ಅನ್ಯಕೋಮಿನ ಯುವಕನೊಂದಿಗೆ 3 ಮಕ್ಕಳ ತಾಯಿ ಲವ್ವಿಡವ್ವಿ: ಖಾಜಾನ ಪ್ರೀತಿಗೆ ಮನಸೋತು ಹೆಣವಾದಳು – Kannada News | Vijayanagara: Love Affair Ends in Tragic Murder of Mother of Three

ಬಳ್ಳಾರಿ, ಜನವರಿ 15: ಆಕೆ ಮೂರು ಮಕ್ಕಳ ತಾಯಿ (mother). ಕಳೆದ 8 ವರ್ಷಗಳಿಂದ ಗಂಡನಿಂದ ದೂರವಾಗಿದ್ದರು. ರೈಲ್ವೆ ಸ್ಟೇಷನ್​​ನಲ್ಲಿ ಸ್ಟಾಲ್‌‌ವೊಂದರಲ್ಲಿ ಕೆಲಸ ಮಾಡಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದರು. ತಾವಾಯ್ತು ತಮ್ಮ ಕುಟುಂಬವಾಯ್ತು ಅಂತಾ ಇದ್ದವರಿಗೆ ಯುವಕನೊಬ್ಬನ ಪರಿಚಯವಾಗಿದೆ. ಪರಿಚಯ ಸಲುಗೆಗೆ ತಿರುಗಿ ಯಾರಿಗೂ ಗೊತ್ತಾಗದ ಹಾಗೆ ನಾಲ್ಕು ತಿಂಗಳ ಹಿಂದೆ ಮದುವೆ ಆಗಿದ್ದರು. ಆದರೆ ಅವರಿಬ್ಬರ ನಡುವೆ ಅದೇನಾಯ್ತು ಏನೋ ಗೊತ್ತಿಲ್ಲ ನಸುಕಿನ ಜಾವವೇ ಆಕೆಯ ಕತ್ತು ಕೊಯ್ದು ಭೀಕರ ಕೊಲೆ (Murder) ಮಾಡಿಯೇ ಬಿಟ್ಟಿದ್ದ.

ನಡೆದದ್ದೇನು?

ಉಮಾ (32) ಅವರಿಗೆ 12 ವರ್ಷಗಳ ಹಿಂದೆ ಮದುವೆಯಾಗಿತ್ತು. ಪಕ್ಕದ ರಾಜ್ಯ ಆಂಧ್ರದ ಪಾತಿಕೊಂಡ ಗ್ರಾಮದ ಸಂಬಂಧಿಕರೊಬ್ಬರಿಗೆ ಮದುವೆ ಮಾಡಿಕೊಡಲಾಗಿತ್ತು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಮೂರು ಗಂಡು ಮಕ್ಕಳಿಗೆ ಜನ್ಮ ಕೂಡ ನೀಡಿದ್ದರು. ಆದರೆ ದಿನ ಕಳೆದಂತೆ ಗಂಡ-ಹೆಂಡತಿ ನಡುವೆ ಕಲಹ ಶುರುವಾಗಿದ್ದು, ಬಳಿಕ ಇಬ್ಬರು ದೂರುವಾಗಿದ್ದಾರೆ.

ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿದ್ರೂ ಮತ್ತೊಬ್ಬಳ ಜತೆ ಲವ್ವಿಡವ್ವಿ: ಪ್ರಶ್ನಿಸಿದ ಹೆಂಡ್ತಿಗೆ ಚಟ್ಟ ಕಟ್ಟಿದ

ಗಂಡನಿಂದ ದೂರವಾಗಿದ್ದ ಉಮಾ ತಮ್ಮ ತವರೂರು ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಚಾಪಲಗಡ್ಡದಲ್ಲಿ ವಾಸವಾಗಿದ್ದರು. ಮೂರು ಮಕ್ಕಳನ್ನ ಕಟ್ಟಿಕೊಂಡು ಜೀವನ ನಡೆಸುವುದು ಉಮಾಗೆ ಕಷ್ಟವಾಗಿತ್ತು. ಹೀಗಾಗಿ ಹೊಸಪೇಟೆ ನಗರದ ರೈಲ್ವೆ ಸ್ಟೇಷನ್‌ನಲ್ಲಿ ಸ್ಟಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬರುವ ಸಂಬಳದಲ್ಲಿ ಹೇಗೋ ಜೀವನ ಸಾಗಿಸುತ್ತಿದ್ದರು. ಇನ್ನು ಉಮಾಗೆ ಮೂವರು ಗಂಡು ಮಕ್ಕಳು. ಅದರಲ್ಲಿ ಹಿರಿಯ ಮಗ ತನ್ನ ತಂದೆಯೊಂದಿಗೆ ವಾಸವಿದ್ದರೆ, ಇಬ್ಬರನ್ನು ಉಮಾ ಅವರೇ ನೋಡಿಕೊಳ್ಳುತ್ತಿದ್ದರು. ಮಕ್ಕಳ ವಿದ್ಯಾಭ್ಯಾಸ ತಂದೆ-ತಾಯಿಯನ್ನ ನೋಡಿಕೊಳ್ಳುವುದು ಅವರ ಜವಾಬ್ದಾರಿಯಾಗಿತ್ತು.

ಚಾಟಿಂಗ್, ಕಾಲಿಂಗ್ ಜೋರು

ನಿತ್ಯ ಕೆಲಸಕ್ಕೆ ಹೋಗುತ್ತಿದ್ದ ಉಮಾರಿಗೆ ಅಂದು ವಸ್ತುಪ್ರದರ್ಶನದಲ್ಲಿ ಕೆಲಸ ಮಾಡುತ್ತಿದ್ದ ಖಾಜಾ ಎಂಬ ಯುವಕನ ಪರಿಚಯವಾಗಿದೆ. ಪರಿಚಯದ ನಂತರ ಆತ ದಿನವು ರೈಲ್ವೆ ಸ್ಟೇಷನ್‌ಗೆ ಬರೋದು, ಉಮಾ ಕೆಲಸ ಮಾಡುತ್ತಿದ್ದ ಸ್ಟಾಲ್ ಹತ್ತಿರ ನಿಲ್ಲುವುದು, ಅವರನ್ನು ಮಾತನಾಡಿಸು ಪ್ರಯತ್ನ ಮಾಡುವುದು ಹೀಗೆ ಕೆಲ ತಿಂಗಳು ನಡೆದಿದೆ. ಆದಾದ ಬಳಿಕ ಇಬ್ಬರು ಫೋನ್​ ನಂಬರ್ ಬದಲಾಯಿಸಿಕೊಂಡಿದ್ದಾರೆ. ನಂಬರ್​

ಪೋನ್ ನಂಬರ್ ಎಕ್ಸ್​ಚೇಂಜ್ ಆಗುತ್ತಿದ್ದಂತೆ ಇಬ್ಬರು ವಾಟ್ಸಾಪ್ ಚಾಟಿಂಗ್, ಫೋನ್​ ಕಾಲಿಂಗ್ ಜೋರಿರುತ್ತೆ. ಉಮಾ ಖಾಜಾನ ಜೊತೆಗೆ ಮಾತನಾಡುವ ವಿಷಯ ಅವರ ಮನೆಯಲ್ಲೂ ಗೊತ್ತಿರುತ್ತದೆ. ಉಮಾಳ ಸಹೋದರಿ ಯಾಕೆ ಇಷ್ಟೊಂದು ಫೋನ್​​ನಲ್ಲಿ ಮಾತಾಡೋದು, ಯಾರದು ಎಂದು ಕೇಳಿದ್ದಾರೆ. ಆಗ ಉಮಾ ಖಾಜಾ ಅಂತಾ, ಅವನು ನನ್ನ ಫ್ರೆಂಡ್ ಅಂತ ಹೇಳಿದ್ದಾರೆ. ಮೂರು ಮಕ್ಕಳ ತಾಯಿಯಾಗಿದ್ದ ಉಮಾಳಿಗೆ ಮುಸ್ಲಿಂ ಯುವಕ ಖಾಜಾ ಮೇಲೆ ಲವ್ ಆಗಿಯೇ ಬಿಟ್ಟಿದೆ. ಇತ್ತ ಖಾಜಾ ಕೂಡ ಲವ್​ನಲ್ಲಿ ಬಿದ್ದಿದ್ದ. ಇಬ್ಬರ ಪ್ರೇಮ ಪ್ರಣಯ ಶುರುವಾಗಿದೆ.

ಹಣಕಾಸಿನ ವಿಚಾರಕ್ಕೆ ಜಗಳ

ಉಮಾ ಯಾವಾಗ ಖಾಜಾನ ಪ್ರೀತಿಯಲ್ಲಿ ಬಿದ್ದರೋ, ಆಗ ಅವರು ಮನೆ-ಮಕ್ಕಳು ಎಲ್ಲವನ್ನ ಮರೆತಿದ್ದಾರೆ. ಮೂರು ಹೊತ್ತು ಖಾಜಾನ ಜೊತೆಗೆ ಮಾತು, ಚಾಟಿಂಗ್, ಡೇಟಿಂಗ್ ಜೋರಾಗಿತ್ತು. ಪರಿಚಯವಾಗಿ 8 ತಿಂಗಳ ಕಳೆದಿತ್ತು. ಅದರಲ್ಲಿ ಮನೆಯವರಿಗೆ ಹೇಳದೇನೆ ಕಳೆದ ನಾಲ್ಕು ತಿಂಗಳ ಹಿಂದೆ ಇಬ್ಬರು ಗುಪ್ತವಾಗಿ ಮದುವೆ ಕೂಡ ಆಗಿದ್ದರಂತೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಹಣದ ವಿಚಾರ ಇಬ್ಬರ ನಡುವಿನ ಮನಸ್ತಾಪಕ್ಕೆ ಕಾರಣವಾಗಿದೆ. ಇಬ್ಬರ ನಡುವೆ ಜಗಳ ಆರಂಭವಾಗಿದೆ. ಜೊತೆಗೆ ಖಾಜಾನಿಗೆ ಉಮಾಳ ಸೌಂದರ್ಯ, ಆಕೆಯ ಮಾತು ತೆಲೆಕೆಡಿಸಿತ್ತು. ಬರುಬರುತ್ತ ಆಕೆಯ ಮೇಲೆ ಅನುಮಾನ ಪಡೋದಕ್ಕೆ ಶುರು ಮಾಡಿದ್ದ. ಉಮಾಳ ಫೋನ್​ ಬಿಜಿ ಬಂದ್ರೆ ಸಾಕು ಜೋರು ಗಲಾಟೆ ಮಡುತ್ತಿದ್ದನಂತೆ. ಉಮಾರ ಮನೆಗೆ ಯಾವತ್ತು ಖಾಜಾ ಬರುತ್ತಿರಲಿಲ್ಲ, ಬದಲಿಗೆ ಇಬ್ಬರು ಹೊರಗಡೆ ಭೇಟಿ ಮಾಡುತ್ತಿದ್ದರಂತೆ.

ಜನವರಿ 6ರಂದು ಅನುಮಾನ, ಹಣಕಾಸಿನ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದೆ. ಗಲಾಟೆಯಾದ ಬಳಿಕ ಉಮಾಳ ಮನೆ ಹತ್ತಿರಕ್ಕೆ ಖಾಜಾ ಬಂದಿದ್ದಾನೆ. ಮನೆ ಹತ್ತಿರ ಬರುತ್ತಿದ್ದಂತೆ ಉಮಾ ಅವರ ಮನೆ ಪಕ್ಕದ ಮನೆಯ ಮಹಡಿಗೆ ಹೋಗಿದ್ದಾರೆ. ಆಗ ಸಮಯ ಬೆಳಗಿನ ಜಾವ 4.30ರ ಸುಮಾರು, ಇಬ್ಬರು ಮಹಡಿ ಮೇಲೆ ಮಾತನಾಡುತ್ತಿದ್ದರು. ಸಿಟ್ಟಿನಲ್ಲಿದ್ದ ಖಾಜಾ ಕೊಲೆ ಮಾಡಲೇಬೇಕು ಅಂತಾ ಸಂಚು ಹಾಕಿ, ಹರಿತವಾದ ಚಾಕು ತಂದಿದ್ದ. ಮುಖಕ್ಕೆ ಟವೆಲ್ ಹಾಕಿ ಕೋಳಿ ಕುತ್ತಿಗೆ ಕೊಯ್ಯುವ ಹಾಗೆ ಉಮಾರ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದ. ಇತ್ತ ರಕ್ತದ ಮಡುವಿನಲ್ಲಿ ಬಿದ್ದು ಉಮಾ ಸ್ಥಳದಲ್ಲೇ ಮೃತಪಟ್ಟಿದ್ದರು.

ಬೆಕ್ಕುಗಳ ಕಾದಾಟ: ಉಮಾ ಪತ್ತೆ

ರೈಲ್ವೆ ಸ್ಟೇಷನ್ ಸ್ಟಾಲ್‌ನಲ್ಲಿ ಕೆಲಸ ಮುಗಿಸಿ ಮನೆಗೆ ಬಂದಿದ್ದ ಉಮಾ ಬೆಳಗಿನ ಜಾವ 4:30ಕ್ಕೆ ಮನೆಯಿಂದ ಆಚೆ ಹೋದವಳು ವಾಪಾಸ್ ಮನೆಗೆ ಬಂದಿಲ್ಲ. ಇತ್ತ ಗಾಬರಿಯಾಗಿದ್ದ ಮನೆಮಂದಿ ಉಮಾಳ ಹುಡುಕಾಡಿದ್ದಾರೆ. ಸಂಬಂಧಿಕರಿಗೆ, ಸ್ನೇಹಿತರಗೆ ಫೋನ್​ ಮಾಡಿ ವಿಚಾರಿಸಿದ್ದಾರೆ. ಆದರೆ ಯಾವುದು ಪ್ರಯೋಜವಾಗಿಲ್ಲ. ಇತ್ತ ಮನೆ ಪಕ್ಕದಲ್ಲಿ ಬೆಕ್ಕುಗಳ ಕಾದಾಟ ಮಾಡುತ್ತಿದ್ದವು. ಬೆಕ್ಕುಗಳು ಯಾಕಿಷ್ಟು ಕಾದಾಡುತ್ತಿವೆ. ಅಂತಾ ಮನೆ ಮಹಡಿ ನೋಡಲು ಹೋಗಿದ್ದ ಪಕ್ಕದ ಮನೆಯವರಿಗೆ ಉಮಾಳ ಶವ ಕಂಡಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯ ಮೃತದೇಹ ಕಂಡು ಆತಂಕಗೊಂಡಿದ್ದಾರೆ. ತಕ್ಷಣ ಚಿತ್ತವಾಡ್ಗಿ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಹರಿತವಾದ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದು ಬೆಳೆಕಿಗೆ ಬಂದಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿ ಪತ್ತೆಗೆ ಬಲೆಬಿಸಿದ್ದರು.

ಇದನ್ನೂ ಓದಿ: ತರಕಾರಿ ಮಾರಿ ಬಂದ ಹಣದಲ್ಲಿ ದೇಗುಲಕ್ಕೆ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ

ಇತ್ತ ಕೊಲೆ ಮಾಡಿದ್ದ ಖಾಜಾ ಹೊಸಪೇಟೆ ನಗರದಲ್ಲಿ ತಲೆ ಮರೆಸಿಕೊಂಡಿದ್ದ. ಕೊಲೆ ಸ್ಥಳಕ್ಕೆ ವಿಜಯನಗರ ಎಸ್ಪಿ ಜಾಹ್ನವಿ ಭೇಟಿ ನೀಡಿ ಆರೋಪಿ ಪತ್ತೆಗೆ ತಂಡ ಸಿದ್ಧಮಾಡಿದ್ದರು. ಮೃತ ಉಮಾಳ ಫೋನ್​ ಚೆಕ್ ಮಾಡಿ ಆಕೆಯ ಕೊನೆಯ ಕಾಲ್‌ ನಂಬರ್ ತೆಗೆದು ಟವರ್ ಟ್ರೇಸ್​ ಮಾಡಿದ್ದು, ಪ್ರಕರಣ ದಾಖಲಾದ ಕೇವಲ ನಾಲ್ಕು ಗಂಟೆಯಲ್ಲಿ ಆರೋಪಿ ಖಾಜಾ ಪತ್ತೆ ಮಾಡಿದ ಪೊಲೀಸರು, ಆತನನ್ನು ಕಂಬಿ ಹಿಂದೆ ನಿಲ್ಲಿಸಿದ್ದಾರೆ. ಇತ್ತ ಉಮಾರನ್ನ ಕಳೆದುಕೊಂಡ ಇಡೀ ಕುಟುಂಬ ಅನಾಥವಾಗಿದೆ. ಮೊದಲೇ ತಂದೆಯಿಂದ ದೂರವಿದ್ದ ಮಕ್ಕಳು ಇದೀಗ ತಾಯಿ ಇಲ್ಲದೆ ತಬ್ಬಲಿಗಳಾಗಿವೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ನಿಂದನೆ ಕೇಸ್​: ರಾಜೀವ್​​ ಗೌಡಗೆ ಶಾಕ್​​ ಮೇಲೆ ಶಾಕ್​​ – Kannada News | Double Shock for Rajeev Gowda: Congress Leader Faces Multiple Allegations, Party Issues Notice

ಚಿಕ್ಕಬಳ್ಳಾಪುರ, ಜನವರಿ 15: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ನಿಂದನೆ ವಿಚಾರ ಪ್ರಕರಣದ ಆರೋಪಿ, ಕಾಂಗ್ರೆಸ್​​ ಮುಖಂಡ ರಾಜೀವ್​​ ಗೌಡಗೆ ಶಾಕ್​​ ಮೇಲೆ ಶಾಕ್​​ ಸಿಗ್ತಿದೆ. ತಲೆ ಮರೆಸಿಕೊಂಡಿರುವ ಆರೋಪಿ ವಿರುದ್ಧ ಒಂದೊಂದಾಗಿ ಆರೋಪಗಳು ಕೇಳಿಬರುತ್ತಿದ್ದು, ಶಿಡ್ಲಘಟ್ಟ ತಹಶೀಲ್ದಾರ್ ಗಗನಸಿಂಧು ಅವರಿಗೂ ಏಕವಚನದಲ್ಲಿ ಈತ ನಿಂದಿಸಿದ್ದ ಬಗ್ಗೆ ವರದಿಯಾಗಿತ್ತು. ಆ ಬೆನ್ನಲ್ಲೇ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ ಮಾಡ್ತಿರುವ ಮಹಿಳಾ ಪಿಡಿಒ ಒಬ್ಬರು ಕೂಡ ‘ಕೈ’ ಮುಖಂಡನ ವಿರುದ್ಧ ಸ್ಫೋಟಕ ಆರೋಪ ಮಾಡಿದ್ದಾರೆ. ಮಹಿಳಾ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡೋದು ರಾಜೀವ್ ಗೌಡಗೆ ಪ್ರವೃತ್ತಿ ಎಂದು ಟಿವಿ9ಗೆ ಕರೆ ಮಾಡಿ ತಮ್ಮ ಅಳಲುತೋಡಿಕೊಂಡಿದ್ದಾರೆ.

ಪಿಡಿಒ ಆರೋಪವೇನು?

ರಾಜೀವ್ ಗೌಡ ತನಗೂ ಕೂಡ ಧಮ್ಕಿ ಹಾಕಿ ಕಿರುಕುಳ ನೀಡುತ್ತಿದ್ದರು. ಶಿಡ್ಲಘಟ್ಟದಲ್ಲಿ ಶಾಸಕರ ಬದಲು ತಮ್ಮ ಮಾತು ನಡೆಯಬೇಕು ಎನ್ನುತ್ತಿದ್ದರು. ರಾಜೀವ್ ಗೌಡ ಹೇಳಿದಂತೆ ಕೇಳದಿದ್ದರೆ ವರ್ಗಾವಣೆ ಮಾಡಿಸುತ್ತಾರೆ. ಸರಿ ಅಥವಾ ತಪ್ಪು ಎಂದು ನೋಡಲ್ಲ, ಅವರು ಹೇಳಿದಂತೆ ಮಾಡಬೇಕು. ಹಾಲಿನ ಡೇರಿಗೆ ನಾಮನಿರ್ದೇಶನ, ಚೆಕ್ ಹಾಕುವ ವಿಚಾರದಲ್ಲಿ ಕಿರುಕುಳ ನೀಡಲಾಗಿದ್ದು, ಕೆಪಿಸಿಸಿ ಕೋ-ಆರ್ಡಿನೇಟರ್ ಅನ್ನೋ ಲೆಟರ್​ಹೆಡ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಶಾಸಕರಿಗಿಂತ ಕೆಪಿಸಿಸಿ ಕೋ-ಆರ್ಡಿನೇಟರ್ ಹುದ್ದೆ ದೊಡ್ಡದು ಎಂದು ಹೇಳಿ ಶಿಡ್ಲಘಟ್ಟ ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ರಾಜೀವ್​​ ಗೌಡ ವಿರುದ್ಧ ಮತ್ತೊಂದು ಆರೋಪ; ತಹಶೀಲ್ದಾರ್​​ಗೂ ನಿಂದಿಸಿದ್ದನಾ ‘ಕೈ’ ಮುಖಂಡ?

ಅಧಿಕಾರಿಗಳು ಸ್ಥಳೀಯ ಜೆಡಿಎಸ್ ಶಾಸಕರ ಮಾತು ಕೇಳ್ತಾರೆಂಬ ಭ್ರಮೆಯಲ್ಲಿ ಶಿಡ್ಲಘಟ್ಟ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಇದ್ದಾರೆ. ಪೌರಾಯುಕ್ತೆ ಅಮೃತಾಗೌಡಗೆ ಬೈಯ್ದಂತೆ ನನಗೂ ಬೈಯ್ಯಲು ಯತ್ನಿಸಿದ್ದರು. ಆದರೆ ನಾನು ತಿರುಗಿಸಿ ಬೈಯ್ದಿದ್ದರಿಂದ ರಾಜೀವ್ ಗೌಡ ಸುಮ್ಮನಾಗಿದ್ದರು. ಹೇಳಿದಂತೆಲ್ಲ ಮಾಡಲಾಗಲ್ಲ, ಅದೇನ್ ಮಾಡ್ಕೋತಿರೋ ಮಾಡ್ಕೊಳ್ಳಿ ಎಂದಿದ್ದೆ. ಅವರು ಹೇಳಿದಂತೆ ಕೇಳಲಿಲ್ಲವೆಂಬ ಕಾರಣಕ್ಕೆ ವರ್ಗಾವಣೆ ಮಾಡಿಸಿದರು. ಶಿಡ್ಲಘಟ್ಟ ಕ್ಷೇತ್ರದ ಬಹುತೇಕ ಮಹಿಳಾ ಅಧಿಕಾರಿಗಳು ಅವರಿಂದ ಕಿರುಕುಳ ಅನುಭವಿಸಿದ್ದಾರೆ ಎಂದು ಪಿಡಿಒ ಹೇಳಿದ್ದಾರೆ.

ರಾಜೀವ್​​ ಗೌಡಗೆ ಕೆಪಿಸಿಸಿ ನೋಟಿಸ್​​

ಪಕ್ಷದ ಮುಖಂಡ ರಾಜೀವ್​​ ಗೌಡ ಮಹಿಳಾ ಅಧಿಕಾರಿಗಳಿಗೆ ಕಿರುಕುಳ ನೀಡಿರುವ ವಿಚಾರ ದೊಡ್ಡದಾಗುತ್ತಿದ್ದಂತೆ ಕಾಂಗ್ರೆಸ್​​ ಡ್ಯಾಮೇಜ್​​ ಕಂಟ್ರೋಲ್​​ಗೆ ಮುಂದಾಗಿದೆ. ಪೌರಾಯುಕ್ತರೊಂದಿಗೆ ತಾವು ಆಡಿದ ಮಾತುಗಳಿಂದ ಪಕ್ಷಕ್ಕೆ ಮುಜುಗರ ಆಗಿದೆ. ಹಾಗಾಗಿ ಒಂದು ವಾರದೊಳಗೆ ಸೂಕ್ತ ಸಮಾಜಾಯಿಷಿ ನೀಡಿ. ಇಲ್ಲವಾದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ನೋಟಿಸ್​​ ಜಾರಿ ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

India-Iran: ಇರಾನ್ ಕಟ್ಟರ್ ಇಸ್ಲಾಮಿಕ್ ದೇಶವಾದರೂ ಭಾರತಕ್ಕೆ ಬೇಕು; ಯಾಕೆ ಗೊತ್ತಾ? – Kannada News | Iran crisis, why India has to worry about this Islamic nation, here are some reasons

ನವದೆಹಲಿ, ಜನವರಿ 15: ಇರಾನ್ ಮೇಲೆ ಅಮೆರಿಕ ಯಾವ ಕ್ಷಣದಲ್ಲಿ ಬೇಕಾದರೂ ಮಿಲಿಟರಿ ದಾಳಿ ನಡೆಸಬಹುದು. ಭಾರತ ಬಹಳ ಆತಂಕದಲ್ಲಿ ಪರಿಸ್ಥಿತಿ ವೀಕ್ಷಿಸುವಂತಾಗಿದೆ. ಇರಾನ್ (Iran) ಏನೂ ಭಾರತಕ್ಕೆ ಮಿತ್ರ ದೇಶವಲ್ಲ, ತೀರಾ ಶತ್ರು ದೇಶವೂ ಅಲ್ಲ. ಎರಡು ದೇಶಗಳಾಚೆ ಇರುವ ಒಂದು ರಾಷ್ಟ್ರ. ಅಲ್ಲಿ ಪರಿಸ್ಥಿತಿ ಹದಗೆಟ್ಟರೆ ಭಾರತ ಯಾಕೆ ಚಿಂತಿಸಬೇಕು? ಭಾರತ ಇರಾನ್ ಬಗ್ಗೆ ಚಿಂತೆ ಪಡಲು ಕಾರಣಗಳಿವೆ. ಭಾರತ ಮತ್ತು ಇರಾನ್ ನಡುವಿನ ಈಗಿನ ಸಂಬಂಧದ ತಳಹದಿಯು ಪರಸ್ಪರ ಅಗತ್ಯಗಳ ಮೇಲೆ ನಿಂತಿದೆ.

ಪಶ್ಚಿಮ ಏಷ್ಯಾ ಮತ್ತು ಮಧ್ಯ ಏಷ್ಯಾಗೆ ಹೋಗಲು ಭಾರತಕ್ಕೆ ಇರಾನ್ ಬೇಕು…

ಪಶ್ಚಿಮ ಏಷ್ಯಾ ಮತ್ತು ಮಧ್ಯ ಏಷ್ಯನ್ ರಾಷ್ಟ್ರಗಳೊಂದಿಗೆ ಭಾರತ ವ್ಯಾಪಾರ ವಹಿವಾಟು ನಡೆಸಲು ಪಾಕಿಸ್ತಾನ ಪ್ರಮುಖ ತಡೆಗೋಡೆಯಾಗಿದೆ. ಪಾಕಿಸ್ತಾನದ ನೆಲದ ಮೂಲಕ ಹೋದರೆ ಆ ದೇಶಗಳನ್ನು ಸುಲಭವಾಗಿ ತಲುಪಬಹುದು. ಆದರೆ ಪಾಕಿಸ್ತಾನವನ್ನು ಭಾರತ ಹಾದು ಹೋಗಲು ಆಗುವುದಿಲ್ಲ. ಅಫ್ಗಾನಿಸ್ತಾನದಲ್ಲಿ ಸಮುದ್ರ ಸೀಮೆ ಇಲ್ಲ. ಭಾರತದಿಂದ ಅಫ್ಗಾನಿಸ್ತಾನಕ್ಕೆ ಹೋಗಬೇಕೆಂದರೂ ಪಾಕಿಸ್ತಾನಕ್ಕೆ ಹೋಗಬೇಕು ಇಲ್ಲವಾದರೆ ಇರಾನ್​ಗೆ ಹೋಗಬೇಕು.

ಇದನ್ನೂ ಓದಿ: ಪಾಕಿಸ್ತಾನ, ಬಾಂಗ್ಲಾ ಸೇರಿ 75 ದೇಶಗಳ ಜನರಿಗೆ ಇಲ್ಲ ಅಮೆರಿಕದ ವಲಸೆ ವೀಸಾ; ಇಲ್ಲಿದೆ ಪಟ್ಟಿ

ಈ ಕಾರಣಕ್ಕೆ ಭಾರತವು ಇರಾನ್​ನ ಛಾಬಹಾರ್ ಸಮುದ್ರ ಬಂದರನ್ನು ನಿರ್ಮಿಸಲು ಓಡಾಡುತ್ತಿದೆ. ಈ ಬಂದರು ನಿರ್ಮಾಣವಾದರೆ ಭಾರತದ ಸರಕುಗಳನ್ನು ಇಲ್ಲಿಗೆ ಸಾಗಿಸಿ ಇಲ್ಲಿಂದ ಅಫ್ಗಾನಿಸ್ತಾನ ಹಾಗೂ ಆ ಮೂಲಕ ತುರ್ಕ್​ಮೆನಿಸ್ತಾನ, ತಜಿಕಿಸ್ತಾನ, ಕಿರ್ಗಿಸ್ತಾನ್ ಇತ್ಯಾದಿ ಮಧ್ಯ ಏಷ್ಯನ್ ದೇಶಗಳಿಗೆ ಸಾಗಿಸಬಹುದು.

ಹೀಗಾಗಿ, ಇರಾನ್​ನ ಛಾಬಹಾರ್ ಬಂದರು ಭಾರತಕ್ಕೆ ಬಹಳ ಆಯಕಟ್ಟಿನ ಸ್ಥಳವಾಗಿದೆ. ಅಲ್ಲಿಯ ಕೆಲ ಇನ್​ಫ್ರಾಸ್ಟ್ರಕ್ಚರ್ ಯೋಜನೆಗಳಲ್ಲಿ ಭಾರತ ಹೂಡಿಕೆ ಮಾಡಿದೆ. ಅಮೆರಿಕವು ಇರಾನ್ ತೈಲ ನಿಷೇಧ ಮಾಡಿದರೂ ಭಾರತ ಇತರ ಉತ್ಪನ್ನಗಳ ವಹಿವಾಟು ನಡೆಸುತ್ತಾ ಬಂದಿದೆ. ಈ ಮೂಲಕ ಇರಾನ್ ಜೊತೆಗಿನ ಸಂಬಂಧವನ್ನು ತುಸು ಗಟ್ಟಿಯಾಗಿಯೇ ಉಳಿಸಿಕೊಂಡು ಬಂದಿದೆ ಭಾರತ.

ಇದನ್ನೂ ಓದಿ: 2025ರಲ್ಲಿ ಚೀನಾಗೆ ವ್ಯಾಪಾರ ಸುಗ್ಗಿ; ಭಾರತದ ರಫ್ತಿನಲ್ಲೂ 5.5 ಬಿಲಿಯನ್ ಡಾಲರ್​ನಷ್ಟು ಹೆಚ್ಚಳ

ಈಗ ಇರಾನ್​ನಲ್ಲಿ ಅರಾಜಕತೆ ಸೃಷ್ಟಿಯಾಗಿ, ಛಾಬಹಾರ್ ಪೋರ್ಟ್ ಪ್ರವೇಶ ಭಾರತಕ್ಕೆ ಕೈತಪ್ಪಿ ಹೋದರೆ, ಅಥವಾ ಇಡೀ ಇರಾನ್ ಭಾರತದಿಂದ ದೂರವಾಗಿಬಿಟ್ಟರೆ ನಾನಾ ರೀತಿಯಲ್ಲಿ ಭಾರತಕ್ಕೆ ಹಿನ್ನಡೆಯಾಗಬಹುದು. ಇದು ಭಾರತವನ್ನು ಚಿಂತೆಗೀಡು ಮಾಡಿರುವುದು ಮೇಲ್ನೋಟಕ್ಕೆ ಕಾಣುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಚಳಿಗಾಲದಲ್ಲಿ, ಪ್ಲೇಟ್‌ಲೆಟ್ ಕಡಿಮೆಯಾಗುವುದಕ್ಕೆ ಕಾರಣವೇನು ಗೊತ್ತಾ? ತಡೆಯಲು ಇಲ್ಲಿದೆ ಸಲಹೆ – Kannada News | Platelet Count Drops in Winter: What to Know

ಚಳಿಗಾಲದ ಹವಾಮಾನವು ಆರೋಗ್ಯದ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ, ಕೆಲವರ ದೇಹದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗಲು ಪ್ರಾರಂಭವಾಗುತ್ತದೆ, ಇದನ್ನು ನಿರ್ಲಕ್ಷಿಸುವುದು ಬಹಳ ಅಪಾಯಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಪ್ಲೇಟ್‌ಲೆಟ್‌ಗಳು (Platelet) ರಕ್ತದ ಪ್ರಮುಖ ಭಾಗವಾಗಿದ್ದು, ರಕ್ತ ಹೆಪ್ಪುಗಟ್ಟುವಿಕೆಗೆ ಮತ್ತು ಗಾಯಗೊಂಡಾಗ ಅತಿಯಾದ ರಕ್ತಸ್ರಾವವನ್ನು ತಡೆಯಲು ಕಾರಣವಾಗುತ್ತದೆ ಎಂಬುದು ನಿಮಗೆ ತಿಳಿದಿರಬಹುದು. ದೇಹದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾದರೆ, ಸಣ್ಣಪುಟ್ಟ ಗಾಯಗಳು ಸಹ ಗಂಭೀರವಾಗುತ್ತದೆ. ಹಾಗಾದರೆ ದೇಹದಲ್ಲಿ ಪ್ಲೇಟ್‌ಲೆಟ್‌ ಕಡಿಮೆಯಾಗುವುದಕ್ಕೆ ಕಾರಣವೇನು, ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಚಳಿಗಾಲದಲ್ಲಿ ದೇಹದಲ್ಲಿರುವ ಪ್ಲೇಟ್‌ಲೆಟ್‌ ಕಡಿಮೆಯಾಗುವುದಕ್ಕೆ ಕಾರಣವೇನು?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಅವರು ತಿಳಿಸಿರುವ ಮಾಹಿತಿ ಪ್ರಕಾರ, ಶೀತ ವಾತಾವರಣದಲ್ಲಿ, ದೇಹದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ, ಇದು ವೈರಲ್ ಸೋಂಕುಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ದೇಹದ ರಕ್ತ ವ್ಯವಸ್ಥೆಯು ಪರಿಣಾಮ ಬೀರಬಹುದು ಮತ್ತು ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಚಳಿಗಾಲದಲ್ಲಿ, ಸೂರ್ಯನ ಬೆಳಕು ಸರಿಯಾಗಿ ಸಿಗದಿರುವುದು, ಜೊತೆಗೆ ನೀರು ಕುಡಿಯುವ ಪ್ರಮಾಣ ಕಡಿಮೆಯಾಗಿರುವುದು, ದೈಹಿಕ ಚಟುವಟಿಕೆ ಅಷ್ಟಾಗಿ ಇಲ್ಲದಿರುವುದು ಹೀಗೆ ಹಲವು ಕಾರಣಗಳು ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲಿಯೂ ಕೆಲವರಲ್ಲಿ, ದೀರ್ಘಕಾಲದ ಕಾಯಿಲೆ ಅಥವಾ ನಿರಂತರ ಔಷಧ ಸೇವನೆಯೂ ಸಹ ಈ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸಬಹುದು. ಜೊತೆಗೆ, ಮಕ್ಕಳು, ವೃದ್ಧರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಇರುವವರಲ್ಲಿ ಈ ಅಪಾಯ ಹೆಚ್ಚಾಗಿರುತ್ತದೆ.

ಕಡಿಮೆ ಪ್ಲೇಟ್‌ಲೆಟ್‌ಗಳ ಲಕ್ಷಣಗಳು:

ಪ್ಲೇಟ್‌ಲೆಟ್‌ ಕಡಿಮೆಯಾದಾಗ, ಆಗಾಗ ಮೂಗಿನಿಂದ ರಕ್ತಸ್ರಾವವಾಗುವುದು, ಒಸಡುಗಳಿಂದ ರಕ್ತಸ್ರಾವವಾಗುವುದು ಅಥವಾ ದೇಹದಲ್ಲಿ ನೀಲಿ-ಕಪ್ಪು ಗುರುತುಗಳು ಕಂಡುಬರುತ್ತದೆ. ಆದರೆ ಸಣ್ಣ ಗಾಯವಾದರೂ ಕೂಡ ಬಹಳ ಸಮಯದವರೆಗೆ ರಕ್ತ ಬರುವುದು ಕಳವಳಕ್ಕೆ ಕಾರಣವಾಗಬಹುದು. ಕೆಲವರಲ್ಲಿ ನಿರಂತರವಾಗಿ ದೌರ್ಬಲ್ಯ, ಆಯಾಸ ಮತ್ತು ತಲೆತಿರುಗುವಿಕೆ ಕಂಡುಬರುತ್ತದೆ. ಇನ್ನು ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಅತಿಯಾದ ರಕ್ತಸ್ರಾವವು ಕಡಿಮೆ ಪ್ಲೇಟ್‌ಲೆಟ್‌ಗಳ ಸಂಕೇತವೂ ಆಗಿರಬಹುದು. ಈ ಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ, ಸ್ಥಿತಿ ಗಂಭೀರವಾಗಬಹುದು.

ಇದನ್ನೂ ಓದಿ: ಒಸಡುಗಳಲ್ಲಿ ರಕ್ತ ಬರುವುದು ಡಯಾಬಿಟಿಸ್ ಬರುವ ಮುನ್ಸೂಚನೆಯೇ? ಈ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ

ಇದನ್ನು ತಡೆಯುವುದು ಹೇಗೆ?

  • ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ.
  • ಉಗುರು ಬೆಚ್ಚಗಿನ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
  • ಚಳಿಗಾಲದಲ್ಲಿಯೂ ಸಹ ಸ್ವಲ್ಪ ಸೂರ್ಯನ ಬೆಳಕನ್ನು ಪಡೆದುಕೊಳ್ಳಲು ಪ್ರಯತ್ನಿಸಿ.
  • ವೈರಲ್ ಸೋಂಕು ಬರದಂತೆ ತಡೆಯಿರಿ.
  • ಸಾಕಷ್ಟು ವಿಶ್ರಾಂತಿ ಮತ್ತು ನಿದ್ರೆ ಮಾಡುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ – Kannada News | U19 World Cup: Ritwik Apandhi Dismisses Suryavanshi; USA All Rounder’s Indian Roots

ಇಂದಿನಿಂದ ಆರಂಭವಾಗಿರುವ ಅಂಡರ್-19 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ ಒಂದಂಕಿಗೆ ವಿಕೆಟ್ ಒಪ್ಪಿಸಿದರು. ಯುಎಸ್ಎ ವಿರುದ್ಧ ಈ ಪಂದ್ಯದಲ್ಲಿ 4 ಎಸೆತಗಳನ್ನು ಎದುರಿಸಿದ ವೈಭವ್ ಸೂರ್ಯವಂಶಿ ಕೇವಲ 2 ರನ್ ಗಳಿಸಿ ಔಟಾದರು. ಸೂರ್ಯವಂಶಿ ಅವರ ವಿಕೆಟ್ ಅನ್ನು ಕೇವಲ 17 ವರ್ಷದ ಆಟಗಾರ ರಿತ್ವಿಕ್ ಅಪಿಡಿ ಪಡೆದರು. ರಿತ್ವಿಕ್ ಅಪಿಡಿ ಅವರ ಎಸೆತದಲ್ಲಿ ಸಿಕ್ಸರ್ ಹೊಡೆಯಲು ಪ್ರಯತ್ನಿಸಿ ಸೂರ್ಯವಂಶಿ ಬೌಲ್ಡ್ ಆದರು.

ಭಾರತೀಯ ಮೂಲಕ ರಿತ್ವಿಕ್, ಅಮೇರಿಕ ತಂಡದಲ್ಲಿ ಆಲ್‌ರೌಂಡರ್ ಆಟಗಾರನಾಗಿದ್ದಾರೆ. ರಿತ್ವಿಕ್ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿಯಾಗಿದ್ದು, ಪಂದ್ಯ ಪ್ರಾರಂಭವಾಗುವ ಮೊದಲು ಅವರು ಇದನ್ನು ಹೇಳಿದ್ದರು. ರಿತ್ವಿಕ್ ಭಾರತೀಯ ಮೂಲದವರಾಗಿದ್ದು, ಅವರ ಸಂಬಂಧಿಕರು ತೆಲಂಗಾಣದಲ್ಲಿ ವಾಸಿಸುತ್ತಿದ್ದಾರೆ. 10 ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದ ರಿತ್ವಿಕ್, ಇದೀಗ 19 ವರ್ಷದೊಳಗಿನವರ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

Source link

ವೈದ್ಯರಿಗೇ ಅಚ್ಚರಿ ಮೂಡಿಸಿರುವ ಈ ವ್ಯಕ್ತಿ 50 ವರ್ಷದಿಂದ ನಿದ್ರೆಯೇ ಮಾಡಿಲ್ಲವಂತೆ! – Kannada News | Madhya Pradesh Man Claims He Has not Slept In 50 Years Doctors also wonders

ರೇವಾ, ಜನವರಿ 15: ಮಧ್ಯಪ್ರದೇಶದ ರೇವಾದಲ್ಲಿ ಒಂದು ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದ್ದು ವೈದ್ಯಲೋಕವನ್ನೇ ದಿಗ್ಭ್ರಮೆಗೊಳಿಸಿದೆ. ರೇವಾ ನಗರದ ಚಾಣಕ್ಯಪುರಿ ಕಾಲೋನಿಯ ನಿವಾಸಿ 75 ವರ್ಷದ ಮೋಹನ್ ಲಾಲ್ ದ್ವಿವೇದಿ ಅವರು ಸುಮಾರು 50 ವರ್ಷಗಳಿಂದ ನಿದ್ರೆಯನ್ನೇ (Sleep) ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಆಶ್ಚರ್ಯದ ಸಂಗತಿ ಏನೆಂದರೆ ಇಷ್ಟು ದೀರ್ಘಾವಧಿಯ ನಿದ್ರಾಹೀನತೆಯ ನಡುವೆಯೂ, ಅವರು ಯಾವುದೇ ಗಂಭೀರ ಕಾಯಿಲೆಗಳಿಂದ ಬಳಲುತ್ತಿಲ್ಲ. ಎಲ್ಲರಂತೆ ಸಾಮಾನ್ಯವಾಗಿಯೇ ಬದುಕುತ್ತಿದ್ದಾರೆ.

ವೈದ್ಯರು ಒಬ್ಬ ಸಾಮಾನ್ಯ ವ್ಯಕ್ತಿಗೆ ದಿನಕ್ಕೆ 6ರಿಂದ 8 ಗಂಟೆಗಳ ಕಾಲ ನಿದ್ರೆ ಅಗತ್ಯ ಎಂದು ಹೇಳುತ್ತಾರೆ. 7 ಗಂಟೆಗಿಂತ ಕಡಿಮೆ ನಿದ್ರೆ ಮಾಡುವವರು ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಕೂಡ ಹೇಳುತ್ತಾರೆ. ಆದರೆ, ಈ ವ್ಯಕ್ತಿ 50 ವರ್ಷಗಳಿಂದ ನಿದ್ರೆಯನ್ನೇ ಮಾಡಿಲ್ಲ ಎಂಬುದು ವೈದ್ಯರಿಗೂ ಆಶ್ಚರ್ಯ ಮೂಡಿಸಿದೆ.

ಇದನ್ನೂ ಓದಿ: ಸತತವಾಗಿ 36 ಗಂಟೆ ಹನುಮಾನ್ ವಿಗ್ರಹಕ್ಕೆ ಪ್ರದಕ್ಷಿಣೆ ಹಾಕಿದ ನಾಯಿ!

ಮೋಹನ್ ಲಾಲ್ ಆರಂಭದಲ್ಲಿ ಮೋಹನ್ ಲಾಲ್ ತಾನು ನಿದ್ರೆ ಮಾಡುವುದಿಲ್ಲ ಎಂಬ ಈ ವಿಷಯವನ್ನು ಯಾರೊಂದಿಗೂ ಹಂಚಿಕೊಂಡಿರಲಿಲ್ಲ. ಅವರು ರಾತ್ರಿಯಿಡೀ ಎಚ್ಚರವಾಗಿರುತ್ತಿದ್ದರು. ಆದರೂ ಅವರ ಕಣ್ಣುಗಳು ಉರಿಯುತ್ತಿರಲಿಲ್ಲ, ಅಥವಾ ಅದು ಅವರ ಕೆಲಸದ ಮೇಲೆ ಪರಿಣಾಮ ಬೀರುತ್ತಿರಲಿಲ್ಲ. ಈ ಬಗ್ಗೆ ಅವರು ತಮ್ಮ ಕುಟುಂಬಕ್ಕೆ ಹೇಳಿದಾಗ ಅವರು ಮೊದಲು ಭೂತೋಚ್ಚಾಟನೆ ಮಾಡಿಸಿದರು. ಆದರೂ ಏನೂ ಪ್ರಯೋಜನವಾಗದೆ ಇದ್ದಾಗ ದೆಹಲಿ ಮತ್ತು ಮುಂಬೈನ ಪ್ರಮುಖ ಆಸ್ಪತ್ರೆಗಳಲ್ಲಿ ವೈದ್ಯರನ್ನು ಸಂಪರ್ಕಿಸಿದರು. ಮೋಹನ್ ಅವರ ಮೇಲೆ ಹಲವಾರು ಪರೀಕ್ಷೆಗಳನ್ನು ನಡೆಸಲಾಯಿತು. ಆದರೆ ಅವರ ನಿದ್ರೆಯ ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ.

ಹಾಗಂತ ಮೋಹನ್ ಲಾಲ್ ಸಾಮಾನ್ಯ ವ್ಯಕ್ತಿಯೇನಲ್ಲ. ಮೋಹನ್ ಲಾಲ್ ದ್ವಿವೇದಿ 1973ರಲ್ಲಿ ಉಪನ್ಯಾಸಕರಾಗಿದ್ದರು. ನಂತರ 1974ರಲ್ಲಿ MPPSCಯಲ್ಲಿ ಉತ್ತೀರ್ಣರಾದರು ಮತ್ತು ನಯಬ್ ತಹಶೀಲ್ದಾರ್ ಆದರು. ಅವರು 2001ರಲ್ಲಿ ಜಂಟಿ ಕಲೆಕ್ಟರ್ ಆಗಿ ನಿವೃತ್ತರಾದರು. ಅವರ ನಿದ್ರೆಯ ಸಮಸ್ಯೆಗಳು 1973ರ ಸುಮಾರಿಗೆ ಪ್ರಾರಂಭವಾದವು. ಅಂದಿನಿಂದ ಅವರು ನಿದ್ರಾಹೀನತೆಯನ್ನು ಅನುಭವಿಸುತ್ತಲೇ ಇದ್ದಾರೆ.

ಇದನ್ನೂ ಓದಿ: ಅಯೋಧ್ಯೆಯ ರಾಮನ ದರ್ಶನಕ್ಕೆ 450 ಕಿ.ಮೀ ಸ್ಕೇಟಿಂಗ್ ಮಾಡಿದ 9 ವರ್ಷದ ಬಾಲಕಿ

ಮೋಹನ್ ಲಾಲ್ ತಮ್ಮ ಹೆಚ್ಚಿನ ಸಮಯವನ್ನು ಪುಸ್ತಕಗಳನ್ನು ಓದುವುದರಲ್ಲಿ ಕಳೆಯುತ್ತಾರೆ. ಅವರು ರಾತ್ರಿಯಲ್ಲಿ ಟೆರೇಸ್ ಮೇಲೆ ವಾಕಿಂಗ್ ಮಾಡುತ್ತಾ ಬೆಳಗಾಗುವುದನ್ನೇ ಕಾಯುತ್ತಾರೆ. ಕುತೂಹಲಕಾರಿಯಾಗಿ, ಅವರ ಪತ್ನಿ ಕೂಡ ದಿನಕ್ಕೆ 3ರಿಂದ 4 ಗಂಟೆಗಳ ಕಾಲ ಮಾತ್ರ ನಿದ್ರಿಸುತ್ತಾರೆ. ಮೋಹನ್ ಅವರಿಗೆ ಮಾನಸಿಕ ಸಮಸ್ಯೆಯೂ ಇಲ್ಲ, ದೈಹಿಕ ಸಮಸ್ಯೆಯೂ ಇಲ್ಲ. ಹೀಗಿದ್ದರೂ ಅವರಿಗೆ ಯಾಕೆ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಮಾತ್ರ ವೈದ್ಯರಿಗೆ ಇನ್ನೂ ಕಂಡುಹಿಡಿಯಲು ಸಾಧ್ಯವಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಅಭಿಮಾನಿಗಳು – Kannada News | Gilli Nata fans offer special pooja for his Bigg Boss Kannada Season 12 win

ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ತಲುಪಿರುವ ಗಿಲ್ಲಿ ನಟ (Gilli Nata) ಅವರಿಗೆ ಫ್ಯಾನ್ ಫಾಲೋಯಿಂಗ್ ಜಾಸ್ತಿ ಆಗಿದೆ. ಅವರೇ ಬಿಗ್ ಬಾಸ್ ಟ್ರೋಫಿ ಗೆಲ್ಲಬೇಕು ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ಶ್ರೀ ಕಾಮಧೇನು ಕ್ಷೇತ್ರದ ಶಿರಡಿ ಸಾಯಿ ದೇವಸ್ಥಾನದಲ್ಲಿ ಗಿಲ್ಲಿ ಫ್ಯಾನ್ಸ್ ಪೂಜೆ ಮಾಡಿಸಿದ್ದಾರೆ. ಗಿಲ್ಲಿಯೇ ಬಿಗ್ ಬಾಸ್ ಗೆಲಲ್ಲಿ ಎಂದು ಪೂಜೆ ಹಾಗೂ ಅರ್ಚನೆ ಮಾಡಿಸಲಾಗಿದೆ. ‘ಟ್ಯಾಲೆಂಟ್ ಇರೋ ಬಡವರ ಮಕ್ಳು ಗೆಲ್ಬೇಕು’ ಎಂದು ಗಿಲ್ಲಿ ಅಭಿಮಾನಿಗಳು ಬ್ಯಾನರ್ ಹಿಡಿದುಕೊಂಡು ನಿಂತಿದ್ದಾರೆ. ಗಿಲ್ಲಿ ನಟಿಸಿದ್ದ ‘ದಿ ಡೆವಿಲ್’ ಸಿನಿಮಾದ ಟ್ರೇಲರ್​ ಅನ್ನು ಬಿಗ್ ಬಾಸ್ ಮನೆಯ ಒಳಗೆ ಹಾಕಿಲ್ಲ ಎಂಬುದು ಕೆಲವು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ. ಜನವರಿ 17 ಮತ್ತು 18ರಂದು ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಫಿನಾಲೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗ ಸ್ಪರ್ಶಿಸಿದ ಸೂರ್ಯ ರಶ್ಮಿ – Kannada News | Makara Sankranti: Sunrays Touch Shivalinga at Gavi Gangadhareshwara Temple in Bengaluru

ಬೆಂಗಳೂರು, ಜನವರಿ 15: ಮಕರ ಸಂಕ್ರಾಂತಿ ಹಿನ್ನೆಲೆ ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಶಿವಲಿಂಗವನ್ನು ಸೂರ್ಯರಶ್ಮಿ ಸ್ಪರ್ಶಿಸಿದೆ. ಸಂಜೆ 5 ಗಂಟೆ 19 ನಿಮಿಷಕ್ಕೆ ಶಿವಲಿಂಗವನ್ನು ಸೂರ್ಯರಶ್ಮಿ ಸ್ಪರ್ಶಿಸಿದ್ದು, ಭಕ್ತರು ಅಪರೂಪದ ದೃಶ್ಯವನ್ನು ಕಣ್ತುಂಬಿಕೊಂಡರು. ನಂದಿ ಕೊಂಬಿನ ಮೂಲಕ ಶಿವನ ಗರ್ಭಗೃಹ ಪ್ರವೇಶಿಸಿದ ಸೂರ್ಯರಶ್ಮಿ, ಸುಮಾರು 2 ನಿಮಿಷ ಶಿವಲಿಂಗವನ್ನು ಸ್ಪರ್ಶಿಸಿದೆ. ದೇವರ ದರ್ಶನಕ್ಕೆ ಸುಮಾರು 200 ಮೀಟರ್​​ನಷ್ಟು ಉದ್ದದ ಸರತಿ ಸಾಲಲ್ಲಿ ಭಕ್ತರು ನಿಂತಿದ್ದು, ದೇವಸ್ಥಾನದ ಆವರಣದಲ್ಲಿ LED ಸ್ಕ್ರೀನ್​​ ವ್ಯವಸ್ಥೆ ಮಾಡಲಾಗಿದೆ. ಮೋಡ ಕವಿದ ವಾತಾವರಣದಿಂದಾಗಿ 2025ರಲ್ಲಿ ಸೂರ್ಯರಶ್ಮಿ ಶಿವಲಿಂಗವನ್ನು ಸ್ಪರ್ಶಿಸಲು ಸಾಧ್ಯವಾಗಿರಲಿಲ್ಲ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

I-PAC ದಾಳಿ ಪ್ರಕರಣದಲ್ಲಿ ಸಿಎಂ ಮಮತಾ ಬ್ಯಾನರ್ಜಿಗೆ ಮುಖಭಂಗ; ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ – Kannada News | I PAC raid Case Setback for Mamata Banerjee as Supreme Court stays FIR against ED officials

ನವದೆಹಲಿ, ಜನವರಿ 15: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ (CM Mamata Banerjee) ನೇತೃತ್ವದ ಟಿಎಂಸಿ ಸರ್ಕಾರ ಮತ್ತು ಕೊಲ್ಕತ್ತಾ ಪೊಲೀಸರಿಗೆ ಭಾರೀ ಹಿನ್ನಡೆಯಾಗಿದೆ. ರಾಜಕೀಯ ಸಲಹಾ ಸಂಸ್ಥೆ I-PAC ಕಚೇರಿ ಮೇಲೆ ದಾಳಿ ನಡೆಸಿದ್ದ ಇಡಿ (ಜಾರಿ ನಿರ್ದೇಶನಾಲಯ? ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಹಾಗೇ, ಬಂಗಾಳದ ಡಿಜಿಪಿ ರಾಜೀವ್ ಕುಮಾರ್ ಮತ್ತು ಕೊಲ್ಕತ್ತಾ ಪೊಲೀಸ್ ಆಯುಕ್ತ ಮನೋಜ್ ಕುಮಾರ್ ವರ್ಮಾ ಸೇರಿದಂತೆ ಇತರರನ್ನು ಅಮಾನತುಗೊಳಿಸುವಂತೆ ಕೋರಿ ಇಡಿ ಸಲ್ಲಿಸಿದ ಅರ್ಜಿಯ ಕುರಿತು ನ್ಯಾಯಮೂರ್ತಿ ಪ್ರಶಾಂತ್ ಮಿಶ್ರಾ ಮತ್ತು ನ್ಯಾಯಮೂರ್ತಿ ವಿಪುಲ್ ಪಂಚೋಲಿ ಅವರ ಪೀಠವು ಗೃಹ ಸಚಿವಾಲಯ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಮಮತಾ ಬ್ಯಾನರ್ಜಿ ಮತ್ತು ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರದಿಂದ ಉತ್ತರಗಳನ್ನು ಕೋರಿದೆ. ಈ ವಿಷಯದಲ್ಲಿ ಸಿಬಿಐ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿಗೂ ನ್ಯಾಯಾಲಯ ಉತ್ತರವನ್ನು ಕೋರಿದೆ.

I-PAC ಕಚೇರಿಯಲ್ಲಿ ಇಡಿ ದಾಳಿ ನಡೆಸಿದಾಗ ಸಿಎಂ ಮಮತಾ ಬ್ಯಾನರ್ಜಿ ಅಲ್ಲಿಗೆ ತೆರಳಿ ಕೆಲವು ಫೈಲ್​ಗಳು, ಹಾರ್ಡ್​ ಡಿಸ್ಕ್, ಲ್ಯಾಪ್​ಟಾಪ್, ಮೊಬೈಲ್​ಗಳನ್ನು ತೆಗೆದುಕೊಂಡು ಹೋಗಿದ್ದರು. ತಮ್ಮ ತನಿಖೆಗೆ ಸಿಎಂ ಅಡ್ಡಿಪಡಿಸಿದ್ದಾರೆ ಎಂದು ಇಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸುಪ್ರೀಂ ಕೋರ್ಟ್​ ತನಿಖೆಗೆ ಅಡಚಣೆ ಮಾಡಿದ ಆರೋಪದ ಮೇಲೆ ಇಡಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರಾಜೀವ್ ಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಇದನ್ನೂ ಓದಿ: ತನಿಖೆಗೆ ಅಡ್ಡಿಪಡಿಸಿದ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಸುಪ್ರೀಂ ಕೋರ್ಟ್ ಮೊರೆಹೋದ ಇಡಿ

ನ್ಯಾಯಮೂರ್ತಿಗಳಾದ ಪ್ರಶಾಂತ್ ಮಿಶ್ರಾ ಮತ್ತು ವಿಪುಲ್ ಪಂಚೋಲಿ ಅವರನ್ನೊಳಗೊಂಡ ಇಬ್ಬರು ನ್ಯಾಯಾಧೀಶರ ಪೀಠವು ಐ-ಪಿಎಸಿ ನಿರ್ದೇಶಕ ಪ್ರತೀಕ್ ಜೈನ್ ಅವರ ನಿವಾಸದಲ್ಲಿ ಶೋಧ ನಡೆಸುವಲ್ಲಿ ಭಾಗಿಯಾಗಿದ್ದ ಇಡಿ ಅಧಿಕಾರಿಗಳ ವಿರುದ್ಧದ ಎಫ್‌ಐಆರ್ ಅನ್ನು ಸಹ ತಡೆಹಿಡಿದಿದೆ. ಈ ವಿಷಯದ ಕುರಿತು ಫೆಬ್ರವರಿ 3ರಂದು ಮುಂದಿನ ವಿಚಾರಣೆಗೆ ದಿನ ನಿಗದಿಪಡಿಸಿದ ಸುಪ್ರೀಂ ಕೋರ್ಟ್, ಇಡಿ ದಾಳಿಯ ಸಿಸಿಟಿವಿ ದೃಶ್ಯಾವಳಿಗಳನ್ನು ರಕ್ಷಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಇದನ್ನೂ ಓದಿ: ಕೊಲ್ಕತ್ತಾದಲ್ಲಿ ಇಡಿ ದಾಳಿ ವೇಳೆ ಹೈಡ್ರಾಮಾ; I-PAC ಕಚೇರಿಗೆ ನುಗ್ಗಿ ಹಸಿರು ಫೈಲ್‌ ಹೊತ್ತೊಯ್ದ ಮಮತಾ ಬ್ಯಾನರ್ಜಿ

ಈ ತಿಂಗಳ ಆರಂಭದಲ್ಲಿ I-PAC ಮುಖ್ಯಸ್ಥ ಪ್ರತೀಕ್ ಜೈನ್ ಅವರ ಕೊಲ್ಕತ್ತಾ ನಿವಾಸದಲ್ಲಿ ಇಡಿ ಶೋಧ ನಡೆಸಿದ ನಂತರ ಭಾರಿ ವಿವಾದ ಭುಗಿಲೆದ್ದಿತು. ಆಗ ಮಮತಾ ಬ್ಯಾನರ್ಜಿ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಅಲ್ಲಿಗೆ ತೆರಳಿ ಇಡಿ ತನಿಖೆಗೆ ಅಡ್ಡಿಪಡಿಸಿದ್ದರು. ಇಡಿ, ಸಿಬಿಐನಂತಹ ತನಿಖಾ ಸಂಸ್ಥೆಗಳು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸುತ್ತಲೇ ಇದ್ದಾರೆ. ಅದರ ನಡುವೆ ಸುಪ್ರೀಂ ಕೋರ್ಟ್​ ಕೂಡ ಇಡಿಗೆ ಬಿಗ್ ರಿಲೀಫ್ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:51 pm, Thu, 15 January 26

Source link

IBPS PO SO Results: IBPS PO SO ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಫಲಿತಾಂಶ ಪ್ರಕಟ; ಡೌನ್‌ಲೋಡ್ ಮಾಡುವುದು ಹೇಗೆ? – Kannada News | IBPS PO SO Results 2026 Declared: Check Main Exam and Interview Cut Offs and Merit List Now!

ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ನಡೆಸಿದ ಪ್ರೊಬೇಷನರಿ ಆಫೀಸರ್ (PO) ಮತ್ತು ಸ್ಪೆಷಲಿಸ್ಟ್ ಆಫೀಸರ್ (SO) ನೇಮಕಾತಿಗಾಗಿ ಮುಖ್ಯ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ಪ್ರಮುಖ ಮಾಹಿತಿ ಇಲ್ಲಿದೆ. IBPS PO ಮತ್ತು SO ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಫಲಿತಾಂಶಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಫಲಿತಾಂಶಗಳ ಜೊತೆಗೆ, IBPS ಕಟ್ಆಫ್ ಅಂಕಗಳನ್ನು ಸಹ ಬಿಡುಗಡೆ ಮಾಡಿದೆ. SO ಮತ್ತು PO ನೇಮಕಾತಿಗಳಿಗೆ ಕಟ್ಆಫ್ ಅಂಕಗಳನ್ನು ವರ್ಗವಾರು ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗಿದೆ.

ಫಲಿತಾಂಶ ಪರಿಶೀಲಿಸುವುದು ಹೇಗೆ?

  • IBPS PO ಮತ್ತು SO ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಫಲಿತಾಂಶವನ್ನು ಪರಿಶೀಲಿಸಲು, ಮೊದಲು ಅಧಿಕೃತ ವೆಬ್‌ಸೈಟ್ ibps.in ಗೆ ಭೇಟಿ ನೀಡಿ .
  • ವೆಬ್‌ಸೈಟ್‌ನ ಮುಖಪುಟದಲ್ಲಿ, ಇತ್ತೀಚಿನ ಅಪ್ಡೇಟ್​ಗೆ ಹೋಗಿ. ಅಲ್ಲಿ IBPS PO ಮತ್ತು SO ಲಿಂಕ್ ಅನ್ನು ಕ್ಲಿಕ್ ಮಾಡಿ.
  • ಹೊಸ ವೆಬ್ ಪುಟ ತೆರೆಯುತ್ತದೆ. ನಿಮ್ಮ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ನಮೂದಿಸಿ ಮತ್ತು ಲಾಗಿನ್ ಬಟನ್ ಕ್ಲಿಕ್ ಮಾಡಿ.
  • ಪರದೆಯ ಮೇಲೆ ಸ್ಕೋರ್‌ಕಾರ್ಡ್ ತೆರೆಯುತ್ತದೆ ಮತ್ತು ನೀವು ಅದನ್ನು ಡೌನ್‌ಲೋಡ್ ಮಾಡಬಹುದು.

ಇದನ್ನೂ ಓದಿ: ಗ್ರಾಮ ಪಂಚಾಯತ್ನಲ್ಲಿ ಬಿಲ್ ಕಲೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ; ಪಿಯುಸಿ ಆಗಿದ್ರೆ ಸಾಕು

6000 ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ:

IBPS PO ಮತ್ತು SO ನೇಮಕಾತಿ ಪ್ರಕ್ರಿಯೆಯು 6,000 ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಿದೆ. ಇದರಲ್ಲಿ 5,208 IBPS PO ಹುದ್ದೆಗಳು ಮತ್ತು 1,000 ಕ್ಕೂ ಹೆಚ್ಚು IBPS SO ಹುದ್ದೆಗಳು ಸೇರಿವೆ. IBPS ಐಟಿ ಅಧಿಕಾರಿ, ಕೃಷಿ ಕ್ಷೇತ್ರ ಅಧಿಕಾರಿ (AFO), ಅಧಿಕೃತ ಭಾಷಾ ಅಧಿಕಾರಿ ಮತ್ತು ಮಾರ್ಕೆಟಿಂಗ್ ಅಧಿಕಾರಿಯಂತಹ ಹುದ್ದೆಗಳನ್ನು ನೀಡುತ್ತದೆ. ತಾತ್ಕಾಲಿಕ ಮೆರಿಟ್ ಪಟ್ಟಿಯಲ್ಲಿ ಹೆಸರು ಇರುವ ಅಭ್ಯರ್ಥಿಗಳಿಗೆ ಅವರ ನಿಯೋಜಿತ ಬ್ಯಾಂಕ್‌ನಿಂದ ಸೂಚಿಸಲಾಗುತ್ತದೆ. ನಂತರ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ, ಅಭ್ಯರ್ಥಿಗಳನ್ನು ತರಬೇತಿ ಮತ್ತು ನೇಮಕಾತಿಗಾಗಿ ಕರೆಯಲಾಗುತ್ತದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version