ಟೆಹ್ರಾನ್ಮ, ಮಾ.9: ಇಸ್ರೇಲ್, ಅಮೆರಿಕ ದಾಳಿಯಲ್ಲಿ ತಮ್ಮ ಪರಮೋಚ್ಚ ನಾಯಕ ಕಳೆದುಕೊಂಡಿರುವ ಇರಾನ್, ಇದೀಗ ಹೊಸ ನಾಯಕನನ್ನು ಆಯ್ಕೆ ಮಾಡಿದೆ. ಆದರೆ ಈ ಆಯ್ಕೆಗೆ ಅಮೆರಿಕ ಆಕ್ರೋಶ ವ್ಯಕ್ತಪಡಿಸಿದೆ. ಇರಾನ್ನ ‘ಅಸೆಂಬ್ಲಿ ಆಫ್ ಎಕ್ಸ್ಪರ್ಟ್ಸ್’ ಸೋಮವಾರ ಮಧ್ಯರಾತ್ರಿ ಮಹತ್ವದ ಘೋಷಣೆ ಮಾಡಿದ್ದು, ಅಯತೊಲ್ಲಾ ಸಯ್ಯದ್ ಮೊಜ್ತಬಾ ಹೊಸೇನಿ ಖಮೇನಿ (Mojtaba Khamenei) ಅವರನ್ನು ದೇಶದ ನೂತನ ಪರಮೋಚ್ಚ ನಾಯಕನನ್ನಾಗಿ ನೇಮಿಸಿದೆ. ಕಳೆದ ವಾರ ಅಮೆರಿಕ-ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಅಲಿ ಖಮೇನಿ ಹತರಾದ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ.
88 ಸದಸ್ಯರನ್ನೊಳಗೊಂಡ ಧರ್ಮಗುರುಗಳ ಮಂಡಳಿಯು ಮೊಜ್ತಬಾ ಅವರ ಪರವಾಗಿ ಬಹುಮತದ ತೀರ್ಪು ನೀಡಿದೆ. ಇವರು ಇರಾನ್ನ ಭದ್ರತಾ ಪಡೆಗಳು ಮತ್ತು ವ್ಯಾಪಾರ ವಲಯದಲ್ಲಿ ಅಪಾರ ಪ್ರಭಾವ ಹೊಂದಿದ್ದಾರೆ. ಮೊಜ್ತಬಾ ಅವರ ನೇಮಕಾತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ನಮ್ಮ ಅನುಮೋದನೆ ಇಲ್ಲದೆ ಅವರು ಹೆಚ್ಚು ಕಾಲ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ” ಎಂದು ಟ್ರಂಪ್ ಎಬಿಸಿ ನ್ಯೂಸ್ಗೆ ತಿಳಿಸಿದ್ದಾರೆ.
ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕದ ದಾಳಿ ಮುಂದುವರಿದಿದ್ದು, ಈವರೆಗೆ ಸುಮಾರು 1,332 ಇರಾನ್ ನಾಗರಿಕರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಇರಾನ್ನ ತೈಲ ಘಟಕಗಳ ಮೇಲೆ ಇಸ್ರೇಲ್ ಸರಣಿ ಬಾಂಬ್ ದಾಳಿ ನಡೆಸುತ್ತಿದೆ. ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಖಾಲಿಬಾಫ್ ಅವರು, ತಾವು ಶರಣಾಗುವುದಿಲ್ಲ ಮತ್ತು ಆಕ್ರಮಣಕಾರರಿಗೆ ತಕ್ಕ ಶಿಕ್ಷೆ ನೀಡಲಾಗುವುದು ಎಂದು ಗುಡುಗಿದ್ದಾರೆ.
ಇಂದಿನ ಈ ವೇಗದ ಜಗತ್ತಿನಲ್ಲಿ ಮದ್ಯಪಾನವು (Alcohol) ಅನೇಕ ಜನರ ಜೀವನಶೈಲಿಯ ಭಾಗವಾಗಿದ್ದು, ಮನಸ್ಸಿನ ಭಾರ, ಒತ್ತಡ ಕಡಿಮೆ ಮಾಡಲು, ಖುಷಿ, ಸಂತೋಷವನ್ನು ಹಂಚಿಕೊಳ್ಳಲು ಡ್ರಿಂಕ್ಸ್ ಮಾಡುತ್ತಾರೆ. ಹೀಗೆ ಮದ್ಯ ಸೇವಿಸುವಾಗ ಹೆಚ್ಚಿನವರು ಸೈಡ್ಸ್ಗೆ ಉಪ್ಪಿನಕಾಯಿ, ಕಬಾಬ್, ಕುರುಕುಲು ತಿಂಡ, ಖಾರ ತಿಂಡಿ ಸೇರಿದಂತೆ ಏನಾದ್ರೂ ತಿನಿಸು ತಿನ್ನುತ್ತಾರೆ. ಆದ್ರೆ ಮದ್ಯ ಸೇವನೆ ಮಾಡುವ ಸಂದರ್ಭದಲ್ಲಿ ಈ ಕೆಲವು ಆಹಾರಗಳನ್ನು ತಪ್ಪಿಯೂ ಸೇವನೆ ಮಾಡಬಾರದಂತೆ. ಏಕೆಂದರೆ ಇದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಿದ್ರೆ ಆಲ್ಕೋಹಾಲ್ ಜೊತೆ ಯಾವೆಲ್ಲಾ ಆಹಾರಗಳನ್ನು ಸೇವನೆ ಮಾಡಬಾರದು ಎಂಬುದನ್ನು ನೋಡೋಣ ಬನ್ನಿ.
ಆಲ್ಕೋಹಾಲ್ ಜೊತೆ ಈ ಆಹಾರಗಳನ್ನು ಸೇವನೆ ಮಾಡಬಾರದು:
ಬ್ರೆಡ್: ಬಿಯರ್ ಕುಡಿಯುವಂತಹ ಸಂದರ್ಭದಲ್ಲಿ ಸ್ಯಾಂಡ್ವಿಚ್, ಬರ್ಗರ್ನಂತಹ ಬ್ರೆಡ್ ಆಧಾರಿತ ಆಹಾರಗಳನ್ನು ಸೇವನೆ ಮಾಡಬಾರದಂತೆ. ಏಕೆಂದರೆ ಬಿಯರ್ ಮತ್ತು ಬ್ರೆಡ್ ಎರಡರಲ್ಲೂ ‘ಯೀಸ್ಟ್’ ಇರುತ್ತದೆ. ಈ ಎರಡೂ ಒಟ್ಟಿಗೆ ಹೊಟ್ಟೆಗೆ ಹೋದಾಗ, ಯೀಸ್ಟ್ ಪ್ರಮಾಣ ಹೆಚ್ಚಾಗುತ್ತದೆ, ಇದು ಹೊಟ್ಟೆ ಉಬ್ಬರ ಮತ್ತು ವಿಪರೀತ ಗ್ಯಾಸ್ಗೆ ಕಾರಣವಾಗುತ್ತದೆ. ಇದು ಜೀರ್ಣಾಂಗವ್ಯೂಹದ ಮೇಲೆ ಹೆಚ್ಚುವರಿ ಒತ್ತಡವನ್ನು ಬೀರುತ್ತದೆ. ಹಾಗಾಗಿ ನೀವು ಬಿಯರ್ ಕುಡಿಯುವ ಸಂದರ್ಭದಲ್ಲಿ ಬೇಯಿಸಿದ ತರಕಾರಿಗಳು, ತರಕಾರಿ ಸಲಾಡ್ ಸೇವನೆ ಮಾಡುವುದು ಉತ್ತಮ.
ಚಾಕೊಲೇಟ್: ಡಾರ್ಕ್ ಚಾಕೊಲೇಟ್ನಲ್ಲಿ ಕೆಫೀನ್ ಮತ್ತು ಹೊಟ್ಟೆಯ ಕಿರಿಕಿರಿಯನ್ನು ಉಂಟುಮಾಡುವ ಕೆಲವು ಪದಾರ್ಥಗಳಿವೆ. ಆಲ್ಕೋಹಾಲ್ನೊಂದಿಗೆ ಇದನ್ನು ಸೇವಿಸುವುದರಿಂದ ಗ್ಯಾಸ್, ಆಮ್ಲೀಯತೆ ಮತ್ತು ರಿಫ್ಲಕ್ಸ್ ಹೆಚ್ಚಾಗಬಹುದು. ಹೌದು ಡಾರ್ಕ್ ಚಾಕೊಲೇಟ್ನಲ್ಲಿ ಕೆಫೀನ್ ಮತ್ತು ಕೋಕೋ ಇದ್ದು, ಇದು ಆಮ್ಲೀಯತೆಯನ್ನು ಹೆಚ್ಚಿಸುತ್ತದೆ. ಅದರಲ್ಲೂ ಇದು ಆಲ್ಕೋಹಾಲ್ನೊಂದಿಗೆ ಬೆರೆತಾಗ ಇದು ‘ಆಸಿಡ್ ರಿಫ್ಲಕ್ಸ್’ ಸಮಸ್ಯೆಯನ್ನು ಉಂಟುಮಾಡಬಹುದು. ಇದರಿಂದ ಎದೆಯುರಿ ಉಂಟುಮಾಡಬಹುದು.
ಕಾಳುಗಳು: ಕಡ್ಲೆ, ಬಟಾಣಿ, ಕಿಡ್ನಿ ಬೀನ್ಸ್ನಂತಹ ಕಾಳುಗಳನ್ನು ಸಹ ಆಲ್ಕೋಹಾಲ್ ಜೊತೆ ಸೇವನೆ ಮಾಡಬಾರದು. ಏಕೆಂದರೆ ಈ ಆಹಾರಗಳು ಫೈಬರ್ನಲ್ಲಿ ಸಮೃದ್ಧವಾಗಿದ್ದು, ಇದು ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಇದರೊಂದಿಗೆ ಆಲ್ಕೋಹಾಲ್ ಸೇವಿಸಿದರೆ, ಆಲ್ಕೋಹಾಲ್ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಗಣನೀಯವಾಗಿ ನಿಧಾನಗೊಳಿಸುತ್ತದೆ. ಪರಿಣಾಮವಾಗಿ, ಆಹಾರವು ದೀರ್ಘಕಾಲದವರೆಗೆ ಹೊಟ್ಟೆಯಲ್ಲಿ ಉಳಿಯುತ್ತದೆ, ಇದು ಹೊಟ್ಟೆ ನೋವು ಮತ್ತು ಅಜೀರ್ಣಕ್ಕೆ ಕಾರಣವಾಗುತ್ತದೆ.
ಕರಿದ ತಿಂಡಿಗಳು: ಹೆಚ್ಚಿನವರು ಚಿಪ್ಸ್, ಫ್ರೆಂಚ್ ಫ್ರೈಸ್ ಅಥವಾ ಕಾರ್ನ್ಫ್ಲೇಕ್ಗಳಂತಹ ಡೀಪ್ ಫ್ರೈಡ್ ಆಹಾರಗಳನ್ನು ಆಲ್ಕೋಹಾಲ್ನೊಂದಿಗೆ ಸೇವನೆ ಮಾಡುತ್ತಾರೆ. ಆದರೆ ಈ ಆಹಾರಗಳಲ್ಲಿರುವ ಹೆಚ್ಚು ಉಪ್ಪು ದೇಹದಿಂದ ನೀರನ್ನು ಹೀರಿಕೊಳ್ಳುತ್ತದೆ, ಅಲ್ಲದೆ ಆಲ್ಕೋಹಾಲ್ ಸ್ವತಃ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ. ಇದರಿಂದಾಗಿ ದೇಹದಲ್ಲಿ ನೀರಿನ ತೀವ್ರ ಕೊರತೆ ಉಂಟಾಗುತ್ತದೆ. ಇದು ಮರುದಿನ ಬೆಳಿಗ್ಗೆ ಅತಿಯಾದ ತಲೆನೋವು ಮತ್ತು ಆಯಾಸಕ್ಕೆ ಕಾರಣವಾಗಬಹುದು.
ಕಿತ್ತಳೆಹಣ್ಣು: ಕಿತ್ತಳೆ ಹಣ್ಣು ಹುಳಿಯಾಗಿದ್ದು, ಹೆಚ್ಚಿನ ಪ್ರಮಾಣದ ಆಮ್ಲವನ್ನು ಹೊಂದಿರುತ್ತದೆ. ಇವುಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸಮಸ್ಯೆಗಳು ಮತ್ತು ಹೊಟ್ಟೆಯಲ್ಲಿ ಸುಡುವಿಕೆ ಕೂಡ ಉಂಟಾಗಬಹುದು. ಆದ್ದರಿಂದ, ನೀವು ಮದ್ಯಪಾನ ಮಾಡುವಾಗ ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳನ್ನು ಸೇವಿಸುವುದನ್ನು ತಪ್ಪಿಸಬೇಕು.
ಚೆನ್ನೈ, ಮಾರ್ಚ್ 9: ಮರಿಯಾನಾ ಎಲ್. ನೈಶುಲರ್ (Mariana L. Neisuler) ಅವರು ಕಳೆದ ವಾರ (ಮಾ. 2) ಚೆನ್ನೈನಲ್ಲಿರುವ ಯುನೈಟೆಡ್ ಸ್ಟೇಟ್ಸ್ ಕಾನ್ಸುಲೇಟ್ ಜನರಲ್ನ (Chennai US consulate) ಅಧಿಕಾರ ವಹಿಸಿಕೊಂಡಿದ್ದಾರೆ. ತಮಿಳುನಾಡು, ಕರ್ನಾಟಕ, ಕೇರಳ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ, ಲಕ್ಷದ್ವೀಪ, ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಅಮೆರಿಕದ ಹಿತಾಸಕ್ತಿಗಳನ್ನು ಗಮನಿಸುವ ಮತ್ತು ಭಾರತ ಹಾಗು ಅಮೆರಿಕದ ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅವರು ಕೆಲಸ ಮಾಡಲಿದ್ದಾರೆ.
ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಕಾನ್ಸಲ್ ಜನರಲ್ ನೈಶುಲರ್ ಅವರು, “ನಮ್ಮ ದ್ವಿಪಕ್ಷೀಯ ಸಂಬಂಧದ ನಿರ್ಣಾಯಕ ಘಟ್ಟದಲ್ಲಿ ದಕ್ಷಿಣ ಭಾರತದಲ್ಲಿ ಅಮೇರಿಕಾವನ್ನು ಪ್ರತಿನಿಧಿಸುತ್ತಿರುವುದು ನನಗೆ ಸಂದ ಗೌರವ ಎಂದೇ ಭಾವಿಸುತ್ತೇನೆ. ಅಧ್ಯಕ್ಷ ಟ್ರಂಪ್, ಕಾರ್ಯದರ್ಶಿ ರೂಬಿಯೋ ಮತ್ತು ರಾಯಭಾರಿ ಗೋರ್ ಅವರ ನೇತೃತ್ವದಲ್ಲಿ, ಅಮೆರಿಕನ್ನರು ಮತ್ತು ಭಾರತೀಯರಿಬ್ಬರಿಗೂ ನೈಜ ಫಲಿತಾಂಶಗಳನ್ನು ನೀಡುವ ಪಾಲುದಾರಿಕೆಯನ್ನು ಬಲಪಡಿಸುವತ್ತ ನಾವು ಗಮನ ಕೇಂದ್ರೀಕರಿಸಿದ್ದೇವೆ. ವ್ಯಾಪಾರ ಸಂಬಂಧಗಳನ್ನು ವಿಸ್ತರಿಸಲು, ಅಮೆರಿಕನ್ ಉದ್ಯಮಗಳನ್ನು ಬೆಂಬಲಿಸಲು ಮತ್ತು ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಜನರ ನಡುವಿನ ಬಾಂಧವ್ಯಗಳನ್ನು ವೃದ್ಧಿಸಲು ಎದುರು ನೋಡುತ್ತಿದ್ದೇನೆ,” ಎಂದು ಹೇಳಿದ್ದಾರೆ.
ಚೆನ್ನೈಗೆ ಬರುವ ಮೊದಲು, ಕಾನ್ಸಲ್ ಜನರಲ್ ನೈಶುಲರ್ ತಾಷ್ಕೆಂಟ್ನಲ್ಲಿರುವ ಯುಎಸ್ ರಾಯಭಾರ ಕಚೇರಿಯಲ್ಲಿ ರಾಜಕೀಯ ಮತ್ತು ಆರ್ಥಿಕ ವ್ಯವಹಾರಗಳ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದರು. ಅವರು ಈ ಹಿಂದೆ ಜೆರುಸಲೆಮ್ ಮತ್ತು ಆಮ್ಮನ್ ರಾಯಭಾರ ಕಚೇರಿಗಳಲ್ಲಿ ಉಪ ಆರ್ಥಿಕ ಕೌನ್ಸಿಲರ್ ಆಗಿ, ಹಾಗೆಯೇ ವಾಷಿಂಗ್ಟನ್ ಡಿ.ಸಿ., ದುಬೈ, ಸ್ಕೋಪೆ ಯೆ ಮತ್ತು ಮಾಸ್ಕೋಗಳಲ್ಲಿಯೂ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.
ಚಿಕ್ಕಬಳ್ಳಾಪುರ, (ಮಾರ್ಚ್ 09): ಸ್ನೇಹಿತೆಯ ಪ್ರಿಯಕರನ ಕಾಲ್ ರಿಸೀವ್ ಮಾಡಿದ್ದಕ್ಕೆ ಗಂಡ ಹಾಗೂ ಹೆಂಡತಿ (Husband And Wife) ಮಧ್ಯೆ ಗಲಾಟೆಯಾಗಿದ್ದು, ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಆರ್.ಚೊಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತಳನ್ನು ವರಲಕ್ಷ್ಮಿ(25) ಎಂದು ಗುರುತಿಸಲಾಗಿದೆ. ಸ್ನೇಹಿತೆಯ ಪ್ರಿಯಕರ ವರಲಕ್ಷ್ಮಿ ಫೋನ್ಗೆ ಕರೆ ಮಾಡಿದ್ದ. ಆದ್ರೆ, ಕರೆಯನ್ನು ವರಲಕ್ಷ್ಮಿ ಗಂಡ ಗಂಗರಾಜು ರಿಸಿವ್ ಮಾಡಿದ್ದ. ಬಳಿಕ ಗಂಗರಾಜು ಪ್ರೇಮಿಗಳ ಮದ್ಯೆ ಮದ್ಯಸ್ಥಿಕೆ ವಹಿಸಿಬೇಡ ಎಂದು ಹೆಂಡ್ತಿಗೆ ಬೈದು ಬುದ್ಧಿವಾದ ಹೇಳಿದ್ದಾನೆ. ಆದ್ರೆ, ಅದೇನಾಯ್ತೋ ಏನೋ ವರಲಕ್ಷ್ಮಿ ಶವವಾಗಿ ಪತ್ನಿಯಾಗಿದ್ದು, ಪತಿಯೇ ವರಲಕ್ಷ್ಮೀಯನ್ನು ನೇಣಿಗೆ ಹಾಕಿ ಕೊಂದಿದ್ದಾನೆಂದು ಮಹಿಳೆ ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತ ವರಲಕ್ಷ್ಮಿ ಸ್ನೇಹಿತೆ ಶ್ರಾವಣಿಯ ಪ್ರಿಯಕರ ಕರೆ ಮಾಡಿದ್ದ. ಆತನ ಕರೆಯನ್ನು ವರಲಕ್ಷ್ಮಿ ಗಂಡ ಗಂಗರಾಜ್ ರಿಸೀವ್ ಮಾಡಿದ್ದ. ಬಳಿಕ ಗಂಗರಾಜ್, ಪ್ರೇಮಿಗಳ ಮಧ್ಯೆ ಮಧ್ಯಸ್ಥಿಕೆ ವಹಿಸಿಬೇಡ ಎಂದು ವರಲಕ್ಷ್ಮೀಗೆ ಬೈದು ಬುದ್ಧಿವಾದ ಹೇಳಿದ್ದಾನೆ. ಈ ವಿಚಾರ ಗಲಾಟೆ ತಾರಕಕ್ಕೇರಿದೆ. ನಂತರ ವರಲಕ್ಷ್ಮೀ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗಂಗರಾಜನೇ ವರಲಕ್ಷ್ಮೀಯನ್ನು ನೇಣಿಗೆ ಹಾಕಿ ಸಾಯಿಸಿದ್ದಾನೆಂದು ಆರೋಪಿಸಿದ್ದಾರೆ.
ಬೆಂಗಳೂರು, ಮಾರ್ಚ್ 09: ಅಭಿವೃದ್ಧಿಯ ಹೆಸರಲ್ಲಿ ಪರಿಸರದ ನಾಶದಿಂದಾಗಿ ಪ್ರಾಕೃತಿಕ ಸಮತೋಲನ ಹಾಳಾಗಿ ಈಗಾಗಲೇ ಸಾಲು ಸಾಲು ಸಂಕಷ್ಟಗಳನ್ನು ಜನ ಅನುಭವಿಸುತ್ತಿದ್ದಾರೆ. ಪರಿಸರವನ್ನು ಉಳಿಸುವ ಸಲುವಾಗಿ ಅದೆಷ್ಟೋ ಸಂಘ-ಸಂಸ್ಥೆಗಳು ಗಿಡಗಳನ್ನು ನೆಡುವ ಜೊತೆಗೆ ಪರಿಣಾಮಕಾರಿ ಕೆಲಸಗಳನ್ನು ಮಾಡುತ್ತಿವೆ. ಪರಿಸರ ನಾಶದಿಂದ ಉಂಟಾಗುತ್ತಿರುವ ಅನಾಹುತಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈಹಾಕಿವೆ. ಆದರೆ ಕರ್ನಾಟಕದಲ್ಲಿ ಮಾತ್ರ ಅಂತಾರಾಷ್ಟ್ರೀಯ ಕನ್ವೆನ್ಷನ್ ಹಾಲ್ ಹೆಸರಲ್ಲಿ ಸಾವಿರಾರು ಮರಗಳ ಮಾರಾಣಹೋಮಕ್ಕೆ ಸರ್ಕಾರ ಸಜ್ಜಾಗಿದೆ ಎಂಬ ವಿಚಾರ ಹರಿದಾಡಿದ್ದು, ಈ ಬಗ್ಗೆ ಪರಿಸರ ಪ್ರಿಯರಿಂದ ಭಾರಿ ವಿರೋಧ ಕೇಳಿಬಂದಿದೆ.
ಮಲ್ಲೇಶ್ವರದಲ್ಲಿರುವ ಮೈಸೂರು ಲ್ಯಾಂಪ್ ವರ್ಕ್ಸ್ ಲಿಮಿಟೆಡ್ ಆವರಣದ 22 ಎಕರೆ ಜಾಗದಲ್ಲಿ ಕನ್ವೆನ್ಶನ್ ಸೆಂಟರ್ ಮತ್ತು ಎಕ್ಸಿಬಿಷನ್ ಸೆಂಟರ್ ನಿರ್ಮಿಸುವ ಬಗ್ಗೆ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದು, ಹಲವು ವರ್ಷಗಳಿಂದ ಈ ಕಾರ್ಖಾನೆಯ ಕೆಲಸ ಸ್ಥಗಿತಗೊಂಡಿದೆ. ಸದ್ಯ ಈ ಕಾರ್ಖಾನೆ ಪ್ಲಾಂಟೆಷನ್ ತುಂಬೆಲ್ಲ ಸಾವಿರಾರು ಮರಗಳಿದ್ದು, ಇವುಗಳನ್ನ ಕಡಿದು ಆ ಜಾಗದಲ್ಲಿ 10 ಸಾವಿರ ಜನರಿಗೆ ವ್ಯವಸ್ಥೆಯಾಗುವಂತೆ ಅಂತಾರಾಷ್ಟ್ರೀಯ ಕನ್ಷೆಷನ್ ಸೆಂಟರ್, ಎಕ್ಸಿಬಿಷನ್ ಸೆಂಟರ್, 5 ಸ್ಟಾರ್ ಹೊಟೇಲ್ಗಳು, ಮಲ್ಟಿಪ್ಲೆಕ್ಸ್ ಹಾಲ್ ಮತ್ತು 50 ವರ್ಷ ಬಾಳಿಕೆ ಬರುವ ಅಂಡರ್ ಗ್ರೌಂಡ್ ಪಾರ್ಕಿಂಗ್ ಮಾಡಲು ನಿರ್ಧಾರ ಮಾಡಲಾಗಿದೆ. ಬೇರೆ ದೇಶದ ಗಣ್ಯರು ಬಂದ್ರೆ ಉಳಿದುಕೊಳ್ಳಲು ವ್ಯವಸ್ಥೆಯಾಗುವ ರೀತಿ ಯೋಜನೆ ನಿರ್ಮಿಸಲು ಪ್ಲ್ಯಾನ್ ನಡೆದಿದೆ.
ಆದರೆ ಅಂತಾರಾಷ್ಟ್ರೀಯ ಕನ್ವೆನ್ಷನ್ ಹಾಲ್ ಹೆಸರಲ್ಲಿ ಮರಗಳ ಮಾರಣ ಹೋಮಕ್ಕೆ ಪರಿಸರವಾದಿ ಜೋಸೆಫ್ ಆಕ್ಷೇಪ ವ್ಯಕ್ತಪಡಿಸಿದ್ದು, ದಯವಿಟ್ಟು ಮರಗಳನ್ನು ಕಡಿಯೋದನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಈಗಾಗಲೇ ಶೇ. 93ರಷ್ಟು ಮರಗಳನ್ನು ಕಡಿದು ಹಾಕಿದ್ದೇವೆ. ನಗರದಲ್ಲಿ ಈಗಾಗಲೇ ಮರಗಳ ಸಂಖ್ಯೆ ಸಹ ಕಡಿಮೆಯಾಗಿದೆ. ಕೆರೆಗಳ ನಿರ್ವಹಣೆ ಇಲ್ಲದೆ ಬೆಂಗಳೂರು ಡೆಡ್ ಸಿಟಿ ಆಗಿದೆ. ಇದರ ಜೊತೆಗೆ ಮತ್ತೆ ಸರ್ಕಾರ ಮರಗಳಿಗೆ ಕೊಡಲಿ ಹಾಕಿ ಬಿಲ್ಡಿಂಗ್ ಕಟ್ಟಲು ಮುಂದಾಗ್ತಿದೆ. ಈಗಾಗಲೇ ದೆಹಲಿಯನ್ನು ಮೀರಿಸುವ ಮಟ್ಟದಲ್ಲಿ ಬೆಂಗಳೂರು ವಾತಾವರಣ ಬದಲಾವಣೆ ಆಗಿದೆ. ಉಸಿರಾಟದ ತೊಂದರೆಗಳು, ತಾಪಮಾನದಲ್ಲಿ ಬದಲಾವಣೆ ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಹೀಗಾಗಿ ಅಭಿವೃದ್ಧಿ ಹೆಸರಿನಲ್ಲಿ ಮರಗಳಿಗೆ ಕೊಡಲಿ ಹಾಕೋದು ತಪ್ಪು ಎಂದು ಅವರು ತಿಳಿಸಿದ್ದಾರೆ.
ಅಹಮದಾಬಾದ್ ಮಾ.9: ಕ್ರಿಕೆಟ್ ಎನ್ನುವುದು ಕೇವಲ ಆಟವಲ್ಲ, ಅದೊಂದು ಭಾವನೆ ಎಂಬುದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಭಾರತದ ವಿರುದ್ಧದ ಫೈನಲ್ ಪಂದ್ಯದಲ್ಲಿ ಸೋತು ವಿಶ್ವಕಪ್ ಕನಸು ಭಗ್ನಗೊಂಡಾಗ, ನ್ಯೂಜಿಲೆಂಡ್ ಆಟಗಾರರಾದ ಗ್ಲೆನ್ ಫಿಲಿಪ್ಸ್ ಮತ್ತು ಇಶ್ ಸೋಧಿ ಅವರ ಪತ್ನಿಯರು ಮೈದಾನಕ್ಕಿಳಿದು ನೀಡಿದ ಬೆಂಬಲ ಈಗ ಜಗತ್ತಿನಾದ್ಯಂತ ವೈರಲ್ ಆಗುತ್ತಿದೆ. ಪಂದ್ಯ ಮುಗಿದ ತಕ್ಷಣ ಸೋಲಿನ ನಿರಾಶೆಯಲ್ಲಿದ್ದ ಗ್ಲೆನ್ ಫಿಲಿಪ್ಸ್ ಮತ್ತು ಇಶ್ ಸೋಧಿ ಮೈದಾನದಲ್ಲೇ ಭಾವುಕರಾಗಿದ್ದರು. ಈ ವೇಳೆ ಅವರ ಪತ್ನಿಯರು ಮೈದಾನಕ್ಕೆ ಬಂದು ಪತಿಗಳಿಗೆ ಧೈರ್ಯ ತುಂಬಿದರು. ಗ್ಲೆನ್ ಫಿಲಿಪ್ಸ್ ಅವರು ತಮ್ಮ ಪತ್ನಿಯನ್ನು ಅಪ್ಪಿಕೊಂಡು ಮುತ್ತಿಕ್ಕುವ ಮೂಲಕ ತಮ್ಮ ನೋವನ್ನು ಹಂಚಿಕೊಂಡರೆ, ಇಶ್ ಸೋಧಿ ಅವರು ಕೂಡ ಪತ್ನಿಯ ಹಣೆಗೆ ಮುತ್ತಿಟ್ಟು ಸಾಂತ್ವನ ಪಡೆದರು. ಈ ಮಾನವೀಯ ಸಂಬಂಧಗಳ ಅದ್ಭುತ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.”ಸೋಲು-ಗೆಲುವು ಆಟದ ಭಾಗ, ಆದರೆ ಸಂಕಷ್ಟದ ಸಮಯದಲ್ಲಿ ಕುಟುಂಬ ನೀಡುವ ಬೆಂಬಲವೇ ಆಟಗಾರರ ನಿಜವಾದ ಶಕ್ತಿ” ಎಂದು ಕ್ರೀಡಾಭಿಮಾನಿಗಳು ಈ ದೃಶ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ನವದೆಹಲಿ, ಮಾರ್ಚ್ 09: ದೆಹಲಿಯಿಂದ ಮ್ಯಾಂಚೆಸ್ಟರ್ಗೆ ಹೊರಟಿದ್ದ ಇಂಡಿಗೋ(IndiGo) ವಿಮಾನ ಇಥಿಯೋಪಿಯಾ ಗಡಿಯಲ್ಲಿ ಯೂಟರ್ನ್ ಮಾಡಿ ದೆಹಲಿಗೆ ಮರಳಿರುವ ಘಟನೆ ನಡೆದಿದೆ. ಯು-ಟರ್ನ್ಗೆ ಕಾರಣದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಬೋಯಿಂಗ್ 787-9 ಡ್ರೀಮ್ಲೈನರ್ ಬಳಸಿ ಕಾರ್ಯನಿರ್ವಹಿಸುತ್ತಿದ್ದ 6E33 ವಿಮಾನವು ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಯುನೈಟೆಡ್ ಕಿಂಗ್ಡಂನ ಮ್ಯಾಂಚೆಸ್ಟರ್ಗೆ ಹೋಗುವ ಮಾರ್ಗದಲ್ಲಿತ್ತು.
ಫ್ಲೈಟ್ ಟ್ರ್ಯಾಕಿಂಗ್ ಡೇಟಾದ ಪ್ರಕಾರ, ವಿಮಾನವು ಇಥಿಯೋಪಿಯಾದ ಗಡಿಯ ಸಮೀಪ ವಾಯುಪ್ರದೇಶದ ಹತ್ತಿರ ತಲುಪಿ, ಹಾರಾಟದ ಮಧ್ಯದಲ್ಲಿ ಹಠಾತ್ತನೆ ತಿರುಗಿತು. ನಂತರ ವಿಮಾನವು ಭಾರತೀಯ ವಾಯುಪ್ರದೇಶವನ್ನು ಮತ್ತೆ ಪ್ರವೇಶಿಸಿತು.
ಹಠಾತ್ ಯು-ಟರ್ನ್ಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಏಕೆಂದರೆ ಕೆಲವು ವಿಮಾನಯಾನ ಅಧಿಕಾರಿಗಳು ಈ ಬೆಳವಣಿಗೆಯನ್ನು ವಿವರಿಸುವ ಅಧಿಕೃತ ಹೇಳಿಕೆಯನ್ನು ಇನ್ನೂ ನೀಡಿಲ್ಲ.
ಈ ತಿಂಗಳ ಆರಂಭದಲ್ಲಿ, ಇರಾನ್ ಮತ್ತು ಇತರ ಗಲ್ಫ್ ರಾಷ್ಟ್ರಗಳ ಮೇಲಿನ ವಾಯುಪ್ರದೇಶ ನಿರ್ಬಂಧಗಳಿಂದಾಗಿ ಫೆಬ್ರವರಿ 28 ರಿಂದ ಮಾರ್ಚ್ 3 ರವರೆಗೆ ಮಧ್ಯಪ್ರಾಚ್ಯ ಮತ್ತು ಆಯ್ದ ಅಂತಾರಾಷ್ಟ್ರೀಯ ತಾಣಗಳಿಗೆ 500 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ಇಂಡಿಗೋ ತಿಳಿಸಿದೆ.
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯದಲ್ಲಿ ವಾಯುಪ್ರದೇಶದ ನಿರ್ಬಂಧಗಳೊಂದಿಗೆ, ಫೆಬ್ರವರಿ 28 ರಿಂದ ವಿಮಾನ ಸೇವೆಗಳು ಹೆಚ್ಚಿನ ಪರಿಣಾಮ ಬೀರಿವೆ. ಫೆಬ್ರವರಿ 28 ಮತ್ತು ಮಾರ್ಚ್ 3 ರ ನಡುವೆ ಮಧ್ಯಪ್ರಾಚ್ಯ ಮತ್ತು ಆಯ್ದ ಅಂತಾರಾಷ್ಟ್ರೀಯ ತಾಣಗಳಿಗೆ 500 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಇಂಡಿಗೋ ಹೇಳಿದೆ.
ನಾಗರಿಕ ವಿಮಾನಯಾನ ಸಚಿವಾಲಯ ಮಂಗಳವಾರ ಭಾರತೀಯ ವಿಮಾನಯಾನ ಸಂಸ್ಥೆಗಳ 1,221 ವಿಮಾನಗಳು ಮತ್ತು ವಿದೇಶಿ ವಿಮಾನಯಾನ ಸಂಸ್ಥೆಗಳ 388 ವಿಮಾನಗಳನ್ನು ರದ್ದುಪಡಿಸಿದೆ ಎಂದು ತಿಳಿಸಿದೆ. ಸಚಿವಾಲಯದ ವೆಬ್ಸೈಟ್ ಪ್ರಕಾರ, ಮಾರ್ಚ್ 3 ರಂದು ಭಾರತದಿಂದ ನಿರ್ಗಮಿಸಿದ ಅಂತಾರಾಷ್ಟ್ರೀಯ ವಿಮಾನಗಳ ಸಂಖ್ಯೆ 356 ಆಗಿದ್ದರೆ, 338 ಅಂತಾರಾಷ್ಟ್ರೀಯ ವಿಮಾನಗಳು ದೇಶದ ವಿವಿಧ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇಳಿದಿವೆ.
ಬೆಂಗಳೂರು, ಮಾರ್ಚ್ 9: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕುರಿತು ನಾನಾ ರೀತಿಯ ಅಭಿಪ್ರಾಯಗಳು, ಭಯ, ಆತಂಕ, ಖುಷಿ ಎಲ್ಲಾ ವ್ಯಕ್ತವಾಗುತ್ತಿವೆ. ಆಂಥ್ರೋಪಿಕ್ನ ಕ್ಲಾಡ್ ಎಐ ಬಿಡುಗಡೆಯಾದ ಬಳಿಕ ಎಲ್ಲಾ ಸಾಫ್ಟ್ವೇರ್ ಕಂಪನಿಗಳು ಧೂಳೀಪಟವಾಗುತ್ತವೆ ಎನ್ನುವ ಸುದ್ದಿ ಇತ್ತೀಚೆಗೆ ಸಾಕಷ್ಟು ಕೇಳಿ ಬಂದಿತ್ತು. ಎಲ್ಲಾ ಹೊಸ ತಂತ್ರಜ್ಞಾನಗಳು ಬಂದರೆ ಇದೇ ರೀತಿ ಭಯ ಇರುತ್ತೆ. ಆದರೆ, ತಂತ್ರಜ್ಞಾನಗಳು ಮನುಷ್ಯನಿಗೆ ಬಲ ನೀಡುತ್ತವೆಯೇ ಹೊರತು ಅವನ ಸ್ಥಾನ ಕಿತ್ತುಕೊಳ್ಳುವುದಿಲ್ಲ ಎನ್ನುವ ಸಮಾಧಾನಕರ ಅಭಿಪ್ರಾಯಗಳೂ ಇವೆ. ಈ ಮಧ್ಯೆ ಟಾಮ್ ಬ್ಲಾಮ್ಫೀಲ್ಡ್ (Tom Blomfield) ಎಂಬುವವರು ಹೊಸ ಎಐ ಬಾಂಬ್ ಸಿಡಿಸಿದ್ದಾರೆ. ಅವರ ಪ್ರಕಾರ ಕ್ಲಾಡ್ ಎಐ ಅದೆಷ್ಟು ಪ್ರಚಂಡವಾಗಿದೆ ಎಂದರೆ ಇಡೀ ಕಂಪನಿಯ ಎಲ್ಲಾ ಕೆಲಸಗಳನ್ನೂ ಒಬ್ಬನೇ ವ್ಯಕ್ತಿ ಮಾಡಲು ಸಾಧ್ಯವಾಗುತ್ತದಂತೆ.
ವೈ ಕಾಂಬಿನೇಟರ್ ಎಂಬ ಸ್ಟಾರ್ಟಪ್ ಫಂಡಿಂಗ್ ಕಂಪನಿಯ ಪಾರ್ಟ್ನರ್ ಆಗಿರುವ ಟಾಮ್ ಬ್ಲಾಮ್ಫೀಲ್ಡ್ ಅವರು ಎಕ್ಸ್ನಲ್ಲಿ ಈ ಬಾಂಬ್ ಸಿಡಿಸಿ ಐಟಿ ಕ್ಷೇತ್ರದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದಾರೆ. ಅವರು ಮಾಡಿದ ಟ್ವೀಟ್ ಇಷ್ಟೇ… ‘ಕಳೆದ ಮಂಗಳವಾರ ಕ್ಲಾಡ್ ಕೋಡ್ ಕಲಿತ 24 ವರ್ಷದ ವ್ಯಕ್ತಿಯು ಇಡೀ ಅಕ್ಸೆಂಚರ್ ವರ್ಕ್ಫೋರ್ಸ್ ಅನ್ನೇ ಮೀರಿಸಲಿದ್ದಾನೆ’ ಎಂಬುದು. ಮಾರ್ಚ್ 2ರಂದು ಮಾಡಿದ ಟ್ವೀಟ್ ಅದು.
ಟಾಮ್ ಬ್ಲಾಮ್ಫೀಲ್ಡ್ ಮಾಡಿದ ಟ್ವೀಟ್
The entire Accenture workforce is about to be outperformed by a 24-year-old who learned Claude Code last Tuesday.
ಕ್ಲಾಡ್ ಎಐ ಅಭಿವೃದ್ಧಿಪಡಿಸಿದ ಆಂಥ್ರೋಪಿಕ್ ಕಂಪನಿಯ ಸಹ-ಸಂಸ್ಥಾಪಕ ಜ್ಯಾಕ್ ಕ್ಲಾರ್ಕ್ ಅವರು ಇತ್ತೀಚೆಗೆ ಟಿವಿ ಶೋವೊಂದರಲ್ಲಿ ಕ್ಲಾಡ್ನ ಉಪಯುಕ್ತತೆ ಬಗ್ಗೆ ಒಂದು ಮಾಹಿತಿ ಹೊರಗೆಡವಿದ್ದರು. ಕಂಪನಿಯ ಹೆಚ್ಚಿನ ಇಂಟರ್ನಲ್ ಕೋಡ್ ಅನ್ನು ಕ್ಲಾಡ್ ಬರೆಯಬಲ್ಲುದಂತೆ. ಈ ವರ್ಷಾಂತ್ಯದೊಳಗೆ ಸಂಪೂರ್ಣ ಎಲ್ಲಾ ಕೋಡ್ ಅನ್ನೂ ಈ ಎಐ ಸ್ವತಂತ್ರವಾಗಿ ನಿಭಾಯಿಸಬಲ್ಲುದಂತೆ.
ಟಾಮ್ ಬ್ಲಾಮ್ಫೀಲ್ಡ್ ಅವರ ಆ ಟ್ವೀಟ್ಗೆ ನಾನಾ ಪ್ರತಿಕ್ರಿಯೆಗಳು ಬಂದಿವೆ. ಅಕ್ಸೆಂಚರ್ ಕಂಪನಿ ಹೇಗೆ ಈ ಕ್ಲಾಡ್ ಎಸೆತವನ್ನು ಆಡಬಲ್ಲುದು ಎಂಬುದನ್ನು ಒಬ್ಬಾತ ವಿವರಿಸಿದ್ದಾರೆ. ಏಳು ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿರುವ ಅಕ್ಸೆಂಚರ್ ಕಂಪನಿ ಕಳೆದ ವರ್ಷ ಆಂಥ್ರೋಪಿಕ್ ಜೊತೆ ಒಪ್ಪಂದ ಮಾಡಿಕೊಂಡು, ತನ್ನ 30,000 ಎಂಜಿನಿಯರುಗಳಿಗೆ ಕ್ಲಾಡ್ನ ಟ್ರೈನಿಂಗ್ ಕೊಡಿಸಿತು. ಎಐ ವರ್ಕ್ಫ್ಲೋ ಅನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಅಕ್ಸೆಂಚರ್ ಇಟ್ಟ ಹೆಜ್ಜೆ ಇದು. ಇದೀಗ ಅಕ್ಸೆಂಚರ್ ಕಂಪನಿಯು ಡಿಸ್ಟ್ರಿಬ್ಯೂಶನ್ ಲೇಯರ್ ಆಗಿರುತ್ತದೆ. ಕ್ಲಾಡ್ ಕಲಿತ 24 ವರ್ಷದ ವ್ಯಕ್ತಿ ಡೆಮೋ ಕೊಡಬಹುದು. ಆದರೆ, ಅನುಷ್ಠಾನ, ಮ್ಯಾನೇಜ್ಮೆಂಟ್ ಬದಲಾವಣೆ, ಡಾಟಾ ಮೈಗ್ರೇಶನ್, ಮಲ್ಟಿ ಇಯರ್ ಕಾಂಟ್ರಾಕ್ಟ್ ಇತ್ಯಾದಿಯನ್ನು ಅಕ್ಸೆಂಚರ್ ಕಂಪನಿ ನಿಯಂತ್ರಿಸುತ್ತದೆ ಎಂದು ಅವರು ತಮ್ಮ ಟ್ವೀಟ್ನಲ್ಲಿ ವಿವರಿಸಿದ್ದಾರೆ.
ಟಿವಿಕೆ ಸಂಸ್ಥಾಪಕ, ನಟ ವಿಜಯ್ಗೆ ಸಿಬಿಐ ಸಮನ್ಸ್ ಜಾರಿ ಮಾಡಿದೆ. ಮಾರ್ಚ್ 10ರಂದು ವಿಚಾರಣೆಗೆ ಹಾಜರಾಗುವಂತೆ ವಿಜಯ್ಗೆ ಸೂಚಿಸಲಾಗಿದೆ. ವಿಜಯ್ ಅವರ ಟಿವಿಕೆ ಪಕ್ಷ ಕರೂರಿನಲ್ಲಿ ನಡೆಸಿದ ಚುನಾವಣೆ ರ್ಯಾಲಿ ವೇಳೆ 41 ಜನರ ಸಾವನ್ನಪ್ಪಿದ್ದರು. ಈ ಕಾಲ್ತುಳಿತ ದುರಂತಕ್ಕೆ ಟಿವಿಕೆ ಹೊಣೆ ಅಲ್ಲ ಎಂದು ನಟ ವಿಜಯ್ ಹೇಳಿದ್ದಾರೆ. ಅಲ್ಲದೆ, ಡಿಎಂಕೆ ಸರ್ಕಾರದ ವೈಫಲ್ಯದಿಂದ ದುರಂತ ಸಂಭವಿಸಿತ್ತು ಎಂದು ಆರೋಪಿಸಿದ್ದಾರೆ. 41 ಜನರ ಸಾವಿಗೆ ಯಾರು ಹೊಣೆ ಎಂದು ಸಿಬಿಐನಿಂದ ವಿಚಾರಣೆ ನಡೆಯುತ್ತಿದೆ. ಅವರು ಈಗಾಗಲೇ ಹಲವು ಬಾರಿ ವಿಚಾರಣೆಯನ್ನು ಎದುರಿಸಿದ್ದಾರೆ.
ಹೈದರಾಬಾದ್, ಮಾ.9: ಐಟಿ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಈಗ ನೆರೆರಾಜ್ಯದ ರಾಜಕೀಯ ಅಖಾಡದಲ್ಲೂ ಸದ್ದು ಮಾಡುತ್ತಿದೆ. ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಬೆಂಗಳೂರಿನ ಟ್ರಾಫಿಕ್ ಮತ್ತು ಮುಂಬೈ-ಚೆನ್ನೈನ ಮೂಲಸೌಕರ್ಯಗಳ ಕುರಿತು ವ್ಯಂಗ್ಯವಾಡಿದ್ದಾರೆ. ಬೆಂಗಳೂರು ನಗರ ಇಂದು ಕೇವಲ ಟ್ರಾಫಿಕ್ ಜಾಮ್ಗೆ ಹೆಸರುವಾಸಿಯಾಗಿದೆ. ಐಟಿ ಸಿಟಿ ಎಂದು ಖ್ಯಾತಿ ಪಡೆದಿದ್ದ ಬೆಂಗಳೂರಿನ ಇಂದಿನ ಸ್ಥಿತಿ ಏನಾಗಿದೆ ನೋಡಿ? ಅಲ್ಲಿನ ಜನ ಟ್ರಾಫಿಕ್ನಿಂದ ಹೈರಾಣಾಗಿದ್ದಾರೆ. ಆದರೆ ನಮ್ಮ ಹೈದರಾಬಾದ್ನಲ್ಲಿ ಅಂತಹ ಪರಿಸ್ಥಿತಿ ಇಲ್ಲ,” ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ. ಳೆ ಬಂದರೆ ಚೆನ್ನೈ ಮತ್ತು ಮುಂಬೈ ನಗರಗಳು ಹೇಗೆ ಸ್ಥಗಿತಗೊಳ್ಳುತ್ತವೆ ಎಂಬುದನ್ನು ಪ್ರಸ್ತಾಪಿಸಿದ ಅವರು, ಹೈದರಾಬಾದ್ ಅಂತಹ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿಲ್ಲ ಎಂದು ಪ್ರತಿಪಾದಿಸಿದರು.”ಹೈದರಾಬಾದ್ ಅನ್ನು ಮಾಲಿನ್ಯ ಮುಕ್ತ ನಗರವನ್ನಾಗಿ ಮಾಡುತ್ತೇವೆ. ನಮಗೆ ಬೆಂಗಳೂರು ಅಥವಾ ಮುಂಬೈ ನಗರಗಳು ಸ್ಪರ್ಧಿಯಲ್ಲ. ನಮ್ಮ ಸ್ಪರ್ಧೆ ಏನಿದ್ದರೂ ಸಿಂಗಾಪುರ ಮತ್ತು ಟೋಕಿಯೋದಂತಹ ಜಾಗತಿಕ ನಗರಗಳ ಜೊತೆಗೆ,” ಎಂದು ಅವರು ಘೋಷಿಸಿದ್ದಾರೆ.ಇದೀಗ ಈ ಹೇಳಿಕೆ ಕನ್ನಡಿಗರ ಮತ್ತು ಕರ್ನಾಟಕದ ರಾಜಕೀಯ ನಾಯಕರ ಆಕ್ರೋಶಕ್ಕೆ ಕಾರಣವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.