ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ (Dhurandhar) ಸಿನಿಮಾ ಇಷ್ಟು ದೊಡ್ಡ ಹಿಟ್ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆರಂಭದಲ್ಲಿ ಸಾಧಾರಣ ಓಪನಿಂಗ್ ಪಡೆದುಕೊಂಡ ಈ ಸಿನಿಮಾ, ನಂತರದಲ್ಲಿ ಭಾರಿ ಕಲೆಕ್ಷನ್ ಮಾಡಲು ಆರಂಭಿಸಿತು. ನೋಡನೋಡುತ್ತಿದ್ದಂತೆಯೇ ಭಾರತದ ಬಾಕ್ಸ್ ಆಫೀಸ್ನಲ್ಲಿ ‘ಧುರಂಧರ್’ ಸಿನಿಮಾದ ಕಲೆಕ್ಷನ್ (Dhurandhar Box Office Collection) 500 ಕೋಟಿ ರೂಪಾಯಿ ಮೀರಿದೆ. ಈಗಾಗಲೇ ಅನೇಕ ಸಿನಿಮಾಗಳ ದಾಖಲೆಗಳನ್ನು ಈ ಚಿತ್ರ ಮುರಿದಿದೆ. ರಣವೀರ್ ಸಿಂಗ್ (Ranveer Singh) ಅವರಿಗೆ ಈ ಸಿನಿಮಾದಿಂದ ಭರ್ಜರಿ ಗೆಲುವು ಸಿಕ್ಕಿದೆ.
‘ಧುರಂಧರ್’ ಸಿನಿಮಾ ಬಿಡುಗಡೆ ಆಗಿ 17 ದಿನಗಳ ಕಳೆದಿವೆ. ಹಾಗಿದ್ದರೂ ಕೂಡ ಈ ಚಿತ್ರದ ನಾಗಾಲೋಟ ನಿಂತಿಲ್ಲ. ಪ್ರತಿ ದಿನ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತ ಮುಂದುವರಿದಿದೆ. ವೀಕೆಂಡ್ ಮಾತ್ರವಲ್ಲದೇ ಇನ್ನುಳಿದ ದಿನಗಳಲ್ಲಿ ಕೂಡ ಈ ಸಿನಿಮಾ ಪ್ರತಿ ದಿನ 20 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುತ್ತಿರುವುದು ವಿಶೇಷ.
3ನೇ ಶನಿವಾರ, ಅಂದರೆ 16ನೇ ದಿನ ‘ಧುರಂಧರ್’ ಸಿನಿಮಾ ಅಂದಾಜು 33.5 ಕೋಟಿ ರೂಪಾಯಿ ಗಳಿಸಿದೆ. sacnilk ನೀಡಿರುವ ಆರಂಭಿಕ ವರದಿಗಳ ಪ್ರಕಾರ, 16 ದಿನಕ್ಕೆ ಭಾರತದಲ್ಲಿ ಈ ಸಿನಿಮಾದ ಒಟ್ಟು ಕಲೆಕ್ಷನ್ 516 ಕೋಟಿ ರೂಪಾಯಿ ಮೀರಿದೆ. ಭಾನುವಾರ (ಡಿಸೆಂಬರ್ 21) ಕೂಡ ಈ ಸಿನಿಮಾಗೆ ಉತ್ತಮವಾಗಿ ಕಲೆಕ್ಷನ್ ಆಗುವ ಸಾಧ್ಯತೆ ದಟ್ಟವಾಗಿದೆ.
ಇಂದಿಗೂ ಹಲವು ಕಡೆಗಳಲ್ಲಿ ‘ಧುರಂಧರ್’ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಇದರಿಂದಾಗಿ ಇನ್ನೂ ಹಲವು ದಿನಗಳ ಕಾಲ ಈ ಚಿತ್ರಕ್ಕೆ ಬಹುಕೋಟಿ ರೂಪಾಯಿ ಕಲೆಕ್ಷನ್ ಆಗಲಿದೆ. ಆದ್ದರಿಂದ ಈ ಚಿತ್ರ ಅನಾಯಾಸವಾಗಿ 600 ಕೋಟಿ ರೂಪಾಯಿ ಗಳಿಕೆ ಮಾಡಲಿದೆ. ಹೊಸ ಸಿನಿಮಾಗಳು ಬಿಡುಗಡೆ ಆದರೂ ಕೂಡ ‘ಧುರಂದರ್’ ಅಬ್ಬರವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ.
‘ಗದರ್ 2’ (525 ಕೋಟಿ), ಪಠಾಣ್ (543 ಕೋಟಿ), ‘ಅನಿಮಲ್’ (553 ಕೋಟಿ) ಸಿನಿಮಾಗಳನ್ನು ಶೀಘ್ರದಲ್ಲೇ ‘ಧುರಂಧರ್’ ಚಿತ್ರ ಹಿಂದಿಕ್ಕಲಿದೆ. ಭಾರತದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾಗಳಾದ ‘ಸ್ತ್ರೀ’ (598 ಕೋಟಿ), ‘ಛಾವ’ (601 ಕೋಟಿ) ಹಾಗೂ ‘ಜವಾನ್’ (640 ಕೋಟಿ) ದಾಖಲೆಯನ್ನು ಮುರಿಯುವ ಟಾರ್ಗೆಟ್ ಈಗ ‘ಧುರಂಧರ್’ ಸಿನಿಮಾದ ಮುಂದಿದೆ.
ಬೆಂಗಳೂರು, ಡಿಸೆಂಬರ್ 21: ಮನೆ, ದೇವಾಲಯ ಅಥವಾ ಯಾವುದೇ ಕಟ್ಟಡ ನಿರ್ಮಾಣವನ್ನು ಪ್ರಾರಂಭಿಸುವ ಮೊದಲು ಶಂಕುಸ್ಥಾಪನೆ ಮಾಡುವುದು ಹಿಂದೂ ಸಂಪ್ರದಾಯದ ಒಂದು ಪ್ರಮುಖ ಭಾಗವಾಗಿದೆ. ಇದು ಕೇವಲ ಒಂದು ಪೂಜೆಗಿಂತ ಹೆಚ್ಚಾಗಿ, ಭೂಮಿಯನ್ನು ಶುದ್ಧೀಕರಿಸುವ ಮತ್ತು ನಿರ್ಮಾಣಕ್ಕೆ ಸದ್ಭಾವನೆಯನ್ನು ಆಹ್ವಾನಿಸುವ ಒಂದು ವಿಧಿಯಾಗಿದೆ. ಶಾಸ್ತ್ರೋಕ್ತವಾಗಿ ನಡೆಸುವ ಶಂಕುಸ್ಥಾಪನೆಯು ಆ ಜಾಗಕ್ಕೆ ನೂರು ವರ್ಷಗಳ ಕಾಲ ಬಲವನ್ನು ನೀಡುತ್ತದೆ ಎಂದು ನಂಬಲಾಗಿದೆ, ಇದರಿಂದಾಗಿ ಆಸ್ತಿಯು ವಂಶಪಾರಂಪರ್ಯವಾಗಿ ಸುಭದ್ರವಾಗಿ ಉಳಿಯುತ್ತದೆ.
ಶಂಕುಸ್ಥಾಪನೆಯ ಮುಖ್ಯ ಉದ್ದೇಶ ಭೂಮಿಯಲ್ಲಿರಬಹುದಾದ ಮೂರು ದೋಷಗಳನ್ನು ನಿವಾರಿಸುವುದು: ಸ್ಪರ್ಶ ದೋಷ, ದೃಷ್ಟಿ ದೋಷ ಮತ್ತು ಶಲ್ಯಾ ದೋಷ (ಮೃತ್ಯು ದೋಷ). ಈ ದೋಷಗಳು ಭೂಮಿಯ ಹಿಂದಿನ ಉಪಯೋಗ ಅಥವಾ ಅಲ್ಲಿ ನೆಲೆಸಿರಬಹುದಾದ ಋಣಾತ್ಮಕ ಶಕ್ತಿಗಳಿಂದ ಉಂಟಾಗಬಹುದು. ಶಂಕುಸ್ಥಾಪನೆಯ ಸಮಯದಲ್ಲಿ, ಈಶಾನ್ಯ ದಿಕ್ಕಿನಲ್ಲಿ ಬಿಲ್ವ, ಅತ್ತಿ ಅಥವಾ ತುಳಸಿ ಗಿಡವನ್ನು ನೆಡುವುದು ಮತ್ತು ನವಗ್ರಹ ದೋಷ ನಿವಾರಣೆಗಾಗಿ ವಾಸ್ತು ಪೂಜೆ ಮಾಡುವುದು ವಾಡಿಕೆ. ಗಂಗಾಜಲ ಮತ್ತು ಪಂಚಗವ್ಯಗಳನ್ನು ಭೂಮಿಯ ಮೇಲೆ ಸಿಂಪಡಿಸುವುದರಿಂದ ಭೂಶುದ್ಧಿ ಆಗುತ್ತದೆ. ಈ ವಿಧಿಯು ನಿರ್ಮಾಣ ಕಾರ್ಯ ಸುಗಮವಾಗಿ ನಡೆಯಲು ಮತ್ತು ನಿವಾಸಿಗಳಿಗೆ ಸಮೃದ್ಧಿ ತರಲು ಸಹಾಯಕವಾಗಿದೆ ಎಂದು ಗುರೂಜಿ ಹೇಳಿದ್ದಾರೆ.
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2025ರ ಡಿಸೆಂಬರ್ 21 ಭಾನುವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯಮಾಸ, ಹೇಮಂತ ಋತು, ಶುಕ್ಲಪಕ್ಷ, ಪಾಡ್ಯ, ಪೂರ್ವಾಷಾಢ ನಕ್ಷತ್ರ, ವೃದ್ಧಿಯೋಗ ಮತ್ತು ಭವಕರಣ ಇರತಕ್ಕಂತ ಈ ದಿನದ ರಾಹುಕಾಲ 4:33 ರಿಂದ 5:59 ರ ವರೆಗೆ ಇರಲಿದೆ. ಶುಭಕಾಲ, ಸಂಕಲ್ಪ ಕಾಲವು ಮಧ್ಯಾಹ್ನ 1:42 ರಿಂದ 3:07 ರವರೆಗೆ ಇರಲಿದೆ.
ಇಂದು ರವಿ ಮತ್ತು ಚಂದ್ರ ಇಬ್ಬರೂ ಧನುಸ್ಸು ರಾಶಿಯಲ್ಲಿ ಸಂಚರಿಸುತ್ತಿದ್ದು, ಜಗನ್ನಾಥ ತೀರ್ಥರ ಆರಾಧನೆ ಮತ್ತು ಚಂದ್ರ ದರ್ಶನಕ್ಕೆ ಸೂಕ್ತ ದಿನವಾಗಿದೆ. ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸುವವರಿಗೆ ಶುಭ ಹಾರೈಸಿರುವ ಗುರೂಜಿ, ಇಂದು ಐದು ನಿಮಿಷಗಳ ಕಾಲ ಜಪ ಮಾಡುವುದರಿಂದ ವರ್ಷಪೂರ್ತಿ ಶಕ್ತಿ ಮತ್ತು ಸಕಾರಾತ್ಮಕ ಯೋಗ ಇರುತ್ತದೆ ಎಂದು ತಿಳಿಸಿದ್ದಾರೆ. ಮೇಷದಿಂದ ತುಲಾವರೆಗಿನ ರಾಶಿಗಳಿಗೆ ಈ ದಿನದ ಪ್ರಮುಖ ಪ್ರಭಾವಗಳನ್ನು ವಿವರಿಸಿದ್ದಾರೆ.
ನಿಮ್ಮ ಸಮಯಪ್ರಜ್ಞೆ ನಿರ್ಧಾರಗಳಿಗೆ ಇತರರು ಅಚ್ಚರಿ ಪಡುತ್ತಾರೆ. ಯಾಕೆ ಬೇಕು- ಯಾಕೆ ಬೇಡ ಎಂಬ ಬಗ್ಗೆ ನಿಮಗಿರುವಂಥ ಸ್ಪಷ್ಟತೆ ಕಾರಣಕ್ಕೆ ಕಷ್ಟ ಎನಿಸಿದಂಥ ಕೆಲಸ -ಕಾರ್ಯಗಳು ಅಚ್ಚುಕಟ್ಟಾಗಿ ಆಗಲಿವೆ. ಈಚೆಗಷ್ಟೇ ನಿವೃತ್ತರಾಗಿದ್ದೀರಿ ಅಂತಾದಲ್ಲಿ ನಿಮಗೆ ಬರಬೇಕಾದ ಫೈನಲ್ ಸೆಟ್ಲ್ ಮೆಂಟ್ ಹಣಕಾಸಿನ ವ್ಯವಹಾರಗಳಿಗೆ ಓಡಾಟ ಇರುತ್ತದೆ. ಹೌಸಿಂಗ್ ಸೊಸೈಟಿಯಲ್ಲಿ ಸೈಟಿಗಾಗಿ ಈಗಾಗಲೇ ಹಣ ಕಟ್ಟಿಯಾಗಿದೆ, ವಿತರಣೆ ಮಾತ್ರ ಬಾಕಿ ಇದೆ ಎಂದಾದಲ್ಲಿ ಆ ಬಗ್ಗೆ ಮಾಹಿತಿ ದೊರೆಯಲಿದೆ. ನೀರು ಮಾರಾಟದ ಮೂಲಕ ಆದಾಯವನ್ನು ಪಡೆಯುತ್ತಾ ಇರುವವರಿಗೆ ದೀರ್ಘಾವಧಿಗೆ- ದೊಡ್ಡ ಪ್ರಮಾಣದ ಆರ್ಡರ್ ದೊರೆಯುವಂಥ ಸಾಧ್ಯತೆ ಇದೆ. ಕನಿಷ್ಠ ಪ್ರಮಾಣದ ಹೂಡಿಕೆ ಜತೆಗೆ ಆರಂಭಿಸಿದ ವ್ಯವಹಾರವೊಂದು ಹೆಚ್ಚಿನ ಪ್ರಮಾಣದ ಲಾಭ ತಂದುಕೊಡಲಿದೆ. ನಿಮ್ಮ ಬಗ್ಗೆ ಹರಿದಾಡುವಂಥ ಗಾಸಿಪ್ ಗಳ ಕುರಿತು ತಲೆ ಕೆಡಿಸಿಕೊಳ್ಳಬೇಡಿ.
ನಿಂತ ನಿಲವಿನಲ್ಲೇ ನಿಮ್ಮ ಅಭಿಪ್ರಾಯ ತಿಳಿಸಿಬಿಡಬೇಕು ಎಂದು ಪಟ್ಟು ಹಿಡಿಯುವಂಥವರ ಜತೆಗಿನ ವ್ಯವಹಾರ ಮುಂದುವರಿಸಲಿಕ್ಕೆ ಹೋಗಬೇಡಿ. ಬ್ಯಾಂಕ್ ಗೆ ಕಟ್ಟಲೇಬೇಕಾದ ಹಣವನ್ನು ಹೊಂದಿಸಲು ಹೆಚ್ಚು ಶ್ರಮ ಹಾಕಲಿದ್ದೀರಿ. ಇನ್ನು ನಿಮ್ಮಲ್ಲಿ ಕೆಲವರು ಉಳಿತಾಯ ಅಥವಾ ಹೂಡಿಕೆ ಹಣವನ್ನು ಹಿಂತೆಗೆದುಕೊಂಡು, ಸಾಲವನ್ನು ಚುಕ್ತಾ ಮಾಡುವುದಕ್ಕೆ ತೀರ್ಮಾನ ಮಾಡುತ್ತೀರಿ. ಭರತನಾಟ್ಯ ಕಲಾವಿದರಿಗೆ ಪ್ರತಿಷ್ಠಿತ ವೇದಿಕೆಯಲ್ಲಿ ಪ್ರದರ್ಶನ ನೀಡುವುದಕ್ಕೆ ಅವಕಾಶ ದೊರೆಯಲಿದೆ. ಇಷ್ಟು ಕಾಲ ಯಾವುದು ನಿಮಗೆ ಹವ್ಯಾಸ ಆಗಿತ್ತೋ ಅದನ್ನೇ ಆದಾಯ ಮೂಲ ಆಗುವಂಥ ವೃತ್ತಿಯಾಗಿ ಮಾಡಿಕೊಳ್ಳುವ ಬಗ್ಗೆ ಆಲೋಚನೆ ಬರಲಿದೆ. ಪಶು ಸಾಕಣೆ ಮಾಡುತ್ತಾ ಇರುವವರಿಗೆ ವ್ಯವಹಾರ ವಿಸ್ತಣೆಗೆ ಅವಕಾಶಗಳು ತೆರೆದುಕೊಳ್ಳಲಿವೆ. ನಿಮ್ಮ ಸ್ನೇಹಿತರು ತಾವಾಗಿಯೇ ಬಂದು, ಇದಕ್ಕೆ ಅಗತ್ಯ ಇರುವ ಹಣಕಾಸಿನ ಹೂಡಿಕೆಯನ್ನು ತಾವು ಮಾಡುವುದಾಗಿ ಹೇಳಲಿದ್ದಾರೆ.
ಪರಿಚಿತರ ಅಗತ್ಯಗಳಿಗೆ ನೆರವು ನೀಡಲಿದ್ದೀರಿ. ಸೈಟು- ಮನೆ ಖರೀದಿ ಮಾಡಬೇಕು ಎಂದಿರುವವರು ತಮ್ಮ ನಿರ್ಧಾರದಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಚೌಕಾಶಿ ಮಾಡಿ, ಈ ದಿನ ಕೆಲವು ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ಬರೀ ಮಾತಿನಿಂದ ಆಗುವುದಿಲ್ಲ ಎಂಬಂಥ ಕಡೆಗಳಲ್ಲಿ ಕೆಲಸ- ಕಾರ್ಯಗಳನ್ನು ಪೂರ್ಣ ಮಾಡುವುದಕ್ಕೆ ಪ್ರಭಾವ ಬಳಕೆ ಮಾಡಲಿದ್ದೀರಿ. ಮಕ್ಕಳ ಶಿಕ್ಷಣದ ಬಗ್ಗೆ ಚಿಂತೆ ಹೆಚ್ಚಾಗಲಿದೆ. ನಿಮ್ಮಲ್ಲಿ ಕೆಲವರು ಮಕ್ಕಳನ್ನು ಹಾಸ್ಟೆಲ್ ನಲ್ಲಿ ಬಿಟ್ಟು ಓದಿಸುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ನಿಮ್ಮ ಹಳೇ ಚಿನ್ನದ ಆಭರಣಗಳ ವಿನಿಮಯಕ್ಕೆ ನಿರ್ಧಾರ ಕೈಗೊಳ್ಳುವ ಯೋಗ ಇದೆ. ಸ್ವಲ್ಪ ಪ್ರಮಾಣದಲ್ಲಿಯಾದರೂ ಸಾಲ ಮಾಡುವ ಸಾಧ್ಯತೆ ಇದೆ. ಅಥವಾ ಕೆಲವರು ಪಿಎಫ್, ಎಫ್.ಡಿ., ಇಂಥವುಗಳಿಂದ ಹಣ ತೆಗೆದುಕೊಳ್ಳಲು ಪ್ರಯತ್ನ ಮಾಡಲಿದ್ದೀರಿ. ಸ್ವಾದಿಷ್ಟವಾದ ಊಟ- ತಿಂಡಿ ಸವಿಯುವ ಯೋಗ ಇದೆ.
ಮೀನುಗಾರಿಕೆ- ಮೀನು ಸಾಕಣೆ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ದ್ವಿಚಕ್ರ ವಾಹನ ಖರೀದಿ ಮಾಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೀರಿ. ನೀವೇನಾದರೂ ವ್ಯಾಪಾರ- ವ್ಯವಹಾರ ಮಾಡುವಂಥವರಾದರೆ ಅದಕ್ಕೆ ಅಗತ್ಯ ಇರುವಂಥ ಟ್ರಕ್, ಲಾರಿ, ಲಗೇಜ್ ಆಟೋ ಇಂಥವುಗಳನ್ನು ಖರೀದಿಸುವ ಸಾಧ್ಯತೆ ಇದೆ. ಚರ್ಮ- ಕೂದಲಿನ ಆರೋಗ್ಯದ ಬಗ್ಗೆ ಹೆಚ್ಚು ಲಕ್ಷ್ಯ ನೀಡಬೇಕು. ತಲೆಹೊಟ್ಟಿನ ಸಮಸ್ಯೆ ಈಗಾಗಲೇ ಇದ್ದಲ್ಲಿ ಅದು ಉಲ್ಬಣ ಆಗಬಹುದು. ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳುವುದಕ್ಕೆ ಪ್ರಾಮುಖ್ಯ ನೀಡಿ. ಪಿತ್ರಾರ್ಜಿತ ಆಸ್ತಿ ಹಂಚಿಕೆ ಬಗ್ಗೆ ಈ ಹಿಂದೆ ಯಾವಾಗಲೋ ನಿಮಗೆ ಇಂಥದ್ದನ್ನು ನೀಡುತ್ತೇನೆ ಎಂದು ಹೇಳಿದ್ದಿದ್ದು, ಈಗ ತೀರ್ಮಾನ ಬದಲಾವಣೆ ಮಾಡಿಕೊಂಡಿರುವುದಾಗಿ ಹೇಳಲಿದ್ದಾರೆ. ಅಡ್ವರ್ಟೈಸ್ ಮೆಂಟ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಒತ್ತಡ ಇರಲಿದೆ.
ಕುಟುಂಬಕ್ಕೆ ಅಗತ್ಯ ಇರುವ ವಸ್ತುಗಳ ಖರೀದಿ ಮಾಡುವುದಕ್ಕೆ ಹೆಚ್ಚಿನ ಸಮಯವನ್ನು ಇಡಲಿದ್ದೀರಿ. ನಿಮ್ಮಲ್ಲಿ ಕೆಲವರು ಪ್ರವಾಸಕ್ಕೆ ತೆರಳಲು ಸಿದ್ಧತೆ ಮಾಡಿಕೊಳ್ಳಲಿದ್ದು, ಹೋಟೆಲ್ ಬುಕ್ಕಿಂಗ್, ಕಾರು ಬುಕ್ಕಿಂಗ್ ಇಂಥವು ಮಾಡಿಕೊಳ್ಳುವುದಕ್ಕೆ ಸ್ನೇಹಿತರ ಸಹಾಯವನ್ನು ಕೇಳಲಿದ್ದೀರಿ. ಆದಾಯ ತೆರಿಗೆಗೆ ಸಂಬಂಧಿಸಿದ ವಿಷಯದ ಬಗ್ಗೆ ಚರ್ಚೆ ಮಾಡುವುದಕ್ಕೆ ಆ ಕ್ಷೇತ್ರದಲ್ಲಿ ಪರಿಣತ ಆದಂಥ ವ್ಯಕ್ತಿಗಳ ಜತೆಗೆ ಮಾತುಕತೆ ನಡೆಸಲಿದ್ದೀರಿ. ಮಾತು ಪ್ರಧಾನವಾದ ವೃತ್ತಿ- ಉದ್ಯೋಗದಲ್ಲಿ ಇರುವವರಿಗೆ ವಿಪರೀತ ಕೆಲಸಗಳು ಬರುತ್ತವೆ. ಪ್ರಮುಖ ಜವಾಬ್ದಾರಿಯೊಂದನ್ನು ಹೆಚ್ಚುವರಿಯಾಗಿ ವಹಿಸಿಕೊಳ್ಳಲು ಸೂಚನೆ ಕೂಡ ಬರಲಿದೆ. ಫ್ರೀಲ್ಯಾನ್ಸರ್ ಆಗಿ ಇರುವವರಿಗೆ ಆದಾಯದಲ್ಲಿ ಹೆಚ್ಚಳ ಆಗುವಂಥ ಯೋಗ ಇದ್ದು, ಸ್ನೇಹಿತರ ಮೂಲಕ ಉದ್ಯೋಗದ ರೆಫರೆನ್ಸ್ ಸಹ ಬರಬಹುದು. ಅವಕಾಶಗಳನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂಬ ಕಡೆಗೆ ಲಕ್ಷ್ಯ ನೀಡಿ.
ಸಂಗೀತ ಸಾಧನಗಳ ಕಲಿಕೆಯನ್ನು ಆರಂಭಿಸುವುದಕ್ಕೆ ಮನಸ್ಸು ಮಾಡಲಿದ್ದೀರಿ. ಫ್ಯಾಷನ್ ಡಿಸೈನಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಅವಕಾಶಗಳು ದೊರೆಯಲಿವೆ. ದೊಡ್ಡ ವೇದಿಕೆಯಲ್ಲಿ ನಿಮ್ಮ ಸಾಮರ್ಥ್ಯ ಪ್ರದರ್ಶನ ಮಾಡುವುದಕ್ಕೆ ಆಹ್ವಾನ ಬರಲಿದೆ. ಎಂಎಸ್ಎಂಇ ಕೈಗಾರಿಕೆ ಆರಂಭಿಸುವುದಕ್ಕೆ ಸಿದ್ಧತೆ- ಬಜೆಟ್ ಮಾಡಿಕೊಳ್ಳಲಿದ್ದೀರಿ. ಸಬ್ಸಿಡಿ ಸಹಿತವಾಗಿ ಸಾಲವನ್ನು ಪಡೆಯುವುದಕ್ಕೆ ಬ್ಯಾಂಕ್ ಗೆ ಪ್ರಾಜೆಕ್ಟ್ ರಿಪೋರ್ಟ್ ಸಲ್ಲಿಸುವ ಸಾಧ್ಯತೆ ಇದೆ. ಹೊಸ ಹೂಡಿಕೆ ಅವಕಾಶಗಳಿಗೆ ತಕ್ಷಣವೇ ಸ್ಪಂದಿಸಿದ್ದರಿಂದ ಆರಂಭದಲ್ಲಿಯೇ ಲಾಭದಲ್ಲಿ ಇರುವಂತೆ ಆಗಲಿದೆ. ಮಕ್ಕಳ ಶಿಕ್ಷಣಕ್ಕೆ ಸಹಾಯ ಆಗಲಿ ಎಂಬ ದೃಷ್ಟಿಕೋನದಿಂದ ಕೊಂಡಿದ್ದ ಷೇರುಗಳು, ಹೂಡಿಕೆ ಮಾಡಿಕೊಂಡು ಬಂದಿದ್ದ ಮ್ಯೂಚುವಲ್ ಫಂಡ್ ನಿಂದ ಹಣವನ್ನು ತೆಗೆದುಕೊಳ್ಳುವ ತೀರ್ಮಾನವನ್ನು ಮಾಡಲಿದ್ದೀರಿ. ಸ್ನೇಹಿತರ ವರ್ತನೆಯಿಂದ ಬೇಸರ ಆಗಲಿದೆ.
ನಿಮಗೆ ಎಷ್ಟೇ ಆಪ್ತರೇ ಆದರೂ ಇತರರ ಹಣಕಾಸು ವ್ಯವಹಾರಗಳಿಗೆ ಮಧ್ಯಸ್ಥಿಕೆ ಮಾಡುವುದಕ್ಕೆ ನೀವು ಹೋಗಬೇಡಿ. ನೀವಾಗಿಯೇ ವಹಿಸಿಕೊಂಡ ಕೆಲವು ಜವಾಬ್ದಾರಿಗಳನ್ನು ಗಡುವಿನೊಳಗಾಗಿ ಮಾಡಿ ಮುಗಿಸುವುದಕ್ಕೆ ಹರಸಾಹಸ ಮಾಡಬೇಕಾಗುತ್ತದೆ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು ರಜಾ ಕೇಳಿಕೊಂಡು ಬಂದಲ್ಲಿ ಅವರ ಅಗತ್ಯಕ್ಕೆ ಸ್ಪಂದಿಸುವ ಕಡೆಗೆ ಗಮನವನ್ನು ನೀಡಿ. ವಿವಾಹ ವಯಸ್ಕರಾಗಿದ್ದು ಮದುವೆ ಪ್ರಯತ್ನ ಮಾಡುತ್ತಾ ಇದ್ದಲ್ಲಿ ಸೂಕ್ತ ಸಂಬಂಧ ದೊರೆಯುವ ಸಾಧ್ಯತೆ ಹೆಚ್ಚಿದೆ. ಮುಖ್ಯವಾಗಿ ಸಂಬಂಧಿಗಳ ಮೂಲಕ ಬರುವಂಥ ರೆಫರೆನ್ಸ್ ಗಂಭೀರವಾಗಿ ಪರಿಗಣಿಸಿ. ದೇವತಾ ಕಾರ್ಯಗಳ ಆಯೋಜನೆಗಾಗಿ ಓಡಾಟ ನಡೆಸಲಿದ್ದೀರಿ. ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಪ್ರಾಜೆಕ್ಟ್ ಗಳು ಹುಡುಕಿಕೊಂಡು ಬರಲಿವೆ. ಆದಾಯದಲ್ಲಿ ಹೆಚ್ಚಳ ಆಗುವುದರಿಂದ ನಿಮ್ಮ ಆತ್ಮವಿಶ್ವಾಸವು ಹೆಚ್ಚಲಿದೆ. ಪ್ರಶ್ನಿಸದೆ ಯಾವುದೇ ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಡಿ.
ಯಾರ ಬಳಿಯೂ ಸಹಾಯ ಕೇಳಬಾರದು ಎಂದುಕೊಳ್ಳುತ್ತಾ ಇರುವವರಿಗೆ ಇತರರ ನೆರವು ಅನಿವಾರ್ಯ ಆಗಲಿದೆ. ಕೂಡಿಟ್ಟುಕೊಂಡಿದ್ದ ಉಳಿತಾಯದ ಹಣವನ್ನು ಹಿಂತೆಗೆದುಕೊಂಡು ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವ ಆಲೋಚನೆ ಮೂಡಲಿದೆ. ಇನ್ನು ನಿಮ್ಮಲ್ಲಿ ಯಾರು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದೀರಿ, ಅಂಥವರಿಗೆ ಬಡ್ತಿ, ವೇತನ ಹೆಚ್ಚಳ ಆಗುವ ಯೋಗ ಇದೆ. ನಿವೃತ್ತ ಸರ್ಕಾರಿ ನೌಕರರಿಗೆ ಕನ್ಸಲ್ಟಂಟ್ ಆಗಿ ಕಾರ್ಯ ನಿರ್ವಹಿಸುವಂತೆ ಆಹ್ವಾನ ದೊರೆಯಲಿದೆ. ವಾಹನ ಚಾಲನೆ ಮಾಡುವಾಗ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಜಾಗ್ರತೆ ವಹಿಸಿ. ಅದರ ಜೊತೆಗೆ ಒನ್ ವೇ, ನೋ ಪಾರ್ಕಿಂಗ್ ಇಂಥವುಗಳನ್ನು ಗಮನಿಸಿಕೊಳ್ಳಿ. ಇಲ್ಲದಿದ್ದಲ್ಲಿ ಅಂಥವುಗಳಿಗೆ ದೊಡ್ಡ ಮೊತ್ತದ ದಂಡ ಪಾವತಿಸುವಂತೆ ಆಗಲಿದೆ. ಬಹಳ ವರ್ಷಗಳಿಂದ ಭೇಟಿ ಸಾಧ್ಯವೇ ಆಗಿರಲಿಲ್ಲ ಎಂಬಂಧ ಸ್ನೇಹಿತರ ಜೊತೆಗೆ ಉತ್ತಮವಾದ ಸಮಯವನ್ನು ಕಳೆಯಲಿದ್ದೀರಿ.
ಬರಹಗಾರರಿಗೆ ಒತ್ತಡದ ಸನ್ನಿವೇಶ ಎದುರಾಗಲಿದೆ. ಗಡುವಿನ ಒಳಗಾಗಿ ಪೂರ್ಣಗೊಳಿಸಲು ಸಾಧ್ಯವಾಗದೆ ಕೆಲವು ಕೆಲಸದ ವಿಚಾರದಲ್ಲಿ ಮನಸ್ಸು ಕಹಿ ಆಗುವಂಥ ಬೆಳವಣಿಗೆ ಆಗಲಿದೆ. ಆಸಕ್ತಿಯಿಂದ ಕಟ್ಟಿದ್ದ ಸಂಸ್ಥೆ, ಪತ್ರಿಕೆ ಅಥವಾ ಯೂ ಟ್ಯೂಬ್ ಚಾನೆಲ್ ಅನ್ನು ಬೇರೆಯವರಿಗೆ ವಹಿಸಿಕೊಡಬೇಕು ಎಂಬ ಸನ್ನಿವೇಶ ಸೃಷ್ಟಿ ಆಗುತ್ತದೆ. ಸಿಹಿ ಪದಾರ್ಥಗಳ ಸೇವನೆಯನ್ನು ಈ ದಿನ ಕಡಿಮೆ ಮಾಡುವುದು ಒಳ್ಳೆಯದು. ಅದರಲ್ಲೂ ದೇಹದ ತೂಕ ಹೆಚ್ಚಾಗಿ, ಮಧುಮೇಹದಂಥ ಸಮಸ್ಯೆಯಿಂದ ಬಳಲುತ್ತಾ ಇರುವವರು ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ. ಮನೆಗೆ ಟೀವಿ ಅಥವಾ ಹೋಮ್ ಥಿಯೇಟರ್ ಅಳವಡಿಕೆ ಅಥವಾ ಪ್ರೊಜೆಕ್ಟರ್ ಖರೀದಿ ಮಾಡುವುದಕ್ಕೆ ಸದಸ್ಯರ ಜತೆಗೆ ಮಾತುಕತೆ ನಡೆಸಲಿದ್ದೀರಿ. ಸ್ನೇಹಿತರಿಂದ ಸಾಲವನ್ನು ಪಡೆದುಕೊಂಡಿದ್ದಲ್ಲಿ ಅದನ್ನು ಮರುಪಾವತಿ ಮಾಡುವುದಕ್ಕೆ ಆದ್ಯತೆ ನೀಡಲಿದ್ದೀರಿ.
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಮೂಲಾ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ಧೃತಿ, ಕರಣ : ನಾಗವಾನ್, ಸೂರ್ಯೋದಯ – 06 – 45 am, ಸೂರ್ಯಾಸ್ತ – 06 – 00 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:36 – 18:00, ಯಮಗಂಡ ಕಾಲ 12:23- 13:47, ಗುಳಿಕ ಕಾಲ 15:51 – 16:36.
ಮೇಷ ರಾಶಿ: ಕನಸಿನಲ್ಲೇ ತೇಲಿದರೆ ವಾಸ್ತವಿಕ ನಷ್ಟವಾಗುವ ಸಂಭವ. ಪ್ರಯೋಗಾತ್ಮಕ ಚಿಂತನೆಯು ಯಶಸ್ಸನ್ನು ತರುತ್ತದೆ. ಇನ್ನೊಬ್ಬರ ಬಗ್ಗೆ ನಿಮ್ಮಲ್ಲಿ ಕುತೂಹಲ ಇರಲಿದೆ. ಸಜ್ಜನರ ಜೊತೆ ಸಮಯ ಕಳೆಯುವ ಅವಕಾಶ ಸಿಗುವುದು. ಕುಟುಂಬದ ಹಿರಿಯರ ಅನಾರೋಗ್ಯದ ಕಾರಣ ನಿಮ್ಮ ಸ್ವಂತ ಕಾರ್ಯವನ್ನು ಮಾಡಿಕೊಳ್ಳಲಾಗದು. ಆಭರಣ ಖರೀದಿಗೆ ಉತ್ತಮ ದಿನವಿದಾಗಲಿದೆ. ವೃದ್ಧರ ಸೇವೆಯಲ್ಲಿ ತೊಡಗಿಕೊಳ್ಳುವಿರಿ. ಉದ್ಯೋಗವನ್ನು ನಂಬಿ ಜೀವನ ಸಾಗಿಸುವವರಿಗೆ ಬೇಸರ ಎದುರಾಗಬಹುದು. ನಿಮ್ಮ ವ್ಯಾಪಾರದ ತಂತ್ರವು ಫಲಿಸಬಹುದು. ವ್ಯಾಪಾರದಲ್ಲಿ ಲಾಭವನ್ನು ತಂದೀತು. ಕಲಾತ್ಮಕ ಕೆಲಸಗಳಲ್ಲಿ ಸಂತೋಷ ಸಿಗುತ್ತದೆ. ಮನಸ್ಸಿಗೆ ಶಾಂತಿ ದೊರೆಯುತ್ತದೆ. ಸನ್ನಿವೇಶಕ್ಕೆ ತಕ್ಕುದಾದ ಮಾತನ್ನು ಆಡಿ. ಎಲ್ಲ ಕಾರ್ಯಕ್ಕೂ ಲಾಭವನ್ನು ನಿರೀಕ್ಷಿಸುವುದು ಬೇಡ. ಅನುವಾದಕರಿಗೆ ಹೆಚ್ಚು ಕಾರ್ಯಗಳು ಬರಬಹುದು. ಮನಸ್ಸಿನ ಭಾರವನ್ನು ಕಳೆಯುವ ದಾರಿಗಳು ನಿಮ್ಮ ಮುಂದೆ ಇರುವುದು.
ವೃಷಭ ರಾಶಿ: ನಿಮ್ಮ ಇಂದಿನ ಅಭಿಪ್ರಾಯವನ್ನು ಇತರರು ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಸ್ಪಷ್ಟ ಸಂವಹನದಿಂದ ನಷ್ಟವನ್ನು ತಪ್ಪಿಸಬಹುದು. ನಿಮ್ಮ ಅಂತಶ್ಶಕ್ತಿಯೇ ನಿಮ್ಮ ನಿಜವಾದ ಬಲವಾದುದರಿಂದ ಯಾವ ಸಮಸ್ಯೆಗಳಿಗೂ ನಿರಾತಂಕವಾಗಿ ಇರುವಿರಿ. ಸ್ನೇಹಿತರು ನಿಮಗೆ ಸುಳ್ಳು ಹೇಳುವರು. ಮಕ್ಕಳ ವಿದ್ಯಾಭ್ಯಾಸಕ್ಕೆ ನೀವೇ ವಿಶೇಷ ಕಾಳಜಿಯನ್ನು ತೋರಿ ಅವರನ್ನು ಓದಿಗೆ ಪ್ರೇರಣೆ ಕೊಡಬೇಕಾಗುವುದು. ದಿನದ ಕೆಲಸವೇ ಇಂದು ಬಹಳ ಆಗಲಿದ್ದು ಇನ್ನೊಬ್ಬರ ಕೆಲಸವನ್ನು ಮಾಡಿಕೊಡಲು ತಾಳ್ಮೆ ಇರಲಾರದು. ಬರಬೇಕಾದ ಹಣವು ಆಕಸ್ಮಿಕವಾಗಿ ಬಂದಿದ್ದು ಖುಷಿ ಕೊಡುವುದು. ಇಂದು ನಿಮ್ಮ ಉತ್ಸಾಹವನ್ನು ಯಾರಿಂದಲೂ ಸಾಧ್ಯವಾಗದು. ಆದಾಯದ ವಿಚಾರದಲ್ಲಿ ಹಿನ್ನಡೆಯಾಗಿದ್ದು ನಿಮ್ಮ ತಂತ್ರವು ಪೂರ್ಣವಾಗಿ ಫಲಿಸದು. ವೈಶಿಷ್ಟ್ಯತೆಯಿಂದ ಗುರುತಿಸಿಕೊಳ್ಳುವ ದಿನ. ಹೊಸ ಪ್ರಯೋಗಗಳಲ್ಲಿ ಯಶಸ್ಸು ಸಾಧ್ಯ. ಸ್ನೇಹವಲಯ ವಿಸ್ತಾರವಾಗುತ್ತದೆ. ನಿಮ್ಮ ತಪ್ಪಿಗೂ ಇನ್ನೊಬ್ಬರನ್ನು ಕೈ ಮಾಡಿ ತೋರಿಸುವುದು ಬೇಡ. ಮಾತಿನಿಂದಲೇ ಸಂಕಟವನ್ನು ತಂದುಕೊಳ್ಳುವಿರಿ. ಅತಿಯಾದ ಸಂತೋಷದ ಕ್ಷಣವು ನಿಮ್ಮ ಪಾಲಿಗೆ ಇರಲಿದೆ.
ಮಿಥುನ ರಾಶಿ: ದೇಹಾರೋಗ್ಯವನ್ನು ನಿರ್ಲಕ್ಷಿಸಿದರೆ ಅನಾರೋಗ್ಯದ ಆಧಿಕ್ಯ. ಕೆಲಸ ಮತ್ತು ವಿಶ್ರಾಂತಿ ಸಮತೋಲನದಲ್ಲಿದ್ದರೆ ದಿನ ಶುಭಕರ. ಇರುವ ಚೈತನ್ಯವನ್ನು ಬೆಳೆಸಿಕೊಂಡು ಕಾರ್ಯವನ್ನು ಸಾಧಿಸಿಕೊಳ್ಳಬಡೆಕು. ಮನೆಯ ಸಮೀಪದಲ್ಲಿಯೇ ನಿಮ್ಮ ಉದ್ಯೋಗವು ಸಿಗಲಿದೆ. ಮನೆಯಲ್ಲಿ ತಾಳ್ಮೆಯಿಂದ ವ್ಯವಹರಿಸಿ. ನಿಮ್ಮ ವಾಹನಕ್ಕಾಗಿ ಖರ್ಚನ್ನು ಮಾಡಬೇಕಾಗುವುದು. ಪ್ರೀತಿಯ ವಿಷಯದಲ್ಲಿ ಇಂದು ದುಃಖವುಂಟಾಗಬಹುದು. ಮನಸ್ತಾಪವನ್ನು ದ್ವೇಷವಾಗಿ ಪರಿವರ್ತಿಸಿಕೊಳ್ಳುವುದು ಬೇಡ. ನಿಮಗೆ ಕೊಟ್ಟ ಜವಾಬ್ದಾರಿಯನ್ನು ನೀವು ತಳ್ಳಿಹಾಕುವಿರಿ. ಶ್ರಮಕ್ಕೆ ತಕ್ಕ ಫಲ ದೊರೆಯುವ ದಿನ. ಹಿರಿಯರಿಂದ ಮಾರ್ಗದರ್ಶನ ಸಿಗುತ್ತದೆ. ಕಾರ್ಯಕ್ಷೇತ್ರದಲ್ಲಿ ಸ್ಥಿರತೆ ಕಾಣಿಸುತ್ತದೆ. ವ್ಯವಹಾರದಲ್ಲಿ ಇರಬೇಕಾದ ಚಾಕಚಕ್ಯತೆಯನ್ನು ಬೆಳೆಸಿಕೊಳ್ಳಬೇಕಾಗುವುದು. ಪ್ರೀತಿಯ ಮಾತುಗಳಿಂದ ನಿಮ್ಮತ್ತ ಜನರು ಆಕರ್ಷಿತರಾಗುವುದು. ವಿದ್ಯಾರ್ಥಿಗಳಿಗೆ ಅನ್ಯರ ಸಹವಾಸ ಸಿಗಬಹುದು. ಬಿಡುಗಡೆಗಾಗಿ ದಾರಿಯನ್ನು ನೀವೇ ಹುಡುಕಿಕೊಳ್ಳುವಿರಿ.
ಕರ್ಕಾಟಕ ರಾಶಿ: ಆಶಾವಾದ ನಿಮ್ಮ ಬಲವನ್ನು ಹೆಚ್ಚು ಮಾಡುತ್ತದೆ. ಆದರೆ ಅತಿಯಾದ ನಿರೀಕ್ಷೆಗಳು ಮನಸ್ಸಿಗೆ ನೋವು ತರುತ್ತವೆ. ಏನೇ ಮಾಡಿದರೂ ಚಾಂಚಲ್ಯವನ್ನು ನಿಯಂತ್ರಿಸಲಾಗದೇ ಕಷ್ಟವಾಗುವುದು. ಸುಳ್ಳನ್ನಾಡಿ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಅಚಾತುರ್ಯದಿಂದ ಹಣವನ್ನು ಕಳೆದುಕೊಳ್ಳಬೇಕಾದೀತು. ಬೇಡದ ಕಾರ್ಯಕ್ಕೆ ಯಾರಾದರೂ ಪ್ರಚೋದಿಸಿಯಾರು. ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು. ಒಂದು ಕಾರ್ಯಕ್ಕೆ ವಿಘ್ನಗಳು ಬರುತ್ತಿದ್ದು ದೈವಜ್ಞರನ್ನು ಸಂಪರ್ಕಿಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದು ಉತ್ತಮ. ವಿದ್ಯೆಯ ಕಾರಣಕ್ಕೆ ಇಂದು ನಿಮಗೆ ಗೌರವವು ಸಿಗಲಿದೆ. ಕಾರ್ಯದ ಒತ್ತಡದಿಂದ ಶಿರೋವೇದನೆ ಕಾಣಿಸಿಕೊಳ್ಳುವುದು. ಹೊಸ ಆಲೋಚನೆಗಳು ಯಾರದೋ ಪ್ರೋತ್ಸಾಹವಿಲ್ಲದೇ ಚೈತನ್ಯ ನೀಡುತ್ತವೆ. ಪ್ರಯಾಣ ಅಥವಾ ಅಧ್ಯಯನದಲ್ಲಿ ಲಾಭ ಸಿಗುತ್ತದೆ. ವಾಸ್ತವಿಕ ದೃಷ್ಟಿಯಿಂದ ನಡೆದುಕೊಂಡರೆ ಯಶಸ್ಸು ಖಚಿತ. ಸಹಾಯವನ್ನು ಕೇಳಿ ಬಂದವರಿಗೆ ಇಲ್ಲ ಎನ್ನುವುದು ಬೇಡ.
ಸಿಂಹ ರಾಶಿ: ಕೆಲಸದಲ್ಲಿ ಸ್ಥಿರ ಯಶಸ್ಸು ಕಾಣಬಹುದು. ಆದರೆ ಅನುಮಾನ ಮತ್ತು ಅಸಹನೆ ದೂರ ಮಾಡಿಕೊಳ್ಳಬೇಕು. ಇಂದು ಅನಿರೀಕ್ಷಿತ ಬಂಧುಗಳ ಆಗಮನದಿಂದ ಯೋಜಿತವಾದ ಕಾರ್ಯಗಳನ್ನು ಬದಲಿಸುವುದು ಬೇಡ. ಪ್ರಯಾಣದಿಂದ ಹಿಂಸೆ ಆಗಬಹುದು. ಮಿತ್ರರಿಂದ ಸಿಗಬೇಕಾದ ಹಣಕ್ಕೆ ಕತ್ತರಿ ಬೀಳುವುದು. ನಿರೀಕ್ಷಿತ ಫಲವು ಲಭಿಸದು. ಆಸ್ತಿಯ ಖರೀದಿಯ ವಿಚಾರದಲ್ಲಿ ನೀವು ಸರಿಯಾದ ಮಾಹಿತಿಯನ್ನು ಪಡೆಯುವುದು ಸೂಕ್ತ. ಸಹೋದ್ಯೋಗಿಗಳ ಮೇಲೆ ನಿಮಗೆ ಅಸೂಯೆ ಉಂಟಾಗಬಹುದು. ಆಂತರಿಕ ಶಕ್ತಿ ಹೆಚ್ಚಾಗುವ ದಿನ. ಗುಪ್ತ ಪ್ರಯತ್ನಗಳು ಫಲ ನೀಡುತ್ತವೆ. ವಿಶ್ವಾಸ ಮತ್ತು ಧೈರ್ಯದಿಂದ ನಡೆದುಕೊಂಡರೆ ಜಯ ಸಿಗುತ್ತದೆ. ನಿಮ್ಮ ಯೋಜನೆ ಉತ್ತಮವಿದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ಕಷ್ಟವಾದೀತು. ನಿಮ್ಮ ಕಾರ್ಯಕ್ಕೆ ಇನ್ಯಾರೋ ಯಶಸ್ಸು ಪಡೆವರು. ಸಂಗಾತಿಯ ಬಗ್ಗೆ ಇದ್ದ ಪೂರ್ವಾಗ್ರಹವು ಬದಲಾಗಿ ಅವರ ಜೊತೆ ಅನ್ಯೋನ್ಯವಾಗಿ ಇರುವಿರಿ. ಒಂದೇ ಕಾರ್ಯವನ್ನು ಎರಡು ರೀತಿಯ ಲಾಭವಾಗುವಂತೆ ನೋಡಿಕೊಳ್ಳುವಿರಿ.
ಕನ್ಯಾ ರಾಶಿ: ಆರ್ಥಿಕ ವಿಷಯಗಳಲ್ಲಿ ಲಾಭದ ಸೂಚನೆ. ಆದರೆ ತೀರ್ಮಾನದಲ್ಲಿ ವಿಳಂಬ ನಿರ್ದಿಷ್ಟ ಗುರಿಯನ್ನು ತಲುಪದೇ ಬೇಸರ ಕಾರಣವಾಗಬಹುದು. ಸಮಯಕ್ಕೆ ಸರಿಯಾದ ನಿರ್ಧಾರ ದಿನವನ್ನು ಯಶಸ್ವಿಗೊಳಿಸುತ್ತದೆ. ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು. ಇಲ್ಲವಾದರೆ ನಿಮಗೇ ತೊಂದರೆ. ವಾಗ್ಮಿಗಳು ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವರು. ಸಂಪ್ರದಾಯದ ವಿಚಾರದಲ್ಲಿ ನಿಮಗೆ ಆಸಕ್ತಿಯು ಹೆಚ್ಚಾಗಬಹುದು. ಮನೆಗೆ ಅತಿಥಿಗಳ ಆಗಮನವಾಗಲಿದ್ದು ನಿಮ್ಮ ಇಂದಿನ ಕಾರ್ಯವು ಬದಲಾಗಬಹುದು. ನಿಮ್ಮ ಕರ್ತವ್ಯವನ್ನು ಮಾಡಲು ಹಿಂದೇಟು ಹಾಕುವಿರಿ. ನಿಮ್ಮ ಮನಸ್ಸಿಗೆ ಹಿಡಿಸದೇ ಇರುವವರಿಂದ ದೂರ ಉಳಿಯುವಿರಿ. ಅನ್ಯರನ್ನು ಪೀಡಿಸಿ ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಕಾನೂನಿನ ಕೆಲಸವನ್ನು ಯಾರ ಸಲಹೆಯನ್ನು ಪಡೆಯದೇ ಮಾಡುವಿರಿ. ಸಂಬಂಧಗಳಲ್ಲಿ ಸಮತೋಲನ ಸಿಗುತ್ತದೆ. ಮಾತುಕತೆಗಳಿಂದ ಸಮಸ್ಯೆಗಳು ಪರಿಹಾರವಾಗುತ್ತವೆ. ಭವಿಷ್ಯದ ಭದ್ರೆತೆಗೆ ಬೇಕಾದ ಬುನಾದಿಯನ್ನು ಹಾಕಿಕೊಳ್ಳುವಿರಿ.
ತುಲಾ ರಾಶಿ: ಆರೋಗ್ಯದ ಕಡೆ ಗಮನ ಹರಿಸಿದರೆ ಶಕ್ತಿ ಹೆಚ್ಚುತ್ತದೆ. ಆದರೆ ಅತಿಯಾದ ಚಿಂತನೆ ಮನಸ್ಸನ್ನು ಕುಗ್ಗಿಸಬಹುದು. ಉದ್ಯೋಗದಲ್ಲಿ ಬಡ್ತಿಗೆ ಅವಕಾಶಗಳು ಬರಬಹುದು. ಆದಾಯ ಹೆಚ್ಚಲಿದೆ. ಸಿಕ್ಕ ಅವಕಾಶದಲ್ಲಿ ತೃಪ್ತಿ ಪಡೆಯುವುದು ಮುಖ್ಯವಾಗಿರಲಿ. ಮನೆಯ ಕಾರ್ಯದಲ್ಲಿ ಸಮಯವು ಕಳೆದುಹೋಗುವುದು. ನಿಮಗೆ ಗೊತ್ತೇ ಇರದ ಕೆಲಸವನ್ನು ನೀವು ಮಾಡಬೇಕಾದೀತು. ಮನಶ್ಚಾಂಚಲ್ಯದಿಂದ ಕಛೇರಿಯಲ್ಲಿ ಸರಿಯಾದ ಕೆಲಸವನ್ನು ಮಾಡಲಾಗದು. ಪ್ರೀತಿಯು ನಿಮ್ಮ ಯಶಸ್ಸಿನ ವೇಗಕ್ಕೆ ಕಡಿವಾಣ ಹಾಕಬಹುದು. ನಿಮ್ಮ ಉದ್ದೇಶವೇ ಬದಲಾದರೂ ಅಚ್ಚರಿ ಪಡಬೇಕಾಗಿಲ್ಲ. ಸ್ನೇಹಿತರು ನಿಮ್ಮ ಸಮಯವನ್ನು ವ್ಯರ್ಥಮಾಡಿಯಾರು. ಯೋಜಿತವಾಗಿ ಕೆಲಸ ಮಾಡುವ ದಿನ. ಸೂಕ್ಷ್ಮ ಗಮನದಿಂದ ಲಾಭ ದೊರೆಯುತ್ತದೆ. ಸರಳ ದೃಷ್ಟಿಕೋನ ಇಟ್ಟುಕೊಂಡರೆ ಯಶಸ್ಸು ನಿಮ್ಮದಾಗುತ್ತದೆ. ಎಲ್ಲ ಕಡೆಗಳಿಂದಲೂ ಮಾನಸಿಕ ಸಂತೃಪ್ತಿ ಇರದೇ ಇರುವುದು ಯಾರ ಬಳಿ ಹೇಳಿಕೊಳ್ಳಬೇಕು ಎಂದು ಗೊತ್ತಾಗದು.
ವೃಶ್ಚಿಕ ರಾಶಿ: ಕೆಲಸದಲ್ಲಿ ದೃಢತೆ ಸಿಗುತ್ತದೆ. ನಾಯಕತ್ವ ಗುಣದಿಂದ ಯಶಸ್ಸು ದೊರೆಯುತ್ತದೆ. ಆದರೆ ಅಹಂಕಾರ ಮತ್ತು ಅತಿಯಾದ ಆತ್ಮವಿಶ್ವಾಸ ಅಪಯಶಸ್ಸಿಗೆ ಕಾರಣವಾಗಬಹುದು. ಕೌಟುಂಬಿಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ನಿಮ್ಮ ಅಂತರಂಗದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಯೋಚಿಸುವಿರಿ. ಕಛೇರಿಯ ಕಾರ್ಯವನ್ನು ಮನೆಯಲ್ಲಿ ಇದ್ದು ಮಾಡಬೇಕಾಗಬಹುದು. ಇಂದು ವ್ಯಾಪಾರವನ್ನು ಮಾಡುವ ಮನಸ್ಸು ಇಲ್ಲದಿದ್ದರೂ ಮನೆಯಲ್ಲಿ ಕುಳಿತು ಬೇಸರವಾಗಬಹುದು. ಸಾಮಾಜಿಕ ತಾಣದಲ್ಲಿ ಹೆಚ್ಚು ಸಮಯ ಕಳೆಯುವಿರಿ. ಸ್ನೇಹಿತರ ತಮಾಷೆಯು ನಿಮಗೆ ಇಷ್ಟವಾಗದು. ದ್ವಿಚಕ್ರ ವಾಹನವನ್ನು ಓಡಿಸುವಾಗ ಎಚ್ಚರ ಇರಲಿ. ಸಂಗಾತಿಯ ಮನಃಸ್ಥಿತಿಗೆ ಪೂರಕವಾಗಿ ನಿಮ್ಮ ಆಲೋಚನೆಯೂ ಇರಲಿದ್ದು ನಿಮಗೆ ಖುಷಿಯಾಗುವುದು. ನಿಮ್ಮ ಪ್ರತಿಭೆ ಹೊರಹೊಮ್ಮುತ್ತದೆ. ಸರಳತೆ ಮತ್ತು ಸಂಯಮದಿಂದ ದಿನವನ್ನು ಇನ್ನಷ್ಟು ಉಜ್ಜ್ವಲ ಮಾಡಿಕೊಳ್ಳುವಿರಿ. ನಿಮ್ಮವರನ್ನು ಹೊಗಳಿ ಮೆಚ್ಚಿಸಿ ಅವರಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಕೋಪವನ್ನು ನಿಯಂತ್ರಣದಲ್ಲಿ ಇರಿಸಿದಷ್ಟು ನೀವು ಕಾರ್ಯದಲ್ಲಿ ಸಫಲರಾಗುವಿರಿ.
ಧನು ರಾಶಿ: ಸಣ್ಣ ಸಣ್ಣ ಸಂತೋಷಗಳು ದಿನವನ್ನು ಸುಂದರಗೊಳಿಸುತ್ತವೆ. ಆದರೆ ಭಾವನಾತ್ಮಕವಾಗಿ ತೆಗೆದುಕೊಳ್ಳುವ ನಿರ್ಧಾರಗಳು ಗೊಂದಲ ತರಬಹುದು. ತಾಳ್ಮೆಯಿಂದ ನಡೆದುಕೊಂಡರೆ ಫಲ ಉತ್ತಮ. ಪ್ರಭಾವೀ ವ್ಯಕ್ತಿಗಳಿಂದ ನಿಮಗೆ ವಂಚನೆಯಾಗಿದೆ ಎಂದನಿಸಬಹುದು. ರಸ್ತೆಯಲ್ಲಿ ಸಂಚರಿಸುವಾಗ ಎಚ್ಚರ. ನಿಮ್ಮ ನಡತೆಯಿಂದ ಕುಲಕ್ಕೆ ಅವಮಾನವಾಗಬಹುದು. ನಿದ್ರೆಯನ್ನು ಹೆಚ್ಚು ಮಾಡುವಿರಿ. ಜವಾಬ್ದಾರಿಯನ್ನು ಪಡೆದ ಬೆನ್ನಲ್ಲೇ ಹಿತಶತ್ರುಗಳನ್ನೂ ಹೆಚ್ಚಿಸಿಕೊಳ್ಳುವಿರಿ. ಚಂಚಲವಾದ ಮನಸ್ಸು ನಿಮ್ಮ ಸಂಗಾತಿಗೆ ಇಷ್ಡವಾಗದು. ಆದಾಯ ಮೂಲದ ರಹಸ್ಯವನ್ನು ಹೇಳಿಕೊಳ್ಳುವುದು ಬೇಡ. ನಕಾರಾತ್ಮಕ ಚಿಂತನೆಯನ್ನು ಕಡಿಮೆ ಮಾಡುವುದು ಉತ್ತಮ. ಹಳೆಯ ಗೆಳತಿಯು ನಿಮ್ಮನ್ನು ಇಷ್ಟಪಡಬಹುದು. ಅತಿಯಾದರೆ ಅಮೃತವೂ ವಿಷ ಎನ್ನುವ ಮಾಹಿತಿ ಗೊತ್ತಿರಲಿ. ಎಲ್ಲದಕ್ಕೂ ಸಿಟ್ಟು ಮಾತ್ರವೇ ಪರಿಹಾರವಲ್ಲ. ಮನಸ್ಸಿಗೆ ಹಿತ ನೀಡುವ ದಿನ. ಕುಟುಂಬದವರು ನಿಮ್ಮ ಬೆಂಬಲ ನಿಲ್ಲುವರು.
ಮಕರ ರಾಶಿ: ಹೊಸ ಸಂಪರ್ಕಗಳಿಂದ ಲಾಭ. ಆದರೆ ಅನಗತ್ಯ ಚರ್ಚೆಗಳು ಮನಸ್ಸಿಗೆ ಒತ್ತಡ ತರುತ್ತವೆ. ಸಮಯಕ್ಕೆ ಮಿತಿಮೀರಿ ಮಾತನಾಡದೆ ಇದ್ದರೆ ಉತ್ತಮ. ನಿಮಗೆ ಉದ್ಯೋಗದಿಂದ ನಿವೃತ್ತಿಯು ಬೇಕೆನಿಸಬಹುದು. ಮುಖಂಡರಿಗೆ ಪ್ರಶಂಸೆ ಗೌರವಗಳು ಸಿಗಲಿವೆ. ತೀರ್ಥಕ್ಷೇತ್ರಗಳಿಗೆ ಹೋಗುವ ಮನಸ್ಸಾಗುವುದು. ನೀರಿನ ವಿಷಯದಲ್ಲಿ ಜಾಗಾರೂಕತೆ ಇರಲಿ. ನಟರಿಗೆ ಅವಕಾಶವು ಸಿಕ್ಕೂ ಸಿಗದಂತೆ ಆಗಬಹುದು. ಒಂದೇ ವಿಚಾರವನ್ನು ಹೆಚ್ಚು ಯೋಚಿಸಿದಷ್ಟೂ ಮನಸ್ಸು ದುರ್ಬಲವಾಗಬಹುದು. ಅಲ್ಪ ಮೊತ್ತವನ್ನು ಸಾಮಾಜಿಕ ಕಾರ್ಯಕ್ಕೆ ಕೊಡುವಿರಿ. ಒತ್ತಡವು ಬಂದರೆ ಸ್ವಲ್ಪ ಕಾಲ ಎಲ್ಲವನ್ನೂ ಮರೆತು ಓಡಾಡಿ ಬನ್ನಿ. ರಾಜಕೀಯವಾಗಿ ಮೇಲೆ ಬರಲು ನಿಮ್ಮ ತಂತ್ರಗಾರಿಕೆ ಇರುವುದು. ಸ್ನೇಹಿತರ ಜೊತೆಗಿನ ಓಡಾಟದಿಂದ ನಿಮ್ಮವರಿಗೆ ಅನುಮಾನವು ಬರುವುದು. ನೀವಾಡುವ ಮಾತು ಜವಾಬ್ದಾರಿಯ ಸ್ಥಾನದ್ದು ಎನ್ನುವುದನ್ನು ನೆನಪಿನಲ್ಲಿ ಇಡಿ. ಮಾತು ಮತ್ತು ಯೋಚನೆಯಿಂದ ಕೆಲಸ ಸುಲಭವಾಗುತ್ತದೆ. ಉದ್ಯೋಗದ ಪ್ರಯತ್ನವು ಫಲಿಸುವುದು. ಎಲ್ಲರ ಮೇಲೂ ಅನುಮಾನ ಪಡುವ ದುರಭ್ಯಾಸವು ಬೆಳೆಯಬಹುದು.
ಕುಂಭ ರಾಶಿ: ಹಠ ಮತ್ತು ಹಳೆಯ ವಿಷಯಗಳ ಮೇಲೆ ಒತ್ತಡ ಅಪಯಶಸ್ಸು ತರುವುದು. ವಿನಯದಿಂದ ವರ್ತಿಸಿದರೆ ಯಶಸ್ಸು ನಿಮ್ಮದಾಗುತ್ತದೆ. ಇಂದು ನಿಮಗೆ ಸಣ್ಣ ತಡೆಯೂ ದೊಡ್ಡದಾಗಿ ಕಾಣಿಸುವುದು. ಇಂದು ನಿಮ್ಮ ಯಾವುದಾದರೂ ಕಾರ್ಯಕ್ಕೆ ಸ್ನೇಹಿತರ ಬೆಂಬಲದಿಂದ ಸಾಧ್ಯವಾಗಿಸುವಿರಿ. ಹುಡುಗಾಟಿಕೆಯನ್ನು ಬಿಡುವುದು ನಿಮಗೆ ಕಷ್ಟವಾದೀತು. ಅತಿಯಾದ ಸಂತೋಷದ ಕ್ಷಣವು ನಿಮ್ಮ ಪಾಲಿಗೆ ಇರಲಿದೆ. ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗಲಿದೆ. ವ್ಯವಹಾರದಲ್ಲಿ ಗೊಂದಲವಿಟ್ಟುಕೊಳ್ಳುವುದು ಬೇಡ. ನಿಮ್ಮ ಸೋಲನ್ನು ಒಪ್ಪಿಕೊಳ್ಳದೇ ವಾದಿಸುವಿರಿ. ಪರೀಕ್ಷೆಯ ಸಮಯವಿದ್ದರೂ ವಿದ್ಯಾರ್ಥಿಗಳು ಅನ್ಯ ಚಟುವಟಿಕೆಯಲ್ಲಿ ನಿಶ್ಚಿಂತೆಯಿಂದ ಭಾಗವಹಿಸುವರು. ಆರ್ಥಿಕವಾಗಿ ಸಮತೋಲನದ ದಿನ. ಕುಟುಂಬದಲ್ಲಿ ನೆಮ್ಮದಿ ವಾತಾವರಣ ಇರುತ್ತದೆ. ಸಣ್ಣ ಲಾಭದಿಂದ ಸಂತೋಷ ಸಿಗುತ್ತದೆ. ಯೋಗ್ಯತೆ ಇದ್ದರೂ ಯೋಗವೂ ಜೊತೆಗೆ ಬಂದಾಗ ಸಿಗಬೇಕಾದುದು ಸಿಗಲಿದೆ. ಆತುರದಲ್ಲಿ ಏನನ್ನಾದರೂ ಮಾಡಿಕೊಳ್ಳುವುದು ಬೇಡ.
ಮೀನ ರಾಶಿ: ಆತುರದ ನಿರ್ಧಾರ ಅಪಯಶಸ್ಸಿಗೆ ಕಾರಣವಾಗಬಹುದು. ಶಾಂತ ಮನಸ್ಸಿನಿಂದ ನಡೆದುಕೊಂಡರೆ ದಿನ ಸುಂದರವಾಗಿ ಮುಗಿಯುತ್ತದೆ. ಮೇಲ್ನೋಟಕ್ಕೆ ಯಾವುದನ್ನೂ ತೀರ್ಮಾನಿಸುವುದು ಕಷ್ಟವೇ. ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿ ರಿಂದಲೇ ನೋಡುವುದು ಕಷ್ಟ. ಆಪ್ತರಿಗೆ ಇಷ್ಟವಾದ ಉಡುಗೊರೆಯನ್ನು ಕೊಡಲಿದ್ದೀರಿ. ಅಕಾರಣವಾಗಿ ಬರುವ ಕೋಪವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವಿರಿ. ನಿಜವಾದ ಮಿತ್ರನ ಬಗ್ಗೆ ನಿಮಗೆ ಗೊತ್ತಾಗಲಿದೆ. ಸಂಗಾತಿಯನ್ನು ದೂರ ಕಳಿಸಿಕೊಂಡು ಸಂಕಟಪಡುವಿರಿ. ನಿಮ್ಮ ಆದಾಯವು ಹೆಚ್ಚು ಮಾಡಿಕೊಳ್ಳುವ ಆಕಾಂಕ್ಷೆಯು ಇರಲಿದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಧೈರ್ಯ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ. ಸ್ನೇಹಿತರ ಸಹಕಾರ ಸಿಗುತ್ತದೆ. ಕೆಲವರ ವ್ಯಕ್ತಿತ್ವವು ನಿಮಗೆ ಇಷ್ಟವಾದೀತು. ಅಪರಿಚಿತರು ಇರುವ ಕಡೆ ನೀವು ಮೌನವಾಗಿ ಇರುವಿರಿ. ನಿಮ್ಮ ಬಗ್ಗೆ ನಕಾರಾತ್ಮಕ ಭಾವನೆಯು ಇರಲಿದ್ದು ಅದನ್ನು ಲೆಕ್ಕಿಸದೇ ಕಾರ್ಯದಲ್ಲಿ ಮಗ್ನರಾಗುವಿರಿ. ಇನ್ನೊಬ್ಬರ ಬಗ್ಗೆ ನಿಮ್ಮಲ್ಲಿ ಕುತೂಹಲ ಇರಲಿದೆ.
ಬಿಗ್ಬಾಸ್ (Bigg Boss) ಮನೆಯಲ್ಲಿ ಅಶ್ವಿನಿ ಅವರ ಅಬ್ಬರ ಜೋರಾಗಿದೆ. ಅದರಲ್ಲೂ ಬಿಗ್ಬಾಸ್ ಪ್ರಾರಂಭವಾದ ಮೊದಲ ಕೆಲ ವಾರಗಳಲ್ಲಿ ಅಶ್ವಿನಿ ಅವರು ಇಡೀ ಮನೆಯನ್ನು ನಿಯಂತ್ರಣದಲ್ಲಿ ಇಟ್ಟಿದ್ದರು. ಆದರೆ ತಮ್ಮ ಧಮನಕಾರಿ ಮಾತುಗಳಿಂದಾಗಿ ಸುದೀಪ್ ಅವರಿಂದ ಟೀಕೆಗೆ ಸಹ ಗುರಿಯಾದರು. ರಕ್ಷಿತಾರ ಸ್ಟೇಟಸ್ ಬಗ್ಗೆ ಆಡಿದ ಮಾತು, ಗೆಜ್ಜೆ ವಿಷಯದಲ್ಲಿ ರಕ್ಷಿತಾರನ್ನು ಸಿಕ್ಕಿ ಹಾಕಿಸಿ ಮಜಾ ತೆಗೆದುಕೊಂಡಿದ್ದು, ಕೆಲವರನ್ನು ವೈಯಕ್ತಿಕವಾಗಿ ನಿಂದನೆ ಮಾಡಿದ್ದು, ಹೀಗೆ ಹಲವು ವಿಷಯಗಳಿಗೆ ಸುದೀಪ್ ಅವರಿಂದ ಟೀಕೆಗೆ ಒಳಪಟ್ಟ ಬಳಿಕ ಅಶ್ವಿನಿ ತುಸು ಮೆತ್ತಗಾಗಿದ್ದರು. ಆದರೆ ಕಳೆದ ವಾರ ಮತ್ತೊಮ್ಮೆ ಅವರು ತಮ್ಮ ಹಳೆಯ ವರಸೆ ತೋರಿಸಿದ್ದಾರೆ.
ಕಳೆದ ವಾರ ನೀರಿನ ಟಬ್ನ ಟಾಸ್ಕ್ ಒಂದು ನಡೆದಿತ್ತು. ಈ ವೇಳೆ ಅಶ್ವಿನಿ ಹಾಗೂ ಕಾವ್ಯಾ ಅವರುಗಳು ಪರಸ್ಪರ ಎದುರಾಳಿ ತಂಡಗಳಲ್ಲಿ ಇದ್ದರು. ಇಬ್ಬರೂ ಸಹ ಗೆಲ್ಲಲೇ ಬೇಕೆಂದು ಆಟ ಆಡುತ್ತಿದ್ದರು. ಈ ವೇಳೆ ಅಶ್ವಿನಿ ಅವರು ತಮ್ಮ ತೋಲ್ಬಳ ಬಳಸಿ ಕಾವ್ಯಾ ಅವರನ್ನು ಸೋಲಿಸಿದರು. ಆಗ ಸಿಟ್ಟಾದ ಕಾವ್ಯಾ ಚರ್ಚೆಯ ವೇಳೆ, ‘ಆಯ್ತು ಹೋಗಮ್ಮ’ ಎಂದೇನೋ ಹೇಳಿದರು. ಅದನ್ನು ತುಸು ಅಫೆನ್ಸಿವ್ ಆಗಿ ತೆಗೆದುಕೊಂಡ ಅಶ್ವಿನಿ, ‘ಅದನ್ನೆಲ್ಲ ನಿನ್ನ ಅಮ್ಮನ ಬಳಿ ಹೇಳಿಕೊ’ ಎಂದರು. ಇದು ಕಾವ್ಯಾರನ್ನು ಕೆರಳಿಸಿತು, ‘ನನ್ನ ಅಮ್ಮನ ಬಗ್ಗೆ ಮಾತನಾಡಬೇಡಿ, ಅವರ 10% ಸಹ ನೀವಿಲ್ಲ’ ಎಂದು ಕಿರುಚಾಡಲು ಆರಂಭಿಸಿದರು. ಆದರೆ ಅಶ್ವಿನಿ ‘ನಿನ್ನ ಅಮ್ಮನ ಬಳಿ ಹೇಳು ಹೋಗು’ ಎಂದು ಕೆಲ ಬಾರಿ ಹೇಳಿದರು.
ಶನಿವಾರದ ಎಪಿಸೋಡ್ನಲ್ಲಿ ಸುದೀಪ್ ಅವರು ಈ ವಿಷಯ ಚರ್ಚೆ ಮಾಡಿದರು. ಮೊದಲಿಗೆ ಟಾಸ್ಕ್ ವಿಚಾರವಾಗಿ ಚರ್ಚೆ ಮಾಡಿ, ರಾಶಿಕಾ ಅವರು ಕೆಟ್ಟದಾಗಿ ಉಸ್ತುವಾರಿ ಮಾಡಿದ ರೀತಿಯನ್ನು ಟೀಕೆ ಮಾಡಿದರು. ಆ ನಂತರ ರಘು, ಚೈತ್ರಾ ಇನ್ನಿತರರು ಟಾಸ್ಕ್ ಅನ್ನು ತಪ್ಪಾಗಿ ಅರ್ಥೈಸಿಕೊಂಡು, ತಪ್ಪಾಗಿ ಆಡಿದ್ದರ ಬಗ್ಗೆ ಟೀಕೆ ಮಾಡಿದರು. ‘ನೀವೆಲ್ಲ 10-12 ವರ್ಷ ಮಕ್ಕಳಿಗಿಂತಲೂ ಕಡೆಯಾಗಿ ವರ್ತಿಸಿದಿರಿ. ಪರಸ್ಪರ ಬೈಯ್ಯುವುದು, ಗಿಲ್ಲುವುದು, ಕೂದಲೆಳೆಯುವುದು, ಉಗಿಯುವುದು ಇದೆಲ್ಲ ಆಡುವ ರೀತಿಯೇ?’ ಎಂದು ಸುದೀಪ್ ಪ್ರಶ್ನೆ ಮಾಡಿದರು.
ಅಂತಿಮವಾಗಿ ಅಶ್ವಿನಿ ವಿಷಯಕ್ಕೆ ಬಂದ ಸುದೀಪ್, ‘ಮನೆಯಲ್ಲಿ ಇರುವವರನ್ನು ಬಿಗ್ಬಾಸ್ ಮನೆಗೆ ಏಕೆ ತರುತ್ತೀರಿ, ಕಾವ್ಯಾ ಅವರ ತಾಯಿಯ ವಿಷಯ ನಿಮಗೆ ಯಾಕೆ? ನಿಮ್ಮ ಜಗಳ ಕಾವ್ಯಾ ಜೊತೆಗೆ, ಅವರೊಟ್ಟಿಗೆ ಜಗಳ ಮಾಡಿ, ಅವರ ಮನೆಯವರ ವಿಷಯ ನಿಮಗೆ ಯಾಕೆ? ಅವರ ತಾಯಿಯೂ ಸಹ ಶೋ ನೋಡುತ್ತಿರುತ್ತಾರೆ. ಬಹುಷಃ ಕಾವ್ಯಾರ ತಾಯಿ, ನಿಮ್ಮ ಅಭಿಮಾನಿಯೇ ಆಗಿರಬಹುದು? ಆದರೆ ನೀವು ಆಡಿದ ಮಾತಿನಿಂದ ಅವರ ಮನಸ್ಸಿಗೆ ಎಷ್ಟು ಬೇಸರ ಆಗಿರಬಹುದು’ ಎಂದರು. ಅಶ್ವಿನಿ, ಸ್ಪಷ್ಟನೆ ನೀಡುವ ಪ್ರತಯ್ನ ಮಾಡಿದರಾದರೂ ಸುದೀಪ್ ಅದನ್ನು ಒಪ್ಪಲಿಲ್ಲ, ‘ನೀವು ಏನೇ ಹೇಳಿದರೂ ಸಹ ನಾನು ಒಪ್ಪುವುದಿಲ್ಲ’ ಎಂದರು. ಬಳಿಕ ಅಶ್ವಿನಿ, ಕ್ಷಮೆ ಕೇಳಿದರು. ನಾನು ತಪ್ಪು ಮಾಡಿದೆ, ಅವರ ತಾಯಿಯ ವಿಷಯ ಎತ್ತಬಾರದಿತ್ತು ಎಂದರು.
ಬೆಂಗಳೂರು, ಡಿಸೆಂಬರ್ 20: ರಾಜ್ಯ ರಾಜಕೀಯದಲ್ಲಿ ಪಟ್ಟದಾಟ ಜೋರಾಗಿದೆ. ಈ ಮಧ್ಯೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಬೆಂಗಳೂರಿನ ಖಾಸಗಿ ಅತಿಥಿ ಗೃಹದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಮಾಜಿ ಸಚಿವ ಕೆ.ಎನ್ ರಾಜಣ್ಣ ಭೇಟಿ ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಅಪೆಕ್ಸ್ ಬ್ಯಾಂಕ್ ಚುನಾವಣೆ ವಿಚಾರವಾಗಿ ಚರ್ಚೆ ಮಾಡಿರುವ ಸಾಧ್ಯತೆ ಎನ್ನಲಾಗುತ್ತಿದೆ.
ಮಂಗಳೂರು, ಡಿಸೆಂಬರ್ 20: ಧಾರ್ಮಿಕ ಹಿನ್ನೆಲೆಯ ಕೋಳಿ ಕಾಳಗಕ್ಕೆ ಪೊಲೀಸರಿಂದ ನಿರ್ಬಂಧ ಬೆನ್ನಲ್ಲೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ತಾವೇ ಮುಂದೆ ನಿಂತು ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ(Ashok Kumar Rai) ಕೋಳಿ ಅಂಕ ಮಾಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಕೇಪು ಗ್ರಾಮದ ಸಮೀಪ ಘಟನೆ ನಡೆದಿದೆ. ನಾನಿಲ್ಲೆ ಇರ್ತೇನೆ ನೀವು ಕೋಳಿ ಅಂಕ ಮುಂದುವರಿಸಿ. ಬಂಧಿಸುವುದಾದರೆ ಮೊದಲು ನನ್ನ ಬಂಧಿಸಿ ಎಂದು ಶಾಸಕ ಹೇಳಿದ್ದಾರೆ.
ಉಳ್ಳಾಲ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರೆ ಹಿನ್ನೆಲೆ ವರ್ಷಕ್ಕೊಮ್ಮೆ ಕೋಳಿ ಅಂಕ ನಡೆಯುತ್ತದೆ. ಜೂಜು ಕಟ್ಟದೆ ಕೇವಲ ಪದ್ಧತಿಗಾಗಿ ಕೋಳಿ ಕಾಳಗ ಮಾಡಲಾಗುತ್ತದೆ. ಆದರೆ ಈ ಕೋಳಿ ಅಂಕ ಮಾಡದಂತೆ ವಿಟ್ಲ ಪೊಲೀಸರು ನಿರ್ಬಂಧ ಹೇರಿದ್ದರು. ಖುದ್ದು ಸ್ಥಳಕ್ಕೆ ಬಂದ ಅಶೋಕ್ ಕುಮಾರ್ ರೈ, ಕೋಳಿ ಅಂಕ ನಡೆಸಲು ಅನುಕೂಲ ಮಾಡಿದರು. ಈ ವೇಳೆ ಕೋಳಿ ಅಂಕ ಕಾನೂನು ಬಾಹಿರ ಎಂದ ಸಬ್ಇನ್ಸ್ಪೆಕ್ಟರ್ಗೆ, ಇದು ಧಾರ್ಮಿಕ ಹಿನ್ನೆಲೆಯಲ್ಲಿ ನಡೆಯುವ ಕೋಳಿ ಅಂಕ. 3 ದಿನದ ಬದಲು 1 ದಿನ ನಡೆಯಲಿ ಮೇಲಾಧಿಕಾರಿಗಳಿಗೆ ಈ ಬಗ್ಗೆ ತಿಳಿಸಿ ಎಂದಿದ್ದಾರೆ.
ಕಾನೂನಿಗೆ ವಿರುದ್ಧವಾಗಿ ನಾವು ಯಾವುದನ್ನು ಮಾಡಿಲ್ಲ: ಅಶೋಕ್ ಕುಮಾರ್ ರೈ
ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ಕಾನೂನಿಗೆ ವಿರುದ್ಧವಾಗಿ ನಾವು ಯಾವುದನ್ನು ಮಾಡಿಲ್ಲ. ಪ್ರತಿ ವರ್ಷ ಮೂರು ದಿನ ಕೋಳಿ ಅಂಕ ನಡೆಯುತ್ತೆ. ಇಲ್ಲಿ ಸಾವಿರಾರು ಜನ ದೇವರಲ್ಲಿ ಹರಕೆ ಹೊತ್ತಿರುತ್ತಾರೆ. ಇಲ್ಲಿ ಯಾವುದೇ ಜೂಜುಗಳಿಲ್ಲ, ಧಾರ್ಮಿಕ ನಂಬಿಕೆ. ಹರಕೆ ರೂಪದಲ್ಲಿ ಕೋಳಿ ತಂದು ಅಂಕ ಮಾಡಿಸ್ತಾರೆ ಎಂದರು.
ಕಾನೂನಿನಲ್ಲಿ ಇದಕ್ಕೆ ಅವಕಾಶಗಳಿಲ್ಲ ಅಂತಾ ಗೊತ್ತಿದೆ, ಆದರೆ ಇದು ಜನರ ಧಾರ್ಮಿಕ ಭಾವನೆಗಳ ವಿಚಾರ ಅದಕ್ಕೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದೆವು. 3 ಗಂಟೆ ಅವಕಾಶ ಮಾಡಿಕೊಡಿ ಎಂದು ಕೇಳಿದ್ದೆವು. ಆದರೂ ಸಹ ಪೊಲೀಸರು ಜನರನ್ನ ಚದುರಿಸಲು ಯತ್ನಿಸಿದ್ದಾರೆ. ಧರ್ಮವನ್ನು ಕಿತ್ತುಕೊಳ್ಳುವ ಪ್ರಯತ್ನ ಆಗ್ತಿದೆ. ನನ್ನ ವಿಧಾನಸಭಾ ಕ್ಷೇತ್ರದ ಜನರು ನನ್ನ ಬಳಿ ಹೇಳಿದರು. ನಾನು ಜನರ ಜೊತೆಗೆ ಮೂರು ಗಂಟೆಗಳ ಕಾಲ ಇದ್ದೆ. ಜನರು ತಮ್ಮ ಹರಕೆಯನ್ನು ತೀರಿಸಿದ್ದಾರೆ ಎಂದು ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ಶಾಸಕ ಅಶೋಕ್ ರೈ ಸೇರಿ 17 ಜನ FIR ದಾಖಲು
ವಿಟ್ಲ ಠಾಣೆಯ ಪೊಲೀಸರು ಶಾಸಕ ಅಶೋಕ್ ರೈ ಸೇರಿದಂತೆ 17 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಕಾನೂನು ಬಾಹಿರ ಕೃತ್ಯವನ್ನು ನಡೆಸಲು ಪ್ರಚೋದನೆ ಮತ್ತು ದುಷ್ಪ್ರೇರಣೆಯನ್ನು ನೀಡಿದ ಆರೋಪದ ಮೇಲೆ ಅಶೋಕ್ ರೈ ವಿರುದ್ಧ ಪ್ರಕರಣ ದಾಖಲಾಗಿದೆ. ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ ಎಂದು ಆರೋಪಿಸಿ 16 ಜನರ ವಿರುದ್ದ ಪ್ರಕರಣ ದಾಖಲಾಗಿದೆ.
ಮತ್ತೊಂದು ವೀಕೆಂಡ್ ಬಂದಿದೆ. ಸುದೀಪ್ (Sudeep) ಮತ್ತೆ ಬಂದಿದ್ದಾರೆ. ಶನಿವಾರದ ಎಪಿಸೋಡ್ನಲ್ಲಿ ಸುದೀಪ್ ಅವರು ಸಾಧ್ಯವಾದಷ್ಟು ಗಂಭೀರವಾಗಿರುತ್ತಾರೆ. ಆದರೆ ಶನಿವಾರದ ಎಪಿಸೋಡ್ ಈ ಹಿಂದಿನ ಶನಿವಾರದ ಎಪಿಸೋಡ್ಗಳಿಗಿಂತಲೂ ತುಸು ಭಿನ್ನವಾಗಿತ್ತು. ಸುದೀಪ್ ಅವರು ಆರಂಭದಿಂದ ತುಸು ತಮಾಷೆಯಾಗಿಯೇ ಎಪಿಸೋಡ್ ಪ್ರಾರಂಭಿಸಿದರು. ಅದರಲ್ಲೂ ಸೀಕ್ರೆಟ್ ರೂಂನಲ್ಲಿರುವ ಧ್ರುವಂತ್ ಮತ್ತು ರಕ್ಷಿತಾ ಅವರನ್ನು ಮಾತನಾಡಿಸುವಾಗ ಸ್ವತಃ ನಕ್ಕ ಸುದೀಪ್ ಸ್ಪರ್ಧಿಗಳನ್ನು, ಪ್ರೇಕ್ಷಕರನ್ನೂ ಸಹ ನಗಿಸಿದರು.
‘ನನಗೆ ಈ ವಾರ ಬಹಳ ಎಂಟರ್ಟೈನ್ಮೆಂಟ್ ಆಗಿದ್ದಿದ್ದು ಬಿಗ್ಬಾಸ್ ಮನೆಯ ಮೇಯಿನ್ ಮನೆಯವರ ಆಟ ಅಲ್ಲ. ಬದಲಿಗೆ ಸೀಕ್ರೆಟ್ ರೂಂನಲ್ಲಿದ್ದ ನಿಮ್ಮಿಬ್ಬರ ಆಟ. ನಿಮ್ಮಿಬ್ಬರ ಜಗಳ, ನಿಮ್ಮಿಬ್ಬರ ಚರ್ಚೆ, ನಿಮ್ಮಿಬ್ಬರ ಮಾತುಗಳೇ ನನಗೆ ಹೆಚ್ಚು ಖುಷಿ ಕೊಟ್ಟಿತು. ಆ ಮನೆಯಲ್ಲಿ (ಮುಖ್ಯ ಮನೆಯಲ್ಲಿ) ಸ್ಪರ್ಧಿಗಳು ಟಾಸ್ಕ್, ರೂಲ್ಸ್, ಜಗಳ ಎಂದು ತಲೆ ನೋವು ತರಿಸಿದರು’ ಎಂದರು ಸುದೀಪ್.
ಆದರೆ ರಕ್ಷಿತಾ ಮತ್ತು ಧ್ರುವಂತ್ ಅವರು ಪರಸ್ಪರರ ಬಗ್ಗೆ ದೂರುಗಳ ಸರಮಾಲೆಯನ್ನೇ ಸುದೀಪ್ ಎದುರು ಹೇಳಿದರು. ರಕ್ಷಿತಾ ಅಂತು, ಸುದೀಪ್ ಅವರು ಏನನ್ನಾದರೂ ಕೇಳುವ ಮುಂಚೆಯೇ ಸರ್ ನನಗೆ ಇಲ್ಲಿ ಇರಲು ಆಗುತ್ತಿಲ್ಲ, ನನಗೆ ಇವರನ್ನು ನೋಡೋಕೆ ಸಹ ಆಗಲ್ಲ. ನಾನು ಅವಾಯ್ಡ್ ಮಾಡುತ್ತೇನೆ ಆದರೂ ಬೇರೆ ಆಪ್ಷನ್ ನನಗೆ ಇಲ್ಲ, ನನ್ನನ್ನು ಇಲ್ಲಿಂದ ಕರೆಸಿಕೊಂಡು ಬಿಡಿ, ನನ್ನನ್ನು ಆ ಮನೆಗೆ ಕಳಿಸಿಕೊಡಿ ಎಂದು ಕೇಳಿಕೊಂಡರು.
ಧ್ರುವಂತ್ ಅವರು ಸಹ ರಕ್ಷಿತಾ ಮೇಲೆ ದೂರು ಹೇಳಿದರು. ಆದರೆ ಧ್ರುವಂತ್ ಅವರು, ತುಸು ಗಾಂಭಿರ್ಯದಿಂದ ದೂರುಗಳನ್ನು ಹೇಳಿದರು. ಆದರೆ ಸುದೀಪ್ ಅವರು ನೀವಿಬ್ಬರು ಚೆನ್ನಾಗಿ ಆಡುತ್ತಿದ್ದೀರ, ಹಾಗಾಗಿ ನಿಮ್ಮನ್ನು ಇನ್ನೂ ಒಂದು ವಾರ ಇಲ್ಲೇ ಇಡೋಣ ಅಂದುಕೊಂಡಿದ್ದೀವಿ, ಇನ್ನೂ ಚೆನ್ನಾಗಿ ಆಡಿದರೆ ಇನ್ನೂ ಒಂದು ವಾರ ಇಲ್ಲೇ ಇರಿಸುತ್ತೀವಿ, ನೀವುಗಳು ನೇರವಾಗಿ ಫಿನಾಲೆಗೆ ಇಲ್ಲಿಂದಲೇ ಹೋಗಬಹುದು ಎಂದರು. ಇದು ಧ್ರುವಂತ್ಗೆ ಆಸಕ್ತಿಕರ ಆಯ್ಕೆ ಎನಿಸಿತು, ಆದರೆ ರಕ್ಷಿತಾಗೆ ಇದು ಇಷ್ಟ ಆಗಲಿಲ್ಲ.
ಸುದೀಪ್ ಅವರು ರಕ್ಷಿತಾಗೆ ಅವಕಾಶ ನೀಡಿ, ‘ಆ ಮನೆಗೆ ಹೋಗಲು ನೀವು ಧ್ರುವಂತ್ ಅವರನ್ನು ಒಪ್ಪಿಸಿ ನೋಡೋಣ?’ ಎಂದರು. ಅದರಂತೆ ರಕ್ಷಿತಾ, ಧ್ರುವಂತ್ ಅವರನ್ನು ಒಪ್ಪಿಸುವ ಪ್ರಯತ್ನ ಮಾಡಿದರು. ಆದರೆ ಧ್ರುವಂತ್ ಒಪ್ಪಲಿಲ್ಲ. ಮೂರು-ನಾಲ್ಕು ಬಾರಿ ಪ್ರಯತ್ನ ಮಾಡಿದರೂ ಸಹ ಧ್ರುವಂತ್, ಇಲ್ಲಿಂದ ನೇರವಾಗಿ ಫಿನಾಲೆಗೆ ಹೋಗೋಣ ಆ ಮನೆಗೆ ಹೋಗೋದು ಇಷ್ಟ ಇಲ್ಲ ಎಂದರು. ಎಲ್ಲ ಬುದ್ಧಿವಂತಿಕೆ ಬಳಸಿದ ಬಳಿಕ ಕೊನೆಗೆ ಬೆದರಿಕೆ ಹಾಕಲು ಶುರು ಮಾಡಿದರು ರಕ್ಷಿತಾ, ನೀವು ಇದೇ ಮನೆಯಲ್ಲಿ ಉಳಿಯಬೇಕು ಎಂದರೆ ನಾನು ನಿಮ್ಮನ್ನು ನೆಮ್ಮದಿಯಾಗಿ ಇರಲು ಬಿಡುವುದಿಲ್ಲ’ ಎಂದರು. ಇದು ಧ್ರುವಂತ್ಗೆ ಶಾಕ್ ತಂದಿತು. ಸುದೀಪ್ ಸಹ ರಕ್ಷಿತಾರ ಮಾತು ಕೇಳಿ ನಕ್ಕರು. ಕೊನೆಗೆ ಧ್ರುವಂತ್ ಮತ್ತು ರಕ್ಷಿತಾ ಇಬ್ಬರನ್ನೂ ಮನೆಯೊಳಗೆ ಕಳಿಸಲಾಯ್ತು.
ವಿಶಾಖಪಟ್ಟಣ, ಡಿಸೆಂಬರ್ 20: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ (visakhapatnam) ರಸ್ತೆ ಕಾಮಗಾರಿಯ ಸಮಯದಲ್ಲಿ ಪ್ರಾಚೀನವಾದ ಶ್ರೀರಾಮನ ವಿಗ್ರಹ (Sri Ram Idol) ಪತ್ತೆಯಾಗಿದೆ. ರಸ್ತೆಗೆ ಡಾಂಬರು ಹಾಕಿದ ನಂತರ ಹೆಚ್ಚುವರಿಯಾದ ಮಣ್ಣನ್ನು ಎಲ್ಲೋ ಸುರಿಯಲಾಗಿತ್ತು. ಅದರಲ್ಲಿ ಶ್ರೀರಾಮನ ವಿಗ್ರಹ ಇರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ಸೊಂಟದಿಂದ ತಲೆಯವರೆಗೆ ಮಾತ್ರ ಇರುವ ರಾಮನ ಕಲ್ಲಿನ ವಿಗ್ರಹ ಪತ್ತೆಯಾಗಿದೆ. ಈ ವಿಷಯ ಹರಡುತ್ತಿದ್ದಂತೆ, ರಾಮನ ಪ್ರತಿಮೆಯನ್ನು ನೋಡಲು ಜನರು ಜಮಾಯಿಸಿದರು. ಆ ರಾಮನ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದರು. ಪುರಾತತ್ವ ಇಲಾಖೆಯ ಅಧಿಕಾರಿಗಳು ಈ ವಿಗ್ರಹ ಯಾವ ಕಾಲದ್ದು ಮತ್ತು ಅದು ಎಲ್ಲಿಂದ ಬಂತು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ