ನವದೆಹಲಿ, ಮಾರ್ಚ್ 19: ಟಿವಿ9 ನೆಟ್ವರ್ಕ್ ಆಯೋಜಿಸುವ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT Summit 2026) ಶೃಂಗಸಭೆ ತನ್ನ ನಾಲ್ಕನೇ ಆವೃತ್ತಿಯೊಂದಿಗೆ ಶೀಘ್ರದಲ್ಲೇ ಶುರುವಾಗಲು ಸಜ್ಜಾಗಿದೆ. ಮಾರ್ಚ್ 23 ಮತ್ತು 24ರಂದು ದೆಹಲಿಯಲ್ಲಿ ಈ ಶೃಂಗಸಭೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮುಖ್ಯ ಭಾಷಣ ಮಾಡಲಿದ್ದಾರೆ. ಸತತ ಮೂರನೇ ಬಾರಿಗೆ ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ಪ್ರಧಾನಿ ಮೋದಿ ಭಾರತದ ಅಭಿವೃದ್ಧಿಯ ದಿಕ್ಕಿನ ಕುರಿತು ಮಾತನಾಡಲಿದ್ದಾರೆ.
ಈ ಶೃಂಗಸಭೆಯು ದೇಶದ ಪ್ರಮುಖ ಸಮಸ್ಯೆಗಳು ಮತ್ತು ಅವಕಾಶಗಳ ಕುರಿತು ಉನ್ನತ ಮಟ್ಟದ ಚರ್ಚೆಗಳಿಗೆ ವೇದಿಕೆಯಾಗಲಿದೆ. “ಭಾರತ ಮತ್ತು ವಿಶ್ವ” ಎಂಬ ವಿಷಯವಿರುವ ಈ ಕಾರ್ಯಕ್ರಮವು ಆರ್ಥಿಕ ಗುರಿಗಳು, ರಾಜಕೀಯ ಬದಲಾವಣೆಗಳು, ತಾಂತ್ರಿಕ ಪ್ರಗತಿಗಳ ಬಗ್ಗೆ ಬೆಳಕು ಚೆಲ್ಲಲಿದೆ.
ಈ ಶೃಂಗಸಭೆಯ ಮೂಲಕ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಅಗತ್ಯವಾದ ಮಾರ್ಗಸೂಚಿಗಳನ್ನು ರೂಪಿಸಲು ಪ್ರಮುಖ ಚಿಂತಕರು, ಉದ್ಯಮಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಒಂದೇ ವೇದಿಕೆಯಲ್ಲಿ ಒಟ್ಟುಗೂಡಲಿದ್ದಾರೆ. ಕಳೆದ ಆವೃತ್ತಿಯಲ್ಲಿ “ಹೊಸ ವಿಶ್ವ ಕ್ರಮದಲ್ಲಿ ಭಾರತ” ಎಂಬ ವಿಷಯದ ಕುರಿತು ಚರ್ಚೆಗಳು ನಡೆದಿದ್ದರೆ, ಈ ವರ್ಷ ಚರ್ಚೆಗಳು 2047ರಲ್ಲಿ ಭಾರತ ಹೇಗಿರುತ್ತದೆ ಎಂಬುದರ ಮೇಲೆ ಕೇಂದ್ರೀಕರಿಸುತ್ತವೆ.
ಈ ಶೃಂಗಸಭೆಯಲ್ಲಿ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅಶ್ವಿನಿ ವೈಷ್ಣವ್ ಭಾಗವಹಿಸುವ ನಿರೀಕ್ಷೆಯಿದೆ. ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಾದ ಮೋಹನ್ ಯಾದವ್, ಪುಷ್ಕರ್ ಸಿಂಗ್ ಧಾಮಿ, ಭಜನ್ ಲಾಲ್ ಶರ್ಮಾ, ನಯಾಬ್ ಸಿಂಗ್ ಸೈನಿ, ಭಗವಂತ್ ಮಾನ್ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಪಾಲ್ಗೊಳ್ಳುವ ನಿರೀಕ್ಷೆ ಇದೆ. ರಾಜಕೀಯ ನಾಯಕರಾದ ಸ್ಮೃತಿ ಇರಾನಿ, ಅಖಿಲೇಶ್ ಯಾದವ್ ಮತ್ತು ಅಸಾದುದ್ದೀನ್ ಓವೈಸಿ ಕೂಡ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ನಿರೀಕ್ಷೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
2026 ರ ಐಪಿಎಲ್ ಮಾರ್ಚ್ 28 ರಂದು ಆರಂಭವಾಗಲಿದೆ. ಪ್ರತಿ ವರ್ಷದಂತೆ, ವಿಶ್ವದ ಕೆಲವು ಅತ್ಯುತ್ತಮ ಕ್ರಿಕೆಟಿಗರು 10 ವಿಭಿನ್ನ ತಂಡಗಳ ಪರ ಕಣಕ್ಕಿಳಿಯಲಿದ್ದಾರೆ. ಆದರೆ ಈ ಬಾರಿ ಒಂದೇ ಕೋಚ್ನ ಗರಡಿಯಲ್ಲಿ ಪಳಗಿದ 7 ಆಟಗಾರರು ಅಬ್ಬರಿಸಲು ಸಜ್ಜಾಗಿದ್ದಾರೆ. ಆ ಒಬ್ಬ ಕೋಚ್ ಯುವರಾಜ್ ಸಿಂಗ್ ಆಗಿದ್ದರೆ, ಅವರ ಗರಡಿಯಲ್ಲಿ ಪಳಗಿದ 7 ಆಟಗಾರರು ಯಾರು ಎಂಬುದರ ಪಟ್ಟಿ ಈ ಕೆಳಗಿನಂತಿದೆ.
ಯುವರಾಜ್ ಸಿಂಗ್ ಗರಡಿಯಲ್ಲಿ ಪಳಗಿ ಐಪಿಎಲ್ನಲ್ಲಿ ಹಾಗೂ ಟೀಂ ಇಂಡಿಯಾದಲ್ಲಿ ಅಬ್ಬರಿಸುತ್ತಿರುವ ಅಭಿಷೇಕ್ ಶರ್ಮಾ ಎಸ್ಆರ್ಹೆಚ್ ತಂಡದ ಉಪನಾಯಕತ್ವದ ಜವಾಬ್ದಾರಿ ಹೊತ್ತಿದ್ದಾರೆ. ಯುವರಾಜ್ ತರಬೇತಿಯಲ್ಲಿ ಅಭಿಷೇಕ್ ಅವರ ಆಟದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂತು. ಇದಕ್ಕೆ ಪೂರಕವಾಗಿ ಕಳೆದ ಎರಡು ಐಪಿಎಲ್ ಆವೃತ್ತಿಗಳಲ್ಲಿ ಅಭಿಷೇಕ್ ಐಪಿಎಲ್ನಲ್ಲಿ ರನ್ಗಳ ಮಳೆಗರೆದಿದ್ದಾರೆ.
ಟೀಂ ಇಂಡಿಯಾದ ಏಕದಿನ ಮತ್ತು ಟೆಸ್ಟ್ ನಾಯಕ ಶುಭ್ಮನ್ ಗಿಲ್ ಕೂಡ ಯುವರಾಜ್ ಸಿಂಗ್ ಅವರ ಶಿಷ್ಯರಾಗಿದ್ದು, ಅವರ ಮಾರ್ಗದರ್ಶನದಲ್ಲಿ ತಮ್ಮ ಬ್ಯಾಟಿಂಗ್ ಸುಧಾರಿಸಿಕೊಳ್ಳಲು ಸಾಕಷ್ಟು ಸಮಯ ಕಳೆದಿದ್ದಾರೆ. ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿರುವ ಗಿಲ್ಗೆ ಈ ಆವೃತ್ತಿ ನಿರ್ಣಾಯಕವಾಗಿದೆ. ಏಕೆಂದರೆ ಅವರು ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆಯಬೇಕೆಂದರೆ ಐಪಿಎಲ್ನಲ್ಲಿ ಅಬ್ಬರಿಸಬೇಕಿದೆ.
ಯುವರಾಜ್ ಶಿಷ್ಯರ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್ ಹೆಸರು ಕೆಳಿದವರಿಗೆ ಆಶ್ಚರ್ಯವಾಗಬಹುದು. ಏಕೆಂದರೆ ಸಂಜು ಸ್ಯಾಮ್ಸನ್ ಪಂಜಾಬ್ ಕ್ರಿಕೆಟ್ನೊಂದಿಗೆ ಸಂಬಂಧ ಹೊಂದಿಲ್ಲ ಅಥವಾ ಯುವರಾಜ್ ಸಿಂಗ್ ಯಾವುದೇ ಐಪಿಎಲ್ ತಂಡದಲ್ಲಿ ಸ್ಯಾಮ್ಸನ್ ಜೊತೆ ಆಡಿಲ್ಲ. ಆದಾಗ್ಯೂ, ಇತ್ತೀಚೆಗೆ ಟಿ20 ವಿಶ್ವಕಪ್ನಲ್ಲಿ ಸ್ಮರಣೀಯ ಪ್ರದರ್ಶನ ನೀಡಿದ ಸ್ಯಾಮ್ಸನ್, ವಿಶ್ವಕಪ್ ಪ್ರಾರಂಭವಾಗುವ ಮೊದಲು, ಯುವರಾಜ್ ಮತ್ತು ರಾಬಿನ್ ಉತ್ತಪ್ಪ ನನಗೆ ಕರೆ ಮಾಡಿ ಸಹಾಯ ಮಾಡಿದ್ದರು ಎಂದು ಸ್ಯಾಮ್ಸನ್ ಹೇಳಿದ್ದರು.
ಯುವರಾಜ್ ಸಿಂಗ್ ನಿವೃತ್ತಿ ಘೋಷಿಸಿದಾಗ, ರಿಷಭ್ ಪಂತ್ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ತುಂಬಬಹುದು ಎಂದಿದ್ದರು. ಆದಾಗ್ಯೂ, ಪಂತ್ ಏಕದಿನ ಮತ್ತು ಟಿ20ಮಾದರಿಯಲ್ಲಿ ಅದನ್ನು ಸಾಧಿಸಲು ವಿಫಲರಾದರು. ಆದಾಗ್ಯೂ, 2026 ರ ಐಪಿಎಲ್ ಆರಂಭಕ್ಕೂ ಮೊದಲು ಪಂತ್, ಯುವರಾಜ್ ಅವರಡಿಯಲ್ಲಿ ತರಬೇತಿ ಪಡೆದಿದ್ದಾರೆ. ಅದರ ವೀಡಿಯೊಗಳನ್ನು ಪಂತ್ ಅವರೇ ಪೋಸ್ಟ್ ಮಾಡಿದ್ದಾರೆ. ಆದ್ದರಿಂದ, ಈ ಐಪಿಎಲ್ನಲ್ಲಿ ಪಂತ್ ಏನಾದರೂ ವಿಶೇಷ ಸಾಧನೆ ಮಾಡಿದರೆ, ಯುವರಾಜ್ ಅವರ ಮಾರ್ಗದರ್ಶನ ಕೆಲಸ ಮಾಡಿದೆ ಎನ್ನಬಹುದು.
ಅಭಿಷೇಕ್ ಮತ್ತು ಗಿಲ್ ಅವರಂತೆಯೇ, ಪಂಜಾಬ್ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಪ್ರಭ್ಸಿಮ್ರಾನ್ ಸಿಂಗ್ ಕೂಡ ಕಳೆದ ಎರಡು ಮೂರು ವರ್ಷಗಳಿಂದ ಯುವರಾಜ್ ಸಿಂಗ್ ಅವರಿಂದ ಮಾರ್ಗದರ್ಶನ ಪಡೆದಿದ್ದಾರೆ. ಕಳೆದ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಪರ ಪ್ರಭ್ಸಿಮ್ರಾನ್ ಅವರ ಅದ್ಭುತ ಪ್ರದರ್ಶನದಲ್ಲಿ ಇದು ಸ್ಪಷ್ಟವಾಗಿತ್ತು. ಪಂಜಾಬ್ ತಂಡವನ್ನು ಫೈನಲ್ಗೆ ಕೊಂಡೊಯ್ಯುವಲ್ಲಿ ಪ್ರಭ್ಸಿಮ್ರಾನ್ ಪ್ರಮುಖ ಪಾತ್ರ ವಹಿಸಿದ್ದರು. ಈಗ, ಅವರ ಮಾರ್ಗದರ್ಶಕರ ಸಹಾಯದಿಂದ, ಅವರು ಮತ್ತೊಮ್ಮೆ ಪಂಜಾಬ್ ತಂಡವನ್ನು ಪ್ರಶಸ್ತಿಗೆ ಕೊಂಡೊಯ್ಯುವ ಭರವಸೆಯಲ್ಲಿದ್ದಾರೆ.
ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುವ ಓಪನರ್ ಪ್ರಿಯಾಂಶ್ ಆರ್ಯ, ಕಳೆದ ಐಪಿಎಲ್ ನಂತರ ಯುವರಾಜ್ ಸಿಂಗ್ ಅವರ ಅಕಾಡೆಮಿಯಲ್ಲಿ ಸ್ವಲ್ಪ ಸಮಯ ಕಳೆದಿದ್ದರು ಅಲ್ಲಿ ಅವರಿಗೆ ಪ್ರಭ್ಸಿಮ್ರಾನ್ ಜೊತೆಗಿದ್ದರು. ಇದಾದ ಬಳಿಕ ಪ್ರಿಯಾಂಶ್ ದೆಹಲಿ ತಂಡದ ಪರ ಕೆಲವು ಉತ್ತಮ ಇನ್ನಿಂಗ್ಸ್ಗಳನ್ನು ಆಡಿದ್ದರು. ಆದರೆ ಅವರ ನಿಜವಾದ ಪ್ರತಿಭೆ ಈಗ ಐಪಿಎಲ್ನಲ್ಲಿ ಮೂಡಿಬರಬೇಕಿದೆ.
ಈ ಐಪಿಎಲ್ ಸೀಸನ್, ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರಿಗೆ ನಿರ್ಣಾಯಕವಾಗಲಿದೆ. ಮುಂಬೈ ಇಂಡಿಯನ್ಸ್ ಪರ ನಾಲ್ಕು ಸೀಸನ್ಗಳನ್ನು ಕಳೆದಿದ್ದರೂ, ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ, ಆದರೆ ಈ ಬಾರಿ ಅವರು ಲಕ್ನೋ ಸೂಪರ್ ಜೈಂಟ್ಸ್ನ ಭಾಗವಾಗಿದ್ದಾರೆ. ಈ ಬಾರಿ ಅರ್ಜುನ್ಗೆ ಅವಕಾಶಗಳು ಸಿಗುವ ಸಾಧ್ಯತೆಗಳಿವೆ. ಆದ್ದರಿಂದ, ಹೊಸ ಸೀಸನ್ ಪ್ರಾರಂಭವಾಗುವ ಮೊದಲು, ಅರ್ಜುನ್, ಯುವರಾಜ್ ಸಿಂಗ್ ಅವರಿಂದ ಕೆಲವು ಸಲಹೆಗಳನ್ನು ಪಡೆದಿದ್ದಾರೆ. ಅದು ಅವರ ಬ್ಯಾಟಿಂಗ್ನಲ್ಲಿ ಸಹಾಯಕವಾಗಬಹುದು.
ಮಂಗಳೂರು, ಮಾರ್ಚ್ 19: ರಾಜ್ಯದ ಕರಾವಳಿ ಭಾಗದಲ್ಲಿ ನಾಳೆ ಅಂದರೆ ಮಾರ್ಚ್ 20ರಂದು ‘ಈದುಲ್ ಫಿತ್ರ್’ ಹಬ್ಬ (eid-ul-fitr) ಆಚರಣೆ ಮಾಡಲಾಗುತ್ತಿದೆ. ಆ ಮೂಲಕ ಒಂದು ದಿನ ಮೊದಲೇ ರಂಜಾನ್ ಹಬ್ಬ ಆಚರಣೆ ಮಾಡಲಾಗುತ್ತಿದೆ. ಇಂದು ಶವ್ವಾಲ್ ಮಾಸದ ಚಂದ್ರದರ್ಶನ ಹಿನ್ನೆಲೆ ಶುಕ್ರವಾರ ರಂಜಾನ್ ಹಬ್ಬ ಆಚರಣೆಗೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಘೋಷಣೆ ಮಾಡಿದ್ದಾರೆ. ಆ ಮೂಲಕ ಕಳೆದ ಒಂದು ತಿಂಗಳಿಂದ ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದ ಉಪವಾಸ ವ್ರತ ಮುಕ್ತಾಯವಾಗಲಿದೆ.
ಇಂದಿಗೆ ಉಪವಾಸ ವ್ರತ ಕೊನೆ
ಕಳೆದ ಒಂದು ತಿಂಗಳಿಂದ ಮುಸ್ಲಿಂ ಬಾಂಧವರು ಉಪವಾಸ ವ್ರತ ಆಚರಿಸುತ್ತಿದ್ದರು. ಚಂದ್ರದರ್ಶನ ಹಿನ್ನೆಲೆಯಲ್ಲಿ ಇಂದಿಗೆ ಉಪವಾಸ ವ್ರತ ಕೊನೆಯಾಗಿದೆ. ಹೀಗಾಗಿ ನಾಳೆ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಮೂಲಕ ಹಬ್ಬ ಆಚರಣೆ ಮಾಡಲಾಗುತ್ತದೆ. ಇತ್ತ ಮನೆಗಳಲ್ಲಿ ಹಬ್ಬದ ಅಡುಗೆಯ ತಯಾರಿ ಕೂಡ ಜೋರಾಗಿದೆ.
ಶುಕ್ರವಾರ ಬೆಳಗಿನ ವೇಳೆ ಜಿಲ್ಲೆಯ ಪ್ರಮುಖ ಮಸೀದಿಗಳಲ್ಲಿ ವಿಶೇಷ ಈದ್ ನಮಾಜ್ ನಡೆಯಲಿದೆ. ಸಾವಿರಾರು ಭಕ್ತರು ಒಂದೇ ಸ್ಥಳದಲ್ಲಿ ಸೇರಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಬಳಿಕ ಪರಸ್ಪರ ಹಸ್ತಲಾಘವ ಮತ್ತು ಆಲಿಂಗಿಸಿಕೊಳ್ಳುವ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.
ನಾಳೆ ಸಾರ್ವತ್ರಿಕ ರಜೆ
ಇನ್ನು ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅವರಿಂದ ರಂಜಾನ್ ಹಬ್ಬ ಘೋಷಣೆ ಆಗುತ್ತಿದ್ದಂತೆ ಇತ್ತ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೆಚ್.ವಿ.ದರ್ಶನ್, ನಾಳೆ ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ ಘೋಷಿಸಿದ್ದಾರೆ. ಸದ್ಯ ಕರಾವಳಿ ಭಾಗದಲ್ಲಿ ರಂಜಾನ್ ಹಬ್ಬದ ಸಂಭ್ರಮ ಕಳೆಗಟ್ಟಿದೆ.
ಬುಲಂದ್ಶಹರ್, ಮಾರ್ಚ್ 19: ಉತ್ತರ ಪ್ರದೇಶದ ವ್ಯಕ್ತಿಯೊಬ್ಬರ ಹೆಂಡತಿ ಫೇಸ್ಬುಕ್ನಲ್ಲಿ ಹಾಕಿದ್ದ “ಸಿಮೆಂಟ್ ಔರ್ ಡ್ರಮ್” (ಸಿಮೆಂಟ್ ಮತ್ತು ಡ್ರಮ್) ಎಂಬ ಪೋಸ್ಟ್ ಆ ವ್ಯಕ್ತಿಯನ್ನು ಎಷ್ಟು ಹೆದರಿಸಿದೆಯೆಂದರೆ ಅವರು ತನ್ನ ಹೆಂಡತಿಯನ್ನು ತನ್ನ ಪ್ರೇಮಿಯೊಂದಿಗೆ ಹೋಗಲು ಬಿಟ್ಟಿದ್ದಾರೆ. ಇದು ಉತ್ತರ ಪ್ರದೇಶದ ಬುಲಂದ್ಶಹರ್ನ ರಾಜ್ಕುಮಾರ್ ಅವರ ಕಥೆ. ಅವರು ತಮ್ಮ ಜೀವವನ್ನು ಉಳಿಸಿಕೊಳ್ಳಲು ಪತ್ನಿಯನ್ನು ಆಕೆಯ ಪ್ರಿಯಕರನಿಗೆ (Love Story) ಬಿಟ್ಟುಕೊಟ್ಟಿದ್ದಾರೆ.
ರಾಜ್ಕುಮಾರ್ ಅವರ ಪತ್ನಿಗೆ ಅನೈತಿಕ ಸಂಬಂಧವಿತ್ತು. ಆಕೆ ತನ್ನ ಪ್ರೇಮಿಯೊಂದಿಗೆ ಇರಲು ಆಗಾಗ ಗಂಡನೊಂದಿಗೆ ಜಗಳವಾಡುತ್ತಿದ್ದರು. ಕಳೆದ ವರ್ಷ ಜುಲೈನಿಂದ ಅವರ ಹೆಂಡತಿ ಗಂಡ ಮತ್ತು ಅವರ 6 ತಿಂಗಳ ಮಗುವನ್ನು ಬಿಟ್ಟು ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದರು. ಅವರು 1 ತಿಂಗಳ `ಕಾಲ ತಮ್ಮ ಪ್ರೇಮಿಯೊಂದಿಗೆ ವಾಸಿಸುತ್ತಿದ್ದರು. ಆಕೆ ಬೇರೊಬ್ಬನೊಂದಿಗೆ ಸಂಬಂಧವಿಟ್ಟುಕೊಂಡಿದ್ದನ್ನು ಮನೆಯವರಿಗೆ ಹೇಳುತ್ತೇನೆ ಎಂದಾಗ ಆಕೆ ಅದಕ್ಕೆ ಸಾಕ್ಷಿಯೇನಿದೆ? ಎಂದು ಕೇಳುತ್ತಿದ್ದರು ಎಂದು ರಾಜ್ಕುಮಾರ್ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ, ಅವರ ಪತ್ನಿ ತನ್ನ ಪ್ರಿಯಕರನೊಂದಿಗೆ ಫೋನ್ ಮಾಡುತ್ತಿದ್ದಾಗ ರಾಜ್ಕುಮಾರ್ ಆಕೆಯ ಫೋನ್ ಅನ್ನು ಕಸಿದುಕೊಂಡು ಸತ್ಯವನ್ನು ಎಲ್ಲರಿಗೂ ಬಹಿರಂಗಪಡಿಸಲು ಪ್ರಯತ್ನಿಸಿದರು. ಆಕೆಯ ಫೋನ್ ಪರಿಶೀಲಿಸಿದಾಗ ಅದರಲ್ಲಿ ಕೆಲವು ನಗ್ನ ಫೋಟೋಗಳು, “ಸಿಮೆಂಟ್ ಔರ್ ಡ್ರಮ್” (ಸಿಮೆಂಟ್ ಮತ್ತು ಡ್ರಮ್) ಎಂಬ ಕ್ಯಾಪ್ಷನ್ನೊಂದಿಗೆ ಫೇಸ್ಬುಕ್ನಲ್ಲಿ ಹಂಚಿಕೊಂಡ ಕೊಲೆ ಸ್ಟೋರಿಗಳು ಮತ್ತು “ನೀಲಾ ಡ್ರಮ್ ಔರ್ ಸಿಮೆಂಟ್” (ನೀಲಿ ಡ್ರಮ್ ಮತ್ತು ಸಿಮೆಂಟ್) ಎಂಬ ಕ್ಯಾಪ್ಷನ್ ಹಾಕಿರುವ ಒಂದು ಫೋಟೋ ಇರುವುದು ಕಂಡುಬಂದಿತ್ತು. ರಾಜ್ಕುಮಾರ್ ಇದನ್ನು ತನ್ನನ್ನು ಕೊಲ್ಲಲು ಸಂಚು ರೂಪಿಸುವ ಗುಪ್ತ ಸಂದೇಶವೆಂದು ಭಯಭೀತರಾದರು.
“ನೀಲಿ ಡ್ರಮ್ ಮತ್ತು ಸಿಮೆಂಟ್” ಎಂಬ ಶೀರ್ಷಿಕೆ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ನಡೆದ ಕೊಲೆ ಪ್ರಕರಣವನ್ನು ನೆನಪಿಸುತ್ತದೆ. ಆ ಕೊಲೆ ಪ್ರಕರಣದಲ್ಲಿ ಮಹಿಳೆ ಮುಸ್ಕಾನ್ ರಸ್ತೋಗಿ ತನ್ನ ಪ್ರಿಯಕರ ಸಾಹಿಲ್ ಶುಕ್ಲಾ ಜೊತೆಗೂಡಿ ತನ್ನ ಪತಿ ಸೌರಭ್ ರಜಪೂತ್ನನ್ನು ಕೊಂದು, ಸೌರಭ್ನ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಮೀರತ್ನ ಬ್ರಹ್ಮಪುರಿ ಪ್ರದೇಶದ ಅವರ ಮನೆಯಲ್ಲಿ ನೀಲಿ ಡ್ರಮ್ನೊಳಗೆ ತುಂಬಿ ಸಿಮೆಂಟ್ ಹಾಕಿ ಮುಚ್ಚಿದ್ದರು.
ಈ ಸುದ್ದಿ ಇಡೀ ದೇಶದಲ್ಲಿ ಹರಡಿದ್ದರಿಂದ ರಾಜಕುಮಾರ್ಗೂ ಈ ಕತೆ ಗೊತ್ತಿತ್ತು. ಅವರು ಹೆಂಡತಿಯೊಂದಿಗೆ ಜಗಳವಾಡಿದಾಗ ಆಕೆ ಅವರನ್ನು ನೀಲಿ ಡ್ರಮ್ನಲ್ಲಿ ಪ್ಯಾಕ್ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಳು ಎಂದು ಆರೋಪಿಸಲಾಗಿದೆ. ಈ ಬಗ್ಗೆ ರಾಜ್ಕುಮಾರ್ ಪೊಲೀಸರಿಗೆ ದೂರು ನೀಡಿದರು. ಸಂಧಾನ ಪ್ರಕ್ರಿಯೆಯ ಸಮಯದಲ್ಲಿ, ಅವರ ಪತ್ನಿ ತನ್ನ ಪ್ರೇಮಿಯೊಂದಿಗೆ ವಾಸಿಸಲು ಬಯಸುವುದಾಗಿ ಸ್ಪಷ್ಟಪಡಿಸಿದರು. ನಂತರ ರಾಜಕುಮಾರ್ ಆಕೆ ತನ್ನ ಪ್ರಿಯಕರನ ಜೊತೆಯೇ ಇರಲಿ ಎಂದು ಹೇಳಿ ತನ್ನ ಹೆಂಡತಿಯನ್ನು ಬಿಟ್ಟುಕೊಟ್ಟರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನೀವು ರಾತ್ರಿ ಮಲಗುವ ಮೊದಲು ಸೇವನೆ ಮಾಡುವ ಆಹಾರ ಆರೋಗ್ಯ ಕಾಪಾಡಿಕೊಳ್ಳಲು ತುಂಬಾ ಮುಖ್ಯವಾಗುತ್ತದೆ. ಅದರಲ್ಲಿಯೂ ಆಹಾರವನ್ನು 3 ಗಂಟೆಗಳ ಮೊದಲು ಸೇವನೆ ಮಾಡಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಒಂದು ಅಭ್ಯಾಸ ಅನೇಕ ರೀತಿಯ ರೋಗಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಅಷ್ಟು ಮಾತ್ರವಲ್ಲ, ಇದಕ್ಕೆ ಪೂರಕವಾಗಿ ನಾರ್ತ್ವೆಸ್ಟರ್ನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದು, ವ್ಯಕ್ತಿ ಮಲಗುವ 3 ಗಂಟೆಗಳ ಮೊದಲು ಆಹಾರ ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡದಿಂದ (Hypertension) ಹೃದಯ ಸಂಬಂಧಿ ಕಾಯಿಲೆಯ ವರೆಗೆ ಎಲ್ಲದರ ಅಪಾಯ ಕಡಿಮೆಯಾಗುತ್ತದೆ ಎಂದು ಹೇಳಿದೆ.
ಸಂಶೋಧನೆಯ ಪ್ರಕಾರ, ರಾತ್ರಿ ಮಲಗುವ ಮುನ್ನ ಹಲವಾರು ಗಂಟೆಗಳ ಮೊದಲು ಆಹಾರವನ್ನು ಸೇವಿಸುವುದರಿಂದ ಚಯಾಪಚಯ ಕ್ರಿಯೆ ಉತ್ತಮವಾಗುತ್ತದೆ ಮತ್ತು ನಿದ್ರೆ ಸರಿಯಾಗಿ ಆಗಲು ಸಹಾಯವಾಗುತ್ತದೆ. ಅಷ್ಟು ಮಾತ್ರವಲ್ಲ, ಇದು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ದೇಹವು ಸಿರ್ಕಾಡಿಯನ್ ಲಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಆದರೆ ತಡವಾಗಿ ಊಟ ಮಾಡಿದಲ್ಲಿ, ದೇಹದ ಸಿರ್ಕಾಡಿಯನ್ ಲಯ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಜೊತೆಗೆ ಸಮಯವಲ್ಲದ ಸಮಯಕ್ಕೆ ಊಟ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಯು ರಾತ್ರಿಯಿಡೀ ಸಕ್ರಿಯವಾಗಿದ್ದು ಕೆಲಸ ಮಾಡುತ್ತದೆ. ಆಗ ಚಯಾಪಚಯ ಕ್ರಿಯೆಗೆ ಅಡ್ಡಿಯಾಗುತ್ತದೆ. ಪರಿಣಾಮವಾಗಿ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದ್ರೋಗದಂತಹ ಅಪಾಯ ಕೂಡ ಹೆಚ್ಚಾಗುತ್ತದೆ.
ನಾರ್ತ್ವೆಸ್ಟರ್ನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು 36 ರಿಂದ 75 ವರ್ಷದ 139 ಓವರ್ವೆಟ್ ವ್ಯಕ್ತಿಗಳನ್ನು ಅಧ್ಯಯನದಲ್ಲಿ ಸೇರಿಸಿಕೊಂಡಿದ್ದು, ಅವರಲ್ಲಿ ಡಯಾಬಿಟಿಸ್ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿದ್ದು ಅವರನ್ನು ಎರಡು ಗುಂಪುಗಳಲ್ಲಿ ವಿಂಗಡನೆ ಮಾಡಿದ್ದಾರೆ. ಅದರಲ್ಲಿ ಒಂದು ಗುಂಪು 16 ಗಂಟೆಗಳ ಉಪವಾಸ, ಮತ್ತೊಂದು ಗುಂಪು 13 ಗಂಟೆಗಳ ಉಪವಾಸವಿದ್ದು, ಎರಡೂ ಗುಂಪುಗಳಿಗೂ ಮಲಗುವ 3 ಗಂಟೆಗಳ ಮೊದಲು ಊಟ ಕೊಟ್ಟು ಬೆಳಕು ಕಡಿಮೆ ಇರುವಂತಹ ಜಾಗದಲ್ಲಿರಲು ಸಲಹೆ ನೀಡಲಾಗಿತ್ತು. ಹೆಚ್ಚು ಉಪವಾಸ ಮಾಡಿದ ಗುಂಪಿನಲ್ಲಿ ರಕ್ತದ ಒತ್ತಡ ಕಡಿಮೆಯಾಯಿತು, ಶುಗರ್ ನಿಯಂತ್ರಣಕ್ಕೆ ಬಂದಿತು ಮತ್ತು ಇನ್ಸುಲಿನ್ ಸಂವೇದನಾಶೀಲತೆ ಹಾಗೂ ಗ್ಲೂಕೋಸ್ ಟಾಲರೆನ್ಸ್ ಕೂಡ ಉತ್ತಮವಾಯಿತು.
ಆರೋಗ್ಯ ಕಾಪಾಡಿಕೊಳ್ಳಲು ಸಲಹೆಗಳು:
ರಾತ್ರಿ ಊಟವನ್ನು ಸಂಜೆ 8 ಗಂಟೆಗೂ ಮುಂಚೆ ಮುಗಿಸಿಕೊಳ್ಳಿ, ರಾತ್ರಿ 11 ಗಂಟೆಗೂ ಮುಂಚೆ ಮಲಗಲು ಪ್ರಯತ್ನಿಸಿ, ಈ ನಿಯಮವನ್ನು ಪಾಲಿಸುವ ಮೊದಲು ಡಾಕ್ಟರ್ ಸಲಹೆ ಪಡೆಯುವುದು ಅತ್ಯಗತ್ಯ. ಈ ಸರಳ ಕ್ರಮದಿಂದ ಉತ್ತಮ ನಿದ್ರೆ, ಹೈ ಬ್ಲಡ್ ಪ್ರೆಶರ್ ನಿಯಂತ್ರಣ ಮತ್ತು ಪಚನ ವ್ಯವಸ್ಥೆಯನ್ನು ಸುಧಾರಿಸಬಹುದು.
ನವದೆಹಲಿ, ಮಾರ್ಚ್ 19: ಅಮೆರಿಕದ ಅತಿ ಶ್ರೀಮಂತ ಉದ್ಯಮಿ ಬಿಲ್ ಗೇಟ್ಸ್ (Bill Gates) ಮಳೆಯ ಸುದ್ದಿ ಭಾರೀ ವೈರಲ್ ಆಗಿದೆ. ಕರ್ನಾಟಕದ ಹಲವೆಡೆ ಸುರಿಯುತ್ತಿರುವ ದಿಢೀರ್ ಮಳೆಗೆ ಹಾಗೂ ಹವಾಮಾನ ಬದಲಾವಣೆಯ ಹಿಂದೆ ಅವರದೇ ಕೈವಾಡವಿದೆಯೇ? ಎಂಬ ಚರ್ಚೆಗಳು ಶುರುವಾಗಿವೆ. ಮೋಡ ಬಿತ್ತನೆಯ ಬಗ್ಗೆ ನಿಮಗೆಷ್ಟು ಗೊತ್ತು? ಬಿಲ್ ಗೇಟ್ಸ್ ಬಗ್ಗೆ ಭಾರೀ ಸುದ್ದಿಗಳು ಹರಿದಾಡುತ್ತಿವೆ. ಸುದ್ದಿಗಳು ಮತ್ತು ರೀಲ್ಸ್ಗಳಲ್ಲಿ ಮೋಡ ಬಿತ್ತನೆ, ಬಿಲ್ ಗೇಟ್ಸ್ ಮಳೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
“ಕಳೆದ ವಾರ ಕರ್ನಾಟಕದಲ್ಲಿ ಇದ್ದಕ್ಕಿದ್ದಂತೆ ಮಳೆ ಸುರಿಯಲು ಇದೇ ಕಾರಣವೇ?” ಎಂಬ ಚರ್ಚೆಗಳೂ ನಡೆಯುತ್ತಿವೆ. 2007ರಿಂದ ಬಿಲ್ ಗೇಟ್ಸ್ ತಮ್ಮ ಸ್ವಂತ ಹಣವನ್ನು ವಿಜ್ಞಾನದ ಅಸಾಂಪ್ರದಾಯಿಕ ಬ್ರಾಂಚ್ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ವಾತಾವರಣಕ್ಕೆ ರಾಸಾಯನಿಕವನ್ನು ಚುಚ್ಚುವ ಮೂಲಕ ಮನುಷ್ಯರು ಉದ್ದೇಶಪೂರ್ವಕವಾಗಿ ಭೂಮಿಯನ್ನು ತಂಪಾಗಿಸಬಹುದೇ ಎಂಬ ಬಗ್ಗೆ ಅನ್ವೇಷಿಸುವ ಸಂಶೋಧನೆಯನ್ನು ಅವರು ಬೆಂಬಲಿಸುತ್ತಿದ್ದಾರೆ. ಹೀಗಾಗಿ, ಈ ಬಿಲ್ ಗೇಟ್ಸ್ ಮಳೆಯ ಕಾರಣದಿಂದಲೇ ಕರ್ನಾಟಕದಲ್ಲಿ ಈ ರೀತಿ ಆಲಿಕಲ್ಲು ಮಳೆಯಾಗುತ್ತಿದೆಯೇ? ಎಂಬ ಚರ್ಚೆಗಳೂ ಶುರುವಾಗಿವೆ.
ವಾತಾವರಣಕ್ಕೆ ರಾಸಾಯನಿಕವನ್ನು ಚುಚ್ಚುವ ಈ ಸಂಶೋಧನೆಗೆ ಬಳಸಲಾದ ವೈಜ್ಞಾನಿಕ ಪದವನ್ನು ಸ್ಟ್ರಾಟೋಸ್ಫಿಯರಿಕ್ ಏರೋಸಾಲ್ ಇಂಜೆಕ್ಷನ್ (SAI) ಎಂದು ಕರೆಯಲಾಗುತ್ತದೆ. ಇದು ಮೂಲಭೂತವಾಗಿ ಸೂರ್ಯನ ಬೆಳಕು ನಮ್ಮ ಗ್ರಹವನ್ನು ತಲುಪುವ ಪ್ರಯತ್ನವಾಗಿದೆ. ಬಿಲ್ ಗೇಟ್ಸ್ ಅವರ ರಾಸಾಯನಿಕ ಸಿಂಪಡಣೆಯಿಂದಾಗಿಯೇ ಇತ್ತೀಚಿನ ಭಾರೀ ಮಳೆ ಉಂಟಾಗಿದೆ ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ವೀಡಿಯೊಗಳನ್ನು ಪ್ರಸಾರ ಮಾಡಲಾಗುತ್ತಿದೆ. “ಸನ್-ಡಿಮ್ಮಿಂಗ್” ತಂತ್ರಜ್ಞಾನ ಎಂಬ ವಿದ್ಯಮಾನಕ್ಕೆ ವ್ಯತಿರಿಕ್ತವಾಗಿ ಬಿಲ್ ಗೇಟ್ಸ್ ಈ ರಾಸಾಯನಿಕ ಸಿಂಪಡಣೆ ಅಥವಾ ರಾಸಾಯನಿಕವನ್ನು ಇಂಜೆಕ್ಟ್ ಮಾಡುತ್ತಿದ್ದಾರೆ ಎಂಬ ಚರ್ಚೆಗಳು ಕೂಡ ನಡೆದಿವೆ.
ಈ ವದಂತಿ ಎಷ್ಟು ನಿಜ?:
ಬಿಲ್ ಗೇಟ್ಸ್ ಹವಾಮಾನ ಬದಲಾವಣೆ ಪರಿಹಾರಗಳನ್ನು ಅಧ್ಯಯನ ಮಾಡಲು SCoPExನಂತಹ ಕೆಲವು ಯೋಜನೆಗಳ ಮೂಲಕ ಸೌರ ಭೂ ಎಂಜಿನಿಯರಿಂಗ್ ಸಂಶೋಧನೆಗೆ ಹಣಕಾಸು ಒದಗಿಸಿದ್ದರೂ ಈ ಯಾವುದೇ ಪ್ರಯೋಗಗಳು ಭಾರತದಲ್ಲಿ ನಡೆದಿಲ್ಲ. ಹೀಗಾಗಿ, ಕರ್ನಾಟಕದಲ್ಲಿ ಬರುತ್ತಿರುವ ಮಳೆಗೂ ಬಿಲ್ ಗೇಟ್ಸ್ಗೂ ಸಂಬಂಧವಿಲ್ಲ. ಅಷ್ಟಕ್ಕೂ ಈಗಾಗಲೇ ಈ ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಬಿಲ್ ಗೇಟ್ಸ್ ಕೃಷಿ ಉಪಕ್ರಮಗಳಿಗಾಗಿ ಭಾರತದ ಹವಾಮಾನ-ಸ್ಥಿತಿಸ್ಥಾಪಕ ಸಂಶೋಧನೆಯನ್ನು ಬೆಂಬಲಿಸಿದರು ಮತ್ತು ಕೃಷಿಗೆ ಬಳಸುವ ಸಾಧನಗಳ ಕುರಿತು ಸಂಶೋಧನೆಗೆ ಹಣಕಾಸು ಒದಗಿಸಿದರು. ಆದರೆ, ಕೆಲವು ಸಾಮಾಜಿಕ ಮಾಧ್ಯಮಗಳು ಈ ಕೃಷಿ ಸಂಶೋಧನಾ ನಿಧಿಯನ್ನು ಬಿಲ್ ಗೇಟ್ಸ್ ಮಾನ್ಸೂನ್ ಅನ್ನು ನಿಯಂತ್ರಿಸುತ್ತಿದ್ದಾರೆ ಎಂದು ಸುದ್ದಿಗಳನ್ನು ಹರಡುತ್ತಿದ್ದಾರೆ. ಇದೆಲ್ಲ ಸಂಪೂರ್ಣವಾಗಿ ಕಟ್ಟುಕಥೆ.
ವಾಸ್ತವದ ಸಂಗತಿಯೆಂದರೆ, ಬಿಲ್ ಗೇಟ್ಸ್ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಥಮಿಕ ಸಂಶೋಧನೆಗೆ ಹಣಕಾಸು ಒದಗಿಸಿದರು, ಇದು ಸೂರ್ಯನ ಬೆಳಕನ್ನು ಪ್ರತಿಬಿಂಬಿಸಲು ವಾತಾವರಣಕ್ಕೆ ಕ್ಯಾಲ್ಸಿಯಂ ಕಾರ್ಬೋನೇಟ್ ಕಣಗಳನ್ನು ಬಿಡುಗಡೆ ಮಾಡುವ ಸಾಮರ್ಥ್ಯವನ್ನು ಅಧ್ಯಯನ ಮಾಡಿತು, ಇದನ್ನು ‘ಸನ್-ಡಿಮ್ಮಿಂಗ್’ ಎಂದು ಕರೆಯಲಾಗುತ್ತಿತ್ತು. ಈ ಯೋಜನೆಯು ಭಾರೀ ಟೀಕೆಗಳನ್ನು ಎದುರಿಸಿತು. ಹೀಗಾಗಿ, ಇದನ್ನು ಸದ್ಯಕ್ಕೆ ರದ್ದುಗೊಳಿಸಲಾಗಿದೆ.ಈ ಸಂಶೋಧನೆಗಳನ್ನು ಎಂದಿಗೂ ದೊಡ್ಡ ಪ್ರಮಾಣದ ಪ್ರಯೋಗಗಳನ್ನು ನಡೆಸಲಿಲ್ಲ. ಹೀಗಾಗಿ ಖಂಡಿತವಾಗಿಯೂ ಭಾರತದಲ್ಲಿ ಮಳೆಯ ಮೇಲೆ ಬಿಲ್ ಗೇಟ್ಸ್ ಯಾವುದೇ ಪರಿಣಾಮ ಬೀರುವುದಿಲ್ಲ.
ಆದರೆ, ಭಾರತ ಸರ್ಕಾರ ಮತ್ತು ಐಐಟಿ ಕಾನ್ಪುರದಂತಹ ಸಂಸ್ಥೆಗಳು ದೆಹಲಿಯಂತಹ ನಗರಗಳಲ್ಲಿನ ಮಾಲಿನ್ಯ ಬಿಕ್ಕಟ್ಟನ್ನು ನಿಭಾಯಿಸಲು ಕೃತಕ ಮಳೆಯನ್ನು ಉಂಟುಮಾಡಲು ಮೋಡ ಬಿತ್ತನೆಯನ್ನು ಮಾಡುತ್ತಿವೆ. ಇದು ಬಿಲ್ ಗೇಟ್ಸ್ ಯೋಜನೆಗಿಂತ ಸಂಪೂರ್ಣವಾಗಿ ಭಿನ್ನವಾದುದು. ಹೀಗಾಗಿ, ಬಿಲ್ ಗೇಟ್ಸ್ ಬೆಂಗಳೂರಿನಲ್ಲಿ ಮಳೆ ತರಿಸುತ್ತಿದ್ದಾರೆ, ಕರ್ನಾಟಕದಾದ್ಯಂತ ಆಲಿಕಲ್ಲು ಮಳೆ ಬರುತ್ತಿರುವುದಕ್ಕೆ ಬಿಲ್ ಗೇಟ್ಸ್ ಕಾರಣ, ಬಿಲ್ ಗೇಟ್ಸ್ ಅಮೆರಿಕದಲ್ಲಿ ಕುಳಿತುಕೊಂಡು ಭಾರತದ ಹವಾಮಾನವನ್ನು ನಿಯಂತ್ರಿಸುತ್ತಿದ್ದಾರೆ ಎಂಬ ಸುದ್ದಿಗಳನ್ನೆಲ್ಲ ಯಾರೂ ನಂಬಬೇಡಿ. ಇದು ಸಂಪೂರ್ಣವಾಗಿ ಸುಳ್ಳು ಸುದ್ದಿ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಹುಬ್ಬಳ್ಳಿ, (ಮಾರ್ಚ್ 19): ರೀಲ್ಸ್ (Reels) ಹುಚ್ಚಾಟಕ್ಕೆ ಬಿದ್ದು ಬಿಜೆಪಿ ಮುಖಂಡನ ಪುತ್ರ ಸಾವನ್ನಪ್ಪಿರುವ ದಾರುಣ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ. ಸ್ಟಂಟ್ ಮತ್ತು ಕ್ರ್ಯಾಶ್ ರೀಲ್ಸ್ ಮಾಡುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಬಿಜೆಪಿ ಮುಖಂಡನ ಪುತ್ರ ನಮೀಷ ಸಂಗಳದ(15) ಮೃತಟ್ಟಿದ್ದಾನೆ. ಹುಬ್ಬಳ್ಳಿಯ ಲಕ್ಷ್ಮಿ ನಗರದ ನಿವಾಸಿಯಾಗಿರುವ ನಮೀಷ ಸಂಗಳದ, ಮೈಸೂರಿನಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ. ಆದ್ರೆ, ಯುಗಾದಿ ಹಬ್ಬಕ್ಕೆಂದು ಹುಬ್ಬಳ್ಳಿಗೆ ಬಂದಿದ್ದು, ಈ ವೇಳೆ ಅಪಯಕಾರಿ ರೀಲ್ಸ್ ಮಾಡಲು ಹೋಗಿ ದುರಂತ ಸಾವು ಕಂಡಿದ್ದಾನೆ. ಇದರಿಂದ ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕ ಛಾಯೆ ಆವರಿಸಿದೆ.
ಯುಗಾದಿ ಹಬ್ಬಕ್ಕೆಂದು ಊರಿಗೆ ಬಂದಿದ್ದ ನಮೀಷ ಸಂಗಳದ ರೀಲ್ಸ್ ಮಾಡಲೆಂದು ಗೆಳೆಯರೊಂದಿಗೆ ಸೇಜವಾಡಕ್ಕರ್ ಪ್ಲಾಟ್ಗೆ ತೆರಳಿದ್ದರು. ವೇಗವಾಗಿ ವಾಹನ ಚಲಾಯಿಸುವ ರೀಲ್ಸ್ ಮಾಡಲು ಪ್ಲ್ಯಾನ್ ಮಾಡಿದ್ದರು. ಅದರಂತೆ ಓರ್ವ ಅಪ್ರಾಪ್ತ ಬಾಲಕ ಆಡಿ ಕಾರು ಓಡಿಸುತ್ತಿದ್ದರೆ, ಇನ್ನೊಂದೆಡೆ ಮೃತ ನಮೀಷ ಸಂಗಳದ ಬೈಕ್ ನಲ್ಲಿದ್ದು, ಸ್ಟಂಟ್ ಮತ್ತು ಕ್ರ್ಯಾಶ್ ರೀಲ್ಸ್ ಮಾಡುತ್ತಿದ್ದಾಗ ಕಾರು ವೇಗವಾಗಿ ಬಂದು ನಿಯಂತ್ರಣ ತಪ್ಪಿ ನಮೀಷ ಸಂಗಳದ ಇದ್ದ ಬೈಕ್ಗೆ ಗುದ್ದಿದೆ ಪರಿಣಾಮ ಬಿಜೆಪಿ ಮುಖಂಡನ ಪುತ್ರ ನಮೀಷ ಸಂಗಳದ ಸಾವನ್ನಪ್ಪಿದ್ದಾನೆ.
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ವಿದ್ಯಾನಗರ ಪೊಲೀಸ್ ಠಾಣೆ ಪೊಲೀಸರು, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತ ಮಾಡಿರುವ ಅಪ್ತಾಪ್ತ ಬಾಲಕನನ್ನು ವಿಚಾರಣೆಗೊಳಪಡಿಸಿದ್ದಾರೆ.
ಯುಗಾದಿ ಹಬ್ಬಕ್ಕೆಂದು ಮೈಸೂರಿನಿಂದ ಹುಬ್ಬಳ್ಳಿಗೆ ಬಂದು ದುರಂತ ಸಾವು ಕಂಡಿದ್ದು, ಎಲ್ಲರನ್ನೂ ದೃತಿಗೆಡಿಸಿದೆ. ಮಗನ ಅಕಾಲಿಕ ಮರಣದ ಸುದ್ದಿ ಕೇಳಿ ತಂದೆ ವೀರೇಶ ಸಂಗಳದ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರಾಜಕೀಯ ವಲಯದ ಗಣ್ಯರು ಹಾಗೂ ನಮೀಷ ಅವರ ಸ್ನೇಹಿತರು ತೀವ್ರ ಸಂತಾಪ ಸೂಚಿಸಿದ್ದಾರೆ.
19ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಕಳೆದ 18 ಆವೃತ್ತಿಗಳ ಸ್ವಾರಸ್ಯಕರ ಸಂಗತಿಗಳ ಮೇಲೆ ಕಣ್ಣು ಹಾಯಿಸೋಣ. ಅದರಂತೆ ಐಪಿಎಲ್ನ 18 ಆವೃತ್ತಿಗಳ ಇತಿಹಾಸದಲ್ಲಿ ಒಟ್ಟು 15 ಬೌಲರ್ಗಳು ಪರ್ಪಲ್ ಕ್ಯಾಪ್ ಗೆದ್ದಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಒಂದು ಆವೃತ್ತಿಯಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ.
ಈ ಪಟ್ಟಿಯಲ್ಲಿ, ಭುವನೇಶ್ವರ್ ಕುಮಾರ್ , ಹರ್ಷಲ್ ಪಟೇಲ್ ಮತ್ತು ಡ್ವೇನ್ ಬ್ರಾವೋ ಎಂಬ ಮೂವರು ಕ್ರಿಕೆಟಿಗರು ಮಾತ್ರ ಎರಡು ಬಾರಿ ಪರ್ಪಲ್ ಕ್ಯಾಪ್ ಗೆದ್ದಿದ್ದಾರೆ. ಇವರ ಹೊರತಾಗಿ ಐಪಿಎಲ್ ಇತಿಹಾಸಿದಲ್ಲಿ ಅನೇಕ ಲೆಜೆಂಡರಿ ಬೌಲರ್ಗಳು ಆಡಿದ್ದಾರೆಯಾದರೂ ಅವರಿಗೆ ಇದುವರೆಗೂ ಪರ್ಪಲ್ ಕ್ಯಾಪ್ ಗೆಲ್ಲಲು ಸಾಧ್ಯವಾಗಿಲ್ಲ. ಅಂತಹ 5 ಬೌಲರ್ಗಳ ಪಟ್ಟಿ ಇಲ್ಲಿದೆ.
ಜಸ್ಪ್ರೀತ್ ಬುಮ್ರಾ ಪ್ರಸ್ತುತ ವಿಶ್ವ ಕ್ರಿಕೆಟ್ನಲ್ಲಿ ಅತ್ಯಂತ ಅಪಾಯಕಾರಿ ಬೌಲರ್. ಇತ್ತೀಚೆಗೆ, ಬುಮ್ರಾ ಭಾರತ ತಂಡ 2026 ರ ಟಿ20 ವಿಶ್ವಕಪ್ ಗೆಲ್ಲಲು ಪ್ರಮುಖ ಕಾರಣರಾಗಿದ್ದರು. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಾತ್ರವಲ್ಲದೆ, ಐಪಿಎಲ್ನಲ್ಲಿಯೂ ಬುಮ್ರಾ ತಮ್ಮ ಛಾಪು ಮೂಡಿಸಿದ್ದಾರೆ. ಬುಮ್ರಾ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 183 ವಿಕೆಟ್ಗಳನ್ನು ಪಡೆದಿದ್ದಾರೆ. ಆದರೆ, ಬುಮ್ರಾ ಐಪಿಎಲ್ ಇತಿಹಾಸದಲ್ಲಿ ಎಂದಿಗೂ ಪರ್ಪಲ್ ಕ್ಯಾಪ್ ಗೆದ್ದಿಲ್ಲ.
ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್ನಿಂದ ನಿವೃತ್ತರಾಗಿದ್ದಾರೆ. ಆದರೆ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ತಂಡಗಳನ್ನು ಕಠಿಣ ಪರಿಸ್ಥಿತಿಯಿಂದ ರಕ್ಷಿಸುವ ಅವರ ಸಾಮರ್ಥ್ಯವು ವಿಶೇಷ ಪ್ರತಿಭೆಯಾಗಿ ಉಳಿದಿದೆ. ರವಿಚಂದ್ರನ್ ಅಶ್ವಿನ್ ಐಪಿಎಲ್ನಲ್ಲಿ 16 ಆವೃತ್ತಿಗಳನ್ನು ಆಡಿದ್ದು, 187 ವಿಕೆಟ್ಗಳನ್ನು ಕಬಳಿಸಿದ್ದಾರೆ. ಆದಾಗ್ಯೂ, ರವಿಚಂದ್ರನ್ ಅಶ್ವಿನ್ ಎಂದಿಗೂ ಪರ್ಪಲ್ ಕ್ಯಾಪ್ ಗೆದ್ದಿಲ್ಲ.
ಕಳೆದ 14 ವರ್ಷಗಳಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿರುವ ಸುನಿಲ್ ನರೈನ್, ಐಪಿಎಲ್ ಇತಿಹಾಸದಲ್ಲಿ 192 ವಿಕೆಟ್ಗಳನ್ನು ಪಡೆದು ಈ ಲೀಗ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ 3 ನೇ ಬೌಲರ್ ಆಗಿದ್ದಾರೆ. 189 ಪಂದ್ಯಗಳನ್ನು ಆಡಿದ್ದರೂ, ಅವರ ಎಕಾನಮಿ ದರ 8 ಕ್ಕಿಂತ ಕಡಿಮೆಯಿದೆ. ಆದರೂ ಅವರು ಪರ್ಪಲ್ ಕ್ಯಾಪ್ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.
ಐಪಿಎಲ್ 2025 ರ ನಂತರ ಪಿಯೂಷ್ ಚಾವ್ಲಾ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ನಿವೃತ್ತರಾದರು. ಚಾವ್ಲಾ ಇದುವರೆಗೆ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 192 ಪಂದ್ಯಗಳನ್ನು ಆಡಿದ್ದು 192 ವಿಕೆಟ್ಗಳನ್ನು ಕಬಳಿಸಿದ್ದಾರೆ. 2023 ಅವರು 20 ಕ್ಕೂ ಹೆಚ್ಚು ವಿಕೆಟ್ಗಳನ್ನು ಪಡೆದ ಏಕೈಕ ಸೀಸನ್ ಆಗಿತ್ತು. ಆದರೆ ಅವರ ಸ್ಥಿರತೆಗೆ ಯಾರು ಸರಿಸಾಟಿಯಿಲ್ಲದಿದ್ದರೂ, ಪಿಯೂಷ್ ಚಾವ್ಲಾ ಪರ್ಪಲ್ ಕ್ಯಾಪ್ ಗೆಲ್ಲಲು ಸಾಧ್ಯವಾಗಲಿಲ್ಲ.
2012 ರಿಂದ ನಿರಂತರವಾಗಿ ಐಪಿಎಲ್ನಲ್ಲಿ ಆಡುತ್ತಿರುವ ರಶೀದ್ ಖಾನ್ 158 ವಿಕೆಟ್ಗಳನ್ನು ಕಬಳಿಸಿದ್ದಾರೆ. ರಶೀದ್ ಖಾನ್ ಕಳೆದ 3 ಸೀಸನ್ಗಳಲ್ಲಿ 20 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದಲ್ಲದೆ, 2023 ರ ಐಪಿಎಲ್ ಸೀಸನ್ನಲ್ಲಿ 27 ವಿಕೆಟ್ಗಳನ್ನು ಕಬಳಿಸಿದ್ದಾರೆ. ಆದಾಗ್ಯೂ ಅವರಿಗೆ ಪರ್ಪಲ್ ಕ್ಯಾಪ್ ಗೆಲ್ಲಲು ಸಾಧ್ಯವಾಗಿಲ್ಲ.
ಧಾರವಾಡ, ಮಾರ್ಚ್ 19: ಇಂದು ರಾಜ್ಯದೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ. ನಾಡಿನ ಜನ ಬೇವು-ಬೆಲ್ಲ ಸವಿದು ಖುಷಿಪಟ್ಟರೆ, ಇತ್ತ ಧಾರವಾಡದಲ್ಲಿ ಯುಗಾದಿ ದಿನವೇ ರಕ್ತಪಾತವಾಗಿದೆ. ಆಸ್ತಿ ವಿಚಾರಕ್ಕೆ ಅಣ್ಣನಿಂದ ತಂಗಿಯ ಬರ್ಬರ ಕೊಲೆ (kill) ನಡೆದಿರುವಂತಹ ಘಟನೆ ಧಾರವಾಡ ತಾಲೂಕಿನ ಅಮ್ಮಿನಭಾವಿಯಲ್ಲಿ ನಡೆದಿದೆ. ಶಿವಕ್ಕ(45) ಮೃತ ತಂಗಿ. ಹನುಮಂತ ಯಲಿವಾಳ ಹತ್ಯೆಗೈದ ಅಣ್ಣ. ಸದ್ಯ ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ಹನುಮಂತ ಯಲಿವಾಳ ಮತ್ತು ಶಿವಕ್ಕ ಅಣ್ಣ-ತಂಗಿ. ತಂದೆಯ ಆಸ್ತಿಯಲ್ಲಿ ನನಗೂ ಪಾಲಿದೆ, ಆಸ್ತಿ ಬೇಕು ಎಂದು ಶಿವಕ್ಕ ಪಟ್ಟು ಹಿಡಿದಿದ್ದರು. ಇದೇ ವಿಚಾರವಾಗಿ ಅಣ್ಣ ತಂಗಿ ಮಧ್ಯೆ ಗಲಾಟೆ ಕೂಡ ನಡೆದಿದೆ. ಆದರೆ ಇಂದು ಯುಗಾದಿ ಹಬ್ಬದಂದು ಭೂಮಿ ಪೂಜೆಗೆ ಹೋದಾಗ ಮರ್ಡರ್ ಮಾಡಲಾಗಿದೆ.
ಬೀದರ್ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ದಂಪತಿ ಸಾವು
ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದ ಬಸ್ ನಿಲ್ದಾಣದ ಸಮೀಪದ ಮುಚಳಂಬ ಕ್ರಾಸ್ ಬಳಿ ನಿನ್ನೆ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಟಿಪ್ಪರ್ ಲಾರಿ ಮತ್ತು ಬೈಕ್ ನಡುವೆ ನಡೆದ ಡಿಕ್ಕಿಯಲ್ಲಿ ದಂಪತಿಗಳು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಸಯ್ಯದ್ ದಸ್ತಗೀರ್ (35) ಮತ್ತು ಯಾಸ್ಮೀನ್ ದಸ್ತಗೀರ್ (33) ಮೃತರು.
ಮೃತರು ಬಸವಕಲ್ಯಾಣದ ಖಾದಿಜಂಡಾ ಕಾಲೋನಿಯಲ್ಲಿ ವಾಸವಾಗಿದ್ದರು. ದಂಪತಿಗಳು ಬಸ್ ನಿಲ್ದಾಣದ ಕಡೆಯಿಂದ ತಮ್ಮ ಮನೆ ಕಡೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ, ಅತೀವೇಗವಾಗಿ ಬಂದ ಟಿಪ್ಪರ್ ಲಾರಿ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಅಲಿಸಾಬ್ ಹಾಗೂ ಪಿಎಸ್ಐ ಸಿದ್ದೇಶ್ವರ್ ಮತ್ತು ಚಂದ್ರಶೇಖರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ತಾಲ್ಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಆಲಿಕಲ್ಲು ಮಳೆಗೆ 25ಕ್ಕೂ ಹೆಚ್ಚು ಕುರಿಗಳು ಸಾವು
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಯಂಡಿಗೇರಿ ಗ್ರಾಮದಲ್ಲಿ ಆಲಿಕಲ್ಲು ಮಳೆಗೆ 25ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವಂತಹ ದಾರುಣ ಘಟನೆಯೊಂದು ನಡೆದಿದೆ. ಹುಸೇನಸಾಬ್ ಬಾಂಗದ ಎಂಬುವರಿಗೆ ಕುರಿಗಳು ಮೃತಪಟ್ಟಿವೆ. ಸೂಕ್ತ ಪರಿಹಾರ ನೀಡುವಂತೆ ಕುರಿಗಾಹಿ ಹುಸೇನಸಾಬ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ರಿಷಬ್ ಶೆಟ್ಟಿ (Rishab Shetty) ನಟಿಸಲಿರುವ, ತೆಲುಗು ಪ್ಯಾನ್ ಇಂಡಿಯಾ ಸಿನಿಮಾ ‘ಜೈ ಹನುಮಾನ್’ನ ಮುಹೂರ್ತ ಹಂಪಿಯಲ್ಲಿ ನೆರವೇರಿತು. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ಪೌರಾಣಿಕ ಸಿನಿಮಾನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಸದ್ಯಕ್ಕೆ ನನ್ನ ಕೈಯಲ್ಲಿ ‘ಜೈ ಹನುಮಾನ್’ ಸಿನಿಮಾ ಮಾತ್ರವೇ ಇದೆ ಎಂದು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಸಮಯದಲ್ಲಿ ಹೇಳಿದ್ದರು. ಆದರೆ ಇದೀಗ ಯುಗಾದಿಯಂದು ರಿಷಬ್ ಶೆಟ್ಟಿ ಹೊಸ ಸಿನಿಮಾ ಪ್ರಾರಂಭ ಮಾಡಿದಂತಿದ್ದಾರೆ.
ಇಂದು ಯುಗಾದಿ ಹಬ್ಬದ ಪ್ರಯುಕ್ತ ರಿಷಬ್ ಶೆಟ್ಟಿ ಮತ್ತು ಅವರ ಪತ್ನಿ ಪ್ರಗತಿ ಅವರು ಕಮಲಶಿಲೆಯ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ವಿಶೇಷ ಪೂಜೆ ಮಾಡಿಸಿದ್ದಾರೆ. ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಮತ್ತೊಂದು ಪೋಸ್ಟ್ನಲ್ಲಿ ‘ಅಧ್ಯಾಯ ಎರಡು, ಇಲ್ಲಿಂದ ಶುರು’ ಎಂದು ಬರೆದಿರುವ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ಹೊಸ ವರ್ಷ, ಹೊಸ ಚಾಪ್ಟರ್’ ಎಂದು ಬರೆದುಕೊಂಡಿದ್ದಾರೆ.
ರಿಷಬ್ ಶೆಟ್ಟಿ ಅವರ ಈ ಪೋಸ್ಟ್ ಅಮಾನಿಗಳಲ್ಲಿ ಕುತೂಹಲದ ಜೊತೆಗೆ ನಿರೀಕ್ಷೆಯನ್ನು ಸಹ ಮೂಡಿಸಿದೆ. ‘ಕಾಂತಾರ ಚಾಪ್ಟರ್ 2’ ಸಿನಿಮಾದ ಬಗ್ಗೆ ರಿಷಬ್ ಅವರು ಈ ಪೋಸ್ಟ್ ಹಂಚಿಕೊಂಡಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಅಂತ್ಯದಲ್ಲಿ, ‘ಚಾಪ್ಟರ್ 2’ನ ಸುಳಿವನ್ನು ರಿಷಬ್ ಶೆಟ್ಟಿ ನೀಡಿದ್ದರು. ‘ಕಾಂತಾರ: ಚಾಪ್ಟರ್ 1’ ಬಿಡುಗಡೆ ಬಳಿಕ ಮಾತನಾಡಿದ್ದ ರಿಷಬ್, ‘ಚಾಪ್ಟರ್ 2’ ಸಹ ಬರಲಿದೆ ಎಂದಿದ್ದರು. ಅಂತೆಯೇ ಇದೀಗ ‘ಅಧ್ಯಾಯ ಎರಡು’ ಎನ್ನುವ ಮೂಲಕ ‘ಚಾಪ್ಟರ್ 2’ ಆರಂಭದ ಸುಳಿವನ್ನು ನೀಡಿದ್ದಾರೆ.
ಆದರೆ ರಿಷಬ್ ಶೆಟ್ಟಿ ಈಗ ಹಂಚಿಕೊಂಡಿರುವ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯ ಲೋಗೊ ಇದೆ, ‘ಕಾಂತಾರ’ ಸಿನಿಮಾ ಸರಣಿಯ ನಿರ್ಮಾಣ ಮಾಡಿರುವ ಹೊಂಬಾಳೆಯ ಲೋಗೊ ಇಲ್ಲ. ಇದು ಸಹ ಸಣ್ಣ ಅನುಮಾನ ಮೂಡಿಸಿದ್ದು, ‘ಕಾಂತಾರ’ ಸರಣಿಯ ಹೊರತಾದ ಸಿನಿಮಾ ಇದಾಗಿರಬಹುದೆ ಎಂಬ ಅನುಮಾನವೂ ಇದೆ. ಒಟ್ಟಾರೆ ಸ್ವತಃ ರಿಷಬ್ ಅವರೇ ಇದಕ್ಕೆಲ್ಲ ಉತ್ತರ ನೀಡಬೇಕಿದೆ.
ರಿಷಬ್ ಅವರು ಪ್ರಸ್ತುತ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ‘ಜೈ ಹನುಮಾನ್’ ಸಿನಿಮಾನಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಸಿನಿಮಾದ ಬಳಿಕ ಹಿಂದಿಯ ‘ಛತ್ರಪತಿ ಶಿವಾಜಿ’ ಸಿನಿಮಾನಲ್ಲಿ ರಿಷಬ್ ಶೆಟ್ಟಿ ನಟಿಸಲಿದ್ದಾರೆ. ‘ಲಗಾನ್’ ಸಿನಿಮಾ ನಿರ್ದೇಶಕ ಅಶುತೋಶ್ ಗೋವರಿಕರ್ ನಿರ್ದೇಶನದ ಸಿನಿಮಾನಲ್ಲಿಯೂ ರಿಷಬ್ ಶೆಟ್ಟಿ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆ ಸಿನಿಮಾ ಸಹ ಇದೇ ವರ್ಷ ಪ್ರಾರಂಭ ಆಗುವ ನಿರೀಕ್ಷೆ ಇದೆ.