ಬಾಬಾ ರಾಮದೇವ್ ಅವರ ದೇಸೀ ಬಾಜ್ರಾ ಪಿಜ್ಜಾ; ಈ ಚಳಿಗಾಲದ ಸೂಪರ್​ಫುಡ್ ತಯಾರಿಸುವ ಕ್ರಮ – Kannada News | Baba Ramdev shares recipe of Pizza made with Bajra for healthy winter snack

ಯೋಗ ಗುರು ಮತ್ತು ಪತಂಜಲಿ ಸಂಸ್ಥಾಪಕ ಬಾಬಾ ರಾಮದೇವ್ (Baba Ramdev) ಬಹಳ ಹಿಂದಿನಿಂದಲೂ ಆಯುರ್ವೇದವನ್ನು ಪ್ರಚಾರ ಮಾಡುತ್ತಿದ್ದಾರೆ. ಅವರು ಸ್ಥಳೀಯ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವಂತೆ ನಿರಂತರವಾಗಿ ಶಿಫಾರಸು ಮಾಡುತ್ತಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಫಿಟ್‌ನೆಸ್‌ಗೆ ಸಂಬಂಧಿಸಿದ ವೀಡಿಯೊಗಳು ಮತ್ತು ಪೋಸ್ಟ್‌ಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ರಾಮದೇವ್ ಸ್ವತಃ ಸೇವಿಸುವ ಅನೇಕ ಆರೋಗ್ಯಕರ ಆಹಾರಗಳ ಪಾಕವಿಧಾನಗಳನ್ನು ಸಹ ಅವರು ಹಂಚಿಕೊಳ್ಳುತ್ತಾರೆ. ಸಾಂಪ್ರದಾಯಿಕ ಚಳಿಗಾಲದ ಧಾನ್ಯಗಳು ಮತ್ತು ತರಕಾರಿಗಳು ದೇಹವನ್ನು ಒಳಗಿನಿಂದ ಬಲಪಡಿಸುತ್ತವೆ ಮತ್ತು ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ ಎಂಬುದು ಅವರ ಅನಿಸಿಕೆ. ಈ ಬಾರಿ, ಬಾಬಾ ರಾಮದೇವ್ ಆರೋಗ್ಯಕರ ಪಿಜ್ಜಾ ತಯಾರಿಸಲು ಪಾಕವಿಧಾನವನ್ನು ಹಂಚಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ, ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ ತಿನ್ನುವ ಪ್ರವೃತ್ತಿ ಸಾಕಷ್ಟು ವ್ಯಾಪಕವಾಗಿದೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಪಿಜ್ಜಾವನ್ನು ಇಷ್ಟಪಡುತ್ತಾರೆ. ಆದಾಗ್ಯೂ, ಅದರಲ್ಲಿ ಬಳಸುವ ಹಿಟ್ಟು, ಸಾಸ್ ಮತ್ತು ಚೀಸ್ ನಿಧಾನವಾಗಿ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಚಳಿಗಾಲದ ಸೂಪರ್‌ಫುಡ್ ಬಳಸಿ ನೀವು ಮನೆಯಲ್ಲಿ ರುಚಿಕರವಾದ ಮತ್ತು ಆರೋಗ್ಯಕರ ಪಿಜ್ಜಾವನ್ನು ತಯಾರಿಸಬಹುದು. ಅದರ ಪ್ರಯೋಜನಗಳೇನು ಮತ್ತು ಅದನ್ನು ಹೇಗೆ ತಯಾರಿಸಬೇಕೆಂಬುದರ ವಿವರ ಇಲ್ಲಿದೆ.

ಇದನ್ನೂ ಓದಿ: ಜ್ಞಾನ ಭಾರತಂ ಮಿಷನ್​ನ ಕ್ಲಸ್ಟರ್ ಸೆಂಟರ್ ಆಗಿ ಪತಂಜಲಿ ವಿವಿಗೆ ಮಾನ್ಯತೆ

ಬಾಬಾ ರಾಮದೇವ್ ಅವರ ಆರೋಗ್ಯಕರ ಮತ್ತು ದೇಸಿ ಪಿಜ್ಜಾ

ಬಾಬಾ ರಾಮದೇವ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ಮಾರುಕಟ್ಟೆಯಲ್ಲಿ ಲಭ್ಯವಿರುವ ಪಿಜ್ಜಾ ಬಗ್ಗೆ ಮಾತನಾಡಿದ್ದಾರೆ. ಒಮ್ಮೆ ತಾನು ಅದನ್ನು ತಿನ್ನಲು ಪ್ರಯತ್ನಿಸಿದ್ಉದ, ಅದು ತನಗೆ ಇಷ್ಟವಾಗಲಿಲ್ಲ ಎಂದು ಅವರು ಹೇಳಿದ್ದಾರೆ. ಜನರು ಪಿಜ್ಜಾವನ್ನು ಜೀರ್ಣಿಸಿಕೊಳ್ಳಲು, ಅದರ ಜೊತೆಗೆ ಕೋಲ್ಡ್ ಡ್ರಿಂಕ್ಸ್ ಅನ್ನೂ ಕುಡಿಯುತ್ತಾರೆ. ಇದು ಹೊಟ್ಟೆಗೆ ಎಷ್ಟು ಹಾನಿಕಾರಕ ಎಂಬುದನ್ನು ಊಹಿಸಬಹುದು. ಇದಕ್ಕೆ ಬದಲಾಗಿ, ನೀವು ಮನೆಯಲ್ಲಿಯೇ ಆರೋಗ್ಯಕರ, ದೇಸಿ ಪಿಜ್ಜಾವನ್ನು ತಯಾರಿಸಬಹುದು. ಇದು ನಿಮ್ಮ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ.

ಬಾಬಾ ರಾಮದೇವ್ ಅವರು ಹಂಚಿಕೊಂಡ ಪೋಸ್ಟ್

ಚಳಿಗಾಲದ ಸೂಪರ್‌ಫುಡ್ಸ್ ಜೊತೆ ದೇಸಿ ಪಿಜ್ಜಾ

ಈ ವಿಡಿಯೋದಲ್ಲಿ ಬಾಬಾ ರಾಮದೇವ್ ಅವರು ಸಿರಿಧಾನ್ಯಗಳಲ್ಲೊಂದಾದ ಬಾಜ್ರಾದ ರೋಟಿ ಬಳಸಿ ಪಿಜ್ಜಾ ತಯಾರಿಸುವುದು ಹೇಗೆ ಎಂದು ತೋರಿಸಿಕೊಟ್ಟಿದ್ದಾರೆ. ಇದು ದೇಹವನ್ನು ಬೆಚ್ಚಗಿಡಲು ಸಹಾಯವಾಗುತ್ತದಾದ್ದರಿಂದ ಇದನ್ನು ಚಳಿಗಾಲದ ಸೂಪರ್‌ಫುಡ್ ಎಂದು ಪರಿಗಣಿಸಲಾಗಿದೆ. ಈ ದೇಸಿ ಪಿಜ್ಜಾ ಮಾಡಲು, ಬಾಜರಾ ರೊಟ್ಟಿ ತಯಾರಿಸಿ, ಅದಕ್ಕೆ ಚೀಸ್ ಬದಲಿಗೆ ಮೇಲೆ ಬೆಣ್ಣೆಯನ್ನು ಹರಡಿ. ನಂತರ, ಮನೆಯಲ್ಲಿ ತಯಾರಿಸಿದ ಚಟ್ನಿಯನ್ನು ಹರಡಿ ಮತ್ತು ಅದರ ಮೇಲೆ ತರಕಾರಿಗಳನ್ನು ಹಾಕಿ. ಅಲ್ಲಿಗೆ, ನಿಮ್ಮ ದೇಸಿ ಮತ್ತು ಆರೋಗ್ಯಕರ ಪಿಜ್ಜಾ ಸಿದ್ಧವಾದಂತೆ.

ಇದನ್ನೂ ಓದಿ: ಚಳಿಗಾಲದಲ್ಲಿ ಆರೋಗ್ಯ ಕಾಪಾಡುವ ಆಹಾರ ಬಾಜ್ರಾ ಚುರ್ಮಾ: ಬಾಬಾ ರಾಮದೇವ್​ಗೆ ಪ್ರಿಯವಾದ ತಿಂಡಿಯೂ ಇದು

ಬಾಜ್ರಾ ತುಂಬಾ ಪ್ರಯೋಜನಕಾರಿ

ಬಾಜ್ರಾ ಧಾನ್ಯ ಪೋಷಕಾಂಶಗಳ ಉಗ್ರಾಣವಾಗಿದೆ. ಇದರಲ್ಲಿ ಫೈಬರ್, ಪ್ರೋಟೀನ್, ಕಬ್ಬಿಣ, ಮೆಗ್ನೀಸಿಯಮ್, ವೈಟಮಿನ್ ಮತ್ತು ಆ್ಯಂಟಿ ಆಕ್ಸಿಡೆಂಟ್ಸ್ ಸೇರಿದಂತೆ ಅನೇಕ ಅಗತ್ಯ ಪೋಷಕಾಂಶಗಳಿವೆ. ಇದು ತೂಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ ಮತ್ತು ರಕ್ತಹೀನತೆಯನ್ನು ಎದುರಿಸಲು ಸಹಾಯ ಮಾಡುತ್ತದೆ. ಇದು ಆರೋಗ್ಯಕ್ಕೆ, ಅದರಲ್ಲೂ ವಿಶೇಷವಾಗಿ ಚಳಿಗಾಲದಲ್ಲಿ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 9:23 pm, Thu, 18 December 25

Source link

ಬುರ್ಖಾ ಧರಿಸದೆ ಹೊರಹೋಗಿದ್ದಕ್ಕೆ ಹೆಂಡತಿ, ಮಕ್ಕಳನ್ನು ಕೊಂದೆ; ಶಾಕಿಂಗ್ ವಿಷಯ ಬಿಚ್ಚಿಟ್ಟ ಪಾಪಿ – Kannada News | Stepped Out Without Burqa Uttar Pradesh Man Chilling Confession After Killing his Wife and 2 Daughters

ನವದೆಹಲಿ, ಡಿಸೆಂಬರ್ 18: ಉತ್ತರ ಪ್ರದೇಶದ ಶಾಮ್ಲಿಯಲ್ಲಿ ಪೊಲೀಸರು ಪತ್ನಿ ಮತ್ತು ಇಬ್ಬರು ಮಕ್ಕಳ ಕೊಲೆಗೆ (Murder) ಸಂಬಂಧಿಸಿದಂತೆ ವ್ಯಕ್ತಿಯನ್ನು ವಶಕ್ಕೆ ಪಡೆದ ನಂತರ, ಆ ಆರೋಪಿಯ ತಪ್ಪೊಪ್ಪಿಗೆಯ ವೇಳೆ ಆಘಾತಕಾರಿ ವಿವರಗಳು ಹೊರಬಿದ್ದಿವೆ. ಡಿಸೆಂಬರ್ 10ರಂದು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ 33 ವರ್ಷದ ಫಾರೂಕ್ ತನ್ನ ಪತ್ನಿಯನ್ನು ಗುಂಡಿಕ್ಕಿ ಕೊಂದು ತನ್ನ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ಕೂಡ ಕೊಂದಿದ್ದ. ಬಳಿಕ ಆತ ತನ್ನ ಮನೆಯೊಳಗೆ 3 ಶವಗಳನ್ನು ಹೂತು ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯ ಬಗ್ಗೆ ತಪ್ಪೊಪ್ಪಿಕೊಂಡಿರುವ ಫಾರೂಕ್ ತನ್ನ ಪತ್ನಿ ತಾಹಿರಾ (32) ಬುರ್ಖಾ ಹಾಕದೆ ಹೊರಗೆ ಹೋಗಬಾರದು ಎಂದು ಕಟ್ಟುನಿಟ್ಟಾಗಿ ಆದೇಶಿಸಿದ್ದ. ಬುರ್ಖಾ ಧರಿಸದೆ ಮನೆಯಿಂದ ಹೊರಗೆ ಹೋಗಲು ಬಿಡುತ್ತಿರಲಿಲ್ಲ. 1 ತಿಂಗಳ ಹಿಂದೆ ಮನೆಯ ಖರ್ಚಿನ ಬಗ್ಗೆ ತನ್ನ ಪತ್ನಿಯೊಂದಿಗೆ ತೀವ್ರ ಜಗಳವಾಡಿದ್ದಾಗಿ ಆತ ಬಹಿರಂಗಪಡಿಸಿದ್ದಾನೆ. ಫಾರೂಕ್ ಮನೆಯ ಖರ್ಚುಗಳಿಗೆ ಸಾಕಷ್ಟು ಹಣವನ್ನು ನೀಡಲಿಲ್ಲ ಎಂದು ತಾಹಿರಾ ಜಗಳವಾಡುತ್ತಿದ್ದಳು. ಈ ವಿವಾದದ ನಂತರ, ಬುರ್ಖಾ ಧರಿಸದೆ ಮುಜಫರ್ ನಗರದ ನಾರಾ ಗ್ರಾಮದಲ್ಲಿರುವ ತನ್ನ ಹೆತ್ತವರ ಮನೆಗೆ ಹೋಗಿದ್ದಳು.

ಇದನ್ನೂ ಓದಿ: ಇವ್ನೆಂಥಾ ಮಗ, ಹೆತ್ತ ತಂದೆ ತಾಯಿಯನ್ನು ಹೊಡೆದು ಕೊಂದು, ದೇಹಗಳನ್ನು ಕತ್ತರಿಸಿ ನದಿಗೆಸೆದ ಮಗ

ಆಕೆಯ ನಿರ್ಧಾರದಿಂದ ಕೋಪಗೊಂಡ ಫಾರೂಕ್ ಆಕೆ ಮನೆಗೆ ವಾಪಾಸ್ ಬಂದ ನಂತರ ಡಿಸೆಂಬರ್ 10ರ ರಾತ್ರಿ ಆಕೆಯನ್ನು ಗುಂಡಿಕ್ಕಿ ಕೊಂದಿದ್ದಾನೆ. ನಂತರ ಆ ಕೊಲೆಯನ್ನು ಕಂಡಿದ್ದ ಇಬ್ಬರು ಹೆಣ್ಣುಮಕ್ಕಳನ್ನು ಸಹ ಕೊಂದು, ನಂತರ ಮೂರು ಶವಗಳನ್ನು ಮನೆಯಲ್ಲಿಯೇ ಹೂತು ಹಾಕಿದ್ದಾನೆ. ಈ ಬಗ್ಗೆ ಆತನೇ ಒಪ್ಪಿಕೊಂಡಿದ್ದಾನೆ. ತನ್ನ ಹೆಣ್ಣುಮಕ್ಕಳಲ್ಲಿ ಒಬ್ಬಳ ಕಣ್ಣುಗಳನ್ನು ಕೂಡ ಕಿತ್ತುಹಾಕಿದ್ದಾಗಿ ಆತ ಹೇಳಿದ್ದಾನೆ.

ಇದನ್ನೂ ಓದಿ: 1 ಕೋಟಿ ರೂ. ಹಣಕ್ಕಾಗಿ ತನ್ನ ಕಾರಿನಲ್ಲಿ ಬೇರೆಯವನಿಗೆ ಬೆಂಕಿ ಹಚ್ಚಿ ಸಾವಿನ ಕತೆ ಕಟ್ಟಿದ ವ್ಯಕ್ತಿ!

ಶವವನ್ನು ಹೊರಗೆ ತೆಗೆದಾಗ ಅಪ್ರಾಪ್ತ ಹೆಣ್ಣುಮಕ್ಕಳ ದೇಹದಲ್ಲಿ ಒಬ್ಬರ ದೇಹದ ಒಂದು ಕಣ್ಣು ಕಿತ್ತು ಹೋಗಿದ್ದು, ಕೊಲೆ ನಡೆದ ಸ್ಥಳದಿಂದ ರಕ್ತಸಿಕ್ತವಾದ ಮರದ ಕೋಲನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಮಕ್ಕಳನ್ನು ಹೊಡೆಯಲು ಅದನ್ನು ಬಳಸಿದ್ದಾನೆ ಎಂದು ಶಂಕಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯಾದಗಿರಿ: ಕೃಷ್ಣಾ ನದಿಯಲ್ಲಿ ಅಕ್ರಮ ಮರಳು ದಂಧೆ; ಅಧಿಕಾರಿಗಳು ದಾಳಿ, ಕೋಟ್ಯಂತರ ರೂ ಮೌಲ್ಯದ ಮರಳು ಜಪ್ತಿ – Kannada News | Yadgir: Officials crack down on illegal sand mafia; sand worth crores seized

ಯಾದಗಿರಿ, ಡಿಸೆಂಬರ್​​ 18: ಕೃಷ್ಣಾ ನದಿ ಯಾದಗಿರಿ (Yadgiri) ಜಿಲ್ಲೆಯ ಜನರ ಜೀವನಾಡಿ. ಈ ವರ್ಷ ಅತಿಯಾದ ಮಳೆಯಿಂದಾಗಿ ನದಿ ಮೈದುಂಬಿಕೊಂಡಿದೆ. ಇದರ ಜೊತೆಗೆ ಸಾಕಷ್ಟು ಮರಳು (sand) ಕೂಡ ಸಂಗ್ರಹವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ದಂಧೆಕೋರರು ನದಿಯ ಒಡಲು ಬಗೆದು ಕೋಟ್ಯಂತರ ರೂ. ಮೌಲ್ಯದ ಮರಳು ಲೂಟಿ ಮಾಡುತ್ತಿದ್ದಾರೆ. ಕೊನೆಗೂ ಅಧಿಕಾರಿಗಳು ಧೈರ್ಯ ಮಾಡಿ‌ ಮರಳು ದಂಧೆಕೋರರಿಗೆ ಬಿಸಿ ಮುಟ್ಟಿಸಿದ್ದಾರೆ. ಅಷ್ಟೇ ಅಲ್ಲದೆ ಕೋಟ್ಯಂತರ ರೂ. ಮೌಲ್ಯದ ಮರಳು ಜಪ್ತಿ ಮಾಡಿ ವಾಹನಗಳನ್ನು ಸೀಜ್ ಮಾಡಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೃಷ್ಣ ನದಿ ತೀರದಲ್ಲಿ ಮರಳು ದಂಧೆ ಜೋರಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ ಮತ್ತು ಭೀಮಾ ನದಿ ತೀರದಲ್ಲಿ ಹಲವು ವರ್ಷಗಳಿಂದ ಎಗ್ಗಿಲ್ಲದ ಅಕ್ರಮ ಮರಳು ದಂಧೆ ಜೋರಾಗಿ ನಡೆಯುತ್ತಿದೆ. ನದಿಗೆ ಜೆಸಿಬಿ ಹಾಗೂ ಹಿಟಾಚಿಗಳನ್ನ ಇಳಿಸಿ ಅಕ್ರಮವಾಗಿ ಮರಳನ್ನ ಲೂಟಿ ಮಾಡಲಾಗುತ್ತಿದೆ. ಅದರಲ್ಲೂ ಕೃಷ್ಣಾ ನದಿಯಲ್ಲಂತೂ ಅಕ್ರಮ ದಂಧೆಕೋರರು ಹಗಲು ರಾತ್ರಿಯನ್ನೆದೇ ಮರಳನ್ನ ಲೂಟಿ ಮಾಡುತ್ತಿದ್ದಾರೆ.

ಅಕ್ರಮವಾಗಿ ಮರಳು ಸಂಗ್ರಹ ಸ್ಥಳಗಳ ಮೇಲೆ ಅಧಿಕಾರಿಗಳು ದಾಳಿ

ಸುರಪುರ ತಾಲೂಕಿನ ಶೆಳ್ಳಗಿ, ಮುಷ್ಟಳ್ಳಿ, ಸೂಗೂರು ಹಾಗೂ ಹೆಮ್ಮಡಗಿ ಬಳಿಯಲ್ಲಿ ಎಗ್ಗಿಲ್ಲದೆ ಮರಳು ದಂಧೆ ನಡೆಯುತ್ತಿದೆ‌. ಸರ್ಕಾರದಿಂದ ಯಾವುದೇ ಅಧಿಕೃತ ಟೆಂಡರ್​​ ಕರೆದು ಪಾಯಿಂಟ್ ಗುರುತು ಮಾಡದೆ ಇದ್ದರೂ ಸಹ ಮರಳು ದಂಧೆಕೋರರು ಅಕ್ರಮವಾಗಿ ಮರಳನ್ನ ಲೂಟಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಕೋಟ್ಯಂತರ ರೂ. ಮೌಲ್ಯದ ಮರಳನ್ನು ರಾಜಾರೋಷವಾಗಿ ಲೂಟಿ ಮಾಡುವ ಕೆಲಸವಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಜನರು ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮವಾಗಿರಲಿಲ್ಲ. ಆದರೆ ಇದೀಗ ಅಧಿಕಾರಿಗಳು ಮರಳು ದಂಧೆಕೋರರ ವಿರುದ್ಧ ಸಮರ ಸಾರಿದ್ದಾರೆ. ಅಕ್ರಮವಾಗಿ ಮರಳು ಸಂಗ್ರಹ ಮಾಡಿದ್ದ ಸ್ಥಳಗಳ ಮೇಲೆ ದಾಳಿ ಮಾಡಿ ಕೋಟ್ಯಂತರ ರೂ. ಮೌಲ್ಯದ ಮರಳು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ಯಾದಗಿರಿ: ಕುಡಿಯೋಕಷ್ಟೇ ಅಲ್ಲ, ಸ್ನಾನಕ್ಕೂ ಯೋಗ್ಯವಲ್ಲ ಭೀಮಾ ನದಿ ನೀರು!

ಸುರಪುರ ತಾಲೂಕಿನ ಶೆಳ್ಳಗಿ, ಮುಷ್ಟಳ್ಳಿ, ಸೂಗೂರು ಹಾಗೂ ಹೆಮ್ಮಡಗಿ ಬಳಿ ಪೊಲೀಸರ ಸಹಕಾರದಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಳೆದ ವಾರ ದಾಳಿ ಮಾಡಿದ್ದ ಅಧಿಕಾರಿಗಳು ಅಕ್ರಮ ಮರಳು ಸಂಗ್ರಹ ಕಂಡು ಶಾಕ್​ ಆಗಿದ್ದಾರೆ. ಏಕೆಂದರೆ ಲೆಕ್ಕಕ್ಕೆ ಸಿಗದಷ್ಟು ಮರಳನ್ನ ನದಿಯಿಂದ ಬಗೆದು ಸಂಗ್ರಹಿಸಿಡಲಾಗಿತ್ತು. ಸದ್ಯ ಅಧಿಕಾರಿಗಳು ದಾಳಿ ನಡೆಸಿ ಸೀಜ್ ಮಾಡಿ ಲೆಕ್ಕ ಮಾಡಿದಾಗ ಮೂರು ಕಡೆ ಬರೋಬ್ಬರಿ 6 ಕೋಟಿ ರೂ. ಮೌಲ್ಯದ ಮರಳು ಸಿಕ್ಕಿದೆ. ಸುಮಾರು 67 ಸಾವಿರ ಮೆಟ್ರಿಕ್ ಟನ್ ಮರಳು, ಬಳಕೆ ಮಾಡಿದ ಸುಮಾರು 20 ಹಿಟಾಚಿ ವಾಹನಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.

ಇದನ್ನೂ ಓದಿ: ಯಾದಗಿರಿ: ಶಾಲಾ ಮಕ್ಕಳ ಬಿಸಿಯೂಟಕ್ಕೆ ಹುಳ ಬಿದ್ದಿರೋ ಅಕ್ಕಿ ಬೇಳೆ; TV9 ರಿಯಾಲಿಟಿ ಚೆಕ್​ನಲ್ಲಿ ಬಯಲಾಯ್ತು ಅಸಲಿಯತ್ತು

ಸುರಪುರ ಪೊಲೀಸ್ ಠಾಣೆಯಲ್ಲಿ 16 ಜನರ ವಿರುದ್ಧ ಮೂರು ಪ್ರತ್ಯೇಕ ಕೇಸ್​​ ದಾಖಲು ಮಾಡಿದ್ದಾರೆ. ಇನ್ನು ಅಧಿಕಾರಿಗಳಿಗೆ ಸಾಕಷ್ಟು ಕಡೆಗಳಿಂದ ಕರೆಗಳು ಬರುತ್ತಿದ್ದು, ವಾಹನಗಳನ್ನ ಬಿಡುಗಡೆ ಮಾಡುವಂತೆ ಒತ್ತಡ ಹೆಚ್ಚಿದೆ. ಆದರೆ ಅಧಿಕಾರಿಗಳು ಮಾತ್ರ ಯಾವುದಕ್ಕೆ ತಲೆ ಕೆಡಿಸಿಕೊಳ್ಳದೆ ವಾಹನಗಳನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೃಷ್ಣ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಗೆ ಅಧಿಕಾರಿಗಳು ಬ್ರೇಕ್​ ಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ: ಕಂಗಾಲಾದ ಧ್ರುವಂತ್ – Kannada News | Bigg Boss Kannada Season 12: Dhruvanth Rakshitha Shetty fight continues in secret room

ಸದ್ಯಕ್ಕೆ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ (Rakshitha Shetty) ಅವರು ಸೀಕ್ರೆಟ್​​ ರೂಮ್​​ನಲ್ಲಿ ಇದ್ದಾರೆ. ಅಲ್ಲಿ ಅವರಿಗೆ ಕೆಲವು ಚಟುವಟಿಕೆಗಳನ್ನು ನೀಡಲಾಗುತ್ತಿದೆ. ಇಬ್ಬರೂ ಚರ್ಚಿಸಿ ಒಮ್ಮತದ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಿಗ್ ಬಾಸ್ ಸೂಚಿಸುತ್ತಿದ್ದಾರೆ. ಆದರೆ ಅನೇಕ ಸಂದರ್ಭಗಳಲ್ಲಿ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ (Dhruvanth) ನಡುವೆ ಹೊಂದಾಣಿಕೆ ಆಗುತ್ತಿಲ್ಲ. ಹಾಗಾಗಿ ಅವರು ಪದೇ ಪದೇ ಜಗಳ ಆಡುತ್ತಿದ್ದಾರೆ. ಇಬ್ಬರ ಅಭಿಪ್ರಾಯಗಳು ಕೂಡ ಬೇರೆ ಬೇರೆ ಆಗಿವೆ. ಆದ್ದರಿಂದ ಕಿರಿಕ್ ಆಗುತ್ತಿದೆ. ಧ್ರುವಂತ್ ಆಡಿದ ಮಾತುಗಳಿಂದ ರಕ್ಷಿತಾ ಶೆಟ್ಟಿ ಅವರು ಕೋಪಗೊಂಡಿದ್ದಾರೆ. ಅಲ್ಲದೇ, ಅವರ ಕೋಪ ಮಿತಿ ಮೀರಿದೆ. ಧ್ರುವಂತ್ ಅವರ ಹಾಸಿಗೆಯನ್ನು ರಕ್ಷಿತಾ ಶೆಟ್ಟಿ ಕಿತ್ತು ಬಿಸಾಕಿದ್ದಾರೆ. ಡಿಸೆಂಬರ್ 18ರ ಸಂಚಿಕೆಯ ಪ್ರೋಮೋ ಇಲ್ಲಿದೆ. ‘ಜಿಯೋ ಹಾಟ್​ ಸ್ಟಾರ್’ ಒಟಿಟಿ ಮತ್ತು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪೂರ್ತಿ ಸಂಚಿಕೆ ವೀಕ್ಷಿಸಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅತ್ತ ಸಿಎಂ ಕುರ್ಚಿಗಾಗಿ ಕದನ: ಇತ್ತ ಚಾಮರಾಜನಗರದಲ್ಲೂ ಸಹ ಕುರ್ಚಿ ಕಿತ್ತಾಟ – Kannada News | Chamarajanagar: Scramble for Deputy Director’s post as officers vie for the chair

ಚಾಮರಾಜನಗರ, ಡಿಸೆಂಬರ್​ 18: ಕರ್ನಾಟಕದಾದ್ಯಂತ (Karnataka) ಸಿಎಂ ಮತ್ತು ಡಿಸಿಎಂ ಕುರ್ಚಿ ಕಾದಾಟ ಒಂದೆಡೆಯಾದರೆ, ಇತ್ತ ಗಡಿನಾಡು ಚಾಮರಾಜನಗರದಲ್ಲೂ (Chamarajanagar) ಒಂದೇ ಕುರ್ಚಿಗಾಗಿ ಕಾದಾಟ ಜೋರಾಗಿದೆ. ಒಂದು ಕುರ್ಚಿಗಾಗಿ ಇಬ್ಬಿಬ್ಬರು ಅಧಿಕಾರಿಗಳು ಪಟ್ಟು ಹಿಡಿದು ಕುಳಿತಿದ್ದಾರೆ. ನಾನು ರಿಲೀವ್ ಆಗಿಲ್ಲ, ಕೋರ್ಟ್ ಸ್ಟೇ ಕೊಟ್ಟಿದೆ ಅಂತ ಒಬ್ಬರು, ಸರ್ಕಾರ ನನಗೆ ಆದೇಶ ನೀಡಿದೆ ಅಂತ ಮತ್ತೊಬ್ಬರು ಹೇಳುತ್ತಿದ್ದಾರೆ. ಸದ್ಯ ಇದು ಜನರ ನಗೆ ಪಾಟಲಿಗೆ ಕಾರಣವಾಗಿದೆ.

ರಾಜ್ಯಾದ್ಯಂತ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಸಿಎಂ ಕುರ್ಚಿ ಕಾದಾಟ ಚರ್ಚೆ ನಡೆಯುತ್ತಿರುವ ವಿಚಾರ. ಸಿಎಂ ಅವರು ಆಗುತ್ತಾರೆ, ಇವರ ಆಗುತ್ತಾರೆ ಎನ್ನುವ ಚರ್ಚೆ ಮಧ್ಯೆ ಡಿನ್ನರ್ ಪಾಲಿಟಿಕ್ಸ್ ಸುದ್ದಿ ನೋಡಿ ರಾಜ್ಯದ ಜನ ಒಂದೆಡೆ ರೋಸಿ ಹೋಗಿದ್ದಾರೆ. ಆದರೆ ಅದೇ ರೀತಿ ಒಂದು ಕುರ್ಚಿಗಾಗಿ ಇಬ್ಬರು ಅಧಿಕಾರಿಗಳು ಕಿರಿಕ್ ಮಾಡಿಕೊಂಡು ಇದೀಗ ನಗೆ ಪಾಟಲಿಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ಟಿವಿ9 ವರದಿಯ ಬಿಗ್ ಇಂಪ್ಯಾಕ್ಟ್; ಪಚ್ಚೆದೊಡ್ಡಿ ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿದ ಜಿಲ್ಲಾಧಿಕಾರಿ

ಚಾಮರಾಜನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕನ ಕುರ್ಚಿಗೆ ಇಬ್ಬರು ಅಧಿಕಾರಿಗಳು ಟವೆಲ್ ಹಾಕಿದ್ದಾರೆ. ಸುರೇಶ್​ ಮತ್ತು ಚೆಲುವರಾಜ್​​​ ಇವರೇ ಆ ಅಧಿಕಾರಿಗಳು. ಇವರಿಬ್ಬರ ಕಿತ್ತಾಟದಿಂದ ಅಸಲಿಗೆ ನಿಜವಾದ ಉಪ ನಿರ್ದೇಶಕ ಯಾರಪ್ಪ ಅಂತ ಸಾರ್ವಜನಿಕರು ತಲೆಕೆಡೆಸಿಕೊಂಡಿದ್ದಾರೆ.

ಐದು ತಿಂಗಳಿಗೆ ವರ್ಗಾವಣೆ

ಅಸಲಿಗೆ ಆಗಿದ್ದೇನು ಅಂದರೆ, ಕಳೆದ 5 ತಿಂಗಳ ಹಿಂದೆ ಚಾಮರಾಜನಗರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾಗಿ ಸುರೇಶ್ ಚಾರ್ಜ್ ತೆಗೆದುಕೊಂಡಿದ್ದರು. ಐದು ತಿಂಗಳು ಕಳೆಯುವುದರೊಳಗೆ ಏನಾಯ್ತೋ ಏನೋ ಕೆಲ ಆರೋಪಗಳು ಕೇಳಿಬಂದ ಬೆನ್ನಲ್ಲೇ ಸುರೇಶ್​ರನ್ನ ರಾಜ್ಯ ಸರ್ಕಾರ ಚಾಮರಾಜನಗರದಿಂದ ಬೆಂಗಳೂರು ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಿತ್ತು.

ಖಾಲಿ ಇರುವ ಉಪ ನಿರ್ದೇಶಕರ ಸ್ಥಾನ ಮಹಿಳಾ ರಕ್ಷಣಾಧಿಕಾರಿ ಚೆಲುವರಾಜ್​​ರನ್ನ ಪ್ರಭಾರವಾಗಿ ಆಯ್ಕೆಆಡಿ ಆದೇಶ ಹೊರಡಿಸಿದೆ. ಆದರೆ ನಾನಿನ್ನು ಬಂದು 5 ತಿಂಗಳಾಗಿದೆ ಈ ವರ್ಗಾವಣೆ ನ್ಯಾಯ ಸಮ್ಮತವಲ್ಲ ಎಂದು ಕೆಇಟಿಗೆ ಹೋಗಿದ್ದರು. ಕೆಇಟಿಗೆ ಹೋಗಿ ಅದಕ್ಕೆ ಸ್ಟೇ ಕೂಡ ತಂದಿದ್ದಾರೆ. ಇಷ್ಟರ ಒಳಗಾಗಿ ಚೆಲುವರಾಜ್ ಸಿಇಓ ಗೆ ಆದೇಶ ಪ್ರತಿ ನೀಡಿ ಅವರ ಒಪ್ಪಿಗೆಯೂ ಪಡೆಯದೆ ಇತ್ತ ಸುರೇಶ್​ರಿಂದ ಅಧಿಕಾರವನ್ನ ಸಹ ಪಡೆಯದೆ ಏಕಾಏಕಿ ಉಪ ನಿರ್ದೇಶಕರಾಗಿ ಸ್ವತಃ ಅಧಿಕಾರ ವಹಿಸಿಕೊಂಡಿದ್ದಾರೆ.

ಇದು ನ್ಯಾಯ ಸಮ್ಮತವಲ್ಲ ಎಂದ ಅಧಿಕಾರಿ

ಕೋರ್ಟ್ ಸ್ಟೇ ನೀಡಿದೆ. ನಾನು ರಿಲೀವ್ ಕೂಡ ಆಗಿಲ್ಲ, ಸಿಇಓ ಹಾಗೂ ಡಿಸಿ ಕೆಲ ಕಾರ್ಯಗಳು ಮುಗಿದ ಬಳಿಕ ರಿಲೀವ್ ಆಗಿ ಅಂತ ಹೇಳಿದ ಬಳಿಕವು ಚೆಲುವರಾಜ್ ಅದು ಹೇಗೆ ಅಧಿಕಾರ ವಹಿಸಿಕೊಂಡರು, ಇದು ನ್ಯಾಯ ಸಮ್ಮತವಲ್ಲ ಹಾಗಾಗಿ ನಾನೇ ಮುಂದುವರೆಯುತ್ತೇನೆ ಎಂದು ಇಂದು ಕಚೇರಿಗೆ ಬಂದ ಸುರೇಶ್, ಕುರ್ಚಿ ಮೇಲೆ ಕುಳಿತು ತಮ್ಮ ಕಾರ್ಯನಿರ್ವಹಿಸಿದ್ದಾರೆ.

ಇದನ್ನೂ ಓದಿ: ಈ ಊರಿನ ಮಕ್ಕಳು ಶಾಲೆಗೆ 14 ಕಿಮೀ ನಡೆದೇ ಹೋಗಬೇಕು! ಕಾಡು ಪ್ರಾಣಿಗಳಿಂದ ಸುರಕ್ಷತೆ ಕೋರಿ ಸಿಎಂಗೆ ಪತ್ರ ಬರೆದ ವಿದ್ಯಾರ್ಥಿಗಳು

ಸದ್ಯ ನ್ಯಾಯಾಲಯ ವರ್ಗಾವಣೆ ಆದೇಶ ತಡೆ ಹಿಡಿದಿದ್ದು, ಯಥಾಸ್ಥಿತಿ ಕಾಪಾಡಿಕೊಳ್ಳವಂತೆ ಆದೇಶಿಸಿದೆ. ಇನ್ನು ಸಿಇಓ ಗಮನಕ್ಕೆ ತಾರದೆ ಚೆಲುವರಾಜ್ ಅಧಿಕಾರ ಸ್ವೀಕರಿಸಿದನ್ನ ಪ್ರಶ್ನಿಸಿ ಸಿಇಓ ನೋಟಿಸ್ ನೀಡಿದ್ದಾರೆ. ಒಟ್ಟಿನಲ್ಲಿ ಒಂದು ಕುರ್ಚಿಗಾಗಿ ಇಬ್ಬರು ಅಧಿಕಾರಿಗಳು ನಂದು ಅಂತ ಕಿತ್ತಾಡಿದ್ದು, ಮಾತ್ರ ನಿಜಕ್ಕೂ ದುರಂತವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕೊಲೆ ಬೆದರಿಕೆ ಹಾಕಿದ್ದ ರೌಡಿ ಶೀಟರ್ ಮಟ್ಯಾಷ್: ಹಳ್ಳಿ ಹೈದರು ಪ್ಯಾಟೆಯಲ್ಲಿ ಸಿಕ್ಕಿರು – Kannada News | A Gang Arrested In Bengaluru Who Escaped after Murder of rowdy sheeter Mahesh at Pandavapura

ಮಂಡ್ಯ, (ಡಿಸೆಂಬರ್ 18): ಬೆದರಿಕೆ ಹಾಕಿದ್ದ ರೌಡಿ ಶೀಟರ್ ​​​ನನ್ನೇ (rowdy sheeter )ಹತ್ಯೆ ಮಾಡಲಾಗಿದೆ. ಮಂಡ್ಯ (Mandya) ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಅಮೃತಿ ಗ್ರಾಮದ ಬಳಿ ಕಳೆದ ನವೆಂಬರ್ 29ರಂದು ರೌಡಿ ಶೀಟರ್ ಮಹೇಶ್ ಎಂಬಾತನ ಭೀಕರ ಹತ್ಯೆ ಮಾಡಲಾಗಿದ್ದು, ತಲೆಮರಿಸಿಕೊಂಡಿದ್ದ ಹಂತಕರು ಇದೀಗ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದಾರೆ. ಬಸವರಾಜು, ಶಶಾಂಕ್‌, ಹೇಮಂತ್ ಕುಮಾರ್, ಸುಮಂತ್ ಬಂಧಿತರು. ಈ ಸ್ನೇಹಿತರ ಗುಂಪಿಗೆ ರೌಡಿ ಶೀಟರ್ ಮಹೇಶ್, ಕೆಲ ಹಲವು ದಿನಗಳಿಂದ ಟಾರ್ಚರ್ ಕೊಡುತ್ತಾ ಕೊನೆಗೆ ಕೊಲೆ ಬೆದರಿಕೆ ಹಾಕಿದ್ದ. ಇದರಿಂದ ಆತಂಕಗೊಂಡ ಗ್ಯಾಂಗ್, ​ ಪ್ಲ್ಯಾನ್ ಮಾಡಿ ಸಿಮಿಮಾ ಸ್ಟೈಲ್​​​ನಲ್ಲೇ ರೌಡಿ ಶೀಟರ್​​​ ಮಹೇಶನನ್ನೇ ಕೊಲೆ ಮಾಡಿ ತಲೆಮರಿಸಿಕೊಂಡಿದ್ದರು. ಇದೀಗ ಬೆಂಗಳೂರಿನ ಲಾಡ್ಜ್​​​ನಲ್ಲಿ ತಂಗಿದ್ದ ಹಂತಕರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿನಿಮಾ ಸ್ಟೈಲ್ ನಲ್ಲಿ ರೌಡಿಶೀಟರ್ ಹತ್ಯೆ

ಕೊಲೆಯಾದ ಮಹೇಶ ಲಕ್ಷ್ಮೀಸಾಗರದ ನಿವಾಸಿ. ಹಲವು ವರ್ಷಗಳಿಂದ ರೌಡಿ ಚಟುವಟಿಕೆಯಲ್ಲಿ ತೊಡಗಿದ್ದ. ಈತನ ವಿರುದ್ಧ 8 ಪ್ರಕರಣಗಳು ದಾಖಲಾಗಿದ್ದವು. ಅಷ್ಟೆಯಲ್ಲ 2023ರಲ್ಲಿ ಈತನನ್ನ ಪೊಲೀಸರು ಗಡಿಪಾರು ಮಾಡಿದ್ದದರು. ಗಡಿಪಾರು ಅವಧಿ ಮುಗಿದ ಬಳಿಕ ಬೆಂಗಳೂರಿನಲ್ಲಿ ಆಟೋ ಓಡಿಸುತ್ತಿದ್ದ. ಆದ್ರೆ, ಕೊಲೆಯಾಗುವ ಮೂರು ದಿನದ ಹಿಂದಷ್ಟೆ ಊರಿಗೆ ಬಂದಿದ್ದ. ನವೆಂಬರ್ 28ರಂದು ಸಮೀಪದ ಜಕ್ಕನಹಳ್ಳಿಯ ಬಾರ್ ವೊಂದರಲ್ಲಿ ಪಾರ್ಟಿ ಮಾಡಿ ಸ್ನೇಹಿತರಾದ ಕಿರಣ್ ಹಾಗೂ ಮರೀಗೌಡ ಜೊತೆಗೆ ಒಂದೇ ಬೈಕ್ ನಲ್ಲಿ ಊರಿಗೆ ಹೊಟ್ಟಿದ್ದ. ಅಮೃತಿ ಬಳಿಗೆ ಬರ್ತಿದ್ದಂತೆ ಮಾರುತಿ ಓಮ್ನಿಯಲ್ಲಿ ಅಟ್ಯಾಕ್ ಮಾಡಿದ್ದ ಗ್ಯಾಂಗ್​, ಸಿನಿಮಾ ಸ್ಟೈಲ್ ನಲ್ಲಿ ಮೊದಲು ಬೈಕ್ ಗೆ ಗುದ್ದಿ ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾಗಿದ್ದರು.

ಇದನ್ನೂ ಓದಿ: ಹುಡುಗಿಯರ ಮೊಬೈಲ್​ ನಂಬರ್​​ ಕೇಳಿದ್ದಕ್ಕೆ ಫೈಟ್​​: ಪೊಲೀಸ್​​ ಠಾಣೆ ಮೆಟ್ಟಿಲೇರಿದ ಪಬ್​​ ಗಲಾಟೆ

ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಹಂತಕರು

ಭೀಮಾ ಅಲಿಯಾಸ್ ಚಂದ್ರಶೇಖರ, ಬಸವರಾಜು, ಶಶಾಂಕ್‌, ಹೇಮಂತ್ ಕುಮಾರ್, ಸುಮಂತ್ ಸಿನಿಮಾ ಸ್ಟೈಲ್ ನಲ್ಲಿ ಮೊದಲು ಬೈಕ್ ಗೆ ಕಾರಿನಲ್ಲಿ ಡಿಕ್ಕಿ ಹೊಡೆಸಿ ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಮೇಲುಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾಗ ಮಹೇಶ ಇನ್ನೂ ಬದುಕಿದ್ದ. ತಕ್ಷಣ ಆತನನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮಹೇಶ ಮೃತಪಟ್ಟಿದ್ದ. ಇನ್ನು ಪ್ರಕರಣ ದಾಖಲಿಸಿಕೊಂಡು ಮೇಲುಕೋಟೆ ಪೊಲೀಸರು ತನಿಖೆ ಕೈಗೊಳ್ಳುತ್ತಿದ್ದಂತೆಯೇ ಎ1 ಆರೋಪಿ ಭೀಮ ನ್ಯಾಯಾಲಯದಲ್ಲಿ ಶರಣಾಗಿದ್ದ. ಆತನನ್ನ ಕಸ್ಟಡಿಗೆ ಪಡೆದ ಪೊಲೀಸರು ಮತ್ತಷ್ಟು ತನಿಖೆ ಚುರುಕುಗೊಳಿಸಿದಾಗ ಉಳಿದ ಹಂತಕರು ಬೆಂಗಳೂರಿನಲ್ಲಿರುವುದು ಗೊತ್ತಾಗಿದೆ. ಕೂಡಲೇ ಬೆಂಗಳೂರಿಗೆ ತೆರಳಿ ಕಾರ್ಯಚರಣೆ ನಡೆಸಿದಾಗ ಹಂತಕರು ಜಿಗಿಣಿಯ ಲಾಡ್ಜ್​​ವೊಂದರಲ್ಲಿ ಸಿಕ್ಕಿಬಿದ್ದಿದ್ದಾರೆ. ಇದರೊಂದಿಗೆ ಕೊಲೆ ಬಳಿಕ ತಲೆಮರೆಸಿಕೊಂಡಿದ್ದ ಬಸವರಾಜು, ಶಶಾಂಕ್‌, ಹೇಮಂತ್ ಕುಮಾರ್, ಸುಮಂತ್ ನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆ ಮಾಡಲು ಕಾರಣವೇನು?

ಇನ್ನು ಲಕ್ಷ್ಮೀಸಾಗರದ ಮತ್ತೊಬ್ಬ ರೌಡಿಶೀಟರ್ ರೋಹಿತ ಎಂಬಾತನ ಜೊತೆಗೆ ಭೀಮ ಸ್ನೇಹ ಬೆಳೆಸಿದ್ದಕ್ಕೆ ಮಹೇಶ ದ್ವೇಷ ಮಾಡಲು ಶುರು ಮಾಡಿದ್ದ. ಇದೇ ವಿಚಾರವಾಗಿ ಭೀಮ ಹಾಗೂ ಬಸವರಾಜುಗೆ ಎರಡ್ಮೂರು ಬಾರಿ ಮಹೇಶ ಹಲ್ಲೆ ಮಾಡಿದ್ದ. ಅಷ್ಟೇ ಅಲ್ಲ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ಭಯಗೊಂಡ ಭೀಮ ಹಾಗೂ ಬಸವರಾಜು ಸ್ಕೆಚ್​​ ಹಾಕಿ ಕೊಲೆ ಮಾಡಿದ್ದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ಒಟ್ಟಿನಲ್ಲಿ ಗಡಿಪಾರಾದ ಬಳಿಕವೂ ಬುದ್ಧಿ ಕಲಿಯದೆ ರೌಡಿಸಂ ಮುಂದುವರೆಸಿದ್ದ ಮಹೇಶ ಕೊಲೆಯಾಗಿದ್ರೆ, ಅತ್ತ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರು ಮಚ್ಚು ಹಿಡಿದು ಜೈಲು ಸೇರಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

30 ದಿನ ಮಾಂಸಾಹಾರ ಸೇವಿಸದಿದ್ದರೆ ಏನಾಗುತ್ತೆ ನೋಡಿ… – Kannada News | What Happens When You Quit Meat for 30 Days?

ಮಾಂಸಾಹಾರ (Meat) ಸೇವನೆ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ. ಆದರೆ ಇತ್ತೀಚಿನ ದಿನಗಳಲ್ಲಿ ಒಂದಿಷ್ಟು ಜನ ಮಾಂಸಾಹಾರ ಸೇವನೆಯಿಂದ ಹಿಂದೆ ಸರಿಯುತ್ತಿದ್ದಾರೆ. ಅದರ ಬದಲಾಗಿ ಸಸ್ಯಹಾರಿಗಳಾಗುತ್ತಿದ್ದಾರೆ. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳಲು ಮಾಂಸಾಹಾರ ತ್ಯಜಿಸಬೇಕೇ ಅಥವಾ ಬೇಡವೇ ಎಂಬ ಗೊಂದಲ ಕೆಲವರದ್ದು. ನಿಯಮಿತವಾಗಿ ಮಾಂಸಾಹಾರ ತಿನ್ನುವ ನೀವು 30 ದಿನಗಳು ಅಂದರೆ ಒಂದು ತಿಂಗಳು ಮಾಂಸವನ್ನು ಸೇವಿಸದಿದ್ದರೆ ಅದು ನಿಮ್ಮ ದೇಹದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ತಿಳಿದಿದೆಯೇ, ಹಾಗಾದರೆ ಈ ಸ್ಟೋರಿ ಓದಿ, ಆ ಮೂಲಕ ಇದರಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ.

30 ದಿನಗಳ ಕಾಲ ಮಾಂಸ ಸೇವಿಸದಿದ್ದರೆ ಏನಾಗುತ್ತದೆ?

ಉರಿಯೂತ ಕಡಿಮೆಯಾಗುತ್ತದೆ: ಸಂಸ್ಕರಿಸಿದ ಮಾಂಸ ಮತ್ತು ಕೆಂಪು ಮಾಂಸಗಳಲ್ಲಿ ಸ್ಯಾಚುರೇಟೆಡ್ ಕೊಬ್ಬು ಅಧಿಕವಾಗಿರುತ್ತವೆ. ಪ್ರತಿನಿತ್ಯ ಮಾಂಸ ಸೇವನೆ ಮಾಡುವುದು ಉರಿಯೂತಕ್ಕೆ ಕಾರಣವಾಗಬಹುದು.

ಶಕ್ತಿ ಕಡಿಮೆಯಾಗಬಹುದು: ಮಾಂಸ ಸೇವನೆಯನ್ನು ನಿಲ್ಲಿಸುವುದರಿಂದ ನಿಮ್ಮ ಶಕ್ತಿಯ ಮಟ್ಟ ಕುಸಿಯಬಹುದು. ದಣಿದ ಅನುಭವವಾಗಬಹುದು. ಹಾಗಾಗಿ ನೀವು ಬೇರೆ ರೀತಿಯಲ್ಲಿ ನಿಮ್ಮ ಪ್ರೋಟೀನ್ ಸೇವನೆಯನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ.

ಕರುಳಿನ ಆರೋಗ್ಯ ಕಾಪಾಡಬಹುದು: ಮಾಂಸವನ್ನು ಒಂದು ತಿಂಗಳ ಕಾಲ ತ್ಯಜಿಸುವ ಮೂಲಕ ನಿಮ್ಮ ಕರುಳಿನ ಆರೋಗ್ಯವು ಸುಧಾರಿಸಿಕೊಳ್ಳಬಹುದು. ಇವುಗಳ ಬದಲು ಧಾನ್ಯಗಳ ಸೇವನೆ ಮಾಡಬಹುದು. ಇದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗುತ್ತದೆ.

ಮಲಬದ್ಧತೆಗೆ ಮುಕ್ತಿ ನೀಡುತ್ತದೆ: ಮಾಂಸವನ್ನು ಕಡಿಮೆ ಮಾಡಿ ಧಾನ್ಯ, ತರಕಾರಿ ಮತ್ತು ದ್ವಿದಳ ಧಾನ್ಯಗಳಂತಹ ಹೆಚ್ಚಿನ ಸಸ್ಯ ಆಧಾರಿತ ಆಹಾರಗಳ ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆಗೆ ಮುಕ್ತಿ ಸಿಗುತ್ತದೆ.

ಇದನ್ನೂ ಓದಿ: 21 ದಿನ ಒಂದು ಕಪ್ ದಾಳಿಂಬೆ ಹಣ್ಣನ್ನು ತಿನ್ನುವ ಚಾಲೆಂಜ್: ಸಂಶೋಧನೆಯಿಂದ ಆಶ್ಚರ್ಯಕಾರಿ ಮಾಹಿತಿ ಬಹಿರಂಗ

ಒಮ್ಮೆಲೇ ಮಾಂಸಾಹಾರ ಬಿಟ್ಟರೆ ಏನಾಗಬಹುದು?

ನೀವು ಇದ್ದಕ್ಕಿದ್ದಂತೆ ಮಾಂಸ ಸೇವನೆಯನ್ನು ಕಡಿಮೆ ಮಾಡಿದರೆ ಅಪಾಯವೂ ಆಗಬಹುದು. ಹಾಗಾಗಿ ಒಮ್ಮೆಲೇ ಬಿಡುವುದು ಒಳ್ಳೆಯದಲ್ಲ. ಜೊತೆಗೆ ಮಾಂಸಾಹಾರದ ಬದಲು ಸಮತೋಲಿತ ಆಹಾರವನ್ನು ಕಾಪಾಡಿಕೊಳ್ಳುವುದು ಒಳ್ಳೆಯದು. ಇದರಿಂದ ಪ್ರೋಟೀನ್ ಕೊರತೆಯಾಗುವುದಿಲ್ಲ. ಇಲ್ಲವಾದಲ್ಲಿ ಮೂಳೆ ದುರ್ಬಲವಾಗುವ ಅಪಾಯ ಹೆಚ್ಚಾಗಿರುತ್ತದೆ. ಆದ್ದರಿಂದ, ಆರೋಗ್ಯ ಕಾಪಾಡಿಕೊಳ್ಳಲು, ಮಾಂಸಕ್ಕೆ ಸರಿಸಮನಾದ ಆಹಾರಗಳನ್ನು ಸೇವನೆ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೊಡ್ಡ ಮೊತ್ತಕ್ಕೆ ಸೇಲ್ ಆಯ್ತು ‘ಬಲರಾಮನ ದಿನಗಳು’ ಚಿತ್ರದ ಆಡಿಯೋ ಹಕ್ಕು – Kannada News | Balaramana Dinagalu movie audio rights sold to T Series for this amount

ನಟ ವಿನೋದ್ ಪ್ರಭಾಕರ್ (Vinod Prabhakar) ಅವರು ‘ಬಲರಾಮನ ದಿನಗಳು’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಪ್ರಿಯಾ ಆನಂದ್ ಅಭಿನಯಿಸಿದ್ದಾರೆ. ಬಿಡುಗಡೆಗೆ ಸಜ್ಜಾಗುತ್ತಿರುವ ಈ ಸಿನಿಮಾಗೆ ಪ್ರಚಾರ ಕಾರ್ಯ ಆರಂಭಿಸಲಾಗಿದೆ. ‘ಶುರು ಶುರು..’ ಎಂಬ ಹಾಡಿನ ಮೂಲಕ ಪ್ರಚಾರ ಶುರುವಾಗಿದೆ. ಈ ಸಿನಿಮಾಗೆ ಕೆ.ಎಂ. ಚೈತನ್ಯ ಅವರು ನಿರ್ದೇಶನ ಮಾಡಿದ್ದಾರೆ. 18 ವರ್ಷಗಳ ಹಿಂದೆ ಕೆ.ಎಂ. ಚೈತನ್ಯ ಅವರ ನಿರ್ದೇಶನದಲ್ಲಿ ‘ಆ ದಿನಗಳು’ ಸಿನಿಮಾ ಮೂಡಿಬಂದಿತ್ತು. ಈಗ ಅವರು ‘ಬಲರಾಮನ ದಿನಗಳು’ (Balaramana Dinagalu) ಸಿನಿಮಾ ಮಾಡಿದ್ದಾರೆ.

ಈ ಸಿನಿಮಾಗೆ ಪದ್ಮಾವತಿ ಜಯರಾಮ್ ಹಾಗೂ ಶ್ರೇಯಸ್ ಬಂಡವಾಳ ಹೂಡಿದ್ದಾರೆ. ಇದು ವಿನೋದ್ ಪ್ರಭಾಕರ್ ನಟನೆಯ 25ನೇ ಸಿನಿಮಾ ಎಂಬುದು ವಿಶೇಷ. ಅವಿನಾಶ್, ಅತುಲ್ ಕುಲಕರ್ಣಿ, ವಿನಯ್ ಗೌಡ, ಆಶಿಶ್ ವಿದ್ಯಾರ್ಥಿ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಸಂತೋಷ್ ನಾರಾಯಣನ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈಗ ಬಿಡುಗಡೆ ಆಗಿರುವ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಸಂಚಿತ್ ಹೆಗ್ಡೆ ಮತ್ತು ಪುಣ್ಯ ಅವರು ಧ್ವನಿ ನೀಡಿದ್ದಾರೆ.

ಇದು ‘ಆ ದಿನಗಳು’ ಸಿನಿಮಾದ ಸೀಕ್ವೆಲ್ ಅಲ್ಲ ಎಂದು ನಿರ್ದೇಶಕ ಕೆ.ಎಂ. ಚೈತನ್ಯ ಅವರು ಸ್ಪಷ್ಟಪಡಿಸಿದ್ದಾರೆ. ‘ಇದು ಒಂದು ಕಾಲ್ಪನಿಕ ಕತೆ ಇರುವ ಸಿನಿಮಾ’ ಎಂದು ಅವರು ಹೇಳಿದ್ದಾರೆ. ಈ ಸಿನಿಮಾದ ಆಡಿಯೋ ಹಕ್ಕುಗಳನ್ನು ಟಿ-ಸಿರೀಸ್ ಕಂಪನಿಯು ದೊಡ್ಡ ಮೊತ್ತಕ್ಕೆ ಖರೀದಿಸಿದೆ. ‘ಮತ್ತೊಂದು ಸಿನಿಮಾ ನಿರ್ಮಾಣ ಮಾಡುವಷ್ಡು ಹಣ ನೀಡಿದ್ದಾರೆ’ ಎಂದು ನಿರ್ಮಾಪಕ ಶ್ರೇಯಸ್ ಹೇಳಿದ್ದಾರೆ.

‘ಶುರು ಶುರು..’ ಹಾಡು:

ಮೂಲಗಳ ಪ್ರಕಾರ, 3 ಕೋಟಿ 75 ಲಕ್ಷ ರೂಪಾಯಿಗೆ ‘ಬಲರಾಮನ ದಿನಗಳು’ ಸಿನಿಮಾದ ಆಡಿಯೋ ರೈಟ್ಸ್ ಮಾರಾಟ ಆಗಿದೆ. ‘ನನ್ನ ವೃತ್ತಿ ಜೀವನದ 25 ಸಿನಿಮಾಗಳಲ್ಲಿ ಆಡಿಯೋಗೆ ಗರಿಷ್ಠ ಮೊತ್ತ ಪಡೆದ ಮೊದಲ ಚಿತ್ರ ಇದು. ಈ ಸಿನಿಮಾದಲ್ಲಿ ನನ್ನ ಪಾತ್ರ ಚೆನ್ನಾಗಿ ಮೂಡಿಬಂದಿದೆ’ ಎಂದಿದ್ದಾರೆ ವಿನೋದ್ ಪ್ರಭಾಕರ್. ನಟಿ ಪ್ರಿಯಾ ಆನಂದ್ ಅವರು ಕನ್ನಡದಲ್ಲಿ ನಟಿಸಿದ 5ನೇ ಸಿನಿಮಾ ಇದು.

ಇದನ್ನೂ ಓದಿ: ವಿನೋದ್ ಪ್ರಭಾಕರ್ ನಟನೆಯ ‘ಬಲರಾಮನ ದಿನಗಳು’ಗೆ ಗೃಹ ಸಚಿವರ ಶುಭಾಶಯ

ವಿನಯ್ ಗೌಡ ಅವರು ಈ ಸಿನಿಮಾದಲ್ಲಿ ಕತ್ತಿ ಎನ್ನುವ ಪಾತ್ರ ಮಾಡಿದ್ದಾರೆ. ಪರಭಾಷಾ ನಟಿ ಪ್ರಿಯಾ ಆನಂದ್ ಅವರು ಕನ್ನಡದಲ್ಲೇ ಮಾತನಾಡಿ ಮೆಚ್ಚುಗೆ ಪಡೆದರು. ಈ ಮೊದಲು ಪುನೀತ್ ರಾಜ್​​ಕುಮಾರ್ ಜೊತೆ ‘ರಾಜಕುಮಾರ’ ಸಿನಿಮಾದಲ್ಲಿ ಅವರು ನಟಿಸಿದ್ದರು. ತಾವು ಕನ್ನಡ ಕಲಿಯಲು ಪುನೀತ್ ರಾಜ್​​ಕುಮಾರ್ ಕಾರಣ ಎಂದು ಅವರು ಹೇಳಿದರು. ನಿರ್ಮಾಪಕಿ ಪದ್ಮಾವತಿ ಜಯರಾಮ್ ಮಾತನಾಡಿ, ‘ಕುಟುಂಬದ ಜೊತೆ ಕುಳಿತು ನೋಡುವ ಸಿನಿಮಾ ಮಾಡಿದ್ದೇವೆ’ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಾಂಗ್ರೆಸ್ ಪ್ರತಿಭಟನೆಯಲ್ಲೇ ASI ಮಾಂಗಲ್ಯ ಸರ ಕಳವು, ಲೇಡಿ ಪೊಲೀಸ್ ಚೈನ್ ಕದ್ದ ಆ ಕೈ ಯಾವುದು? – Kannada News | Kote Station Lady Police ASI Gold mangalsutra theft In Shivamogga During Congress protest

ಶಿವಮೊಗ್ಗ, (ಡಿಸೆಂಬರ್ 18): ಕಾಂಗ್ರೆಸ್ ಪ್ರತಿಭಟನೆಯ (Congress Protest) ಬಂದೋಬಸ್ತ್ ವೇಳೆ, ಕರ್ತವ್ಯ ನಿರತ ಮಹಿಳಾ ಪೊಲೀಸ್ (Lady Police)  ಅಧಿಕಾರಿಯೊಬ್ಬರ 60 ಗ್ರಾಂ ತೂಕದ ಮಾಂಗಲ್ಯ ಸರ ಕಳ್ಳತನವಾಗಿರುವ ಘಟನೆ ಶಿವಮೊಗ್ಗದಲ್ಲಿ (Shivamogga) ನಡೆದಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಪಕ್ಷದ ರಾಷ್ಟ್ರೀಯ ನಾಯಕರ ಮೇಲೆ ಇಡಿ ಮೇಲೆ ಪ್ರಭಾವ ಬೀರಿ ಅನಗತ್ಯ ಆರೋಪ ಸೃಷ್ಟಿಸಿರುವುದು ಹಾಗೂ ಮನ್ರೇಗಾ ಹೆಸರು ಬದಲಾವಣೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು (ಡಿಸೆಂಬರ್ 18) ಬೆಳಗ್ಗೆ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ಪೊಲೀಸರು ಮಧ್ಯೆ ಪ್ರವೇಶಿಸಿದ್ದು, ಪ್ರತಿಭಟನೆಕಾರರನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಇದರಿಂದ ಸ್ಥಳದಲ್ಲಿ ಹೈಡ್ರಾಮಾವೇ ನಡೆದಿದ್ದು, ತಳ್ಳಾಟ ನೂಕಾಟದಲ್ಲಿ ಬಂದೋಬಸ್ತ್ ನಲ್ಲಿದ್ದ ಮಹಿಳಾ ಎಎಸ್ಐ ಅಮೃತಬಾಯಿ ಅವರ ಕೊರಳಿನಲ್ಲಿದ್ದ  ಬಂಗಾರದ ತಾಳಿಯನ್ನೇ ಕಿರಾತಕರು ಎಗರಿಸಿದ್ದಾರೆ. ಈ ಘಟನೆಯಿಂದ ಆಘಾತಕ್ಕೊಳಗಾದ ಅಧಿಕಾರಿ ಸ್ಥಳದಲ್ಲೇ ಕಣ್ಣೀರು ಹಾಕಿದ್ದು, ಈ ಸಂಬಂಧ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

ಮಾಂಗಲ್ಯ ಸರ ಕಳೆದುಕೊಂಡು ಕಣ್ಣೀರಿಟ್ಟ ಎಎಸ್​​ಐ

ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಬಂದೋಬಸ್ತ್‌ನಲ್ಲಿ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯ ಎಎಸ್ಐ ಆಗಿರುವ ಅಮೃತಾ ಬಂದೋಬಸ್ತ್ ಕರ್ತವ್ಯದಲ್ಲಿದ್ದರು. ಈ ವೇಳೆ ಎಎಸ್‍ಐ ಅಮೃತಾಬಾಯಿಯವರ ಕೊರಳಲ್ಲಿ ಇದ್ದ 60 ಗ್ರಾಂ ತೂಕದ 8 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ಕಳ್ಳತನವಾಗಿದೆ. ಮಾಂಗಲ್ಯ ಸರ ಕಳುವಾಗಿರುವುದು ತಿಳಿಯುತ್ತಿದ್ದಂತೆಯೇ ಎಎಸ್‌ಐ ಅಮೃತಾ ಅವರು ಸ್ಥಳದಲ್ಲೇ ಕಣ್ಣೀರಿಟ್ಟರು.ಕರ್ತವ್ಯ ನಿರತ ಅಧಿಕಾರಿಯೊಬ್ಬರ ಸರವೇ ಕಳುವಾಗಿರುವುದು ಇಲಾಖೆಗೆ ಮತ್ತು ಸಹೋದ್ಯೋಗಿಗಳಿಗೆ ಭಾರೀ ಮುಜುಗರ ಹಾಗೂ ಆತಂಕ ತಂದಿದೆ. ಕೂಡಲೇ ಸ್ಥಳದಲ್ಲಿದ್ದ ಇತರೆ ಪೊಲೀಸ್ ಅಧಿಕಾರಿಗಳು ಅಮೃತಾ ಅವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬುವ ಪ್ರಯತ್ನ ಮಾಡಿದರು.

ಇದನ್ನೂ ನೋಡಿ: Shivamogga: ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!

ಪೊಲೀಸರು ಎಂಬ ಭಯವೂ ಇಲ್ಲವೇ?

ಪೊಲೀಸರನ್ನೇ ದೋಚಿರುವುದು ಅಚ್ಚರಿಗೆ ಕಾರಣವಾಗಿದ್ದು, ಖದೀಮರಿಗೆ ಪೊಲೀಸರು ಎಂಬ ಭಯವೂ ಇಲ್ಲದಂತಾಗಿದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ.  ಯಾಕಂದ್ರೆ ಓರ್ವ ಮಹಿಳಾ ಪೊಲೀಸ್​ ಕುತ್ತಿಗೆ ಕೈಹಾಕಿ ಕದ್ದಿರುವುದು ಅಂದ್ರೆ ಸಾಮಾನ್ಯ ಅಲ್ಲ. ಮೊದಲೇ ಕರ್ನಾಟಕದಲ್ಲಿ ಅಪರಾಧ ಚಟುವಟಕೆಗಳು ಎಗ್ಗಿಲ್ಲದೇ ನಡೆದಿದ್ದು, ಕೆಲ ಅಪರಾಧ ಪ್ರಕರಣಲ್ಲಿ ಪೊಲೀಸರು ಸಹ ಶಾಮೀಲಾಗಿರುವ ಉದಾಹರಣೆಗಳು ಇವೆ. ಇಂತಹ ಸಂದರ್ಭದಲ್ಲಿ ಮಹಿಳಾ ಪೊಲೀಸ್​ ಸರ ಕದ್ದಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.​

ಇನ್ನು ಪ್ರಕರಣದಿಂದ ಮುಜುಗರಕ್ಕೊಳಗಾಗಿರುವ ಪೊಲೀಸರು ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.ಪ್ರತಿಭಟನೆಯ ವೇಳೆ ಸೆರೆಹಿಡಿಯಲಾದ ವಿಡಿಯೋ ತುಣುಕುಗಳು ಮತ್ತು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಆದ್ರೆ, ಕಾಂಗ್ರೆಸ್ ಪ್ರತಿಭಟನೆಯ ಗದ್ದಲದ ನಡುವೆ ಈ ದುಷ್ಕೃತ್ಯ ಎಸಗಿದವರು ಯಾರು? ಪ್ರತಿಭಟನೆಯಲ್ಲಿದ್ದವರೇ ಕದ್ದರೇ ಅಥವಾ ಬೇರೆ ಕಳ್ಳ ಗುಂಪಿನಲ್ಲಿ ನುಸುಳಿ ಕದ್ದುಕೊಂಡು ಹೋಗಿದ್ದಾನೆಯೇ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:25 pm, Thu, 18 December 25

Source link

ನೂರಾರು ಎಕರೆಯ ಧಾರವಾಡ ಕರ್ನಾಟಕ ವಿವಿ ಜಮೀನು ರಕ್ಷಣೆಗೆ ದಿಟ್ಟ ಹೆಜ್ಜೆ: ಕುಲಪತಿ ನಡೆಗೆ ಮೆಚ್ಚುಗೆ – Kannada News | Dharwad Karnataka University: New Vice Chancellor takes bold steps to protect hundreds of acres of land

ಧಾರವಾಡ ಕರ್ನಾಟಕ ವಿವಿ, ಕುಲಪತಿ ಪ್ರೊ. ಎ.ಎಂ. ಖಾನ್

ಧಾರವಾಡ, ಡಿಸೆಂಬರ್​​ 18: ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪೈಕಿ ಧಾರವಾಡ ಕರ್ನಾಟಕ ವಿವಿ (Karnatak University) ಕೂಡ ಒಂದು. ಈ ವಿಶ್ವವಿದ್ಯಾಲಯಕ್ಕೆ ಸೇರಿದ ನೂರಾರು ಎಕರೆ ಜಮೀನಿದೆ (land). ಆದರೆ ಇತ್ತೀಚಿನ ವರ್ಷಗಳಲ್ಲಿ ಅದರ ನಿರ್ವಹಣೆ ಮಾಡಲಾಗದೆ ಅನೇಕರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಈ ಅತಿಕ್ರಮಣ ತೆರವು ಮಾಡಲು ಹೋದರೆ ಸಾಕಷ್ಟು ಸಮಸ್ಯೆಯಾಗುತ್ತಲೇ ಇದೆ. ಆದರೂ ಇದೀಗ ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ವಿವಿಯ ಕುಲಪತಿ ಹೊಸ ರೀತಿಯ ಸರ್ವೆ ಮಾಡಿಸಿ, ತಮ್ಮ ಅವಧಿಯಲ್ಲಿ ಅದಕ್ಕೆ ಬೇಲಿ ಹಾಕಿ ರಕ್ಷಣೆ ಮಾಡಲು ಮುಂದಾಗಿದ್ಧಾರೆ.

ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯ. ಹಸಿರಿನಿಂದ ಕಂಗೊಳಿಸುವ ಈ ವಿಶ್ವವಿದ್ಯಾಲಯಕ್ಕೆ ಒಟ್ಟು 880 ಎಕರೆ ಜಮೀನಿದೆ. ಆದರೆ ಆ ಜಮೀನಿನ ರಕ್ಷಣೆಯೇ ವಿಶ್ವವಿದ್ಯಾಲಯಕ್ಕೆ ದೊಡ್ಡ ಸವಾಲಾಗಿದೆ. ಅನೇಕ ಕಡೆಗಳಲ್ಲಿ ವಿವಿಯ ಜಮೀನಿನ ಅತಿಕ್ರಮಣವಾಗಿ, ಅಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಅಂಥ ಜಾಗವನ್ನು ಮರಳಿ ತೆಗೆದುಕೊಳ್ಳಲು ವಿವಿಯ ಅಧಿಕಾರಿಗಳು ಹೋದರೆ ಸಾಕಷ್ಟು ಗಲಾಟೆಗಳು ನಡೆದಿವೆ.

ಇದನ್ನೂ ಓದಿ: Guest Lecturer Jobs: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ನೇಮಕಾತಿ; ಅರ್ಜಿ ಸಲ್ಲಿಸುವುದು ಹೇಗೆ?

ಹೀಗಾಗಿ ಯಾವೊಬ್ಬ ಕುಲಪತಿಯೂ ಇದರ ತಂಟೆಗೆ ಹೋಗದೇ, ತಾವಾಯಿತು ತಮ್ಮ ಅಧಿಕಾರವಾಯಿತು ಅಂತಾ ಇದ್ದುಬಿಟ್ಟಿದ್ದರು. ಆದರೆ ಇತ್ತೀಚಿಗೆ ಅಧಿಕಾರ ಸ್ವೀಕರಿಸಿರುವ ಕುಲಪತಿ ಪ್ರೊ. ಎ.ಎಂ. ಖಾನ್ ಅವರು ವಿಶ್ವವಿದ್ಯಾಲಯದ ಎಲ್ಲ ಆಸ್ತಿಗಳ ರಕ್ಷಣೆಗೆ ಮುಂದಾಗಿದ್ಧಾರೆ. ಮೂಲತಃ ಇದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿರುವ ಪ್ರೊ. ಖಾನ್, ತಮ್ಮ ಅವಧಿಯಲ್ಲಿ ಈ ಕೆಲಸವನ್ನು ಮಾಡಿಯೇ ತೀರಬೇಕು ಅಂತಾ ನಿರ್ಧರಿಸಿದ್ದಾರೆ. ಇದಕ್ಕಾಗಿ ಹೊಸ ಬಗೆಯ ತಂತ್ರಜ್ಞಾನವನ್ನು ಬಳಸಿಕೊಳ್ಳಲು ನಿರ್ಧರಿಸಿದ್ದಾರೆ.

ಧಾರವಾಡ ನಗರದ ಅನೇಕ ಕಡೆಗಳಲ್ಲಿ ಈ ವಿಶ್ವವಿದ್ಯಾಲಯದ ಆಸ್ತಿ ವಿಸ್ತರಿಸಿದೆ. ಒಂದೇ ಕಡೆಯಲ್ಲಿ ಜಮೀನು ಇದ್ದರೆ ರಕ್ಷಣೆ ಹಾಗೂ ನಿರ್ವಹಣೆ ತುಂಬಾನೇ ಸರಳ. ಆದರೆ ಅನೇಕ ಕಡೆಗಳಲ್ಲಿ ಆಸ್ತಿ ಇರುವುದರಿಂದ ಅವುಗಳನ್ನು ಗುರುತಿಸಿ, ಅವುಗಳ ಗಡಿ ಗುರುತಿಸಿ ಬೇಲಿಯನ್ನು ಅಳವಡಿಸುವುದು ತುಂಬಾನೇ ಕಷ್ಟ. ಅದಾಗಲೇ ಸ್ಥಳೀಯರು ಅದನ್ನು ಅತಿಕ್ರಮಣ ಮಾಡಿಕೊಂಡಿದ್ದರಿಂದ ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ಇದೀಗ ಡ್ರೋನ್ ಮೂಲಕ ವಿಶ್ವವಿದ್ಯಾಲಯದ ಸರ್ವೆ ನಡೆಸಲು ನಿರ್ಧರಿಸಲಾಗಿದೆ.

ಈ ಬಗ್ಗೆ ಸರ್ವೆ ಇಲಾಖೆಯೊಂದಿಗೆ ಸಂವಹನ ನಡೆಸಿ, ವೈಜ್ಞಾನಿಕವಾದ ಸರ್ವೆ ಮಾಡಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ಅತಿಕ್ರಮಣ ಮಾಡಿದವರು ಕೂಡ ಹೆಚ್ಚಿಗೆ ಮಾತನಾಡಲು ಬರುವುದಿಲ್ಲ ಎನ್ನುವುದು ಇದರ ಹಿಂದಿರುವ ಉದ್ದೇಶ. ನಗರದ ಹೃದಯ ಭಾಗದಲ್ಲಿಯೂ ವಿಶ್ವವಿದ್ಯಾಲಯದ ಸಾಕಷ್ಟು ಆಸ್ತಿ ಇವೆ. ಸಣ್ಣ ಜಮೀನಿಗೆ ಅದಾಗಲೇ ಕಾಂಪೌಂಡ್ ಇಲ್ಲವೇ ತಂತಿ ಬೇಲಿಯ ರಕ್ಷಣೆ ಇದೆ. ಆದರೆ ದೊಡ್ಡ ಜಮೀನಿಗೆ ಈ ರಕ್ಷಣೆ ನೀಡಲು ವಿಶ್ವವಿದ್ಯಾಲಯಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಅಂಥ ಜಮೀನುಗಳು ಅತಿಕ್ರಮಣಗೊಂಡಿವೆ. ಇನ್ನು ನೂತನ ಕುಲಪತಿಗಳ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಒಂದು ವಿಶ್ವವಿದ್ಯಾಲಯಕ್ಕೆ ಎಷ್ಟು ಜಮೀನಿದ್ದರೂ ಕಡಿಮೆಯೇ. ಅದು ನಿರಂತರವಾಗಿ ವಿಸ್ತರಣೆಯಾಗುತ್ತಾ ಹೋಗುವ ಜ್ಞಾನ ಕೇಂದ್ರ. ಹೀಗಾಗಿ ಇರುವ ಭೂಮಿಯನ್ನು ಯಾವುದೇ ಕಾರಣಕ್ಕೂ ಯಾರಿಗೂ ಬಿಟ್ಟುಕೊಡಬಾರದು ಅನ್ನೋದು ಸ್ಥಳೀಯರ ಅಭಿಪ್ರಾಯ.

ಇದನ್ನೂ ಓದಿ: ಮಹಾನಗರ ಪಾಲಿಕೆಗಳಲ್ಲಿ ಇನ್ನು ಇರಲ್ಲ ಆರೋಗ್ಯಾಧಿಕಾರಿ ಹುದ್ದೆ: ಕಾರಣ ಇಲ್ಲಿದೆ

ವಿವಿ ಭೂಮಿಯ ಅತಿಕ್ರಮಣದ ಅನೇಕ ಪ್ರಕರಣಗಳು ಅದಾಗಲೇ ನ್ಯಾಯಾಲಯದ ಮೆಟ್ಟಿಲೇರಿವೆ. ಇದಕ್ಕೆ ಕಾರಣ ಹಿಂದೆ ಕಾರ್ಯನಿರ್ವಹಿಸಿದ ವಿವಿ ಕುಲಪತಿಗಳು ಹಾಗೂ ಸಿಬ್ಬಂದಿ. ಅತಿಕ್ರಮಣ ತೆರವು ವೇಳೆ ರಾಜಕೀಯ ನಾಯಕರು ಕೂಡ ಪ್ರಭಾವ ಬೀರುತ್ತಾರೆ. ಹೀಗಾಗಿ ಅಧಿಕಾರಿಗಳಿಗೂ ಕೂಡ ಇದನ್ನು ತಡೆಯುವುದು ತುಂಬಾನೇ ಕಷ್ಟ. ಆದರೆ ಇದೀಗ ನೂತನ ಕುಲಪತಿಗಳ ಗಟ್ಟಿ ನಿರ್ಧಾರದಿಂದಾಗಿ ಕೈಬಿಟ್ಟು ಹೋಗಿರುವ ಆಸ್ತಿ ಮರಳಿ ಬರುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version