ದಾವಣಗೆರೆ: ಶ್ರೀಮಂತ ಯುವಕರ ಬಲೆಗೆ ಬೀಳಿಸ್ತಿದ್ದ ಯುವತಿ, ಹಲ್ಲೆ ಮಾಡಿ ದೋಚುತ್ತಿದ್ದ ಹನಿಟ್ರ್ಯಾಪ್ ಗ್ಯಾಂಗ್ ಅರೆಸ್ಟ್ – Kannada News | Crime in Davanagere: Honeytrap Gang of Five Busted; Gram Panchayat Member Brutally Murdered in Channagiri

ಪಂಚಮಿ, ವೆಂಕಟೇಶ್, ಗಂಗಾ ಮಲ್ಲೇಶ್ ನಾಯ್ಕ ಹಾಗೂ ಜಗದೀಶImage Credit source: tv9

ದಾವಣಗೆರೆ, ಮೇ 16: ದಾವಣಗೆರೆ (Davanagere) ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳು ವರದಿಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ದಾವಣಗೆರೆಯಲ್ಲಿ ಶ್ರೀಮಂತ ಯುವಕರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ನಡೆಸಿ ಹಣ, ಒಡವೆ ಸುಲಿಗೆ ಮಾಡುತ್ತಿದ್ದ ಐದು ಮಂದಿ ಕಿಲಾಡಿಗಳನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ, ಹಣ ಹಾಗೂ ಕೌಟುಂಬಿಕ ದ್ವೇಷದ ಹಿನ್ನೆಲೆ ಗ್ರಾಮ ಪಂಚಾಯತ್ ಸದಸ್ಯರೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಮುಖ್ಯಾಂಶಗಳು

  • ಹನಿಟ್ರ್ಯಾಪ್ ಗ್ಯಾಂಗ್‌ನ ಐವರನ್ನು ಬಂಧಿಸಿದ ಪೊಲೀಸರು.
  • ₹10.20 ಲಕ್ಷ ಮೌಲ್ಯದ ಚಿನ್ನ ಹಾಗೂ ಕೃತ್ಯಕ್ಕೆ ಬಳಸಿದ್ದಇನ್ನೋವಾ ಕಾರು ವಶಕ್ಕೆ.
  • ಶ್ರೀಮಂತ ಯುವಕನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದರೋಡೆ ಮಾಡಿದ್ದ ಗ್ಯಾಂಗ್.

ಹನಿಟ್ರ್ಯಾಪ್ ಪ್ರಕರಣದ ವಿವರ

ಪಂಚಮಿ (34), ಜಗದೀಶ (35), ಗಂಗಾ ಮಲ್ಲೇಶ್ ನಾಯ್ಕ (25) ಹಾಗೂ ವೆಂಕಟೇಶ್ (30) ಎಂಬವರೇ ಹನಿಟ್ರ್ಯಾಪ್ ಕೇಸ್​ನಲ್ಲಿ ಬಂಧಿತರಾದವರು. ಈ ಕಿಲಾಡಿ ಗ್ಯಾಂಗ್ ಮೊದಲು ಶ್ರೀಮಂತ ಹಿನ್ನೆಲೆಯುಳ್ಳ ಯುವಕರನ್ನು ಟಾರ್ಗೆಟ್ ಮಾಡುತ್ತಿತ್ತು. ಗ್ಯಾಂಗ್‌ನ ಸದಸ್ಯೆ ಪಂಚಮಿ (34) ಎಂಬಾಕೆ ಶ್ರೀಮಂತ ಯುವಕನೊಬ್ಬನೊಂದಿಗೆ ಸ್ನೇಹ ಬೆಳೆಸಿ, ಹರಿಹರ ತಾಲೂಕಿನ ಶಿವನಹಳ್ಳಿ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದಾಳೆ. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಜಗದೀಶ, ಗಂಗಾ ಮಲ್ಲೇಶ್ ನಾಯ್ಕ, ವೆಂಕಟೇಶ್ ಹಾಗೂ ಮತ್ತೊಬ್ಬ ಆರೋಪಿ ಧಾವಿಸಿ ಬಂದು ಯುವಕನ ಮೇಲೆ ಹಲ್ಲೆ ನಡೆಸಿ, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಇಡೀ ಗ್ಯಾಂಗ್ ಅನ್ನು ಜೈಲಿಗಟ್ಟಿದ್ದಾರೆ. ಈ ತಂಡ ಇನ್ನೂ ಹಲವು ಯುವಕರಿಗೆ ವಂಚಿಸಿರುವ ಶಂಕೆ ಇದ್ದು, ತನಿಖೆ ಚುರುಕುಗೊಂಡಿದೆ.

ಚನ್ನಗಿರಿಯ ನಲ್ಲೂರು ಗ್ರಾಮದಲ್ಲಿ ಪಂಚಾಯತಿ ಸದಸ್ಯನ ಬರ್ಬರ ಹತ್ಯೆ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಅತಾವುಲ್ಲಾ (46) ಎಂಬುವವರನ್ನು ತಡರಾತ್ರಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅಡಿಕೆ ಕತ್ತರಿಸುವ ಕತ್ತಿ ಹಾಗೂ ಮಚ್ಚುಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಹಳೇ ಕಾರುಗಳ ವ್ಯಾಪಾರ ಮಾಡುತ್ತಿದ್ದ ಅತಾವುಲ್ಲಾ, ಭದ್ರಾವತಿ ತಾಲೂಕಿನ ಕಾಗೆಕೋಡುಮಗ್ಗಿ ಗ್ರಾಮದ ತನ್ನ ಸೋದರತ್ತೆಯ ಮಗಳ ಬಳಿ 2 ಲಕ್ಷ ರೂ. ಸಾಲ ಮಾಡಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಇಡೀ ಕರ್ನಾಟಕವನ್ನೇ ನಡುಗಿಸಿದ 4500 ಕೋಟಿ ರೂ. ವಂಚನೆ ಕೇಸ್: ಶಿವಂ ಅಸೋಸಿಯೇಟ್‌ ಮಾಲೀಕ ಅರೆಸ್ಟ್

ಸಾಲದ ಹಣದ ವಿವಾದ ಒಂದೆಡೆಯಾದರೆ, ಸೋದರತ್ತೆಯ ಮಗಳನ್ನು ಬಿಟ್ಟು ಅತಾವುಲ್ಲಾ ಬೇರೆ ಯುವತಿಯನ್ನು ಮದುವೆಯಾಗಿದ್ದಕ್ಕೆ ಸೋದರತ್ತೆ ತೀವ್ರ ದ್ವೇಷ ಸಾಧಿಸುತ್ತಿದ್ದಳು. ಇದೇ ಹಳೇ ದ್ವೇಷದ ಹಿನ್ನೆಲೆಯಲ್ಲಿ ಭದ್ರಾವತಿ ತಾಲೂಕಿನ ಶೇಖ್ ದಸ್ತುಗಿರಿ ಹಾಗೂ ಜಬೀವುಲ್ಲಾ ಎಂಬ ಹಂತಕರಿಗೆ ಸುಪಾರಿ ಕೊಟ್ಟು ಈ ಕೊಲೆ ಮಾಡಿಸಲಾಗಿದೆ ಎಂಬುದು ತಿಳಿದುಬಂದಿದೆ. ಸದ್ಯ ಚನ್ನಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಹಂತಕರ ಪತ್ತೆಗೆ ಜಾಲ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಮಾತನಾಡಿದ ಪವನ್ ಕಲ್ಯಾಣ್: ಆಗಿದ್ದ ಸಮಸ್ಯೆ ಏನು? – Kannada News | Pawan Kalyan talks about his health condition

ಪವನ್ ಕಲ್ಯಾಣ್ (Pawan Kalyan) ಇತ್ತೀಚೆಗಷ್ಟೆ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು, ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಅವರ ಸಹೋದರ ಮೆಗಾಸ್ಟಾರ್ ಚಿರಂಜೀವಿ, ಅಲ್ಲು ಅರ್ಜುನ್ ಇನ್ನೂ ಹಲವರು ಟ್ವೀಟ್ ಮಾಡಿ ಶೀಘ್ರ ಗುಣಮುಖವಾಗುವಂತೆ ಕೋರಿದ್ದರು. ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ಪವನ್ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ವೈದ್ಯರ ಸಲಹೆಯಂತೆ ಕೆಲ ವಾರ ವಿಶ್ರಾಂತಿಯನ್ನೂ ಪಡೆದಿದ್ದರು. ಇದೀಗ ಶಸ್ತ್ರಚಿಕಿತ್ಸೆ ಬಳಿಕ ಮೊದಲ ಬಾರಿಗೆ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಪವನ್ ಕಲ್ಯಾಣ್, ತಮಗಾಗಿದ್ದ ಆರೋಗ್ಯ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ.

ತಮ್ಮ ಜನಸೇನಾ ಪಕ್ಷದ ಸಭೆಯಲ್ಲಿ ಭಾಗಿ ಆಗಿದ್ದ ಪವನ್ ಕಲ್ಯಾಣ್, ತಮಗಾಗಿದ್ದ ಆರೋಗ್ಯ ಸಮಸ್ಯೆ ಬಗ್ಗೆ ವಿವರಿಸಿದರು. ‘ಕೋವಿಡ್ ಸಮಯದಲ್ಲಿ ನನಗೆ ಶ್ವಾಸಕೋಶದ ಸೋಂಕು ಆಗಿತ್ತು. ಅದು ಪೂರ್ಣವಾಗಿ ಗುಣವಾಗಿರಲಿಲ್ಲ. ಅದರ ಜೊತೆಗೆ ಚುನಾವಣೆಗೆ ಮುಂಚೆ ಸುಮಾರು ಒಂದೂವರೆ ವರ್ಷದ ಕಾಲ ದೂಳಿನಲ್ಲಿ ಓಡಾಟ, ವಿಶ್ರಾಂತಿ ಇಲ್ಲದ ಪ್ರಚಾರ ಇನ್ನಿತರೆಗಳಿಂದ ಆರೋಗ್ಯದಲ್ಲಿ ವ್ಯತ್ಯಾಸಗಳಾಗಿದ್ದವು’ ಎಂದರು.

‘ದೂಳಿನಲ್ಲಿ ಸಾಕಷ್ಟು ತಿರುಗಿ ಸೈನಸ್ ನಲ್ಲಿ ದೂಳು ಜಮೆಯಾಗಿ ಅಲ್ಲಿ ಗಟ್ಟಿಯಾಗಿಬಿಟ್ಟಿತ್ತು. ಇದರಿಂದ ಎಡಗಣ್ಣಿನ ಪಕ್ಕ ಪದೇ ಪದೇ ಊತ ಬರುತ್ತಿತ್ತು. ಒಂದು ಹಂತದಲ್ಲಂತೂ ಕಣ್ಣಿನ ದೃಷ್ಟಿ ಮಂದವಾಗಿತ್ತು, ಹಾಗೂ ಎಡಗಡೆ ಕಣ್ಣು ತಿರುಗಿಸಿದರೆ ಏನೂ ಕಾಣುತ್ತಲೇ ಇರಲಿಲ್ಲ. ಇದರ ಜೊತೆಗೆ ದೇಹದ ಕೆಲವೆಡೆ ಮಾಂಸಖಂಡಗಳು ಹರಿದಿವೆ, ಕೆಲ ಮೂಳೆಗಳಲ್ಲಿ ಬಿರುಕು ಮೂಡಿದೆ ಎಂಬುದು ಸಹ ಗೊತ್ತಾಯ್ತು’ ಎಂದಿದ್ದಾರೆ ಪವನ್.

ಇದನ್ನೂ ಓದಿ:ಚಿಕ್ಕಪ್ಪ ಪವನ್ ಕಲ್ಯಾಣ್ ದಾಖಲೆ ಮುರಿದ ರಾಮ್ ಚರಣ್

‘ನಾನು ಹೋದಲ್ಲೆಲ್ಲ ಅಭಿಮಾನಿಗಳು ಕೈ ಕುಲುಕುವುದು, ಕೈ ಕೊಟ್ಟರೆ ಎಳೆಯುವುದು ಮಾಡುತ್ತಾರೆ ಅದು ಅವರ ಪ್ರೀತಿ, ಆದರೆ ಅದರಿಂದ ನನಗೆ ಎರಡೂ ಭುಜಗಳಲ್ಲಿ ಮಾಂಸಖಂಡಗಳು ತುಸು ಹರಿದಿದ್ದು, ಮೂಳೆಗಳಲ್ಲಿ ಸಣ್ಣ ಬಿರುಕುಗಳು ಮೂಡಿವೆ. ಆದರೆ ಜೊತೆಗೆ ಕೆಲವು ಭಾಗಗಳಲ್ಲಿ ಅಸಹನೀಯ ನೋವು ಸಹ ಇತ್ತು. ಆದರೆ ನಾನು ಮೊದಲಿನಿಂದಲೂ ಮಾರ್ಷಲ್ ಆರ್ಟ್ಸ್ ತರಬೇತಿ, ವ್ಯಾಯಾಮಗಳನ್ನು ಮಾಡುತ್ತಿದ್ದರಿಂದ ದೇಹ ತಡೆದುಕೊಂಡಿದೆ’ ಎಂದು ಪವನ್ ಕಲ್ಯಾಣ್ ಹೇಳಿದರು.

ವೈದ್ಯರ ಹಾಗಾಗಿ ಎಲ್ಲ ಕಾರ್ಯಕ್ರಮವನ್ನು ರದ್ದು ಮಾಡಿ, ಚಿಕಿತ್ಸೆಗೆ ಒಳಗಾದೆ. ಈಗ ಸುಮಾರು ಒಂದು ತಿಂಗಳ ಬಳಿಕ ನಾನು ಇಲ್ಲಿಗೆ ಬಂದಿದ್ದೇನೆ. ಜನರ ಪ್ರೀತಿಯಿಂದ ಸಮಸ್ಯೆ ಆದರೆ ನನಗೆ ನೋವೆನಿಸುವುದಿಲ್ಲ ಏಕೆಂದರೆ ಆ ನೋವನ್ನು ಹೋಗಲಾಡಿಸುವುದು ಸಹ ಜನರೇ’ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ. ಆರೋಗ್ಯ ಈಗ ಸಾಕಷ್ಟು ಸುಧಾರಿಸಿದ್ದು, ಇನ್ನು ಮುಂದೆ ರಾಜಕೀಯದಲ್ಲಿ ಸಕ್ರಿಯರಾಗಿರುವುದಾಗಿ ಪವನ್ ಕಲ್ಯಾಣ್ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಓಯ್ ಅಂಧೇರೇ… ತಿಲಕ್ ವರ್ಮಾಗೆ ಅರ್ಷದೀಪ್ ನಿಂದನೆ! ಭಾರೀ ಆಕ್ರೋಶ – Kannada News | Arshdeep Singh’s Colorist Slur Against Tilak Varma Sparks Outrage!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ವಿವಾದಗಳು ಮುಂದುವರೆದಿದೆ. ಈ ವಿವಾದಗಳ ಪಟ್ಟಿಗೆ ಹೊಸ ಸೇರ್ಪಡೆ ಅರ್ಷದೀಪ್ ಸಿಂಗ್ ಅವರ ನಿಂದನೆ. ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯಕ್ಕೂ ಮುನ್ನ ಅರ್ಷದೀಪ್ ಸಿಂಗ್, ತಿಲಕ್ ವರ್ಮಾ ಅವರನ್ನು ಮೈ ಬಣ್ಣವನ್ನು ಪ್ರಸ್ತಾಪಿಸಿ ಕರೆಯುತ್ತಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ವೀಡಿಯೊದಲ್ಲೇನಿದೆ?

ಅರ್ಷದೀಪ್ ಸಿಂಗ್ ತಮ್ಮದೇ ಆದ ಸ್ನ್ಯಾಪ್‌ಚಾಟ್ ಖಾತೆಯಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ತಿಲಕ್ ವರ್ಮಾ ಅವರನ್ನು ಉದ್ದೇಶಿಸಿ, “ಓಯ್ ಅಂಧೇರೇ (ಕತ್ತಲೆಯೇ), ಸನ್‌ಸ್ಕ್ರೀನ್ ಹಚ್ಚಿಕೊಂಡಿದ್ದೀಯಾ?” ಎಂದು ಕೇಳಿದ್ದಾರೆ.

ಅಷ್ಟೇ ಅಲ್ಲದೆ ಕ್ಯಾಮೆರಾವನ್ನು ಸಹ ಆಟಗಾರ ನಮನ್ ಧೀರ್ ಕಡೆಗೆ ತಿರುಗಿಸಿ, ಅವರೇ ಪಂಜಾಬ್‌ನ ನಿಜವಾದ ‘ನೂರ್’ (ಕಾಂತಿ) ಎಂದು ಹೊಗಳಿದ್ದಾರೆ.

ಇಲ್ಲಿ ಅರ್ಷದೀಪ್ ಸಿಂಗ್ ಪಂಜಾಬಿ ಭಾಷೆಯಲ್ಲಿ ಅಂಧೇರೇ ಅಂದಿರುವುದು ಕರಿಯ ಎಂಬಾರ್ಥದಲ್ಲಿ. ಅಂದರೆ ಮೈ ಬಣ್ಣವನ್ನು ಪ್ರಸ್ತಾಪಿಸಿ ಹೀಯಾಳಿಸಿರುವುದು ಸ್ಪಷ್ಟ.

ಅರ್ಷದೀಪ್ ಸಿಂಗ್ ಅವರ  ಈ ಮಾತಿನಿಂದ ತಿಲಕ್ ವರ್ಮಾ ಮುಜುಗರಕ್ಕೊಳಗಾದಂತೆ ಕಂಡರೂ, ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸಿದ್ದಾರೆ. “ನಾನು ಈಗಾಗಲೇ ಸನ್‌ಸ್ಕ್ರೀನ್ ಹಚ್ಚಿಕೊಂಡಿದ್ದೇನೆ, ನಾಳಿನ ಪಂದ್ಯದ ಕಡೆ ಗಮನ ಕೊಡೋಣ” ಎಂದು ಹೇಳಿ ಅಲ್ಲಿಂದ ತೆರಳಿದ್ದಾರೆ.

ನೆಟ್ಟಿಗರ ತೀವ್ರ ಆಕ್ರೋಶ:

ಟ್ವಿಟರ್ (X) ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಕ್ರಿಕೆಟ್ ಪ್ರೇಮಿಗಳು ಅರ್ಷದೀಪ್ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡ್ರೆಸ್ಸಿಂಗ್ ರೂಮ್ ತಮಾಷೆಯ ಹೆಸರಿನಲ್ಲಿ ಇಂತಹ ವರ್ಣಭೇದದ ಕಾಮೆಂಟ್‌ಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಇಂತಹ ಸೂಕ್ಷ್ಮ ವಿಷಯಗಳಲ್ಲಿ ಆಟಗಾರರಿಗೆ ಸಾಮಾಜಿಕ ಜಾಲತಾಣಗಳ ಬಳಕೆಯ ಬಗ್ಗೆ ತರಬೇತಿ ನೀಡಬೇಕು ಮತ್ತು ಬಿಸಿಸಿಐ ಅರ್ಷದೀಪ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

ಬ್ಯಾಟ್​ ಮೂಲಕ ಉತ್ತರ:

ಅರ್ಷದೀಪ್ ಸಿಂಗ್​ ಮಾತುಗಳ ಮೂಲಕ ವಿವಾದ ಸೃಷ್ಟಿಸಿದರೆ, ತಿಲಕ್ ವರ್ಮಾ ತಮ್ಮ ಬ್ಯಾಟ್ ಮೂಲಕವೇ ತಕ್ಕ ಉತ್ತರ ನೀಡಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 33 ಎಸೆತಗಳಲ್ಲಿ ಭರ್ಜರಿ 6 ಸಿಕ್ಸರ್‌ಗಳ ನೆರವಿನಿಂದ ಅಜೇಯ 75 ರನ್ ಚಚ್ಚಿದರು. ಈ ಮೂಲಕ ಪಂಜಾಬ್ ಕಿಂಗ್ಸ್ ನೀಡಿದ 201 ರನ್​ಗಳ ಗುರಿ ಬೆನ್ನತ್ತುವ ಮೂಲಕ ತಿಲಕ್ ವರ್ಮಾ ಮುಂಬೈ ಇಂಡಿಯನ್ಸ್ ತಂಡಕ್ಕೆ 6 ವಿಕೆಟ್​ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ.

Source link

ತೈಲ ಬೆಲೆ ಹೆಚ್ಚಳ ಭಾರತದಲ್ಲೇ ಕನಿಷ್ಠ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟನೆ – Kannada News | Global Fuel Crisis: Minister Pralhad Joshi Slams Congress, Says India’s Petrol Price Hike Lowest Globally

ತೈಲ ಬೆಲೆ ಹೆಚ್ಚಳ ಭಾರತದಲ್ಲೇ ಕನಿಷ್ಠ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟನೆImage Credit source: PTI

ನವದೆಹಲಿ, ಮೇ 16: ಜಾಗತಿಕ ಸಂಘರ್ಷ, ಬಿಕ್ಕಟ್ಟಿದ್ದರೂ ಭಾರತವು ತೈಲ ಬೆಲೆಯನ್ನು ಅತ್ಯಂತ ಕನಿಷ್ಠ ಮಟ್ಟದಲ್ಲಿ ಹೆಚ್ಚಳ ಮಾಡಿದೆ. ಬೇರೆ ಬೇರೆ ರಾಷ್ಟ್ರಗಳಲ್ಲಿ ಶೇ 20 ರಿಂದ 45ರಷ್ಟು ಏರಿಕೆ ಕಂಡಿದ್ದರೆ, ನಮ್ಮ ದೇಶದಲ್ಲಿ ಕೇವಲ ಶೇ 3.2ರಷ್ಟು ಮಾತ್ರವೇ ಹೆಚ್ಚಿಸಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಸ್ಪಷ್ಟಪಡಿಸಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ 3 ರೂ. ಏರಿಕೆ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿವೆ. ಈ ಹಿನ್ನೆಲೆಯಲ್ಲಿ ಪ್ರಲ್ಹಾದ್ ಜೋಶಿ ಅಂಕಿಅಂಶ ಸಮೇತ ಸ್ಪಷ್ಟನೆ ನೀಡಿದ್ದಾರೆ.

ಮುಖ್ಯಾಂಶಗಳು

  • ದೇಶದಲ್ಲಿ ಡೀಸೆಲ್, ಪೆಟ್ರೋಲ್ ಬೆಲೆ ಕೇವಲ ಶೇ 3.2 ರಷ್ಟು ಏರಿಕೆ.
  • ಜಾಗತಿಕವಾಗಿ ಶೇ 20-40ರಷ್ಟು ಹೆಚ್ಚಿದೆ ಎಂದ ಪ್ರಲ್ಹಾದ ಜೋಶಿ.
  • ಯಾವುದೇ ಬಿಕ್ಕಟ್ಟು, ಸಂಘರ್ಷ ಸ್ಥಿತಿ ಇಲ್ಲದಿದ್ರೂ ಕಾಂಗ್ರೆಸ್ ಸರ್ಕಾರ ಹೆಚ್ಚಿಸಿದ್ದೇಕೆ ಎಂದು ಪ್ರಶ್ನಿಸಿದ ಜೋಶಿ.

ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಇಂಧನ ಪೂರೈಕೆ ಅಡ್ಡಿ ಆತಂಕದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ನಾಗರಿಕರ ಹಿತದೃಷ್ಟಿಯಿಂದ ಕೆಲವೇ ದಿನಗಳ ಹಿಂದೆ ಅಬಕಾರಿ ಸುಂಕವನ್ನು 10 ರೂ. ಕಡಿಮೆ ಮಾಡಿತ್ತು. ಆದರೆ, ಇದೀಗ ಬ್ರೆಂಟ್ ಕಚ್ಚಾ ತೈಲ ಬೆಲೆ ಐತಿಹಾಸಿಕ ಗರಿಷ್ಠ ಮಟ್ಟಕ್ಕೆ ಏರುತ್ತಿದ್ದರಿಂದ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ. ಆದರೂ ವಿಶ್ವದಲ್ಲೇ ಅತ್ಯಂತ ಕನಿಷ್ಠ ಮಟ್ಟದಲ್ಲಿ ಅಂದರೆ 3 ರೂ. ಏರಿಕೆ ಮಾಡಿದೆ ಎಂದು ಜೋಶಿ ಹೇಳಿದ್ದಾರೆ.

ಭಾರತದಲ್ಲೇ ಅತ್ಯಂತ ಕನಿಷ್ಠ ಏರಿಕೆ: ಜೋಶಿ

ಜಾಗತಿಕವಾಗಿ ನೋಡಿದರೆ ತೈಲ ಬೆಲೆಯನ್ನು ಭಾರತವೇ ಆತ್ಯಂತ ಕಡಿಮೆ‌‌ ಮಟ್ಟದಲ್ಲಿ ಏರಿಕೆ ಮಾಡಿದೆ. ಯುಎಸ್ಎ +44.5%, ಶ್ರೀಲಂಕಾ +38.2%, ಯುಕೆ +19.2%, ಜರ್ಮನಿ +13.7% ರಷ್ಟು ಹೆಚ್ಚಳ ಮಾಡಿದ್ದರೆ, ತಮ್ಮ ಸರ್ಕಾರ ಭಾರತದಲ್ಲಿ‌ ಕೇವಲ +3.2% ಹೆಚ್ಚಳ ಮಾಡಿದೆ ಅಷ್ಟೇ ಎಂದು ಸಚಿವರು ಅಂಕಿ ಅಂಶ ಸಹಿತ ವಿವರಿಸಿ ಕಾಂಗ್ರೆಸ್ ಗೆ ಚಾಟಿ ಬೀಸಿದ್ದಾರೆ.

ಜಗತ್ತಿನೆಲ್ಲೆಡೆ ಎಲ್ಲಾ ರಾಷ್ಟ್ರಗಳು ಇಂಧನ ಬಿಕ್ಕಟ್ಟು ಎದುರಿಸುತ್ತಿವೆ. ಇಂಧನ ಪೂರೈಕೆ ಮತ್ತು ತೈಲ ಆಮದು ಮಾಡಿಕೊಳ್ಳುವ ದೇಶಗಳಂತೂ ತೀವ್ರ ಒತ್ತಡದಲ್ಲಿವೆ. ವಾಸ್ತವ ಗೊತ್ತಿದ್ದರೂ ಈ ವಿಷಯದಲ್ಲಿ ಕಾಂಗ್ರೆಸ್ ಬೂಟಾಟಿಕೆ ಮಾಡುತ್ತಿದೆ ಎಂದು ಸಚಿವರು ಕಿಡಿ ಕಾರಿದ್ದಾರೆ.

ಕಾಂಗ್ರೆಸ್ ಸರ್ಕಾರ ಹೆಚ್ಚಿಸಿದ್ದೇಕೆ: ಜೋಶಿ ಪ್ರಶ್ನೆ

ಜಾಗತಿಕ ತೈಲ ಪೂರೈಕೆಯಲ್ಲಿ ಯಾವುದೇ ಅಡಚಣೆ ಇಲ್ಲದಿದ್ದರೂ ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರ ಎರೆಡೆರಡು ಬಾರಿ ಇಂಧನ ತೆರಿಗೆ ಹೆಚ್ಚಿಸಿದ್ದೇಕೆ ಎಂದು ಜೋಶಿ ಪ್ರಶ್ನಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಸೆಸ್ ಹೆಚ್ಚಿಸಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ

ಕರ್ನಾಟಕ ಕಾಂಗ್ರೆಸ್ ಸರ್ಕಾರ 2024ರ ಜೂನ್ 15ಕ್ಕೆ ಪೆಟ್ರೋಲ್ ವ್ಯಾಟ್ ಅನ್ನು ಶೇ 25.92ರಿಂದ ಶೇ.29.84 ಮತ್ತು ಡೀಸೆಲ್ ಮೇಲೆ ಶೇ 14.34 ರಿಂದ ಶೇ 18.44ರಷ್ಟು ಹಾಗೂ 3 ರೂ. ಪ್ರತಿ ಲೀಟರ್ ಗೆ ಹೆಚ್ಚಿಸಿತ್ತು. 2025ರ ಏಪ್ರಿಲ್ 1ಕ್ಕೆ ಡೀಸೆಲ್ ವ್ಯಾಟ್ ಮತ್ತೆ ಶೇ.21.17ಕ್ಕೆ ಏರಿಕೆಯಾಗಿದ್ದು, ಡೀಸೆಲ್ ಬೆಲೆ ಸುಮಾರು 91 ರೂ. ಏರಿಸಿದ್ದು, ಕೇವಲ 10 ತಿಂಗಳಲ್ಲಿ 5 ರೂ. ಹೆಚ್ಚಿಸಿದೆ. ಇದೇಕೆ ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಬೂಟಾಟಿಕೆ: ಜೋಶಿ

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ 50ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನಜೀವನ ದುಸ್ಥರಗೊಳಿಸಿದೆ. ಆದರೆ, ಈಗ ಕೇಂದ್ರದತ್ತ ಬೆರಳು ತೋರಿ ಪಾಠ ಮಾಡಲು ಬರುತ್ತಿದೆ. ಇದು ಬೂಟಾಟಿಕೆ ರಾಜಕಾರಣವಲ್ಲದೆ ಮತ್ತೇನೂ ಅಲ್ಲವೆಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ದರ ಭರ್ಜರಿ ಏರಿಕೆ; ಜನಸಾಮಾನ್ಯರಿಗೆ ಬೆಲೆ ಏರಿಕೆಯ ಆಘಾತ 

ಪ್ರಸ್ತುತ ಸನ್ನಿವೇಶದಲ್ಲಿ ತೈಲ ಬೆಲೆ ಏರಿಕೆಯನ್ನು ದೇಶದ ಜನ ಅರ್ಥ ಮಾಡಿಕೊಳ್ಳಬಲ್ಲರು. ಅದರಂತೆ ರಾಜ್ಯ ಸರ್ಕಾರ ಸಹ ಕೇಂದ್ರದ ಅನಿವಾರ್ಯ ನಿಲುವುಗಳನ್ನು ಗೌರವಿಸಬೇಕು ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB 38 ವರ್ಷದ ಆಟಗಾರನನ್ನು ಆಯ್ಕೆ ಮಾಡಲು ಇದುವೇ ಕಾರಣ!

Source link

ಮೆಟ್ರೋ ಪ್ರಯಾಣಿಕರೇ ಗಮನಿಸಿ! ಭಾನುವಾರ ಹೊಸಹಳ್ಳಿ-ಕಬ್ಬನ್ ಪಾರ್ಕ್ ಮೆಟ್ರೋ ಸಂಚಾರ ಬೆಳಿಗ್ಗೆ 9 ಗಂಟೆಗೆ ಆರಂಭ – Kannada News | Namma Metro Purple Line: Hosahalli Cubbon Park Metro to Start at 9 AM on May 17, Sunday

ಭಾನುವಾರ ಹೊಸಹಳ್ಳಿ-ಕಬ್ಬನ್ ಪಾರ್ಕ್ ಮೆಟ್ರೋ ಸಂಚಾರ ಬೆಳಿಗ್ಗೆ 9 ಗಂಟೆಗೆ ಆರಂಭ

ಬೆಂಗಳೂರು, ಮೇ 16: ನಗರದ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಮೇ 17ರ ಭಾನುವಾರದಂದು ಅತ್ಯಗತ್ಯ ತಾಂತ್ರಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 7:00 ಗಂಟೆಯಿಂದ 9:00 ಗಂಟೆಯವರೆಗೆ ಒಟ್ಟು ಎರಡು ಗಂಟೆಗಳ ಅವಧಿಗೆ ರೈಲು ಸಂಚಾರದಲ್ಲಿ ಭಾಗಶಃ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪ್ರಕಟಣೆಯಲ್ಲಿ ತಿಳಿಸಿದೆ.

ಮುಖ್ಯಾಂಶಗಳು

  • ಭಾನುವಾರ ಬೆಳಿಗ್ಗೆ ಏಳರಿಂದ ಒಂಬತ್ತರವರೆಗೆ ಎರಡು ಗಂಟೆಗಳ ಕಾಲ ಮೆಟ್ರೋ ಸಂಚಾರ ಸ್ಥಗಿತ
  • ಹೊಸಹಳ್ಳಿ ಹಾಗೂ ಕಬ್ಬನ್ ಪಾರ್ಕ್ ನಿಲ್ದಾಣಗಳ ನಡುವೆ ತಾಂತ್ರಿಕ ನಿರ್ವಹಣಾ ಕಾಮಗಾರಿ
  • ನೇರಳೆ ಮಾರ್ಗದ ಇತರ ಭಾಗಗಳು ಹಾಗೂ ಹಸಿರು, ಹಳದಿ ಮಾರ್ಗಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ

ಯಾವ ನಿಲ್ದಾಣಗಳ ನಡುವೆ ಸಂಚಾರ ಸ್ಥಗಿತ?

ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮತ್ತು ಸೆಂಟ್ರಲ್ ಕಾಲೇಜಿನ ಸರ್ ಎಂ. ವಿಶ್ವೇಶ್ವರಯ್ಯ ಮೆಟ್ರೊ ನಿಲ್ದಾಣಗಳ ನಡುವೆ ತುರ್ತು ಮತ್ತು ಅಗತ್ಯ ಸುರಕ್ಷತಾ ಕಾಮಗಾರಿಗಳು ನಡೆಯಲಿವೆ. ಈ ತಾಂತ್ರಿಕ ಕಾರಣದಿಂದಾಗಿ, ಭಾನುವಾರ ಬೆಳಿಗ್ಗೆ 2 ಗಂಟೆಗಳ ಕಾಲ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ (ಹೊಸಹಳ್ಳಿ) ಮತ್ತು ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ. ಬೆಳಿಗ್ಗೆ 9:00 ಗಂಟೆಯ ನಂತರ ಈ ಮಾರ್ಗದಲ್ಲಿ ಎಂದಿನಂತೆ ರೈಲುಗಳು ಸಂಚರಿಸಲಿವೆ.
ಪರ್ಯಾಯ ಮಾರ್ಗಗಳಲ್ಲಿ ಎಂದಿನಂತೆ ಸಂಚಾರ ಲಭ್ಯ

ನೇರಳೆ ಮಾರ್ಗದ ಒಂದು ಭಾಗದಲ್ಲಿ ಸಂಚಾರ ಸ್ಥಗಿತಗೊಂಡಿದ್ದರೂ, ಪ್ರಯಾಣಿಕರ ಅನುಕೂಲಕ್ಕಾಗಿ ಇನ್ನುಳಿದ ಮಾರ್ಗಗಳಲ್ಲಿ ಬೆಳಿಗ್ಗೆ 7:00 ಗಂಟೆಯಿಂದಲೇ ರೈಲು ಸೇವೆಗಳು ಲಭ್ಯವಿರಲಿವೆ. ಚಲ್ಲಘಟ್ಟದಿಂದ ವಿಜಯನಗರದವರೆಗೆ ಮತ್ತು ಎಂ.ಜಿ. ರಸ್ತೆಯಿಂದ ವೈಟ್‌ಫೀಲ್ಡ್‌ (ಕಾಡುಗೋಡಿ) ನಿಲ್ದಾಣಗಳ ನಡುವೆ ರೈಲುಗಳು ಎಂದಿನ ವೇಳಾಪಟ್ಟಿಯಂತೆ ಚಲಿಸಲಿವೆ. ಮಾದಾವರ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳ (ಹಸಿರು ಮಾರ್ಗ) ನಡುವಿನ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ (ಹಳದಿ ಮಾರ್ಗ) ನಡುವಿನ ಮೆಟ್ರೋ ರೈಲುಗಳು ಸಹ ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಭಾನುವಾರ ಬೆಳಿಗ್ಗೆ ಮೆಜೆಸ್ಟಿಕ್ ಅಥವಾ ಕಬ್ಬನ್ ಪಾರ್ಕ್ ಕಡೆಗೆ ಪ್ರಯಾಣಿಸಲು ಯೋಜಿಸುವ ಸಾರ್ವಜನಿಕರು ಈ ಸಮಯದ ವ್ಯತ್ಯಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಲು ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಸದಾ ಹಣದ ಚಿಂತೆ ಮಾಡುತ್ತಿದ್ದರೆ ಜ್ಯೋತಿಷ್ಯದ ಪ್ರಕಾರ ಯಾವ ದೋಷ ಕಾಡುತ್ತೆ ಗೊತ್ತಾ? – Kannada News | The Perils of Excessive Money Obsession: A Spiritual and Astrological Perspective on Wealth and Well being

ಹಣ ಎಂದು ಚಿಂತಿಸುವುದುImage Credit source: Pinterest

ಬೆಳಗ್ಗೆ ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಕೇವಲ ಹಣ, ಹಣ, ಹಣ ಎಂದು ಚಿಂತಿಸುವುದು ವ್ಯಕ್ತಿಯ ಜೀವನದ ಮೇಲೆ ಯಾವ ಪರಿಣಾಮ ಬೀರುತ್ತದೆ, ಮತ್ತು ಜ್ಯೋತಿಷ್ಯದ ಪ್ರಕಾರ ಯಾವ ದೋಷಗಳು ಉಂಟಾಗುತ್ತವೆ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಹಿರಿಯರು ಹೇಳಿದಂತೆ “ಅತಿ ಸರ್ವತ್ರ ವರ್ಜಯೇತ್” – ಅಂದರೆ ಯಾವುದೇ ವಿಷಯದಲ್ಲಿ ಅತಿರೇಕ ಸಲ್ಲದು. ಪ್ರೀತಿ, ದುಃಖ, ವ್ಯಾಮೋಹ, ಆಸೆ ಅಥವಾ ಸಂಪತ್ತು ಯಾವುದೂ ಕೂಡ ಅತಿಯಾದರೆ ಅದು ಕಂಟಕವಾಗಿ ಪರಿಣಮಿಸುತ್ತದೆ. ನಾವು ಅನ್ಯ ಮಾರ್ಗಗಳಿಂದ, ಅಂದರೆ ವಾಮಮಾರ್ಗದಿಂದ ಹಣ ಸಂಪಾದಿಸಲು ಹೊರಟಾಗ, ಸಂಬಂಧಗಳನ್ನು ಕಡೆಗಣಿಸಿ, ನೈತಿಕ ಮೌಲ್ಯಗಳನ್ನು ಮರೆತು, ಕಾಲಿಗೆ ಸಿಕ್ಕವರನ್ನು ತುಳಿಯಲು ಸಿದ್ಧರಾಗುತ್ತೇವೆ. ಭಗವಂತನು ಎಲ್ಲವನ್ನೂ ಗಮನಿಸುತ್ತಿರುತ್ತಾನೆ; ಇಂತಹ ಸಂಪಾದನೆಯ ಲೆಕ್ಕವೊಂದು ನಮ್ಮ ಜೀವನದ ಪುಸ್ತಕವನ್ನೇ ಹಾಳುಮಾಡಬಹುದು, ಅಂದರೆ ನಮ್ಮ ಜೀವನವನ್ನೇ ನಾಶಮಾಡಬಹುದು.

ಧರ್ಮ, ಅರ್ಥ, ಕಾಮ, ಮೋಕ್ಷ ಇವು ಚತುರ್ವಿಧ ಪುರುಷಾರ್ಥಗಳು. ಈ ಪುರುಷಾರ್ಥಗಳಲ್ಲಿ, ಧರ್ಮದ ನಂತರವೇ ಅರ್ಥ (ಹಣ) ಬರುತ್ತದೆ. ಇದರ ಅರ್ಥವೇನೆಂದರೆ, ಹಣವನ್ನು ಧರ್ಮಸಮ್ಮತವಾಗಿ ಗಳಿಸಬೇಕು. ಧರ್ಮದಿಂದ ಹಣ ಗಳಿಸಿ, ಆ ಹಣದಿಂದ ಆಸೆಗಳನ್ನು ತೀರಿಸಿಕೊಂಡು, ಅಂತಿಮವಾಗಿ ಮೋಕ್ಷದೆಡೆಗೆ ಸಾಗಬೇಕು. ಆದರೆ, ಅನೇಕರು ಕೇವಲ ಹಣದ ಚಿಂತೆಯಲ್ಲಿ ಮುಳುಗಿ, ಸುಖ ಸಂತೋಷಗಳಿಗೆ ದೂರವಾಗಿ, ಪ್ರಕೃತಿಯ ಮೇಲಿನ ವ್ಯಾಮೋಹವನ್ನು ಕಳೆದುಕೊಳ್ಳುತ್ತಾರೆ. ಎಷ್ಟು ಹಣ ಗಳಿಸಿದರೂ ತೃಪ್ತಿ ಸಿಗುವುದಿಲ್ಲ; ಲಕ್ಷದಿಂದ ಕೋಟಿ, ಕೋಟಿಯಿಂದ ಸಾವಿರ ಕೋಟಿ ಎಂದು ಹಣದ ಹಿಂದೆ ಓಡುತ್ತಾ ಆಯುಷ್ಯ ಕಡಿಮೆ ಆಗುತ್ತಿರುವುದನ್ನು ಅರಿಯುವುದೇ ಇಲ್ಲ.

ಹಣದ ವ್ಯಾಮೋಹವು ಸಂಬಂಧಗಳನ್ನು ಹಾಳು ಮಾಡುತ್ತದೆ, ನಮ್ಮ ಮೌಲ್ಯಗಳನ್ನು ಮರೆಸುತ್ತದೆ. ಜ್ಯೋತಿಷ್ಯದ ಪ್ರಕಾರ, ಈ ಅತಿಯಾದ ಹಣದ ಚಿಂತೆ ದೈವಬಲವನ್ನು ದೂರ ಮಾಡುತ್ತದೆ. ಮುಪ್ಪಿನ ಕಾಲದಲ್ಲಿ ದೇಹದ ಅಂಗಾಂಗ ವೈಫಲ್ಯ, ಮೂಲವ್ಯಾಧಿ ಮುಂತಾದ ಅನಾರೋಗ್ಯಗಳಿಗೆ ಇದು ಕಾರಣವಾಗಬಹುದು ಎಂದು ಶಾಸ್ತ್ರಗಳು ಹೇಳುತ್ತವೆ. ಹಣದ ವ್ಯಾಮೋಹವು ದೇಹಕ್ಕೆ ಕಂಟಕವಾಗಬಹುದು.

ಇದನ್ನೂ ಓದಿ: ನಿಮ್ಮ ಜನ್ಮ ದಿನಾಂಕದಲ್ಲೇ ಅಡಗಿದೆ ಮದುವೆಯ ರಹಸ್ಯ; ನಿಮಗಾಗುವುದು ಪ್ರೇಮ ವಿವಾಹವೋ ಅಥವಾ ಅರೇಂಜ್ ಮ್ಯಾರೇಜ್?

ಹಣಕಾಸಿನ ಬಗ್ಗೆ ಚಿಂತಿಸಲು ನಿರ್ದಿಷ್ಟ ಸಮಯಗಳನ್ನು ಶಾಸ್ತ್ರಗಳು ಸೂಚಿಸುತ್ತವೆ. ಬ್ರಾಹ್ಮಿ ಮುಹೂರ್ತದಲ್ಲಿ (ಬೆಳಗ್ಗಿನ ಜಾವ) ಹಣದ ಚಿಂತೆ ಮಾಡಲೇಬಾರದು. ಅದೇ ರೀತಿ ಸಂಧ್ಯಾಕಾಲದಲ್ಲಿ (ಸೂರ್ಯಾಸ್ತದ ನಂತರ) ವ್ಯಾಪಾರ ಅಥವಾ ಉದ್ಯೋಗ ಮುಗಿಸಿ ಮನೆಗೆ ಬಂದಾಗಲೂ ಹಣದ ಚಿಂತೆ ಮಾಡಬಾರದು. ನಿಮ್ಮ ಸಾಲಗಳಿದ್ದರೆ ಅದರ ಬಗ್ಗೆ ಚಿಂತಿಸಬಹುದು, ಆದರೆ “ಹಣ ಬೇಕು, ಬೇಕು, ಬೇಕು” ಎಂಬ ಅತಿಯಾದ ಆಸೆಯ ಚಿಂತೆಯನ್ನು ಸಂಧ್ಯಾಕಾಲದಲ್ಲಿ ಅಥವಾ ಬ್ರಾಹ್ಮಿ ಮುಹೂರ್ತದಲ್ಲಿ ಮಾಡುವವರಿಗೆ ಕೊನೆಯ ಕಾಲದಲ್ಲಿ ಕಷ್ಟಕರ ಜೀವನ ಎದುರಾಗುವ ಸಾಧ್ಯತೆ ಇರುತ್ತದೆ. ಅಭಿಜಿನ್ ಮುಹೂರ್ತದಲ್ಲಿ (ಸುಮಾರು 11 ರಿಂದ 3 ಗಂಟೆಯವರೆಗೆ) ಹಣದ ಬಗ್ಗೆ ಚಿಂತಿಸುವುದು ಸೂಕ್ತ. ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಹಣಕಾಸಿನ ಪ್ರಯತ್ನಗಳನ್ನು ಮಾಡಬಹುದು.

ಶಾಸ್ತ್ರಗಳು ಎಂದಿಗೂ ಸುಳ್ಳಾಗುವುದಿಲ್ಲ. ಆದ್ದರಿಂದ, ಹಣವನ್ನು ಧರ್ಮದಿಂದ ಗಳಿಸಿ, ಅತಿಯಾದ ಆಸೆಯನ್ನು ತ್ಯಜಿಸಿ, ಸಮತೋಲಿತ ಮತ್ತು ಸಂತೋಷದಾಯಕ ಜೀವನವನ್ನು ನಡೆಸಲು ಪ್ರಯತ್ನಿಸಬೇಕು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಂತರ್ಜಾತಿ ವಿವಾಹಕ್ಕೆ ಪೋಷಕರ ವಿರೋಧ: ಹಾಸನ ಡಿಸಿ ಕಚೇರಿ ಆವರಣದ ಅಂಬೇಡ್ಕರ್ ಪ್ರತಿಮೆ ಎದುರು ವಿವಾಹವಾದ ಯುವ ಜೋಡಿ! – Kannada News | Intercaste Couple Marries in Front of Ambedkar Statue at Hassan DC Office Premises After Parents Oppose

ಹಾಸನ, ಮೇ 16: ಅಂತರ್ಜಾತಿ ವಿವಾಹಕ್ಕೆ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಪ್ರೇಮಿಗಳಿಬ್ಬರು ದಲಿತ ಸಂಘಟನೆಗಳ ಮುಖಂಡರ ನೆರವಿನೊಂದಿಗೆ ಹಾಸನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಮದುವೆಯಾಗಿದ್ದಾರೆ. ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದ ಮನೋಜ್ (22) ಹಾಗೂ ಮೂಕಲಿ ಗ್ರಾಮದ ಪ್ರೀತಿ (19) ಕಳೆದ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿ ಮತ್ತು ಅಂತರ್ಜಾತಿ ವಿವಾಹಕ್ಕೆ ಕುಟುಂಬಸ್ಥರು ಒಪ್ಪದ ಕಾರಣ, ಈ ಯುವ ಜೋಡಿ ಸಂಘಟನೆಯ ಮುಖಂಡರ ಸಮ್ಮುಖದಲ್ಲಿ ಸಂವಿಧಾನ ಶಿಲ್ಪಿಯ ಸಾಕ್ಷಿಯಾಗಿ ಹಾರ ಬದಲಿಸಿಕೊಂಡಿದ್ದಾರೆ. ತಮಗೆ ಯಾರೂ ತೊಂದರೆ ಕೊಡಬಾರದು ಎಂದು ಮನವಿ ಮಾಡಿಕೊಂಡಿರುವ ಈ ನವದಂಪತಿಯ ವಿವಾಹದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬರೋಬ್ಬರಿ 63 ರನ್: ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಳಪೆ ಬೌಲಿಂಗ್..! – Kannada News | Anshul Kamboj Creates Embarrassing IPL History

IPL 2026: ಐಪಿಎಲ್​ನಲ್ಲಿ ಹೀರೋ ಆಗಿದ್ದವನು ಕೇವಲ 2.4 ಓವರ್‌ಗಳಲ್ಲಿ ಝೀರೋ ಆಗಬಹುದು ಎಂಬುದಕ್ಕೆ ಲಕ್ನೋದ ಏಕನಾ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯವೇ ಸಾಕ್ಷಿ. ಪಂದ್ಯದ ಆರಂಭದವರೆಗೂ ಸಿಎಸ್‌ಕೆ ತಂಡದ ಪ್ರಮುಖ ಅಸ್ತ್ರವಾಗಿದ್ದ ಅನ್ಶುಲ್ ಕಂಬೋಜ್, ಪಂದ್ಯ ಮುಗಿಯುವ ಹೊತ್ತಿಗೆ ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಬೌಲರ್ ಆಗಿ ಹೊರಹೊಮ್ಮಿದ್ದರು.

ಈ ಪಂದ್ಯದಲ್ಲಿ ಅನ್ಶುಲ್ ಕಂಬೋಜ್ ಅವರ ಬೌಲಿಂಗ್ ಅನ್ನು ಲಕ್ನೋ ಸೂಪರ್ ಜೈಂಟ್ಸ್​ ಬ್ಯಾಟರ್‌ಗಳು ಧೂಳೀಪಟ ಮಾಡಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಕನಿಷ್ಠ 2 ಓವರ್‌ಗಳಿಗಿಂತ ಹೆಚ್ಚು ಬೌಲಿಂಗ್ ಮಾಡಿದ ಬೌಲರ್‌ಗಳ ಪೈಕಿ ಅತ್ಯಧಿಕ ಎಕಾನಮಿ ರೇಟ್ (Economy Rate) ನೀಡಿದ ಬೌಲರ್​ ಎಂಬ ಮುಜುಗರದ ದಾಖಲೆಯನ್ನು ತಮ್ಮದಾಗಿಸಿಕೊಂಡರು.

  • ಓವರ್‌ಗಳು: 2.4
  • ರನ್‌ಗಳು: 63
  • ವಿಕೆಟ್: 0
  • ಎಕಾನಮಿ ರೇಟ್: 23.62
  • ನೀಡಿದ ಸಿಕ್ಸರ್‌ಗಳು: 8

ಹಳೆಯ ದಾಖಲೆ ಬ್ರೇಕ್!

ಇದಕ್ಕೂ ಮುನ್ನ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕಳಪೆ ಎಕಾನಮಿ ರೇಟ್ ಹೊಂದಿದ್ದ ದಾಖಲೆ ವಾಷಿಂಗ್ಟನ್ ಸುಂದರ್​ ಹೆಸರಿನಲ್ಲಿತ್ತು. ಐಪಿಎಲ್ 2024 ರಲ್ಲಿ ಸುಂದರ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 2 ಓವರ್​ಗಳಲ್ಲಿ 46 ರನ್ ನೀಡಿದ್ದರು. ಅಂದರೆ 23ರ ಎಕಾನಮಿ ರೇಟ್​​ನಲ್ಲಿ ರನ್ ಬಿಟ್ಟು ಕೊಟ್ಟಿದ್ದರು. ಈ ಮೂಲಕ ಐಪಿಎಲ್​ನಲ್ಲಿ 2 ಓವರ್​ಗಳಲ್ಲಿ ಗರಿಷ್ಠ ಎಕಾನಮಿ ರೇಟ್​​ನಲ್ಲಿ ರನ್ ನೀಡಿದ ಹೀನಾಯ ದಾಖಲೆ ಬರೆದಿದ್ದರು.

ಇದೀಗ ಈ ಹೀನಾಯ ದಾಖಲೆಯನ್ನು ಅನ್ಶುಲ್ ಕಂಬೋಜ್ (23.62 ಎಕಾನಮಿ) ತಮ್ಮದಾಗಿಸಿಕೊಂಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟರ್​ಗಳು ಅನ್ಶುಲ್ ಎಸೆದ 16 ಎಸೆತಗಳಲ್ಲಿ ಬರೋಬ್ಬರಿ 63 ರನ್​ ಚಚ್ಚಿದ್ದಾರೆ.

ಇದನ್ನೂ ಓದಿ: RCB ಕೈಯಲ್ಲಿ CSK ಪ್ಲೇಆಫ್ ಭವಿಷ್ಯ: ಹೀಗಿದೆ ಲೆಕ್ಕಾಚಾರ

ಇನ್ನು ಈ 16 ಎಸೆತಗಳಲ್ಲಿ ಅನ್ಶುಲ್ ಕಂಬೋಜ್ ಬರೋಬ್ಬರಿ 8 ಸಿಕ್ಸರ್‌ಗಳನ್ನು ಹೊಡೆಸಿಕೊಂಡಿದ್ದಾರೆ. ಈ ಮೂಲಕ ಐಪಿಎಲ್ ಪಂದ್ಯವೊಂದರ ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ನೀಡಿದ ಜಂಟಿ ಬೌಲರ್ ಎಂಬ ಹೀನಾಯ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 2023 ರಲ್ಲಿ ಯಶ್ ದಯಾಳ್ 8 ಸಿಕ್ಸರ್ ಹೊಡೆಸಿಕೊಂಡಿದ್ದರು. ಇದೀಗ ಕಂಬೋಜ್ ಕೂಡ 8 ಸಿಕ್ಸರ್ ಚಚ್ಚಿಸಿಕೊಂಡಿದ್ದಾರೆ.

ಫಲಿತಾಂಶದ ಮೇಲೆ ಪರಿಣಾಮ:

ಅನ್ಶುಲ್ ಕಂಬೋಜ್ ಅವರ ಈ ಕಳಪೆ ಬೌಲಿಂಗ್ ಪ್ರದರ್ಶನದಿಂದಾಗಿ ಸಿಎಸ್​ಕೆ ತಂಡವು ಆರಂಭದಲ್ಲೇ ಪಂದ್ಯವನ್ನು ಕೈಚೆಲ್ಲಿಕೊಂಡಿದ್ದರು. ಏಕೆಂದರೆ ಸ್ಫೋಟಕ ಆರಂಭ ಪಡೆದ ಲಕ್ನೋ ಸೂಪರ್ ಜೈಂಟ್ಸ್ ಆ ಬಳಿಕ ಹಿಂತಿರುಗಿ ನೋಡಿರಲಿಲ್ಲ. ಸಿಎಸ್​ಕೆ ನೀಡಿ 188 ರನ್​ಗಳ ಗುರಿಯನ್ನು ಕೇವಲ 16.4 ಓವರ್​ಗಳಲ್ಲಿ ಚೇಸ್ ಮಾಡಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

Source link

ರೈತರ ಹೆಸರಲ್ಲಿ ಕೋಟಿ ಕೋಟಿ ಸಾಲದ ಗೋಲ್‌ಮಾಲ್; ಕಾಳಂಗಿ ಸಹಕಾರಿ ಬ್ಯಾಂಕ್‌ಗೆ ಷೇರುದಾರರ ಮುತ್ತಿಗೆ! – Kannada News | Sirsi Bank Fraud: Farmers Protest Against Kalangi Co operative Bank Over Crores of Loan Scam

ಕಾಳಂಗಿ ಸಹಕಾರಿ ಬ್ಯಾಂಕ್‌ಗೆ ಷೇರುದಾರರ ಮುತ್ತಿಗೆ!

ಶಿರಸಿ, ಮೇ 16: ಗ್ರಾಮೀಣ ರೈತರ ಆರ್ಥಿಕ ಪ್ರಗತಿಗೆ ಬೆಂಬಲವಾಗಿ ನಿಲ್ಲಬೇಕಾದ ಸಹಕಾರಿ ಬ್ಯಾಂಕ್‌ ಒಂದರಲ್ಲಿ, ರೈತರ ಹೆಸರನ್ನೇ ಬಳಸಿಕೊಂಡು ಕೋಟ್ಯಂತರ ರೂಪಾಯಿ ಹಣ ದುರುಪಯೋಗಪಡಿಸಿಕೊಂಡಿರುವ ಆಘಾತಕಾರಿ ಹಗರಣ ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ ತಾಲೂಕಿನ ದಾಸನಕೊಪ್ಪದಲ್ಲಿ ಬೆಳಕಿಗೆ ಬಂದಿದೆ. ದಾಸನಕೊಪ್ಪದ ಕಾಳಂಗಿ ಸಹಕಾರಿ ಬ್ಯಾಂಕ್‌ನಲ್ಲಿ ಈ ಬೃಹತ್ ಗೋಲ್‌ಮಾಲ್ ನಡೆದಿದ್ದು, ವಂಚನೆಗೆ ಒಳಗಾದ ರೈತರು ಮತ್ತು ಷೇರುದಾರರು ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.

ಮುಖ್ಯಾಂಶಗಳು

  • ಶಿರಸಿಯ ಕಾಳಂಗಿ ಸಹಕಾರಿ ಬ್ಯಾಂಕ್‌ನಲ್ಲಿ ಕೋಟ್ಯಂತರ ರೂಪಾಯಿ ಸಾಲದ ಬೃಹತ್ ಗೋಲ್‌ಮಾಲ್.
  • ಅರವತ್ತಕ್ಕೂ ಹೆಚ್ಚು ರೈತರ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ಹಣ ಲೂಟಿ.
  • ಹಣ ಕಳೆದುಕೊಂಡ ಷೇರುದಾರರಿಂದ ಬ್ಯಾಂಕ್ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ಹಾಗೂ ಮುತ್ತಿಗೆ.

ಕೃಷಿ ಸಾಲದ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿ

ಕಾಳಂಗಿ ಸಹಕಾರಿ ಬ್ಯಾಂಕ್‌ನಲ್ಲಿ ಎರಡು ಸಾವಿರಕ್ಕೂ ಹೆಚ್ಚು ರೈತರು ಸದಸ್ಯರಾಗಿದ್ದು, ತಮ್ಮ ಕೃಷಿ ಆದಾಯ ಹಾಗೂ ಠೇವಣಿಗಳನ್ನು ಇಲ್ಲಿ ಇಡುತ್ತಿದ್ದರು. ರೈತರು ಪ್ರತಿ ವರ್ಷ ಬೆಳೆ ಸಾಲ ಪಡೆದು, ಫಸಲು ಬಂದ ನಂತರ ಪ್ರಾಮಾಣಿಕವಾಗಿ ಮರುಪಾವತಿಸಿ ಕ್ಲಿಯರೆನ್ಸ್ ಸರ್ಟಿಫಿಕೇಟ್ (Clearance Certificate) ಪಡೆಯುತ್ತಿದ್ದರು. ಆದರೆ, ಇತ್ತೀಚೆಗೆ ಮತ್ತೆ ಸಾಲ ಪಡೆಯಲು ಹೋದ 60ಕ್ಕೂ ಹೆಚ್ಚು ರೈತರಿಗೆ ಬ್ಯಾಂಕ್ ಸಿಬ್ಬಂದಿ ನಿಮ್ಮ ಹಳೆಯ ಸಾಲ ಬಾಕಿ ಇದೆ ಎಂದು ಹೇಳಿ ಶಾಕ್ ನೀಡಿದ್ದಾರೆ. ಅಷ್ಟೇ ಅಲ್ಲದೆ, ಹಲವು ರೈತರಿಗೆ ಅವರು ಪಡೆದ ಸಾಲದ ದುಪ್ಪಟ್ಟು ಹಣ ಕಟ್ಟುವಂತೆ ನೋಟಿಸ್ ಜಾರಿಯಾಗಿದೆ.

ತನಿಖೆ ನಡೆಸಿದಾಗ, ರೈತರು ಸಾಲಕ್ಕಾಗಿ ನೀಡಿದ್ದ ದಾಖಲೆಗಳನ್ನು ಬಳಸಿ ಅವರ ಖಾತೆಯಿಂದ ಕೋಟ್ಯಂತರ ರೂಪಾಯಿಗಳನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಸ್ (RTGS) ಮಾಡಿ ಡ್ರಾ ಮಾಡಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದರೊಂದಿಗೆ ಬ್ಯಾಂಕ್‌ಗೆ ಸೇರಿದ 69 ಲಕ್ಷ ರೂಪಾಯಿ ಹಣವನ್ನು ಹಾನಗಲ್ ಮೂಲದ ವ್ಯಕ್ತಿಯೊಬ್ಬನಿಗೆ ಬಡ್ಡಿ ವ್ಯವಹಾರಕ್ಕಾಗಿ ವರ್ಗಾಯಿಸಲಾಗಿದೆ ಎಂದು ಷೇರುದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಠೇವಣಿ ಹಣವೂ ಮಾಯ; ಆಡಳಿತ ಮಂಡಳಿ ವಿರುದ್ಧ ಆಕ್ರೋಶ

ಇನ್ನೊಂದೆಡೆ, ಬ್ಯಾಂಕ್‌ನಲ್ಲಿ ನಡೆದ ಹಗರಣದಿಂದ ಆತಂಕಗೊಂಡ ಗ್ರಾಹಕರು ತಾವು ಇಟ್ಟಿದ್ದ ಲಕ್ಷಾಂತರ ರೂಪಾಯಿ ಠೇವಣಿ ಹಣವನ್ನು ಹಿಂಪಡೆಯಲು ಹೋದರೆ ಬ್ಯಾಂಕ್‌ನಲ್ಲಿ ಹಣವೇ ಇಲ್ಲ ಎನ್ನುವ ಬೇಜವಾಬ್ದಾರಿಯ ಉತ್ತರ ಸಿಗುತ್ತಿದೆ. ಬ್ಯಾಂಕ್ ಕಾರ್ಯದರ್ಶಿ ಸುನೀಲ್ ಬಸವರಾಜ್ ಗೌಡ ನಕಲಿ ದಾಖಲೆ ಸೃಷ್ಟಿಸಿ ಕನಿಷ್ಠ 25 ಲಕ್ಷಕ್ಕೂ ಹೆಚ್ಚು ಹಣ ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದರೆ ಆಡಳಿತ ಮಂಡಳಿಯ 12 ಜನ ಕಮಿಟಿ ಸದಸ್ಯರ ಅನುಮತಿ ಇಲ್ಲದೆ ಇಷ್ಟೊಂದು ದೊಡ್ಡ ಮಟ್ಟದ ಸಾಲ ಮಂಜೂರಾಗಲು ಸಾಧ್ಯವಿಲ್ಲ ಎನ್ನುವುದು ಸಂತ್ರಸ್ತರ ವಾದವಾಗಿದೆ.

ತನಿಖೆಯ ಭರವಸೆ ನೀಡಿದ ಅಧಿಕಾರಿಗಳು

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಸಹಕಾರಿ ಇಲಾಖೆಯ ಉಪ ನಿಬಂಧಕರಾದ ತೇಜಸ್ವಿನಿ, ಕಾರ್ಯದರ್ಶಿ ಹಣ ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಜಿಲ್ಲಾ ಸಹಕಾರಿ ಸಂಘಗಳ ಜಂಟಿ ನಿಬಂಧಕರು ತನಿಖೆ ನಡೆಸಿ ವರದಿ ಬಂದ ನಂತರ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಭರವಸೆ ನೀಡಿದ್ದಾರೆ.

ಸದ್ಯಕ್ಕೆ ವಂಚನೆ ಮಾಡಿದವರ ವಿರುದ್ಧ ಯಾವುದೇ ಕಠಿಣ ಕ್ರಮ ಜರುಗದ ಹಿನ್ನೆಲೆಯಲ್ಲಿ ರೈತರು ಬ್ಯಾಂಕ್ ಮುಂದೆ ಧರಣಿ ಮುಂದುವರಿಸಿದ್ದಾರೆ. ರೈತರು ಬೆವರು ಹರಿಸಿ ಕೂಡಿಟ್ಟ ಹಣ ಬ್ಯಾಂಕ್ ಅಧಿಕಾರಿಗಳ ದುರಾಶೆಯಿಂದ ಮಾಯವಾಗಿದ್ದು, ಅನ್ನದಾತ ಕಂಗೆಟ್ಟು ನ್ಯಾಯಕ್ಕಾಗಿ ಬೀದಿಗೆ ಬೀಳುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version