ಮಾರ್ಚ್​​9ರಿಂದ ಕಲರ್ಸ್ ಕನ್ನಡದಲ್ಲಿ ಬರ್ತಿದೆ ಹೊಸ ಧಾರಾವಾಹಿ ‘ರಾಣಿ’ – Kannada News | Colors Kannada Unveils ‘Rani’: A Heartfelt Tale of Mother Daughter Love and Jail

ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಹೊಸ ಹೊಸ ಧಾರಾವಾಹಿಗಳು ಪ್ರಸಾರ ಕಾಣುತ್ತಾ ಇವೆ. ಎಲ್ಲ ಧಾರಾವಾಹಿಗಳು ಭಿನ್ನ ಕಥೆಗಳನ್ನು ಹೊಂದಿರುತ್ತವೆ. ಈಗ ಕಲರ್ಸ್‌ ಕನ್ನಡ ವಾಹಿನಿ ‘ರಾಣಿ’ ಹೆಸರಿನ ಧಾರಾವಾಹಿ ಮೂಲಕ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದೆ. ಅಮ್ಮ-ಮಗಳ ನಿಷ್ಕಲ್ಮಶ ಪ್ರೀತಿಯನ್ನು ಹೇಳಲಾಗುತ್ತಿದೆ. ಮಾರ್ಚ್ 9ರಿಂದ ಸಂಜೆ 6 ಗಂಟೆಗೆ ಕಲರ್ಸ್‌ ಕನ್ನಡದಲ್ಲಿ ಈ ಧಾರಾವಾಹಿ ಪ್ರಸಾರ ಕಾಣಲಿದೆ.

ʻರಾಣಿʼ ಕಥೆ ಜೈಲಿನಿಂದ ಆರಂಭ ಆಗುತ್ತದೆ. ಅಮ್ಮ ಹಾಗೂ ಮಗಳ ಜೈಲಿನಲ್ಲಿರುತ್ತಾರೆ. ನಿಯಮದ ಪ್ರಕಾರ ಮಗಳು ಹೊರ ಹೋಗುತ್ತಾಳೆ. ಇಷ್ಟು ದಿನ ಹೊರಗಿನ ಜಗತ್ತನ್ನೇ ಕಾಣದ ಮುಗ್ಧ ಮಗು ರಾಣಿ ಹೊರಗೆ ಏನೆಲ್ಲ ಸಮಸ್ಯೆ ಎದುರಿಸುತ್ತಾಳೆ ಎಂಬುದನ್ನು ಧಾರಾವಾಹಿಯಲ್ಲಿ ಹೇಳಲಾಗುತ್ತಿದೆ. ಇನ್ನು ಮಗಳು ಇದ್ದೂ ಇಲ್ಲದಂತೆ ತಾಯಿ ಜೈಲಿನಲ್ಲಿ ಇರಬೇಕಾದ ಪರಿಸ್ಥಿತಿ ಬರುತ್ತದೆ. , ಕಾನೂನು ಮತ್ತು ವಿಧಿ ಇಬ್ಬರನ್ನೂ ಬೇರ್ಪಡಿಸುತ್ತದೆ.

‘ರಾಣಿ’ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣಲಿದೆ. ಕನ್ನಡದಲ್ಲಿ ಕೃಷ್ಣ ಸುಂದರಿ, ‘ಮುದ್ದು ಮಣಿಗಳು’ ಧಾರಾವಾಹಿಯಲ್ಲಿ ನಟಿಸಿರೋ ಅನುಭವ ಇರುವ ಐಶ್ವರ್ಯಾ ಅವರ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಧನ್ವಿ ಅವರು ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ತಾಂತ್ರಿಕವಾಗಿ ಮತ್ತು ಕಲಾತ್ಮಕವಾಗಿ ‘ರಾಣಿ’ ಬಹಳ ಶ್ರೀಮಂತವಾಗಿದೆ. ಸ್ವಪ್ನ ಕೃಷ್ಣ ಅವರು ಈ ಧಾರಾವಾಹಿಯನ್ನು ನಿರ್ದೇಶಿಸುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ರಾಣಿಯಾಗಿ ಬಾಲ ನಟಿ ಧನ್ವಿ ತನ್ನ ಮುಗ್ಧ ಅಭಿನಯದ ಮೂಲಕ ಈಗಾಗಲೇ ಪ್ರೋಮೋಗಳ ಮೂಲಕ ಮನೆಮಾತಾಗಿದ್ದಾಳೆ. ನಾಯಕನಾಗಿ ಆರವ್ ಸೂರ್ಯ ಇದ್ದಾರೆ.

ಇದನ್ನೂ ಓದಿ: ‘ಯಜಮಾನ’ ಧಾರಾವಾಹಿಗೆ ಯಮುನಾ ಶ್ರೀನಿಧಿ ಎಂಟ್ರಿ

ಸಮಾಜವು ಜೈಲನ್ನು ಮತ್ತು ಅಲ್ಲಿನವರನ್ನು ನೋಡುವ ದೃಷ್ಟಿಕೋನಕ್ಕೂ, ರಾಣಿಯ ಮುಗ್ಧ ಕಣ್ಣುಗಳು ಕಾಣುವ ಪ್ರಪಂಚಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಜೈಲಿನ ಕಂಬಿಗಳಿಗಿಂತಲೂ ಪ್ರೀತಿಯೇ ಶಕ್ತಿಶಾಲಿ ಎಂಬುದನ್ನು ಈ ಧಾರಾವಾಹಿ ಸಾರುತ್ತದೆ. ಮಾರ್ಚ್ 9ರಿಂದ ಸಂಜೆ 6 ಗಂಟೆಗೆ ಪ್ರಾರಂಭವಾಗಲಿರುವ ಈ ಧಾರಾವಾಹಿ ಮೊದಲೇ ನಿರೀಕ್ಷೆ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪುತ್ತೂರಿನಲ್ಲಿ ವಿದ್ಯಾರ್ಥಿನಿಯರಿಗೆ ‘ದಿ ಕೇರಳ ಸ್ಟೋರಿ 2’ ಉಚಿತ ಪ್ರದರ್ಶನಕ್ಕೆ ತೀವ್ರ ವಿರೋಧ; ಯುವತಿಯರಿಗೆ ಬಂತು ಬೆದರಿಕೆ ಕರೆ! – Kannada News | Puttur’s “Kerala Story 2” Free Screening Sparks Controversy and Threat calls

ಪುತ್ತೂರಿನಲ್ಲಿ ವಿದ್ಯಾರ್ಥಿನಿಯರಿಗೆ ‘ದಿ ಕೇರಳ ಸ್ಟೋರಿ 2’ ಉಚಿತ ಪ್ರದರ್ಶನಕ್ಕೆ ತೀವ್ರ ವಿರೋಧ; ಯುವತಿಯರಿಗೆ ಬಂತು ಬೆದರಿಕೆ ಕರೆ!

ಮಂಗಳೂರು, ಮಾರ್ಚ್ 06:​ ‘ದಿ ಕೇರಳ ಸ್ಟೋರಿ 2′ (The Kerala Story 2) ಚಿತ್ರವು ಬಿಡುಗಡೆಗೂ ಮುನ್ನವೇ ಹಲವಾರು ಕಾನೂನು ಮತ್ತು ರಾಜಕೀಯ ವಿವಾದಗಳಿಗೆ ಗುರಿಯಾಗಿತ್ತು. ಪ್ರಮುಖವಾಗಿ ಚಿತ್ರದಲ್ಲಿನ ಲವ್ ಜಿಹಾದ್ ಮತ್ತು ಬಲವಂತದ ಮತಾಂತರದ ಚಿತ್ರಣಗಳು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುತ್ತವೆ ಎಂಬ ಆರೋಪಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಲವ್ ಜಿಹಾದ್ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ದಿ ಕೇರಳ ಸ್ಟೋರಿ 2 ಚಿತ್ರದ ಉಚಿತ ಪ್ರದರ್ಶನ ಆಯೋಜನೆ ಮಾಡಲಾಗಿದ್ದು, ಇದರ ಸುತ್ತ ಹಲವು ವಿವಾದಗಳು ಹುಟ್ಟಿಕೊಂಡಿವೆ.

ಮಾಲ್​ ಬಹಿಷ್ಕರಿಸುವಂತೆ ಕರೆ!

ಪುತ್ತೂರಿನ ಜಿಎಲ್ ಒನ್ ಮಾಲ್‌ನಲ್ಲಿ ಸೀತಾ ಪರಿವಾರ ಸಂಘಟನೆಯಿಂದ ಈ ಕೆಲಸ ನಡೆದಿದೆ. 16 ರಿಂದ 22 ವರ್ಷದ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸಿನಿಮಾ ಪ್ರದರ್ಶನ ನೀಡುವ ವ್ಯವಸ್ಥೆ ಮಾಡಲಾಗಿತ್ತು. ನಿನ್ನೆ ಸಂಜೆ ಮೂರು ಪ್ರದರ್ಶನಗಳನ್ನು ಆಯೋಜಿಸಲಾಗಿದ್ದು, ಇದಕ್ಕೆ ಬಿಜೆಪಿ ಹಾಗೂ ಹಿಂದು ಸಂಘಟನೆಗಳ ಮುಖಂಡರು ಸಹ ಬೆಂಬಲ ವ್ಯಕ್ತಪಡಿಸಿದ್ದರು.

ಆದರೆ ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಸಂದೇಶಗಳು ವೈರಲ್ ಆಗಿವೆ. ಜಿಎಲ್ ಒನ್ ಮಾಲ್‌ಗೆ ಮುಸ್ಲಿಂ ಸಮುದಾಯದವರು ಹೋಗಬಾರದು ಎಂಬ ರೀತಿಯ ಸಂದೇಶಗಳು ಹರಿದಾಡುತ್ತಿದ್ದು, ಮಾಲ್‌ನ್ನು ಬಹಿಷ್ಕರಿಸುವಂತೆ ಕರೆ ನೀಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಇನ್ನು ಮುಂದೆ ಜಿಎಲ್ ಮಾಲ್‌ಗೆ ಹೋಗುವ ಮುಸ್ಲಿಂ ಯುವತಿಯರು ಎಚ್ಚರಿಕೆಯಿಂದಿರಿ ಎಂಬಂತಹ ಸಂದೇಶಗಳೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ ವಿದ್ಯಾರ್ಥಿನಿಯರಿಗೆ ‘ದಿ ಕೇರಳ ಸ್ಟೋರಿ 2’ ಉಚಿತ ಪ್ರದರ್ಶನ

ಸಿನೆಮಾ ನೋಡಿ ವಿದ್ಯಾರ್ಥಿನಿಯರಿಗೆ ಬೆದರಿಕೆ!

ಇದೇ ವೇಳೆ ಸಿನಿಮಾ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಬೆದರಿಕೆ ಕರೆಗಳ ಆರೋಪವೂ ಕೇಳಿಬಂದಿದೆ. ಕಾರ್ಯಕ್ರಮಕ್ಕೆ ಸಂಬಂಧಿಸಿದ ಪೋಸ್ಟರ್‌ನಲ್ಲಿ ಬುಕ್ಕಿಂಗ್‌ಗಾಗಿ ಮಹಿಳೆಯರ ಮೊಬೈಲ್ ಸಂಖ್ಯೆಯನ್ನು ನೀಡಲಾಗಿತ್ತು. ಆ ಸಂಖ್ಯೆಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗಿದ್ದು, ಮಹಿಳೆಯರಿಗೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ. ಕೆಲ ಕರೆಗಳು ವಿದೇಶಗಳಿಂದ ಬಂದಿರುವ ಸಾಧ್ಯತೆಯೂ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.

ಈ ಬಗ್ಗೆ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಪ್ರತಿಕ್ರಿಯಿಸಿ, ಸ್ಥಳೀಯ ಮತಾಂಧ ಶಕ್ತಿಗಳು ಹಾಗೂ ಕೆಲವರು ವಿದೇಶದಿಂದ ಕರೆ ಮಾಡಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಚಾರವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇಂತಹ ಬೆದರಿಕೆಗಳಿಗೆ ನಾವು ಜಗ್ಗುವುದಿಲ್ಲ. ಮುಂದೆಯೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ಮುಂದುವರಿಸುತ್ತೇವೆ ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿದುಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನಾನು ತಪ್ಪು ಮಾಡ್ಬಿಟ್ಟೆ: ಹ್ಯಾರಿ ಬ್ರೂಕ್ ಪಶ್ಚಾತ್ತಾಪ – Kannada News | I made a big mistake dropping Sanju Samson: Harry Brook

T20 World Cup 2026: ಟಿ20 ವಿಶ್ವಕಪ್​ನ ಸೆಮಿಫೈನಲ್ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಹೋರಾಟಕ್ಕೆ ಆಂಗ್ಲರಿಗೆ ಸೋಲುಣಿಸಿ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿತು. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 253 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡವು 20 ಓವರ್​ಗಳಲ್ಲಿ 246 ರನ್​ಗಳಿಸಿ ವಿರೋಚಿತವಾಗಿ ಸೋಲೊಪ್ಪಿಕೊಂಡಿತು.

ಈ ಸೋಲಿನ ಬಳಿಕ ಮಾತನಾಡಿದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್, ನಮ್ಮ ಸೋಲಿಗೆ ನಾನೇ ಕಾರಣ ಎಂದರು. ಏಕೆಂದರೆ ಈ ಪಂದ್ಯದಲ್ಲಿ ನಾನು ಕೈ ಬಿಟ್ಟ ಕ್ಯಾಚ್ ಇಡೀ ಪಂದ್ಯದ ಚಿತ್ರಣ ಬದಲಿಸಿತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಪಂದ್ಯದ ಮೊದಲ ಇನಿಂಗ್ಸ್​ನ 3ನೇ ಓವರ್​ನಲ್ಲಿ ಸಂಜು ಸ್ಯಾಮ್ಸನ್ ಸುಲಭ ಕ್ಯಾಚ್ ನೀಡಿದ್ದರು. ಆದರೆ ಮಿಡ್ ವಿಕೆಟ್​ನಲ್ಲಿ ಫೀಲ್ಡಿಂಗ್​ನಲ್ಲಿದ್ದ ಹ್ಯಾರಿ ಬ್ರೂಕ್ ಈ ಸುಲಭ ಕ್ಯಾಚ್ ಅನ್ನು ಕೈ ಚೆಲ್ಲಿದ್ದರು.

ಹೀಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 89 ರನ್ ಚಚ್ಚಿದ್ದರು. ಈ ವಿಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಟೀಮ್ ಇಂಡಿಯಾ 253 ರನ್​ ಕಲೆಹಾಕಲು ಸಾಧ್ಯವಾಯಿತು.

ಈ ಒಂದು ಕ್ಯಾಚ್ ಕೈ ಬಿಟ್ಟಿರುವ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿರುವ ಹ್ಯಾರಿ ಬ್ರೂಕ್, ನಾನು ಸಂಜು ಸ್ಯಾಮ್ಸನ್ ಅವರ ಕ್ಯಾಚ್ ಬಿಟ್ಟು ದೊಡ್ಡ ತಪ್ಪು ಮಾಡಿದೆ. ಎಂದಿನಂತೆ ಕ್ಯಾಚ್‌ಗಳು ಪಂದ್ಯಗಳನ್ನು ಗೆಲ್ಲಿಸುತ್ತದೆ. ದುರದೃಷ್ಟವಶಾತ್ ನನ್ನಿಂದಾಗಿ ತಂಡ ನಷ್ಟ ಅನುಭವಿಸಿತು.

ಒಂದು ವೇಳೆ ನಾನು ಆ ಕ್ಯಾಚ್ ಹಿಡಿದಿದ್ದರೆ ಪಂದ್ಯದ ಮೇಲೆ ಆರಂಭದಲ್ಲೇ ನಾವು ಹಿಡಿತ ಸಾಧಿಸಬಹುದಿತ್ತು. ಆದರೆ ನಾನು ಕೈ ಮೇಲೆಕ್ಕೆತ್ತಿ ಮಾಡಿದ ತಪ್ಪು ಭಾರೀ ನಷ್ಟವನ್ನುಂಟು ಮಾಡಿತು ಎಂದು ಹ್ಯಾರಿ ಬ್ರೂಕ್ ಹೇಳಿದ್ದಾರೆ.

ಇನ್ನು ಈ ಪಂದ್ಯದ ಮೊದಲ ಇನಿಂಗ್ಸ್​ ವೇಳೆ ಪಿಚ್​ನಲ್ಲಿ ಸ್ವಲ್ಪ ಹೆಚ್ಚು ಸ್ಪಿನ್ ನಿರೀಕ್ಷಿಸಿದ್ದೆವು. ಆದರೆ ನಾವಂದುಕೊಂಡಂತೆ ಆಗಲಿಲ್ಲ. ಅತ್ತ ಭಾರತೀಯ ಬ್ಯಾಟರ್​ಗಳು ಅದ್ಭುತವಾಗಿ ಬ್ಯಾಟಿಂಗ್​ ಮಾಡಿದರು. ಇದಾಗ್ಯೂ ನಮ್ಮ ಪ್ರಯತ್ನದ ಬಗ್ಗೆ ನಿಜಕ್ಕೂ ನನಗೆ ಹೆಮ್ಮೆಯಿದೆ.

ನಾವು ಭಾರತೀಯ ಬ್ಯಾಟರ್​ಗಳ ವಿರುದ್ಧ ಆಡುವಾಗ ನೆನಪಲ್ಲಿಟುಕೊಳ್ಳಬೇಕಾದ ಮುಖ್ಯ ಅಂಶವೆಂದರೆ,  ಅವರು ವಿಶ್ವದ ಅತ್ಯುತ್ತಮರು ಎಂಬುದು. ನೀವು ಅವರ ವಿರುದ್ಧ ತಪ್ಪು ಮಾಡಿದರೆ, ಚೆಂಡು ಪಾರ್ಕ್‌ನಿಂದ ಹೊರಗೆ ಹೋಗುತ್ತದೆ. ಬೌಲಿಂಗ್​ನಲ್ಲಿ ನಾವು ಉತ್ತಮ ಪ್ರದರ್ಶನ ನೀಡಿಲ್ಲ ನಿಜ.

ಇದನ್ನೂ ಓದಿ: VIDEO: ಅದು ಔಟ್ ಅಲ್ಲಮ್ಮ… ಹೆಂಡ್ತಿ ಕುಣಿಯುವುದನ್ನು ತಡೆದ ಧೋನಿ

ಇದಾಗ್ಯೂ ಚೇಸಿಂಗ್​ನಲ್ಲಿ ಜೇಕಬ್ ಬೆಥೆಲ್ ಪ್ರದರ್ಶಿಸಿದ ದಿಟ್ಟ ಆಟ ನಂಬಲಾಸಾಧ್ಯ. ಈ ಸೋಲಿನ ಹೊರತಾಗಿಯೂ ನಾವು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ನಾನು ಮೊದಲೇ ಹೇಳಿದಂತೆ, ನಾವು ಆಡಿದ ರೀತಿಗೆ ನಾವು ತುಂಬಾ ಹೆಮ್ಮೆಪಡಬೇಕು. ನಾವು ಎಂದಿಗೂ ಪಂದ್ಯಗಳಿಂದ ಹೊರಗುಳಿದಿರಲಿಲ್ಲ. 250 ರನ್‌ಗಳನ್ನು ಬೆನ್ನಟ್ಟುವಾಗ, ಇತರ ತಂಡಗಳು ಮುಗ್ಗರಿಸಿರಬಹುದು ಅಥವಾ ಕುಸಿದಿರಬಹುದು. ಆದರೆ ನಾವು ಇಡೀ ಪಂದ್ಯವನ್ನು ಅಂತಿಮ ಘಟ್ಟದತ್ತ ಕೊಂಡೊಯ್ದಿದ್ದೇವೆ ಎಂದು ಹ್ಯಾರಿ ಬ್ರೂಕ್ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.

Source link

10.15ಕ್ಕೇ ಸಿದ್ದರಾಮಯ್ಯ ಬಜೆಟ್ ಮಂಡನೆ ಏಕೆ? ಬಿಜೆಪಿ ಶಾಸಕ ಸುರೇಶ್ ಕುಮಾರ್ ಕೊಟ್ಟರು ಅಚ್ಚರಿಯ ಕಾರಣ! – Kannada News | Karnataka Budget 2026: Why Siddaramaiah Presenting Budget at 10:15 AM? BJP MLA Suresh Kumar’s Rahu Kala Remark Sparks Debate

ಜೆಪಿ ಶಾಸಕ ಸುರೇಶ್ ಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯImage Credit source: tv9

ಬೆಂಗಳೂರು, ಮಾರ್ಚ್ 6: ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯ (Siddaramaiah) 2026-27ನೇ ಸಾಲಿನ ಕರ್ನಾಟಕ ಬಜೆಟ್ (Karnataka Budget) ಅನ್ನು ಮಾರ್ಚ್ 6 ರ ಬೆಳಗ್ಗೆ 10.15 ಗಂಟೆಗೇ ವಿಧಾನಸಭೆಯಲ್ಲಿ ಮಂಡಿಸುತ್ತಿರುವುದೇಕೆ ಎಂಬ ವಿಚಾರ ಈಗ ರಾಜ್ಯ ರಾಜಕೀಯದಲ್ಲಿ ಕುತೂಹಲ ಹುಟ್ಟಿಸಿದೆ. ಈ ವಿಚಾರವಾಗಿ ರಾಜಾಜಿನಗರ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅಚ್ಚರಿಯ ಕಾರಣವೊಂದನ್ನು ಉಲ್ಲೇಖಿಸಿ ಫೇಸ್​​ಬುಕ್​ನಲ್ಲಿ ಪೋಸ್ಟ್ ಮಾಡಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಸಾಮಾನ್ಯವಾಗಿ ಬಜೆಟ್ ಮಂಡನೆ 10 ಗಂಟೆ ಅಥವಾ 11 ಗಂಟೆಗೆ ಮಾಡುವುದು ಸಾಮಾನ್ಯ. ಆದರೆ ಈ ಬಾರಿ 10.15ಕ್ಕೆ ಬಜೆಟ್ ಮಂಡನೆ ನಿಗದಿಯಾಗಿದೆ. ಇದಕ್ಕೆ ಕಾರಣವೇನು ಎಂಬ ಕುತೂಹಲ ರಾಜಕೀಯ ವಲಯದಲ್ಲೂ ಮೂಡಿದೆ.

ಸುರೇಶ್​​ ಕುಮಾರ್ ಫೇಸ್​ಬುಕ್ ಪೋಸ್ಟ್​​ನಲ್ಲೇನಿದೆ?

ರಾಜ್ಯದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯನವರು ಶುಕ್ರವಾರ ಬೆಳಗ್ಗೆ 10.15 ಗಂಟೆಗೆ ವಿಧಾನಸಭೆಯಲ್ಲಿ ಈ ವರ್ಷದ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. 10.00 ಗಂಟೆ ಅಲ್ಲ, 10.30 ಗಂಟೆ ಅಲ್ಲ, 11.00 ಗಂಟೆ ಅಲ್ಲ. ಏಕೆ 10.15 ಗಂಟೆಗೆ ಎಂದು ಕುತೂಹಲದಿಂದ ವಿಚಾರಿಸಿದಾಗ ಗೊತ್ತಾಗಿದ್ದು ಈ ವಿಚಾರ. ಏಕೆಂದರೆ ಶುಕ್ರವಾರ, ಬೆಳಗ್ಗೆ 10. 30 ಗಂಟೆಯಿಂದ ರಾಹುಕಾಲ! ಬೆಳಗ್ಗೆ 7.30 ಗಂಟೆ ಯಿಂದ 9 ಗಂಟೆಯವರೆಗೂ ಗುಳಿಕಾಲ. #ಮೂಢನಂಬಿಕೆ ಎಂಬ ಹ್ಯಾಷ್​ಟ್ಯಾಗ್​ನೊಂದಿಗೆ ಸುರೇಶ್ ಕುಮಾರ್ ಪೋಸ್ಟ್ ಮಾಡಿದ್ದಾರೆ.

ಸುರೇಶ್​​ ಕುಮಾರ್ ಫೇಸ್​ಬುಕ್ ಪೋಸ್ಟ್

ರಾಹುಕಾಲ ಆರಂಭಕ್ಕೂ ಮೊದಲು ಬಜೆಟ್ ಮಂಡನೆ ಆರಂಭಿಸಬೇಕೆಂಬ ಕಾರಣಕ್ಕೆ 10.15 ಗಂಟೆಯನ್ನು ಆಯ್ಕೆ ಮಾಡಿರಬಹುದೇ ಎಂಬ ಅನುಮಾನವನ್ನು ಸುರೇಶ್ ಕುಮಾರ್ ವ್ಯಕ್ತಪಡಿಸಿದ್ದಾರೆ.

ಸುರೇಶ್ ಕುಮಾರ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕೆಲವರು ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರೆ, ಮತ್ತೊಬ್ಬರು ಇದರಲ್ಲಿ ರಾಜಕೀಯ ಟೀಕೆ ಅಡಗಿದೆ ಎಂದು ಹೇಳಿದ್ದಾರೆ.

ಆದರೆ ಸರ್ಕಾರ ಈ ಬಗ್ಗೆ ಯಾವುದೇ ದೃಢೀಕರಣ ನೀಡಿಲ್ಲ. ಸಾಮಾನ್ಯವಾಗಿ ವಿಧಾನಸಭೆಯ ಕಾರ್ಯಚಟುವಟಿಕೆಗಳ ವೇಳಾಪಟ್ಟಿ, ವಿಧಾನಮಂಡಲದ ಪ್ರಕ್ರಿಯೆಗಳು ಹಾಗೂ ಆಡಳಿತಾತ್ಮಕ ಕಾರಣಗಳ ಆಧಾರದ ಮೇಲೆ ಸಮಯ ನಿಗದಿಯಾಗುವುದು ರೂಢಿಯಾಗಿದೆ.

ಒಟ್ಟಿನಲ್ಲಿ, 10.15 ಗಂಟೆಯ ಸಮಯದ ಹಿಂದೆ ನಿಜವಾಗಿಯೂ ಜ್ಯೋತಿಷ್ಯ ಕಾರಣವಿದೆಯೇ ಅಥವಾ ಇದು ಕೇವಲ ರಾಜಕೀಯ ವ್ಯಂಗ್ಯವೇ? ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Hindu Temple Rituals: ದೇವಾಲಯಗಳಲ್ಲಿ ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು ಗೊತ್ತಾ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | The Significance of Circumambulation in Temples: How Many Pradakshinas for Which Deity?

ದೇವಾಲಯಗಳಲ್ಲಿ, ಪೂರ್ವಿಕರ ಸಮಾಧಿಗಳ ಬಳಿ ಅಥವಾ ಅಶ್ವತ್ಥ ವೃಕ್ಷಗಳ ಸುತ್ತಲೂ ಪ್ರದಕ್ಷಿಣೆಗಳನ್ನು ಮಾಡುವುದು ಭಾರತೀಯ ಸಂಸ್ಕೃತಿಯಲ್ಲಿ ಅಸ್ತಿತ್ವದಲ್ಲಿದೆ. ಸಾಮಾನ್ಯವಾಗಿ, ಜನರು ಮೂರು ಪ್ರದಕ್ಷಿಣೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ಆದರೆ, ಕೆಲವೊಂದು ದೇವರುಗಳಿಗೆ ನಿರ್ದಿಷ್ಟ ಸಂಖ್ಯೆಯ ಪ್ರದಕ್ಷಿಣೆಗಳು ಪರಿಪೂರ್ಣ ಫಲವನ್ನು ನೀಡುತ್ತವೆ ಎಂದು ಧರ್ಮ ಗ್ರಂಥಗಳಲ್ಲಿ ಉಲ್ಲೇಖವಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿ ಹೇಳುವಂತೆ, ಪ್ರದಕ್ಷಿಣೆ ಎಂದರೆ ಗೌರವವನ್ನು ಸಲ್ಲಿಸುವುದು, ಭಗವಂತನನ್ನು ನೆನಪಿಸಿಕೊಳ್ಳುವುದು ಮತ್ತು ನಮ್ಮ ಭಾವನೆಗಳನ್ನು ನಿವೇದಿಸುವುದು. ದೇವಾಲಯ ಅಥವಾ ಸಮಾಧಿಗಳಲ್ಲಿ ಮೂರು ಪ್ರದಕ್ಷಿಣೆಗಳನ್ನು ಹಾಕುವುದು ವೈಜ್ಞಾನಿಕವಾಗಿ ಮತ್ತು ಧಾರ್ಮಿಕವಾಗಿ ವಿಶೇಷ ಮಹತ್ವವನ್ನು ಹೊಂದಿದೆ. ಈ ಮೂರು ಸಂಖ್ಯೆಯು ಈ ಪ್ರಪಂಚದ ತ್ರಿಗುಣಗಳಾದ ಸತ್ವಗುಣ, ರಜೋಗುಣ ಮತ್ತು ತಮೋಗುಣಗಳ ಸಂಕೇತವಾಗಿದೆ. ಹಾಗೆಯೇ, ಇದು ಮೂರು ಲೋಕಗಳಾದ ಮತ್ಸ್ಯಲೋಕ, ಸ್ವರ್ಗಲೋಕ ಮತ್ತು ಪಾತಾಳಲೋಕಗಳ ಪ್ರತೀಕವೂ ಆಗಿದೆ. ಪ್ರದಕ್ಷಿಣೆ ಹಾಕುವಾಗ, ಈ ಮೂರು ಲೋಕಗಳಲ್ಲಿರುವ ಭಗವಂತನ ಪ್ರಭಾವವನ್ನು ನೆನಪಿಸಿಕೊಳ್ಳುತ್ತೇವೆ ಮತ್ತು ಆತನು ನಮ್ಮ ಕಷ್ಟಗಳನ್ನು ಆಲಿಸಿ ವಿಮುಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.


ಗದ್ದುಗೆಗಳಲ್ಲಿ ಪ್ರದಕ್ಷಿಣೆ ಮಾಡುವಾಗ, ನಾವು ನಮ್ಮ ತ್ರಿಗುಣಗಳನ್ನು ಸಮತೋಲನದಲ್ಲಿ ಇಡಲು ಆಶೀರ್ವಾದವನ್ನು ಕೋರುತ್ತೇವೆ. ಸತ್ವಗುಣ, ರಜೋಗುಣ ಮತ್ತು ತಮೋಗುಣಗಳ ಸಮತೋಲನವು ಮನಸ್ಸಿನ ಶಾಂತಿಗೆ ಮತ್ತು ಸರಿಯಾದ ನಿರ್ಧಾರಗಳಿಗೆ ಕಾರಣವಾಗುತ್ತದೆ. ಕೋಪ, ತಾಪಗಳಿಂದ ಜೀವನದಲ್ಲಿ ಉಂಟಾಗುವ ಕಷ್ಟಗಳನ್ನು ನಿವಾರಿಸಲು ಈ ತ್ರಿಗುಣಗಳ ಸಮತೋಲನ ಅತ್ಯಗತ್ಯ. ಕಾಯ (ದೇಹ), ವಾಚ (ಮಾತು) ಮತ್ತು ಮನಸ (ಮನಸ್ಸು) ಈ ಮೂರು ರೀತಿಯಲ್ಲಿ ಸಂಪೂರ್ಣವಾಗಿ ಶರಣಾಗತಿಯಾಗುವುದರ ಸಂಕೇತವಾಗಿ ಪ್ರದಕ್ಷಿಣೆಗಳನ್ನು ಮಾಡಲಾಗುತ್ತದೆ.

ಹಿಂದೂ ಸನಾತನ ಸಂಸ್ಕೃತಿಯಲ್ಲಿ ಕೆಲವು ದೇವರುಗಳಿಗೆ ಪ್ರದಕ್ಷಿಣೆಯ ಸಂಖ್ಯೆಯು ಭಿನ್ನವಾಗಿದೆ:

  • ಗಣಪತಿಗೆ (ವಿನಾಯಕನಿಗೆ): ಒಂದು ಪೂರ್ಣ ಪ್ರದಕ್ಷಿಣೆ ಸಾಕು ಎಂದು ಹೇಳಲಾಗುತ್ತದೆ. ಹೆಜ್ಜೆಗಳನ್ನು ಅಕ್ಕಪಕ್ಕದಲ್ಲಿ ಇಟ್ಟು ನಿಧಾನವಾಗಿ ಸುತ್ತುವುದು ಹೆಚ್ಚು ಶ್ರೇಷ್ಠವೆಂದು ಹಿರಿಯರು ಹೇಳುತ್ತಾರೆ.
  • ಶಿವನಿಗೆ: ಪರಿಪೂರ್ಣ ಪ್ರದಕ್ಷಿಣೆ ಬೇಕಾಗಿಲ್ಲ. ಅರ್ಧ ಪ್ರದಕ್ಷಿಣೆ (ಸೋಮಸೂತ್ರ ಪ್ರದಕ್ಷಿಣೆ) ಸಾಕು.
  • ದೇವಿಯ ದೇವಸ್ಥಾನಗಳಲ್ಲಿ: ನಾಲ್ಕು ಪ್ರದಕ್ಷಿಣೆಗಳನ್ನು ಮಾಡಬೇಕು. ಇದು ನಾಲ್ಕು ದಿಕ್ಕುಗಳ ಪ್ರತೀಕವಾಗಿದೆ.
  • ಸೂರ್ಯ ಭಗವಾನರಿಗೆ: ಆತ್ಮ ನಮಸ್ಕಾರದ ರೂಪದಲ್ಲಿ ನಾವು ಇರುವ ಜಾಗದಲ್ಲೇ ಏಳು ಸುತ್ತು ಸುತ್ತಿದರೆ ಸೂರ್ಯನ ಪರಿಪೂರ್ಣ ಅನುಗ್ರಹ ದೊರೆಯುತ್ತದೆ.

ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!

ಸಾಮಾನ್ಯವಾಗಿ, ಮೂರು ಪ್ರದಕ್ಷಿಣೆಗಳು ಶುಭ ಫಲಗಳನ್ನು ನೀಡುತ್ತವೆ. ಕೆಲವರು ಹರಕೆಗಳನ್ನು ಹೊತ್ತುಕೊಂಡು ನೂರು ಅಥವಾ ಹನ್ನೊಂದು ಪ್ರದಕ್ಷಿಣೆಗಳನ್ನು ಮಾಡುತ್ತಾರೆ. ಇದು ಅವರ ವೈಯಕ್ತಿಕ ಭಕ್ತಿ ಮತ್ತು ಸಂತೃಪ್ತಿಗೆ ಸಂಬಂಧಿಸಿದೆ. “ಯದ್ಭಾವಂ ತದ್ಭವತಿ” ಎಂಬಂತೆ, ಭಕ್ತಿಯಿಂದ ಮಾಡಿದ ಪ್ರದಕ್ಷಿಣೆಗಳು ಫಲಕಾರಿಯಾಗುತ್ತವೆ. ದೇವಾಲಯಗಳಲ್ಲಿ ಗರ್ಭಗುಡಿಯ ಪ್ರದಕ್ಷಿಣೆ, ಪ್ರಾಕಾರದ ಪ್ರದಕ್ಷಿಣೆ ಮತ್ತು ಸಂಪೂರ್ಣ ದೇವಸ್ಥಾನದ ಪ್ರದಕ್ಷಿಣೆ ಹೀಗೆ ಹಲವು ರೀತಿಯ ಪ್ರದಕ್ಷಿಣೆಗಳು ಅಸ್ತಿತ್ವದಲ್ಲಿವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Budget 2026 LIVE Video: ದಾಖಲೆಯ 17ನೇ ಬಜೆಟ್ ಮಂಡನೆ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ – Kannada News | Karnataka Budget 2026 LIVE: CM Siddaramaiah Presents Historic 17th Budget Live and Highlights

ಬೆಂಗಳೂರು, ಮಾ.6: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದಾಖಲೆಯ 17ನೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಮಾರ್ಚ್ 06ರಿಂದ ಮಾರ್ಚ್ 27ರವರೆಗೆ ಕರ್ನಾಟಕ ಬಜೆಟ್ ಅಧಿವೇಶನ ನಡೆಯಲಿದೆ. ಇಂದು(March 6) ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ 17ನೇ ಐತಿಹಾಸಿಕ ರಾಜ್ಯ ಬಜೆಟ್ ಮಂಡಿಸುತ್ತಿದ್ದಾರೆ. ಈ ಬಗ್ಗೆ ಲೈವ್​​ ವಿಡಿಯೋ ಇಲ್ಲಿದೆ ನೋಡಿ

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:17 am, Fri, 6 March 26

Source link

ಜಿಮ್‌ಗೆ ಲವ್ ಇರುವವರು ಹೋಗಬಾರದು, ಇದು ಸಿಂಗಲ್ಸ್‌ಗೆ ಮಾತ್ರ : ಬ್ರೋ ಕೋಡ್’ ಸಂಸ್ಕೃತಿ ವೈರಲ್ – Kannada News | Gym Love Dilemma: Why the ‘Singles Only’ Trend is Boosting Workout Focus

ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ “ಜಿಮ್‌ಗೆ ಲವ್ ಇರುವವರು ಹೋಗಬಾರದು, ಇದು ಸಿಂಗಲ್ಸ್‌ಗೆ ಮಾತ್ರ” ಎಂಬ ಮಾತುಗಳು ಮತ್ತು ಮೀಮ್ಸ್‌ಗಳು (Memes) ಸಾಕಷ್ಟು ವೈರಲ್ ಆಗುತ್ತಿವೆ. ಆದರೆ,  ವೈಜ್ಞಾನಿಕವಾಗಿ ಇಂತಹ ಯಾವುದೇ ನಿಯಮವಿಲ್ಲ. ಇದು ಕೇವಲ ತಮಾಷೆಗಾಗಿ ಹಾಗೂ ಕೆಲವೊಂದು ‘ಬ್ರೋ ಕೋಡ್’ (Bro Code) ಸಂಸ್ಕೃತಿಯ ಭಾಗವಾಗಿ ವೈರಲ್​​ ಮಾಡುತ್ತಿದ್ದಾರೆ.

ಅನೇಕ ಫಿಟ್‌ನೆಸ್ ಪ್ರಿಯರು ಜಿಮ್ ಅನ್ನು ತಮ್ಮ ಶಕ್ತಿ ಮತ್ತು ಏಕಾಗ್ರತೆಯ ಕೇಂದ್ರವೆಂದು ಪರಿಗಣಿಸುತ್ತಾರೆ. “ಲವ್” ಅಥವಾ ಸಂಬಂಧದಲ್ಲಿದ್ದಾಗ ಮನಸ್ಸು ಬೇರೆಡೆಗೆ ಹರಿಯಬಹುದು ಹಾಗೂ ಜಿಮ್‌ನಲ್ಲಿ ಸಂಗಾತಿಯೊಂದಿಗೆ ಕಾಲಹರಣ ಮಾಡಬಹುದು ಎಂಬ ಕಾರಣಕ್ಕೆ, ಸಿಂಗಲ್ ಆಗಿದ್ದಾಗ ಮಾತ್ರ ದೇಹದ ಮೇಲೆ ಸಂಪೂರ್ಣ ಗಮನ ಹರಿಸಲು ಸಾಧ್ಯ ಎಂಬುದು ಅನೇಕರ ವಾದ.

ಸಾಮಾನ್ಯವಾಗಿ ಪ್ರೀತಿಯಲ್ಲಿ ಸೋತವರು  ತಮ್ಮ ನೋವನ್ನು ಮರೆಯಲು ಮತ್ತು ತಮ್ಮನ್ನು ತಾವು ಉತ್ತಮವಾಗಿ ರೂಪಿಸಿಕೊಳ್ಳಲು ಜಿಮ್ ಸೇರುತ್ತಾರೆ. ಇದನ್ನು “Revenge Body” ಎನ್ನಲಾಗುತ್ತದೆ. ಹೀಗಾಗಿ, ಜಿಮ್ ಎಂಬುದು ಕೇವಲ ದೈಹಿಕ ವ್ಯಾಯಾಮಕ್ಕಲ್ಲ, ಮಾನಸಿಕವಾಗಿ ಗಟ್ಟಿಯಾಗಲು ಬಯಸುವ ‘ಸಿಂಗಲ್ಸ್’ಗೆ ಇರುವ ಜಾಗ ಎಂಬ ಭಾವನೆ ಮೂಡಿದೆ.

ಇದನ್ನೂ ಓದಿ: ‘ವಿಶ್ವದ ಅತ್ಯುತ್ತಮ ಆಗಮನ ನಿಲ್ದಾಣ’ ಪ್ರಶಸ್ತಿ ಪಡೆದ ಕೆಂಪೇಗೌಡ ವಿಮಾನ ನಿಲ್ದಾಣ: ವೇಗ, ಸ್ವಚ್ಛತೆ ಎಲ್ಲದರಲ್ಲೂ ನಂಬರ್​​ ಒನ್

ಜಿಮ್‌ಗೆ ಜೋಡಿಯಾಗಿ ಬರುವವರು ವರ್ಕೌಟ್ ಮಾಡುವುದಕ್ಕಿಂತ ಹೆಚ್ಚಾಗಿ ಹರಟೆ ಹೊಡೆಯುತ್ತಾರೆ ಅಥವಾ ಫೋಟೋ ಶೂಟ್‌ನಲ್ಲಿ ಬ್ಯುಸಿಯಾಗಿರುತ್ತಾರೆ ಎಂಬ ಟೀಕೆಗಳಿವೆ. ಇದು ಸೀರಿಯಸ್ ಆಗಿ ವರ್ಕೌಟ್ ಮಾಡುವವರಿಗೆ ಕಿರಿಕಿರಿ ಉಂಟುಮಾಡಬಹುದು. ಹಾಗಾಗಿ, “ಸಿಂಗಲ್ಸ್ ಮಾತ್ರ ಬನ್ನಿ” ಎಂಬ ಜೋಕ್ ವೈರಲ್ ಆಗುತ್ತಿದೆ. ಸಿಂಗಲ್ಸ್ ಆಗಿದ್ದಾಗ ಯಾರ ಮೆಸೇಜ್ ಅಥವಾ ಕರೆಗಾಗಿ ಕಾಯುವ ಅವಶ್ಯಕತೆ ಇರುವುದಿಲ್ಲ. ಮೊಬೈಲ್ ಪಕ್ಕಕ್ಕಿಟ್ಟು ಕೇವಲ ತೂಕ ಎತ್ತುವ ಕಡೆ ಗಮನ ಕೊಡಬಹುದು ಎಂಬ ಮಾತಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾಸ್ಯ ಪಾತ್ರ ಮಾಡಿಕೊಂಡಿದ್ದವನಿಗೆ ಗಂಭೀರ ಕ್ಯಾರೆಕ್ಟರ್ ಕೊಟ್ಟಿದ್ದಾರೆ; ಕಿರುತೆರೆಯಲ್ಲಿ ಎಸ್​ ನಾರಾಯಣ್ – Kannada News | S Narayan Acting in Krishna Rukku Serial he is doing serial Character

ಎಸ್​ ನಾರಾಯಣ್ ಅವರಿಗೆ ಕಿರುತೆರೆ ಹೊಸದಲ್ಲ. ಅವರು ಈ ಮೊದಲು ಧಾರಾವಾಹಿಗಳಲ್ಲಿ ನಟಿಸಿದ್ದರು. ಈಗ ಅವರು ಜೀ ಕನ್ನಡದ ‘ಕೃಷ್ಣ ರುಕ್ಕು’ ಧಾರಾವಾಹಿಯಲ್ಲಿ ಸೂರ್ಯ ಪ್ರಕಾಶ್ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಹಾಸ್ಯ ಪಾತ್ರಗಳ ಮೂಲಕ ಗಮನ ಸೆಳೆದ ನಾರಾಯಣ್ ಅವರು, ಈ ಬಾರಿ ಗಂಭೀರ ಪಾತ್ರ ಮಾಡುತ್ತಿದ್ದಾರೆ. ಪಾತ್ರದ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

VIDEO: ಅದು ಔಟ್ ಅಲ್ಲಮ್ಮ… ಹೆಂಡ್ತಿ ಕುಣಿಯುವುದನ್ನು ತಡೆದ ಧೋನಿ – Kannada News | IND vs ENG: MS Dhoni’s Reaction To Wife Sakshi’s Celebration

ಮಾರ್ಚ್ 5, 2026 ರಂದು ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ, ಸಾಕ್ಷಿ ಧೋನಿ ಅವರ ಸಂಭ್ರಮಕ್ಕೆ ಎಂ.ಎಸ್. ಧೋನಿ ನೀಡಿದ ಪ್ರತಿಕ್ರಿಯೆ ಭಾರಿ ವೈರಲ್ ಆಗಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದ ದ್ವಿತೀಯ ಇನಿಂಗ್ಸ್​ 18ನೇ ಓವರ್‌ನಲ್ಲಿ ಜಸ್​ಪ್ರೀತ್ ಬುಮ್ರಾ ಎಸೆದ ಚೆಂಡನ್ನು ಇಂಗ್ಲೆಂಡ್ ಬ್ಯಾಟರ್ ಸ್ಯಾಮ್ ಕರನ್ ನೇರವಾಗಿ ಬಾರಿಸಿದರು.

ಬುಮ್ರಾ ಅದನ್ನು ಅದ್ಭುತವಾಗಿ ಹಿಡಿದರು. ಇದನ್ನು ನೋಡಿ ಗ್ಯಾಲರಿಯಲ್ಲಿದ್ದ ಸಾಕ್ಷಿ ಅವರು ‘ಕ್ಲೀನ್ ಕ್ಯಾಚ್’ ಎಂದು ಭಾವಿಸಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದರು. ಆದರೆ, ಆ ಚೆಂಡು ಬುಮ್ರಾ ಕೈ ಸೇರುವ ಮೊದಲು ನೆಲಕ್ಕೆ ತಗುಲಿತ್ತು.

ಇತ್ತ ಪತ್ನಿಯ ಈ ಅತಿಯಾದ ಸಂಭ್ರಮವನ್ನು ನೋಡಿದ ಧೋನಿ, ತಮ್ಮ ಎಂದಿನ ‘ಕ್ಯಾಪ್ಟನ್ ಕೂಲ್’ ಶೈಲಿಯಲ್ಲಿ ಅತ್ಯಂತ ಶಾಂತವಾಗಿ “ಅದು ಔಟ್ ಅಲ್ಲ, ಸುಮ್ಮನೆ ಕುಳಿತುಕೋ” ಎಂಬಂತೆ ಸನ್ನೆ ಮಾಡಿದರು. ಧೋನಿಯ ಈ ಮುಗುಳ್ನಗೆಯ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

 

Source link

National Dentists Day 2026: ಇಂದು ರಾಷ್ಟ್ರೀಯ ದಂತವೈದ್ಯರ ದಿನ; ನಗುವಿನ ಹಿಂದಿನ ನಿಜವಾದ ಶಿಲ್ಪಿಗಳು – Kannada News | National Dentists’ Day: Why Oral Health and Your Dentist’s Role Matter

ಒಂದು ಸುಂದರವಾದ ನಗು ಸಾವಿರ ಮಾತುಗಳನ್ನು ಹೇಳುತ್ತದೆ. ಆದರೆ ಆ ನಗುವಿನ ಹಿಂದೆ ಇರುವ ನಿಜವಾದ ಶಿಲ್ಪಿಗಳು ದಂತವೈದ್ಯರು. ನಮ್ಮ ಹಲ್ಲುಗಳ ಆರೋಗ್ಯವನ್ನು ಕಾಪಾಡಿ, ನೋವನ್ನು ನಿವಾರಿಸಿ, ಆತ್ಮವಿಶ್ವಾಸದ ನಗುವನ್ನು ನೀಡುವವರು ಇವರೇ. ಈ ಮಹತ್ವದ ಸೇವೆಯನ್ನು ಗೌರವಿಸಲು ಪ್ರತಿ ವರ್ಷ ಮಾರ್ಚ್ 6 ರಂದು ರಾಷ್ಟ್ರೀಯ ದಂತವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಸಮಾಜದಲ್ಲಿ ದಂತವೈದ್ಯರ ಸೇವೆಯನ್ನು ಗುರುತಿಸುವುದರ ಜೊತೆಗೆ, ಬಾಯಿ ಮತ್ತು ಹಲ್ಲಿನ ಆರೋಗ್ಯದ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೂ ಈ ದಿನದ ಪ್ರಮುಖ ಉದ್ದೇಶವಾಗಿದೆ.

ದಂತವೈದ್ಯರು ಪ್ರತಿದಿನ ಅನೇಕ ರೋಗಿಗಳ ನೋವನ್ನು ನಿವಾರಿಸುತ್ತಾರೆ. ಹಲ್ಲಿನ ನೋವು ಎಷ್ಟು ತೀವ್ರವಾಗಿರುತ್ತದೆ ಎಂಬುದು ಅನುಭವಿಸಿದವರಿಗೆ ಮಾತ್ರ ಗೊತ್ತು. ಅಂಥ ನೋವನ್ನು ಶಮನ ಮಾಡಿ, ರೋಗಿಗಳ ಮುಖದಲ್ಲಿ ಮತ್ತೆ ನಗು ಮೂಡಿಸುವುದು ದಂತವೈದ್ಯರ ದೊಡ್ಡ ಸೇವೆ. ಅವರ ಶ್ರಮ ಮತ್ತು ಸಮರ್ಪಣೆಯನ್ನು ಸಮಾಜ ಗೌರವಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಇದರಿಂದ ವೈದ್ಯಕೀಯ ಕ್ಷೇತ್ರದಲ್ಲಿ ದಂತವೈದ್ಯರ ಪಾತ್ರ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ನೆನಪಿಸುವ ಅವಕಾಶ ಸಿಗುತ್ತದೆ.

ಈ ದಿನವು ಬಾಯಿ ಮತ್ತು ಹಲ್ಲಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದಕ್ಕೂ ಸಹಾಯ ಮಾಡುತ್ತದೆ. ಭಾರತದಲ್ಲಿ ಹಲವರು ಹಲ್ಲಿನ ಆರೋಗ್ಯವನ್ನು ಕಡೆಗಣಿಸುತ್ತಾರೆ. ನೋವು ಬಂದಾಗ ಮಾತ್ರ ವೈದ್ಯರನ್ನು ಸಂಪರ್ಕಿಸುವುದು ಸಾಮಾನ್ಯ. ಆದರೆ ಹಲ್ಲಿನ ಸಮಸ್ಯೆಗಳನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮ. ಸರಿಯಾದ ಆರೈಕೆ ಮತ್ತು ನಿಯಮಿತ ಪರೀಕ್ಷೆಗಳಿಂದ ಅನೇಕ ಸಮಸ್ಯೆಗಳನ್ನು ಆರಂಭದಲ್ಲೇ ತಡೆಗಟ್ಟಬಹುದು ಎಂಬುದನ್ನು ಜನರಿಗೆ ತಿಳಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.

ದಂತ ವಿಜ್ಞಾನವು ವರ್ಷಗಳಿಂದ ಬಹಳಷ್ಟು ಅಭಿವೃದ್ಧಿ ಹೊಂದಿದೆ. ಹಿಂದಿನ ಕಾಲದಲ್ಲಿ ಹಲ್ಲಿನ ಸಮಸ್ಯೆಗಳಿಗೆ ಮುಖ್ಯವಾಗಿ ಹಲ್ಲು ತೆಗೆದುಹಾಕುವುದು ಮಾತ್ರ ಪರಿಹಾರವಾಗಿತ್ತು. ಆದರೆ ಇಂದಿನ ಕಾಲದಲ್ಲಿ ಇಂಪ್ಲಾಂಟ್, ಬ್ರೇಸಸ್ ಮತ್ತು ಕಾಸ್ಮೆಟಿಕ್ ಡೆಂಟಿಸ್ಟ್ರಿ ಮುಂತಾದ ಆಧುನಿಕ ಚಿಕಿತ್ಸೆಗಳ ಮೂಲಕ ಹಲ್ಲುಗಳನ್ನು ಸುಂದರವಾಗಿ ಮತ್ತು ಆರೋಗ್ಯಕರವಾಗಿ ಕಾಪಾಡಿಕೊಳ್ಳಬಹುದು. ಈ ವಿಜ್ಞಾನ ಪ್ರಗತಿಯನ್ನು ಸ್ಮರಿಸುವುದಕ್ಕೂ ರಾಷ್ಟ್ರೀಯ ದಂತವೈದ್ಯರ ದಿನ ಒಂದು ಉತ್ತಮ ಸಂದರ್ಭವಾಗಿದೆ.

ಮಕ್ಕಳಲ್ಲಿ ಹಲ್ಲಿನ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಕೂಡ ಬಹಳ ಮುಖ್ಯ. ಭಾರತದಲ್ಲಿ ಬಹಳಷ್ಟು ಮಕ್ಕಳು ಹಲ್ಲಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಶಾಲಾ ಮಟ್ಟದಲ್ಲೇ ಹಲ್ಲಿನ ಆರೈಕೆ ಕುರಿತು ಶಿಕ್ಷಣ ನೀಡುವುದರಿಂದ ಮಕ್ಕಳಲ್ಲಿ ಉತ್ತಮ ಅಭ್ಯಾಸಗಳು ಬೆಳೆಸಬಹುದು. ಚಿಕ್ಕಂದಿನಿಂದಲೇ ಸರಿಯಾದ ಹಲ್ಲು ತಿಕ್ಕುವ ವಿಧಾನ ಮತ್ತು ಸ್ವಚ್ಛತೆಯ ಅಭ್ಯಾಸ ಕಲಿಸಿದರೆ ಭವಿಷ್ಯದಲ್ಲಿ ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು.

ದಂತವೈದ್ಯರು ಕೇವಲ ಹಲ್ಲುಗಳನ್ನು ಸರಿಪಡಿಸುವ ವೈದ್ಯರು ಮಾತ್ರವಲ್ಲ; ಅವರು ನಮ್ಮ ಒಟ್ಟಾರೆ ಆರೋಗ್ಯದ ರಕ್ಷಕರಾಗಿದ್ದಾರೆ. ಬಾಯಿಯ ಆರೋಗ್ಯವು ದೇಹದ ಆರೋಗ್ಯದೊಂದಿಗೆ ನೇರವಾಗಿ ಸಂಬಂಧ ಹೊಂದಿದೆ. ಬಾಯಿ ಸ್ವಚ್ಛವಾಗಿರದಿದ್ದರೆ ಹೃದಯ ರೋಗ, ಮಧುಮೇಹ ಸೇರಿದಂತೆ ಹಲವಾರು ಗಂಭೀರ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಹಲ್ಲಿನ ಆರೈಕೆ ಜೀವನದ ಪ್ರಮುಖ ಭಾಗವಾಗಿದೆ.

ಇದನ್ನೂ ಓದಿ: ಮಗು ಹುಟ್ಟುವ ಮುನ್ನವೇ ಶ್ರವಣ ಸಾಮರ್ಥ್ಯ ಪತ್ತೆಹಚ್ಚಲು ಏಮ್ಸ್‌ನ ಹೊಸ ಪ್ರಯತ್ನ!

ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಸರಳ ನಿಯಮಗಳನ್ನು ಪಾಲಿಸುವುದು ಅಗತ್ಯ. ದಿನಕ್ಕೆ ಎರಡು ಬಾರಿ ಹಲ್ಲು ತಿಕ್ಕುವುದು, ಫ್ಲೋರೈಡ್ ಇರುವ ಟೂತ್‌ಪೇಸ್ಟ್ ಬಳಕೆ, ನಿಯಮಿತವಾಗಿ ಬ್ರಷ್ ಬದಲಾಯಿಸುವುದು, ಊಟದ ನಂತರ ಬಾಯಿ ಚೆನ್ನಾಗಿ ಮುಕ್ಕಳಿಸುವುದು, ಸಿಹಿ ಮತ್ತು ಜಿಗುಟಾದ ಆಹಾರವನ್ನು ಕಡಿಮೆ ಸೇವಿಸುವುದು ಹಲ್ಲಿನ ಆರೋಗ್ಯಕ್ಕೆ ಸಹಾಯಕವಾಗುತ್ತದೆ. ತಂಬಾಕು, ಗುಟ್ಕಾ ಮತ್ತು ಧೂಮಪಾನದಿಂದ ದೂರವಿರುವುದು ಹಾಗೂ ಸಾಕಷ್ಟು ನೀರು ಕುಡಿಯುವುದು ಕೂಡ ಬಹಳ ಮುಖ್ಯ. ಜೊತೆಗೆ ಆರು ತಿಂಗಳಿಗೆ ಒಮ್ಮೆ ದಂತವೈದ್ಯರನ್ನು ಭೇಟಿ ಮಾಡುವ ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ.

ಒಟ್ಟಿನಲ್ಲಿ, ನಮ್ಮ ನಗುವನ್ನು ಕಾಪಾಡುವ ದಂತವೈದ್ಯರ ಸೇವೆ ಸಮಾಜಕ್ಕೆ ಅಮೂಲ್ಯವಾಗಿದೆ. ವರ್ಷಗಳ ಅಧ್ಯಯನ ಮತ್ತು ಅನುಭವದ ಮೂಲಕ ಅವರು ರೋಗಿಗಳ ನೋವನ್ನು ಕಡಿಮೆ ಮಾಡಿ ಆರೋಗ್ಯಕರ ಜೀವನ ನೀಡುತ್ತಾರೆ. ಆದ್ದರಿಂದ ರಾಷ್ಟ್ರೀಯ ದಂತವೈದ್ಯರ ದಿನದಂದು ಅವರ ಸೇವೆಯನ್ನು ಗೌರವಿಸಿ, ಹಲ್ಲಿನ ಆರೋಗ್ಯದ ಮಹತ್ವವನ್ನು ಅರಿತುಕೊಳ್ಳೋಣ ಮತ್ತು ನಮ್ಮ ನಗುವನ್ನು ಸದಾ ಸುಂದರವಾಗಿ ಕಾಪಾಡಿಕೊಳ್ಳೋಣ.

ಲೇಖನ: ಡಾ ರವಿಕಿರಣ ಪಟವರ್ಧನ, ಪಟವರ್ಧನ ಆಯುರ್ವೇದ ಕ್ಲಿನಿಕ್, ಶಿರಸಿ 08384225836.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version