IPL 2026: ಕಿಂಗ್ ಕೊಹ್ಲಿ 2.0.. ಟಾಪ್ ಗೇರ್​ನಲ್ಲಿ ವಿರಾಟ್ ಬ್ಯಾಟಿಂಗ್‌; ವಿಡಿಯೋ ನೋಡಿ

IPL 2026: ಕಿಂಗ್ ಕೊಹ್ಲಿ 2.0.. ಟಾಪ್ ಗೇರ್​ನಲ್ಲಿ ವಿರಾಟ್ ಬ್ಯಾಟಿಂಗ್‌; ವಿಡಿಯೋ ನೋಡಿ

ಇಂಡಿಯನ್ ಪ್ರೀಮಿಯರ್ ಲೀಗ್‌ನ 19 ನೇ ಸೀಸನ್‌ ಮಾರ್ಚ್​ 28 ರಿಂದ ಆರಂಭವಾಗಲಿದೆ. ಟೂರ್ನಿಯ ಮೊದಲ ಪಂದ್ಯ ಹಾಲಿ ಚಾಂಪಿಯನ್‌ ಆರ್​ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಡುವೆ ನಡೆಯಲಿದೆ. ಈ ಪಂದ್ಯಕ್ಕೆ ಇನ್ನ 9 ದಿನಗಳು ಮಾತ್ರ ಉಳಿದಿವೆ. ಹೀಗಾಗಿ ಉಭಯ ತಂಡಗಳು ಮೈದಾನದಲ್ಲಿ ಬೆವರು ಹರಿಸುತ್ತಿವೆ. ಇತ್ತ ಆರ್​ಸಿಬಿ ಕೂಡ ತಯಾರಿಯನ್ನು ಚುರುಕುಗೊಳಿಸಿದ್ದು, ತಂಡದ ಬ್ಯಾಟಿಂಗ್‌ ಜೀವಾಳ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ, ತಂಡವನ್ನು ಕೂಡಿಕೊಂಡ ಬಳಿಕ ಮೊದಲ ಬಾರಿಗೆ ನೆಟ್ಸ್​ನಲ್ಲಿ ಬ್ಯಾಟ್ ಹಿಡಿದು ಅಬ್ಬರಿಸಿದ್ದಾರೆ.

ವಾಸ್ತವವಾಗಿ ಮೊನ್ನೆಯಷ್ಟೆ ಆರ್​ಸಿಬಿ ತಂಡವನ್ನು ಸೇರಿಕೊಂಡಿರುವ ವಿರಾಟ್ ಕೊಹ್ಲಿ ಇಂದು ನಡೆದ ಅಭ್ಯಾಸದ ಶಿಬಿರದಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಗರೆದಿದ್ದಾರೆ. ಅಂತರರಾಷ್ಟ್ರೀಯ ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ಕೊಹ್ಲಿ ಈಗ ಏಕದಿನ ಸ್ವರೂಪದಲ್ಲಿ ಮಾತ್ರ ಆಡುತ್ತಿದ್ದಾರೆ. ಅದರ ಪರಿಣಾಮವಾಗಿ ಕಳೆದ ಆವೃತ್ತಿಯಿಂದ ತಮ್ಮ ಬ್ಯಾಟಿಂಗ್​ನಲ್ಲಿ ಬದಲಾವಣೆ ಮಾಡಿಕೊಂಡಿರುವ ಕೊಹ್ಲಿ ಸ್ಟ್ರೈಕ್​ ರೇಟ್​ ಮೇಲೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಹೀಗಾಗಿ ಕೊಹ್ಲಿ ಬ್ಯಾಟ್​​ನಿಂದ ಬೌಂಡರಿ, ಸಿಕ್ಸರ್​ಗಳ ಮಳೆಯಾಗುತ್ತಿದೆ.

Source link

ಯುಗಾದಿ ಹೊಸತೊಡಕು: ನಾಟಿ ಕೋಳಿಗೆ ಭಾರೀ ಡಿಮ್ಯಾಂಡ್, ರೇಟ್ ಎಷ್ಟು ಗೊತ್ತಾ?

ಚಿಕ್ಕಬಳ್ಳಾಫುರ, ಮಾರ್ಚ್ 19: ಇಂದು ಯುಗಾದಿ (Ugadi) ಹೊಸತೊಡಕು, ನಾನ್ ವೆಜ್ ಪ್ರಿಯರು ಚಿಕನ್, ಮಟನ್ ತಿನ್ನದಿದ್ದರೇ ಸಮಾಧಾನವಾಗಲ್ಲ. ಆದರೆ ಫಾರಂ ಕೋಳಿ ಬದಲು ಈಗ ನಾಟಿ ಕೋಳಿ (Nati Koli) ಹಾಗೂ ನಾಟಿ ಕೋಳಿ ಮೊಟ್ಟೆ ಮೊರೆ ಹೋಗಿದ್ದಾರೆ. ಹೀಗಾಗಿ ನಾಟಿ ಕೋಳಿಗೆ ಸಖತ್​​ ಡಿಮ್ಯಾಂಡ್​​ ಬಂದಿದ್ದು, ಜನರು ಹುಡುಕಾಡಿ ಕೇಳಿದಷ್ಟು ಹಣ ನೀಡಿ ಖರೀದಿ ಮಾಡುತ್ತಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ನಾಟಿ ಕೋಳಿ ಸಾಕಾಣಿಕೆ

ಆರೋಗ್ಯ ಕಾಳಜಿ ವಹಿಸುತ್ತಿರುವ ಕೆಲವರು, ಹೈಬ್ರಿಡ್ ಆಹಾರದ ಬದಲು ನಾಟಿ, ಜವಾರಿ ಆಹಾರದ ಮೊರೆ ಹೊಗ್ತಿದ್ದಾರೆ. ಇಂದು ಯುಗಾದಿ ಹೊಸತೊಡಕು, ಹೀಗಾಗಿ ನಾನ್ ವೆಜ್ ಪ್ರಿಯರು ನಾಟಿ ಕೋಳಿ ಮೊರೆ ಹೋಗುತ್ತಿದ್ದಾರೆ. ಚಿಕ್ಕಬಳ್ಳಾಪುರ ನಗರದ ವಾಪಸಂದ್ರದ ಬಳಿ ನಾಟಿ ಕೋಳಿ ಸಾಕಾಣಿಕೆ ಮಾಡಲಾಗಿದ್ದು, ಯುಗಾದಿ ಹೊಸತೊಡಕು ಪ್ರಯುಕ್ತ ಜನ ಕೋಳಿ ಖರೀದಿಗೆ ಮುಗಿಬಿದ್ದಿದ್ದಾರೆ. ಮನೆಯೊಂದರಲ್ಲಿ ಸಾಕಿರುವ ನಾಟಿ ಕೋಳಿ ಖರೀದಿ ಮಾಡಲು ಮನೆ ಬಳಿ ಆಗಮಿಸಿ ಕೇಳಿದಷ್ಟು ಹಣ ನೀಡಿ ಕೋಳಿ ಖರೀದಿ ಮಾಡುತ್ತಿದ್ದಾರೆ.

ಇದನ್ನೂ ಓದಿ: ಉತ್ತರ ಕರ್ನಾಟಕದ ಮೊಟ್ಟೆ ಉದ್ಯಮಕ್ಕೂ ತಟ್ಟಿದ ಯುದ್ಧದ ಬಿಸಿ; ಲಕ್ಷಾಂತರ ರೂ. ಮೌಲ್ಯದ ಮೊಟ್ಟೆಗಳು ಮಣ್ಣುಪಾಲು!

ಇನ್ನು ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಬಡಾವಣೆಯಲ್ಲಿ, ಸಾಫ್ಟ್ವೇರ್ ಇಂಜಿನಿಯರ್ ದಂಪತಿ ಅಶ್ವಿನ್ ಹಾಗೂ ನಿಧಿ ದಂಪತಿ, ಮನೆ ಪಕ್ಕದಲ್ಲೇ ಆರು ನೂರು ನಾಟಿ ಕೋಳಿ ಸಾಕಾಣಿಕೆ ಮಾಡಿದ್ದಾರೆ. ಇನ್ನು ಮಾರುಕಟ್ಟೆಯಲ್ಲಿ ಕೆಜಿ ನಾಟಿ ಕೋಳಿ ಬೆಲೆ ಏಳು ನೂರು ರೂಪಾಯಿ ಆಗಿದೆ. ಆದರೆ ಇವರ ಮನೆ ಬಳಿ ಬಂದ ಗ್ರಾಹಕರಿಗೆ ಕೆ.ಜಿ ಕೋಳಿಗೆ 450 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಸೇಲ್ ಆಗ್ತಿತ್ತು? ಹೊರ ದೇಶಕ್ಕೆ ಎಷ್ಟು ರಫ್ತು ಆಗ್ತಿತ್ತು?

ಜೊತೆಗೆ ತಲಾ ಮೊಟ್ಟೆಗೆ 12 ರೂಪಾಯಿ ಮಾರಾಟ ಮಾಡುತ್ತಿದ್ದಾರೆ. ನಾಟಿ ಕೋಳಿ ಹಾಗೂ ಮೊಟ್ಡೆ ರುಚಿ ನೋಡಿರುವ ಗ್ರಾಹಕರು ಮನೆಯ ಬಳಿ ಆಗಮಿಸಿ ಕೋಳಿ ಹಾಗೂ ಮೊಟ್ಟೆ ಖರೀದಿಸುತ್ತಿದ್ದಾರೆ. ಫಾರಂ ಕೋಳಿ ತಿಂದು ತಿಂದು ಸಾಕಾಕಿದ್ದರೆ, ನಾಟಿ ಕೋಳಿ ರುಚಿ ನೋಡಬೇಕು ಎನ್ನುವವರು ಚಿಕ್ಕಬಳ್ಳಾಪುರದಲ್ಲಿ ಸಿಗುವ ನಾಟಿ ಕೋಳಿಯನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನೌಕರರ ವರ್ಗಾವಣೆಗಿಂತ ಮಾಡಬೇಕಾದ ಉತ್ತಮ ಕೆಲಸಗಳಿವೆ: ಸಿಎಂಗೆ ಹೈಕೋರ್ಟ್ ತರಾಟೆ

ಬೆಂಗಳೂರು, (ಮಾರ್ಚ್ 19): ರಾಜ್ಯ ಸರ್ಕಾರಿ ನೌಕರರ ವರ್ಗಾವಣೆಯಲ್ಲಿ (government employees transfer) ಸಿಎಂ ಹಸ್ತಕ್ಷೇಪಕ್ಕೆ ಕರ್ನಾಟಕ ಹೈಕೋರ್ಟ್ (Karnataka High Court) ಆಕ್ಷೇಪ ವ್ಯಕ್ತಪಡಿಸಿದೆ. ಬೆಸ್ಕಾಂ ಎಇ ಎಸ್.ಚೇತನ್ ಎಂಬುವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್, ಹಾಗೂ ಟಿ.ಎಂ.ನದಾಫ್ ಅವರಿದ್ದ ಹೈಕೋರ್ಟ್ ಪೀಠ, ಸಿಎಂ ಸಿದ್ದರಾಮಯ್ಯಗೆ (siddaramaiah )ಚಾಟಿ ಬೀಸಿದೆ. ಸಿಎಂಗೆ ನೌಕರರ ವರ್ಗಾವಣೆಗಿಂತ ಮಾಡಬೇಕಾದ ಉತ್ತಮ ಕೆಲಸಗಳಿವೆ. ಸರ್ಕಾರಿ ನೌಕರರ ವರ್ಗಾವಣೆ ವಿಚಾರ ಆಯಾ ಇಲಾಖೆಗೇ ಬಿಡಬೇಕು. ಮುಖ್ಯಮಂತ್ರಿಗಳ ಕಚೇರಿ ವರ್ಗಾವಣೆಯ ಮನವಿ ಸ್ವೀಕರಿಸಬಾರದು ಎಂದು ತರಾಟೆಗೆ ತೆಗೆದುಕೊಂಡಿದೆ.

ಸರ್ಕಾರಿ ನೌಕರರ ವರ್ಗಾವಣೆ ವಿಚಾರ ಆಯಾ ಇಲಾಖೆಗೇ ಬಿಡಬೇಕು. ಮುಖ್ಯಮಂತ್ರಿಗಳ ಕಚೇರಿ ವರ್ಗಾವಣೆಯ ಮನವಿ ಸ್ವೀಕರಿಸಬಾರದು. ಇಂತಹ ವಿಚಾರಗಳಿಗೆ ಮುಖ್ಯಮಂತ್ರಿ ತಮ್ಮ ಸಮಯ ವಿನಿಯೋಗಿಸಬಾರದು ಎಂದು ಅಭಿಪ್ರಾಯಪಟ್ಟಿದ್ದು, ಹೈಕೋರ್ಟ್​ನ ಈ ಆದೇಶದ ಪ್ರತಿಯನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲು ಸೂಚನೆ ನೀಡಿದೆ.

ಇದನ್ನೂ ಓದಿ: ಇಂಧನ ಇಲಾಖೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪಕ್ಕೆ ಬೇಸತ್ತು ರಾಜೀನಾಮೆಗೆ ಮುಂದಾಗಿದ್ದ ಕೆಜೆ ಜಾರ್ಜ್: ಆಮೇಲಾಗಿದ್ದೇ ಬೇರೆ!

ಸಿಎಂ ನೀಡುವ ವರ್ಗಾವಣೆ ಪತ್ರಗಳ ಬಗ್ಗೆ ಹೈಕೋರ್ಟ್, ಸರ್ಕಾರದ ಮುಖ್ಯಕಾರ್ಯದರ್ಶಿ( ಸಿಎಸ್) ನಿಲುವು ಕೇಳಿತ್ತು. ಇದಕ್ಕೆ ಮುಖ್ಯ ಕಾರ್ಯದರ್ಶಿ ಸಹ ಉತ್ತರಿಸಿ, ಸಿಎಂ ಕಚೇರಿಯಿಂದ ನೀಡುವ ಟಿಪ್ಪಣಿಗಳು ಕೇವಲ ಶಿಫಾರಸುಗಳಷ್ಟೇ. ಸಂಬಂಧಪಟ್ಟ ಇಲಾಖೆ ವರ್ಗಾವಣೆ ಆದೇಶ ನೀಡುತ್ತದೆಂದು ಎಂದು ಹೇಳಿದ್ದರು.

ಇಂಧನ ಇಲಾಖೆಯ ಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಸಿಎಂ ಕಚೇರಿ ಮುಂದಾಗಿತ್ತು. ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಇಂಧನ ಇಲಾಖೆ ಆಡಳಿತದಲ್ಲಿ ತೀವ್ರ ಹಸ್ತಕ್ಷೇಪ ಮಾಡುತ್ತಿದ್ದರು. ಇದರಿಂದ ಅಸಮಾಧಾನಗೊಂಡ ಕೆಜೆ ಜಾರ್ಜ್ ಸಿಎಂ ನಿವಾಸಕ್ಕೆ ತೆರಳಿ ಪ್ರಶ್ನಿಸಿದ್ದರು, ಅಲ್ಲದೇ ರಾಜೀನಾಮೆ ಬಗ್ಗೆ ಸಹ ಪ್ರಸ್ತಾಪಿಸಿದ್ದರು. ಆದ್ರೆ,  ಸಿಎಂ ಸಿದ್ದರಾಮಯ್ಯ ಜಾರ್ಚ್ ಅವರನ್ನು ಸಮಾಧಾನಪಡಿಸಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ಹೀಗೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಎಲ್ಲಾ ಇಲಾಖೆಗಳಲ್ಲೂ ಮೂಗು ತೂರಿಸುತ್ತಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಹೈಕೋರ್ಟ್, ಸಿಎಂಗೆ ತರಾಟೆಗೆ ತೆಗೆದಯಕೊಂಡಿದ್ದು, ಮಾಡಬೇಕಾದ ಉತ್ತಮ ಕೆಲಸಗಳಿವೆ. ಅವುಗಳನ್ನು ಮಾಡಿ ಎಂದು ಟಾಂಗ್ ಕೊಟ್ಟಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಂಟೆಗಳ ಕಾಲ ಕುಳಿತು ಕೆಲಸ ಮಾಡ್ತೀರಾ? ಹಾಗಿದ್ರೆ ಇನ್ನಾದರೂ ತಪ್ಪದೆ ಈ ವಿಷಯಗಳನ್ನು ತಿಳಿದುಕೊಳ್ಳಿ

ಇಂದಿನ ಜೀವನಶೈಲಿಯಲ್ಲಿ, ಆಫೀಸ್, ಮನೆ ಕೆಲಸ ಅಥವಾ ಆನ್‌ಲೈನ್ ಅಧ್ಯಯನಕ್ಕಾಗಿ ಹಲವು ಗಂಟೆಗಳ ಕಾಲ ಕುಳಿತುಕೊಂಡು ಕೆಲಸ ಮಾಡುವುದು ಬಹಳ ಸಾಮಾನ್ಯವಾಗಿದೆ. ಜನರು ಕಂಪ್ಯೂಟರ್, ಲ್ಯಾಪ್‌ಟಾಪ್ ಅಥವಾ ಮೊಬೈಲ್ ಮುಂದೆ ನಿರಂತರವಾಗಿ ಕುಳಿತುಕೊಂಡಿರುತ್ತಾರೆ. ಆದರೆ ತಜ್ಞರ ಪ್ರಕಾರ, ಈ ಅಭ್ಯಾಸವನ್ನು ನಿರ್ಲಕ್ಷ್ಯ ಮಾಡುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಹೌದು, ಡಾ. ಅಜಯ್ ಕುಮಾರ್ ಹೇಳುವ ಪ್ರಕಾರ, ದೀರ್ಘಕಾಲ ಕುಳಿತುಕೊಳ್ಳುವುದರಿಂದ ಸ್ನಾಯುಗಳು ದುರ್ಬಲವಾಗುತ್ತವೆ ಮತ್ತು ಬೆನ್ನುಹುರಿಯ ಮೇಲೆ ಒತ್ತಡ ಹೆಚ್ಚುತ್ತದೆ. ಇದರಿಂದ ಬೆನ್ನು ನೋವು (Back Pain) ಸಾಮಾನ್ಯವಾಗುತ್ತದೆ. ರಕ್ತ ಸಂಚಾರ ನಿಧಾನಗೊಳ್ಳುವುದರಿಂದ ಕೈ- ಕಾಲುಗಳಲ್ಲಿ ಊತ ಕಾಣಿಸಬಹುದು. ಹಾಗಾಗಿ ಈ ರೀತಿಯ ಸಮಸ್ಯೆಗಳನ್ನು ತಡೆಯಲು ಕೆಲವು ಸಲಹೆಗಳನ್ನು ಅನುಸರಿಸುವುದು ಬಹಳ ಮುಖ್ಯವಾಗುತ್ತದೆ. ಇಲ್ಲವಾದಲ್ಲಿ ಇದು ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ಡಾ. ಅಜಯ್ ಕುಮಾರ್ ಪ್ರಕಾರ, ಇದರ ಜೊತೆಗೆ, ಈ ರೀತಿಯ ಅಭ್ಯಾಸದಿಂದ ತೂಕ ಹೆಚ್ಚಳ, ಹೃದಯಕ್ಕೆ ಸಂಬಂಧ ಪಟ್ಟ ರೋಗ ಮತ್ತು ಮಧುಮೇಹದಂತಹ ಅಪಾಯ ಹೆಚ್ಚಾಗಬಹುದು. ಅಷ್ಟು ಮಾತ್ರವಲ್ಲ, ಮೆಟಾಬಾಲಿಸಮ್ ನಿಧಾನಗೊಳ್ಳುವುದರಿಂದ ಕ್ಯಾಲೊರಿಗಳು ಸರಿಯಾಗಿ ಕಾಲಿಯಾಗದಿರಬಹುದು. ಜೊತೆಗೆ ನಿರಂತರವಾಗಿ ಕಂಪ್ಯೂಟರ್, ಲ್ಯಾಪ್‌ಟಾಪ್ ಅಥವಾ ಮೊಬೈಲ್ ನೋಡುವುದರಿಂದ ಕಣ್ಣುಗಳ ಮೇಲೂ ಒತ್ತಡ ಹೆಚ್ಚಾಗುವುದರಿಂದ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಬಹುದು. ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು, ಚಡಪಡಿಕೆ ಮತ್ತು ಕೆಲಸದ ಕಡೆ ಕೊಡುವಂತಹ ಗಮನ ಕಡಿಮೆಯಾಗಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೀವು ಕೆಲಸ ಮಾಡುವಾಗ ಕುಳಿತುಕೊಳ್ಳುವಂತಹ ಭಂಗಿಯಿಂದಲೂ ಬರಬಹುದು ಬೆನ್ನು ನೋವು ಎಚ್ಚರಿಕೆ ನೀಡಿದ ಡಾ ಅಜಯ್‌ ಹೆಗ್ಡೆ

ಈ ರೀತಿಯ ಲಕ್ಷಣ ಕಂಡುಬಂದಾಗ ನಿರ್ಲಕ್ಷಿಸಬಾರದು!

  • ಬೆನ್ನು ನೋವು
  • ಕಣ್ಣುಗಳಲ್ಲಿ ಉರಿ, ದಣಿವು
  • ಕೈ-ಕಾಲುಗಳಲ್ಲಿ ಊತ, ನೋವು
  • ಶಕ್ತಿ ಕೊರತೆ, ಚಡಪಡಿಕೆ, ನಿದ್ರೆ ಸರಿಯಾಗಿ ಬಾರದಿರುವುದು
  • ತೂಕ ಹೆಚ್ಚಳ, ಸ್ನಾಯು ದುರ್ಬಲತೆ

ತಡೆಗಟ್ಟುವುದು ಹೇಗೆ?

  • ಪ್ರತೀ ಗಂಟೆಗೊಮ್ಮೆ ಬ್ರೇಕ್ ತೆಗೆದುಕೊಳ್ಳಿ
  • ಎದ್ದು ಸ್ಟ್ರೆಚಿಂಗ್ ಅಥವಾ ಸಣ್ಣ ವಾಕ್ ಮಾಡಿ ಬನ್ನಿ
  • ಸರಿಯಾದ ಸ್ಥಿತಿಯಲ್ಲಿ ಕುಳಿತುಕೊಳ್ಳಿ, ಕಂಪ್ಯೂಟರ್ ಪರದೆ ಕಣ್ಣು ಮಟ್ಟದಲ್ಲಿ ಇರಲಿ
  • ಸಮತೋಲನ ಆಹಾರ ಸೇವಿಸಿ, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ
  • ಸ್ಟ್ಯಾಂಡಿಂಗ್ ಡೆಸ್ಕ್ ಅಥವಾ ಯೋಗ, ನಿಯಮಿತ ವ್ಯಾಯಾಮ ಮಾಡುವುದನ್ನು ಮರೆಯಬೇಡಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನಸ್ಸಿನ ಶಾಂತಿ, ನೆಮ್ಮದಿಗಾಗಿ ಸಂಜೆ ಹೊತ್ತಲ್ಲಿ ತಪ್ಪದೇ ಈ ಕೆಲಸಗಳನ್ನು ಮಾಡಿ

ಇಂದಿನ ಈ ಬ್ಯುಸಿ ಜೀವನದಲ್ಲಿ ಅನೇಕರಿಗೆ ನೆಮ್ಮದಿ ಅನ್ನೋದೇ ಇಲ್ಲದಾಗಿದೆ. ಹೆಚ್ಚಿನವರು ಒತ್ತಡದ  ಜೀವನವನ್ನೇ (stressful Life) ನಡೆಸುತ್ತಿದ್ದಾರೆ. ಮನಸ್ಸು ನಿರಾಳವಾಗಿದ್ದರೆ ಮಾತ್ರ ಸಂತೋಷ, ನೆಮ್ಮದಿ, ಶಾಂತಿ ಜೀವನದಲ್ಲಿ ನೆಲೆಸುತ್ತದೆ. ಹಾಗಾಗಿ ಮನಸ್ಸನ್ನು ನಿರಾಳವಾಗಿಸಲು ಶಾಂತಿ ನೆಮ್ಮದಿಯನ್ನು ಪಡೆಯಲು ಹಲವರು ಸಾಕಷ್ಟು ಸರ್ಕಸ್‌ಗಳನ್ನು ಮಾಡುತ್ತಿರುತ್ತಾರೆ. ಏನೇ ಮಾಡಿದ್ರೂ ನೆಮ್ಮದಿ ಅನ್ನೋದೇ ಸಿಗುತ್ತಿಲ್ಲ ಅಂತ ಅನೇಕರು ಹೇಳುತ್ತಿರುತ್ತಾರೆ. ನೀವು ಕೂಡ ಇದೇ ರೀತಿ ಮನಸ್ಸಿನ ಶಾಂತಿ, ನೆಮ್ಮದಿಗಾಗಿ ಹಂಬಲಿಸುತ್ತಿದ್ದೀರಾ? ಹಾಗಿದ್ರೆ ಸಂಜೆಯ ಹೊತ್ತಲ್ಲಿ ತಪ್ಪದೆ ಈ ಕೆಲವು ಕೆಲಸಗಳನ್ನು ಮಾಡಿ, ಇದರಿಂದ ಖಂಡಿತವಾಗಿಯೂ ಇಡೀ ದಿನದ ಆಯಾಸ ಒತ್ತಡ ಕ್ಷಣಾರ್ಧದಲ್ಲಿ ಮಾಯವಾಗಿ ನೆಮ್ಮದಿ ಲಭಿಸುತ್ತದೆ.

ಮನಸ್ಸಿನ ಶಾಂತಿ, ನೆಮ್ಮದಿಗಾಗಿ ಸಂಜೆ ಈ ಕೆಲಸಗಳನ್ನು ಮಾಡಿ:

ಆಳವಾದ ಉಸಿರಾಟದ ವ್ಯಾಯಾಮ: ಇಡೀ ದಿನದ ಕೆಲಸದ ಒತ್ತಡದಿಂದ ಮುಕ್ತಿ ಪಡೆಯಲು ನಿತ್ಯ ಸಂಜೆ ಹೊತ್ತಲ್ಲಿ ಉಸಿರಾಟದ ವ್ಯಾಯಾಮವನ್ನು ಅಭ್ಯಾಸ ಮಾಡಿ. ಪ್ರತಿದಿನ ಸಂಜೆ 10 ರಿಂದ 15 ನಿಮಿಷಗಳ ಕಾಲ ಉಸಿರಾಟದ ವ್ಯಾಯಾಮ  ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ, ಮನಸ್ಸಿಗೆ ಶಾಂತಿ ಲಭಿಸುತ್ತದೆ.

ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ: ಸಂಜೆ ನಿಮ್ಮ ಎಲ್ಲಾ ಕೆಲಸ ಮುಗಿದ ತಕ್ಷಣ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಉಗುರು ಬೆಚ್ಚಗಿನ ನೀರಿನ ಸ್ನಾನವು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ, ಒತ್ತಡವನ್ನು ನಿವಾರಿಸುತ್ತದೆ ಮತ್ತು ಮನಸ್ಸನ್ನು ನಿರಾಳಗೊಳಿಸುತ್ತದೆ.

ಸಾಮಾಜಿಕ ಮಾಧ್ಯಮದಿಂದ ದೂರವಿರಿ: ಕೆಲಸದಿಂದ ಮನೆಗೆ ಬಂದ ತಕ್ಷಣ ಸೋಷಿಯಲ್‌ ಮೀಡಿಯಾ ನೋಡುತ್ತಾ, ಮೊಬೈಲ್‌ ಸ್ಕ್ರೋಲ್‌ ಮಾಡುತ್ತಾ ಟೈಮ್‌ ವೇಸ್ಟ್‌ ಮಾಡುವ ಬದಲು ಕುಟುಂಬ ಸದಸ್ಯರೊಂದಿಗೆ ಮಾತನಾಡುತ್ತಾ ಸ್ವಲ್ಪ ಸಮಯ ಕಳೆಯಿರಿ, ಮನೆ ಕೆಲಸಗಳನ್ನು ಮಾಡಿ. ಈ ಅಭ್ಯಾಸ ಖಂಡಿತವಾಗಿಯೂ ನಿಮ್ಮ ಮನಸ್ಸಿಗೆ ನೆಮ್ಮದಿ ನೀಡುತ್ತದೆ.

ವಾಕಿಂಕ್‌ ಮಾಡಿ: ಸಂಜೆ ಕಚೇರಿಯಿಂದ ಬಂದ ನಂತರ ಮೊಬೈಲ್‌ ನೋಡುವ ಬದಲು ವಾಕಿಂಗ್‌ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. 15 ರಿಂದ 20 ನಿಮಿಷಗಳ ಕಾಲ ವಾಕಿಂಗ್‌ ಮಾಡುವುದರಿಂದ ದೇಹದಲ್ಲಿ ಸಂತೋಷದ ಹಾರ್ಮೋನ್‌ ಆದ ಎಂಡಾರ್ಫಿನ್‌ ಬಿಡುಗಡೆಯಾಗುತ್ತದೆ. ಇದರಿಂದ ಮನಸ್ಸಿಗೆ ಸಂತೋಷ ದೊರೆಯುತ್ತದೆ.

ಡೈರಿ ಬರೆಯುವ ಅಭ್ಯಾಸ ಬೆಳೆಸಿಕೊಳ್ಳಿ: ನೀವು ದಿನವಿಡೀ ಏನೆಲ್ಲಾ ಮಾಡಿದ್ದೀರಿ, ನಾಳೆ ಏನೆಲ್ಲಾ ಮಾಡಬೇಕು ಎಂಬುದನ್ನು ಸಂಜೆ ಹೊತ್ತಲ್ಲಿ ಡೈರಿಯಲ್ಲಿ ಬರೆಯಿರಿ. ಡೈರಿ ಬರೆಯುವ ಅಭ್ಯಾಸ ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ.

ಗಿಡಮೂಲಿಕಾ ಚಹಾ ಸೇವಿಸಿ: ಸಂಜೆ ಒಂದು ಲೋಟ ಗಿಡಮೂಲಿಕಾ ಚಹಾ ಸೇವನೆ ಮಾಡಿ. ಇದು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ರಾತ್ರಿ ಉತ್ತಮ ನಿದ್ರೆ ಪಡೆಯಲು ನಿಮಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ದೀರ್ಘಾಯುಷ್ಯ ನಿಮ್ಮದಾಗಬೇಕೇ? ಹಾಗಿದ್ರೆ ಪಾಲಿಸಿ ಸಲಹೆ

ಪುಸ್ತಕ ಓದಿ: ಸಂಜೆ ಕಚೇರಿಯಿಂದ ಬಂದ ನಂತರ ಕೆಲಸಗಳನ್ನೆಲ್ಲಾ ಮುಗಿಸಿ, ಒಂದೊಳ್ಳೆ ಪುಸ್ತಕವನ್ನು ಓದಿ. ಈ ರೀತಿ ಪುಸ್ತಕವನ್ನು ಓದುವುದರಿಂದ ಒತ್ತಡವೆಲ್ಲಾ ನಿವಾರಣೆಯಾಗಿ ಮನಸ್ಸು ನಿರಾಳವಾಗುತ್ತದೆ.

ನಿಮ್ಮ ನೆಚ್ಚಿನ ಪದ್ಯ ಕೇಳಿ: ಸಂಜೆ ಸ್ವಲ್ಪ ಹೊತ್ತು ಶಾಂತವಾಗಿ ಕುಳಿತು ನಿಮ್ಮ ನೆಚ್ಚಿನ ಹಾಡುಗಳನ್ನು ಕೇಳಿ. ಹೀಗೆ ಹಾಡುಗಳನ್ನು ಕೇಳುವುದರಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ಸಿಗುತ್ತದೆ. ಇಡೀ ದಿನದ ಒತ್ತಡ ನಿವಾರಣೆಯಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಮಚಂದ್ರ ರಾವ್ ಕೇಸ್​​​​: ವೈರಲ್​ ಆಗಿರುವ ವಿಡಿಯೋ ಅಸಲಿ ಎಂದ ತನಿಖಾ ತಂಡ

ಬೆಂಗಳೂರು, ಮಾರ್ಚ್​​ 19: ಸಮವಸ್ತ್ರದಲ್ಲಿಯೇ ಕಚೇರಿಯಲ್ಲಿ ಮಹಿಳೆಯೋರ್ವರ ಜೊತೆ ಅನುಚಿತವಾಗಿ ಕೆ. ರಾಮಚಂದ್ರ ರಾವ್ ವರ್ತಿಸಿರುವ ವಿಡಿಯೋ ವೈರಲ್​​ ಪ್ರಕರಣ ಸಂಬಂಧ ಮಹತ್ವದ ಬೆಳವಣಿಗೆ ನಡೆದಿದೆ. ವಿಡಿಯೋಗಳು ಸಂಪೂರ್ಣವಾಗಿ ನಿಜವಾಗಿದ್ದು, ಅವು ಡೀಪ್‌ಫೇಕ್, AI ನಿರ್ಮಿತ ಅಥವಾ ಯಾವುದೇ ರೀತಿಯಲ್ಲಿ ಎಟಿಟ್​​ ಆಗಿರುವ ದೃಶ್ಯಗಳಲ್ಲ ಎಂಬುದು ದೃಢ ಪಟ್ಟಿದೆ. ಈ ಕುರಿತು ತನಿಖೆ ನಡೆಸಲು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್. ಹಿತೇಂದ್ರ ನೇತೃತ್ವದಲ್ಲಿ ರಾಜ್ಯ ಸರ್ಕಾರ ನೇಮಿಸಿದ್ದ 4 ಮಂದಿ ಐಪಿಎಸ್​​ ಅಧಿಕಾರಿಗಳ ತಂಡ 100 ಪುಟಗಳ ವರದಿ ನೀಡಿದೆ.

ವರದಿಯಲ್ಲಿ ಏನಿದೆ?

  • ವಿಡಿಯೋಗಳು ನಿಜವಾಗಿವೆ, ಎಡಿಟ್​​ ಆಗಿಲ್ಲ
  • ಫಾರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ (FSL) ದೃಢೀಕರಣದಂತೆ ವಿಡಿಯೋಗಳಲ್ಲಿ ಯಾವುದೇ ಮಾರ್ಪಾಡಾಗಿಲ್ಲ
  • ರಾವ್ ಅವರ ಬೆಳಗಾವಿ ಅವಧಿಯಲ್ಲಿ ಕೆಲಸ ಮಾಡಿದ್ದ ಸಿಬ್ಬಂದಿ (ಚಾಲಕರು, ಕಚೇರಿ ಸಿಬ್ಬಂದಿ) ಮಹಿಳೆಯರನ್ನು ಗುರುತಿಸಿದ್ದು, ಅವರು ರಾವ್ ಅವರ ಖಾಸಗಿ ಕಚೇರಿಗೆ ಹಲವು ಬಾರಿ ಭೇಟಿ ನೀಡಿದ್ದನ್ನು ದೃಢಪಡಿಸಿದ್ದಾರೆ
  • ಮೂಲಗಳ ಪ್ರಕಾರ, ಮಹಿಳೆಯರಲ್ಲಿ ಒಬ್ಬರು ತಮ್ಮ ಮೊಬೈಲ್‌ನಲ್ಲಿ ಈ ವಿಡಿಯೋವನ್ನು ಉದ್ದೇಶಪೂರ್ವಕವಾಗಿ ಚಿತ್ರೀಕರಿಸಿದ್ದಾರೆ

ಇದನ್ನೂ ಓದಿ: ಕಚೇರಿಯಲ್ಲೇ ಮಹಿಳೆಯರ ಜತೆ ಡಿಜಿಪಿ ಸರಸ ಸಲ್ಲಾಪ: ರಾಮಚಂದ್ರ ರಾವ್​​ಗೆ ಸಂಕಷ್ಟ!

ಮಹಿಳೆಯರು ನಾಪತ್ತೆ, ಮುಂದೇನು?

ಪ್ರಕರಣದಲ್ಲಿ ಬಹು ಮುಖ್ಯವಾದ ವಿಡಿಯೋದಲ್ಲಿರುವ ಇಬ್ಬರೂ ಮಹಿಳೆಯರು ಘಟನೆ ಬೆಳಕಿಗೆ ಬಂದ ಬಳಿಕ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ. ಆದರೆ ಮುಂದಿನ ನತಿಖೆಗೆ ಅವರ ಹೇಳಿಕೆ ಅತ್ಯಂತ ಪ್ರಮುಖವಾಗಿದ್ದು, ಅವರು ತನಿಖಾ ತಂಡದ ಮುಂದೆ ಹಾಜರಾಗಲೇಬೇಕಿದೆ. ಮತ್ತೊಂದೆಡೆ ಹಿರಿಯ ಅಧಿಕಾರಿಗಳ ತಂಡದ ವರದಿ ಬಳಿಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ರಾವ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಅಧಿಕೃತ ಇಲಾಖಾ ತನಿಖೆ ಪ್ರಾರಂಭವಾಗಿದೆ. ರಾವ್ ಮೇ 31ರಂದು ನಿವೃತ್ತಿಯಾಗಲಿದ್ದಾರೆಯಾದರೂ ತನಿಖೆ ಮುಂದುವರಿದರೆ, ಅವರ ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎಂದು ಬೆಂಗಳೂರು ನೌ ವರದಿ ಮಾಡಿದೆ.

ಇಬ್ಬರು ಮಹಿಳೆಯರೊಂದಿಗೆ ಕೆ. ರಾಮಚಂದ್ರ ರಾವ್ ಅಸಭ್ಯ ವರ್ತನೆ ನಡೆಸುತ್ತಿರುವ ದೃಶ್ಯಗಳು 2016-17ರ ಅವಧಿಯಲ್ಲಿ ಬೆಳಗಾವಿ ವಲಯದ ಐಜಿಪಿ ಕಚೇರಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದುಬಂದಿದೆ.  ಇನ್ನು ವಿಡಿಯೋಗಳು ಹೊರಬಂದಾಗ, ರಾವ್ ಅವುಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದರು. ಅವು ಮಾರ್ಫ್ ಮಾಡಲ್ಪಟ್ಟಿದ್ದು, AI ಮೂಲಕ ಸೃಷ್ಟಿಸಲ್ಪಟ್ಟಿವೆ. ತಮ್ಮ ವಿರುದ್ಧ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿ, ಕಾನೂನು ಕ್ರಮ ಕೈಗೊಳ್ಳುವುದಾಗಿ ಕೂಡ ಎಚ್ಚರಿಕೆ ನೀಡಿದ್ದರು. ಆದರೆ ಈಗ ಆ ವಿಡಿಯೋಗಳ ಅಸಲೀಯತ್ತು ಹೊರ ಬಂದಿರೋದು ಅಮಾನತುಗೊಂಡಿರುವ ಡಿಜಿಪಿಗೆ ಸಂಕಷ್ಟ ತಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಚಿನ್ನದ ಬೆಲೆ ಸತತವಾಗಿ ಇಳಿಯುತ್ತಿರುವುದು ಯಾಕೆ? ಮತ್ತೆ ಯಾವಾಗ ಏರಿಕೆಯಾಗುತ್ತೆ?

ನವದೆಹಲಿ, ಮಾರ್ಚ್ 19: ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver Rates) ಕಳೆದ ಕೆಲ ವಾರಗಳಿಂದ ಕುಸಿತ ಕಾಣುತ್ತಿವೆ. ಭೌತಿಕ ಚಿನ್ನ ಮತ್ತು ಬೆಳ್ಳಿ ಮಾತ್ರವಲ್ಲ, ಎಂಸಿಎಕ್ಸ್​ನಲ್ಲಿ ಗೋಲ್ಡ್ ಫ್ಯೂಚರ್ಸ್ ದರ ಒಂದು ತಿಂಗಳ ಕನಿಷ್ಠಕ್ಕೆ ಜಾರಿದೆ. ಗೋಲ್ಡ್ ಇಟಿಎಫ್, ಸಿಲ್ವರ್ ಇಟಿಎಫ್​ಗಳೂ ಕೂಡ ಕುಸಿತ ಕಾಣುತ್ತಿವೆ. ಗುರುವಾರ ಚಿನ್ನದ ಬೆಲೆ ಸತತ ಏಳನೇ ಬಾರಿ ಇಳಿಕೆಯಾಗಿದೆ. ಆರು ವಾರಗಳ ಕನಿಷ್ಠ ಮಟ್ಟ ತಲುಪಿದೆ. ಚಿನ್ನ, ಬೆಳ್ಳಿ ಬೆಲೆಗಳ ಕುಸಿತಕ್ಕೆ ಎರಡು ಸಂಭಾವ್ಯ ಕಾರಣಗಳು ಈ ಕೆಳಕಂಡಂತಿವೆ:

1. ಅಮೆರಿಕದ ಆರ್ಥಿಕತೆ ಬಗ್ಗೆ ಫೆಡರಲ್ ರಿಸರ್ವ್ ಮಾಡಿದ ಅಂದಾಜು

ಅಮೆರಿಕದ ಸೆಂಟ್ರಲ್ ಬ್ಯಾಂಕ್ ಎನಿಸಿದ ಫೆಡರಲ್ ರಿಸರ್ವ್ ಈ ಬಾರಿಯೂ ತನ್ನ ಬಡ್ಡಿದರವನ್ನು ಕಡಿತಗೊಳಿಸಿಲ್ಲ. ಮುಂಬರುವ ದಿನಗಳಲ್ಲೂ ಹೆಚ್ಚಿನ ಕಡಿತ ಇರದು ಎನ್ನುವ ಸುಳಿವು ಕೊಟ್ಟಿದೆ.

ಇದನ್ನೂ ಓದಿ: ಷೇರು ಮಾರುಕಟ್ಟೆ ಭಾರೀ ಕುಸಿತ; ಸಿಕ್ಕಾಪಟ್ಟೆ ನಷ್ಟ ಕಂಡ ಸೆನ್ಸೆಕ್ಸ್, ನಿಫ್ಟಿ; ಈ ಪರಿ ಕುಸಿತಕ್ಕೆ ಕಾರಣಗಳೇನು?

ಆದರೆ, ಅಮೆರಿಕದ ಹಣದುಬ್ಬರ ಏರಬಹುದು ಎಂದು ಹೇಳಿರುವುದು ಮಾರುಕಟ್ಟೆಗೆ ನೆಗಟಿವ್ ಎನಿಸಿದೆ. ಹಣದುಬ್ಬರ ಹೆಚ್ಚಿದರೆ ಫೆಡರಲ್ ರಿಸರ್ವ್ ಬಡ್ಡಿದರ ಕಡಿತಗೊಳಿಸುವ ಸಾಧ್ಯತೆ ಕ್ಷೀಣಿಸುತ್ತದೆ. ಹೀಗಾಗಿ, ಚಿನ್ನದ ಮೇಲಿನ ಹೂಡಿಕೆಗಳನ್ನು ಕೈಬಿಡುತ್ತಿರುವ ಟ್ರೆಂಡ್ ಇದೆ.

2. ಅಮೆರಿಕದ ಡಾಲರ್ ಇಂಡೆಕ್ಸ್ ಬಲ

ಅಮೆರಿಕದ ಡಾಲರ್ ಇಂಡೆಕ್ಸ್ ಬಲಗೊಳ್ಳುತ್ತಿದೆ. ಇದು ಚಿನ್ನವನ್ನು ದುರ್ಬಲಗೊಳಿಸುತ್ತಿರಬಹುದು. ತೈಲ ಬೆಲೆ ಹೆಚ್ಚಿರುವುದರಿಂದ ಡಾಲರ್ ಬಲ ಮತ್ತಷ್ಟು ಹೆಚ್ಚುತ್ತದೆ. ಹೀಗಾಗಿ, ಚಿನ್ನದ ಬೆಲೆ ಇಳಿಯುತ್ತಿರಬಹುದು.

ಇದನ್ನೂ ಓದಿ: ಇಂಧನ ದತ್ತಾಂಶವನ್ನು ರಾಷ್ಟ್ರೀಯ ಭದ್ರತಾ ವಿಚಾರವೆಂದು ವರ್ಗೀಕರಿಸಿದ ಸರ್ಕಾರ; ತೈಲ, ಅನಿಲ ಕ್ಷೇತ್ರದ ಸಂಸ್ಥೆಗಳಿಗೆ ಹೊಸ ಜವಾಬ್ದಾರಿ

ಚಿನ್ನದ ಬೆಲೆ ಕುಸಿತ ಯಾವಾಗ ನಿಲ್ಲುತ್ತೆ?

ಚಿನ್ನದ ಕುಸಿತಕ್ಕೆ ಹೊಸ ಕಾರಣಗಳ ಸಂಭಾವ್ಯತೆ ಇಲ್ಲದೇ ಇರುವುದು, ಜಾಗತಿಕ ಅನಿಶ್ಚಿತ ಪರಿಸ್ಥಿತಿ ಮುಂದುವರಿಯುತ್ತಿರುವುದು ಚಿನ್ನಕ್ಕೆ ಮತ್ತೆ ಬೇಡಿಕೆ ಕುದುರುವ ಅವಕಾಶ ಇದೆ. ಈ ವರ್ಷದೊಳಗೆ ಒಮ್ಮೆ ಬಡ್ಡಿದರ ಕಡಿತಗೊಳಿಸುವುದಾಗಿ ಫೆಡರಲ್ ರಿಸರ್ವ್ ಸುಳಿವು ಕೊಟ್ಟಿರುವುದರಿಂದ ಮುಂಬರುವ ದಿನಗಳಲ್ಲಿ ಬೆಲೆ ಏರುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಚಿತ್ರದುರ್ಗದಲ್ಲಿ ಐವರ ಮೇಲೆ ಆ್ಯಸಿಡ್ ದಾಳಿ; ಮಚ್ಚಿನಿಂದ ಹಲ್ಲೆ ಮಾಡಿ ವ್ಯಕ್ತಿ ಪರಾರಿ

ಚಿತ್ರದುರ್ಗ, ಮಾರ್ಚ್​ 19: ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ (Attack) ಮಾಡಿ ಬಳಿಕ ಮನೆ ಮಂದಿಯ ಮೇಲೆ ಆ್ಯಸಿಡ್ ದಾಳಿ (Acid Attack) ಮಾಡಿ ವ್ಯಕ್ತಿಯೋರ್ವ ಪರಾರಿ ಆಗಿರುವಂತಹ ಘಟನೆ ಚಿತ್ರದುರ್ಗದ ಮಾಳಪ್ಪನಹಟ್ಟಿಯಲ್ಲಿ ನಡೆದಿದೆ. ಸುಹೈಲ್ ಭಾಷಾನಿಂದ ದುಷ್ಕೃತ್ಯ ಎಸಗಲಾಗಿದೆ. ಘಟನೆಯಲ್ಲಿ ಮಹಿಳೆ ತಾಸಿನಾ ಬಾನು ಸೇರಿದಂತೆ ಆಕೆಯ ಸಹೋದರಿ ನೇಹಾ, ಪುತ್ರಿ ಇಕ್ರಾ, ನಗ್ಮಾ ನಾಯ್ಕ್ ಮೇಲೆ ಆ್ಯಸಿಡ್ ದಾಳಿ ಮಾಡಲಾಗಿದೆ. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು? 

ತಾಸಿನಾ ಬಾನು ಮತ್ತು ಸುಹೈಲ್ ಭಾಷಾ ಪ್ರೀತಿಸಿ ಮದುವೆಯಾಗಿದ್ದರು. ಚಿತ್ರದುರ್ಗದ ನೆಹರು ನಗರದ ನಿವಾಸಿ ಸುಹೈಲ್ ಭಾಷಾ ಆಟೋ ಚಾಲಕ. ಆದರೆ ಪತಿಯ ಕಿರುಕುಳದಿಂದ ಬೇಸತ್ತು ತಾಸಿನಾ ಕೆಲವು ತಿಂಗಳ ಹಿಂದೆ ಪತಿಯನ್ನ ತೊರೆದು ಬೆಂಗಳೂರಿಗೆ ಬಂದಿದ್ದರು. ರಂಜಾನ್​​ ಹಬ್ಬಕ್ಕೆಂದು ಇತ್ತ ಚಿತ್ರದುರ್ಗದಲ್ಲಿರುವ ತನ್ನ ಸಹೋದರಿಯ ಮನೆಗೆ ಬಂದಿದ್ದರು. ಈ ವೇಳೆ ಸುಹೈಲ್ ಭಾಷಾ ದುಷ್ಕೃತ್ಯ ಮೆರೆದಿದ್ದಾರೆ. ತನ್ನೊಂದಿಗಿನ ಸಂಬಂಧ ಕಡಿದುಕೊಂಡಿದ್ದಕ್ಕೆ ಕೃತ್ಯವೆಸಗಲಾಗಿದೆ ಎನ್ನಲಾಗುತ್ತಿದೆ.

ಆಸ್ತಿ ವಿಚಾರಕ್ಕೆ ಅಣ್ಣನಿಂದ ತಂಗಿಯ ಬರ್ಬರ ಕೊಲೆ

ಆಸ್ತಿ ವಿಚಾರಕ್ಕೆ ಅಣ್ಣನಿಂದ ತಂಗಿಯ ಬರ್ಬರ ಕೊಲೆ ನಡೆದಿರುವಂತಹ ಘಟನೆ ಧಾರವಾಡ ತಾಲೂಕಿನ ಅಮ್ಮಿನಭಾವಿಯಲ್ಲಿ ನಡೆದಿದೆ. ತಂಗಿ ಶಿವಕ್ಕ(45) ರನ್ನ ಅಣ್ಣ ಹನುಮಂತ ಯಲಿವಾಳ ಮಾರಕಾಸ್ತ್ರದಿಂದ ಕೊಚ್ಚಿ ಹತ್ಯೆಗೈದಿದ್ದಾರೆ.

ಇದನ್ನೂ ಓದಿ: ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಇರಿದು ಭೀಕರವಾಗಿ ಕೊಲೆ: ಭಾವಿ ಪತಿ ಅನುಮಾಕ್ಕೆ ಅಪ್ರಾಪ್ತೆ ಬಲಿ

ತಂದೆಯ ಆಸ್ತಿಯಲ್ಲಿ ನನಗೂ ಪಾಲಿದೆ ಎನ್ನುತ್ತಿದ ಶಿವಕ್ಕ. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಕೂಡ ನಡೆದಿದೆ. ಜಮೀನು ಪೂಜೆಗಾಗಿ ಹೋದಾಗ ಮರ್ಡರ್ ಮಾಡಲಾಗಿದೆ. ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಆಲಿಕಲ್ಲು ಮಳೆಗೆ 25ಕ್ಕೂ ಹೆಚ್ಚು ಕುರಿಗಳು ಸಾವು

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಯಂಡಿಗೇರಿ ಗ್ರಾಮದಲ್ಲಿ ಆಲಿಕಲ್ಲು ಮಳೆಗೆ 25ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವಂತಹ ದಾರುಣ ಘಟನೆಯೊಂದು ನಡೆದಿದೆ. ಹುಸೇನಸಾಬ್ ಬಾಂಗದ ಎಂಬುವರಿಗೆ ಕುರಿಗಳು ಮೃತಪಟ್ಟಿವೆ. ಸೂಕ್ತ ಪರಿಹಾರ ನೀಡುವಂತೆ ಕುರಿಗಾಹಿ ಹುಸೇನಸಾಬ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕೊಟ್ಟ ಮಾತು ಉಳಿಸಿಕೊಂಡ ನಟ ಅಲ್ಲು ಅರ್ಜುನ್: ಭೇಷ್ ಎಂದ ನೆಟ್ಟಿಗರು

ಅಲ್ಲು ಅರ್ಜುನ್ (Allu Arjun), ಭಾರತದ ಸ್ಟಾರ್ ಪ್ಯಾನ್ ಇಂಡಿಯಾ ನಟ. ‘ಪುಷ್ಪ’, ‘ಪುಷ್ಪ 2’ ಸಿನಿಮಾಗಳ ಬಳಿಕ ಅಲ್ಲು ಅರ್ಜುನ್ ರೇಂಜ್ ಭಾರತದ ಗಡಿ ದಾಟಿದೆ. ಇದೀಗ ಭಾರತದ ಸ್ಟಾರ್ ನಿರ್ದೇಶಕರುಗಳು ಒಬ್ಬರಾದ ಬಳಿಕ ಒಬ್ಬರೆಂಬಂತೆ ಅಲ್ಲು ಅರ್ಜುನ್ ಜೊತೆ ಸಾಲುಗಟ್ಟಿ ಸಿನಿಮಾ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್, ತಮ್ಮ ಸಿನಿಮಾಗಳಿಂದ ಮಾತ್ರವಲ್ಲ ತಮ್ಮ ಸಾಮಾಜಿಕ ಕಾರ್ಯಗಳಿಂದಲೂ ಖ್ಯಾತರು. ಈ ಹಿಂದೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ಅವರು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಸಹ ಮಾನವೀಯ ಕಾರ್ಯವೊಂದನ್ನು ಮಾಡಿದ್ದ ಅಲ್ಲು ಅರ್ಜುನ್, ಆ ಕಾರ್ಯವನ್ನು ಜೀವನ ಪರ್ಯಂತ ಮಾಡುವುದಾಗಿ ಹೇಳಿದ್ದರು. ಅದರಂತೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಅಲ್ಲು ಅರ್ಜುನ್.

ಕಳೆದ ತಿಂಗಳ ಅಂತ್ಯದಲ್ಲಿ ಅಂದರೆ ಫೆಬ್ರವರಿ 28ರಂದು ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯ ಸಮಲಕೋಟ ಮಂಡಲದ ವೆಟ್ಲಪಾಲೆಂ ಹೆಸರಿನ ಹಳ್ಳಿಯೊಂದರಲ್ಲಿ ಪಟಾಕಿ ಫ್ಯಾಕ್ಟರಿಯಲ್ಲಿ ನಡೆದ ಬೆಂಕಿ ಅವಘಡದಲ್ಲಿ 22 ಮಂದಿ ಮೃತರಾಗಿ ಹಲವಾರು ಮಂದಿ ಗಾಯಗೊಂಡಿದ್ದರು. ಅವಘಡದಲ್ಲಿ ಮೃತರಾದ ವ್ಯಕ್ತಿಗಳ ಹಿನ್ನೆಲೆ, ಅವರ ಕುಟುಂಬದ ಹಿನ್ನೆಲೆಗಳ ಬಗ್ಗೆ ಆ ನಂತರ ಹಲವು ವರದಿಗಳು ಪ್ರಕಟಗೊಂಡವು. ಇದೇ ಅವಘಡದಲ್ಲಿ ಕಡಿಂಪಲ್ಲಿ ಧನರಾಜು ಹೆಸರಿನ ವ್ಯಕ್ತಿ ಮೃತರಾಗಿದ್ದರು. ಅವರಿಗೆ ಮಗಳೊಬ್ಬಳಿದ್ದು, ಆಕೆ ಬುದ್ಧಿಮಾಂದ್ಯತೆ ಹೊಂದಿದ್ದರು. ಇದ್ದ ಒಬ್ಬ ತಂದೆಯನ್ನು ಕಳೆದುಕೊಂದ್ದ ಕಡಿಂಪಲ್ಲಿ ದುರ್ಗ ಪರಿಸ್ಥಿತಿ ಅಂಧಕಾರದಲ್ಲಿ ಮುಳುಗುವುದರಲ್ಲಿತ್ತು. ಆದರೆ ಅಲ್ಲು ಅರ್ಜುನ್ ಆ ಬಾಲಕಿಗೆ ನೆರವಾಗುವುದಾಗಿ ಘೋಷಿಸಿದರು.

ಆಕೆ ಇರುವವರೆಗೆ ಆಕೆಯ ಜೀವನಕ್ಕಾಗಿ ಪ್ರತಿತಿಂಗಳು 7500 ರೂಪಾಯಿ ಹಣವನ್ನು ನೀಡುವುದಾಗಿ ಘೋಷಣೆ ಮಾಡಿದರು. ಅಲ್ಲದೆ ತನ್ನ ಅಭಿಮಾನಿ ಬಳಗಕ್ಕೂ ಸಹ ಕಡಿಂಪಲ್ಲಿ ದುರ್ಗಾಗೆ ನೆರವಾಗುವಂತೆ ಮನವಿ ಮಾಡಿದರು. ಅದರಂತೆ ಇದೀಗ ಕಂಡಿಪಲ್ಲಿ ದುರ್ಗಾರ ಖಾತೆಗೆ ಹಣವನ್ನು ಅಲ್ಲು ಅರ್ಜುನ್ ಹಾಕಿದ್ದಾರೆ. ಕಂಡಿಪಲ್ಲಿ ದುರ್ಗ ಜೀವನ ಪರ್ಯಂತ ಅಲ್ಲು ಅರ್ಜುನ್ ಅವರು ಪ್ರತಿತಿಂಗಳು 7500 ರೂಪಾಯಿ ಹಣವನ್ನು ಹಾಕಲಿದ್ದಾರೆ. ಅಲ್ಲು ಅರ್ಜುನ್ ಅವರು ಒಬ್ಬ ಬುದ್ದಿಮಾಂದ್ಯ ಯುವತಿಯ ಜೀವನಕ್ಕಾಗಿ ಮಾಡುತ್ತಿರುವ ಈ ಮಾನವೀಯ ಸಹಾಯ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಹಲವರು ಅಲ್ಲು ಅರ್ಜುನ್ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ವಯಸ್ಸಿಗೆ ಮೀರಿದ ಸಾಧನೆ: ಅಪರೂಪದ ದಾಖಲೆ ಬರೆದ ಅಲ್ಲು ಅರ್ಜುನ್ ಪುತ್ರಿ ಆರ್ಹಾ

ಈ ಹಿಂದೆ ಅಲ್ಲು ಅರ್ಜುನ್ ಅವರ ‘ಪುಷ್ಪ 2’ ಸಿನಿಮಾ ಬಿಡುಗಡೆ ವೇಳೆ ಕಾಲ್ತುಳಿತದಿಂದ ಒಬ್ಬ ಮಹಿಳೆ ಮೃತಪಟ್ಟು, ಆಕೆಯ ಮಗ ಕೋಮಾಕ್ಕೆ ಜಾರಿದ್ದ. ಅವರಿಗೂ ಸಹ ಅಲ್ಲು ಅರ್ಜುನ್ ಕೋಟ್ಯಂತರ ರೂಪಾಯಿ ಸಹಾಯ ಮಾಡಿದ್ದು ಮಾತ್ರವೇ ಅಲ್ಲದೆ, ಈಗಲೂ ಕೋಮಾನಲ್ಲಿಯೇ ಇರುವ ಆ ಬಾಲಕನ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಅಲ್ಲು ಅರ್ಜುನ್ ಅವರೇ ಭರಿಸುತ್ತಿದ್ದಾರೆ. ಇದು ಮಾತ್ರವೇ ಅಲ್ಲದೆ ಇನ್ನೂ ಹಲವು ಸಾಮಾಜಿಕ ಕಾರ್ಯಗಳಲ್ಲಿ ಅಲ್ಲು ಅರ್ಜುನ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಸ್ಟಾರ್ ವೇಗಿಗಳಿಗೆ ಇಂಜುರಿ; ಥಂಡಾ ಹೊಡೆದ ತಂಡಗಳು

ಐಪಿಎಲ್ (IPL 2026) ಆರಂಭಕ್ಕೆ ಇನ್ನು ಹೆಚ್ಚು ದಿನಗಳು ಉಳಿದಿಲ್ಲ. ಹೀಗಾಗಿ ಎಲ್ಲಾ ಫ್ರಾಂಚೈಸಿಗಳು ತಯಾರಿಯಲ್ಲಿ ತೊಡಗಿದ್ದು, ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲು ತಂತ್ರ ರೂಪಿಸುತ್ತಿವೆ. ಆದಾಗ್ಯೂ ಕೆಲವು ತಂಡಗಳಿಗೆ ಸ್ಟಾರ್ ಆಟಗಾರರ ಇಂಜುರಿ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಸ್ಟಾರ್ ವೇಗಿಗಳೇ ಗಾಯದಿಂದ ಬಳಲುತ್ತಿರುವುದು ತಂಡಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಬೌಲರ್​ಗಳ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ತಂಡಗಳ ಪಟ್ಟಿಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಸನ್‌ರೈಸರ್ಸ್ ಹೈದರಾಬಾದ್ (SRH), ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಸೇರಿದೆ.

ಹೇಜಲ್‌ವುಡ್ ಬರುವುದು ಯಾವಾಗ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಗಾಯದಿಂದಾಗಿ ಬಹಳ ದಿನಗಳಿಂದ ಕ್ರಿಕೆಟ್​ನಿಂದ ದೂರ ಉಳಿದಿದ್ದಾರೆ. ಇದರಿಂದಾಗಿ ಅವರು ಆಶಸ್ ಹಾಗೂ ಟಿ20 ವಿಶ್ವಕಪ್ ಆಡಲು ಸಾಧ್ಯವಾಗಿರಲಿಲ್ಲ. ಇದೀಗ ಐಪಿಎಲ್ ಸಮೀಪಿಸುತ್ತಿದ್ದು, ಅವರು ಐಪಿಎಲ್‌ನಲ್ಲಿ ಆಡುವುದು ಇದುವರೆಗೆ ಖಚಿತವಾಗಿಲ್ಲ. ಕಳೆದ ಬಾರಿ ಆರ್‌ಸಿಬಿಯ ವೇಗದ ದಾಳಿಗೆ ಬಲ ತುಂಬಿದ್ದ ಹೇಜಲ್‌ವುಡ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈ ಬಾರಿ ಅವರ ಲಭ್ಯತೆ ಅನುಮಾನವಾಗಿದೆ.

ಎಸ್​ಆರ್​ಹೆಚ್​ ನಾಯಕನಿಗೆ ಇಂಜುರಿ

ಕಳೆದ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ಪ್ಯಾಟ್ ಕಮ್ಮಿನ್ಸ್ ಕೂಡ ಗಾಯದಿಂದ ಬಳಲುತ್ತಿದ್ದಾರೆ. ಆಶಸ್ ಟೆಸ್ಟ್ ಪಂದ್ಯದಲ್ಲಿ ಕಮ್ಮಿನ್ಸ್ ಗಾಯಗೊಂಡಿದ್ದರು. ಅಂದಿನಿಂದ ಕಮ್ಮಿನ್ಸ್ ಕ್ರಿಕೆಟ್ ಆಡಿಲ್ಲ. ಇದೀಗ ಕಮ್ಮಿನ್ಸ್ ಐಪಿಎಲ್‌ನಲ್ಲಿ ಆಡುವುದು ಅನುಮಾನವಾಗಿದೆ. ಹೀಗಾಗಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಪ್ಯಾಟ್ ಕಮ್ಮಿನ್ಸ್ ಬದಲಿಗೆ ಇಶಾನ್ ಕಿಶನ್​ಗೆ ತಂಡದ ನಾಯಕತ್ವ ವಹಿಸಿದೆ.

ಕೋಲ್ಕತ್ತಾಗೆ ಎರಡೆರಡು ಆಘಾತ

ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೂ ಸ್ಟಾರ್ ವೇಗಿಗಳ ಇಂಜುರಿ ದೊಡ್ಡ ತಲೆನೋವಾಗಿದೆ. ತಂಡದ ಪ್ರಮುಖ ವೇಗಿಗಳಾದ ಹರ್ಷಿತ್ ರಾಣಾ ಮತ್ತು ಮಥಿಶಾ ಪತಿರಾನ ಗಾಯಗಳಿಂದಾಗಿ ಈ ಆವೃತ್ತಿಯಿಂದಲೇ ಹೊರಗುಳಿದಿದ್ದಾರೆ. ಅಲ್ಲದೆ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ ಹೊರ ಹಾಕಿದ ಬಳಿಕ ಇದೀಗ ಕೆಕೆಆರ್ ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಸರಬಾನಿಯನ್ನು ಬದಲಿಯಾಗಿ ತಂಡಕ್ಕೆ ಸೇರಿಸಿಕೊಂಡಿದೆ.

IPL 2026: ವೃತ್ತಿಜೀವನಕ್ಕಾಗಿ ಮಹಾ ತ್ಯಾಗ ಮಾಡಿದ ಯುಜ್ವೇಂದ್ರ ಚಾಹಲ್

ಸಿಎಸ್​ಕೆ ವೇಗಿಗೂ ಗಾಯ

ಇದೀಗ ಐದು ಬಾರಿಯ ಚಾಂಪಿಯನ್‌ ತಂಡ ಸಿಎಸ್​ಕೆಗೂ ಸ್ಟಾರ್ ವೇಗಿಯ ಗಾಯದ ಸಮಸ್ಯೆ ದೊಡ್ಡ ಆಘಾತ ಎದುರಾಗಿದೆ. ವರದಿಯ ಪ್ರಕಾರ, ಆಸ್ಟ್ರೇಲಿಯಾದ ವೇಗಿ ನಾಥನ್ ಎಲಿಸ್ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದು, ಅವರು ಪಂದ್ಯಾವಳಿ ಪ್ರಾರಂಭಕ್ಕೂ ಮುನ್ನ ಅಥವಾ ಪಂದ್ಯಾವಳಿ ನಂತರವೂ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಸಾಧ್ಯತೆಯಿಲ್ಲ ಎಂದು ವರದಿಯಾಗಿದೆ. ಇದರಿಂದಾಗಿ ಅವರು ಈ ಬಾರಿಯ ಐಪಿಎಲ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಇದು ಸಿಎಸ್​ಕೆ ಪಾಳಯಕ್ಕೆ ದೊಡ್ಡ ಆಘಾತವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version