ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದ ರೌಡಿಶೀಟರ್​​ ತಂದಿದ್ದು ನಕಲಿ ಬಂದೂಕು!

ದೇವನಹಳ್ಳಿ, ಜನವರಿ 13: ಎಣ್ಣೆಗಾಗಿ ಬಂದೂಕು ತೋರಿಸಿ ಕ್ಯಾಷಿಯರ್​ಗೆ ಬೆದರಿಕೆ ಪ್ರಕರಣ ಸಂಬಂಧ ರೌಡಿಶೀಟರ್ ವಾಹಿದ್‌ ಖಾನ್ ತೋರಿಸಿರುವ ಗನ್​​ ಡಮ್ಮಿ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಹೊಸಕೋಟೆ ತಾಲೂಕಿನ ಬಂಡಹಳ್ಳಿಯ ಬಾರ್​ನಲ್ಲಿ ನಡೆದಿದ್ದ ಘಟನೆ ಸಂಬಂಧ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೈಕ್​ನಲ್ಲಿ ಆರೋಪಿ ವಾಹಿದ್‌ ಜೊತೆ ಬಾರ್​ಗೆ ಬಂದಿದ್ದ ಅತೀಕ್​ ಖಾನ್​​ನ ಪೊಲೀಸರು ಬಂಧಿಸಿದ್ದು, ಆರೋಪಿಗಳು ಎರಡು ಪೈಪ್​ಗಳನ್ನು ಬಳಸಿ ನಕಲಿ ಗನ್ ತಯಾರಿಸಿದ್ದರು. ಟಿಂಕರಿಂಗ್ ಹಾಗೂ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಅತಿಕ್‌ ಖಾನ್ 2 ಮೆಟಲ್ ಪೈಪ್, ಮರದ ಸ್ಟಾಕ್, ಕಪ್ಪು ಬೆಲ್ಟ್ ಬಳಸಿ ಡಮ್ಮಿ ಗನ್ ತಯಾರಿ ಮಾಡಿದ್ದ. ನೋಡೋಕೆ ಅದು ಡಬಲ್ ಬ್ಯಾರಲ್ ಗನ್ ರೀತಿ ಇತ್ತು ಎಂಬುದು ಗೊತ್ತಾಗಿದೆ. ಪ್ರಮುಖ ಆರೋಪಿ ರೌಡಿಶೀಟರ್ ವಾಹಿದ್ ಖಾನ್​ಗಾಗಿ ಹುಡುಕಾಟ ಮುಂದುವರಿದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Apply Now: ಭಾರತೀಯ ವಾಯುಪಡೆಯಲ್ಲಿ ಅಗ್ನಿವೀರ್ ನೇಮಕಾತಿ; ಪಿಯುಸಿ ಪಾಸ್​ ಆಗಿದ್ರೆ ಸಾಕು! – Kannada News | IAF Agniveer Vayu Recruitment 2026: Apply Now! Eligibility and Selection

ಅಗ್ನಿವೀರ್ ನೇಮಕಾತಿಗೆ ತಯಾರಿ ನಡೆಸುತ್ತಿರುವವರಿಗೆ ಗುಡ್​ ನ್ಯೂಸ್​ ಇಲ್ಲಿದೆ. ಭಾರತೀಯ ವಾಯುಪಡೆಯಲ್ಲಿ (IAF) ಅಗ್ನಿವೀರ್ ಆಗಲು ಇದು ಒಂದು ಅವಕಾಶ. ಭಾರತೀಯ ವಾಯುಪಡೆಯು ಅಗ್ನಿವೀರ್ ವಾಯು ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಗೆ ಹೇಗೆ ಮತ್ತು ಯಾವಾಗ ಅರ್ಜಿ ಸಲ್ಲಿಸಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಫೆಬ್ರವರಿ 1 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ:

ಭಾರತೀಯ ವಾಯುಪಡೆಯು ಜನವರಿ 12 ರಂದು ಅಗ್ನಿವೀರ್ವಾಯು ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿತು. ಅಧಿಕೃತ ವೆಬ್‌ಸೈಟ್ iafrecruitment.edcil.co.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 1. ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ವಯೋಮಿತಿ:

ಅಗ್ನಿವೀರ್ವಾಯು ನೇಮಕಾತಿಗೆ ಗರಿಷ್ಠ ವಯೋಮಿತಿ 21 ವರ್ಷಗಳು. ವಯೋಮಿತಿಯನ್ನು ಜನವರಿ 1, 2026 ರಿಂದ ಜುಲೈ 1, 2009 ರವರೆಗೆ ಲೆಕ್ಕಹಾಕಲಾಗುತ್ತದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ವಯೋಮಿತಿ ಒಂದೇ ಆಗಿರುತ್ತದೆ.

ಶೈಕ್ಷಣಿಕ ಅರ್ಹತೆ:

ಅಗ್ನಿವೀರ್ ವಾಯು ನೇಮಕಾತಿಗೆ ಅಗತ್ಯವಿರುವ ಶೈಕ್ಷಣಿಕ ಅರ್ಹತೆ ಎಂದರೆ ಅಭ್ಯರ್ಥಿಗಳು 12 ನೇ ತರಗತಿ ಉತ್ತೀರ್ಣರಾಗಿರಬೇಕು. 12 ನೇ ತರಗತಿಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್ ಒಳಗೊಂಡಿರಬೇಕು. ಕನಿಷ್ಠ ಶೇ.50 ಅಂಕಗಳು ಮತ್ತು ಇಂಗ್ಲಿಷ್‌ನಲ್ಲಿ ಕನಿಷ್ಠ ಶೇ.50 ಅಂಕಗಳು ಅಗತ್ಯವಿದೆ.

ಇದನ್ನೂ ಓದಿ: ಗ್ರಾಮ ಪಂಚಾಯತ್ನಲ್ಲಿ ಬಿಲ್ ಕಲೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ; ಪಿಯುಸಿ ಆಗಿದ್ರೆ ಸಾಕು

ಆಯ್ಕೆ ಹೇಗೆ ನಡೆಯುತ್ತದೆ?

ಅಗ್ನಿವೀರ್ ವಾಯು ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಆನ್‌ಲೈನ್ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಆನ್‌ಲೈನ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ಪರಿಶೀಲಿಸಬೇಕಾಗುತ್ತದೆ. ಇದರ ನಂತರ, ಅವರನ್ನು ದೈಹಿಕ ಪರೀಕ್ಷೆಗೆ ಕರೆಯಲಾಗುತ್ತದೆ.

ದೈಹಿಕ ಪರೀಕ್ಷೆಯಲ್ಲಿ ಪುರುಷ ಅಭ್ಯರ್ಥಿಗಳು 1.6 ಕಿ.ಮೀ ಓಟವನ್ನು 7 ನಿಮಿಷಗಳಲ್ಲಿ ಓಡಬೇಕು, ಆದರೆ ಮಹಿಳಾ ಅಭ್ಯರ್ಥಿಗಳು ಅದನ್ನು 8 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಅವರು ಪುಷ್-ಅಪ್‌ಗಳು, ಸಿಟ್-ಅಪ್‌ಗಳು ಮತ್ತು ಸ್ಕ್ವಾಟ್‌ಗಳನ್ನು ಸಹ ಮಾಡಬೇಕಾಗುತ್ತದೆ. ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಹೊಂದಾಣಿಕೆ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರ ನಂತರ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ. ನಂತರ ಅಂತಿಮ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.

ಅಗ್ನಿವೀರ್ವಾಯು 2027 ನೇಮಕಾತಿ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆ; ರಾಜಕಾರಣಿಗಳ ಆಸೆಗೆ ಪಶ್ಚಿಮ ಘಟ್ಟ ಬಲಿ? – Kannada News | Western Ghats at Risk: Karnataka’s River Diversion Plan and Bommai’s Political Push

ಶಿರಸಿಯ ಜಾತ್ರೆ ಮತ್ತು ನಿಂತುಹೋದ ಸಂಭ್ರಮ: ಎರಡು ವರ್ಷಕ್ಕೊಮ್ಮೆ ನಡೆಯುವ ಶಿರಸಿಯ ಮಾರಿಕಾಂಬಾ ಜಾತ್ರೆ ಇನ್ನೊಂದು ತಿಂಗಳೊಳಗೆ ಆರಂಭವಾಗಲಿದೆ. ಆದರೆ ಶಿರಸಿಯಲ್ಲಿ ಜಾತ್ರೆಯ ಸಂಭ್ರಮ ಮತ್ತು ಜೋಶ್​ ಕಾಣುತ್ತಿಲ್ಲ. ಯಾಕೋ ಅವೆಲ್ಲ ಜನಮನದಿಂದ ದೂರವಾಗಿರುವಂತೆ ಕಾಣುತ್ತಿದೆ. ಎಲೆ ಚುಕ್ಕೆ ರೋಗದಿಂದ ಅಡಕೆ ಬೆಳೆ ಕೈಗೆ ಸಿಗದೆ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಸಂಕಷ್ಟಕ್ಕೆ ಪರಿಹಾರ ನೀಡಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದಕ್ಕೆ ಬದಲಾಗಿ ಬೇಡ್ತಿ–ಶರಾವತಿ ನದಿ ತಿರುವು ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಕೆಗೆ ಮುಂದಾಗಿ, ಈ ಭಾಗದ ಜನರ ಬದುಕಿಗೆ ಕೊಳ್ಳಿ ಇಡಲು ಮುಂದಾಗಿವೆ. ಜಾತ್ರೆಯ ಬಗ್ಗೆ ಜೋಶ್​ ಇಲ್ಲದಿರಲು ಇದು ಮೂಲ ಕಾರಣ.

ಅಭಿವೃದ್ಧಿಯ ಹೆಸರಿನಲ್ಲಿ ಕಡ್ಡಿಗೀರುವ ನೀರು

ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕದಲ್ಲಿ ನಡೆದ ಹೋರಾಟಗಳ ಇತಿಹಾಸವನ್ನು ನೆನಪಿಸಿಕೊಂಡರೆ ಸಾಕು. ಪ್ರತಿಬಾರಿಯೂ, ‘ತಮಿಳುನಾಡಿಗೆ ಬಿಡಬೇಕಾದ ನೀರು’ ಎಂಬ ಮಾತು ಕರ್ನಾಟಕದಲ್ಲಿ ಬೆಂಕಿ ಹಚ್ಚಿದ್ದನ್ನು ನಾವೆಲ್ಲ ನೋಡಿದ್ದೇವೆ. ವಿಪರ್ಯಾಸವೆಂದರೆ, ಬೆಂಕಿ ನಂದಿಸಬೇಕಾದ ನೀರೇ ಬೆಂಕಿಯ ಕಿಡಿಯಾಗುತ್ತಿರುವುದು ಇತಿಹಾಸದ ವ್ಯಂಗ್ಯ. ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆ ಜಾರಿಗೆ ಬಂದರೆ ಬೇರೆ ಯಾವುದೋ ರಾಜ್ಯಕ್ಕೆ ನೀರು ಹೋಗುವುದಿಲ್ಲ ಎಂಬ ವಾದ ಮುಂದಿಡಲಾಗುತ್ತಿದೆ. ವಾಸ್ತವದಲ್ಲಿ ಈ ಯೋಜನೆಗಳು ಪಕ್ಕದ ಜಿಲ್ಲೆಗೆ ನೀರು ಕೊಡುತ್ತವೆ ಎನ್ನುವ ಪ್ರಸ್ತಾಪ ಇರಬಹುದು. ಇದು ಜಾರಿಯಾದಲ್ಲಿ ಪಶ್ಚಿಮ ಘಟ್ಟದ ಕಾಡು, ಜಲವ್ಯವಸ್ಥೆ ಮತ್ತು ದೇಸಿ ಸಂಸ್ಕೃತಿಗೆ ಕೊಡಲಿಯೇಟು ಇಡುವುದರಲ್ಲಿ ಸಂಶಯವಿಲ್ಲ. 2019 ರಲ್ಲಿ ಕರ್ನಾಟಕ ವಿಧಾನ ಸಭೆಗೆ ನೀಡಿದ ಉತ್ತರದಲ್ಲಿ ಸರಕಾರವೇ ಹೇಳಿದೆ-ಸರಕಾರದ ಹಲವಾರು ಯೋಜನೆಗಳಿಗೆ, ಉತ್ತರ ಕನ್ನಡ ಜಿಲ್ಲೆಯೊಂದೇ 1.25 ಲಕ್ಷ ಹೆಕ್ಟೇರ್​ ಜಮೀನನ್ನು ಇಲ್ಲೀವರೆಗೆ ನೀಡಿದೆ. ಅದರಲ್ಲಿ ಅರಣ್ಯವೆಷ್ಟು ಎನ್ನುವ ವಿವರ ಈಗ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಗಳ ವಿರುದ್ಧ ಚಳುವಳಿ ಆರಂಭವಾಗಿದ್ದು, ಕಳೆದ ಭಾನುವಾರ ಶಿರಸಿಯಲ್ಲಿ ಸುಮಾರು ಮೂವತ್ತು ಸಾವಿರಕ್ಕೂ ಅಧಿಕ ಜನರು ಸೇರಿ ಶಾಂತಿಯುತವಾಗಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಶಾಂತಿಯುತ ಹೋರಾಟ ಮತ್ತು ಮಾಧ್ಯಮಗಳ ಮೌನ

ನದಿ ತಿರುವು ಯೋಜನೆ ವಿರೋಧಿ ಚಳುವಳಿ ಅತ್ಯಂತ ಶಾಂತಿಯುತವಾಗಿ ನಡೆಯುತ್ತಿದೆ. ಬಹುಶಃ ಇದೇ ಕಾರಣಕ್ಕಾಗಿ ಆಡಳಿತದಲ್ಲಿರುವವರು ಈ ಚಳುವಳಿಯನ್ನು ಗಂಭೀರವಾಗಿ ಪರಿಗಣಿಸದ ಅಪಾಯವೂ ಇದೆ. ಸೋಮವಾರದ ಕೆಲ ಇಂಗ್ಲಿಷ್ ದಿನಪತ್ರಿಕೆಗಳ ಬೆಂಗಳೂರು ಆವೃತ್ತಿಗಳನ್ನು ಗಮನಿಸಿದರೆ, ರವಿವಾರ ನಡೆದ ಈ ಬೃಹತ್ ಪ್ರತಿಭಟನಾ ರಾಲಿಯ ಕುರಿತು ಒಂದು ಸಾಲು ಸುದ್ದಿಯೂ ಕಾಣುವುದಿಲ್ಲ. ಒಂದೊಮ್ಮೆ ಈ ರ‍್ಯಾಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ಘೋಷಣೆಗಳು ಕೇಳಿಬಂದಿದ್ದರೆ, ಇದೇ ಪತ್ರಿಕೆಗಳು ಮುಖಪುಟದಲ್ಲೇ ಸುದ್ದಿಯನ್ನು ಪ್ರಕಟಿಸುತ್ತಿದ್ದವೇನೋ? ಚಳುವಳಿಯ ತೀವ್ರತೆ ಸಂಪಾದಕರ ಗಮನಕ್ಕೂ ಬಾರದಿರುವಾಗ, ಆಡಳಿತ ನಡೆಸುವವರಿಗೆ ಅದು ತಲುಪುವುದು ಹೇಗೆ ಎಂಬ ಪ್ರಶ್ನೆ ಸಹಜ.

ಡಿಪಿಆರ್: ಪ್ರಶ್ನೆ ಕೇಳಬೇಕಾದ ಹಂತ

ಉತ್ತರ ಕನ್ನಡದಿಂದ ಆಯ್ಕೆಯಾದ ಜನಪ್ರತಿನಿಧಿಗಳ ನಡತೆಯ ಕುರಿತು ಚರ್ಚಿಸುವ ಮೊದಲು, ಕೇಂದ್ರ ಸರ್ಕಾರದ ಏಜೆನ್ಸಿಯಿಂದ ತಯಾರಾಗುತ್ತಿರುವ ಡಿಪಿಆರ್ ಅನ್ನು ಹೇಗೆ ಪ್ರಶ್ನಿಸಬೇಕು ಎಂಬುದರ ಬಗ್ಗೆ ಜಿಲ್ಲೆಯ ಜನ ಗಂಭೀರ ಚರ್ಚೆ ನಡೆಸಬೇಕಾಗಿದೆ.
ಡಿಪಿಆರ್ ಎಲ್ಲಿ ತಯಾರಾಗುತ್ತದೆ? ಯಾರು ತಯಾರಿಸುತ್ತಾರೆ? ಅದರಲ್ಲಿ ನೆಲದ ನೀರಿನ ಹರಿವಿನ ವಾಸ್ತವದ ಮಾಹಿತಿ ಎಷ್ಟಿರಬಹುದು? ಅಧಿಕಾರಿಗಳು ನಿಜಕ್ಕೂ ಹಳ್ಳಿ ಹಳ್ಳಿಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಾರೆಯೇ, ಅಥವಾ ದೆಹಲಿಯಲ್ಲಿ ಕುಳಿತು ಉಪಗ್ರಹ ಚಿತ್ರಗಳು ಮತ್ತು ಗಣಿತ ಸೂತ್ರಗಳ ಆಧಾರದಲ್ಲಿ ಮುಳುಗಡೆ ಪ್ರದೇಶಗಳ ಲೆಕ್ಕಾಚಾರ ಮಾಡುತ್ತಾರೆಯೇ? ಈ ಪ್ರಕ್ರಿಯೆಯಲ್ಲಿರುವ ಆಗಬಹುದಾದ ಎಲ್ಲ ಎಡವಟ್ಟುಗಳನ್ನು ತಾರ್ಕಿಕವಾಗಿ, ಕಾನೂನು ಮಾರ್ಗದಲ್ಲಿ ಪ್ರಶ್ನಿಸಿ, ಡಿಪಿಆರ್ ಹಂತದಲ್ಲೇ ಯೋಜನೆಯನ್ನು ತಡೆಹಿಡಿಯುವ ಪ್ರಯತ್ನಕ್ಕೆ ಮೊದಲ ಆದ್ಯತೆ ಆಗಬೇಕು. ಮತ್ತು ಡಿಪಿಆರ್​ ಮಾಡುವವರು ಜಿಲ್ಲೆಗೆ ಬಂದಿಲ್ಲ ಎಂದಾದರೇ ಆಗ ಅದನ್ನು ಪ್ರಶ್ನಿಸಲೇಬೇಕು.

ಒಮ್ಮೆ ಡಿಪಿಆರ್ ಮಾಡುವ ತಂಡ ಬರುವುದೇ ಆದಲ್ಲ, ಮೇ ತಿಂಗಳಿನಲ್ಲಿ ಬರಬೇಕು. ಬರುವ ಟೀಂನವರು ಮಿನಲರ್​ ವಾಟರ್​ ಬಾಟಲಿ ಹಿಡಿದುಕೊಂಡು ಈ ಎರಡು ನದಿ ನೀರಿನ ಪಾತ್ರವನ್ನು, ನೀರಿನ ಲಭ್ಯತೆಯನ್ನು ಪರಾಮರ್ಶೆ ಮಾಡಲಿ. ಜಿಲ್ಲೆಯ ಎಲ್ಲೆಡೆ ಆಗ ಅವರು ಓಡಾಡಿದರೆ ‘ದೂಧ್​ ಕಾ ದೂಧ್​, ಪಾನಿ ಕಾ ಪಾನಿ,’ ಆಗುವುದು ಖಂಡಿತ.

ಪತ್ರ ಚಳುವಳಿ: ಸಂಭಾಷಣೆಗೆ ದಾರಿ

ಇಂದಿನ ಕಾಲದಲ್ಲಿ ಪತ್ರ ಬರೆಯುವ ಹೋರಾಟ ಹಳೆಯದಾಗಿ ಕಾಣಬಹುದು. ಆದರೆ ಅಹಿಂಸಾತ್ಮಕ ಹೋರಾಟದಲ್ಲಿ ಸಾರ್ವಜನಿಕರನ್ನು ಜಾಗೃತಗೊಳಿಸಲು ಇದು ಇನ್ನೂ ಒಂದು ಮಾರ್ಗ. ಈ ಉಪಕ್ರಮದಿಂದ ಬದಲಾವಣೆ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಪತ್ರ ಚಳುವಳಿಯ ಮೂಲಕ ಈ ಭಾಗದ ಜನರ ಮಿಡಿತ ಹೊರಜಗತ್ತಿಗೆ ತಲುಪಬಹುದು.  ಅದೇ ರೀತಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ಯಾಗ್ ಮಾಡಿ, ಶಿಷ್ಟ ಭಾಷೆಯಲ್ಲಿ ಲಕ್ಷಾಂತರ ಮನವಿಗಳು ತಲುಪಿದರೆ, ಕನಿಷ್ಠ ಚರ್ಚೆಗೆ ದಾರಿ ತೆರೆದುಕೊಳ್ಳುವ ಸಾಧ್ಯತೆ ಇದೆ. ಮಾತಾಡದ ಪಶ್ಚಿಮ ಘಟ್ಟದ ಕಾಡಿನ ಧ್ವನಿ, ಈ ಮೂಲಕ ಹೊರಜಗತ್ತಿಗೆ ತಲುಪಬಹುದು.

ಸ್ಥಳೀಯ ಜನಪ್ರತಿನಿಧಿಗಳು ಮತ್ತು ನಂಬಿಕೆಯ ಬಿಕ್ಕಟ್ಟು

80ರ ದಶಕದಿಂದಲೇ ಬೇಡ್ತಿ ಹಾಗೂ ನಂತರ ಬೇಡ್ತಿ–ಅಘನಾಶಿನಿ ನದಿಗಳ ಮೇಲೆ ಅಭಿವೃದ್ಧಿಯ ಹೆಸರಿನ ತೂಗುಗತ್ತಿ ಅಡ್ಡಾಡುತ್ತಲೇ ಇದೆ. ಗುಂಡೂರಾವ್ ಹಾಗೂ ಬಂಗಾರಪ್ಪ ಅವರ ಕಾಲದಲ್ಲಿ ಜನರ ಧ್ವನಿಗೆ ಮನ್ನಣೆ ನೀಡಿ ಯೋಜನೆಗಳನ್ನು ಕೈಬಿಟ್ಟಿದ್ದು ಈಗ ಇತಿಹಾಸ. ಇಂದಿನ ಪರಿಸ್ಥಿತಿ ಬೇರೆಯೇ. ಜನರ ಒತ್ತಾಯಕ್ಕೆ ಮನ್ನಣೆ ಸಿಗುತ್ತದೆ ಎಂಬ ನಂಬಿಕೆ ಕ್ಷೀಣಿಸುತ್ತಿದೆ. ಚುನಾವಣೆಯ ವೇಳೆ ಜನರ ಸಂಕಷ್ಟಕ್ಕೆ ಸ್ಪಂದಿಸುವೆವು ಎಂದು ಹೇಳಿ, ಅಧಿಕಾರಕ್ಕೆ ಬಂದ ಬಳಿಕ ಅದೇ ಜನರ ಮಾತನ್ನು ಕಡೆಗಣಿಸುವ ರಾಜಕಾರಣಿಗಳ ನಡತೆ, ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸಕ್ಕೆ ಧಕ್ಕೆ ತರುತ್ತಿದೆ.  ನವೆಂಬರ್​ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯದ ಕುರಿತು ಗಟ್ಟಿ ಧ್ವನಿ ಎತ್ತಬಹುದಾಗಿದ್ದರೂ, ಉತ್ತರ ಕನ್ನಡದ ಜನಪ್ರತಿನಿಧಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಮೌನಕ್ಕೆ ಶರಣಾಗಿರುವುದು, ಜನರಲ್ಲಿ ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಖಾಸಗಿ ಸದಸ್ಯರ ವಿಧೇಯಕ: ರಾಜಕೀಯ ಸಂಕೇತ

ಭವಿಷ್ಯದಲ್ಲಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜಲ, ವಿದ್ಯುತ್ ಅಥವಾ ಇತರೆ ಮೆಗಾ ಯೋಜನೆಗಳನ್ನು ತರುವುದಿಲ್ಲ ಎಂಬ ಉದ್ದೇಶದೊಂದಿಗೆ, ಖಾಸಗಿ ಸದಸ್ಯರ ವಿಧೇಯಕವನ್ನು ವಿಧಾನಮಂಡಲ ಹಾಗೂ ಸಂಸತ್ತಿನಲ್ಲಿ ಮಂಡಿಸಬೇಕು. ಈ ಮೂಲಕ ಒಂದು ಸಂಕಥನವನ್ನು ರಾಷ್ಟ್ರ ಮಟ್ಟದಲ್ಲಿ ನಿರೂಪಿಸಬಹುದು. ಖಾಸಗೀ ವಿಧೇಯಕ ಪಾಸ್ ಆಗುತ್ತದೆ ಎಂಬ ನಿರೀಕ್ಷೆಯಿಂದಲ್ಲ, ಆದರೆ ಪಕ್ಷಭೇದ ಮರೆತು ಈ ವಿಷಯದ ಮೇಲೆ ಚರ್ಚೆ ನಡೆಯಲೆಂಬ ಉದ್ದೇಶದಿಂದ ಈ ಹೆಜ್ಜೆ ಮಹತ್ವ ಪಡೆದುಕೊಳ್ಳುತ್ತದೆ. ಇದರಿಂದ ಇಡೀ ರಾಜ್ಯದಲ್ಲಿ ಚರ್ಚೆ ಆರಂಭವಾಗಿ, ಜನಬೆಂಬಲ ವಿಸ್ತರಿಸುವ ಸಾಧ್ಯತೆ ಇದೆ.

“ಸ್ವಾಮೀಜಿ ಹಿಂದೆ ನಾವಿದ್ದೇವೆ ” ಎಂಬ ರಾಜಕೀಯ ನಾಯಕರ ಘೋಷವಾಕ್ಯ
‘ಚಳುವಳಿಯ ನೇತೃತ್ವ ವಹಿಸಿರುವ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳ ಹಿಂದೆ ನಾವಿದ್ದೇವೆ,’ ಎಂದು ಎಲ್ಲ ಜನಪ್ರತಿನಿಧಿಗಳು ಹೇಳಿರುವುದು, ಅವರ ರಾಜಕೀಯದ ಆರೋಗ್ಯ ಕಾಪಾಡಲು ತೆಗೆದುಕೊಂಡ ನಿಲುವು. ಆದರೆ ಅದು ಕಾರ್ಯರೂಪಕ್ಕೆ ಬರುವ ಭರವಸೆ ಅಲ್ಲ.  ಒಂದು ಕ್ಷಣ ಹೀಗೆ ವಿಚಾರ ಮಾಡೋಣ: ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲವೆಂಬೆ ಕಾರಣವಿಟ್ಟುಕೊಂಡು, ಎಲ್ಲ ಜನಪ್ರತಿನಿಧಿಗಳು ರಾಜೀನಾಮೆ ನೀಡಬೇಕೆಂದು ಸ್ವಾಮೀಜಿಗಳು ಸೂಚಿಸಿದರೆ ಆಗ ಜನ ಪ್ರತಿನಿಧಿಗಳು ಅದಕ್ಕೆ ಹೇಗೆ ಪ್ರತಿಕ್ರಿಯಿಸಬಲ್ಲರು? ಅವರು ಆ ಹೆಜ್ಜೆ ಇಡಲಾರರು ಎಂಬುದು ಎಲ್ಲರಿಗೂ ತಿಳಿದ ಸತ್ಯ. ಪಕ್ಷದ ಹೈಕಮಾಂಡ್ ಅದಕ್ಕೆ ಅವಕಾಶ ನೀಡುವುದಿಲ್ಲ. ಆದ್ದರಿಂದ “ಸ್ವಾಮೀಜಿ ಹೇಳಿದ್ದನ್ನು ಮಾಡುತ್ತೇವೆ” ಎನ್ನುವುದು ಹೊಣೆಗಾರಿಕೆಯನ್ನು ಮುಂದೂಡುವ ತಂತ್ರ ಮಾತ್ರ.

ಜನ ನಾಯಕತ್ವದ ಜವಾಬ್ದಾರಿ

ಲೋಕಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಅನುಭವಿ ರಾಜಕಾರಣಿ. ಒಂದು ಪತ್ರ ನೀಡಿ ಫೋಟೋಗೆ ನಿಲ್ಲುವುದು ಕರ್ತವ್ಯಪಾಲನೆ ಅಲ್ಲ ಎಂಬುದೂ ಅವರಿಗೆ ತಿಳಿದಿದೆ. ಕೇಂದ್ರದ ಹಿರಿಯ ಮಂತ್ರಿಗಳೊಂದಿಗೆ ಗಂಭೀರ ಚರ್ಚೆ ನಡೆಸಿ, ನೆಲದ ವಾಸ್ತವ ಅರಿಯುವ ತಂಡವನ್ನು (fact finding committee) ಕಳುಹಿಸುವಂತೆ ಮಾಡಬೇಕಾದ್ದು ಅವರ ಜವಾಬ್ದಾರಿ.  ಅದೇ ರೀತಿ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ನಡತೆಯೂ ಪ್ರಶ್ನೆಗೆ ಒಳಪಟ್ಟಿದೆ. ಡಿಪಿಆರ್‌ಗೆ ಒಪ್ಪಿಗೆ ನೀಡಿದ ಪ್ರಕ್ರಿಯೆಯಲ್ಲಿ ತಮ್ಮ ಸರಕಾರದ ಪಾತ್ರ ಏನು ಎಂಬುದನ್ನು ಅವರು ಸ್ಪಷ್ಟಪಡಿಸಬೇಕಿದೆ. ಇಲ್ಲದಿದ್ದರೆ, ಇದು ಜಿಲ್ಲೆಯ ಜನರ ಪರವಾಗಿ ಮಾಡುವ ಹೋರಾಟಕ್ಕಿಂತ, ಒಂದು ರಾಜಕೀಯ ನಿರ್ವಹಣೆಯಂತೆ ಕಾಣುತ್ತದೆ.

ಬೊಮ್ಮಾಯಿ ಮತ್ತು ನದಿ ತಿರುವಿನ ರಾಜಕೀಯ

ಹಾಗೆ ನೋಡಿದರೆ, ಈ ಎಲ್ಲಾ ಬೆಳವಣಿಗೆಗಳ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಮುಖ ರೂವಾರಿಯಾಗಿ ಕಾಣಿಸುತ್ತಾರೆ. ಒಬ್ಬ ರಾಜಕಾರಣಿಯ ವೈಯಕ್ತಿಕ ರಾಜಕೀಯದ ಲೆಕ್ಕಾಚಾರಕ್ಕೆ ಇಡೀ ಪಶ್ಚಿಮ ಘಟ್ಟವೇ ಬೆಲೆ ತೆರಬೇಕಾದ ಸ್ಥಿತಿ ನಿರ್ಮಾಣವಾಗುತ್ತಿರುವುದು ಗಂಭೀರ ವಿಚಾರ. ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಗೆಲುವು ಸಾಧಿಸಿದ ಬೊಮ್ಮಾಯಿಯವರು, ಉಪಚುನಾವಣೆಯಲ್ಲಿ ತಮ್ಮ ಮಗನನ್ನು ಗೆಲ್ಲಿಸಿಕೊಂಡು ಬರಲು ವಿಫಲರಾದ ಕ್ಷಣದಲ್ಲೇ, ತಮ್ಮ ರಾಜಕೀಯ ಪ್ರಭಾವ ಕ್ಷೀಣಿಸುತ್ತಿದೆ ಎಂಬುದನ್ನು ಅರಿತುಕೊಂಡರು. ಅಂದಿನಿಂದಲೇ, ತಮ್ಮ ರಾಜಕೀಯ ಕುಸಿತಕ್ಕೆ ಪರಿಹಾರ ಹುಡುಕುವ ಪ್ರಯತ್ನವನ್ನು ಅವರು ಪ್ರಾರಂಭಿಸಿದ್ದಾರೆ ಮತ್ತು ನದಿ ತಿರುವು ಯೋಜನೆ ಕೂಡ ಅದರದೇ ಭಾಗ ಎಂಬುದು ಸ್ಪಷ್ಟವಾಗುತ್ತದೆ.

2020ರ ಬಜೆಟ್‌ನಲ್ಲಿ ಉಲ್ಲೇಖವಾಗಿದ್ದ ನದಿ ತಿರುವು ಯೋಜನೆಯ ಪ್ರಸ್ತಾವಕ್ಕೆ ಮರುಜೀವ ನೀಡುವ ಅವರ ಪ್ರಯತ್ನ ಕಾಣುತ್ತಿದೆ. ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರುವ ನಾಯಕರು ತಮ್ಮ ಕನಸುಗಳನ್ನು ನನಸು ಮಾಡಲು ಹಲವಾರು ರಾಜಕೀಯ ಪಟ್ಟು ಹಾಕುತ್ತಾರೆ. ಇದು ಹೊಸದಲ್ಲ. ಸಮಾಜ ಕೂಡ ಕೆಲವೊಂದು ಮಟ್ಟಿಗೆ ಇಂತಹ ಪಟ್ಟಿನಿಂದ ಸಮಾಜಕ್ಕೆ ಆದ ಕಷ್ಟ ಸಹಿಸಿಕೊಂಡು ಉದಯೋನ್ಮುಖ ರಾಜಕೀಯ ನಾಯಕರುಗಳಿಗೆ ಅಭಯ ಹಸ್ತ ನೀಡಿ ಬೆಳೆಸಿದ ಇತಿಹಾಸ ನಮ್ಮಲ್ಲಿದೆ. ಆದರೆ ರಾಜಕೀಯವಾಗಿ ಸೋಲಿನ ಹಂತ ತಲುಪಿದ ನಾಯಕರು, ತಮ್ಮ ಅಸ್ತಂಗತದ ಭಯದಲ್ಲಿ ಕೈಗೊಳ್ಳುವ ಅಸಂಗತ ನಿರ್ಧಾರಗಳಿಗೆ ಇಡೀ ಸಮಾಜವೇ ಭಾರೀ ಬೆಲೆ ತೆರಬೇಕಾದ ಉದಾಹರಣೆಗಳನ್ನು ನಾವು ಈ ಹಿಂದೆ ಸಾಕಷ್ಟು ನೋಡಿದ್ದೇವೆ. ಇಲಿ ಕೂಡ ಅಂತದೇ ಮಾದರಿಯೊಂದು ಪುನರಾವರ್ತನೆಯಾಗುತ್ತಿರುವ ಲಕ್ಷಣ ಕಾಣುತ್ತಿದೆ.
2020ರ ಬಜೆಟ್‌ನಲ್ಲಿ ಉಲ್ಲೇಖಗೊಂಡಿದ್ದ ನದಿ ತಿರುವು ಯೋಜನೆಗೆ ಈಗ ಮರುಹುಟ್ಟು ನೀಡುವ ಮೂಲಕ, ತಮ್ಮ ಮುಳುಗುತ್ತಿರುವ ರಾಜಕೀಯ ದೋಣಿಯನ್ನು ದಡ ಸೇರಿಸುವುದಷ್ಟೇ ಅಲ್ಲ, ಈ ಭಾಗದಲ್ಲಿ ಮತ್ತೆ ಜನನಾಯಕನಾಗಿ ಮರುಪ್ರವೇಶಿಸುವ ರಾಜಕೀಯ ತಂತ್ರವನ್ನು ಬೊಮ್ಮಾಯಿ ಹೂಡಿದ್ದಾರೆ. ಈ ಪ್ರಯತ್ನಕ್ಕೆ ಅಪ್ರತ್ಯಕ್ಷವಾಗಿ ನೆರವಾಗುತ್ತಿರುವವರು ಮುಖ್ಯಮಂತ್ರಿ ಸಿದ್ದರಾಮಯ್ಯ. ಇವರಿಬ್ಬರ ನಡುವೆ ವೈಯಕ್ತಿಕ ನಿಕಟತೆ ಇದೆ ಎಂಬ ಮಾತು ಹೊಸದೇನಲ್ಲ.

ತಮ್ಮ ಹುಟ್ಟೂರಾದ ಧಾರವಾಡವನ್ನು ಬಿಟ್ಟು, ಕರ್ಮಭೂಮಿಯಾಗಿ ಹಾವೇರಿಯನ್ನು ಆಯ್ಕೆ ಮಾಡಿಕೊಂಡು, ಪಕ್ಕದ ಗದಗ ಹಾಗೂ ರಾಯಚೂರು ಜಿಲ್ಲೆಗಳ ಜನರಿಗೆ ನೀರು ಒದಗಿಸಿದ ಹರಿಕಾರ ಎಂಬ ಕೀರ್ತಿಯನ್ನು ಸಂಪಾದಿಸಬೇಕೆಂಬ ಕನಸು ಬೊಮ್ಮಾಯಿಯವರದ್ದಾಗಿರಬಹುದು. ಈ ಮೂಲಕ ನಾಲ್ಕೈದು ಜಿಲ್ಲೆಗಳ ರಾಜಕೀಯ ಹಿಡಿತವನ್ನು ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಂಡು, ಫೀನಿಕ್ಸ್‌ ಹಕ್ಕಿಯಂತೆ ಮತ್ತೆ ರಾಜಕೀಯದಲ್ಲಿ ಮೇಲೆದ್ದು ಬರುವ ಅವರ ಆಶಯವೂ ಅಸಹಜವಲ್ಲ. ಆ ಕನಸಿನಲ್ಲಿ ತಪ್ಪೇನೂ ಇಲ್ಲ. ಆದರೆ ಆ ಕನಸನ್ನು ಸಾಕಾರಗೊಳಿಸಲು ನದಿ ತಿರುವು ಯೋಜನೆಯಂತಹ ಪರಿಸರ ವಿನಾಶಕಾರಿ ಮಾರ್ಗವನ್ನು ಆಯ್ಕೆ ಮಾಡಿರುವುದು ಅತ್ಯಂತ ಆತಂಕಕಾರಿ.
ಪಶ್ಚಿಮ ಘಟ್ಟದ ನದಿಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣ (quantity) ಮತ್ತು ಪರಿಮಾಣ (volume) ಕುರಿತು ತಪ್ಪು ಅಥವಾ ಅಪೂರ್ಣ ಮಾಹಿತಿಯನ್ನು ನೀಡುವ ಮೂಲಕ, ಈಗಾಗಲೇ ಬಯಲುಸೀಮೆಯ ಜಿಲ್ಲೆಗಳ ಕೆಲ ರೈತ ಮುಖಂಡರನ್ನು ಎತ್ತಿಕಟ್ಟಿರುವಂತೆ ಕಾಣುತ್ತದೆ. ಇದೇ ತಪ್ಪು ಮಾಹಿತಿಯನ್ನು ಆಧಾರ ಮಾಡಿಕೊಂಡು, ಬಿಜೆಪಿ ಹೈಕಮಾಂಡ್‌ಗೆ ಈ ಭಾಗದಲ್ಲಿ ಪಕ್ಷವನ್ನು ವಿಸ್ತರಿಸುವ ಭ್ರಮಾತ್ಮಕ ಕನಸನ್ನು ಮಾರಿದ್ದರೂ ಆಶ್ಚರ್ಯಪಡಬೇಕಾಗಿಲ್ಲ. ರಾಯಚೂರು ಲೋಕಸಭಾ ಕ್ಷೇತ್ರ ಈಗ ಕಾಂಗ್ರೆಸ್ ಪಾಲಾಗಿದೆ ಎಂಬ ವಾಸ್ತವವನ್ನು ಮನಗಂಡ ಹೈ ಕಮಾಂಡ್​, ಬೊಮ್ಮಾಯಿಯವರ ಜನಪರ ರಾಜಕೀಯ ತಂತ್ರದಲ್ಲಿ ಸತ್ಯಾಂಶವಿದೆಯೆಂದು ನಂಬಿರಬಹುದು.

ಇಂತಹ ಬಣ್ಣದ ಮಾತುಗಳು ಮತ್ತು ಅತಿರಂಜಿತ ನಿರೀಕ್ಷೆಗಳ ಆಧಾರದ ಮೇಲೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ನದಿ ತಿರುವು ಯೋಜನೆಗೆ ಕೈ ಹಾಕಿದರೆ, ಮುಂದಿನ ದಿನಗಳಲ್ಲಿ ಕೈ ಸುಟ್ಟುಕೊಳ್ಳುವುದು ಖಚಿತ. ಬೇಸಿಗೆಯಲ್ಲಿ ನೀರೇ ಸಿಗದ ಪೂರ್ವಾಭಿಮುಖ ನದಿ ನೀರನ್ನು ಪಶ್ಚಿಮಕ್ಕೆ ತಿರುಗಿಸಿ ಮೂರ್ನಾಲ್ಕು ಜಿಲ್ಲೆಗೆ ನೀರುಣಿಸುವುದು ಕನಸಿನ ಮಾತೇ ಸರಿ. ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅವರಿಗೆ ಸಾಕಷ್ಟು ಸ್ವಾತಂತ್ರ್ಯ ನೀಡಿದ್ದರೂ, ಅವರ ಆಡಳಿತ ಕಾಲದಲ್ಲಿ ರಾಜಕೀಯ ಅಥವಾ ಆಡಳಿತಾತ್ಮಕ ಚಹರೆಯಲ್ಲಿ ಗಮನಾರ್ಹ ಬದಲಾವಣೆಯನ್ನು ರಾಜ್ಯ ಕಂಡಿರಲಿಲ್ಲ. ಅಷ್ಟೇ ಅಲ್ಲ, 2023ರ ವಿಧಾನಸಭಾ ಚುನಾವಣೆಯಲ್ಲಿ ಬೊಮ್ಮಾಯಿಯವರ ನೇತೃತ್ವದಲ್ಲಿ 100ಕ್ಕಿಂತ ಹೆಚ್ಚು ಸ್ಥಾನಗಳು ಬರುತ್ತವೆ ಎಂಬ ವಾತಾವರಣವನ್ನು ಸೃಷ್ಟಿಸಿ, ನಂತರ ಭಾರೀ ಸೋಲು ಎದುರಾದಾಗ, ಅದಕ್ಕೆ ಕಾಂಗ್ರೆಸ್‌ನ ಐದು ಗ್ಯಾರಂಟಿಗಳೇ ಕಾರಣವೆಂದು ಹೈಕಮಾಂಡ್‌ಗೆ ವರದಿ ಸಲ್ಲಿಸಿ ಹೊಣೆ ತಪ್ಪಿಸಿಕೊಂಡಿರುವುದೂ ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದೆ. ಇಂತಹ ಕಾರ್ಯಕ್ಷಮತೆಯ ದಾಖಲೆಯಿರುವ ನಾಯಕರ ಮಾತಿಗೆ ಬಿಜೆಪಿ ಹೈಕಮಾಂಡ್ ಹೆಚ್ಚಿನ ಮಹತ್ವ ನೀಡಿರುವುದು ನಿಜಕ್ಕೂ ವಿಪರ್ಯಾಸಕರವಾಗಿದೆ.
ಯಾಕೆಂದರೆ, ಈ ಯೋಜನೆ ಜಾರಿಯಾಗಿ ನಿರೀಕ್ಷಿಸಿದಷ್ಟು ನೀರು ಲಭ್ಯವಾಗದೆ, ಜನರ ಕನಸುಗಳು ಭಗ್ನವಾದರೆ, ಜನರ ಆಕ್ರೋಶ ಬೊಮ್ಮಾಯಿಯವರ ಮೇಲೆ ಮಾತ್ರ ಸೀಮಿತವಾಗುವುದಿಲ್ಲ. ಅದರ ಹೊರೆ ನೇರವಾಗಿ ಬಿಜೆಪಿಯ ಮೇಲೆಯೇ ಬೀಳುತ್ತದೆ. ಈ ಸತ್ಯವನ್ನು ಬಿಜೆಪಿಯ ಕೇಂದ್ರ ನಾಯಕತ್ವ ಈ ಸಮಯದಲ್ಲಿ ಅರಿತರೆ ಒಳಿತು.

Source link

Shaksgam Valley: ಭಾರತ-ಚೀನಾ ನಡುವಿನ ಹೊಸ ಸಂಘರ್ಷಕ್ಕೆ ಕಾರಣವಾದ ಶಕ್ಸ್‌ಗಮ್ ಕಣಿವೆ ಎಲ್ಲಿದೆ? ಏನಿದು ವಿವಾದ? – Kannada News | Explainer China Provokes India With Shaksgam Valley Claim Where is this Valley what is the Dispute

ನವದೆಹಲಿ, ಜನವರಿ 13: ಭಾರತದ ಶಕ್ಸ್‌ಗಮ್ ಕಣಿವೆಯ (Shaksgam Valley) ಮೇಲೆ ಪ್ರಾದೇಶಿಕ ಹಕ್ಕನ್ನು ಪ್ರತಿಪಾದಿಸಲು ಚೀನಾ (China) ಮತ್ತೊಮ್ಮೆ ಪ್ರಯತ್ನಿಸಿದೆ. ಪಾಕಿಸ್ತಾನದೊಂದಿಗೆ ಸಹಿ ಮಾಡಲಾದ ಭಾರತದ ದಶಕಗಳಷ್ಟು ಹಳೆಯದಾದ ಗಡಿ ಒಪ್ಪಂದವನ್ನು ಚೀನಾ ಪ್ರಚೋದಿಸುತ್ತಿದೆ. ಈ ಒಪ್ಪಂದವನ್ನು ಭಾರತ ನಿರಂತರವಾಗಿ ಅಮಾನ್ಯವೆಂದು ತಿರಸ್ಕರಿಸಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK)ದಲ್ಲಿರುವ ಮತ್ತು ಭಾರತ, ಚೀನಾ, ಪಾಕಿಸ್ತಾನದ ನಡುವಿನ ದೀರ್ಘಕಾಲದ ವಿವಾದದ ಅಂಶವಾಗಿ ಉಳಿದಿರುವ ಶಕ್ಸ್‌ಗಮ್ ಕಣಿವೆ ಪ್ರದೇಶದಲ್ಲಿ ಚೀನಾದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಭಾರತದ ಆಕ್ಷೇಪಣೆಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ.

ಪಾಕಿಸ್ತಾನವು 1963ರಲ್ಲಿ ಶಕ್ಸ್‌ಗಮ್ ಕಣಿವೆಯಲ್ಲಿ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳಿಂದ 5,180 ಚದರ ಕಿ.ಮೀ ಭಾರತೀಯ ಭೂಪ್ರದೇಶವನ್ನು ಚೀನಾಕ್ಕೆ ಕಾನೂನುಬಾಹಿರವಾಗಿ ಬಿಟ್ಟುಕೊಟ್ಟಿತ್ತು. ಭಾರತ ಈ ಕ್ರಮವನ್ನು ಕಾನೂನುಬಾಹಿರ ಎಂದು ದೃಢವಾಗಿ ತಿರಸ್ಕರಿಸಿದೆ. ಈ ಪ್ರದೇಶದ ಮೇಲೆ ಭಾರತದ ಹಕ್ಕನ್ನು ಪ್ರತಿಪಾದಿಸಿದೆ. ಆದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶವನ್ನು ಬಿಟ್ಟುಕೊಡುವ 1963ರ ಈ ಒಪ್ಪಂದವು ಪಾಕಿಸ್ತಾನ ಮತ್ತು ಚೀನಾಕ್ಕೆ ನಿರ್ಣಾಯಕವಾಗಿತ್ತು. ಏಕೆಂದರೆ ಅದು ಅವರಿಗೆ ಕಾಮನ್ ಗಡಿಯನ್ನು ಒದಗಿಸಿತು. ಒಂದುವೇಳೆ ಇದು ಆಗದೆ ಇರುತ್ತಿದ್ದರೆ ಅದಕ್ಕೆ ಯಾವುದೇ ಗಡಿಗಳು ಇರುತ್ತಿರಲಿಲ್ಲ.

ಶಕ್ಸ್‌ಗಮ್ ಕಣಿವೆಯ ಬಗ್ಗೆ ಭಾರತದ ನಿಲುವಿನ ಕುರಿತು ಕೇಳಿದಾಗ, ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಬೀಜಿಂಗ್‌ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಆ ಪ್ರದೇಶವು ಚೀನಾದ ಭಾಗವಾಗಿದೆ ಎಂದು ಹೇಳಿದ್ದರು. ಇದು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಪಾಕಿಸ್ತಾನದ ಜೊತೆಗಿನ ತನ್ನ ಒಪ್ಪಂದವನ್ನು ಉಲ್ಲೇಖಿಸಿದ ಮಾವೋ ಚೀನಾ ಮತ್ತು ಪಾಕಿಸ್ತಾನಗಳು ಗಡಿ ಒಪ್ಪಂದಕ್ಕೆ ಸಹಿ ಹಾಕಿವೆ, 1960ರ ದಶಕದಿಂದಲೂ ಎರಡೂ ದೇಶಗಳ ನಡುವಿನ ಗಡಿಯನ್ನು ನಿರ್ಧರಿಸಿವೆ ಎಂದು ಹೇಳಿದ್ದರು.

ಶಕ್ಸ್‌ಗಮ್ ಕಣಿವೆಯಲ್ಲಿ ಚೀನಾದ ಮೂಲಸೌಕರ್ಯ ಕಾರ್ಯವನ್ನು ಭಾರತ ತಿರಸ್ಕರಿಸಿತ್ತು. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಶಕ್ಸ್‌ಗಮ್ ಕಣಿವೆ ಭಾರತದ ಪ್ರದೇಶವಾಗಿದೆ. 1963ರಲ್ಲಿ ಸಹಿ ಹಾಕಲಾದ ಚೀನಾ-ಪಾಕಿಸ್ತಾನ ಗಡಿ ಒಪ್ಪಂದವು ಕಾನೂನುಬಾಹಿರ ಮತ್ತು ಅಮಾನ್ಯವಾಗಿದೆ ಎಂದು ನಾವು ನಿರಂತರವಾಗಿ ಸಮರ್ಥಿಸಿಕೊಂಡಿದ್ದೇವೆ” ಎಂದಿದ್ದರು. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿದೆ. ಭಾರತ ನಿರಂತರವಾಗಿ ಈ ನಿಲುವನ್ನು ಚೀನಾ ಮತ್ತು ಪಾಕಿಸ್ತಾನ ಎರಡಕ್ಕೂ ತಿಳಿಸಿದೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: Video: ಜಮ್ಮು-ಕಾಶ್ಮೀರದ ಗಡಿಯಲ್ಲಿ ಐದು ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​

“ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ. ಇದನ್ನು ಪಾಕಿಸ್ತಾನ ಮತ್ತು ಚೀನಾ ಅಧಿಕಾರಿಗಳಿಗೆ ಹಲವಾರು ಬಾರಿ ಸ್ಪಷ್ಟವಾಗಿ ತಿಳಿಸಲಾಗಿದೆ. ಶಕ್ಸ್‌ಗಮ್ ಕಣಿವೆಯಲ್ಲಿನ ನೆಲದ ವಾಸ್ತವವನ್ನು ಬದಲಾಯಿಸುವ ಪ್ರಯತ್ನಗಳ ವಿರುದ್ಧ ನಾವು ಚೀನಾದ ಕಡೆಯಿಂದ ನಿರಂತರವಾಗಿ ಪ್ರತಿಭಟಿಸಿದ್ದೇವೆ” ಎಂದು ರಣಧೀರ್ ಜೈಸ್ವಾಲ್ ಹೇಳಿದ್ದರು.

ಶಕ್ಸ್‌ಗಮ್‌ನಲ್ಲಿ ಪ್ರದೇಶದಲ್ಲಿ ಚೀನಾದ ಚಲನೆಗೆ ಭಾರತದ ನಿರಂತರ ಆಕ್ಷೇಪಣೆಯ ಹೊರತಾಗಿಯೂ, ಚೀನಾ ಶಕ್ಸ್‌ಗಮ್ ಮೂಲಕ ಸರ್ವಋತು ರಸ್ತೆಯ ನಿರ್ಮಾಣವನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ. 2017ರಲ್ಲಿ ಭೂತಾನ್‌ನ ಡೋಕ್ಲಾಮ್‌ನಲ್ಲಿ ಉಂಟಾದ ಬಿಕ್ಕಟ್ಟಿನ ನಂತರ ಶಕ್ಸ್‌ಗಮ್‌ನಲ್ಲಿ ಚೀನಾದ ನಿರ್ಮಾಣ ಚಟುವಟಿಕೆ ವೇಗ ಪಡೆದುಕೊಂಡಿದೆ. ಚೀನಾ ನಿರ್ಮಿಸುತ್ತಿರುವ ಹೊಸ ರಸ್ತೆ ವಿಶ್ವದ ಅತಿ ಎತ್ತರದ ಸಿಯಾಚಿನ್ ಹಿಮನದಿಯಿಂದ 49 ಕಿ.ಮೀ.ಗಿಂತ ಕಡಿಮೆ ದೂರದಲ್ಲಿದೆ ಎನ್ನಲಾಗಿದೆ.

ಶಕ್ಸ್​ಗಮ್​ ಕಣಿವೆ ಎಲ್ಲಿದೆ?:

ಶಕ್ಸ್‌ಗಮ್ ಕಣಿವೆಯನ್ನು ಟ್ರಾನ್ಸ್ ಕಾರಕೋರಂ ಟ್ರ್ಯಾಕ್ಟ್ ಎಂದೂ ಕರೆಯಲಾಗುತ್ತದೆ. ಇದು ಕಾರಕೋರಂ ಶ್ರೇಣಿಯ ಉತ್ತರಕ್ಕೆ ಇರುವ ದೂರದ, ಎತ್ತರದ ಕಣಿವೆಯಾಗಿದೆ. ಶಕ್ಸ್‌ಗಮ್ ಕಣಿವೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಹುಂಜಾ-ಗಿಲ್ಗಿಟ್ ಪ್ರದೇಶದಲ್ಲಿದೆ. ಇದು ವಿವಾದಿತ ಪ್ರದೇಶವಾಗಿದೆ. ಈ ಸೂಕ್ಷ್ಮ ಪ್ರದೇಶವು ಭಾರತಕ್ಕೆ ಸೇರಿದ್ದು ಎಂದು ಭಾರತ ಪ್ರತಿಪಾದಿಸಿದೆ. 1963ರಲ್ಲಿ ಪಾಕಿಸ್ತಾನವು 2 ರಾಷ್ಟ್ರಗಳ ನಡುವಿನ ಗಡಿ ವಿವಾದಗಳನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ‘ಗಡಿ ಒಪ್ಪಂದ’ದ ಭಾಗವಾಗಿ ಶಕ್ಸ್‌ಗಮ್ ಕಣಿವೆಯನ್ನು ಚೀನಾಕ್ಕೆ ಬಿಟ್ಟುಕೊಟ್ಟಿತು.

ಇದನ್ನೂ ಓದಿ: ಆಪರೇಷನ್ ಸಿಂಧೂರ್ ವೇಳೆ ಬೀಜಿಂಗ್ ಮಧ್ಯಸ್ಥಿಕೆ; ಲಜ್ಜೆಗೆಟ್ಟು ಚೀನಾದ ಬೆಂಬಲಕ್ಕೆ ನಿಂತ ಪಾಕಿಸ್ತಾನ

ಶಕ್ಸ್‌ಗಮ್ ಕಣಿವೆಯು ಉತ್ತರಕ್ಕೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (PRC)ದ ಕ್ಸಿನ್‌ಜಿಯಾಂಗ್ ಪ್ರಾಂತ್ಯದೊಂದಿಗೆ, ದಕ್ಷಿಣ ಮತ್ತು ಪಶ್ಚಿಮಕ್ಕೆ ಪಾಕ್ ಆಕ್ರಮಿತ ಕಾಶ್ಮೀರದ ಉತ್ತರ ಪ್ರದೇಶಗಳೊಂದಿಗೆ ಮತ್ತು ಪೂರ್ವಕ್ಕೆ ಸಿಯಾಚಿನ್ ಹಿಮನದಿ ಪ್ರದೇಶದೊಂದಿಗೆ ಗಡಿಗಳನ್ನು ಹಂಚಿಕೊಂಡಿದೆ. ಶಕ್ಸ್‌ಗಮ್ ಕಣಿವೆಯನ್ನು ಪ್ರಸ್ತುತ ಚೀನಾವು ಕ್ಸಿನ್‌ಜಿಯಾಂಗ್‌ನ ಭಾಗವಾಗಿ ನಿರ್ವಹಿಸುತ್ತಿದೆ. ಆದರೆ, ಶಕ್ಸ್‌ಗಮ್ ಕಣಿವೆಯು ಹಿಂದಿನ ರಾಜಪ್ರಭುತ್ವದ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರದ (ಈಗ ಲಡಾಖ್) ಭಾಗವಾಗಿದೆ ಎಂದು ಭಾರತ ಪದೇಪದೆ ಪ್ರತಿಪಾದಿಸುತ್ತಿದೆ. 1947- 1948ರ ಯುದ್ಧದ ಸಮಯದಲ್ಲಿ ಪಾಕಿಸ್ತಾನವು ಈ ಪ್ರದೇಶದ ಮೇಲೆ ಹಿಡಿತ ಸಾಧಿಸಿತು. ನಂತರ 1963ರ ಚೀನಾ-ಪಾಕಿಸ್ತಾನ ಒಪ್ಪಂದದ ಅಡಿಯಲ್ಲಿ ಅದನ್ನು ಚೀನಾಕ್ಕೆ ವರ್ಗಾಯಿಸಿತು.

ಶಕ್ಸ್‌ಗಮ್ ಕಣಿವೆಯ ವಿವಾದವೇನು?:

ಶಕ್ಸ್‌ಗಮ್ ಕಣಿವೆಯ ಕುರಿತಾದ ಮುಖ್ಯ ವಿವಾದವೆಂದರೆ ಈ ಪ್ರದೇಶದಲ್ಲಿ ಗಡಿಯನ್ನು ನಿರ್ಧರಿಸುವ ಕಾನೂನುಬದ್ಧ ಹಕ್ಕನ್ನು ಯಾರು ಹೊಂದಿದ್ದರು ಎಂಬುದು. 1963ರಲ್ಲಿ ಪಾಕಿಸ್ತಾನ ಮತ್ತು ಚೀನಾ ಗಡಿ ಒಪ್ಪಂದಕ್ಕೆ ಸಹಿ ಹಾಕಿದವು. ಅದು ಶಕ್ಸ್‌ಗಮ್ ಅಥವಾ ಟ್ರಾನ್ಸ್-ಕರಕೋರಂ ಪ್ರದೇಶದ ನಿಯಂತ್ರಣವನ್ನು ಚೀನಾಕ್ಕೆ ವರ್ಗಾಯಿಸಿತು. ಆದರೆ, ಭಾರತ ಈ ‘ಗಡಿ ಒಪ್ಪಂದ’ವನ್ನು ಎಂದಿಗೂ ಒಪ್ಪಿಕೊಂಡಿಲ್ಲ. ಅತ್ತ ಪಾಕಿಸ್ತಾನ ಕೂಡ ಭಾರತವು ಜಮ್ಮು ಮತ್ತು ಕಾಶ್ಮೀರದ ಭಾಗವೆಂದು ಪರಿಗಣಿಸುವ ಪ್ರದೇಶವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಹೇಳಿದೆ.

2024ರಲ್ಲಿಯೂ ಸಹ ಶಕ್ಸ್‌ಗಮ್ ಕಣಿವೆಯಲ್ಲಿ ಚೀನಾದ ರಸ್ತೆ ನಿರ್ಮಾಣದ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿತ್ತು. ಶಕ್ಸ್‌ಗಮ್ ಕಣಿವೆಯನ್ನು ಚೀನಾ ತನ್ನ ಪ್ರದೇಶವೆಂದು ಪ್ರತಿಪಾದಿಸಲು ಪ್ರಯತ್ನಿಸಿದ 1963ರ ಚೀನಾ-ಪಾಕಿಸ್ತಾನ ಗಡಿ ಒಪ್ಪಂದವನ್ನು ಭಾರತ ನಿರಂತರವಾಗಿ ತಿರಸ್ಕರಿಸಿದೆ. ಭಾರತದ ಪ್ರದೇಶದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಶಕ್ಸ್‌ಗಮ್ ಕಣಿವೆಯಲ್ಲಿ ಉದ್ದವಾದ, ಎಲ್ಲಾ ಹವಾಮಾನದಲ್ಲೂ ಬಳಸಬಹುದಾದ ರಸ್ತೆಯನ್ನು ನಿರ್ಮಿಸುವ ಚೀನಾದ ಯೋಜನೆಯಿಂದ ಭಾರತಕ್ಕೆ ಕಳವಳ ಉಂಟಾಗಿದೆ. ಚೀನಾ ಈಗಾಗಲೇ ಸುಮಾರು 75 ಕಿಲೋಮೀಟರ್ ರಸ್ತೆಯನ್ನು ನಿರ್ಮಿಸಿದೆ ಎಂದು ವರದಿಗಳು ಸೂಚಿಸುತ್ತವೆ. ಇದು ಸುಮಾರು 10 ಮೀಟರ್ ಅಗಲವಿದೆ ಎಂದು ಅಂದಾಜಿಸಲಾಗಿದೆ.

ಶಕ್ಸ್‌ಗಮ್ ಕಣಿವೆಯಲ್ಲಿ ಒರಟಾದ ಭೂಪ್ರದೇಶ ಮತ್ತು ತೀವ್ರ ಕೆಟ್ಟದಾದ ಹವಾಮಾನ ಪರಿಸ್ಥಿತಿಗಳು ಇರುವುದರಿಂದಾಗಿ ಅಲ್ಲಿ ಹೆಚ್ಚಾಗಿ ಜನವಸತಿಯಿಲ್ಲ. ಇದರ ಹೊರತಾಗಿಯೂ, ಅಲ್ಲಿನ ಪರ್ವತ ಶ್ರೇಣಿಯ ಉದ್ದಕ್ಕೂ ಇರುವ ಸ್ಥಳ, ಚೀನಾ ಮತ್ತು ಪಾಕಿಸ್ತಾನವನ್ನು ಸಂಪರ್ಕಿಸುವ ಪ್ರಮುಖ ಪಾಸ್‌ಗಳು ಮತ್ತು ವ್ಯಾಪಾರ ಮಾರ್ಗಗಳಿಗೆ ಹತ್ತಿರದಲ್ಲಿರುವುದರಿಂದ ಇದು ಭಾರತ ಮತ್ತು ಚೀನಾ ಎರಡಕ್ಕೂ ಅತ್ಯಂತ ಪ್ರಮುಖವಾಗಿದೆ. ಸಿಯಾಚಿನ್​ಗೆ ಹತ್ತಿರವಾಗಿರುವುದರಿಂದ ಅಲ್ಲಿ ಭಾರತವು ಕಮಾಂಡಿಂಗ್ ಮಿಲಿಟರಿ ಉಪಸ್ಥಿತಿಯನ್ನು ಕಾಯ್ದುಕೊಳ್ಳುತ್ತದೆ ಮತ್ತು ಹಲವು ಮಿಲಿಟರಿ ಘರ್ಷಣೆಗಳನ್ನು ಕಂಡಿದೆ. ಚೀನಾಗೆ ಕೂಡ ಈ ಪ್ರದೇಶದ ಮೇಲೆ ನಿಯಂತ್ರಣವನ್ನು ಬಲಪಡಿಸುವುದು ಅದರ ವ್ಯಾಪಾರ ಮತ್ತು ಮಿಲಿಟರಿ ಚಲನಶೀಲತೆಗೆ ಬಹಳ ಮುಖ್ಯವಾಗಿದೆ. ಹೀಗಾಗಿ, ಈ ಗಡಿ ಪ್ರದೇಶದ ವಿವಾದ ಇದೀಗ ಚೀನಾ ಮತ್ತು ಭಾರತದ ನಡುವಿನ ಹೊಸ ಉದ್ವಿಗ್ನತೆಗೆ ಕಾರಣವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 4:17 pm, Tue, 13 January 26

Source link

ಏಯ್ ನೋಡ್ರಪ್ಪ ಅದೇ ಫೈನಲ್: ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು? – Kannada News | Siddaramaiah Talks about Leadership change after Met Rahul Gandhi In Mysuru

ಮೈಸೂರು, (ಜನವರಿ 13): ಕರ್ನಾಟಕ ಕಾಂಗ್ರೆಸ್‌ನಲ್ಲಿ‌ (Karnataka Congress) ನವೆಂಬರ​​ನಿಂದಲೇ ಕುರ್ಚಿ ಕಾಳಗ ಜೋರಾಗಿಯೇ ನಡೆದಿದೆ. ಒಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕೊಟ್ಟ ಮಾತು ನೆನಪಿಸುತ್ತಿದ್ದರೆ ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ (Siddaramaiah) ಹೈಕಮಾಂಡ್ ನಾಯಕರ ಮಾತೇ ನನಗೆ ಶಾಸನ ಎನ್ನುತ್ತಿದ್ದಾರೆ. ಈ ಕಾಳಗದ ನಡುವೆಯೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ರಾಹುಲ್ ಗಾಂಧಿಯನ್ನ (Rahul Gandhi) ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ. ತಮಿಳುನಾಡಿಗೆ ತೆರಳಳು ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮೈಸೂರಿಗೆ ಬಂದಿಳಿದ ರಾಹುಲ್ ಗಾಂಧಿ ಅವರನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಸ್ವಾಗತಿಸಿದರು. ಈ ವೇಳೆ ಕೆಲ ನಿಮಿಷಗಳ ಕಾಲ ರಾಹುಲ್ ಗಾಂಧಿ ಜತೆ ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ನಮ್ಮಲ್ಲಿ ಯಾವ ಗೊಂದಲ ಇಲ್ಲ, ಯಾವ ಸಮಸ್ಯೆಯೂ ಇಲ್ಲ. ಊಹಾಪೋಹ ಬಗ್ಗೆ ಚರ್ಚೆ ಮಾಡ್ತಿರುವುದು ಮಾಧ್ಯಮದವರು. ಯಾರೋ ಎಂಎಲ್ಎ ಏನೂ ಗೊತ್ತಿಲ್ಲದೆ ಏನೋ ಹೇಳುತ್ತಾರೆ. ಅವರಿಗೆ ಏನು ಗೊತ್ತು? ಮಾತನಾಡಬೇಕಿರುವುದು ನಾನು ಮತ್ತು ಡಿ.ಕೆ.ಶಿವಕುಮಾರ್. ಡಿಸಿಎಂ ಡಿ.ಕೆ.ಶಿವಕುಮಾರ್ ಏನಾದರೂ ಮಾತನಾಡಿದ್ದಾರಾ? ನಾನೇನಾದರೂ ಮಾತನಾಡಿದ್ದೀನಾ? ಮಾಹಿತಿ ಇಲ್ಲದ MLA ಹೇಳಿದ್ದಕ್ಕೆ ಪ್ರತಿಕ್ರಿಯೆ ಕೇಳಿದರೆ ಹೇಗೆ? ನಮ್ಮಲ್ಲಿ ಯಾವ ಗೊಂದಲ ಇಲ್ಲ. ಯಾವ ಚರ್ಚೆಯೂ ಇಲ್ಲ.ಖರ್ಗೆ, ಡಿ.ಕೆ.ಶಿವಕುಮಾರ್​ ಜೊತೆ ನಾನು ಮಾತನಾಡಿದ್ದೇನೆ. ಎಲ್ಲೂ ಯಾರ ಅಪಸ್ವರ ಇಲ್ಲ, ಯಾವ ಸಮಸ್ಯೆಯೂ ಇಲ್ಲ. ಏನೇ ತೀರ್ಮಾನಗಳಿದ್ದರೂ ಹೈಕಮಾಂಡ್ ಮಾಡುತ್ತೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧವೆಂದು ನಾನು, ಡಿಕೆ ಹೇಳಿದ್ದೇವೆ. ಸದ್ಯಕ್ಕೆ ನಾನೇನು ದೆಹಲಿಗೆ ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ನಾಯಕತ್ವ ಬದಲಾವಣೆ ಜಟಾಪಟಿ ಸಂಕ್ರಾಂತಿ ಬಳಿಕ ಮತ್ತಷ್ಟು ಚುರುಕು? ಸಿಕ್ತು ಮಹತ್ವದ ಸುಳಿವು

Source link

24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್ – Kannada News | Dhruvant describes his journey in Bigg Boss as one man army fight

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss) ಫಿನಾಲೆ ವಾರ ಇದೀಗ ಚಾಲ್ತಿಯಲ್ಲಿದೆ. ಮನೆಯಲ್ಲಿ ಏನೇನೋ ಟಾಸ್ಕ್​​ಗಳು ನಡೆಯುತ್ತಿವೆ. ಇದೀಗ ಬಿಗ್​​ಬಾಸ್ ಮನೆಗೆ ಪ್ರೇಕ್ಷಕರು ಬಂದಿದ್ದಾರೆ. ಪ್ರೇಕ್ಷಕರ ಮುಂದೆ ಸ್ಪರ್ಧಿಗಳು ತಮ್ಮ ಜರ್ನಿಯ ಬಗ್ಗೆ ಹೇಳಬೇಕಿದೆ. ಧ್ರುವಂತ್, ತಾವು ಇಡೀ ಸೀಸನ್ ಒನ್ ಮ್ಯಾನ್ ಆರ್ಮಿ ರೀತಿಯಲ್ಲಿ ಆಟ ಆಡಿರುವುದಾಗಿ ಹೇಳಿದ್ದಾರೆ. ಈ ಮನೆಯಲ್ಲಿ ನನ್ನ ವಿರುದ್ಧ ಏನೇನೋ ಪಿತೂರಿ ಮಾಡಲಾಯ್ತು ಆದರೆ ಎಲ್ಲವನ್ನೂ ಎದುರಿಸಿದ್ದೀನಿ, ಟಾಸ್ಕ್​​ಗಳಲ್ಲಿ ಗೆದ್ದಿದ್ದೀನಿ. 24 ತಲೆ ಇದ್ದಿದ್ದನ್ನು ಈಗ ಕೇವಲ ಆರು ತಲೆಗೆ ತಂದಿದ್ದೀನಿ, ಆರಂಭದಿಂದಲೂ ಒನ್ ಮ್ಯಾನ್ ಆರ್ಮಿಯಾಗಿ ಆಟ ಆಡಿದ್ದೀನಿ ಎಂದಿದ್ದಾರೆ ಧ್ರುವಂತ್, ಇಲ್ಲಿ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಗಮನಿಸಿ…! ಕೆಲಸ ಬಿಟ್ಟು 3 ವರ್ಷಕ್ಕೆ ಇಪಿಎಫ್ ಅಕೌಂಟ್​ಗೆ ಬಡ್ಡಿ ಸಿಗಲ್ಲ ಅನ್ನೋದು ನಿಜ ಅಲ್ಲ; ಇಲ್ಲಿದೆ ಸತ್ಯಾಂಶ – Kannada News | EPF account keeps earning interest even after changing job or no employer contribution for 3 years

ಇಪಿಎಫ್ ನಿಯಮಗಳು ಅಪ್​ಡೇಟ್ ಆದರೂ ಬಹಳಷ್ಟು ಜನರು ಈಗಲೂ ಹಳೆಯ ನಿಯಮಗಳ ತಿಳಿವಳಿಕೆಯನ್ನೇ ಮುಂದುವರಿಸಿದ್ದಾರೆ. ಇಪಿಎಫ್ ಅಕೌಂಟ್ (EPF account) ಸಕ್ರಿಯವಾಗಿಲ್ಲದಿದ್ದರೆ ಮೂರು ವರ್ಷದ ನಂತರ ಆ ಹಣಕ್ಕೆ ಬಡ್ಡಿ ಬರೋದು ನಿಂತು ಹೋಗುತ್ತೆ ಎಂದು ಈಗಲೂ ಕೆಲ ತಜ್ಞರು ಹೇಳುವುದುಂಟು. ಕೆಲ ವರ್ಷಗಳ ಹಿಂದೆ ಈ ನಿಯಮ ಇದ್ದದ್ದು ಹೌದು. ಈಗ ಅದು ಬದಲಾಗಿದೆ. ಇಪಿಎಫ್ ಸದಸ್ಯ ನಿವೃತ್ತಿ ವಯಸ್ಸು ಬರುವವರೆಗೂ, ಅಂದರೆ ಆತನ ವಯಸ್ಸು 58 ವರ್ಷ ಆಗುವವರೆಗೂ ಆತನ ಇಪಿಎಫ್ ಖಾತೆಯಲ್ಲಿ ಎಷ್ಟೇ ಹಣ ಇರಲಿ ಅದಕ್ಕೆ ಸರ್ಕಾರದಿಂದ ಬಡ್ಡಿ ಸಂದಾಯ ಆಗುತ್ತಲೇ ಇರುತ್ತದೆ.

ಇಪಿಎಫ್ ಅಕೌಂಟ್ ಆ್ಯಕ್ಟಿವ್ ಇಲ್ಲದಿದ್ದರೆ?

ಇಪಿಎಫ್ ಸದಸ್ಯ ಕೆಲಸ ಬಿಟ್ಟು ಬೇರೆ ಕೆಲಸಕ್ಕೆ ಸೇರಿಕೊಂಡಾಗ ಹೊಸ ಇಪಿಎಫ್ ಅಕೌಂಟ್ ತೆರೆಯಲಾಗುತ್ತದೆ. ಹಿಂದಿನ ಇಪಿಎಫ್ ಅಕೌಂಟ್​ಗೆ ಕಂಪನಿ ವತಿಯಿಂದ ಪ್ರತೀ ತಿಂಗಳು ಹಣ ಸಂದಾಯವಾಗುವುದು ನಿಂತು ಹೋಗುತ್ತದೆ. ಈ ಹಳೆಯ ಪಿಎಫ್ ಅಕೌಂಟ್ ಆ್ಯಕ್ಟಿವ್ ಇರೋದಿಲ್ಲ. ಹೀಗೆ ಒಂದು ಅಕೌಂಟ್ 3 ವರ್ಷ ಕಾಲ ಆ್ಯಕ್ಟಿವ್ ಇಲ್ಲದಿದ್ದರೆ, ಅಂದರೆ, ಆ ಅಕೌಂಟ್​ಗೆ ಯಾವುದೇ ಕೊಡುಗೆ ಬರುವುದು ನಿಂತು ಹೋಗಿದ್ದಲ್ಲಿ, ಹಳೆಯ ನಿಯಮದ ಪ್ರಕಾರ ಬಡ್ಡಿಯೂ ನಿಲ್ಲುತ್ತದೆ. ಆದರೆ, ಹೊಸ ನಿಯಮದ ಪ್ರಕಾರ, ಆ ಖಾತೆಗೂ ಬಡ್ಡಿ ಬರುವುದು ಮುಂದುವರಿಯುತ್ತದೆ.

ಇದನ್ನೂ ಓದಿ: ಪಿಎಫ್ ಹಣಕ್ಕೆ ಟ್ಯಾಕ್ಸ್ ಅನ್ವಯ ಆಗುತ್ತಾ? ವಿತ್​ಡ್ರಾ ಮಾಡಿದಾಗ ಟ್ಯಾಕ್ಸ್ ಎಷ್ಟು? ನೀವು ತಿಳಿದಿರಬೇಕಾದ ಸಂಗತಿಗಳಿವು…

ಪಿಎಫ್ ಖಾತೆ ವಿಲೀನ ಮಾಡಲೇಬೇಕಾ?

ಜನರಲ್ಲಿ ಇನ್ನೂ ಒಂದು ತಪ್ಪು ತಿಳಿವಳಿಕೆ ಇದೆ. ಕಂಪನಿ ಬದಲಿಸಿದಾಗ ಹಳೆಯ ಪಿಎಫ್ ಖಾತೆಯನ್ನು ಹೊಸ ಖಾತೆಯೊಂದಿಗೆ ವಿಲೀನ ಮಾಡದಿದ್ದರೆ, ಅಂದರೆ ಹಳೆಯ ಪಿಎಫ್ ಖಾತೆಯಿಂದ ಹಣವನ್ನು ಹೊಸ ಖಾತೆಗೆ ವರ್ಗಾವಣೆ ಮಾಡದೇ ಇದ್ದರೆ ಆಗ ಹಳೆಯ ಖಾತೆಯಲ್ಲಿನ ಹಣಕ್ಕೆ ಬಡ್ಡಿ ಸಿಗೋದಿಲ್ಲ ಎಂದು ಹೇಳಲಾಗುತ್ತದೆ. ಆದರೆ, ಇದು ನಿಜ ಅಲ್ಲ. ಹಿಂದಿನ ಪ್ಯಾರಾದಲ್ಲಿ ತಿಳಿಸಿದಂತೆ, ಹಳೆಯ ಪಿಎಫ್ ಖಾತೆಯಲ್ಲಿರುವ ಹಣಕ್ಕೆ ವರ್ಷಂಪ್ರತಿ ಸರ್ಕಾರದಿಂದ ಬಡ್ಡಿ ಸಂದಾಯ ಆಗುವುದು ನಿಲ್ಲುವುದಿಲ್ಲ.

ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಪಿಎಫ್ ಖಾತೆ ಇರಲಿ, ಎಲ್ಲದಕ್ಕೂ ಬಡ್ಡಿ ಸಂದಾಯ ಆಗುತ್ತಲೇ ಇರುತ್ತದೆ. ಪಿಎಫ್ ಖಾತೆಗಳನ್ನು ವಿಲೀನ ಮಾಡಿದರೆ ಖಾತೆ ನಿರ್ವಹಣೆ ಸುಲಭ ಆಗುತ್ತದೆ ಎಂಬುದು ಬಿಟ್ಟರೆ ಅದು ಕಡ್ಡಾಯವಾಗಲೀ, ಅತ್ಯಗತ್ಯವಾಗಲೀ ಅಲ್ಲ.

ಇದನ್ನೂ ಓದಿ: ಈ ಬಾರಿ ಬಹಳ ಜನರಿಗೆ ಸಿಕ್ಕಿಲ್ಲ ಇನ್ಕಮ್ ಟ್ಯಾಕ್ಸ್ ರೀಫಂಡ್; ಏನು ಕಾರಣ?

58 ವರ್ಷದ ಬಳಿಕ ಬಡ್ಡಿ ಸಂದಾಯ ನಿಲ್ಲುತ್ತದೆ…

ಇಪಿಎಫ್​ಒ ನಿಯಮದ ಪ್ರಕಾರ 58 ವರ್ಷ ವಯಸ್ಸನ್ನು ರಿಟೈರ್ಮೆಂಟ್ ಏಜ್ ಎಂದು ಪರಿಗಣಿಸಲಾಗುತ್ತದೆ. ಪಿಎಫ್ ಸದಸ್ಯರ ವಯಸ್ಸು 58 ವರ್ಷ ಮುಟ್ಟಿದಾಗ ಮಾತ್ರ ಅವರ ಖಾತೆಯ ಅವಧಿ ಮುಗಿದಂತೆ. ಅವರ ಇಪಿಎಫ್ ಖಾತೆಗಳಿಗೆ ಬಡ್ಡಿ ಬರುವುದು ನಿಲ್ಲುತ್ತದೆ. ಇವರ ಇಪಿಎಫ್ ಹಣದಲ್ಲಿ ಸ್ವಲ್ಪ ಭಾಗವು ಇಪಿಎಸ್​ಗೆ ಹೋಗಿರುತ್ತದೆ. ಅದನ್ನು ಬಿಟ್ಟು ಉಳಿದ ಹಣವನ್ನು ಪೂರ್ಣವಾಗಿ ವಿತ್​ಡ್ರಾ ಮಾಡಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಲಕ್ಕುಂಡಿ ನಿಧಿ: ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್ – Kannada News | Lakkundi Gold treasure: Minister HK Patil Meets Prajwal Family And Hints about Job And House From Government

ಗದಗ, (ಜನವರಿ 13): ಜಿಲ್ಲೆಯ ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವಾಗ ನಿಧಿ ಸಿಕ್ಕಿದರೂ ಅದನ್ನ 8ನೇ ತರಗತಿ ಬಾಲಕ ಪ್ರಜ್ವಲ್ ರಿತ್ತಿ, ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ್ದಾನೆ. ಆದರೆ, ಈ ನಿಧಿಯನ್ನು ಕಾಯಲು ಸರ್ಪವೊಂದು ಇರುತ್ತೆ ಎಂದು ಗ್ರಾಮದ ಹಿರಿಯರು ಮಾತನಾಡುತ್ತಿದ್ದು, ನಿಧಿ ಸಿಕ್ಕಿದವರಿಗೆ ಒಳ್ಳೆಯದಾಗಿಲ್ಲ ಎನ್ನುವ ಮಾತುಗಳು ಕುಟುಂಬದಲ್ಲಿ ಆತಂಕ ಮನೆ ಮಾಡಿದೆ. ಇದರ ನಡುವೆ ಪ್ರಜ್ವಲ್ ಕಟುಂಬಕ್ಕೆ ಶುಕ್ರದೆಸೆ ಆರಂಭವಾಗಿದೆ. ಹೌದು… ಸರ್ಕಾರಕ್ಕೆ ನಿಧಿ ಕೊಟ್ಟು ಪ್ರಮಾಣಿಕತೆ ಮೆರೆದ ಪ್ರಜ್ವಲ್ ರಿತ್ತಿಗೆ ಬಿ.ಹೆಚ್‌ ಪಾಟೀಲ್ ಪದವಿ ಪೂರ್ವ ಕಾಲೇಜು ಶಿಕ್ಷಣ ಸಂಸ್ಥೆ ನೆರವಿನ ಹಸ್ತ ನೀಡಿದೆ. ಟಿವಿ9 ವರದಿಗೆ ಸ್ಪಂದಿಸಿದ ಶಿಕ್ಷಣ ಸಂಸ್ಥೆ, ಪ್ರಜ್ವಲ್‌ಗೆ ಪಿಯುಸಿವರೆಗೂ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿದೆ. ಇನ್ನೊಂದೆಡೆ ಕುಟುಂಭಕ್ಕೆ ಮನೆ ಹಾಗೂ ನೌಕರಿ ಕೊಡುವ ಬಗ್ಗೆಯೂ ಜಿಲ್ಲಾ ಉಸ್ತುವರಿ ಸಚಿವ ಎಚ್​​ಕೆ ಪಾಟೀಲ್ ಸುಳಿವು ಕೊಟ್ಟಿದ್ದಾರೆ.

ಇಂದು (ಜನವರಿ 13) ಲಕ್ಕುಂಡಿಗೆ ಭೇಟಿ ನೀಡಿದ ಕಾನೂನು ಸಚಿವ ಎಚ್​​​ಕೆ ಪಾಟೀಲ್, ಪ್ರಜ್ವಲ್ ಕುಟುಂಬವನ್ನು ಭೇಟಿ ಮಾಡಿ ಅಭಿನಂದನೆ ತಿಳಿಸಿದರು. ಬಳಿಕ ಮಾಧ್ಯಗಳ ಜತೆ ಮಾತನಾಡಿದ ಅವರು, ಪ್ರಜ್ವಲ್ ಕುಟುಂಬಕ್ಕೆ ನೆರವು ನೀಡಬೇಕೆಂದು ಹಿರಿಯರು ಮನವಿ ಮಾಡಿದ್ದಾರೆ. ಮನೆ, ಜಾಗ, ಬಾಲಕನ ತಾಯಿಗೆ ಕೆಲಸ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಈ 3 ವಿಚಾರವನ್ನು ಸಿಎಂ ಜೊತೆ ಚರ್ಚಿಸುತ್ತೇನೆ. ಕಾನೂನು ಪ್ರಕಾರ ಏನ್ ಕೊಡಬೇಕು ಎಲ್ಲವೂ ಕುಟುಂಬಕ್ಕೆ ಮಾಡಲಾಗುತ್ತೆ. ಪ್ರಾಮಾಣಿಕತೆಗೆ ಗೌರವ ನೀಡುವ ಉದ್ದೇಶದಿಂದ ಮನೆ, ನೌಕರಿ ಕೊಡಲಾಗುತ್ತೆ.ಹೂವು ಕಟ್ಟಿ‌ಮಾರಾಟ ಮಾಡಿದಾಗ‌‌ ಮಾತ್ರ ಬದುಕು. ಇಂಥ ಬಡತನದಲ್ಲೂ ಬಂಗಾರ ನಮ್ಮದಲ್ಲ ಅಂತ ನೀಡಿದ್ದಾರೆ. ಕುಟುಂಬದ ಪ್ರಾಮಾಣಿಕತೆಗೆ ಗೌರವ ನೀಡಲಾಗುತ್ತೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಲಿತ ಅತಿಥಿ ಉಪನ್ಯಾಸಕಿಗೆ ಪ್ರಾಂಶುಪಾಲನಿಂದ ಲೈಂಗಿಕ ಕಿರುಕುಳ ಆರೋಪ: ಸಂತ್ರಸ್ತೆ ಹೇಳಿದ್ದೇನು? – Kannada News | Police Complaint Filed Against Bhadravathi Principal Over Harassment of Dalit Guest Lecturer

ಶಿವಮೊಗ್ಗ, ಜನವರಿ 13: ಭದ್ರಾವತಿಯ ಎನ್​ಇಎಸ್ ಶಿಕ್ಷಣ ಸಂಸ್ಥೆಯಲ್ಲಿ ದಲಿತ ಅತಿಥಿ ಉಪನ್ಯಾಸಕಿಗೆ ಪ್ರಾಂಶುಪಾಲನೇ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಶ್ರೀಪಾದ್ ಹೆಗಡೆ ವಿರುದ್ಧ ಸಂತ್ರಸ್ತೆ ಜಾತಿ ನಿಂದನೆ ಆರೋಪವನ್ನೂ ಮಾಡಿದ್ದು, ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಅನೇಕ ಮಹನೀಯರ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆಂದೇ ಸ್ಥಾಪಿಸಿರುವ ರಾಷ್ಟ್ರೀಯ ಶಿಕ್ಷಣ ಸಮಿತಿ ಶಿಕ್ಷಣ ಸಂಸ್ಥೆಯಲ್ಲೇ ಇಂತಹ ಆರೋಪ ಕೇಳಿಬಂದಿರೋದು ಜನ ಹುಬ್ಬೇರಿಸುವಂತೆ ಮಾಡಿದೆ.

ಸಂತ್ರಸ್ತ ಉಪನ್ಯಾಸಕಿ ಆರೋಪವೇನು?

ಕಾರಿನಲ್ಲಿ ಕರೆದುಕೊಂಡು ಹೋಗುವಾಗ ತನ್ನ ಮೇಲೆ ಪ್ರಾಂಶುಪಾಲ ಶ್ರೀಪಾದ್ ಹೆಗಡೆ ಲೈಂಗಿಕ ದೌರ್ಜನ್ಯ ಯತ್ನ ನಡೆಸಿದ್ದಾರೆ. ನಿಮ್ಮ ಜಾತಿಯಲ್ಲಿ ಅನೈತಿಕ ಸಂಬಂಧ ಇಟ್ಟುಕೊಳ್ಳುತ್ತಾರೆ. ನಿಮ್ಮ ಜಾತಿಯಲ್ಲಿ ಇವೆಲ್ಲಾ ಮಾಮೂಲಿಯಾಗಿದ್ದು ನನ್ನ ಜೊತೆ ಚೆನ್ನಾಗಿರಿ ಎಂದು ದೌರ್ಜನ್ಯ ನಡೆಸಿದ್ದಾರೆ. ನಿನ್ನ ಗಂಡ ಇಲ್ಲದಿದ್ದರೆ ನನ್ನನ್ನು ಕರಿ ಎಂದು ಹೇಳಿರೋದಾಗಿ ಅತಿಥಿ ಉಪನ್ಯಾಸಕಿ ಗಂಭೀರ ಆರೋಪ ಮಾಡಿದ್ದಾರೆ. ಅದೇ ಕಾಲೇಜಿನ ಇಬ್ಬರು ಮಹಿಳಾ ಸಿಬ್ಬಂದಿ ವಿರುದ್ಧವೂ ಕ್ಷುಲ್ಲಕ ಕಾರಣಕ್ಕೆ ಜಾತಿ ನಿಂದನೆ ಆರೋಪವನ್ನು ಸಂತ್ರಸ್ತೆ ಮಾಡಿದ್ದಾರೆ.

ಇದನ್ನೂ ಓದಿ: ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ; ಮತ್ತೆ ದರೋಡೆ ಮಾಡಿ ಲಾಕ್​​ ಆದ ಗ್ಯಾಂಗ್

‘ಪ್ರಕರಣ ದಾಖಲಿಸಿ 21 ದಿನಗಳಾದ್ರೂ ಕ್ರಮವಿಲ್ಲ’

ಘಟನೆ ಬಗ್ಗೆ ಸಂತ್ರಸ್ತೆ ಪ್ರಕರಣ ದಾಖಲಿಸಿ 21 ದಿನಗಳು ಕಳೆದರೂ ಆರೋಪಿ ಪ್ರಾಂಶುಪಾಲನನ್ನು ಬಂಧಿಸಿಲ್ಲ. ಸಂಸ್ಥೆಯ ಆಡಳಿತ ಮಂಡಳಿಯೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಸಂಸ್ಥೆಯಿಂದ ತನ್ನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಸಂತ್ರಸ್ತ ಉಪನ್ಯಾಸಕಿ ಅಲವತ್ತುಕೊಂಡಿದ್ದಾರೆ. ಆರೋಪಿ ಪ್ರಾಂಶುಪಾಲ ಶ್ರೀಪಾದ್ ಹೆಗಡೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಡುಗೆಗೆ ಮಾತ್ರವಲ್ಲ, ಗೃಹಪಯೋಗಿ ವಸ್ತುಗಳ ಸ್ವಚ್ಛತೆಗೂ ಬಳಸಬಹುದು ಉಪ್ಪು – Kannada News | Use salt to clean these items effectively

ಸಾಮಾನ್ಯವಾಗಿ ಮನೆ ಕ್ಲೀನ್‌ ಮಾಡಲು, ದುಬಾರಿ ಕ್ಲೀನರ್‌ಗಳನ್ನು ಬಳಸುತ್ತೇವೆ. ಇನ್ನೂ ಗೃಹಪಯೋಗಿ ವಸ್ತುಗಳ ಕಲೆ, ಕೊಳೆಗಳನ್ನು ತೆಗೆದುಹಾಕಲು ಹಲವಾರು ಸರ್ಕಸ್‌ಗಳನ್ನು ಮಾಡುತ್ತೇವೆ. ಇದರ ಬದಲು ಗೃಹಯಪಯೋಗಿ ವಸ್ತುಗಳನ್ನು ಸ್ವಚ್ಛಗೊಳಿಸಲು ಉಪ್ಪನ್ನು (Salt) ಬಳಸಬಹುದು. ಉಪ್ಪು ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ, ಸುಟ್ಟ ಪ್ಯಾನ್‌ಗಳು, ಕೊಳೆಯಾಗಿರುವ ಇಸ್ತ್ರಿ ಪೆಟ್ಟಿಗೆ, ಕಲೆ ಹಾಗೂ ತಳ ಹಿಡಿದಿರುವ ಪಾತ್ರೆಗಳನ್ನು ಸುಲಭವಾಗಿ ಸ್ವಚ್ಛಗೊಳಿಸುತ್ತದೆ. ಇದು ನೈಸರ್ಗಿಕ ಹಾಗೆಯೇ ಅಗ್ಗದ ಕ್ಲೀನರ್‌ ಆಗಿದ್ದು, ಗೃಹಪಯೋಗಿ ವಸ್ತುಗಳನ್ನು ಕ್ಲೀನ್‌ ಮಾಡಲು ಉಪ್ಪು ಹೇಗೆ ಸಹಕಾರಿ ಎಂಬುದನ್ನು ತಿಳಿಯಿರಿ.

ಗೃಹಪಯೋಗಿ ವಸ್ತುಗಳನ್ನು ಸ್ವಚ್ಛಗೊಳಿಸಲು ಸಹಕಾರಿ ಉಪ್ಪು:

ಚಾಕುಗಳ ಸ್ವಚ್ಛತೆ: ಸಾಮಾನ್ಯವಾಗಿ, ಚಾಕುಗಳು ಬಳಸಿದ ನಂತರ ತುಕ್ಕು ಹಿಡಿಯಬಹುದು. ಈ ತುಕ್ಕು ತೆಗೆದುಹಾಕಲು, ನೀವು ಉಪ್ಪನ್ನು ಬಳಸಬಹುದು. ಚಾಕುವಿನ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿ, ಅದರ ಮೇಲೆ ವಿನೆಗರ್ ಸುರಿಯಿರಿ ಮತ್ತು  ಅದನ್ನು ಒಂದು ಬಟ್ಟೆಯಿಂದ ಮುಚ್ಚಿ ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ಒರೆಸಿ. ನೀರಿನಿಂದ ತೊಳೆಯಿರಿ. ಇದು ತುಕ್ಕನ್ನು ಹೋಗಲಾಡಿಸುತ್ತದೆ.

ಬಿಳಿ ಬಟ್ಟೆಗಳ ಸ್ವಚ್ಛತೆ: ಬಿಳಿ ಶರ್ಟ್ ಅಥವಾ ಟಿ-ಶರ್ಟ್ ಹಳೆಯದಾಗಿ ಅಥವಾ ಮಸುಕಾಗಿ ಕಾಣಲು ಪ್ರಾರಂಭಿಸಿದರೆ,  ಅದನ್ನು ಬಕೆಟ್‌ನಲ್ಲಿ ಹಾಕಿ ನಂತರ ಸ್ವಲ್ಪ ಟೂತ್‌ಪೇಸ್ಟ್, 1 ಟೀಚಮಚ ಉಪ್ಪು, ಸ್ವಲ್ಪ ಡಿಟೆರ್ಜಂಟ್ ಲಿಕ್ವಿಡ್‌  ಮತ್ತು ಸ್ವಲ್ಪ ಬೆಚ್ಚಗಿನ ನೀರನ್ನು ಸೇರಿಸಿ. ಹತ್ತು ಹದಿನೈದು ನಿಮಿಷಗಳ ಕಾಲ ಹಾಗೆಯೇ ಬಿಡಿ. ಈಗ ಅದನ್ನು ನಿಮ್ಮ ಕೈಗಳಿಂದ ಸ್ಕ್ರಬ್ ಮಾಡಿ ನಂತರ ಶುದ್ಧ ನೀರಿನಿಂದ ತೊಳೆಯಿರಿ. ಇದು ಬಟ್ಟೆಗೆ ಹೊಳಪನ್ನು ನೀಡುತ್ತದೆ.

ಬಟ್ಟೆಗಳ ಮೇಲಿನ ಎಣ್ಣೆಯ ಕಲೆ ತೆಗೆದುಹಾಕುತ್ತದೆ: ನಿಮ್ಮ ಬಟ್ಟೆಗಳ ಮೇಲೆ ಎಣ್ಣೆಯ ಕಲೆ ಇದ್ದರೆ, ಅದನ್ನು ತೊಡೆದುಹಾಕಲು ನೀವು ಉಪ್ಪನ್ನು ಬಳಸಬಹುದು. ಎಣ್ಣೆ ಅಂಟಿದ ಜಾಗದ ಮೇಲೆ ಸ್ವಲ್ಪ ಉಪ್ಪು ಮತ್ತು ಡಿಟೆರ್ಜಂಟ್ ಲಿಕ್ವಿಡ್‌ ಹಾಕಿ, ಅದನ್ನು ಕೈಗಳಿಂದ ಉಜ್ಜಿದರೆ, ಎಣ್ಣೆಯ ಕಲೆ ಮಾಯವಾಗುತ್ತದೆ.

ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತದೆ: ಸುಟ್ಟ ಪ್ಯಾನ್‌ಗಳನ್ನು ಉಪ್ಪಿನಿಂದ ಸುಲಭವಾಗಿ ಸ್ವಚ್ಛಗೊಳಿಸಬಹುದು. ಅಡುಗೆ  ಪಾತ್ರೆಗಳು ತಳ ಹಿಡಿಯುತ್ತವೆ ಮತ್ತು ಅವುಗಳ ಮೇಲಿನ ಕಪ್ಪು ಲೇಪನವನ್ನು ತೆಗೆದುಹಾಕಲು ಕಷ್ಟವಾಗುತ್ತದೆ. ಹಾಗಿರುವಾಗ ಉಪ್ಪನ್ನು ಬಳಸಿ ಪಾತ್ರೆಯನ್ನು ಸ್ವಚ್ಛಗೊಳಿಸಬಹುದು. ಇದಕ್ಕಾಗಿ ತಳ ಹಿಡಿದ ಪಾತ್ರೆಗೆ ಉಪ್ಪನ್ನು ಹಾಕಿ ಅದನ್ನು ನಿಂಬೆ ಹೋಳಿನಿಂದ ಉಜ್ಜಿಕೊಳ್ಳಿ. ಇದು ಕಲೆಯನ್ನು ಬಲು ಸುಲಭವಾಗಿ ತೆಗೆದುಹಾಕುತ್ತದೆ.

ಇದನ್ನೂ ಓದಿ: ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಲು ನೆಲ ಒರೆಸುವ ನೀರಿಗೆ ಎರಡು ವಸ್ತುಗಳನ್ನು ಸೇರಿಸಿ

ಇಸ್ತ್ರಿ ಪೆಟ್ಟಿಗೆಗಳನ್ನು ಸ್ವಚ್ಛಗೊಳಿಸುತ್ತದೆ: ಪದೇ ಪದೇ ಉಪಯೋಗ ಮಾಡುವ ಕಾರಣ ಇಸ್ತ್ರಿ ಪೆಟ್ಟಿಗೆಗಳಲ್ಲಿ ಕಲೆಗಳು ಹಾಗೆಯೇ ಉಳಿದುಬಿಡುತ್ತದೆ. ಇದನ್ನು ತೆಗೆದುಹಾಕಲು ಉಪ್ಪನ್ನು ಬಳಸಬಹುದು. ಇದಕ್ಕಾಗಿ ಇಸ್ತ್ರಿ ಪೆಟ್ಟಿಗೆ ಕಬ್ಬಿಣದ ತಟ್ಟೆಯ ಮೇಲೆ ಸ್ವಲ್ಪ ಉಪ್ಪನ್ನು ಸಿಂಪಡಿಸಿ ದಪ್ಪ ಬಟ್ಟೆಯಿಂದ ನಿಧಾನವಾಗಿ ಉಜ್ಜಿಕೊಳ್ಳಿ, ಇದು ನಿಮಿಷಗಳಲ್ಲಿ ಕಲೆ ತೆಗೆದುಹಾಕುತ್ತದೆ.

ಕಾಫಿ ಮಗ್‌ಗಳ ಕಲೆಯನ್ನು ತೆಗೆದುಹಾಕುತ್ತದೆ: ಕಾಫಿ ಅಥವಾ ಟೀ ಕುಡಿದ ನಂತರ, ಮಗ್‌ಗಳಲ್ಲಿ ಮೊಂಡುತನದ ಕಲೆಗಳು ಕಾಣಿಸಿಕೊಳ್ಳುತ್ತವೆ, ಇವುಗಳು ಅಷ್ಟು ಸುಲಭವಾಗಿ ಹೋಗುವುದಿಲ್ಲ. ಹೀಗಿರುವಾಗ ನೀವು ಉಪ್ಪನ್ನು ಬಳಸಬಹುದು.  ಮಗ್‌ನಲ್ಲಿ ಕಲೆಯಾದ ಜಾಗಕ್ಕೆ ಸ್ವಲ್ಪ ಉಪ್ಪನ್ನು ಸಿಂಪಡಿಸಿ ಮತ್ತು ಸ್ಪಂಜು ಅಥವಾ ಬಟ್ಟೆಯಿಂದ ನಿಧಾನವಾಗಿ ಉಜ್ಜಿಕೊಳ್ಳಿ. ಉಪ್ಪಿನ ಅಪಘರ್ಷಕ ಕ್ರಿಯೆಯು ಕಲೆಗಳನ್ನು ಸಡಿಲಗೊಳಿಸುತ್ತದೆ ಮತ್ತು ಕಪ್ ಸ್ವಲ್ಪ ಸಮಯದೊಳಗೆ ಅದರ ಸ್ವಚ್ಛ, ಹೊಳೆಯುವ ಸ್ಥಿತಿಗೆ ಮರಳುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version