ನಟಿ ರುಕ್ಮಿಣಿ ವಸಂತ್ ಮಾರ್ಫ್ ವಿಡಿಯೋ ಹಂಚಿಕೊಂಡವರು ಸಿಕ್ಕಿ ಬೀಳೋದು ಬಹುತೇಕ ಖಚಿತ – Kannada News

ನಟಿ ರುಕ್ಮಿಣಿ ವಸಂತ್ ಅವರಿಗೆ (Rukmini Vasanth) ಇತ್ತೀಚೆಗೆ ಮುಜುಗರ ಆಗುವ ಘಟನೆ ನಡೆದಿತ್ತು.ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ರುಕ್ಮಿಣಿ ವಸಂತ್ ವಿಡಿಯೋಗಳನ್ನು ಅಶ್ಲೀಲವಾಗಿ ಮಾರ್ಫ್ ಮಾಡಲಾಗಿತ್ತು. ಈ ಬಗ್ಗೆ ನಟಿ ರುಕ್ಮಿಣಿ ವಸಂತ್ ಅವರು ದೂರು ನೀಡಿದ್ದರು. ಈ ಬೆನ್ನಲ್ಲೇ ಸಿಸಿಬಿ ಸೈಬರ್ ಪೊಲೀಸರು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಕಿಡಿಗೇಡಿಗಳು ಸಿಕ್ಕಿ ಬೀಳೋದು ಬಹುತೇಕ ಖಚಿತವಾಗಿದೆ.

ತನಿಖೆಯನ್ನು ಚುರುಕುಗೊಳಿಸಿರುವ ಸೈಬರ್ ಪೊಲೀಸರು, ಅಶ್ಲೀಲ ವಿಡಿಯೋ ಅಪ್‌ಲೋಡ್ ಆಗಿರುವ ಮೆಟಾ (ಫೇಸ್​​ಬುಕ್​, ಇನ್​​ಸ್ಟಾ) ಎಕ್ಸ್ ಮುಂತಾದ ಸಂಸ್ಥೆಗಳಿಗೆ ತುರ್ತು ಪತ್ರ ಬರೆದಿದ್ದಾರೆ. ಹತ್ತಾರು ನಕಲಿ ಹಾಗೂ ಅನಾಮಧೇಯ ಐಡಿಗಳ ಮೂಲಕ ಈ ಕೃತ್ಯ ಎಸಗಿರುವುದು ಪೊಲೀಸರ ಗಮನಕ್ಕೆ ಬಂದಿದ್ದು, ಆ ಎಲ್ಲಾ ವಿವಾದಿತ ಐಡಿಗಳ ಸಂಪೂರ್ಣ ಮಾಹಿತಿ ಮತ್ತು ಐಪಿ ಅಡ್ರೆಸ್ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಮುಂದಿನ ಕೆಲವೇ ದಿನಗಳಲ್ಲಿ ಈ ಐಡಿಗಳ ಸಂಪೂರ್ಣ ವಿವರ ಸಿಸಿಬಿ ಕೈಸೇರಲಿದ್ದು, ಕಿಡಿಗೇಡಿಗಳ ಹೆಡೆಮುರಿ ಕಟ್ಟುವುದು ನಿಶ್ಚಿತವಾಗಿದೆ.

ಈ ಹಿಂದೆ ಸ್ಯಾಂಡಲ್‌ವುಡ್‌ನ ಹಿರಿಯ ನಟಿಯರಾದ ರಮ್ಯಾ ಹಾಗೂ ವಿಜಯಲಕ್ಷ್ಮಿ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದ ಮತ್ತು ನಿಂದಿಸಿದ್ದ ಕಿಡಿಗೇಡಿಗಳನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡಿ ಜೈಲಿಗಟ್ಟಿದ್ದರು. ಈಗ ಅದೇ ಮಾದರಿಯಲ್ಲೇ ನಟಿ ರುಕ್ಮಿಣಿ ವಸಂತ್ ಅವರ ಪ್ರಕರಣದಲ್ಲೂ ತನಿಖೆ ತೀವ್ರಗೊಂಡಿದೆ. ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ನಟಿಯರ ತೇಜೋವಧೆ ಮಾಡುವ ಸೈಬರ್ ವಿಕೃತಕಾಮಿಗಳನ್ನು ಪತ್ತೆಹಚ್ಚಿ ಜೈಲಿಗಟ್ಟಲು ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಹೂಗಳ ಜೊತೆಗೆ ಹೂವಿನಷ್ಟೆ ಸುಂದರಿ ರುಕ್ಮಿಣಿ ವಸಂತ್: ವಿಡಿಯೋ ನೋಡಿ

ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳನ್ನು ಗುರಿಯಾಗಿಸಿಕೊಂಡು ಎಐ (AI) ಹಾಗೂ ಡೀಪ್ ಫೇಕ್ ತಂತ್ರಜ್ಞಾನದ ಮೂಲಕ ಅಶ್ಲೀಲ ಫೋಟೋ, ವಿಡಿಯೋಗಳನ್ನು ಸೃಷ್ಟಿಸುವ ಜಾಲ ಸಕ್ರಿಯವಾಗುತ್ತಿದೆ. ಇಂತಹ ಕಿಡಿಗೇಡಿತನಕ್ಕೆ ಕಾನೂನಿನಲ್ಲಿ ಕಠಿಣ ಶಿಕ್ಷೆಯಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಇಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳುವುದು ಅಥವಾ ಫಾರ್ವರ್ಡ್ ಮಾಡುವುದು ಕೂಡ ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಸೈಬರ್ ಪೊಲೀಸರು ಎಚ್ಚರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉಡುಪಿ ಕೃಷ್ಣ ಮಠದ ಪಾರ್ಕಿಂಗ್‌ನಲ್ಲಿ ಮಾರಾಮಾರಿ: ಆಂಧ್ರದ ಪ್ರವಾಸಿಗರು, ಸ್ಥಳೀಯ ವ್ಯಕ್ತಿ ನಡುವೆ ಗಲಾಟೆ! – Kannada News

ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ರಾತ್ರಿ ಮಾರಾಮಾರಿ

ಉಡುಪಿ, ಜೂನ್ 10: ಜಿಲ್ಲೆಯ ಪ್ರಸಿದ್ಧ ಶ್ರೀ ಕೃಷ್ಣ ಮಠದ (Udupi Krishna Math) ಪಾರ್ಕಿಂಗ್ ಪ್ರದೇಶದಲ್ಲಿ ತಡರಾತ್ರಿ ಪ್ರವಾಸಿಗರು ಮತ್ತು ಸ್ಥಳೀಯ ವ್ಯಕ್ತಿಯೊಬ್ಬರ ನಡುವೆ ವಾಹನಕ್ಕೆ ಸೈಡ್ ಕೊಡುವ ವಿಚಾರವಾಗಿ ಭೀಕರ ಮಾರಾಮಾರಿ ನಡೆದಿದೆ. ಆಂಧ್ರಪ್ರದೇಶದ ಹೈದರಾಬಾದ್ ಮೂಲದ ಪ್ರವಾಸಿಗರು ಹಾಗೂ ಉಡುಪಿಯ ಕೊರಂಗ್ರಪಾಡಿ ನಿವಾಸಿ ಸುಪ್ರೀತ್ ಎಂಬುವರ ನಡುವೆ ಈ ಘರ್ಷಣೆ ಸಂಭವಿಸಿದೆ.

ಮುಖ್ಯಾಂಶಗಳು

  • ಉಡುಪಿ ಕೃಷ್ಣ ಮಠದ ಪಾರ್ಕಿಂಗ್‌ನಲ್ಲಿ ಸೈಡ್ ಕೊಡುವ ವಿಚಾರಕ್ಕೆ ತಡರಾತ್ರಿ ಭೀಕರ ಗಲಾಟೆ.
  • ಪ್ರವಾಸಿಗರ ಮೇಲೆ ಕಾರು ಹಾಯಿಸಲು ಯತ್ನಿಸಿ, ಕಂಬಳದ ಕೋಲಿನಿಂದ ಹಲ್ಲೆ ನಡೆಸಿದ ಸ್ಥಳೀಯ ವ್ಯಕ್ತಿ.
  • ಹೈದರಾಬಾದ್‌ನ ಪವನ್ ಹಾಗೂ ಸ್ಥಳೀಯ ಸುಪ್ರೀತ್ ಇಬ್ಬರಿಂದಲೂ ಉಡುಪಿ ನಗರ ಠಾಣೆಯಲ್ಲಿ ದೂರು.

ಕಾರು ಹಾಯಿಸಲು ಯತ್ನ, ಕಂಬಳದ ಕೋಲಿನಿಂದ ಹಲ್ಲೆ!

ಮಹಿಳೆಯರು ಹಾಗೂ ಮಕ್ಕಳೊಂದಿಗೆ ಕೃಷ್ಣ ಮಠದ ದರ್ಶನಕ್ಕೆ ಬಂದಿದ್ದ ಪ್ರವಾಸಿಗರು, ಸುಪ್ರೀತ್‌ಗೆ ನಿಧಾನವಾಗಿ ಕಾರು ಚಲಾಯಿಸುವಂತೆ ಹೇಳಿದ್ದೇ ಈ ಗಲಾಟೆಗೆ ಕಾರಣ ಎನ್ನಲಾಗಿದೆ. ಇದರಿಂದ ಕೆರಳಿದ ಸುಪ್ರೀತ್, ನಾನು ಲೋಕಲ್ ವ್ಯಕ್ತಿ, ಕಾರು ಚಲಾಯಿಸುವುದೇ ಹೀಗೆ ಎಂದು ಧಮ್ಕಿ ಹಾಕಿದ್ದಲ್ಲದೆ, ಪ್ರವಾಸಿಗರ ಮೇಲೆ ಕಾರು ಹಾಯಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ. ಅಷ್ಟಕ್ಕೇ ನಿಲ್ಲದೆ, ತನ್ನ ಕಾರಿನಲ್ಲಿದ್ದ ಕಂಬಳದ ಕೋಲನ್ನು ತೆಗೆದು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ದಾಳಿಯಿಂದಾಗಿ ಆಂಧ್ರದ ಪ್ರವಾಸಿಗರು ಗಾಯಗೊಂಡಿದ್ದಾರೆ.

ಪರಸ್ಪರ ದೂರು ದಾಖಲು

ಸ್ಥಳೀಯ ವ್ಯಕ್ತಿಯ ದರ್ಪದಿಂದ ಆಕ್ರೋಶಗೊಂಡ ಪ್ರವಾಸಿಗರು ಸುಪ್ರೀತ್ ಕಾರಿನ ಗ್ಲಾಸ್ ಜಖಂಗೊಳಿಸಿ ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ಸುಪ್ರೀತ್ ಕೂಡ ಪ್ರತಿದೂರು ನೀಡಿದ್ದು, ತಾವು ಪತ್ನಿಯೊಂದಿಗೆ ಕಾರಿನಲ್ಲಿ ಬರುತ್ತಿದ್ದಾಗ ಪ್ರವಾಸಿಗರು ಗಲಾಟೆ ಮಾಡಿ, ತಮ್ಮ ಮೇಲೆ ಚೇರ್ ಹಾಗೂ ಫೋಟೋ ಸ್ಟ್ಯಾಂಡ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಹಲ್ಲೆಯ ತೀವ್ರತೆಗೆ ತಮಗೆ ಬಾಯಿಯಿಂದ ರಕ್ತಸ್ರಾವವಾಗಿದೆ ಎಂದು ಸುಪ್ರೀತ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ ಗರ್ಭಕೋಶದಿಂದ 8 ಕೆಜಿ ಗಡ್ಡೆ ಹೊರತೆಗೆದ ಸರ್ಕಾರಿ ಆಸ್ಪತ್ರೆ ವೈದ್ಯರು: ಮಹಿಳೆಗೆ ಮರುಜನ್ಮ

ಸ್ಥಳದಲ್ಲಿದ್ದ ಸಾರ್ವಜನಿಕರು ಮಧ್ಯಪ್ರವೇಶಿಸಿ ಗಲಾಟೆಯನ್ನು ತಿಳಿಗೊಳಿಸಿದ್ದಾರೆ. ಸದ್ಯ ಹೈದರಾಬಾದ್ ಮೂಲದ ಪವನ್ ಹಾಗೂ ಸ್ಥಳೀಯ ಸುಪ್ರೀತ್ ಇಬ್ಬರ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

1.48 ಲಕ್ಷ ಮೃತ ಮಹಿಳೆಯರ ಖಾತೆಗೆ ಹೋಗಿತ್ತು 128 ಕೋಟಿ ರೂ. ಹಣ! ಗೃಹಲಕ್ಷ್ಮಿ ಯೋಜನೆ ಮಹಾ ಪರಿಷ್ಕರಣೆಗೆ ಸಿದ್ಧತೆ – Kannada News

ಗೃಹಲಕ್ಷ್ಮಿ ಯೋಜನೆ (ಸಾಂದರ್ಭಿಕ ಚಿತ್ರ)Image Credit source: tv9

ಬೆಂಗಳೂರು, ಜೂನ್ 10: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ (Gruha Lakshmi)’ ಯೋಜನೆಯಲ್ಲಿ ನಡೆದಿರುವ ಭಾರಿ ತಾಂತ್ರಿಕ ಲೋಪ ಹಾಗೂ ಹಣ ದುರ್ಬಳಕೆಯನ್ನು ತಡೆಯಲು ಸರ್ಕಾರ ಈಗ ಮಹತ್ವದ ನಿರ್ಧಾರ ಕೈಗೊಂಡಿದೆ. ಯೋಜನೆಯಡಿ ನೋಂದಾಯಿಸಿಕೊಂಡಿದ್ದ ಫಲಾನುಭವಿಗಳ ಪೈಕಿ ಮೃತಪಟ್ಟಿರುವ ಮಹಿಳೆಯರ ಖಾತೆಗಳಿಗೂ ಕಳೆದ ಐದು ತಿಂಗಳುಗಳಿಂದ ಹಣ ಸಂದಾಯವಾಗುತ್ತಿರುವುದು ಪತ್ತೆಯಾಗಿದ್ದು, ಇಡೀ ಯೋಜನೆಯನ್ನು ಸಮೂಲವಾಗಿ ಪರಿಷ್ಕರಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಮುಖ್ಯಾಂಶಗಳು

  • 1.48 ಲಕ್ಷ ಮೃತ ಫಲಾನುಭವಿಗಳ ಪತ್ತೆ.
  • ಮೃತರ ಖಾತೆಗಳಿಗೆ 128 ಕೋಟಿ ರೂ. ಜಮೆ.
  • ಗೊಂದಲ ನಿವಾರಣೆಗೆ ಮರು ಅರ್ಜಿ ಸ್ವೀಕಾರ.

ದಿನೇಶ್ ಗೂಳಿಗೌಡ ವರದಿ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ ನಡೆಸಿದ ಪರಿಶೀಲನೆ ಹಾಗೂ ತಾಂತ್ರಿಕ ಆಡಿಟ್ ವೇಳೆ ಈ ಭಾರಿ ದೋಷ ಬೆಳಕಿಗೆ ಬಂದಿದೆ. ರಾಜ್ಯಾದ್ಯಂತ ಗೃಹಲಕ್ಷ್ಮಿ ಯೋಜನೆಯಡಿ 2,000 ರೂ. ಪಡೆಯುತ್ತಿದ್ದ ಸುಮಾರು 1,48,000 ಮಹಿಳೆಯರು ಈಗಾಗಲೇ ಮೃತಪಟ್ಟಿದ್ದರೂ, ಅವರ ಹೆಸರಿನ ಬ್ಯಾಂಕ್ ಖಾತೆಗಳಿಗೆ ಕಳೆದ ಐದು ತಿಂಗಳುಗಳಿಂದ ನಿರಂತರವಾಗಿ ಹಣ ಜಮೆಯಾಗುತ್ತಿತ್ತು. ಈ ಮೂಲಕ ಬರೋಬ್ಬರಿ 128 ಕೋಟಿ ರೂಪಾಯಿಗಳಷ್ಟು ಸಾರ್ವಜನಿಕ ಹಣ ದುರ್ಬಳಕೆಯಾಗಿರುವುದನ್ನು ದಿನೇಶ್ ಗೂಳಿಗೌಡ ಅಂಕಿ-ಅಂಶಗಳ ಸಹಿತ ಪತ್ತೆಮಾಡಿದ್ದಾರೆ. ಕೆಲವು ಕಡೆಗಳಲ್ಲಿ ಮೃತ ಫಲಾನುಭವಿಗಳ ಸಂಬಂಧಿಕರೇ ಎಟಿಎಂ ಹಾಗೂ ಯುಪಿಐ ಮೂಲಕ ಈ ಹಣವನ್ನು ಡ್ರಾ ಮಾಡಿಕೊಳ್ಳುತ್ತಿರುವುದು ಪತ್ತೆಯಾಗಿದೆ.

ಖಾತೆ ಒಂದು, ಮೊಬೈಲ್ ನಂಬರ್ ಬೇರೆ: ತಾಂತ್ರಿಕ ಗೊಂದಲ

ಈ ಆಘಾತಕಾರಿ ಮಾಹಿತಿ ಲಭ್ಯವಾಗುತ್ತಿದ್ದಂತೆ ಕಾರ್ಯಪ್ರವೃತ್ತರಾಗಿರುವ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳ ತುರ್ತು ಸಭೆ ನಡೆಸಿದ್ದಾರೆ. ತಕ್ಷಣವೇ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಸಂಪೂರ್ಣವಾಗಿ ಪರಿಷ್ಕರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ತನಿಖೆಯ ವೇಳೆ, ಯೋಜನೆಯಲ್ಲಿ ಮತ್ತೊಂದು ಗಂಭೀರ ಲೋಪ ಪತ್ತೆಯಾಗಿದ್ದು, ಬ್ಯಾಂಕ್ ಖಾತೆಯನ್ನು ಹೊಂದಿರುವ ಫಲಾನುಭವಿಯೇ ಬೇರೆ ಹಾಗೂ ಅದಕ್ಕೆ ಲಿಂಕ್ ಆಗಿರುವ ನೋಂದಾಯಿತ ಮೊಬೈಲ್ ಸಂಖ್ಯೆಗಳೇ ಬೇರೆಯಾಗಿವೆ. ಇಂತಹ ತಾಂತ್ರಿಕ ಗೊಂದಲಗಳಿಂದಾಗಿ ನಿಜವಾದ ಅರ್ಹರಿಗೆ ಹಣ ತಲುಪದೆ ವ್ಯವಸ್ಥೆ ದುರ್ಬಳಕೆಯಾಗುತ್ತಿದೆ.

ಹೊಸದಾಗಿ ಅರ್ಜಿ ಸ್ವೀಕರಿಸಲು ಸರ್ಕಾರದ ಚಿಂತನೆ

ಈ ಎಲ್ಲಾ ಗೊಂದಲಗಳು ಹಾಗೂ ಅನರ್ಹರನ್ನು ವ್ಯವಸ್ಥೆಯಿಂದ ಶಾಶ್ವತವಾಗಿ ಹೊರದಬ್ಬಲು ಸದ್ಯ ಚಾಲ್ತಿಯಲ್ಲಿರುವ ಗೃಹಲಕ್ಷ್ಮಿ ಫಲಾನುಭವಿಗಳ ಲಿಸ್ಟ್ ಅನ್ನು ಹೋಲ್ಡ್ ಮಾಡಿ, ಅರ್ಹ ಮಹಿಳೆಯರಿಂದ ಹೊಸದಾಗಿ ಅರ್ಜಿಗಳನ್ನು ಸ್ವೀಕರಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಇನ್ಮುಂದೆ ಇ-ಜನ್ಮ (E-Janma) ಪೋರ್ಟಲ್ ಮೂಲಕ ಮರಣ ಪ್ರಮಾಣಪತ್ರಗಳನ್ನು ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡುವ ಹಾಗೂ ಫಲಾನುಭವಿಗಳು ಬದುಕಿರುವ ಬಗ್ಗೆ ವಾರ್ಷಿಕವಾಗಿ ‘ಜೀವಿತ ಪ್ರಮಾಣ ಪತ್ರ’ (Life Certificate) ಅಥವಾ ಬಯೋಮೆಟ್ರಿಕ್ ಕಡ್ಡಾಯಗೊಳಿಸುವ ಕಟ್ಟುನಿಟ್ಟಿನ ನಿಯಮ ತರಲು ಸಿಎಂ ಡಿಕೆ ಶಿವಕುಮಾರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳ ಪರಿಷ್ಕರಣೆ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಭಿಮಾನಿಗಳಿಗೆ ಕಿಚ್ಚನ್ ಸರ್​​ಪ್ರೈಸ್; ಸುದೀಪ್ ಕಡೆಯಿಂದ ಬ್ಯಾಕ್ ಟು ಬ್ಯಾಕ್ ಸಿನಿಮಾ – Kannada News

‘ಮಾರ್ಕ್’ ಸಿನಿಮಾದ  ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಬಳಿಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು (Kichcha Sudeep) ಚಿತ್ರರಂಗದಿಂದ ಕೊಂಚ ಬಿಡುವು ಪಡೆದುಕೊಂಡಿದ್ದರು. ಸುದೀಪ್ ಅವರ ಬ್ರೇಕ್‌ನಿಂದಾಗಿ, ಅವರ ಮುಂದಿನ ಸಿನಿಮಾಗಳು ಯಾವುವು? ಶೂಟಿಂಗ್ ಯಾವಾಗ ಆರಂಭವಾಗುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ನಿರಂತರವಾಗಿ ಪ್ರಶ್ನೆ ಮಾಡುತ್ತಲೇ ಇದ್ದರು. ಈಗ ಸ್ವತಃ ಸುದೀಪ್ ಅವರೇ ತಮ್ಮ ಮುಂಬರುವ ಚಿತ್ರಗಳ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ.

ಕಿಚ್ಚ ಸುದೀಪ್ ಅವರು ಟ್ವಿಟರ್ (X) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಮುಂದಿನ ಸಿನಿಮಾಗಳ ಅಪ್‌ಡೇಟ್ ನೀಡಿ ಅಭಿಮಾನಿಗಳ ಕುತೂಹಲಕ್ಕೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ. ‘ನಿಮ್ಮ ಪ್ರೀತಿಯನ್ನು ನಾನೆಂದೂ ಲಘುವಾಗಿ ಪರಿಗಣಿಸಿಲ್ಲ’ ಎಂದು ಸಾಲನ್ನು ಆರಂಭಿಸಿದ್ದಾರೆ ಸುದೀಪ್.

‘ನಿಮ್ಮೆಲ್ಲರ ಮಾತುಗಳು ನನಗೆ ಕೇಳಿಸುತ್ತಿವೆ. ನನ್ನನ್ನು ನಾನು ಬೇರೆ ಕೆಲಸಗಳಲ್ಲಿ ಬ್ಯುಸಿ ಇಟ್ಟುಕೊಂಡಿದ್ದೆ ಎಂದರೆ, ನಿಮ್ಮ ಪ್ರೀತಿಯನ್ನಾಗಲಿ ಅಥವಾ ಈ ಸುಂದರವಾದ ಚಿತ್ರರಂಗದ ವೃತ್ತಿಜೀವನವನ್ನಾಗಲಿ ನಾನು ಲಘುವಾಗಿ ಪರಿಗಣಿಸಿದ್ದೇನೆ ಎಂದರ್ಥವಲ್ಲ. ನನಗೆ ಸಿನಿಮಾಗಳನ್ನು ಮಾಡುವುದು, ಕಥೆಗಳನ್ನು ಹೇಳುವುದು ಮತ್ತು ನಿಮ್ಮನ್ನು ರಂಜಿಸುವುದಕ್ಕಿಂತ ಹೆಚ್ಚಾಗಿ ನಾನು ಯಾವುದನ್ನೂ ಪ್ರೀತಿಸುವುದಿಲ್ಲ. ನಿಮ್ಮ ಈ ‘ವೇಕ್ ಅಪ್’ ಪ್ರಯತ್ನಗಳು ನನ್ನ ಕೆಲಸದ ಮೇಲಿರುವ ನಿಮ್ಮ ಪ್ರೀತಿಯನ್ನು ತೋರಿಸುತ್ತವೆ, ಎಲ್ಲರಿಗೂ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು ಬ್ರೇಕ್‌ನ ಅಸಲಿ ಕಾರಣ ಬಿಚ್ಚಿಟ್ಟಿರುವ ಅವರು, ‘ನನ್ನ ಉಪಸ್ಥಿತಿ ಮತ್ತು ಬೆಂಬಲದ ಅಗತ್ಯವಿದ್ದ ಕೆಲವು ವ್ಯಕ್ತಿಗಳು ಮತ್ತು ಪರಿಸ್ಥಿತಿಗಳು ಎದುರಾಗಿದ್ದವು. ಹೀಗಾಗಿ ಈ ಸಣ್ಣ ಬ್ರೇಕ್‌ನಲ್ಲೂ ನಾನು ಒಂದು ಜವಾಬ್ದಾರಿಯುತ ಕೆಲಸದಲ್ಲೇ ಬ್ಯುಸಿಯಾಗಿದ್ದೆ’ ಎಂದಿದ್ದಾರೆ.

ಜೂನ್ 26ರಿಂದ BRB ಆರಂಭ; 4 ಸ್ಕ್ರಿಪ್ಟ್ ಲಾಕ್!

ಇದೇ ಪೋಸ್ಟ್‌ನಲ್ಲಿ ತಮ್ಮ ಮುಂದಿನ ಲೈನ್‌ಅಪ್ ಘೋಷಿಸಿರುವ ಕಿಚ್ಚ, ಅಭಿಮಾನಿಗಳಿಗೆ ಡಬಲ್ ಧಮಾಕಾ ನೀಡಿದ್ದಾರೆ. ಇದೇ ತಿಂಗಳು ಜೂನ್ 26ರಿಂದ ಸುದೀಪ್ ಅವರ ಬಹುನಿರೀಕ್ಷಿತ ‘ಬಿಆರ್​​ಬಿ’ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ. ಇದರ ಬೆನ್ನಲ್ಲೇ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುವುದಾಗಿ ಸುದೀಪ್ ಪ್ರಕಟಿಸಿದ್ದಾರೆ. ಈಗಾಗಲೇ ಅವರು 4 ಪ್ರಮುಖ ಸ್ಕ್ರಿಪ್ಟ್‌ಗಳನ್ನು (ಕಥೆಗಳನ್ನು) ಲಾಕ್ ಮಾಡಿದ್ದು, ಅವುಗಳನ್ನು ಶೀಘ್ರದಲ್ಲೇ ಆರಂಭಿಸಲು ತಾವೂ ಕೂಡ ಅಷ್ಟೇ ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಸುದೀಪ್ ನೆಪೋಟಿಸಂ ಹೇಳಿಕೆ ಬೆನ್ನಲ್ಲೇ ಶಿವಣ್ಣ ಖಡಕ್ ಉತ್ತರ

ಇಷ್ಟು ದಿನ ಕಿಚ್ಚನ ಸಿನಿಮಾಗಳ ಅಪ್‌ಡೇಟ್ ಇಲ್ಲದೆ ಕಾಯುತ್ತಿದ್ದ ಅಭಿಮಾನಿ ಬಳಗಕ್ಕೆ ಈ ಒಂದೇ ಒಂದು ಪೋಸ್ಟ್ ಈಗ ಹಬ್ಬದ ವಾತಾವರಣ ತಂದಿದೆ. ಜೂನ್ 26ರಿಂದ ಕಿಚ್ಚ ಅಖಾಡಕ್ಕೆ ಇಳಿಯುತ್ತಿರುವುದು ಗಾಂಧಿನಗರದಲ್ಲೂ ಹೊಸ ಸಂಚಲನ ಸೃಷ್ಟಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

PM Narendra Modi: ಭಾರತೀಯ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ, ಅತಿ ದೀರ್ಘಾವಧಿ ಚುನಾಯಿತ ಪ್ರಧಾನಿ ಮೋದಿ ಸಾಧನೆಗಳು – Kannada News

ನವದೆಹಲಿ, ಜೂನ್ 10: ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಅಪೂರ್ವ ಹಾಗೂ ಐತಿಹಾಸಿಕ ಮೈಲಿಗಲ್ಲೊಂದು ನಿರ್ಮಾಣವಾಗಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಜಹಾಹರಲಾಲ್ ನೆಹರು ಅವರ ದಾಖಲೆಯನ್ನು ಅಧಿಕೃತವಾಗಿ ಹಿಂದಿಕ್ಕುವ ಮೂಲಕ ಸ್ವತಂತ್ರ ಭಾರತದಲ್ಲಿ ಸತತವಾಗಿ ಅತಿ ದೀರ್ಘ ಅವಧಿಗೆ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಮೊದಲ ಪ್ರಧಾನಿ ಎನಿಸಿಕೊಂಡಿದ್ದಾರೆ.

ಸುಧಾರಣೆಯಿಂದ ಫಲಿತಾಂಶದವರೆಗೆ, ಬದಲಾದ ಭಾರತ

ಬಡವರ ಕಲ್ಯಾಣ: ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ 50 ಕೋಟಿಗೂ ಅಧಿಕ ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಜೋಡಿಸಲು ‘ಜನ ಧನ್ ಖಾತೆ’ಗಳನ್ನು ತೆರೆಯಲಾಯಿತು. ಜಗತ್ತಿನ ಅತಿ ದೊಡ್ಡ ಆರೋಗ್ಯ ವಿಮಾ ಯೋಜನೆಯಾದ ‘ಆಯುಷ್ಮಾನ್ ಭಾರತ’ ಅಡಿಯಲ್ಲಿ ಕೋಟ್ಯಂತರ ಕುಟುಂಬಗಳಿಗೆ ಉಚಿತ ವೈದ್ಯಕೀಯ ರಕ್ಷಣೆ ನೀಡಲಾಗಿದೆ.

ಡಿಜಿಟಲ್ ಮತ್ತು ತಾಂತ್ರಿಕ ಕ್ರಾಂತಿ: ಭಾರತದ ಹಳ್ಳಿ ಹಳ್ಳಿಗಳಿಗೂ ಅತಿ ಅಗ್ಗದ ದರದಲ್ಲಿ ಇಂಟರ್ನೆಟ್ ಸಂಪರ್ಕ ಒದಗಿಸಲಾಗಿದೆ. 2014 ರಲ್ಲಿ ಕೇವಲ 2 ಮೊಬೈಲ್ ತಯಾರಿಕಾ ಘಟಕಗಳನ್ನು ಹೊಂದಿದ್ದ ಭಾರತ, ಇಂದು ಜಗತ್ತಿನ 2ನೇ ಅತಿ ದೊಡ್ಡ ಮೊಬೈಲ್ ಉತ್ಪಾದನಾ ಕೇಂದ್ರವಾಗಿದೆ. ಕೇವಲ 500 ರಷ್ಟಿದ್ದ ನವೋದ್ಯಮಗಳ (Startups) ಸಂಖ್ಯೆ ಇಂದು ಲಕ್ಷ ದಾಟಿದ್ದು, ಭಾರತವನ್ನು ಜಾಗತಿಕ ಸ್ಟಾರ್ಟ್‌ಅಪ್ ಹಬ್ ಅನ್ನಾಗಿ ಮಾಡಿದೆ.

ಮೂಲಸೌಕರ್ಯ ಮತ್ತು ಆರ್ಥಿಕತೆ: ದೇಶಾದ್ಯಂತ ಅತ್ಯಾಧುನಿಕ ಎಕ್ಸ್‌ಪ್ರೆಸ್‌ವೇಗಳು, ನೂರಾರು ಹೊಸ ವಿಮಾನ ನಿಲ್ದಾಣಗಳು ಹಾಗೂ ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಶೇ. 100 ರಷ್ಟು ರೈಲ್ವೆ ವಿದ್ಯುದೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ರಕ್ಷಣಾ ಇಲಾಖೆಯಲ್ಲಿ ‘ಆತ್ಮನಿರ್ಭರ ಭಾರತ’ ನೀತಿಯನ್ನು ಅಳವಡಿಸಿಕೊಂಡಿದ್ದರಿಂದ ಭಾರತದ ರಕ್ಷಣಾ ರಫ್ತು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಎಲ್ಲ ಸುಧಾರಣೆಗಳಿಂದಾಗಿ ದೇಶದ ಪ್ರತಿಯೊಬ್ಬ ನಾಗರಿಕನ ತಲಾವಾರು ಜಿಡಿಪಿ ಗಮನಾರ್ಹವಾಗಿ ವೃದ್ಧಿಸಿದೆ.

ಮತ್ತಷ್ಟು ಓದಿ: ಸುದೀರ್ಘ ಪ್ರಧಾನಿ: ನೆಹರು ದಾಖಲೆ ಮುರಿದ ನರೇಂದ್ರ ಮೋದಿ ನಾಯಕತ್ವ ಕೊಂಡಾಡಿದ ಚಂದ್ರಬಾಬು ನಾಯ್ಡು, ಹೆಚ್.ಡಿ. ದೇವೇಗೌಡ

ರಾಜಕೀಯ ಜೀವನದ ಅಪ್ರತಿಮ ಹೆಗ್ಗುರುತುಗಳು

ಶೂನ್ಯ ಸೋಲುಗಳ ಅಪ್ರತಿಮ ದಾಖಲೆ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇಡೀ ರಾಜಕೀಯ ಜೀವನದಲ್ಲಿ (ಗುಜರಾತ್ ಮುಖ್ಯಮಂತ್ರಿಯಾದಾಗಿನಿಂದ ಹಿಡಿದು ಇಂದಿನವರೆಗೂ) ತಾವು ಎದುರಿಸಿದ ಯಾವುದೇ ಒಂದು ಚುನಾವಣೆಯಲ್ಲೂ ಸೋಲನ್ನೇ ಕಂಡಿಲ್ಲ.

ಸ್ವಾತಂತ್ರ್ಯದ ನಂತರ ಜನಿಸಿದ ಮೊದಲ ಪ್ರಧಾನಿ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ (ಸೆಪ್ಟೆಂಬರ್ 17, 1050) ಜನಿಸಿ, ದೇಶದ ಅತ್ಯುನ್ನತ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಮೊದಲ ನಾಯಕ ಎಂಬ ಕೀರ್ತಿ ಇವರಿಗಿದೆ.

ಐತಿಹಾಸಿಕ ಸತತ ಅಧಿಕಾರ: ಜವಾಹರಲಾಲ್ ನೆಹರೂ ಅವರ ನಂತರ ದೇಶದ ಇತಿಹಾಸದಲ್ಲೇ ಸತತವಾಗಿ ಮೂರನೇ ಬಾರಿಗೆ (2014, 2019 ಮತ್ತು 2024) ಸಾರ್ವತ್ರಿಕ ಚುನಾವಣೆಗಳನ್ನು ಗೆದ್ದು ಯಶಸ್ವಿ ಆಡಳಿತ ನೀಡುತ್ತಿದ್ದಾರೆ.

ಜಾಗತಿಕ ರಂಗದಲ್ಲಿ ಭಾರತದ ವಿಶ್ವಗುರು ಸ್ಥಾನಮಾನ

ಪ್ರಧಾನಿ ಮೋದಿಯವರ ಮುತ್ಸದ್ದಿತನ ಮತ್ತು ಜಾಗತಿಕ ರಾಜತಾಂತ್ರಿಕತೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯನ್ನು ಜಗತ್ತಿನ ಸರ್ವೋಚ್ಚ ಶಿಖರಕ್ಕೆ ಕೊಂಡೊಯ್ದಿದೆ.

32 ಅಂತಾರಾಷ್ಟ್ರೀಯ ಗೌರವಗಳು: ಜಗತ್ತಿನ ವಿವಿಧ ಪ್ರಬಲ ರಾಷ್ಟ್ರಗಳು ಮತ್ತು ಜಾಗತಿಕ ಸಂಸ್ಥೆಗಳು ಪ್ರಧಾನಿ ಮೋದಿಯವರಿಗೆ ಇದುವರೆಗೆ ತಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು ಸೇರಿದಂತೆ ಬರೋಬ್ಬರಿ 32 ಅಂತರರಾಷ್ಟ್ರೀಯ ಗೌರವಗಳನ್ನು ನೀಡಿ ಪುರಸ್ಕರಿಸಿವೆ.

19 ವಿದೇಶಿ ಸಂಸತ್‌ಗಳಲ್ಲಿ ಭಾಷಣ: ಅಮೆರಿಕದ ಜಂಟಿ ಸಂಸತ್ ಅಧಿವೇಶನ ಸೇರಿದಂತೆ ವಿಶ್ವದ ವಿವಿಧ ಶಕ್ತಿಶಾಲಿ ದೇಶಗಳ 19 ವಿದೇಶಿ ಸಂಸತ್‌ಗಳನ್ನು ಉದ್ದೇಶಿಸಿ ಮಾತನಾಡುವ ಮೂಲಕ ಜಾಗತಿಕ ನೀತಿ ನಿರೂಪಣೆಯಲ್ಲಿ ಭಾರತದ ಪ್ರಭಾವವನ್ನು ಅವರು ಅತ್ಯಂತ ಯಶಸ್ವಿಯಾಗಿ ಮಂಡಿಸಿದ್ದಾರೆ.

ದಶಕದ ಸುಸ್ಥಿರ ಆಡಳಿತ, ಡಿಜಿಟಲ್ ಕ್ರಾಂತಿ, ಆರ್ಥಿಕ ಸ್ಥಿರತೆ ಮತ್ತು ಬಡವರ ಕಲ್ಯಾಣ ಯೋಜನೆಗಳ ಮೂಲಕ ನವ ಭಾರತದ ನಾಯಕನಾಗಿ ಹೊರಹೊಮ್ಮಿರುವ ಪ್ರಧಾನಿ ನರೇಂದ್ರ ಮೋದಿಯವರ ಈ ಯಶಸ್ಸು ಇಡೀ ದೇಶದ ಪ್ರಜಾಪ್ರಭುತ್ವದ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಆಯ್ಕೆ ಮಾಡಿ ಸಿರಾಜ್​ರನ್ನು ತಂಡದಿಂದ ಕೈ ಬಿಡಲು ಇದುವೇ ಕಾರಣ! – Kannada News

ಭಾರತ ಟಿ20 ತಂಡದಿಂದ ಮೊಹಮ್ಮದ್ ಸಿರಾಜ್ ಅವರನ್ನು ಕೈ ಬಿಡಲಾಗಿದೆ. ಇತ್ತೀಚೆಗೆ ಪ್ರಕಟಿಸಲಾದ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಸಿರಾಜ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇದೀಗ ಅವರಿಗೆ ಈ ಸರಣಿಗಳಿಂದ ಹೊರಗುಳಿಯುವಂತೆ ಸೂಚಿಸಲಾಗಿದೆ. ಇದರ ಬೆನ್ನಲ್ಲೇ ಸಿರಾಜ್ ಅವರನ್ನು ಕೈ ಬಿಡಲು ಕಾರಣವೇನು? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿರುವಂತೆ, ಮುಂಬರುವ ದೀರ್ಘ ಹಾಗೂ ಬಿಡುವಿಲ್ಲದ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳನ್ನು ಗಮನದಲ್ಲಿಟ್ಟುಕೊಂಡು ಸಿರಾಜ್ ಅವರ ‘ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್’ ಯೋಜನೆ ಅಡಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಂದರೆ ಇಲ್ಲಿ ಸಿರಾಜ್​ಗೆ ವಿಶ್ರಾಂತಿ ನೀಡುವ ಸಲುವಾಗಿಯೇ ಈ ಕ್ರಮ ಕೈಗೊಳ್ಳಲಾಗಿದೆ.

ಇಲ್ಲಿ ಕಡ್ಡಾಯ ವಿಶ್ರಾಂತಿ ಸೂಚಿಸಲು ಮುಖ್ಯ ಕಾರಣ ಮುಂಬರುವ ಟೆಸ್ಟ್ ಸರಣಿಗಳು. ಅಂದರೆ ಭಾರತ ತಂಡಕ್ಕೆ ಮುಂದಿನ 9 ಟೆಸ್ಟ್ ಪಂದ್ಯಗಳು ನಿರ್ಣಾಯಕ. ಏಕೆಂದರೆ ಮುಂದಿನ 9 ಟೆಸ್ಟ್ ಪಂದ್ಯಗಳಲ್ಲಿ  8 ಮ್ಯಾಚ್ ಗೆದ್ದರೆ ಮಾತ್ರ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ಗೇರಬಹುದು.

ಇದಕ್ಕೂ ಮುನ್ನ ಮೊಹಮ್ಮದ್ ಸಿರಾಜ್ ಅವರ ಕಾರ್ಯದೊತ್ತಡ ನಿರ್ವಹಣೆ ಮತ್ತು ದೈಹಿಕ ದಣಿವು ನಿವಾರಣೆಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ವಿಶ್ರಾಂತಿ ನೀಡಲಾಗಿದೆ.

ವೈದ್ಯಕೀಯ ತಂಡ ಮತ್ತು ಭಾರತೀಯ ತಂಡದ ಮ್ಯಾನೇಜ್‌ಮೆಂಟ್ ನಡುವೆ ನಡೆದ ಸಮಾಲೋಚನೆಯ ನಂತರ ಈ ಅಧಿಕೃತ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದಕ್ಕೆ ಪ್ರಮುಖ ಕಾರಣಗಳು ಈ ಕೆಳಗಿನಂತಿವೆ…

  • ನಿರಂತರ ಬೌಲಿಂಗ್ ದಣಿವು: ಮೊಹಮ್ಮದ್ ಸಿರಾಜ್ ಅವರು 2025 ರಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಓವರ್‌ಗಳನ್ನು  ಎಸೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯೊಂದರಲ್ಲೇ ಅವರು 185.3 ಓವರ್ ಬೌಲಿಂಗ್ ಮಾಡಿದ್ದರು.
  • ಅತೀ ಹೆಚ್ಚು ಓವರ್​: 2025 ರಿಂದ ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಓವರ್​ಗಳನ್ನು ಎಸೆದ ವೇಗಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಕೂಡ ಸಿರಾಜ್. 2025 ರಿಂದ ಈವರೆಗೆ ಸಿರಾಜ್ 324.4 ಓವರ್​ಗಳನ್ನು ಎಸೆದಿದ್ದಾರೆ. ವಿಶ್ವ ಯಾವುದೇ ವೇಗದ ಬೌಲರ್ ಕಳೆದೊಂದು ವರ್ಷದಲ್ಲಿ 310 ಕ್ಕಿಂತ ಹೆಚ್ಚು ಓವರ್ ಎಸೆದಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.
  • ಐಪಿಎಲ್ ಪಂದ್ಯಗಳು: ಮೊಹಮ್ಮದ್ ಸಿರಾಜ್ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್ ಪರ ಎಲ್ಲಾ 17 ಪಂದ್ಯಗಳನ್ನು ಆಡಿದ್ದರು. ಇದರ ಬೆನ್ನಲ್ಲೇ ಅಫ್ಘಾನಿಸ್ತಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲೂ ಭಾಗವಹಿಸಿದ್ದರು.
  • ದೀರ್ಘಾವಧಿಯ ಸರಣಿಗಳಿಗೆ ಸಿದ್ಧತೆ: ಮುಂಬರುವ ಸುದೀರ್ಘ ಅಂತರರಾಷ್ಟ್ರೀಯ ಕ್ರಿಕೆಟ್ ಸೀಸನ್ ಮತ್ತು ಪ್ರಮುಖ ಸರಣಿಗಳಿಗೆ ಸಿರಾಜ್ ಅವರ ಅವಶ್ಯಕತೆ ಟೀಮ್ ಇಂಡಿಯಾಗೆ ಇದೆ. ಹೀಗಾಗಿ ಅವರು ಸಂಪೂರ್ಣ ದೈಹಿಕ ಫಿಟ್‌ನೆಸ್ ಹಾಗೂ ವೇಗವನ್ನು ಕಾಯ್ದುಕೊಳ್ಳಲು ಈ ವಿಶ್ರಾಂತಿ ಅನಿವಾರ್ಯವಾಗಿತ್ತು.

ಸದ್ಯ ಭಾರತ ಟಿ20 ತಂಡದಿಂದ ಹೊರಗುಳಿದಿರುವ ಮೊಹಮ್ಮದ್ ಸಿರಾಜ್, ಇಂಗ್ಲೆಂಡ್ ವಿರುದ್ಧದ ಮೂರು ಮ್ಯಾಚ್​ಗಳ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅಂದರೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮುಂಬರುವ ಏಕದಿನ ವಿಶ್ವಕಪ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ಗಾಗಿ ಈಗಲೇ ಬಲಿಷ್ಠ ಪಡೆಯನ್ನು ರೂಪಿಸಲು ಪ್ಲ್ಯಾನ್ ರೂಪಿಸುತ್ತಿದೆ.

ಇದನ್ನೂ ಓದಿ: ಬರೋಬ್ಬರಿ 21 ವರ್ಷ… ಆಸ್ಟ್ರೇಲಿಯಾವನ್ನು ಮಕಾಡೆ ಮಲಗಿಸಿದ ಬಾಂಗ್ಲಾದೇಶ್!

ಈ ಪ್ಲ್ಯಾನ್​ನ ಭಾಗವಾಗಿ ಇದೀಗ ಮೊಹಮ್ಮದ್ ಸಿರಾಜ್ ಅವರನ್ನು ಟಿ20 ತಂಡದಿಂದ ಕೈ ಬಿಡಲಾಗಿದೆ. ಅಲ್ಲದೆ ಅವರನ್ನು ಮುಂಬರುವ ಏಕದಿನ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಸಲು ಬಿಸಿಸಿಐ ನಿರ್ಧರಿಸಿದೆ.

Source link

ಕೆಂಪೇಗೌಡ ಜಯಂತಿಯಂದು ಬೆಂಗಳೂರಿನಲ್ಲಿ 15 ಲಕ್ಷ ಸಸಿ ನೆಡಲು ಸಿದ್ಧತೆ! ಗಿನ್ನಿಸ್ ದಾಖಲೆ ಬರೆಯಲು ಬಿಡಿಎ ಪ್ಲಾನ್ – Kannada News

ಜೂನ್ 5ರಂದು ಬೆಂಗಳೂರಿಗೆ ಬಂದಾಗ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಗಿಡ ನೆಟ್ಟಿರುವ ಸಂಗ್ರಹ ಚಿತ್ರImage Credit source: tv9

ಬೆಂಗಳೂರು, ಜೂನ್ 10: ಬೆಂಗಳೂರಿನ (Bengaluru) ಹಸಿರನ್ನು ಮತ್ತಷ್ಟು ವಿಸ್ತರಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡರ ಜನ್ಮದಿನದ ಅಂಗವಾಗಿ ಜೂನ್ 27 ರಂದು ನಗರದಾದ್ಯಂತ ಏಕಕಾಲದಲ್ಲಿ ಬರೋಬ್ಬರಿ 15 ಲಕ್ಷ ಸಸಿಗಳನ್ನು ನೆಡಲು ಬಿಡಿಎ ಭರದಿಂದ ಸಿದ್ಧತೆಗಳನ್ನು ಆರಂಭಿಸಿದೆ. ಈ ಬೃಹತ್ ಹಸಿರು ಅಭಿಯಾನದ ಮೂಲಕ ಗಿನ್ನಿಸ್ ವರ್ಲ್ಡ್ ರೆಕಾರ್ಡ್ (Guinness World Record) ಬರೆಯಲು ಪ್ರಾಧಿಕಾರ ಗುರಿ ಹೊಂದಿದೆ.

ಮುಖ್ಯಾಂಶಗಳು

  • ಜೂನ್ 27ಕ್ಕೆ 15 ಲಕ್ಷ ಸಸಿ ನೆಡಲು ಸಿದ್ಧತೆ.
  • ಕೆಂಪೇಗೌಡ ಲೇಔಟ್‌ನಲ್ಲಿ 5 ಲಕ್ಷ ಗಿಡಗಳನ್ನು ನೆಡಲು ಸಿದ್ಧತೆ.
  • ಗಿನ್ನಿಸ್ ದಾಖಲೆ ಬರೆಯಲು ಬಿಡಿಎ ಬೃಹತ್ ಪ್ಲಾನ್.

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿಶೇಷ ನಿರ್ದೇಶನದ ಮೇರೆಗೆ ಈ ಬೃಹತ್ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಬಿಡಿಎ ಅಭಿವೃದ್ಧಿಪಡಿಸಿರುವ ನಾಡಪ್ರಭು ಕೆಂಪೇಗೌಡ ಲೇಔಟ್ ಒಂದರಲ್ಲೇ 5 ಲಕ್ಷ ಸಸಿಗಳನ್ನು ನೆಡಲು ತೀರ್ಮಾನಿಸಲಾಗಿದೆ. ಇನ್ನುಳಿದ 10 ಲಕ್ಷ ಸಸಿಗಳನ್ನು ಬನಶಂಕರಿ 6ನೇ ಹಂತ ಸೇರಿದಂತೆ ಪ್ರಾಧಿಕಾರದ ವಿವಿಧ ಬಡಾವಣೆಗಳು ಹಾಗೂ ಮೈಸೂರು ರಸ್ತೆ, ಮಾಗಡಿ ರಸ್ತೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಯ ಇಕ್ಕೆಲಗಳಲ್ಲಿ ನೆಡಲು ಬಿಡಿಎ ಯೋಜಿಸಿದೆ.

ಒಂದು ಮನೆ, ಒಂದು ಔಷಧೀಯ ಸಸ್ಯ

ಈ ಹಸಿರು ಅಭಿಯಾನದಲ್ಲಿ ಕೇವಲ ಅಲಂಕಾರಿಕ ಗಿಡಗಳನ್ನಷ್ಟೇ ನೆಡದೆ, ಪ್ರಕೃತಿ ಮತ್ತು ಪರಿಸರಕ್ಕೆ ಪೂರಕವಾದ ದೇಶೀಯ ಹಾಗೂ ಹಣ್ಣಿನ ಗಿಡಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಾವು, ಹಲಸು, ಬೇವು, ಸಪೋಟ ಸೇರಿದಂತೆ ಸುಮಾರು 350ಕ್ಕೂ ಹೆಚ್ಚು ತಳಿಯ ವಿವಿಧ ಅಪರೂಪದ ಸ್ಥಳೀಯ ಔಷಧೀಯ ಸಸ್ಯಗಳನ್ನು ಇಲ್ಲಿ ನೆಡಲಾಗುತ್ತಿದೆ. ವಸತಿ ಪ್ರದೇಶಗಳಲ್ಲಿ ಜೀವವೈವಿಧ್ಯತೆಯನ್ನು ಹೆಚ್ಚಿಸುವ ಸಲುವಾಗಿ ‘ಒಂದು ಮನೆ, ಒಂದು ಔಷಧೀಯ ಸಸ್ಯ (One House, One Medicinal Plant)’ ಎಂಬ ವಿಶಿಷ್ಟ ಪರಿಕಲ್ಪನೆಯನ್ನು ಈ ಅಭಿಯಾನದಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಬಿಎಂಪಿ ಕಸ ಗುತ್ತಿಗೆ ವಿವಾದ: ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ ರಚನೆ

ಈ ಕುರಿತು ಮಾಹಿತಿ ನೀಡಿರುವ ಬಿಡಿಎ ಅಧ್ಯಕ್ಷ ಹಾಗೂ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್, ‘ಮುಖ್ಯಮಂತ್ರಿಗಳ ಸೂಚನೆಯಂತೆ ಕೆಂಪೇಗೌಡ ಜಯಂತಿಯ ಶುಭ ದಿನದಂದು ನಮ್ಮ ಪ್ರಾಧಿಕಾರದ ವ್ಯಾಪ್ತಿಯ ಲೇಔಟ್‌ಗಳಲ್ಲಿ ಬೃಹತ್ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಅಧಿಕಾರಿಗಳು ಈಗಾಗಲೇ ಸ್ಥಳ ಪರಿಶೀಲನೆ ಹಾಗೂ ಸಸಿಗಳ ಸಂಗ್ರಹಣೆ ಪ್ರಕ್ರಿಯೆ ಆರಂಭಿಸಿದ್ದಾರೆ. ಸಾರ್ವಜನಿಕರ ಸಹಭಾಗಿತ್ವದೊಂದಿಗೆ ನಡೆಯಲಿರುವ ಈ ಬೃಹತ್ ಪರಿಸರ ಆಂದೋಲನವು ಖಂಡಿತವಾಗಿಯೂ ಗಿನ್ನಿಸ್ ದಾಖಲೆ ಬರೆಯಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊಪ್ಪಳ: ಗ್ಯಾಸ್ ಕಟರ್ ಬಳಸಿ ಎಸ್‌ಬಿಐ ಎಟಿಎಂ ದರೋಡೆಗೆ ಯತ್ನ, ಬೆಂಕಿ ಹೊತ್ತಿಕೊಂಡಿದ್ದರಿಂದ ಕಂಗಾಲಾಗಿ ಕಾಲ್ಕಿತ್ತ ಖದೀಮರು – Kannada News

ಕೊಪ್ಪಳ, ಜೂನ್ 10: ನಗರದ ಹೊಸಪೇಟೆ ರಸ್ತೆಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಎಟಿಎಂ ಕೇಂದ್ರದಲ್ಲಿ ನಸುಕಿನ ಜಾವ ಭೀಕರ ದರೋಡೆ ಯತ್ನವೊಂದು ನಡೆದಿದೆ. ನಸುಕಿನ 3 ರಿಂದ 3:30 ರ ಸುಮಾರಿಗೆ ಕಳವಿಗೆ ಬಂದ ಖದೀಮರು, ಮೊದಲು ಎಟಿಎಂ ಒಳಗಿದ್ದ ಸಿಸಿಟಿವಿ ಕ್ಯಾಮೆರಾಗಳಿಗೆ ಕಪ್ಪು ಬಣ್ಣದ ಸ್ಪ್ರೇ (Black Spray) ಹೊಡೆದು ದೃಶ್ಯಾವಳಿಗಳು ಸೆರೆಯಾಗದಂತೆ ತಡೆದಿದ್ದಾರೆ. ಬಳಿಕ ಗ್ಯಾಸ್ ಕಟರ್ ಯಂತ್ರದ ಸಹಾಯದಿಂದ ಎಟಿಎಂ ಯಂತ್ರದ ಮೊದಲ ಕಬ್ಬಿಣದ ಬಾಗಿಲನ್ನು ಕತ್ತರಿಸಲು ಮುಂದಾಗಿದ್ದಾರೆ. ಆದರೆ ಈ ವೇಳೆ ಗ್ಯಾಸ್ ಕಟರ್‌ನ ಕಿಡಿಯಿಂದಾಗಿ ಎಟಿಎಂ ಯಂತ್ರಕ್ಕೆ ದಿಢೀರನೆ ಭಾರಿ ಪ್ರಮಾಣದ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಗಾಬರಿಗೊಂಡ ದರೋಡೆಕೋರರು ಹಣ ದೋಚುವ ಪ್ರಯತ್ನವನ್ನು ಅರ್ಧಕ್ಕೆ ಕೈಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಎಟಿಎಂ ಕೇಂದ್ರದಿಂದ ದಟ್ಟವಾದ ಹೊಗೆ ಮತ್ತು ಬೆಂಕಿ ಬರುತ್ತಿರುವುದನ್ನು ಗಮನಿಸಿದ ಕಟ್ಟಡದ ಮಾಲೀಕರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ, 11 ಮಕ್ಕಳು ಸೇರಿ 13 ಮಂದಿ ಸಾವು – Kannada News

ಕಾಬೂಲ್, ಜೂನ್ 10: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ(Airstrike) ನಡೆಸಿದೆ. ಈ ಘಟನೆಯಲ್ಲಿ 11 ಮಂದಿ ಮಕ್ಕಳು ಸೇರಿ 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಧ್ಯ ಏಷ್ಯಾದ ಪ್ರಾದೇಶಿಕ ಸ್ಥಿರತೆ ಮತ್ತು ಗಡಿ ಭದ್ರತೆಯ ದೃಷ್ಟಿಯಿಂದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಗಡಿ ಪ್ರದೇಶಗಳಲ್ಲಿ ಇತ್ತೀಚೆಗೆ ಕಂಡುಬಂದಿರುವ ಮಿಲಿಟರಿ ಚಟುವಟಿಕೆಗಳು ಜಾಗತಿಕ ಗಮನ ಸೆಳೆದಿವೆ. ಗಡಿಯಲ್ಲಿ ಶಾಂತಿ ಮೂಡಿಸಲು ಮತ್ತು ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಲು ಅಂತಾರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ಪ್ರಯತ್ನಗಳು ಆರಂಭವಾಗಿವೆ.

ವೈಮಾನಿಕ ದಾಳಿ
ಅಫ್ಘಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರ ಅಧಿಕೃತ ಪ್ರಕಟಣೆಯ ಪ್ರಕಾರ, ಗಡಿ ಭಾಗದ ಪ್ರಾಂತ್ಯಗಳಾದ ಕುನಾರ್, ಖೋಸ್ಟ್ ಮತ್ತು ಪಕ್ತಿಕಾ ಪ್ರಾಂತ್ಯಗಳಲ್ಲಿ ಇತ್ತೀಚೆಗೆ ವೈಮಾನಿಕ ನಿಗಾ ಮತ್ತು ಬಾಂಬ್ ದಾಳಿಗಳು ನಡೆದಿವೆ. ಈ ದುರದೃಷ್ಟಕರ ಘಟನೆಯಲ್ಲಿ ಕೆಲವು ನಾಗರಿಕರು, ಮಹಿಳೆಯರು ಮತ್ತು ಮಕ್ಕಳು ತೊಂದರೆಗೆ ಒಳಗಾಗಿದ್ದಾರೆ ಎಂದು ಅಫ್ಘಾನ್ ಆಡಳಿತ ತಿಳಿಸಿದೆ. ಗಡಿ ಭಾಗದಲ್ಲಿ ಉಂಟಾಗಿರುವ ಈ ಉದ್ವಿಗ್ನತೆಯನ್ನು ನಿಯಂತ್ರಿಸಲು ಉಭಯ ದೇಶಗಳ ರಕ್ಷಣಾ ವಿಭಾಗಗಳು ಪರಿಶೀಲನೆ ನಡೆಸುತ್ತಿವೆ.

ತನ್ನ ದೇಶದೊಳಗೆ ಅಶಾಂತಿ ಸೃಷ್ಟಿಸುತ್ತಿರುವ ನಿಷೇಧಿತ ಸಂಘಟನೆಗಳಿಗೆ ಗಡಿ ಭಾಗದಲ್ಲಿ ಆಶ್ರಯ ಸಿಗುತ್ತಿರುವುದನ್ನು ತಡೆಯಲು ತಾನು ಕ್ರಮ ಕೈಗೊಳ್ಳುತ್ತಿರುವುದಾಗಿ ಪಾಕಿಸ್ತಾನ ಹೇಳಿದೆ. ತಾನು ಯಾವುದೇ ವಿದೇಶಿ ಸಂಘಟನೆಗಳಿಗೆ ತನ್ನ ಭೂಮಿಯನ್ನು ಬಳಸಿಕೊಳ್ಳಲು ಅವಕಾಶ ನೀಡುತ್ತಿಲ್ಲ ಮತ್ತು ಗಡಿಯಲ್ಲಿನ ನುಸುಳುವಿಕೆಯನ್ನು ತಡೆಯಲು ಬದ್ಧನಾಗಿರುವುದಾಗಿ ಅಫ್ಘಾನಿಸ್ತಾನ ಸ್ಪಷ್ಟಪಡಿಸಿದೆ.

ಮತ್ತಷ್ಟು ಓದಿ: ಪಿಒಕೆಯಲ್ಲಿ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನದಿಂದ ಗುಂಡಿನ ದಾಳಿ; 30 ಜನ ಸಾವು, 200ಕ್ಕೂ ಹೆಚ್ಚು ಮಂದಿಗೆ ಗಾಯ

ವಿಶ್ವಸಂಸ್ಥೆ ಮತ್ತು ಭಾರತದ ಶಾಂತಿ ಮಂತ್ರ
ಅಫ್ಘಾನಿಸ್ತಾನದಲ್ಲಿ ದೀರ್ಘಕಾಲದಿಂದ ಇರುವ ಮಾನವೀಯ ಬಿಕ್ಕಟ್ಟನ್ನು ನೀಗಿಸಲು ಮತ್ತು ಅಲ್ಲಿನ ನಾಗರಿಕರ, ಅದರಲ್ಲೂ ಮುಖ್ಯವಾಗಿ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ವಿಶ್ವಸಂಸ್ಥೆ (UN) ನಿರಂತರವಾಗಿ ಶ್ರಮಿಸುತ್ತಿದೆ. ಭಾರತವು ಕೂಡ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಅಫ್ಘಾನ್ ನಾಗರಿಕರ ರಕ್ಷಣೆ ಮತ್ತು ಆ ಭಾಗದಲ್ಲಿ ಶಾಂತಿ ಸ್ಥಾಪನೆಯಾಗಬೇಕಾದ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದೆ.

ಪ್ರಸ್ತುತ ಗಡಿಯಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸದೆ, ಉಭಯ ದೇಶಗಳು ರಾಜತಾಂತ್ರಿಕ ಮಾತುಕತೆಗಳ ಮೂಲಕವೇ ಗಡಿ ನಿಯಮಾವಳಿಗಳನ್ನು ಗೌರವಿಸಿ, ಪ್ರಾದೇಶಿಕ ಶಾಂತಿಯನ್ನು ಮರುಸ್ಥಾಪಿಸಬೇಕು ಎಂಬುದು ಜಾಗತಿಕ ನಾಯಕರ ಆಶಯವಾಗಿದೆ. ಇದು ಇಡೀ ಮಧ್ಯ ಏಷ್ಯಾದ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗೆ ಹೊಸ ಮುನ್ನುಡಿ ಬರೆಯಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪುಟ್ಟಣ ಕಣಗಾಲ್ ಶಿಷ್ಯ, ಖ್ಯಾತ ನಿರ್ದೇಶಕ ಭಾರತಿ ರಾಜ ನಿಧನ – Kannada News

ಬಹುಭಾಷಾ ಹಿರಿಯ ನಿರ್ದೇಶಕ ಮತ್ತು ನಟ ಭಾರತಿ ರಾಜ (86) ನಿಧನರಾಗಿದ್ದಾರೆ. ವೃದ್ಧಾಪ್ಯ ಮತ್ತು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ದಿನಗಳಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ (ಜೂನ್ 10) ಮುಂಜಾನೆ ಅವರು ಕೊನೆಯುಸಿರೆಳೆದರು. ಅವರ ಸಾವಿಗೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

1977ರ ತಮಿಳು ಚಿತ್ರ ’16 ವಯತಿನಿಲೆ’ ಮೂಲಕ ಭಾರತಿ ರಾಜ ನಿರ್ದೇಶಕರಾದರು. ಅದಾದ ನಂತರ, ಅವರು ‘ಕಿಲಕ್ಕೆ ಪೋಗಮ್ ರೈಲ್’, ‘ಸಿಗಪ್ಪು ರೋಜಕ್ಕಲ್’, ‘ಅಲೈಗಲ್ ಒಯಿವತಿಲ್ಲೈ’, ‘ಕಾದಲ್ ಓವಿಯಂ’, ‘ಮುದಲ್ ಮರಿಯಥೈ’ ಮತ್ತು ಇತರ ಸೂಪರ್ ಹಿಟ್ ಚಿತ್ರಗಳನ್ನು ತಮಿಳು ಪ್ರೇಕ್ಷಕರಿಗೆ ನೀಡಿದರು.

ವಿಶೇಷ ಎಂದರೆ ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಬಳಿ ಭಾರತಿ ರಾಜ ಕೆಲಸ ಕಲಿತಿದ್ದರು. ಪುಟ್ಟಣ್ಣ ಕಣಗಾಲ್ ಬಳಿ ಸಹಾಯಕ ನಿರ್ದೇಶಕರಾಗಿ ಅವರು ಕೆಲಸ ಮಾಡಿದ್ದರು. ಆದಾಗ್ಯೂ ಭಾರತಿ ರಾಜ ಅವರು ಕನ್ನಡದಲ್ಲಿ ಯಾವುದೇ ಸಿನಿಮಾ ಮಾಡಿಲ್ಲ.

ದಂತಕಥೆಯ ನಿರ್ದೇಶಕರು ತೆಲುಗಿನಲ್ಲಿ ಅನೇಕ ಕ್ಲಾಸಿಕ್ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ‘ಸೀತಕೋಕ ಚಿಲುಕ’, ‘ಆರಾಧನಾ’, ‘ಜಮದಗ್ನಿ’, ‘ಈತರಂ ಇಲ್ಲು’, ‘ಎರ್ರಾ ಗುಲಾಬಿಲು’, ‘ಟಿಕ್ ಟಿಕ್ ಟಿಕ್’, ‘ಕೊತ್ತ ಜೀವನಲು’, ‘ಯುವತರಂ ಪಿರಿದಿಂಡಿ’ ಹೀಗೆ ಹಲವು ಉತ್ತಮ ಚಿತ್ರಗಳನ್ನು ತೆಲುಗು ಪ್ರೇಕ್ಷಕರಿಗೆ ಭಾರತಿರಾಜ ನೀಡಿದ್ದಾರೆ.

ಭಾರತಿ ರಾಜಾ ಕೊನೆಯದಾಗಿ ‘ಮೀಂದುಮ್ ಒರು ಮರಿಯಾದೈ’ ಚಿತ್ರವನ್ನು ನಿರ್ದೇಶಿಸಿದರು. 2020 ರಲ್ಲಿ ಬಿಡುಗಡೆಯಾದ ಈ ಚಿತ್ರವು ಸಾಧಾರಣ ಪ್ರದರ್ಶನ ನೀಡಿತು. ಇದರ ನಂತರ, ಅವರು ಸಿನಿಮಾ ಮಾಡಿಲ್ಲ. ಅವರು ನಟನಾಗಿಯೂ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಆ ಹಾಡು ಕೇಳಿ ಅತ್ತಿದ್ದ ಪುಟ್ಟಣ್ಣ ಕಣಗಾಲ್; ಹಾಡಿದ್ದಕ್ಕೆ ಸಂಭಾವನೆಯೇ ಬೇಡವೆಂದ ಎಸ್​ಪಿಬಿ 

ಭಾರತಿರಾಜ ಅವರ ಏಕೈಕ ಪುತ್ರ ಮನೋಜ್ ಭಾರತಿರಾಜ ಕಳೆದ ವರ್ಷ ನಿಧನರಾದರು. ನಟ ಮತ್ತು ನಿರ್ದೇಶಕರಾಗಿ ಬೆಳೆಯುತ್ತಿದ್ದ ಮನೋಜ್ ಅವರ ಹಠಾತ್ ಸಾವು ಭಾರತಿರಾಜ ಅವರನ್ನು ತೀವ್ರವಾಗಿ ಬಾಧಿಸಿತು. ಈ ದುರಂತದಿಂದ ಚೇತರಿಸಿಕೊಳ್ಳಲು ಅವರಿಗೆ ಬಹಳ ಸಮಯ ಹಿಡಿಯಿತು. ಆ ದುರಂತವನ್ನು ಮರೆಯಲು ಭಾರತಿರಾಜ ತಮ್ಮ ಕುಟುಂಬ ಸದಸ್ಯರೊಂದಿಗೆ ವಿದೇಶದಲ್ಲಿ ಸ್ವಲ್ಪ ಸಮಯ ಕಳೆದರು ಮತ್ತು ನಂತರ ಚೆನ್ನೈಗೆ ಮರಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version