India Post Recruitment 2026: ಅಂಚೆ ಇಲಾಖೆಯಲ್ಲಿ 25,000 ಕ್ಕೂ ಅಧಿಕ ಉದ್ಯೋಗವಕಾಶ; ಶೀರ್ಘದಲ್ಲೇ ಅಧಿಸೂಚನೆ ಬಿಡುಗಡೆ – Kannada News | India Post GDS Recruitment 2026: 25,000+ Vacancies for 10th Pass

ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವವರಿಗೆ ಪ್ರಮುಖ ಸುದ್ದಿ. ಅಂಚೆ ಇಲಾಖೆಯಾದ ಇಂಡಿಯಾ ಪೋಸ್ಟ್, 2026 ರ ಗ್ರಾಮೀಣ ಡಾಕ್ ಸೇವಕ್ (GDS) ನೇಮಕಾತಿಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ ಇಲ್ಲಿದೆ. ವರದಿಗಳ ಪ್ರಕಾರ, ಅಂಚೆ ಇಲಾಖೆಯು 25,000 ಕ್ಕೂ ಹೆಚ್ಚು ಗ್ರಾಮೀಣ ಡಾಕ್ ಸೇವಕರನ್ನು ನೇಮಿಸಿಕೊಳ್ಳಲಿದೆ. ಇದಕ್ಕಾಗಿ ಸಿದ್ಧತೆಗಳು ಪ್ರಾರಂಭವಾಗಿವೆ, ದೇಶಾದ್ಯಂತ 25,000 ಕ್ಕೂ ಹೆಚ್ಚು ಗ್ರಾಮೀಣ ಡಾಕ್ ಸೇವಕ್ ನೇಮಕಾತಿಗೆ ಈ ವಾರ ಅಧಿಸೂಚನೆ ಹೊರಬೀಳುವ ನಿರೀಕ್ಷೆಯಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಈ ತಿಂಗಳು ಪ್ರಾರಂಭವಾಗಲಿದೆ.

ಜನವರಿ 20 ರ ನಂತರ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ:

ಅಂಚೆ ಇಲಾಖೆಯಾದ ಇಂಡಿಯಾ ಪೋಸ್ಟ್, 2026 ರಲ್ಲಿ 25,000 ಕ್ಕೂ ಹೆಚ್ಚು ಗ್ರಾಮೀಣ ಡಾಕ್ ಸೇವಕರನ್ನು (GDS) ನೇಮಕ ಮಾಡಿಕೊಳ್ಳಲು ಯೋಜಿಸುತ್ತಿದೆ. GDS ನೇಮಕಾತಿ 2026 ರ ತಾತ್ಕಾಲಿಕ ಸಮಯದ ಪ್ರಕಾರ, ಜನವರಿ 14 ರ ನಂತರ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಬಹುದು, ಗ್ರಾಮೀಣ ಡಾಕ್ ಸೇವಕ ನೇಮಕಾತಿ 2026 ರ ಅರ್ಜಿ ಪ್ರಕ್ರಿಯೆಯು ಜನವರಿ 20 ರ ನಂತರ ಪ್ರಾರಂಭವಾಗುವ ಸಾಧ್ಯತೆಯಿದೆ. ಫೆಬ್ರವರಿ ಮೊದಲ ವಾರದವರೆಗೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಮೊದಲ ಪಟ್ಟಿಯನ್ನು ಫೆಬ್ರವರಿ ಕೊನೆಯ ವಾರದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದು ತಾತ್ಕಾಲಿಕ ವೇಳಾಪಟ್ಟಿಯಾಗಿದೆ.

ಈ ಹುದ್ದೆಗಳಿಗೆ ನೇಮಕಾತಿ:

ಭಾರತೀಯ ಅಂಚೆಯು ಗ್ರಾಮೀಣ ಡಾಕ್ ಸೇವಕ (GDS) ನೇಮಕಾತಿಯ ಅಡಿಯಲ್ಲಿ ಎರಡು ವಿಭಾಗಗಳ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತದೆ, ಇದರ ಅಡಿಯಲ್ಲಿ GDS ನೇಮಕಾತಿಯು ಶಾಖೆ ಪೋಸ್ಟ್ ಮಾಸ್ಟರ್ (BPM), ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ (ABPM)/ಡಾಕ್ ಸೇವಕ್ ಅನ್ನು ಒಳಗೊಂಡಿದೆ.

10ನೇ ತರಗತಿ ತೇರ್ಗಡೆಯಾದವರು ಅರ್ಹರು:

10 ನೇ ತರಗತಿಯಲ್ಲಿ ಉತ್ತೀರ್ಣರಾದವರು ಇಂಡಿಯಾ ಪೋಸ್ಟ್ ಗ್ರಾಮೀಣ ಡಾಕ್ ಸೇವಕ್ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. 10 ನೇ ತರಗತಿಯಲ್ಲಿ ಗಣಿತ ಕಡ್ಡಾಯವಾಗಿದೆ. ನೀವು ಅರ್ಜಿ ಸಲ್ಲಿಸುತ್ತಿರುವ ರಾಜ್ಯದ ಸ್ಥಳೀಯ ಭಾಷೆಯ ಜ್ಞಾನ ಮತ್ತು ಮೂಲಭೂತ ಕಂಪ್ಯೂಟರ್ ಕೌಶಲ್ಯಗಳು ಅಗತ್ಯವಾಗಿವೆ. ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.

ಇದನ್ನೂ ಓದಿ: ಗ್ರಾಮ ಪಂಚಾಯತ್ನಲ್ಲಿ ಬಿಲ್ ಕಲೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ; ಪಿಯುಸಿ ಆಗಿದ್ರೆ ಸಾಕು

ಜಿಡಿಎಸ್ ಆಯ್ಕೆಯನ್ನು ಹೇಗೆ ಮಾಡಲಾಗುತ್ತದೆ?

ಭಾರತ ಅಂಚೆ ಗ್ರಾಮೀಣ ಡಾಕ್ ಸೇವಕ ನೇಮಕಾತಿಗೆ ಆಯ್ಕೆ ಪ್ರಕ್ರಿಯೆಯು ಅರ್ಹತೆ ಆಧಾರಿತವಾಗಿದೆ. ಸ್ಥಾಪಿತ ನಿಯಮಗಳ ಪ್ರಕಾರ, ಗ್ರಾಮೀಣ ಡಾಕ್ ಸೇವಕ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಅವರ 10 ನೇ ತರಗತಿಯ ಶ್ರೇಣಿಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಉದಾಹರಣೆಗೆ, ಗ್ರಾಮೀಣ ಡಾಕ್ ಸೇವಕ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಗೆ 10 ನೇ ತರಗತಿಯ ಶ್ರೇಣಿಗಳು ಪ್ರಾಥಮಿಕ ಆಧಾರವಾಗಿದೆ.

ಎಷ್ಟು ಸಂಬಳ ಸಿಗಲಿದೆ?

ದಿಯಾ ಪೋಸ್ಟ್ ಗ್ರಾಮೀಣ ಡಾಕ್ ಸೇವಕ್ ನೇಮಕಾತಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಶಾಖಾ ಪೋಸ್ಟ್ ಮಾಸ್ಟರ್‌ಗಳಾಗಿ (ಬಿಪಿಎಂ) ನೇಮಿಸಿಕೊಳ್ಳಲಾಗುತ್ತದೆ ಮತ್ತು ಅವರಿಗೆ ಮಾಸಿಕ 12,000 ರಿಂದ 29,000 ರೂಪಾಯಿಗಳ ವೇತನ ಸಿಗುತ್ತದೆ. ಅದೇ ರೀತಿ, ಸಹಾಯಕ ಶಾಖಾ ಪೋಸ್ಟ್ ಮಾಸ್ಟರ್‌ಗಳು (ಎಬಿಪಿಎಂಗಳು) / ಅಂಚೆ ಸೇವಕರು ಮಾಸಿಕ 10,000 ರಿಂದ 24,000 ರೂಪಾಯಿಗಳ ವೇತನ ಸಿಗುತ್ತದೆ. ಇದರ ಜೊತೆಗೆ ಭತ್ಯೆಗಳನ್ನು ಪಾವತಿಸಲಾಗುತ್ತದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:56 pm, Tue, 13 January 26

Source link

ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಡ್ರೋನ್ ಚಟುವಟಿಕೆಗಳ ಬಗ್ಗೆ ಭಾರತೀಯ ಸೇನೆಯಿಂದ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ – Kannada News | Indian army warning to pakistan over recent drone activities in jammu and kashmir

ನವದೆಹಲಿ, ಜನವರಿ 13: ಪಾಕಿಸ್ತಾನದೊಂದಿಗೆ ಇಂದು ಡಿಜಿಎಂಒ ಮಟ್ಟದ ಮಾತುಕತೆ ನಡೆದಿದ್ದು, ಈ ಸಂದರ್ಭದಲ್ಲಿ ಪಾಕಿಸ್ತಾನದ (Pakistan) ಕಡೆಯಿಂದ ಬರುವ ಡ್ರೋನ್‌ಗಳ ಬಗ್ಗೆ ಕಳವಳ ವ್ಯಕ್ತವಾಗಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ. ಹಾಗೇ, ಭಾರತದೊಳಗೆ ಡ್ರೋನ್ ಚಟುವಟಿಕೆ ನಿಲ್ಲಿಸಲು ಪಾಕ್​​ಗೆ ಎಚ್ಚರಿಕೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ನೌಶೇರಾ-ರಾಜೌರಿ ವಲಯದಲ್ಲಿ ಡ್ರೋನ್‌ಗಳು ಪತ್ತೆಯಾದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ಸಂಭವಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜನರಲ್ ಉಪೇಂದ್ರ ದ್ವಿವೇದಿ, ಮೇ 10ರಿಂದ ಪಶ್ಚಿಮ ಫ್ರಂಟ್, ಜಮ್ಮು ಮತ್ತು ಕಾಶ್ಮೀರ ಸೂಕ್ಷ್ಮ ಪ್ರದೇಶಗಳಾಗಿ ಉಳಿದಿವೆ. ಭದ್ರತಾ ಪಡೆಗಳು 31 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದ್ದರಿಂದ ಅಲ್ಲಿನ ಪರಿಸ್ಥಿತಿ ಸದ್ಯಕ್ಕೆ ನಿಯಂತ್ರಣದಲ್ಲಿದೆ. 2025ರಲ್ಲಿ ಆಪರೇಷನ್ ಮಹಾದೇವ್‌ನಲ್ಲಿ ಮೂವರು ಪಹಲ್ಗಾಮ್ ದಾಳಿಯ ಅಪರಾಧಿಗಳನ್ನು ತಟಸ್ಥಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Video: ಜಮ್ಮು-ಕಾಶ್ಮೀರದ ಗಡಿಯಲ್ಲಿ ಐದು ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​

“ಪಾಕಿಸ್ತಾನದ 8 ಭಯೋತ್ಪಾದಕ ಶಿಬಿರಗಳು ಇನ್ನೂ ಸಕ್ರಿಯವಾಗಿವೆ. 6 ಎಲ್‌ಒಸಿಯತ್ತ ಮುಖ ಮಾಡಿವೆ ಮತ್ತು 2 ಅಂತಾರಾಷ್ಟ್ರೀಯ ಗಡಿಯಲ್ಲಿವೆ. ಪಾಕಿಸ್ತಾನಿ ಪಡೆಗಳು ಒಳಗೆ ನುಸುಳಲು ಪ್ರಯತ್ನಿಸಿದರೆ, ಅದರ ಆಧಾರದ ಮೇಲೆ ನಾವು ಕ್ರಮ ಕೈಗೊಳ್ಳುತ್ತೇವೆ” ಎಂದು ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ಸೂಕ್ಷ್ಮವಾಗಿದೆ. ಆದರೆ ಅಲ್ಲಿನ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಹೇಳಿದ್ದಾರೆ. ಭಾರತದೊಳಗೆ ಹಾರಿದ ಡ್ರೋನ್‌ಗಳು ತುಂಬಾ ಚಿಕ್ಕದಾಗಿದ್ದು, ಲೈಟ್​​ಗಳನ್ನು ಆನ್ ಮಾಡಿ ಒಳಗೆ ಬಂದಿದ್ದವು. ಅವು ತೀರಾ ಎತ್ತರದಲ್ಲಿ ಹಾರಿಲ್ಲ ಎಂದು ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ. ಜನವರಿ 10ರಂದು ಸುಮಾರು 6 ಡ್ರೋನ್‌ಗಳು ಕಾಣಿಸಿಕೊಂಡವು, ಜನವರಿ 11 ಮತ್ತು 12ರಂದು 2ರಿಂದ 3 ಡ್ರೋನ್‌ಗಳು ಕಾಣಿಸಿಕೊಂಡವು ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ: ಪಿಣರಾಯಿಗೆ ಸಿದ್ದರಾಮಯ್ಯ ಕರೆ ಮಾಡುವರೇ? – Kannada News | Kerala Police Stops Karnataka Ayyappa devotees vehicles In erumeli, maladharis Protest

ಎರುಮಲೈ(ಕೇರಳ), ಜನವರಿ 13):   ಹಲವು ದಿನಗಳ ಕಾಲ ಅಯ್ಯಪ್ಪನ ಮಾಲೆ ಧರಿಸಿ ( Ayyappa devotees )ವ್ರತ ಮಾಡಿ ಇದೀಗ ಮಕರ ಜ್ಯೋತಿ ನೋಡಲು ದೇಶದ ಮೂಲೆ ಮೂಲೆಗಳಿಂದ ಶಬರಿಮಲೆಯತ್ತ ಹೊರಟ್ಟಿದ್ದಾರೆ. ಆದ್ರೆ,  ಕರ್ನಾಟಕದ ಶಬರಿಮಲೆ (Shabarimale) ಯಾತ್ರಿಗಳಿಗೆ ಕೇರಳದಲ್ಲಿ ನಿರ್ಬಂಧಿಸಲಾಗಿದೆ. ಕರ್ನಾಟಕದ ಅಯ್ಯಪ್ಪ ಭಕ್ತ ವಾಹನಗಳನ್ನು ಶಬರಿಮಲೆಯಿಂದ 60 ಕಿಮೀ ದೂರದಲ್ಲೇ ಅಂದರೆ ಎರುಮಲೈಯಲ್ಲಿ ಕೇರಳ ಪೊಲಿಸರು ತಡೆಯುತ್ತಿದ್ದು, ವಾಹನಗಳನ್ನು ಇಲ್ಲೇ ನಿಲ್ಲಿಸಿ ಶಬರಿಮಲೆಗೆ ಕೇರಳ ಬಸ್​​ನಲ್ಲೇ ತೆರಳುವಂತೆ ತಾಕೀತು ಮಾಡಿದ್ದಾರೆ. ಚಿಕ್ಕಮಗಳೂರು, ಬಾಗಲಕೋಟೆ, ಶಿವಮೊಗ್ಗ, ಸೇರಿದಂತೆ ವಿವಿಧ ಜಿಲ್ಲೆಯಿಂದ ತೆರಳಿದ ಅಯ್ಯಪ್ಪ ಮಾಲಾಧಾರಿಗಳು ಕಂಗಾಲಾಗಿದ್ದು, ಟಿಪಿ ಕಟ್ಟಿ ಬಂದರೂ ಸಹ ನಮ್ಮ ವಾಹನಗಳನ್ನು ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಕೇರಳ ಪೊಲೀಸರ ವಿರುದ್ಧ ಅಯ್ಯಪ್ಪ ಭಕ್ತರು ರಸ್ತೆಯಲ್ಲೇ ಪ್ರತಿಭಟನೆ ನಡೆಸಿದ್ದು, ಕೇರಳ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಪ್ರತಿವರ್ಷ ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೈ ಯಾತ್ರೆ ಕೈಗೊಳ್ಳುತ್ತಾರೆ. ಲಕ್ಷಾಂತರ ಭಕ್ತರು ಕೇರಳದ ಶಬರಿಮಲೈಗೆ ತೆರಳಿ ಅಯ್ಯಪ್ಪಸ್ವಾಮಿಯ ದರ್ಶನ ಪಡೆದು ತಮ್ಮ ವ್ರತವನ್ನು ಪೂರ್ಣಗೊಳಿಸುತ್ತಾರೆ. ರಾಜ್ಯದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಕರ್ನಾಟಕದಿಂದ ವಾಹನ ಮಾಡಿಕೊಂಡು ಶಬರಿಮಲೆ ಯಾತ್ರೆ ಕೈಗೊಳ್ಳುತ್ತಾರೆ. ಆದ್ರೆ ಕೇರಳದಲ್ಲಿ ಕರ್ನಾಟಕ ನೋಂದಣಿ ವಾಹನಗಳಿಗೆ ನಿರ್ಬಂಧ ಹೇರಿರುವ ಆರೋಪ ಕೇಳಿಬಂದಿದೆ. ಇದರಿಂದ ಕೆರಳಿದ ಅಯ್ಯಪ್ಪಸ್ವಾಮಿ ಭಕ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ವಾಹನ ಬಾಡಿಗೆ ಮಾಡಿಕೊಂಡು ಬಂದಿದ್ದೇವೆ. ಮತ್ತೆ ಕೇರಳ ಬಸ್ ಗಳಿಗೆ ಹಣ ಕೊಟ್ಟು ಹೋಗಬೇಕು ಅಂತಿದ್ದಾರೆ. ಇದು ಕೇರಳ ಸರಕಾರದಿಂದ ನಮ್ಮ ಮೇಲಾಗ್ತಿರುವ ದೌರ್ಜನ್ಯ. ಇದರಿಂದ ಕೂಡಲೇ ಸಿಎಂ ಸಿದ್ದರಾಮಯ್ಯನವರು ಕೇರಳ ಸರಕಾರದ‌ ಜೊತೆ ಮಾತಾಡಿ ನಮ್ಮ ವಾಹನ ಬಿಡಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಖತರ್ನಾಕ್​​ ಡ್ರಗ್​​ ಜಾಲ ಭೇದಿಸಿದ ಮಂಗಳೂರು ಸಿಸಿಬಿ: ಮಹಿಳೆ ಅರೆಸ್ಟ್​, 4 ಕೋಟಿ ಮೌಲ್ಯದ MDMA ಸೀಜ್​ – Kannada News | Mangaluru CCB Busts Drug Racket, Arrests Ugandan Woman in Bengaluru; Seizes 4 Crore Worth of MDMA

ಮಂಗಳೂರು, ಜನವರಿ 13: ಆರು​ ಪೆಡ್ಲರ್​ಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಉಗಾಂಡ ಮೂಲದ ಮಹಿಳೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಜಿಗಣಿ ಬಳಿ ಉಗಾಂಡದ ಮಹಿಳೆ ಜಲಿಯಾ ಝಲ್ವಾಂಗೋ ಅರೆಸ್ಟ್​​ ಮಾಡಲಾಗಿದ್ದು, ಆಕೆ ಬಳಿ ಇದ್ದ 4 ಕೋಟಿ ರೂ. ಮೌಲ್ಯದ MDMAಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸಿಸಿಬಿ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಕುಂದಾಪುರದ ಮೊಹಮ್ಮದ್ ಶಿಯಾಬ್ ಅಲಿಯಾಸ್​​ ಶಿಯಾಬ್, ಉಳ್ಳಾಲ ಕಳ್ಳರ ಕೋಡಿ ನಿವಾಸಿ ಮೊಹಮ್ಮದ್ ನೌಷದ್ , ಬೆಂಗ್ರೆ ನಿವಾಸಿ ಇಮ್ರಾನ್ ಅಲಿಯಾಸ್​​ ಇಂಬ, ಬಂಟ್ವಾಳದ ನಿಸಾರ್ ಅಹಮ್ಮದ್, ಕಾಪು ನಿವಾಸಿ ಮೊಹಮ್ಮದ್ ಇಕ್ಬಾಲ್ ಮತ್ತು ಪಡುಬಿದ್ರೆ ನಿವಾಸಿ ಶೆಹರಾಜ್ ಶಾರೂಕ್ ಎಂಬ ಡ್ರಗ್ ಪೆಡ್ಲರ್​​ಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆರೋಪಿಗಳು ಜಲಿಯಾಳಿಂದ ಡ್ರಗ್ಸ್ ಪಡೆದು ಮಂಗಳೂರಲ್ಲಿ ಮಾರುತ್ತಿದ್ದ ವಿಚಾರ ತನಿಖೆ ವೇಳೆ ಗೊತ್ತಾಗಿತ್ತು. ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಬೆಂಗಳೂರಲ್ಲಿ ಸಿಸಿಬಿ ರೇಡ್​ ನಡೆಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಡ್ರಗ್ಸ್​​ ಫ್ಯಾಕ್ಟರಿ ರಾಜಧಾನಿ ಆಯ್ತಾ ಬೆಂಗಳೂರು?; 55.88 ಕೋಟಿ ರೂ. ಮೌಲ್ಯದ MDMA ಸೀಜ್​​

ಉಗಾಂಡದ ಜಲಿಯಾ ಯಾರಿಗೂ ಅನುಮಾನ ಬಾರದಂತೆ ಎಂಡಿಎಂ ಸಾಗಾಟಕ್ಕೆ ಮಾಸ್ಟರ್​​ ಪ್ಲ್ಯಾನ್​​ ಮಾಡಿದ್ದಳು. ಮಾಲ್‌ಗಳು ಅಥವಾ ಟೆಕ್ಸ್‌ ಟೈಲ್​​ಗಳಿಂದ ಪುರುಷರ ಹೊಸ ಶರ್ಟ್​ಗಳನ್ನು ಖರೀದಿಸಿ ಅದನ್ನು ಮೆಲ್ಲಗೆ ಬಿಡಿಸಿ ಅದರೊಳಗೆ ಅಂದಾಜು 300 ಗ್ರಾಂ ಎಂಡಿಎಂಎ ಪ್ಯಾಕ್ ಇಟ್ಟು ಸೂಟ್ ಕೇಸ್​​ನಲ್ಲಿ ತುಂಬುತ್ತಿದ್ದಳು. ಮೇಲ್ನೋಟಕ್ಕೆ ಇದು ಅಂದವಾಗಿ ಶರ್ಟ್ ಜೋಡಿಸಿಟ್ಟ ಸೂಟ್ ಕೇಸ್​​ನಂತೆ ಕಾಣುತ್ತಿತ್ತು. ಶರ್ಟ್ ಬಿಡಿಸಿ ನೋಡಿದರೆ ಆದರೊಳಗೆ ಎಂಡಿಎಂ ಪ್ಯಾಕೇಟ್​​ಗಳು ಇರುತ್ತಿದ್ದವು. ಇನ್ನು ಜಲಿಯಾ ಉಗಾಂಡದಿಂದ ಬಂದು ಭಾರತದಲ್ಲಿ ಅಕ್ರಮವಾಗಿ ವಾಸವಿದ್ದಳು ಎಂಬ ವಿಚಾರವೂ ಬಯಲಾಗಿದೆ. ಆ ಮೂಲಕ ಮಂಗಳೂರಿಗೆ ಸರಬರಾಜಾಗುತ್ತಿದ್ದ ಡ್ರಗ್ಸ್​​ ಜಾಲದ ಒಂದು ಪ್ರಮುಖ ಕೊಂಡಿ ಕಳಚಿದೆ. ಅದರೆ ಇಂತಹ ನುರಾರು ಮಂದಿ ಇರುವ ಅನುಮಾನವಿದ್ದು, ಅವರ ಪತ್ತೆಯನ್ನೂ ಶೀಘ್ರಮಾಡಿ ತಕ್ಕ ಶಾಸ್ತಿ ನೀಡಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:34 pm, Tue, 13 January 26

Source link

ಗಿಲ್ಲಿ ನೆರಳಲ್ಲೇ ಕಾವ್ಯಾ ಇದ್ದಾರಾ? ಎಲಿಮಿನೇಟ್ ಆದ ರಾಶಿಕಾ ಶೆಟ್ಟಿ ಹೇಳಿದ್ದಿಷ್ಟು.. – Kannada News | Bigg Boss Kannada 12 Rashika Shetty talks about Kavya Shaiva and Gilli Nata after Elimination

‘ಮನದ ಕಡಲು’ ಸಿನಿಮಾದ ನಾಯಕಿ ರಾಶಿಕಾ ಶೆಟ್ಟಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ ಕೊನೇ ವಾರದ ತನಕ ಪೈಪೋಟಿ ನೀಡಿದರು. ಆದರೆ ಫಿನಾಲೆ ವಾರಕ್ಕೆ ಕಾಲಿಡಲು ಅವರಿಗೆ ಸಾಧ್ಯವಾಗಲೇ ಇಲ್ಲ. ಧನುಷ್, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಮ್ಯೂಟೆಂಟ್ ರಘು, ಕಾವ್ಯಾ ಶೈವ (Kavya Shaiva), ಧ್ರುವಂತ್ ಅವರು ಈಗ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಮೊದಲಿನಿಂದಲೂ ಜಂಟಿಯಾಗಿಯೇ ಇರುವ ಕಾವ್ಯಾ ಶೈವ ಮತ್ತು ಗಿಲ್ಲಿ ನಟ ಅವರ ಆಟದ ಬಗ್ಗೆ ರಾಶಿಕಾ ಶೆಟ್ಟಿ (Rashika Shetty) ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

‘ಬಿಗ್ ಬಾಸ್ ಮನೆಯಲ್ಲಿ ನಾವು ಜಂಟಿಯಾಗಿ ಇದ್ದಾಗ ಯಾವಾಗಲೂ ಜೊತೆಯಲ್ಲೇ ಇರಬೇಕಾಗುತ್ತದೆ. ನಾನು ಮಂಜು ಅಕ್ಕನ ಜೊತೆ ಇದ್ದಾಗ ಹಾಗೆಯೇ ಆಯಿತು. ಮಂಜು ಅಕ್ಕನ ನೆರಳಲ್ಲಿ ರಾಶಿಕಾ ಇದ್ದಾಳೆ ಅಂತ ಎಲ್ಲರೂ ಹೇಳುತ್ತಿದ್ದರು. ಏನೂ ಮಾಡೋಕೆ ಆಗಲ್ಲ. ಎರಡು, ಮೂರು ವಾರ ನಾವು ಜೊತೆಯಲ್ಲೇ ಇರಬೇಕಾಗುತ್ತದೆ. ಅದಾದ ನಂತರ ನನಗೂ ಹಲವು ಬಾರಿ ಎನಿಸಿದೆ. ಧನುಷ್ ಕ್ಯಾಪ್ಟನ್ ಆದಾಗ ನಾನು ಹೇಳಿದ್ದೆ. ಗಿಲ್ಲಿಯ ನೆರಳಲ್ಲೇ ಕಾವ್ಯಾ ಇರೋದ ಅಂತ ಹೇಳುತ್ತಿದ್ದೆ’ ಎಂದಿದ್ದಾರೆ ರಾಶಿಕಾ ಶೆಟ್ಟಿ.

‘ಅದೇ ಮಾತನ್ನು ಸುದೀಪ್ ಸರ್ ಕೂಡ ಹೇಳುತ್ತಾರೆ. ಅವರು ಹೇಳಿದಾಗಲೇ ಕಾವ್ಯಾ ಮತ್ತು ಗಿಲ್ಲಿ ಸರಿಪಡಿಸಿಕೊಂಡಿದ್ದರೆ ಅದು ಇಲ್ಲಿಯ ತನಕ ಬರುತ್ತಿರಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ನಾವೇ ಒಂದು ಅಭಿಪ್ರಾಯ ಕೊಡುತ್ತಿರುತ್ತೇವೆ. ಅಭಿಪ್ರಾಯ ಕೊಡದೇ ಇದ್ದರೆ ಸರಿ ಇರುತ್ತದೆ ಎನಿಸುತ್ತದೆ’ ಎಂದು ರಾಶಿಕಾ ಶೆಟ್ಟಿ ಅವರು ಹೇಳಿದ್ದಾರೆ.

ರಾಶಿಕಾ ಶೆಟ್ಟಿ ಅವರು ಫಿನಾಲೆ ತಲುಪುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಅವರ ಬದಲು ಕಾವ್ಯಾ ಶೈವ ಎಲಿಮಿನೇಟ್ ಆಗಬಹುದು ಎಂದು ವೀಕ್ಷಕರು ಊಹಿಸಿದ್ದರು. ಆ ಬಗ್ಗೆ ಕೂಡ ರಾಶಿಕಾ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಯಾಕೆ ಹೊರಗೆ ಬಂದೆ ಎಂಬುದಕ್ಕೆ ನನ್ನ ಬಳಿ ಕೂಡ ಉತ್ತರ ಇಲ್ಲ. ನಾನು ಎಲಿಮಿನೇಟ್ ಆಗಿದ್ದೇನೆ. ಜನರು ವೋಟ್ ಬಹಳ ಮುಖ್ಯ ಆಗುತ್ತದೆ. ಎಲ್ಲೋ ಸೈಲೆಂಟ್ ಆಗಿದ್ದೆ ಎನಿಸುತ್ತದೆ’ ಎಂದಿದ್ದಾರೆ ರಾಶಿಕಾ.

ಇದನ್ನೂ ಓದಿ: ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ

‘ಈಗ ಟಾಪ್ 7 ಸ್ಪರ್ಧಿಗಳು ಎಲ್ಲರೂ ಸಮರ್ಥರು. ಫಿನಾಲೆಯಲ್ಲಿ ರಕ್ಷಿತಾ ಇರಬಾರದು. ಧನುಷ್ ಗೆಲ್ಲಬೇಕು. ಆದರೆ ಗಿಲ್ಲಿ ಗೆಲ್ಲುತ್ತಾನೆ. ಹೊರಗಡೆ ಬಂದು ನೋಡಿದಾಗ ಗಿಲ್ಲಿಗೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿದಾಗ ಗೆಲ್ಲಿ ಗೆಲ್ಲುತ್ತಾನೆ ಎನಿಸಿತು’ ಎಂದು ರಾಶಿಕಾ ಶೆಟ್ಟಿ ಅವರು ಹೇಳಿದ್ದಾರೆ. ಜನವರಿ 17 ಮತ್ತು 18ರಂದು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಒಸಡುಗಳಲ್ಲಿ ರಕ್ತ ಬರುವುದು ಡಯಾಬಿಟಿಸ್ ಬರುವ ಮುನ್ಸೂಚನೆಯೇ? ಈ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ – Kannada News | Diabetes & Heart Disease: Gum Connection

ಸಾಮಾನ್ಯವಾಗಿ ಕೆಲವರಿಗೆ ಹಲ್ಲುಜ್ಜುವಾಗ ಅಥವಾ ಗಟ್ಟಿಯಾದ ಆಹಾರ ಸೇವನೆ ಮಾಡಿದಾಗ ಒಸಡುಗಳಿಂದ ರಕ್ತಸ್ರಾವವಾಗುತ್ತದೆ. ಇದು ಕೆಲವರ ಅನುಭವಕ್ಕೆ ಬಂದಿರಬಹುದು. ಅಪರೂಪಕ್ಕೆ ಈ ರೀತಿಯಾಗುವುದು ಬಹಳ ಸಾಮಾನ್ಯ. ಆದರೆ ಪದೇ ಪದೇ ಈ ರೀತಿಯಾಗುತ್ತಿದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೌದು, ಕೆಲವರು ಒಸಡುಗಳಿಂದ ರಕ್ತಸ್ರಾವವಾಗುವುದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದಿರಬಹುದು, ಆದರೆ ಈ ರೀತಿ ಸಮಸ್ಯೆಗಳನ್ನು ಹಗುರವಾಗಿ ಪರಿಗಣಿಸಬಾರದು. ಏಕೆಂದರೆ ಇದು ಗಂಭೀರ ಕಾಯಿಲೆಗಳ ಸಂಕೇತವಾಗಿರಬಹುದು. ಹಾಗಾದರೆ ಒಸಡುಗಳಲ್ಲಿ ರಕ್ತಸ್ರಾವವಾಗುವುದಕ್ಕೆ ಕಾರಣವೇನು, ಈ ರೀತಿಯಾಗುವುದಕ್ಕೂ ಡಯಾಬಿಟಿಸ್ (Diabetes) ಗೂ ಸಂಬಂಧವಿದೆಯೇ, ಇದು ಹೃದಯ ಸಂಬಂಧಿ ಕಾಯಿಲೆಯ ಸಂಕೆತವೇ ತಿಳಿದುಕೊಳ್ಳಿ.

ಒಸಡುಗಳಲ್ಲಿ ರಕ್ತಸ್ರಾವವಾಗುವುದಕ್ಕೆ ಕಾರಣವೇನು?

ಹೆಚ್ಚಿನ ಸಂದರ್ಭಗಳಲ್ಲಿ, ಇದು ಒಸಡು ಕಾಯಿಲೆಯಿಂದ ಉಂಟಾಗುತ್ತದೆ (ಪೆರಿಯೊಡಾಂಟಲ್ ಸೋಂಕು). ಒಸಡಿನಲ್ಲಿ ಊತ ಅಥವಾ ಸೋಂಕು ಇದ್ದಾಗ ರಕ್ತಸ್ರಾವವಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಈ ರಕ್ತಸ್ರಾವವು ಗಂಭೀರ ಕಾಯಿಲೆಗಳ ಸಂಕೇತವೂ ಆಗಿರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಒಸಡುಗಳಲ್ಲಿ ರಕ್ತಸ್ರಾವವಾಗುವುದು ಮಧುಮೇಹದ ಲಕ್ಷಣವೇ?

ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿದ್ದರೆ, ಸೋಂಕುಗಳು ಬೇಗನೆ ಕಂಡುಬರುತ್ತದೆ. ಇಂತಹ ಸಂದರ್ಭಗಳಲ್ಲಿ ಒಸಡಿಗೆ ಸಂಬಂಧಪಟ್ಟ ರೋಗಗಳು ಹೆಚ್ಚಾಗಿ ಕಂಡುಬರುತ್ತವೆ. ಅದರಲ್ಲಿಯೂ ಮಧುಮೇಹ ಇರುವವರಿಗೆ ಒಸಡಿಗೆ ಸಂಬಂಧಪಟ್ಟ ಕಾಯಿಲೆ ಕಂಡುಬರುವ ಅಪಾಯ 3- 4 ಪಟ್ಟು ಹೆಚ್ಚು ಎಂದು ಹೇಳಲಾಗುತ್ತದೆ. ಆದ್ದರಿಂದ, ಒಸಡುಗಳಲ್ಲಿ ರಕ್ತಸ್ರಾವವಾಗಿದ್ದರೆ, ಸಕ್ಕರೆ ಪರೀಕ್ಷೆ ಅಂದರೆ ಡಯಾಬಿಟಿಸ್ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.

ಒಸಡುಗಳಲ್ಲಿ ರಕ್ತಸ್ರಾವವಾಗುವುದು ಹೃದಯ ಸಂಬಂಧಿ ಕಾಯಿಲೆಯ ಲಕ್ಷಣವೇ?

ಹಲವಾರು ಅಧ್ಯಯನಗಳ ಪ್ರಕಾರ, ಒಸಡಿನಲ್ಲಿ ರಕ್ತಸ್ರಾವವಾಗುವುದು ಅಥವಾ ಒಸಡಿಗೆ ಸಂಬಂಧಪಟ್ಟ ಕಾಯಿಲೆ ಇರುವವರಿಗೆ ಹೃದಯ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತದೆ. ಆದರೆ ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಯಾವುದೇ ನೇರ ಪುರಾವೆಗಳಿಲ್ಲ.

ಇದನ್ನೂ ಓದಿ: ಮಧುಮೇಹ ರೋಗಿಗಳು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆಯೇ? ನೀವು ತಿಳಿಯಲೇಬೇಕಾದ ಮಾಹಿತಿ ಇದು

ಯಾವಾಗ ವೈದ್ಯರನ್ನು ಸಂಪರ್ಕ ಮಾಡಬೇಕು?

ಒಸಡುಗಳಲ್ಲಿ ರಕ್ತಸ್ರಾವವಾದರೆ ಮಧುಮೇಹ ಅಥವಾ ಹೃದ್ರೋಗವಿದೆ ಎಂದು ಅರ್ಥವಲ್ಲ. ಆದರೆ ಈ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಲು ಇದು ಎಚ್ಚರಿಕೆಯ ಸಂಕೇತವಾಗಿರಬಹುದು. ಹಾಗಾಗಿ ಇದನ್ನು ನಿರ್ಲಕ್ಷಿಸುವುದು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಒಸಡುಗಳಲ್ಲಿ ಆಗಾಗ ರಕ್ತಸ್ರಾವವಾಗಿದ್ದರೆ, ಅಥವಾ ಒಸಡುಗಳಲ್ಲಿ ಊತ, ನೋವು ಅಥವಾ ಬಾಯಿಯ ದುರ್ವಾಸನೆ ಇದ್ದರೆ, ನೀವು ಅದನ್ನು ನಿರ್ಲಕ್ಷಿಸಬಾರದು. ಮಧುಮೇಹ ಅಥವಾ ಹೃದ್ರೋಗದ ಕುಟುಂಬದ ಇತಿಹಾಸವಿದ್ದರೂ ಸಹ, ನೀವು ತಜ್ಞರ ಸಲಹೆ ಪಡೆದುಕೊಳ್ಳಿ. ಒಸಡುಗಳಲ್ಲಿ ರಕ್ತಸ್ರಾವವಾಗುವ ಲಕ್ಷಣಗಳು ಕಂಡುಬಂದರೆ, ದಿನಕ್ಕೆ ಎರಡು ಬಾರಿ ಮೃದುವಾದ ಬ್ರಷ್‌ನಿಂದ ಬ್ರಷ್ ಮಾಡುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತ ಸೇವಕ ಅಲ್ಲ ಉತ್ಪಾದಕ ಆಗಬೇಕು: ಉದ್ಯಮಿ ಬಾಬಾ ಕಲ್ಯಾಣಿ ಸಲಹೆ – Kannada News | India has to become product nation for economic growth, says industrialist Baba Kalyani

ಪುಣೆ, ಜನವರಿ 13: ಭಾರತದ ಆರ್ಥಿಕ ಬೆಳವಣಿಗೆಗೆ ಉತ್ಪಾದನಾ ಕ್ಷೇತ್ರದ (Manufacturing sector) ಕೊಡುಗೆ ಬಹಳ ಮುಖ್ಯ. ಭಾರತವು ಸೇವಾ ಕ್ಷೇತ್ರದ ಮೇಲಿನ ಅವಲಂಬನೆ ಕಡಿಮೆ ಮಾಡಿ, ಉತ್ಪಾದನಾ ಕ್ಷೇತ್ರಕ್ಕೆ ಗಮನ ಕೊಡಬೇಕು. ಭಾರತವು ಸೇವಾ ಮನೋಭಾವ ಬಿಟ್ಟು ಉತ್ಪಾದಕ ಮನೋಭಾವ ತಳೆಯಬೇಕು ಎಂದು ಭಾರತ್ ಫೋರ್ಜ್ ಕಂಪನಿಯ ಛೇರ್ಮನ್ ಮತ್ತು ಎಂಡಿಯಾದ ಬಾಬಾ ಕಲ್ಯಾಣಿ (Baba Kalyani) ಕರೆ ನೀಡಿದ್ದಾರೆ.

ಮಹಾರಾಷ್ಟ್ರದ ಪುಣೆ ನಗರದಲ್ಲಿ ನಡೆದ ಪಬ್ಲಿಕ್ ಪಾಲಿಸಿ ಫೆಸ್ಟಿವಲ್ 2026 ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಬಾಬಾ ಕಲ್ಯಾಣಿ ಅವರು, ಜಿಡಿಪಿಗೆ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್​ನ ಕೊಡುಗೆ ಎರಡು ಪಟ್ಟು ಹೆಚ್ಚಬೇಕು ಎನ್ನುವ ಸಲಹೆ ನೀಡಿದ್ದಾರೆ. ಜಿಡಿಪಿಗೆ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್​ನ ಕೊಡುಗೆ ಶೇ. 15 ಇತ್ತು. ಇದು ಈಗ ಶೇ.. 13ಕ್ಕೆ ಇಳಿಕೆಯಾಗಿದೆ. ಇದು ಶೇ. 25ಕ್ಕೆ ಹೆಚ್ಚಬೇಕು ಎಂದೂ ಅವರು ಅಭಿಪ್ರಾಯಪಟ್ಟಿದ್ಧಾರೆ.

ಇದನ್ನೂ ಓದಿ: ಭಾರತ-ಅಮೆರಿಕದ ಮಧ್ಯೆ ಮುಖ್ಯ ಖನಿಜಗಳ ವಿಚಾರಕ್ಕೆ ಸಭೆ; ಭಾರತಕ್ಕೇನು ಲಾಭ?

‘ದೀರ್ಘಕಾಲ ನಾವು ಸರ್ವಿಸಸ್ ಮೇಲೆ ಗಮನ ಹರಿಸಿದ್ದೇವೆ. ಉತ್ಪನ್ನಗಳನ್ನು ಸೃಷ್ಟಿಸುವುದು ಹೇಗೆಂದು ನಾವು ಕಲಿಯಬೇಕು. ವಿದೇಶೀ ಕಂಪನಿಗಳಿಗೆ ಸೇವೆ ನೀಡುತ್ತಾ ಹೋದರೆ ಭಾರತವೇನೂ ಪ್ರಗತಿ ಹೊಂದುವುದಿಲ್ಲ. ಭಾರತೀಯ ಕಂಪನಿಗಳು ಐಟಿ ಸರ್ವಿಸ್​ನಲ್ಲಿ ಯಶಸ್ವಿಯಾದರೂ ಯಾರೂ ಕೂಡ ಒಂದೇ ಒಂದು ಉತ್ಪನ್ನ ಅಭಿವೃದ್ಧಿಪಡಿಸಿಲ್ಲ. ಈ ಕಂಪನಿಗಳು ಟ್ಯಾಕ್ಸ್ ಸೌಲಭ್ಯ ಪಡೆಯುವುದರಲ್ಲೇ ತೃಪ್ತವಾಗುತ್ತವೆ. ಇನ್ನೋವೇಶನ್​ಗೆ ಪ್ರಯತ್ನಿಸುತ್ತಿಲ್ಲ’ ಎಂದು ಭಾರತ್ ಫೋರ್ಜ್ ಕಂಪನಿಯ ಮುಖ್ಯಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಚಂದ್ರಬಾಬು ನಾಯ್ಡು ಸರ್ಕಾರದ ನೀತಿ ಶ್ಲಾಘಿಸಿದ ಕಲ್ಯಾಣಿ

ದೇಶಕ್ಕೆ ಈಗ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಸಾಕಾಗಲ್ಲ, ಸ್ಪೀಡ್ ಆಫ್ ಡೂಯಿಂಗ್ ಬ್ಯುಸಿನಸ್ ಬೇಕು ಎಂದು ಹೇಳುವ ಬಾಬಾ ಕಲ್ಯಾಣಿ, ಈ ವಿಚಾರದಲ್ಲಿ ಚಂದ್ರಬಾಬು ನಾಯ್ಡು ಅವರ ಧೋರಣೆಯನ್ನು ಎತ್ತಿ ತೋರಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ತಮ್ಮ ಭಾರತ್ ಫೋರ್ಜ್ ಕಂಪನಿಗೆ ಬೃಹತ್ ಘಟಕ ನಿರ್ಮಿಸಲು 1,000 ಎಕರೆ ಜಾಗವನ್ನು ಕೇವಲ 15 ದಿನದಲ್ಲಿ ವ್ಯವಸ್ಥೆ ಮಾಡಿದ ಸಂಗತಿಯನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಜರ್ಮನಿ ಅಧ್ಯಕ್ಷ ಫ್ರೆಡರಿಚ್ ಮೆರ್ಜ್ ಮತ್ತು ನರೇಂದ್ರ ಮೋದಿಯಿಂದ ಸಿಇಒಗಳ ಸಭೆ

ಸಖತ್ತಾಗಿ ಬೆಳೆಯುತ್ತಿರುವ ಭಾರತ್ ಫೋರ್ಜ್

ಭಾರತ್ ಫೋರ್ಜ್ ಒಂದು ಕಾಲದಲ್ಲಿ ಫೋರ್ಜಿಂಗ್ ಸರ್ವಿಸ್​ಗೆ ಸೀಮಿತವಾಗಿತ್ತು. ನಂತರ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಕ್ರಮೇಣವಾಗಿ ವಿಸ್ತರಣೆ ಹೊಂದುತ್ತಾ ಬಂದಿದೆ. ಎಲೆಕ್ಟ್ರಾನಿಕ್ಸ್, ಡಿಫೆನ್ಸ್, ಡ್ರೋನ್ ಉತ್ಪನ್ನಗಳನ್ನು ತಯಾರಿಸುತ್ತಿದೆ. ಬೆಂಜ್, ಟೊಯೊಟಾ, ಹೊಂಡಾ, ವೋಲ್ವೋ, ಫೋರ್ಡ್, ಜನರಲ್ ಮೋಟಾರ್ಸ್ ಮೊದಲಾದ ಒಇಎಂಗಳಿಗೆ (ವಾಹನ ತಯಾರಕರು) ಬಿಡಿಭಾಗಗಳನ್ನು ತಯಾರಿಸಿ ಸರಬರಾಜು ಮಾಡುತ್ತದೆ. ರಾಲ್ಸ್ ರಾಯ್ಸ್ ಕಂಪನಿಗೆ ಟರ್ಬೈನ್ ಬ್ಲೇಡ್ ಮತ್ತು ಶಾಫ್ಟ್​ಗಳನ್ನು ತಯಾರಿಸುತ್ತದೆ. ಏರ್​ಬಸ್ ಕಂಪನಿಗೆ ಲ್ಯಾಂಡಿಂಗ್ ಗೇರ್ ತಯಾರಿಸಿಕೊಡುತ್ತದೆ. ಭಾರತದ ಸೇನೆಗೆ ಹಲವು ಮಿಲಿಟರಿ ಉತ್ಪನ್ನಗಳನ್ನೂ ತಯಾರಿಸುತ್ತದೆ. ಬಾಬಾ ಕಲ್ಯಾಣಿ ಅವರು ತಮ್ಮ ಕಂಪನಿ ಎಷ್ಟು ಗಣನೀಯವಾಗಿ ಬೆಳೆದಿದೆ ಎಂಬುದಕ್ಕೆ ಉದಾಹರಣೆಯಾಗಿ, ಹೇಗೆ ಜರ್ಮನ್ ಮತ್ತು ಜಪಾನೀ ಕಂಪನಿಗಳು ಭಾರತ್ ಫೋರ್ಜ್​ನ ಸ್ಪರ್ಧೆ ಎದುರಿಸಲು ಕಷ್ಟಪಡುತ್ತಿವೆ ಎಂಬುದನ್ನು ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಧ್ರುವಂತ್​ಗೆ ಸೀಸನ್ ಚಪ್ಪಾಳೆ ಬದಲು ವಾರದ ಚಪ್ಪಾಳೆ; ನಿರ್ಧಾರ ಬದಲಿಸಿದ ಬಿಗ್ ಬಾಸ್ – Kannada News | Colors Kannada Deletes Dhruvanth Season Kicchana Chappale post after audience backlash

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸುದೀಪ್ ಅವರು ಕಿಚ್ಚನ ಚಪ್ಪಾಳೆ (Kicchana Chappale) ನೀಡುತ್ತಾರೆ. ಪ್ರತಿ ವಾರ ಚೆನ್ನಾಗಿ ಆಟ ಆಡಿದ ಸ್ಪರ್ಧಿಗೆ ಈ ಗೌರವ ಸಿಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರು ಇಡೀ ಸೀಸನ್​ನ ಆಟವನ್ನು ಪರಿಗಣಿಸಿ ಧ್ರುವಂತ್ ಅವರಿಗೆ ಚಪ್ಪಾಳೆ ನೀಡಿದ್ದರು. ಆದರೆ ಅವರ ಈ ನಿರ್ಧಾರಕ್ಕೆ ವೀಕ್ಷಕರಿಂದ ವಿರೋಧ ವ್ಯಕ್ತವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಅದರ ಪರಿಣಾಮವಾಗಿ ಬಿಗ್ ಬಾಸ್ (BBK 12) ಆಯೋಜಕರು ನಿರ್ಧಾರ ಬದಲಾಯಿಸಿದ್ದಾರೆ. ಧ್ರುವಂತ್ (Dhruvanth) ಅವರಿಗೆ ಸೀಸನ್​​ನ ಚಪ್ಪಾಳೆ ಬದಲು ವಾರದ ಚಪ್ಪಾಳೆ ನೀಡಲಾಗಿದೆ.

‘ಮೊಟ್ಟ ಮೊದಲ ಕಿಚ್ಚನ ಸೀಸನ್ ಚಪ್ಪಾಳೆ’ ಎಂದು ಧ್ರುವಂತ್ ಅವರ ಫೋಟೋವನ್ನು ‘ಕಲರ್ಸ್ ಕನ್ನಡ’ ವಾಹಿನಿಯ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿತ್ತು. ಅದಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಈಗ ‘ಈ ವಾರದ ಕಿಚ್ಚನ ಚಪ್ಪಾಳೆ’ ಎಂದು ಹೊಸ ಪೋಸ್ಟ್ ಹಾಕಲಾಗಿದೆ. ಈ ಮೊದಲ ಹಾಕಿದ್ದ ಪೋಸ್ಟ್ ಡಿಲೀಟ್ ಮಾಡಲಾಗಿದೆ.

ಬಿಗ್ ಬಾಸ್ ಆಯೋಜಕರು ನಿರ್ಧಾರ ಬದಲಿಸಿದ್ದಕ್ಕೆ ವೀಕ್ಷಕರಿಗೆ ಖುಷಿ ಆಗಿದೆ. ಇಡೀ ಸೀಸನ್​​ನ ಚಪ್ಪಾಳೆ ಪಡೆಯುವಷ್ಟು ಉತ್ತಮ ಆಟವನ್ನು ಧ್ರುವಂತ್ ಆಡಿಲ್ಲ ಎಂಬುದು ವೀಕ್ಷಕರು ಅಭಿಪ್ರಾಯ. ಹಾಗಾಗಿ ಇಡೀ ಸೀಸನ್ ಚಪ್ಪಾಳೆ ಗಿಲ್ಲಿಗೆ ಸಲ್ಲಬೇಕು ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ವಾರದ ಚಪ್ಪಾಳೆಯನ್ನು ಅಶ್ವಿನಿ ಗೌಡ ಅವರಿಗೂ ನೀಡಲಾಗಿದೆ.

ಧ್ರುವಂತ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಆಟದ ಮಧ್ಯೆ ಸೋಲು ಒಪ್ಪಿಕೊಂಡಿದ್ದರು. ತಾವಾಗಿಯೇ ಆಟ ತೊರೆಯುವ ನಿರ್ಧಾರ ಮಾಡಿದ್ದರು. ಆದರೆ ಸುದೀಪ್ ಅವರು ಪ್ರೋತ್ಸಾಹದ ಮಾತುಗಳನ್ನು ಹೇಳಿದ ಬಳಿಕ ಆಟ ಮುಂದುವರಿಸಿದ್ದರು. ಇಡೀ ಮನೆಯಲ್ಲಿ ಅವರು ಹೆಚ್ಚು ಬೆರೆತಿದ್ದು ಅಶ್ವಿನಿ ಗೌಡ ಮತ್ತು ಮಲ್ಲಮ್ಮ ಜೊತೆ ಮಾತ್ರ. ಅಲ್ಲದೇ ಅವರಿಂದ ವೀಕ್ಷಕರಿಗೆ ಹೆಚ್ಚು ಮನರಂಜನೆ ಸಿಕ್ಕಿಲ್ಲ. ಹಾಗಾಗಿ ಅವರಿಗೆ ಇಡೀ ಸೀಸನ್​ನ ಚಪ್ಪಾಳೆ ನೀಡುವುದು ಸೂಕ್ತವಲ್ಲ ಎಂಬುದು ವೀಕ್ಷಕರ ಅಭಿಪ್ರಾಯ.

ಇದನ್ನೂ ಓದಿ: ಕಿಚ್ಚನ ಚಪ್ಪಾಳೆ: ಸುದೀಪ್ ಇನ್​ಸ್ಟಾಗ್ರಾಮ್ ಪೋಸ್ಟ್ ತುಂಬ ಅಸಮಾಧಾನದ ಕಮೆಂಟ್ಸ್

ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ನಟ ಅವರ ಹವಾ ಜೋರಾಗಿದೆ. ಇನ್​ಸ್ಟಾಗ್ರಾಮ್​​ನಲ್ಲಿ ಅವರನ್ನು ಒಂದು ಮಿಲಿಯನ್​​ಗಿಂತಲೂ ಹೆಚ್ಚು ಜನರು ಫಾಲೋ ಮಾಡುತ್ತಿದ್ದಾರೆ. ಗಿಲ್ಲಿಯೇ ಈ ಬಾರಿ ಬಿಗ್ ಬಾಸ್ ಟ್ರೋಫಿ ಗೆಲ್ಲಬೇಕು ಎಂದು ಲಕ್ಷಾಂತರ ಕಮೆಂಟ್​​ಗಳು ಬಂದಿವೆ. ಜನವರಿ 17 ಮತ್ತು 18ರಂದು ಫಿನಾಲೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 3:28 pm, Tue, 13 January 26

Source link

‘ಟಾಕ್ಸಿಕ್’ ಟೀಸರ್​​ನಲ್ಲಿ ತಪ್ಪು: ವೀಕ್ಷಕರ ದಾರಿ ತಪ್ಪಿಸಲಾಗಿದೆಯೇ? – Kannada News | Toxic movie teaser scene is not scientifically possible what is the debate

ಟಾಕ್ಸಿಕ್’ (Toxic) ಸಿನಿಮಾದ ಟೀಸರ್ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಬಹುವಾಗಿ ಚರ್ಚೆಯಲ್ಲಿರುವ ವಿಷಯ. ಜನವರಿ 08 ರಂದು ಬಿಡುಗಡೆ ಆಗಿರುವ ಟೀಸರ್ ಈಗಾಗಲೆ 300 ಮಿಲಿಯನ್​​ಗೂ ಹೆಚ್ಚು ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಟೀಸರ್​​ನಲ್ಲಿರುವ ಆಕ್ಷನ್ ಜೊತೆಗೆ ಕಾರಿನ ಒಳಗೆ ನಡೆಯುತ್ತಿರುವ ದೃಶ್ಯದ ಬಗ್ಗೆಯೂ ಜೋರಾಗಿ ಚರ್ಚೆ ನಡೆದಿದೆ. ಕಾರಿನ ಒಳಗೆ ಯಶ್ ಪಾತ್ರ ಲೈಂಗಿಕ್ ಕ್ರಿಯೆಯಲ್ಲಿ ತೊಡಗಿರುತ್ತದೆ. ಆ ಕ್ರಿಯೆಯ ಉತ್ಪತ್ತಿಯಾಗುವ ಶಕ್ತಿಯಿಂದ ಡೆಟೊನೇಟರ್ ಆನ್ ಆಗಿ ವಿಲನ್​​ಗಳಿದ್ದ ಕಡೆ ಬಾಂಬ್ ಬ್ಲಾಸ್ಟ್ ಆಗುವಂತೆ ತೋರಿಸಲಾಗಿದೆ. ಆದರೆ ಪ್ರಾಕ್ಟಿಕಲ್ ಆಗಿ ಇದು ಅಸಾಧ್ಯ ಎಂಬ ವಾದ ಇದೀಗ ವ್ಯಕ್ತವಾಗಿದೆ. ಹಾಗಿದ್ದರೆ ಟೀಸರ್​​ನಲ್ಲಿ ಆಗಿರುವ ತಪ್ಪೇನು?

ರಾಘವೇಂದ್ರ ಎಂ ಸುಬ್ರಹ್ಮಣ್ಯ ಎಂಬುವರು ಹಂಚಿಕೊಂಡಿರುವ ಪೋಸ್ಟ್​ನಲ್ಲಿ ಈ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ, ತಮ್ಮನ್ನು ವಿಜ್ಞಾನದ ವಿಧ್ಯಾರ್ಥಿ ಎಂದು ಹೇಳಿರುವ ರಾಘವೇಂದ್ರ ಅವರು, ‘ಟಾಕ್ಸಿಕ್’ ಟೀಸರ್​​ನಲ್ಲಿ ತೋರಿಸಲಾಗಿರುವ ದೃಶ್ಯ, ವೈಜ್ಞಾನಿಕವಾಗಿ ಅಸಾಧ್ಯ ಎಂದಿದ್ದು, ಅದಕ್ಕೆ ಕೆಲವು ಮೌಲಿಕ ಕಾರಣಗಳನ್ನು ಸಹ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ರಾಘವೇಂದ್ರ ಅವರು ನೀಡಿರುವ ಕಾರಣಗಳು ಇಂತಿವೆ…

ಟೀಸರ್​​ನಲ್ಲಿ ತೋರಿಸಿರುವಂತೆ ಕುಡುಕ ಡ್ರೈವರ್, ಕಾರಿನ ಹಿಂಬದಿಗೆ ಹುಕ್ ರೀತಿಯಲ್ಲಿ ಸೇರಿಸುವ ಯಂತ್ರದ ಹೆಸರು ಪ್ಲಂಜರ್ ಡೆಟೊನೇಟರ್. ಇದನ್ನು ಬ್ಲಾಸ್ಟಿಂಗ್ ಮಷಿನ್, ಶೋಟ್ ಎಕ್ಸ್​ಪ್ಲೋಡರ್ ಎಂದೂ ಸಹ ಕರೆಯಲಾಗುತ್ತದೆ. 1878 ರಲ್ಲಿ ಇದನ್ನು ವಿನ್ಯಾಸ ಮಾಡಲಾಯ್ತು. ಯಂತ್ರದ ಮೇಲಿನ ಟಿ ಆಕಾರದ ರಾಡ್ ಅನ್ನು ಒತ್ತುವ ಮೂಲಕ ಉತ್ಪಾದನೆಯಾಗುವ ವಿದ್ಯುತ್ ವೈಯರ್​​ಗಳ ಸಹಾಯದಿಂದ ಬಾಂಬ್ ಡೆಟೊನೇಟರ್​​ಗಳನ್ನು ಆನ್ ಮಾಡಿ ಸ್ಪೋಟಗೊಳಿಸುವುದು ಇದರ ಕಾರ್ಯ. ಟೀಸರ್​​ನಲ್ಲಿಯೂ ಇದನ್ನು ತೋರಿಸಲಾಗಿದೆ.

ಇದನ್ನೂ ಓದಿ:ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿದ್ರೆ ಎಲ್ಲ ಗೊತ್ತಾಗತ್ತೆ: ವಿನಯ್ ಗೌಡ

ಆದರೆ ಆ ಟಿ ಹ್ಯಾಂಡಲ್ ಅನ್ನು ಒತ್ತಲು ನಿಯಮತಿ ಶಕ್ತಿ ಅಥವಾ ಒತ್ತಡದ ಅಗತ್ಯ ಇರುತ್ತದೆ. ಟೀಸರ್​​ನಲ್ಲಿ ಗಮನಿಸಿದರೆ ಕಾರಿನಲ್ಲಿ ನಡೆಯುತ್ತಿರುವ ಕ್ರಿಯೆಯಿಂದ ಕಾರಿನ ಶಾಕ್ ಅಬ್ಸಾರ್ಬರ್​​ಗಳು ಮೇಲೆ ಕೆಳಕ್ಕೆ ಆಡುವ ಮೂಲಕ ಪ್ಲಂಜರ್ ಡೆಟೊನೇಟರ್ ನ ಟಿ ಆಕೃತಿ ಕೆಳಗೆ ಒತ್ತಿ ವಿದ್ಯುತ್ ಪ್ರವಹಿಸಿ ಬಾಂಬ್ ಬ್ಲಾಸ್ಟ್ ಆಗುತ್ತದೆ. ಆದರೆ ಎಲ್ಲ ಜಾಣ-ಜಾಣೆಯರಿಗೆ ಗೊತ್ತಿರುವಂತೆ ಕಾರಿನಲ್ಲಿ ನಡೆಯುತ್ತಿರುವ ಕ್ರಿಯೆಯಿಂದ ಕಾರಿನ ಮೇಲೆ ಮೇಲಿನಿಂದ ಕೆಳಗ್ಗೆ ಬೀಳುವುದಿಲ್ಲ ಬದಲಿಗೆ, ಮುಂದೆ-ಹಿಂದೆ ಬೀಳುತ್ತದೆ. ಟೀಸರ್​​ನಲ್ಲಿ ಸಹ ತೋರಿಸಿರುವಂತೆ ಕಾರಿನಲ್ಲಿ ಆ ಮಹಿಳೆ ಮಲಗಿರುವುದಿಲ್ಲ ಬದಲಿಗೆ ಸೀಟಿನ ಮೇಲೆ ಕುಳಿತಿರುತ್ತಾಳೆ. ಮತ್ತೊಂದು ದೃಶ್ಯದಲ್ಲಿ ಯಶ್ ಕಡೆ ಬೆನ್ನು ಹಾಕಿರುತ್ತಾಳೆ. ಈ ಭಂಗಿಗಳಲ್ಲಿ ಒತ್ತಡ ಮೇಲಿನಿಂದ ಕೆಳಕ್ಕೆ ಬೀಳಲು ಸಾಧ್ಯವೇ ಇಲ್ಲ ಎನ್ನುವ ವಾದವನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಪ್ಲಂಜರ್ ಡೆಟೊನೇಟರ್​​ಗಳು ಕಡಿಮೆ ದೂರದಲ್ಲಿ ಇರಿಸಲಾದ ಬಾಂಬುಗಳನ್ನು ಡೆಟೊನೇಟ್ ಮಾಡಲಷ್ಟೆ ಶಕ್ತವಾಗಿರುತ್ತವೆ. ಹೆಚ್ಚು ಶಕ್ತಿ ಅವುಗಳಿಂದ ಉತ್ಪಾದನೆ ಆಗಬೇಕು ಎಂದಾದರೆ ಟಿ ಆಕಾರವನ್ನು ಹೆಚ್ಚು ಉದ್ದ ಮಾಡಿ ಅದನ್ನು ಮೇಲಿನಿಂದ ಕೆಳಗೆ ಒತ್ತಬೇಕಿರುತ್ತದೆ. ಆದರೆ ಟೀಸರ್​​ನಲ್ಲಿ ಡೆಟೊನೇಟರ್ ಚಿಕ್ಕದಾಗಿದೆ, ಟಿ ಆಕಾರದ ನೆಕ್ ಸಹ ಬಹಳ ಚಿಕ್ಕದಾದ ಟ್ರಾವೆಲ್ ಅನ್ನು ಹೊಂದಿದೆ. ಹೀಗಿರುವಾಗ ಸ್ಮಶಾನದಲ್ಲಿ ಇರಿಸಲಾಗಿರುವ ಅಷ್ಟು ಬಾಂಬ್​​ಗಳಿಗೆ, ಅಷ್ಟು ಉದ್ದ ವೈಯರ್​​ಗಳ ಮೂಲಕ ಪ್ರಹವಿಸುವಷ್ಟು ವಿದ್ಯುತ್ ಉತ್ಪಾದನೆ ಆಗುವುದು ವೈಜ್ಞಾನಿಕವಾಗಿ ಅಸಾಧ್ಯ ಎನ್ನಲಾಗುತ್ತಿದೆ.

ಏನೇ ಆಗಲಿ ‘ಟಾಕ್ಸಿಕ್’ದ ಟೀಸರ್​ನ ಬಾಂಬ್ ಸೀನು ಬೇರೆ ಬೇರೆ ಕಾರಣಗಳಿಗೆ ಹಲವರಿಗೆ ಇಷ್ಟವಾಗಿದೆ. ಕೆಲವರು ಈ ಸೀನ್ ಸಿನಿಮಾನಲ್ಲಿ ಇರುವುದಿಲ್ಲ ಎಂದೂ ಸಹ ವಾದಿಸುತ್ತಿದ್ದಾರೆ. ಎಲ್ಲವೂ ಮಾರ್ಚ್ 19ಕ್ಕೆ ಗೊತ್ತಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು – Kannada News | Bigg Boss Kannada 12 Gilli Nata family background and Financial status

ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಗಿಲ್ಲಿ ನಟ ಅವರು ಸಖತ್ ಹೈಲೈಟ್ ಆಗುತ್ತಿದ್ದಾರೆ. ರಾಜ್ಯಾದ್ಯಂತ ಅವರಿಗೆ ಜನಪ್ರಿಯತೆ ಹೆಚ್ಚಾಗಿದೆ. ಗಿಲ್ಲಿ ನಟ (Gilli Nata) ಅವರು ಶ್ರಿಮಂತನಾ ಅಥವಾ ಬಡವನಾ ಎಂಬ ಅನುಮಾನ ಹಲವರಿಗೆ ಇದೆ. ಆ ಬಗ್ಗೆ ಅವರ ಕುಟುಂಬದ ಸದಸ್ಯರಾದ ಬಸವರಾಜು ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ. ‘ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ ಎಂಬ ಬಗ್ಗೆ ಗೊಂದಲ ನಿರ್ಮಾಣ ಆಗಿದೆ. ಗಿಲ್ಲಿಯದ್ದು ಮಿಡಲ್ ಕ್ಲಾಸ್ ಕುಟುಂಬ. ಇಂದಿಗೂ ಅವರ ತಂದೆ-ತಾಯಿ ವ್ಯವಸಾಯ ಮಾಡಿಕೊಂಡಿದ್ದಾರೆ. ಮಧ್ಯಮವರ್ಗದ ಕುಟುಂಬ ಆದ್ದರಿಂದ ಹೊಟ್ಟೆಗೆ ಬಟ್ಟೆಗೆ ಶಿಕ್ಷಣಕ್ಕೆ ಕೊರತೆ ಇಲ್ಲ. ಪಿಆರ್ ನೇಮಿಸಿಕೊಂಡು ಪ್ರಚಾರ ತೆಗೆದುಕೊಳ್ಳುತ್ತಾನೆ ಅಂತ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಅವರ ತಂದೆ-ತಾಯಿಗೆ ಪಿಆರ್ ಎಂದರೆ ಏನು ಎಂಬುದೇ ಗೊತ್ತಿಲ್ಲ. ನಿನ್ನೆ ಭತ್ತ ಕೊಯ್ದಿದ್ದಾರೆ. ಮಳೆ ಬಂದು ಎಲ್ಲವೂ ನೆನೆದು ಹೋಗಿ ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತಿದ್ದಾರೆ. ಗಿಲ್ಲಿ ಏನೇ ಸಂಪಾದನೆ ಮಾಡಿದರೂ ಅವರ ತಂದೆ-ತಾಯಿ ತಮ್ಮ ಕಾಯಕ ಮುಂದುವರಿಸುತ್ತಿದ್ದಾರೆ. ಅವರು ಹಳ್ಳಿ ಜನ. ಪಿಆರ್, ಫೇಸ್ ಬುಕ್ ಇತ್ಯಾದಿ ಅವರಿಗೆ ಗೊತ್ತಿಲ್ಲ’ ಎಂದು ಬಸವರಾಜು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version