ಬಿಸಿಲ ಝಳಕ್ಕೆ ಭಣಗುಡುತ್ತಿವೆ ಐತಿಹಾಸಿಕ ತಾಣಗಳು: ಬಾದಾಮಿ, ಐಹೊಳೆ, ಪಟ್ಟದಕಲ್ಲಿಗೆ ಪ್ರವಾಸಿಗರ ಬರ – Kannada News | Heatwave Hits Bagalkot Historical Sites: Tourist Footfall Drops at Badami, Pattadakal, Aihole

ಬಾದಾಮಿ, ಕೂಡಲಸಂಗಮ, ಐಹೊಳೆImage Credit source: tv9 kannada

ಬಾಗಲಕೋಟೆ, ಮೇ 11: ಜಿಲ್ಲೆಯಲ್ಲಿ ಚಾಲುಕ್ಯರ ಐತಿಹಾಸಿಕ ಸ್ಥಳಗಳು, ಬಸವಣ್ಣನವರ ಐಕ್ಯ ಸ್ಥಳ ಮತ್ತು ಸಂಗಮನಾಥ ದೇಗುಲ ಸೇರಿದಂತೆ ಅನೇಕ ಪ್ರವಾಸಿ ತಾಣಗಳನ್ನು ಹೊಂದಿರುವ ಪ್ರಮುಖ ಜಿಲ್ಲೆ ಬಾಗಲಕೋಟೆ (bagalkot). ಆದರೆ ಜಿಲ್ಲೆಗೆ ಇದೀಗ ಪ್ರವಾಸಿಗರ ಬರ ಎದುರಾಗಿದೆ. ಇದಕ್ಕೆ ಕಾರಣ ನೆತ್ತಿ ಸುಡುತ್ತಿರುವ ಬಿರುಬಿಸಿಲು (Heatwave). 40 ಡಿಗ್ರಿ ಸೆಲ್ಸಿಯಸ್ ತಲುಪುತ್ತಿರುವ ತಾಪಮಾನಕ್ಕೆ ಪ್ರವಾಸಿಗರು ಪ್ರವಾಸಿ ತಾಣಗಳಿಂದ ದೂರ ಉಳಿಯುತ್ತಿದ್ದಾರೆ. ಹೀಗಾಗಿ ಉಪಹಾರ, ಲಾಡ್ಜ್​​, ಎಳೆನೀರು, ತಂಪು ಪಾನೀಯ ಸೇರಿದಂತೆ ಹಲವು ವ್ಯಾಪಾರಗಳಿಗೂ ಹೊಡೆತ ಬಿದ್ದಿದೆ.

ಮುಖ್ಯಾಂಶಗಳು

  • ಬಾಗಲಕೋಟೆ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ಭಣಭಣ
  • ಬಾದಾಮಿ, ಐಹೊಳೆ, ಕೂಡಲಸಂಗಮ ತಾಣಗಳಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆ ಕುಸಿತ
  • ಪ್ರವಾಸೋದ್ಯಮ ಮತ್ತು ಸ್ಥಳೀಯ ವ್ಯಾಪಾರಕ್ಕೂ ತಟ್ಟಿದ ಬಿಸಿಲ ಎಫೆಕ್ಟ್​

ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನುವ ಬಾದಾಮಿಯ ಗುಹಾಂತರ ದೇಗುಲಗಳು, ಐಹೊಳೆ-ಪಟ್ಟದಕಲ್ಲಿನ ಶಿಲ್ಪಕಲೆ, ಶರಣರ ನಾಡಿನ ಸಾಕ್ಷಿಯಾದ ಬಸವಣ್ಣನ ಐಕ್ಯ ಮಂಟಪ ಹಾಗೂ ಸಂಗಮನಾಥ ದೇಗುಲ. ಇವೆಲ್ಲವೂ ಈಗ ಪ್ರವಾಸಿಗರಿಲ್ಲದೆ ಭಣಗುಡುತ್ತಿವೆ. ಬಾಗಲಕೋಟೆ ಜಿಲ್ಲೆಯಲ್ಲಿ ತಾಪಮಾನ 39 ರಿಂದ 40 ಡಿಗ್ರಿ ದಾಟುತ್ತಿದ್ದು, ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಮನೆಯನ್ನೇ ಬಿಟ್ಟು ಹೊರಬರದ ಜನ, ಈ ರಣಬಿಸಿಲಿನಲ್ಲಿ ಪ್ರವಾಸಿ ತಾಣಗಳಿಗೆ ಬರುವುದಾದರೂ ಹೇಗೆ? ಇದರಿಂದಾಗಿ ಬಾದಾಮಿ, ಐಹೊಳೆ ಹಾಗೂ ಕೂಡಲಸಂಗಮಕ್ಕೆ ಭೇಟಿ ನೀಡುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ.

ವರ್ಷದಿಂದ ವರ್ಷಕ್ಕೆ ವಿದೇಶಿ ಪ್ರವಾಸಿಗರ ಸಂಖ್ಯೆ ಇಳಿಕೆ

ಜಿಲ್ಲೆಯ ಐತಿಹಾಸಿಕ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮಕ್ಕೆ ಪ್ರವಾಸಿಗರು ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ. ಬಿಸಿಲ ಬೇಗೆಯ ಕಾರಣ ವರ್ಷದಿಂದ ವರ್ಷಕ್ಕೆ ವಿದೇಶಿ ಪ್ರವಾಸಿಗರ ಸಂಖ್ಯೆ ಕೂಡ ಇಳಿಮುಖವಾಗುತ್ತಿದೆ‌.

  • 2025 ಜನವರಿಯಿಂದ ಏಪ್ರಿಲ್​​ವರೆಗೆ 1971 ವಿದೇಶಿ ಪ್ರವಾಸಿಗರು ಐಹೊಳೆಗೆ ಭೇಟಿ ನೀಡಿದ್ದರು. ಆದರೆ 2026ರಲ್ಲಿ ಜನವರಿಯಿಂದ ಏಪ್ರಿಲ್​​ವರೆಗೆ 1687 ಮಾತ್ರ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ.
  • ಬಾದಾಮಿಗೆ 2025 ಜನವರಿಯಿಂದ ಏಪ್ರಿಲ್​​ವರೆಗೆ 2849 ಜನ, 2026 ಜನವರಿಯಿಂದ ಏಪ್ರಿಲ್​ವರೆಗೆ 3091 ಪ್ರವಾಸಿಗರು ಭೇಟಿ ನೀಡಿದ್ದಾರೆ.
  • ಇನ್ನು 2025ರಲ್ಲಿ ಜನವರಿಯಿಂದ ಏಪ್ರಿಲ್​ವರೆಗೆ 2326 ಮತ್ತು 2026 ಜನವರಿಯಿಂದ ಏಪ್ರಿಲ್​ವರೆಗೆ 2185 ಜನರು ಮಾತ್ರ ಭೇಟಿ ನೀಡಿದ್ದಾರೆ.

ಪ್ರವಾಸಿಗರು ಬಾರದ ಹಿನ್ನೆಲೆ ಒಂದೆಡೆ ಪ್ರವಾಸೋದ್ಯಮಕ್ಕೆ ಸಂಕಷ್ಟ ಎದುರಾಗಿದ್ದು, ಮತ್ತೊಂದೆಡೆ ವ್ಯಾಪಾರ ವಹಿವಾಟಿಗೂ ಬಿಸಿ ತಟ್ಟಿದೆ. ಹೆಚ್ಚು ಪ್ರವಾಸಿಗರು ಭೇಟಿ ವೇಳೆ ಆಗುತ್ತಿದ್ದ ವ್ಯಾಪಾರ ಈ ಬಾರಿ ಇಲ್ಲ. ಉಪಹಾರ, ವಸತಿಗಾಗಿ ಹೋಟೆಲ್, ಎಳೆನೀರು, ತಂಪು ಪಾನೀಯ ಸೇರಿದಂತೆ ಹಲವು ವ್ಯಾಪಾರಗಳಿಗೆ ಹೊಡೆತ ಬಿದ್ದಿದೆ.

ಅಧಿಕಾರಿಗಳು ಹೇಳುವುದೇನು?

ಇನ್ನು ಬಿರುಬಿಸಿಲ ಬೇಸಿಗೆ ಅವಧಿಯಲ್ಲಿ ಪ್ರವಾಸಿಗರಿಗೆ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. ಪ್ರವಾಸಿ ಮಿತ್ರರು ತುರ್ತು ಸಹಾಯಕ್ಕೆ ಸಿದ್ಧರಿದ್ದಾರೆ. ಆದರೆ ಬಿಸಿಲು ಹಿನ್ನೆಲೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದ್ದು ನಿಜ ಎಂದು ಪ್ರಭಾರ ಡಿಡಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಗೋಪಾಲ ಹಿತ್ತಲಮನಿ ಅವರು ಮಾತು.

ಇದನ್ನೂ ಓದಿ: ಬಿಸಿಲ ಬೇಗೆಗೆ ಛತ್ರಿ, ಟೋಪಿ ಮೊರೆ ಹೋದ ಪ್ರವಾಸಿಗರು: ರಜೆಯಲ್ಲೂ ಟೂರಿಸ್ಟ್ ಸಂಖ್ಯೆ ಇಳಿಮುಖ

ಒಟ್ಟಿನಲ್ಲಿ, ಬಿಸಿಲ ಬೇಗೆಗೆ ಚಾಲುಕ್ಯರ ನಾಡಿನ ಪ್ರವಾಸೋದ್ಯಮ ತತ್ತರಿಸಿ ಹೋಗಿದೆ. ಇದು ಪ್ರವಾಸೋದ್ಯಮ ಸೇರಿ ವ್ಯಾಪಾರ ವಹಿವಾಟಿನ ಮೇಲೂ ಪರಿಣಾಮ ಬೀರಿದೆ‌.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 10:15 pm, Mon, 11 May 26

Source link

2026 ರ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ನಾಯಕ ಶ್ರೇಯಸ್ ಅಯ್ಯರ್ – Kannada News | Shreyas Iyer’s IPL 2026 Heroics: 5th Fifty, Breaks Kohli’s Record for Punjab Kings

ಐಪಿಎಲ್ 2026 (IPL 2026) ರ 55ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (PBKS vs DC) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್ 211 ರನ್​ಗಳ ಬೃಹತ್ ಮೊತ್ತ ಕಲೆಹಾಕಿತು. ಪಂಜಾಬ್ ತಂಡ ಇಷ್ಟು ದೊಡ್ಡ ಮೊತ್ತ ಕಲೆಹಾಕುವಲ್ಲಿ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಪ್ರಮುಖ ಪಾತ್ರವಹಿಸಿದರು. ಈ ಪಂದ್ಯದಲ್ಲಿ ಶ್ರೇಯಸ್ 36 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 59 ರನ್ ಬಾರಿಸಿ ಅಜೇಯರಾಗಿ ಉಳಿದರು. ಈ ಅರ್ಧಶತಕದ ಇನ್ನಿಂಗ್ಸ್ ಮೂಲಕ ಅಯ್ಯರ್, ಈ ಬಾರಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ನಾಯಕ ಎನಿಸಿಕೊಂಡಿದ್ದು ಮಾತ್ರವಲ್ಲದೆ, ವಿರಾಟ್ ಕೊಹ್ಲಿಯ ವಿಶೇಷ ದಾಖಲೆಯನ್ನು ಮುರಿದರು.

ಅತಿ ಹೆಚ್ಚು ಅರ್ಧಶತಕಗಳು

ಡೆಲ್ಲಿ ವಿರುದ್ಧ ಅರ್ಧಶತಕ ಬಾರಿಸುವ ಮೂಲಕ ಶ್ರೇಯಸ್ ಅಯ್ಯರ್, ಈ ಆವೃತ್ತಿಯಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ನಾಯಕ ಎನಿಸಿಕೊಂಡಿದ್ದಾರೆ. ಅಯ್ಯರ್ ಈ ಆವೃತ್ತಿಯಲ್ಲಿ ಇಲ್ಲಿಯವರೆಗೆ ಐದು ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಯ್ಯರ್, ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್ ವಿರುದ್ಧ ತಲಾ ಒಂದೊಂದು ಅರ್ಧಶತಕವನ್ನು ಬಾರಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಎರಡು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಈ ಆವೃತ್ತಿಯಲ್ಲಿ ಇಲ್ಲಿಯವರೆಗೆ 10 ಇನ್ನಿಂಗ್ಸ್‌ಗಳನ್ನಾಡಿರುವ ಶ್ರೇಯಸ್ ಅಯ್ಯರ್ 56 ಸರಾಸರಿಯಲ್ಲಿ 392 ರನ್ ಗಳಿಸಿದ್ದಾರೆ. ಇದರಲ್ಲಿ 25 ಸಿಕ್ಸರ್‌ಗಳು ಮತ್ತು 27 ಬೌಂಡರಿಗಳು ಸೇರಿವೆ.

ಕೊಹ್ಲಿ ದಾಖಲೆ ಸರಿಗಟ್ಟಿದ ಅಯ್ಯರ್

ಇಷ್ಟೇ ಅಲ್ಲ, ಶ್ರೇಯಸ್ ಅಯ್ಯರ್ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಿದರು. ಐಪಿಎಲ್ 2025 ರಿಂದೀಚೆಗೆ, ಅತ್ಯಧಿಕ ಅರ್ಧಶತಕಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಶ್ರೇಯಸ್ ಅಯ್ಯರ್ 11 ಅರ್ಧಶತಕಗಳೊಂದಿಗೆ ವಿರಾಟ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಸಾಧನೆಯನ್ನು 12 ಬಾರಿ ಮಾಡಿರುವ ಸಾಯಿ ಸುದರ್ಶನ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

10 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಶ್ರೇಯಸ್ ಅಯ್ಯರ್

ಶ್ರೇಯಸ್ ಅಯ್ಯರ್ ಅವರ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 210 ರನ್ ಗಳಿಸಿತು. ಅಯ್ಯರ್ ಹೊರತುಪಡಿಸಿ ಪ್ರಿಯಾಂಶ್ ಆರ್ಯ 56 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರೆ, ಕೂಪರ್ ಓನ್ಲಿ 38 ರನ್ ಮತ್ತು ಸೂರ್ಯಾಂಶ್ ಶೆಡ್ಜ್ 8 ಎಸೆತಗಳಲ್ಲಿ 21 ರನ್ ಗಳಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವರ್ಕ್ ಫ್ರಂ ಹೋಂ, ಆನ್​ಲೈನ್ ಕ್ಲಾಸ್, ಚಿನ್ನ ಬೇಡ, ಇಂಧನದ ಮಿತ ಬಳಕೆ; ಮತ್ತೊಮ್ಮೆ ಪ್ರಧಾನಿ ಮೋದಿ ಮನವಿ – Kannada News | Work From Home Online Classes No Gold Save Fuel PM Modis Appeal amid West Asia War

ನವದೆಹಲಿ, ಮೇ 11: ಕೊವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಇಡೀ ದೇಶ ಯಾವ ರೀತಿಯಲ್ಲಿ ಒಗ್ಗಟ್ಟಾಗಿ ನಿಂತು ಪರಿಸ್ಥಿತಿಯನ್ನು ನಿಭಾಯಿಸಲು ಸಹಕಾರ ನೀಡಿದರೋ ಅದೇ ರೀತಿ ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಪರಿಣಾಮವನ್ನು ಎದುರಿಸಲು ಮತ್ತೊಮ್ಮೆ ಭಾರತದ ಜೊತೆ ನಿಲ್ಲಬೇಕೆಂದು ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ (PM Modi) ಮನವಿ ಮಾಡಿದ್ದಾರೆ. ಇರಾನ್-ಇಸ್ರೇಲ್ ಹಾಗೂ ಅಮೆರಿಕದ ನಡುವಿನ ಯುದ್ಧದ ಪರಿಣಾಮ ಭಾರತದ ಮೇಲೂ ಆಗುತ್ತಿದೆ. ಹೀಗಾಗಿ, ಶಾಲಾ ಕಾಲೇಜುಗಳಲ್ಲಿ ಆನ್​ಲೈನ್ ತರಗತಿಗಳನ್ನು ನಡೆಸಿ, ಆಫೀಸುಗಳಲ್ಲಿ ವರ್ಕ್ ಫ್ರಂ ಹೋಂಗೆ ಅವಕಾಶ ನೀಡಿ, ವರ್ಚುವಲ್ ಮೀಟಿಂಗ್ ನಡೆಸಿ, ಸ್ವಂತ ವಾಹನಗಳ ಬದಲು ಸರ್ಕಾರಿ ಬಸ್, ಮೆಟ್ರೋಗಳನ್ನು ಬಳಸಿ, ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಖರೀದಿಸಿ, ಸ್ವಲ್ಪ ದಿನದ ಮಟ್ಟಿಗೆ ಚಿನ್ನ ಖರೀದಿಸಬೇಡಿ ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.

ದೇಶಾದ್ಯಂತ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳು ಆನ್‌ಲೈನ್ ತರಗತಿಗಳನ್ನು ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ. ಚಿನ್ನದ ಖರೀದಿಯನ್ನು ತಪ್ಪಿಸಿ, ವಿದೇಶಿ ಪ್ರಯಾಣವನ್ನು ಮುಂದೂಡಿ ಮತ್ತು ಆರ್ಥಿಕ ಸಮಸ್ಯೆಗಳ ನಡುವೆ ವರ್ಕ್ ಫ್ರಂ ಹೋಂ ಆಯ್ಕೆ ಮಾಡಿಕೊಳ್ಳುವಂತಹ ವೆಚ್ಚ ಕಡಿತ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಪ್ರಧಾನಿ ಮೋದಿ ನಾಗರಿಕರಿಗೆ ಸಲಹೆ ನೀಡಿದ್ದರು. ಅದಾಗಿ ಒಂದು ದಿನದೊಳಗೆ ಇದೀಗ ಮತ್ತೆ ಅದೇ ಮನವಿಯನ್ನು ಮೋದಿ ಪುನರುಚ್ಛರಿಸಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಕೊರತೆ ಇಲ್ಲ; ಪ್ರಧಾನಿ ಮೋದಿ ಮನವಿಯ ಬಳಿಕ ಸರ್ಕಾರ ಸ್ಪಷ್ಟನೆ

ಶಾಲೆಗಳು ಮತ್ತು ಕಾಲೇಜುಗಳು ಸದ್ಯಕ್ಕೆ ಕೋವಿಡ್-19 ಶೈಲಿಯ ಆನ್‌ಲೈನ್ ಕಲಿಕಾ ಮಾದರಿಯನ್ನು ಅನುಸರಿಸಬೇಕೆಂದು ಮೋದಿ ಸೂಚಿಸಿದ್ದಾರೆ. ಇರಾನ್-ಅಮೆರಿಕ ಯುದ್ಧದ ಆರ್ಥಿಕ ಪರಿಣಾಮ ಮತ್ತು ಏರುತ್ತಿರುವ ಕಚ್ಚಾ ತೈಲದ ಬೆಲೆಗಳ ಬಿಕ್ಕಟ್ಟನ್ನು ದೇಶ ಎದುರಿಸುತ್ತಿರುವಾಗ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PBKS vs DC: ಸ್ಟಾರ್ಕ್ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸಿ ಇತಿಹಾಸ ಸೃಷ್ಟಿಸಿದ ಪ್ರಿಯಾಂಶ್ ಆರ್ಯ – Kannada News | IPL 2026: Priyansh Arya’s Historic First Ball Six Record vs Delhi Capitals

ಐಪಿಎಲ್ 2026 ರ 55ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಯುವ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮೂಲಕ ಸಂಚಲನ ಸೃಷ್ಟಿಸಿದರು. ಪ್ರಿಯಾಂಶ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಮೊದಲ ಎಸೆತದಲ್ಲೇ ಸಿಕ್ಸ್ ಬಾರಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಬೇರೆ ಯಾವುದೇ ಬ್ಯಾಟ್ಸ್‌ಮನ್ ಸಾಧಿಸದ ದಾಖಲೆಯನ್ನು ಸೃಷ್ಟಿಸಿದ್ದಾರೆ.

ಧರ್ಮಶಾಲಾದಲ್ಲಿ ನಡೆದ ಈ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ, ಆಸ್ಟ್ರೇಲಿಯಾದ ದಂತಕಥೆ ವೇಗಿ ಮಿಚೆಲ್ ಸ್ಟಾರ್ಕ್ ಎಸೆದ ಪಂದ್ಯದ ಮೊದಲ ಎಸೆತವನ್ನು ಸಿಕ್ಸರ್​ಗಟ್ಟಿದರು. ಪ್ರಿಯಾಂಶ್ ಸಿಕ್ಸ್‌ನೊಂದಿಗೆ ಪಂದ್ಯವನ್ನು ಪ್ರಾರಂಭಿಸಿದ್ದು ಇದೇ ಮೊದಲಲ್ಲ. ಇದಕ್ಕೂ ಮೊದಲು ಅವರು ಐಪಿಎಲ್ 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಖಲೀಲ್ ಅಹ್ಮದ್ ಅವರ ಬೌಲಿಂಗ್‌ನಲ್ಲಿ ಈ ಸಾಧನೆ ಮಾಡಿದ್ದರು. ಪ್ರಿಯಾಂಶ್ ಜೊತೆಗೆ ವಿರಾಟ್ ಕೊಹ್ಲಿ ಮತ್ತು ಯಶಸ್ವಿ ಜೈಸ್ವಾಲ್ ಸೇರಿದಂತೆ ಇತರ ನಾಲ್ವರು ಕೂಡ ಪಂದ್ಯದ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ್ದಾರೆ. ಆದರೆ ಪ್ರಿಯಾಂಶ್​ನ ಹೊರತುಪಡಿಸಿ ಉಳಿದವರು ತಲಾ ಒಮ್ಮೆ ಮಾತ್ರ ಹಾಗೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Source link

ತ್ರಿಶಾ ಜತೆ ಮೈತ್ರಿ ಮಾಡಿಕೊಂಡು ವಿಜಯ್ ಗೆದ್ದರು; ರಿಷಿಕಾ ಸಿಂಗ್ ಈ ರೀತಿ ಹೇಳಿದ್ದೇಕೆ? – Kannada News | Rishika Singh talks about Thalapathy Vijay and Trisha Krishnan Tamil Nadu Election

ನಟಿ ರಿಷಿಕಾ ಸಿಂಗ್ (Rishika Singh) ಅವರು ಅಪಘಾತದ ಬಳಿಕ ಚೇತರಿಸಿಕೊಂಡರು. ಮತ್ತೆ ಬಣ್ಣದ ಲೋಕಕ್ಕೆ ಕಮ್​ಬ್ಯಾಕ್ ಮಾಡಲು ಅವರು ಸಜ್ಜಾಗಿದ್ದಾರೆ. ‘ಟಿವಿ9 ಕನ್ನಡ’ ಜೊತೆ ಮಾತಿಗೆ ಸಿಕ್ಕ ಅವರು ಸದ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ. ತಮಿಳುನಾಡಿನಲ್ಲಿ ದಳಪತಿ ವಿಜಯ್ (Thalapathy Vijay) ಅವರು ಟಿವಿಕೆ ಪಕ್ಷ ಕಟ್ಟಿ, ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಆಗಿದ್ದಾರೆ. ಈ ಕುರಿತು ರಿಷಿಕಾ ಸಿಂಗ್ ಮಾತನಾಡಿದ್ದಾರೆ. ‘ವಿಜಯ್ ಮಾಡಿದ್ದು ಸರಿಯೋ ತಪ್ಪೋ ಅಂತ ಹೇಳುವಷ್ಟು ದೊಡ್ಡವಳು ನಾನಲ್ಲ. ವಿಜಯ್ ಅವರು ತ್ರಿಶಾ ಜೊತೆ ಮೈತ್ರಿ ಮಾಡಿಕೊಂಡರು. ಅವರ ನಡುವೆ ನನಗೆ ಒಂದು ಸುಂದರವಾದ ಸ್ನೇಹ ಕಾಣಿಸುತ್ತದೆ. ಅವರ ವೈಯಕ್ತಿಕ ವಿಚಾರ ನಮಗೆ ಬೇಡ. ಕರ್ನಾಟಕದಲ್ಲಿ ಯಾರಾದರೂ ಆ ರೀತಿ ಗೆಲ್ಲಲು ಬಹಳ ಕಷ್ಟ ಇದೆ. ಯಾಕೆಂದರೆ ತ್ರಿಶಾ ಬೇಕಲ್ಲವಾ’ ಎಂದು ರಿಶಿಕಾ ಸಿಂಗ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವೈಕೋ ಮನೆಗೆ ಹೋದ ಸಿಎಂ ವಿಜಯ್​ಗೆ ದೃಷ್ಟಿ ತೆಗೆದ ಮನೆಕೆಲಸದವರು; ವಿಡಿಯೋ ವೈರಲ್ – Kannada News | Tamil Nadu CM Vijay visits Vaikos House his domestic helps cant keep calm

ಚೆನ್ನೈ, ಮೇ 11: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ (Vijay) ಅವರು ಇಂದು ಚೆನ್ನೈನಲ್ಲಿರುವ ಎಂಡಿಎಂಕೆ ಮುಖ್ಯಸ್ಥ ವೈಕೋ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಆದರೆ, ಭೇಟಿ ಅನಿರೀಕ್ಷಿತವಾದ ವೈರಲ್ ದೃಶ್ಯಕ್ಕೆ ಸಾಕ್ಷಿಯಾಯಿತು. ವೈಕೋ ತಮ್ಮ ಕುಟುಂಬದ ಸದಸ್ಯರನ್ನು ಮುಖ್ಯಮಂತ್ರಿಗೆ ಪರಿಚಯಿಸಿದರು. ಆಗ ಅಲ್ಲೇ ಇದ್ದ ಮನೆಕೆಲಸದವರು ನಾವು ಕೂಡ ನಿಮಗೇ ಮತ ಹಾಕಿದ್ದೇವೆ, ನಾವು ನಿಮ್ಮ ಅಭಿಮಾನಿಗಳು ಎಂದು ಸಿಎಂ ವಿಜಯ್ ಎದುರು ಬಂದು ಕೈಮುಗಿದರು. ಅದನ್ನು ಕೇಳಿ ಖುಷಿಯಾದ ವಿಜಯ್ ಕೂಡ ಅವರಿಗೆ ಕೈ ಮುಗಿದರು. ಆಗ ಆ ಕೆಲಸದವರು ವಿಜಯ್​ಗೆ ದೃಷ್ಟಿ ತೆಗೆದು ಸಂಭ್ರಮಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಸಿಎಂ ವಿಜಯ್ ಕೂಡ ಆ ಕೆಲಸದವರಿಗೆ ದೃಷ್ಟಿ ತೆಗೆದ ವಿಡಿಯೋ ಭಾರೀ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿಗರಿಗೆ ಬಂಪರ್ ಕೊಡುಗೆ: ಡಿಕೆ ಶಿವಕುಮಾರ್ ಮಹತ್ವದ ಘೋಷಣೆ – Kannada News | We are giving big guarantee to Bengaluru People On May 13 Announced By DK Shivakumar

ಬೆಂಗಳೂರು, (ಮೇ 11): ಇದೇ ಮೇ 13ಕ್ಕೆ ಬೆಂಗಳೂರು (Bengaluru) ಜನತೆಗೆ ಬಿಗ್ ಗಿಫ್ಟ್ ನೀಡಲಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ತಿಳಿಸಿದ್ದಾರೆ. ಇಂದು(ಮೇ 11) ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುರ್ಜೇವಾಲ ಅವರ ಜೊತೆ ರಾಜಕೀಯವಾಗಿ ಸಭೆ ಮಾಡಿದ್ದೇವೆ. ಈಗ ಅಧಿಕಾರಿಗಳನ್ನು ಕರೆದು ಸೂಚನೆ ಕೊಟ್ಟಿದ್ದೇನೆ. ಮೇ 13ರಂದು ಬೆಂಗಳೂರು ಜನರಿಗೆ ಒಂದು ದೊಡ್ಡ ಗ್ಯಾರಂಟಿ, ಬಿಗ್ ಗಿಫ್ಟ್ ಕೊಡಲಿದ್ದೇವೆ. ಅದನ್ನು ಮೇ 13ರಂದೇ ತಿಳಿಸುತ್ತೇನೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರು ಏನು ಗಿಫ್ಟ್ ಕೊಡಲಿದ್ದಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಉಡುಪಿ ಜಿಲ್ಲೆಯಲ್ಲಿ ಮನೆ ಕಳ್ಳತನ ತಡೆಗೆ ಪೊಲೀಸ್ ಇಲಾಖೆ ಮಾಸ್ಟರ್​​ ಪ್ಲಾನ್​​: ಹೊಸ ಯೋಜನೆ ಜಾರಿ – Kannada News | Udupi Police Launch New Locked House Beat System to Deter Burglaries

ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)Image Credit source: tv9 kannada

ಉಡುಪಿ, ಮೇ 11: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮನೆ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಉಡುಪಿ (Udupi) ಜಿಲ್ಲಾ ಪೊಲೀಸ್ ಇಲಾಖೆ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ‘ಲಾಕ್ಡ್ ಹೌಸ್ ಬಿಟ್ ಸಿಸ್ಟಮ್’ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ. ಸಾರ್ವಜನಿಕರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಆರಂಭಿಸಿರುವ ಈ ಯೋಜನೆ ಇದೀಗ ಜಿಲ್ಲೆಯಾದ್ಯಂತ ಗಮನ ಸೆಳೆಯುತ್ತಿದೆ.

ಮುಖ್ಯಾಂಶಗಳು

  • ಉಡುಪಿಯಲ್ಲಿ ಮನೆ ಕಳ್ಳತನ ತಡೆಗೆ ಹೊಸ ಸಿಸ್ಟಮ್​
  • ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಮಹತ್ವದ ಹೆಜ್ಜೆ
  • ಸಾರ್ವಜನಿಕರ ಸುರಕ್ಷತೆ ಮತ್ತಷ್ಟು ಬಲಪಡಿಸುವ ಉದ್ದೇಶ

ಪೊಲೀಸ್ ಇಲಾಖೆಗೆ ಸವಾಲಾದ ಮನೆ ಕಳ್ಳತನ ಪ್ರಕರಣಗಳು

ನಗರ ಪ್ರದೇಶಗಳ ಜೊತೆಗೆ ಗ್ರಾಮೀಣ ಭಾಗಗಳಲ್ಲಿಯೂ ಮನೆಗಳಿಗೆ ಬೀಗ ಹಾಕಿ ಕುಟುಂಬ ಸಮೇತರಾಗಿ ಹೊರ ಊರುಗಳಿಗೆ ತೆರಳುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಇದೇ ಸಂದರ್ಭವನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಕಳ್ಳರು ಮನೆಗಳತನ ನಡೆಸುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಆತಂಕ ಮೂಡಿಸಿದ್ದವು. ವಿಶೇಷವಾಗಿ ಹಬ್ಬ-ಹರಿದಿನಗಳು, ಮದುವೆ ಸಮಾರಂಭಗಳು ಹಾಗೂ ಬೇಸಿಗೆ ರಜಾ ಅವಧಿಯಲ್ಲಿ ಮನೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದು ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿತ್ತು.

ಏನಿದು ಲಾಕ್ಡ್ ಹೌಸ್ ಬಿಟ್ ಸಿಸ್ಟಮ್? 

ಈ ಹಿನ್ನೆಲೆದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ‘ಲಾಕ್ಡ್ ಹೌಸ್ ಬಿಟ್ ಸಿಸ್ಟಮ್’ ಎಂಬ ಹೊಸ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಮನೆಗಳಿಗೆ ಬೀಗ ಹಾಕಿ ಕೆಲವು ದಿನಗಳ ಕಾಲ ಹೊರಗಡೆ ಹೋಗುವವರು ತಮ್ಮ ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ಬೀಟ್ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಬಹುದು. ಮನೆ ಮಾಲೀಕರು ನೀಡುವ ವಿವರಗಳನ್ನು ಪೊಲೀಸ್ ಇಲಾಖೆ ದಾಖಲಿಸಿಕೊಂಡು, ಆ ಮನೆಗಳ ಮೇಲೆ ವಿಶೇಷ ನಿಗಾವಹಿಸುವ ವ್ಯವಸ್ಥೆ ಕಲ್ಪಿಸಲಾಗುವುದು

ಇದನ್ನೂ ಓದಿ; ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಮರಗಳ ಮಾರಣಹೋಮ: 10ಕ್ಕೂ ಹೆಚ್ಚು ವೃಕ್ಷಗಳಿಗೆ ಕೊಡಲಿಯೇಟು

ಬೀಟ್ ಪೊಲೀಸ್ ಸಿಬ್ಬಂದಿ ನಿಯಮಿತವಾಗಿ ಆ ಮನೆಗಳ ಸುತ್ತಮುತ್ತ ಗಸ್ತು ತಿರುಗಿ ಪರಿಶೀಲನೆ ನಡೆಸಲಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳ ಚಲನವಲನ ಕಂಡುಬಂದರೆ ತಕ್ಷಣ ಕ್ರಮಕೈಗೊಳ್ಳಲಾಗುತ್ತದೆ. ಇದರಿಂದ ಮನೆ ಕಳ್ಳತನ ಪ್ರಕರಣಗಳನ್ನು ತಡೆಯುವುದರ ಜೊತೆಗೆ ಸಾರ್ವಜನಿಕರಲ್ಲಿ ಭದ್ರತೆಯ ಭಾವನೆ ಹೆಚ್ಚಿಸುವ ಉದ್ದೇಶ ಇಲಾಖೆ ಹೊಂದಿದೆ. ಈ ಯೋಜನೆಯ ಮತ್ತೊಂದು ವಿಶೇಷ ಅಂಶವೆಂದರೆ ಸಾರ್ವಜನಿಕರ ಮತ್ತು ಪೊಲೀಸರ ನಡುವಿನ ನೇರ ಸಂಪರ್ಕ ಹಾಗೂ ವಿಶ್ವಾಸವನ್ನು ಬಲಪಡಿಸುವುದು. ಮನೆ ಖಾಲಿ ಇರುವ ಮಾಹಿತಿ ನೀಡಿದ ನಂತರ ಸಂಬಂಧಪಟ್ಟ ಬೀಟ್ ಅಧಿಕಾರಿಗಳು ಮನೆ ಮಾಲೀಕರೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯವಿದ್ದರೆ ತುರ್ತು ಮಾಹಿತಿ ನೀಡುತ್ತಾರೆ. ಕೆಲ ಪ್ರದೇಶಗಳಲ್ಲಿ ಪೊಲೀಸ್ ವಾಹನಗಳ ಮೂಲಕ ರಾತ್ರಿ ಪಹರೆ ಹೆಚ್ಚಿಸುವ ಯೋಜನೆಯೂ ರೂಪಿಸಲಾಗಿದೆ.

ಎಸ್​​​ಪಿ ಹರಿರಾಮ್‌ ಶಂಕರ್​​ ಹೇಳಿದ್ದಿಷ್ಟು

ಈ ಯೋಜನೆ ಕೇವಲ ಕಳ್ಳತನ ತಡೆಯುವ ಕಾರ್ಯಕ್ರಮವಲ್ಲ, ಬದಲಾಗಿ ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ಮಹತ್ವದ ಪ್ರಯತ್ನವಾಗಿದೆ. ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಿದರೆ ಅಪರಾಧ ಪ್ರಕರಣಗಳನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು ಎಂದು ಎಸ್​​​ಪಿ ಹರಿರಾಮ್‌ ಶಂಕರ್​​ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಭಕ್ತರಿಗೆ ‘ಕೂಲ್’ ಅನುಭವ: ಉರಿಬಿಸಿಲಿನ ನಡುವೆ ನೆರಳಿನ ಆಸರೆ ನೀಡಿದ ಪರ್ಯಾಯ ಶೀರೂರು ಮಠ

ಒಟ್ಟಾರೆ, ಲಾಕ್ಡ್ ಹೌಸ್ ಬಿಟ್ ಸಿಸ್ಟಮ್ ಯೋಜನೆ ಉಡುಪಿ ಜಿಲ್ಲೆಯಲ್ಲಿ ಜನಸಾಮಾನ್ಯರ ಆಸ್ತಿಪಾಸ್ತಿಗಳಿಗೆ ಹೆಚ್ಚುವರಿ ಭದ್ರತೆಯ ಕವಚವಾಗುವ ನಿರೀಕ್ಷೆ ಮೂಡಿಸಿದೆ. ಮನೆಗಳಿಗೆ ಬೀಗ ಹಾಕಿ ಹೊರಗಡೆ ತೆರಳುವ ನಾಗರಿಕರಿಗೆ ಈ ಯೋಜನೆ ಹೆಚ್ಚಿನ ನೆಮ್ಮದಿ ನೀಡಲಿದ್ದು, ಕಳ್ಳರ ಚಟುವಟಿಕೆಗಳಿಗೂ ಬ್ರೇಕ್​ ಬೀಳಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಿದೇಶದಲ್ಲಿ ನಡೆಯುವ ಟಿ20 ಲೀಗ್​ನಲ್ಲಿ ತಂಡ ಖರೀದಿಸಿದ ರಾಹುಲ್ ದ್ರಾವಿಡ್ – Kannada News | Rahul Dravid Co Owner of European T20 League Team; R. Ashwin Captains Dublin Guardians

ತಮ್ಮ ಕೋಚಿಂಗ್​ ಅಡಿಯಲ್ಲಿ ಟೀಂ ಇಂಡಿಯಾವನ್ನು 2024 ರ ಟಿ20 ವಿಶ್ವಕಪ್ ಚಾಂಪಿಯನ್ ಮಾಡಿದ್ದ ಕನ್ನಡಿಗ ರಾಹುಲ್​ ದ್ರಾವಿಡ್ (Rahul Dravid) ಅದಾದ ಬಳಿಕ ಮುಖ್ಯ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅದಾದ ನಂತರ ಐಪಿಎಲ್ (IPL) ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿದ್ದ ದ್ರಾವಿಡ್ ಆ ಹುದ್ದೆಗೂ ವಿದಾಯ ಹೇಳಿದ್ದರು. ಪ್ರಸ್ತುತ ಕ್ರಿಕೆಟ್​ನಿಂದ ವಿರಾಮ ತೆಗೆದುಕೊಂಡಿರುವ ದ್ರಾವಿಡ್, ತಮ್ಮ ಮಕ್ಕಳಿಗೆ ಕ್ರಿಕೆಟ್ ಪಾಠ ಹೇಳಿಕೊಡುತ್ತಿದ್ದಾರೆ ಎಂಬ ಸುದ್ದಿ ಇದೆ. ಇದೆಲ್ಲದರ ನಡುವೆ ಮತ್ತೆ ಕ್ರಿಕೆಟ್ ಲೋಕದತ್ತ ವಾಲಿರುವ ಗೋಡೆ, ವಿದೇಶದಲ್ಲಿ ನಡೆಯಲ್ಲಿರುವ ಟಿ20 ಲೀಗ್​ನಲ್ಲಿ ತಂಡವೊಂದಕ್ಕೆ ಸಹ ಮಾಲೀಕರಾಗಿದ್ದಾರೆ. ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ರಾಹುಲ್ ಮಾಲೀಕತ್ವದ ತಂಡಕ್ಕೆ ಆರ್. ಅಶ್ವಿನ್ ನಾಯಕನಾಗಿ ಆಯ್ಕೆಯಾಗಿದ್ದಾರೆ.

ವಾಸ್ತವವಾಗಿ ರಾಹುಲ್ ದ್ರಾವಿಡ್ ಐರ್ಲೆಂಡ್‌ನಲ್ಲಿ ನಡೆಯಲಿರುವ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್​ನಲ್ಲಿ ತಂಡವನ್ನು ಖರೀದಿಸಿದ್ದಾರೆ. ರಾಹುಲ್ ದ್ರಾವಿಡ್ ಡಬ್ಲಿನ್ ಗಾರ್ಡಿಯನ್ಸ್‌ ತಂಡದ ಸಹ-ಮಾಲೀಕರಾಗಿದ್ದು, ಈ ತಂಡದ ಒಡೆತನ ಭಾರತೀಯ ಕಂಪನಿಯ ಕೈಯಲ್ಲಿದೆ. ದ್ರಾವಿಡ್ ಒಡೆತನದ ಈ ಡಬ್ಲಿನ್ ಗಾರ್ಡಿಯನ್ಸ್ ತಂಡಕ್ಕೆ ಭಾರತದ ಮಾಜಿ ಆಫ್-ಸ್ಪಿನ್ನರ್ ಆರ್. ಅಶ್ವಿನ್ ಅವರನ್ನು ಈ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ.

ರಾಹುಲ್ ದ್ರಾವಿಡ್ ಪ್ರತಿಕ್ರಿಯೆ

ರಾಹುಲ್ ದ್ರಾವಿಡ್ ಭಾರತ ಪರ 164 ಟೆಸ್ಟ್ ಪಂದ್ಯಗಳು ಮತ್ತು 344 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಮಾತ್ರವಲ್ಲದೆ 2021 ರಿಂದ 2024 ರವರೆಗೆ ತಂಡದ ಮುಖ್ಯ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಇದೀಗ ಕ್ರಿಕೆಟ್​ನಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಿಸಿರುವ ದ್ರಾವಿಡ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್​ನಲ್ಲಿ ಭಾಗಿಯಾಗಿರುವುದು ನಿಜಕ್ಕೂ ಅದ್ಭುತವಾಗಿದೆ. ಯುರೋಪ್‌ನಲ್ಲಿ ಕ್ರಿಕೆಟ್‌ನ ಮೇಲಿನ ಉತ್ಸಾಹವನ್ನು ನಾನು ಯಾವಾಗಲೂ ಪ್ರೀತಿಸುತ್ತೇನೆ. ಆಟಗಾರರು ಆಟವನ್ನು ಆಡುವ ಉತ್ಸಾಹ ಅದ್ಭುತವಾಗಿದೆ ಎಂದಿದ್ದಾರೆ.

ದ್ರಾವಿಡ್ ತಂಡಕ್ಕೆ ಅಶ್ವಿನ್ ನಾಯಕ

ಭಾರತ ಕ್ರಿಕೆಟ್​ನೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿರುವ ರವಿಚಂದ್ರನ್ ಅಶ್ವಿನ್ ಗಾರ್ಡಿಯನ್ಸ್ ತಂಡದ ನಾಯಕರಾಗಿರುತ್ತಾರೆ. ಅಶ್ವಿನ್ ಐಪಿಎಲ್‌ನಿಂದಲೂ ನಿವೃತ್ತರಾಗಿರುವುದರಿಂದ ಅವರಿಗೆ ಪ್ರಪಂಚದಾದ್ಯಂತದ ಲೀಗ್‌ಗಳಲ್ಲಿ ಆಡಲು ಅವಕಾಶವಿದೆ. ಐರ್ಲೆಂಡ್, ಸ್ಕಾಟ್ಲೆಂಡ್ ಮತ್ತು ನೆದರ್‌ಲ್ಯಾಂಡ್ಸ್ ಕ್ರಿಕೆಟ್ ಮಂಡಳಿಗಳ ಸಹಯೋಗದೊಂದಿಗೆ ಇಟಿಪಿಎಲ್ ಅನ್ನು ಆಯೋಜಿಸಲಾಗುತ್ತಿದೆ.

BCCI Awards: ಕನ್ನಡಿಗ ರಾಹುಲ್ ದ್ರಾವಿಡ್​ಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರಧಾನ

ಲೀಗ್‌ನಲ್ಲಿ ಆಮ್ಸ್ಟರ್‌ಡ್ಯಾಮ್, ರೋಟರ್‌ಡ್ಯಾಮ್, ಬೆಲ್‌ಫಾಸ್ಟ್, ಡಬ್ಲಿನ್, ಗ್ಲ್ಯಾಸ್ಗೋ ಮತ್ತು ಎಡಿನ್‌ಬರ್ಗ್‌ ಎಂಬ ಆರು ತಂಡಗಳು ಸೇರಿವೆ. ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಈ ಲೀಗ್​ನ ಸೃಷ್ಟಿಕರ್ತರಾಗಿದ್ದು, ಅವರು ಭಾರತೀಯ ಖಾಸಗಿ ಕಂಪನಿಯಾದ ರೂಲ್ಸ್ ಸ್ಪೋರ್ಟ್ ಟೆಕ್ ಸಹಯೋಗದೊಂದಿಗೆ ಈ ಲೀಗ್ ಅನ್ನು ನಡೆಸಲಿದ್ದಾರೆ. ಪಂದ್ಯಾವಳಿಯು ಆಗಸ್ಟ್ 26 ರಿಂದ ಸೆಪ್ಟೆಂಬರ್ 20 ರವರೆಗೆ ನಡೆಯಲಿದ್ದು, ಮೊದಲ ಆವೃತ್ತಿಯ ಪಂದ್ಯಗಳು ದಿ ಹೇಗ್ ಮತ್ತು ಡಬ್ಲಿನ್‌ನಲ್ಲಿ ನಡೆಯಲಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಾಕ್ವೆಲಿನ್ ಫರ್ನಾಂಡಿಸ್‌ಗೆ ಸಂಕಷ್ಟ; ಅಪ್ರೂವರ್ ಆಗುವ ಮನವಿಗೆ ಇಡಿ ತೀವ್ರ ವಿರೋಧ – Kannada News | Jacqueline Fernandez legal trouble ED opposes approver plea Sukesh Chandrasekhar case

200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರಿಗೆ ಹೊಸ ಕಾನೂನು ಸಂಕಷ್ಟ ಎದುರಾಗಿದೆ. ಈ ಪ್ರಕರಣದಲ್ಲಿ ತಾನು ಅಪ್ರೂವರ್ (ಮಾಫಿ ಸಾಕ್ಷಿ) ಆಗಲು ಅನುಮತಿ ನೀಡಬೇಕೆಂದು ಜಾಕ್ವೆಲಿನ್ ಸಲ್ಲಿಸಿದ್ದ ಅರ್ಜಿಯನ್ನು ಜಾರಿ ನಿರ್ದೇಶನಾಲಯ (ED) ಸೋಮವಾರ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಬಲವಾಗಿ ವಿರೋಧಿಸಿದೆ. ಜಾಕ್ವೆಲಿನ್ ಈ ಪ್ರಕರಣದಲ್ಲಿ ಕೇವಲ ಸಂತ್ರಸ್ತೆಯಲ್ಲ, ಬದಲಿಗೆ ಅವರು ಅಪರಾಧದ ಹಣದ ಪ್ರಮುಖ ಫಲಾನುಭವಿ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ.

ಜಾಕ್ವೆಲಿನ್ ಅವರ ಪಾತ್ರವು ಸಣ್ಣ ಮಟ್ಟದ್ದಲ್ಲ. ಅವರು ಹಣ ವರ್ಗಾವಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ ಎಂದು ಇಡಿ ಹೇಳಿದೆ. ತನಿಖೆಯ ಉದ್ದಕ್ಕೂ ಜಾಕ್ವೆಲಿನ್ ಅಸಮರ್ಪಕ ಮತ್ತು ಅಸಮಂಜಸ ಹೇಳಿಕೆಗಳನ್ನು ನೀಡಿದ್ದಾರೆ. ನಗದು ವ್ಯವಹಾರಗಳು, ದುಬಾರಿ ಉಡುಗೊರೆಗಳು ಮತ್ತು ಬ್ಯಾಂಕ್ ವಹಿವಾಟುಗಳ ಬಗ್ಗೆ ಅವರು ಮಾಹಿತಿ ಮುಚ್ಚಿಟ್ಟಿದ್ದಾರೆ ಎಂದು ಇಡಿ ಆರೋಪಿಸಿದೆ.

ಸುಕೇಶ್ ಚಂದ್ರಶೇಖರ್ ಅವರ ಅಪರಾಧ ಹಿನ್ನೆಲೆ ತಿಳಿದಿದ್ದರೂ ಜಾಕ್ವೆಲಿನ್ ಅವರೊಂದಿಗೆ ಸಂಪರ್ಕ ಮುಂದುವರಿಸಿದ್ದರು. ಅವರಿಗೆ ನೀಡಲಾದ ದುಬಾರಿ ಉಡುಗೊರೆಗಳು ಮತ್ತು ಹಣಕಾಸಿನ ಸವಲತ್ತುಗಳು ಅಕ್ರಮ ಹಣದಿಂದಲೇ ಬಂದಿವೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ತನಿಖಾಧಿಕಾರಿಗಳು ಪುರಾವೆಗಳನ್ನು ಎದುರಿಟ್ಟಾಗ ಮಾತ್ರ ಅವರು ಕೆಲವು ವಿಷಯಗಳನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರನ್ನು ಅಪ್ರೂವರ್ ಆಗಿ ಪರಿಗಣಿಸುವುದು ಪ್ರಕರಣದ ಗಂಭೀರತೆಯನ್ನು ಕುಗ್ಗಿಸುತ್ತದೆ ಎಂದು ಇಡಿ ಹೇಳಿದೆ.

ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ ನಡೆಯುತ್ತಿರುವ ಈ ತನಿಖೆಯಲ್ಲಿ ತಾನು ಅಧಿಕಾರಿಗಳಿಗೆ ಸಹಕರಿಸಲು ಸಿದ್ಧವಿರುವುದಾಗಿ ಹೇಳಿದ್ದ ಜಾಕ್ವೆಲಿನ್, ಈ ಮೂಲಕ ಪ್ರಕರಣದಿಂದ ಸ್ವಲ್ಪ ಮಟ್ಟಿನ ವಿನಾಯಿತಿ ಪಡೆಯಲು ಯೋಜಿಸಿದ್ದರು. ಆದರೆ, ಇಡಿ ಸಲ್ಲಿರುವ ಈ ಆಕ್ಷೇಪಾರ್ಹ ವರದಿಯು ಜಾಕ್ವೆಲಿನ್ ಅವರ ಮುಂದಿನ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ.

ಇದನ್ನೂ ಓದಿ: ಜೈಲಿನಲ್ಲಿದ್ದುಕೊಂಡೇ ಜಾಕ್ವೆಲಿನ್ ಹೆಸರಲ್ಲಿ 25 ಕೋಟಿ ರೂ. ದೇಣಿಗೆ ನೀಡಿದ ಸುಕೇಶ್

ನಟಿ ಪಿಂಕಿ ಇರಾನಿ ಸೇರಿದಂತೆ ಈ ಪ್ರಕರಣಕ್ಕೆ ಸಂಬಂಧಿಸಿದ ಇತರ ವ್ಯಕ್ತಿಗಳ ಜೊತೆಗಿನ ಒಡನಾಟದ ಬಗ್ಗೆಯೂ ಜಾಕ್ವೆಲಿನ್ ಫರ್ನಾಂಡಿಸ್ ಸ್ಪಷ್ಟ ಮಾಹಿತಿ ನೀಡಿಲ್ಲ ಎಂದು ಇಡಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಈ ಬೆಳವಣಿಗೆಯಿಂದಾಗಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಸದ್ಯಕ್ಕೆ ಕಾನೂನು ಸಂಕಷ್ಟದಿಂದ ಮುಕ್ತಿ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version