ಕಲಬುರ್ಗಿ, ಮಾರ್ಚ್ 23: ಜಿಲ್ಲೆಯ ವಿಶ್ವವಿದ್ಯಾಲಯದ ಖಜಾನೆಗೆ ಕನ್ನ ಬಿದ್ದಿದ್ದು, ಸಿಬ್ಬಂದಿಗೆ ಸಂಬಳ ನೀಡುವ ಜವಾಬ್ದಾರಿ ಹೊತ್ತ ಅಕೌಂಟಂಟ್ನಿಂದಲೇ ಈ ವಂಚನೆ (Fraud) ನಡೆದಿದೆ. ಆತ ತನ್ನ ವೈಯಕ್ತಿಕ ಖಾತೆಗೆ ಲಕ್ಷಾಂತರ ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಯಾವುದೇ ದೂರು ದಾಖಲಾಗದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಅನುಮಾನಕ್ಕೆ ಎಡೆಮಾಡಿಕೊಟ್ಟ ಕುಲಪತಿಗಳ ಹೇಳಿಕೆ!
ಕಲಬುರ್ಗಿ ವಿವಿಯ ಎಲ್ಲಾ ಸಿಬ್ಬಂದಿಗೆ ಸಂಬಳ ಕೊಡಬೇಕಾದ ಅಕೌಂಟೆಂಟ್ ಶರಣು, ತನ್ನ ವೈಯಕ್ತಿಕ ಖಾತೆಗೆ ಲಕ್ಷಾಂತರ ರೂಪಾಯಿ ವರ್ಗಾವಣೆ ಮಾಡಿಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ. ಅದಕ್ಕೂ ಹೆಚ್ಚಾಗಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಈ ಬಗ್ಗೆ ದೂರು ದಾಖಲಿಸದೆ ಕುಳಿತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ.
ಅಕೌಂಟಂಟ್ ಶರಣು ತನಗೆ ಬೇಕಾದ ವ್ಯಕ್ತಿಗಳಿಗೆ ಹೆಚ್ಚುವರಿ ಟಿಎ,ಡಿಎ ಹಾಕಿದ್ದೇನೆ ಎಂದು ವಿವಿಯ ಖಾತೆಯಿಂದ ಲಕ್ಷ ಲಕ್ಷ ಹಣ ಸಂದಾಯ ಮಾಡಿದ್ದ. ಬಳಿಕ ಅವರಿಗೆ ಪೋನ್ ಮಾಡಿ ಆ ಹಣವನ್ನು ವಾಪಸ್ ತನ್ನ ವಯುಕ್ತಿಕ ಖಾತೆಗೆ ಹಾಕಿಕೊಂಡು ಮೋಸ ಮಾಡಿದ್ದ. ಆ ಮೋಸದ ಹಣವೇ ಅಂದಾಜು ಬರೋಬ್ಬರಿ ಒಂದು ಕೋಟಿವರೆಗೂ ಆಗಬಹುದು ಎಂದು ಈ ಮೊದಲು ವಿವಿ ಕುಲಪತಿಗಳೇ ಹೇಳಿದ್ದರು. ವಿವಿಯ ಲೆಕ್ಕ ಪತ್ರ ಸಮೀತಿ ಅಡಿಟ್ ವೇಳೆ ಈ ಅಕ್ರಮ ಹಣದ ವರ್ಗಾವಣೆ ಬಹಿರಂಗರ ಗೊಂಡಿತ್ತು. ಹೀಗಿದ್ದರೂ ಈ ಬಗ್ಗೆ ಯಾವುದೇ ದೂರು ದಾಖಲಾಗದೇ ಇರುವುದು ಅನುಮಾನಗಳಿಗೆ ಕಾರಣವಾಗಿತ್ತು.
ಘಟನೆ ನಡೆದಾಗ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿದೆ ಎಂದಿದ್ದ ಕುಲಪತಿಗಳು ಈಗ ತನಿಖೆಯಲ್ಲಿ ಕೇವಲ 24 ಲಕ್ಷ ರೂಪಾಯಿ ಅಕ್ರಮ ವರ್ಗಾವಣೆ ನಡೆದಿದೆ ಎಂದು ಹೇಳಿದ್ದಾರೆ ಎಂಬುದು ತಿಳಿದು ಬಂದಿದೆ. ಅಕೌಂಟಂಟ್ ಶರಣು ಈಗಾಗಲೇ ಕೆಲಸಿದಿಂದ ವಜಾಗೊಂಡಿದ್ದಾನೆ.ಆದರೆ ತನಿಖೆಯಲ್ಲಿ ಕುಲಸಚಿವರ ಹೇಳಿಕೆಗಳಿಂದ ಅನುಮಾನ ಹುಟ್ಟಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ನವದೆಹಲಿ, ಮಾರ್ಚ್ 23: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಜಾಗತಿಕವಾಗಿ ಆಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆತಂಕ ವ್ಯಕ್ತಪಡಿಸಿದ್ದಾರೆ. ಸಂಸತ್ನಲ್ಲಿ ಇಂದು ಪ್ರಧಾನಿಗಳು ಪಶ್ಚಿಮ ಏಷ್ಯಾ ಯುದ್ಧ ಹಾಗೂ ತೈಲ ಬಿಕ್ಕಟ್ಟಿನ ಕುರಿತು ಮಾತನಾಡುತ್ತಾ, ತಮ್ಮ ಸರ್ಕಾರ ಈ ಬಿಕ್ಕಟ್ಟು ಎದುರಿಸಲು ಮಾಡುತ್ತಿರುವ ಪ್ರಯತ್ನಗಳನ್ನು ವಿವರಿಸಿದ್ದಾರೆ. ಹಾರ್ಮುಜ್ ಸ್ಟ್ರೇಟ್ಗೆ ತಡೆಯಾಗಿರುವುದರಿಂದ ತೈಲ ಮತ್ತು ಅನಿಲ ಪೂರೈಕೆಯನ್ನು ಸಾಧ್ಯವಿರುವೆಡೆಯೆಲ್ಲಾ ಪಡೆಯಲಾಗುತ್ತಿದೆ ಎಂದು ಹೇಳಿದ್ದಾರೆ.
ಯುದ್ಧ ನಡೆಯುತ್ತಿರುವ ಪ್ರದೇಶದಲ್ಲಿ ಭಾರತದ ಜಾಗತಿಕ ವ್ಯಾಪಾರದ ಪ್ರಮುಖ ಮಾರ್ಗ ಇದೆ. ಭಾರತಕ್ಕೆ ಬೇಕಾದ ತೈಲ ಮತ್ತು ಅನಿಲ ಪೂರೈಕೆಯ ಮೂಲವೂ ಇಲ್ಲಿದೆ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.
‘ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಕಠಿಣವಾಗಿದೆ. ಕಚ್ಛಾ ತೈಲ ಮತ್ತು ರಸಗೊಬ್ಬರ ಪೂರೈಕೆ ಮೇಲೆ ಪರಿಣಾಮ ಬಿದ್ದಿದೆ. ಸರ್ಕಾರವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಹೆಚ್ಚಿನ ವ್ಯತ್ಯಯ ಆಗದಂತೆ ಎಚ್ಚರ ವಹಿಸುತ್ತಿದೆ. ಜನರು ಅನುಭವಿಸುತ್ತಿರುವ ಕಷ್ಟವನ್ನು ಕಡಿಮೆ ಮಾಡುವುದು ಸರ್ಕಾರದ ಆದ್ಯತೆಯಾಗಿದೆ’ ಎಂದು ಮೋದಿ ವಿವರಿಸಿದ್ದಾರೆ.
ಯುದ್ಧದಿಂದಾಗಿ ಭಾರತ ಮಾತ್ರವಲ್ಲ, ಜಾಗತಿಕವಾಗಿಯೂ ತೈಲ ಹಾಗೂ ಅನಿಲ ಬಿಕ್ಕಟ್ಟು ಪರಿಸ್ಥಿತಿ ಉದ್ಭವವಾಗಿದೆ. ಇದು ಎಲ್ಲಾ ದೇಶಗಳಿಗೂ ಸವಾಲಿನ ಸ್ಥಿತಿ ತಂದಿದೆ. ಇರಾನ್ ಯುದ್ಧ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಈ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರನ್ನುದ್ದೇಶಿಸಿ ಮಾತನಾಡಿದ್ದಾರೆ. ಬಿಕ್ಕಟ್ಟು ಉದ್ಭವಗೊಂಡ ಬಳಿಕ ಮೊದಲ ಬಾರಿಗೆ ಪ್ರಧಾನಿಗಳು ಸಂಸತ್ನಲ್ಲಿ ಆ ಬಗ್ಗೆ ಮಾತನಾಡಿರುವುದು.
ದೇಶದ ಜನರನ್ನು ಉದ್ದೇಶಿಸಿ ಮೋದಿ ಅವರು ಈ ಮೊದಲು ಮಾತನಾಡದೇ ಹೋದರೂ ತೈಲ ಮತ್ತು ಅನಿಲ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ತೈಲ ಮತ್ತು ಗ್ಯಾಸ್ ಪೂರೈಕೆಗೆ ಇರಾನ್ ಜೊತೆಗೂ ಮಾತನಾಡುತ್ತಿದ್ದಾರೆ. ಇತರ ಪರ್ಯಾಯ ಮಾರುಕಟ್ಟೆಗಳನ್ನೂ ಮುಟ್ಟುತ್ತಿದ್ದಾರೆ.
ಈ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸಲು ಪ್ರಧಾನಿಯವರು ಸಚಿವರು ಹಾಗೂ ಕಾರ್ಯದರ್ಶಿಗಳ ಒಂದು ತಂಡವನ್ನು ರಚಿಸಲು ನಿರ್ದೇಶನ ನೀಡಿದ್ದಾರೆ. ಎಲ್ಪಿಜಿ ಲಭ್ಯತೆ ಹೆಚ್ಚಿಸಲು ವಿವಿಧ ಮಾರ್ಗೋಪಾಯಗಳನ್ನು ಹುಡುಕಲಾಗುತ್ತಿದೆ.
ಬೆಂಗಳೂರು, ಮಾ.23: ಸಿಲಿಕಾನ್ ಸಿಟಿಯ ಬಿಟಿಎಂ ರಸ್ತೆಯಲ್ಲಿ (BTM Road) ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿದ ಯುವಕರ ಗುಂಪೊಂದು ಅತಿರೇಖಾದ ವರ್ತನೆ ತೋರಿದ್ದಾರೆ. ಸ್ಕೂಟರ್ನಲ್ಲಿ ಮೂವರು ಯುವಕರು ಹೆಲ್ಮೆಟ್ ಇಲ್ಲದೆ ‘ಟ್ರಿಪಲ್ ರೈಡಿಂಗ್’ ಮಾಡುತ್ತಿರುವುದಲ್ಲದೆ, ಚಲಿಸುವ ವಾಹನದಲ್ಲೇ ಬಿಯರ್ ಕುಡಿಯುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಮೂವರು ಯುವಕರು ಯಾವುದೇ ಭಯವಿಲ್ಲದೆ ಸ್ಕೂಟರ್ನಲ್ಲಿ ತೆರಳುತ್ತಿದ್ದು, ಹಿಂಬದಿ ಕುಳಿತಿದ್ದ ಯುವಕ ಬಿಯರ್ ಬಾಟಲಿ ಹಿಡಿದು ಮದ್ಯಪಾನ ಮಾಡುತ್ತಾ ವಿಕೃತವಾಗಿ ಕೈ ಸನ್ನೆಗಳನ್ನು ಮಾಡುತ್ತಿದ್ದಾನೆ. ಈ ಯುವಕರು ಟ್ರಿಪಲ್ ರೈಡಿಂಗ್, ಹೆಲ್ಮೆಟ್ ರಹಿತ ಪ್ರಯಾಣ ಮತ್ತು ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನದಂತಹ ಗಂಭೀರ ಅಪರಾಧಗಳನ್ನು ಎಸಗಿದ್ದಾರೆ. ಇವರ ಈ ಬೇಜವಾಬ್ದಾರಿ ವರ್ತನೆ ಸ್ವತಃ ಅವರಿಗಷ್ಟೇ ಅಲ್ಲದೆ, ರಸ್ತೆಯಲ್ಲಿ ಹೋಗುವ ಇತರ ಸಾರ್ವಜನಿಕರಿಗೂ ಪ್ರಾಣಾಪಾಯ ತಂದೊಡ್ಡುವಂತಿತ್ತು. ಈ ದೃಶ್ಯವನ್ನು ಹಿಂದಿನಿಂದ ಬರುತ್ತಿದ್ದ ಕಾರಿನ ಡ್ಯಾಶ್ಕ್ಯಾಮ್ನಲ್ಲಿ ಸೆರೆಹಿಡಿಯಲಾಗಿದ್ದು, @karnatakaportf ಎಂಬ ಎಕ್ಸ್ (X) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋವನ್ನು ಬೆಂಗಳೂರು ಸಂಚಾರಿ ಪೊಲೀಸರಿಗೆ ಟ್ಯಾಗ್ ಮಾಡಲಾಗಿದ್ದು, ಕಠಿಣ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.ವಿಡಿಯೋ ಗಮನಿಸಿರುವ ಬೆಂಗಳೂರು ಸಂಚಾರಿ ಪೊಲೀಸರು (BTP), ವಾಹನ ಸಂಖ್ಯೆಯನ್ನು ಆಧರಿಸಿ ಎಫ್ಐಆರ್ ದಾಖಲಿಸಲು ಮತ್ತು ಆರೋಪಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ದಾವಣಗೆರೆ, ಮಾರ್ಚ್ 23: ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡದ ಕಾರಣ ದಾವಣಗೆರೆ (Davanagere) ದಕ್ಷಿಣ ಉಪಚುನಾವಣೆಯಲ್ಲಿ ಬಂಡಾಯದ ಬಿಸಿ ಎದುರಿಸುತ್ತಿರುವ ಕಾಂಗ್ರೆಸ್ (Congress), ಇವುಗಳೆಲ್ಲದರ ನಡುವೆಯೂ ಸೋಮವಾರ ಒಗ್ಗಟ್ಟು ಪ್ರದರ್ಶನ ಮಾಡಿತು. ಮಾಜಿ ಸಚಿವ, ಶಾಸಕ ಶಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ್ ಶಾಮನೂರು (Samarth Shamanur) ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇದೇ ವೇಳೆ, ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಚಿವರು ಒಗ್ಗಟ್ಟು ಪ್ರದರ್ಶಿಸಿದರು. ಅಲ್ಪಸಂಖ್ಯಾತ ನಮ್ಮ ಜತೆಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರೆ, ಮುಸ್ಲಿಮರು ಟಿಕೆಟ್ ಕೇಳಿದ್ದರಲ್ಲಿ ತಪ್ಪಿಲ್ಲ. ಆದರೆ ನಾವು ಒಗ್ಗಟ್ಟಾಗಿದ್ದೇವೆ, ಚುನಾವಣೆ ಗೆಲ್ಲುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಸಿದ್ದರಾಮಯ್ಯ ಹೇಳಿದ್ದೇನು?
ಕಾಂಗ್ರೆಸ್ ಪಕ್ಷವು ಜಾತಿ, ಧರ್ಮದ ಆಧಾರದ ಮೇಲೆ ರಾಜಕೀಯ ಮಾಡುವುದಿಲ್ಲ. ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದ್ದು, ಇದು ಎಲ್ಲರನ್ನೂ ಒಳಗೊಳ್ಳುವ, ಸಮಗ್ರ ಅಭಿವೃದ್ಧಿಯಲ್ಲಿ ನಂಬಿಕೆ ಇಟ್ಟಿರುವ ಪಕ್ಷವಾಗಿದೆ. ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಪಕ್ಷಕ್ಕೆ ದಾವಣಗೆರೆಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಸಿದ್ದರಾಮಯ್ಯ ಮಾತಿನ ವಿಡಿಯೋ
ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದೇ ಪಕ್ಷದ ಆದ್ಯತೆ. ಸುಳ್ಳು ಭರವಸೆಗಳನ್ನು ನೀಡುವ ಬದಲು, ಏನು ಹೇಳುತ್ತೇವೋ ಅದನ್ನೇ ಕಾರ್ಯರೂಪಕ್ಕೆ ತರುತ್ತೇವೆ. ಕಳೆದ ಅವಧಿಯಲ್ಲಿ ನೀಡಿದ ಭರವಸೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಈಡೇರಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ಮೂರು ವರ್ಷಗಳ ಅಧಿಕಾರಾವಧಿಯಲ್ಲಿ, ನಾಲ್ಕನೇ ಬಜೆಟ್ ಅನ್ನು ಮಂಡಿಸಲಾಗಿದೆ. ಬಜೆಟ್ ಅನ್ನು ಪರಿಶೀಲಿಸಿದರೆ, ಪಕ್ಷವು ತನ್ನ ಮಾತುಗಳನ್ನು ಉಳಿಸಿಕೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಡಿಕೆ ಶಿವಕುಮಾರ್ ಹೇಳಿದ್ದೇನು?
ತಾತ ಶಿವಶಂಕರಪ್ಪನವರಂತೆ ಈಗ ಅವರ ಮೊಮ್ಮಗನೂ ಜನಸೇವೆ ಮಾಡಲು ಮುಂದೆ ಬಂದಿದ್ದಾರೆ. ಅವರೂ ಗೆದ್ದೇ ಗೆಲ್ಲುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು. ದಾವಣಗೆರೆ ನಗರದ ಅಭಿವೃದ್ಧಿಯ ಕುರಿತು ಮಾತನಾಡಿದ ಡಿಕೆ ಶಿವಕುಮಾರ್, ಇದು ಬೆಂಗಳೂರಿಗಿಂತಲೂ ಉತ್ತಮವಾಗಿ ಯೋಜಿತವಾಗಿರುವ ನಗರ. ನೂರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಪ್ಯಾಕೇಜ್ಗಳನ್ನು ಈಗಾಗಲೇ ಮಂಜೂರು ಮಾಡಲಾಗಿದೆ. ರಸ್ತೆ ಅಗಲೀಕರಣ ಸೇರಿದಂತೆ ವಿವಿಧ ಕಾಮಗಾರಿಗಳು ಉತ್ತಮವಾಗಿ ನಡೆಯುತ್ತಿವೆ. ದಾವಣಗೆರೆಯನ್ನು ರಾಜ್ಯದ ಒಂದು ಪ್ರಮುಖ ವೈದ್ಯಕೀಯ ಮತ್ತು ಶಿಕ್ಷಣ ಕೇಂದ್ರವನ್ನಾಗಿ ರೂಪಿಸುವಲ್ಲಿ ಶಿವಶಂಕರಪ್ಪನವರ ಕುಟುಂಬ ಮತ್ತು ಅವರ ಸಂಸ್ಥೆಗಳ ಕೊಡುಗೆ ಅಪಾರ ಎಂದು ಅವರು ಸ್ಮರಿಸಿದರು.
ದಾವಣಗೆರೆ ಈಗ ಶಿಕ್ಷಣ ಕೇಂದ್ರವಾಗಿಯೂ ಮಾರ್ಪಟ್ಟಿದೆ. ಹೊರ ರಾಜ್ಯ, ನಗರ ಮತ್ತು ಹಳ್ಳಿಗಳಿಂದ ಬಂದು ಇಲ್ಲಿ ವಿದ್ಯಾಭ್ಯಾಸ ಮಾಡುವವರಿಗೆ ಶಿವಶಂಕರಪ್ಪನವರ ಸಂಸ್ಥೆಗಳು ಹೊಸ ರೂಪ ನೀಡಿವೆ ಎಂದು ಡಿಕೆ ಶಿವಕುಮಾರ್ ಉಲ್ಲೇಖಿಸಿದರು.
ಡಿಕೆ ಶಿವಕುಮಾರ್ ಮಾತಿನ ವಿಡಿಯೋ
ಪಕ್ಷದೊಳಗಿನ ಅಸಮಾಧಾನ ಮತ್ತು ಬಂಡಾಯದ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಡಿಕೆ ಶಿವಕುಮಾರ್, ರಾಜಕೀಯದಲ್ಲಿ ಆಕಾಂಕ್ಷಿಗಳು ತಮ್ಮ ಹಕ್ಕುಗಳನ್ನು ಕೇಳುವುದು ಸಹಜ. ಮುಸ್ಲಿಂ ಮುಖಂಡರು ಟಿಕೆಟ್ ಕೇಳಿದ್ದರಲ್ಲಿ ತಪ್ಪಿಲ್ಲ. ಎಲ್ಲರೊಂದಿಗೆ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ನಮ್ಮ ಪಕ್ಷ ಒಂದು ಕುಟುಂಬದಂತೆ ಕಾರ್ಯನಿರ್ವಹಿಸುತ್ತದೆ. ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವರು ಶಿವಶಂಕರಪ್ಪನವರ ಆಪ್ತರು ಮತ್ತು ಪಟ್ಟ ಶಿಷ್ಯರು. ಅವರನ್ನು ಮನವೊಲಿಸಲಾಗುವುದು. ಇನ್ನುಳಿದವರೊಂದಿಗೂ ಮಾತುಕತೆ ನಡೆಸಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳು, ಸಾಮಾಜಿಕ ಚಿಂತನೆ ಮತ್ತು ಎಲ್ಲಾ ಸಮಾಜಕ್ಕೂ ನ್ಯಾಯ ಒದಗಿಸುವುದು ನಮ್ಮ ಪಕ್ಷದ ಮೂಲ ಸಿದ್ಧಾಂತ. ಇದೇ ನಮ್ಮ ಚುನಾವಣಾ ವಿಷಯ ಎಂದು ಅವರು ಸ್ಪಷ್ಟಪಡಿಸಿದರು.
ನವದೆಹಲಿ, ಮಾರ್ಚ್ 23: ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಮಧ್ಯಪ್ರಾಚ್ಯದ ಸಂಘರ್ಷದ ಕುರಿತು ಮಾತು ಆರಂಭಿಸಿದ್ದಾರೆ. ಇರಾನ್ ಜೊತೆ ನಡೆಯುತ್ತಿರುವ ಅಮೆರಿಕ-ಇಸ್ರೇಲ್ ಸಂಘರ್ಷದ ಪ್ರಮುಖ ಅಂಶಗಳು ಮತ್ತು ಈ ವಿಷಯದ ಬಗ್ಗೆ ಭಾರತದ ನಿಲುವನ್ನು ಪ್ರಧಾನಿ ಮೋದಿ ವಿವರಣೆ ನೀಡಿದ್ದಾರೆ. ಅಮೆರಿಕ-ಇಸ್ರೇಲ್-ಇರಾನ್ ಯುದ್ಧದ ನಡುವೆ ಅಗತ್ಯ ವಸ್ತುಗಳ ಪೂರೈಕೆ ಮತ್ತು ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ದೀರ್ಘ ಮತ್ತು ಅಲ್ಪಾವಧಿಯ ಕ್ರಮಗಳ ಕುರಿತು ಚರ್ಚಿಸಲು ಪ್ರಧಾನಿ ಮೋದಿ ಅವರು ಸಂಪುಟ ಭದ್ರತಾ ಸಮಿತಿಯ (ಸಿಸಿಎಸ್) ಸಭೆ ನಡೆಸಿದ ಒಂದು ದಿನದ ನಂತರ ಇಂದು ಭಾಷಣ ಮಾಡುತ್ತಿದ್ದಾರೆ.
ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ಜಂಟಿ ಕಾರ್ಯಾಚರಣೆಯನ್ನು ಆರಂಭಿಸಿದವು, ಯುದ್ಧದ ಮೊದಲ ದಿನದಂದು ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಕೊಂದರು. ಇರಾನ್ ತನ್ನ ತೈಲ ರಫ್ತು ಮಾಡುವ ನೆರೆಹೊರೆಯವರ ವಿರುದ್ಧ ದಾಳಿಗಳ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ.
‘ಧುರಂಧರ್ 2’ vs ‘ಟಾಕ್ಸಿಕ್’ (Toxic Movie) ಎಂಬ ಪರಿಸ್ಥಿತಿ ನಿರ್ಮಾಣ ಆಗಿತ್ತು. ಆದರೆ, ಯಶ್ ನಟನೆಯ ‘ಟಾಕ್ಸಿಕ್’ ಚಿತ್ರ ತನ್ನ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಿಕೊಂಡಿತ್ತು. ಈಗ ‘ಧುರಂಧರ್ 2’ ಸಿನಿಮಾ ರಿಲೀಸ್ ಆಗಿ ಅಬ್ಬರಿಸುತ್ತಿದೆ. ವಿಶೇಷ ಎಂದರೆ, ಈ ಚಿತ್ರ ಕೇವಲ ನಾಲ್ಕು ದಿನಕ್ಕೆ 450 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರದ ಎದುರು ‘ಟಾಕ್ಸಿಕ್’ ತೆರೆಗೆ ಬಂದಿದ್ದರೆ ಏನಾಗುತ್ತಿತ್ತು ಎಂಬ ಪ್ರಶ್ನೆಯನ್ನು ಕೆಲವರು ಕೇಳುತ್ತಿದ್ದಾರೆ. ಈ ಮಧ್ಯೆ ‘ಟಾಕ್ಸಿಕ್’ ಸಿನಿಮಾ ಎದುರು ‘ಧುರಂಧರ್ 3’ ಬರಲಿದೆಯೇ ಎಂಬ ಪ್ರಶ್ನೆ ಮೂಡಿದೆ.
‘ಧುರಂಧರ್’ ಸಿನಿಮಾ ಕ್ಲೈಮ್ಯಾಕ್ಸ್ ಅಲ್ಲಿ, ‘ಧುರಂಧರ್ 2’ ಸಿನಿಮಾ ಮಾರ್ಚ್ 19ಕ್ಕೆ ಬರಲಿದೆ ಎಂಬುದರ ಸ್ಪಷ್ಟ ಮಾಹಿತಿ ನೀಡಲಾಯಿತು. ಅದೇ ರೀತಿ, ‘ಧುರಂಧರ್ 2’ ಸಿನಮಾ ಯಶಸ್ಸಿನ ಬಳಿಕ ‘ಧುರಂಧರ್ 3’ ಬರಲಿದೆ ಎಂದು ಹೇಳಲಾಗಿತ್ತು. ಆದರೆ, ಕ್ಲೈಮ್ಯಾಕ್ಸ್ ಅಲ್ಲಿ ಆ ರೀತಿಯ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದಾಗ್ಯೂ ‘ಧುರಂಧರ್ 3’ ಜೂನ್ 14ರಂದು ಬರಲಿದೆ ಎಂಬ ಪೋಸ್ಟ್ ವೈರಲ್ ಮಾಡಿದ್ದಾರೆ.
ಈ ಪೋಸ್ಟರ್ ಯಾರೋ ಉದ್ದೇಶಪೂರ್ವಕವಾಗಿ ಕ್ರಿಯೇಟ್ ಮಾಡಿರೋದು ಅನ್ನೋದು ಸ್ಪಷ್ಟವಾಗಿದೆ. ‘ಧುರಂಧರ್ 3’ ಸಿನಿಮಾ ಮುಂದಿನ ದಿನಗಳಲ್ಲಿ ಬರಬಹುದು ಎಂಬ ಊಹೆ ಇದೆಯೇ ಹೊರತು, ಸಿನಿಮಾ ರಿಲೀಸ್ ಆಗೋದನ್ನು ಯಾರೂ ಅಧಿಕೃತ ಮಾಡಿಲ್ಲ. ‘ಟಾಕ್ಸಿಕ್’ ಸಿನಿಮಾ ರಿಲೀಸ್ಗಾಗಿ ಕಾಯುತ್ತಿರುವವರಿಗೆ ಭಯಬೀಳಿಸಬೇಕು ಎಂಬುದಷ್ಟೇ ಈ ಪೋಸ್ಟರ್ನ ಉದ್ದೇಶ. ಹೀಗಾಗಿ, ಈ ಪೋಸ್ಟರ್ನಲ್ಲಿ ಯಾವುದೇ ಸತ್ಯ ಇಲ್ಲ.
‘ಟಾಕ್ಸಿಕ್’ ಸಿನಿಮಾಗೆ ಯಶ್ ಹೀರೋ. ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ ಸೇರಿದಂತೆ ಅನೇಕರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಜೂನ್ 4ರಂದು ತೆರೆಗೆ ಬರಲಿದೆ. ಕನ್ನಡ, ಹಿಂದಿ ಮೊದಲಾದ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಿ ಅಬ್ಬರಿಸಲಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಯಾವ ರೀತಿಯಲ್ಲಿ ಇರಲಿದೆ ಎಂಬ ಕುತೂಹಲ ಮೂಡಿದೆ.
ಬೆಂಗಳೂರು, ಮಾ.23: ಕರ್ನಾಟಕದಲ್ಲಿ ವಾಣಿಜ್ಯ ಸಿಲಿಂಡರ್ಗಳ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಕಚೇರಿಯಲ್ಲಿ ಸಚಿವ ಕೆ.ಎಚ್. ಮುನಿಯಪ್ಪ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. IOC, HP, GAIL ಮತ್ತು ಭಾರತ್ ಪೆಟ್ರೋಲಿಯಂ ಕಂಪನಿಗಳ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಹೆಚ್ಚುವರಿ 20% ಸಿಲಿಂಡರ್ಗಳನ್ನು ಪೂರೈಸಲು ಒಪ್ಪಿಗೆ ನೀಡಿದೆ ಎಂದು ಸಚಿವ ಮುನಿಯಪ್ಪ ತಿಳಿಸಿದ್ದಾರೆ. ಆದರೆ, ಬ್ಲಾಕ್ನಲ್ಲಿ ಮಾರಾಟ ಮಾಡುವುದನ್ನು ಹಾಗೂ ಅಧಿಕೃತವಲ್ಲದ ಮಾರುಕಟ್ಟೆಗೆ ಸಿಲಿಂಡರ್ಗಳು ಹೋಗುವುದನ್ನು ತಡೆಯಲು ಕೇಂದ್ರವು ನಿರ್ಣಯ ಕೈಗೊಂಡಿದೆ. ಅದರಂತೆ, ಎಲ್ಲಾ ವಾಣಿಜ್ಯ ಬಳಕೆದಾರರು, ಮುಖ್ಯವಾಗಿ ಹೋಟೆಲ್ಗಳು, ಒಂದು ವಾರದೊಳಗೆ GAIL ಕಂಪನಿಯೊಂದಿಗೆ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ನೋಂದಣಿ ಇಲ್ಲದಿದ್ದರೆ ಸಿಲಿಂಡರ್ ವಿತರಣೆ ಕಷ್ಟವಾಗಲಿದೆ. ಈ ಕ್ರಮದಿಂದ ಕಪ್ಪು ಮಾರುಕಟ್ಟೆಯನ್ನು ತಡೆಯಬಹುದು ಮತ್ತು ಮುಂದಿನ ದಿನಗಳಲ್ಲಿ GAIL ಪೈಪ್ಲೈನ್ ಮೂಲಕ ಹೆಚ್ಚಿನ ಪೂರೈಕೆಗೆ ಅವಕಾಶವಾಗಲಿದೆ. ಈ ಹೆಚ್ಚುವರಿ ಪೂರೈಕೆಯು ರಾಜ್ಯದಲ್ಲಿ ವಾಣಿಜ್ಯ ಬಳಕೆದಾರರ ಬೇಡಿಕೆಯನ್ನು ಪೂರೈಸಲು ಸಹಾಯಕವಾಗಲಿದೆ. ಸದ್ಯಕ್ಕೆ, ರಾಜ್ಯದಲ್ಲಿ ಸುಮಾರು 15,000 ರಿಂದ 16,000 ವಾಣಿಜ್ಯ ಸಿಲಿಂಡರ್ಗಳ ಬೇಡಿಕೆ ಇದೆ ಎಂದು ಅಂದಾಜಿಸಲಾಗಿದೆ.
ನವದೆಹಲಿ, ಮಾರ್ಚ್ 23: ಅಮೆರಿಕನ್ ಡಾಲರ್ ಎದುರು ಭಾರತದ ಕರೆನ್ಸಿಯಾದ ರುಪಾಯಿಯ ದುರ್ಬಲ ಸಾಧನೆ (Dollar vs Rupee) ಮುಂದುವರಿದಿದೆ. ಡಾಲರ್ಗೆ ರುಪಾಯಿ ಮೌಲ್ಯ 94 ರು ಮಟ್ಟಕ್ಕಿಂತ ಕೆಳಗೆ ಕುಸಿದಿದೆ. ಈ ಮಟ್ಟಕ್ಕೆ ರುಪಾಯಿ ಇಳಿದ್ದು ಇತಿಹಾಸದಲ್ಲಿ ಇದೇ ಪ್ರಥಮ. ಇವತ್ತು ಸೋಮವಾರ (ಮಾ. 23) ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರುಪಾಯಿ 93.83ರಲ್ಲಿ ಆರಂಭಗೊಂಡಿತು. ನಂತರದ ವಹಿವಾಟಿನಲ್ಲಿ ಅದು 94ರ ಮಟ್ಟ ದಾಟಿ ಹೋಯಿತು.
ರುಪಾಯಿ ಮೌಲ್ಯ ಕುಸಿತಕ್ಕೆ ಏನು ಕಾರಣಗಳು?
ಕಚ್ಛಾ ತೈಲ ಬೆಲೆಗಳು ಸತತವಾಗಿ ಹೆಚ್ಚಿನ ಮಟ್ಟದಲ್ಲಿ ಇರುವುದು ಭಾರತದ ಆಮದು ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಿದೆ. ಆಮದು ಹೆಚ್ಚಾದಾಗ ಡಾಲರ್ಗೆ ಬೇಡಿಕೆ ಹೆಚ್ಚುತ್ತದೆ. ಪರಿಣಾಮವಾಗಿ ಡಾಲರ್ ಎದುರು ರುಪಾಯಿ ಮೌಲ್ಯ ಸಹಜವಾಗಿ ಕುಂದಿದೆ.
ರುಪಾಯಿ ಮೌಲ್ಯ ಕುಸಿತಕ್ಕೆ ಅಮೆರಿಕನ್ ಡಾಲರ್ ಪ್ರಬಲಗೊಂಡಿರುವುದಷ್ಟೇ ಅಲ್ಲ, ಇನ್ನೂ ಕೆಲ ಕಾರಣಗಳಿವೆ. ಭಾರತೀಯ ಮಾರುಕಟ್ಟೆಗಳಿಂದ ವಿದೇಶೀ ಹಣದ ಹೊರಹರಿವು ಸತತವಾಗಿ ನಡೆಯುತ್ತಿದೆ. ಹಾಗೆಯೇ, ಬಾಂಡ್ ಯೀಲ್ಡ್ಗಳೂ ಕೂಡ ಹೆಚ್ಚಿನ ಮಟ್ಟದಲ್ಲಿವೆ. ಈ ಅಂಶಗಳು ರುಪಾಯಿ ಮೇಲೆ ಒತ್ತಡ ಹಾಕಿವೆ ಎಂಬುದು ತಜ್ಞರ ಅನಿಸಿಕೆ.
ವಿದೇಶೀ ಪೋರ್ಟ್ಫೋಲಿಯೋ ಹೂಡಿಕೆದಾರರು ಅಥವಾ ಎಫ್ಪಿಐಗಳು ಭಾರತದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗಿದ್ದ ಷೇರುಗಳು, ಬಾಂಡ್ಗಳು ಇತ್ಯಾದಿಯನ್ನು ಮಾರುತ್ತಿರುವುದು ಹೆಚ್ಚಿದೆ. ಹೀಗೆ ಮಾರುವಾಗ ರುಪಾಯಿಯನ್ನು ಡಾಲರ್ಗಳಾಗಿ ಪರಿವರ್ತಿಸುತ್ತಾರೆ. ಹೀಗಾಗಿ, ಅಮೆರಿಕನ್ ಡಾಲರ್ಗೆ ಬೇಡಿಕೆ ಹೆಚ್ಚಿ, ರುಪಾಯಿ ಮೌಲ್ಯ ಕುಸಿಯಲು ಕಾರಣವಾಗುತ್ತದೆ.
ಜಾಗತಿಕವಾಗಿ ಅನಿಶ್ಚಿತ ಪರಿಸ್ಥಿತಿ ಇದ್ದಾಗ ಹೂಡಿಕೆದಾರರು ಎಚ್ಚರಿಕೆ ವಹಿಸುತ್ತಾರೆ. ಇಂಥ ಸಂದರ್ಭಗಳಲ್ಲಿ ರುಪಾಯಿಯಂತಹ ಕರೆನ್ಸಿಗಳ ಬದಲು ಡಾಲರ್ ಅನ್ನು ಇಟ್ಟುಕೊಳ್ಳುವುದುಂಟು. ಇದು ಡಾಲರ್ಗಿರುವ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಬೆಂಗಳೂರು, ಮಾರ್ಚ್ 23: ಬೆಂಗಳೂರು ನಗರದ ಸೂರ್ಯ ಮ್ಯಾನೇಜ್ಮೆಂಟ್ ಸರ್ವಿಸ್ ಸಂಸ್ಥೆಯ ಮಾಲೀಕ ರಾಮಾಂಜಿ ಎಂಬಾತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಇತರ ಮಹಿಳೆಯರಿಗೆ ಮದುವೆಯಾಗುವ ನೆಪದಲ್ಲಿ ವಂಚಿಸಿರುವ ಆರೋಪದ ಮೇಲೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 38 ವರ್ಷದ ರಾಮಾಂಜಿ ಐವರು ಹೆಣ್ಣುಮಕ್ಕಳಿಗೆ ಮೋಸ ಮಾಡಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ.
ಪತಿ ಕಳೆದುಕೊಂಡವರು, ಪತಿಯಿಂದ ವಿಚ್ಛೇದನ ಪಡೆದು ದೂರವಾದವರು ಅಥವಾ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಹಿಳೆಯರನ್ನು ಈತ ಬಲೆಗೆ ಕೆಡವುತ್ತಿದ್ದ ಎನ್ನಲಾಗಿದೆ. ಮದುವೆಯ ಭರವಸೆ ನೀಡಿ ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ನಂತರ ಹಣ ಮತ್ತು ಚಿನ್ನಾಭರಣಗಳನ್ನು ಪಡೆದು ಮೋಸ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈತ ಹೌಸ್ ಕೀಪಿಂಗ್ ಮತ್ತು ಸೆಕ್ಯೂರಿಟಿ ಸೇವೆಗಳನ್ನು ಒದಗಿಸುತ್ತಿದ್ದ ಸಂಸ್ಥೆಯ ಮುಖ್ಯಸ್ಥನಾಗಿದ್ದು, 60ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದ. ಪ್ರಸ್ತುತ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್: ದಿ ರಿವೆಂಜ್’ ಚಿತ್ರವು ಪ್ರಸ್ತುತ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಕೇವಲ ನಾಲ್ಕು ದಿನಗಳಲ್ಲಿ, ಚಿತ್ರವು 400 ಕೋಟಿ ರೂ.ಗಳನ್ನು ದಾಟಿದೆ. ಚಿತ್ರದಲ್ಲಿನ ರಣವೀರ್ ಸಿಂಗ್ ಅವರ ಅಭಿನಯವನ್ನು ಹೆಚ್ಚು ಪ್ರಶಂಸಿಸಲಾಗುತ್ತಿದೆ. ಅಭಿಮಾನಿಗಳಿಂದ ಹಿಡಿದು ಸೆಲೆಬ್ರಿಟಿಗಳವರೆಗೆ, ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಅವರಿಗಾಗಿ ಪೋಸ್ಟ್ಗಳನ್ನು ಬರೆದಿದ್ದಾರೆ. ಏತನ್ಮಧ್ಯೆ, ರಣವೀರ್ ಅವರ ಪತ್ನಿ ಮತ್ತು ನಟಿ ದೀಪಿಕಾ ಪಡುಕೋಣೆ ‘ಧುರಂಧರ್ 2’ ಯಶಸ್ಸಿನ ಬಗ್ಗೆ ಯಾವುದೇ ಕಾಮೆಂಟ್ ಮಾಡದಿದ್ದಾಗ ಕೆಲವು ಅಭಿಮಾನಿಗಳು ಅಸಮಾಧಾನಗೊಂಡರು. ಕೆಲವರು ಇದಕ್ಕಾಗಿ ಅವರನ್ನು ಟ್ರೋಲ್ ಕೂಡ ಮಾಡಿದರು. ಇದು ಮಾತ್ರವಲ್ಲದೆ, ದೀಪಿಕಾ ಮತ್ತು ರಣವೀರ್ ನಡುವೆ ಯಾವುದೂ ಸರಿ ಇಲ್ಲ ಎಂಬ ಚರ್ಚೆಗಳೂ ನಡೆದವು. ಆದರೆ ಈಗ ಈ ಎಲ್ಲಾ ಚರ್ಚೆಗಳು ಕೊನೆಗೊಂಡಿವೆ. ಏಕೆಂದರೆ ದೀಪಿಕಾ ಮತ್ತು ರಣವೀರ್ ಇತ್ತೀಚೆಗೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಮುಂಬೈನ ಸಾಮಾನ್ಯ ರೆಸ್ಟೋರೆಂಟ್ನಲ್ಲಿ ಇವರಿಬ್ಬರು ಊಟದ ಡೇಟ್ಗೆ ಹೋಗಿದ್ದರು. ಅವರು ರೆಸ್ಟೋರೆಂಟ್ನಿಂದ ಹೊರಬರುತ್ತಿರುವ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವರ್ಲಿಯಲ್ಲಿ ಸೀಫುಡ್ ರೆಸ್ಟೋರೆಂಟ್ ಇದೆ ಮತ್ತು ಅದರ ಹೆಸರು ‘ಮಸ್ಲಿ’. ದೀಪಿಕಾಗೆ ಮೀನು ತುಂಬಾ ಇಷ್ಟ. ಹಾಗಾಗಿ, ‘ಧುರಂಧರ್ 2’ ಯಶಸ್ಸನ್ನು ಆಚರಿಸಲು, ಇಬ್ಬರೂ ತಮ್ಮ ನೆಚ್ಚಿನ ರೆಸ್ಟೋರೆಂಟ್ನಲ್ಲಿ ಊಟ ಮಾಡಲು ಹೋದರು. ಅಲ್ಲಿ ಇಬ್ಬರೂ ಮೀನನ್ನು ಸವಿದರು.
ಊಟದ ಡೇಟ್ ನಂತರ ಇಬ್ಬರೂ ರೆಸ್ಟೋರೆಂಟ್ನಿಂದ ಹೊರಬಂದಾಗ, ಅಭಿಮಾನಿಗಳು ಅಲ್ಲಿ ಜಮಾಯಿಸಿದ್ದರು. ಮೊದಲು, ದೀಪಿಕಾ ಹೊರಬಂದು ತಮ್ಮ ಕಾರಿನಲ್ಲಿ ಕುಳಿತರು. ಅವರ ಮುಖದಲ್ಲಿ ಸಂತೋಷ ಸ್ಪಷ್ಟವಾಗಿ ಗೋಚರಿಸಿತು. ನಂತರ ರಣವೀರ್ ಅಭಿಮಾನಿಗಳನ್ನು ಸ್ವಾಗತಿಸಲು ಮುಂದೆ ಬಂದರು. ರೆಸ್ಟೋರೆಂಟ್ ಹೊರಗೆ ಜಮಾಯಿಸಿದ್ದ ಅಭಿಮಾನಿಗಳು ರಣವೀರ್ ಮುಂದೆ ‘ಬಬ್ಬರ್ ಶೇರ್’ ಎಂದು ಘೋಷಣೆ ಕೂಗಿದರು. ಅವರೊಂದಿಗೆ ಕೈಕುಲುಕಿದ ನಂತರ, ಅವರು ಕೂಡ ಕಾರು ಹತ್ತಿದರು.
ಈ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಇದಕ್ಕೆ ವಿವಿಧ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ‘ನನಗೆ ಈ ಇಬ್ಬರ ಸರಳತೆ ತುಂಬಾ ಇಷ್ಟವಾಯಿತು’ ಎಂದು ಒಬ್ಬರು ಬರೆದಿದ್ದಾರೆ. ‘ರಣವೀರ್ ಬಗ್ಗೆ ದೀಪಿಕಾ ತುಂಬಾ ಹೆಮ್ಮೆಪಡುತ್ತಾರೆ, ಅವರ ಮುಖದಲ್ಲಿನ ನಗುವೇ ಇದಕ್ಕೆ ಸ್ಪಷ್ಟವಾಗಿದೆ’ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. ‘ಧುರಂಧರ್ 2’ ಬಗ್ಗೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳಿಂದ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ಅಲ್ಲು ಅರ್ಜುನ್, ಆಲಿಯಾ ಭಟ್, ಮಹೇಶ್ ಬಾಬು, ರಾಮ್ ಚರಣ್, ರಾಮ್ ಗೋಪಾಲ್ ವರ್ಮಾ, ಅರ್ಜುನ್ ಕಪೂರ್, ಆಯುಷ್ಮಾನ್ ಖುರಾನಾ, ರಾಜ್ಕುಮಾರ್ ರಾವ್ ಅವರಂತಹ ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ಗಳನ್ನು ಬರೆದಿದ್ದಾರೆ.