡುವ ಸಮಯದಲ್ಲಿ ‘ನಟಿ ತ್ರಿಷಾ ತಮಿಳುನಾಡಿನ ಡಿಸಿಎಂ ಆಗುವುದನ್ನು ನಾವು ಕಾಯುತ್ತಿದ್ದೇವೆ’ ಎಂದು ಹೇಳಿದ್ದಾರೆ. ಸಿಎಂ ವಿಜಯ್ ಅವರನ್ನು, ಅವರ ಸರ್ಕಾರವನ್ನು ಟೀಕಿಸುವ ನೆಪದಲ್ಲಿ ಪದೇ ಪದೇ ನಟಿ ತ್ರಿಷಾ ಅವರ ಹೆಸರನ್ನು ಎಳೆದು ತರಲಾಗುತ್ತಿದೆ.

ಎಐಎಡಿಎಂಕೆ ಮುಖಂಡ ಉದಯಕುಮಾರ್ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿದ್ದು, ವಿಜಯ್ ಅವರ ಟೀಕೆಗೆ ತ್ರಿಷಾ ಹೆಸರನ್ನು ಬಳಸುವುದೇಕೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ನಟಿ ತ್ರಿಷಾ ಅವರ ಅಭಿಮಾನಿಗಳು ಈ ಬಾರಿ ಬೀದಿಗಿಳಿದಿದ್ದು, ನಟಿಯ ಪರವಾಗಿ ಚೆನ್ನೈ ಸೇರಿದಂತೆ ಹಲೆವೆಡೆ ಪೋಸ್ಟರ್​​ಗಳನ್ನು ಸಹ ಅಂಟಿಸಿದ್ದಾರೆ. ತ್ರಿಷಾ ಹೆಸರನ್ನು ಪದೇ ಪದೇ ಎಳೆದು ತರುತ್ತಿರುವುದು ಸರಿಯಲ್ಲ, ಇದು ಮುಂದುವರೆದರೆ ಪ್ರತಿಭಟನೆ ನಡೆಸುವುದಾಗಿ ತ್ರಿಷಾ ಅಭಿಮಾನಿಗಳು ಹೇಳಿದ್ದಾರೆ.

ಇದನ್ನೂ ಓದಿ:ನಟಿ ತ್ರಿಷಾ ಬಗ್ಗೆ ಅವಹೇಳನಕಾರಿ ಹೇಳಿಕೆ; ಉದಯನಿಧಿ ಸ್ಟಾಲಿನ್ ಬಂಧನ

ಸಿಎಂ ವಿಜಯ್ ಅವರ ಆಪ್ತೆಯಾಗಿದ್ದಾರೆ ನಟಿ ತ್ರಿಷಾ. ಇಬ್ಬರ ನಡುವೆ ಆಪ್ತ ಸಂಬಂಧವಿದೆ. ವಿಜಯ್ ಹಾಗೂ ಪತ್ನಿ ಸಂಗೀತ ನಡುವೆ ವಿಚ್ಛೇದನದ ಚರ್ಚೆ ನಡೆಯುತ್ತಿದೆ. ವಿಜಯ್ ಹಾಗೂ ತ್ರಿಷಾ ನಡುವಿನ ಆಪ್ತತೆಯ ಕಾರಣಕ್ಕೆ ವಿಪಕ್ಷದವರು, ವಿಜಯ್ ಅವರನ್ನು ಟೀಕಿಸುವಾಗ ಸುಖಾ-ಸುಮ್ಮನೆ ತ್ರಿಷಾ ಹೆಸರು ಎಳೆದು ತರುತ್ತಿದ್ದಾರೆ. ಇತ್ತೀಚೆಗೆ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅಂತೂ ಬಹಳ ಕೀಳಾದ ಪದಗಳನ್ನು ತ್ರಿಷಾ ಬಗ್ಗೆ ಬಳಸಿದ್ದರು.

ನಟಿ ತ್ರಿಷಾ ಮತ್ತು ವಿಜಯ್ ಈ ವರೆಗೆ ಐದು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ವಿಜಯ್ ನಟನೆಯ ‘ಗೋಟ್’ ಸಿನಿಮಾನಲ್ಲಿ ತ್ರಿಷಾ ಅತಿಥಿ ಪಾತ್ರದಲ್ಲಿ ಹೀಗೆ ಬಂದು ಹಾಗೆ ಹೋಗುತ್ತಾರೆ. ಈ ಇಬ್ಬರ ಜೋಡಿ ಬೆಳ್ಳಿ ಪರದೆಯ ಮೇಲೆ ಸೂಪರ್ ಹಿಟ್ ಆಗಿದೆ. ಈಗ ನಿಜ ಜೀವನದಲ್ಲೂ ಜೋಡಿ ಆಗಿದ್ದಾರೆ. ವಿಜಯ್ ಅವರಿಗೆ ಪತ್ನಿ ಸಂಗೀತ ಜೊತೆಗೆ ವಿಚ್ಛೇದನ ದೊರಕಿದೆ ಬಳಿಕ ತ್ರಿಷಾ ಅವರೊಟ್ಟಿಗೆ ವಿವಾಹವಾಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭೀಮನ ಅಮವಾಸ್ಯೆ ವಿಶೇಷ: ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ ಮಹದೇಶ್ವರ ಬೆಟ್ಟ! – Kannada News | MM Hills Packed with Devotees for Bheemana Amavasya Special Celebrations

ಚಾಮರಾಜನಗರ, ಆಗಸ್ಟ್ 12: ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಾದಪ್ಪನಿಗೆ ವಿಶೇಷ ಪೂಜೆಗಳು ವಿಜೃಂಭಣೆಯಿಂದ ನಡೆಯುತ್ತಿವೆ. ನಿನ್ನೆಯಿಂದಲೇ ರಾಜ್ಯದ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಬೆಟ್ಟಕ್ಕೆ ಆಗಮಿಸಿದ್ದಾರೆ. ದೇವಸ್ಥಾನದ ಆವರಣ ಹಾಗೂ ಪ್ರಾಂಗಣವನ್ನು ವಿದ್ಯುತ್ ದೀಪಗಳಿಂದ ಅದ್ಭುತವಾಗಿ ಅಲಂಕರಿಸಲಾಗಿದೆ. ಭಕ್ತರು ಬೆಳ್ಳಿ ರಥ, ಚಿನ್ನದ ರಥೋತ್ಸವ ಸೇರಿದಂತೆ ವಿವಿಧ ಹರಕೆ ಸೇವೆಗಳನ್ನು ನೆರವೇರಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್  ಮಾಡಿ

 

Source link

ದುಲೀಪ್ ಟ್ರೋಫಿ ಟೂರ್ನಿಗೆ 6 ತಂಡಗಳು ಪ್ರಕಟ – Kannada News | Duleep trophy 2026 All Squads

ರಾಷ್ಟ್ರೀಯ ರೆಡ್-ಬಾಲ್ ಕ್ರಿಕೆಟ್ ಸೀಸನ್ ಆರಂಭವನ್ನು ಸೂಚಿಸುವ ಪ್ರಸಿದ್ಧ ‘ದುಲೀಪ್ ಟ್ರೋಫಿ‘ ಟೂರ್ನಿಗೆ ಕೌಂಟ್‌ಡೌನ್ ಶುರುವಾಗಿದೆ. ಆರು ವಲಯ ತಂಡಗಳ ನಡುವಣ ಈ ರೋಚಕ ಕದನಕ್ಕಾಗಿ ಎಲ್ಲಾ ತಂಡಗಳನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಈ ಆರೂ ವಲಯ ತಂಡಗಳಲ್ಲಿ ಸ್ಥಾನ ಪಡೆದಿರುವ ಆಟಗಾರರ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ…

ವೆಸ್ಟ್ ಝೋನ್ (ಪಶ್ಚಿಮ ವಲಯ): ರುತುರಾಜ್ ಗಾಯಕ್ವಾಡ್ (ನಾಯಕ), ಶಮ್ಸ್ ಮುಲಾನಿ, ಪೃಥ್ವಿ ಶಾ, ಸರ್ಫರಾಝ್ ಖಾನ್, ಮುಶೀರ್ ಖಾನ್, ಶಾರ್ದೂಲ್ ಠಾಕೂರ್, ತನುಷ್ ಕೋಟ್ಯಾನ್, ತುಷಾರ್ ದೇಶಪಾಂಡೆ, ಹರ್ವಿಕ್ ದೇಸಾಯಿ, ಉರ್ವಿಲ್ ಪಟೇಲ್, ಶಿವಾಲಿಕ್ ಶರ್ಮಾ, ಸಿದ್ಧಾರ್ಥ್ ದೇಸಾಯಿ, ಅತಿತ್ ಶೇಠ್, ಮುಕೇಶ್ ಚೌಧರಿ, ಜೇಮೀತ್ ಪಟೇಲ್.

ಸೆಂಟ್ರಲ್ ಝೋನ್ (ಕೇಂದ್ರ ವಲಯ): ರಜತ್ ಪಟಿದಾರ್ (ನಾಯಕ), ರಿಂಕು ಸಿಂಗ್, ಆರ್ಯನ್ ಜುಯಲ್, ಕುನಾಲ್ ಸಿಂಗ್ ರಾಥೋಡ್, ಸರಂಶ್ ಜೈನ್, ಅಮನ್ ಮೊಖಾಡೆ, ಕುನಾಲ್ ಚಂದೇಲಾ, ಜೀಶನ್ ಅನ್ಸಾರಿ, ಆರ್ಯನ್ ಪಾಂಡೆ, ಅರ್ಷದ್ ಖಾನ್, ಆಯುಷ್ ಪಾಂಡೆ, ಯಶ್ ರಾಥೋಡ್, ಹರ್ಷ್ ದುಬೆ, ಯಶ್ ಠಾಕೂರ್, ನಾಚಿಕೇತ್ ಭೂತೆ.

ಈಸ್ಟ್ ಝೋನ್ (ಪೂರ್ವ ವಲಯ): ಇಶಾನ್ ಕಿಶನ್ (ನಾಯಕ), ವೈಭವ್ ಸೂರ್ಯವಂಶಿ, ಅಭಿಮನ್ಯು ಈಶ್ವರನ್, ಮೊಹಮ್ಮದ್ ಶಮಿ, ಮುಕೇಶ್ ಕುಮಾರ್, ಶಹಬಾಝ್ ಅಹ್ಮದ್, ಕುಮಾರ್ ಕುಶಾಗ್ರ, ಸುದೀಪ್ ಕುಮಾರ್ ಘರಾಮಿ, ಸೂರಜ್ ಸಿಂಧು ಜೈಸ್ವಾಲ್, ಶಿಖರ್ ಮೋಹನ್, ಅನುಕೂಲ್ ರಾಯ್, ವಿರಾಟ್ ಸಿಂಗ್, ಸುಭ್ರಾಂಶು ಸೇನಾಪತಿ, ಡೆನಿಶ್ ದಾಸ್, ಅಭಿಜಿತ್ ಸರ್ಕಾರ್.

ಸೌತ್ ಝೋನ್ (ದಕ್ಷಿಣ ವಲಯ): ತಿಲಕ್ ವರ್ಮಾ (ನಾಯಕ), ರಿಕ್ಕಿ ಭುಯಿ, ಅಭಿನವ್ ತೇಜ್ರಾನಾ, ಶೇಖ್ ರಶೀದ್, ಕೆ. ಹಿಮತೇಜ, ಸ್ಮರಣ್ ರವಿಚಂದ್ರನ್, ಎನ್. ಜಗದೀಶನ್, ಕರುಣ್ ನಾಯರ್, ಟಿ. ತ್ಯಾಗರಾಜನ್, ಶ್ರೇಯಸ್ ಗೋಪಾಲ್, ಸಾಯಿ ತೇಜ, ಟಿ. ವಿಜಯ್, ವಿದ್ವತ್ ಕಾವೇರಪ್ಪ, ಅಮನ್ ಖಾನ್.

ನಾರ್ತ್ ಝೋನ್ (ಉತ್ತರ ವಲಯ): ಕನ್ಹಯ್ಯಾ ವಾಧವನ್ (ನಾಯಕ), ಆಯುಷ್ ಬದೋನಿ (ಉಪನಾಯಕ), ಸನತ್ ಸಾಂಗ್ವಾನ್, ಕಮ್ರಾನ್ ಇಕ್ಬಾಲ್, ಯಶ್ ಧುಲ್, ಆಯುಷ್ ದೋಸೇಜಾ, ಅಬ್ದುಲ್ ಸಮದ್, ನಿಶಾಂತ್ ಸಿಂಧು, ಅರ್ಜುನ್ ಶರ್ಮಾ, ಅಬಿದ್ ಮುಷ್ತಾಕ್, ಅರ್ಷದೀಪ್ ಸಿಂಗ್, ಸುನಿಲ್ ಕುಮಾರ್, ಅನ್ಶುಲ್ ಕಂಬೋಜ್, ಯುಧ್ವೀರ್ ಸಿಂಗ್, ನಿಖಿಲ್ ಕಶ್ಯಪ್.

ಈಶಾನ್ಯ ವಲಯ (ನಾರ್ತ್ ಈಸ್ಟ್ ಝೋನ್): ಜೊನಾಥನ್ ರೊಂಗ್‌ಸೆನ್ (ನಾಯಕ), ಬಿಶ್ವರ್ಜಿತ್ ಸಿಂಗ್ ಕೊಂಥೌಜಮ್ (ಉಪನಾಯಕ), ಟೆಚಿ ನೇರಿ, ಪ್ರಿಯೋಜಿತ್, ರೊನಾಲ್ಡ್ ಮೈಟೆಯಿ, ಜೋತಿನ್ ಸಿಂಗ್ ಫೀರೋಯಿಜಮ್, ಸುಭಾಯಂಗ್‌ಡೊ ಕಿಶನ್, ಆಕಾಶ್ ಕುಮಾರ್ ಚೌಧರಿ, ಜೋಸೆಫ್ ಲಾಲ್‌ಥಾನ್‌ಖುಮಾ, ಲಾಲ್ರೆಂಪೌಯಾ, ಇಮ್ಲಿವಾಟಿ ಲೆಮ್ಟೂರ್, ವಿನೋ ಜಿ ಝಿಮೋಮಿ, ರಾಬಿನ್ ಲಿಂಬೂ, ಆಶಿಶ್ ಥಾಪಾ.

ಯಾವ ರಾಜ್ಯ ಯಾವ ವಲಯದಲ್ಲಿ?

ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ 6 ಪ್ರಮುಖ ಭೌಗೋಳಿಕ ವಲಯಗಳ ಅಡಿಯಲ್ಲಿ ಬರುವ ರಾಜ್ಯಗಳು ಹಾಗೂ ಕ್ರಿಕೆಟ್ ಸಂಸ್ಥೆಗಳ ಸಂಪೂರ್ಣ ವಿವರ ಇಲ್ಲಿದೆ.

  1. ಸೌತ್ ಝೋನ್ (ದಕ್ಷಿಣ ವಲಯ): ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಹೈದರಾಬಾದ್, ಗೋವಾ ಮತ್ತು ಪಾಂಡಿಚೇರಿ
  2. ವೆಸ್ಟ್ ಝೋನ್ (ಪಶ್ಚಿಮ ವಲಯ): ಮುಂಬೈ, ಮಹಾರಾಷ್ಟ್ರ, ಗುಜರಾತ್, ಸೌರಾಷ್ಟ್ರ ಮತ್ತು ಬರೋಡಾ.
  3. ಈಸ್ಟ್ ಝೋನ್ (ಪೂರ್ವ ವಲಯ): ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಬಿಹಾರ, ಅಸ್ಸಾಂ ಮತ್ತು ತ್ರಿಪುರ.
  4. ಸೆಂಟ್ರಲ್ ಝೋನ್ (ಕೇಂದ್ರ ವಲಯ): ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ಉತ್ತರಾಖಂಡ, ವಿದರ್ಭ ಹಾಗೂ ರೈಲ್ವೇಸ್ ತಂಡ.
  5. ನಾರ್ತ್ ಝೋನ್ (ಉತ್ತರ ವಲಯ): ದೆಹಲಿ, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಚಂಡೀಗಢ ಹಾಗೂ ಸರ್ವಿಸಸ್ ತಂಡ.
  6. ನಾರ್ತ್ ಈಸ್ಟ್ ಝೋನ್ (ಈಶಾನ್ಯ ವಲಯ): ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ.

ಈ ಆರು ವಲಯಗಳ ತಂಡಗಳನ್ನು ಆಯಾ ಭಾಗದ ರಾಜ್ಯಗಳ ಆಟಗಾರರು ಪ್ರತಿನಿಧಿಸಲಿದ್ದಾರೆ. ಅಂದರೆ, ಕಳೆದ ರಣಜಿ ಟ್ರೋಫಿ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಯಾ ವಲಯದ ಆಟಗಾರರನ್ನೇ ಈ ಬಾರಿಯ ದುಲೀಪ್ ಟ್ರೋಫಿಗೆ  ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: ಟೀಮ್ ಇಂಡಿಯಾಗೆ ‘ಕಿಂಗ್ ಆಫ್ ಗಾಲೆ’ಯ ಬಗ್ಗೆ ಎಚ್ಚರಿಕೆ!

ದುಲೀಪ್ ಟ್ರೋಫಿ ಯಾವಾಗ ಶುರು?

ದುಲೀಪ್ ಟ್ರೋಫಿ 2026ರ ಟೂರ್ನಿಯು ಆಗಸ್ಟ್ 23, 2026 ರಿಂದ ಆರಂಭವಾಗಲಿದೆ. ಈ ಟೂರ್ನಿಯ ಎಲ್ಲಾ ಪಂದ್ಯಗಳು ಬೆಂಗಳೂರಿನ BCCI ಸೆಂಟರ್ ಆಫ್ ಎಕ್ಸಲೆನ್ಸ್ (COE) ಮೈದಾನದಲ್ಲಿ ನಡೆಯಲಿವೆ.

Source link

Rituals Guide: ಜ್ಯೋತಿರ್ಭೀಮೇಶ್ವರ ವ್ರತ; ಆಷಾಢ ಅಮಾವಾಸ್ಯೆಯ ಮಹತ್ವ ಮತ್ತು ಶ್ರಾವಣ ಸಂಕ್ರಮಣ – Kannada News | Ashadha Amavasya: Bhimana Amavasya, Shravana Masa Transition and Rituals Guide

ಆಧ್ಯಾತ್ಮಿಕವಾಗಿ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವೆಂದು ಪರಿಗಣಿಸಲಾಗುವ ಆಷಾಢ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯು ಇಂದಿನಿಂದ ಶುರುವಾಗಿದೆ. ನಾಳೆಯಿಂದ ಧಾರ್ಮಿಕ ಚಟುವಟಿಕೆಗಳ ತವರೂರಾದ ಪವಿತ್ರ ಶ್ರಾವಣ ಮಾಸವು ಆರಂಭವಾಗಲಿದ್ದು, ಈ ಸಂಕ್ರಮಣ ಕಾಲವು ಜಪ, ತಪ, ಧ್ಯಾನ ಹಾಗೂ ದಾನ-ಧರ್ಮಗಳಿಗೆ ಅತ್ಯಂತ ಪ್ರಶಸ್ತವಾದ ದಿನವಾಗಿದೆ. ಇಂದಿನ ಅಮಾವಾಸ್ಯೆ ತಿಥಿಯು ರಾತ್ರಿ 11:06 ರವರೆಗೆ ಇರಲಿದ್ದು, ಈ ಸಮಯದಲ್ಲಿ ಕೈಗೊಳ್ಳುವ ಪ್ರತಿಯೊಂದು ಶುಭ ಕಾರ್ಯಗಳು ಇಷ್ಟಾರ್ಥ ಸಿದ್ಧಿಯನ್ನು ಕರುಣಿಸುತ್ತವೆ.

ಭೀಮನ ಅಮಾವಾಸ್ಯೆ ಮತ್ತು ಜ್ಯೋತಿರ್ಭೀಮೇಶ್ವರ ವ್ರತಾಚರಣೆ:

ಇಂದಿನ ದಿನವನ್ನು ನಾಡಿನಾದ್ಯಂತ ‘ಭೀಮನ ಅಮಾವಾಸ್ಯೆ’ ಎಂದೂ ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತದೆ. ಈ ಶುಭ ದಿನದಂದು ಸೌಭಾಗ್ಯವತಿಯರು ಮತ್ತು ಕನ್ಯೆಯರು ತಮ್ಮ ಪತಿ ಹಾಗೂ ಕುಟುಂಬದ ದೀರ್ಘಾಯುಷ್ಯ, ಆರೋಗ್ಯ ಮತ್ತು ಶ್ರೇಯಸ್ಸಿಗಾಗಿ ಜ್ಯೋತಿರ್ಭೀಮೇಶ್ವರ ವ್ರತ ಹಾಗೂ ಗೌರಿ ಪೂಜೆಯನ್ನು ನೆರವೇರಿಸುತ್ತಾರೆ. ಪತಿದೇವರ ಪಾದಪೂಜೆ ಮಾಡಿ ಆಶೀರ್ವಾದ ಪಡೆಯುವ ಮೂಲಕ ಕೌಟುಂಬಿಕ ಸೌಹಾರ್ದತೆ ಮತ್ತು ಸೌಭಾಗ್ಯವನ್ನು ವೃದ್ಧಿಸಿಕೊಳ್ಳುವ ಸುಂದರ ಸಂಪ್ರದಾಯ ಈ ದಿನದ ವಿಶೇಷವಾಗಿದೆ.

ಸೂರ್ಯ ಗ್ರಹಣ ಮತ್ತು ಅದರ ಧಾರ್ಮಿಕ ನಿಯಮಗಳು:

ಖಗೋಳಶಾಸ್ತ್ರದ ಪ್ರಕಾರ ಇಂದು ಸೂರ್ಯ ಗ್ರಹಣವು ಸಂಭವಿಸುತ್ತಿದೆಯಾದರೂ, ಈ ಗ್ರಹಣವು ಭಾರತದಲ್ಲಿ ಎಲ್ಲೂ ಗೋಚರಿಸುವುದಿಲ್ಲ. ಗ್ರಹಣವು ಗೋಚರವಾಗದ ಕಾರಣ ಧಾರ್ಮಿಕವಾಗಿ ಯಾವುದೇ ಗ್ರಹಣ ಸೂತಕ, ಪೂಜಾ ನಿಷೇಧ ಅಥವಾ ವಿಶೇಷ ನಿಯಮಗಳನ್ನು ಪಾಲಿಸುವ ಅವಶ್ಯಕತೆಯಿರುವುದಿಲ್ಲ ಎಂದು ಜ್ಯೋತಿಷ್ಯ ತಜ್ಞರು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಸಾರ್ವಜನಿಕರು ಹಾಗೂ ಭಕ್ತಾದಿಗಳು ಯಾವುದೇ ಆತಂಕವಿಲ್ಲದೆ ತಮ್ಮ ನಿತ್ಯದ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಬಹುದು.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ವಿಶೇಷ ದೇವತಾರಾಧನೆ ಮತ್ತು ಇಂದಿನ ಗ್ರಹಚಾರ ಫಲ:

ಇಂದು ಬುಧವಾರವಾಗಿರುವುದರಿಂದ ವಿಘ್ನನಿವಾರಕ ಶ್ರೀ ಗಣಪತಿ, ಜಗತ್ಪಾಲಕ ಶ್ರೀ ಮಹಾವಿಷ್ಣು ಹಾಗೂ ಕಾಲಭೈರವ ಸ್ವಾಮಿಯ ಆರಾಧನೆಗೆ ಅತ್ಯಂತ ಶ್ರೇಷ್ಠವಾದ ದಿನವಾಗಿದೆ. ಸೂರ್ಯನು ಪ್ರಸ್ತುತ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತಿದ್ದು, ಚಂದ್ರನು ಕರ್ಕಾಟಕ ರಾಶಿಯ ಶನಿಯ ನಕ್ಷತ್ರವಾದ ‘ಪುಷ್ಯ ನಕ್ಷತ್ರ’ದಲ್ಲಿ ಸಂಚಾರ ಮಾಡುತ್ತಿದ್ದಾನೆ. ಪರಾಭವ ನಾಮ ಸಂವತ್ಸರದ ಈ ಪವಿತ್ರ ದಿನದಂದು ದೇವರ ನಾಮಸ್ಮರಣೆ ಹಾಗೂ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಸಕಲ ಮಂಗಲಗಳನ್ನು ತರಲಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 8:25 am, Wed, 12 August 26

Source link

ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ: ಪ್ರಜ್ವಲ್​​ ರೇವಣ್ಣ ಬ್ಯಾರಕ್​​ ಸೇರಿ ವಿವಿಧೆಡೆ ಒಟ್ಟು 10ಕ್ಕೂ ಹೆಚ್ಚು ಮೊಬೈಲ್​​ಗಳು​​ ಪತ್ತೆ – Kannada News | CCB Raids Parappana Agrahara Jail: 10+ Mobile Phones Seized, Including from Prajwal Re

ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ

ಬೆಂಗಳೂರು, ಆಗಸ್ಟ್​​ 12: ಕೈದಿಗಳಿಗೆ ರಾಜಾತಿಥ್ಯ ನೀಡುವ ಮೂಲಕ ಈ ಹಿಂದೆ ದೇಶಾದ್ಯಂತ ಸುದ್ದಿಯಾಗಿದ್ದ ಬೆಂಗಳೂರಿನ (Bengaluru) ಪರಪ್ಪನ ಅಗ್ರಹಾರ ಜೈಲಿನಲ್ಲಿ ಇನ್ನೂ ಆ ಪದ್ಧತಿ ಮುಂದುವರಿದಿದ್ಯಾ ಎಂಬ ಅನುಮಾನ ಹೆಚ್ಚಿದೆ. ಜೈಲಿನ ಮೇಲೆ ಡಿಸಿಪಿ ಹರಿಬಾಬು ಮತ್ತು ಇಮಾಮ್ ಖಾಸೀಂ ನೇತೃತ್ವದಲ್ಲಿ ಸಿಸಿಬಿ ದಾಳಿ ನಡೆಸಿದ್ದು, ಈ ವೇಳೆ 10ಕ್ಕೂ ಹೆಚ್ಚು ಮೊಬೈಲ್​​​ಗಳು ಪತ್ತೆಯಾಗಿವೆ. 90ಕ್ಕೂ ಹೆಚ್ಚು ಸಿಸಿಬಿ ಪೊಲೀಸರು ಪ್ರತಿ ಬ್ಯಾರಕ್​​​ನಲ್ಲಿ ನಿನ್ನೆ (ಆಗಸ್ಟ್​​​ 11) ರಾತ್ರಿ 8ರ ವರೆಗೆ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

ಆ್ಯಂಡ್ರಾಯ್ಡ್ ಮೊಬೈಲ್ ಬಳಸುತ್ತಿರುವ ಪ್ರಜ್ವಲ್ ?

ಪ್ರತಿ ಠಾಣಾ ವ್ಯಾಪ್ತಿಯಲ್ಲಿ ರೌಡಿ ನಿಗ್ರಹ ಪಡೆ ರಚನೆ ಹಿನ್ನೆಲೆ ಜೈಲಿನಲ್ಲಿರುವ ರೌಡಿಗಳು ಹೊರಗಿನ ರೌಡಿಗಳ ಜೊತೆ ಸಂಪರ್ಕದಲ್ಲಿರುವ ಮಾಹಿತಿ ಮತ್ತು ಜೈಲಿನಲ್ಲಿ ಅಕ್ರಮ ಚಟುವಟಿಕೆಗಳ ಆರೋಪ ಹಿನ್ನೆಲೆ ಸಿಸಿಬಿ ದಾಳಿ ನಡೆಸಿತ್ತು. ಪರಿಶೀಲನೆವೇಳೆ ಜೈಲಿನಲ್ಲಿ ಪತ್ತೆಯಾದ 10ಕ್ಕೂ ಹೆಚ್ಚು ಮೊಬೈಲ್ ಫೋನ್​​ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇನ್ನು ಅತ್ಯಾಚಾರ ಕೇಸ್​​ನಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವದಿ ಶಿಕ್ಷೆಗೆ ಗುರಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್​​ನಲ್ಲಿಯೂ ಮೊಬೈಲ್​​ ಸಿಕ್ಕಿದೆ. ಪ್ರಕ್ವಲ್​​ ಆ್ಯಂಡ್ರಾಯ್ಡ್ ಮೊಬೈಲ್ ಬಳಕೆ ಬಗ್ಗೆ ಅನುಮಾನ ಹಿನ್ನೆಲೆ, ಈ ಸಂಬಂಧ ಸಿಸಿಬಿ ಪೊಲೀಸರಿಂದ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಂತಿಲ್ಲ ರಾಜಾತಿಥ್ಯ: ಲಕ್ಷಾಂತರ ಮೌಲ್ಯದ ವಸ್ತುಗಳು ಜಪ್ತಿ

ಈ ಹಿಂದೆಯೂ ಪರಪ್ಪನ ಅಗ್ರಹಾರ ಜೈಲು ಕೈದಿಗಳಿಗೆ ಫೈವ್ ಸ್ಟಾರ್ ಹೋಟೆಲ್ ಆಗಿ ಮಾರ್ಪಟ್ಟಿರುವ ಬಗ್ಗೆ ವರದಿಯಾಗಿತ್ತು. ಬೃಹತ್ ಕಾರ್ಯಾಚರಣೆ ವೇಳೆ ಕೈದಿಗಳ ಬಳಿ ಫೋನ್‌ಗಳು, ಸಿಮ್ ಕಾರ್ಡ್‌ಗಳು, ಚಾರ್ಜರ್‌ಗಳು, ಇಯರ್‌ಫೋನ್‌ಗಳು, ವಿವಿಧ ಬಗೆಯ ಶೂಗಳು, ದಿಂಬುಗಳು, ಪಾತ್ರೆಗಳು, ಅಡುಗೆ ಸಾಮಗ್ರಿಗಳು ಮತ್ತು ಚೇರ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಸುಮಾರು ಎರಡು ಟ್ರ್ಯಾಕ್ಟರ್ ಲೋಡ್‌ನಷ್ಟು ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು. ಜೈಲಿನಲ್ಲಿರುವ ಕೆಲವು ಅಧಿಕಾರಿಗಳ ಸಹಕಾರದಿಂದಲೇ ಕೈದಿಗಳಿಗೆ ಬೇಕಾದ ವಸ್ತುಗಳು ಪೂರೈಕೆಯಾಗುತ್ತಿವೆ ಎಂಬ ಆರೋಪಗಳೂ ಕೇಳಿಬಂದಿದ್ದವು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 8:18 am, Wed, 12 August 26

Source link

ಟೀಮ್ ಇಂಡಿಯಾಗೆ ‘ಕಿಂಗ್ ಆಫ್ ಗಾಲೆ’ಯ ಬಗ್ಗೆ ಎಚ್ಚರಿಕೆ! – Kannada News | India Warned of ‘King of Galle’ Threat

ಭಾರತ ಹಾಗೂ ಶ್ರೀಲಂಕಾ ನಡುವಿನ ಬಹುನಿರೀಕ್ಷಿತ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 15 ರಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ಗಾಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಶ್ರೀಲಂಕಾದ ಮಾಜಿ ಆಲ್ ರೌಂಡರ್ ಫರ್ವೀಝ್ ಮಹರೂಫ್ ಕಠಿಣ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಅದು ಸಹ ‘ಕಿಂಗ್ ಆಫ್ ಗಾಲೆ’ಯ ಎಚ್ಚರಿಕೆ!.

ಯಾರು ಈ ಕಿಂಗ್ ಆಫ್ ಗಾಲೆ?

34 ವರ್ಷದ ಎಡಗೈ ಆರ್ಥೊಡಾಕ್ಸ್ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಪ್ರಸ್ತುತ ಶ್ರೀಲಂಕಾ ಟೆಸ್ಟ್ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಇವರನ್ನೇ ಕಿಂಗ್ ಆಫ್ ಗಾಲೆ ಎಂದು ಬಣ್ಣಿಸಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಗಾಲೆ ಮೈದಾನದಲ್ಲಿ ಪ್ರಭಾತ್ ಅವರ ಪ್ರದರ್ಶನ.

  •  ಪ್ರಭಾತ್ ಜಯಸೂರ್ಯ ಗಾಲೆ ಮೈದಾನದಲ್ಲಿ ಆಡಿರುವ ಕೇವಲ 11 ಟೆಸ್ಟ್ ಪಂದ್ಯಗಳಿಂದ ಪಡೆದಿರುವುದು ಬರೋಬ್ಬರಿ 81 ವಿಕೆಟ್‌ಗಳನ್ನು ಎಂದರೆ ನಂಬಲೇಬೇಕು.
  • ಅಲ್ಲದೆ ಪ್ರಭಾತ್ ಇದುವರೆಗೆ ಆಡಿರುವ 23 ಟೆಸ್ಟ್ ಪಂದ್ಯಗಳಿಂದ ಒಟ್ಟು 125 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ ಗಾಲೆ ಮೈದಾನದಲ್ಲೇ 81 ವಿಕೆಟ್ ಕಬಳಿಸಿರುವುದು ವಿಶೇಷ.

ಇದೇ ಕಾರಣದಿಂದಾಗಿ ಫರ್ವೀಝ್ ಮಹರೂಫ್ ‘ಕಿಂಗ್ ಆಫ್ ಗಾಲೆ’ ಬಗ್ಗೆ ಎಚ್ಚರಿಕೆಯಿಂದಿರಿ ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಪಿಚ್ ತಂತ್ರ ಹಾಗೂ ಭಾರತದ ಸಿದ್ಧತೆ:

ಗಾಲೆ ಕ್ರೀಡಾಂಗಣದ ಪಿಚ್‌ಗಳು ಸಾಂಪ್ರದಾಯಿಕವಾಗಿ ಸ್ಪಿನ್ನರ್‌ಗಳಿಗೆ ಸ್ವರ್ಗ ಎನಿಸಿಕೊಂಡಿವೆ. ಇಲ್ಲಿನ ಒಣ ಹವೆ ಮತ್ತು ಒರಟಾದ ಮೇಲ್ಮೈಯಿಂದಾಗಿ ಚೆಂಡು ಬೇಗನೇ ಸವೆಯುತ್ತದೆ. ಇದು ಸ್ಪಿನ್ ಮಾತ್ರವಲ್ಲದೆ ರಿವರ್ಸ್ ಸ್ವಿಂಗ್‌ಗೂ ಹೆಚ್ಚಿನ ನೆರವು ನೀಡುತ್ತದೆ. ಈ ಭೀತಿಯನ್ನು ಎದುರಿಸಲು ಭಾರತದ ಯುವ ಬ್ಯಾಟರ್ ಶುಭ್‌ಮನ್ ಗಿಲ್ ಈಗಾಗಲೇ ನೆಟ್ಸ್‌ನಲ್ಲಿ ಹಳೆಯ ಕೂಕಬುರ್ರಾ ಚೆಂಡುಗಳನ್ನು ಬಳಸಿ ವಿಶೇಷ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ.

ಗಾಯದ ಸಮಸ್ಯೆಯಲ್ಲಿ ಟೀಮ್ ಇಂಡಿಯಾ:

ಈ ಮಹತ್ವದ ಸರಣಿಗೂ ಮುನ್ನ ಭಾರತ ತಂಡಕ್ಕೆ ಗಾಯದ ದೊಡ್ಡ ಆಘಾತ ಎದುರಾಗಿದೆ. ಪ್ರಮುಖ ಆಟಗಾರರಾದ ಸಾಯಿ ಸುದರ್ಶನ್ (ಕಾಲ್ಬೆರಳ ಗಾಯ), ಸ್ಟಾರ್ ವೇಗಿ ಜಸ್​ಪ್ರೀತ್ ಬುಮ್ರಾ (ಮೊಣಕಾಲು ಗಾಯ) ಮತ್ತು ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ (ಹ್ಯಾಮ್‌ಸ್ಟ್ರಿಂಗ್ ಗಾಯ) ಸರಣಿಯಿಂದ ಹೊರಬಿದ್ದಿದ್ದಾರೆ. ಇವರ ಬದಲಿಗೆ ಸ್ಪಿನ್ ಪಿಚ್‌ಗಳನ್ನು ಚೆನ್ನಾಗಿ ಆಡಬಲ್ಲ ಸರ್ಫರಾಝ್ ಖಾನ್, ಬೌಲರ್‌ಗಳಾದ ಸರಂಶ್ ಜೈನ್ ಮತ್ತು ಆಖಿಬ್ ನಬಿ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಭಾರತ vs ಬಾಂಗ್ಲಾ ಸರಣಿ ಡೌಟ್: ಡೇಟ್ ಫಿಕ್ಸ್ ಮಾಡಿದ ಅಫ್ಘಾನಿಸ್ತಾನ್!

ಒಟ್ಟಾರೆಯಾಗಿ, ಯಾವುದೇ ಉಪಖಂಡದ ಪ್ರವಾಸದಲ್ಲಿ ಸ್ಪಿನ್ ಸವಾಲನ್ನು ಎದುರಿಸುವುದು ಭಾರತೀಯ ಬ್ಯಾಟರ್‌ಗಳಿಗೆ ಹೊಸದೇನಲ್ಲ. ಆದರೆ, ಗಾಲೆ ಮೈದಾನದಲ್ಲಿ ಪ್ರಭಾತ್ ಜಯಸೂರ್ಯ ಸೃಷ್ಟಿಸಿರುವ ದಾಖಲೆಗಳು ಮತ್ತು ಪ್ರಸ್ತುತ ಭಾರತ ತಂಡವನ್ನು ಕಾಡುತ್ತಿರುವ ಗಾಯದ ಸಮಸ್ಯೆಗಳು ಈ ಸರಣಿಯನ್ನು ಮತ್ತಷ್ಟು ರೋಚಕಗೊಳಿಸಿವೆ.

Source link

Vastu Tips: ಸಂಜೆಯಾಗುತ್ತಿದ್ದಂತೆ ಮನೆಯ ಮುಖ್ಯ ಬಾಗಿಲು ಮುಚ್ಚುತ್ತೀರಾ? ವಾಸ್ತು ನಿಯಮ ತಿಳಿಯಿರಿ – Kannada News | Vastu Tips: Don’t Close Main Door in Evening! Attract Wealth and Positivity

ಸಂಜೆಯಾಗುತ್ತಿದ್ದಂತೆ ಮನೆಯ ಮುಖ್ಯ ಬಾಗಿಲನ್ನು ಮುಚ್ಚುವ ಅಭ್ಯಾಸ ನಿಮಗಿದ್ದರೆ ಎಚ್ಚರ ವಹಿಸಿ. ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಈ ಒಂದು ಸಣ್ಣ ತಪ್ಪು ಮನೆಯಲ್ಲಿ ಆರ್ಥಿಕ ಸಂಕಷ್ಟ ಮತ್ತು ಅಶಾಂತಿಗೆ ಕಾರಣವಾಗಬಹುದು. ವಾಸ್ತು ಶಾಸ್ತ್ರದಲ್ಲಿ ಮನೆಯ ಮುಖ್ಯ ದ್ವಾರವನ್ನು ಕೇವಲ ಹೊರಗೆ-ಒಳಗೆ ಹೋಗುವ ಮಾರ್ಗವೆಂದು ಪರಿಗಣಿಸಲಾಗುವುದಿಲ್ಲ, ಬದಲಿಗೆ ಮನೆಗೆ ದೈವಿಕ ಮತ್ತು ಧನಾತ್ಮಕ ಶಕ್ತಿ ಪ್ರವೇಶಿಸುವ ಪ್ರಮುಖ ದ್ವಾರವೆಂದು ನಂಬಲಾಗುತ್ತದೆ. ಈ ಸ್ಥಳವನ್ನು ಸರಿಯಾದ ನಿಯಮಗಳ ಪ್ರಕಾರ ನಿರ್ವಹಿಸಿದರೆ, ಕುಟುಂಬದಲ್ಲಿ ಆರೋಗ್ಯ ಮತ್ತು ಮನಸ್ಸಿನ ಶಾಂತಿ ನೆಲೆಸುತ್ತದೆ.

ಲಕ್ಷ್ಮಿ ದೇವಿಯ ಆಗಮನ ಮತ್ತು ಶುಭ ಶಕ್ತಿಯ ಹರಿವು:

ಧಾರ್ಮಿಕ ನಂಬಿಕೆಗಳ ಪ್ರಕಾರ, ಸಂಜೆಯ ಸಮಯವು ಮನೆಗೆ ಸಂತೋಷ, ಸಮೃದ್ಧಿ ಮತ್ತು ಶ್ರೀ ಮಹಾಲಕ್ಷ್ಮಿ ದೇವಿಯ ಆಗಮನದ ಪವಿತ್ರ ಸಮಯವಾಗಿದೆ. ಈ ಸಮಯದಲ್ಲಿ ಮನೆಯ ಮುಖ್ಯ ಬಾಗಿಲನ್ನು ಸಂಪೂರ್ಣವಾಗಿ ಮುಚ್ಚುವುದರಿಂದ ಶುಭ ಶಕ್ತಿ ಹಾಗೂ ದೇವಿಯ ಆಶೀರ್ವಾದದ ಹರಿವಿಗೆ ಅಡ್ಡಿಯಾಗುತ್ತದೆ. ಆದ್ದರಿಂದ, ಸಂಜೆಯ ಸಮಯದಲ್ಲಿ ಕೆಲ ಸಮಯದವರೆಗೆ ಮುಖ್ಯ ಬಾಗಿಲನ್ನು ತೆರೆದಿಡುವುದು ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.

ಸೂರ್ಯಾಸ್ತದ ಸಮಯ ಮತ್ತು ವಾತಾವರಣದ ಬದಲಾವಣೆ:

ಸೂರ್ಯಾಸ್ತದ ವೇಳೆಯಲ್ಲಿ ಪ್ರಕೃತಿಯ ಶಕ್ತಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಉಂಟಾಗುತ್ತವೆ. ಸಂಜೆ ಬಾಗಿಲನ್ನು ತೆರೆದಿಡುವುದರಿಂದ ಹೊರಗಿನಿಂದ ತಾಜಾ ಮತ್ತು ಸಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸಲು ಅನುಕೂಲವಾಗುತ್ತದೆ. ಇದರಿಂದ ಮನೆಯ ವಾತಾವರಣವು ಒತ್ತಡರಹಿತ ಹಾಗೂ ಸಂತೋಷದಾಯಕ ವಾಗುವುದಲ್ಲದೆ, ಕುಟುಂಬದ ಸದಸ್ಯರ ನಡುವಿನ ಪ್ರೀತಿ ಮತ್ತು ಸಾಮರಸ್ಯವನ್ನು ಹೆಚ್ಚಿಸುತ್ತದೆ.

ಮುಖ್ಯ ದ್ವಾರದಲ್ಲಿ ದೀಪ ಹಚ್ಚುವ ಪವಿತ್ರ ಸಂಪ್ರದಾಯ:

ಸಂಜೆಯ ವೇಳೆ ಮನೆಯ ಮುಖ್ಯ ದ್ವಾರದಲ್ಲಿ ದೀಪ ಹಚ್ಚುವ ಸಂಪ್ರದಾಯವು ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ದೀಪದ ಬೆಳಕು ಮತ್ತು ಬೆಂಕಿಯ ಅಂಶವು ಮನೆಯಲ್ಲಿರುವ ನಕಾರಾತ್ಮಕತೆಯನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ. ಬಾಗಿಲಿನ ಬಳಿ ದೀಪವನ್ನು ಬೆಳಗಿಸುವುದರಿಂದ ದೈವಿಕ ಆಶೀರ್ವಾದಗಳು ಲಭಿಸುವುದರ ಜೊತೆಗೆ ದುಷ್ಟಶಕ್ತಿಗಳು ಮನೆಯಿಂದ ದೂರವಿರುತ್ತವೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಗಂಗಾಜಲದ ಪ್ರೋಕ್ಷಣೆ ಮತ್ತು ಸ್ಥಳದ ಶುದ್ಧೀಕರಣ:

ಸಂಜೆ ವೇಳೆ ಮುಖ್ಯ ದ್ವಾರದ ಹೊಸ್ತಿಲ ಮೇಲೆ ಗಂಗಾಜಲ ಅಥವಾ ಶುದ್ಧ ನೀರನ್ನು ಸಿಂಪಡಿಸುವುದು ಅತ್ಯಂತ ಶುಭಕರ. ಈ ಸರಳ ಪರಿಹಾರವು ಬಾಗಿಲ ಸುತ್ತಮುತ್ತಲಿನ ವಾತಾವರಣವನ್ನು ಪವಿತ್ರಗೊಳಿಸುತ್ತದೆ. ಪರಿಣಾಮವಾಗಿ, ಯಾವುದೇ ರೀತಿಯ ಕೆಟ್ಟ ಕಣ್ಣು (ದೃಷ್ಟಿ ದೋಷ) ಅಥವಾ ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.

ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ:

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ಬಾಗಿಲಿನ ಬಳಿ ಕತ್ತಲೆ ಇರುವುದು, ಕೊಳಕು ಅಥವಾ ಹಳೆಯ ಬೂಟು-ಚಪ್ಪಲಿಗಳನ್ನು ಹರಡಿಡುವುದು ಸೂಕ್ತವಲ್ಲ. ಸ್ವಚ್ಛವಾದ ಮತ್ತು ಉತ್ತಮ ಬೆಳಕಿನಿಂದ ಕೂಡಿದ ಬಾಗಿಲು ಸಂಪತ್ತು ಹಾಗೂ ಸಮೃದ್ಧಿಯನ್ನು ಆಕರ್ಷಿಸುತ್ತದೆ. ಅದೇ ಬಾಗಿಲಿನ ಬಳಿ ಕೊಳಕಿದ್ದರೆ ಅದು ಮನೆಯಲ್ಲಿ ಅಶಾಂತಿ ಮತ್ತು ತೀವ್ರ ಆರ್ಥಿಕ ಸಂಕಷ್ಟವನ್ನು ತಂದೊಡ್ಡುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:55 am, Wed, 12 August 26

Source link

ಭೀಮನ ಅಮಾವಾಸ್ಯೆ; ರಾಜ್​ಕುಮಾರ್ ಕಿಡ್ನ್ಯಾಪ್​​ಗೆ ಕಾರಣವಾಗಿತ್ತು ಆ ಒಂದು ಘಟನೆ – Kannada News | Unseen Warning: How Dr Rajkumar Unannounced Gajanur Visit Led to His 2000 Abduction

ರಾಜ್ಯದ ಹಿರಿಯ ರಾಜಕಾರಣಿ,  ಎಸ್.ಎಂ. ಕೃಷ್ಣ ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಮರು ವರ್ಷವೇ ಎದುರಾದ ಬೃಹತ್ ಸವಾಲೆಂದರೆ ಅದು ವರನಟ ಡಾ. ರಾಜ್‌ಕುಮಾರ್ ಅವರ ಅಪಹರಣ. ಭೀಮನ ಅಮಾವಾಸ್ಯೆ ದಿನದಂದು ನಡೆದ ಆ ಘಟನೆ ಅತ್ಯಂತ ಕರಾಳ ನೆನಪಾಗಿ ಉಳಿದುಕೊಂಡಿದೆ.

ಪೂಜೆಯ ಶುಭ ದಿನದಂದೇ ನಡೆದ ಕರಾಳ ಘಟನೆ

ಅಂದು ಪತಿಯ ಆಯುಷ್ಯ ಮತ್ತು ಕ್ಷೇಮಕ್ಕಾಗಿ ಮಹಿಳೆಯರು ವಿಶೇಷ ಪೂಜೆ ಸಲ್ಲಿಸುವ ಪವಿತ್ರ ಭೀಮನ ಅಮಾವಾಸ್ಯೆಯ ದಿನ (ಜುಲೈ 30, 2000). ಇಡೀ ನಾಡು ಹಬ್ಬದ ಸಂಭ್ರಮದಲ್ಲಿದ್ದಾಗ, ವೀರಪ್ಪನ್ ಮತ್ತು ಆತನ ಗುಂಪು ಗಾಜನೂರಿನಲ್ಲಿದ್ದ ಡಾ. ರಾಜ್‌ಕುಮಾರ್ ಅವರ ಮನೆಗೆ ನುಗ್ಗಿ ಅವರನ್ನು ಅಪಹರಿಸಿತು. ಪಾರ್ವತಮ್ಮನವರು ಗಂಡನ ಆಯುಷ್ಯಕ್ಕಾಗಿ ಪೂಜೆ ಸಲ್ಲಿಸುವ ಪವಿತ್ರ ದಿನದಂದೇ ಕಾಡುಗಳ್ಳ ವೀರಪ್ಪನ್ ಅಣ್ಣಾವ್ರನ್ನು ಕಾಡಿಗೆ ಎಳೆದೊಯ್ದದ್ದು ಇಡೀ ನಾಡಿಗೆ ಆಘಾತ ತಂದಿತ್ತು.

ಸರ್ಕಾರಕ್ಕೆ ಸುಳಿವಿತ್ತು

ಈ ಅಪಹರಣದ ಹಿಂದೆ ಒಂದು ರೋಚಕ ಹಿನ್ನೆಲೆಯಿತ್ತು. ರಾಜ್‌ಕುಮಾರ್ ಅವರಿಗೆ ವೀರಪ್ಪನ್‌ನಿಂದ ಅಪಾಯವಿದೆ ಎಂಬ ಸುಳಿವು ರಾಜ್ಯ ಸರ್ಕಾರಕ್ಕೆ ಮೊದಲೇ ಇತ್ತು. ಈ ಕಾರಣದಿಂದಲೇ ಕೃಷ್ಣ ಅವರ ಸರ್ಕಾರವು ರಾಜ್‌ಕುಮಾರ್ ಅವರೊಂದಿಗೆ ಒಂದು ಪ್ರಮುಖ ಒಪ್ಪಂದ ಮಾಡಿಕೊಂಡಿತ್ತು.

ತಮಿಳುನಾಡು ಗಡಿಯಲ್ಲಿರುವ ಹುಟ್ಟೂರು ಗಾಜನೂರಿಗೆ ತೆರಳುವುದಿದ್ದರೆ, ಆ ಬಗ್ಗೆ ಮುಂಚಿತವಾಗಿಯೇ ರಾಜ್ಯ ಸರ್ಕಾರ ಹಾಗೂ ಪೊಲೀಸರಿಗೆ ಮಾಹಿತಿ ನೀಡಬೇಕು ಎಂಬುದು ಆ ಒಪ್ಪಂದವಾಗಿತ್ತು. ಸರ್ಕಾರಕ್ಕೆ ತಿಳಿಸಿದರೆ ಸೂಕ್ತ ಪೊಲೀಸ್ ಭದ್ರತೆಯನ್ನು ಒದಗಿಸಲಾಗುತ್ತಿತ್ತು. ರಾಜ್‌ಕುಮಾರ್ ಅವರು ಕೂಡ ಇದಕ್ಕೆ ಒಪ್ಪಿದ್ದರು.

ಇದನ್ನೂ ಓದಿ: ಡಾ. ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್ 

ಪ್ರತಿ ಬಾರಿಯೂ ಗಾಜನೂರಿಗೆ ತೆರಳುವಾಗ ಅಣ್ಣಾವ್ರು ಸರ್ಕಾರಕ್ಕೆ ಮಾಹಿತಿ ನೀಡುತ್ತಿದ್ದರು. ಆದರೆ, ಅಂದು ಭೀಮನ ಅಮಾವಾಸ್ಯೆಯ ಸಂದರ್ಭದಲ್ಲಿ ಗೃಹಪ್ರವೇಶದ ಕೆಲಸಗಳಿದ್ದ ಕಾರಣ, ಅವರು ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡದೆ ನೇರವಾಗಿ ಗಾಜನೂರಿಗೆ ತೆರಳಿದ್ದರು. ಭದ್ರತೆಯೇ ಇಲ್ಲದ ಆ ಕ್ಷಣಕ್ಕಾಗಿ ಕಾಯುತ್ತಿದ್ದ ವೀರಪ್ಪನ್, ನೇರವಾಗಿ ಮನೆಗೆ ನುಗ್ಗಿ ಅಣ್ಣಾವ್ರನ್ನು ಎಳೆದೊಯ್ದನು. ಸುದೀರ್ಘ 108 ದಿನಗಳ ಬಳಿಕ ಡಾ. ರಾಜ್‌ಕುಮಾರ್ ಅವರನ್ನು ಸುರಕ್ಷಿತವಾಗಿ ಮರಳಿ ಕರೆತರಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version