ತುಮಕೂರು, (ಫೆಬ್ರವರಿ 24): ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ತವರಲ್ಲೇ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ದೇವರು ಬಂದಂತೆ ನಾಟಕವಾಡಿದ ಗ್ರಾಮಸ್ಥನೊಬ್ಬ ದಲಿತ ನವದಂಪತಿಗಳನ್ನು ದೇವಾಲಯದಿಂದ ಹೊರಗೆ ಕಳಿಸಿರುವ ಘಟನೆ ನಡೆದಿದೆ. ತುಮಕೂರು (Tumakuru) ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಅರಸಮ್ಮ ದೇವಾಲಯದಲ್ಲಿ ಘಟನೆ ನಡೆದಿದ್ದು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಹೊಸದಾಗಿ ಮದುವೆಯಾಗಿದ್ದ ದಂಪತಿ ದೇವಾಲಯಕ್ಕೆ ಹೋಗಿದ್ದರು. ಈ ವೇಳೆ ದೇವಾಲಯದ ಒಳಗಿದ್ದ ವ್ಯಕ್ತಿಯೊಬ್ಬ ದಂಪತಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿಲ್ಲ. ಬಳಿಕ ದೇವರು ಬಂದಂತೆ ನಟಿಸಿ ದಲಿತ ಕುಟುಂಬವನ್ನು ಹೊರಕಳಿಸಿದ್ದಾನೆ. ದಲಿತರು ನಿಮಗೆ ಪ್ರವೇಶವಿಲ್ಲ, ಪುಣ್ಯ ಮಾಡಿಸಬೇಕು’ ಎಂದ ಗದರಿ ಹೊರಕಳಿಸಿದ್ದಾನೆ. ದೇವರು ಬಂದಂತೆ ನಟಿಸಿ ನಾಟಕವಾಡಿದ ಆರೋಪಿಯನ್ನು ನಾರಾಯಣಪ್ಪ ಎಂದು ಗುರುತಿಸಲಾಗಿದ್ದು, ಈತ ನವದಂಪತಿಗೆ ‘ನಡೀ ಆಚೆಗೆ’ ಎಂದು ಗದರಿಸಿ ಅವಮಾನ ಮಾಡಿದ್ದಾನೆ.
ಈ ಪ್ರಕರಣದಲ್ಲಿ ತಹಶೀಲ್ದಾರ್ ಮಧ್ಯೆ ಪ್ರವೇಶಿಸಿ ಬಳಿಕ ಗೋಣಿ ತುಮಕೂರು ಗ್ರಾಮದಲ್ಲಿ ಆಯೋಜಿಸಿದ್ದ ಶಾಂತಿ ಸಭೆ ಯಶಸ್ವಿಯಾಗಿದೆ. ಜಾತಿಯ ವಿಷಬೀಜ ಬಿಡಿ, ಬಸವಣ್ಣನವರ ತತ್ವ ಪಾಲಿಸಿ ಸೌಹಾರ್ದತೆಯಿಂದ ಇರುವಂತೆ ಗ್ರಾಮಸ್ಥರಿಗೆ ತಹಶೀಲ್ದಾರ್ ಸಲಹೆ ನೀಡಿದರು. ಬಳಿಕ ನವಜೋಡಿಯ ಕೈಹಿಡಿದು ದೇಗುಲದೊಳಗೆ ಕರೆದೊಯ್ದ ದೇವರ ದರ್ಶನ ಮಾಡಿಸಿದ್ದಾರೆ.
ಪ್ರಾಣಿಗಳೇ (animals) ಗುಣದಲಿ ಮೇಲು ಎನ್ನುವ ಮಾತಿದೆ. ಹೀಗಾಗಿ ಈ ಪ್ರಾಣಿಗಳು ತನ್ನನ್ನು ಸಾಕಿದ ಮಾಲೀಕರಿಗೆ ವಿಧೇಯವಾಗಿರುತ್ತದೆ. ಇದಕ್ಕೆ ಉದಾಹರಣೆಯಂತಿದೆ ಈ ವಿಡಿಯೋ. ವ್ಯಕ್ತಿಯೊಬ್ಬ ಶಂಖ ಊದುತ್ತಿದ್ದಂತೆ ಗೋಶಾಲೆಗೆಯತ್ತ ಹಸು (cow) ಸೇರಿದಂತೆ ಹೋರಿಗಳು ಓಡಿ ಹೋಗಿವೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಈ ದೃಶ್ಯ ನೋಡಿ ಅಚ್ಚರಿ ವ್ಯಕ್ತ ಪಡಿಸಿದ್ದಾರೆ.
ದೀಪಕ್ (Deepak) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಹಸುಗಳು ಸೇರಿದಂತೆ ಹೋರಿಗಳು ಮೇಯುತ್ತಿವೆ. ವ್ಯಕ್ತಿಯೊಬ್ಬ ಶಂಖ ಊದುತ್ತಿದ್ದಂತೆ ಹಸು, ಹೋರಿಗಳು ಗೋಶಾಲೆಯತ್ತ ಓಡಿ ಹೋಗುತ್ತಿರುವ ದೃಶ್ಯವನ್ನು ನೀವಿಲ್ಲಿ ಕಾಣಬಹುದು.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಶಂಖನಾದಕ್ಕೆ ಇರುವ ಶಕ್ತಿ ಅಂತಹದ್ದು ಎಂದರೆ, ಮತ್ತೊಬ್ಬರು, ಮತ್ತೆ ಮತ್ತೆ ನೋಡಬೇಕೆನಿಸುವ ದೃಶ್ಯ ಎಂದಿದ್ದಾರೆ. ಇನ್ನೊಬ್ಬರು, ಸೂಪರ್ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಛತ್ತೀಸ್ಗಢದ (Chhattisgarh )ಬಾಲೋದ್ ಜಿಲ್ಲೆಯ ಮೆಡ್ಡಿ ಎಂಬ ಗ್ರಾಮದಲ್ಲಿ ವಿಶಿಷ್ಟವಾದ ಕಾನೂನನ್ನು ಇತ್ತೀಚೆಗೆ ಅನುಷ್ಠಾನ ಮಾಡಲಾಗಿದೆ. ಅದರಂತೆ ಒಂದು ವೇಳೆ ಸುಳ್ಳು ಸುದ್ದಿ ಅಥವಾ ವದಂತಿ ಹಬ್ಬಿಸುವುದು ಕಂಡುಬಂದಲ್ಲಿ ಅಂತಹವರಿಗೆ 5,000 ರೂ. ದಂಡ ವಿಧಿಸುವ ನಿಯಮ ಜಾರಿ ಮಾಡಲಾಗಿದೆ. ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವಂತಹವರಿಗೆ ದಂಡ ವಿಧಿಸುವ ಮೂಲಕ ಸುಳ್ಳು ಸುದ್ದಿಯಿಂದ ಉಂಟಾಗುವ ಘರ್ಷಣೆಗಳನ್ನು ತಡೆದು ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಪ್ರಯತ್ನ ಇದಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ವದಂತಿ ಹರಡಿ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವಂತಿಲ್ಲ. ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮದಲ್ಲೂ ಸುಳ್ಳುಸುದ್ದಿಗಳನ್ನು ಹಬ್ಬಿಸುವುದಕ್ಕೆ ನಿಷೇಧ ವೈಯಕ್ತಿಕ ಗೌರವ, ಭಾವನೆಗೆ ಧಕ್ಕೆ ತರುವ ಹೇಳಿಕೆ ನೀಡುವುದನ್ನು ವದಂತಿ ಎಂದು ಪರಿಗಣನೆ ಮಾಡಿ 5,000 ರೂ ದಂಡ ಹಾಕಲಾಗುತ್ತದೆ. ಫೆಬ್ರವರಿ 19ಕ್ಕೆ ನಡೆದ ಗ್ರಾಮಸಭೆಯಲ್ಲಿ ‘ಚುಗ್ಲಿ’ ಅಥವಾ ಚಾಡಿ ಅಥವಾ ವದಂತಿಗೆ ನಿಷೇಧ ವಿಧಿಸುವ ಬಗ್ಗೆ ಗ್ರಾಮಸ್ಥರು ನಿರ್ಧರಿಸಿದ್ದು, ತಕ್ಷಣದಿಂದಲೇ ಅದು ಅನುಷ್ಠಾನಗೊಂಡಿದೆ.
ಬೆಂಗಳೂರು, ಫೆಬ್ರವರಿ 24: ರಾಜ್ಯದ ತರಕಾರಿಗಳಲ್ಲಿ ಹೇರಳವಾಗಿ ಸೀಸ ಮತ್ತು ಕೀಟನಾಶಕಗಳ ಅಂಶಗಳು ಪತ್ತೆಯಾಗಿರುವ ವಿಚಾರ ಜನರಲ್ಲಿ ಆತಂಕ ಹುಟ್ಟಿಸಿರುವ ನಡುವೆ, ಬೇಸಿಗೆ ಆರಂಭದ ಹೊತ್ತಲ್ಲಿ ನೀರಿನ ಗುಣಮಟ್ಟ ಹದಗೆಟ್ಟ ಶಾಕಿಂಗ್ ರಿಪೋರ್ಟ್ ಹೊರಬಂದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಗ್ರಹಿಸಲಾಗಿದ್ದ ನೀರಿನ ಮಾದರಿಯನ್ನು ಜಲಜೀವನ್ ಮಿಷನ್ ಯೋಜನೆ ಅಡಿ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ಕುಡಿಯುವ ನೀರಿನಲ್ಲಿ ರಾಸಾಯನಿಕ ಹಾಗೂ ಬ್ಯಾಕ್ಟೀರಿಯಾ ಅಂಶ ಪತ್ತೆಯಾಗಿದೆ. 2023ರಿಂದ 2026ರ ಫೆಬ್ರವರಿವರೆಗೆ ಸಂಗ್ರಹಿಸಿದ್ದ ನೀರಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.
ನೀರು ಕಲುಷಿತಗೊಳ್ಳುತ್ತಿರೋದೇಕೆ?
9.34 ಲಕ್ಷ ಮಾದರಿಯಲ್ಲಿ 53 ಸಾವಿರ ಮಾದರಿಗಳಲ್ಲಿ ರಾಸಾಯನಿಕ ಅಂಶಗಳು ಪತ್ತೆಯಾಗಿದ್ದರೆ, 7,696 ನೀರಿನ ಸ್ಯಾಂಪಲ್ಗಳಲ್ಲಿ ಬ್ಯಾಕ್ಟೀರಿಯಾ ಅಂಶಗಳು ಕಂಡುಬಂದಿವೆ. ಕೊಳಚೆ ನೀರು ಸೋರಿಕೆ, ಕೈಗಾರಿಕಾ ತ್ಯಾಜ್ಯ ಸೇರ್ಪಡೆ, ಟ್ಯಾಂಕರ್ ಗಳಲ್ಲಿ ಫಂಗಸ್ ಉತ್ಪತ್ತಿ ಮುಂತಾದವುಗಳೇ ನೀರಿನ ಗುಣಮಟ್ಟ ಕೆಡಲು ಪ್ರಮುಖ ಕಾರಣವಾಗುತ್ತಿದ್ದು, ನೈಸರ್ಗಿಕ ಜಲಸಂಪನ್ಮೂಲಗಳ ಸಂರಕ್ಷಣೆಗೆ ಪರಿಸರವಾದಿಗಳಿಂದ ಆಗ್ರಹ ಕೇಳಿಬಂದಿದೆ. ಈ ಬಗ್ಗೆ ಜಲತಜ್ಞ ಟಿ.ವಿ ರಾಮಚಂದ್ರ ಕಳವಳ ವ್ಯಕ್ತಪಡಿಸಿದ್ದು, ನಗರೀಕರಣ ಹಿನ್ನಲೆ ವಾತಾವರಣ ಕಾಂಕ್ರಿಟ್ ನಾಡಾಗಿ ಪರಿವರ್ತನೆ ಆಗುತ್ತಿದೆ. ನೈಸರ್ಗಿಕ ಜಲಸಂಪನ್ಮೂಲಗಳು ಕಲುಷಿತ ಆಗುತ್ತಿರುವುದೇ ಇದಕ್ಕೆ ಕಾರಣ. ಜಲಜೀವನ್ ಮಿಷನ್ ಅಡಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ನೀರು ಪೂರೈಕೆ ಆಗುತ್ತಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನ 142 ಕೆರೆಗಳ ನೀರು ಸಂಪೂರ್ಣ ಕಲುಷಿತಗೊಂಡಿದೆ ಎಂಬ ವರದಿ ಬಂದಾಗ, ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರಿನ ಕೆರೆ ನೀರನ್ನು ಕುಡಿಯಲು ಹಾಗೂ ಸ್ನಾನಕ್ಕೆ ಬಳಸಿ ಎಂದು ಸರ್ಕಾರ ಹೇಳಿಲ್ಲ, ಈ ಕೆರೆಗಳು ಇರುವುದು ಅಂತರ್ಜಲ ಮಟ್ಟ ಹೆಚ್ಚಿಸಲು ಎಂದು ಅತ್ಯಂತ ಹಗುರವಾದ ಹೇಳಿಕೆ ನೀಡಿದ್ದರು. ಕೆರೆಯ ನೀರನ್ನು ನಾವು ನೇರವಾಗಿ ಲೋಟದಲ್ಲಿ ಕುಡಿಯುತ್ತಿಲ್ಲದಿರಬಹುದು. ಆದರೆ, ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿರುವ ಅದೇ ಕಲುಷಿತ ಕೆರೆಯ ನೀರು ಅಂತರ್ಜಲವನ್ನು ಸೇರಿ, ನಮ್ಮ ರೈತರ ಬೆಳೆಗಳ ಮೂಲಕ ನಿತ್ಯವೂ ನಮ್ಮ ತಟ್ಟೆಯನ್ನು ಸೇರುತ್ತಿದೆ. ನಿಮ್ಮ ಪ್ರಕಾರ ಅಂತರ್ಜಲ ಹೆಚ್ಚಿಸಲು ಬಿಟ್ಟಿರುವ ಆ ಮೋರಿ ಮತ್ತು ಕೈಗಾರಿಕಾ ತ್ಯಾಜ್ಯದ ನೀರು, ಇಂದು ಬೆಂಗಳೂರಿಗರ ಕಿಡ್ನಿ, ಮಿದುಳುಗಳನ್ನು ಹಾಳು ಮಾಡುತ್ತಿದೆ. ಸಮಸ್ಯೆಯ ಮೂಲವನ್ನು ತಡೆಯುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.
ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ರಿಲೀಸ್ ಆದ ಬಳಿಕ ಸೀಕ್ವೆಲ್ ಬರಬೇಕಿದೆ. ಆದರೆ, ಚಿತ್ರಕ್ಕೆ ಸಾಕಷ್ಟು ಅಡೆತಡೆಗಳು ಎದುರಾದವು. ಈ ಸಿನಿಮಾದಿಂದ ದೀಪಿಕಾ ಪಡುಕೋಣೆ ಹೊರ ಹೋಗಿದ್ದು, ಚಿತ್ರಕ್ಕೆ ದೊಡ್ಡ ಹಿನ್ನಡೆ ಆಯಿತು. ಸಿನಿಮಾ ನಿಲ್ಲುತ್ತೆ ಎಂದು ಕೂಡ ಹೇಳಲಾಗಿತ್ತು. ಹೀಗಿರುವಾಗಲೇ ಚಿತ್ರದ ಸೀಕ್ವೆಲ್ ಬಗ್ಗೆ ಅಪ್ಡೇಟ್ ಸಿಕ್ಕಿದೆ. ಈ ಸಿನಿಮಾ ಅಧಿಕೃತವಾಗಿ ಆರಂಭ ಆಗಿದೆ. ಇದು ಅಭಿಮಾನಿಗಳ ಖುಷಿ ಕೊಟ್ಟಿದೆ.
‘ಕಲ್ಕಿ 2898 ಎಡಿ’ ಸಿನಿಮಾಗೆ ನಾಗ್ ಅಶ್ವಿನ್ ನಿರ್ದೇಶನ ಇದೆ. ಈ ಸಿನಿಮಾ ದೊಡ್ಡ ಬಜೆಟ್ನಲ್ಲಿ ರೆಡಿ ಆಯಿತು. ಈ ಸಿನಿಮಾ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿತು. ಈ ಚಿತ್ರದ ಕಥೆ ಅರ್ಧಕ್ಕೆ ನಿಂತಿದ್ದು, ಸೀಕ್ವೆಲ್ ಬರಬೇಕಿದೆ. ಮೊದಲ ಭಾಗದಲ್ಲಿ ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ದೀಪಿಕಾ ಸೇರಿದಂತೆ ಅನೇಕರು ನಟಿಸಿದ್ದರು. ಸೀಕ್ವೆಲ್ನಲ್ಲಿ ದೀಪಿಕಾ ಜಾಗವನ್ನು ಸಾಯಿ ಪಲ್ಲವಿ ತುಂಬಿದ್ದಾರೆ ಎನ್ನಲಾಗಿದೆ.
ಈ ಚಿತ್ರದ ಶೂಟ್ ಯಾವಾಗ ಆರಂಭ ಆಗುತ್ತದೆ ಎಂಬ ಕುತೂಹಲ ಮೂಡಿತ್ತು. ಅದಕ್ಕೆ ಅಮಿತಾಭ್ ಬಚ್ಚನ್ ಕಡೆಯಿಂದ ಉತ್ತರ ಸಿಕ್ಕಿದೆ. ಕಮಲ್ ಹಾಸನ್ ಅವರನ್ನು ಭೇಟಿ ಮಾಡಿರುವ ಫೋಟೋನ ಅಮಿತಾಭ್ ಬಚ್ಚನ್ ತಮ್ಮ ಬ್ಲಾಗ್ ಅಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್ಗೆ ಶೂಟಿಂಗ್ ಶುರುವಾಗಿದೆ ಎಂಬುದನ್ನು ಖಚಿತಪಡಿಸಿದ್ದಾರೆ.
ಪ್ರತಿ ಭಾನುವಾರ ಅಮಿತಾಭ್ ಬಚ್ಚನ್ ಅವರು ಮನೆಯ ಬಳಿ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಆದರೆ, ಈ ಬಾರಿ ಅದು ಸಾಧ್ಯವಾಗಿಲ್ಲ. ಇದಕ್ಕೆ ಕಾರಣವನ್ನು ವಿವರಿಸಿದ್ದಾರೆ. ಶೂಟ್ ಕಾರಣಕ್ಕೆ ಅವರು ಹೈದರಾಬಾದ್ ಅಲ್ಲಿ ಇದ್ದಾರೆ. ಹೀಗಾಗಿ, ಅಭಿಮಾನಿಗಳ ಭೇಟಿ ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ. ಅಮಿತಾಭ್ ಬಚ್ಚನ್ ಅವರಿಗೆ ಈ ವಯಸ್ಸಾಗಿದೆ. ಆದಾಗ್ಯೂ ಅಪರೂಪಕ್ಕೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಅವರು ಅಶ್ವತ್ಥಾಮ ಆಗಿ ನಟಿಸುತ್ತಿದ್ದಾರೆ.
ನವದೆಹಲಿ, ಫೆಬ್ರುವರಿ 24: ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ನಿನ್ನೆ ಸೋಮವಾರ (ಫೆ. 23) ಭಾರತ್ ಟ್ಯಾಕ್ಸಿ (Bhara Taxi) ಸೇವೆಗೆ ಚಾಲನೆ ನೀಡಿದ್ದಾರೆ. ಅಮೂಲ್ ನೇತೃತ್ವದಲ್ಲಿ ವಿವಿಧ ಸಹಕಾರಿ ಸಂಸ್ಥೆಗಳು ಸೇರಿ ಕಟ್ಟಿರುವ ಕಂಪನಿ ಇದು. ಅಮೂಲ್ನ ರೀತಿಯಲ್ಲೇ ಭಾರತ್ ಟ್ಯಾಕ್ಸಿಯ ಬ್ಯುಸಿನೆಸ್ ಮಾಡಲ್ ಇದೆ. ಅಮುಲ್ನಲ್ಲಿ ಹಾಲು ಉತ್ಪಾದಕರೇ ಮಾಲೀಕರಾಗಿದ್ದಾರೆ. ಭಾರತ್ ಟ್ಯಾಕ್ಸಿಯಲ್ಲಿ ಚಾಲಕರೇ ಮಾಲೀಕರಾಗಿರುತ್ತಾರೆ.
ಏನಿದು ಭಾರತ್ ಟ್ಯಾಕ್ಸಿ?
ಓಲಾ, ಊಬರ್, ರಾಪಿಡೋ, ನಮ್ಮ ಯಾತ್ರಿ ರೀತಿಯಲ್ಲಿ ಭಾರತ್ ಟ್ಯಾಕ್ಸಿ ಒಂದು ರೇಡ್ ಹೈಲಿಂಗ್ ಪ್ಲಾಟ್ಫಾರ್ಮ್ ಆಗಿದೆ. ಓಲಾ, ಊಬರ್, ರಾಪಿಡೋ ಕಂಪನಿಗಳು ಡ್ರೈವರ್ಗಳಿಂದ ಪ್ರತೀ ರೇಡ್ನಲ್ಲಿ ಶೇ. 30ರಷ್ಟು ಕಮಿಷನ್ ಪಡೆಯುತ್ತವೆ. ಆದರೆ, ಭಾರತ್ ಟ್ಯಾಕ್ಸಿಯಲ್ಲಿ ಈ ಕಮಿಷನ್ ಮಾಡಲ್ ಇರೋದಿಲ್ಲ. ರೇಡ್ನಲ್ಲಿ ಬರುವ ಹಣವೆಲ್ಲವೂ ಚಾಲಕರಿಗೆಯೇ ಸಂದಾಯವಾಗುತ್ತದೆ.
ಹಾಗೆಯೇ, ಊಬರ್, ಓಲಾ, ರಾಪಿಡೋದಲ್ಲಿ ಚಾಲಕರಿಗೆ ಕನಿಷ್ಠ ದರ (ಮಿನಿಮಮ್ ಬೇಸ್ ರೇಟ್) ನಿಗದಿಯಾಗಿರುವುದಿಲ್ಲ. ಅಂದರೆ, ಒಂದು ರೇಡ್ನಲ್ಲಿ ಕನಿಷ್ಠ ಖಾತ್ರಿ ದರ ಎಂಬುದು ಡ್ರೈವರ್ಗೆ ಖಾತ್ರಿ ಇರುವುದಿಲ್ಲ. ಆದರೆ, ಭಾರತ್ ಟ್ಯಾಕ್ಸಿಯಲ್ಲಿ ಇಂಥ ಫೀಚರ್ ಅನ್ನು ಅಳವಡಿಸಲಾಗಿದೆ.
ಭಾರತ್ ಟ್ಯಾಕ್ಸಿಗೆ ಆದಾಯ ಹೇಗೆ?
ಭಾರತ್ ಟ್ಯಾಕ್ಸಿ ಪ್ಲಾಟ್ಫಾರ್ಮ್ಗೆ ಜೋಡಿತ ಆಗಬಯಸುವ ಚಾಲಕರು 500 ರೂ ಮೌಲ್ಯದ ಷೇರುಗಳನ್ನು ಖರೀದಿಸಬೇಕು. ಇದು ಆದಲ್ಲಿ ಭಾರತ್ ಟ್ಯಾಕ್ಸಿಯಲ್ಲಿ ಚಾಲಕರಿಗೆ ಒಂದು ಸಣ್ಣ ಪಾಲು ಸಿಗುತ್ತದೆ. ಈ ಮೂಲಕ ಅವರು ಸಹ-ಮಾಲೀಕರಾದಂತೆ.
ಭಾರತ್ ಟ್ಯಾಕ್ಸಿ ಸಂಸ್ಥೆಯು ಮುಂದೆ ಲಾಭ ಗಳಿಸುತ್ತಾ ಹೋದಂತೆ, ಲಾಭದಲ್ಲಿ ಸಿಂಹಪಾಲನ್ನು ಚಾಲಕರಿಗೇ ಮರಳಿಸಲಾಗುವುದು. ನೂರು ರೂ ಲಾಭದಲ್ಲಿ 80 ರೂ ಅನ್ನು ಚಾಲಕರಿಗೆ ಕೊಡಲಾಗುತ್ತದೆ. ಉಳಿದ ಶೇ. 20ರಷ್ಟನ್ನು ಪ್ಲಾಟ್ಫಾರ್ಮ್ ಅಭಿವೃದ್ಧಿ ಮತ್ತಿತರ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತದೆ.
ಇಲ್ಲಿ ಲಾಭದಲ್ಲಿ ಚಾಲಕರೆಲ್ಲರಿಗೆ ಸಮಾನವಾಗಿ ಹಂಚಲಾಗುವುದಿಲ್ಲ. ಚಾಲಕರು ಅವರು ಕ್ರಮಿಸಿರುವ ದೂರಕ್ಕೆ ಅನುಗುಣವಾಗಿ ಲಾಭ ಹಂಚಿಕೆ ಆಗುತ್ತದೆ.
ಭಾರತ್ ಟ್ಯಾಕ್ಸಿ ಸದ್ಯ ದೆಹಲಿ ಎನ್ಸಿಆರ್ ಮತ್ತು ರಾಜಕೋಟ್ ಈ ಎರಡು ನಗರಗಳಲ್ಲಿ ಚಾಲನೆಯಲ್ಲಿದೆ. ಮುಂಬರುವ ವರ್ಷಗಳಲ್ಲಿ ಬಹುತೇಕ ಎಲ್ಲಾ ನಗರ ಹಾಗೂ ಪಟ್ಟಣಗಳಲ್ಲಿ ಇದರ ಸೇವೆ ಬರಲಿದೆ. ಕೋಟಿಗೂ ಅಧಿಕ ಚಾಲಕರನ್ನು ಈ ಸೇವೆಗೆ ಜೋಡಿಸಿಕೊಳ್ಳುವ ಗುರಿ ಇದೆ. ಹಾಗೆಯೇ, ಸಹಕಾರ ತತ್ವದಲ್ಲಿ ಆರಂಭವಾಗಿರುವ ಮೊದಲ ಟ್ಯಾಕ್ಸಿ ಕಂಪನಿ ಇದು.
ಮಂಡ್ಯ, ಫೆಬ್ರವರಿ 24: ಜಿಲ್ಲೆಯ ಕೆ.ಆರ್.ಪೇಟೆತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಕಾಲನ್ನು ಸೈಜ್ ಕಲ್ಲಿನಿಂದ ಜಜ್ಜಿ ಹಲ್ಲೆ ಮಾಡಿದ ಘಟನೆ ನಡೆದಿತ್ತು. ಹುಡುಗಿ ವಿಚಾರವಾಗಿಯೇ ಈ ಹಲ್ಲೆ ನಡೆದಿದೆಯೆಂದು ಹೇಳಲಾಗಿದ್ದು, ಗ್ರಾಮದ ಹುಡುಗಿಯೊಬ್ಬಳು ಪ್ರೀತಿಸಿದ ಹುಡುಗನೊಂದಿಗೆ ಮದುವೆಯಾಗಲು ಸಂತ್ರಸ್ತ ಸಹಾಯ ಮಾಡಿದ್ದ ಎಂಬ ಕಾರಣಕ್ಕೆ ಆತನ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ.
ಸೇಡು ತೀರಿಸಿಕೊಂಡ್ರಾ ಯುವತಿಯ ತಂದೆ?
ಬೊಮ್ಮಲಾಪುರ ಗ್ರಾಮದ ಪ್ರಕಾಶ್ ಹಾಗೂ ಆತನ ಬಾಮೈದ ನವೀನ್ ಮೇಲೆ ಗಿರೀಶ್, ಸಂಜು, ಗಣೇಶ್, ಪುಟ್ಟರಾಜು ಹಾಗೂ ನಿಂಗಣ್ಣ ಸೇರಿಕೊಂಡು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಲ್ಲೆ ವೇಳೆ ಆರೋಪಿಗಳು ಪ್ರಕಾಶ್ ಅವರನ್ನು ವಿವಸ್ತ್ರಗೊಳಿಸಿ, ಸೈಜ್ ಗಲ್ಲಿನಿಂದ ಕಾಲು ಜಜ್ಜಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದರು. ಈ ಹಿಂದೆ ಅದೇ ಗ್ರಾಮದ ನಿಂಗಣ್ಣ ಅವರ ಪುತ್ರಿ ನಾಪತ್ತೆಯಾಗಿದ್ದು, ಬಳಿಕ ತಾನು ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಿದ್ದಳು. ಯುವತಿ ಓಡಿಹೋಗಲು ಹಾಗೂ ಲವ್ ಮ್ಯಾರೇಜ್ ಆಗಲು ಪ್ರಕಾಶ್ ಸಹಾಯ ಮಾಡಿದ್ದಾನೆ ಎಂಬ ಅನುಮಾನದಿಂದ ಯುವತಿಯ ತಂದೆ ನಿಂಗಣ್ಣ ಹಾಗೂ ಸಂಜು ಗುಂಪು ಪ್ರಕಾಶ್ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ಕೃತ್ಯವನ್ನೆಸಗಿದ್ದಾರೆ ಎನ್ನಲಾಗಿದೆ.
ಯುವತಿಯ ಮದುವೆಗೆ ಸಹಕರಿಸಿದ ಪ್ರಕಾಶ್ಗೆ ಆಕೆಯ ತಂದೆ ನಿಂಗಣ್ಣ ಮತ್ತು ಸಂಜು ಸೇರಿ ಹಲವರು ಫೋನ್ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಇದರಿಂಗ ಕೋಪಗೊಂಡ ಪ್ರಕಾಶ್, ನವೀನ್ನೊಂದಿಗೆ ಸೇರಿ ಫೆಬ್ರವರಿ 21ರಂದು ಸಂಜು ಮಧ್ಯರಾತ್ರಿ ಸಂಜು ಮನೆಗೆ ನುಗ್ಗಿ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಈ ಬಗ್ಗೆ ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಕಾರಣಕ್ಕೆ ಫೆಬ್ರವರಿ 22ರಂದು ಸಂಜು ಮತ್ತು ಗಿರೀಶ್ ತಂಡ ಪ್ರಕಾಶ್ ಹಾಗೂ ನವೀನ್ ಮೇಲೆ ಪ್ರತೀಕಾರದ ದಾಳಿ ನಡೆಸಿದೆ ಎಂದು ಹೇಳಲಾಗಿದೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪ್ರಕರಣದ ಪ್ರಮುಖ ಆರೋಪಿ ಗಿರೀಶ್ ಅವರನ್ನು ಬಂಧಿಸಿದ್ದಾರೆ. ಇತರ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
‘ಜೀ’ (Z) ಸಂಸ್ಥೆಯು ‘ಜೀ ಕಿರುಚಿತ್ರ ಸ್ಪರ್ಧೆ’ (Zee Short Film Contest) ಆಯೋಜಿಸುತ್ತಿದೆ. ದೇಶದಾದ್ಯಂತ ಉದಯೋನ್ಮುಖ ಚಿತ್ರ ನಿರ್ಮಾಣ ಪ್ರತಿಭೆಗಳನ್ನು ಗುರುತಿಸಿ, ಪೋಷಿಸಿ ಮತ್ತು ಅವರನ್ನು ಗೌರವಿಸುವ ಉದ್ದೇಶವನ್ನು ಹೊಂದಿದೆ. ಭಾರತದ ವಿವಿಧ ಪ್ರಾದೇಶಿಕ ಸಿನಿಮಾ ಧ್ವನಿಗಳನ್ನು ಒಂದೇ ರಾಷ್ಟ್ರೀಯ ವೇದಿಕೆಯಲ್ಲಿ ಒಟ್ಟುಗೂಡಿಸುವ ಈ ಸ್ಪರ್ಧೆ, ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಬಹುಭಾಷಾ ಪ್ರತಿಭಾ ಅನ್ವೇಷಣೆಯ ಅತ್ಯಂತ ಮಹತ್ವಾಕಾಂಕ್ಷಿ ಪ್ರಯತ್ನಗಳಲ್ಲಿ ಒಂದಾಗಿದೆ. ಹಿಂದಿ, ಮರಾಠಿ, ಬೆಂಗಾಲಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಏಳು ಪ್ರಮುಖ ಭಾಷೆಗಳಲ್ಲಿ ಈ ಕಿರುಚಿತ್ರ (Short Film) ಸ್ಪರ್ಧೆ ನಡೆಯಲಿದ್ದು, ಸಿನಿಮಾ ಪರಂಪರೆ ಹೊಂದಿರುವ ಕಥೆಗಾರರಿಗೆ ರಾಷ್ಟ್ರೀಯ ಮಟ್ಟದ ಅವಕಾಶ ಸಿಗಲಿದೆ.
ಈ ಸ್ಪರ್ಧೆಯ ಪ್ರಮುಖ ಆಕರ್ಷಣೆ ಎಂದರೆ ವಿವಿಧ ಪ್ರಾದೇಶಿಕ ಚಲನಚಿತ್ರ ಕ್ಷೇತ್ರಗಳಲ್ಲಿ ಹೊಸ ದಾರಿಯನ್ನು ತೋರಿಸಿದ ಗಣ್ಯ ನಿರ್ದೇಶಕರು ತೀರ್ಪುಗಾರರಾಗಿ ಇರಲಿದ್ದಾರೆ. ‘ಗ್ಯಾಂಗ್ಸ್ ಆಫ್ ವಾಸೇಪುರ್’ ಚಿತ್ರ ಮೂಲಕ ಆಧುನಿಕ ಹಿಂದಿ ಸಿನಿಮಾವನ್ನು ರೂಪಿಸಿದ ಅನುರಾಗ್ ಕಶ್ಯಪ್, ‘ನಟರಂಗ್’ ಚಿತ್ರದಿಂದ ಹೆಸರುವಾಸಿಯಾದ ಮರಾಠಿಯ ರವಿ ಜಾಧವ್, ‘ಆಟೋಗ್ರಾಫ್’ ಮತ್ತು ‘ಜಾತಿಶ್ವರ್’ ಚಿತ್ರದ ಮೂಲಕ ಪ್ರಶಂಸಿಸಲ್ಪಟ್ಟ ಬೆಂಗಾಲಿಯ ಸೃಜಿತ್ ಮುಖರ್ಜಿ, ‘ಕಲ್ಕಿ 2898 AD’ ನಿರ್ದೇಶಕ ನಾಗ್ ಅಶ್ವಿನ್, ಸಾಮಾಜಿಕವಾಗಿ ಬೇರೂರಿರುವ ಪ್ರಭಾವಶಾಲಿ ನಾಟಕಗಳಿಗೆ ಹೆಸರಾದ ತಮಿಳಿನ ಸಮುದ್ರಕಣಿ, ‘ಜಲ್ಲಿಕಟ್ಟು’ ಚಿತ್ರಗಳ ಮೂಲಕ ಅಂತರಾಷ್ಟ್ರೀಯ ಮನ್ನಣೆ ಪಡೆದ ಮಲಯಾಳಂನ ಲಿಜೋ ಜೋಸ್ ಪೆಲ್ಲಿಸ್ಸೇರಿ ಮತ್ತು ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಸಪ್ತ ಸಾಗರದಾಚೆ ಎಲ್ಲೋ’ ಮೂಲಕ ಭಾವನಾತ್ಮಕ ಕಥೆಗೆ ಹೆಸರುವಾಸಿಯಾದ ಕನ್ನಡದ ಹೇಮಂತ್ ರಾವ್ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ.
ಮೊದಲ ಬಾರಿಗೆ ಇಂತಹ ದಿಗ್ಗಜ ನಿರ್ದೇಶಕರು ಉದಯೋನ್ಮುಖ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಲು ಒಂದೇ ವೇದಿಕೆಯಡಿ ಒಂದಾಗಿದ್ದಾರೆ. ಈ ಸ್ಪರ್ಧೆಯು ಭವಿಷ್ಯದ ಪ್ರತಿಭೆಗಳನ್ನು ಬೆಳೆಸುವ ‘ಜೀ’ ಸಂಸ್ಥೆಯ ಉದ್ದೇಶವನ್ನು ಸೂಚಿಸುತ್ತದೆ. ಈ ಸ್ಪರ್ಧೆಯ ಮೂಲಕ ಯುವ ಮತ್ತು ಉತ್ಸಾಹಿ ಚಲನಚಿತ್ರ ನಿರ್ಮಾಪಕರಿಗೆ ತಮ್ಮ ಕರಕುಶಲತೆಯನ್ನು ಪ್ರದರ್ಶಿಸಲು ಅವಕಾಶ ಸಿಗಲಿದೆ. ಭಾಗವಹಿಸುವವರು ವೃತ್ತಿಪರ ಚಲನಚಿತ್ರ ಸಮುದಾಯದಲ್ಲಿ ಮಾನ್ಯತೆ, ನಗದು ಬಹುಮಾನಗಳು ಮತ್ತು ‘ಜೀ’ನಲ್ಲಿ ಕೆಲಸ ಮಾಡುವ ಅವಕಾಶಗಳನ್ನು ಪಡೆಯಲಿದ್ದಾರೆ.
ಈ ಬಗ್ಗೆ ಮಾತನಾಡಿದ ಜೀ(ZEE) ಮತ್ತು ಜೀ5(ZEE5) ಚೀಫ್ ಮಾರ್ಕೆಟಿಂಗ್ ಆಫೀಸರ್, ಕಾರ್ತಿಕ್ ಮಹದೇವ್ ‘ಭಾರತವು ವಿಶ್ವದ ಅತ್ಯಂತ ವೈವಿಧ್ಯಮಯ ಕಥೆ ಹೇಳುವ ಸಂಸ್ಕೃತಿಗಳಿಗೆ ನೆಲೆಯಾಗಿದೆ. ಜೀ ಕಿರುಚಿತ್ರ ಸ್ಪರ್ಧೆಯ ಮೂಲಕ ನಾವು ಈ ಪ್ರತಿಭೆಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಅವಕಾಶಗಳನ್ನು ಒದಗಿಸುತ್ತಿದ್ದೇವೆ. ಇದು ಕೇವಲ ಸ್ಪರ್ಧೆಯಲ್ಲ, ಬದಲಿಗೆ ಭಾರತೀಯ ಸಿನಿಮಾದ ಭವಿಷ್ಯವನ್ನು ರೂಪಿಸುವ ಮುಂದಿನ ತಲೆಮಾರಿನ ಕಥೆಗಾರರನ್ನು ಬೆಳೆಸುವ ಒಂದು ಕಾರ್ಯತಂತ್ರದ ಹೆಜ್ಜೆಯಾಗಿದೆ’ ಎಂದರು.
ಈ ಸ್ಪರ್ಧೆಯ ಬಗ್ಗೆ ಮಾತನಾಡಿದ ಅನುರಾಗ್ ಕಶ್ಯಪ್ ‘ಒಂದು ಕಿರುಚಿತ್ರವು ನನಗೆ ನನ್ನ ಮೊದಲ ದೊಡ್ಡ ಸಿನಿಮಾದ ಅವಕಾಶವನ್ನು ತಂದುಕೊಟ್ಟಿತು. ಫಿಲ್ಮ್ ಮೇಕರ್ ಆಗುವ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಲು ಇದು ಒಂದು ಸುವರ್ಣ ಅವಕಾಶ’ ಎಂದಿದ್ದಾರೆ. ಸೃಜಿತ್ ಮುಖರ್ಜಿ ಮಾತನಾಡಿ, ‘ಚಲನಚಿತ್ರ ನಿರ್ಮಾಣವು ಯಾವಾಗಲೂ ಹೃದಯಕ್ಕೆ ಸಂಬಂಧಿಸಿದ ವಿಷಯ. ನಿಮ್ಮ ಗುರಿಯನ್ನು ಅನುಸರಿಸಿ, ಅದು ಅಡೆತಡೆಗಳ ನಡುವೆಯೂ ನಿಮಗೆ ದಾರಿಯನ್ನು ತೋರಿಸುತ್ತದೆ’ ಎಂದರು.
ಲಿಜೋ ಜೋಸ್ ಪೆಲ್ಲಿಸೇರಿ ಮಾತನಾಡಿ ‘ನೀವು ಒಬ್ಬ ಫಿಲ್ಮ್ ಮೇಕರ್ ಎಂಬ ಆತ್ಮವಿಶ್ವಾಸ ನಿಮ್ಮಲ್ಲಿದ್ದರೆ ಬನ್ನಿ, ದೊಡ್ಡ ಮಟ್ಟಕ್ಕೆ ಬೆಳೆಯಲು ಒಂದು ಕಿರುಚಿತ್ರ ಮಾಡಿ’ ಎಂದರು. ನಾಗ್ ಅಶ್ವಿನ್ ಮಾತನಾಡಿ, ‘ಚಲನಚಿತ್ರೋದ್ಯಮವು ಕೇವಲ ಕನಸುಗಳ ಲೋಕವಲ್ಲ , ಅದು ಕಥೆಗಳ ಲೋಕ. ನಿಮ್ಮ ಪ್ರತಿಭೆಯನ್ನು ಜಗತ್ತಿಗೆ ಪ್ರದರ್ಶಿಸಿ’ ಎಂದರು. ಹೇಮಂತ್ ರಾವ್ ಮಾತನಾಡಿ ‘ಸಿನಿಮಾಪ್ರೇಮ ಎಂದರೆ ಎಂದಿಗೂ ಗುಣವಾಗದ ಕಾಯಿಲೆ. ನಿಮ್ಮೊಳಗೆ ಕಾಡುತ್ತಿರುವ ಕಥೆ ಇದೆಯೇ? ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಝೀ ಕಿರುಚಿತ್ರ ಸ್ಪರ್ಧೆಗೆ ನೋಂದಾಯಿಸಿ ಮತ್ತು ನಿಮ್ಮ ಕಿರುಚಿತ್ರವನ್ನು ಸಲ್ಲಿಸಿ’ ಎಂದರು.
ರವಿ ಜಾಧವ್ ಮಾತನಾಡಿ ‘ಸಿನಿಮಾಗೆ ಪ್ರತಿಭೆ, ಉತ್ಸಾಹ ಮತ್ತು ದೃಷ್ಟಿ ಮುಖ್ಯ ಅವು ನಿಮ್ಮಲ್ಲಿದ್ದರೆ ಈ ಸ್ಪರ್ಧೆ ನಿಮಗೆ ಸರಿಯಾದ ಆಯ್ಕೆ’ ಎಂದರು. ಸಮುದ್ರಕಣಿ ಮಾತನಾಡಿ ‘ನಿಮ್ಮ ಕಿರುಚಿತ್ರವನ್ನು ಕಳುಹಿಸಿ ಮತ್ತು ದೇಶದ ಪ್ರಸಿದ್ಧ ನಿರ್ದೇಶಕರ ಮುಂದೆ ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇರುವ ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಿ’ ಎಂದರು.
ರಾಂಚಿ, ಫೆಬ್ರವರಿ 24: ಜಾರ್ಖಂಡ್ನ ರಾಂಚಿಯಲ್ಲಿ ಏರ್ ಆಂಬ್ಯುಲೆನ್ಸ್(Air Ambulance) ಅಪಘಾತಕ್ಕೀಡಾಗಿ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಂದು ಜೀವವನ್ನು ಉಳಿಸಲು ಕುಟುಂಬ ಈ ಆಂಬ್ಯುಲೆನ್ಸ್ಗೆ 7 ಲಕ್ಷ ರೂ. ಪಾವತಿ ಮಾಡಿತ್ತು. ಆದರೆ ಅಪಘಾತದಲ್ಲಿ ಏಳು ಜನರ ಪ್ರಾಣ ಹೋಗಿದೆ. ಅಷ್ಟೇ ಅಲ್ಲದೆ ದೆಹಲಿಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಲು ಲಕ್ಷಗಟ್ಟಲೆ ಸಾಲವನ್ನೂ ಕೂಡ ಮಾಡಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ರೆಡ್ಬರ್ಡ್ ಏರ್ವೇಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುವ ಬೀಚ್ಕ್ರಾಫ್ಟ್ ಸಿ90 ಏರ್ ಆಂಬ್ಯುಲೆನ್ಸ್ ರಾಂಚಿಯಿಂದ ಸಂಜೆ 7.11 ಕ್ಕೆ ಹೊರಟಿತ್ತು. ಸುಮಾರು 20 ನಿಮಿಷಗಳ ನಂತರ ವಾಯು ಸಂಚಾರ ನಿಯಂತ್ರಣದೊಂದಿಗೆ ಸಂಪರ್ಕ ಕಳೆದುಕೊಂಡಿತ್ತು.ಹವಾಮಾನ ವೈಪರೀತ್ಯದಿಂದಾಗಿ ವಿಮಾನವು ಚತ್ರಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಪತನಗೊಂಡಿತ್ತು.
ಹೋಟೆಲ್ ಒಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಂಜಯ್ ಶಾ ಎಂಬುವವರು ದೇಹದ ಶೇ.65ರಷ್ಟು ಭಾಗ ಸುಟ್ಟು ಹೋಗಿತ್ತು.
ದೆಹಲಿಗೆ ಹೊರಟವರಲ್ಲಿ ಸಂಜಯ್ ಕುಮಾರ್, ಪತ್ನಿಅರ್ಚನಾ ದೇವಿ, ಸಂಬಂಧಿ ಧ್ರುವ್ ಕುಮಾರ್, ವೈದ್ಯ ವಿಕಾಸ್ ಕುಮಾರ್ ಗುಪ್ತಾ, ನರ್ಸ್ ಸಚಿನ್ ಕುಮಾರ್ ಮಿಶ್ರಾ ಮತ್ತು ಪೈಲಟ್ಗಳಾದ ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್ ಮತ್ತು ಕ್ಯಾಪ್ಟನ್ ಸವ್ರಜ್ದೀಪ್ ಸಿಂಗ್ ಸೇರಿದ್ದಾರೆ. ಜಾರ್ಖಂಡ್ನ ಲತೇಹಾರ್ ಜಿಲ್ಲೆಯ ಚಂದ್ವಾದಲ್ಲಿ ಸಂಜಯ್ ಹೋಟೆಲ್ ನಡೆಸುತ್ತಿದ್ದರು.
ಕಳೆದ ಸೋಮವಾರ, ಅವರ ಹೋಟೆಲ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡು ಸಂಜಯ್ ಬೆಂಕಿಯಲ್ಲಿ ಸಿಲುಕಿಕೊಂಡಿದ್ದರು.ರಾಂಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಸ್ಥಿತಿ ಸುಧಾರಿಸದಿದ್ದಾಗ, ವೈದ್ಯರು ಅವರನ್ನು ದೆಹಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದರು.
ಸಂಜಯ್ ಅವರ ಈ ಸ್ಥಿತಿಯಿಂದಾಗಿ ರಸ್ತೆ ಮೂಲಕ ಪ್ರಯಾಣಿಸಲು ಸಾಧ್ಯವಾಗುತ್ತಿರಲಿಲ್ಲ, ಆದ್ದರಿಂದ ಅವರ ಕುಟುಂಬವು ಸಂಬಂಧಿಕರನ್ನು ಸಂಪರ್ಕಿಸಿ ಏರ್ ಆಂಬ್ಯುಲೆನ್ಸ್ಗಾಗಿ 7.5 ಲಕ್ಷ ರೂ.ಗಳನ್ನು ಸಾಲವಾಗಿ ಪಡೆದುಕೊಂಡಿತು. ದೆಹಲಿಯಲ್ಲಿ ಅವರ ಚಿಕಿತ್ಸೆಗಾಗಿ ಸ್ವಲ್ಪ ಹಣವನ್ನು ಸಹ ಪಕ್ಕಕ್ಕೆ ಇಡಲಾಗಿತ್ತು. ಸಂಜಯ್ ಅವರ ಅಣ್ಣ ವಿಜಯ್ ಶಾ, ರಾಂಚಿ ವಿಮಾನ ನಿಲ್ದಾಣದಲ್ಲಿ ಅವರನ್ನು ಬೀಳ್ಕೊಡಲು ಹೋಗಿದ್ದರು.
ದಂಪತಿ ಇಬ್ಬರೂ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಅನಾಥವಾಗಿದ್ದಾರೆ. ರಾಂಚಿಯಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯಗಳಿದ್ದರೆ, ಸಂಜಯ್ ಅವರನ್ನು ಎಂದಿಗೂ ವಿಮಾನದಲ್ಲಿ ಕರೆದೊಯ್ಯುವ ಅಗತ್ಯವಿರಲಿಲ್ಲ ಎಂದು ಅವರು ದೂರಿದ್ದಾರೆ.
ಡಾ. ವಿಕಾಸ್ ಕುಮಾರ್ ಗುಪ್ತಾ ಅವರ ತಂದೆ ಬಜರಂಗಿ ಪ್ರಸಾದ್ ಅವರು ತಮ್ಮ ಮಗನನ್ನು ವೈದ್ಯನನ್ನಾಗಿ ಮಾಡಲು ತಮ್ಮ ಎಲ್ಲಾ ಭೂಮಿಯನ್ನು ಮಾರಿ ಡಾ. ಗುಪ್ತಾ ಅವರನ್ನು ರಾಂಚಿಯ ಸದರ್ ಆಸ್ಪತ್ರೆಯಲ್ಲಿ ನೇಮಿಸಲಾಗಿತ್ತು ಎಂದರು.
ಸಾಮಾನ್ಯವಾಗಿ ಸಾಕು ನಾಯಿ(Dog)ಗಳನ್ನು ಮನೆ ಮಾಲೀಕರು ಮನೆಯ ಒಂದು ಸದಸ್ಯನಂತೆ ಕಾಣುತ್ತಾರೆ. ಮನೆಯ ಒಳಗೇ ನಾಯಿಯನ್ನು ಬಿಟ್ಟುಕೊಳ್ಳುತ್ತಾರೆ. ತಮ್ಮ ಜತೆ ಬೆಡ್ರೂಮಿನಲ್ಲೇ ಮಲಗಿಸಿಕೊಳ್ಳುತ್ತಾರೆ. ಹಾಗೆಯೇ ಆ ನಾಯಿಗಳು ಕೂಡ ಮನೆ ಸದಸ್ಯರ ಕೈಕಾಲು, ಮುಖಗಳನ್ನು ನೆಕ್ಕುತ್ತಾ ತಮ್ಮ ಪ್ರೀತಿಯನ್ನು ಸಾಬೀತುಪಡಿಸುತ್ತವೆ. ಆದರೆ ಆ ಪ್ರೀತಿ ಜನರ ಜೀವಕ್ಕೆ ಕುತ್ತು ತರಬಹುದು ಎಂಬುದು ಯಾರಿಗಾದರೂ ತಿಳಿದಿದೆಯೇ?.
ನಾಯಿ ನಿಮ್ಮ ನೆಕ್ಕುವುದರಿಂದ ಅಂಗಾಂಗಗಳನ್ನೇ ನೀವು ಕಳೆದುಕೊಳ್ಳಬಹುದು, ಅಂಗಾಂಗ ವೈಫಲ್ಯ ಉಂಟಾಗಬಹುದು, ಟಿಶ್ಯೂ ಡ್ಯಾಮೇಜ್ ಆಗಬಹುದು, ನಿಮ್ಮ ಜೀವಕ್ಕೇ ಇದು ಕುತ್ತು ತರಬಹುದು. ಆ ಅಪಾಯಕಾರಿ ಸೋಂಕನ್ನು ಸೆಪ್ಸಿಸ್(Sepsis)ಎಂದು ಕರೆಯುತ್ತಾರೆ. ಯುಕೆಯ 52 ವರ್ಷದ ಮಂಜೀತ್ ಸಂಘಾ ಅವರಿಗೂ ಇದೇ ರೀತಿಯ ಅಪಾಯ ಉಂಟಾಗಿದೆ. 2025ರ ಜುಲೈನಲ್ಲಿ ಒಂದು ದಿನ ಎಂದಿನಂತೆ ಅವರು ಕೆಲಸಕ್ಕೆ ಹೋಗಿದ್ದರು, ಆರೋಗ್ಯವಾಗಿಯೇ ಹಿಂದಿರುಗಿದ್ದರು.
ಮರುದಿನವೇ ಅವರ ಸ್ಥಿತಿ ತುಂಬಾ ಹದಗೆಟ್ಟಿತ್ತು ಮೂರ್ಛೆ ಕೂಡಾ ಹೋಗಿದ್ದರು. ಅವರ ಕೈಗಳು ಹಾಗೂ ಪಾದಗಳು ಮಂಜುಗಡ್ಡೆಯಂತೆ ತಣ್ಣಗಾಗಿದ್ದವು. ಅವರ ತುಟಿಗಳು ನೀಲಿ ಬಣ್ಣಕ್ಕೆ ತಿರುಗಿದ್ದವು ಮತ್ತು ಉಸಿರಾಟದ ತೊಂದರೆಯೂ ಎದುರಾಗಿತ್ತು.
ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ವೈದ್ಯರು ಅವರಿಗೆ ಸೆಪ್ಸಿಸ್(Sepsis) ಇದೆ ಎಂದು ಪತ್ತೆ ಹಚ್ಚಿದ್ದರು. ಸೆಪ್ಸಿಸ್ ಅಂದರೆ ರಕ್ತದಲ್ಲಿ ವಿಷಕಾರಕ ಅಂಶ ಸೇರುವುದು ಎಂದರ್ಥ. ಇದು ಸೋಂಕಿಗೆ ತಿರುಗಿ ದೇಹಕ್ಕೆ ಹಾನಿ ಮಾಡಲು ಶುರು ಮಾಡಿತ್ತು. ಈ ಸ್ಥಿತಿ ಎಷ್ಟು ತೀವ್ರವಾಗಿತ್ತೆಂದರೆ ವೈದ್ಯರು ಅವರ ಎರಡೂ ಕಾಲುಗಳನ್ನು ಮೊಣಕಾಲುಗಳ ಕೆಳಗೆ ಮತ್ತು ಎರಡೂ ತೋಳುಗಳನ್ನು ಕತ್ತರಿಸಬೇಕಾಯಿತು.
Manjit
ಸಮಸ್ಯೆ ಶುರುವಾಗಿದ್ದು ಹೇಗೆ?
ಚಿಕಿತ್ಸೆಯ ಸಮಯದಲ್ಲಿ, ಅವರಿಗೆ ಹೃದಯಾಘಾತವೂ ಆಗಿತ್ತು, ಸುಮಾರು ತೊಡಕುಗಳನ್ನು ಎದುರಿಸಬೇಕಾಯಿತು.
ಆಕೆಯ ದೇಹದಲ್ಲಿ ಸಣ್ಣ ಗಾಯವಾಗಿತ್ತು, ಆ ಗಾಯವನ್ನು ನೆಕ್ಕಿದಾಗ ಈ ಸಮಸ್ಯೆ ಶುರುವಾಗಿತ್ತು. ನಾಯಿಯ ಲಾಲಾರಸದಲ್ಲಿ ಕಂಡುಬರುವ
‘ಕ್ಯಾಪ್ಲೋಸೈಟೋಫಗಾ ಕ್ಯಾನಿಮೊರ್ಸಸ್’ ಎಂಬ ಬ್ಯಾಕ್ಟೋರಿಯಾವು ಸಾಮಾನ್ಯವಾಗಿ ನಾಯಿಗಳಿಗೆ ಹಾನಿಕಾರಕವಲ್ಲ, ಆದರೆ ಮಾನವರಲ್ಲಿ ಇದು ಗಂಭೀರ ಸೋಂಕು ಮತ್ತು ಸೆಪ್ಸಿಸ್ಗೆ ಕಾರಣವಾಗಬಹುದು.
ಮತ್ತಷ್ಟು ಓದಿ: ಪ್ರತಿದಿನ ವಾಕಿಂಗ್ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಗೊತ್ತಾ?
ಸೆಪ್ಸಿಸ್ ಎಂದರೇನು?
ಸೆಪ್ಸಿಸ್ ಒಂದು ಜೀವಕ್ಕೆ ಅಪಾಯ ತಂದೊಡ್ಡುವ ಸ್ಥಿತಿಯಾಗಿದ್ದು, ಇದರಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಸೋಂಕಿಗೆ ಅತಿಯಾಗಿ ಪ್ರತಿಕ್ರಿಯಿಸುತ್ತದೆ. ಈ ಪ್ರತಿಕ್ರಿಯೆಯು ದೇಹದಾದ್ಯಂತ ಉರಿಯೂತವನ್ನು ಉಂಟುಮಾಡುತ್ತದೆ ಮತ್ತು ಆರೋಗ್ಯಕರ ಅಂಗಾಂಶ ಮತ್ತು ಅಂಗಗಳನ್ನು ಹಾನಿಗೊಳಿಸುತ್ತದೆ.ರಕ್ತದೊತ್ತಡ ಇದ್ದಕ್ಕಿದ್ದಂತೆ ಕಡಿಮೆಯಾಗುತ್ತದೆ, ಅಂಗಗಳಿಗೆ ಸಾಕಷ್ಟು ಆಮ್ಲಜನಕದ ಪೂರೈಕೆಯನ್ನು ತಡೆಯುತ್ತದೆ ಮತ್ತು ಬಹು-ಅಂಗಾಂಗ ವೈಫಲ್ಯದ ಅಪಾಯವನ್ನು ಹೆಚ್ಚಿಸುತ್ತದೆ.
ಸೆಪ್ಸಿಸ್ ಕಾರಣಗಳು
ಯಾವುದೇ ಸೋಂಕಿನಿಂದ ಸೆಪ್ಸಿಸ್ ಪ್ರಚೋದಿಸಬಹುದು
ಶ್ವಾಸಕೋಶದ ಸೋಂಕು
ಮೂತ್ರನಾಳದ ಸೋಂಕು
ಹೊಟ್ಟೆ ಅಥವಾ ಕರುಳಿನ ಸೋಂಕು
ಚರ್ಮದ ಸೋಂಕು
ಮೆದುಳು ಅಥವಾ ಬೆನ್ನುಹುರಿ ಸೋಂಕು
ಸೆಪ್ಸಿಸ್ ಲಕ್ಷಣಗಳು
ಹೆಚ್ಚಿನ ಜ್ವರ ಅಥವಾ ತುಂಬಾ ಕಡಿಮೆ ದೇಹದ ಉಷ್ಣತೆ
ವೇಗದ ಹೃದಯಬಡಿತ
ಉಸಿರಾಟದ ತೊಂದರೆ
ತುಂಬಾ ಕಡಿಮೆ ಮೂತ್ರ ವಿಸರ್ಜನೆ
ತುಂಬಾ ಆಯಾಸ
ಚರ್ಮದ ಮೇಲೆ ಕೆಂಪು ಅಥವಾ ಕಪ್ಪು ಕಲೆಗಳು
ಕಡಿಮೆ ರಕ್ತದೊತ್ತಡ
ಚಳಿ ಅಥವಾ ನಡುಕ
ತೀವ್ರ ನೋವು ಅಥವಾ ಅಸ್ವಸ್ಥತೆ
ಮುನ್ನೆಚ್ಚರಿಕಾ ಕ್ರಮಗಳು
ಚರ್ಮದ ಮೇಲೆ ಗಾಯ ಆಗಿದ್ದರೆ, ಯಾವುದೇ ಸಾಕು ಪ್ರಾಣಿಯನ್ನು ನೆಕ್ಕಲು ಬಿಡಬೇಡಿ.
ಯಾವುದೇ ಸಣ್ಣ ಗಾಯಗಳಿದ್ದರೂ ಅದನ್ನು ಸ್ವಚ್ಛಗೊಳಿಸಿ ಅದಕ್ಕೆ ಬ್ಯಾಂಡೇಜ್ ಅಥವಾ ಬ್ಯಾಂಡೆಡ್ ಏನಾದರೂ ಹಾಕಿ
ಜ್ವರ, ಶೀತ ಅಥವಾ ಹಠಾತ್ ದೌರ್ಬಲ್ಯವನ್ನು ನಿರ್ಲಕ್ಷಿಸಬೇಡಿ
ಸೆಪ್ಸಿಸ್ನಿಂದ ಏನೇನಾಗಬಹುದು
ಸೆಪ್ಟಿಕ್ ಶಾಕ್-ರಕ್ತದೊತ್ತಡ ಅಪಾಯಕಾರಿ ಮಟ್ಟಕ್ಕೆ ಇಳಿಯುತ್ತದೆ
ತೀವ್ರ ಉಸಿರಾಟ ತೊಂದರೆಯ ಸಿಂಡ್ರೋಮ್- ಶ್ವಾಸಕೋಶದಲ್ಲಿ ದ್ರವ ಸಂಗ್ರಹವಾಗುತ್ತದೆ. ಉಸಿರಾಟವನ್ನು ಕಷ್ಟಕರವಾಗಿಸುತ್ತದೆ.
ಡಿಐಸಿ-ಅಸಹಜ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಅತಿಯಾದ ರಕ್ತಸ್ರಾವ
ಮೂತ್ರಪಿಂಡ ವೈಫಲ್ಯ-ಡಯಾಲಿಸಿಸ್ ಅಗತ್ಯವಿರಬಹುದು
ಸೆಪ್ಸಿಸ್ ನಂತರದ ಸಿಂಡ್ರೋಮ್-ದೀರ್ಘಕಾಲದ ಆಯಾಸ, ದೌರ್ಬಲ್ಯ, ಮಾನಸಿಕ ಒತ್ತಡ ಮತ್ತು ಶಾಶ್ವತ ಅಂಗಾಂಗ ವೈಫಲ್ಯ
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ