Guru Sanchara 2026: ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು – Kannada News | Jupiter Transit 2026: Auspicious Outcomes for Gemini or Mithuna Rashi

ಜ್ಯೋತಿಷ್ಯದಲ್ಲಿ ಗುರು ಗ್ರಹದ ಸಂಚಾರವು ಅತ್ಯಂತ ಮಹತ್ವದ್ದಾಗಿದೆ. ಈ ವರ್ಷ ಗುರುವು ಜೂನ್‌ನಲ್ಲಿ ಸ್ಥಾನ ಬದಲಾಯಿಸುತ್ತಿದ್ದು, ಮಿಥುನ ರಾಶಿಯವರಿಗೆ ಗುರು ಸಂಚಾರ ಹೇಗಿರಲಿದೆ ಎಂಬುದನ್ನು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ. ಮಿಥುನ ರಾಶಿಯವರಿಗೆ 2026ರ ಗುರು ಸಂಚಾರವು ಅನೇಕ ಶುಭ ಫಲಗಳನ್ನು ತರಲಿದೆ. ಗುರು ಎರಡನೇ ಮನೆಗೆ ಪ್ರವೇಶಿಸುವುದರಿಂದ ಧನಸ್ಥಾನ, ವಾಕ್ಸ್ಥಾನ ಮತ್ತು ಕುಟುಂಬ ಸ್ಥಾನಗಳಿಗೆ ಬಲ ಸಿಗಲಿದೆ. ಆಕಸ್ಮಿಕ ಧನಯೋಗ, ಹಳೆಯ ಬಾಕಿ ವಸೂಲಿ, ಆರ್ಥಿಕ ಸ್ಥಿರತೆ, ಆಸ್ತಿ ಸಂಪಾದನೆ ಮತ್ತು ಹೂಡಿಕೆಯಿಂದ ಲಾಭಗಳ ನಿರೀಕ್ಷೆ ಇದೆ. ವೃತ್ತಿಯಲ್ಲಿ ವೇತನ ವೃದ್ಧಿ, ಬಡ್ತಿ ಮತ್ತು ಬೋನಸ್ ಸಿಗುವ ಸಾಧ್ಯತೆಗಳಿದ್ದು, ಉನ್ನತ ಶಿಕ್ಷಣಾಕಾಂಕ್ಷಿಗಳಿಗೆ ಉತ್ತಮ ಅವಕಾಶಗಳು ದೊರೆಯಲಿವೆ.

ಮಂಗಳ ಕಾರ್ಯಗಳು, ಮನೆ ಕಟ್ಟುವ ಯೋಗ ಮತ್ತು ವಿದೇಶ ಪ್ರಯಾಣದಂತಹ ಶುಭ ಸನ್ನಿವೇಶಗಳು ಒದಗಿ ಬರುತ್ತವೆ. ಮಾನಸಿಕ ಶಾಂತಿ ಹೆಚ್ಚಲಿದ್ದು, ಮಾತಿನಿಂದ ಅದೃಷ್ಟ ಕೂಡಿಬರಲಿದೆ. ಆರೋಗ್ಯ ಸುಧಾರಿಸುತ್ತದೆ ಮತ್ತು ಹಳೆಯ ಕಾಯಿಲೆಗಳಿಂದ ಮುಕ್ತಿ ಸಿಗುತ್ತದೆ. ರೈತರಿಗೆ ಭೂಮಿ ಕಲಹ ನಿವಾರಣೆ, ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಸಣ್ಣಪುಟ್ಟ ವಾಹನ ಕಂಟಕಗಳ ಬಗ್ಗೆ ಎಚ್ಚರಿಕೆ ಇರಲಿ. ಮಕ್ಕಳನ್ನು ನಿಂದಿಸುವುದನ್ನು ಹಾಗೂ ಪ್ರೀತಿ-ಪ್ರೇಮ ವ್ಯವಹಾರಗಳಲ್ಲಿ ಸುಳ್ಳು ಹೇಳುವುದನ್ನು ತಪ್ಪಿಸಿ. ಗುರು ಅನುಗ್ರಹಕ್ಕಾಗಿ ದಾನ, ಗುರುಗಳಿಗೆ ಗೌರವ ಮತ್ತು ನಿತ್ಯ ಮಂತ್ರ ಜಪ (ಓಂ ಗ್ರಾಂ ಗ್ರೀಂ ಗ್ರೌಂ ಸಹ ಗುರುವೇ ನಮಃ) ಅಭ್ಯಾಸ ಮಾಡಿ. ನಿಮ್ಮ ಪರ್ಸ್‌ನಲ್ಲಿ ಎರಡು ಅರಿಶಿನ ಕೊಂಬು ಇಟ್ಟುಕೊಳ್ಳುವುದು ಶುಭ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

International Tea Day 2026: ಚಹಾದ ಹಿತಮಿತ ಸೇವನೆಯಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ ನೋಡಿ – Kannada News | International Tea Day 2026: Health benefits of drinking tea

ಅಂತಾರಾಷ್ಟ್ರೀಯ ಚಹಾ ದಿನImage Credit source: vecteezy

ಚಹಾ (tea) ಎಂದರೆ ಬಹುತೇಕರಿಗೆ ಅಮೃತವಿದ್ದಂತೆ. ಈ ಟೀ ಇಲ್ಲದೆ ಅವರ ದಿನವೇ ಆರಂಭವಾಗೋದಿಲ್ಲ. ಒಂದು ಕಪ್‌ ಚಹಾ ಕುಡಿಯುವುದರಿಂದ ನಮ್ಮ ಮನಸ್ಸು ಮತ್ತು ದೇಹ ಉಲ್ಲಾಸಗೊಳ್ಳುತ್ತದೆ. ಅದಕ್ಕಾಗಿಯೇ ಹೆಚ್ಚಿನವರು ಪ್ರತಿನಿತ್ಯ ಟೀ ಕುಡಿಯುತ್ತಾರೆ. ಈ ಟೀ ಮನಸ್ಸು ದೇಹವನ್ನು ರಿಫ್ರೆಶ್‌ ಮಾಡೋದು ಮಾತ್ರವಲ್ಲ, ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನೂ ಹೊಂದಿವೆ. ಹೀಗೆ ದೀರ್ಘ ಇತಿಹಾಸವನ್ನು ಹೊಂದಿರುವ ಹಾಗೂ ವಿವಿಧ ದೇಶಗಳ ಸಂಸ್ಕೃತಿಗಳಲ್ಲಿ ಆಳವಾಗಿ ಬೇರೂರಿರುವ  ಚಹಾದ ಇತಿಹಾಸ ಸಂಸ್ಕೃತಿ ಮತ್ತು ಅದರ ಆರ್ಥಿಕ ಮಹತ್ವ ಹಾಗೂ ಚಹಾದ ಆರೋಗ್ಯ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಸಲು ಪ್ರತಿವರ್ಷ ಮೇ 21 ರಂದು ಅಂತಾರಾಷ್ಟ್ರೀಯ ಚಹಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ಅಂತಾರಾಷ್ಟ್ರೀಯ ಚಹಾ ದಿನದ ಇತಿಹಾಸವೇನು?

ಅಂತಾರಾಷ್ಟ್ರೀಯ ಚಹಾ ದಿನದ ಮೊದಲ ಆಚರಣೆಯು 2005 ರಲ್ಲಿ ಪ್ರಾರಂಭವಾಯಿತು, ಇದನ್ನು ಏಷ್ಯಾ ಮತ್ತು ಆಫ್ರಿಕಾದ ಕಾರ್ಮಿಕ ಸಂಘಗಳು, ಸಣ್ಣ ಚಹಾ ಉತ್ಪಾದಕರು ಮತ್ತು ಸಾಮಾಜಿಕ ಸಂಸ್ಥೆಗಳು ಬೆಂಬಲಿಸಿದವು. ಚಹಾ ಉತ್ಪಾದಕರಿಗೆ ನ್ಯಾಯಯುತ ಬೆಲೆ ಮತ್ತು ಕಾರ್ಮಿಕರ ಜೀವನಮಟ್ಟ ಮತ್ತು ವೇತನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಅದರ ಗುರಿಯಾಗಿತ್ತು. ನಂತರ 2015 ರಲ್ಲಿ, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ವಿಶ್ವಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಚಹಾ ದಿನವನ್ನು ಆಚರಿಸಲು ಅಧಿಕೃತವಾಗಿ ಪ್ರಸ್ತಾಪಿಸಿತು. ಆ ಬಳಿಕ ಅಂತರರಾಷ್ಟ್ರೀಯ ಚಹಾ ದಿನವನ್ನು ಮೊದಲ ಬಾರಿಗೆ ಮೇ 21, 2020 ರಂದು ಆಚರಿಸಲಾಯಿತು. ಅಂದಿನಿಂದ ಈ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ.

ಅಂತಾರಾಷ್ಟ್ರೀಯ ಚಹಾ ದಿನವನ್ನು ಮೇ 21 ರಂದೇ ಏಕೆ ಆಚರಿಸಲಾಗುತ್ತದೆ?

ವಿಶ್ವಸಂಸ್ಥೆಯು ಪ್ರತಿ ವರ್ಷ ಮೇ 21 ರಂದು ಅಂತಾರಾಷ್ಟ್ರೀಯ ಚಹಾ ದಿನವನ್ನು ಆಚರಿಸುತ್ತದೆ. ವಾಸ್ತವವಾಗಿ, ಹೆಚ್ಚಿನ ದೇಶಗಳಲ್ಲಿ ಮೇ ತಿಂಗಳಲ್ಲಿ ಚಹಾ ಉತ್ಪಾದನೆ ಪ್ರಾರಂಭವಾಗುವುದರಿಂದ ಮೇ 21 ರಂದು ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಚಹಾ ದಿನದ ಮಹತ್ವವೇನು?

  • ಚಹಾದ ಆರ್ಥಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಜಗತ್ತಿಗೆ ಎತ್ತಿ ತೋರಿಸುವುದು ಮತ್ತು ಚಹಾ ಉದ್ಯಮದಲ್ಲಿ ತೊಡಗಿರುವ ರೈತರು ಮತ್ತು ಕಾರ್ಮಿಕರ ಸ್ಥಿತಿಗತಿಗಳನ್ನು ಸುಧಾರಿಸುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶವಾಗಿದೆ.
  • ಈ ದಿನ ಸುಸ್ಥಿರ ಚಹಾ ಉತ್ಪಾದನೆ ಮತ್ತು ನ್ಯಾಯಯುತ ವ್ಯಾಪಾರ ಪದ್ಧತಿಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
  • ಚಹಾವು ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಚಹಾ ಸೇವನೆಯ ಈ ಸಂಭಾವ್ಯ ಆರೋಗ್ಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಅಂತರರಾಷ್ಟ್ರೀಯ ಚಹಾ ದಿನವನ್ನು ಸಹ ಆಚರಿಸಲಾಗುತ್ತದೆ.

ಇದನ್ನೂ ಓದಿ: ವಿಶ್ವ ದೂರಸಂಪರ್ಕ ದಿನದ ಇತಿಹಾಸ, ಮಹತ್ವವನ್ನು ತಿಳಿದುಕೊಳ್ಳಿ

ಚಹಾ ಸೇವನೆಯಿಂದ ಲಭಿಸುವ ಆರೋಗ್ಯ ಪ್ರಯೋಜನಗಳೇನು?

  • ಗ್ರೀನ್‌ ಟೀಯಲ್ಲಿ ಆಂಟಿ ಆಕ್ಸಿಡೆಂಟ್‌ ಪೋಷಕಾಂಶಗಳಿದ್ದು, ಇದು ಆಕ್ಸಿಡೇಟಿವ್‌ ಒತ್ತಡದಿಂದ ರಕ್ಷಿಸುತ್ತದೆ. ಗ್ರೀನ್‌ ಟೀ ಕುಡಿಯುವುದರಿಂದ ಕೆಲವು ರೀತಿಯ ಕ್ಯಾನ್ಸರ್‌ ಬರುವುದನ್ನು ತಡೆಯಬಹುದು ಎಂದು ಅಧ್ಯಯನಗಳು ಸಾಬೀತುಪಡಿಸಿವೆ.
  • ತುಳಸಿ ಟೀ ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅಲ್ಲದೆ ಇದು ಇದು ಶೀತ, ಗಂಟಲು ನೋವು ಸಮಸ್ಯೆಯನ್ನು ನಿವಾರಿಸಲು ಸಹಕಾರಿಯಾಗಿದೆ.
  • ದಿನವಿಡೀ ಕೆಲಸ ಮಾಡಿ ದಣಿದಿದ್ದರೆ ಲ್ಯಾವೆಂಡರ್‌ ಟೀ ನಿಮಗೆ ಶಕ್ತಿಯನ್ನು ನೀಡುತ್ತದೆ. ನೀವು ಚೆನ್ನಾಗಿ ನಿದ್ದೆ ಮಾಡಲು ಈ ಟೀ ಸಹಕಾರಿಯಾಗಿದೆ. ಇದಲ್ಲದೆ ಇದು ಚರ್ಮದ ಆರೋಗ್ಯಕ್ಕೂ ಒಳ್ಳೆಯದು.
  • ಟೀಯಲ್ಲಿ ಕ್ಯಾಟೆಚಿನ್‌ ಮತ್ತು ಫ್ಲೇವನಾಯ್ಡ್‌ಗಳಂತಹ ಉತ್ಕರ್ಷಣ ನಿರೋಧಕಗಳಿದ್ದು, ಈ ಸಂಯುಕ್ತಗಳು ಆಕ್ಸಿಡೇಟಿವ್‌ ಒತ್ತಡವನ್ನು ನಿವಾರಿಸಲು ಸಹಕಾರಿಯಾಗಿದೆ.
  • ಶುಂಠಿ, ಪುದೀನಾ ಮತ್ತು ಕ್ಯಾಮೊಮೈಲ್‌ನಂತಹ ಗಿಡಮೂಲಿಕೆ ಚಹಾಗಳು ಅಜೀರ್ಣ, ಹೊಟ್ಟೆ ಉಬ್ಬರ ಮತ್ತು ವಾಕರಿಕೆಯಂತಹ ಹೊಟ್ಟೆ ಸಂಬಂಧಿ ಕಾಯಿಲೆಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿ.
  • ಟೀ ಕುಡಿಯುವುದರಿಂದ ದೇಹಕ್ಕೆ ವಿಶ್ರಾಂತಿ ಲಭಿಸುತ್ತದೆ. ಅಲ್ಲದೆ ಟೆನ್ಶನ್‌ ಆದಾಗ ಒಂದು ಕಪ್‌ ಟೀ ಕುಡಿದರೆ ಮನಸ್ಸು ನಿರಾಳವಾಗುತ್ತದೆ. ಒತ್ತಡ ಕಡಿಮೆಯಾಗುತ್ತದೆ.
  • ಚಹಾವು ಫ್ಲೋರೈಡ್‌ ಮತ್ತು ಟ್ಯಾನಿನ್‌ಗಳನ್ನು ಹೊಂದಿರುತ್ತದೆ. ಇದು ಬಾಯಿಯ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
  • ವಿಶೇಷವಾಗಿ ಗಿಡಮೂಲಿಕೆ ಚಹಾಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.
  • ಚಹಾದಲ್ಲಿರುವ ಉತ್ಕರ್ಷಣ ನಿರೋಧಕ ಅಂಶಗಳು ಚರ್ಮದ ಆರೋಗ್ಯವನ್ನು ಉತ್ತೇಜಿಸುತ್ತದೆ.
  • ಚಹಾವು ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದ್ದು, ಇವು ಹೃದ್ರೋಗ ಬಾರದಂತೆ ತಡೆಯುತ್ತವೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ.
  • ಚಹಾದಲ್ಲಿನ ಕೆಲವು ಸಂಯುಕ್ತಗಳಾದ ಕ್ಯಾಟೆಚಿನ್‌ಗಳು ಮತ್ತು ಕೆಫೀನ್‌ ಅಂಶವು ಚಯಾಪಚಯವನ್ನು ಹೆಚ್ಚಿಸಲು ಮತ್ತು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.
  • ಚಹಾವು ಚಣ್ಣ ಪ್ರಮಾಣದಲ್ಲಿ ಕೆಫೀನ್‌ ಅಂಶವನ್ನು ಹೊಂದಿದ್ದು, ಇದು ಗಮನ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ಹೆಜ್ಜೆ ಇಟ್ಟ ಕೆವಿಎನ್ ಸಂಸ್ಥೆ; ಚಿರಂಜೀವಿ ಜೊತೆ ಬಿಗ್ ಬಜೆಟ್ ಸಿನಿಮಾ – Kannada News | KVN Productions Backs Chiranjeevi’s Mega 158: New Big Budget Action Film

‘ಟಾಕ್ಸಿಕ್’, ‘ಕೆಡಿ’, (KD Movie) ‘ಜನ ನಾಯಗನ್’ ರೀತಿಯ ಬಿಗ್ ಬಜೆಟ್ ಸಿನಿಮಾ ನಿರ್ಮಿಸೋ ಕೆವಿಎನ್ ಸಂಸ್ಥೆ ಈಗ ಹೊಸ ಹೆಜ್ಜೆ ಇಟ್ಟಿದೆ. ಚಿರಂಜೀವಿ ಅವರ 158ನೇ ಸಿನಿಮಾಗೆ ಈ ಸಂಸ್ಥೆ ಬಂಡವಾಳ ಹೂಡುತ್ತಿದೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಮೆಗಾ 158’ ಎಂದು ಹೆಸರಿಡಲಾಗಿದೆ. ಸಿನಿಮಾದ ಮುಹೂರ್ತ ಇಂದು (ಮೇ 21) ಅದ್ದೂರಿಯಾಗಿ ನೆರವೇರಿದೆ. ಆಂಧ್ರ ಪ್ರದೇಶದ ಉಪಮುಖ್ಯಮಂಯತ್ರಿ ಪವನ್ ಕಲ್ಯಾಣ್, ಚಿರಂಜೀವಿ ಸಹೋದರ, ನಟ ಪವನ್ ಕಲ್ಯಾಣ್ ಅವರು ಸಿನಿಮಾಗೆ ಕ್ಲ್ಯಾಪ್ ಮಾಡಿದ್ದಾರೆ.

ಕೆವಿಎನ್ ಸಂಸ್ಥೆ ಈಗಾಗಲೇ ಮೂರು ಸಿನಿಮಾಗಳಿಂದ ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಈ ಪೈಕಿ ‘ಕೆಡಿ’ ಸಿನಿಮಾ ರಿಲೀಸ್ ಆಗಿದೆ. ‘ಟಾಕ್ಸಿಕ್’ ಹಾಗೂ ‘ಜನ ನಾಯಗನ್’ ತೆರೆಗೆ ಬರೋ ಬಗ್ಗೆ ಸದ್ಯಕ್ಕೆ ಯಾವುದೇ ಅಪ್​​ಡೇಟ್​ ಇಲ್ಲ. ಹೀಗಿರುವಾಗಲೇ ‘ಮೆಗಾ 158’ ಅನೌನ್ಸ್ ಆಗಿದೆ. ಈ ಹಿಂದೆ ‘ವಾಲ್ತೇರು ವೀರಯ್ಯ’ ಸಿನಿಮಾ ನೀಡಿದ್ದ ಬಾಬಿ ಕೊಲ್ಲಿ ಅವರೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿರಂಜೀವಿ ಹಾಗೂ ಬಾಬಿ ಕಾಂಬಿನೇಷನ್‌ನ ಎರಡನೇ ಸಿನಿಮಾ ಇದಾಗಿದೆ.

ಚಿತ್ರದ ಮುಹೂರ್ತ ಸಮಾರಂಭವು ಇಂದು ಮೇ ಅದ್ಧೂರಿಯಾಗಿ ನೆರವೇರಿದೆ. ಇದೊಂದು ಹೈ-ವೋಲ್ಟೇಜ್ ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾ ಎನ್ನಲಾಗಿದೆ. ಆಕ್ಷನ್ ಪಾತ್ರಕ್ಕಾಗಿ ಚಿರಂಜೀವಿ ಅವರು ಜಿಮ್‌ನಲ್ಲಿ ಕಠಿಣ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಇತ್ತೀಚೆಗಷ್ಟೇ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಈ ಚಿತ್ರವು 2027ರ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಸೋಮವಾರವೂ ‘ಕೆಡಿ’ ಭರ್ಜರಿ ಕಲೆಕ್ಷನ್; ಕೆವಿಎನ್​​ಗೆ ಒಂದೇ ದಿನ ಡಬಲ್ ಧಮಾಕ

ಕೆವಿಎನ್ ಸಿನಿಮಾ ದೊಡ್ಡ ದೊಡ್ಡ ರಿಸ್ಕ್​​ಗಳನ್ನು ತೆಗೆದುಕೊಳ್ಳುತ್ತಿದೆ. ಸಿನಿಮಾ ಬಜೆಟ್​ ಬಗ್ಗೆ ಅವರು ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ. ‘ಕೆಡಿ’ ಹಾಗೂ ‘ಟಾಕ್ಸಿಕ್’ ರಿಲೀಸ್ ಆದರೆ, ನಿರ್ಮಾಪಕರು ಲಾಭ ಕಾಣಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಿಪ್ಪಾಣಿಯಲ್ಲಿ ಬಿಜೆಪಿ, ಕಾಂಗ್ರೆಸ್ ಕಿತ್ತಾಟ: ಶಾಸಕಿ ಶಶಿಕಲಾ ಜೊಲ್ಲೆಯಿದ್ದ ಕಾರ್ಯಮದಲ್ಲಿಯೇ ಗಲಾಟೆ – Kannada News | High Drama In Nippani: Congress BJP Workers Clash At Housing Event, MLA Shashikala Jolle Breaks Down

ನಿಪ್ಪಾಣಿಯಲ್ಲ ಬಿಜೆಪಿ, ಕಾಂಗ್ರೆಸ್ ಕಿತ್ತಾಟImage Credit source: Tv9 Kannada

ಬೆಂಗಳೂರು, ಮೇ 21: ನಿಪ್ಪಾಣಿ ಮತಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಿತ್ತಾಟ ನಡೆದಿದ್ದು, ಶಾಸಕಿ ಶಶಿಕಲಾ ಜೊಲ್ಲೆ ಕಾರ್ಯಕ್ರಮಕ್ಕೆ ನುಗ್ಗಿ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ನಡೆಸಿರುವ ಆರೋಪ ಕೇಳಿಬಂದಿದೆ. ನಿಪ್ಪಾಣಿ ತಾಲೂಕಿನ ಪಟ್ಟಣಕುಡಿ ಗ್ರಾಮದಲ್ಲಿ ನಡೆಯುತ್ತಿದ್ದ ಮನೆ ಹಂಚಿಕೆ ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಹಾಗೂ ಬೆಂಬಲಿಗರು ವಾಗ್ವಾದ ನಡೆಸಿದ್ದಾರೆ. ಪರಿಣಾಮ ಆಶ್ರಯ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಲಾಟರಿ ಮ‌ೂಲಕ 950 ಮನೆಗಳ ಹಂಚಿಕೆ ಕಾರ್ಯಕ್ರಮದಲ್ಲಿ ಗದ್ದಲ ಉಂಟಾಗಿದೆ.

ಆಶ್ರಯ ಕಮಿಟಿ ಅಧಿಕಾರಿಗಳು, ಸದಸ್ಯರ ಸಮ್ಮುಖದಲ್ಲಿ ಲಾಟರಿ ಮೂಲಕ ಮನೆಗಳ ವಿತರಣಾ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಈ ವೇಳೆ ಏಕಾ ಏಕಿ ಬೆಂಬಲಿಗರ ಜೊತೆಗೆ ಕಾರ್ಯಕ್ರಮಕ್ಕೆ ನುಗ್ಗಿದ ಲಕ್ಷ್ಮಣರಾವ್ ಚಿಂಗಳೆ, ಬೇಕಾದವರಿಗೆ ನೀವು ಮನೆಗಳನ್ನ ಹಂಚಲು ಮುಂದಾಗಿದ್ದೀರಿ. ಮನೆಗಳ ಹಂಚಿಕೆಯಲ್ಲಿ ತಾರತಮ್ಯ ನಡೆದಿದೆ ಎಂದು ಶಾಸಕಿಗೆ ಜೊಲ್ಲೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮಕ್ಕೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ‌ಯನ್ನ ಏಕೆ ಕರೆದಿಲ್ಲಾ ಎಂದು ಪ್ರಶ್ನಿಸಿದ್ದು, ಈ ವೇಳೆ ಶಾಸಕಿ ಜೊಲ್ಲೆ ಹಾಗೂ ಚಿಂಗಳೆ ನಡುವೆ ವಾಗ್ವಾದ ನಡೆದಿದೆ.

ಇದನ್ನೂ ಓದಿ: ಕಾಂಗ್ರೆಸ್​​ ‘ಪಟ್ಟದಾಟ’ಕ್ಕೆ ತೆರೆ ಯಾವಾಗ?; ಸಾಧ್ಯಾಸಾಧ್ಯತೆ ಬಗ್ಗೆ ‘ಕೈ; ಪಾಳಯದಲ್ಲೇ ಹೀಗೊಂದು ಚರ್ಚೆ

ಕಣ್ಣೀರು ಹಾಕಿದ ಶಶಿಕಲಾ ಜೊಲ್ಲೆ

ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆಯೂ ವಾಗ್ವಾದ ಶುರುವಾಗಿದ್ದು, ಕಾರ್ಯಕರ್ತರು ತಳ್ಳಾಡಿಕೊಂಡಿದ್ದಾರೆ. ವಾಗ್ವಾದ ತಾರಕ್ಕೆರುತ್ತಿದ್ದಂತೆ ಲಕ್ಷ್ಮಣರಾವ್ ಚಿಂಗಳೆಯನ್ನ ಪೋಲಿಸರು ಕರೆದುಕೊಂಡು ಹೋಗಿದ್ದು, ಗದ್ದಲ ಹಿನ್ನೆಲೆ ಮನೆಗಳ ಹಂಚಿಕೆ ಕಾರ್ಯಕ್ರಮವನ್ನು ಅಧಿಕಾರಿಗಳು ಮುಂದೂಡಿದ್ದಾರೆ. ಇದೇ ವೇಳೆ ಭಾವುಕರಾದ ಶಾಸಕಿ ಶಶಿಕಲಾ ಜೊಲ್ಲೆ ಭಾವುಕರಾಗಿ ಕಣ್ಣೀರು ಹಾಕಿದ ಪ್ರಸಂಗವೂ ನಡೆದಿದೆ. ಕಾರ್ಯಕ್ರಮ ರದ್ದಾದ ಬಳಿಕ ಮಹಿಳೆಯರ ಜೊತೆಗೆ ಮಾತನಾಡಿದ ಶಶಿಕಲಾ ಜೊಲ್ಲೆ, ಚಿಕ್ಕ ಮಕ್ಕಳ ಜೊತೆ ಮನೆ ಕನಸು ಕಟ್ಟಿಕೊಂಡು ನೀವು ಇಲ್ಲಿಗೆ ಬಂದಿದ್ದೀರಿ. ಆದರೆ ರಾಜಕೀಯ ಮಾಡಿ ಕಾರ್ಯಕ್ರಮವನ್ನ ಹಾಳು ಮಾಡಿದ್ದಾರೆ‌ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:00 am, Thu, 21 May 26

Source link

‘ಕರ್ಣ’ ಧಾರಾವಾಹಿ; ನೆರವೇರಿತು ಕರ್ಣ-ನಿಧಿ ಮದುವೆ – Kannada News | Karna Nidhi Wedding: Zee Kannada’s ‘Karna’ Serial Sees Major Twist

ಝೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಮತ್ತು ಕುತೂಹಲ ಕೆರಳಿಸಿರುವ ‘ಕರ್ಣ’ ಧಾರಾವಾಹಿಯಲ್ಲಿ ಕೊನೆಗೂ ವೀಕ್ಷಕರು ಬಹುದಿನಗಳಿಂದ ಕಾಯುತ್ತಿದ್ದ ಮಹಾ ತಿರುವು ಎದುರಾಗಿದೆ. ಕಥೆಯ ನಾಯಕ ಕರ್ಣ ಹಾಗೂ ನಿಧಿ ನಡುವಿನ ವಿವಾಹ ಮಹೋತ್ಸವವು ಹಿರಿಯರ ಸಮ್ಮುಖದಲ್ಲಿ ಅತ್ಯಂತ ನಾಟಕೀಯವಾಗಿ ಮತ್ತು ಯಶಸ್ವಿಯಾಗಿ ಸಂಪೂರ್ಣಗೊಂಡಿದೆ. ಈ ಮಹತ್ವದ ಬೆಳವಣಿಗೆಯು ಸೀರಿಯಲ್ ಪ್ರೇಕ್ಷಕರಲ್ಲಿ ಭಾರಿ ರೋಮಾಂಚನ ಉಂಟುಮಾಡಿದೆ.

ಈ ಹಿಂದೆ ಕಥೆಯಲ್ಲಿ ಕರ್ಣ ಮತ್ತು ನಿತ್ಯಾ ಮದುವೆ ನಡೆದಂತೆ ಬಿಂಬಿಸಲಾಗಿದ್ದರೂ, ಅದು ಕೇವಲ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ನಡೆದ ನಾಟಕವಾಗಿತ್ತೇ ಹೊರತು ಅಧಿಕೃತವಾಗಿರಲಿಲ್ಲ. ಕರ್ಣನ ನಿಜವಾದ ಪ್ರೀತಿ ನಿಧಿಯಾಗಿದ್ದರಿಂದ, ಇಬ್ಬರ ಮದುವೆ ಯಾವಾಗ ಆಗುತ್ತದೆ ಎಂಬ ತಳಮಳ ವೀಕ್ಷಕರಲ್ಲಿತ್ತು. ಈಗ ಆ ಎಲ್ಲಾ ಗೊಂದಲಗಳು ಹಾಗೂ ಅಡೆತಡೆಗಳಿಗೆ ಸಂಪೂರ್ಣವಾಗಿ ತೆರೆ ಬಿದ್ದಿದೆ. ವಿಶೇಷವೆಂದರೆ, ಸ್ವತಃ ನಿತ್ಯಾ ಸಮ್ಮುಖದಲ್ಲೇ ಕರ್ಣ ಮತ್ತು ನಿಧಿ ಇಬ್ಬರೂ ಹಸೆಮಣೆ ಏರಿ ಸಪ್ತಪದಿ ತುಳಿದಿದ್ದಾರೆ.

ಕರ್ಣ ತನ್ನ ಪ್ರೀತಿಯ ನಿಧಿಯ ಕೊರಳಿಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ ಅವಳನ್ನು ತನ್ನ ಅಧಿಕೃತ ಧರ್ಮಪತ್ನಿಯನ್ನಾಗಿ ಸ್ವೀಕರಿಸಿದ್ದಾನೆ. ಇಡೀ ಕುಟುಂಬ ಸಡಗರದಿಂದ ಈ ಮದುವೆಯಲ್ಲಿ ಭಾಗಿಯಾಗಿದೆ.

ಕರ್ಣ-ನಿಧಿ ಕಲ್ಯಾಣ’ದ ಈ ವಿಶೇಷ ಸಂಚಿಕೆಯು ಜೀ ಕನ್ನಡದಲ್ಲಿ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ಈ ಶುಭ ಮುಹೂರ್ತದ ಬಳಿಕ ಇವರ ದಾಂಪತ್ಯ ಜೀವನದಲ್ಲಿ ಯಾವೆಲ್ಲಾ ಹೊಸ ಸವಾಲುಗಳು ಎದುರಾಗಲಿವೆ ಮತ್ತು ಕಥೆ ಯಾವ ಹೊಸ ದಿಕ್ಕಿನಲ್ಲಿ ಸಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ: ನಿತ್ಯಾಗೆ ಗೊತ್ತಾಯ್ತ ಪ್ರೀತಿಯ ಸತ್ಯ; ಕರ್ಣ-ನಿಧಿ ವಿವಾಹ ಮಾಡಿಸಲು ಮುಂದಾದ ಸಹೋದರಿ

ರಮೇಶ್​​ಗೆ ಈಗಾಗಲೇ ಕರ್ಣ ಹಾಗೂ ನಿಧಿ, ನಿತ್ಯಾ ಮೇಲೆ ದ್ವೇಷ ಇದೆ. ಮಗನ ಯಶಸ್ಸನ್ನು ಅವನು ಎಂದಿಗೂ ಸಹಿಸೋದಿಲ್ಲ. ಕರ್ಣ ಬೀದಿಯಲ್ಲಿ ಸಿಕ್ಕ ಮಗ ಎಂದು ಅವನು ಭಾವಿಸಿದ್ದಾನೆ. ಆದರೆ, ಕರ್ಣನೇ ಅವನ ನಿಜವಾದ ಮಗ ಎಂಬ ವಿಷಯ ಇನ್ನೂ ಆತನಿಗೆ ತಿಳಿದಿಲ್ಲ. ಅದು ತಿಳಿದ ಬಳಿಕ ಕಥೆಗೆ ಮತ್ತಷ್ಟು ತಿರುವು ಎದುರಾಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಪಘಾತದಲ್ಲಿ ಕಾಲು ಹೋದರೂ ಸ್ಟ್ರೇಚರ್‌ನಲ್ಲೇ ಮಲಗಿ SSLC ಪರೀಕ್ಷೆ ಬರೆದು ಪಾಸ್ ಆದ ಕುಸುಮಾಗೆ ಶಾಸಕಿ ರೂಪಕಲಾ ಬಂಪರ್ ಗಿಫ್ಟ್! – Kannada News | Inspiring Kolar Girl Kusuma Overcomes Tragedy, Achieves SSLC Success

ಕುಸುಮಾಕ್ಕೆ ರೋಬೋಟಿಕ್ ಕಾಲುಗಳು ನೀಡಿದ ಶಾಸಕಿ

ಕೋಲಾರ, ಮೇ.21: ಸಂಕಲ್ಪ ಬಲವೊಂದಿದ್ದರೆ ಎಂತಹ ಕಠಿಣ ಪರಿಸ್ಥಿತಿಯನ್ನೂ ಗೆದ್ದು ಬರಬಹುದು ಎಂಬುದನ್ನು ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಿನ್ನನಾಗನಹಳ್ಳಿಯ ಹೆಣ್ಣುಮಗಳು ಕುಸುಮಾ ಇಡೀ ಸಮಾಜಕ್ಕೆ ಸಾಬೀತುಪಡಿಸಿದ್ದಾಳೆ. ರಸ್ತೆ ಅಪಘಾತವೊಂದರಲ್ಲಿ ತನ್ನ ಕಾಲನ್ನೇ ಕಳೆದುಕೊಂಡರೂ ಧೃತಿಗೆಡದ ಈಕೆ, ಇತ್ತೀಚೆಗಷ್ಟೇ ಪ್ರಕಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ (First Class) ತೇರ್ಗಡೆಯಾಗುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾಳೆ.

ಕೆಲವು ತಿಂಗಳ ಮುನ್ನ ನಡೆದ ಭೀಕರ ಅಪಘಾತದಲ್ಲಿ ಕುಸುಮಾ ತನ್ನ ಒಂದು ಕಾಲನ್ನು ಕಳೆದುಕೊಂಡಿದ್ದಳು. ವೈದ್ಯರು ಆಕೆಗೆ ಕಡ್ಡಾಯ ಚಿಕಿತ್ಸೆ ಮತ್ತು ಸಂಪೂರ್ಣ ವಿಶ್ರಾಂತಿ ಅಗತ್ಯ ಎಂದು ಸೂಚಿಸಿದ್ದರು. ಆದರೆ, ಶೈಕ್ಷಣಿಕ ವರ್ಷ ವ್ಯರ್ಥವಾಗಬಾರದು ಎಂಬ ದೃಢ ನಿರ್ಧಾರದಿಂದ ಕುಸುಮಾ ಆಸ್ಪತ್ರೆಯ ಬೆಡ್‌ನಿಂದ ನೇರವಾಗಿ ಸ್ಟ್ರೇಚರ್ ಮೇಲೆಯೇ ಮಲಗಿಕೊಂಡು ಪರೀಕ್ಷಾ ಕೇಂದ್ರಕ್ಕೆ ಬಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದಳು. ಕೇವಲ ಪರೀಕ್ಷೆ ಬರೆಯುವುದಷ್ಟೇ ಅಲ್ಲದೆ, ಅತಿ ಹೆಚ್ಚು ಅಂಕ ಗಳಿಸಿ ಪ್ರಥಮ ದರ್ಜೆಯಲ್ಲಿ ಅತ್ಯುತ್ತಮ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾಳೆ.

ಬಾಲಕಿ ಕುಸುಮಾಳ ಈ ಅದ್ಭುತ ಸಾಧನೆ ಮತ್ತು ಕರುಣಾಜನಕ ಸ್ಥಿತಿಯ ಸುದ್ದಿ ತಿಳಿಯುತ್ತಿದ್ದಂತೆ ಕೆಜಿಎಫ್ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಕಲಾ ಶಶಿಧರ್ ಅವರು ತಕ್ಷಣವೇ ಸ್ಪಂದಿಸಿದ್ದಾರೆ. ಚಿನ್ನನಾಗನಹಳ್ಳಿಯಲ್ಲಿರುವ ಕುಸುಮಾಳ ಮನೆಗೆ ಖುದ್ದಾಗಿ ಭೇಟಿ ನೀಡಿ, ಬಾಲಕಿಯ ಧೈರ್ಯವನ್ನು ಶ್ಲಾಘಿಸಿ ಮುಂದಿನ ವೈದ್ಯಕೀಯ ಚಿಕಿತ್ಸೆಗೆ ಅಗತ್ಯವಿರುವ ಆರ್ಥಿಕ ನೆರವನ್ನು ಹಸ್ತಾಂತರಿಸಿದ್ದಾರೆ.

ಇದನ್ನೂ ಓದಿ: ವಕ್ಫ್ ಹಗರಣದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದ ವ್ಯಕ್ತಿಯ ಮೇಲೆ ಸಿನಿಮೀಯ ರೀತಿಯಲ್ಲಿ ದಾಳಿ!

ಅಷ್ಟೇ ಅಲ್ಲದೆ, ಬಾಲಕಿ ಮತ್ತೆ ಸ್ವಾವಲಂಬಿಯಾಗಿ ತನ್ನ ಕಾಲಿನ ಮೇಲೆ ನಿಲ್ಲಲು ಅನುವಾಗುವಂತೆ ‘ಲೈಫ್ ಸೇವರ್’ (Life Saver) ಸಾಮಾಜಿಕ ಸಂಸ್ಥೆಯ ಗೌರಿಶಂಕರ್ ಅವರ ಸಹಯೋಗದೊಂದಿಗೆ ಅತ್ಯಾಧುನಿಕ ರೋಬೋಟಿಕ್ ಕೃತಕ ಕಾಲುಗಳನ್ನು (Robotic Artificial Legs) ಜೋಡಿಸಲು ಸಂಪೂರ್ಣ ಅಗತ್ಯ ವ್ಯವಸ್ಥೆ ಹಾಗೂ ಆರ್ಥಿಕ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಶಾಸಕಿಯ ಈ ಶ್ಲಾಘನೀಯ ಮಾನವೀಯ ಕಾರ್ಯಕ್ಕೆ ಹಾಗೂ ಬಾಲಕಿಯ ಅಪ್ರತಿಮ ಛಲಕ್ಕೆ ಇಡೀ ಕೋಲಾರ ಜಿಲ್ಲೆಯಾದ್ಯಂತ ಸಾರ್ವಜನಿಕರಿಂದ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: RCB ತಂಡದ ಅತೀ ದೊಡ್ಡ ಸಮಸ್ಯೆಗೆ ಇಲ್ಲಿದೆ ಪರಿಹಾರ! – Kannada News | IPL 2026: Here is the solution to RCB team’s biggest problem

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 67ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಸನ್​ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್​ನಲ್ಲಿ ಗೆಲ್ಲುವ ತಂಡಕ್ಕೆ ಮೊದಲ ಕ್ವಾಲಿಫೈಯರ್ ಆಡಲು ಅವಕಾಶ ಸಿಗಲಿದೆ. ಅಷ್ಟೇ ಅಲ್ಲದೆ ಪ್ಲೇಆಫ್ ಹಂತಕ್ಕೂ ಮುನ್ನ ಆರ್​ಸಿಬಿ ಕಣಕ್ಕಿಳಿಯಲಿರುವ ಕೊನೆಯ ಪಂದ್ಯ ಕೂಡ ಇದಾಗಿದೆ. ಹೀಗಾಗಿ ಈ ಮ್ಯಾಚ್​ ಮೂಲಕ ಆರ್​ಸಿಬಿ ತನ್ನೆಲ್ಲಾ ನೂನ್ಯತೆಗಳನ್ನು ಸರಿಪಡಿಸಿಕೊಳ್ಳಬೇಕಿದೆ.

ಇಲ್ಲಿ ಆರ್​ಸಿಬಿ ತಂಡದ ಪ್ರಮುಖ ನ್ಯೂನತೆ ಏನು ಎಂದು ನೋಡುವುದಾದರೆ… ಆರಂಭಿಕರ ವೈಫಲ್ಯ. ಅಂದರೆ ಕಳೆದ 7 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಆರಂಭ ಪಡೆದಿಲ್ಲ. ಗಾಯಗೊಂಡು ಹೊರಗುಳಿದಿರುವ ಫಿಲ್ ಸಾಲ್ಟ್ ಬದಲಿಗೆ ಕಣಕ್ಕಿಳಿದಿರುವ ಜೇಕಬ್ ಬೆಥೆಲ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರುತ್ತಿಲ್ಲ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು.

  • ಈ ಬಾರಿಯ ಐಪಿಎಲ್​ನಲ್ಲಿ ಜೇಕಬ್ ಬೆಥೆಲ್ 7 ಮ್ಯಾಚ್​ಗಳಲ್ಲಿ ಇನಿಂಗ್ಸ್ ಆರಂಭಿಸಿದ್ದಾರೆ.
  • ಈ ವೇಳೆ ಎದುರಿಸಿರುವುದು ಕೇವಲ 77 ಎಸೆತಗಳನ್ನು ಮಾತ್ರ. ಇನ್ನು ಕಲೆಹಾಕಿರುವುದು 96 ರನ್​ಗಳು.
  • ಜೇಕಬ್ ಬೆಥೆಲ್ ಪ್ರತಿ ಮ್ಯಾಚ್​ನಲ್ಲಿ ಕೆಲಹಾಕಿರುವ ರನ್​ ಸರಾಸರಿ ಕೇವಲ 13.71 
  • ಇನ್ನು 77 ಎಸೆತಗಳಲ್ಲಿ ಬಾರಿಸಿರುವುದು 3 ಸಿಕ್ಸ್ ಹಾಗೂ 12 ಫೋರ್​ಗಳು ಮಾತ್ರ.

ಅಂದರೆ ಆರಂಭಿಕನಾಗಿ ಜೇಕಬ್ ಬೆಥೆಲ್ ಅಟ್ಟರ್ ಫ್ಲಾಪ್ ಎಂದೇ ಹೇಳಬಹುದು. ಇದಕ್ಕೇನು ಪರಿಹಾರ ಎಂದು ನೋಡುವುದಾದರೆ…

ವೆಂಕಟೇಶ್ ಅಯ್ಯರ್ ಆಯ್ಕೆ: ಈ ಬಾರಿಯ ಐಪಿಎಲ್​ನಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಲಾಗುತ್ತಿದೆ. ಆದರೆ ಅಯ್ಯರ್ ಅತ್ಯುತ್ತಮ ಆರಂಭಿಕ ಆಟಗಾರ ಎಂಬುದು ಇಲ್ಲಿ ಉಲ್ಲೇಖಾರ್ಹ. ಈ ಹಿಂದೆ ಕೆಕೆಆರ್ ಪರ ಆರಂಭಿಕನಾಗಿ ಆಡಿದ್ದರು. ಅಲ್ಲದೆ ಇದೀಗ ಉತ್ತಮ ಫಾರ್ಮ್​ನಲ್ಲೂ ಇದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಜತ್ ಪಾಟಿದಾರ್ ಅನುಪಸ್ಥಿತಿಯಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ವೆಂಕಟೇಶ್ ಅಯ್ಯರ್ 40 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ ಅಜೇಯ 73 ರನ್ ಬಾರಿಸಿದ್ದರು. ಇದೀಗ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ರಜತ್ ಪಾಟಿದಾರ್ ಕಣಕ್ಕಿಳಿದರೆ ವೆಂಕಟೇಶ್ ಅಯ್ಯರ್ ಅವರನ್ನು ಆಡುವ ಬಳಗದಿಂದ ಕೈ ಬಿಡಬೇಕಾಗುತ್ತದೆ.

ಆದರೆ ಇಲ್ಲಿ ಜೇಕಬ್ ಬೆಥೆಲ್ ಅವರ ಬದಲಿಗೆ ವೆಂಕಟೇಶ್ ಅಯ್ಯರ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಿದರೆ ಆರ್​ಸಿಬಿ ತನ್ನ ಒಪನಿಂಗ್ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬಹುದು. ಅಂದರೆ ಉತ್ತಮ ಫಾರ್ಮ್​ನಲ್ಲಿರುವ ವಿರಾಟ್ ಕೊಹ್ಲಿ ಹಾಗೂ ವೆಂಕಟೇಶ್ ಅಯ್ಯರ್ ಆರಂಭಿಕರಾಗಿ ಕಣಕ್ಕಿಳಿಯುವುದು ಆರ್​ಸಿಬಿಗೆ ಪ್ಲಸ್ ಪಾಯಿಂಟ್ ಆಗುವುದರಲ್ಲಿ ಅನುಮಾನವೇ ಇಲ್ಲ.

ಪ್ಲಸ್ ಪಾಯಿಂಟ್ ಏನು?

ಜೇಕಬ್ ಬೆಥೆಲ್ ಅವರನ್ನು ಕೈ ಬಿಟ್ಟು ವೆಂಕಟೇಶ್ ಅಯ್ಯರ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಿದರೆ, ಆರ್​ಸಿಬಿ ತಂಡವು ಮತ್ತೋರ್ವ ವಿದೇಶಿ ಆಟಗಾರನನ್ನು ಆಡಿಸಬಹುದು. ಅಂದರೆ ಇಲ್ಲಿ ವೇಗಿ ಜೇಕಬ್ ಡಫಿಯನ್ನೂ ಕೂಡ ಆಡುವ ಬಳಗದಲ್ಲಿ ಸೇರಿಸಿಕೊಳ್ಳಬಹುದು.

ಜೋಶ್ ಹೇಝಲ್​ವುಡ್, ಭುವನೇಶ್ವರ್ ಕುಮಾರ್ ಜೊತೆ ಜೇಕಬ್ ಡಫಿ ಕೂಡ ಇದ್ದರೆ ಆರ್​ಸಿಬಿ ತಂಡದ ಬೌಲಿಂಗ್ ಲೈನಪ್ ಕೂಡ ಮತ್ತಷ್ಟು ಬಲಿಷ್ಠವಾಗಲಿದೆ.

ಅಂದರೆ ಅತ್ತ ಆರಂಭಿಕ ಸಮಸ್ಯೆ ಸರಿಯಾಗುವುದರ ಜೊತೆ ಬೌಲಿಂಗ್ ವಿಭಾಗ ಕೂಡ ಬಲಿಷ್ಠವಾಗಲಿದೆ. ಹೀಗಾಗಿ ಆರ್​ಸಿಬಿ ತಂಡವು ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ವೆಂಕಟೇಶ್ ಅಯ್ಯರ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುವುದು ಉತ್ತಮ.

ಇದನ್ನೂ ಓದಿ: IPL​ ಆಡಲು ಮೊಹಮ್ಮದ್ ಅಮಿರ್​ಗೆ ‘ಗ್ರೀನ್ ಸಿಗ್ನಲ್’

ಇನ್ನು ವೆಂಕಿಯನ್ನು ಆರಂಭಿಕನಾಗಿ ಅಲ್ಲದೆ, ಮಧ್ಯಮ ಕ್ರಮಾಂಕದಲ್ಲಿ ಮುಂದುವರೆಸಲು ಬಯಸಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ದೇವದತ್ ಪಡಿಕ್ಕಲ್ ಅವರನ್ನು ಓಪನರ್ ಆಗಿ ಬಳಸಿಕೊಳ್ಳಬಹುದು. ಈ ಮೂಲಕ ಕೂಡ ಆರಂಭಿಕ ಸಮಸ್ಯೆಯನ್ನು ಸರಿಪಡಿಸಿ ಆರ್​ಸಿಬಿ ಬಲಿಷ್ಠ ಪಡೆಯನ್ನು ಕಣಕ್ಕಿಳಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆರಂಭಿಕ ಸಮಸ್ಯೆಯನ್ನು ಸರಿದೂಗಿಸಲು ಇಬ್ಬರು ಎಡಗೈ ದಾಂಡಿಗರ ಉತ್ತಮ ಆಯ್ಕೆ ಇದೆ. ಈ ಆಯ್ಕೆಗಳೊಂದಿಗೆ ಆರ್​ಸಿಬಿ ಪ್ಲೇಆಫ್ ಪಂದ್ಯಕ್ಕೂ ಮುನ್ನ ತನ್ನ ಓಪನಿಂಗ್ ಜೋಡಿಯನ್ನು ಬದಲಿಸಲಿದೆಯಾ ಕಾದು ನೋಡಬೇಕಿದೆ.

Source link

ಕಾಂಗ್ರೆಸ್​​ ‘ಪಟ್ಟದಾಟ’ಕ್ಕೆ ತೆರೆ ಯಾವಾಗ?: ಸಾಧ್ಯಾಸಾಧ್ಯತೆ ಬಗ್ಗೆ ‘ಕೈ; ಪಾಳಯದಲ್ಲೇ ಹೀಗೊಂದು ಚರ್ಚೆ – Kannada News | Congress High Command To Settle Karnataka ‘Power Struggle’: Siddaramaiah, DK Shivakumar Likely Summoned To Delhi

ಕಾಂಗ್ರೆಸ್​​ ‘ಪಟ್ಟದಾಟ’ಕ್ಕೆ ತೆರೆ ಯಾವಾಗ?Image Credit source: mathrubhumi.com

ಬೆಂಗಳೂರು, ಮೇ 21: ಅಧಿಕಾರ ಹಂಚಿಕೆ ವಿಚಾರ ಕಳೆದ ಕೆಲ ತಿಂಗಳುಗಳಿಂದ ರಾಜ್ಯದಲ್ಲಿ ಸದ್ದು ಮಾಡುತ್ತಲೇ ಬಂದಿದೆ. ಒಂದು ಕಡೆ ಸಿಎಂ ಸಿದ್ದರಾಮಯ್ಯ ಬಣ ಮತ್ತೊಂದೆಡೆ ಡಿ.ಕೆ. ಶಿವಕುಮಾರ್​​ ಬೆಂಬಲಿಗರು ಈ ಸಂಬಂಧ ಪರಸ್ಪರ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಪಟ್ಟದಾಟದ ವಿಚಾರ ಸದ್ಯ ಎಐಸಿಸಿ ಅಂಗಳದಲ್ಲಿದೆ. ಹೀಗಾಗಿ ವರಿಷ್ಠರ ತೀರ್ಮಾನವೇ ಅಂತಿಮ ಎಂಬ ಮಾತುಗಳು ಕಾಂಗ್ರೆಸ್​​ ಪಾಳಯದಿಂದ ಕೇಳಿಬರತೊಡಗಿದೆ. ಪಂಚರಾಜ್ಯ ಚುನಾವಣೆ ಮುಗಿದ ಹಿನ್ನೆಲೆ ಈಗ ವರಿಷ್ಠರು ಕರ್ನಾಟಕದ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿದ್ದಾರೆ. ಹೀಗಾಗಿ ಮೇ ಅಂತ್ಯದ ವೇಳೆಗೆ ಈ ವಿಚಾರಕ್ಕೊಂದು ತೆರೆ ಬೀಳುವ ಬಗ್ಗೆ ಕಾಂಗ್ರೆಸ್​​ನಲ್ಲಿಯೇ ಚರ್ಚೆಗಳು ಶುರುವಾಗಿವೆ.

ಸಾಧ್ಯತೆ 1

ಮೇ ತಿಂಗಳ ಅಂತ್ಯಕ್ಕೆ ಸಿಎಂ-ಡಿಸಿಎಂಗೆ ದೆಹಲಿಗೆ ಹೈಕಮಾಂಡ್​​ ಬುಲಾವ್ ನೀಡಲಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜೊತೆಗೆ ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್​​ ಹಾಗೂ ರಾಹುಲ್ ಗಾಂಧಿ ಚರ್ಚೆ ನಡೆಸಲಿದ್ದಾರೆ. ಸಿದ್ದರಾಮಯ್ಯ ಮುಂದುವರಿಕೆ ಅಥವಾ ಬದಲಾವಣೆ ಬಗ್ಗೆ ಮೊದಲು ಮಾತುಕತೆ ನಡಯಲಿದ್ದು, ಈ ವೇಳೆ ಸಚಿವ ಸಂಪುಟ ಪುನಾರಚನೆ ಸಂಬಂಧ ಸಿದ್ದರಾಮಯ್ಯ ನಾಯಕತ್ವ ಬದಲಾವಣೆ ವಿಷಯ ಕ್ಲೋಸ್ ಆದಂತೆ. ಆಗ ಈ ಮಾತುಕತೆ ಕೇವಲ ಸಂಪುಟ ಪುನಾರಚನೆಗೆ ಮಾತ್ರ ಸಂಬಂಧಿಸಲಿದೆ.

ಇದನ್ನೂ ಓದಿ: ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಆ ಒಂದು ಸಭೆ

ಸಾಧ್ಯತೆ 2

ಜೂನ್​​ 25ರ ಒಳಗಾಗಿ ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿರುವ ಕಾರಣ ಅಲ್ಲಿಯ ತನಕ ಬದಲಾವಣೆ ಚರ್ಚೆ ಮುಂದೂಡಿಕೆ ಸಾಧ್ಯತೆ ಇದೆ. ಅದಕ್ಕಿಂತ ಮುಂಚೆ ಸಂಪುಟ ಪುನಾರಚನೆ ಮಾಡಿದರೆ ರಾಜ್ಯಸಭೆ ಎಲೆಕ್ಷನ್​​ ಮೇಲೆ ಅದು ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಕ್ರಾಸ್ ವೋಟ್​​ ಆತಂಕದಿಂದ ಸಂಪುಟ ಪುನಾರಚನೆ ಕೂಡ ಜೂನ್ ಅಂತ್ಯದವರೆಗೆ ಮುಂದೂಡಿಕೆ ಆಗಬಹುದು. ರಾಜ್ಯ ಸಭೆ ಚುನಾವಣೆ ಮುಗಿದ ತಕ್ಷಣವೇ ಎಂಎಲ್ಸಿ ಚುನಾವಣೆ ನಡೆಯಲಿರುವ ಕಾರಣ ಶಾಸಕರ ಪಾತ್ರ ಇಲ್ಲಿ ಪ್ರಮುಖವಾಗಿದೆ.

ಸಾಧ್ಯತೆ 3

‌ರಾಹುಲ್ ಗಾಂಧಿ ಚರ್ಚೆ ವೇಳೆ ಸಿದ್ದರಾಮಯ್ಯ ಡಿಕೆಶಿ ಇಬ್ಬರೂ ದಾಳ ಉರುಳಿಸುವ ಸಾಧ್ಯತೆ ಇದೆ. ಸಿಎಂ ಬದಲಾವಣೆ ಆಗುವುದೇ ಆದರೆ ಸಿದ್ದರಾಮಯ್ಯ ಪರಮೇಶ್ವರ್ ಹೆಸರು ಸೂಚಿಸುವ ಸಾಧ್ಯತೆ ಇದೆ. ರೀಶಫಲ್ ಮಾತ್ರ ಎನ್ನುವುದೇ ಆದರೆ ಬದಲಾವಣೆ ಆಗೋ ತನಕ ಅದು ಬೇಡ ಎಂದು ಡಿಕೆಶಿ ಪಟ್ಟು ಹಿಡಿಯಬಹುದು. ರಾಹುಲ್​​ ಗಾಂಧಿ ಸಮ್ಮುಖದಲ್ಲಿಯೇ ಚರ್ಚೆ ನಡೆಯುವ ಕಾರಣ ತೀರ್ಮಾನ ಏನುಬೇಕಾದರೂ ಆಗಬಹುದು ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಕ್ಷಣೆಗೆ ಹೋದವರಿಗೇ ಕಾದಿತ್ತು ಆಪತ್ತು, ಅಮೆರಿಕದಲ್ಲಿ ಮೂವರನ್ನು ಬಲಿ ಪಡೆದ ನಿಗೂಢ ವಸ್ತು, ಸಿಬ್ಬಂದಿ ಅಸ್ವಸ್ಥ – Kannada News | Mysterious Substance Incident in New Mexico Leaves Three Dead, Responders Quarantined

ನ್ಯೂ ಮೆಕ್ಸಿಕೋ, ಮೇ 21: ಅಮೆರಿಕ(America)ದ ನ್ಯೂ ಮೆಕ್ಸಿಕೋ ರಾಜ್ಯದ ಅಲ್ಬುಕರ್ಕ್ ನಗರದ ಸಮೀಪವಿರುವ ಮೌಂಟೇನ್‌ಏರ್ ಎಂಬ ಗ್ರಾಮೀಣ ಪ್ರದೇಶದಲ್ಲಿ ಈ ಬೆಚ್ಚಿಬೀಳಿಸುವ ಘಟನೆ ಸಂಭವಿಸಿದೆ. ಮನೆಯೊಂದರಲ್ಲಿ ಮಾದಕವಸ್ತು ಮಿತಿಮೀರಿದ ಸೇವನೆಯಿಂದ (Drug Overdose) ಜನರು ಪ್ರಜ್ಞಾಹೀನರಾಗಿದ್ದಾರೆ ಎಂಬ ಮಾಹಿತಿ ಪಡೆದು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು. ಆದರೆ, ಅಲ್ಲಿ ಅವರಿಗೆ ಕಾದಿದ್ದು ಮಾತ್ರ ದೊಡ್ಡ ಗಂಡಾಂತರ. ಪೊಲೀಸರು ಮತ್ತು ಪರಿಹಾರ ಕಾರ್ಯಕರ್ತರು ಸ್ಥಳಕ್ಕೆ ತಲುಪಿದಾಗ ಮನೆಯೊಳಗೆ ನಾಲ್ಕು ಜನರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಅವರಲ್ಲಿ ಮೂವರು ಈಗಾಗಲೇ ಸಾವನ್ನಪ್ಪಿದ್ದರು. ಮತ್ತೊಬ್ಬನನ್ನು ತಕ್ಷಣವೇ ಅಲ್ಬುಕರ್ಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ, ಅಸಲಿ ಆತಂಕ ಆರಂಭವಾಗಿದ್ದು ಇದರ ನಂತರವೇ.

ರಕ್ಷಣೆಗೆ ಹೋದವರಿಗೇ ತಟ್ಟಿದ ಕಂಟಕ
ಘಟನಾ ಸ್ಥಳದಲ್ಲಿದ್ದ ಯಾವುದೋ ಒಂದು ಅಪರಿಚಿತ ನಿಗೂಢ ವಸ್ತುವಿನ ಸಂಪರ್ಕಕ್ಕೆ ಬಂದ ತಕ್ಷಣವೇ, ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಕ್ಷಣಾ ಸಿಬ್ಬಂದಿಗೆ ವಾಕರಿಕೆ, ತಲೆತಿರುಗುವಿಕೆ ಮತ್ತು ದೌರ್ಬಲ್ಯದಂತಹ ಲಕ್ಷಣಗಳು ಕಾಣಿಸಿಕೊಂಡವು. ಸಿಬ್ಬಂದಿಯನ್ನು ತಕ್ಷಣವೇ ನ್ಯೂ ಮೆಕ್ಸಿಕೊ ವಿಶ್ವವಿದ್ಯಾಲಯದ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಲ್ಲಿ ಇಬ್ಬರು ರಕ್ಷಣಾ ಕಾರ್ಯಕರ್ತರ ಸ್ಥಿತಿ ಇಂದಿಗೂ ಅತ್ಯಂತ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿ ವಿಲ್ಸನ್ ಸಿಲ್ವರ್ ತಿಳಿಸಿದ್ದಾರೆ.

ರಸ್ತೆ ಬಂದ್, ಹ್ಯಾಜ್‌ಮ್ಯಾಟ್ ತಂಡದಿಂದ ತನಿಖೆ
ಪ್ರಾಥಮಿಕ ತನಿಖೆಯ ಪ್ರಕಾರ, ಈ ನಿಗೂಢ ಕಿಲ್ಲರ್ ವಸ್ತುವು ಗಾಳಿಯ ಮೂಲಕ ಹರಡುತ್ತಿಲ್ಲ, ಬದಲಿಗೆ ಸ್ಪರ್ಶ ಅಥವಾ ಸಂಪರ್ಕದ ಮೂಲಕ ಹರಡುತ್ತದೆ ಎಂಬುದು ತಿಳಿದುಬಂದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಆ ಮನೆಗೆ ಹೋಗುವ ರಸ್ತೆಯನ್ನು ಪೊಲೀಸರು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ. ಆ ಅಪರಿಚಿತ ವಸ್ತು ಯಾವುದು ಎಂಬುದನ್ನು ಪತ್ತೆಹಚ್ಚಲು ಅಗ್ನಿಶಾಮಕ ದಳದ ಹ್ಯಾಜ್‌ಮ್ಯಾಟ್ (Hazmat – ಅಪಾಯಕಾರಿ ವಸ್ತುಗಳ ಪತ್ತೆ ಹಚ್ಚುವ ವಿಶೇಷ ತಂಡ) ತಂಡ ಸತತವಾಗಿ ಶ್ರಮಿಸುತ್ತಿದೆ.

ಮತ್ತಷ್ಟು ಓದಿ: ಕೊನೆ ಕ್ಷಣದಲ್ಲಿ ಇರಾನ್ ಮೇಲಿನ ಭೀಕರ ದಾಳಿ ಮುಂದೂಡಿದ ಅಮೆರಿಕ, ಗಲ್ಫ್ ರಾಷ್ಟ್ರಗಳ ಮನವಿಗೆ ಓಗೊಟ್ಟ ಟ್ರಂಪ್

ಆರಂಭಿಕ ಸಾಕ್ಷ್ಯಗಳ ಪ್ರಕಾರ, ಇದು ಅತ್ಯಂತ ಅಪಾಯಕಾರಿ ಮಾದಕ ವಸ್ತುವಿನಿಂದ (Drugs) ಸಂಭವಿಸಿರಬಹುದು ಎಂದು ಮೌಂಟೇನ್‌ಏರ್ ಮೇಯರ್ ಪೀಟರ್ ನೀಟೊ ತಿಳಿಸಿದ್ದಾರೆ. ಆದರೆ ಸಾರ್ವಜನಿಕರಿಗೆ ಯಾವುದೇ ತಕ್ಷಣದ ಬೆದರಿಕೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಘಟನೆ ಹೊರಬೀಳುತ್ತಿದ್ದಂತೆ, ಸ್ಥಳೀಯ ನಿವಾಸಿಗಳು ತಮ್ಮ ಪ್ರದೇಶದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ವ್ಯಸನದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾದಕ ದ್ರವ್ಯದ ಸಮಸ್ಯೆ ಇಡೀ ದೇಶಕ್ಕೆ ಗಂಭೀರ ಕಂಟಕವಾಗಿ ಪರಿಣಮಿಸಿದೆ, ಇದಕ್ಕೆ ಯಾವುದೇ ತ್ವರಿತ ಪರಿಹಾರವಿಲ್ಲಎಂದು ಮೇಯರ್ ಪೀಟರ್ ಕಳವಳ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಆ ನಿಗೂಢ ವಸ್ತು ಯಾವುದು ಎಂಬುದು ಇಡೀ ಅಮೆರಿಕದ ಪೊಲೀಸರಿಗೆ ದೊಡ್ಡ ರಹಸ್ಯವಾಗಿ ಉಳಿದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Tv9 Kannada News Live: ‘ಸುಪ್ರೀಂ’ನಲ್ಲಿ ಇಂದು ನಿರ್ಧಾರವಾಗುತ್ತಾ ಶೃಂಗೇರಿ ಮರು ಮತ ಎಣಿಕೆ ಭವಿಷ್ಯ?: ಇಲ್ಲಿವೆ ಈ ಹೊತ್ತಿನ ಟಾಪ್​​ ಸುದ್ದಿಗಳು – Kannada News | Tv9 Kannada News Live: Supreme Court to Hear Sringeri Recounting Case Today; Missing Hubballi Boy Found Dead

ಸುಪ್ರೀಂಕೋರ್ಟ್​​Image Credit source: rashtrabharat.com

ಬೆಂಗಳೂರು, ಮೇ 20: ಭಾರೀ ಕುತೂಹಲ ಮೂಡಿಸಿರುವ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ವಿಚಾರ ಸಂಬಂಧ ಇಂದು ( ಮೇ 21) ಸುಪ್ರೀಂಕೋರ್ಟ್​​ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಕಾಂಗ್ರೆಸ್​​ನ ಟಿ.ಡಿ. ರಾಜೇಗೌಡ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಆದೇಶ ರದ್ದು ಮಾಡಿ ತಡೆ ನೀಡಿದ್ದ ಸುಪ್ರೀಂಕೋರ್ಟ್, ಶಾಸರಾಗಿ ಟಿ.ಡಿ. ರಾಜೇಗೌಡ ಅವರನ್ನೇ ಮುಂದುವರಿಸಿತ್ತು. ಹೀಗಾಗಿ ಮತ ಮರು ಎಣಿಕೆ ಬಳಿಕ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಬಿಜೆಪಿಯ ಜೀವರಾಜ್​​ಗೆ ಹಿನ್ನಡೆ ಆಗಿತ್ತು.

ಹೆಚಿನ್ನ ಮಾಹಿತಿ: ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ; ಕಾಂಗ್ರೆಸ್​​ನ ರಾಜೇಗೌಡರಿಗೆ ಮತ್ತೆ ದಕ್ಕಿದ ಶಾಸಕ ಸ್ಥಾನ

ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ

ಆಟ ಆಡಲು ಹೋಗಿದ್ದ ಬಾಲಕ ಶವವಾಗಿ ಪತ್ತೆಯಾಗಿರುವ ಘಟನೆ ಹುಬ್ಬಳ್ಳಿಯ ವಿಜಯನಗರದಲ್ಲಿ ನಡೆದಿದೆ. ಕೇಶ್ವಾಪುರದ ಆಜಾದ್ ನಗರ ನಿವಾಸಿ 9 ವರ್ಷದ ಬಾಲಾಜಿ ಮೃತ ದುರ್ದೈವಿಯಾಗಿದ್ದು, ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಾ ವಿಜಯನಗರಕ್ಕೆ ಬಂದಿದ್ದ ಎನ್ನಲಾಗಿದೆ. ಬಿದ್ದ ತೆಂಗಿನಕಾಯಿ ತೆಗೆದುಕೊಳ್ಳಲು ಕಾಂಪೌಂಡ್ ಒಳಗೆ ಹೋಗಿದ್ದ ಈತ ಪಿಲ್ಲರ್ ಹಾಕಲು ತೋಡಿದ್ದ ತಗ್ಗಿನಲ್ಲಿ ಬಿದ್ದಿದ್ದಾನೆ. ಈ ವೇಳೆ ಆತನೊಂದಿಗೆ ಬಂದ ಇಬ್ಬರು ಬಾಲಕರು ಹೆದರಿಕೊಂಡು ಪರಾರಿಯಾಗಿದ್ದು, ಗುಂಡಿಯಲ್ಲಿದ್ದ ನೀರಿನಲ್ಲಿ ಮುಳುಗಿ ಬಾಲಾಜಿ ಮೃತಪಟ್ಟಿದ್ದಾನೆ. ತಮ್ಮ ಮಗ ನಾಪತ್ತೆಯಾಗಿದ್ದಾನೆ ಎಂದು ಪೋಷಕರು ದೂರು ನೀಡಿದ್ದು, ಸಿಸಿ ಕ್ಯಾಮರಾ ದೃಶ್ಯಗಳನ್ನು ಆಧರಿಸಿ ಪೊಲೀಸರು ಶವ ಪತ್ತೆ ಹಚ್ಚಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಕುಳಿತು ಪಹಲ್ಗಾಮ್​ನಲ್ಲಿ ಲಷ್ಕರ್ ಉಗ್ರರು ಭಯೋತ್ಪಾದಕ ದಾಳಿ ನಡೆಸಿದ್ಹೇಗೆ? ಎನ್​ಐಎ ಚಾರ್ಜ್​ಶೀಟ್​​ನಲ್ಲೇನಿದೆ?

ಬೋನಿಗೆ ಬಿದ್ದ ಚಿರತೆ

ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಮುಸಲಾಪುರ ಬಳಿಯ ಗುಡ್ಡದಲ್ಲಿ ನಡೆದಿದೆ. ಹಲವು ದಿನಗಳಿಂದ ಈ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದ ಹಿನ್ನೆಲೆ ಅದನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಬೋನ್ ಇಟ್ಟಿತ್ತು. ಬೋನಿಗೆ ಬಿದ್ದ ಚಿರತೆಯನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಇಲಾಖೆಯ ಸಿಬ್ಬಂದಿ ರವಾನಿಸಿದ್ದಾರೆ.

ಮಂಗಳಮುಖಿಯರಿಂದ ಅಸಭ್ಯ ವರ್ತನೆ

ಐತಿಹಾಸಿಕ ಹುಲಗೆಮ್ಮ ದೇವಸ್ಥಾನದಲ್ಲಿ‌ ಮಂಗಳಮುಖಿಯರಿಂದ ಅಸಭ್ಯ ವರ್ತನೆ ಆರೋಪ ಕೇಳಿಬಂದಿದೆ.ದೇವಸ್ಥಾನಕ್ಕೆ ಬಂದ ಭಕ್ತನ್ನು ಹಣಕ್ಕಾಗಿ ಮಂಗಳಮುಖಿಯರು ಪೀಡಿಸುತ್ತಿದ್ದು, ಮಂಗಳಮುಖಿಯರ ಅಸಭ್ಯ ವರ್ತನೆ ವಿಡಿಯೋ ಸ್ಥಳೀಯರ ಮೊಬೈಲ್​​ನಲ್ಲಿ ಸೆರೆಯಾಗಿದೆ. ಅಸಭ್ಯ ವರ್ತನೆ ಮಾಡುತ್ತಿದ್ದ ‌ಮಂಗಳಮುಖಿಗೆ ಮಹಿಳಾ ಪೊಲೀಸ್ ಪೇದೆ ಕೆನ್ನೆಗೆ ಬಾರಿಸಿದ್ದು, ಹುಲಗೆಮ್ಮ ದೇವಸ್ಥಾನದಲ್ಲಿ ಮಂಗಳ ಇವರ ಕಾಟದಿಂದ ಭಕ್ತರು ರೋಸಿರುವ ಕಾರಣ ನಿಯಂತ್ರಣಕ್ಕೆ ಮನವಿ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 8:00 am, Thu, 21 May 26

Source link

Exit mobile version