110 ರನ್​ಗಳ ಗುರಿ… 94 ರನ್​ಗಳಿಸಿ ಗೆದ್ದ TKR​! – Kannada News | St Kitts and Nevis Patriots vs Trinbago Knight Riders Highlights

ಕೆರಿಬಿಯನ್ ಪ್ರೀಮಿಯರ್ ಲೀಗ್​ನ (CPL 2026) 2ನೇ ಪಂದ್ಯದಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ (TKR) ತಂಡ ಭರ್ಜರಿ ಜಯ ಸಾಧಿಸಿದೆ. ಅದು ಕೂಡ ಕೇವಲ 94 ರನ್​ಗಳಿಸುವ ಮೂಲಕ. ಕಿಂಗ್ಸ್​ಟೌನ್​ನ ಅರ್ನೋಸ್ ವೇಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಮತ್ತು ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ನಾಯಕ ಅಕೀಲ್ ಹೊಸೈನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸಿರಲಿಲ್ಲ. ಟಿಕೆಆರ್​ ಬೌಲರ್​ಗಳ ಮಾರಕ ದಾಳಿ ಮುಂದೆ ರನ್​ಗಳಿಸಲು ಪರದಾಡಿದ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್  20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 109 ರನ್​ಗಳಿಸಲಷ್ಟೇ ಶಕ್ತವಾಯಿತು.

ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡದ ಪರ ಕೆವಿನ್ ವಿಕಾಮ್ (38 ರನ್, 44 ಎಸೆತ) ಏಕಾಂಗಿ ಹೋರಾಟ ನಡೆಸಿದರೆ, ಉಳಿದ ಆಟಗಾರರು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಟ್ರಿನ್‌ಬಾಗೊ ಪರ ಮಾಂತ್ರಿಕ ಬೌಲಿಂಗ್ ಪ್ರದರ್ಶಿಸಿದ ಸುನಿಲ್ ನರೈನ್ ಕೇವಲ 7 ರನ್ ನೀಡಿ 3 ಪ್ರಮುಖ ವಿಕೆಟ್ ಉರುಳಿಸಿದರೆ, ಟೆರೆನ್ಸ್ ಹಿಂಡ್ಸ್ 33 ರನ್‌ಗಳಿಗೆ 3 ವಿಕೆಟ್ ಪಡೆದು ಸಾಥ್ ನೀಡಿದರು.

ಮಳೆ ತಂದ ಮುನ್ನಡೆ, ಟಿಕೆಆರ್​​ಗೆ ಜಯ:

110 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಟ್ರಿನ್‌ಬಾಗೊ ನೈಟ್ ರೈಡರ್ಸ್ ಉತ್ತಮ ಆರಂಭ ಪಡೆಯಿತು. ಮ್ಯಾಥ್ಯೂ ಬ್ರೀಟ್ಝ್​ಕೆ ಅಜೇಯ 35 ರನ್ ಗಳಿಸಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದರು. ಈ ಮೂಲಕ ಟಿಕೆಆರ್​ ತಂಡವು 15 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿದ್ದಾಗ ಪಂದ್ಯಕ್ಕೆ ಭಾರೀ ಮಳೆ ಅಡ್ಡಿಪಡಿಸಿತು.

ಸತತವಾಗಿ ಸುರಿದ ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು. ಅಲ್ಲದೆ ಫಲಿತಾಂಶ ನಿರ್ಧಾರಕ್ಕಾಗಿ ಡಿಎಲ್​ಎಸ್​ ನಿಯಮದ ಮೊರೆ ಹೋಗಲಾಯಿತು. ಈ ವೇಳೆ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡವು ನಿಗದಿತ ಪಾರ್ ಸ್ಕೋರ್‌ಗಿಂತ 19 ರನ್‌ಗಳ ಮುನ್ನಡೆಯಲ್ಲಿದ್ದ ಕಾರಣ ಅಧಿಕೃತವಾಗಿ ವಿಜೇತರೆಂದು ಘೋಷಿಸಲಾಯಿತು.

ಅಂದರೆ 110 ರನ್​ಗಳ ಗುರಿ ಪಡೆದಿದ್ದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡವು ಪಂದ್ಯ ಸ್ಥಗಿತಗೊಂಡಾಗ 94 ರನ್​ಗಳಿಸಿದ್ದರೂ ಡಿಎಲ್​ಎಸ್ ನಿಯಮದ ಪ್ರಕಾರ ವಿಜಯಿಯಾಗಿ ಹೊರಹೊಮ್ಮಿದರು. ಈ ಮೂಲಕ ಟ್ರಿನ್‌ಬಾಗೊ ನೈಟ್ ರೈಡರ್ಸ್ ನೈಟ್ ರೈಡರ್ಸ್ ಕೆರಿಬಿಯನ್ ಪ್ರೀಮಿಯರ್ ಲೀಗ್​ನ 14ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ.

ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಪ್ಲೇಯಿಂಗ್ 11: ಜಾನ್ಸನ್ ಚಾರ್ಲ್ಸ್ , ಆಂಡ್ರೆ ಫ್ಲೆಚರ್ (ವಿಕೆಟ್ ಕೀಪರ್ ), ಕೈಲ್ ಮೇಯರ್ಸ್ , ಅಲಿಕ್ ಅಥನಾಝ್ , ಜೇಸನ್ ಹೋಲ್ಡರ್ (ನಾಯಕ) , ಕೆವಿನ್ ವಿಕ್ಹ್ಯಾಮ್ , ನವೀನ್ ಬಿದೈಸಿ , ಆಶ್ಮೀದ್ ನೆಡ್ , ಓಬೆಡ್ ಮೆಕಾಯ್ , ಸೌರಭ್ ನೇತ್ರವಲ್ಕರ್ , ವಕಾರ್ ಸಲಾಂಖೈಲ್.

ಇದನ್ನೂ ಓದಿ: ಭಾರತ ಟೆಸ್ಟ್ ತಂಡದ ಐವರು ಆಟಗಾರರು ಗಾಯಾಳು!

ಟ್ರಿನ್‌ಬಾಗೊ ನೈಟ್ ರೈಡರ್ಸ್ ಪ್ಲೇಯಿಂಗ್ 11: ಅಲೆಕ್ಸ್ ಹೇಲ್ಸ್ , ಕಾಲಿನ್ ಮನ್ರೋ , ಮ್ಯಾಥ್ಯೂ ಟ್ರಂಪ್ , ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್), ಮ್ಯಾಥ್ಯೂ ಬ್ರೀಟ್ಝ್​​ಕೆ, ಟೆರೆನ್ಸ್ ಹಿಂದ್ಸ್ , ಅಕೀಲ್ ಹೊಸೈನ್ (ನಾಯಕ) , ಸುನಿಲ್ ನರೈನ್ , ಡೊಮಿನಿಕ್ ಡ್ರೇಕ್ಸ್ , ಜೈದ್ ಗೂಲಿ , ಡೆಕ್ಸ್ಟರ್ ಸ್ವೀನ್.

Source link

‘ನನ್ನ ಕನಸನ್ನು ಹೆಗಲ ಮೇಲೆ ಹೊತ್ತುಕೊಂಡ ಯಶ್: ಗೀತು ಮೋಹನ್​​ದಾಸ್ ಭಾವುಕ – Kannada News | Geethu Mohandas emotional speech at Toxic movie event

ನಿನ್ನೆ ನಡೆದ ‘ಟಾಕ್ಸಿಕ್’ (Toxic) ಸಿನಿಮಾ ಟ್ರೈಲರ್​​ನಲ್ಲಿ ನಿರ್ದೇಶಕಿ ಗೀತು ಮೋಹನ್​​ದಾಸ್ ಮಾತುಗಳು ಗಮನ ಸೆಳೆದವು. ನಿರ್ದೇಶಕಿಯೊಬ್ಬರು ಇಷ್ಟು ದೊಡ್ಡ ಕಮರ್ಶಿಯಲ್ ಸಿನಿಮಾ ಮಾಡಿರುವುದು ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲೇನೋ. ಗೀತೂ ಮೋಹನ್​​ದಾಸ್ ನಿನ್ನೆಯ ಕಾರ್ಯಕ್ರಮದಲ್ಲಿ ಸಿನಿಮಾ ಬಗ್ಗೆ ಸಾಕಷ್ಟು ಮಾತನಾಡಿದರು. ಎಲ್ಲ ಕಲಾವಿದರ ಬಗ್ಗೆಯೂ ಮಾತನಾಡಿದರು. ಆದರೆ ಯಶ್ ಬಗ್ಗೆ ಮಾತನಾಡುವಾಗ ಮಾತ್ರ ತುಸು ಭಾವುಕರಾದರು. ಕನ್ನಡದಲ್ಲಿ ಕೆಲ ಸಾಲುಗಳನ್ನು ಮಾತನಾಡಿದ ಗೀತೂ ಮೋಹನ್​​ದಾಸ್, ‘ನನ್ನ ಕನಸುಗಳನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆದವರು’ ಎಂದರು. ಗೀತೂ ಮೋಹನ್​​ದಾಸ್ ಹೇಳಿದ್ದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Onam 2026: ಓಣಂ ಹಬ್ಬದ ಹಿನ್ನೆಲೆ ಕೇರಳಕ್ಕೆ ತೆರಳುವ ಪ್ರಯಾಣಿಕರಿಗಾಗಿ ಕೆಎಸ್‌ಆರ್‌ಟಿಸಿಯಿಂದ 90 ವಿಶೇಷ ಬಸ್‌ಗಳ ವ್ಯವಸ್ಥೆ! – Kannada News | Onam Special: KSRTC to Run 90 Extra Buses from Bengaluru to Kerala

ಬೆಂಗಳೂರು, ಆಗಸ್ಟ್ 09: ಮಲಯಾಳಿ ಬಾಂಧವರ ಪ್ರಮುಖ ಹಬ್ಬವಾದ ‘ಓಣಂ’ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕೇರಳದ ವಿವಿಧ ಭಾಗಗಳಿಗೆ ತೆರಳುವ ಸಾರ್ವಜನಿಕರಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಭರ್ಜರಿ ಕೊಡುಗೆ ನೀಡಿದೆ. ಹಬ್ಬದ ದಿನಗಳಲ್ಲಿ ಉಂಟಾಗುವ ಭಾರಿ ಜನದಟ್ಟಣೆಯನ್ನು ನಿಯಂತ್ರಿಸಲು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಕೇರಳದ ಪ್ರಮುಖ ನಗರಗಳಿಗೆ ಹೆಚ್ಚುವರಿಯಾಗಿ 90 ವಿಶೇಷ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲು ಕೆಎಸ್‌ಆರ್‌ಟಿಸಿ ತೀರ್ಮಾನಿಸಿದೆ.

ಕೇರಳದ ಪ್ರಮುಖ ನಗರಗಳಿಗೆ ವಿಶೇಷ ಸಾರಿಗೆ ಸಂಪರ್ಕ

ಹಬ್ಬದ ಪ್ರಯುಕ್ತ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್), ಸ್ಯಾಟಲೈಟ್ ಬಸ್ ನಿಲ್ದಾಣ (ಮೈಸೂರು ರಸ್ತೆ) ಮತ್ತು ಶಾಂತಿನಗರ ಬಸ್ ನಿಲ್ದಾಣಗಳಿಂದ ಕೇರಳದ ಕಣ್ಣೂರು, ಕೊಚ್ಚಿನ್, ಎರ್ನಾಕುಲಂ, ಪಾಲಕ್ಕಾಡ್, ತ್ರಿಶೂರ್ ಹಾಗೂ ತಿರುವನಂತಪುರಂ ಸೇರಿದಂತೆ ಹಲವು ಪ್ರಮುಖ ನಗರಗಳಿಗೆ ಈ ವಿಶೇಷ ಬಸ್‌ಗಳು ಸಂಚರಿಸಲಿವೆ. ಐಷಾರಾಮಿ ಮಲ್ಟಿ-ಆಕ್ಸಲ್ ವೋಲ್ವೋ, ಇವಿ ಪವರ್ ಪ್ಲಸ್, ಸ್ಲೀಪರ್ ಹಾಗೂ ರಾಜಹಂಸ ಬಸ್‌ಗಳನ್ನು ಈ ವಿಶೇಷ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

ಮುಂಗಡ ಬುಕ್ಕಿಂಗ್‌ಗೆ ಅವಕಾಶ; ವೆಬ್‌ಸೈಟ್ ಪರಿಶೀಲಿಸಲು ಕೋರಿಕೆ

ಹಬ್ಬದ ಕೊನೆಯ ಕ್ಷಣದ ಗಡಿಬಿಡಿಯನ್ನು ತಪ್ಪಿಸಲು ಪ್ರಯಾಣಿಕರು ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್ ಮೂಲಕ ಮುಂಗಡವಾಗಿ ಆನ್‌ಲೈನ್ ಟಿಕೆಟ್ ಕಾಯ್ದಿರಿಸಲು ಸಾರಿಗೆ ಸಂಸ್ಥೆ ಅವಕಾಶ ಕಲ್ಪಿಸಿದೆ. ನಿಯಮಿತ ಬಸ್‌ಗಳ ಟಿಕೆಟ್‌ಗಳು ಈಗಾಗಲೇ ಭರ್ತಿಯಾಗುತ್ತಿರುವುದರಿಂದ, ಹೆಚ್ಚುವರಿ ಬಸ್‌ಗಳ ವೇಳಾಪಟ್ಟಿ ಮತ್ತು ಮಾರ್ಗಗಳ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ವಿನಂತಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ashada Amavasya 2026: ಆಷಾಢ ಅಮಾವಾಸ್ಯೆ; ದಿನಾಂಕ, ತಿಥಿ ಸಮಯ, ಪಿತೃ ತರ್ಪಣ ವಿಧಿ ಮತ್ತು ಪೂಜಾ ಮಹತ್ವ – Kannada News | Ashada Amavasya 2026: Date, Tithi Timings, Pitru Tarpan Rituals and Significance

ದಕ್ಷಿಣ ಭಾರತೀಯ ಸಂಪ್ರದಾಯದಲ್ಲಿ ಆಷಾಢ ಅಮಾವಾಸ್ಯೆಗೆ ಅತ್ಯಂತ ವಿಶೇಷ ಆಧ್ಯಾತ್ಮಿಕ ಮಹತ್ವವಿದೆ. ಈ ಪವಿತ್ರ ದಿನವನ್ನು ಹಿರಿಯರನ್ನು ಹಾಗೂ ಪೂರ್ವಜರನ್ನು (ಪಿತೃಗಳನ್ನು) ಸ್ಮರಿಸಿ, ಅವರಿಗೆ ತರ್ಪಣ ಮತ್ತು ನೈವೇದ್ಯವನ್ನು ಅರ್ಪಿಸಲು ಅತ್ಯಂತ ಶ್ರೇಷ್ಠ ದಿನವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ದಕ್ಷಿಣಾಯನ ಅವಧಿಯಲ್ಲಿ ಬರುವ ಈ ಅಮಾವಾಸ್ಯೆಯಂದು ಪಿತೃ ಕಾರ್ಯಗಳನ್ನು ಮಾಡುವುದರಿಂದ ಕುಟುಂಬದಲ್ಲಿ ಶಾಂತಿ, ಸಮೃದ್ಧಿ ನೆಲೆಸುತ್ತದೆ ಹಾಗೂ ಪಿತೃ ದೋಷಗಳು ನಿವಾರಣೆಯಾಗುತ್ತವೆ ಎಂಬ ದೃಢವಾದ ನಂಬಿಕೆಯಿದೆ.

ಆಷಾಢ ಅಮಾವಾಸ್ಯೆ ತಿಥಿ ಹಾಗೂ ಸಮಯಗಳು:

2026ರಲ್ಲಿ ಈ ಅಮಾವಾಸ್ಯೆಯ ತಿಥಿಯು ಆಗಸ್ಟ್ 12 ರಂದು ಬೆಳಗಿನ ಜಾವ 02:11 ಕ್ಕೆ ಪ್ರಾರಂಭವಾಗಿ, ಆಗಸ್ಟ್ 13 ರಂದು ಬೆಳಗಿನ ಜಾವ 12:16 ರವರೆಗೆ ಇರುತ್ತದೆ. ಉದಯ ತಿಥಿಯ ಪ್ರಕಾರ, ಈ ಅಮಾವಾಸ್ಯೆಯ ಪಿತೃ ತರ್ಪಣ ಹಾಗೂ ಪೂಜಾ ಆಚರಣೆಗಳನ್ನು ಆಗಸ್ಟ್ 12, ಬುಧವಾರದಂದು ನೆರವೇರಿಸಲಾಗುತ್ತದೆ. ದಕ್ಷಿಣಾಯನ ಅವಧಿಯಲ್ಲಿ ಬರುವ ಈ ಅಮಾವಾಸ್ಯೆಯು ಪೂರ್ವಜರ ಪೂಜೆಗೆ ಅತ್ಯಂತ ಶುಭಪ್ರದವಾಗಿದೆ.

ಆದಿ ಅಮಾವಾಸ್ಯೆಯ ಆಧ್ಯಾತ್ಮಿಕ ಹಾಗೂ ಪೌರಾಣಿಕ ಮಹತ್ವ:

ಹಿಂದೂ ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ದಕ್ಷಿಣಾಯನವು ಪಿತೃ ದೇವತೆಗಳಿಗೆ ಅತ್ಯಂತ ಪ್ರಿಯವಾದ ಕಾಲವಾಗಿದೆ. ಈ ಸಮಯದಲ್ಲಿ ಬರುವ ಮೊದಲ ಅಮಾವಾಸ್ಯೆಯಂದು ಪೂರ್ವಜರನ್ನು ಭಕ್ತಿಯಿಂದ ಪೂಜಿಸಿದರೆ, ಅವರ ಆಶೀರ್ವಾದವು ಸಂಪೂರ್ಣ ಕುಟುಂಬಕ್ಕೆ ಲಭಿಸುತ್ತದೆ. ಈ ದಿನ ಕಪ್ಪು ಎಳ್ಳು ಬೆರೆಸಿದ ನೀರಿನಿಂದ ತರ್ಪಣ ಅರ್ಪಿಸಿ, ನೈವೇದ್ಯ ಮಾಡಿ ದಾನ ಧರ್ಮಗಳನ್ನು ಮಾಡುವುದರಿಂದ ಪಿತೃ ಋಣ ತೀರುತ್ತದೆ. ಜೊತೆಗೆ ಕುಟುಂಬದಲ್ಲಿ ಸಂತಾನ, ವಿವಾಹ ಅಥವಾ ಯಾವುದೇ ಶುಭ ಕಾರ್ಯಗಳಿಗೆ ಎದುರಾಗುವ ಅಡೆತಡೆಗಳು ಈ ದಿನದ ಪೂಜೆಯಿಂದ ದೂರವಾಗುತ್ತವೆ.

ಮನೆಯಲ್ಲಿಯೇ ಅಮವಾಸ್ಯೆ ಪೂಜೆ ಮಾಡುವುದು ಹೇಗೆ?

ಪವಿತ್ರ ನದಿ ಅಥವಾ ಪುಣ್ಯಕ್ಷೇತ್ರಗಳಿಗೆ ಹೋಗಲು ಸಾಧ್ಯವಾಗದಿದ್ದರೆ, ಮನೆಯಲ್ಲಿಯೇ ಭಕ್ತಿಯಿಂದ ಪೂಜೆ ಸಲ್ಲಿಸಬಹುದು. ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ಸ್ವಚ್ಛವಾದ ಮಡಿ ಉಡುಪನ್ನು ಧರಿಸಿ, ಮನಸ್ಸಿನಲ್ಲಿಯೇ ಪೂರ್ವಜರನ್ನು ಸ್ಮರಿಸಿಕೊಂಡು ಎಳ್ಳು ಮತ್ತು ನೀರನ್ನು ಬಳಸಿ ತರ್ಪಣ ಅರ್ಪಿಸಬೇಕು. ನಂತರ ಪೂರ್ವಜರಿಗೆ ಪ್ರಿಯವಾದ ಸಾಂಪ್ರದಾಯಿಕ ಆಹಾರವನ್ನು ತಯಾರಿಸಿ ನೈವೇದ್ಯ ಮಾಡಿ, ಅಗತ್ಯವಿರುವವರಿಗೆ ಆಹಾರ, ಬಟ್ಟೆ ಅಥವಾ ಧನ ಸಹಾಯ ಮಾಡುವುದು ಅತ್ಯಂತ ಶ್ರೇಷ್ಠವೆಂದು ಹೇಳಲಾಗುತ್ತದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಕಾಗೆಗಳಿಗೆ ಆಹಾರ ನೀಡುವುದರ ಮಹತ್ವವೇನು?

ಹಿಂದೂ ಸಂಪ್ರದಾಯದಲ್ಲಿ ಕಾಗೆಗಳನ್ನು ಪಿತೃ ದೇವತೆಗಳ ವಾಹನ ಅಥವಾ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಆಷಾಢ ಅಮಾವಾಸ್ಯೆಯ ದಿನದಂದು ಪೂಜೆಯ ನಂತರ ತಯಾರಿಸಿದ ನೈವೇದ್ಯವನ್ನು ಕಾಗೆಗಳಿಗೆ ಹಾಗೂ ಇತರ ಪ್ರಾಣಿ-ಪಕ್ಷಿಗಳಿಗೆ ನೀಡುವುದು ಕಡ್ಡಾಯವಾಗಿದೆ. ಕಾಗೆಗಳು ಈ ಆಹಾರವನ್ನು ಸ್ವೀಕರಿಸಿದರೆ, ನಮ್ಮ ಪೂರ್ವಜರು ತೃಪ್ತರಾಗಿ ಕುಟುಂಬವನ್ನು ಆಶೀರ್ವದಿಸಿದ್ದಾರೆ ಎಂಬ ನಂಬಿಕೆ ಸಾಂಪ್ರದಾಯಿಕವಾಗಿ ಬಂದಿದೆ.

ಸಂಜೆ ದೀಪ ಬೆಳಗುವ ವಿಧಾನ:

ಸಂಜೆ ಸೂರ್ಯಾಸ್ತದ ನಂತರ ಮನೆಯ ಪೂಜಾ ಕೋಣೆಯಲ್ಲಿ ಹಾಗೂ ಮುಖ್ಯದ್ವಾರದ ಬಳಿ ದೀಪವನ್ನು ಹಚ್ಚಿ ಪೂರ್ವಜರನ್ನು ಸ್ಮರಿಸಬೇಕು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಕುಟುಂಬದ ಸದಸ್ಯರಿಗೆ ಉತ್ತಮ ಆರೋಗ್ಯ, ಐಶ್ವರ್ಯ ಲಭಿಸಲಿ ಎಂದು ಪ್ರಾರ್ಥಿಸಬೇಕು. ಆಷಾಢ ಅಮಾವಾಸ್ಯೆಯು ಕೇವಲ ಒಂದು ಆಚರಣೆಯಷ್ಟೇ ಅಲ್ಲ, ನಮಗೆ ಜನ್ಮ ನೀಡಿ ಬೆಳೆಸಿದ ಪೂರ್ವಜರಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ದಿನವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರೋಹಿತ್ ಶರ್ಮಾ ವಿಶ್ವಕಪ್ ಭವಿಷ್ಯ: ಅಗರ್ಕರ್, ಬಿಸಿಸಿಐಗೆ ರಹಾನೆ ಖಡಕ್ ಸಂದೇಶ! – Kannada News | Rahane Tells Agarkar To Assure Rohit Sharma Of WC Spot

ಟೀಮ್ ಇಂಡಿಯಾದ ಮಾಜಿ ಆಟಗಾರ ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ ಅವರ ಭವಿಷ್ಯದ ಕುರಿತು ಬಿಸಿಸಿಐ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಸಮಿತಿಗೆ ಅತ್ಯಂತ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. 2027ರ ಏಕದಿನ ವಿಶ್ವಕಪ್‌ ದೃಷ್ಟಿಯಿಂದ ರೋಹಿತ್ ಶರ್ಮಾ ಅವರ ಸ್ಥಾನದ ಬಗ್ಗೆ ಮಂಡಳಿಯು ಸ್ಪಷ್ಟ ನಿಲುವು ತಳೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

“ರೋಹಿತ್ ಶರ್ಮಾ ಅವರಂತಹ ದಿಗ್ಗಜ ಆಟಗಾರನನ್ನು ಸರಣಿಯಿಂದ ಸರಣಿಗೆ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ. ಅವರಿಗೆ 2027ರ ವಿಶ್ವಕಪ್‌ವರೆಗೆ ತಂಡದಲ್ಲಿ ಸಂಪೂರ್ಣ ಭರವಸೆ ನೀಡಬೇಕು,” ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.

ರೋಹಿತ್ ಶರ್ಮಾ ಅವರ ಅಪಾರ ಅನುಭವ ಮತ್ತು ನಾಯಕತ್ವ ಗುಣಗಳು 2027ರ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಅತ್ಯಂತ ಅಗತ್ಯವಾಗಿವೆ. ಪ್ರತಿ ಸರಣಿಯ ಪ್ರದರ್ಶನದ ಆಧಾರದ ಮೇಲೆ ರೋಹಿತ್ ಭವಿಷ್ಯ ನಿರ್ಧರಿಸುವ ನೀತಿಯು ಆಟಗಾರನ ಮಾನಸಿಕ ನೆಮ್ಮದಿಗೆ ಧಕ್ಕೆ ತರುತ್ತದೆ ಎಂದು ರಹಾನೆ ಎಚ್ಚರಿಸಿದ್ದಾರೆ.

ಹೀಗಾಗಿ ಬಿಸಿಸಿಐ ಆಯ್ಕೆ ಸಮಿತಿಯು ರೋಹಿತ್ ಶರ್ಮಾಗೆ ಮುಕ್ತವಾಗಿ ಮತ್ತು ಸ್ಪಷ್ಟವಾಗಿ ಅವರ ಸ್ಥಾನದ ಬಗ್ಗೆ ಭರವಸೆ ನೀಡಬೇಕು. ಇದರಿಂದ ಅವರು ಯಾವುದೇ ಗೊಂದಲವಿಲ್ಲದೆ ಮುಂದಿನ ಸಿದ್ಧತೆ ನಡೆಸಬಹುದು ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.

ಆಯ್ಕೆ ಸಮಿತಿ Vs ಬಿಸಿಸಿಐ ಬಿಕ್ಕಟ್ಟು:

ಕಳೆದ ಕೆಲವು ದಿನಗಳಿಂದ ರೋಹಿತ್ ಶರ್ಮಾ ಅವರ ಏಕದಿನ ಭವಿಷ್ಯದ ಬಗ್ಗೆ ಆಯ್ಕೆ ಮಂಡಳಿಯಲ್ಲಿ ಗೊಂದಲಗಳು ಉಂಟಾಗಿದ್ದವು. ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು 2026ರ ಇಂಗ್ಲೆಂಡ್ ಸರಣಿಯ ನಂತರ ರೋಹಿತ್ ಶರ್ಮಾ ಅವರನ್ನು ತಂಡದಿಂದ ಕೈ ಬಿಡಲು ಯೋಜನೆ ರೂಪಿಸಿದ್ದರು ಎನ್ನಲಾಗಿತ್ತು.

ಆದರೆ, ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 110 ಎಸೆತಗಳಲ್ಲಿ 138 ರನ್‌ಗಳ ಭರ್ಜರಿ ಶತಕ ಸಿಡಿಸಿ ತಮ್ಮ ಫಾರ್ಮ್ ಮತ್ತು ದಕ್ಷತೆಯನ್ನು ಸಾಬೀತುಪಡಿಸಿದರು. ಇದರ ಬೆನ್ನಲ್ಲೇ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು, “ರೋಹಿತ್ ಶರ್ಮಾ ತಂಡದ ಖಾಯಂ ಸದಸ್ಯರಾಗಿದ್ದು, ಅವರು ಆಡಲು ಬಯಸುವವರೆಗೆ ತಂಡದಲ್ಲಿ ಮುಂದುವರಿಯಲಿದ್ದಾರೆ” ಎಂದು ಅಧಿಕೃತ ಪ್ರಕಟಣೆ ಹೊರಡಿಸುವ ಮೂಲಕ ಆಯ್ಕೆ ಸಮಿತಿಯ ಆಲೋಚನೆಗೆ ಬ್ರೇಕ್ ಹಾಕಿದ್ದರು.

ಅಗರ್ಕರ್ ಸ್ಥಾನಕ್ಕೆ ಕುತ್ತು?

ಈ ಆಂತರಿಕ ಭಿನ್ನಾಭಿಪ್ರಾಯ ಮತ್ತು ಮಾಹಿತಿ ಸೋರಿಕೆಯಿಂದಾಗಿ ಬಿಸಿಸಿಐ, ಅಜಿತ್ ಅಗರ್ಕರ್ ನೇತೃತ್ವದ ಸಮಿತಿಯ ನಡೆಗೆ ಅಸಮಾಧಾನಗೊಂಡಿದೆ ಎಂದು ವರದಿಗಳು ತಿಳಿಸಿವೆ. ಸೆಪ್ಟೆಂಬರ್ 2026 ರಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ (AGM) ಅಜಿತ್ ಅಗರ್ಕರ್ ಅವರ ಒಪ್ಪಂದವನ್ನು ನವೀಕರಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದ್ದು, ಅವರ ಸ್ಥಾನಕ್ಕೆ ವಿವಿಎಸ್ ಲಕ್ಷ್ಮಣ್ ಅವರನ್ನು ನೇಮಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಬರೋಬ್ಬರಿ 8 ವಿಕೆಟ್​… ಆಸ್ಟ್ರೇಲಿಯಾದ ಯುವ ವೇಗಿಯ ಮಿಂಚಿನ ದಾಳಿ!

ಒಟ್ಟಾರೆಯಾಗಿ ಹೇಳುವುದಾದರೆ, ರೋಹಿತ್ ಶರ್ಮಾ ಅವರಂತಹ ದಿಗ್ಗಜ ಆಟಗಾರನನ್ನು ‘ಸರಣಿಯಿಂದ ಸರಣಿಗೆ’ ಕೇವಲ ತಾತ್ಕಾಲಿಕವಾಗಿ ಪರಿಗಣಿಸುವುದು ಭಾರತೀಯ ಕ್ರಿಕೆಟ್‌ನ ಸ್ಥಿರತೆಗೆ ಧಕ್ಕೆ ತರಬಹುದು. 2027ರ ಏಕದಿನ ವಿಶ್ವಕಪ್‌ಗೆ ಇನ್ನು ಕೆಲವೇ ವರ್ಷಗಳು ಬಾಕಿ ಇರುವಾಗ, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ಬಿಸಿಸಿಐ ಮಂಡಳಿಯು ರೋಹಿತ್ ಶರ್ಮಾಗೆ ಅವರ ಸ್ಥಾನದ ಕುರಿತು ಸಂಪೂರ್ಣ ಸ್ಪಷ್ಟತೆ ನೀಡಬೇಕು ಎಂದು ಅಜಿಂಕ್ಯ ರಹಾನೆ ಆಗ್ರಹಿಸಿದ್ದಾರೆ.

Source link

ನಂದಿ ಹಿಲ್ಸ್​​ ಮಾನ್ಸೂನ್​ ಮ್ಯಾರಥಾನ್​ ವೇಳೆ ದುರಂತ ಅಂತ್ಯಕಂಡ ಕ್ರೀಡಾಪಟು: ಹೃದಯಾಘಾತದಿಂದ ಸಾವು? – Kannada News | Tragedy at Nandi Hills Monsoon Marathon: 31 Year Old Bengaluru Man Collapses and Dies

ದುರಂತ ಅಂತ್ಯಕಂಡ ಕ್ರೀಡಾಪಟುImage Credit source: Tv9 Kannada

ಚಿಕ್ಕಬಳ್ಳಾಪುರ, ಆಗಸ್ಟ್​ 09: ನಂದಿ ಹಿಲ್ಸ್​​ ಮಾನ್ಸೂನ್​ ಮ್ಯಾರಥಾನ್​ ವೇಳೆ ಕ್ರೀಡಾಪಟು ಓರ್ವ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಅಮನ್ ದೀಪ್ ಸಿಂಗ್ ಜಗಡೆ(31) ಮೃತ ದುರ್ದೈವಿಯಾಗಿದ್ದು, ಹೃದಯಾಘಾತದಿಂದ ಅಸುನೀಗರುವ ಸಾಧ್ಯತೆ ಅಂದಾಜಿಸಲಾಗಿದೆ. 21 ಕಿಲೋಮೀಟರ್‌ ಮ್ಯಾರಥಾನ್ ಓಟದಲ್ಲಿ ಭಾಗಿಯಾಗಿದ್ದ ಅಮನ್​, ನಂದಿಗಿರಿಧಾಮದ ಬೆಟ್ಟದ ಮೇಲೆ ಕುಸಿದುಬಿದ್ದಿದ್ದಾರೆ. ತಕ್ಷಣ ಮುದ್ದೇನಹಳ್ಳಿಯ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತಾದರೂ ಪ್ರಯೋಜನವಾಗಿಲ್ಲ. ಅಮನ್ ದೀಪ್ ಸಿಂಗ್ ಪಂಜಾಬ್​​ ಮೂಲದವರಾಗಿದ್ದು, ಬೆಂಗಳೂರಲ್ಲಿ ನೆಲೆಸಿದ್ದರು. ಮಾನ್ಯತಾ ಟೆಕ್​ ಪಾರ್ಕ್​ನ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದರು ಎಂಬುದು ತಿಳಿದುಬಂದಿದೆ.

ದೇವರು ಜೊತೆಗಿದ್ದಾನೆ ಎಂದು ಬರೆದುಕೊಂಡಿದ್ದ ಅಮನ್ ದೀಪ್

ಅಮನ್ ದೀಪ್ ಸಿಂಗ್, 21 ಕೀಲೊ ಮೀಟರ್ ಕ್ರಮಿಸಬೇಕಿದ್ದ ನಂದಿ ಹಿಲ್ಸ್​​ ಮಾನ್ಸೂನ್​ ಮ್ಯಾರಥಾನ್​​ನ ಅರ್ಧದಷ್ಟು ಮಾತ್ರ ಓಡಿದ್ದರು ಎನ್ನಲಾಗಿದೆ. ಬೆಂಗಳೂರಿನಲ್ಲಿರುವ ಮೃತನ ಪತ್ನಿ ಆಗಮನಕ್ಕಾಗಿ ಪೊಲೀಸರು ಕಾಯುತ್ತಿದ್ದು, ಮೃತದೇಹ ಸದ್ಯ ಆಸ್ಪತ್ರೆಯಲ್ಲಿಯೇ ಇದೆ. ಇನ್ನು ಮ್ಯಾರಥಾನ್​​ ಸಂಬಂಧ ಇನ್ಸ್ಟಾಗ್ರಾಮ್​​ ಪೋಸ್ಟ್​​ ಮಾಡಿದ್ದ ಅಮನ್ ದೀಪ್ ಸಿಂಗ್ 21 ಕೀಲೋ ಮೀಟರ್ ರನ್ನಿಂಗ್​​ನಲ್ಲಿ ದೇವರು ಜೊತೆಗಿದ್ದಾನೆ ಎಂದು ಬರೆದುಕೊಂಡಿದ್ದರು ಎಂಬುದೂ ಗೊತ್ತಾಗಿದೆ.

ಇದನ್ನೂ ಓದಿ: ನೀವು ಭಯೋತ್ಪಾದಕರಾ ಎಂದು ಪ್ರಶ್ನಿಸಿ ಟೆಕ್ಕಿಗಳ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿ

4,500ಕ್ಕೂ ಹೆಚ್ಚುಮಂದಿ ಭಾಗಿ

https://www.youtube.com/watch?v=NzyRQ3xQeZU

10 ಕಿಲೋಮೀಟರ್ ಹಾಗೂ 21 ಕಿಲೋಮೀಟರ್ ವಿಭಾಗಗಳಲ್ಲಿ ಈ ಮ್ಯಾರಥಾನ್‌ ನಡೆದಿದ್ದು, 4,500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಕರ್ನಾಟಕ ಸರ್ಕಾರ, ಯುವಜನ ಕ್ರೀಡಾ ಮತ್ತು ಸೇವಾ ಇಲಾಖೆ ಹಾಗೂ ಜಿಲ್ಲಾಡಳಿತ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರದ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನ್ಯಾಯಾಲಯದ ಕಣ್ಣಿಗೆ ಮಣ್ಣೆರಚಿ ದೆಹಲಿ ಪ್ರವಾಸ: ಸಚಿವ ನಾಗೇಂದ್ರ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ! – Kannada News | Valmiki Corporation Scam: R Ashoka Slams Congress Over Minister Nagendra’s Alleged Bail Violation

ಆರ್. ಅಶೋಕ್

ಬೆಂಗಳೂರು, ಆಗಸ್ಟ್ 09: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಕೀಯದಲ್ಲಿ ಮತ್ತೆ ಆರೋಪ-ಪ್ರತ್ಯಾರೋಪಗಳ ಕಿಡಿ ಹೊತ್ತಿಕೊಂಡಿದೆ. ಈ ಪ್ರಕರಣದಲ್ಲಿ ಇ.ಡಿ (ED) ತನಿಖೆ ಎದುರಿಸುತ್ತಿರುವ ಮಾಜಿ ಸಚಿವ ಬಿ. ನಾಗೇಂದ್ರ ಅವರು ನ್ಯಾಯಾಲಯದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ, ಕೋರ್ಟ್ ಅನುಮತಿ ಪಡೆಯದೇ ದೆಹಲಿಗೆ ಪ್ರವಾಸ ಕೈಗೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ನಾಗೇಂದ್ರ ಅವರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸಬೇಕೆಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.

ಆರ್. ಅಶೋಕ್ ಪೋಸ್ಟ್​ನಲ್ಲೇನಿದೆ?

ತಮ್ಮ ಪೋಸ್ಟ್‌ನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ಆರ್. ಅಶೋಕ್, “ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ, ನ್ಯಾಯಾಲಯದ ಕಣ್ಣಿಗೆ ಮಣ್ಣೆರಚಿ ದೆಹಲಿಗೆ ಓಡಾಡುವಷ್ಟು ಅಧಿಕಾರದ ಮದ ಏರಿದೆಯೇ?” ಎಂದು ಪ್ರಶ್ನಿಸಿದ್ದಾರೆ. ಮಾಧ್ಯಮ ವರದಿಗಳನ್ನು ಉಲ್ಲೇಖಿಸಿರುವ ಅವರು, ಜುಲೈ 15 ಮತ್ತು ಜುಲೈ 26ರಂದು ನಾಗೇಂದ್ರ ಅವರು ನಡೆಸಿದ್ದಾರೆನ್ನಲಾದ ದೆಹಲಿ ಪ್ರವಾಸದ ಕುರಿತು ಜಾರಿ ನಿರ್ದೇಶನಾಲಯವು (ED) ಈಗಾಗಲೇ ಸಿಸಿಟಿವಿ ದೃಶ್ಯಗಳು ಹಾಗೂ ವಿಮಾನ ನಿಲ್ದಾಣದ ದಾಖಲೆಗಳನ್ನು ಪರಿಶೀಲಿಸುತ್ತಿದೆ ಎಂದು ತಿಳಿಸಿದ್ದಾರೆ.

ಒಂದೆಡೆ ಇ.ಡಿ ತನಿಖೆಗೆ ಕಾಲಾವಕಾಶ ಕೋರುತ್ತಾ, ಇನ್ನೊಂದೆಡೆ ನ್ಯಾಯಾಲಯದ ಅನುಮತಿಯನ್ನೇ ಪಡೆಯದೆ ಪ್ರಯಾಣ ಬೆಳೆಸುವುದು ಕಾಂಗ್ರೆಸ್ ಪಕ್ಷಕ್ಕೆ ಕಾನೂನು ಮತ್ತು ನ್ಯಾಯಾಲಯಗಳ ಮೇಲಿರುವ ಅಸಲಿ ಗೌರವವನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದ್ದಾರೆ.

“ನಿಮಗೆ ನ್ಯಾಯಾಲಯ ದೊಡ್ಡದೋ, ಹೈಕಮಾಂಡ್ ದೊಡ್ಡದೋ?”

ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದಿರುವ ಅಶೋಕ್, ಅಧಿಕಾರದಲ್ಲಿರುವವರಿಗೆ ಒಂದು ಕಾನೂನು, ಸಾಮಾನ್ಯ ಜನರಿಗೊಂದು ಕಾನೂನು ಎಂಬ ಕಾಂಗ್ರೆಸ್ಸಿಗರ ಮನಸ್ಥಿತಿ ಈಗ ಬಯಲಾಗಿದೆ ಎಂದಿದ್ದಾರೆ. ನೇರವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪ್ರಶ್ನೆ ಎಸೆದಿರುವ ಅವರು, “ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ನ್ಯಾಯಾಲಯದ ಆದೇಶ ದೊಡ್ಡದೋ, ಇಲ್ಲ ನಿಮ್ಮ ಹೈಕಮಾಂಡ್ ಆದೇಶ ದೊಡ್ಡದೋ? ಭ್ರಷ್ಟಾಚಾರ ಮತ್ತು ಕಾನೂನು ಉಲ್ಲಂಘನೆಯ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ ರಾಜಕೀಯ ಅಭಯ ನೀಡುವುದೇ ನಿಮ್ಮ ಪಾರದರ್ಶಕ ಆಡಳಿತವೇ?” ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಈ ಗಂಭೀರ ಬೆಳವಣಿಗೆಯ ಬಗ್ಗೆ ತಕ್ಷಣವೇ ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕು ಹಾಗೂ ಮಾನ್ಯ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವ ಕಳಂಕಿತ ಸಚಿವ ನಾಗೇಂದ್ರ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕಿತ್ತೊಗೆಯಬೇಕು ಎಂದು ಆರ್. ಅಶೋಕ್ ಪ್ರಬಲವಾಗಿ ಒತ್ತಾಯಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಹೊಡೆದರು, ಸುಟ್ಟರು, ಕೊನೆಗೆ ‘ಶೂಟ್ ಮಾಡ್ಕೊಂಡು ಸಾಯ್ತೀನಿ’ ಎಂದ ದರ್ಶನ್’ – Kannada News | Renuka Swamy case, accused Pradosh said Darshan threatened him

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ದರ್ಶನ್ ಆಪ್ತನಾಗಿದ್ದು, ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ಸಹ ಆಗಿರುವ ಪ್ರದೋಷ್ ತಮ್ಮನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ 14ನೇ ಆರೋಪಿ ಆಗಿರುವ ಪ್ರದೋಶ್, ತಾವು ಪ್ರಕರಣದ ಪೂರ್ಣ ಮಾಹಿತಿಯನ್ನು ನ್ಯಾಯಾಲಯದ ಎದುರು ಹಂಚಿಕೊಳ್ಳುವುದಾಗಿ ಹೇಳಿದ್ದು, ತಮ್ಮನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. ಪ್ರದೋಶ್ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಕರಣದ ಬಗ್ಗೆ ಕುತೂಹಲಕಾರಿ ವಿಷಯಗಳು ಹೊರಬಂದಿವೆ.

ಪ್ರದೋಶ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಚಾಲ್ತಿಯಲ್ಲಿದ್ದು, ನಾಳೆಯೂ (ಆಗಸ್ಟ್ 10) ವಿಚಾರಣೆ ನಡೆಯಲಿದೆ. ಪ್ರದೋಶ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಕರಣದ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳು ಹೊರಬಿದ್ದಿವೆ. ಪ್ರಕರಣ ನಡೆದ ಬಳಿಕ, ನಟ ದರ್ಶನ್, ತಾವು ಗನ್​ ಇಂದ ಶೂಟ್ ಮಾಡಿಕೊಂಡು ಸಾಯುವುದಾಗಿ ಬೆದರಿಕೆ ಹಾಕಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

‘ಪ್ರಕರಣದಲ್ಲಿ ತಮಗೆ ಸಹಕರಿಸದೇ ಇದ್ದರೆ ಗನ್​ ಇಂದ ಶೂಟ್ ಮಾಡಿಕೊಂಡು ಸಾಯುವುದಾಗಿ ದರ್ಶನ್ ಬೆದರಿಕೆ ಹಾಕಿದ್ದರು, ಹಾಗಾಗಿ ತಾವು ದರ್ಶನ್​​ಗೆ ಸಹಾಯ ಮಾಡಿದ್ದಾಗಿ ಪ್ರದೋಶ್ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದಾಗ ಸ್ಥಳದಲ್ಲಿ ನಾನು ಹಾಜರಿದ್ದೆ‌. ರೇಣುಕಾಸ್ವಾಮಿ ಮೇಲಿನ ಹಲ್ಲೆಯನ್ನು ತಡೆಯಲು ಬಹಳ ಪ್ರಯತ್ನ ಪಟ್ಟೆ. ಅಮಾನುಷವಾಗಿ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಲಾಯ್ತು, ಸಿಗರೇಟಿನಿಂದ ಸುಟ್ಟರು, ಖುದ್ದು ದರ್ಶನ್ ಸಹ ತೀವ್ರವಾಗಿ ಹಲ್ಲೆ ಮಾಡಿದರು. ದರ್ಶನ್ ತನಗೆ ಬೆದರಿಕೆ ಹಾಕಿದ್ದರಿಂದ ತಾನು ಅಸಹಾಯಕನಾದೆ ಎಂದಿದ್ದಾರೆ. ಅಲ್ಲದೆ, ಪ್ರಕರಣ ನಡೆದಿದ್ದು ಹೇಗೆ? ಪ್ರಕರಣದಲ್ಲಿ ಯಾರ್ಯಾರು ಶಾಮೀಲಾಗಿದ್ದಾರೆ ಎಲ್ಲ ವಿಷಯಗಳು ತಮಗೆ ತಿಳಿದಿದ್ದು, ತಮ್ಮನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿದರೆ ಎಲ್ಲ ವಿಷಯವನ್ನು ನ್ಯಾಯಾಲಯದ ಮುಂದೆ ಹೇಳುವುದಾಗಿ ಅವರು ಪ್ರದೋಶ್ ಹೇಳಿದ್ದಾರೆ.

ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ದರ್ಶನ್ ಪರ ವಕೀಲ ಬದಲು

ಪ್ರದೋಶ್, ದರ್ಶನ್​​ ಅವರ ಆಪ್ತರಾಗಿದ್ದು, ಆರ್​​ಆರ್​ ನಗರದಲ್ಲಿರುವ ಸ್ಟೋನಿ ಬ್ರೂಕ್ ಬಾರ್ ಆಂಡ್ ರೆಸ್ಟೊರೆಂಟ್​​ನ ಮಾಲೀಕರಾಗಿದ್ದಾರೆ. ಘಟನೆ ನಡೆದ ದಿನ ಇದೇ ಸ್ಟೋನಿ ಬ್ರೂಕ್​ನಲ್ಲಿ ದರ್ಶನ್ ಹಾಗೂ ಇತರರು ಇದ್ದರು ಎನ್ನಲಾಗಿದ್ದು, ಇಲ್ಲಿ ಪಾರ್ಟಿ ಮುಗಿಸಿಕೊಂಡು ಪಟ್ಟಣಗೆರೆ ಶೆಡ್​​ಗೆ ಹೋಗಿದ್ದರು. ದರ್ಶನ್ ಜೊತೆಗೆ ಪ್ರದೋಶ್ ಸಹ ಹೋಗಿದ್ದರು. ಘಟನೆ ನಡೆದ ಬಳಿಕ ನಡೆದ ಬೆಳವಣಿಗೆಗಳಲ್ಲಿ ಪ್ರದೋಶ್ ನೇರವಾಗಿ ಭಾಗಿದಾರರಾಗಿದ್ದರು ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:52 am, Sun, 9 August 26

Source link

ಭಾರತದಲ್ಲಿ ಏಜ್ ವೆರಿಫಿಕೇಶನ್ ಪರೀಕ್ಷಿಸುತ್ತಿರುವ ವಾಟ್ಸಾಪ್; ವಯಸ್ಸು ತಿಳಿಸಲು ಸಿದ್ದರಾಗಿ – Kannada News | Whatsapp testing age verification feature to comply with indias dpdp act

ನವದೆಹಲಿ, ಆಗಸ್ಟ್ 9: ಮೆಟಾ (Meta) ಒಡೆತನದ ಮೆಸೇಜಿಂಗ್ ಪ್ಲಾಟ್​ಫಾರ್ಮ್ ವಾಟ್ಸಾಪ್ (WhatsApp), ಭಾರತದಲ್ಲಿ ತನ್ನ ಬಳಕೆದಾರರಿಗೆ ಜನ್ಮ ದಿನಾಂಕವನ್ನು (Date of Birth) ಸೇರಿಸಲು ಅವಕಾಶ ನೀಡುವ ಹೊಸ ಫೀಚರ್ ಅನ್ನು ಪರೀಕ್ಷಿಸಲು ಪ್ರಾರಂಭಿಸಿದೆ. ಭಾರತ ಸರ್ಕಾರ ಜಾರಿಗೆ ತರಲಿರುವ ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ (DPDP) ಕಾಯ್ದೆಗೆ ಬದ್ಧವಾಗಿರಲು ಈ ಕ್ರಮ ಕೈಗೊಳ್ಳಲಾಗಿದೆ.

ಹುಟ್ಟಿದ ದಿನಾಂಕದ ಮಾಹಿತಿ: ಪ್ರಸ್ತುತ ಕೆಲ ಬಳಕೆದಾರರಿಗೆ ‘Add your date of birth’ ಎಂಬ ಪ್ರಾಂಪ್ಟ್ (Prompt) ಕಾಣಿಸಿಕೊಳ್ಳುತ್ತಿದ್ದು, ಬಳಕೆದಾರರು ತಮ್ಮ ವಯಸ್ಸನ್ನು ದೃಢೀಕರಿಸಲು ಇದು ಅವಕಾಶ ನೀಡುತ್ತದೆ. ಪರೀಕ್ಷೆಯ ಹಂತದಲ್ಲಿ ಈ ಮಾಹಿತಿಯನ್ನು ನೀಡುವುದು ಕಡ್ಡಾಯವಲ್ಲ. ಬಳಕೆದಾರರು ತಮ್ಮ ಹುಟ್ಟಿದ ದಿನಾಂಕವನ್ನು ನೀಡದೆಯೂ ವಾಟ್ಸಾಪ್ ಬಳಸುವುದನ್ನು ಮುಂದುವರಿಸಬಹುದು.

ಇದನ್ನೂ ಓದಿ: ಮಹೀಂದ್ರಾ ಗ್ರೂಪ್​ನಿಂದ ಹೊಸ ವಿಮಾನ ಸಂಸ್ಥೆ; ನೋವಾವಾಯು ಏರೋಸ್ಪೇಸ್ ಕಂಪನಿ ನೊಂದಣಿ

ಖಾಸಗಿತನಕ್ಕೆ ಧಕ್ಕೆ ಇಲ್ಲ ಎಂದ ಮೆಟಾ

ಬಳಕೆದಾರರ ವಯಸ್ಸಿನ ವಿವರಗಳು ಖಾಸಗಿಯಾಗಿದ್ದು, ಇದನ್ನು ಇತರ ಯಾವುದೇ ವಾಟ್ಸಾಪ್ ಬಳಕೆದಾರರೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ ಎಂದು ಸಂಸ್ಥೆಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

DPDP ಕಾಯ್ದೆಯ ನಿಯಮ: ಭಾರತದ ಡಿಪಿಡಿಪಿ (DPDP) ಕಾಯ್ದೆಯ ಪ್ರಕಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ವೈಯಕ್ತಿಕ ದತ್ತಾಂಶವನ್ನು ಬಳಸುವ ಡಿಜಿಟಲ್ ಪ್ಲಾಟ್​ಫಾರ್ಮ್​ಗಳು ಸೂಕ್ತ ವಯಸ್ಸು ದೃಢೀಕರಣ (Age-verification) ವ್ಯವಸ್ಥೆಯನ್ನು ಹೊಂದಿರಬೇಕಾಗುತ್ತದೆ.

ಇದನ್ನೂ ಓದಿ: ಎಂಡಿಆರ್ ಶುಲ್ಕ ಕೇವಲ ಶೇ. 0.04? ದೊಡ್ಡ ವ್ಯಾಪಾರಿಗಳಿಗೆ ಮಾತ್ರವಾ ಈ ಶುಲ್ಕ? ಯಾರು ದೊಡ್ಡ ವ್ಯಾಪಾರಿಗಳು?

ಪ್ರಸ್ತುತ ಈ ಫೀಚರ್ ಪರೀಕ್ಷಾ ಹಂತದಲ್ಲಿದ್ದು, ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೇರಳದಲ್ಲಿ ವಿವಾದ ಸೃಷ್ಟಿಸಿದ ಕ್ವಿಜ್​​ನಲ್ಲಿ ಸಾವರ್ಕರ್​​ ಕುರಿತ ಪ್ರಶ್ನೆ: ತನಿಖೆಗೆ ಆದೇಶ – Kannada News | Row in Kerala Over VD Savarkar Question in School Freedom Quiz; Education Minister Orders Probe

ವಿ.ಡಿ. ಸಾವರ್ಕರ್​​Image Credit source: achalsiki.com

ತಿರುವನಂತಪುರಂ, ಆಗಸ್ಟ್​ 09: ಶಾಲಾ ಕ್ವಿಜ್‌ನಲ್ಲಿ ಹಿಂದೂತ್ವ ಸಿದ್ಧಾಂತವಾದಿ ವಿ.ಡಿ. ಸಾವರ್ಕರ್‌ ಅವರನ್ನು ಬ್ರಿಟಿಷರಿಂದ ಅತ್ಯಂತ ಕಠಿಣ ಶಿಕ್ಷೆ ಪಡೆದ ಸ್ವಾತಂತ್ರ್ಯ ಹೋರಾಟಗಾರ ಎಂದು ಬಣ್ಣಿಸಿದ ಪ್ರಶ್ನೆಯೊಂದು ಕೇರಳದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಎನ್. ಶಂಸುಡ್ಡೀನ್‌ ತನಿಖೆಗೆ ಆದೇಶಿಸಿದ್ದಾರೆ. ಕ್ವಿಜ್‌ ಸಿದ್ಧಪಡಿಸಿ ನಡೆಸಿದವರು ಯಾರು ಎಂಬುದನ್ನು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

‘ಪೂರ್ವಾಗ್ರಹಪೀಡಿತ ದೃಷ್ಟಿಕೋನ’

ಆಗಸ್ಟ್‌ 6ರಂದು ಕಾಸರಗೋಡು, ಕುಂಬ್ಳೆ ಮತ್ತು ಮಂಜೇಶ್ವರ ಶಾಲೆಗಳಲ್ಲಿ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗಾಗಿ ‘ಫ್ರೀಡಂ ಕ್ವಿಜ್‌’ ಆಯೋಜಿಸಲಾಗಿತ್ತು. ಈ ಕ್ವಿಜ್‌ ಶಿಕ್ಷಣ ಇಲಾಖೆಯ ಅಥವಾ ಸಾಮಾಜಿಕ ವಿಜ್ಞಾನ ಕ್ಲಬ್‌ನ ಚಟುವಟಿಕೆಗಳ ಭಾಗವಾಗಿರಲಿಲ್ಲ. ಪ್ರಶ್ನೆಗಳನ್ನು ಸಿದ್ಧಪಡಿಸಲು ಅಥವಾ ಸ್ಪರ್ಧೆಯನ್ನು ಸ್ವತಂತ್ರವಾಗಿ ನಡೆಸಲು ಎರಡೂ ಸಂಸ್ಥೆಗಳು ಯಾರಿಗೂ ಅನುಮತಿ ನೀಡಿರಲಿಲ್ಲ. ಐತಿಹಾಸಿಕವಾಗಿ ತಪ್ಪಾದ ಪ್ರಶ್ನೆಯನ್ನು ಸೇರಿಸಿದ ವ್ಯಕ್ತಿಯು ಪೂರ್ವಾಗ್ರಹಪೀಡಿತ ದೃಷ್ಟಿಕೋನ ಹೊಂದಿದ್ದಾರೆ ಎಂದು ಸಚಿವರ ಕಚೇರಿ ಹೇಳಿದ್ದು, ಹೊಣೆಗಾರರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಶಿಕ್ಷಣ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ:  ಜೈಲಿನಲ್ಲಿದ್ದ ಲವರ್​​ ಭೇಟಿಯಾಗಲು 10 ಜೀವಂತ ಗುಂಡುಗಳ ಸಮೇತ ಬಂದ ಅಪ್ರಾಪ್ತೆ: ಮುಂದಾಗಿದ್ದೇನು?

ಎಡಪಂಥೀಯ ಸಂಘಟನೆಗಳ ವಿರೋಧ

ಬ್ರಿಟಿಷರಿಂದ ಅತ್ಯಂತ ಕಠಿಣ ಶಿಕ್ಷೆ ಪಡೆದ ಸ್ವಾತಂತ್ರ್ಯ ಹೋರಾಟಗಾರ ಯಾರು? ಎಂದು ಪ್ರಶ್ನೆ ಕೇಳಲಾಗಿದ್ದು ಇದಕ್ಕೆ ಉತ್ತರವಾಗಿ ಸಾವರ್ಕರ್‌ ಹೆಸರನ್ನು ನೀಡಲಾಗಿತ್ತು. ಈ ವಿಚಾರವಾಗಿ ಸಿಪಿಐ(ಎಂ) ಸೇರಿದಂತೆ ಎಡಪಂಥೀಯ ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಸರ್ಕಾರವು ಸಂಘ ಪರಿವಾರದ ಕಾರ್ಯಸೂಚಿ ಶಿಕ್ಷಣ ಕ್ಷೇತ್ರಕ್ಕೆ ಪ್ರವೇಶಿಸಲು ಅವಕಾಶ ನೀಡುತ್ತಿದೆ ಎಂದು ಅವು ಆರೋಪಿಸಿದ್ದವು ಎಂದು ಎನ್​​ಡಿಟಿವಿ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version