ಪ್ರಧಾನಿ ಮೋದಿಯಿಂದ ಉದ್ಘಾಟನೆಗೂ ಮೊದಲೇ ರಾಜಸ್ಥಾನದ ತೈಲ ಸಂಸ್ಕರಣಾಗಾರದಲ್ಲಿ ಬೆಂಕಿ ಅವಘಡ – Kannada News | Fire accident at refinery in Rajasthan day before inauguration by PM Narendra Modi

ನವದೆಹಲಿ, ಏಪ್ರಿಲ್ 20: ಪ್ರಧಾನಿ ಮೋದಿ (PM Modi) ಅವರು ರಾಜಸ್ಥಾನದ ಬಲೋತ್ರಾದಲ್ಲಿ ಭಾರತದ ಮೊದಲ ಸಮಗ್ರ ಸಂಸ್ಕರಣಾಗಾರ-ಪೆಟ್ರೋಕೆಮಿಕಲ್ ಸಂಕೀರ್ಣವನ್ನು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ. ಆದರೆ, ಅದಕ್ಕೂ ಒಂದು ದಿನ ಮೊದಲು ಅಂದರೆ ಇಂದು ಈ ಸಂಸ್ಕರಣಾಗಾರದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಭಾರತದ ಮೊದಲ ಗ್ರೀನ್‌ಫೀಲ್ಡ್ ಇಂಟಿಗ್ರೇಟೆಡ್ ರಿಫೈನರಿ-ಕಮ್-ಪೆಟ್ರೋಕೆಮಿಕಲ್ ಸಂಕೀರ್ಣವನ್ನು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಅನಾವರಣಗೊಳಿಸಲಿದ್ದಾರೆ. ಈ ಯೋಜನೆಯು 79,450 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆಯನ್ನು ಒಳಗೊಂಡಿದೆ. ಇದು ಈ ಪ್ರದೇಶದ ಅತಿದೊಡ್ಡ ಕೈಗಾರಿಕಾ ಅಭಿವೃದ್ಧಿಗಳಲ್ಲಿ ಒಂದಾಗಿದೆ.

ಮಾಹಿತಿಯ ಪ್ರಕಾರ, ಬೆಂಕಿ ಕೆಲವೇ ಕ್ಷಣಗಳಲ್ಲಿ ತೀವ್ರಗೊಂಡಿದ್ದು ಆ ಪ್ರದೇಶದಲ್ಲಿದ್ದ ಕಾರ್ಮಿಕರು ಮತ್ತು ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿತು. ಈ ಘಟನೆಯ ನಂತರ, ಅಗ್ನಿಶಾಮಕ ದಳದ ಸಿಬ್ಬಂದಿ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿದರು. ಯಾವುದೇ ಗಾಯಗಳ ಬಗ್ಗೆ ವರದಿಗಳಾಗಿಲ್ಲ.

ಇದನ್ನೂ ಓದಿ: ಗಾಜಿಯಾಬಾದ್‌ನಲ್ಲಿ 150 ಗುಡಿಸಲುಗಳು ಬೆಂಕಿಗಾಹುತಿ; ಪೆಟಾದಿಂದ ಪ್ರಾಣಿಗಳ ರಕ್ಷಣೆ

ಪ್ರಾಥಮಿಕ ಮಾಹಿತಿಯ ಪ್ರಕಾರ, ತೈಲ ಸಂಸ್ಕರಣಾಗಾರದ ಕಚ್ಚಾ ತೈಲ ಬಟ್ಟಿ ಇಳಿಸುವ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಂಗಳವಾರ ಇಲ್ಲಿ ಪ್ರಧಾನಿ ಮೋದಿಯವರಿಂದ ಉದ್ಘಾಟನಾ ಕಾರ್ಯಕ್ರಮ ನಡೆಯಬೇಕಾಗಿತ್ತು. ಇದಕ್ಕೂ ಮುನ್ನ ಬೆಂಕಿ ಕಾಣಿಸಿಕೊಂಡಿರುವುದರಿಂದ ಘಟಕದೊಳಗೆ ಸಾಕಷ್ಟು ಅವ್ಯವಸ್ಥೆ ಉಂಟಾಗಿದೆ.

ರಾಜಸ್ಥಾನದ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಈ ಸ್ಥಳವನ್ನು ಪರಿಶೀಲಿಸಲು ಸಂಸ್ಕರಣಾಗಾರಕ್ಕೆ ಭೇಟಿ ನೀಡಲಿದ್ದಾರೆ.

ಇದನ್ನೂ ಓದಿ: PM Modi Speech Today: ತಮ್ಮ ಕುಟುಂಬದ ಮಹಿಳೆಯರು ಮಾತ್ರ ಉದ್ಧಾರವಾಗಬೇಕೆಂಬ ಕುತಂತ್ರ; ವಿಪಕ್ಷಗಳಿಗೆ ಪ್ರಧಾನಿ ಮೋದಿ ಚಾಟಿ

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಜಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ತಮ್ಮ ಭೇಟಿಯ ಸಮಯದಲ್ಲಿ, ಅವರು ಬಲೋತ್ರಾದ ಪಚ್ಪದ್ರಾದಲ್ಲಿರುವ ಭಾರತದ ಮೊದಲ ಹೊಸ ಸಂಯೋಜಿತ ಸಂಸ್ಕರಣಾಗಾರ-ಪೆಟ್ರೋಕೆಮಿಕಲ್ ಸಂಕೀರ್ಣವನ್ನು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ. 79,450 ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆಯೊಂದಿಗೆ ಈ ಹೆಗ್ಗುರುತು ಯೋಜನೆಯು ಭಾರತದ ಇಂಧನ ಮತ್ತು ಪೆಟ್ರೋಕೆಮಿಕಲ್ ವಲಯದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ. ಈ ಸಂದರ್ಭದಲ್ಲಿ ಪ್ರಧಾನಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ 9 ಮಿಲಿಯನ್ ಟನ್ ವಾರ್ಷಿಕ ಸಂಸ್ಕರಣಾಗಾರ ಮತ್ತು ಪೆಟ್ರೋಕೆಮಿಕಲ್ ಯೋಜನೆಯನ್ನು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಮತ್ತು ರಾಜಸ್ಥಾನ ಸರ್ಕಾರದ ಜಂಟಿ ಉದ್ಯಮವಾಗಿ ಅಭಿವೃದ್ಧಿಪಡಿಸಲಾಗಿದೆ.

ಈ ಅತ್ಯಾಧುನಿಕ ಸ್ಥಾವರವು ತೈಲ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ ಉತ್ಪಾದನೆಯನ್ನು ಸಂಯೋಜಿಸುತ್ತದೆ, ವರ್ಷಕ್ಕೆ 2.4 ಮಿಲಿಯನ್ ಟನ್ ಪೆಟ್ರೋಕೆಮಿಕಲ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಈ ಯೋಜನೆಯು ಭಾರತದ ಇಂಧನ ಭದ್ರತೆಯನ್ನು ಬಲಪಡಿಸುವಲ್ಲಿ, ಪೆಟ್ರೋಕೆಮಿಕಲ್ ವಲಯದಲ್ಲಿ ಸ್ವಾವಲಂಬನೆಯನ್ನು ಹೆಚ್ಚಿಸುವಲ್ಲಿ ಮತ್ತು ಕೈಗಾರಿಕಾ ಅಭಿವೃದ್ಧಿಯನ್ನು ವೇಗಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಳ್ಳಾರಿಯಲ್ಲಿ ಭಾರಿ ಬಿಸಿಲು, ತಾಪಮಾನ ತಾಳಲಾರದೆ ಮಡಿಕೆಗಳ ಮೊರೆ ಹೋದ ಜನ! – Kannada News | Ballari Heatwave: Mercury Hits 39 degree celsius Residents Flock to Buy Earthen Pots as Natural Coolers to Beat the Heat

ಬಳ್ಳಾರಿ, ಏಪ್ರಿಲ್ 20: ಬಳ್ಳಾರಿಯಲ್ಲಿ ಬಿಸಿಲಿನ ತಾಪ ದಿನೇ ದಿನೇ ಏರುತ್ತಿದ್ದು, 39 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದರಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಹೆಚ್ಚುತ್ತಿರುವ ತಾಪಮಾನದಿಂದ ರಕ್ಷಿಸಿಕೊಳ್ಳಲು, ಜನರು ತಂಪಾದ ನೀರು ಕುಡಿಯುವುದಕ್ಕಾಗಿ ಮಣ್ಣಿನ ಮಡಿಕೆಗಳ ಮೊರೆ ಹೋಗುತ್ತಿದ್ದಾರೆ. ನಗರದ ಸಂಗಂ ಸರ್ಕಲ್ ಬಳಿ ಮಣ್ಣಿನ ಮಡಿಕೆಗಳ ಮಾರಾಟ ಜೋರಾಗಿದ್ದು, ಜನರು ಇವುಗಳನ್ನು ಖರೀದಿಸಲು ಮುಗಿಬಿದ್ದಿದ್ದಾರೆ. ಮಣ್ಣಿನ ಮಡಿಕೆಯಲ್ಲಿನ ನೀರು ನೈಸರ್ಗಿಕವಾಗಿ ತಂಪಾಗಿರುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು ಎಂಬ ನಂಬಿಕೆ ಜನರಲ್ಲಿದೆ. ಪ್ರತಿ ಮಡಿಕೆಯ ಬೆಲೆ 350 ರೂಪಾಯಿಗಳಿಂದ 600 ರೂಪಾಯಿಗಳ ವರೆಗೆ ಇದೆ. ಮಣ್ಣಿನ ಮಡಿಕೆಗಳ ಜೊತೆಗೆ, ಎಲೆಕ್ಟ್ರಾನಿಕ್ ಕೂಲಿಂಗ್ ಸಾಧನಗಳಾದ ಎಸಿ ಮತ್ತು ಕೂಲರ್‌ಗಳು, ತಂಪು ಪಾನೀಯಗಳ ಮಾರಾಟವೂ ಹೆಚ್ಚಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಬಸವ ಜಯಂತಿ ಆಚರಿಸಿದ್ದು ಏಲ್ಲಿ ಮತ್ತು ಯಾರು ಗೊತ್ತಾ? – Kannada News | Hardekar Manjappa was the first to initiate the celebration of Basava Jayanti in Karnataka

ದಾವಣಗೆರೆಯ ವಿರಕ್ತಮಠ, ಹರ್ಡೇಕರ ಮಂಜಪ್ಪImage Credit source: tv9 kannada

ದಾವಣಗೆರೆ, ಏಪ್ರಿಲ್​ 20: ಜಗತ್ತಿನಾದ್ಯಂತ ಇಂದು 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಜಗದ್ಗುರು ಬಸವಣ್ಣನವರ ಜಯಂತಿಯನ್ನು (Basava Jayanti) ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ, ಈ ‘ಬಸವ ಜಯಂತಿ’ ಎಂಬ ಜನೋತ್ಸವಕ್ಕೆ ನಾಂದಿ ಹಾಡಿದ್ದು ಎಲ್ಲಿ ಮತ್ತು ಯಾರು ಎಂಬುದು ಬಹುಶಃ ಇಂದಿನ ಪೀಳಿಗೆಗೆ ತಿಳಿದಿರಲಿಕ್ಕಿಲ್ಲ. ಮಹಾತ್ಮ ಗಾಂಧೀಜಿಯವರ ತತ್ವಗಳಿಗೂ ಮೊದಲೇ ಬಸವ ತತ್ವದ ಮೂಲಕ ಜನರನ್ನು ಸಂಘಟಿಸಿದ ‘ಕರ್ನಾಟಕದ ಗಾಂಧಿ’ ಹರ್ಡೇಕರ ಮಂಜಪ್ಪ ಅವರು ಈ ಜಯಂತಿಯ ರೂವಾರಿ. ದಾವಣಗೆರೆಯ (Davanagere) ವಿರಕ್ತಮಠದಲ್ಲಿ ಆರಂಭವಾದ ಈ ಜಯಂತಿಗೆ ಇಂದಿಗೆ ಭರ್ತಿ 114 ವರ್ಷ.

ಬಾಲಗಂಗಾಧರ ತಿಲಕ ಅವರು ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಗಣೇಶ ಪ್ರತಿಷ್ಠಾಪನೆ ಮಾಡಿ ದೊಡ್ಡ ಕ್ರಾಂತಿ ಮಾಡಿದ್ದರು. ಇದೇ ಮಾದರಿಯಲ್ಲಿ ಅವರಿಗಿಂತಲೂ ಮೊದಲೇ ಜನ ಸಂಘಟನೆ ಹಾಗೂ ಕ್ರಾಂತಿ ಪುರುಷನನ್ನ ಜಗತ್ತಿಗೆ ಪರಿಚಯಿಸುವ ಕಾರ್ಯವನ್ನ ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪ ಮಾಡಿದ್ದರು. ಅವರೇ ಜಗದ್ಗುರು ಬಸವಣ್ಣನವರು.

ಪ್ರಪ್ರಥಮ ಬಾರಿಗೆ ಬಸವ ಜಯಂತಿ ಆಚರಿಸಿದ್ದು ಏಲ್ಲಿ?

ದೇಶ-ವಿದೇಶಗಳಲ್ಲಿ ಮತ್ತು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಬಸವ ಜಯಂತಿಗೆ ಸರ್ಕಾರಿ ರಜೆ ಇದೆ. ಇಂತಹ ಜಯಂತಿ ಆರಂಭವಾಗಿದ್ದು ದಾವಣಗೆರೆಯಲ್ಲಿ. ಇದೇ ದಾವಣಗೆರೆ ನಗರದ ಕಾಯಿಪೇಟೆಯಲ್ಲಿ ಬರುವ ವಿರಕ್ತ ಮಠದಲ್ಲಿ 1913ರಲ್ಲಿ ಪ್ರಪ್ರಥಮ ಬಾರಿಗೆ ಈ ಜಯಂತಿ ಆಚರಿಸಲಾಯಿತು. ಆ ವೇಳೆಗೆ ದೇಶದಲ್ಲಿ ಆಂಗ್ಲರ ವಿರುದ್ಧ ಜನರನ್ನ ಸಂಘಟನೆ ಮಾಡಬೇಕಿತ್ತು. ಜೊತೆಗೆ ಗಾಂಧಿ ಅವರ ತತ್ವ ಸಿದ್ಧಾಂತಗಳಿಗೆ ಬಸವಣ್ಣವರ ತತ್ವಗಳು ಹೊಲಿಕೆ ಆಗುತ್ತಿದ್ದವು. ಇದನ್ನ ಅರಿತ ಹರ್ಡೇಕರ ಮಂಜಪ್ಪ ಬಸವಣ್ಣನನ್ನ ಜಗತ್ತಿಗೆ ಪರಿಚಯಿಸುವ ಪ್ರಯತ್ನಕ್ಕೆ ಮುಂದಾದರು. ಇದೇ ವೇಳೆ ದೇಶದ ಬಗ್ಗೆ ಜನರಿಗೆ ತಿಳುವಳಿಕೆ ಹೇಳುವ ಅವಕಾಶವನ್ನ ಸಹ ಬಳಸಿಕೊಳ್ಳಲು ಈ ಜಯಂತಿ ಅನುಕೂಲವಾಯಿತು. ಹೀಗಾಗಿ ಜಯಂತಿ ಆರಂಭವಾದ ವಿರಕ್ತ ಮಠದಲ್ಲಿ ಇಂದು ಅದ್ಧೂರಿಯಾಗಿ ಬಸವ ಜಯಂತಿ ಆಚರಿಸಲಾಯಿತು. ವಿಶೇಷವಾಗಿ ಬಸವ ಭಕ್ತರ ಮಕ್ಕಳಿಗೆ ನಾಮಕರಣ ಮಾಡುವ ಮೂಲಕ ಜಯಂತಿ ಆಚರಿಸಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ಉಚ್ಛಾಟಿತ ವಚನಾನಂದ ಶ್ರೀಗೆ ಮತ್ತೊಂದು ಸಂಕಷ್ಟ, ಧ್ಯಾನದ ಮೊರೆ ಹೋದ ಸ್ವಾಮೀಜಿ

ದಾವಣಗೆರೆಗೆ ವಿರಕ್ತಮಠವನ್ನ ಬಸವಜಯಂತಿಯ ಗಂಗೋತ್ರಿ ಎನ್ನಲಾಗುತ್ತದೆ. ಹೀಗೆ ಹರ್ಡೇಕರ ಮಂಜಪ್ಪ ಅವರು ಬಸವ ಜಯಂತಿ ಶುರು ಮಾಡಿದ್ದೇ ತಡ, ರಾಜ್ಯದ ಬಹುತೇಕ ಕಡೆ ಇಂತಹ ಜಯಂತಿಗಳು ಶುರುವಾದವು. ಮೈಸೂರು ಸಂಸ್ಥಾನದಲ್ಲಿ ಕರಿಬಸಯ್ಯ ಎಂಬ ಪಂಡಿತರಿದ್ದರು. ಅವರು ಬಸವಣ್ಣನ ಬಗ್ಗೆ ಅಪಾರವಾದ ಜ್ಞಾನ ಸಂಪಾದಿಸಿದ್ದರು. ಅವರು ನೀಡಿದ ಮಾಹಿತಿ ಮತ್ತು ಬಸವಣ್ಣನ ನಿಜವಾದ ಕಾಳಜಿಗೆ ಮನಸೋತು ಅಂದು ವಿರಕ್ತಮಠದಲ್ಲಿ ಮೃತ್ಯುಂಜಯ ಅಪ್ಪಗಳು, ಹರ್ಡೇಕರ ಮಂಜಪ್ಪ ಅವರ ಜೊತೆ ಕೈಜೋಡಿಸಿದರು. ಅಂದಿನಿಂದ ಇಂದಿನವರೆಗೆ ದಾವಣಗೆರೆ ಜನತೆಯ ಪಾಲಿಗೆ ಬಸವ ಜಯಂತಿ ಅಂದರೆ ಪಂಚಪ್ರಾಣ. ಹೀಗಾಗಿ ಹತ್ತಾರು ಮಕ್ಕಳ ನಾಮಕರಣ ಇದೇ ಸ್ಥಳದಲ್ಲಿ ನಡೆಯುತ್ತಾ ಬಂದಿದೆ.

ಇದನ್ನೂ ಓದಿ: ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯ ಮೈಕ್​​ನಿಂದ ಸಂದೇಶ

ಬಸವಣ್ಣ ಒಂದು ರೀತಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದ ಮಹಾನ್ ಹೋರಾಟಗಾರ. ಬಸವ ಜಯಂತಿ ಕೂಡ ದೇಶದ ಸ್ವಾತಂತ್ರ್ಯಕ್ಕಾಗಿ ಬಳಕೆ ಆಗಿದ್ದು ಇನ್ನೊಂದು ವಿಶೇಷ. ಇಂತಹ ವಿಶೇಷಕ್ಕೆ ಕಾರಣವಾಗಿದ್ದು ದಾವಣಗೆರೆ ವಿರಕ್ತಮಠ. ಹೀಗೆ ಜಗತ್ತಿಗೆ ಬಸವ ತತ್ವ ಸಾರಲು ಆರಂಭಿಸಿದ ಬಸವ ಜಯಂತಿ ನಡೆದ ಸ್ಥಳದಲ್ಲಿ ಬಸವ ಕಲ್ಯಾಣದ ಮಾದರಿಯಲ್ಲಿ ಅನುಭ ಮಂಟಪ ಕಟ್ಟುವ ಸಂಕಲ್ಪವಿದೆ. ಇದಕ್ಕೆ ಸಮಾಜ ಹಾಗೂ ಸರ್ಕಾರ ಸ್ಪಂದಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Japan Earthquake: ಜಪಾನ್​ನಲ್ಲಿ 7.4 ತೀವ್ರತೆಯ ಭೂಕಂಪ; ಅಧಿಕಾರಿಗಳಿಂದ ಸುನಾಮಿಯ ಎಚ್ಚರಿಕೆ – Kannada News | Japan Earthquake; powerful 7.4 magnitude earthquake hits Japan tsunami warning issued

ಟೋಕಿಯೋ, ಏಪ್ರಿಲ್ 20: ಜಪಾನ್‌ನ ಈಶಾನ್ಯ ಕರಾವಳಿಯಲ್ಲಿ ಇಂದು 7.4 ತೀವ್ರತೆಯ ಪ್ರಬಲ ಭೂಕಂಪ (Japan Earthquake) ಸಂಭವಿಸಿದೆ. ಇದರಿಂದ ದೇಶಾದ್ಯಂತ ಆತಂಕ ಉಂಟಾಗಿದ್ದು, ಸುನಾಮಿ ಎಚ್ಚರಿಕೆಯನ್ನೂ ನೀಡಲಾಗಿದೆ. ಅಧಿಕಾರಿಗಳು ಕರಾವಳಿ ಪ್ರದೇಶಗಳಿಂದ ದೂರ ಹೋಗುವಂತೆ ನಿವಾಸಿಗಳನ್ನು ಒತ್ತಾಯಿಸಿದ್ದಾರೆ. ಅಲೆಗಳು ದಡವನ್ನು ತಲುಪುವ ನಿರೀಕ್ಷೆಯಿರುವುದರಿಂದ ಕರಾವಳಿ ವಲಯಗಳಿಂದ ದೂರವಿರಲು ಅಧಿಕಾರಿಗಳು ನಿವಾಸಿಗಳಿಗೆ ಎಚ್ಚರಿಕೆ ನೀಡಿದರು.

3 ಮೀಟರ್ (ಸುಮಾರು 10 ಅಡಿ)ವರೆಗಿನ ಅಲೆಗಳು ಏಳುವ ಸಾಧ್ಯತೆ ಇರುವುದರಿಂದ ಕರಾವಳಿ ವಲಯದ ನಿವಾಸಿಗಳು ಸ್ಥಳಾಂತರಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಜಪಾನ್ ಹವಾಮಾನ ಸಂಸ್ಥೆಯ ಪ್ರಕಾರ, ಸಮುದ್ರದೊಳಗಿನ ಭೂಕಂಪನವು ಸ್ಥಳೀಯ ಸಮಯ ಸಂಜೆ 4.53ಕ್ಕೆ ಇವಾಟೆ ಕರಾವಳಿಯಿಂದ ಕೇವಲ 10 ಕಿಲೋಮೀಟರ್ (ಸುಮಾರು 6 ಮೈಲುಗಳು) ಆಳದಲ್ಲಿ ಸಂಭವಿಸಿದೆ.

ಇದನ್ನೂ ಓದಿ: ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ 114 ಭಾರಿ ಭೂಕಂಪ: ಉತ್ತರ ಕರ್ನಾಟಕ ಭಾಗದಲ್ಲೇ ಹೆಚ್ಚು; ಕಾರಣ ಏನು?

ಈ ಭೂಕಂಪ ಸಂಭವಿಸಿದ ಕೂಡಲೆ ಜಪಾನ್ ಪ್ರಧಾನಿ ಸನೇ ತಕೈಚಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾ, ತುರ್ತು ಕಾರ್ಯಪಡೆಯ ನಿಯೋಜನೆಯನ್ನು ದೃಢಪಡಿಸಿದರು. ಭೂಕಂಪಪೀಡಿತ ಪ್ರದೇಶಗಳಲ್ಲಿ ತಕ್ಷಣದ ಸ್ಥಳಾಂತರಿಸುವಿಕೆಯ ನಿರ್ಣಾಯಕ ಅಗತ್ಯವನ್ನು ಅವರು ಪುನರುಚ್ಚರಿಸಿದರು. ಸುನಾಮಿಯ ಸಾಧ್ಯತೆಯಿದೆ. ತಕ್ಷಣ ಕರಾವಳಿ ತೀರದಿಂದ ಜನರು ಸ್ಥಳಾಂತರಗೊಳ್ಳಿರಿ. ಮುಂದಿನ ಸೂಚನೆ ಬರುವವರೆಗೂ ವಾಪಾಸ್ ಬರಬೇಡಿ ಎಂದು ಅವರು ಮನವಿ ಮಾಡಿದ್ದಾರೆ.

ಭೂಕಂಪನದ ನಂತರ ಟೋಕಿಯೊ ಮತ್ತು ಅಮೋರಿ ನಡುವಿನ ಬುಲೆಟ್ ರೈಲು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಕ್ಯೋಡೋ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಕೇಂದ್ರ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಮೊಮ್ಮಗನಿಗೂ ಬಿಟ್​ಕಾಯಿನ್ ನಂಟು! – Kannada News | ED raids on former union minister rehman khan grandson house In bitcoin Case

ಬೆಂಗಳೂರು, (ಏಪ್ರಿಲ್ 20): ಬಿಟ್‌ಕಾಯಿನ್ ಪ್ರಕರಣಕ್ಕೆ (bitcoin Case) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಬೆಂಗಳೂರಿನಲ್ಲಿ ದಾಳಿ ನಡೆಸಿದೆ. ಪ್ರಕರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ಕಾಂಗ್ರೆಸ್ ಶಾಸಕ ಎನ್​​ಎ ಹ್ಯಾರಿಸ್ ಹಾಗೂ ಪುತ್ರ ಮೊಹಮ್ಮದ್ ನಲಪಾಡ್ ಮಾತ್ರವಲ್ಲದೇ ಮಾಜಿ ಕೇಂದ್ರ ಸಚಿವ ಕೆ. ರೆಹಮಾನ್ ಖಾನ್ ಅವರ ಮೊಮ್ಮಗ ಮಹಮ್ಮದ್ ಹಕೀಬ್ ಖಾನ್ ಅವರ ನಿವಾಸಗಳ ಮೇಲೆ ಶೋಧ ಕಾರ್ಯಾಚರಣೆ ನಡೆದಿದೆ.

ಬೆಂಗಳೂರಿನ ಜಯನಗರದಲ್ಲಿರುವ ಕೆ.ರೆಹಮಾನ್ ಖಾನ್ ನಿವಾಸಕ್ಕೆ 2 ಇನೋವಾ ಕಾರುಗಳಲ್ಲಿ ಆಗಮಿಸಿರುವ ಇಡಿ ಅಧಿಕಾರಿಗಳ ತಂಡ, ಕಳೆದ ಆರು ಗಂಟೆಗಳಿಂದ ಪರಿಶೀಲನೆ ನಡೆಸಿದೆ. ಹಾಗೇ ಕೆ.ರೆಹಮಾನ್ ಖಾನ್ ಮೊಮ್ಮಗ ಮೊಹಮ್ಮದ್ ಹಕೀಬ್ ನನ್ನು ಸಹ ವಿಚಾರಣೆ ನಡೆಸಿದ್ದಾರೆ.

ಇದನ್ನೂ ನೋಡಿ: ನಲಪಾಡ್ ಮನೆ ಮೇಲೆ ಇ.ಡಿ ದಾಳಿಗೆ ಕಾರಣವಾಯ್ತಾ 10 ಲಕ್ಷ ರೂ!

Source link

Meta Layoffs: ಮೇ 20ಕ್ಕೆ ತಯಾರಾಗಿ, ಮೇಟಾದಿಂದ 8 ಸಾವಿರ ಉದ್ಯೋಗಿಗಳು ಔಟ್ – Kannada News | Tech Layoffs Continue: Meta’s AI Push Triggers 16,000 Job Cuts and Workforce Restructuring

ಕ್ಯಾಲಿಫೋರ್ನಿಯಾ, ಏ.20: ಮೆಟಾ ಪ್ಲಾಟ್‌ಫಾರ್ಮ್ಸ್ ತನ್ನ ವ್ಯವಹಾರದಲ್ಲಿ ಮಹತ್ತರ ಬದಲಾವಣೆ ತರಲು ಮುಂದಾಗಿದ್ದು, ಈ ಪ್ರಕ್ರಿಯೆಯಲ್ಲಿ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆಯಿದೆ. ಕಂಪನಿಯು ಕೃತಕ ಬುದ್ಧಿಮತ್ತೆ (AI) ಮೇಲೆ ತನ್ನ ಹೂಡಿಕೆಯನ್ನು ದ್ವಿಗುಣಗೊಳಿಸುತ್ತಿದ್ದು, ಈ ಹೊಸ ತಂತ್ರಜ್ಞಾನಕ್ಕೆ ಅನುಗುಣವಾಗಿ ತನ್ನ ಮಾನವ ಸಂಪನ್ಮೂಲವನ್ನು ಪುನಾರಚಿಸುತ್ತಿದೆ. ವರದಿಗಳ ಪ್ರಕಾರ, ಬರುವ ಮೇ 20ರಿಂದ ಮೆಟಾ ತನ್ನ ಮೊದಲ ಹಂತದ ಲೇ-ಆಫ್ ಆರಂಭಿಸಲಿದ್ದು, ಸುಮಾರು 8,000 ಉದ್ಯೋಗಿಗಳನ್ನು (ಜಾಗತಿಕ ಮಟ್ಟದ 10% ನೌಕರರು) ವಜಾಗೊಳಿಸುವ ಸಾಧ್ಯತೆಯಿದೆ.

ಈ ವರ್ಷದ ಅಂತ್ಯದ ವೇಳೆಗೆ ಒಟ್ಟು ಕಡಿತವು ಕಂಪನಿಯ 20% ಅಥವಾ ಅದಕ್ಕಿಂತ ಹೆಚ್ಚು ನೌಕರರನ್ನು (ಸುಮಾರು 16,000 ಜನರು) ತಲುಪಬಹುದು ಎಂದು ಅಂದಾಜಿಸಲಾಗಿದೆ. ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಕಂಪನಿಯನ್ನು ಸಂಪೂರ್ಣವಾಗಿ ಎಐ-ಚಾಲಿತ ವ್ಯವಸ್ಥೆಯಾಗಿ ಬದಲಿಸಲು ನಿರ್ಧರಿಸಿದ್ದಾರೆ. ಹೀಗಾಗಿ, ಮ್ಯಾನೇಜ್‌ಮೆಂಟ್ ಹಂತಗಳನ್ನು ಕಡಿಮೆ ಮಾಡಿ, ಹೆಚ್ಚಿನ ಕೆಲಸಗಳನ್ನು ಆಟೊಮೇಷನ್ ಮೂಲಕ ಮಾಡಲು ಯೋಜಿಸಲಾಗಿದೆ.

 ಇದನ್ನೂ ಓದಿ: Tech Tips: ವಾಟ್ಸ್ಆ್ಯಪ್​ನಲ್ಲಿ ಯಾರಾದರೂ ನಿಮ್ಮನ್ನು ಬ್ಲಾಕ್ ಮಾಡಿದ್ದಾರಾ? ಈಗ ಸುಲಭವಾಗಿ ಕಂಡುಹಿಡಿಯಿರಿ

ಕಂಪನಿ ಉದ್ಯೋಗ ಕಡಿತದ ಪ್ರಮಾಣ ಪ್ರಮುಖ ಕಾರಣ
ಒರಾಕಲ್ (Oracle) ಸುಮಾರು 30,000 ನೌಕರರು ಎಐ ಡೇಟಾ ಸೆಂಟರ್ ನಿರ್ಮಾಣಕ್ಕೆ ಹಣ ಉಳಿಸಲು.
ಡಿಸ್ನಿ (Disney) ಸುಮಾರು 1,000 ನೌಕರರು ಮಾರ್ವೆಲ್ ಸ್ಟುಡಿಯೋಸ್ ಮತ್ತು ಇಎಸ್‌ಪಿಎನ್ ವಿಭಾಗಗಳ ಪುನಾರಚನೆ.
ಅಮೆಜಾನ್ (Amazon) ಸುಮಾರು 16,000 ನೌಕರರು ಎಐ ಆಧಾರಿತ ಕಾರ್ಯನಿರ್ವಹಣೆಗೆ ಒತ್ತು ನೀಡಲು.
ಸ್ನ್ಯಾಪ್ (Snap Inc) ಸುಮಾರು 1,000 ನೌಕರರು ವೆಚ್ಚ ಕಡಿತ ಮತ್ತು ಬೆಳವಣಿಗೆಯ ವೇಗ ಹೆಚ್ಚಿಸಲು.

ಮೆಟಾ ಮಾತ್ರವಲ್ಲದೆ, ಇಡೀ ತಂತ್ರಜ್ಞಾನ ವಲಯದಲ್ಲಿ ಉದ್ಯೋಗ ಕಡಿತದ ಅಲೆ ಮುಂದುವರಿದಿದೆ. Layoffs.fyi ಮಾಹಿತಿಯ ಪ್ರಕಾರ, 2026ರ ಆರಂಭದ ನಾಲ್ಕೇ ತಿಂಗಳಲ್ಲಿ ಈಗಾಗಲೇ 73,212ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಒರಾಕಲ್ ಕಂಪನಿಯು ಕೈಗೊಂಡಿರುವ ಭಾರಿ ಉದ್ಯೋಗ ಕಡಿತದ ಪ್ರಭಾವ ಭಾರತದ ಮೇಲೂ ಬೀರಲಿದ್ದು, ಸುಮಾರು 12,000 ಭಾರತೀಯ ನೌಕರರು ಸಂಕಷ್ಟಕ್ಕೆ ಸಿಲುಕಬಹುದು ಎಂದು ವರದಿಗಳು ತಿಳಿಸಿವೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 3’ ಸಿನಿಮಾ ಬರಲಿದೆಯೇ? ಕುತೂಹಲದ ಪ್ರಶ್ನೆಗೆ ಉತ್ತರ ನೀಡಿದ ನಟ ರಾಕೇಶ್ ಬೇಡಿ – Kannada News | Rakesh Bedi talks about possibility of making Dhurandhar 3 with Ranveer Singh

ಆದಿತ್ಯ ಧರ್ ನಿರ್ದೇಶನದ ಹಾಗೂ ರಣವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್’ ಹಾಗೂ ‘ಧುರಂಧರ್ 2’ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದಿವೆ. ಎರಡು ಭಾಗಗಳ ಭರ್ಜರಿ ಯಶಸ್ಸಿನ ನಂತರ, ‘ಧುರಂಧರ್ 3’ (Dhurandhar 3) ಮಾಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಈ ಬೆನ್ನಲ್ಲೇ ಚಿತ್ರದಲ್ಲಿ ಜಮೀಲ್ ಜಮಾಲಿ ಪಾತ್ರ ಮಾಡಿ ಗಮನ ಸೆಳೆದಿದ್ದ ಹಿರಿಯ ನಟ ರಾಕೇಶ್ ಬೇಡಿ (Rakesh Bedi) ಅವರು ಮೂರನೇ ಭಾಗದ ಸಾಧ್ಯತೆಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ‘ಜೂಮ್’ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಕೇಶ್ ಬೇಡಿ, ‘ಮೂರನೇ ಭಾಗ ಬರುತ್ತದೆ ಎಂದು ನಾನು ಭಾವಿಸುವುದಿಲ್ಲ. ಏಕೆಂದರೆ, ಕಥೆಯ ಅಂತ್ಯದಲ್ಲಿ ಗೂಢಚಾರಿ ತನ್ನ ದೇಶಕ್ಕೆ ಮರಳುತ್ತಾನೆ. ಕಥೆ ಅಲ್ಲಿಗೆ ಪೂರ್ಣಗೊಂಡಿದೆ’ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಕೊಂಚ ನಿರಾಸೆ ಮೂಡಿಸಿದ್ದಾರೆ.

ಆದರೆ, ರಾಕೇಶ್ ಬೇಡಿ ಅವರು ಒಂದು ಆಶಾದಾಯಕ ಮಾತು ಕೂಡ ಆಡಿದ್ದಾರೆ. ‘ಧುರಂಧರ್ ಎಂಬುದು ಒಂದು ದೊಡ್ಡ ಫ್ರಾಂಚೈಸಿ. ಹಾಗಾಗಿ ಮುಂದಿನ ದಿನಗಳಲ್ಲಿ ಬೇರೆ ನಟರನ್ನು ಬಳಸಿಕೊಂಡು ಹೊಸ ಕಥೆಯೊಂದಿಗೆ ಈ ಫ್ರಾಂಚೈಸಿಯನ್ನು ಮುಂದುವರಿಸುವ ಸಾಧ್ಯತೆ ಯಾವಾಗಲೂ ಇರುತ್ತದೆ’ ಎಂದಿದ್ದಾರೆ. ಈ ಬಗ್ಗೆ ನಿರ್ದೇಶಕ ಆದಿತ್ಯ ಧರ್ ಏನು ಹೇಳುತ್ತಾರೆ ಎಂಬುದನ್ನು ಕಾದುನೋಡಬೇಕು.

ಚಿತ್ರದಲ್ಲಿ ಜಮೀಲ್ ಜಮಾಲಿ ಪಾತ್ರವು ಪಾಕಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಗೂಢಚಾರಿ ಎಂಬ ಟ್ವಿಸ್ಟ್ ಪ್ರೇಕ್ಷಕರಿಗೆ ದೊಡ್ಡ ಸರ್ಪ್ರೈಸ್ ನೀಡಿತ್ತು. ಈ ಬಗ್ಗೆ ಮಾತನಾಡಿದ ರಾಕೇಶ್ ಬೇಡಿ ಅವರು, ‘ನಾವು ಆ ದೃಶ್ಯವನ್ನು ಚಿತ್ರೀಕರಿಸುವಾಗ ಅದು ಸಾಮಾನ್ಯ ಎನಿಸಿತ್ತು. ಆದರೆ ಪ್ರೇಕ್ಷಕರ ದೃಷ್ಟಿಕೋನವೇ ಬೇರೆಯಾಗಿತ್ತು. ಮೊದಲ ಭಾಗ ಹಿಟ್ ಆದ ಕಾರಣ, ಎರಡನೇ ಭಾಗದ ಮೇಲೆ ಅತೀವ ನಿರೀಕ್ಷೆ ಇತ್ತು. ಈಗ ಜನರು ಮೂರನೇ ಭಾಗಕ್ಕಾಗಿ ಕಾಯುತ್ತಿರುವುದು ಸಹಜ’ ಎಂದಿದಾರೆ.

ಇದನ್ನೂ ಓದಿ: ರಣವೀರ್ ಸಿಂಗ್ ಕೆನ್ನೆ ಮುಟ್ಟಿ ಮಾತಾಡಿಸಿದ ಶಾರುಖ್ ಖಾನ್; ವಿಡಿಯೋ ವೈರಲ್

‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳನ್ನು ಸೇರಿಸಿ ಜಾಗತಿಕವಾಗಿ 3,000 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ. 2025ರ ಡಿಸೆಂಬರ್​ನಲ್ಲಿ ತೆರೆಕಂಡ ‘ಧುರಂಧರ್’ ಚಿತ್ರ 1,300 ಕೋಟಿ ರೂಪಾಯಿ ಗಳಿಸಿತು. ಈ ವರ್ಷ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಆದ ‘ಧುರಂಧರ್ 2’ ಸಿನಿಮಾ ಜಾಗತಿಕವಾಗಿ ಇದು 1,700 ಕೋಟಿ ರೂಪಾಯಿಗೂ ಅಧಿಕ ಹಣ ಬಾಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿಕೊಳ್ಳುವುದು ಹೇಗೆ? ಇಲ್ಲಿದೆ ಸ್ಕೀಮ್​ನ ಪ್ರಮುಖ ಮಾಹಿತಿ

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ 2019ರಲ್ಲಿ ಆರಂಭವಾಗಿದ್ದು, ರೈತರ ವ್ಯವಸಾಯಕ್ಕೆ ಧನಸಹಾಯ ಮಾಡುವ ಉದ್ದೇಶ ಹೊಂದಿದೆ. ಸ್ವಂತ ಕೃಷಿ ಭೂಮಿ ಹೊಂದಿರುವ ರೈತರು ಈ ಯೋಜನೆ ಅಡಿ ವರ್ಷಕ್ಕೆ 6,000 ರೂ ಅನ್ನು ಪಡೆಯಬಹುದು. ಇದನ್ನು ವರ್ಷಕ್ಕೆ ಮೂರು ಕಂತುಗಳಲ್ಲಿ ಕೇಂದ್ರ ಸರ್ಕಾರ ನೀಡುತ್ತದೆ. ಇಲ್ಲಿಯವರೆಗೆ ಒಟ್ಟು 22 ಕಂತುಗಳ ಹಣವನ್ನು ಬಿಡುಗಡೆ ಮಾಡಲಾಗಿದೆ. ಒಟ್ಟಾರೆ 4.25 ಲಕ್ಷ ಕೋಟಿ ರೂ ಅನ್ನು ಸರ್ಕಾರವು ರೈತರಿಗೆ ನೀಡಿದೆ.

ಪಿಎಂ ಕಿಸಾನ್ ಯೋಜನೆಯಲ್ಲಿ ಫಲಾನುಭವಿ ರೈತರಿಗೆ ಸರ್ಕಾರ ನೇರ ಹಣ ವರ್ಗಾವಣೆ ಸಿಸ್ಟಂ (ಡಿಬಿಟಿ) ಮೂಲಕ ಹಣ ನೀಡುತ್ತದೆ. ರೈತರ ನೊಂದಾಯಿತ ಬ್ಯಾಂಕ್ ಖಾತೆಗೆ ಹಣ ನೇರವಾಗಿ ಜಮೆ ಆಗುತ್ತದೆ. ಇದು ವಿಶ್ವದ ಅತಿದೊಡ್ಡ ಡಿಬಿಟಿ ಸ್ಕೀಮ್ ಎಂದು ದಾಖಲೆ ಸ್ಥಾಪಿಸಿದೆ.

ಇದನ್ನೂ ಓದಿ: ಹೂಡಿಕೆದಾರರನ್ನು ಸೆಳೆಯುತ್ತಿವೆ ವ್ಯಾಲ್ಯೂ ಮ್ಯೂಚುವಲ್ ಫಂಡ್​ಗಳು; ಏನಿವುಗಳ ವಿಶೇಷತೆ?

ಪಿಎಂ ಕಿಸಾನ್ ಯೋಜನೆಗೆ ಯಾರು ಅರ್ಹರು, ಯಾರು ಅರ್ಹರಲ್ಲ?

ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸುವವರು ಭಾರತೀಯ ಪ್ರಜೆಯಾಗಿರಬೇಕು; ಸ್ವಂತ ಕೃಷಿ ಭೂಮಿ ಹೊಂದಿರಬೇಕು. ಇವು ಮೂಲಭೂತ ಅರ್ಹತೆ ಅಂಶಗಳು. ಹಾಗೆಯೇ, ರೈತರಾಗಿದ್ದಾಗ್ಯೂ ಕೆಲವೊಂದಿಷ್ಟು ಅಂಶಗಳು ಯೋಜನೆಗೆ ಅನರ್ಹಗೊಳಿಸುತ್ತವೆ. ಅವುಗಳೇನು ಎನ್ನುವ ವಿವರ ಇಲ್ಲಿದೆ.

ರೈತರಾದರೂ ಈ ಕೆಳಗಿನವರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಯೋಜನೆ ಅಲಭ್ಯ

  • ಹಾಲಿ ಮತ್ತು ಮಾಜಿ ಶಾಸಕರು, ಸಂಸದರು, ಜಿಪಂ ಸದಸ್ಯರು
  • ವಕೀಲರು, ವೈದ್ಯರು, ಆರ್ಟಿಟೆಕ್ಟ್ ಇತ್ಯಾದಿ ವೃತ್ತಿಪರರು
  • ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು
  • ನಿವೃತ್ತಗೊಂಡು ಮಾಸಿಕ 10,000 ರೂಗೂ ಅಧಿಕ ಪಿಂಚಣಿ ಪಡೆಯುತ್ತಿರುವವರು
  • ಐಟಿ ರಿಟರ್ನ್ಸ್ ಕಟ್ಟುತ್ತಿರುವವರು
  • 2019ರ ನಂತರ ಜಮೀನು ಖರೀದಿ ಮಾಡಿರುವವರು.

ಮತ್ತೊಂದು ಸಂಗತಿ ಎಂದರೆ, ಒಂದೇ ಕುಟುಂಬದಲ್ಲಿ ಇಬ್ಬರಿಗೆ ಈ ಯೋಜನೆ ಫಲಾನುಭವಿಯಾಗಲು ಅವಕಾಶ ಇರುವುದಿಲ್ಲ. ಒಬ್ಬರಿಗೆ ಮಾತ್ರವೇ ಅವಕಾಶ ಇರುತ್ತದೆ.

ಇದನ್ನೂ ಓದಿ: ನಾಮಿನಿ ಹೆಸರಿಸದೆಯೇ ಹೂಡಿಕೆದಾರ ಮೃತಪಟ್ಟರೆ ಮ್ಯೂಚುವಲ್ ಫಂಡ್ ಹೂಡಿಕೆಗೆ ಏನಾಗುತ್ತದೆ?

ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸುವುದು ಹೇಗೆ?

  • ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್​ಸೈಟ್​ಗೆ ಹೋಗಿ. ಅದರ ವಿಳಾಸ: pmkisan.gov.in/
  • ಮುಖ್ಯಪುಟದಲ್ಲಿ ತುಸು ಕೆಳಗೆ ಸ್ಕ್ರೋಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಇರುತ್ತದೆ. ಅಲ್ಲಿ ನ್ಯೂ ಫಾರ್ಮರ್ ರಿಜಿಸ್ಟ್ರೇಶನ್ ಅನ್ನು ಕ್ಲಿಕ್ ಮಾಡಿ.
  • ನಿಮ್ಮ ಆಧಾರ್ ನಂಬರ್ ಹಾಕಿ, ಕ್ಯಾಪ್ಚಾ ನಮೂದಿಸಿ.
  • ಅಲ್ಲಿ ಕೇಳಲಾಗುವ ವಿವರಗಳನ್ನು ಭರ್ತಿ ಮಾಡಿ, ‘ಯೆಸ್’ ಕ್ಲಿಕ್ ಮಾಡಿ.
  • ಪಿಎಂ ಕಿಸಾನ್ ಅಪ್ಲಿಕೇಶನ್ ಫಾರ್ಮ್ ತೆರೆಯುತ್ತದೆ. ಅಲ್ಲಿ ಮಾಹಿತಿ ತುಂಬಿಸಿ, ಸೇವ್ ಮಾಡಿ.
  • ರೆಫರೆನ್ಸ್​ಗೆಂದು ಒಂದು ಪ್ರಿಂಟೌಟ್ ಬೇಕಾದರೆ ತೆಗೆದುಕೊಳ್ಳಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಇದು ಬೇಸಿಗೆ ರಜೆಯ ಎಫೆಕ್ಟ್; ಆಟದ ನಡುವೆ ಜಗಳಕ್ಕಿಳಿದ ಮಕ್ಕಳು – Kannada News | Big fight between kids during summer vacation, video goes viral

ಬೇಸಿಗೆ ರಜೆ (summer holiday) ಶುರುವಾಯಿತೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಈಗಾಗಲೇ ರಜೆ ಶುರುವಾಗಿದೆ, ಮಕ್ಕಳಂತೂ (children) ಈ ರಜೆಯನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಹೆತ್ತವರಿಗೆ ಯಾಕಾದ್ರೂ ಮಕ್ಕಳಿಗೆ ರಜೆ ಶುರುವಾಯಿತು, ಈ ಮಕ್ಕಳ ಕಾಟ ಹೇಗಪ್ಪಾ ತಡೆದುಕೊಳ್ಳೊಕೆ ಆಗ್ತಾ ಇಲ್ಲ ಎನ್ನುತ್ತಿದ್ದಾರೆ. ಈ ವಿಡಿಯೋ ನೋಡಿದ್ರೆ ಈ ಮಕ್ಕಳನ್ನು ಹೆತ್ತವರು ಹೇಗೆ ಸಹಿಸಿಕೊಳ್ತಾರೆ ಎಂದು ನಿಮಗೆ ಅನಿಸಬಹುದು. ಈ ಪುಟಾಣಿಗಳ ನಡುವೆ ಜಗಳ ಶುರುವಾಗಿದ್ದು, ನಾನಾ ನೀನಾ ನೋಡೇ ಬಿಡೋಣ ಎನ್ನುವಂತೆ ಕಿತ್ತಾಡಿಕೊಂಡಿದ್ದಾರೆ. ಈ ಮಕ್ಕಳ ಜಗಳದ ವಿಡಿಯೋ ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ.

ramya93kumar ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟಾಣಿಗಳು ರಜಾ ಮಜಾದಲ್ಲಿದ್ದಾರೆ. ಪುಟಾಣಿಗಳು ಒಂದೆಡೆ ಸೇರಿ ಆಟ ಆಡುತ್ತಿದ್ದು, ಈ ನಡುವೆ ಈ ಮಕ್ಕಳ ನಡುವೆ ಬಿಗ್ ಫೈಟ್ ಏರ್ಪಟ್ಟಿದೆ. ತನ್ನ ಸ್ನೇಹಿತರಿಬ್ಬರೂ ಜಗಳವಾಡುತ್ತಿದ್ದನ್ನು ನೋಡಿ ಮತ್ತೊಬ್ಬನು ಈ ಜಗಳವನ್ನು ಬಿಡಿಸಲು ಮುಂದೆ ಬಂದಿರುವುದನ್ನು ಕಾಣಬಹುದು. ಕೊನೆಗೆ ಮಹಿಳೆಯೊಬ್ಬಳು ಮಕ್ಕಳಿಗೆ ಗದರಿ ಸುಮ್ಮನೆ ಕುಳಿತುಕೊಳ್ಳುವಂತೆ ಹೇಳಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಕಲಾವಿದ ಕುಣಿಯುತ್ತಿದ್ದಂತೆ ಕೈ ನೋವಿದ್ರೂ ಪುಟ್ಟ ಹೆಜ್ಜೆಯಿಟ್ಟು ಹೆಜ್ಜೆ ಹಾಕಿದ ಪುಟಾಣಿ

ಈ ವಿಡಿಯೋ ಮೂವತ್ತಾರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಏನಾದರೂ ಆಗಲಿ ಸಾಂಗ್ ಸೆಲೆಕ್ಷನ್ ಚೆನ್ನಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಮ್ಮ ಮನೆಲ್ಲೂ ಇದೇ ಪರಿಸ್ಥಿತಿ, ಏನು ಮಾಡೋಕು ಆಗಲ್ಲ ಎಂದು ಕಾಮೆಂಟ್ ಮಾಡಿ ಹೇಳಿದ್ದಾರೆ. ಮತ್ತೊಬ್ಬರು, ಪ್ರೈವೇಟ್ ಸ್ಕೂಲ್ ಅವರು ಯಾಕೆ ಅಷ್ಟೊಂದು ಫೀಸ್ ತಕೊಳ್ತಾರೆ ಅಂತ ಈವಾಗ ಗೊತ್ತಾಯಿತು ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:19 pm, Mon, 20 April 26

Source link

IPL 2026: ಮೊದಲ ಗೆಲುವಿನ ಬಳಿಕ ಕಣ್ಣೀರಿಟ್ಟ ಕೆಕೆಆರ್​ ತಂಡದ ಆಟಗಾರರು – Kannada News | KKR IPL First Win: Varun Chakravarthy Reveals Emotional Dressing Room Tears

ಐಪಿಎಲ್ (IPL) ಟ್ರೋಫಿಯನ್ನು 3 ಬಾರಿ ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ (KKR), 19 ನೇ ಸೀಸನ್‌ನಲ್ಲಿ ತಮ್ಮ ಮೊದಲ ಗೆಲುವಿಗಾಗಿ ಏಳನೇ ಪಂದ್ಯಕ್ಕಾಗಿ ಕಾಯಬೇಕಾಯಿತು. ತಂಡದಲ್ಲಿ ಪ್ರತಿಭಾವಂತ ಬ್ಯಾಟ್ಸ್‌ಮನ್ ಮತ್ತು ಬೌಲರ್ ಇದ್ದರೂ, ಕೆಕೆಆರ್ ಮೊದಲ 6 ಪಂದ್ಯಗಳಲ್ಲಿ 5 ರಲ್ಲಿ ಸೋಲಬೇಕಾಯಿತು. ಮಳೆಯಿಂದಾಗಿ 1 ಪಂದ್ಯ ರದ್ದಾಯಿತು. ಆದಾಗ್ಯೂ ಕೆಕೆಆರ್ ತನ್ನ ಅಭಿಯಾನದ ಏಳನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಸತತ ಸೋಲುಗಳ ಸರಣಿಯನ್ನು ಮುರಿಯಿತು. ಅದರಲ್ಲೂ ಬಲಿಷ್ಠ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿದ್ದು ಕೆಕೆಆರ್ ತಂಡಕ್ಕೆ ಆನೆಬಲ ತಂದುಕೊಟ್ಟಿದೆ. ಮಾತ್ರವಲ್ಲದೆ ಸತತ ಸೋಲುಗಳಿಂದ ಎಲ್ಲರ ಟೀಕೆಗೆ ಗುರಿಯಾಗಿದ್ದ ಕೆಕೆಆರ್ ತಂಡದ ಆಟಗಾರರು ಈ ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಮ್​​ನಲ್ಲಿ ಕುಳಿತು ಪುಟ್ಟ ಮಕ್ಕಳಂತೆ ಕಣ್ಣೀರಿಟ್ಟಿದ್ದಾರೆ. ಈ ವಿಚಾರವನ್ನು ತಂಡದ ಸ್ಟಾರ್ ಸ್ಪಿನ್ನರ್ ವರುಣ್ ಚಕ್ರವರ್ತಿ (Varun Chakravarthy) ಬಹಿರಂಗಪಡಿಸಿದ್ದಾರೆ.

ಆಟಗಾರರ ಕಣ್ಣಂಚಲ್ಲಿ ನೀರು ತುಂಬಿತ್ತು

ಪಂದ್ಯ ಮುಗಿದ ಬಳಿಕ ಡ್ರೆಸ್ಸಿಂಗ್ ರೂಮ್​ನಲ್ಲಿ ಯಾವ ರೀತಿಯ ವಾತಾವರಣವಿತ್ತು ಎಂಬುದನ್ನು ಬಹಿರಂಗಪಡಿಸಿರುವ ವರುಣ್ ಚಕ್ರವರ್ತಿ, ತಂಡದ ಮೊದಲ ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಮ್​ನಲ್ಲಿ ಹಲವು ಆಟಗಾರರ ಕಣ್ಣಂಚಲ್ಲಿ ನೀರು ತುಂಬಿತ್ತು. ಎಲ್ಲರೂ ಭಾವುಕರಾಗಿ ಕಾಣಿಸುತ್ತಿದ್ದರು. ಸತತ ಸೋಲುಗಳಿಂದ ನಮ್ಮ ತಂಡ ಹೊರಗಿನಿಂದ ಸಾಕಷ್ಟು ಟೀಕೆಗಳನ್ನು ಕೇಳಬೇಕಾಯಿತು. ಅಂತಿಮವಾಗಿ ಮೊದಲ ಗೆಲುವು ತಂಡದ ಆಟಗಾರರನ್ನು ಭಾವುಕರಾಗಿಸಿತು. ಹೇಳಬೇಕೆಂದರೆ 2024 ರಲ್ಲಿ ನಾವು ಐಪಿಎಲ್ ಟ್ರೋಫಿ ಗೆದ್ದಾಗಲೂ ಇಷ್ಟು ಭಾವುಕರಾಗಿಲ್ಲ ಎಂದಿದ್ದಾರೆ.

ಈ ಗೆಲುವಿನ ಕ್ರೆಡಿಟ್ ನೀಡಬೇಕು

ಮುಂದುವರೆದು ಮಾತನಾಡಿರುವ ವರುಣ್, ಪಂದ್ಯಾವಳಿ ಪ್ರಾರಂಭಕ್ಕೂ ಮುನ್ನವೇ ಸ್ಟಾರ್ ಆಟಗಾರರ ಇಂಜುರಿ ಸಮಸ್ಯೆ ತಂಡವನ್ನು ಸಂಕಷ್ಟಕ್ಕೆ ತಳ್ಳಿತ್ತು. ಅಲ್ಲದೆ ಅವರ ಬದಲಿಯಾಗಿ ಬೇರೆಯವರನ್ನು ಹುಡುಕುವುದು ಮತ್ತು ಗೆಲುವಿನ ಲಯ ಕಂಡುಕೊಳ್ಳುವುದು ಕಷ್ಟಕರವಾಗಿತ್ತು. ಹೌದು ನಾವು ಇನ್ನು ಕೆಲವು ಕ್ಷೇತ್ರಗಳಲ್ಲಿ ಸುಧಾರಿಸಬೇಕಾಗಿದೆ. ಆದರೆ ನಮ್ಮ ಸಾಂಘಿಕ ಪ್ರದರ್ಶನ ಇಂದು ನಮಗೆ ಗೆಲುವು ತಂದುಕೊಟ್ಟಿದೆ. ಇದಕ್ಕೆ ನಾವು ತಂಡದ ತರಬೇತುದಾರರು, ಮುಖ್ಯವಾಗಿ ಹೆಡ್ ಕೋಚ್ ಅಭಿಷೇಕ್ ಶರ್ಮಾ ಅವರಿಗೆ ಈ ಗೆಲುವಿನ ಕ್ರೆಡಿಟ್ ನೀಡಬೇಕು. ಅವರು ತಂಡವನ್ನು ಬಹಳ ಕಠಿಣ ಪರಿಸ್ಥಿತಿಯಿಂದ ಹೊರತಂದಿದ್ದಾರೆ. ನಿಧಾನವಾಗಿ, ಹಂತ ಹಂತವಾಗಿ, ಸಣ್ಣ ಗೆಲುವುಗಳೊಂದಿಗೆ, ನಾವು ಮತ್ತೆ ಹಳಿಗೆ ಬರುತ್ತೇವೆ ಎಂದಿದ್ದಾರೆ.

KKR vs RR: ರಿಂಕುಗೆ ಜೀವದಾನ ನೀಡಿ ಸೋತ ರಾಜಸ್ಥಾನ್; ಕೆಕೆಆರ್​ಗೆ ಮೊದಲ ಜಯ

ಪಂದ್ಯ ಹೀಗಿತ್ತು

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ 20 ಓವರ್‌ಗಳಲ್ಲಿ 155 ರನ್‌ಗಳಿಸಿತು. ಕೆಕೆಆರ್ ಪರ, ವರುಣ್ ಚಕ್ರವರ್ತಿ ಮತ್ತು ಕಾರ್ತಿಕ್ ತ್ಯಾಗಿ ಇಬ್ಬರೂ ತಲಾ 3 ವಿಕೆಟ್ ಪಡೆದರು. ನಂತರ, 156 ರನ್‌ಗಳನ್ನು ಬೆನ್ನಟ್ಟಿದ ಕೆಕೆಆರ್ 14 ಓವರ್‌ಗಳಲ್ಲಿ 85 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದಾಗ್ಯೂ, ಏಕಾಂಗಿ ಹೋರಾಟ ನೀಡಿದ ರಿಂಕು ಸಿಂಗ್ ಮತ್ತು ಅನುಕುಲ್ ರಾಯ್ ತಂಡಕ್ಕೆ ಗೆಲುವು ತಂದುಕೊಟ್ಟರು. ರಿಂಕು ಅಜೇಯ 53 ಮತ್ತು ಅನುಕುಲ್ 29 ರನ್ ಗಳಿಸಿ ಕೆಕೆಆರ್‌ಗೆ ಮೊದಲ ಗೆಲುವು ತಂದುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:00 pm, Mon, 20 April 26

Source link

Exit mobile version