ಆನೇಕಲ್, ಮಾರ್ಚ್ 18: ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ, ತಮಿಳುನಾಡು-ಕರ್ನಾಟಕ ಗಡಿಯಲ್ಲಿರುವ ಜೂಜುವಾಡಿ ಚೆಕ್ಪೋಸ್ಟ್ನಲ್ಲಿ ಚುನಾವಣಾಧಿಕಾರಿಗಳು ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ. ಹಿಟಾಚಿ ಕ್ಯಾಷ್ ಮ್ಯಾನೇಜ್ಮೆಂಟ್ ಸರ್ವೀಸ್ಗೆ ಸೇರಿದ ಎಟಿಎಂ ವಾಹನದಲ್ಲಿ ಹಣ ಸಾಗಿಸುತ್ತಿದ್ದಾಗ ಚುನಾವಣಾಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ, ದಾಖಲೆಗಳಿಲ್ಲದ 2.34 ಕೋಟಿ ರೂ. ನಗದು ಕೊಂಡೊಯ್ಯುತ್ತಿರುವುದು ಗಮನಕ್ಕೆ ಬಂದಿದ್ದು, ಅದನ್ನು ವಶಕ್ಕೆ ಪಡೆದಿದ್ದಾರೆ.
ವಾಹನ ತಡೆದು ಪರಿಶೀಲನೆ ನಡೆಸಿದಾಗ, ಹಣಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳು ಮತ್ತು ಅಗತ್ಯ ಭದ್ರತಾ ವ್ಯವಸ್ಥೆಗಳು ಇರಲಿಲ್ಲ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಚುನಾವಣಾ ಸಿದ್ಧತೆಗಳ ಭಾಗವಾಗಿ ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಅಕ್ರಮ ಹಣ ಸಾಗಾಟ ತಡೆಯಲು ಅಧಿಕಾರಿಗಳು ನಿರಂತರ ತಪಾಸಣೆ ನಡೆಸುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯ ಮಾರಾಟ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಕೆಲ ಪ್ರಮುಖ ಕಂಪೆನಿಗಳು ಬಿಡ್ಡಿಂಗ್ನಿಂದ ಹಿಂದೆ ಸರಿದಿದ್ದು, ಇದೀಗ ಉಳಿದಿರುವುದು ಎರಡು ಗ್ರೂಪ್ಗಳು ಮಾತ್ರ ಎಂದು ವರದಿಯಾಗಿದೆ. ಆ ಗ್ರೂಪ್ಗಳೆಂದರೆ ರಂಜನ್ ಪೈ ಮತ್ತು ಕೆಕೆಆರ್ ಮತ್ತು EQT ಮತ್ತು ಪ್ರೇಮ್ಜಿ ಇನ್ವೆಸ್ಟ್.
ಮಣಿಪಾಲ್ ಗ್ರೂಪ್ನ ಅಧ್ಯಕ್ಷ ಡಾ. ರಂಜನ್ ಪೈ ಅವರು ಈ ಹಿಂದೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಖರೀದಿಗೆ ಆಸಕ್ತಿ ತೋರಿದ್ದರು. ಇದೀಗ ಅವರು ಅಮೆರಿಕದ ಕೆಕೆಆರ್ ಮತ್ತು ಸಿಂಗಾಪುರದ ಟೆಮಾಸೆಕ್ (Temasek) ಕಂಪನಿ ಜೊತೆಗೂಡಿ ಆರ್ಸಿಬಿ ತಂಡವನ್ನು ಖರೀದಿಸಲು ಮುಂದಾಗಿದ್ದಾರೆ.
ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕನ್ನಡಿಗ ರಂಜನ್ ಪೈ ಅವರ ಪಾಲಾದರೆ ತಂಡದ ಹೆಸರಿನಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಅದರಲ್ಲೂ ಪ್ರಸ್ತುತ ಇರುವ ಲೋಗೋ ಹಾಗೂ ಹೆಸರು ಬದಲಾಯಿಸಬಹುದು. ಏಕೆಂದರೆ ಆರ್ಸಿಬಿಗೆ ರಾಯಲ್ ಚಾಲೆಂಜರ್ಸ್ ಎಂಬ ಹೆಸರು ನೀಡಿದ್ದು ಮದ್ಯದ ಬ್ರಾಂಡ್ನ ಪಚಾರಕ್ಕಾಗಿ.
ಹೀಗಾಗಿ ರಂಜನ್ ಪೈ ಆರ್ಸಿಬಿ ಫ್ರಾಂಚೈಸಿಯನ್ನು ಖರೀದಿಸಿದರೆ ಮಹತ್ವದ ಬದಲಾವಣೆ ಕಂಡು ಬರುವುದು ಬಹುತೇಕ ಖಚಿತ. ಇಲ್ಲಿ ಯಾವೆಲ್ಲಾ ಬದಲಾವಣೆ ಕಂಡು ಬರಲಿದೆ ಎಂದು ನೋಡುವುದಾದರೆ…
ತಂಡದ ಹೆಸರು ಮತ್ತು ಲೋಗೋ:
ಹೆಸರು: ತಂಡದ ಹೆಸರಿನಲ್ಲಿ ‘ಬೆಂಗಳೂರು’ ಎಂಬ ಹೆಸರು ಮುಂದುವರಿಯಲಿದೆ. ಆದರೆ, ಹೊಸ ಮಾಲೀಕರು ತಮ್ಮ ಕಂಪನಿಯ ಹೆಸರನ್ನು (ಉದಾಹರಣೆಗೆ: EQT ಅಥವಾ ‘Manipal’) ಸೇರಿಸುವ ಸಾಧ್ಯತೆಯಿದೆ.
ಲೋಗೋ: ಹೊಸ ಮಾಲೀಕರು ಬಂದಾಗ ಬ್ರ್ಯಾಂಡ್ ಅನ್ನು ರೀಫ್ರೆಶ್ ಮಾಡಲು ಹೊಸ ಲೋಗೋ ವಿನ್ಯಾಸಗೊಳಿಸುವುದು ವಾಡಿಕೆ. ಡಿಯಾಜಿಯೊ ಅವರ ಲೋಗೋ ಬದಲಾಗಿ ಹೊಸ ಇನ್ವೆಸ್ಟರ್ಗಳ ಲೋಗೋ ಬರಲಿದೆ.
ನಿರ್ವಹಣಾ ಮಂಡಳಿ:
ಪ್ರಸ್ತುತ ಇರುವ ‘ಯುನೈಟೆಡ್ ಸ್ಪಿರಿಟ್ಸ್’ ಪ್ರತಿನಿಧಿಗಳ ಬದಲಾಗಿ, ಹೊಸ ಮಾಲೀಕತ್ವದ ಬೋರ್ಡ್ ಆಫ್ ಡೈರೆಕ್ಟರ್ಸ್ ನೇಮಕವಾಗಲಿದ್ದಾರೆ. ಆದರೆ, ಕ್ರಿಕೆಟ್ ಕಾರ್ಯಾಚರಣೆಗಳ ಮೇಲೆ ತಕ್ಷಣವೇ ದೊಡ್ಡ ಬದಲಾವಣೆ ಇರುವುದಿಲ್ಲ.
ಪ್ರಸ್ತುತ ಇರುವ ಕೋಚಿಂಗ್ ಸ್ಟಾಫ್ ಮತ್ತು ಮ್ಯಾನೇಜ್ಮೆಂಟ್ 2026ರ ಸೀಸನ್ ಮುಗಿಯುವವರೆಗೆ ಮುಂದುವರಿಯುವ ಸಾಧ್ಯತೆ ಹೆಚ್ಚು.
ವಿರಾಟ್ ಕೊಹ್ಲಿಯೇ ಬ್ರ್ಯಾಂಡ್:
ಹೊಸ ಮಾಲೀಕರಿಗೆ ವಿರಾಟ್ ಕೊಹ್ಲಿ ಅವರೇ ತಂಡದ ಅತಿದೊಡ್ಡ ಆಸ್ತಿ. ಆದ್ದರಿಂದ, ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಮತ್ತು ಪ್ರಮುಖ ಆಟಗಾರನಾಗಿ ಉಳಿಸಿಕೊಳ್ಳಲು ಹೊಸ ಮಾಲೀಕರು ಹೆಚ್ಚಿನ ಒತ್ತು ನೀಡಲಿದ್ದಾರೆ.
ಮಾರ್ಚ್ ಅಂತ್ಯದ ವೇಳೆಗೆ ಅಧಿಕೃತವಾಗಿ ಹೊಸ ಮಾಲೀಕರ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ. ಇದೇ ವೇಳೆ ಹೊಸ ಜೆರ್ಸಿ ಅಥವಾ ಲೋಗೋ ಅನಾವರಣಗೊಳ್ಳುವ ನಿರೀಕ್ಷೆಯಿದೆ.
EQT ಮತ್ತು ಪ್ರೇಮ್ಜಿ ಇನ್ವೆಸ್ಟ್: ಸ್ವೀಡನ್ ಮೂಲದ ಇಕ್ವಿಟಿ ಸಂಸ್ಥೆ ‘EQT’ ಮತ್ತು ಅಝೀಂ ಪ್ರೇಮ್ಜಿ ಅವರ ‘ಪ್ರೇಮ್ಜಿ ಇನ್ವೆಸ್ಟ್’ ಜಂಟಿಯಾಗಿ ಸುಮಾರು $2.1 ಬಿಲಿಯನ್ ಬಿಡ್ ಮಾಡಿವೆ ಎಂದು ವರದಿಯಾಗಿದೆ.
ರಂಜನ್ ಪೈ ಮತ್ತು ಕೆಕೆಆರ್: ಮಣಿಪಾಲ್ ಗ್ರೂಪ್ನ ಡಾ. ರಂಜನ್ ಪೈ ನೇತೃತ್ವದ ತಂಡದಲ್ಲಿ ಅಮೆರಿಕದ ಕೆಕೆಆರ್ ಮತ್ತು ಸಿಂಗಾಪುರದ ಟೆಮಾಸೆಕ್ (Temasek) ಕಂಪನಿ ಕೂಡ ಅಂತಿಮ ರೇಸ್ನಲ್ಲಿದೆ.
RCB ಫ್ರಾಂಚೈಸಿಯ ಆರಂಭಿಕ ಬಿಡ್ಡಿಂಗ್ ಮೊತ್ತ ಸುಮಾರು $2 ಬಿಲಿಯನ್ (ಅಂದಾಜು ₹18,500 ಕೋಟಿ) ಎಂದು ಘೋಷಿಸಲಾಗಿದೆ. EQT ಮತ್ತು ಪ್ರೇಮ್ಜಿ ಇನ್ವೆಸ್ಟ್ ಕಂಪೆನಿಯು $2.1 ಬಿಲಿಯನ್ ಬಿಡ್ ಮಾಡಿದೆ ಎಂದು ವರದಿಯಾಗಿದೆ. ಇನ್ನು ರಂಜನ್ ಪೈ ಮತ್ತು ಕೆಕೆಆರ್ (KKR) ಕೂಡ ಇದೇ ಮೊತ್ತದ ಅಸುಪಾಸಿನಲ್ಲಿ ಬಿಡ್ ಸಲ್ಲಿಸಿರುವ ಸಾಧ್ಯತೆಯಿದೆ. ಹೀಗಾಗಿ ಅಂತಿಮವಾಗಿ ಆರ್ಸಿಬಿ ಯಾರ ಪಾಲಾಗಲಿದೆ ಎಂಬುದೇ ಈಗ ಕುತೂಹಲ.
ಹಾಸನ, ಮಾರ್ಚ್ 18: ಕರ್ನಾಟಕದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ಸಂಬಂಧ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳಿದ್ದ ಪೆನ್ಡ್ರೈವ್ ಹಂಚಿಕೆ ವಿಚಾರವಾಗಿ ವಿಶೇಷ ತನಿಖಾ ತಂಡ (SIT) ಹಾಸನದ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ವಿವರವಾದ ಚಾರ್ಜ್ಶೀಟ್ ಸಲ್ಲಿಸಿದೆ. ಒಟ್ಟು 13,712 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಈ ಪ್ರಕರಣದಲ್ಲಿ 52 ಜನರ ಹೆಸರು ಉಲ್ಲೇಖಿಸಲಾಗಿದೆ. ಇವರಲ್ಲಿ 39 ಜನರ ವಿರುದ್ಧ ಆರೋಪಗಳು ಸಾಬೀತಾಗಿವೆ ಎಂದು ಎಸ್ಐಟಿ ತಿಳಿಸಿದೆ.
2024ರ ಲೋಕಸಭಾ ಚುನಾವಣೆಯ ವೇಳೆ ಜೆಡಿಎಸ್ ಏಜೆಂಟ್ ಆಗಿದ್ದ ವಕೀಲ ಪೂರ್ಣಚಂದ್ರ ನೀಡಿದ ದೂರಿನ ಆಧಾರದ ಮೇಲೆ ಈ ತನಿಖೆ ಆರಂಭವಾಗಿತ್ತು.
ಅಶ್ಲೀಲ ವಿಡಿಯೋಗಳನ್ನು ಹಂಚಲು ಆರೋಪಿಗಳು ಹಾಸನದಲ್ಲೇ ಸುಮಾರು 70 ಪೆನ್ಡ್ರೈವ್ಗಳನ್ನು ಖರೀದಿಸಿದ್ದ ವಿಚಾರ ತನಿಖೆಯ ವೇಳೆ ಬಹಿರಂಗವಾಗಿದೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದ್ದು, 277 ಜನ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ. ತಾಂತ್ರಿಕ ಸಾಕ್ಷ್ಯಗಳು ಹಾಗೂ ಫೋರೆನ್ಸಿಕ್ ಸೈನ್ಸ್ ಲ್ಯಾಬ್ (FSL) ವರದಿ ಆಧರಿಸಿ ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಲಾಗಿದೆ.
ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧದ ಆರೋಪ ಸಾಬೀತು!
ಈ ಪ್ರಕರಣದಲ್ಲಿ ಎ1 ನವೀನ್, ಎ2 ಪ್ರಜ್ವಲ್ ಅವರ ಕಾರು ಚಾಲಕರಾಗಿದ್ದ ಕಾರ್ತಿಕ್ ಎನ್, ಎ3 ಚೇತನ್ ಬಿಸಿ, ಎ4 ಚೇತನ್ ವೈ ಎಸ್, ಎ5 ಲಿಖಿತ್ ಗೌಡ ಸೇರಿದಂತೆ ಒಟ್ಟು 39 ಆರೋಪಿಗಳ ವಿರುದ್ಧ ದೋಷಾರೋಪಣೆ ಮಾಡಲಾಗಿದೆ. ಇವರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಹೆಸರುಗಳೂ ಸೇರಿವೆ. ಅದರಲ್ಲೂ ಬಿಜೆಪಿ ನಾಯಕ ಪ್ರೀತಂಗೌಡ, ಸಂಸದ ಶ್ರೇಯಸ್ ಅತ್ಯಾಪ್ತರ ವಿರುದ್ಧದ ಆರೋಪ ಸಾಬೀತುಪಡಿಸಲಾಗಿದೆ.
ಪೆನ್ಡ್ರೈವ್ ಹಂಚಿಕೆ ಕೇಸ್ನಲ್ಲಿ ಪ್ರಜ್ವಲ್ ಕೂಡ ಆರೋಪಿಯಾಗಿದ್ದಾರೆ. ಅಲ್ಲದೆ, ಮಹಿಳೆಯರ ಸಮ್ಮತಿಯಿಲ್ಲದೆ ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಣ ಮಾಡಿ, ಅದನ್ನು ಪೆನ್ಡ್ರೈವ್ ಮೂಲಕ ಹಂಚಿಕೆ ಮಾಡಿದ ಆರೋಪಗಳನ್ನು ಎಸ್ಐಟಿ ದೃಢಪಡಿಸಿದೆ. ಕೆಲ ಆರೋಪಿಗಳು ತಮ್ಮ ಮೊಬೈಲ್ಗಳಿಂದ ಇತರರಿಗೆ ವಿಡಿಯೋ ಹಂಚಿರುವುದನ್ನು ತನಿಖಾ ತಂಡ ದೃಢಪಡಿಸಿದೆ.
ಪ್ರಜ್ವಲ್ ರೇವಣ್ಣ ಹೆಸರಿಲ್ಲ!
ಇದೇ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹೆಸರೂ ಉಲ್ಲೇಖವಾಗಿದ್ದರೂ, ಈ ಚಾರ್ಜ್ಶೀಟ್ನಲ್ಲಿ ಅವರ ಹೆಸರು ಸೇರಿಸಿಲ್ಲ ಎಂಬುದು ತಿಳಿದುಬಂದಿದೆ. ಮುಂದಿನ ತನಿಖೆ ಮತ್ತು ನ್ಯಾಯಾಲಯದ ಕ್ರಮಗಳು ಏನಿರಲಿವೆ ಬುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
‘ಲವ್ ಮಾಕ್ಟೇಲ್ 3’ ಸಿನಿಮಾದ ವಿಶೇಷ ಶೋಗಳನ್ನು ತಂಡದವರಿಗಾಗಿ ಆಯೋಜನೆ ಮಾಡಲಾಗಿತ್ತು. ಕೆಲ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಿದ್ದರು. ಇದನ್ನು ನೋಡಿದ ಸೆಲೆಬ್ರಿಟಿಗಳು ಮೆಚ್ಚುಗೆ ಸೂಚಿಸಿದ್ದಾರೆ. ‘ಸಿನಿಮಾ ಹೀಗೆ ಇರುತ್ತದೆ ಎಂದು ನಾನು ಊಹಿಸರಲಿಲ್ಲ’ ಎಂದು ಅನೇಕರು ಹೇಳಿದ್ದಾರೆ. ಮೊದಲ ಭಾಗದಲ್ಲಿ ಕಥಾ ನಾಯಕನ ಪತ್ನಿ ಸಾಯುತ್ತಾಳೆ. ಎರಡನೇ ಭಾಗದಲ್ಲಿ ಆತನ ಜೀವನದಲ್ಲಿ ಒಂದು ಮಗು ಬರುತ್ತದೆ. ಮೂರನೇ ಭಾಗ ಯಾವ ರೀತಿಯಲ್ಲಿ ಇರಬಹುದು ಎಂಬ ಕುತೂಹಲ ಮೂಡಿದೆ.
ರಾಯಚೂರು, ಮಾ.18: ಜಿಲ್ಲೆಯ ಅರಕೇರಾ ತಾಲ್ಲೂಕಿನ ಹಾಳಜಾಡಲದಿನ್ನಿ ಗ್ರಾಮದಲ್ಲಿ ಸಿಡಿಲು ಬಡಿದು ತೆಂಗಿನ ಮರವೊಂದು ಹೊತ್ತಿ ಉರಿದಿರುವ ಘಟನೆ ನಡೆದಿದೆ. ಗುಡುಗು ಸಹಿತ ಮಳೆಯ ಸಂದರ್ಭದಲ್ಲಿ ಸಂಭವಿಸಿದ ಈ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೈತ ಶರೀಫ್ ಸಾಬ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ಸಂಭವಿಸಿದೆ. ನಿನ್ನೆ ರಾತ್ರಿ ಜಿಲ್ಲೆಯಾದ್ಯಂತ ಗುಡುಗು ಮತ್ತು ಸಿಡಿಲು ಸಹಿತ ಮಳೆಯಾಗುತ್ತಿತ್ತು. ಈ ವೇಳೆ ಜಮೀನಿನಲ್ಲಿದ್ದ ಎತ್ತರದ ತೆಂಗಿನ ಮರಕ್ಕೆ ನೇರವಾಗಿ ಸಿಡಿಲು ಬಡಿದಿದೆ. ಸಿಡಿಲು ಬಡಿದ ತೀವ್ರತೆಗೆ ಮರಕ್ಕೆ ತಕ್ಷಣ ಬೆಂಕಿ ಹೊತ್ತಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಮರ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ಘಟನೆಯ ವೇಳೆ ಮರದ ಹತ್ತಿರ ಯಾರೂ ಇಲ್ಲದ ಕಾರಣ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ ತೆಂಗಿನ ಮರವು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗುತ್ತಿರುವ ವಿಡಿಯೋವನ್ನು ಸ್ಥಳೀಯರು ಚಿತ್ರೀಕರಿಸಿದ್ದು, ಇದು ಇಂಟರ್ನೆಟ್ನಲ್ಲಿ ಭಾರಿ ಸದ್ದು ಮಾಡುತ್ತಿದೆ.
ಅಡಿಲೇಡ್ ಮತ್ತು ಸಬರ್ಬನ್ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸಿದ ಗ್ರೇಡ್ ಕ್ರಿಕೆಟ್ ಟೂರ್ನಿಯಲ್ಲಿ ಸ್ಯಾಮ್ ಚೀಕ್ ವಿಶ್ವ ದಾಖಲೆಯ ಚತುಃಶತಕ ಸಿಡಿಸಿದ್ದಾರೆ. ಅದು ಸಹ ಕೇವಲ 137 ಎಸೆತಗಳಲ್ಲಿ ಎಂಬುದು ವಿಶೇಷ. ಮಾರ್ಫೆಟ್ವಿಲ್ಲೆ ಪಾರ್ಕ್ ವಿರುದ್ಧದ ಈ ಪಂದ್ಯದಲ್ಲಿ ಕೊರೊಮ್ಯಾಂಡಲ್ ಕ್ರಿಕೆಟ್ ಕ್ಲಬ್ ಕಣಕ್ಕಿಳಿದ ಸ್ಯಾಮ್ ಚೀಕ್ ತಂದೆಯೊಂದಿಗೆ ಇನಿಂಗ್ಸ್ ಆರಂಭಿಸಿದ್ದರು. ಅಂದರೆ ತಂದೆ ಮತ್ತು ಮಗ ಜೊತೆಯಾಗಿ ಕಣಕ್ಕಿಳಿದಿದ್ದರು.
ಇತ್ತ ತಂದೆ ಡ್ಯಾರೆನ್ ಚೀಕ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರೆ, ಇತ್ತ ಮಗ ಸ್ಯಾಮ್ ಚೀಕ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಮೊದಲ ವಿಕೆಟ್ಗೆ ಈ ಜೋಡಿಯು ಬರೋಬ್ಬರಿ 590 ರನ್ಗಳ ಜೊತೆಯಾಟವಾಡಿದ್ದರು. ಇದರ ನಡುವೆ 137 ಎಸೆತಗಳನ್ನು ಎದುರಿಸಿದ ಸ್ಯಾಮ್ ಚೀಕ್ 42 ಸಿಕ್ಸ್ ಹಾಗೂ 30 ಫೋರ್ಗಳೊಂದಿಗೆ ಅಜೇಯ 402 ರನ್ ಬಾರಿಸಿದರು.
ಇನ್ನು ಡ್ಯಾರೆನ್ ಚೀಕ್ 108 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 20 ಫೋರ್ಗಳೊಂದಿಗೆ ಅಜೇಯ 175 ರನ್ ಸಿಡಿಸಿದರು. ಈ ಮೂಲಕ ಕೊರೊಮ್ಯಾಂಡಲ್ ತಂಡವು ವಿಕೆಟ್ ನಷ್ಟವಿಲ್ಲದೆ 40 ಓವರ್ಗಳಲ್ಲಿ ಬರೋಬ್ಬರಿ 590 ರನ್ ಕಲೆಹಾಕಿತು.
ಈ ಕಠಿಣ ಗುರಿ ಬೆನ್ನತ್ತಿದ ಮಾರ್ಫೆಟ್ವಿಲ್ಲೆ ಪಾರ್ಕ್ ತಂಡವು 40 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 146 ರನ್ ಮಾತ್ರ ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಕೊರೊಮ್ಯಾಂಡಲ್ ಕ್ರಿಕೆಟ್ ಕ್ಲಬ್ ತಂಡವು ಬರೋಬ್ಬರಿ 444 ರನ್ಗಳ ಬೃಹತ್ ಅಂತರದ ಗೆಲುವು ದಾಖಲಿಸಿದೆ.
ಸ್ಯಾಮ್ ಚೀಕ್ – ಡ್ಯಾರೆನ್ ಚೀಕ್
ಅಂದಹಾಗೆ ಡ್ಯಾರೆನ್ ಚೀಕ್ ಅವರು 1983 ರಿಂದ ಇದೇ ಕ್ಲಬ್ ಪರ ಆಡುತ್ತಿದ್ದಾರೆ. ಈವರೆಗೆ 11,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದೀಗ ಇದೇ ಕ್ಲಬ್ ಪರ ಮಗ ಸ್ಯಾಮ್ ಚೀಕ್ ಕೂಡ ಇನಿಂಗ್ಸ್ ಆರಂಭಿಸಿದ್ದಾರೆ. ಈ ಇನಿಂಗ್ಸ್ನೊಂದಿಗೆ ತಂದೆಯ ಜೊತೆಗೂಡಿ ಹೊಸ ಇತಿಹಾಸ ನಿರ್ಮಿಸಿರುವುದು ವಿಶೇಷ.
ಇನ್ನು ಈ ಪಂದ್ಯದಲ್ಲಿ ಸಾಧಿಸಿದ ಅಮೋಘ ಗೆಲುವಿನೊಂದಿಗೆ ಕೊರೊಮ್ಯಾಂಡಲ್ ಕ್ರಿಕೆಟ್ ಕ್ಬಲ್ ತಂಡವು ಅಡಿಲೇಡ್ ಮತ್ತು ಸಬರ್ಬನ್ ಕ್ರಿಕೆಟ್ ಅಸೋಸಿಯೇಷನ್ ಟೂರ್ನಿಯ ಫೈನಲ್ಗೆ ಪ್ರವೇಶಿಸಿದೆ.
ವಿಶ್ವ ದಾಖಲೆಗಳು:
ಡ್ಯಾರೆನ್ ಮತ್ತು ಸ್ಯಾಮ್ ಚೀಕ್ ಅವರ ಸಿಡಿಲಬ್ಬರದಿಂದ ಹವ್ಯಾಸಿ ಮತ್ತು ಕ್ಲಬ್ ಕ್ರಿಕೆಟ್ ಮಟ್ಟದಲ್ಲಿ ಹಲವಾರು ವಿಶ್ವ ದಾಖಲೆಗಳು ನಿರ್ಮಾಣವಾಗಿದೆ. ಆ ದಾಖಲೆಗಳಾವುವು ಯಾವುದೆಂದರೆ…
ಗರಿಷ್ಠ ಜೊತೆಯಾಟ: 40 ಓವರ್ಗಳ ಸೀಮಿತ ಓವರ್ಗಳ ಪಂದ್ಯದಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ದಾಖಲಾದ 590 ರನ್ಗಳ ಆರಂಭಿಕ ಜೊತೆಯಾಟವು ವಿಶ್ವ ದಾಖಲೆ ಎಂದು ಪರಿಗಣಿಸಲಾಗಿದೆ.
ವೈಯಕ್ತಿಕ ಗರಿಷ್ಠ ಸ್ಕೋರ್: ಸ್ಯಾಮ್ ಚೀಕ್ ಅವರು ಗಳಿಸಿದ 402 ರನ್*, 40 ಓವರ್ಗಳ ಮಾದರಿಯ ಕ್ರಿಕೆಟ್ನಲ್ಲಿ ಒಬ್ಬ ಬ್ಯಾಟರ್ ಗಳಿಸಿದ ಅತ್ಯಧಿಕ ರನ್ ಆಗಿದೆ. ಇದು ಬ್ರಿಯಾನ್ ಲಾರಾ ಅವರ ಟೆಸ್ಟ್ ಕ್ರಿಕೆಟ್ನ ಗರಿಷ್ಠ ಸ್ಕೋರ್ (400*) ಗಿಂತಲೂ ಹೆಚ್ಚು ಎಂಬುದು ವಿಶೇಷ.
ಸಿಕ್ಸರ್ಗಳ ಸುರಿಮಳೆ: ಸ್ಯಾಮ್ ಚೀಕ್ ಒಂದೇ ಇನ್ನಿಂಗ್ಸ್ನಲ್ಲಿ 42 ಸಿಕ್ಸರ್ಗಳನ್ನು ಬಾರಿಸಿದ್ದು ಕೂಡ ಒಂದು ಅಸಾಧಾರಣ ದಾಖಲೆಯಾಗಿದೆ.
ಅಪರೂಪದ ತಂದೆ-ಮಗನ ಜೋಡಿ: ಕ್ಲಬ್ ಕ್ರಿಕೆಟ್ ಇತಿಹಾಸದಲ್ಲಿ ತಂದೆ ಮತ್ತು ಮಗ ಇಬ್ಬರೂ ಒಂದೇ ಪಂದ್ಯದಲ್ಲಿ ಶತಕ ಸಿಡಿಸಿ, ಇಡೀ ಇನ್ನಿಂಗ್ಸ್ ಪೂರ್ತಿ ಬ್ಯಾಟಿಂಗ್ ಮಾಡಿದ್ದು ಇದೇ ಮೊದಲ ಬಾರಿಗೆ ಎಂಬುದು ವಿಶೇಷ.
ನಟಿ ರಮ್ಯಾ (Ramya) ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಇತ್ತೀಚೆಗೆ ತಮ್ಮ ಸೋಶಿಯಲ್ ಮೀಡಿಯಾ ಅಶ್ಲೀಲ ಕಮೆಂಟ್ ಹಾಕಿದವರ ವಿರುದ್ಧ ದೂರು ನೀಡಿದ್ದರು. ಈ ಮೂಲಕ ಇಂಥವರ ವಿರುದ್ಧ ಸುಮ್ಮನೆ ಇರಬಾರದು ಎಂಬ ಸಂದೇಶ ರವಾನಿಸಿದ್ದಾರೆ. ಈ ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿದೆ. ಈ ವಿಷಯ ಸಾಕಷ್ಟು ಚರ್ಚೆ ಆಯಿತು. ಅಶ್ಲೀಲ ಕಮೆಂಟ್ಗಲಿಂದ ಕಂಗೆಟ್ಟಿದ್ದ ಎಲ್ಲರಿಗೂ ಇದೊಂದು ಮಾದರಿ ಆಯಿತು. ಈಗ ಪರಭಾಷೆಯಲ್ಲೂ ನಟಿಯರು ಈ ರೀತಿ ನಿರ್ಧಾರ ಮಾಡುತ್ತಿದ್ದಾರೆ. ನಟಿಯರು ಮುಂದೆ ಬಂದು ಕೇಸ್ ದಾಖಲಿಸುತ್ತಿದ್ದಾರೆ.
ಟಾಲಿವುಡ್ ನಟಿ ರೇಣು ದೇಸಾಯಿಗೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಮೆಂಟ್ ಹಾಕಿದ್ದರು. ಇದನ್ನು ಅವರು ಪೊಲೀಸರ ಗಮನಕ್ಕೆ ತಂದಿದ್ದಾರೆ. ಸದ್ಯ ತೆಲಂಗಾಣ ಪೊಲೀಸರು ಈ ಪ್ರಕರಣದಲ್ಲಿ ಓರ್ವನನ್ನು ಬಂಧಿಸಿದ್ದಾರೆ. ಆತ ವೃತ್ತಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದಾನೆ.
ನಟಿ ಅನಸುಯಾ ಅವರ ಮೇಲೆ ಕೆಟ್ಟದಾಗಿ ಕಮೆಂಟ್ ಹಾಕಿದ ವ್ಯಕ್ತಿಯನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಈ ಮೂಲ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಅನೇಕ ನಟಿಯರು ಈ ರೀತಿ ಮುಂದೆ ಬಂದ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ. ಕಮೆಂಟ್ ಮಾಡುವವರು ತಮ್ಮ ಗುರುತು ಯಾರಿಗೂ ಸಿಗೋದಿಲ್ಲ ಎಂದು ಅಂದುಕೊಂಡಿರುತ್ತಾರೆ. ಆದರೆ, ಅಸಲಿಗೆ ಹಾಗಿರೋದಿಲ್ಲ ಎಂಬುದನ್ನು ಪೊಲೀಸರು ತೋರಿಸುತ್ತಿದ್ದಾರೆ.
ಇದನ್ನೂ ಓದಿ: ಅಶ್ಲೀಲ ಕಮೆಂಟ್ ಮಾಡಿದವರಿಗೆ 7 ವರ್ಷ ಜೈಲು ಶಿಕ್ಷೆ ಸಾಧ್ಯತೆ: ಶಾಕಿಂಗ್ ವಿಷಯ ಹೇಳಿದ ರಮ್ಯಾ
ಕರ್ನಾಟಕದಲ್ಲಿ ಅನೇಕ ನಟಿಯರು ಇದೇ ರೀತಿಯ ದಿಟ್ಟ ಕ್ರಮ ಕೈಗೊಂಡಿದ್ದರು. ರಮ್ಯಾ ಅವರು ಈ ವಿಷಯದಲ್ಲಿ ಮೊದಲು ಹೆಜ್ಜೆ ಇಟ್ಟರು. ಅವರು ನೀಡಿದ ದೂರು ಆಧರಿಸಿ ಅನೇಕರನ್ನು ಬಂಧಿಸಲಾಗಿದೆ. ಇತ್ತೀಚೆಗೆ ವಿಜಯಲಕ್ಷ್ಮೀ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲವಾಗಿ ಕಮೆಂಟ್ ಹಾಕಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಈಗ ಟಾಲಿವುಡ್ ನಟಿಯರು ಸಿಡಿದೆದ್ದಿದ್ದಾರೆ. ಇದು ಎಲ್ಲಾ ಚಿತ್ರರಂಗಕ್ಕೂ ಹಬ್ಬಬೇಕು ಎಂಬುದು ಅನೇಕರ ಆಸೆ.
ಮೈಸೂರು, ಮಾರ್ಚ್ 18: ಮೈಸೂರು (Mysuru) ಅಂದರೆ ಅದು ಪಾರಂಪರಿಕ ಕಟ್ಟಡಗಳ ತವರು. ಇಲ್ಲಿನ ಪ್ರತಿ ರಸ್ತೆಯಿಗೂ ಒಂದು ಇತಿಹಾಸವಿದೆ. ಆದರೆ ಈಗ ಅದೇ ಇತಿಹಾಸಕ್ಕೆ ಕೊಡಲಿ ಪೆಟ್ಟು ಬೀಳುತ್ತಿದೆ. ‘ಸ್ವದೇಶ್ ದರ್ಶನ 2.0’ ಯೋಜನೆಯಡಿ ನಗರದ 10 ಕಡೆ ಟಾಂಗಾ ಸ್ಟ್ಯಾಂಡ್ ನಿರ್ಮಿಸಲು ಪಾಲಿಕೆ ಮುಂದಾಗಿದೆ. ಆದರೆ ಈ ಯೋಜನೆ ಈಗ ವಿವಾದದ (Tonga stand controversy) ಕೇಂದ್ರಬಿಂದುವಾಗಿದೆ. ಅರಮನೆ ಮುಂಭಾಗದ ಚಾಮರಾಜೇಂದ್ರ ವೃತ್ತದ ಬಳಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ರಾಜಮಾರ್ಗವನ್ನು ಒಡೆದು, ಫುಟ್ಪಾತ್ ಮೇಲೆಯೇ ಟಾಂಗಾ ಸ್ಟ್ಯಾಂಡ್ ನಿರ್ಮಿಸಲಾಗುತ್ತಿದೆ.
‘ಪಾಲಿಕೆ ಆಯುಕ್ತರಿಗೆ ಮೈಸೂರು ನಗರದ ವಾಸ್ತವವೇ ಗೊತ್ತಿಲ್ಲ. ಎಸಿ ಹಾಕಿಕೊಂಡು ಕಚೇರಿಯಲ್ಲಿ ಕೂತಿರುವ ಅವರಿಗೆ ಪಾದಚಾರಿ ಮಾರ್ಗ ಯಾವುದು, ಖಾಲಿ ಜಾಗ ಯಾವುದು ಎಂಬುದು ಹೇಗೆ ತಿಳಿಯುತ್ತದೆ? ಸಿಎಂ ಬಂದಾಗ ಹೂಗುಚ್ಚ ಕೊಡುವುದೇ ಅವರ ಕೆಲಸವಲ್ಲ. ಮೊದಲು ನಗರದಲ್ಲಿ ಓಡಾಡಿ ಸಮಸ್ಯೆ ಅರ್ಥ ಮಾಡಿಕೊಳ್ಳಲಿ. ಕೂಡಲೇ ಈ ಕಾಮಗಾರಿ ನಿಲ್ಲಿಸಿ, ಹಾಳಾದ ರಸ್ತೆ ಸರಿಪಡಿಸಲಿ’ ಎಂದು ಬಿಜೆಪಿ ನಾಯಕ ಪ್ರತಾಪ್ ಸಿಂಹ ಒತ್ತಾಯಿಸಿದ್ದಾರೆ.
ಟಾಂಗಾ ಸವಾರಿಗೆ ಉತ್ತೇಜನ ನೀಡುವ ಹೆಸರಿನಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಗಾಳಿಗೆ ತೂರಲಾಗುತ್ತಿದೆ ಎಂಬುದು ಸ್ಥಳೀಯರ ಆಕ್ರೋಶ. ದಿನನಿತ್ಯ ಸಾವಿರಾರು ಪ್ರವಾಸಿಗರು ಮತ್ತು ಜನಸಾಮಾನ್ಯರು ಸಂಚರಿಸುವ ಈ ಪ್ರದೇಶದಲ್ಲಿ ಸ್ಟ್ಯಾಂಡ್ ನಿರ್ಮಿಸಿದರೆ ಪಾದಚಾರಿಗಳು ರಸ್ತೆಗೆ ಇಳಿಯಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಪಾಲಿಕೆಯೇ ಫುಟ್ಪಾತ್ ಒತ್ತುವರಿ ಮಾಡುತ್ತಿದೆ ಎಂದು ಮಾಜಿ ಮೇಯರ್ ಎಂ.ಜೆ. ರವಿಕುಮಾರ್ ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
ಫುಟ್ಪಾತ್ನಲ್ಲಿ ಕಾಮಗಾರಿಯ ವಿಡಿಯೋ ನೋಡಿ
‘ಪಾಲಿಕೆಯು ಮೈಸೂರನ್ನು ಶೆಲ್ಟರ್ಗಳ ನಗರವನ್ನಾಗಿ ಮಾಡಲು ಹೊರಟಿದೆ. ಫುಟ್ಪಾತ್ ತೆರವು ಮಾಡಬೇಕಾದ ಪಾಲಿಕೆಯೇ ಇಲ್ಲಿ ಒತ್ತುವರಿ ಮಾಡಿಸುತ್ತಿರುವುದು ದುರಂತ. ಯಾವುದೇ ಕಾರಣಕ್ಕೂ ಇಲ್ಲಿ ಟಾಂಗಾ ಸ್ಟ್ಯಾಂಡ್ ನಿರ್ಮಿಸಲು ಬಿಡುವುದಿಲ್ಲ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ, ಪರಂಪರೆ ಉಳಿಸುವ ಹೆಸರಿನಲ್ಲಿ ನಡೆಯುತ್ತಿರುವ ಈ ಅವೈಜ್ಞಾನಿಕ ಕಾಮಗಾರಿ ಮೈಸೂರಿಗರ ನಿದ್ದೆಗೆಡಿಸಿದೆ. ಇನ್ನಾದರೂ ಪಾಲಿಕೆ ಎಚ್ಚೆತ್ತುಕೊಂಡು ಪರ್ಯಾಯ ಜಾಗ ಹುಡುಕುತ್ತದೆಯೇ ಅಥವಾ ಸಾರ್ವಜನಿಕರ ಆಕ್ರೋಶಕ್ಕೆ ಮಣಿಯುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್ಗೆ ಆಯ್ಕೆಯಾಗಿರುವ ಪಾಕಿಸ್ತಾನ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಮುಂಬರುವ ಟೂರ್ನಿಯಲ್ಲಿ ಸನ್ರೈಸರ್ಸ್ ಲೀಡ್ಸ್ ಪರ ಕಣಕ್ಕಿಳಿಯುವುದು ಅನುಮಾನ. ದಿ ಹಂಡ್ರೆಡ್ ಲೀಗ್ ಟೂರ್ನಿಗೆ ದಿನಾಂಕ ನಿಗದಿಯಾಗಿದ್ದು, ಇದೇ ವೇಳೆ ಪಾಕಿಸ್ತಾನ್ ತಂಡ ಟೆಸ್ಟ್ ಸರಣಿ ಆಡಲಿದೆ. ಈ ಸರಣಿಗೆ ಅಬ್ರಾರ್ ಆಯ್ಕೆಯಾದರೆ ಅವರು ಸನ್ರೈಸರ್ಸ್ ಲೀಡ್ಸ್ ತಂಡದಲ್ಲಿ ಕಾಣಿಸಿಕೊಳ್ಳುವುದಿಲ್ಲ.
ಮಾರ್ಚ್ 12, 2026 ರಂದು ನಡೆದ ಹರಾಜಿನಲ್ಲಿ ಅಬ್ರಾರ್ ಅಹ್ಮದ್ ಅವರನ್ನುಎಸ್ಆರ್ಹೆಚ್ ಮಾಲೀಕತ್ವದ ಸನ್ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ಬರೋಬ್ಬರಿ £1,90,000 (ಸುಮಾರು ₹2.34 ಕೋಟಿ) ಮೊತ್ತಕ್ಕೆ ಖರೀದಿಸಿದೆ.
ಭಾರತೀಯ ವಿರೋಧಿ ಮನಸ್ಥಿತಿ ಹೊಂದಿರುವ ಪಾಕ್ ಆಟಗಾರನನ್ನು ಖರೀದಿಸಿರುವುದಕ್ಕೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಈ ಆಕ್ರೋಶದೊಂದಿಗೆ ಸನ್ರೈಸರ್ಸ್ ಲೀಡ್ಸ್ನ ‘X’ (ಟ್ವಿಟರ್) ಖಾತೆಯನ್ನು ರಿಪೋರ್ಟ್ ಮಾಡಿದ್ದ ಪರಿಣಾಮ ಎಸ್ಆರ್ಎಲ್ ತಂಡದ ಸೋಷಿಯಲ್ ಮೀಡಿಯಾ ಖಾತೆಯು ತಾತ್ಕಾಲಿಕ ಸ್ಥಗಿತವಾಗಿತ್ತು.
ಇತ್ತ ಭಾರತ ಸೇರಿದಂತೆ ಎಲ್ಲೆಡೆಯಿಂದ ಎಸ್ಆರ್ಹೆಚ್ ಅಭಿಮಾನಿಗಳ ಒತ್ತಡ ಹೆಚ್ಚಾಗುತ್ತಿರುವುದರಿಂದ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಪಾಕ್ ಆಟಗಾರನನ್ನು ಕೈ ಬಿಡಲಿದ್ದಾರೆ ಎಂದು ವರದಿಯಾಗಿತ್ತು.
ಇದೀಗ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ. ಏಕೆಂದರೆ ಅಬ್ರಾರ್ ಅಹ್ಮದ್ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾದರೆ, ದಿ ಹಂಡ್ರೆಡ್ ಲೀಗ್ಗೆ ಅಲಭ್ಯರಾಗಲಿದ್ದಾರೆ. ಹೀಗಾಗಿ ಜುಲೈ ತಿಂಗಳವರೆಗೆ ಎಸ್ಆರ್ಹೆಚ್ ಯಾವುದೇ ಕ್ರಮ ಕೈಗೊಳ್ಳುವ ಸಾಧ್ಯತೆಯಿಲ್ಲ ಎಂದು ತಿಳಿದು ಬಂದಿದೆ.
ಪಾಕಿಸ್ತಾನ್-ವೆಸ್ಟ್ ಇಂಡೀಸ್ ಸರಣಿ ಯಾವಾಗ?
ಪಾಕಿಸ್ತಾನ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯು 2026ರ ಜುಲೈ 15 ರಿಂದ ಆಗಸ್ಟ್ 7 ರವರೆಗೆ ನಡೆಯಲಿದೆ. ಇತ್ತ ‘ದಿ ಹಂಡ್ರೆಡ್’ ಟೂರ್ನಿಯು ಜುಲೈ 21 ರಿಂದ ಆಗಸ್ಟ್ 16 ರವರೆಗೆ ನಡೆಯಲಿದೆ.
ಅಬ್ರಾರ್ ಅಹ್ಮದ್ ಅವರು ಆಗಸ್ಟ್ 7 ರವರೆಗೆ ವೆಸ್ಟ್ ಇಂಡೀಸ್ನಲ್ಲಿ ಟೆಸ್ಟ್ ಪಂದ್ಯಗಳನ್ನು ಆಡಬೇಕಿರುವುದರಿಂದ, ಅವರು ಸನ್ರೈಸರ್ಸ್ ಲೀಡ್ಸ್ ತಂಡದ ಬಹುತೇಕ ಪಂದ್ಯಗಳನ್ನು ತಪ್ಪಿಸಿಕೊಳ್ಳುವುದು ಖಚಿತವಾಗಿದೆ.
ಇದೇ ನೆಪವಿಟ್ಟುಕೊಂಡು ಸನ್ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ಅಬ್ರಾರ್ ಬದಲಿಗೆ ಮತ್ತೋರ್ವ ವಿದೇಶಿ ಆಟಗಾರನನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ.
ನೇರವಾಗಿ ಕೈ ಬಿಡಲು ಯಾಕೆ ಸಾಧ್ಯವಿಲ್ಲ?
ಕಾನೂನು ಮತ್ತು ಆರ್ಥಿಕ ಸಮಸ್ಯೆ: ಅಬ್ರಾರ್ ಅಹ್ಮದ್ ಅವರನ್ನು ಹರಾಜಿನಲ್ಲಿ £190,000 (ಸುಮಾರು ₹2.34 ಕೋಟಿ) ನೀಡಿ ಅಧಿಕೃತವಾಗಿ ಖರೀದಿಸಲಾಗಿದೆ. ಯಾವುದೇ ಬಲವಾದ ಶಿಸ್ತುಕ್ರಮದ ಕಾರಣವಿಲ್ಲದೆ ಅವರನ್ನು ಕೈಬಿಟ್ಟರೆ, ಫ್ರಾಂಚೈಸಿ ಅವರಿಗೆ ಪೂರ್ಣ ಹಣವನ್ನು ನೀಡಬೇಕಾಗುತ್ತದೆ.
ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ನಿಯಮ: ‘ದಿ ಹಂಡ್ರೆಡ್’ ಟೂರ್ನಿಯು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ನಿಯಮದಡಿ ನಡೆಯುತ್ತದೆ. ಕೇವಲ ಸೋಶಿಯಲ್ ಮೀಡಿಯಾ ಆಕ್ರೋಶದ ಕಾರಣಕ್ಕೆ ಆಟಗಾರನನ್ನು ತೆಗೆದುಹಾಕಲು ಇಸಿಬಿ ಅನುಮತಿ ನೀಡುವುದಿಲ್ಲ.
ಹೀಗಾಗಿಯೇ ಇದೀಗ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ. ಅದರಂತೆ ಅಬ್ರಾರ್ ಅಹ್ಮದ್ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಆಯ್ಕೆಯಾದರೆ, ಸನ್ರೈಸರ್ಸ್ ಲೀಡ್ಸ್ ತಂಡದಿಂದ ಹೊರಬೀಳುವುದು ಖಚಿತ.,
ಸನ್ರೈಸರ್ಸ್ ಲೀಡ್ಸ್ ತಂಡದ ಆಟಗಾರರು:
ವಿದೇಶಿ ಆಟಗಾರರು: ಅಬ್ರಾರ್ ಅಹ್ಮದ್ (ಪಾಕಿಸ್ತಾನ್), ಮಿಚೆಲ್ ಮಾರ್ಷ್ (ಆಸ್ಟ್ರೇಲಿಯಾ), ನಾಥನ್ ಎಲ್ಲಿಸ್ (ಆಸ್ಟ್ರೇಲಿಯಾ), ಮತ್ತು ರಯಾನ್ ರಿಕೆಲ್ಟನ್ (ಸೌತ್ ಆಫ್ರಿಕಾ).
ಇಂಗ್ಲೆಂಡ್ ಆಟಗಾರರು: ಹ್ಯಾರಿ ಬ್ರೂಕ್ (ನಾಯಕ), ಝಾಕ್ ಕ್ರಾಲಿ, ಬೆನ್ ಹೌವೆಲ್, ಬ್ರೈಡನ್ ಕಾರ್ಸ್, ಡಾನ್ ಲಾರೆನ್ಸ್, ಮ್ಯಾಥ್ಯೂ ಪಾಟ್ಸ್, ರೀಸ್ ಟೋಪ್ಲಿ, ಟಾಮ್ ಅಲ್ಸೊಪ್, ಎಡ್ ಬರ್ನಾರ್ಡ್, ಟಾಮ್ ಲಾಸ್, ಮತ್ತು ಲಿಯಾಮ್ ಪ್ಯಾಟರ್ಸನ್-ವೈಟ್.
ಮೈಸೂರು, ಮಾ.18: ನಗರದಲ್ಲಿ ನೂತನವಾಗಿ ಅಳವಡಿಸಲಾಗಿರುವ ಟ್ರಾಫಿಕ್ ಸಿಗ್ನಲ್ಗಳು ಮತ್ತು ಫ್ಲೆಕ್ಸ್ ಬೋರ್ಡ್ಗಳ ವಿರುದ್ಧ ಸಂಸದ ಪ್ರತಾಪ್ ಸಿಂಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಸುಮಾರು 108 ಹೊಸ ಟ್ರಾಫಿಕ್ ಸಿಗ್ನಲ್ಗಳನ್ನು ಅಳವಡಿಸಲಾಗಿದ್ದು, ಇದು ಅವೈಜ್ಞಾನಿಕವಾಗಿದೆ. ಕೇವಲ 1.5 ರಿಂದ 2 ಕಿಲೋಮೀಟರ್ ಅಂತರದಲ್ಲಿ 9-10 ಸಿಗ್ನಲ್ಗಳಿದ್ದು, ವಾಹನ ದಟ್ಟಣೆ ಇಲ್ಲದ ರಸ್ತೆಗಳಲ್ಲೂ ಸಿಗ್ನಲ್ಗಳನ್ನು ಅಳವಡಿಸಿರುವುದು ಜನರಿಗೆ ಅನಾನುಕೂಲ ಉಂಟುಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. ರಿಂಗ್ ರೋಡ್ಗೆ ಅಂಡರ್ಪಾಸ್ ಮತ್ತು ಓವರ್ಬ್ರಿಡ್ಜ್ಗಳು ಪರಿಹಾರವೇ ಹೊರತು ಸಿಗ್ನಲ್ಗಳಲ್ಲ ಎಂದು ಸಿಂಹ ಪ್ರತಿಪಾದಿಸಿದ್ದಾರೆ. ಅದೇ ರೀತಿ, ಮೈಸೂರಿನಾದ್ಯಂತ ಹೆಚ್ಚುತ್ತಿರುವ ಫ್ಲೆಕ್ಸ್ ಬೋರ್ಡ್ಗಳ ಬಗ್ಗೆಯೂ ಅವರು ಚಿಂತಿತರಾಗಿದ್ದಾರೆ. ರಾಜಕೀಯ ಪಕ್ಷಗಳು ತಮ್ಮ ಪ್ರಚಾರಕ್ಕಾಗಿ ನಗರವನ್ನು ಗಬ್ಬೆಬ್ಬಿಸುತ್ತಿವೆ ಎಂದು ಆರೋಪಿಸಿದ ಪ್ರತಾಪ್ ಸಿಂಹ, ಬದಲಿಗೆ ಸ್ಥಳೀಯ ಪತ್ರಿಕೆಗಳು ಮತ್ತು ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ. ಮೈಸೂರನ್ನು ಫ್ಲೆಕ್ಸ್ ಮುಕ್ತ ನಗರವನ್ನಾಗಿ ಮಾಡುವಂತೆ ಅವರು ಜಿಲ್ಲಾಧಿಕಾರಿಗಳು ಮತ್ತು ಎಲ್ಲ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿಕೊಂಡಿದ್ದಾರೆ. ರಿಂಗ್ ರೋಡ್ಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಸಿಗ್ನಲ್ಗಳ ಬದಲು ಅಂಡರ್ಪಾಸ್ ಮತ್ತು ಓವರ್ಬ್ರಿಡ್ಜ್ಗಳು ಪರಿಹಾರವಾಗಿವೆ ಎಂದು ಸಿಂಹ ತಿಳಿಸಿದ್ದಾರೆ. ಸಂಸದರಾಗಿ ತಾವು ಈಗಾಗಲೇ ರಿಂಗ್ ರೋಡ್ಗೆ ಏಳು ಅಂಡರ್ಪಾಸ್ ಮತ್ತು ಓವರ್ಬ್ರಿಡ್ಜ್ಗಳಿಗೆ ಅನುಮೋದನೆ ನೀಡಿದ್ದಾಗಿ ಉಲ್ಲೇಖಿಸಿದ್ದಾರೆ. ಬೆಳಗ್ಗೆ ಪೀಕ್ ಅವರ್ಸ್ ಹೊರತುಪಡಿಸಿ, ಹಗಲಿನ ಸಮಯದಲ್ಲಿ ಈ ಸಿಗ್ನಲ್ಗಳ ಅಗತ್ಯವಿಲ್ಲ. ಕಮಿಷನ್ ಆಸೆಗಾಗಿ ಸಿಕ್ಕ ಸಿಕ್ಕ ಜಾಗಗಳಲ್ಲೆಲ್ಲಾ ಸಿಗ್ನಲ್ಗಳನ್ನು ಅಳವಡಿಸಿರುವುದು ಜನರಿಗೆ ಅನಾನುಕೂಲವನ್ನುಂಟುಮಾಡುತ್ತಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.