ಮಹೇಶ್ ಬಾಬು ಹುಟ್ಟುಹಬ್ಬ: ‘ವಾರಣಾಸಿ’ಯ ‘ರುದ್ರ’ನ ಲುಕ್ ರಿಲೀಸ್ – Kannada News | SS Rajamouli release Mahesh Babu look from Varanasi movie

ರಾಜಮೌಳಿ (Rajamouli) ನಿರ್ದೇಶನದ ‘ವಾರಣಾಸಿ’, ವಿಶ್ವದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡಿರುವ ಈ ಸಿನಿಮಾ ಭಾರಿ ನಿರೀಕ್ಷೆಗಳನ್ನು ಮೂಡಿಸಿರುವ ಸಿನಿಮಾ. ಈ ಸಿನಿಮಾದ ಅಪ್​​ಡೇಟ್​​ಗಳಿಗಾಗಿ ಸಿನಿಮಾ ಪ್ರೇಮಿಗಳು ಕಾಯುತ್ತಿದ್ದಾರೆ. ಇಂದು (ಆಗಸ್ಟ್ 09) ನಟ ಮಹೇಶ್ ಬಾಬು ಹುಟ್ಟುಹಬ್ಬ. ಈ ದಿನ ರಾಜಮೌಳಿ ಅವರು ಮಹೇಶ್ ಬಾಬು ಅವರ ಪಾತ್ರ ‘ರುದ್ರ’ನ ಲುಕ್ ಅನ್ನು ಅನಾವರಣ ಮಾಡಿದ್ದಾರೆ.

ಮಹೇಶ್ ಬಾಬು ಅವರ ಹುಟ್ಟುಹಬ್ಬದ ವಿಶೇಷವಾಗಿ, ಎಸ್​​ಎಸ್ ರಾಜಮೌಳಿ ಅವರು ‘ವಾರಣಾಸಿ’ಯ ‘ರುದ್ರ’ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ಈ ಚಿತ್ರದ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ, “ಸೂರ್ಯನ ಸುತ್ತ ಮತ್ತೊಂದು ಸುತ್ತು… ಸಮಯದಾದ್ಯಂತ ನಾವು ಪ್ರಯಾಣಿಸುವ ಮುನ್ನ. ಹುಟ್ಟುಹಬ್ಬದ ಶುಭಾಶಯಗಳು ರುದ್ರ” ಎಂಬ ಶೀರ್ಷಿಕೆಯೊಂದಿಗೆ ಮಹೇಶ್ ಬಾಬು ಅವರ ಎರಡು ಫೋಟೊಗಳನ್ನು ಹಂಚಿಕೊಳ್ಳಲಾಗಿದೆ. ಎರಡೂ ಫೋಟೊಗಳಲ್ಲಿ ಮಹೇಶ್ ಬಾಬು ಅದ್ಭುತವಾಗಿ ಕಾಣುತ್ತಿದ್ದಾರೆ.

ಬಿಡುಗಡೆಯಾದ ಚಿತ್ರಗಳಲ್ಲಿ ಮಹೇಶ್ ಬಾಬು ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಆಫ್ರಿಕಾದ ಕಾಡಿನ ಹಿನ್ನೆಲೆಯಲ್ಲಿ ಬಿದಿರಿನ ರಾಫ್ಟ್ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಒಂದು ಫೋಟೊ ಹಾಗೂ. ಮತ್ತೊಂದು ಫೋಟೊನಲ್ಲಿ ಫೈಟ್​​ಗೆ ರೆಡಿಯಾಗುತ್ತಿರುವ ಲುಕ್ ಕೊಡುತ್ತಾ ಸುಂದರವಾಗಿ ಕಾಣುತ್ತಿದ್ದಾರೆ. ಸಿನಿಮಾ ಅಭಿಮಾನಿಗಳಿಗೆ, ಮಹೇಶ್ ಬಾಬು ಅಭಿಮಾನಿಗಳಿಗೆ ರಾಜಮೌಳಿ ಅವರಿಂದ ಹೆಚ್ಚಿನ ನಿರೀಕ್ಷೆ ಇತ್ತು. ಆದರೆ ಎರಡು ಫೋಟೊ ಮಾತ್ರವನ್ನೇ ರಾಜಮೌಳಿ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ:ರಾಜಮೌಳಿ ಸಿನಿಮಾದಲ್ಲಿದ್ದರೂ ಬಿಡುವಿಲ್ಲದ ಪೃಥ್ವಿರಾಜ್; ಬ್ಯಾಕ್ ಟು ಬ್ಯಾಕ್ ಚಿತ್ರಗಳ ಮೂಲಕ ದಾಖಲೆ

ಈ ಹಿಂದೆ ‘ರುದ್ರ’ ಮಾತ್ರದ ಬಗ್ಗೆ ಮಾತನಾಡಿದ್ದ ರಾಜಮೌಳಿ, ‘ರುದ್ರ ತನ್ನನ್ನು ಮೀರಿದ ದೊಡ್ಡ ಉದ್ದೇಶವನ್ನು ಪೂರೈಸಲು ಹುಟ್ಟಿದವನು. ಭವಿಷ್ಯವನ್ನು ಬದಲಾಯಿಸುವುದು ಅವನ ಗುರಿ. ಅವನು ಚತುರ ಮತ್ತು ಬಲಶಾಲಿ ಜೊತೆಗೆ ದುರ್ಬಲ ಸಹ. ಮಹೇಶ್ ಈ ಪಾತ್ರಕ್ಕೆ ಬೇಕಾದ ಎಲ್ಲಾ ಗುಣಗಳನ್ನು ತಂದಿದ್ದಾರೆ. ಯಾರಾದರೂ ಉಗ್ರವಾಗಿ ನಟಿಸಬಹುದು, ಆದರೆ ಉಗ್ರತೆಯ ಜೊತೆಗೆ ದುರ್ಬಲ ಎರಡನ್ನೂ ಏಕಕಾಲದಲ್ಲಿ ತೋರಿಸಬಲ್ಲವರು ಬಹಳ ಕಡಿಮೆ, ಅದನ್ನು ಮಹೇಶ್ ಮಾಡಿದ್ದಾರೆ’ ಎಂದಿದ್ದರು.

‘ವಾರಣಾಸಿ’ ಸಿನಿಮಾವು ಆಕ್ಷನ್ ಅಡ್ವೇಂಚರ್ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಮಹೇಶ್ ಬಾಬು ರುದ್ರನ ಪಾತ್ರದಲ್ಲಿ, ಪ್ರಿಯಾಂಕಾ ಚೋಪ್ರಾ ಮಂದಾಕಿನಿ ಪಾತ್ರದಲ್ಲಿ, ಪೃಥ್ವಿರಾಜ್ ಸುಕುಮಾರ್ ಕುಂಭನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಕೀರವಾಣಿ ಸಂಗೀತ ನೀಡಿದ್ದಾರೆ. ಸಿನಿಮಾ ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 2:41 pm, Sun, 9 August 26

Source link

IND vs SL: ಟೀಂ ಇಂಡಿಯಾಕ್ಕೆ 45 ಓವರ್‌ಗಳಲ್ಲಿ 207 ರನ್ ಗುರಿ – Kannada News | India vs SL XI Practice Match Day 3: Sri Lanka Sets 207 Target; Madushka Shines

ಕೊಲಂಬೊದ ನಾನ್‌ಡಿಸ್ಕ್ರಿಪ್ಟ್ಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ XI ನಡುವಿನ 3 ದಿನಗಳ ಅಭ್ಯಾಸ ಪಂದ್ಯದ ಮೂರನೇ ದಿನದಂದು ಎರಡನೇ ಇನ್ನಿಂಗ್ಸ್ ಆರಂಭಿಸಿದ ಆತಿಥೇಯ ಶ್ರೀಲಂಕಾ ತಂಡ ಪೂರ್ಣ 45 ಓವರ್​ ಬ್ಯಾಟಿಂಗ್‌ ಮಾಡಿ 200 ರನ್ ಕಲೆಹಾಕಿದೆ. ಮೊದಲ ಇನ್ನಿಂಗ್ಸ್​ನಲ್ಲಿ 6 ರನ್​ಗಳ ಮುನ್ನಡೆ ಪಡೆದುಕೊಂಡಿದ್ದ ಶ್ರೀಲಂಕಾ ಭಾರತದ ಗೆಲುವಿಗೆ 207 ರನ್​ಗಳ ಗುರಿ ನೀಡಿದೆ. ಉಳಿದಿರುವ 45 ಓವರ್​ಗಳಲ್ಲಿ ಭಾರತ ತಂಡ ಈ ಗುರಿಯನ್ನು ಬೆನ್ನಟ್ಟಬೇಕಿದೆ. ಇನ್ನು ಎರಡನೇ ಇನ್ನಿಂಗ್ಸ್​ನಲ್ಲಿ ಶ್ರೀಲಂಕಾ ಪರ ಆರಂಭಿಕ ನಿಶಾನ್ ಮಧುಷ್ಕ ಅತ್ಯಧಿಕ 63 ರನ್​ಗಳ ಇನ್ನಿಂಗ್ಸ್ ಆಡಿದರು. ಭಾರತದ ಪರ ಗುರ್ನೂರ್ ಬ್ರಾರ್ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು.

Source link

ಯತೀಂದ್ರ ಸಿದ್ದರಾಮಯ್ಯಗೆ ಮತ್ತೊಂದು ಮಹತ್ವದ ಸ್ಥಾನ?: ಸಿಗಲಿದ್ಯಾ ವಿಧಾನ ಪರಿಷತ್​​ ಸಭಾ ನಾಯಕನ ಹೊಣೆ? – Kannada News | Yathindra Siddaramaiah Likely to Become Leader of House in Karnataka Legislative Council

ಯತೀಂದ್ರ ಸಿದ್ದರಾಮಯ್ಯImage Credit source: Dr Yathindra Siddaramaiah Facebook Page

ಬೆಂಗಳೂರು, ಆಗಸ್ಟ್​​ 09: ವಿಧಾನ ಪರಿಷತ್​​ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಬೆನ್ನಲ್ಲೇ ಮೇಲ್ಮನೆಯ ಪ್ರಮುಖ ಸ್ಥಾನಗಳೆಲ್ಲವೂ ಖಾಲಿಯಾಗಿವೆ. ಸಭಾಪತಿ, ಉಪಸಭಾಪತಿಯಿಂದ ಹಿಡಿದು ಸಭಾ ನಾಯಕರವರೆಗೂ ಯಾರೂ ಸದ್ಯಕ್ಕಿಲ್ಲ. ನೂತನ ಸಭಾಪತಿಯಾಗಿ ಸಲೀಂ ಅಹ್ಮದ್​​ ಮತ್ತು ಉಪ ಸಭಾಪತಿಯಾಗಿ ಉಮಾಶ್ರೀ ಅವರ ಹೆಸರನ್ನು ಅದಾಗಲೇ ಎಐಸಿಸಿ ಶಿಫಾರಸ್ಸು ಮಾಡಿದ್ದರೂ ಸಭಾ ನಾಯಕ ಯಾರಾಗಾಲಿದ್ದಾರೆ ಎಂಬ ಕುತೂಹಲ ಮಾತ್ರ ಹಾಗೆಯೇ ಉಳಿದಿತ್ತು. ಆದ್ರೀಗ ಆ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಸಚಿವ ಯತೀಂದ್ರ ಸಿದ್ದರಾಮಯ್ಯಗೆ ಬಹುತೇಕ ಈ ಜವಾಬ್ದಾರಿ ಕನ್ಫರ್ಮ್​​ ಎನ್ನಲಾಗಿದೆ.

ಯತೀಂದ್ರಗೆ ಯಾಕೆ ಪರಿಷತ್​​ ಸಭಾ ನಾಯಕನ ಜವಾಬ್ದಾರಿ?

ಎಂಎಲ್ಸಿ ಗಾಯತ್ರಿ ಶಾಂತೇಗೌಡ ಸಚಿವ ಸ್ಥಾನವನ್ನು ಹೈಕಮಾಂಡ್ ತಡೆಹಿಡಿದಿರುವ ಕಾರಣ ವಿಧಾನ ಪರಿಷತ್​​ನಿಂದ ಯತೀಂದ್ರ ಸಿದ್ದರಾಮಯ್ಯ ಮಾತ್ರ ಏಕೈಕ ಸಚಿವರಾಗಿದ್ದಾರೆ. ಹೀಗಾಗಿ ಯತೀಂದ್ರಗೆ ಸಭಾ ನಾಯಕ ಸ್ಥಾನ ಸಿಗಬಹುದೆಂಬ ಲೆಕ್ಕಾಚಾರ ಶುರುವಾಗಿದೆ. ಜೊತೆಗೆ ಈಗಾಗಲೇ ಮೌನಕ್ಕೆ ಶರಣಾಗಿರುವ ಸಿದ್ದರಾಮಯ್ಯ ಅವರ ಮುನಿಸನ್ನು ಕೂಡ ಕಡಿಮೆಮಾಡುವ ಪ್ರಯತ್ನವನ್ನು ಹೈಕಮಾಂಡ್​​ ಮಾಡಬಹುದು ಎಂಬ ಮಾತುಗಳೂ ಕೇಳಿಬಂದಿವೆ. ಪರಿಷತ್​​ ಪ್ರತಿನಿಧಿಸುವ ಕಾಂಗ್ರೆಸ್​​ ಸದಸ್ಯರು ಮುಂದೆ ಸಚಿವರಾಗಲಿದ್ದಾರಾ ಎಂಬ ಪ್ರಶ್ನೆಗೂ ಸ್ಪಷ್ಟ ಉತ್ತರ ಇಲ್ಲ. ಈ ನಡುವೆ ಆಗಸ್ಟ್​​ 13ರಿಂದ ಮಳೆಗಾಲದ ಅಧಿವೇಶನ ಆರಂಭವಾಗಲಿರುವ ಕಾರಣ ಪರಿಷತ್​​ನಲ್ಲಿ ಯತೀಂದ್ರ ಅವರೇವ ಆಡಳಿತ ಪಕ್ಷವನ್ನು ಮುನ್ನಡೆಸುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಕರ್ನಾಟಕ ವಿಧಾನ ಸಭೆಯ ನೂತನ ಸ್ಪೀಕರ್​​, ಪರಿಷತ್​​ ಸಭಾಪತಿ ಹೆಸರನ್ನು ಪ್ರಕಟಿಸಿದ ಎಐಸಿಸಿ

ಸ್ಪೀಕರ್​​ ಕಚೇರಿಗೆ ನಾಳೆ ಟಿ.ಬಿ.ಜಯಚಂದ್ರ ಭೇಟಿ

ಆಗಸ್ಟ್ 13 ರಿಂದ ಆಗಸ್ಟ್ 27ರವರೆಗೆ ನಡೆಯುವ ವಿಧಾನಮಂಡಲದ ಮುಂಗಾರು ಅಧಿವೇಶನ ಹಿನ್ನೆಲೆ ಹಂಗಾಮಿ ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಟಿ.ಬಿ.ಜಯಚಂದ್ರ ಸ್ಪೀಕರ್​​ ಕಚೇರಿಗೆ ನಾಳೆ ಭೇಟಿ ನೀಡಲಿದ್ದಾರೆ. 10 ದಿನಗಳ ಕಾಲ ನಡೆಯಲಿರುವ ಅಧಿವೇಶನದ ಮೊದಲ ದಿನ ಮಾಜಿ ಸಚಿವ ಡಿ.ಸುಧಾಕರ್, ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಸೇರಿ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಡೆಯಲಿದೆ. ಶುಕ್ರವಾರದಿಂದ ನಿಗದಿತ ವೇಳಾಪಟ್ಟಿಯಂತೆ ಕಲಾಪಗಳು ಪ್ರಾರಂಭವಾಗಲಿದ್ದು, ಹಂಗಾಮಿ ಸ್ಪೀಕರ್​​ ಸಿದ್ಧತೆ ಪರಿಶೀಲಿಸಲಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:56 pm, Sun, 9 August 26

Source link

ಪಾಕಿಸ್ತಾನದ 7 ಆಟಗಾರರಿಗೆ 2 ವರ್ಷಗಳ ನಿಷೇಧ! – Kannada News | 7 Pakistan Cricketers Banned for 2 Years by PCB

ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯು (PCB) ನಿಯಮ ಉಲ್ಲಂಘಿಸಿದ ತನ್ನ ದೇಶದ ಹಲವು ಮಾಜಿ ಆಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಝಾಂಬಿಯಾದಲ್ಲಿ ನಡೆದ ಅನಧಿಕೃತ ಟಿ20 ಲೀಗ್‌ನಲ್ಲಿ ಪಾಲ್ಗೊಂಡಿದ್ದಕ್ಕಾಗಿ ಸ್ಟಾರ್ ಆಟಗಾರರಾದ ಯಾಸಿರ್ ಶಾ, ಇಮ್ರಾನ್ ನಝೀರ್ ಮತ್ತು ಮೊಹಮ್ಮದ್ ಇರ್ಫಾನ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರಿಗೆ ಪಿಸಿಬಿ ಎರಡು ವರ್ಷಗಳ ಕಾಲ ನಿಷೇಧ ಹೇರಿದೆ.

ಏನಿದು ವಿವಾದ?

ಝಾಂಬಿಯಾದ ಲುಸಾಕಾದಲ್ಲಿ ‘ಏಷ್ಯನ್ ಲೆಜೆಂಡ್ಸ್ ಲೀಗ್‌’ ಎಂಬ ಟಿ20 ಟೂರ್ನಿಯನ್ನು ಆಯೋಜಿಸಲಾಗಿತ್ತು. ಆದರೆ ಈ ಲೀಗ್‌ಗೆ ಝಾಂಬಿಯಾ ಕ್ರಿಕೆಟ್ ಸಂಸ್ಥೆಯಾಗಲಿ ಅಥವಾ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯಾಗಲಿ (ICC) ಯಾವುದೇ ಅಧಿಕೃತ ಮಾನ್ಯತೆ ನೀಡಿರಲಿಲ್ಲ.

ನಿಯಮಗಳ ಪ್ರಕಾರ, ಯಾವುದೇ ವಿದೇಶಿ ಲೀಗ್‌ನಲ್ಲಿ ಆಡಬೇಕಾದರೂ ಆಟಗಾರರು ತಮ್ಮ ಸ್ವದೇಶಿ ಮಂಡಳಿಯಿಂದ ನಿರಾಕ್ಷೇಪಣಾ ಪತ್ರ (NOC) ಪಡೆಯುವುದು ಕಡ್ಡಾಯ. ಆದರೆ, ಈ ಪಾಕಿಸ್ತಾನಿ ಆಟಗಾರರು ಪಿಸಿಬಿಯಿಂದ ಯಾವುದೇ ಅನುಮತಿ ಪಡೆಯದೆ ‘ಪಾಕಿಸ್ತಾನ್ ಪ್ಯಾಂಥರ್ಸ್’ ತಂಡದ ಪರವಾಗಿ ಕಣಕ್ಕಿಳಿದಿದ್ದರು.

ನಿಷೇಧಕ್ಕೊಳಗಾದ ಪ್ರಮುಖ ಆಟಗಾರರು:

ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯಿಂದ ಯಾವುದೇ ನಿರಾಕ್ಷೇಪಣಾ ಪತ್ರ ಪಡೆಯದೇ ‘ಏಷ್ಯನ್ ಲೆಜೆಂಡ್ಸ್ ಲೀಗ್‌’ನಲ್ಲಿ ಕಣಕ್ಕಿಳಿದ ಹಲವು ಆಟಗಾರರ ಮೇಲೆ ಪಿಸಿಬಿ 2 ವರ್ಷಗಳ ನಿಷೇಧ ಹೇರಿದೆ. ಹೀಗೆ ಟೂರ್ನಿಯಲ್ಲಿ ಕಣಕ್ಕಿಳಿದು ಬ್ಯಾನ್ ಆದ ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ…

  • ಇಮ್ರಾನ್ ನಝೀರ್
  • ಯಾಸಿರ್ ಶಾ
  • ಮೊಹಮ್ಮದ್ ಇರ್ಫಾನ್
  • ರಾಹತ್ ಅಲಿ
  • ಹಸನ್ ರಾಝ
  • ಯಾಸಿರ್ ಬಟ್
  • ರಾಣಾ ನಯೀಮ್ ಅನ್ವರ್

ಈ ಆಟಗಾರರು ಮುಂದಿನ ಎರಡು ವರ್ಷಗಳ ಕಾಲ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆಯೋಜಿಸುವ ಯಾವುದೇ ಪಂದ್ಯಾವಳಿಗಳು, ಕೋಚಿಂಗ್ ಕ್ಯಾಂಪ್‌ಗಳು ಅಥವಾ ಕ್ರಿಕೆಟ್ ಸಂಬಂಧಿತ ಹುದ್ದೆಗಳನ್ನು ವಹಿಸಿಕೊಳ್ಳುವಂತಿಲ್ಲ.

ಪಾರಾದ ಹಫೀಝ್, ಅಕ್ಮಲ್!

ವಿಶೇಷವೆಂದರೆ, ಈ ಟೂರ್ನಿಯಲ್ಲಿ ಆಡಲು ಮೊಹಮ್ಮದ್ ಹಫೀಝ್, ಕಮ್ರಾನ್ ಅಕ್ಮಲ್, ಸೊಹೇಲ್ ತನ್ವೀರ್ ಮತ್ತು ಉಮರ್ ಅಕ್ಮಲ್ ಕೂಡ ಝಾಂಬಿಯಾಗೆ ತೆರಳಿದ್ದರು. ಆದರೆ, ಟೂರ್ನಿಗೆ ಐಸಿಸಿ ಮಾನ್ಯತೆ ಇಲ್ಲ ಎಂಬ ವಿಷಯ ತಿಳಿಯುತ್ತಿದ್ದಂತೆ, ಇವರು ಯಾವುದೇ ಪಂದ್ಯವನ್ನು ಆಡದೆ ತವರಿಗೆ ಮರಳಿದ್ದರು. ಹೀಗಾಗಿ ಇವರು ಪಿಸಿಬಿ ಶಿಕ್ಷೆಯಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ರೋಹಿತ್ ಶರ್ಮಾ ವಿಶ್ವಕಪ್ ಭವಿಷ್ಯ: ಅಗರ್ಕರ್, ಬಿಸಿಸಿಐಗೆ ರಹಾನೆ ಖಡಕ್ ಸಂದೇಶ!

ಮನವಿಗೆ ಮುಂದಾದ ಆಟಗಾರರು:

ಕ್ರಿಕೆಟ್ ತಮಗೆ ಪ್ರಮುಖ ಆದಾಯದ ಮೂಲವಾಗಿರುವುದರಿಂದ, ಈ ಕಠಿಣ ಶಿಕ್ಷೆಯನ್ನು ಮರುಪರಿಶೀಲಿಸುವಂತೆ ನಿಷೇಧಿತ ಆಟಗಾರರು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ ಜಂಟಿ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಮತ್ತೊಂದೆಡೆ, ಉಮರ್ ಅಕ್ಮಲ್ ಕೂಡ ಸಹ ಆಟಗಾರರ ಬೆಂಬಲಕ್ಕೆ ನಿಂತಿದ್ದು, ಬೇರೆ ದೇಶಗಳ ಆಟಗಾರರಿಗೆ ಇಲ್ಲದ ನಿಷೇಧ ಪಾಕಿಸ್ತಾನಿ ಆಟಗಾರರಿಗೆ ಏಕೆ ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಪಿಸಿಬಿಯ ಈ ಕಠಿಣ ನಿರ್ಧಾರವು ಅನುಮತಿ ಇಲ್ಲದೆ ಅನಧಿಕೃತ ಲೀಗ್‌ಗಳಲ್ಲಿ ಆಡುವ ಆಟಗಾರರಿಗೆ ಬಿಸಿ ಮುಟ್ಟಿಸಿದೆ.

Source link

GBDA ಯೋಜನೆ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂದೇಶ – Kannada News | CM DK Shivakumar Outlines Greater Bengaluru Authoritys Bidadi Project and Farmer Compensation

ಬೆಂಗಳೂರು, ಆಗಸ್ಟ್ 09: ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬಿಡದಿ ಟೌನ್‌ಶಿಪ್ ಯೋಜನೆಯನ್ನು ನಮ್ಮ ಸರ್ಕಾರ ಮುಂದುವರಿಸಲಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. ಈ ಮಹತ್ವಾಕಾಂಕ್ಷೆಯ ಯೋಜನೆಯು ಉತ್ತಮ ರಸ್ತೆಗಳು, ಮೆಟ್ರೋ ಸೌಲಭ್ಯ, ಕ್ರೀಡಾಂಗಣ, ವಸತಿ ಮತ್ತು ಉದ್ಯಾನವನಗಳನ್ನು ಒಳಗೊಂಡ ಒಂದು ಸಮಗ್ರ AI ಸಿಟಿಯಾಗಿ ರೂಪುಗೊಳ್ಳಲಿದೆ.

ಈ ಗ್ರೇಟರ್ ಬೆಂಗಳೂರು ಅಥಾರಿಟಿ (GBDA) ಯೋಜನೆಯ ಮುಖ್ಯ ಉದ್ದೇಶಗಳು ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು, ರೈತಾಪಿ ಜನರಿಗೆ ಉತ್ತಮ ಬದುಕು ಕಲ್ಪಿಸುವುದು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗೆ ಹೊಸ ರೂಪ ನೀಡುವುದು. ಜಮೀನು ನೀಡುವ ರೈತರಿಗೆ ನಮ್ಮ ಸರ್ಕಾರ ಉತ್ತಮ ಬೆಲೆ ನೀಡಲು ಬದ್ಧವಾಗಿದೆ ಎಂದು ಸಿಎಂ ಶಿವಕುಮಾರ್ ಹೇಳಿದ್ದಾರೆ. ಹಿಂದಿನ ಸರ್ಕಾರವು ಎಕರೆಗೆ ಕೇವಲ 25 ಲಕ್ಷ ರೂಪಾಯಿ ಮಾತ್ರ ನಿಗದಿಪಡಿಸಿತ್ತು. ಆದರೆ, ಪ್ರಸ್ತುತ ನಮ್ಮ ಸರ್ಕಾರ ಪ್ರತಿ ಎಕರೆಗೆ ಮೂರಕ್ಕೂ ಹೆಚ್ಚು ಕೋಟಿ ರೂಪಾಯಿ ಪರಿಹಾರ ನೀಡಲು ನಿರ್ಧಾರ ಮಾಡಿದೆ.

ಹಣ ಬೇಡ ಎನ್ನುವಂತಹ ರೈತರಿಗೆ ಶೇಕಡಾ 50 ಅಭಿವೃದ್ಧಿಪಡಿಸಿದ ಜಾಗವನ್ನು ನೀಡಲು ಸಹ ನಮ್ಮ ಸರ್ಕಾರ ತೀರ್ಮಾನಿಸಿದೆ. ಈ ಯೋಜನೆಗೆ ಜಮೀನು ನೀಡಲು ಇಚ್ಛೆ ಇಲ್ಲದ ರೈತರಿಗೆ ಯಾವುದೇ ಒತ್ತಾಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಿಂದಿನ ಸರ್ಕಾರ ಜಾರಿಗೊಳಿಸಿದ್ದ ರೆಡ್ ಜೋನ್ ಆದೇಶವನ್ನೇ ಮುಂದುವರಿಸಲಾಗುವುದು. ಅಭಿವೃದ್ಧಿ ಬಯಸುವವರು ಸರ್ಕಾರದೊಂದಿಗೆ ಸಹಕಾರ ನೀಡಬೇಕು ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ತಲೆ ಬೋಳಿಸಿಕೊ, ಸಗಣಿ ಮೆತ್ತಿಕೊ’: ಬಿಗ್​​ಬಾಸ್ ಆಕಾಂಕ್ಷಿಗಳಿಗೆ ಅಗ್ನಿಪರೀಕ್ಷೆ – Kannada News | Bigg Boss Kannada Agnipareekshe, contestants asks to shave head

ಬಿಗ್​​ಬಾಸ್ ಕನ್ನಡ ಸೀಸನ್ 13 (Bigg Boss Kannada) ಇನ್ನೊಂದು ವಾರದಲ್ಲಿ ಪ್ರಾರಂಭ ಆಗಲಿದೆ. ಈ ಬಾರಿ ಬಿಗ್​​ಬಾಸ್ ಮನೆಗೆ ಸೆಲೆಬ್ರಿಟಿಗಳ ಜೊತೆಗೆ ಸಾಮಾನ್ಯರು ಸಹ ಎಂಟ್ರಿ ಕೊಡಲಿದ್ದಾರೆ. ಈಗಾಗಲೇ ಹಲವು ಸ್ಪರ್ಧಿಗಳ ಆಯ್ಕೆ ನಡೆದಿದೆ. ಆದರೆ ಇನ್ನೂ ಕೆಲವು ಸ್ಪರ್ಧಿಗಳ ಆಯ್ಕೆ ನಡೆಯುತ್ತಿದ್ದು, ಲಕ್ಷಾಂತರ ಆಕಾಂಕ್ಷಿಗಳ ಪೈಕಿ ಕೆಲವರನ್ನು ಆಯ್ಕೆ ಮಾಡಿ ಅವರಿಗೆ ಕೆಲವು ಪರೀಕ್ಷೆಗಳನ್ನು ನೀಡಿ ಅದರಲ್ಲಿ ಪಾಸ್ ಆಗುವವರನ್ನು ಬಿಗ್​​ಬಾಸ್ ಮನೆಗೆ ಕಳಿಸಲಾಗುತ್ತಿದೆ. ಈ ಅಗ್ನಿಪರೀಕ್ಷೆ, ಎಂಟಿವಿಯ ರೋಡೀಸ್ ಅನ್ನು ನೆನಪಿಸುತ್ತಿದೆ.

ಇದೀಗ ಕಲರ್ಸ್ ವಾಹಿನಿಯು, ‘ಬಿಗ್​​ಬಾಸ್ ಅಗ್ನಿಪರೀಕ್ಷೆಯ’ ಹೊಸ ಪ್ರೋಮೊ ಬಿಡುಗಡೆ ಮಾಡಿದೆ. ಕೆಲ ದಿನಗಳ ಹಿಂದೆ ಬಿಡುಗಡೆ ಮಾಡಿದ್ದ ಪ್ರೋಮೊನಲ್ಲಿ ಮಾಜಿ ಸ್ಪರ್ಧಿಗಳಾದ ಶ್ರುತಿ, ವಿನಯ್ ಗೌಡ, ಸಂಗೀತ ಶೃಂಗೇರಿ ಮತ್ತು ಚಂದನ್ ಶೆಟ್ಟಿ ಅವರುಗಳು ಬಿಗ್​​ಬಾಸ್ ಆಕಾಂಕ್ಷಿಗಳ ಅಗ್ನಿಪರೀಕ್ಷೆ ತೆಗೆದುಕೊಳ್ಳಲಿದ್ದಾರೆ ಎಂದು ಘೋಷಿಸಲಾಗಿತ್ತು. ಈಗ ಅಗ್ನಿಪರೀಕ್ಷೆ ಶುರುವಾಗಿದ್ದು, ತೀರ್ಪುಗಾರರು ವಿವಿಧ ರೀತಿಯ ಕ್ಲಿಷ್ಟವಾದ ಪರೀಕ್ಷೆಗಳನ್ನು ಆಕಾಂಕ್ಷಿಗಳಿಗೆ ಇರಿಸಿದ್ದಾರೆ.

ಇಂದು (ಆಗಸ್ಟ್ 09) ಬಿಡುಗಡೆ ಆಗಿರುವ ಪ್ರೋಮೊ ಪ್ರಕಾರ, ಸುಮಾರು 60ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳನ್ನು ಫೈನಲ್ ಮಾಡಲಾಗಿದ್ದು, ಅವರಿಗೆ ಅಗ್ನಿಪರೀಕ್ಷೆ ಇರಿಸಲಾಗಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತೀರ್ಪುಗಾರರ ಮುಂದೆ ಬಂದಿದ್ದಾರೆ. ತೀರ್ಪುಗಾರರು ಅವರನ್ನು ನಾನಾ ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ. ನಾನಾ ರೀತಿಯ ಪರೀಕ್ಷೆಗಳನ್ನು ಒಡ್ಡಿದ್ದಾರೆ.

ಪ್ರೋಮೊನಲ್ಲಿ ತೋರಿಸಿರುವಂತೆ ಯುವತಿಯರಿಗೆ ಸಗಣಿಯನ್ನು ಮುಖಕ್ಕೆ ಫೇಸ್​ ಮಾಸ್ಕ್ ರೀತಿ ಮೆತ್ತಿಕೊಳ್ಳುವಂತೆ ಹೇಳಿದ್ದಾರೆ. ಇನ್ನು ಕೆಲವರಿಗೆ ಹಾಗಲಕಾಯಿ, ಮೆಣಸಿನಕಾಯಿ ಜ್ಯೂಸ್ ಕುಡಿಸಿದ್ದಾರೆ. ಗಿನ್ನೆಸ್ ದಾಖಲೆ ಮಾಡಿದ್ದೇನೆಂದು ಬಂದ ಯುವಕನಿಂದ ಆ ದಾಖಲೆಯ ಪತ್ರವನ್ನು ಹರಿಸಿದ್ದಾರೆ. ಒಬ್ಬ ವ್ಯಕ್ತಿಗೆ ತಲೆ ಬೋಳಿಸಿಕೊಳ್ಳುವಂತೆ ಹೇಳಿದ್ದಾರೆ. ಯುವತಿಗೆ ತಮ್ಮ ಮೇಕಪ್ ಸಾಮಗ್ರಿಗಳನ್ನು ಒಡೆದು ಹಾಕುವಂತೆ ಹೇಳಿದ್ದಾರೆ. ಒಟ್ಟಾರೆ ನಾ-ನಾ ರೀತಿಯ ಪರೀಕ್ಷೆಗಳನ್ನು ಮಾಡಿಸಿದ್ದಾರೆ.

ಅಮುಕು-ಡುಮುಕು ಎನ್ನುತ್ತಾ ಇನ್​​ಸ್ಟಾಗ್ರಾಂನಲ್ಲಿ ಜನಪ್ರಿಯ ಆಗಿರುವ ಸೋಷಿಯಲ್ ಮೀಡಿಯಾ ಇನ್​​ಫ್ಲಯೆನ್ಸರ್ ಸಹ ಬಿಗ್​​ಬಾಸ್ ಅಗ್ನಿಪರೀಕ್ಷೆಗೆ ಬಂದಿದ್ದ, ಆದರೆ ವಿನಯ್ ಗೌಡ ಹಾಗೂ ಆತನ ನಡುವೆ ಕಾವೇರಿದ ವಾದ-ಪ್ರತಿವಾದ ನಡೆದಿದ್ದು, ವಿನಯ್ ಗೌಡ, ಆ ಇನ್​​ಫ್ಲಯೆನ್ಸರ್ ಅನ್ನು ವೇದಿಕೆಯಿಂದಲೇ ಮನೆಗೆ ಕಳಿಸಿದ್ದಾರೆ. ಅದೂ ಸಹ ಪ್ರೋಮೊನಲ್ಲಿ ತೋರಿಸಲಾಗಿದೆ. ಬಿಗ್​​ಬಾಸ್ ಕನ್ನಡ ಸೀಸನ್ 13, ಆಗಸ್ಟ್ 16ರಿಂದ ಪ್ರಾರಂಭ ಆಗಲಿದೆ. ಸುದೀಪ್ ಅವರು ಅದ್ಧೂರಿಯಾಗಿ ಹೊಸ ಸೀಸನ್​​ಗೆ ಚಾಲನೆ ನೀಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 1:40 pm, Sun, 9 August 26

Source link

IOB Recruitment 2026: ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ 250 ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ! – Kannada News | IOB LBO Recruitment 2026: Apply Online for 250 Local Bank Officer Posts Before August 24

ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (IOB) ಒಳ್ಳೆಯ ಸುದ್ದಿಯನ್ನು ನೀಡಿದೆ. ಜೆಎಂಜಿಎಸ್-ಐ (JMGS-I – Scale I) ಕೇಡರ್‌ನಲ್ಲಿ ಖಾಲಿ ಇರುವ ಸ್ಥಳೀಯ ಬ್ಯಾಂಕ್ ಅಧಿಕಾರಿ (Local Bank Officer – LBO) ಹುದ್ದೆಗಳ ನೇಮಕಾತಿಗಾಗಿ ಬ್ಯಾಂಕ್ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಒಟ್ಟು 250 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಿದ ರಾಜ್ಯದಲ್ಲಿಯೇ ನಿಯೋಜನೆ ನೀಡಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಗಸ್ಟ್ 24 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ರಾಜ್ಯವಾರು ಖಾಲಿ ಹುದ್ದೆಗಳ ವಿವರಗಳು:

ಈ ನೇಮಕಾತಿ ಅಧಿಸೂಚನೆಯಡಿಯಲ್ಲಿ ಒಟ್ಟು ನಾಲ್ಕು ಪ್ರಮುಖ ರಾಜ್ಯಗಳಲ್ಲಿ 250 ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ತಮಿಳುನಾಡು ರಾಜ್ಯದಲ್ಲಿ ಅತ್ಯಂತ ಹೆಚ್ಚು ಅಂದರೆ 100 ಹುದ್ದೆಗಳು ಖಾಲಿಯಿವೆ. ಉಳಿದಂತೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ತಲಾ 50 ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಅಭ್ಯರ್ಥಿಗಳು ತಾವು ಬಯಸುವ ರಾಜ್ಯವನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.

ಶೈಕ್ಷಣಿಕ ಅರ್ಹತೆ ಮತ್ತು ಸ್ಥಳೀಯ ಭಾಷಾ ಪ್ರಾವೀಣ್ಯತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ (Degree) ಪೂರ್ಣಗೊಳಿಸಿರಬೇಕು. ಇದರೊಂದಿಗೆ, ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುತ್ತಿರುವ ರಾಜ್ಯದ ಸ್ಥಳೀಯ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ಪ್ರವೀಣರಾಗಿರುವುದು ಕಡ್ಡಾಯವಾಗಿದೆ. ಒಂದು ವೇಳೆ ಅಭ್ಯರ್ಥಿಗಳು ತಮ್ಮ 10 ಅಥವಾ 12 ನೇ ತರಗತಿಯಲ್ಲಿ ಸಂಬಂಧಿತ ಸ್ಥಳೀಯ ಭಾಷೆಯನ್ನು ಅಭ್ಯಾಸ ಮಾಡದಿದ್ದರೆ, ಆಯ್ಕೆ ಪ್ರಕ್ರಿಯೆಯ ಭಾಗವಾಗಿ ಭಾಷಾ ಪ್ರಾವೀಣ್ಯತೆ ಪರೀಕ್ಷೆಯನ್ನು (Language Proficiency Test – LPT) ನಡೆಸಲಾಗುತ್ತದೆ.

ವಯೋಮಿತಿ ಮತ್ತು ಸಡಿಲಿಕೆಯ ವಿವರಗಳು:

ಆಗಸ್ಟ್ 1, 2026 ರ ಅನ್ವಯ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 20 ರಿಂದ 30 ವರ್ಷಗಳ ನಡುವೆ ಇರಬೇಕು. ಅಂದರೆ, ಆಗಸ್ಟ್ 2, 1996 ಮತ್ತು ಆಗಸ್ಟ್ 1, 2006 ರ ನಡುವೆ ಜನಿಸಿದ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ. ಕೇಂದ್ರ ಸರ್ಕಾರದ ಮೀಸಲಾತಿ ನಿಯಮಾವಳಿಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ. ಎಸ್‌ಸಿ ಮತ್ತು ಎಸ್‌ಟಿ (SC/ST) ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ (OBC) ಅಭ್ಯರ್ಥಿಗಳಿಗೆ 3 ವರ್ಷಗಳು ಹಾಗೂ ದಿವ್ಯಾಂಗ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಸಿಗಲಿದೆ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಅರ್ಜಿ ಶುಲ್ಕ ಮತ್ತು ಪಾವತಿ ವಿಧಾನ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ (EWS) ವರ್ಗದ ಅಭ್ಯರ್ಥಿಗಳಿಗೆ ರೂ. 850 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಇನ್ನು ಎಸ್‌ಸಿ, ಎಸ್‌ಟಿ ಮತ್ತು ದಿವ್ಯಾಂಗ ಅಭ್ಯರ್ಥಿಗಳಿಗೆ ರೂ. 175 ಶುಲ್ಕ ಇರಲಿದೆ. ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಆಯ್ಕೆ ಪ್ರಕ್ರಿಯೆ ಮತ್ತು ಲಿಖಿತ ಪರೀಕ್ಷೆಯ ವಿವರಗಳು:

ಅಭ್ಯರ್ಥಿಗಳ ಆಯ್ಕೆಯು ಬಹುಹಂತದ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಆನ್‌ಲೈನ್ ಲಿಖಿತ ಪರೀಕ್ಷೆ, ಸಂದರ್ಶನ, ದಾಖಲೆ ಪರಿಶೀಲನೆ ಹಾಗೂ ಅಗತ್ಯವಿರುವವರಿಗೆ ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆಯ ಆಧಾರದ ಮೇಲೆ ಅಂತಿಮ ಆಯ್ಕೆ ನಡೆಯಲಿದೆ. ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸುವಾಗ ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನಕ್ಕೆ 80:20 ಅನುಪಾತದಲ್ಲಿ ಅಂಕಗಳ ತೂಕ ನೀಡಲಾಗುತ್ತದೆ.

ಆನ್‌ಲೈನ್ ಲಿಖಿತ ಪರೀಕ್ಷೆಯು ಒಟ್ಟು 200 ಅಂಕಗಳಿಗೆ 140 ಪ್ರಶ್ನೆಗಳನ್ನು ಹೊಂದಿರಲಿದ್ದು, ಪರೀಕ್ಷೆ ಬರೆಯಲು 3 ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ. ಪರೀಕ್ಷೆಯಲ್ಲಿ ನಕಾರಾತ್ಮಕ ಅಂಕಗಳಿದ್ದು (Negative Marking), ಪ್ರತಿಯೊಂದು ತಪ್ಪು ಉತ್ತರಕ್ಕೆ 1/4 (0.25) ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ವಿಷಯವಾರು ವಿವರಗಳನ್ನು ನೋಡುವುದಾದರೆ, ರೀಸನಿಂಗ್ & ಕಂಪ್ಯೂಟರ್ ಆಪ್ಟಿಟ್ಯೂಡ್ (30 ಪ್ರಶ್ನೆಗಳು, 60 ಅಂಕಗಳು), ಜನರಲ್/ಎಕಾನಮಿ/ಬ್ಯಾಂಕಿಂಗ್ ಜಾಗೃತಿ (40 ಪ್ರಶ್ನೆಗಳು, 40 ಅಂಕಗಳು), ಡೇಟಾ ಅನಾಲಿಸಿಸ್ & ಇಂಟರ್ಪ್ರಿಟೇಷನ್ (30 ಪ್ರಶ್ನೆಗಳು, 60 ಅಂಕಗಳು) ಮತ್ತು ಇಂಗ್ಲಿಷ್ ಭಾಷಾ ಜ್ಞಾನಕ್ಕೆ (40 ಪ್ರಶ್ನೆಗಳು, 40 ಅಂಕಗಳು) ನಿಗದಿಪಡಿಸಲಾಗಿದೆ.

ವೇತನ ಶ್ರೇಣಿ ಮತ್ತು ಭತ್ಯೆಗಳು:

ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗೆ ಅಂತಿಮವಾಗಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳಿಗೆ ರೂ. 48,480 ರಿಂದ ರೂ. 85,920 ರವರೆಗೆ ಮೂಲ ವೇತನ ಸಿಗಲಿದೆ. ಇದರ ಜೊತೆಗೆ ಬ್ಯಾಂಕ್ ನಿಯಮಾವಳಿಗಳ ಪ್ರಕಾರ ತುಟ್ಟಿ ಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA) ಹಾಗೂ ಇನ್ನಿತರ ಸೌಲಭ್ಯಗಳು ಮತ್ತು ಭತ್ಯೆಗಳು ಲಭ್ಯವಿರುತ್ತವೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ವೈಭವ್ ವಯಸ್ಸೆಷ್ಟು? 15 ಅಥವಾ 18… ಬ್ರೆಟ್ ಲೀ ಖಡಕ್ ಉತ್ತರ – Kannada News | Brett Lee’s Blunt Take on Vaibhav Suryavanshi’s Age Row

ಟಿ20 ಕ್ರಿಕೆಟ್​ನ ನ್ಯೂ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರ ವಯಸ್ಸಿನ ಸುತ್ತ ಕೇಳಿಬರುತ್ತಿರುವ ವಿವಾದಗಳಿಗೆ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಖಡಕ್ ಉತ್ತರ ನೀಡಿದ್ದಾರೆ. “ಅವನಿಗೆ 15 ವರ್ಷ ಇರಲಿ ಅಥವಾ 18 ವರ್ಷ ಇರಲಿ, ಅದರಿಂದ ಯಾರಿಗೂ ಯಾವುದೇ ನಷ್ಟವಿಲ್ಲ. ಆ ಹುಡುಗನಲ್ಲಿ ಅದ್ಭುತ ಕ್ರಿಕೆಟ್ ಕೌಶಲ್ಯವಿದೆ” ಎಂದು ಬ್ರೆಟ್ ಲೀ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಯೂಟ್ಯೂಬ್ ಚಾನೆಲ್​ವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಬ್ರೆಟ್ ಲೀ, ವೈಭವ್ ಸೂರ್ಯವಂಶಿಯ ಆಟದ ಶೈಲಿ ಮತ್ತು ಅವರ ಮೇಲಿರುವ ಒತ್ತಡದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಬ್ರೆಟ್ ಲೀ ಪ್ರಕಾರ, ಸದ್ಯ ಜಾಗತಿಕ ಕ್ರಿಕೆಟ್ ವಲಯದಲ್ಲಿ ವೈಭವ್ ಸೂರ್ಯವಂಶಿ ಅವರ ವಯಸ್ಸಿನದ್ದೇ ದೊಡ್ಡ ಚರ್ಚೆಯಾಗಿದೆ. ಭಾರತದ ಹೊರಗೆ ಪ್ರತಿಯೊಬ್ಬರೂ ವೈಭವ್ ನಿಜವಾಗಿಯೂ 15 ವರ್ಷದವನೇ ಎಂದು ಆಶ್ಚರ್ಯದಿಂದ ಕೇಳುತ್ತಿದ್ದಾರೆ.

ಆದರೆ ನನಗೆ ಆತನ ವಯಸ್ಸಿನ ಬಗ್ಗೆ ಯಾವುದೇ ತಲೆನೋವಿಲ್ಲ. ಆತ 15 ವರ್ಷದವನಾಗಿದ್ದರೆ ಅದು ಅದ್ಭುತ. ಒಂದು ವೇಳೆ ಆತನಿಗೆ 17 ಅಥವಾ 18 ವರ್ಷವಾಗಿದ್ದರೂ ಯಾರಿಗೆ ತಾನೇ ಏನು ನಷ್ಟ? ಆತ ಅಷ್ಟು ಚಿಕ್ಕ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪ್ರತಿಮ ಕ್ರಿಕೆಟ್ ಆಡಬಲ್ಲ ಸಾಮರ್ಥ್ಯ ಹೊಂದಿದ್ದಾನೆ ಎಂಬುದೇ ಮುಖ್ಯ ಎಂದು ಲೀ ಹೇಳಿದ್ದಾರೆ.

ನಿರ್ಭೀತ ದಾಂಡಿಗ!

ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ವೈಭವ್ ಸೂರ್ಯವಂಶಿ ಆಡಿದ ಬಿರುಸಿನ ಇನಿಂಗ್ಸ್ ಅನ್ನು ಬ್ರೆಟ್ ಲೀ ವಿಶೇಷವಾಗಿ ಶ್ಲಾಘಿಸಿದ್ದಾರೆ. ಆಸ್ಟ್ರೇಲಿಯಾದ ಘಾತಕ ವೇಗಿಗಳ ವಿರುದ್ಧ ಹುಕ್ ಶಾಟ್ ಬಾರಿಸಿದ್ದು ನೋಡಿ ನಿಜಕ್ಕೂ ಫಿದಾ ಆದೆ. ವೈಭವ್ ಸೂರ್ಯವಂಶಿ ಕೇವಲ ಹಿಟ್ಟರ್ ಅಲ್ಲ, ಆತ ಒಬ್ಬ ‘ಟೆಕ್ನಿಕಲ್ ಜೀನಿಯಸ್’. ಹೀಗಾಗಿಯೇ ಆತ ನಿರ್ಭೀತಿಯಿಂದ ಬ್ಯಾಟ್ ಬೀಸುತ್ತಿದ್ದಾನೆ ಎಂದು ಬ್ರೆಟ್ ಲೀ ಕೊಂಡಾಡಿದ್ದಾರೆ.

ಮಾನಸಿಕ ಒತ್ತಡದ ಎಚ್ಚರಿಕೆ:

ವೈಭವ್‌ಗೆ ಇರುವ ನಿಜವಾದ ಪರೀಕ್ಷೆ ಅವರ ಬ್ಯಾಟಿಂಗ್ ಫಾರ್ಮ್ ಅಲ್ಲ, ಬದಲಿಗೆ ಅವರ ಮನಸ್ಥಿತಿ . ಭಾರತದಲ್ಲಿ ಇಷ್ಟು ಚಿಕ್ಕ ವಯಸ್ಸಿಗೆ ಸಿಗುವ ಸ್ಟಾರ್‌ಡಮ್ ಅನ್ನು ನಿಭಾಯಿಸುವುದು ಸುಲಭವಲ್ಲ. ಆದ್ದರಿಂದ ಮಾಧ್ಯಮಗಳು ಮತ್ತು ಅಭಿಮಾನಿಗಳು ಆತನ ಮೇಲೆ ಹೆಚ್ಚಿನ ಒತ್ತಡ ಹೇರಬಾರದು. ಆತನನ್ನು ಒಬ್ಬ ಮಗುವಿನಂತೆ ಮುಕ್ತವಾಗಿ ಆಡಲು ಬಿಡಬೇಕು ಎಂದು ಲೀ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ರೋಹಿತ್ ಶರ್ಮಾ ವಿಶ್ವಕಪ್ ಭವಿಷ್ಯ: ಅಗರ್ಕರ್, ಬಿಸಿಸಿಐಗೆ ರಹಾನೆ ಖಡಕ್ ಸಂದೇಶ!

ಒಟ್ಟಾರೆಯಾಗಿ, ವಯಸ್ಸಿನ ವಿವಾದಗಳು ಏನೇ ಇದ್ದರೂ, ವೈಭವ್ ಸೂರ್ಯವಂಶಿ ಅವರ ಬ್ಯಾಟ್ ಮಾತ್ರ ಮೈದಾನದಲ್ಲಿ ರನ್ ಮಳೆ ಹರಿಸುತ್ತಲೇ ಇದೆ. ಬ್ರೆಟ್ ಲೀ ಅವರಂತಹ ದಿಗ್ಗಜರ ಬೆಂಬಲ ಈ ಯುವ ಆಟಗಾರನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

Published On – 1:51 pm, Sun, 9 August 26

Source link

Gold Rates 09 Aug: ಹತ್ತು ಗ್ರಾಮ್ ಚಿನ್ನದ ಬೆಲೆ ಈ ವಾರ 7,650 ರೂ ಹೆಚ್ಚಳ – Kannada News | Gold Price Today on 9th August 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಆಗಸ್ಟ್ 9: ಚಿನ್ನದ ಬೆಲೆ ಸತತ ಏರಿಕೆ ಈ ವಾರದ ಕೊನೆಯವರೆಗೂ ಮುಂದುವರಿದಿದೆ. ವಾರಾಂತ್ಯದಲ್ಲಿ ಇದರ ಬೆಲೆ (Gold Price) 225 ರೂ ಹೆಚ್ಚಿದೆ. ಕಳೆದ ನಾಲ್ಕೈದು ದಿನದಲ್ಲಿ ಒಂದು ಗ್ರಾಮ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 765 ರೂ ಏರಿದೆ. ಅಪರಂಜಿ ಚಿನ್ನದ ಬೆಲೆ 15,000 ರೂ ಗಡಿ ದಾಟಿದೆ. ಆಭರಣ ಚಿನ್ನದ ಬೆಲೆ 14,000 ರೂ ಸಮೀಪಕ್ಕೆ ಹೋಗಿದೆ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿ ಹೆಚ್ಚಿನ ಕಡೆ ಬೆಲೆ ಏರಿದೆ. ಬೆಳ್ಳಿ ಬೆಲೆಯೂ ವಾರಾಂತ್ಯದಲ್ಲಿ ಐದು ರೂ ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,39,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,52,350 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,39,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 25,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಆಗಸ್ಟ್ 9ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,235 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,965 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,426 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 245 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,235 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,965 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 245 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,965 ರೂ
  • ಚೆನ್ನೈ: 13,965 ರೂ
  • ಮುಂಬೈ: 13,965 ರೂ
  • ದೆಹಲಿ: 13,980 ರೂ
  • ಕೋಲ್ಕತಾ: 13,965 ರೂ
  • ಕೇರಳ: 13,965 ರೂ
  • ಅಹ್ಮದಾಬಾದ್: 13,970 ರೂ
  • ಜೈಪುರ್: 13,980 ರೂ
  • ಲಕ್ನೋ: 13,980 ರೂ
  • ಭುವನೇಶ್ವರ್: 13,965 ರೂ

ಇದನ್ನೂ ಓದಿ: ಭಾರತದಲ್ಲಿ ಏಜ್ ವೆರಿಫಿಕೇಶನ್ ಫೀಚರ್ ಪರೀಕ್ಷಿಸುತ್ತಿರುವ ವಾಟ್ಸಾಪ್; ವಯಸ್ಸು ತಿಳಿಸಲು ಸಿದ್ದರಾಗಿ

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 15,235 ರುಪಾಯಿ
  • ಮಲೇಷ್ಯಾ: 587 ರಿಂಗಿಟ್ (13,657 ರುಪಾಯಿ)
  • ದುಬೈ: 523.25 ಡಿರಾಮ್ (13,556 ರುಪಾಯಿ)
  • ಅಮೆರಿಕ: 142.50 ಡಾಲರ್ (13,560 ರುಪಾಯಿ)
  • ಸಿಂಗಾಪುರ: 189.40 ಸಿಂಗಾಪುರ್ ಡಾಲರ್ (14,098 ರುಪಾಯಿ)
  • ಕತಾರ್: 524 ಕತಾರಿ ರಿಯಾಲ್ (13,679 ರೂ)
  • ಸೌದಿ ಅರೇಬಿಯಾ: 540 ಸೌದಿ ರಿಯಾಲ್ (13,686 ರುಪಾಯಿ)
  • ಓಮನ್: 55.55 ಒಮಾನಿ ರಿಯಾಲ್ (13,731 ರುಪಾಯಿ)
  • ಕುವೇತ್: 43.57 ಕುವೇತಿ ದಿನಾರ್ (13,501 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 245 ರೂ
  • ಚೆನ್ನೈ: 250 ರೂ
  • ಮುಂಬೈ: 245 ರೂ
  • ದೆಹಲಿ: 245 ರೂ
  • ಕೋಲ್ಕತಾ: 245 ರೂ
  • ಕೇರಳ: 250 ರೂ
  • ಅಹ್ಮದಾಬಾದ್: 245 ರೂ
  • ಜೈಪುರ್: 245 ರೂ
  • ಲಕ್ನೋ: 245 ರೂ
  • ಭುವನೇಶ್ವರ್: 250 ರೂ
  • ಪುಣೆ: 245

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 1:44 pm, Sun, 9 August 26

Source link

ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್​​ ಪಾದಯಾತ್ರೆಗೆ ಚಾಲನೆ: ಯಾರೆಲ್ಲ ಭಾಗಿ? – Kannada News | JDS BJP Alliance Launches 3 Day ‘Namma Bhoomi Namma Hakku’ Padayatra Against Bidadi Township Project

ಜೆಡಿಎಸ್​​ ಪಾದಯಾತ್ರೆImage Credit source: Tv9 Kannada

ರಾಮನಗರ, ಆಗಸ್ಟ್​​ 09: ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್​​ ಪಾದಯಾತ್ರೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಬೈರಮಂಗಲ ಗ್ರಾಮದಲ್ಲಿ ಚಾಲನೆ ಕೇಂದ್ರ ಸಚಿವ ಹೆಚ್​​.ಡಿ.ಕುಮಾರಸ್ವಾಮಿ ಮತ್ತು ಆರ್​. ಅಶೋಕ್​​​​​ ಚಾಲನೆ ನೀಡಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಜೆಡಿಎಸ್​ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ನೇತೃತ್ವದಲ್ಲಿ ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂಪಾರ್ಕ್​ವರೆಗೂ ಪಾದಯಾತ್ರೆ ನಡೆಯಲಿದೆ. ನಮ್ಮ ಭೂಮಿ ನಮ್ಮ ಹಕ್ಕು ಹೆಸರಿನಲ್ಲಿ ಜೆಡಿಎಸ್​ ಪಾದಯಾತ್ರೆಗೆ ಮೈತ್ರಿ ಪಕ್ಷ ಬಿಜೆಪಿ ನಾಯಕರೂ ಬೆಂಬಲ ಸೂಚಿಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಅಶೋಕ್​​ ವಾಗ್ದಾಳಿ

ಸರ್ಕಾರ ಸಾವಿನ ಕೊನೆ ಮೊಳೆ ಹೊಡೆದುಕೊಳ್ತಿದ್ದು, ರೈತರನ್ನು ಎದುರುಹಾಕಿಕೊಂಡಿರುವ ಯಾವ ಸರ್ಕಾರವೂ ಉಳಿದಿಲ್ಲ ಎಂದು ಆರ್​. ಅಶೋಕ್​​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರು ತಮ್ಮ ಭೂಮಿಗಾಗಿ ಹೋರಾಟ ಮಾಡುತ್ತಿದ್ದರೆ, ಇಂದು ಜಾಹೀರಾತುಗಾಗಿ ಕಾಂಗ್ರೆಸ್ಸಿಗರು 4 ಕೋಟಿ ಹಣ ಕೊಟ್ಟಿದ್ದಾರೆ. ಕಾಂಗ್ರೆಸನ್ನು ಮನೆಗೆ ಕಳುಹಿಸುವವರೆಗೂ ನಮ್ಮ ಹೋರಾಟ ಇರುತ್ತೆ. ಕುಮಾರಸ್ವಾಮಿ ರೈತರಿಗಾಗಿ ಯೋಜನೆ ಬಿಡುತ್ತೇನೆ ಎಂದಿದ್ದರು. ಆದರೆ ರಾಹುಲ್ ಗಾಂಧಿಗೆ ದುಡ್ಡು ಕಳುಹಿಸಲು ಇವರು ಮಾಡಿರುವ ಯೋಜನೆ ಇದು ಎಂದವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಬಿಡದಿ ಟೌನ್‌ಶಿಪ್‌ ವಿವಾದಕ್ಕೆ ಮತ್ತೊಂದು ತಿರುವು: ಅಭಿಪ್ರಾಯಗಳ ಸಮಗ್ರ ಪರಿಶೀಲನೆಗೆ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚನೆ

‘ರಾಜಕೀಯ ಲಾಭಕ್ಕಾಗಿ ಪಾದಯಾತ್ರೆಯಲ್ಲ’

ರೈತರ ಮೇಲೆ ಮರಣ ಶಾಸನ ಬರೆಯುವ ಯೋಜನೆ ಇದಾಗಿದ್ದು, ರಾಜಕೀಯ ಲಾಭಕ್ಕಾಗಿ ನಾವು ಪಾದಯಾತ್ರೆ ಮಾಡುತ್ತಿಲ್ಲ ಎಂದು JDS ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಹೋರಾಟಕ್ಕೆ ಮಾಜಿ ಪ್ರಧಾನಿ ದೇವೇಗೌಡರ ಮಾರ್ಗದರ್ಶನ ಇದ್ದು, ರೈತಾಪಿ ವರ್ಗ ಸಂಕಷ್ಟದಲ್ಲಿದೆ ಎಂದವರು ಆರೋಪಿಸಿದ್ದಾರೆ. ಪಾದಯಾತ್ರೆಯಲ್ಲಿ ಕೇಂದ್ರ ಸಚಿವ ಹೆಚ್​​.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಶಾಸಕ ಅಶ್ವತ್ಥ್‌ ನಾರಾಯಣ, ಎಂಎಲ್​ಸಿ ರವಿಕುಮಾರ್‌, ಜೆಡಿಎಸ್​​ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಸೇರಿದಂತೆ ಜೆಡಿಎಸ್​​, ಬಿಜೆಪಿ ನಾಯಕರು, ಸಾವಿರಾರು ರೈತರು ಭಾಗಿಯಾಗಿದ್ದರು.

ರಾರಾಜಿಸಿದ ಕೌಂಟರ್​ ಬ್ಯಾನರ್​ಗಳು

ಜೆಡಿಎಸ್​ ಪಾದಯಾತ್ರೆ ಹಿನ್ನೆಲೆ ಒಂದೆಡೆ ಜೆಡಿಎಸ್​ ಕಟೌಟ್ ಹಾಗೂ ಬ್ಯಾನರ್​ಗಳು ರಾರಾಜಿಸುತ್ತಿದ್ದರೆ ಮತ್ತೊಂದೆಡೆ ಕಾಂಗ್ರೆಸಿಗರು ಕೌಮಟರ್​​ ಬ್ಯಾನರ್​​ಗಳನ್ನು ಅಳವಡಿಸಿರೋದು ಕಂಡುಬಂದಿದೆ. ಪ್ರಾಯಶ್ಚಿತ್ತ ಯಾತ್ರೆಗೆ ಹಾರ್ದಿಕ ಸ್ವಾಗತ ಎಂದು ಬೈರಮಂಗಲ ಸರ್ಕಲ್​ನಲ್ಲಿ ಕಾಂಗ್ರೆಸಿಗರು ಬ್ಯಾನರ್ ಅಳವಡಿಕೆ ಮಾಡಿದ್ದಾರೆ. ಹೆಚ್​​ಡಿಕೆ, ಬಿಎಸ್​ವೈ ಪುತ್ರರನ್ನ ಕೈಹಿಡಿದು ಪಾದಯಾತ್ರೆ ನಡೆಸುವ ರೀತಿ ವ್ಯಂಗ್ಯವಾಡಲಾಗಿದ್ದು, ಬಿಡದಿ ಟೌನ್​​ಶಿಪ್ ರೂವಾರಿಗಳಾದ ಬಿಜೆಪಿ ಮತ್ತು JDSನ ಪ್ರಾಯಶ್ಚಿತ್ತದ ಯಾತ್ರೆ ಎಂದು ಬ್ಯಾನರ್​​ನಲ್ಲಿ ಬರೆಯಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version