ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಾತುಕತೆಗೆ ಪಟ್ಟು: ಸಾರಿಗೆ ನೌಕರರ ಸಂಧಾನ ವಿಫಲ – Kannada News | Karnataka Transport Strike Looms: Talks Fail, Workers Demand Meeting with CM Siddaramaiah

ಬೆಂಗಳೂರು, ಮೇ 18: ಮೇ 20ರಂದು ಸಾರಿಗೆ ನೌಕರರ ಮುಷ್ಕರ ವಿಚಾರ ಸಂಬಂಧ ಬೆಂಗಳೂರಿನ (Bengaluru) ಬನ್ನೇರುಘಟ್ಟದ ಕಾರ್ಮಿಕ ಭವನದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದೆ. ಎಷ್ಟೇ ಮನವೊಲಿಕೆಗೆ ಯತ್ನಿಸಿದರೂ ಸಾರಿಗೆ ನೌಕರರು ಪಟ್ಟು ಬಿಟ್ಟಿಲ್ಲ. ನಿಗಮಗಳ ಅಧಿಕಾರಿಗಳ ಮನವಿಗೆ ಜಂಟಿ ಕ್ರಿಯಾ ಸಮಿತಿ ಕೊನೆಗೂ ಒಪ್ಪಿಗೆ ಸೂಚಿಸಿಲ್ಲ. ಮತ್ತೆ ಮೇ 25ಕ್ಕೆ ಸಭೆಗೆ ಬರಲು ಅಧಿಕಾರಿಗಳು ಆಹ್ವಾನ ನೀಡಿದರೂ ನಿಗಮದ ಅಧಿಕಾರಿಗಳ ಮನವಿಗೆ ಒಪ್ಪದ ಸಾರಿಗೆ ಮುಖಂಡರು, ಸಿಎಂ ಜೊತೆಗೆ ಸಭೆಗೆ ಪಟ್ಟು ಹಿಡಿದಿದ್ದಾರೆ. ಸಾರಿಗೆ ಸಚಿವರ ನೇತೃತ್ವದಲ್ಲಿ ನಾಳೆಯೇ ಸಭೆಗೆ ಆಗ್ರಹಿಸಿದ್ದಾರೆ.

‘ಸಭೆ ಮಾಡಿಲ್ಲ ಅಂದ್ರೆ ಮುಷ್ಕರ ಫಿಕ್ಸ್ ‘

ಕಾರ್ಮಿಕ ಇಲಾಖೆ ಆಯುಕ್ತರ ನೇತೃತ್ವದಲ್ಲಿ ಗಂಟೆಗಟ್ಟಲೆ ಮಾತುಕತೆ ನಡೆಸಿದರೂ ಸಭೆ ಯಶಸ್ವಿಯಾಗಿಲ್ಲ. ಯಾವುದೇ ಮನವೊಲಿಕೆಗೂ ಬಗ್ಗದ ನೌಕರರು, ನಾಳೆ ಮಧ್ಯಾಹ್ನದ ಒಳಗಾಗಿ ಸಭೆ ಕರೆದು ಬೇಡಿಕೆ ಈಡೇರಿಕೆ ಸಂಬಂಧ ಮಾತನಾಡುವಂತೆ ಆಗ್ರಹಿಸಿದ್ದಾರೆ. ಈ ವೇಳೆ ಸರ್ಕಾರ ಸದ್ಯದ ಪರಿಸ್ಥಿತಿ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ವಿವರಿಸಿದರೂ, ಸಿಎಂ ಜೊತೆ ಸಭೆಗೆ ಸಾರಿಗೆ ನೌಕರರ ಸಂಘಟನೆ ಆಗ್ರಹಿಸಿದೆ. ಅಲ್ಲದೆ ಸಭೆ ಮಾಡಿಲ್ಲ ಅಂದ್ರೆ ಮುಷ್ಕರ ಫಿಕ್ಸ್ ಎಂದು ವಾರ್ನಿಂಗ್ ಕೂಡ ನೀಡಿದೆ.

ಇದನ್ನೂ ಓದಿ: ಮೇ 20ರಂದು ಸಾರಿಗೆ ನೌಕರರ ಮುಷ್ಕರ, ಸಿಬ್ಬಂದಿಗೆ ಖಡಕ್​​ ಎಚ್ಚರಿಕೆ ಕೊಟ್ಟ KSRTC

2012ರಲ್ಲಿ ತಡರಾತ್ರಿ 2 ಗಂಟೆವರೆಗೂ ಮೀಟಿಂಗ್​ ನಡೆದಿದೆ. ಸಾರಿಗೆ ಸಚಿವರ ಅಧ್ಯಕ್ಷತೆಯ ಸಭೆಗೆ ನಾವು ಸಿದ್ಧರಾಗಿದ್ದೇವೆ. ಮುಖ್ಯಮಂತ್ರಿ ಸಭೆ ನಡೆಸಿದ್ರೂ ನಾವು ಸಭೆಗೆ ಬರುತ್ತೇವೆ. ಸರ್ಕಾರದ ಸೂಚನೆಗಾಗಿ ಜಂಟಿ ಕ್ರಿಯಾ ಸಮಿತಿ ಕಾಯುತ್ತಿದೆ. ಕೋರ್ಟ್​​ ಹೇಳಿದರೂ ನಾವು ಅದರ ಬಗ್ಗೆ ಚರ್ಚೆ ಮಾಡ್ತೇವೆ. ಈ ಬಾರಿ ಸರ್ಕಾರ ಏನೇ ಬೆದರಿಕೆ ಹಾಕಿದ್ರೂ ನಾವು ಬಗ್ಗಲ್ಲ. ಎಲ್ಲ ಸಾರಿಗೆ ಮುಖಂಡರು ಒಗ್ಗಟ್ಟಿನಿಂದ ಭಾಗವಹಿಸಬೇಕಿದ್ದು, ಸರ್ಕಾರಕ್ಕೆ ನಾವು ಯಾವುದೇ ಡೆಡ್​ಲೈನ್​ ಕೊಡುವುದಿಲ್ಲ ಎಂದು ಮುಖಂಡರು ತಿಳಿಸಿದ್ದಾರೆ.

ನಾಳೆ ಸುದ್ದಿಗೋಷ್ಠಿ

ಈ ನಡುವೆ ನಾಳೆ (ಮೇ 19) ಬೆಳಿಗ್ಗೆ 11.30ಕ್ಕೆ ಸಂಪಂಗಿರಾಮನಗರದ ಕಚೇರಿಯಲ್ಲಿ ಜಂಟಿ ಕ್ರಿಯಾ ಸಮಿತಿಯ CITU ರಾಜ್ಯ ಸಮಿತಿ ಬಣದಿಂದ ಸುದ್ದಿಗೋಷ್ಠಿ ಕೂಡ ಕರೆಯಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:17 pm, Mon, 18 May 26

Source link

ಶಿಕ್ಷಣ ಇಲಾಖೆಯಲ್ಲಿ ಸರ್ಜರಿ: 5 ವರ್ಷ ಮೇಲ್ಪಟ್ಟ ನೌಕರರಿಗೆ ಕಡ್ಡಾಯ ವರ್ಗಾವಣೆ; ಡೆಡ್‌ಲೈನ್ ಸಹ ಫಿಕ್ಸ್! – Kannada News | Major Reshuffle in Karnataka Education Department: Mandatory Transfer for Employees Serving Over 5 Years, Deadline Fixed

ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)Image Credit source: tv9 kannada

ಧಾರವಾಡ, ಮೇ 18: ರಾಜ್ಯದಲ್ಲಿನ (Karnataka) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಖ್ಯಸ್ಥರುಗಳ ಕಚೇರಿಯಲ್ಲಿ ಬೀಡುಬಿಟ್ಟಿರುವ ನೌಕರರನ್ನು ಬದಲಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. 5 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದವರ ಪಟ್ಟಿ ಸಿದ್ಧಪಡಿಸಿ ಮೇ 28ರೊಳಗಾಗಿ ಕಡ್ಡಾಯ ವರ್ಗಾವಣೆಗೆ (transfer) ಸೂಚಿಸುವ ಮೂಲಕ ಶಿಕ್ಷಣ ಇಲಾಖೆ ದಿಟ್ಟ ಹೆಜ್ಜೆ ಇಟ್ಟಿದೆ. ಹೀಗಾಗಿ ಧಾರವಾಡ ಆಯುಕ್ತಾಲಯ ವ್ಯಾಪ್ತಿಯ ಬರೋಬ್ಬರಿ 1,026 ಬೋಧಕೇತರ ನೌಕರರಿಗೆ ಈಗ ದೊಡ್ಡ ಶಾಕ್ ಎದುರಾಗಿದೆ.

ಮುಖ್ಯಾಂಶಗಳು

  • ಶಿಕ್ಷಣ ಇಲಾಖೆಯ ಇತಿಹಾಸದಲ್ಲೇ ದಿಟ್ಟ ಹೆಜ್ಜೆ
  • ಧಾರವಾಡ ಆಯುಕ್ತಾಲಯವೊಂದರಲ್ಲೇ 1,026 ನೌಕರರ ವರ್ಗಾವಣೆ ಫಿಕ್ಸ್​​
  • ಸರಕಾರದ ನಿರ್ಧಾರಕ್ಕೆ ವ್ಯಾಪಕ ಪ್ರಶಂಸೆ

ಡಿಡಿಪಿಐ, ಅಪರ ಆಯುಕ್ತರ ಕಚೇರಿ ಸೇರಿದಂತೆ ಇಲಾಖೆ ಮುಖ್ಯಸ್ಥರುಗಳ ಕಚೇರಿಯಲ್ಲಿ 15ಕ್ಕೂ ಹೆಚ್ಚು ವರ್ಷಗಳಿಂದ ಸೂಪರಡೆಂಟ್, ಎಫ್‌ಡಿಎ, ಎಸ್‌ಡಿಎ, ಪ್ಯೂನ್ ಸೇರಿದಂತೆ ಎ,ಬಿ,ಸಿ,ಡಿ ವರ್ಗದ ನೌಕರರು ಸೇವೆ ಸಲ್ಲಿಸುತ್ತಿದ್ದರು. ಇದರಿಂದ ಪಾರದರ್ಶಕ ಆಡಳಿತ, ತ್ವರಿತ ಕೆಲಸಗಳಿಗೆ ಅಡ್ಡಿ ಆಗಿತ್ತು. ಕೆಲವೆಡೆ ಭ್ರಷ್ಟಾಚಾರದ ಆರೋಪಗಳೂ ಕೇಳಿ ಬಂದಿದ್ದವು. ಹೀಗಾಗಿ ಸರಕಾರ ಅಂಥವರನ್ನು ಗುರುತಿಸಿ ಕಡ್ಡಾಯ ವರ್ಗಾವಣೆಗೆ ಅಸ್ತು ಎಂದಿದೆ. ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಈ ಕುರಿತಂತೆ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಸರ್ಕಾರಿ ನೌಕರರ 2026-27ನೇ ಸಾಲಿನ ವರ್ಗಾವಣೆ ಮಾರ್ಗಸೂಚಿ ಪ್ರಕಟ

ಮುಖ್ಯಸ್ಥರ ಕಚೇರಿಗಳಲ್ಲಿ 5 ವರ್ಷ ಪೂರ್ಣಗೊಳಿಸಿದ ಸಿ.ಡಿ ವೃಂದದ ನೌಕರರನ್ನು 2026-27ರ ಶೈಕ್ಷಣಿಕ ವರ್ಷದ ಆರಂಭದೊಳಗಡೆ ಕೌನ್ಸಿಲಿಂಗ್ ಮೂಲಕ ವರ್ಗಾಯಿಸಬೇಕು. ಈ ಪ್ರಕ್ರಿಯೆ ಇಲಾಖಾ ಮುಖ್ಯಸ್ಥರ ಹಂತದಲ್ಲಿಯೇ ಮಾಡಿ ವರ್ಗಾವಣೆ ಆದೇಶಗಳನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಇನ್ನು 5 ವರ್ಷ ಸೇವೆ ಪೂರ್ಣಗೊಂಡು, ವರ್ಗಾವಣೆಗೊಳಿಸಿದ್ದರೂ ಪುನಃ ಕೇಂದ್ರ ಕಚೇರಿಗೆ ಹಿಂದಿರುಗಿರುವ ಮತ್ತು ಪ್ರಸ್ತುತ 5 ವರ್ಷಗಳ ಸೇವೆ ಪೂರ್ಣಗೊಳಿಸಿದವರ ಕಡ್ಡಾಯ ವರ್ಗಾವಣೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚಿಸಿದ್ದಾರೆ. ಅದರಂತೆ ಎಲ್ಲ ಮುಖ್ಯಸ್ಥರ ಕಚೇರಿಯಲ್ಲಿ ವರ್ಗಾವಣೆ ಪಟ್ಟಿ ಸಜ್ಜುಗೊಳ್ಳುತ್ತಿದೆ. ರಾಜ್ಯಾದ್ಯಂತ ಸಾವಿರಾರು ನೌಕರರು ಈ ರೀತಿ ದಶಕಗಳಿಂದ ಒಂದೇ ಕಡೆ ಸೇವೆ ಸಲ್ಲಿಸುತ್ತಿರುವ ಅಂದಾಜಿದೆ.

ಧಾರವಾಡ ವಿಭಾಗದಲ್ಲೇ 1,026 ನೌಕರರ ಪತ್ತೆ

ಶಾಲಾ ಶಿಕ್ಷಣ ಇಲಾಖೆ ಧಾರವಾಡ ಅಪರ ಆಯುಕ್ತರ ಕಚೇರಿಯಲ್ಲಿ 1,026 ಬೋಧಕೇತರ ನೌಕರರು 7-15 ವರ್ಷಗಳಿಂದ ಒಂದೆ ಕಡೆ ಕರ್ತವ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಆಯುಕ್ತಾಲಯ ಪಟ್ಟಿ ಸಿದ್ಧಪಡಿಸಿತ್ತಾದರೂ ಹಲವರು ಅದೇ ಸ್ಥಳದಲ್ಲಿ ಮುಂದುವರಿಯಲು ಪ್ರಭಾವ ಬಳಸುತ್ತಿದ್ದರು. ಆದರೆ ಈ ನೌಕರರು ಸಾರ್ವಜನಿಕರು ಮತ್ತು ಶಿಕ್ಷಕರಿಗೆ ಸ್ಪಂದಿಸುತ್ತಿಲ್ಲ. ಕಡತ ವಿಲೇವಾರಿ ವಿಳಂಬ ಆಗುತ್ತಿದೆ. ಭ್ರಷ್ಟಾಚಾರಗಳೂ ನಡೆಯುತ್ತಿವೆ ಎಂಬ ದೂರುಗಳು ಬಂದಿದ್ದರಿಂದ 2025 ಜುಲೈನಲ್ಲಿ ಸ್ವತಃ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಪರ ಆಯುಕ್ತರಿಗೆ ಪತ್ರ ಬರೆದಿದ್ದರು. ಇಷ್ಟಾದರೂ ಕೆಲವರು ಅಲ್ಲಿಯೇ ಉಳಿದುಕೊಂಡಿದ್ದರು.

ಜನಸಾಮಾನ್ಯರಿಂದ ವ್ಯಾಪಕ ಪ್ರಶಂಸೆ

ಇದೀಗ ಸರಕಾರವೇ ರಾಜ್ಯದ ಎಲ್ಲ ಮುಖ್ಯಸ್ಥರ ಕಚೇರಿಗಳಲ್ಲಿ 5 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರ ವರ್ಗಾವಣೆಯನ್ನು ಕಡ್ಡಾಯಗೊಳಿಸಿದೆ. ಸರಕಾರದ ಈ ನಿರ್ಧಾರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಒಂದೇ ಕಡೆ ಹಲವಾರು ವರ್ಷಗಳ ಕಾಲ ಕೆಲಸ ಮಾಡುವ ಸಿಬ್ಬಂದಿ, ಸಾಕಷ್ಟು ಭ್ರಷ್ಟಾಚಾರ ಮಾಡುತ್ತಾರೆ ಅನ್ನೋದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಹೀಗಾಗಿ ಸರಕಾರದ ನಿರ್ಧಾರವನ್ನು ನಾಗರಿಕರು ಸ್ವಾಗತಿಸಿದ್ಧಾರೆ.

ಇದನ್ನೂ ಓದಿ: ಖಾಲಿ ಹುದ್ದೆಗಳ ಭರ್ತಿಗೆ ಹೋರಾಟಕ್ಕಿಳಿದವರ ಬಂಧನ: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಬಿತ್ತು ಬ್ರೇಕ್

ಇಲಾಖೆ ಮುಖ್ಯಸ್ಥರ ಕಚೇರಿಗಳಲ್ಲಿ 5 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ನೌಕರರನ್ನು ಕಡ್ಡಾಯವಾಗಿ ವರ್ಗಾವಣೆಗೊಳಿಸಲು ಸರಕಾರ ಸೂಚನೆ ನೀಡಿದೆ. ಧಾರವಾಡ ಆಯುಕ್ತಾಲಯ ವ್ಯಾಪ್ತಿಯಲ್ಲಿ ಅಂಥವರ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಈಗ ಸರಕಾರದ ನಿರ್ದೇಶನದ ಅನ್ವಯ 20 ದಿನಗಳ ಒಳಗಾಗಿ ವರ್ಗಾವಣೆಗೆ ಕ್ರಮ ಜರುಗಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಒಟ್ಟಿನಲ್ಲಿ ಹಲವಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕೂತಿದ್ದ ಅನೇಕ ನೌಕರರು ಇದೀಗ ಬೇರೆ ಬೇರೆ ಕಡೆಗೆ ವರ್ಗಾವಣೆಯಾಗುವುದು ಪಕ್ಕಾ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On – 8:11 pm, Mon, 18 May 26

Source link

ನಾರ್ವೆಯಲ್ಲಿ ಭಾರತೀಯ ವಲಸಿಗರಿಂದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ – Kannada News | PM Modi reaches Norway Receives Grand Welcome from Indian Community in Oslo

ನವದೆಹಲಿ, ಮೇ 18: ಪ್ರಧಾನಿ ನರೇಂದ್ರ ಮೋದಿ (PM Modi) ಇಂದು ಸ್ವೀಡನ್ ಪ್ರವಾಸ ಮುಗಿಸಿ ನಾರ್ವೆಗೆ ಪ್ರಯಾಣ ಬೆಳೆಸಿದ್ದಾರೆ. ಓಸ್ಲೋದಲ್ಲಿ ಭಾರತೀಯ ಸಮುದಾಯ ಪ್ರಧಾನಿ ಮೋದಿಗೆ ಶಾಸ್ತ್ರೀಯ ನೃತ್ಯ, ಸಂಗೀತದ ಮೂಲಕ ಸ್ವಾಗತ ನೀಡಿತು. ಸತ್ರಿಯಾದಿಂದ ಭರತನಾಟ್ಯದವರೆಗೆ, ಕೂಚಿಪುಡಿಯಿಂದ ಒಡಿಸ್ಸಿಯವರೆಗೆ, ಕಥಕ್‌ನಿಂದ ಮೋಹಿನಿಯಾಟ್ಟಂವರೆಗೆ, ಪ್ರತಿಯೊಂದು ನೃತ್ಯ ಪ್ರಕಾರವನ್ನೂ ನಾರ್ವೆಯಲ್ಲಿ ಪ್ರದರ್ಶಿಸಲಾಯಿತು.

ತಮ್ಮ ಯುರೋಪ್ ರಾಜತಾಂತ್ರಿಕ ಪ್ರವಾಸದ ಭಾಗವಾಗಿ ನರೇಂದ್ರ ಮೋದಿ ಅವರು ಓಸ್ಲೋ ತಲುಪಿದ್ದು, ನಾರ್ವೆಯಲ್ಲಿರುವ ಭಾರತೀಯ ಸಮುದಾಯದಿಂದ ಭವ್ಯ ಸಾಂಸ್ಕೃತಿಕ ಸ್ವಾಗತವನ್ನು ಪಡೆದರು. ಸಾಂಪ್ರದಾಯಿಕ ಭಾರತೀಯ ಉಡುಪುಗಳನ್ನು ಧರಿಸಿದ್ದ ಮಕ್ಕಳು ಸಾಂಸ್ಕೃತಿಕ ನೃತ್ಯಗಳನ್ನು ಪ್ರದರ್ಶಿಸಿ, ಹೂಗುಚ್ಛಗಳನ್ನು ನೀಡಿ ಹಾಗೂ ದೇಶಭಕ್ತಿಯ ಉತ್ಸಾಹದೊಂದಿಗೆ ಪ್ರಧಾನಮಂತ್ರಿಯವರನ್ನು ಬರಮಾಡಿಕೊಂಡರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TV9 Kannada News Live: ಕರ್ನಾಟಕದಲ್ಲಿ ಮಳೆ, ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು; ಸಾಕಾನೆಗಳ ಕಾದಾಟದಲ್ಲಿ ಮಹಿಳೆ ಸಾವು – Kannada News | TV9 Kannada News Live: Karnataka Rain, Bengaluru Mumbai Vande Bharat Sleeper, Elephant Attack Tragedy

ಸುದ್ದಿ ಸುರಳಿ (ಎಐ ಚಿತ್ರ)Image Credit source: tv9 kannada

ಬೆಂಗಳೂರು, ಮೇ 18: ಕರ್ನಾಟಕದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ಭಾರೀ ಮಳೆ (Rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುಡುಗು-ಮಿಂಚು ಹಾಗೂ ಬಿರುಗಾಳಿ ಸಹಿತ ವಾತಾವರಣ ಮುಂದುವರಿಯಲಿದೆ. ಹೀಗಾಗಿ ಮೇ 19ರಂದು ರಾಜ್ಯದ (Karnataka) ಕೊಪ್ಪಳ, ಧಾರವಾಡ, ಗದಗ, ವಿಜಯನಗರ, ಹಾವೇರಿ, ದಾವಣಗೆರೆ ಮತ್ತು ಶಿವಮೊಗ್ಗ ಸೇರಿದಂತೆ ಒಟ್ಟು 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಮುಖ್ಯಾಂಶಗಳು

  • ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​​
  • ಶೀಘ್ರದಲ್ಲೇ ಬರಲಿದೆ ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು
  • ದುಬಾರೆ ಆನೆ ಶಿಬಿರದಲ್ಲಿ ದುರಂತ: ಮಹಿಳಾ ಪ್ರವಾಸಿ ಸಾವು

ಬೀದರ್ ಮತ್ತು ಕಲಬುರಗಿ ಹೊರತುಪಡಿಸಿ ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಬಹುತೇಕ ಜಿಲ್ಲೆಗಳಲ್ಲೂ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಮೇ 21ರವರೆಗೆ ಮಳೆಯ ಅಬ್ಬರ ಇರಲಿದ್ದು, ದಕ್ಷಿಣ ಒಳನಾಡಿನಲ್ಲೂ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಬೆಂಗಳೂರಿನಲ್ಲಿ ಸಂಜೆ ವೇಳೆ ಮಳೆಯಾಗಲಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.

ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು

ಬೆಂಗಳೂರು ಮತ್ತು ಮುಂಬೈ ನಡುವೆ ಶೀಘ್ರದಲ್ಲೇ ಅತ್ಯಾಧುನಿಕ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಆರಂಭವಾಗಲಿದೆ. ಪ್ರಸ್ತುತ ಇರುವ ಚೇರ್ ಕಾರ್ ರೈಲುಗಳಿಗಿಂತ ಭಿನ್ನವಾಗಿದ್ದು, ದೂರದ ಊರುಗಳಿಗೆ ಆರಾಮದಾಯಕವಾಗಿ ರಾತ್ರಿ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸುವ ಈ ರೈಲು ಉಭಯ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಉಳಿಸಲಿದೆ.

ಇದನ್ನೂ ಓದಿ: ಬೆಂಗಳೂರು-ಮುಂಬೈ ನಡುವೆ ಶೀಘ್ರದಲ್ಲೇ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ; ಏನಿದರ ವಿಶೇಷತೆ?

ಇದಕ್ಕಾಗಿ ಬೆಂಗಳೂರಿನ ಥಣಿಸಂದ್ರದಲ್ಲಿ 270 ಕೋಟಿ ರೂ. ವೆಚ್ಚದ ವಿಶೇಷ ನಿರ್ವಹಣಾ ಡಿಪೋ ಸಿದ್ಧವಾಗುತ್ತಿದೆ. ಐಷಾರಾಮಿ ಬರ್ತ್‌ಗಳು, ಸೆನ್ಸಾರ್ ಲೈಟಿಂಗ್, ಶಬ್ದ ನಿಯಂತ್ರಣ ತಂತ್ರಜ್ಞಾನ ಹಾಗೂ ಆಧುನಿಕ ಶೌಚಾಲಯಗಳನ್ನು ಹೊಂದಿರುವ ಈ ರೈಲು, ಆರ್ಥಿಕ ಮತ್ತು ಐಟಿ ರಾಜಧಾನಿಗಳ ನಡುವೆ ಸಂಚರಿಸುವ ಉದ್ಯಮಿಗಳು ಹಾಗೂ ಉದ್ಯೋಗಿಗಳಿಗೆ ವರದಾನವಾಗಲಿದೆ.

ದುಬಾರೆ ಆನೆ ಶಿಬಿರದಲ್ಲೇ ಘೋರ ದುರಂತ: ಮದಗಜಗಳ ಕಾದಾಟಕ್ಕೆ ಮಹಿಳೆ ಸಾವು

ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ಕಾದಾಟದಲ್ಲಿ ಮಹಿಳಾ ಪ್ರವಾಸಿಯೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಶಿಬಿರದಲ್ಲಿದ್ದ ಸಾಕಾನೆಗಳಾದ ಕಂಜನ್​​ ಮತ್ತು ಮಾರ್ತಾಂಡ ಕಾದಾಟ ಮಾಡಿವೆ. ಈ ವೇಳೆ ಆನೆಗಳು ಪ್ರವಾಸಿಗರು ನಿಂತಿದ್ದ ಜಾಗದತ್ತ ನುಗ್ಗಿ ಬಂದಿವೆ. ಇದರಿಂದ ಗಾಬರಿಗೊಂಡ ಪ್ರವಾಸಿಗರು ಪ್ರಾಣಭಯದಿಂದ ಓಡಲು ಯತ್ನಿಸಿದ್ದಾರೆ. ಆದರೆ ದುರದೃಷ್ಟವಶಾತ್​​ ಮಹಿಳೆ ಮೇಲೆ ಮಾರ್ತಾಂಡ ಆನೆ ಬಿದ್ದಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ದುಬಾರೆ ಶಿಬಿರದಲ್ಲಿ ಸಾಕಾನೆಗಳ ಕಾದಾಟದ ವೇಳೆ ಅವುಗಳ ನಡುವೆ ಸಿಲುಕಿ ಮಹಿಳೆ ಸಾವು

ಘಟನೆಯಲ್ಲಿ ಮತ್ತಷ್ಟು ಜನರಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರಂತದಿಂದಾಗಿ ದುಬಾರೆ ಆನೆ ಶಿಬಿರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:21 pm, Mon, 18 May 26

Source link

CSK vs SRH: ತವರಿನ ಕೊನೆಯ ಪಂದ್ಯದಲ್ಲೂ ಕಣಕ್ಕಿಳಿಯದ ಧೋನಿ; ನಾಯಕ ರುತುರಾಜ್ ಹೇಳಿದ್ದೇನು? – Kannada News | IPL 2026: MS Dhoni Misses CSK vs SRH; Gaikwad Confirms Injury, Hopes for Return

ಐಪಿಎಲ್ 2026 ರ 63 ನೇ ಪಂದ್ಯದಲ್ಲಿ ಸಿಎಸ್​ಕೆ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ತಂಡಗಳು ಪರಸ್ಪರ ಮುಖಾಮುಖಿಯಾಗಿವೆ. ಈ ಪಂದ್ಯ ಸಿಎಸ್​ಕೆಯ ತವರು ಮೈದಾನವಾದ ಎಂಎ ಚಿದಂಬರಂ ಮೈದಾನದಲ್ಲಿ ನಡೆಯುತ್ತಿದೆ. ಇದು ತವರಿನಲ್ಲಿ ಸಿಎಸ್​ಕೆ ತಂಡದ ಕೊನೆಯ ಪಂದ್ಯವಾಗಿದೆ. ಈ ಪಂದ್ಯದ ಬಳಿಕ ಈ ಆವೃತ್ತಿಯಲ್ಲಿ ಸಿಎಸ್​ಕೆ ಈ ಮೈದಾನದಲ್ಲಿ ಯಾವುದೇ ಪಂದ್ಯವನ್ನು ಆಡುವುದಿಲ್ಲ. ಹೀಗಾಗಿ ಸಿಎಸ್​ಕೆ ತಂಡದ ಜೀವಾಳ ಎನಿಸಿಕೊಂಡಿರುವ ಮಾಜಿ ನಾಯಕ ಎಂಎಸ್ ಧೋನಿ ಈ ಪಂದ್ಯದಲ್ಲಾದರೂ ಆಡುತ್ತಾರಾ ಎಂದು ಕಾದು ಕುಳಿತಿದ್ದರು. ಆದರೆ ಈ ಪಂದ್ಯದಲ್ಲೂ ಅಭಿಮಾನಿಗಳಿಗೆ ನಿರಾಶೆ ಎದುರಾಗಿದೆ. ಧೋನಿ ತಂಡದೊಂದಿಗೆ ಕ್ರೀಡಾಂಗಣಕ್ಕೆ ಬಂದಿದ್ದರೂ, ಈ ಪಂದ್ಯವನ್ನು ಆಡುತ್ತಿಲ್ಲ.

ವಾಸ್ತವವಾಗಿ ಧೋನಿಗೆ ಇದು ಕೊನೆಯ ಐಪಿಎಲ್ ಸೀಸನ್ ಎಂಬ ಮಾತು ಸೀಸನ್ ಆರಂಭದಿಂದಲೂ ಕೇಳಿಬರುತ್ತಿದೆ. ಹೀಗಾಗಿ ಧೋನಿಗೆ ಅದ್ಧೂರಿ ವಿದಾಯ ಹೇಳಲು ಅಭಿಮಾನಿಗಳು ಎದುರು ನೋಡುತ್ತಿದ್ದರು. ಆದರೆ ಸೀಸನ್ ಆರಂಭಕ್ಕೂ ಮುನ್ನವೇ ಗಾಯಕ್ಕೆ ತುತ್ತಾದ ಧೋನಿ ಇದುವರೆಗೂ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಹೀಗಾಗಿ ಸಿಎಸ್​ಕೆ ತನ್ನ ತವರಿನಲ್ಲಿ ಕೊನೆಯ ಲೀಗ್ ಪಂದ್ಯವನ್ನು ಇಂದು ಆಡುತ್ತಿದ್ದು, ಈ ಪಂದ್ಯದಲ್ಲಿ ಧೋನಿ ಆಡಬಹುದು ಎಂಬ ನಿರೀಕ್ಷೆಗಳಿದ್ದವು. ಆದರೆ ಆ ನಿರೀಕ್ಷೆಗಳೆಲ್ಲ ಹುಸಿಯಾಗಿವೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಬಳಿಕ ಮಾತನಾಡಿದ ಸಿಎಸ್​ಕೆ ನಾಯಕ ರುತುರಾಜ್ ಗಾಯಕ್ವಾಡ್, ಧೋನಿ ತಂಡದೊಂದಿಗೆ ಕ್ರೀಡಾಂಗಣಕ್ಕೆ ಬಂದಿದ್ದಾರೆ. ಆದರೆ ಅವರು ಪ್ಲೇಯಿಂಗ್ 11ನಲ್ಲಿ ಇಲ್ಲ. ಧೋನಿ ಗಾಯದಿಂದ ಇನ್ನು ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಈ ಪಂದ್ಯವನ್ನು ಆಡುತ್ತಿಲ್ಲ. ಆದಾಗ್ಯೂ ಅವರು ಈ ಆವೃತ್ತಿಯ ಕೊನೆಯ ಲೀಗ್ ಪಂದ್ಯದಲ್ಲಿ ಆಡುತ್ತಾರೆ. ನಾವು ಈ ಪಂದ್ಯವನ್ನು ಗೆಲ್ಲುತ್ತೇವೆ ಮತ್ತು ಧೋನಿ ಅಂತಿಮ ಪಂದ್ಯದಲ್ಲಿ ಆಡುತ್ತಾರೆ ಎಂದು ಆಶಿಸುತ್ತೇವೆ ಎಂದಿದ್ದಾರೆ.

ಉಭಯ ತಂಡಗಳು

ಸಿಎಸ್​ಕೆ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್ (ನಾಯಕ), ಉರ್ವಿಲ್ ಪಟೇಲ್, ಕಾರ್ತಿಕ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಪ್ರಶಾಂತ್ ವೀರ್, ಅಕೇಲ್ ಹೊಸೈನ್, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್, ಸ್ಪೆನ್ಸರ್ ಜಾನ್ಸನ್.

ಸನ್​ರೈಸರ್ಸ್ ಹೈದರಾಬಾದ್ ತಂಡ:​ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹೆನ್ರಿಚ್ ಕ್ಲಾಸೆನ್, ಸಲೀಲ್ ಅರೋರಾ, ಸ್ಮರಣ್ ರವಿಚಂದ್ರನ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್ (ನಾಯಕ), ಶಿವಂಗ್ ಕುಮಾರ್, ಇಶಾನ್ ಮಾಲಿಂಗ, ಸಾಕಿಬ್ ಹುಸೇನ್, ಪ್ರಫುಲ್ ಹಿಂಗೆ.

Source link

ನಟಿ ಕೀರ್ತಿ ಸುರೇಶ್​ಗೆ ಬಾಡಿ ಶೇಮಿಂಗ್; ಸರ್ಜರಿ ವದಂತಿಗಳಿಗೆ ಖಡಕ್ ತಿರುಗೇಟು – Kannada News | Keerthy Suresh addresses body shaming and surgery rumours on instagram post

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಅವರು ಚಿತ್ರರಂಗದಲ್ಲಿ ತಾವು ಎದುರಿಸಿದ ಬಾಡಿ ಶೇಮಿಂಗ್ (Body Shaming) ಮತ್ತು ಪ್ಲಾಸ್ಟಿಕ್ ಸರ್ಜರಿ ವದಂತಿಗಳ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮನದ ಮಾತುಗಳನ್ನು ಹೊರಹಾಕಿದ್ದಾರೆ. ಸದಾ ಸೌಮ್ಯವಾಗಿ ಕಾಣಿಸಿಕೊಳ್ಳುವ ನಟಿ, ಇತ್ತೀಚೆಗೆ ತಮಗಾದ ದೈಹಿಕ ಮತ್ತು ಮಾನಸಿಕ ಹಿನ್ನಡೆಯ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ. ಜಿಮ್‌ನಲ್ಲಿ ತಾವು ಕಷ್ಟಪಟ್ಟು ವರ್ಕೌಟ್ ಮಾಡುತ್ತಿರುವ ಹಳೆಯ ವಿಡಿಯೋವನ್ನು ಹಂಚಿಕೊಂಡಿರುವ ಕೀರ್ತಿ ಸುರೇಶ್ (Keerthy Suresh), ‘ಫಿಟ್‌ನೆಸ್ ಎಂಬುದು ನನ್ನ ಜೀವನದ ಅತಿ ದೊಡ್ಡ ಗುರು’ ಎಂದು ಬರೆದುಕೊಂಡಿದ್ದಾರೆ.

‘2013ರಲ್ಲಿ ನಾನು ನಟಿಯಾಗಿ ಕೆರಿಯರ್ ಆರಂಭಿಸಿದಾಗ ನನಗೇನೂ ತಿಳಿಯದ ಮಗುವಿನಂತಿದ್ದೆ. ಜಿಮ್ ನನಗೆ ಒಗ್ಗುವುದಿಲ್ಲ ಎಂದೇ ನಾನು ಭಾವಿಸಿದ್ದೆ. ಆದರೆ 2018ರ ಮಹಾನಟಿ ಸಿನಿಮಾ ಮುಗಿದ ಬಳಿಕ ಸಿಕ್ಕ ಬಿಡುವಿನಲ್ಲಿ, ನಾನೇಕೆ ಜಿಮ್​ಗೆ ಹೋಗಬಾರದು ಎಂದು ಯೋಚಿಸಿದೆ’ ಎಂದು ಕೀರ್ತಿ ಬರೆದಿದ್ದಾರೆ. ಕಠಿಣ ಶ್ರಮವಹಿಸಿ ಕೀರ್ತಿ ಅವರು ಕೇವಲ 9 ತಿಂಗಳಲ್ಲಿ ಬರೋಬ್ಬರಿ 10 ಕೆಜಿ ತೂಕ ಇಳಿಸಿಕೊಂಡಿದ್ದರು.

ತೂಕ ಇಳಿಸಿಕೊಂಡು ಫಿಟ್ ಆದಾಗ ತಮಗೆ ಎದುರಾದ ಕಹಿ ಅನುಭವವನ್ನು ಹಂಚಿಕೊಂಡ ಕೀರ್ತಿ, ‘ನಾನು ತೂಕ ಇಳಿಸಿಕೊಂಡಾಗ ಜನರು ನನ್ನನ್ನು ವೀಕ್ ಎಂದು ಕರೆದರು. ಅಷ್ಟೇ ಅಲ್ಲದೇ, ನಾನು ಸರ್ಜರಿ ಮಾಡಿಸಿಕೊಂಡಿದ್ದೇನೆ ಎಂಬ ವದಂತಿ ಹಬ್ಬಿಸಿದರು. ನಾನು ನನ್ನ ಮುಖ ಸೇರಿದಂತೆ ಎಲ್ಲವನ್ನೂ ನೈಸರ್ಗಿಕವಾಗಿಯೇ ಇಟ್ಟುಕೊಂಡಿದ್ದೇನೆ. ಹೀಗಿರುವಾಗ ನನ್ನ ಕಠಿಣ ಶ್ರಮಕ್ಕೆ ಸರ್ಜರಿಯ ಪಟ್ಟ ಕಟ್ಟಿದಾಗ ನಿಜಕ್ಕೂ ತುಂಬಾ ಬೇಸರವಾಯಿತು’ ಎಂದು ತಮಗಾದ ನೋವನ್ನು ತೋಡಿಕೊಂಡಿದ್ದಾರೆ. ಜಿಮ್ ಜೊತೆಗೆ 2020ರಲ್ಲಿ ತಾವು ಯೋಗಾಭ್ಯಾಸ ಶುರು ಮಾಡಿದ್ದು, ಅದು ತಮ್ಮ ಜೀವನವನ್ನೇ ಬದಲಾಯಿಸಿತು ಎಂದು ಅವರು ಹೇಳಿದ್ದಾರೆ.

‘ಇಂದು ನಾನು ಫಿಟ್ ಆಗಿರುವುದಕ್ಕೆ ನನಗೆ ಹೆಮ್ಮೆಯಿದೆ. ಆದರೆ ಈಗಲೂ ಕೆಲವರು ಬಂದು, ನೀನು ದಪ್ಪಗಿದ್ದಾಗ ಚೆನ್ನಾಗಿ ಕಾಣುತ್ತಿದ್ದೆ ಎಂದು ಬಿಟ್ಟಿ ಸಲಹೆ ನೀಡುತ್ತಾರೆ. ನಾವು ದಪ್ಪಗಿದ್ದರೆ ಫಿಟ್ ಆಗಿ ಎಂದೂ, ತೆಳ್ಳಗಾದರೆ ದಪ್ಪಗಾಗಿ ಎಂದೂ ಜನರು ಹೇಳುತ್ತಾರೆ. ಈ ಜಗತ್ತು ಹೇಗೆ ವರ್ತಿಸುತ್ತದೆ ಎಂಬುದೇ ನನಗೆ ಅರ್ಥವಾಗುವುದಿಲ್ಲ’ ಎಂದು ಕೀರ್ತಿ ಸುರೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ರೌಡಿ ಜನಾರ್ದನ’ ವಿಜಯ್ ದೇವರಕೊಂಡ ಎದೆ ಮೇಲೆ ಕಾಲಿಟ್ಟ ನಟಿ ಕೀರ್ತಿ ಸುರೇಶ್

ಇದೇ ಪೋಸ್ಟ್‌ನಲ್ಲಿ ಇತ್ತೀಚಿನ ತಮ್ಮ ಆರೋಗ್ಯದ ಏರುಪೇರಿನ ಬಗ್ಗೆಯೂ ಕೀರ್ತಿ ಸುಳಿವು ನೀಡಿದ್ದಾರೆ. ‘ಕಳೆದ ಕೆಲವು ತಿಂಗಳುಗಳಿಂದ ನಾನು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದೆ. ಇತ್ತೀಚೆಗೆ ನಾನು ದೈಹಿಕ ಮತ್ತು ಮಾನಸಿಕವಾಗಿ ದೊಡ್ಡ ಹಿನ್ನಡೆ ಅನುಭವಿಸಿದ್ದೇನೆ. ಆದರೆ ಈ ಪ್ರಯಾಣ ನನಗೆ ನೆನಪಿಸುವುದೇನೆಂದರೆ, ಒಂದು ವೇಳೆ ನಾನು ಎಲ್ಲಾದರೂ ಬಿದ್ದರೆ, ಕೊಂಚ ವಿರಾಮ ತೆಗೆದುಕೊಳ್ಳಬಹುದೇ ಹೊರತು, ಯಾವುದೇ ಕಾರಣಕ್ಕೂ ನಾನು ಸೋಲೊಪ್ಪಿಕೊಳ್ಳುವುದಿಲ್ಲ ’ ಎಂದು ಸವಾಲೊಡ್ಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Viral: ಬೆಂಗಳೂರಿನಲ್ಲಿ 38 ಲಕ್ಷ ರೂ ಸಂಬಳದ ಜಾಬ್ ಆಫರ್ ತಿರಸ್ಕರಿಸಿದ ವ್ಯಕ್ತಿ – Kannada News | Hyderabad man quits Rs 38 lakh salary job in Bengaluru

ಉದ್ಯೋಗ ಎಲ್ಲರಿಗೂ ಅವಶ್ಯಕ. ಹೀಗಾಗಿ ಎಷ್ಟೋ ಯುವಕರು ಊರು ಬಿಟ್ಟು ದೂರದ ಬೆಂಗಳೂರು, ಮುಂಬೈ ಹೀಗೆ ಇತರ ಊರುಗಳಿಗೆ ಹೋಗ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯೊಬ್ಬರು ಒಂದೊಳ್ಳೆ ಉದ್ಯೋಗ ಆಫರ್ ತಿರಸ್ಕರಿಸಿದ್ದಾರೆ. ಬೆಂಗಳೂರಿನಲ್ಲಿ (Bengaluru) ಅಧಿಕ ಸಂಬಳದ ಉದ್ಯೋಗ ಆಯ್ಕೆ ಮಾಡಿಕೊಳ್ಳುವ ಬದಲು ಹೈದರಾಬಾದ್‌ನಲ್ಲಿ (Hyderabad) ಕಡಿಮೆ ಸಂಬಳದ ಉದ್ಯೋಗ ಆಯ್ಕೆ ಮಾಡಿಕೊಂಡಿದ್ದಾರೆ. ಈ ವ್ಯಕ್ತಿಯ ಪೋಸ್ಟ್ ಆನ್ಲೈನ್ ನಲ್ಲಿ ಚರ್ಚೆ ಹುಟ್ಟುಹಾಕಿದೆ.

ಮದನ್ ಮೋಹನ್ (Madan Mohan) ಎಂಬ ವ್ಯಕ್ತಿ ತನ್ನ ಎಕ್ಸ್ ಖಾತೆಯಲ್ಲಿ ಉದ್ಯೋಗ ಆಯ್ಕೆಯ ಅನುಭವ ಹಂಚಿಕೊಂಡಿದ್ದಾನೆ. ನನ್ನ ಪ್ರಸ್ತುತ ಸಂಸ್ಥೆಗೆ ಸೇರುವ ಮೊದಲು ನನ್ನ ಕೈಯಲ್ಲಿ ಎರಡು ಆಫರ್‌ಗಳಿದ್ದವು. ಆಫರ್ 1: ಪ್ಯಾಕೇಜ್ 38 ಲಕ್ಷ ರೂ , ಸ್ಥಳ ಬೆಂಗಳೂರು. ಆಫರ್ 2: ಪ್ಯಾಕೇಜ್ 30 ಲಕ್ಷ ರೂ , ಸ್ಥಳ ಹೈದರಾಬಾದ್. ನನ್ನ ಸುತ್ತಲಿನ ಹೆಚ್ಚಿನ ಜನರು, ನೀವು ಇನ್ನೂ 38 ಲಕ್ಷ ರೂ ಸಂಬಳದ ಉದ್ಯೋಗ ಏಕೆ ಬಿಡುತ್ತೀರಿ?” ಎಂದು ಕೇಳಿದರು, ಆದರೆ ನಾನು ಅರಿತುಕೊಂಡದ್ದು ಇಲ್ಲಿದೆ ಕೆಲವೊಮ್ಮೆ, ಉತ್ತಮ ನಿರ್ಧಾರವೆಂದರೆ ಅತ್ಯುನ್ನತ ಪ್ಯಾಕೇಜ್ ಅಲ್ಲ ಎಂದಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ನಾನು ಕಳೆದ 15 ವರ್ಷಗಳಿಂದ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದೇನೆ. ನನಗೆ, ಇಲ್ಲಿನ ಜೀವನ ಎಂದರೆ ಉತ್ತಮ ಆಹಾರ, ಕಡಿಮೆ ಜೀವನ ವೆಚ್ಚ, ಕಡಿಮೆ ಒತ್ತಡ, ಸೌಕರ್ಯ ಮತ್ತು ಪರಿಚಿತತೆ, ಹತ್ತಿರದ ಕುಟುಂಬ, ಸ್ನೇಹಿತರು ಹಾಗೂ ನಿಜವಾಗಿಯೂ ಮನೆಯಂತೆ ಭಾಸವಾಗುವ ನಗರ ಎಂದಿದ್ದಾರೆ.

ದೊಡ್ಡ ಸಂಬಳವು ಆಕರ್ಷಕವಾಗಿ ಕಾಣುತ್ತದೆ, ಆದರೆ ಮನಸ್ಸಿನ ಶಾಂತಿ, ಜೀವನಶೈಲಿ, ಸಂತೋಷ ಹಾಗೂ ಮಾನಸಿಕ ನೆಮ್ಮದಿ ಕೂಡ ಮೌಲ್ಯವನ್ನು ಹೊಂದಿರುತ್ತದೆ. ಆದರೆ ಅವು ಹೆಚ್ಚು ಮುಖ್ಯವಾಗುತ್ತವೆ. ಅನೇಕ ಜನರು ಸಂಬಳವನ್ನು ಮಾತ್ರ ಲೆಕ್ಕ ಹಾಕುತ್ತಾರೆ. ಬಹಳ ಕಡಿಮೆ ಜನರು ಜೀವನದ ಗುಣಮಟ್ಟವನ್ನು ಲೆಕ್ಕ ಹಾಕುತ್ತಾರೆ ಎಂದು ಹೇಳಿದ್ದಾರೆ.

ಇಂದು, ನಾನು ತೆಗೆದುಕೊಂಡ ನಿರ್ಧಾರದಿಂದ ನನಗೆ ಸಂತೋಷವಾಗಿದೆ ಏಕೆಂದರೆ ಯಶಸ್ಸು ಕೇವಲ ಹೆಚ್ಚು ಗಳಿಸುವುದಲ್ಲ. ನೀವು ಆನಂದಿಸುವ ಜೀವನವನ್ನು ನಿರ್ಮಿಸುವುದರಲ್ಲಿ ಇರುತ್ತದೆ. ಒತ್ತಡದ ಬದಲು ಶಾಂತಿಯನ್ನು ಆರಿಸಿಕೊಳ್ಳುವುದು ವೃತ್ತಿಜೀವನದ ಅತ್ಯಂತ ಬುದ್ಧಿವಂತ ನಡೆ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಊರು ಬದಲಾಯಿಸುವುದು ಸುಲಭದ ಕೆಲಸವಲ್ಲ; ಬೆಂಗಳೂರಿಗೆ ಸ್ಥಳಾಂತರಗೊಳ್ಳುವಾಗ ದಂಪತಿ ಹೀಗೆಂದಿದ್ದೇಕೆ?

ಈ ಪೋಸ್ಟ್ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಹೈದರಾಬಾದ್ ಎಲ್ಲಕ್ಕಿಂತ ಉತ್ತಮ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಹೈದರಾಬಾದ್ ನನಗೆ ಮನೆಯಂತೆ ಅನಿಸುತ್ತದೆ ಎಂದಿದ್ದಾರೆ. ಮತ್ತೊಬ್ಬರು, ನನಗೆ ಬೆಂಗಳೂರು ಉತ್ತಮವಾಗಿದೆ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CSK vs SRH IPL 2026 Live Score: ಟಾಸ್ ಗೆದ್ದ ಸಿಎಸ್​ಕೆ ಬ್ಯಾಟಿಂಗ್ ಆಯ್ಕೆ – Kannada News | Chennai Super Kings vs Sunrisers Hyderabad IPL 2026 Live Cricket Score CSK vs SRH Match on 18th May latest news in Kannada

  • 18 May 2026 07:34 PM (IST)

    CSK vs SRH IPL 2026: ಸನ್​ರೈಸರ್ಸ್​

    ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹೆನ್ರಿಚ್ ಕ್ಲಾಸೆನ್, ಸಲೀಲ್ ಅರೋರಾ, ಸ್ಮರಣ್ ರವಿಚಂದ್ರನ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್ (ನಾಯಕ), ಶಿವಂಗ್ ಕುಮಾರ್, ಇಶಾನ್ ಮಾಲಿಂಗ, ಸಾಕಿಬ್ ಹುಸೇನ್, ಪ್ರಫುಲ್ ಹಿಂಗೆ.

  • 18 May 2026 07:33 PM (IST)

    CSK vs SRH IPL 2026: ಸಿಎಸ್​ಕೆ ತಂಡ

    ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್ (ನಾಯಕ), ಉರ್ವಿಲ್ ಪಟೇಲ್, ಕಾರ್ತಿಕ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಪ್ರಶಾಂತ್ ವೀರ್, ಅಕೇಲ್ ಹೊಸೈನ್, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್, ಸ್ಪೆನ್ಸರ್ ಜಾನ್ಸನ್.

  • 18 May 2026 07:25 PM (IST)

    CSK vs SRH IPL 2026: ಟಾಸ್ ಗೆದ್ದ ಸಿಎಸ್​ಕೆ

    ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್​ಕೆ ಬ್ಯಾಟಿಂಗ್ ಆಯ್ದುಕೊಂಡಿದೆ.

  • Source link

    ನರೇಂದ್ರ ಮೋದಿಗೆ ನಾರ್ವೆಯ ಅತ್ಯುನ್ನತ ಪ್ರಶಸ್ತಿ ಪ್ರದಾನ; ಭಾರತದ ಪ್ರಧಾನಿಗೆ 32ನೇ ಜಾಗತಿಕ ಗೌರವ – Kannada News | PM Narendra Modi Receives Norways Top Civilian award 32nd global honour So Far

    ನವದೆಹಲಿ, ಮೇ 18: ಭಾರತದ ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಗೆ ನಾರ್ವೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಗ್ರಾಂಡ್ ಕ್ರಾಸ್ ಆಫ್ ದಿ ರಾಯಲ್ ನಾರ್ವೇಜಿಯನ್ ಆರ್ಡರ್’ (Grand Cross of the Royal Norwegian Order) ಗೌರವವನ್ನು ನೀಡಿ ಗೌರವಿಸಲಾಗಿದೆ. ಇದು ಪ್ರಧಾನಿ ಮೋದಿಯವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಡೆದ 32ನೇ ಜಾಗತಿಕ ಗೌರವವಾಗಿದೆ.

    ಗ್ರಾಂಡ್ ಕ್ರಾಸ್ ಆಫ್ ದಿ ರಾಯಲ್ ನಾರ್ವೇಜಿಯನ್ ಆರ್ಡರ್’ ನಾರ್ವೆ ದೇಶವು ವಿದೇಶಿ ರಾಷ್ಟ್ರಗಳ ಮುಖ್ಯಸ್ಥರಿಗೆ ಮತ್ತು ಜಾಗತಿಕ ನಾಯಕರಿಗೆ ನೀಡುವ ಅತ್ಯಂತ ಪ್ರತಿಷ್ಠಿತ ಮತ್ತು ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಭಾರತ ಮತ್ತು ನಾರ್ವೆ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸಲು, ಹಸಿರು ಇಂಧನ (Green Energy), ಕಡಲ ಆರ್ಥಿಕತೆ (Maritime Economy) ಮತ್ತು ಜಾಗತಿಕ ಶಾಂತಿಗಾಗಿ ಪ್ರಧಾನಿ ಮೋದಿ ನೀಡಿದ ಕೊಡುಗೆಯನ್ನು ಶ್ಲಾಘಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

    ಇದನ್ನೂ ಓದಿ: ಭಾರತ-ಸ್ವೀಡನ್ ಬಾಂಧವ್ಯಕ್ಕೆ ಹೊಸ ವೇಗ: ಪ್ರಧಾನಿ ಮೋದಿ ಪ್ರವಾಸದ ಪ್ರಮುಖ ಒಪ್ಪಂದಗಳ ಬಗ್ಗೆ ಮಾಹಿತಿ ಇಲ್ಲಿದೆ

    32ನೇ ಜಾಗತಿಕ ಗೌರವ:

    ವಿಶ್ವದ ವಿವಿಧ ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಪ್ರಧಾನಿ ಮೋದಿಯವರಿಗೆ ನೀಡಿದ ಒಟ್ಟಾರೆ ಜಾಗತಿಕ ಪ್ರಶಸ್ತಿಗಳ ಸಂಖ್ಯೆ ಈಗ 32ಕ್ಕೆ ತಲುಪಿದೆ. ಇವುಗಳಲ್ಲಿ ಹಲವು ಪ್ರಶಸ್ತಿಗಳು ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ಪ್ರಪಂಚದ ವಿವಿಧ ಶಕ್ತಿಶಾಲಿ ದೇಶಗಳ ಅತ್ಯುನ್ನತ ನಾಗರಿಕ ಗೌರವಗಳಾಗಿವೆ.

    ಇದು ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರಭಾವ ಮತ್ತು ಪ್ರಧಾನಿ ಮೋದಿಯವರ ನಾಯಕತ್ವಕ್ಕೆ ಸಿಕ್ಕ ದೊಡ್ಡ ಮನ್ನಣೆ ಇದಾಗಿದೆ. ನಾರ್ವೆ ಸೇರಿದಂತೆ ಉತ್ತರದ ದೇಶಗಳೊಂದಿಗೆ (Nordic Countries) ಭಾರತದ ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ವಿನಿಮಯಕ್ಕೆ ಇದು ಮತ್ತಷ್ಟು ಉತ್ತೇಜನ ನೀಡುತ್ತದೆ. ಇದಕ್ಕೂ ಮುನ್ನ ಭೂತಾನ್, ಗ್ರೀಸ್, ಪಪುವಾ ನ್ಯೂಗಿನಿಯಾ ಮತ್ತು ಫಿಜಿ ದೇಶಗಳು ಕೂಡ ತಮ್ಮ ಅತ್ಯುನ್ನತ ಪ್ರಶಸ್ತಿಗಳನ್ನು ಪ್ರಧಾನಿ ಮೋದಿಯವರಿಗೆ ನೀಡಿ ಗೌರವಿಸಿದ್ದವು.

    ಇದನ್ನೂ ಓದಿ: ಸ್ವೀಡನ್​​​​​ನಲ್ಲಿ ಮೋದಿಗೆ ‘ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್, ಕಮಾಂಡರ್ ಗ್ರಾಂಡ್ ಕ್ರಾಸ್’ ಪ್ರಶಸ್ತಿ

    ಪ್ರಧಾನಿ ಮೋದಿಗೆ ನೀಡಲಾಗಿರುವ ಪ್ರಮುಖ ಪ್ರಶಸ್ತಿಗಳು:

    ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ (ರಷ್ಯಾ) – ರಷ್ಯಾದ ಅತ್ಯುನ್ನತ ಗೌರವ.

    ಆರ್ಡರ್ ಆಫ್ ದಿ ನೈಲ್ (ಈಜಿಪ್ಟ್) – ಈಜಿಪ್ಟ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ.

    ಗ್ರಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ (ಫ್ರಾನ್ಸ್) – ಫ್ರಾನ್ಸ್‌ನ ಅತ್ಯುನ್ನತ ಗೌರವ.

    ಲೀಜನ್ ಆಫ್ ಮೆರಿಟ್ (ಅಮೆರಿಕ) – ಅಮೆರಿಕ ಸಶಸ್ತ್ರ ಪಡೆಗಳ ಪ್ರಮುಖ ಗೌರವ.

    ಕಿಂಗ್ ಅಬ್ದುಲಜೀಸ್ ಸ್ಯಾಶ್ (ಸೌದಿ ಅರೇಬಿಯಾ) – ಸೌದಿ ಅರೇಬಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ.

    ಆರ್ಡರ್ ಆಫ್ ಜಾಯೆದ್ (ಯುಎಇ) – ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅತ್ಯುನ್ನತ ನಾಗರಿಕ ಗೌರವ.

    ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Source link

    ರಾಜ್ಯ ಕಾಂಗ್ರೆಸ್‌ನಲ್ಲಿನ ನಾಯಕತ್ವ ಗೊಂದಲ ಎಲ್ಲಿಗೆ ಬಂತು? ಏನೆಲ್ಲಾ ಬೆಳವಣಿಗೆಗಳು ನಡೆಯುತ್ತಿವೆ? – Kannada News | Karnataka Power Tussle: CM Siddaramaiah Met Rahul Gandhi In Kerala for cabinet reshuffle, And here Is Political developments of leadership change

    ಖರ್ಗೆ, ಡಿಕೆಶಿ, ರಾಹುಲ್, ಸಿದ್ದರಾಮಯ್ಯ

    ಬೆಂಗಳೂರು, (ಮೇ 18): ಕರ್ನಾಟಕ ಕಾಂಗ್ರೆಸ್‌ನಲ್ಲಿ (karnataka Congress) ಸಚಿವ ಸಂಪುಟ ಪುನಾರಚನೆ ( cabinet reshuffle) ಹಾಗೂ ನಾಯಕತ್ವ ಬದಲಾವಣೆ ಗೊಂದಲ ಮುಂದುವರೆದಿದೆ. ಇಷ್ಟು ದಿನ ಹೈಕಮಾಂಡ್ ನೋಡೋಣ ನೋಡೋಣ ಎಂದೇ ಮುಂದಕ್ಕೆ ತಳ್ಳುತ್ತಾ ಬಂದಿದೆ. ಆದ್ರೆ, ಇದೀಗ ಕೇರಳ ಚುನಾವಣೆ ಮುಗಿದು ಸರ್ಕಾರ ರಚನೆಯಾಗಿರುವ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿದೆ. ಕೇರಳದ ಪ್ರಮಾಣ ವಚನ ಕಾರ್ಯಕ್ರಮಕ್ಕೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

    • ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದುವರಿದ ನಾಯಕತ್ವ ಗೊಂದಲ
    • ಸಂಪುಟ ಪುನಾರಚನೆ ಚರ್ಚೆಗೆ ಕೇರಳಂನಲ್ಲೇ ಸಿದ್ದರಾಮಯ್ಯ ಮನವಿ..?
    • ತುಮಕೂರು ಸಾಧನಾ ಸಮಾವೇಶದ ಸುತ್ತ ರಾಜಕೀಯ
    • ಜಿ. ಪರಮೇಶ್ವರ್ ಸಿಎಂ ಮಾಡಲು ವೇದಿಕೆ ಸಿದ್ಧತೆ?

    ಕೇರಳಂನಲ್ಲಿ ಕರ್ನಾಟಕ ಸಂಪುಟ ಪುನಾರಚನೆ ಚರ್ಚೆ

    ಕೇರಳಂನಲ್ಲಿ ಇಡೀ ಹೈಕಮಾಂಡ್ ನಾಯಕರೇ ಬೀಡು ಬಿಟ್ಟಿದ್ದು, ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದಾರೆ. ದೆಹಲಿಯಲ್ಲಿ ಸಚಿವ ಸಂಪುಟ ಪುನಾರಚನೆ ಕುರಿತು ಅಧಿಕೃತ ಚರ್ಚೆ ನಡೆಸಲು ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಬಹಳ ಸಮಯ ಹೈಕಮಾಂಡ್ ನಾಯಕರ ಜೊತೆ ಕಾಲ ಕಳೆದಿರುವುದರಿಂದ ಕೇರಳದಲ್ಲೇ ಕರ್ನಾಟಕದ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಗಳು ನಡೆದಿರಬಹುದು ಮಾತುಗಳು ಕೇಳಿಬರುತ್ತಿವೆ.

    ಇದನ್ನೂ ಓದಿ: ತೀವ್ರ ಸ್ವರೂಪ ಪಡೆದ ಕರ್ನಾಟಕ ಯೂತ್ ಕಾಂಗ್ರೆಸ್​ ಗಲಾಟೆ: ಅಧ್ಯಕ್ಷ ವಿರುದ್ಧ ಗಂಭೀರ ಆರೋಪ

    ಸಾಧನಾ ಸಮಾವೇಶದ ಸುತ್ತ ರಾಜಕೀಯ

    ಈ ಮಧ್ಯೆ ರಾಜ್ಯ ಸರ್ಕಾರದ ಮೂರು ವರ್ಷಗಳ ಸಾಧನಾ ಸಮಾವೇಶದ ನೆಪದಲ್ಲಿ ಕೈ ನಾಯಕರ ನಡುವೆ ಹೊಸ ಸಮರ ಶುರುವಾಗಿದೆ. ತುಮಕೂರಿನಲ್ಲಿ ನಡೆಯಲಿರುವ ಸಮಾವೇಶದ ಕುರಿತು ಪಕ್ಷದ ಒಳಗೇ ಪರ,ವಿರೋಧದ ವ್ಯಾಖ್ಯಾನಗಳು ಕೇಳಿಬರುತ್ತಿವೆ. ಹೌದು..ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 3 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಾಳೆ (ಮೇ 19) ತುಮಕೂರಿನಲ್ಲಿ ಬೃಹತ್ ಸಾಧನಾ ಸಮಾವೇಶ ಆಯೋಜಿಸಲಾಗಿದೆ. ಆದರೆ, ತುಮಕೂರಿನಲ್ಲೇ ಈ ಸಮಾವೇಶ ನಡೆಯುತ್ತಿರುವುದರಿಂದ ಜಿ. ಪರಮೇಶ್ವರ್ ಅವರನ್ನು ಮುಂದಿನ ಮುಖ್ಯಮಂತ್ರಿ ಮಾಡಲು ವೇದಿಕೆ ಸಜ್ಜುಗೊಳಿಸಲಾಗುತ್ತಿದೆ ಎಂಬ ವ್ಯಾಖ್ಯಾನಗಳು ಶುರುವಾಗಿವೆ. ಇದಕ್ಕೆ ಪುಷ್ಟಿ ನೀಡುವಂತೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಸಿದ್ದರಾಮಯ್ಯ ಬದಲಾವಣೆಯಾದರೆ ಪರಮೇಶ್ವರ್ ಸಿಎಂ ಆಗಲಿ, ನಾವು ಅದನ್ನೇ ಬಯಸುತ್ತೇವೆ ಎಂದು ಹೇಳಿಕೆ ನೀಡಿ ಹೊಸ ಬಾಂಬ್ ಸಿಡಿಸಿದ್ದಾರೆ.

    ಸಿಎಂ ಸ್ಥಾನ ಯಾರ ಮನೆ ಆಸ್ತಿಯೂ ಅಲ್ಲ ಎಂದ ರಾಜಣ್ಣ

    2013ರಲ್ಲಿ ಜಿ. ಪರಮೇಶ್ವರ್ ಗೆದ್ದಿದ್ದರೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬಿಟ್ಟುಕೊಡುತ್ತಿದ್ದರಾ ಎಂಬ ಪ್ರಶ್ನೆಗೆ ಕೆ.ಎನ್. ರಾಜಣ್ಣ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಸಿಎಂ ಸ್ಥಾನ ಬಿಟ್ಟುಕೊಡದೇ ಇರಲು ಸಿದ್ದರಾಮಯ್ಯ ಅವರ ಮನೆ ಆಸ್ತಿ ಅಲ್ಲ, ಅದು ಜನರು ಕೊಡುವ ಭಿಕ್ಷೆ ಎಂದು ಹೇಳಿದ್ದಾರೆ. ಸಿಎಂ ಸ್ಥಾನ ಯಾವುದೇ ರಾಜಕಾರಣಿಗಳ ಸ್ವಂತ ಆಸ್ತಿಯಲ್ಲ ಎನ್ನುವ ಮೂಲಕ ಹೈಕಮಾಂಡ್ ಮಟ್ಟದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಗಂಭೀರವಾಗಿರುವುದನ್ನು ಒಪ್ಪಿಕೊಂಡಿದ್ದಾರೆ.

    ಶಿವಕುಮಾರ್‌ಗೆ ಟಾಂಗ್ ಕೊಟ್ಟ ರಾಜಣ್ಣ

    ಇನ್ನು ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಈ ಸ್ಪೋಟಕ ಹೇಳಿಕೆಗಳ ಹಿಂದೆ ದೊಡ್ಡ ರಾಜಕೀಯ ತಂತ್ರಗಾರಿಕೆ ಅಡಗಿದೆ. “ಇದ್ದರೆ ಸಿದ್ದರಾಮಯ್ಯ ಇರಲಿ, ಬದಲಾದರೆ ಪರಮೇಶ್ವರ್ ಆಗಲಿ” ಎಂದು ಹೇಳುವ ಮೂಲಕ, ಕೆ.ಎನ್. ರಾಜಣ್ಣ ಅವರು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದು ತಮಗೆ ಇಷ್ಟವಿಲ್ಲ ಎಂಬುದನ್ನು ಮತ್ತೊಮ್ಮೆ ಬಹಿರಂಗವಾಗಿ ಗಟ್ಟಿಯಾಗಿ ಹೇಳಿದ್ದಾರೆ. ಇದು ಕೆಪಿಸಿಸಿ ಅಧ್ಯಕ್ಷರ ಬಣದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

    ಒಂದು ಕಡೆ ಕೇರಳ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಜೊತೆ ನಾಯಕತ್ವದ ಕುರಿತು ಪ್ರತ್ಯೇಕ ಚರ್ಚೆ ನಡೆಸುತ್ತಿದ್ದರೆ, ಇನ್ನೊಂದೆಡೆ ರಾಜ್ಯದಲ್ಲಿ ಪರಮೇಶ್ವರ್ ಪರ ಬ್ಯಾಟಿಂಗ್ ಶುರುವಾಗಿದೆ. ಹೈಕಮಾಂಡ್ ನಾಯಕರ ನಡೆ ಹಾಗೂ ತುಮಕೂರಿನ ಸಾಧನಾ ಸಮಾವೇಶದ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಯಾವ ರೀತಿಯ ರಾಜಕೀಯ ಬದಲಾವಣೆಗಳಾಗಲಿವೆ ಎಂಬುದನ್ನು ಕಾದುನೋಡಬೇಕಿದೆ.

    ಒಟ್ಟಿನಲ್ಲಿ ಸಂಪುಟ ಪುನಾರಚನೆಗೆ ಏನೋ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಬಹುದು. ಆದ್ರೆ, ಕರ್ನಾಟಕ ಕಾಂಗ್ರೆಸ್​​ನಲ್ಲಿನ ನಾಯಕತ್ವ ಗೊಂದಲ ಇನ್ನೂ ಮುಂದುರೆದಿದ್ದು, ಇದಕ್ಕೆ ಹೈಕಮಾಂಡ್ ಯಾವಾಗ ತೆರೆ ಎಳೆಯಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

    ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

    Source link

    Exit mobile version