ನೆಲಮಂಗಲ, ಜೂನ್ 04: ತಾಲೂಕಿನ ಕುಣಿಗಲ್ ಬೈಪಾಸ್ ಬಳಿ ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್ಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಹಾಸನ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಈ ಆ್ಯಂಬುಲೆನ್ಸ್ ಮಾರ್ಗಮಧ್ಯೆ ಕ್ಯಾಂಟರ್ಗೆ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಅದೃಷ್ಟವಶಾತ್ ಆ್ಯಂಬುಲೆನ್ಸ್ನಲ್ಲಿದ್ದ ರೋಗಿ ಹಾಗೂ ಚಾಲಕ ಸೇರಿ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯ ತೀವ್ರತೆ ಗಮನಿಸಿದರೆ, ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಇನ್ನು ಅಪಘಾತದ ನಡೆದ ಕ್ಷಣಮಾತ್ರದಲ್ಲಿ ಸ್ಥಳೀಯರು ನೆರವಿಗೆ ಧಾವಿಸಿದ್ದು, ಆ್ಯಂಬುಲೆನ್ಸ್ನಲ್ಲಿದ್ದ ರೋಗಿಯನ್ನು ಸುರಕ್ಷಿತವಾಗಿ ಬೇರೆ ವಾಹನಕ್ಕೆ ಸ್ಥಳಾಂತರಿಸಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಅಪಘಾತದ ತೀವ್ರತೆಗೆ ಆ್ಯಂಬುಲೆನ್ಸ್ ಮುಭಾಂಗ ಸಂಪೂರ್ಣ ಜಖಂ ಆಗಿದ್ದು, ಕ್ಯಾಂಟರ್ಗೂ ಅಲ್ಪ ಪ್ರಮಾಣದ ಡ್ಯಾಮೇಜ್ ಆಗಿದೆ.
ತುಮಕೂರು ವಿವಿ ಘಟಿಕೋತ್ಸವದಲ್ಲಿ ದೊಡ್ಡ ಎಡವಟ್ಟುImage Credit source: Tv9 kannada
ತುಮಕೂರು, ಜೂ.4: ತುಮಕೂರು ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾರಿ ಎಡವಟ್ಟು ನಡೆದಿದೆ. ವರ್ಷಗಟ್ಟಲೆ ಕಷ್ಟಪಟ್ಟು ಓದಿ ಪ್ರಥಮ ಸ್ಥಾನ ಗಳಿಸಿ, ಚಿನ್ನದ ಪದಕ (Gold Medal) ಪಡೆಯುವ ಕನಸು ಹೊತ್ತು ಬಂದಿದ್ದ ನೂರಾರು ರ್ಯಾಂಕ್ ವಿದ್ಯಾರ್ಥಿಗಳ ಆಸೆಗೆ ವಿಶ್ವವಿದ್ಯಾಲಯವು ತಣ್ಣೀರೆರಚಿದೆ. ಚಿನ್ನದ ಪದಕ ನೀಡುವ ಬದಲು ಕೇವಲ ಪ್ರಮಾಣ ಪತ್ರ ಮತ್ತು ನಗದು ಹಣದ ಚೆಕ್ ನೀಡಿ ಕೈತೊಳೆದುಕೊಳ್ಳಲು ಮುಂದಾದ ವಿವಿಯ ನಡೆಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ವಿಶ್ವವಿದ್ಯಾಲಯದ ಆವರಣದಲ್ಲಿ ಘಟಿಕೋತ್ಸವ ನಡೆಯುತ್ತಿದ್ದಾಗಲೇ ಈ ಗೊಂದಲ ಸೃಷ್ಟಿಯಾಗಿದೆ. ತಮಗೆ ಚಿನ್ನದ ಪದಕ ನೀಡದಿದ್ದನ್ನು ಕಂಡು ರೊಚ್ಚಿಗೆದ್ದ ರ್ಯಾಂಕ್ ವಿದ್ಯಾರ್ಥಿಗಳು, ಸಮಾರಂಭ ನಡೆಯುತ್ತಿದ್ದ ಸ್ಥಳದಲ್ಲೇ ಪ್ರತಿಭಟನೆಗೆ ಕೂತರು. “ನಮಗೆ ನಗದು ಹಣ ಬೇಡವೇ ಬೇಡ, ನಮ್ಮ ಸಾಧನೆಗೆ ಸಿಗಬೇಕಾದ ಚಿನ್ನದ ಪದಕವೇ ಬೇಕು. ನಾವು ನಿಗದಿತ ಶುಲ್ಕ (Fees) ಪಾವತಿಸಿದ್ದರೂ ನಮಗೆ ಪದಕ ನೀಡಿಲ್ಲ” ಎಂದು ಕಿಡಿಕಾರಿದರು. ವಿದ್ಯಾರ್ಥಿಗಳ ಆಕ್ರೋಶದ ಹಿನ್ನೆಲೆಯಲ್ಲಿ ಘಟಿಕೋತ್ಸವ ಸಮಾರಂಭವು ಕೆಲವು ನಿಮಿಷಗಳ ಕಾಲ ಸ್ಥಗಿತಗೊಂಡಿತ್ತು. ಮಕ್ಕಳ ಸಾಧನೆಯ ಸಂಕೇತವಾದ ಪದಕ ಸಿಗದಿರುವುದನ್ನು ಕಂಡು ಪೋಷಕರೂ ಕೂಡ ತೀವ್ರ ಬೇಸರ ವ್ಯಕ್ತಪಡಿಸಿದರು.
ಇನ್ನು ವಿಶ್ವವಿದ್ಯಾಲಯವು ಪದವಿ ಪ್ರಮಾಣ ಪತ್ರಗಳನ್ನು ಬೇಕಾಬಿಟ್ಟಿಯಾಗಿ ನೀಡಿದೆ ಎಂದು ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ. ಕಳೆದ 17 ಮತ್ತು 18ನೇ ಘಟಿಕೋತ್ಸವದ ಹಳೆಯ ಫೈಲ್ಗಳಲ್ಲೇ ಇಂದಿನ ಪ್ರಮಾಣ ಪತ್ರಗಳನ್ನು ಇಟ್ಟು ಕೊಡಲಾಗಿದೆ. ಪದಕ ನೀಡಲು ವಿವಿಗೆ ಸಾಧ್ಯವಿರಲಿಲ್ಲ ಎಂದರೆ ಘಟಿಕೋತ್ಸವವನ್ನೇ ಮುಂದೂಡಬಹುದಿತ್ತಲ್ಲವೇ? ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ. “ಪದಕ ಸಿಗುವವರೆಗೂ ನಾವು ಈ ಸ್ಥಳದಿಂದ ಕದಲುವುದಿಲ್ಲ” ಎಂದು ಪಟ್ಟು ಹಿಡಿದು ವಿದ್ಯಾರ್ಥಿಗಳು ಕಾದು ಕುಳಿತಿದ್ದರು.
ಸ್ಥಳದಲ್ಲಿ ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಹಿರಿಯ ಅಧಿಕಾರಿಗಳು ತಕ್ಷಣವೇ ವಿದ್ಯಾರ್ಥಿಗಳ ಮನವೊಲಿಸುವ ಕಾರ್ಯಕ್ಕೆ ಮುಂದಾದರು. ಪ್ರಸ್ತುತ ನೀಡಿರುವ ಚೆಕ್ ಬದಲಿಗೆ ಶೀಘ್ರದಲ್ಲೇ ಅಧಿಕೃತವಾಗಿ ಚಿನ್ನದ ಪದಕಗಳನ್ನೇ (Medals) ಮಾಡಿಸಿಕೊಡುವುದಾಗಿ ಅಧಿಕಾರಿಗಳು ಲಿಖಿತ ಭರವಸೆ ನೀಡಿದರು. ಅಧಿಕಾರಿಗಳ ಈ ಭರವಸೆಯ ಬಳಿಕ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆಯನ್ನು ಕೈಬಿಟ್ಟು ಅಲ್ಲಿಂದ ತೆರಳಿದರು.
ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಬರೆದ ಸಿನಿಮಾ ‘ಬಾಹುಬಲಿ’ (Bahubali) ಮತ್ತು ‘ಬಾಹುಬಲಿ 2’ ಸಿನಿಮಾ. ಭಾರತೀಯ ಚಿತ್ರರಂಗವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಸಿನಿಮಾಗಳು ಇವು. ‘ಬಾಹುಬಲಿ’ ಸಿನಿಮಾದ ಎಲ್ಲ ಪಾತ್ರಗಳು ನೆನಪುಳಿಯುವಂಥಹವು. ಇದೀಗ ‘ಬಾಹುಬಲಿ’ ಕತೆಯನ್ನು ಕೇವಲ ಎರಡು ಸಿನಿಮಾಗಳಿಗೆ ಸೀಮಿತವಾಗಲು ಬಿಡದೆ, ನಿರ್ಮಾಣ ಸಂಸ್ಥೆಯು ಇನ್ನಷ್ಟು ಹಿಗ್ಗಿಸಲು ಮುಂದಾಗಿದ್ದು ‘ಬಾಹುಬಲಿ: ದಿ ಎಟರ್ನಲ್’ ಹೆಸರಿನ ಮತ್ತೊಂದು ಸಿನಿಮಾ ನಿರ್ಮಿಸಿದೆ. ಸಿನಿಮಾದ ಟೀಸರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ.
‘ಬಾಹುಬಲಿ: ದಿ ಎಟರ್ನಲ್’ ಅನಿಮೇಷನ್ ಸಿನಿಮಾ ಆಗಿದ್ದು, ನಿನ್ನೆ ಸಂಜೆ, ಎಆರ್ಕೆ (ಆರ್ಕ್) ಮೀಡಿಯಾ ಟೀಸರ್ ಬಿಡುಗಡೆ ಮಾಡಿದೆ. ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಅನಿಮೇಷನ್ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದು, ಈ ಹಿಂದೆ ಬಿಡುಗಡೆ ಮಾಡಿದ್ದ ದೃಶ್ಯಗಳನ್ನೇ ಸೇರಿಸಿ ಈ ಟೀಸರ್ ಬಿಡುಗಡೆ ಮಾಡಲಾಗಿರುವುದು ಅಭಿಮಾನಿಗಳಿಗೆ ನಿರಾಸೆ ತಂದಿದೆ.
‘ಬಾಹುಬಲಿ: ದಿ ಎಟರ್ನಲ್’ ಸಿನಿಮಾವು, ಅಮರೇಂದ್ರ ಬಾಹುಬಲಿ, ಬಲ್ಲಾಳದೇವನಿಂದ ಕೊಲ್ಲಲ್ಪಟ್ಟ ಬಳಿಕ ಬೇರೆ ಲೋಕಕ್ಕೆ ಹೋಗಿ ಅಲ್ಲಿ ದೇವತೆಗಳ ಜೊತೆಗೆ ಯುದ್ಧ ಮಾಡುವ ಕತೆಯನ್ನು ಒಳಗೊಂಡಿದೆ. ಈಗ ಬಿಡುಗಡೆ ಆಗಿರುವ ಟೀಸರ್ನಲ್ಲಿ ಬಾಹುಬಲಿಯು ಪಾತಾಳ ಮಂಡಲಂ ಲೋಕದಲ್ಲಿ ಶಿವನ ಆರಾಧನೆಯಲ್ಲಿ ತೊಡಗಿದ್ದಾನೆ. ಆದರೆ ‘ಬಾಹುಬಲಿ’ಯನ್ನು ವಶಕ್ಕೆ ಪಡೆಯಲು ಇಂದ್ರದೇವ ಬರುತ್ತಾನೆ ಆದರೆ ಇಂದ್ರನನ್ನು, ಬಾಹುಬಲಿಯ ಗೆಳೆಯ ವಿಹಾಸುರ ಎದುರಿಸುತ್ತಾನೆ. ಬೀಕರ ಯುದ್ಧ ನಡೆದು ವಿಹಾಸುರ ಸೋಲುತ್ತಾನೆ. ಬಳಿಕ ಬಾಹುಬಲಿ, ಆನೆಗಳ ರಥದ ಮೇಲೆ ಕುಳಿತು ಬಂದು ಇಂದ್ರನನ್ನೇ ಎದುರಿಸುತ್ತಾನೆ.
ಈ ಅನಿಮೇಟೆಡ್ ಟೀಸರ್ ಅದ್ಭುತವಾಗಿದೆ. ಅದ್ಭುತವಾದ ಆಕ್ಷನ್ ಟೀಸರ್ನಲ್ಲಿದೆ. ಆದರೆ ಈಗ ಟೀಸರ್ನಲ್ಲಿ ಇರುವ ದೃಶ್ಯಗಳನ್ನು ಕೆಲ ತಿಂಗಳುಗಳ ಹಿಂದೆ ಈಗಾಗಲೇ ಬಿಡುಗಡೆ ಮಾಡಲಾಗಿತ್ತು. ಈಗ ಟೀಸರ್ನಲ್ಲಿಯೇ ಅದೇ ದೃಶ್ಯಗಳನ್ನು ಸೇರಿಸಲಾಗಿದೆ. ಅಂದಹಾಗೆ ಸಿನಿಮಾನಲ್ಲಿ ಬಾಹುಬಲಿ ಪಾತ್ರಕ್ಕೆ ಖುದ್ದು ಪ್ರಭಾಸ್ ಧ್ವನಿ ನೀಡಿದ್ದಾರೆ. ರಮ್ಯಾ ಕೃಷ್ಣ ಸಹ ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ.
‘ಬಾಹುಬಲಿ: ದಿ ಎಟರ್ನಲ್ ವಾರ್’ ಸಿನಿಮಾವನ್ನು ಇಶಾನ್ ಶುಕ್ಲ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಪ್ರೆಸೆಂಟ್ ಮಾಡುತ್ತಿರುವುದು ರಾಜಮೌಳಿ, ನಿರ್ಮಾಣ ಆರ್ಕ್ ಮೀಡಿಯಾ, ಸಂಗೀತ ನೀಡಿರುವುದು ಎಂಎಂ ಕೀರವಾಣಿ ಅವರು. ಚಿತ್ರಕತೆ ಬರೆದಿರುವುದು ಸ್ಕಾಟ್ ಮೊಸೀಯರ್ ಸಿನಿಮಾ ಮುಂದಿನ ವರ್ಷ ಅಂದರೆ 2027ರಲ್ಲಿ ಬಿಡುಗಡೆ ಆಗಲಿದೆ.
ರಾಮ್ ಚರಣ್, ಜಾನ್ವಿ ಕಪೂರ್ ಮೊದಲಾದವರು ನಟಿಸಿರುವ ‘ಪೆದ್ದಿ’ ಇಂದು (ಜೂನ್ 4) ಬಿಡುಗಡೆ ಆಗಿದೆ. ಈ ಸಂದರ್ಭದಲ್ಲಿ ಜಾನ್ವಿ ಕಪೂರ್ ಅವರು ಆಂಧ್ರಪ್ರದೇಶದ ಪವಿತ್ರ ಕ್ಷೇತ್ರ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಪಡೆದಿದ್ದಾರೆ. ಮೆಟ್ಟಿಲುಗಳ ಮಾರ್ಗವಾಗಿ ನಡೆದುಕೊಂಡೇ ಬೆಟ್ಟ ಹತ್ತಿದ ಅವರು, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಪ್ರತಿ ಬಾರಿಯೂ ತಮ್ಮ ಯಾವುದೇ ಹೊಸ ಸಿನಿಮಾ ತೆರೆಗೆ ಬರುವ ಮುನ್ನ ತಿರುಪತಿಗೆ ಭೇಟಿ ನೀಡುವುದನ್ನು ಜಾನ್ವಿ ಕಪೂರ್ ರೂಢಿಸಿಕೊಂಡಿದ್ದಾರೆ. ಈ ವಿಶೇಷ ಸಂಪ್ರದಾಯವನ್ನು ಅವರು ಸತತವಾಗಿ ಪಾಲಿಸುತ್ತಾ ಬಂದಿದ್ದಾರೆ. ಈ ಭಕ್ತಿಯ ನಡೆ ಅವರ ಸಿನಿಮಾಗಳ ಮೇಲಿರುವ ಶ್ರದ್ಧೆ ಮತ್ತು ಧಾರ್ಮಿಕ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.
ಈ ಹಿಂದೆ ತಮ್ಮ ಚೊಚ್ಚಲ ಚಿತ್ರ ‘ಧಡಕ್’ ಬಿಡುಗಡೆಯ ಮುನ್ನ ತಂದೆ ಬೋನಿ ಕಪೂರ್ ಜೊತೆ ಜಾನ್ವಿ ಇಲ್ಲಿಗೆ ಬಂದಿದ್ದರು. ಇತ್ತೀಚಿನ ‘ದೇವರ’ ಮತ್ತು ‘ಪರಂ ಸುಂದರಿ’ ಚಿತ್ರಗಳ ಬಿಡುಗಡೆಯ ವೇಳೆಯೂ ಅವರು ತಿರುಪತಿಗೆ ಭೇಟಿ ನೀಡಿದ್ದರು. ಅವರ ತಾಯಿ, ದಿವಂಗತ ನಟಿ ಶ್ರೀದೇವಿ ಅವರೂ ಸಹ ಪ್ರತಿ ವರ್ಷ ತಮ್ಮ ಜನ್ಮದಿನದಂದು ತಿರುಪತಿಗೆ ಭೇಟಿ ನೀಡುವ ಸಂಪ್ರದಾಯ ಹೊಂದಿದ್ದರು. ತಾಯಿಯ ಅಗಲಿಕೆಯ ನಂತರ ಜಾನ್ವಿ ಕಪೂರ್ ಅದೇ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದ ಕೇವಲ ನಾಲ್ಕೇ ದಿನಗಳಲ್ಲಿ ಕ್ಯಾಪ್ಟನ್ ರಜತ್ ಪಾಟಿದಾರ್ ಮತ್ತೆ ಮೈದಾನಕ್ಕಿಳಿದಿದ್ದಾರೆ. ಅವರು ಮಧ್ಯಪ್ರದೇಶ ಲೀಗ್ ಆಡುತ್ತಿದ್ದು, ಮೊದಲ ಪಂದ್ಯದಲ್ಲೇ ಸೋಲಿನ ಆಘಾತ ಎದುರಾಗಿದೆ. ಹೋಳ್ಕರ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಎಂಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಗ್ವಾಲಿಯರ್ ಚೀತಾಸ್ ತಂಡವನ್ನು ಮುನ್ನಡೆಸಿದ ಪಾಟಿದಾರ್, ಉಜ್ಜಯಿನಿ ಫಾಲ್ಕನ್ಸ್ ವಿರುದ್ಧ 92 ರನ್ಗಳ ಹೀನಾಯ ಸೋಲು ಅನುಭವಿಸಿದರು.
ಪಂದ್ಯದಲ್ಲಿ ಟಾಸ್ ಗೆದ್ದ ಗ್ವಾಲಿಯರ್ ಚೀತಾಸ್ ನಾಯಕ ರಜತ್ ಪಾಟಿದಾರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಆದರೆ ಈ ನಿರ್ಧಾರ ಸಂಪೂರ್ಣವಾಗಿ ಕೈಕೊಟ್ಟಿತು. ಮೊದಲು ಬ್ಯಾಟಿಂಗ್ ಮಾಡಿದ ಉಜ್ಜಯಿನಿ ಫಾಲ್ಕನ್ಸ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 221 ರನ್ಗಳ ಬೃಹತ್ ಮೊತ್ತ ಪೇರಿಸಿತು. ಆರಂಭಿಕರಾದ ಚಂಚಲ್ ರಾಥೋಡ್ ಮತ್ತು ಯಶ್ ದುಬೆ ಉತ್ತಮ ಅಡಿಪಾಯ ಹಾಕಿಕೊಟ್ಟರು.
ಡೆಲ್ಲಿ ಕ್ಯಾಪಿಟಲ್ಸ್ ಯುವ ಆಟಗಾರನ ಅಬ್ಬರ
ಉಜ್ಜಯಿನಿ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಗಿದ್ದು ಡೆಲ್ಲಿ ಕ್ಯಾಪಿಟಲ್ಸ್ನ ಯುವ ಆಲ್ ರೌಂಡರ್ ಮಾಧವ್ ತಿವಾರಿ. ಇತ್ತೀಚೆಗಷ್ಟೇ ಐಪಿಎಲ್ನಲ್ಲಿ ಮಿಂಚಿದ್ದ 22 ವರ್ಷದ ತಿವಾರಿ, ಗ್ವಾಲಿಯರ್ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಒಟ್ಟಾರೆ 31 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ಗಳ ನೆರವಿನಿಂದ ಅಜೇಯ 62 ರನ್ ಚಚ್ಚಿದರು. ಈ ಮೂಲಕ ತಂಡದ ಮೊತ್ತ 220ರ ಗಡಿ ದಾಟಿತು.
ಕೇವಲ 11 ರನ್ಗೆ ಔಟಾದ ಪಾಟಿದಾರ್; ಗ್ವಾಲಿಯರ್ ಧೂಳೀಪಟ
222 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಗ್ವಾಲಿಯರ್ ಚೀತಾಸ್ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇಂದೋರ್ ಅಂಗಳದಲ್ಲಿ ತವರಿನ ಪ್ರೇಕ್ಷಕರ ಸಮ್ಮುಖದಲ್ಲಿ ಬ್ಯಾಟಿಂಗ್ ಮಾಡಲು ಬಂದ ನಾಯಕ ರಜತ್ ಪಾಟಿದಾರ್ ಕೇವಲ 11 ರನ್ ಗಳಿಸಿ ನಿರಾಸೆ ಮೂಡಿಸಿದರು.
ಗ್ವಾಲಿಯರ್ ಪರ ಸ್ಥಳೀಯ ಬ್ಯಾಟರ್ ಪಾರ್ಥ್ ಚೌಧರಿ ಒಂಟಿ ಹೋರಾಟ ನಡೆಸಿ, ಕೇವಲ 18 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ 46 ರನ್ ಚಚ್ಚಿ ಚೇತರಿಕೆ ನೀಡಿದರೂ ಪ್ರಯೋಜನ ಆಗಲಿಲ್ಲ. ಉಳಿದವರಿಂದ ಯಾವುದೇ ಬೆಂಬಲ ಸಿಗದ ಕಾರಣ ಗ್ವಾಲಿಯರ್ ತಂಡ 14.2 ಓವರ್ಗಳಲ್ಲಿ ಕೇವಲ 129 ರನ್ಗಳಿಗೆ ಆಲೌಟ್ ಆಯಿತು. ಉಜ್ಜಯಿನಿ ಪರ ಆಯುಷ್ ಮಂಕರ್ 3 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಎಂಪಿಎಲ್ನಲ್ಲಿ ಉಜ್ಜಯಿನಿ ಫಾಲ್ಕನ್ಸ್ ಭರ್ಜರಿ ಜಯದೊಂದಿಗೆ ಅಭಿಯಾನ ಆರಂಭಿಸಿದೆ.
ಸಂಪೂರ್ಣ ಹದಗೆಟ್ಟಿರುವ ರಸ್ತೆImage Credit source: Times Of India
ಬೆಂಗಳೂರು, ಜೂನ್ 04: ಮಳೆಗಾಲದಲ್ಲಿ ರಸ್ತೆ ಸಂಚಾರ ಯೋಗ್ಯವಾಗಿರಲೆಂದು ಬೆಂಗಳೂರಿನ (Bengaluru) ಜಾಲಹಳ್ಳಿ ಪೂರ್ವದ ಬೃಹತ್ ಅಪಾರ್ಟ್ಮೆಂಟ್ ಸಮುಚ್ಚಯವೊಂದರ ನಿವಾಸಿಗಳು ಪ್ರತಿವರ್ಷ ತಮ್ಮ ಹಣದಲ್ಲಿಯೇ ರಸ್ತೆ ದುರಸ್ತಿ ಮಾಡಿಸುತ್ತಿದ್ದಾರೆ. ನಗರ ಪಾಲಿಕೆ ಅಥವಾ ಜನಪ್ರತಿನಿಧಿಗಳು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ವಿಫಲರಾಗಿರುವ ಕಾರಣ 1,000ಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ಅಪಾರ್ಟ್ಮೆಂಟ್ ನಿವಾಸಿಗಳಿಗಿದು ಅನಿವಾರ್ಯವಾಗಿದೆ. ಗಂಗಮ್ಮ ಗುಡಿ ಪೊಲೀಸ್ ಠಾಣೆ ರಸ್ತೆಯನ್ನು ಕುವೆಂಪುನಗರಕ್ಕೆ ಸಂಪರ್ಕಿಸುವ ಸುಮಾರು 100 ಮೀಟರ್ ಉದ್ದದ ರಸ್ತೆಯಲ್ಲಿ ಜಲ್ಲಿ ಕಲ್ಲು ಹಾಕಲು ವರ್ಷಕ್ಕೆ ಸುಮಾರು 80,000 ವೆಚ್ಚವನ್ನು ಇವರು ಮಾಡುತ್ತಿದ್ದಾರೆ ಎನ್ನಲಾಗಿದೆ.
ನಿವಾಸಿಗಳ ಪ್ರಕಾರ ವಿವಿಧ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಹಾಗೂ ನಾಗರಿಕ ಸಂಸ್ಥೆಗಳ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಅಧಿಕಾರಿಗಳು ಸ್ಥಳಕ್ಕೂ ಭೇಟಿ ನೀಡಿದ್ದಾರೆ. ಆದರೆ ಇದುವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ನಿವೃತ್ತ ನೌಕಾಪಡೆ ಅಧಿಕಾರಿ ಹಾಗೂ ನಿವಾಸಿ ಉನ್ನಿ ಕೃಷ್ಣನ್ ಮೆನನ್ ತಿಳಿಸಿದ್ದಾರೆ. ರಸ್ತೆ ಅಭಿವೃದ್ಧಿಯಾಗದ ಕಾರಣ ಅದರ ಸುತ್ತಮುತ್ತಲಿನ ಪ್ರದೇಶ ಕಸದ ತಾಣವಾಗಿ ಮಾರ್ಪಟ್ಟಿದೆ. ಜೊತೆಗೆ ಮಾದಕ ವಸ್ತು ವ್ಯಸನಿಗಳು ಈ ಪ್ರದೇಶವನ್ನು ತಮ್ಮ ಚಟುವಟಿಕೆಗಳಿಗೆ ಬಳಸುತ್ತಿರುವುದು ಮತ್ತೊಂದು ಸಮಸ್ಯೆಯಾಗಿದೆ ಎಂದು ನಿವಾಸಿ ವಿವೇಕ್ ಬಾಲಾಜಿ ಹೇಳಿದ್ದಾರೆ.
ಜಮೀನು ವಿವಾದಕ್ಕೆ ಸಂಬಂಧಿಸಿದ ನ್ಯಾಯಾಲಯದ ವ್ಯಾಜ್ಯ ಬಾಕಿ ಇರುವುದರಿಂದ ಸರ್ಕಾರಿ ಸಂಸ್ಥೆಗಳು ಶಾಶ್ವತ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯಿಂದ ಕುಡಿಯುವ ನೀರಿನ ಸಂಪರ್ಕ ಮತ್ತು ಬಿಎಂಟಿಸಿ ಬಸ್ ಸೇವೆಗಳ ಮೇಲೂ ಪರಿಣಾಮ ಬೀರಿದೆ. ಈ ರಸ್ತೆ ಕಳೆದ ಹತ್ತು ವರ್ಷಗಳಿಂದ ಸಂಪರ್ಕ ರಸ್ತೆಯಾಗಿ ಬಳಕೆಯಲ್ಲಿದೆ. ಆದರೂ ಇದು ಇನ್ನೂ ಸುರಕ್ಷಿತವಾಗಿಲ್ಲ. ಇಲ್ಲಿ ಹಲವರು ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ. ಕಾನೂನು ವಿವಾದ ಬಗೆಹರಿಯುವವರೆಗೂ ಕನಿಷ್ಠ ರಸ್ತೆಯನ್ನು ಸುರಕ್ಷಿತವಾಗಿಸುವಂತೆ ನಮ್ಮ ಮನವಿ ಎಂದು ಅಪಾರ್ಟ್ಮೆಂಟ್ ಮಾಲೀಕರ ಸಂಘದ ಕಾರ್ಯದರ್ಶಿ ನಟೇಶ್ ಮುತ್ತಣ್ಣ ಹೇಳಿದ್ದಾರೆ.
ಬೆಂಗಳೂರು ಉತ್ತರ ನಗರ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ನಾಗಪ್ಪ ಕಾಮಾಟಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಹಿಂದಿನ ಕಾರ್ಪೊರೇಟರ್ಗಳು ಜಮೀನಿನ ಹಕ್ಕುದಾರರ ಒಪ್ಪಿಗೆ ಪಡೆಯಲು ಹಲವು ಪ್ರಯತ್ನಗಳನ್ನು ನಡೆಸಿದ್ದರು. ಅನುಮತಿ ದೊರೆತ ತಕ್ಷಣ ರಸ್ತೆ ಡಾಂಬರೀಕರಣ ಕಾಮಗಾರಿ ಕೈಗೊಳ್ಳಬಹುದು ಎಂದು ತಿಳಿಸಿರೋದಾಗಿ ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಹಾಲು ಅಥವಾ ಎಣ್ಣೆ ಚೆಲ್ಲುವಂತಹ ಘಟನೆImage Credit source: Pinterest
ಮನೆಯಲ್ಲಿ ಕೆಲವೊಂದು ಆಕಸ್ಮಿಕ ಘಟನೆಗಳು ನಡೆಯುವುದು ಸಾಮಾನ್ಯ. ಆದರೆ, ಹಿಂದೂ ನಂಬಿಕೆಗಳು ಮತ್ತು ವಾಸ್ತುಶಾಸ್ತ್ರದ ಪ್ರಕಾರ, ಪದೇ ಪದೇ ಹಾಲು ಅಥವಾ ಎಣ್ಣೆ ಚೆಲ್ಲುವಂತಹ ಘಟನೆಗಳು ಶುಭ ಅಥವಾ ಅಶುಭ ಸೂಚನೆಗಳನ್ನು ನೀಡುತ್ತವೆ. ಈ ಶಕುನಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವುಗಳ ಹಿಂದಿನ ಮಹತ್ವವನ್ನು ಅರಿತುಕೊಳ್ಳುವುದು ಮುಖ್ಯ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಹಾಲು ಚೆಲ್ಲುವಿಕೆ ಶುಭ ಸಂಕೇತ:
ಹಾಲು ಹಿಂದೂ ಸಂಸ್ಕೃತಿಯಲ್ಲಿ ಶುದ್ಧತೆ, ಸಮೃದ್ಧಿ ಮತ್ತು ಪವಿತ್ರತೆಯ ಸಂಕೇತವಾಗಿದೆ. ಗೃಹ ಪ್ರವೇಶದಂತಹ ಶುಭ ಕಾರ್ಯಗಳಲ್ಲಿ ಹಾಲು ಉಕ್ಕಿಸುವುದು ಸಾಮಾನ್ಯ. ಇದು ಮನೆಯಲ್ಲಿ ಹೊಸ ಜೀವನ ಮತ್ತು ಸಮೃದ್ಧಿಯ ಪ್ರಾರಂಭವನ್ನು ಸೂಚಿಸುತ್ತದೆ. ಪದೇ ಪದೇ ಹಾಲು ಆಕಸ್ಮಿಕವಾಗಿ ಚೆಲ್ಲಿದರೆ ಅಥವಾ ಉಕ್ಕಿದರೆ, ಅದು ಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಇದು ಮನೆಯಲ್ಲಿ ಸಮೃದ್ಧಿ ಹೆಚ್ಚಳ, ದೈವಬಲ ಮತ್ತು ಗ್ರಹಬಲದ ವೃದ್ಧಿ, ಹಾಗೂ ಅದೃಷ್ಟದ ಆಗಮನವನ್ನು ಸೂಚಿಸುತ್ತದೆ. ಹಾಲು ಚಂದ್ರನ ಪ್ರತೀಕವಾಗಿದ್ದು, ವಿಷ್ಣು ಅನುಗ್ರಹವನ್ನು ನಿಮ್ಮ ಮನೆಗೆ ತರುತ್ತಿದೆ ಎಂಬುದರ ಸೂಚಕವಾಗಿದೆ. ವಿಷ್ಣು ಸ್ಥಿತಿಕಾರಕನಾಗಿರುವುದರಿಂದ, ಈ ಸೂಚನೆಯು ಮನೆಯಲ್ಲಿ ಶಾಂತಿ, ನೆಮ್ಮದಿ, ಸೌಖ್ಯ, ಹಣಕಾಸಿನ ಯೋಗ, ಆರ್ಥಿಕ ಯೋಗ, ಉತ್ತಮ ಆರೋಗ್ಯ, ವ್ಯಾಪಾರ-ವ್ಯವಹಾರಗಳಲ್ಲಿ ಪ್ರಗತಿ ಮತ್ತು ವಿವಾಹ ವಿಷಯಗಳಲ್ಲಿ ಶುಭ ಸುದ್ದಿಯನ್ನು ಸಹ ತರುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಈ ಶುಭ ಫಲಗಳು ಆಕಸ್ಮಿಕವಾಗಿ ಹಾಲು ಚೆಲ್ಲಿದಾಗ ಮಾತ್ರ ಅನ್ವಯಿಸುತ್ತವೆ ಹೊರತು ಉದ್ದೇಶಪೂರ್ವಕವಾಗಿ ಚೆಲ್ಲುವುದರಿಂದಲ್ಲ.
ಎಣ್ಣೆ ಚೆಲ್ಲುವಿಕೆ ಅಶುಭ ಸಂಕೇತ:
ಮನೆಯಲ್ಲಿ ಪದೇ ಪದೇ ಎಣ್ಣೆ, ಅದು ಅಡುಗೆ ಎಣ್ಣೆಯಾಗಲಿ ಅಥವಾ ತಲೆಗೆ ಉಪಯೋಗಿಸುವ ಎಣ್ಣೆಯಾಗಲಿ, ಕೈಯಿಂದ ಜಾರಿ ಚೆಲ್ಲುವುದು ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಿಂದೂ ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರದ ಪ್ರಕಾರ, ಎಣ್ಣೆ ಶನಿ ಗ್ರಹಕ್ಕೆ ಪ್ರತೀಕವಾಗಿದೆ. ಎಣ್ಣೆ ಚೆಲ್ಲಿದಾಗ ಅದು ಮನೆಯಲ್ಲಿ ಅಥವಾ ವ್ಯಕ್ತಿಯ ಜೀವನದಲ್ಲಿ ಕೆಲವು ರೀತಿಯ ಸಂಕಷ್ಟಗಳನ್ನು ಸೂಚಿಸುತ್ತದೆ. ಇದು ಸಾಲಬಾಧೆ, ಆರ್ಥಿಕ ಸಂಕಷ್ಟಗಳು, ಅನಾರೋಗ್ಯ, ಅಥವಾ ಕುಟುಂಬ ಸದಸ್ಯರ ನಡುವೆ ಕಲಹಗಳು ಹೆಚ್ಚಾಗುವುದನ್ನು ಸೂಚಿಸುತ್ತದೆ. ಇದು ಜಾಗ್ರತೆಯಿಂದಿರಬೇಕು ಎಂದು ಎಚ್ಚರಿಸುವ ಒಂದು ಸೂಚಕವಾಗಿದೆ.
ಪರಿಹಾರ ಮತ್ತು ಜಾಗೃತಿ:
ಎಣ್ಣೆ ಚೆಲ್ಲುವುದು ಅಶುಭ ಸೂಚನೆಯಾಗಿದ್ದರೂ, ಅದಕ್ಕೆ ಪ್ರಾಯಶ್ಚಿತ್ತ ಮತ್ತು ಪರಿಹಾರಗಳನ್ನು ಸೂಚಿಸಲಾಗಿದೆ. ಎಣ್ಣೆ ಪದೇ ಪದೇ ಚೆಲ್ಲಿದಾಗ, ಶನಿ ಭಗವಾನರ ದರ್ಶನ ಮಾಡಿಕೊಂಡು, ಅವರ ದೇವಸ್ಥಾನದಲ್ಲಿ ದೀಪ ಹಚ್ಚಿ ಪ್ರಾರ್ಥಿಸುವುದು ಉತ್ತಮ. ಈ ಮೂಲಕ ಶನಿ ಗ್ರಹದ ಅಶುಭ ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ನಂಬಲಾಗಿದೆ. ಮಹಿಳೆಯರು ಮತ್ತು ಕುಟುಂಬ ಸದಸ್ಯರು ಈ ಎರಡು ವಿಷಯಗಳಲ್ಲಿ ಜಾಗೃತಿಯಿಂದ ಇರುವುದು ಸೂಕ್ತ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಟೆಲ್ ಅವಿವ್, ಜೂನ್ 04: ಪಶ್ಚಿಮ ಏಷ್ಯಾದಲ್ಲಿ ದೀರ್ಘಕಾಲದ ಸಂಘರ್ಷವನ್ನು ಕೊನೆಗಾಣಿಸಿ ಶಾಂತಿ ಪುನಃಸ್ಥಾಪಿಸುವ ನಿಟ್ಟಿನಲ್ಲಿ ಅತ್ಯಂತ ಆಶಾದಾಯಕ ಬೆಳವಣಿಗೆಯೊಂದು ನಡೆದಿದೆ. ಅಮೆರಿಕದ ವಿದೇಶಾಂಗ ಇಲಾಖೆಯ ಯಶಸ್ವಿ ಮಧ್ಯಸ್ಥಿಕೆಯಲ್ಲಿ ನಡೆದ ನಾಲ್ಕನೇ ಸುತ್ತಿನ ಮಾತುಕತೆಯ ನಂತರ, ಇಸ್ರೇಲ್(Israel) ಮತ್ತು ಲೆಬನಾನ್ ದೇಶಗಳು ಕದನ ವಿರಾಮವನ್ನು ನವೀಕರಿಸಲು ಐತಿಹಾಸಿಕ ಒಪ್ಪಂದ ಮಾಡಿಕೊಂಡಿವೆ. ಈ ಮಹತ್ವದ ನಿರ್ಧಾರವು ಇಡೀ ಕೊಲ್ಲಿ ವಲಯದಲ್ಲಿ ಯುದ್ಧದ ಕಾರ್ಮೋಡಗಳನ್ನು ಸರಿಸಿ, ಜಾಗತಿಕ ರಾಜತಾಂತ್ರಿಕ ಮಾತುಕತೆಗಳಿಗೆ ಹೊಸ ಚೈತನ್ಯ ನೀಡಿದೆ.
ಏನಿದೆ ಹೊಸ ಒಪ್ಪಂದದಲ್ಲಿ?
ಜಂಟಿ ಹೇಳಿಕೆಯ ಪ್ರಕಾರ, ದಕ್ಷಿಣ ಲೆಬನಾನ್ನಲ್ಲಿ ಉಭಯ ದೇಶಗಳ ಭದ್ರತೆಗಾಗಿ ವಿಶೇಷ ವಲಯಗಳನ್ನು ಸ್ಥಾಪಿಸಲಾಗುವುದು. ಲಿಟಾನಿ ನದಿಯ ದಕ್ಷಿಣ ಭಾಗದಿಂದ ಹಿಜ್ಬೊಲ್ಲಾ ಪಡೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲಾಗುವುದು ಮತ್ತು ಈ ಪ್ರಮುಖ ಪ್ರದೇಶಗಳ ಸಂಪೂರ್ಣ ಭದ್ರತಾ ಜವಾಬ್ದಾರಿಯನ್ನು ಲೆಬನಾನ್ನ ಅಧಿಕೃತ ಸಶಸ್ತ್ರ ಪಡೆಗಳು ವಹಿಸಿಕೊಳ್ಳಲಿವೆ. ಲೆಬನಾನ್ನ ಭವಿಷ್ಯವನ್ನು ಅಲ್ಲಿನ ಸಾರ್ವಭೌಮ ಸರ್ಕಾರ ಮಾತ್ರ ನಿರ್ಧರಿಸಲಿದ್ದು, ಯಾವುದೇ ಹೊರಗಿನ ದೇಶಗಳ ಹಸ್ತಕ್ಷೇಪವನ್ನು ತಿರಸ್ಕರಿಸಲು ಎರಡೂ ಕಡೆ ಒಪ್ಪಿಕೊಂಡಿವೆ. ಇದು ಸಮಗ್ರ ಪ್ರಾದೇಶಿಕ ಶಾಂತಿಗೆ ಭದ್ರ ಬುನಾದಿ ಹಾಕಿದೆ.
ಇರಾನ್ ಶಾಂತಿ ಮಾತುಕತೆಯ ಮೇಲೆ ಇದರ ಸಕಾರಾತ್ಮಕ ಪರಿಣಾಮವೇನು?
ಈ ಇಸ್ರೇಲ್-ಲೆಬನಾನ್ ಕದನ ವಿರಾಮವು ಕೇವಲ ಎರಡು ದೇಶಗಳಿಗಷ್ಟೇ ಸೀಮಿತವಾಗಿರದೆ, ಇರಾನ್ ಒಳಗೊಂಡಿರುವ ಜಾಗತಿಕ ಶಾಂತಿ ಮಾತುಕತೆಗಳಿಗಿದ್ದ ಅತಿ ದೊಡ್ಡ ಅಡ್ಡಿಯೊಂದನ್ನು ಯಶಸ್ವಿಯಾಗಿ ನಿವಾರಿಸಿದೆ. ಈ ಹಿಂದೆ ಇರಾನ್, ಲೆಬನಾನ್ನಲ್ಲಿ ಇಸ್ರೇಲಿ ದಾಳಿಗಳು ನಿಲ್ಲುವವರೆಗೂ ತಾನು ಅಮೆರಿಕ ಮತ್ತು ಇತರ ಮಧ್ಯವರ್ತಿಗಳೊಂದಿಗಿನ ಮಾತುಕತೆ ಮುಂದುವರೆಸುವುದಿಲ್ಲ ಎಂದು ಹೇಳಿತ್ತು. ಈಗ ಅಲ್ಲಿ ಕದನ ವಿರಾಮ ಘೋಷಣೆಯಾಗಿರುವುದರಿಂದ, ಇರಾನ್ ಜಾಗತಿಕ ಒಪ್ಪಂದಗಳ ಮೇಲಿನ ಚರ್ಚೆಗೆ ಮರಳಲು ಅತ್ಯಂತ ಸೌಹಾರ್ದಯುತ ವಾತಾವರಣ ಸೃಷ್ಟಿಯಾಗಿದೆ.
ಲೆಬನಾನ್ನಲ್ಲಿ ಕದನ ವಿರಾಮ ಜಾರಿಯಾಗುತ್ತಿದ್ದಂತೆ, ಇರಾನ್ ಕೂಡ ಅಮೆರಿಕದೊಂದಿಗೆ ವಿಶಾಲವಾದ ಪ್ರಾದೇಶಿಕ ಭದ್ರತೆ ಮತ್ತು ಆರ್ಥಿಕ ನಿರ್ಬಂಧಗಳ ಮುಕ್ತಿಯ ಕುರಿತು ಚರ್ಚೆಗಳನ್ನು ಪುನರಾರಂಭಿಸಲು ಸಜ್ಜಾಗುತ್ತಿದೆ. ಅಮೆರಿಕದ ಯಶಸ್ವಿ ರಾಜತಾಂತ್ರಿಕ ಮುತ್ಸದ್ದಿತನ ಹಾಗೂ ಇಸ್ರೇಲ್-ಲೆಬನಾನ್ ತೋರಿರುವ ಈ ಸಕಾರಾತ್ಮಕ ನಿಲುವು ಇಡೀ ಮಧ್ಯಪ್ರಾಚ್ಯದಲ್ಲಿ ಸ್ಥಿರತೆ ತರಲಿದ್ದು, ಜಾಗತಿಕ ಮಾರುಕಟ್ಟೆ ಮತ್ತು ವಿಶ್ವ ಶಾಂತಿಯ ದೃಷ್ಟಿಯಿಂದ ಅತ್ಯಂತ ಒಳ್ಳೆಯ ಸುದ್ದಿ ಎಂದೇ ಹೇಳಬಹುದು.
ನಟ ರಣವೀರ್ ಸಿಂಗ್ ವಿರುದ್ಧದ ಅಸಹಕಾರ ನಿರ್ದೇಶನವನ್ನು ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ ಹಿಂತೆಗೆದುಕೊಂಡಿದೆ. ಫರ್ಹಾನ್ ಅಖ್ತರ್ ನಿರ್ದೇಶನದ ಡಾನ್ 3 ಚಿತ್ರದಿಂದ ಅವರು ಹಠಾತ್ತನೆ ಹಿಂದೆ ಸರಿದ ನಂತರ ಫೆಡರೇಶನ್ ಅವರ ವಿರುದ್ಧ ಈ ನಿರ್ಧಾರವನ್ನು ಘೋಷಿಸಿತ್ತು. ಇಂಡಿಯನ್ ಮೋಷನ್ ಪಿಕ್ಚರ್ ಅಸೋಸಿಯೇಷನ್ ಮತ್ತು ಸಿನಿ ಮತ್ತು ಟಿವಿ ಕಲಾವಿದರ ಸಂಘದ ಹಸ್ತಕ್ಷೇಪದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಫೆಡರೇಶನ್ ಸ್ಪಷ್ಟಪಡಿಸಿದೆ. ಈ ಸಮಯದಲ್ಲಿ, CINTA ಪ್ರಧಾನ ಕಾರ್ಯದರ್ಶಿ ಮತ್ತು ನಟಿ ಉಪಾಸನಾ ಸಿಂಗ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. CINTA ಫೆಡರೇಶನ್ ಅನ್ನು ಮರುಪರಿಶೀಲಿಸಿ ನಿಷೇಧವನ್ನು ತೆಗೆದುಹಾಕುವಂತೆ ವಿನಂತಿಸಿತ್ತು.
‘ನಮ್ಮ ಮನವಿಯನ್ನು ಆಲಿಸಿ ಈ ನಿರ್ಧಾರ ತೆಗೆದುಕೊಂಡಿದ್ದಕ್ಕಾಗಿ ನಾನು ಫೆಡರೇಶನ್ಗೆ ತುಂಬಾ ಕೃತಜ್ಞನಾಗಿದ್ದೇನೆ. ಏಕೆಂದರೆ ಸಿನ್ಟಾ ಕಲಾವಿದರ ಸಂಘ. ಕಲಾವಿದರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಈ ಚಲನಚಿತ್ರೋದ್ಯಮವು ಒಂದು ಕುಟುಂಬ. ಕುಟುಂಬದಲ್ಲಿ ಜಗಳಗಳು, ಒಡಹುಟ್ಟಿದವರ ನಡುವೆ ವಿವಾದಗಳು ಇರುವಂತೆಯೇ, ಇಲ್ಲಿಯೂ ಅದು ಸಂಭವಿಸುತ್ತದೆ. ನಾವು ಅದನ್ನು ಚರ್ಚಿಸುವ ಮೂಲಕ ಮತ್ತು ಪರಸ್ಪರ ಸಂವಹನ ನಡೆಸುವ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು. ನಾವು ನೇರವಾಗಿ ನ್ಯಾಯಾಲಯಕ್ಕೆ ಹೋಗುವ ಅಗತ್ಯವಿಲ್ಲ. ಅಸಹಕಾರ ಆದೇಶವನ್ನು ಹಿಂತೆಗೆದುಕೊಳ್ಳುವ ಮೂಲಕ ಫೆಡರೇಶನ್ ತುಂಬಾ ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡಿದೆ’ ಎಂದು ಅವರು ಹೇಳಿದರು.
‘ಯಾರಿಗೂ ಹಾನಿ ಮಾಡಬಾರದು ಎಂಬುದು ನಮ್ಮ ನಿಲುವು. ನಿರ್ಮಾಪಕರು ಮತ್ತು ನಿರ್ದೇಶಕರ ಜೊತೆಗೆ, ರಣವೀರ್ ಕೂಡ ಯಾವುದೇ ಹಾನಿ ಮಾಡಬಾರದು. ಏಕೆಂದರೆ ಈ ಬಾರಿ, ಅವರು ಈ ಉದ್ಯಮವನ್ನು ನಿಲ್ಲುವಂತೆ ಮಾಡಿದ ನಟ ಎಂದು ನಾನು ಹೇಳುತ್ತೇನೆ. ಎಷ್ಟು ಚಿತ್ರಗಳು ವಿಫಲವಾಗಿವೆ ಮತ್ತು ಈ ಉದ್ಯಮ ಯಾವ ಪರಿಸ್ಥಿತಿಯನ್ನು ಎದುರಿಸಿದೆ ಎಂದು ನಿಮಗೆ ತಿಳಿದಿರಬೇಕು. ಅಂತಹ ಸಮಯದಲ್ಲಿ, ರಣವೀರ್ ಸಿಂಗ್ ಅವರ ‘ಧುರಂಧರ್’ ಮತ್ತು ‘ಧುರಂಧರ್ 2’ ಚಿತ್ರಗಳು ಇತಿಹಾಸ ಸೃಷ್ಟಿಸಿವೆ. ಈ ಚಿತ್ರಕ್ಕೆ ಅಂತಹ ನಟರು ತುಂಬಾ ಬೇಕು. ನನ್ನ ಮಗ ‘ಧುರಂಧರ್’ ಚಿತ್ರವನ್ನು ಐದು ಬಾರಿ ನೋಡಿದ್ದಾನೆ. ಈ ಚಿತ್ರವನ್ನು ಎಷ್ಟು ಬಾರಿ ಬೇಕಾದರೂ ನೋಡಬಹುದು ಎಂದು ಅವನು ನನಗೆ ಹೇಳುತ್ತಾನೆ. ಅನೇಕ ಜನರ ಮನೆಗಳು ಒಂದು ಚಿತ್ರದಿಂದಾಗಿ ನಡೆಯುತ್ತವೆ. ನಟರು, ನಿರ್ದೇಶಕರು ಅಥವಾ ನಿರ್ಮಾಪಕರು ಗಳಿಸುವುದಲ್ಲದೆ, ಲೈಟ್ಮೆನ್, ಸ್ಪಾಟ್ಬಾಯ್ಸ್ ಮುಂತಾದ ಅನೇಕ ಜನರ ಕುಟುಂಬಗಳು ಸಹ ಬೆಂಬಲಿತವಾಗಿವೆ. ಅಂತಹ ಸಿನಿಮಾಗಳನ್ನು ಮಾಡಬೇಕು’ ಎಂದಿದ್ದಾರೆ ಅವರು.
ರಣವೀರ್ ಸಿಂಗ್ ಅವರಿಂದ ಬಂದ ನೋಟಿಸ್ಗೆ ಕಾನೂನು ಇಲಾಖೆ ಪ್ರತಿಕ್ರಿಯಿಸಲಿದೆ ಎಂದು ಫೆಡರೇಶನ್ ಸ್ಪಷ್ಟಪಡಿಸಿದೆ. ‘ಅವರೆಲ್ಲರೂ ಮಾಡಿದ ಮನವಿ ಮತ್ತು ಚಲನಚಿತ್ರೋದ್ಯಮದ ವ್ಯಾಪಕ ಹಿತಾಸಕ್ತಿಯನ್ನು ಪರಿಗಣಿಸಿ, ರಣವೀರ್ ವಿರುದ್ಧದ ಆದೇಶವನ್ನು ನಾವು ತಕ್ಷಣವೇ ರದ್ದುಗೊಳಿಸುತ್ತಿದ್ದೇವೆ. ರಣವೀರ್, ಎಕ್ಸೆಲ್ ಎಂಟರ್ಟೈನ್ಮೆಂಟ್ ಮತ್ತು ಎಲ್ಲಾ ಚಲನಚಿತ್ರ ಸಂಘಗಳು ಒಟ್ಟಾಗಿ ಕುಳಿತು ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಬೇಕೆಂದು ನಾವು ಮನವಿ ಮಾಡುತ್ತಿದ್ದೇವೆ. ಇದರಿಂದ ಯಾರೂ ಇದರಲ್ಲಿ ಮೋಸ ಹೋಗಬಾರದು. ಎಲ್ಲಾ ಚಲನಚಿತ್ರ ಸಂಘಗಳು ಒಟ್ಟಾಗಿ ಕುಳಿತು ಈ ಸಮಸ್ಯೆಯನ್ನು ಪರಿಹರಿಸಬೇಕೆಂಬುದು ನಮ್ಮ ಮೂಲ ಬಯಕೆಯಾಗಿತ್ತು. ರಣವೀರ್ ಮುಂದೆ ಬಂದು ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಬೇಕೆಂದು ನಾವು ಮನವಿ ಮಾಡುತ್ತೇವೆ’ ಎಂದು FWICE ನ ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ಹೇಳಿದರು.
ಐದು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ 1,500ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನೀಡಿ, 8,000ಕ್ಕೂ ಅಧಿಕ ಹಾಡುಗಳನ್ನು ರಚಿಸಿದವರು ಇಳಯರಾಜಾ. ಬ್ರಿಟನ್ನ ರಾಯಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾದಿಂದ ‘ಮಾಸ್ಟ್ರೋ’ ಬಿರುದು ಪಡೆದ ಮೊದಲ ಏಷ್ಯನ್ ಇವರಾಗಿದ್ದಾರೆ. ಆದರೆ, ಇವರ ಸಂಗೀತ ಜಗತ್ತಿನಾದ್ಯಂತ ವಾಣಿಜ್ಯಿಕವಾಗಿ ಕೋಟಿ ಕೋಟಿ ಗಳಿಸಿದರೂ, ಅದರ ಲಾಭವೆಲ್ಲಾ ನಿರ್ಮಾಪಕರು ಹಾಗೂ ಆಡಿಯೋ ಕಂಪನಿಗಳ ಪಾಲಾಯಿತೇ ಹೊರತು ಇಳಯರಾಜಾಗೆ ಸಿಕ್ಕಿದ್ದು ತೀರಾ ಕಡಿಮೆ. ಈ ಶೋಷಣೆಯ ವಿರುದ್ಧ ಧ್ವನಿ ಎತ್ತಿದ ಮೊದಲ ಭಾರತೀಯ ಸಂಗೀತ ನಿರ್ದೇಶಕ ಇಳಯರಾಜಾ.
ಕಾನೂನಿನ ಲೋಪದೋಷಗಳನ್ನು ಬಳಸಿಕೊಂಡು ರಾಯಲ್ಟಿ ನೀಡದ ಆಡಿಯೋ ಲೇಬಲ್ಗಳ ವಿರುದ್ಧ ಇಳಯರಾಜಾ 2014 ರಿಂದಲೇ ಕಾನೂನು ಹೋರಾಟ ಆರಂಭಿಸಿದರು. ಮದ್ರಾಸ್ ಹೈಕೋರ್ಟ್ ಇವರ ಪರವಾಗಿ ತಡೆಯಾಜ್ಞೆ ನೀಡಿತು. ಒಪ್ಪಂದದ ಅವಧಿ ಮುಗಿದರೂ ತನ್ನ ಸಂಗೀತ ಬಳಸಿದ್ದಕ್ಕಾಗಿ ‘ಎಜಿ ಮ್ಯೂಸಿಕ್’ ಸಂಸ್ಥೆಯಿಂದ ಕೋಟ್ಯಂತರ ರೂಪಾಯಿ ರಾಯಲ್ಟಿ ಕೇಳಿ ನ್ಯಾಯಾಲಯದ ಮೆಟ್ಟಿಲೇರಿದರು.
ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು 2017ರಲ್ಲಿ. ತಮ್ಮದೇ ಆಪ್ತ ಸ್ನೇಹಿತರಾಗಿದ್ದ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಚಿತ್ರಾ ಮತ್ತು ಎಸ್.ಪಿ. ಚರಣ್ ನಡೆಸುತ್ತಿದ್ದ ಕಾನ್ಸರ್ಟ್ನಲ್ಲಿ ಅನುಮತಿಯಿಲ್ಲದೆ ತಮ್ಮ ಹಾಡುಗಳನ್ನು ಹಾಡಬಾರದೆಂದು ಇಳಯರಾಜಾ ನೋಟಿಸ್ ಕಳುಹಿಸಿದರು. ಇದು ಇಡೀ ಚಿತ್ರರಂಗವನ್ನು ಬೆಚ್ಚಿಬೀಳಿಸಿತು. ಆದರೆ, ತಜ್ಞರ ಪ್ರಕಾರ ಇದು ಗಾಯಕರ ಮೇಲಲ್ಲ, ಕೋಟಿಗಟ್ಟಲೆ ಟಿಕೆಟ್ ಹಣ ಗಳಿಸುವ ದೊಡ್ಡ ಈವೆಂಟ್ ಸಂಘಟಕರ ವಿರುದ್ಧದ ಹೋರಾಟವಾಗಿತ್ತು.
ಇತ್ತೀಚೆಗೆ ‘ಕೂಲಿ’ ಸಿನಿಮಾದ ಟೀಸರ್ನಲ್ಲಿ ಅನುಮತಿಯಿಲ್ಲದೆ ತಮ್ಮ ಸಂಗೀತ ಬಳಸಿದ್ದಕ್ಕಾಗಿ ಸನ್ ಪಿಕ್ಚರ್ಸ್ ಹಾಗೂ ನಿರ್ದೇಶಕ ಲೋಕೇಶ್ ಕನಕರಾಜ್ಗೆ ನೋಟಿಸ್ ನೀಡಿದ್ದರು. ಹಾಗೆಯೇ ಸೂಪರ್ ಹಿಟ್ ಮಲಯಾಳಂ ಸಿನಿಮಾ ‘ಮಂಜುಮ್ಮೆಲ್ ಬಾಯ್ಸ್’ ತಂಡದ ಮೇಲೆಯೂ ಇಳಯರಾಜಾ ಹಕ್ಕುಸ್ವಾಮ್ಯದ ಮೊಕದ್ದಮೆ ಹೂಡಿದ್ದರು. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ಇವರ ಐದು ಹಾಡುಗಳನ್ನು ಬಳಸಿದ್ದಕ್ಕಾಗಿ ಕೊನೆಗೆ 50 ಲಕ್ಷ ರೂ. ನೀಡಿ ಇವರೊಂದಿಗೆ ರಾಜೀ ಮಾಡಿಕೊಂಡಿತು.
ಆದರೆ, ಎಲ್ಲಾ ತೀರ್ಪುಗಳು ಇವರ ಪರವಾಗಿ ಬರಲಿಲ್ಲ. ದೆಹಲಿ ಹೈಕೋರ್ಟ್ ಇತ್ತೀಚೆಗೆ ‘ಸರೆಗಮ’ ಸಂಸ್ಥೆಯೊಂದಿಗಿನ ವಿವಾದದಲ್ಲಿ ಇಳಯರಾಜಾಗೆ ಹಿನ್ನಡೆ ನೀಡಿತು. 1957ರ ಹಕ್ಕುಸ್ವಾಮ್ಯ ಕಾಯ್ದೆಯ ಪ್ರಕಾರ, ಒಪ್ಪಂದ ಮಾಡಿಕೊಳ್ಳದಿದ್ದರೆ ಸಿನಿಮಾದ ನಿರ್ಮಾಪಕನೇ ಸಂಗೀತದ ಮೊದಲ ಮಾಲೀಕನಾಗುತ್ತಾನೆ.
ಸಿನಿಮಾ ರಂಗದಲ್ಲಿ ಸಂಗೀತಗಾರರ ಹಕ್ಕುಗಳನ್ನು ಕಡೆಗಣಿಸುವುದನ್ನು ಇಳಯರಾಜಾ ಒಪ್ಪಲಿಲ್ಲ. ತಮ್ಮ ಆಪ್ತರನ್ನೇ ಎದುರು ಹಾಕಿಕೊಂಡರೂ, ಹತ್ತು ವರ್ಷಗಳಿಗೂ ಹೆಚ್ಚು ಕಾಲ ಅವರು ನಡೆಸಿದ ಈ ಸತತ ಹೋರಾಟ ಭಾರತೀಯ ಸಂಗೀತ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಇಳಯರಾಜಾ ಅವರ ಈ ರೋಚಕ ಜೀವನಗಾಥೆಯ ಬಯೋಪಿಕ್ 2024 ರಲ್ಲಿ ಘೋಷಣೆಯಾಗಿದ್ದು, ನಟ ಧನುಷ್ ಇವರ ಪಾತ್ರದಲ್ಲಿ ನಟಿಸುತ್ತಿದ್ದಾರೆ.