ಹುಬ್ಬಳ್ಳಿ ಉಪ ಕಾರಾಗೃಹದಲ್ಲಿ ಕೈದಿಗಳ ಬಿಂದಾಸ್ ಲೈಫ್: ಮದ್ಯ, ಗಾಂಜಾ ಸೇವನೆ ವಿಡಿಯೋ ವೈರಲ್ – Kannada News | Hubballi Sub Jail Video Goes Viral: Undertrial Prisoners Seen Consuming Liquor and Ganja Days After DGP Alok Kumar’s Visit

ಹುಬ್ಬಳ್ಳಿ ಉಪ ಕಾರಾಗೃಹದಲ್ಲಿ ಕೈದಿಗಳ ಬಿಂದಾಸ್ ಲೈಫ್Image Credit source: tv9

ಹುಬ್ಬಳ್ಳಿ, ಫೆಬ್ರವರಿ 21: ಧಾರವಾಡ (Dharawad) ಜಿಲ್ಲೆ ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿರುವ ಆರೋಪ ಕೇಳಿಬಂದಿದ್ದು, ಜೈಲಿನೊಳಗಿನ ಅಕ್ರಮ ಸೌಲಭ್ಯಗಳ ವಿಡಿಯೋ ವೈರಲ್ ಆಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಣ ಕೊಟ್ಟರೆ ಸಬ್ ಜೈಲಿನಲ್ಲಿ ಎಲ್ಲಾ ಸೌಲಭ್ಯಗಳು ಸಿಗುತ್ತವೆ ಎಂಬ ಆರೋಪಗಳು ಕೇಳಿಬಂದಿದ್ದು, ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿವೆ. ವೈರಲ್ ಆಗಿರುವ ವಿಡಿಯೋದಲ್ಲಿ ವಿಚಾರಣಾಧೀನ ಕೈದಿಗಳು ಮೊಬೈಲ್ ಫೋನ್ ಬಳಸುತ್ತಿರುವುದು, ಸೆಲ್ಫಿ ತೆಗೆದುಕೊಳ್ಳುತ್ತಿರುವುದು, ಗಾಂಜಾ ಹಾಗೂ ಮದ್ಯ ಸೇವನೆ ಮಾಡುತ್ತಿರುವುದು ಕಾಣಿಸುತ್ತಿದೆ. ಜೈಲಿನಲ್ಲೇ ಬಿಂದಾಸ್ ಜೀವನ ನಡೆಸುತ್ತಿರುವಂತೆ ಕಂಡುಬರುವ ಈ ದೃಶ್ಯಗಳು ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಜೈಲಿನೊಳಗೆ ಯಾವುದೇ ಅಂಜಿಕೆ ಇಲ್ಲದೇ ಕೈದಿಗಳು ವರ್ತಿಸುತ್ತಿರುವುದು ಆಡಳಿತದ ಮೇಲಿನ ಅನುಮಾನಗಳನ್ನು ಮತ್ತಷ್ಟು ಗಾಢಗೊಳಿಸಿದೆ.

ಈ ಉಪ ಕಾರಾಗೃಹದಲ್ಲಿ ಕಳೆದ ವರ್ಷ ನವೆಂಬರ್ 13ರಂದು ನಡೆದಿದ್ದ ಮಲ್ಲಿಕ್ ಕೊಲೆ ಪ್ರಕರಣದ ಆರೋಪಿಗಳು ಸೇರಿದಂತೆ ಅನೇಕ ಗಂಭೀರ ಪ್ರಕರಣಗಳಲ್ಲಿ ಶಾಮೀಲಾದ ಆರೋಪಿಗಳು ಇದ್ದಾರೆ. ಬೆಂಡಿಗೇರಿ ಠಾಣೆ ಪೊಲೀಸರು ಈ ಪ್ರಕರಣ ಸಂಬಂಧ 17 ಜನರನ್ನು ಬಂಧಿಸಿದ್ದರು. ವೈರಲ್ ವಿಡಿಯೋದಲ್ಲಿ ಅಭಿಷೇಕ್ ಜಾಧವ್, ಗಣೇಶ್ ಜಾಧವ್ ಸೇರಿದಂತೆ ಕೆಲ ಆರೋಪಿಗಳು ಕಾಣಿಸಿಕೊಂಡಿರುವುದಾಗಿ ಹೇಳಲಾಗುತ್ತಿದೆ.

ವಿಡಿಯೋ ಇಲ್ಲಿ ನೋಡಿ

ಗಮನಾರ್ಹವೆಂದರೆ, ಮೂರು ದಿನಗಳ ಹಿಂದಷ್ಟೇ ರಾಜ್ಯದ ಡಿಜಿಪಿ ಅಲೋಕ್ ಕುಮಾರ್ ಹುಬ್ಬಳ್ಳಿಯ ವಿಶ್ವೇಶ್ವರಯ್ಯ ನಗರದಲ್ಲಿರುವ ಉಪ ಕಾರಾಗೃಹಕ್ಕೆ ಭೇಟಿ ನೀಡಿದ್ದರು. ಜೈಲಿನ ಕಾರ್ಯವೈಖರಿ, ಭದ್ರತಾ ವ್ಯವಸ್ಥೆ, ಸಬ್ ಜೈಲ್ ಕಟ್ಟಡ, ಗಾರ್ಡನ್ ಹಾಗೂ ಕೈದಿಗಳಿಗೆ ಒದಗಿಸಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದ್ದರು. ಕೈದಿಗಳ ಜೊತೆಯೂ ಮಾತುಕತೆ ನಡೆಸಿದ್ದರು. ಆದರೆ ಅವರ ಭೇಟಿಯ ಮೂರೇ ದಿನಗಳಲ್ಲಿ ಜೈಲಿನೊಳಗಿನ ಅಕ್ರಮ ಚಟುವಟಿಕೆಗಳ ವಿಡಿಯೋ ವೈರಲ್ ಆಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: ಕಲ್ಲು, ಚಪ್ಪಲಿ ತೂರಾಟದ ಬಳಿಕ ಬಾಗಲಕೋಟೆ ಬೂದಿ ಮುಚ್ಚಿದ ಕೆಂಡ: ಶಾಂತಿ ಸಭೆ ವಿಫಲ, ಎಲ್ಲಾ ಆರೋಪಿಗಳ ಬಂಧನಕ್ಕೆ ಡೆಡ್​ಲೈನ್

ಜೈಲಿನೊಳಗೆ ಗಾಂಜಾ, ಮದ್ಯ, ಮೊಬೈಲ್‌ಗಳ ಪೂರೈಕೆ ಹೇಗೆ ನಡೆಯುತ್ತಿದೆ? ಇದಕ್ಕೆ ಒಳಗಿನಿಂದ ಸಹಕಾರವಿದೆಯೇ? ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಸಂಬಂಧಿತ ಅಧಿಕಾರಿಗಳು ಘಟನೆಯ ಕುರಿತು ತನಿಖೆ ಆರಂಭಿಸಿದ್ದು, ವಿಡಿಯೋ ನೈಜತೆಯ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಲ್ಲು, ಚಪ್ಪಲಿ ತೂರಾಟದ ಬಳಿಕ ಬಾಗಲಕೋಟೆ ಬೂದಿ ಮುಚ್ಚಿದ ಕೆಂಡ: ಶಾಂತಿ ಸಭೆ ವಿಫಲ, ಎಲ್ಲಾ ಆರೋಪಿಗಳ ಬಂಧನಕ್ಕೆ ಡೆಡ್​ಲೈನ್ – Kannada News | Bagalkot Shivaji Jayanti Clash Stone and Slipper pelting: Peace Meeting Fails, Deadline Set for Arrest of All Accused

ಪೊಲೀಸರ ಜತೆ ಯುವಕರ ವಾಗ್ವಾದImage Credit source: tv9

ಬಾಗಲಕೋಟೆ, ಫೆಬ್ರವರಿ 21: ಬಾಗಲಕೋಟೆಯಲ್ಲಿ (Bagalkot) ಫೆಬ್ರವರಿ 19ರ ರಾತ್ರಿ 10ಗಂಟೆ ವೇಳೆ ಶಿವಾಜಿ ಮೆರವಣಿಗೆ ಮೇಲೆ ನಡೆದ ಕಲ್ಲು ಹಾಗೂ ಚಪ್ಪಲಿ ತೂರಾಟದ ಬಳಿಕ ಉಂಟಾಗಿದ್ದ ಬಿಗುವಿನ ವಾತಾವರಣ ಮುಂದುವರಿದಿದೆ. ಘಟನೆ ಖಂಡಿಸಿ ಹಿಂದು ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಬೀದಿಗಿಳಿದಿದ್ದಾರೆ. ಶುಕ್ರವಾರ ಆಗಿದ್ದರಿಂದ ಪಂಕಾ ಮಸೀದಿ ಹಾಗೂ ಕೊತ್ತಲೇಶ್ವರ ದೇವಸ್ಥಾನದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಗುರುವಾರ ರಾತ್ರಿ ಕಲ್ಲು ತೂರಾಟ ಸಂಬಂಧ 8 ಆರೋಪಿಗಳನ್ನು ಪೊಲೀಸರು ಬಂಧಿಸಿ, ವಿಜಯಪುರ ಜೈಲಿಗೆ ಅಟ್ಟಿದ್ದಾರೆ.

ಇತ್ತ ನಿಷೇದಾಜ್ಞೆ ಉಲ್ಲಂಘಿಸಿ ಶಿವಭವಾನಿ ದೇವಸ್ಥಾನದಲ್ಲಿ ಹಿಂದು ಮುಖಂಡರು ಸಭೆ ನಡೆಸಿದ್ದಾರೆ. ಮತ್ತೊಂದೆಡೆ ಹಿಂದೂ ಸಂಘಟನೆ ಯುವ ಕಾರ್ಯಕರ್ತರು ಅಂಗಡಿಗಳನ್ನು ಬಂದ್ ಮಾಡಿಸಲು ಮುಂದಾಗಿದ್ದಾರೆ. ಈ ವೇಳೆ ತಡೆದ ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ತರಕಾರಿ ಮಾರುಕಟ್ಟೆ ಪಕ್ಕದ ಮಾಂಸದ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆದಿದೆ. ತಕ್ಷಣವೇ ಪೊಲೀಸರು ಲಾಠಿ ಬೀಸಿ ಗುಂಪನ್ನು ಚದುರಿಸಿದ್ದಾರೆ.

ಈ ನಡುವೆ ಡಿಸಿ ಕಚೇರಿಯಲ್ಲಿ ಎರಡು ಗುಂಪಿನ ಮುಖಂಡರನ್ನು ಶಾಂತಿ ಸಭೆಗೆ ಕರೆಯಲಾಗಿತ್ತು. ಸಭೆಗೆ ಹಿಂದು ಮುಖಂಡರು ಆಗಮಿಸಿದರು. ಆದರೆ ಸಭೆಗೆಂದು ಡಿಸಿ ಕಚೇರಿಗೆ ಬಂದ ಮುಸ್ಲಿಂ ಮುಖಂಡರು ಸಭೆಯಿಂದ ಹೊರಗುಳಿದಿದ್ದರು. ಇದರಿಂದ ರೊಚ್ಚಿಗೆದ್ದ ಹಿಂದು ಸಂಘಟನೆ ನಾಯಕರು ಶಾಂತಿ ಸಭೆ ಬಹಿಷ್ಕರಿಸಿದ್ದಾರೆ.

ಶಾಂತಿ ಸಭೆ ಬಹಿಷ್ಕರಿಸಿ ಹೊರಬಂದ ಹಿಂದೂ ಮುಖಂಡರು ಎಲ್ಲಾ ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಗಡುವು ನೀಡಿದ್ದಾರೆ. ಫೆಬ್ರುವರಿ 22 ರಂದು ಸರ್ವ ಸಮಾಜದ ಸಭೆ ಕರೆಯುತ್ತೇವೆ. ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ನಿರ್ಣಯ ಕೈಗೊಳ್ಳುತ್ತೇವೆ ಎಂದು ಹೇಳಿದರು.

ರಾತ್ರಿಯಾಗುತ್ತಿದ್ದಂತೆಯೇ ಕೊತ್ತಲೇಶ್ವರ ದೇವಸ್ಥಾನದ ಬಳಿ ಹಾಕಲಾಗಿರುವ ಬ್ಯಾರಿಕೇಡ್ ತೆರವುಗೊಳಿಸುವಂತೆ ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದಾರೆ. ‘ನಾವು ಗಣಪತಿ ದೇವಸ್ಥಾನಕ್ಕೆ ಹೇಗೆ ಹೋಗಬೇಕು? ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ಅವಕಾಶ ಕೊಟ್ಟಿದ್ದೀರಿ. ನಮಗ್ಯಾಕೆ ತಡೆ?’ ಎಂದು ಬ್ಯಾರಿಕೇಡ್ ಒದ್ದು ತಳ್ಳಿ ಹೋಗಲು ಪ್ರಯತ್ನಿಸಿದ್ದಾರೆ. ಆಗ ತಡೆದ ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ್ದಾರೆ.

ಇದನ್ನೂ ಓದಿ: ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು

ಈ ಮಧ್ಯೆ ಹೆಚ್ಚಿನ ಭದ್ರತೆಗೆ ಗದಗ ಎಸ್ಪಿ ,ವಿಜಯಪುರ ಎಎಸ್ಪಿ, ಬೆಳಗಾವಿ ಪೊಲೀಸ್ ಅಧಿಕಾರಿಗಳು ಹಾಗೂ ಸಾವಿರಾರು ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಅಪೇಕ್ಷೆಯಲ್ಲಿ ಗೊಂದಲ‌ ಅಧಿಕ – Kannada News | Horoscope 21 Satursday 2026; Dina Rashi Bhavishya Today, Checkout the details here

ಮೇಷ ರಾಶಿ:

ಅಕಾರಣವಾಗಿ ಬರುವ ಕೋಪವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವಿರಿ. ನಿಜವಾದ ಮಿತ್ರನ ಬಗ್ಗೆ ನಿಮಗೆ ಗೊತ್ತಾಗಲಿದೆ. ನೀವು ನಿಮ್ಮ ನಿಯಂತ್ರಣದಲ್ಲಿ ಇದ್ದರೆ ಯಾವ ಏರಿಳಿತವೂ ನಿಮ್ಮನ್ನು ಏನೂ ಮಾಡಲಾಗದು. ಸಂಗಾತಿಯನ್ನು ದೂರ ಕಳಿಸಿಕೊಂಡು ಸಂಕಟಪಡುವಿರಿ. ನಿಮ್ಮ ಆದಾಯವು ಹೆಚ್ಚು ಮಾಡಿಕೊಳ್ಳುವ ಆಕಾಂಕ್ಷೆಯು ಇರಲಿದೆ. ಸಹೋದ್ಯೋಗಿಗಳ ಸಹಕಾರದಿಂದ ಒತ್ತಡವನ್ನು ಕಡಿಮೆ ಆಗುವುದು. ಮಕ್ಕಳಿಂದ ಪ್ರೀತಿಯನ್ನು ಪಡೆಯುವಿರಿ.

ವೃಷಭ ರಾಶಿ:

ಇಂದು ಲೆಕ್ಕಕ್ಕೆ ಸಿಗದೇ ಇರುವ ಎಷ್ಟೋ ಹಣವನ್ನು ಕಳೆದುಕೊಳ್ಳಬೇಕಾಗುವುದು. ಹುಡುಗಾಟಿಕೆಯನ್ನು ಬಿಡುವುದು ನಿಮಗೆ ಕಷ್ಟವಾದೀತು. ಅತಿಯಾದ ಸಂತೋಷದ ಕ್ಷಣವು ನಿಮ್ಮ ಪಾಲಿಗೆ ಇರಲಿದೆ. ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗಲಿದೆ. ಸೌಂದರ್ಯವರ್ಧನೆಗೆ ಬೇಕಾದ ಸಮಯವನ್ನು ಕೊಡುವಿರಿ. ವ್ಯವಹಾರದಲ್ಲಿ ಗೊಂದಲವಿಟ್ಟುಕೊಳ್ಳುವುದು ಬೇಡ. ನಿಮ್ಮ ಸೋಲನ್ನು ಒಪ್ಪಿಕೊಳ್ಳದೇ ವಾದಿಸುವಿರಿ. ನಿಮ್ಮ ಪರೀಕ್ಷೆಯ ದಿನವು ಇಂದಾಗಿದ್ದು ಫಲಿತಾಂಶವೂ ನಿಮ್ಮ ವರ್ತನೆಯ ಮೇಲಿರುವುದು.

ಮಿಥುನ ರಾಶಿ:

ಆದಾಯದ ವಿಚಾರದಲ್ಲಿ ಹಿನ್ನಡೆಯಾಗಿದ್ದು ನಿಮ್ಮ ತಂತ್ರವು ಪೂರ್ಣವಾಗಿ ಫಲಿಸದು. ಹೂಡಿಕೆಯನ್ನು ನಿಲ್ಲಿಸುವ ಮನಸ್ಸಾಗುವುದು. ನಿಮಗೆ ಆಗದವರ ಮೇಲೆ ಸಲ್ಲದ ದೂರನ್ನು ಕೊಡುವಿರಿ. ತೀರ್ಥಕ್ಷೇತ್ರಗಳಿಗೆ ಹೋಗುವ ಮನಸ್ಸಾಗುವುದು. ನೀರಿನ ವಿಷಯದಲ್ಲಿ ಜಾಗಾರೂಕತೆ ಇರಲಿ. ಕೆಲವರ ತಂತ್ರಕ್ಕೆ ಸಿಲುಕಿ ನೀವು ಒದ್ದಾಡಬೇಕಾಗುವುದು. ನಟರಿಗೆ ಅವಕಾಶವು ಸಿಕ್ಕೂ ಸಿಗದಂತೆ ಆಗಬಹುದು. ಎಲ್ಲ ಸನ್ನಿವೇಶಕ್ಕೂ ಒಂದೇ ಪರಿಹಾರವು ಇರದು. ಒಂದೇ ವಿಚಾರವನ್ನು ಹೆಚ್ಚು ಯೋಚಿಸಿದಷ್ಟೂ ಮನಸ್ಸು ದುರ್ಬಲವಾಗಬಹುದು.

ಕರ್ಕಾಟಕ ರಾಶಿ:

ಕುಟುಂಬ ಜೊತೆ ಯಾವುದಾದರೂ ಧಾರ್ಮಿಕ ಸ್ಥಳಕ್ಕೆ ಪ್ರವಾಸ ಹೋಗುವಿರಿ. ನಿಮ್ಮ ಉದ್ಯೋಗಕ್ಕೆ ಯಾರಿಂದಲಾದರೂ ಹೂಡಿಕೆಯನ್ನು ಮಾಡಿಸಿಕೊಳ್ಳುವ ಪ್ರಯತ್ನವಿರಲಿದೆ‌. ಪ್ರಭಾವೀ ವ್ಯಕ್ತಿಗಳಿಂದ ನಿಮಗೆ ವಂಚನೆಯಾಗಿದೆ ಎಂದನಿಸಬಹುದು. ರಸ್ತೆಯಲ್ಲಿ ಸಂಚರಿಸುವಾಗ ಎಚ್ಚರ. ನಿಮ್ಮ ನಿಯಮಿತ ಚೌಕಟ್ಟನ್ನು ಬಿಟ್ಟು ಆಚೆ ಬರಲು ಆಗದು. ನಿಮ್ಮ ನಡತೆಯಿಂದ ಕುಲಕ್ಕೆ ಅವಮಾನವಾಗಬಹುದು. ನಿದ್ರೆಯನ್ನು ಹೆಚ್ಚು ಮಾಡುವಿರಿ. ಜವಾಬ್ದಾರಿಯನ್ನು ಪಡೆದ ಬೆನ್ನಲ್ಲೇ ಹಿತಶತ್ರುಗಳನ್ನೂ ಹೆಚ್ಚಿಸಿಕೊಳ್ಳುವಿರಿ.

ಸಿಂಹ ರಾಶಿ:

ಮನೆಯಲ್ಲಿ ಹಬ್ಬದ ವಾತಾವರಣ ಇರಲಿದ್ದು ನೀವೂ ಬಹಳ ದಿನಗಳ ಅನಂತರ ಇಂತಹ ಸಂತೋಷವನ್ನು ಪಡೆಯುವಿರಿ. ಕಛೇರಿಯ ಕಾರ್ಯವನ್ನು ಮನೆಯಲ್ಲಿ ಇದ್ದು ಮಾಡಬೇಕಾಗಬಹುದು. ಇಂದು ವ್ಯಾಪಾರವನ್ನು ಮಾಡುವ ಮನಸ್ಸು ಇಲ್ಲದಿದ್ದರೂ ಮನೆಯಲ್ಲಿ ಕುಳಿತು ಬೇಸರವಾಗಬಹುದು. ಎಲ್ಲೇ ಇದ್ದರೂ ನಿಮಗೆ ಬೇಕಾದ ವ್ಯವಸ್ಥೆಯನ್ನು ನೀವು ಮಾಡಿಕೊಳ್ಳುವಿರಿ. ಸಾಮಾಜಿಕ ತಾಣದಲ್ಲಿ ಹೆಚ್ಚು ಸಮಯ ಕಳೆಯುವಿರಿ. ಸ್ನೇಹಿತರ ತಮಾಷೆಯು ನಿಮಗೆ ಇಷ್ಟವಾಗದು. ದ್ವಿಚಕ್ರ ವಾಹನವನ್ನು ಓಡಿಸುವಾಗ ಎಚ್ಚರ ಇರಲಿ. ಸಂಗಾತಿಯ ಮನಃಸ್ಥಿತಿಗೆ ಪೂರಕವಾಗಿ ನಿಮ್ಮ ಆಲೋಚನೆಯೂ ಇರಲಿದ್ದು ನಿಮಗೆ ಖುಷಿಯಾಗುವುದು.

ಕನ್ಯಾ ರಾಶಿ:

ಕೆಲವು ಶುಭ ಸೂಚನೆಗಳು ನಿಮಗೆ ಗೊತ್ತಾಗಲಿದ್ದು ನಿರೀಕ್ಷೆಯೂ ಎಂದಿಗಿಂತ ಹೆಚ್ಚಿರಲಿದೆ. ಮಾತುಗಾರರು ಎಂದಿನ ವಾಚಾಳಿತನವನ್ನು ಕಡಿಮೆಮಾಡುವರು. ಸಿಕ್ಕ ಅವಕಾಶದಲ್ಲಿ ತೃಪ್ತಿ ಪಡೆಯುವುದು ಮುಖ್ಯವಾಗಿರಲಿ. ಮನೆಯ ಕಾರ್ಯದಲ್ಲಿ ಸಮಯವು ಕಳೆದುಹೋಗುವುದು. ನಿಮಗೆ ಗೊತ್ತೇ ಇರದ ಕೆಲಸವನ್ನು ನೀವು ಮಾಡಬೇಕಾದೀತು. ಎಲ್ಲದಕ್ಕೂ ವಿಧಿಯನ್ನು ಹೀಗಳೆಯುವುದಕ್ಕಿಂತ ನಿಮ್ಮ ಪ್ರಯತ್ನವನ್ನು ಮುಂದುವರೆಸಿರಿ. ಮನಶ್ಚಾಂಚಲ್ಯದಿಂದ ಕಛೇರಿಯಲ್ಲಿ ಸರಿಯಾದ ಕೆಲಸವನ್ನು ಮಾಡಲಾಗದು.

ತುಲಾ ರಾಶಿ:

ವಾಗ್ಮಿಗಳು ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವರು. ಸಂಪ್ರದಾಯದ ವಿಚಾರದಲ್ಲಿ ನಿಮಗೆ ಆಸಕ್ತಿಯು ಹೆಚ್ಚಾಗಬಹುದು. ನಿಮ್ಮ ಉಪಕಾರಕ್ಕೆ ಪ್ರತ್ಯುಪಕಾರವು ಸಿಗದೇ ಇರಬಹುದು. ಮನೆಗೆ ಅತಿಥಿಗಳ ಆಗಮನವಾಗಲಿದ್ದು ನಿಮ್ಮ ಇಂದಿನ ಕಾರ್ಯವು ಬದಲಾಗಬಹುದು. ನಿಮ್ಮ ಕರ್ತವ್ಯವನ್ನು ಮಾಡಲು ಹಿಂದೇಟು ಹಾಕುವಿರಿ. ಲೆಕ್ಕಪತ್ರದ ವಿಚಾರದಲ್ಲಿ ನಿಷ್ಠುರವಾದ ಮನೋಭಾವವನ್ನು ಇಟ್ಟುಕೊಳ್ಳುವಿರಿ. ನಿಮ್ಮ ಮನಸ್ಸಿಗೆ ಹಿಡಿಸದೇ ಇರುವವರಿಂದ ದೂರ ಉಳಿಯುವಿರಿ.

ವೃಶ್ಚಿಕ ರಾಶಿ:

ಔದಾಸೀನ್ಯದಿಂದ ವ್ಯಾಪಾರದಲ್ಲಿ ನಷ್ಟವಾಗಲಿದೆ. ಇಂದಿನ ಪ್ರಯಾಣದಿಂದ ಹಿಂಸೆ ಆಗಬಹುದು. ಮಿತ್ರರಿಂದ ಸಿಗಬೇಕಾದ ಹಣಕ್ಕೆ ಕತ್ತರಿ ಬೀಳುವುದು. ನಿರೀಕ್ಷಿತ ಫಲವು ಲಭಿಸದು. ದೇವರ ಬಗ್ಗೆ ಶ್ರದ್ಧೆಯು ಕಡಿಮೆಯಾಗಲಿದೆ. ಆಸ್ತಿಯ ಖರೀದಿಯ ವಿಚಾರದಲ್ಲಿ ನೀವು ಸರಿಯಾದ ಮಾಹಿತಿಯನ್ನು ಪಡೆಯುವುದು ಸೂಕ್ತ. ಸಹೋದ್ಯೋಗಿಗಳ ಮೇಲೆ ನಿಮಗೆ ಅಸೂಯೆ ಉಂಟಾಗಬಹುದು. ನಿಮ್ಮ ಇಚ್ಛಾಶಕ್ತಿಯು ವಹಿಸಿದ ಕೆಲಸವನ್ನು ಪೂರ್ಣಗೊಳಿಸಲು ಸಹಕಾರಿ.

ಧನು ರಾಶಿ:

ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡಿಕೊಂಡು ಅನಂತರ ಬೇಸರಿಸುವರು. ಉದ್ಯಮದ ಕಾರಣ ಇರುವ ಸ್ಥಳದಿಂದ ದೂರ ಹೋಗಬೇಕಾಗುವದು. ಸುಳ್ಳನ್ನಾಡಿ ನಿಮ್ಮ ಕೆಲಸವನ್ನು ಇಂದು ಮಾಡಿಸಿಕೊಳ್ಳುವಿರಿ. ಅಚಾತುರ್ಯದಿಂದ ಹಣ ನಷ್ಟ. ಬೇಡದ ಕಾರ್ಯಕ್ಕೆ ಯಾರಾದರೂ ಪ್ರಚೋದಿಸಿಯಾರು. ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು. ಒಂದು ಕಾರ್ಯಕ್ಕೆ ವಿಘ್ನಗಳು ಬರುತ್ತಿದ್ದು ದೈವಜ್ಞರನ್ನು ಸಂಪರ್ಕಿಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದು ಉತ್ತಮ. ನಿಮ್ಮ ಬಗ್ಗೆ ಯಾರಿಗೂ ಗೊತ್ತಿಲ್ಲ ಮಾಹಿತಿಯು ಗೊತ್ತಾಗುವುದು.

ಮಕರ ರಾಶಿ:

ಕೋಪದ ಸಂದರ್ಭದಲ್ಲಿ ಸಮಾಧಾನವನ್ನು ತಂದುಕೊಳ್ಳುವಿರಿ. ಎಲ್ಲರ ನಡುವೆ ಸಂವಹನ ಮಾಡುವಾಗ ತಾಳ್ಮೆಯಿಂದಿರಿ. ಸರ್ಕಾರ ಕಾರ್ಯವು ಇಂದು ಪೂರ್ಣವಾಗದು ಎಂದು ಅಂದುಕೊಂಡಿದ್ದರೂ ಕೊನೆಗೆ ಕೆಲಸವಾಗುವುದು. ಎಲ್ಲರ ಮೇಲೂ ಅನುಮಾನ ಪಡುವ ದುರಭ್ಯಾಸವು ಬೆಳೆಯಬಹುದು. ಮನೆಯ ಸಮೀಪದಲ್ಲಿಯೇ ನಿಮ್ಮ ಉದ್ಯೋಗವು ಸಿಗಲಿದೆ. ಮನೆಯಲ್ಲಿ ತಾಳ್ಮೆಯಿಂದ ವ್ಯವಹರಿಸಿ. ನಿಮ್ಮ ವಾಹನಕ್ಕಾಗಿ ಖರ್ಚನ್ನು ಮಾಡಬೇಕಾಗುವುದು.

ಕುಂಭ ರಾಶಿ:

ನಿಮಗೆ ಸಾಮಾಜಿಕ ಕಾರ್ಯಗಳಿಗೆ ಪ್ರೇರಣೆ ಸಿಗಬಹುದು. ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಓಡಾಟವು ಅಧಿಕವಾಗಿ ಇರುವುದು. ಸ್ನೇಹಿತರು ನಿಮಗೆ ಸುಳ್ಳು ಹೇಳುವರು. ಮಕ್ಕಳ ವಿದ್ಯಾಭ್ಯಾಸಕ್ಕೆ ನೀವೇ ವಿಶೇಷ ಕಾಳಜಿಯನ್ನು ತೋರಿ ಅವರನ್ನು ಓದಿಗೆ ಪ್ರೇರಣೆ ಕೊಡಬೇಕಾಗುವುದು. ದಿನದ ಕೆಲಸವೇ ಇಂದು ಬಹಳ ಆಗಲಿದ್ದು ಇನ್ನೊಬ್ಬರ ಕೆಲಸವನ್ನು ಮಾಡಿಕೊಡಲು ತಾಳ್ಮೆ ಇರಲಾರದು. ಹೂಡಿಕೆಗೆ ಯಾರಿಂದಲಾದರೂ ಪ್ರೇರಣೆ ಸಿಗಬಹುದು. ಇಂದು ನಿಮ್ಮ ಉತ್ಸಾಹವನ್ನು ಯಾರಿಂದಲೂ ಸಾಧ್ಯವಾಗದು.

ಮೀನ ರಾಶಿ:

ಯಾರದೋ ವಿವಾಹದ ಕಾರ್ಯಕ್ಕೆ ಓಡಾಟ ಮಾಡಬೇಕಾದೀತು. ಒಂದಿಷ್ಟು ಆಯಾಸ ಬಿಟ್ಟರೆ, ಮತ್ತೇನೂ ಆಗದು. ಇನ್ನೊಬ್ಬರ ಬಗ್ಗೆ ನಿಮ್ಮಲ್ಲಿ ಕುತೂಹಲ ಇರಲಿದೆ. ಸಜ್ಜನರ ಜೊತೆ ಸಮಯ ಕಳೆಯುವ ಅವಕಾಶ ಸಿಗುವುದು. ಸಂಗಾತಿಯ ಜೊತೆ ಭಿನ್ನಮತವು ಬರಬಹುದು. ಕುಟುಂಬದ ಹಿರಿಯರ ಅನಾರೋಗ್ಯದ ಕಾರಣ ನಿಮ್ಮ ಸ್ವಂತ ಕಾರ್ಯವನ್ನು ಮಾಡಿಕೊಳ್ಳಲಾಗದು. ಆಭರಣ ಖರೀದಿಗೆ ಉತ್ತಮ ದಿನವಿದಾಗಲಿದೆ. ವೃದ್ಧರ ಸೇವೆಯಲ್ಲಿ ತೊಡಗಿಕೊಳ್ಳುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಶತಭಿಷಾ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ರೇವತೀ, ಯೋಗ : ಶುಭ, ಕರಣ : ಭದ್ರ, ಸೂರ್ಯೋದಯ – 06 – 46 am, ಸೂರ್ಯಾಸ್ತ – 06 – 29 pm, ಇಂದಿನ ಶುಭಾಶುಭ ಕಾಲ : ರಾಹು 09:42 – 11:10, ಯಮಗಂಡ ಕಾಲ 14:06 – 15:34, ಗುಳಿಕ ಕಾಲ 06:47 – 08:14

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 21ರ ದಿನಭವಿಷ್ಯ

ಈ ದಿನ ರಾಮದೇವರ ದೇವಸ್ಥಾನಕ್ಕೆ ಹಣ್ಣನ್ನು ನೈವೇದ್ಯಕ್ಕೆ ನೀಡಿ. ಇದರಿಂದ ವಿರಸಗಳು ದೂರವಾಗಿ ಸಾಮರಸ್ಯ ಮೂಡುತ್ತದೆ. ಸರ್ಕಾರಿ ಕೆಲಸಗಳು ವಿಳಂಬ ಆಗುತ್ತಾ ಇದ್ದಲ್ಲಿ ಅದನ್ನು ಪೂರ್ಣಗೊಳಿಸಲು ಸಹಾಯ ಆಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಈ ದಿನ ಕೆಲಸ- ಕಾರ್ಯಗಳಲ್ಲಿ ಒಂದು ಬಗೆಯ ನಿರಾಸಕ್ತಿಯನ್ನು ಕಾಡಲಿದೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕು ಅಂದರೆ ವೈರಾಗ್ಯವು ನಿಮ್ಮನ್ನು ಆವರಿಸಲಿದೆ. ಕೃಷಿ ವೃತ್ತಿಯಲ್ಲಿ ತೊಡಗಿಕೊಂಡವರಿಗೆ ಆದಾಯದಲ್ಲಿ ಇಳಿಕೆ ಆಗುವ ಸೂಚನೆ ಸಿಗಬಹುದು. ಅಥವಾ ಈಗಾಗಲೇ ಮೊತ್ತವನ್ನು ಅಂತಿಮ ಮಾಡಿಕೊಂಡು ಹೋದವರು ಅಷ್ಟು ಹಣವನ್ನು ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಬಹುದು.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಮನೆಯ ಕೆಲಸಗಳನ್ನು ಮಾಡಿಸುತ್ತಿರುವವರಿಗೆ ಬಹಳ ಸಂತೋಷ- ಸಮಾಧಾನ ದೊರೆಯುವಂತಹ ದಿನ ಇದಾಗಿರುತ್ತದೆ. ಹೋಮ್ ಥಿಯೇಟರ್, ಇಂಟಿರೀಯರ್ ಸೇರಿದಂತೆ ನೀವು ಬಹಳ ಸಮಯದಿಂದ ಬಯಸುತ್ತಿದ್ದ ಕೆಲವು ಕೆಲಸಗಳನ್ನು ಮಾಡಿಸಿದ್ದಲ್ಲಿ ಅದರಿಂದ ಖುಷಿ ಪಡಲಿದ್ದೀರಿ. ಇನ್ನು ನಿಮ್ಮ ಸೋದರ- ಸೋದರಿಯರ ಜತೆಗೆ ಇರುವಂಥ ಭಿನ್ನಾಭಿಪ್ರಾಯವನ್ನು ದೂರ ಮಾಡಿಕೊಳ್ಳುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮ್ಮಲ್ಲಿ ಯಾರಿಗೆ ಬೆನ್ನು ನೋವು, ಮಧುಮೇಹ ಅಥವಾ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯವು ಕಾಡುತ್ತಿದ್ದಲ್ಲಿ ಅದಕ್ಕೆ ಸೂಕ್ತ ವೈದ್ಯೋಪಚಾರಗಳು ದೊರೆಯಲಿವೆ. ಯೂಟ್ಯೂಬರ್ ಗಳು ಇದ್ದಲ್ಲಿ ವೃತ್ತಿಗೆ ಬೇಕಾದಂಥ ಸಲಕರಣೆಗಳನ್ನು ಖರೀದಿ ಮಾಡಲಿಕ್ಕಾಗಿ ಹಣವನ್ನು ಹೊಂದಿಸಿಕೊಳ್ಳಲಿದ್ದೀರಿ ಅಥವಾ ನಿಮ್ಮಲ್ಲಿ ಕೆಲವರು ಖರೀದಿಯನ್ನೇ ಮಾಡುವ ಎಲ್ಲ ಸಾಧ್ಯತೆಗಳು ಇವೆ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 21ರ ದಿನಭವಿಷ್ಯ

ಈ ದಿನ ಅಶಕ್ತರಿಗೆ ಹೊದಿಕೆ, ಸ್ವೆಟರ್, ಶಾಲು ಇಂಥವುಗಳನ್ನು ನೀಡುವುದರಿಂದ ಆರೋಗ್ಯ ಸಮಸ್ಯೆಗಳು ದೂರ ಆಗುತ್ತವೆ. ಒಂದು ವೇಳೆ ಬಹಳ ಸಮಯದಿಂದ ಸಾಲ ವಸೂಲಿ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದಿದ್ದಲ್ಲಿ ನಿಮಗೆ ಸಾಧಕ ಆಗುವ ಬೆಳವಣಿಗೆಗಳು ಆಗಲಿವೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಕಾರ್ಪೊರೇಟ್ ವಲಯದಲ್ಲಿ ಕೆಲಸ ನಿರ್ವಹಿಸುವವರಿಗೆ ತಂಡವನ್ನು ರೆಸಾರ್ಟ್, ರೆಸ್ಟೋರೆಂಟ್ ಅಥವಾ ಇನ್ಯಾವುದೇ ಚಟುವಟಿಕೆಗಾಗಿ ಕರೆದುಕೊಂಡು ಹೋಗುವುದಕ್ಕೆ ಯೋಜನೆ ರೂಪಿಸುವುದಕ್ಕೆ ನಿಮಗೇ ಜವಾಬ್ದಾರಿಯನ್ನು ವಹಿಸಬಹುದು. ಇನ್ನು ಮುಂದೆ ನಿಮಗೆ ಸಿಗಬಹುದಾದ ಬಡ್ತಿ ಅಥವಾ ಹುದ್ದೆಯ ಬಗ್ಗೆ ಸುಳಿವನ್ನು ಸಹ ಬಿಟ್ಟುಕೊಡಬಹುದು. ಆದ್ದರಿಂದ ಮಾತುಕತೆಯ ವೇಳೆ ಎಚ್ಚರ ವಹಿಸಿ

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಈ ದಿನ ಏನನ್ನು ಕೇಳುವುದಕ್ಕೂ ಹಿಂಜರಿಕೆ ಇಟ್ಟುಕೊಳ್ಳಬೇಡಿ. ನಿರ್ದಿಷ್ಟ ವ್ಯಕ್ತಿಯಿಂದ ಇಂಥದ್ದೊಂದು ನೆರವು ದೊರೆಯಬಹುದು ಎಂದೆನಿಸಿದಲ್ಲಿ ಅದನ್ನು ಬಾಯಿ ಬಿಟ್ಟು ಕೇಳಿ. ಮಕ್ಕಳ ಶಿಕ್ಷಣದ ಸಲುವಾಗಿ ನಿಮ್ಮಲ್ಲಿ ಕೆಲವರು ಹೂಡಿಕೆ ಅಥವಾ ಉಳಿತಾಯವನ್ನು ಆರಂಭಿಸುವ ಸಾಧ್ಯತೆಗಳಿವೆ. ಇನ್ನು ನಿಮ್ಮ ತಂದೆ- ತಾಯಿ ಅಥವಾ ಮನೆಯಲ್ಲಿ ಹಿರಿಯರು ಯಾರಾದರೂ ಇರಬಹುದು, ಅವರಿಗಾಗಿಯೇ ಆರೋಗ್ಯ ವಿಮೆ ಖರೀದಿಸಬೇಕು ಎಂದು ನಿರ್ಧಾರವನ್ನು ಮಾಡಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ನಿಮ್ಮ ಒಳಗೆ ಒಂದು ಯೋಚನೆ ಇದ್ದು, ಅದನ್ನು ಬಹಳ ಸಮಯದಿಂದ ಸಂಬಂಧಪಟ್ಟವರ ಎದುರಿಗೆ ಚರ್ಚೆಯನ್ನೇ ಮಾಡಿಲ್ಲ ಅಂತಾದಲ್ಲಿ ಈ ದಿನ ಅದಕ್ಕೊಂದು ಅವಕಾಶ ದೊರೆಯಲಿದೆ. ನಿಮ್ಮಲ್ಲಿ ಯಾರಾದರೂ ಫ್ರಾಂಚೈಸಿ ಅಥವಾ ಡಿಸ್ಟ್ರಿಬ್ಯೂಷನ್ ಪಡೆದುಕೊಳ್ಳುವ ಸಲುವಾಗಿ ಯೋಚನೆ ಮಾಡುತ್ತಿದ್ದಲ್ಲಿ ಅದಕ್ಕೆ ಬೇಕಾದಂಥ ಬೆಂಬಲ, ಹಣಕಾಸಿನ ಅನುಕೂಲ ಮೊದಲಾದವು ದೊರೆಯುವ ಸಾಧ್ಯತೆ ಹೆಚ್ಚಿದೆ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 21ರ ದಿನಭವಿಷ್ಯ

ಈ ದಿನ ಹನುಮಾನ್ ಚಾಲೀಸಾ ಪಠಣ ಮಾಡಿ. ನಿಮಗಿರುವ ಸಂಪನ್ಮೂಲದ ಒಳಗೆ ಕೆಲಸ- ಕಾರ್ಯಗಳು ಮುಗಿಯಬಹುದಾ ಎಂಬ ಆತಂಕದಲ್ಲಿ ಇರುವವರಿಗೆ ಆ ಚಿಂತೆಯಿಂದ ಹೊರಗೆ ಬರಬಹುದು. ಸರಿಯಾದ ಮಾರ್ಗೋಪಾಯ ಗೋಚರ ಆಗಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಕುಟುಂಬ ಸದಸ್ಯರ ಒತ್ತಾಯದ ಮೇಲೆ ಇಎಂಐನಲ್ಲಿ ಕೆಲವು ವಸ್ತುಗಳನ್ನು ಖರೀದಿ ಮಾಡುವಂಥ ಸನ್ನಿವೇಶ ಎದುರಾಗುತ್ತದೆ. ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಮುಖ್ಯ ಯೋಜನೆಯೊಂದರ ಬಗ್ಗೆ ಆಪ್ತರು- ಸ್ನೇಹಿತರ ಜೊತೆಗೆ ಚರ್ಚೆಯನ್ನು ನಡೆಸಲಿದ್ದೀರಿ. ನಿಮ್ಮಲ್ಲಿ ಕೆಲವರು ವಾಹನಗಳ ಚಾಲನೆ ಕಲಿಯುವುದಕ್ಕಾಗಿ ಡ್ರೈವಿಂಗ್ ಕ್ಲಾಸ್ ಸೇರುವ ಬಗ್ಗೆ ಅಂತಿಮ ತೀರ್ಮಾನವನ್ನು ಕೈಗೊಳ್ಳುವ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಪ್ರಾಣಾಯಾಮ- ಯೋಗ ಇಂಥದ್ದರ ತರಗತಿಯನ್ನು ನಡೆಸುತ್ತಿರುವವರಿಗೆ ದೂರದ ಪ್ರದೇಶಗಳಿಂದ ಆಹ್ವಾನ ದೊರೆಯುವ ಯೋಗ ಇದೆ. ಇನ್ನೂ ಮುಂದುವರಿದು ಹೇಳಬೇಕು ಅಂದರೆ, ಅಲ್ಪಾವಧಿಗಾದರೂ ವಿದೇಶಗಳಿಗೆ ತೆರಳುವಂಥ ಸಾಧ್ಯತೆಯನ್ನು ಸಹ ತಳ್ಳಿ ಹಾಕುವಂತಿಲ್ಲ. ಸಾಮಾಜಿಕವಾಗಿ ಬಹಳ ಮುಖ್ಯವಾದ ವಿಚಾರವೊಂದರ ಪರವಾಗಿ ಪ್ರಚಾರ ಅಥವಾ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಳ್ಳುವ ಸನ್ನಿವೇಶಗಳು ಎದುರಾಗಲಿವೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಫ್ಲ್ಯಾಟ್, ವಿಲ್ಲಾ ಅಥವಾ ಗೇಟೆಡ್ ಕಮ್ಯುನಿಟಿಯಲ್ಲಿ ಕಟ್ಟಿರುವ ಮನೆಯನ್ನು ಖರೀದಿ ಮಾಡುವ ಸಲುವಾಗಿ ಹುಡುಕಾಟ ನಡೆಸುತ್ತಿರುವವರಿಗೆ ಈ ದಿನ ಅಂಥದ್ದೊಂದು ಸಿಗುವ ಸಾಧ್ಯತೆಗಳು ಹೆಚ್ಚಿವೆ. ಸಂಗಾತಿಯ ಜೊತೆಗೆ ತೆರಳಬೇಕು ಎಂದು ಬಹಳ ಸಮಯದಿಂದ ಅಂದುಕೊಂಡ ಸ್ಥಳ ಯಾವುದಾದರೂ ಇದ್ದಲ್ಲಿ ಈ ದಿನ ಅಲ್ಲಿಗೆ ಹೋಗುವಂಥ ಯೋಗ ಇದೆ. ನಿಮ್ಮಲ್ಲಿ ಕೆಲವರು ದಾನ- ಧರ್ಮದಲ್ಲಿ ತೊಡಗಿಕೊಳ್ಳುವ ಸಾಧ್ಯತೆಗಳು ಸಹ ಕಂಡುಬರುತ್ತಿದೆ.

ಲೇಖನ- ಸ್ವಾತಿ ಎನ್.ಕೆ.

Source link

ಈ ಆಹಾರಗಳನ್ನು ಸೇವನೆ ಮಾಡ್ತೀರಾ? ಹಾಗಿದ್ರೆ ಫ್ಯಾಟಿ ಲಿವರ್ ಸಮಸ್ಯೆ ಬರುತ್ತೆ ಹುಷಾರ್! – Kannada News | Fatty Liver Disease: Foods to Avoid

ಮೊದಲೆಲ್ಲಾ 40 ರಿಂದ 50 ವರ್ಷ ವಯಸ್ಸಿನವರಲ್ಲಿ ಕೊಬ್ಬಿನ ಪಿತ್ತಜನಕಾಂಗದ ಅಥವಾ ಫ್ಯಾಟಿ ಲಿವರ್ (Fatty Liver) ಸಮಸ್ಯೆ ಕಂಡುಬರುತ್ತಿತ್ತು, ಆದರೆ ಈಗ, ಯುವಕ, ಯುವತಿಯರು ಜೊತೆಗೆ ಮಕ್ಕಳಲ್ಲಿಯೂ ಕೂಡ ಈ ಕಾಯಿಲೆಗಳು ಕಾಣಸಿಗುತ್ತಿದೆ. ವೈದ್ಯರ ಪ್ರಕಾರ, ಇದಕ್ಕೆ ಮುಖ್ಯ ಕಾರಣ ನಮ್ಮ ಆಹಾರ ಪದ್ಧತಿ. ಏಕೆಂದರೆ ಮದ್ಯಪಾನ ಮಾಡದವರಲ್ಲಿಯೂ ಈ ರೀತಿಯ ಸಮಸ್ಯೆ ಕಂಡುಬರುತ್ತಿದ್ದು ಇದಕ್ಕೆ ನಾವು ಸೇವಿಸುತ್ತಿರುವ ಆಹಾರವೇ ಕಾರಣವಾಗಿದೆ. ತಜ್ಞರ ಪ್ರಕಾರ, ಜನರು ಪ್ರತಿನಿತ್ಯ ಸೇವನೆ ಮಾಡುವ ಆಹಾರದಲ್ಲಿಯೇ ಫ್ಯಾಟಿ ಲಿವರ್ ಉಂಟುಮಾಡುವ ಕೆಲವು ವಿಷಯಗಳಿರುತ್ತವೆ. ಹಾಗಾದರೆ ಯಾವ ರೀತಿಯ ಆಹಾರಗಳ ಸೇವನೆ ಒಳ್ಳೆಯದಲ್ಲ, ಇದು ಯಾವ ರೀತಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಡಾ. ಅಜಯ್ ಕುಮಾರ್ ಹೇಳುವ ಪ್ರಕಾರ, ಕೆಲವರು ಪ್ರತಿದಿನ ಹೊರಗಿನ ಆಹಾರ ಸೇವನೆ ಮಾಡುವಂತಹ ಅಭ್ಯಾಸವನ್ನು ಹೊಂದಿರುತ್ತಾರೆ. ಅದರಲ್ಲಿಯೂ ಹೊರಗೆ ಸಿಗುವಂತಹ ಬ್ರೆಡ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕರಿಸಿದ ಹಿಟ್ಟನ್ನು ಬಳಸಲಾಗುತ್ತದೆ. ಇದನ್ನು ಸೇವನೆ ಮಾಡುವುದು ನೇರವಾಗಿ ಕೊಬ್ಬಿನ ಯಕೃತ್ತಿಗೆ ಕಾರಣವಾಗುತ್ತದೆ. ಹೆಚ್ಚುವರಿಯಾಗಿ, ಜನರು ಹೆಚ್ಚಿನ ಪ್ರಮಾಣದಲ್ಲಿ ತಂಪು ಪಾನೀಯ, ಸಿಹಿತಿಂಡಿ ಮತ್ತು ಕರಿದ ಆಹಾರಗಳನ್ನು ಸೇವಿಸುತ್ತಾರೆ, ಇದು ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತದೆ.

ಫ್ಯಾಟಿ ಲಿವರ್ ಹೇಗೆ ಉಂಟಾಗುತ್ತದೆ?

ಡಾ. ಅಜಯ್ ಹೇಳುವ ಪ್ರಕಾರ, ಯಕೃತ್ತಿನಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸಿದಾಗ ಫ್ಯಾಟಿ ಲಿವರ್ ಉಂಟಾಗುತ್ತದೆ. ಅದರಲ್ಲಿಯೂ ಕೊಬ್ಬಿನ ಪಿತ್ತಜನಕಾಂಗ ಅಂದರೆ ಫ್ಯಾಟಿ ಲಿವರ್, ಗ್ರೇಡ್ 1, ಗ್ರೇಡ್ 2 ಲಿವರ್ ಫೈಬ್ರೋಸಿಸ್ ಮತ್ತು ಲಿವರ್ ಸಿರೋಸಿಸ್‌ನಂತಹ ಹಲವಾರು ವಿಧಗಳಲ್ಲಿ ಬರುತ್ತದೆ. ಇವುಗಳಲ್ಲಿ, ಲಿವರ್ ಸಿರೋಸಿಸ್ ಅತ್ಯಂತ ಅಪಾಯಕಾರಿ, ಇದಕ್ಕೆ ಲಿವರ್ ಕಸಿ ಅಗತ್ಯವಿರಬಹುದು. ಇನ್ನು, ಆಲ್ಕೋಹಾಲ್ ಕುಡಿಯವವರಲ್ಲಿ, ಫ್ಯಾಟಿ ಲಿವರ್ ಅನ್ನು ಆಲ್ಕೊಹಾಲ್ಯುಕ್ತವಲ್ಲದ ಫ್ಯಾಟಿ ಲಿವರ್ ಕಾಯಿಲೆ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: Liver Health: ಲಿವರ್ ಚೆನ್ನಾಗಿರಬೇಕು ಅಂದರೆ ಈ ಹಣ್ಣುಗಳನ್ನು ತಪ್ಪದೆ ತಿನ್ನಿ

ಫ್ಯಾಟಿ ಲಿವರ್ ಆರಂಭಿಕ ಲಕ್ಷಣಗಳು?

ಆರಂಭದಲ್ಲಿ, ಈ ಸಮಸ್ಯೆಯ ಲಕ್ಷಣಗಳು ಅಷ್ಟಾಗಿ ಗೋಚರಿಸುವುದಿಲ್ಲ, ಆದರೆ ಕ್ರಮೇಣ ಈ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇವುಗಳಲ್ಲಿ ಆಯಾಸ, ಹೊಟ್ಟೆಯ ಬಲಭಾಗದಲ್ಲಿ ಸಣ್ಣ ನೋವು ಅಥವಾ ತೂಕ ಹೆಚ್ಚಾಗುವಂತಹ ಸಮಸ್ಯೆಗಳು ಸೇರಿವೆ. ಒಬ್ಬ ವ್ಯಕ್ತಿಯಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ, ಅವರು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬಾರದು. ಏಕೆಂದರೆ ಕೊಬ್ಬಿನ ಯಕೃತ್ತಿನ ರೋಗ ಅಥವಾ ಫ್ಯಾಟಿ ಲಿವರ್ ಸಮಸ್ಯೆ ಆರಂಭಿಕ ಹಂತಗಳಲ್ಲಿ ಸುಲಭವಾಗಿ ನಿಯಂತ್ರಿಸಬಹುದು, ಆದರೆ ಒಮ್ಮೆ ಯಕೃತ್ತು ಸಿರೋಸಿಸ್ ಉಂಟಾದರೆ, ರೋಗಿಯ ಸ್ಥಿತಿ ಗಮನಾರ್ಹವಾಗಿ ಹದಗೆಡಬಹುದು.

ಫ್ಯಾಟಿ ಲಿವರ್ ತಡೆಯಲು ಸಲಹೆಗಳು:

  • ಆಹಾರದಲ್ಲಿ ಹಸಿರು ತರಕಾರಿ ಮತ್ತು ಹಣ್ಣುಗಳ ಸೇವನೆ ಮಾಡಿ.
  • ಪ್ರತಿದಿನ ವ್ಯಾಯಾಮ ಮಾಡಿ.
  • ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.
  • ಸಕ್ಕರೆ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊನೆಗೂ ಎಚ್ಚೆತ್ತ ಆರೋಗ್ಯ ಇಲಾಖೆ: ಉಚಿತ ಸ್ಕ್ಯಾನಿಂಗ್‌ಗೆ ಪರ್ಯಾಯ ವ್ಯವಸ್ಥೆ – Kannada News | Health department announces alternative system for free scanning after tv9 report

ಬೆಂಗಳೂರು, ಫೆಬ್ರವರಿ 20: ಆರೋಗ್ಯ ಇಲಾಖೆಯ‌ ನಿರ್ಲಕ್ಷ್ಯ ಬಡರೋಗಿಗಳ (Patients) ಜೇಬಿಗೆ ಕತ್ತರಿ ಹಾಕಿದ್ದು, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 13 ಜಿಲ್ಲೆಯಲ್ಲಿ ಚಾಲ್ತಿಯಲ್ಲಿದ್ದ ಉಚಿತ ಸ್ಕ್ಯಾನಿಂಗ್ (Free scanning) ಏಕಾಏಕಿ ಸ್ಥಗಿತವಾಗಿತ್ತು. ಬಡರೋಗಿಗಳ ಪರ ನಿಮ್ಮ ಟಿವಿ9 ಸುದ್ದಿ ಪ್ರಸಾರ ಬೆನ್ನಲ್ಲೇ ಎತ್ತಚ್ಚ ಆರೋಗ್ಯ ಇಲಾಖೆ ಇದೀಗ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆ.

ಉಚಿತ ಸ್ಕ್ಯಾನಿಂಗ್‌ಗೆ ಪರ್ಯಾಯ ವ್ಯವಸ್ಥೆ

ಬಡ ರೋಗಿಗಳಿಗೆ ಅನುಕೂಲವಾಗ್ತಿದ್ದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿದ್ದ Ct -MRI ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಉಚಿತ ಸೇವೆಯನ್ನ ಏಕಾಏಕಿ ನಿಲ್ಲಿಸಿದ್ದರಿಂದ ಬಡರೋಗಿಗಳ ಜೇಬಿಗೆ ಕತ್ತರಿ ಬಿದ್ದಿತ್ತು. ಹಣ ಕೊಟ್ಟು ಸ್ಕ್ಯಾನಿಂಗ್ ಮಾಡಿಸಬೇಕಾದ ಪರಿಸ್ಥಿತಿ ನಿರ್ಮಾವಾಗಿತ್ತು. ಬಡರೋಗಿಗಳಿಗಾಗ್ತಿದ್ದ ಅನ್ಯಾಯದ ವಿರುದ್ಧ ಟಿವಿ9 ನಿರಂತರವಾಗಿ ಸುದ್ದಿ ಬಿತ್ತರಿಸಿತ್ತು. ಕ್ರಶ್ನಾ ಡೈಯಾಗ್ಲೋಸ್ಟಿಕ್‌‌ಗೆ ಸರ್ಕಾರ ಬಾಕಿ ಹಣ ಪಾವತಿಮಾಡದ ಹಿನ್ನೆಲೆ ಉಚಿತ ಸೇವೆ ನಿಲ್ಲಿಸಿರೋದನ್ನ ಪ್ರಶ್ನೆ ಮಾಡಿ ಸರ್ಕಾರದಲ್ಲಿ ಬಡವರ ಆರೋಗ್ಯಕ್ಕೆ ಹಣ ಇಲ್ವಾ ಎಂದು ಸರ್ಕಾರಕ್ಕೆ ಬಿಸಿಮುಟ್ಟಿಸಲಾಗಿತ್ತು.

ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ; ಸರ್ಕಾರ ವಿರುದ್ಧ ಜನಾಕ್ರೋಶ!

ಇನ್ನು ಸ್ಕ್ಯಾನಿಂಗ್ ಸೌಲಭ್ಯ ನಿರ್ವಹಣೆ ಮಾಡ್ತಿದ್ದ ಕ್ರಶ್ನಾ ಡೈಯಾಗ್ನೋಸ್ಟಿಕ್ ಕಂಪನಿ, ಈ ಹಿಂದೆ ಮೇಲ್ ಮೂಲಕ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿ‌ ಪಾವತಿಸಬೇಕಿರೋ 143.78 ಕೋಟಿ ರೂ ಬಾಕಿ ಹಣ ಬಿಡುಗಡೆ ಮಾಡದೆ‌ ಇದ್ರೆ ಉಚಿತ ಸೇವೆ ನಿಲ್ಲಿಸೋದಾಗಿ ಎಚ್ಚರಿಸಿತ್ತು‌. ಕಂಪನಿಯ ಆರ್ಥಿಕ ಸ್ಥಿತಿಯನ್ನ ಪ್ರಸ್ತಾಪಿಸಿ ಫೆಬ್ರುವರಿ 17 ರೊಳಗೆ ಕನಿಷ್ಟ 50 ಕೋಟಿ‌ ರೂ ಹಣ ಪಾವತಿ ಮಾಡದೆ ಇದ್ರೆ ಉಚಿತ ಸೇವೆ ಸ್ಥಗಿತಗೊಳಿಸುವ ಎಚ್ಚರಿಕೆ‌ ನೀಡಿದ್ದಾದರೂ ಅಧಿಕಾರಿಗಳು ಮಾತ್ರ ನಿರ್ಲಕ್ಷವಹಿಸಿದ್ದರು.

ಉಚಿತ ಸೇವೆ ಸ್ಥಗಿತವಾಗಿ ರೋಗಿಗಳು ಪರದಾಡುವಂತಾಗಿದ್ದರೂ ಅಧಿಕಾರಿಗಳು ಗಮನ ಹರಿಸದೆ ನಿರ್ಲಕ್ಷ್ಯ ವಹಿಸಿದ್ದರ. ಕ್ರಶ್ನಾ ಡೈಯಾಗ್ನೋಸ್ಟಿಕ್ ಕಂಪನಿ ಸೇವೆ ಸ್ಥಗಿತ ಮಾಡುವುದಾಗಿ ಹೇಳಿದರು ಆರೋಗ್ಯ ಇಲಾಖೆ ಪರ್ಯಾಯ ಕ್ರಮವಹಿಸದೇ ನಿರ್ಲಕ್ಷ್ಯ ಮಾಡಿತ್ತು. ಇದರಿಂದ ರೋಗಿಗಳಿಗೆ ಸಮಸ್ಯೆ ಎದುರಾಗಿತ್ತು. ಜೊತೆಗೆ ಖಾಸಗಿಯಲ್ಲಿ ಸಾವಿರಾರು ರೂ ದುಡ್ಡು ಖರ್ಚು ಮಾಡಿ ಸ್ಕ್ಯಾನ್​ ಮಾಡಿಸುವುದು ಕಷ್ಟ. ಹೀಗಾಗಿ ಸಮಸ್ಯೆಗೆ ಪರಿಹಾರ ಒದಗಿಸಿ ರೋಗಿಗಳಿಗೆ ತೊಂದರೆಯಾಗದ್ದಂತೆ ಅನುಕೂಲಕ್ಕೆ ಸರ್ಕಾರವನ್ನ ಒತ್ತಾಯಿಸಲಾಗಿತ್ತು.

ಇನ್ನು 13 ಜಿಲ್ಲೆಯಿಂದಲೂ ರೋಗಿಗಳ ಅಳಲನ್ನು ಟಿವಿ9 ಎಳೆಎಳೆಯಾಗಿ ಬಿಚ್ಚಿಡುವ ಮೂಲಕ ಸರ್ಕಾರಕ್ಕೆ ಪ್ರಶ್ನೆ‌ ಮಾಡ್ತೋ ಎಚ್ಚೆತ್ತ NHM ರಾಷ್ಟ್ರೀಯ ಆರೋಗ್ಯ ಅಭಿಯಾನದ ಡೈರೆಕ್ಟ್ ತಾತ್ಕಾಲಿಕವಾಗಿ ಖಾಸಗಿ ಸ್ಕ್ಯಾನಿಂಗ್ ಸೆಂಟರ್, ಖಾಸಗಿ ಆಸ್ಪತ್ರೆ, ಮೆಡಿಕಲ್ ಕಾಲೇಜಿನಲ್ಲಿ ಉಚಿತ ಸ್ಕ್ಯಾನಿಂಗ್ ವ್ಯವಸ್ಥೆ‌ ಮಾಡಿದ್ದು, ಸ್ಥಗಿತವಾಗಿರೊ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಎರಡ್ಮೂರ ದಿನದಲ್ಲಿ ಪುನಃ ಉಚಿತ ಸ್ಕ್ಯಾನಿಂಗ್ ಸೌಲಭ್ಯ ಒದಗಿಸಲು ಕ್ರಮವಹಿಸುವ ಭರವಸೆ ನೀಡಿದ್ದಾರೆ.

ಸ್ಕ್ಯಾನಿಂಗ್ ವಿಚಾರದಲ್ಲಿ ನಡಿತಾ ಕಳ್ಳಾಟ? ಆರೋಗ್ಯ ಸಚಿವರು ಹೇಳಿದ್ದಿಷ್ಟು

ಇನ್ನು 143 ಕೋಟಿ ರೂ ಬಾಕಿ ಹಣ ಪಾವತಿಗೆ ಪಟ್ಟು ಹಿಡಿದಿರುವ ಕ್ರಶ್ನಾ ಡೈಯಾಗ್ಲೋಸ್ಟಿಕ್ ಕಂಪನಿಯ ಮೇಲೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೆಲ ಆರೋಪ ಮಾಡಿದ್ದು, ಕಂಪನಿಗೆ ಅಷ್ಟು ಹಣ ಪಾವತಿಸಲೇಬೇಕಿಲ್ಲ, ಹೆಚ್ಚುವರಿ ಸ್ಕ್ಯಾನಿಂಗ್‌ಗಳನ್ನ ತೋರಿಸಿ ಬಿಲ್ ಮಾಡಿದ್ದಾರೆಂದು ಆರೋಪಿಸಿದರು. ಎಲ್ಲಾ ಕಡೆ ಎಂಆರ್​ಐ ಸ್ಕ್ಯಾನಿಂಗ್, ಸಿಟಿ ಸ್ಕ್ಯಾನ್ ಸರಿ ಇಲ್ಲ ಅಂತ ಹೇಳಕ್ಕೆ ಆಗಲ್ಲ, 13 ಕಡೆಗಳಲ್ಲಿ ಎಂಆರ್ ಐ ಸ್ಕ್ಯಾನ್ ಮಾತ್ರ ವರ್ಕ್ ಆಗ್ತಿಲ್ಲ, ಎಲ್ಲಿ ಸಮಸ್ಯೆ ಆಗಿದೆಯೋ ಅಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.

2019ರಿಂದ ಕ್ರಶ್ನಾ ಡಯಾಗ್ನೋಸ್ಟಿಕ್ ಡಿಸ್ಪ್ಯೂಟ್ ಇತ್ತು, ಅಂದಿನಿಂದ ಶೇಕಾಡ 5% ಹೆಚ್ಚಳ ಕೇಳಿದ್ದರು, ನೂರಾರು ಕೋಟಿ ಅಂತಿದ್ದಾರೆ, ಆದರೆ ಅಷ್ಟು ಕೊಡಲು ಆಗಲ್ಲ, ಡಿಸೆಂಬರ್​​ನಲ್ಲಿ ನಮ್ಮ ಸರ್ಕಾರ ಬಂದಿದೆ. 2024ರ ಆಗಸ್ಟ್ ಎಕ್ಸೆಸ್ ಸ್ಕ್ಯಾನ್ ಆಗ್ತಿರೋದು ತಿಳಿದಿದೆ. ನಾವು ಈ ಕುರಿತು ಪರಿಶೀಲನೆ ಮಾಡಿದ್ದೇವೆ. ಸ್ಟ್ಯಾಸ್ಟ್ ಮೂಲಕ ಹೋಗಬೇಕು ಅಂತ ತೀರ್ಮಾನ ಮಾಡಿದ್ವಿ. ಈ ಹಿಂದೆ ಅವರು ಹೇಗೆ ಸ್ಕ್ಯಾನ್ ಮಾಡಿದ್ರಿ ಅಂತ ವರದಿ ಕೇಳಿದ್ವಿ ಹೊಸ ಸಿಸ್ಟಮ್ ತಂದ ಮೇಲೆ ಕಳ್ಳಾಟ ಬಯಲಾಗಿದೆ ಎಂದಿದ್ದಾರೆ.

ಸ್ಟ್ಯಾಸ್ಟ್ ನಂತ್ರ ಸ್ಕ್ಯಾನಿಂಗ್ ಕೇಸ್ ಬಹಳಷ್ಟು ಇಳಿಕೆ ಆಗಿದೆ. ಹಿಂದಿನ ಸ್ಕ್ಯಾನಿಂಗ್ ರಿಪೋರ್ಟ್ ಕೊಡಿ ಅಂತ ಕೇಳಿದ್ದೇವೆ, ಆದರೆ ಈ ತನಕ ವರದಿ ನೀಡಿಲ್ಲ. 143 ಕೋಟಿ ರೂಪಾಯಿ ಬರಲು ಸಾಧ್ಯವಿಲ್ಲ ಅಂದಿದ್ದೇವೆ. ದೊಡ್ಡ ಪ್ರಮಾಣದಲ್ಲಿ ಇಳಿಕೆ ಆಗಿದೆ. ಇದು ಚೌಕಾಸಿ ಅಲ್ಲ, ಇಲ್ಲಿ ಹೀಗೆ ಮಾಡಲು ಆಗೋದಿಲ್ಲ, ಎಷ್ಟು ಹಣ ಕೊಡಬೇಕು ಅನ್ನೊ ಬಗ್ಗೆ ಗೈಡ್ಲೈನ್ಸ್ ಬೇಕು. ಅವರಿಗೆ ಅಂತಿಮವಾಗಿ ಇಂತಿಷ್ಟು ಹಣ ಕೊಡಲು ಸಾಧ್ಯ ಅಂತ ಹೇಳುತ್ತೇವೆ. ಎಲ್ಲೆಲ್ಲಿ ಸಮಸ್ಯೆ ಆಗಿದೆಯೋ ಅಲ್ಲೆಲ್ಲಾ ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ: ಸರ್ಕಾರದಿಂದ 140 ಕೋಟಿ ರೂ ಬಾಕಿ: ಕೋಲಾರ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಉಚಿತ ಸೇವೆಗಳು ಸ್ಥಗಿತ

ವಿರೋಧ ಪಕ್ಷದವರು ಕೇಳಿದಷ್ಟು ಹಣ ಕೊಡಿ ಅಂದ್ರೆ ಹೇಗೆ? ಇದು ಸರ್ಕಾರದ ದುಡ್ಡು ಬಿಜೆಪಿ ಸರ್ಕಾರ ಇದ್ದಾಗ ಎಷ್ಟು ಬಾಕಿ ಇದೆ ಅಂತ ನೋಡಬೇಕು. ಕ್ರಶ್ನಾ ಡೈಯಾಗ್ಲೋಸ್ಟಿಕ್ ಕಂಪನಿ ಜೊತೆ ಮಾತುಕತೆ ಮಡೋದಾಗಿ ತಿಳಿಸಿದ ಸಚಿವರು ಕಂಪನಿ ಒಪ್ಪಿದ್ರೆ ಮುಂದುವರೆಸುತ್ತೇವೆ, ಇಲ್ಲದೆ ಹೋದರೆ ಪರ್ಯಾಯ ಕಂಪನಿಯ ವ್ಯವಸ್ಥೆ ಮಾಡೋದಾಗಿ ತಿಳಿಸಿದ್ದು, ಈ‌ ಹಿಂದಿನಂತೆ ಉಚಿತ ಸೇವೆಯನ್ನ 13 ಜಿಲ್ಲಾಸ್ಪತ್ರೆಯಲ್ಲಿ ಇನ್ನೆರಡ್ಮೂರು ದಿನದಲ್ಲಿ ವ್ಯವಸ್ಥೆ ಮಾಡಲಾಗುವುದೆಂದಿದ್ದಾರೆ.

ಒಟ್ನಲ್ಲಿ ಆರೋಗ್ಯ ಸೇವೆಯಲ್ಲಿ CT _MRI ಸ್ಕ್ಯಾನಿಂಗ್‌ ಸಹ ತುರ್ತು ಸೇವೆಯಾಗಿದ್ದು, ಸ್ಕ್ಯಾನಿಂಗ್ ‌ನಿರ್ವಹಣೆ ಮಾಡುವ ಕಂಪನಿ ಉಚಿತ ‌ಸೇವೆ‌ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ್ರೂ ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಎರಡು ದಿನ ಬಡರೋಗಿಗಳು ಪರದಾಡುವಂತಾಗಿತ್ತು. ಸದ್ಯ ಆರೋಗ್ಯ ಇಲಾಖೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ – Kannada News | Shivarajkumar reviews Seetha Payana movie ft Aishwarya Arjun and Niranjan Sudhindra

ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಹಾಗೂ ನಿರಂಜನ್ ಸುಧೀಂದ್ರ ನಟಿಸಿರುವ ‘ಸೀತಾ ಪಯಣ’ (Seetha Payana) ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾವನ್ನು ನೋಡಿ ಶಿವರಾಜ್​ಕುಮಾರ್ ಅವರು ವಿಮರ್ಶೆ ತಿಳಿಸಿದ್ದಾರೆ. ಸಿನಿಮಾದಲ್ಲಿ ತಮಗೆ ಏನು ಇಷ್ಟ ಆಯಿತು ಎಂಬುದನ್ನು ಅವರು ಎಳೆಎಳೆಯಾಗಿ ವಿವರಿಸಿದ್ದಾರೆ. ಅಲ್ಲದೇ ಅರ್ಜುನ್ ಸರ್ಜಾ ಕುಟುಂಬದ ಜೊತೆ ತಮಗೆ ಇರುವ ನಂಟು ಎಂಥದ್ದು ಎಂಬುದನ್ನು ಕೂಡ ಅವರು ತಿಳಿಸಿದ್ದಾರೆ. ‘ಸೀತಾ ಪಯಣ’ ಸಿನಿಮಾದ ಕಥೆ ಶಿವರಾಜ್​ಕುಮಾರ್ (Shiva Rajkumar) ಅವರಿಗೆ ತುಂಬಾ ಇಷ್ಟ ಆಗಿದೆ. ತಂದೆ-ಮಗಳ ಬಾಂಧವ್ಯದ ಕಥೆ ಅವರಿಗೆ ಕನೆಕ್ಟ್ ಆಗಿದೆ. ಆ ಕುರಿತು ಅವರು ಮಾತನಾಡಿದ್ದಾರೆ. ‘ಐಶ್ವರ್ಯಾ ಮತ್ತು ನಿರಂಜನ್ ನಟನೆ ತುಂಬಾ ಚೆನ್ನಾಗಿದೆ. ನನಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಹಾಗಾಗಿ ನನಗೆ ಈ ಸಿನಿಮಾ ಕನೆಕ್ಟ್ ಆಯಿತು’ ಎಂದು ಶಿವಣ್ಣ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಗುವಿನ ಪಾಲಿಗೆ ರಾಕ್ಷಸಿಯಾದ ಚಿಕ್ಕಮ್ಮ; ಪಾರ್ಕ್​ನಲ್ಲೇ 2 ವರ್ಷದ ಕೂಸನ್ನು ಕೊಂದ ಮಹಿಳೆ – Kannada News | Delhi Crime News 2 Year Old Baby Strangled To Death By Aunt in Park

ನವದೆಹಲಿ, ಫೆಬ್ರವರಿ 20: ದೆಹಲಿಯ ಮುಖರ್ಜಿ ನಗರದಲ್ಲಿ 2 ವರ್ಷದ ಗಂಡು ಮಗುವನ್ನು ಅವನ ಚಿಕ್ಕಮ್ಮ ಕೊಲೆ (Killing) ಮಾಡಿದ್ದಾಳೆ. ಪಾರ್ಕ್​ವೊಂದರಲ್ಲಿ ಈ ಕೊಲೆ ನಡೆದಿದೆ. ಮಗುವನ್ನು ಕತ್ತು ಹಿಸುಕಿ ಕೊಂದು ಆ ಶವದೊಂದಿಗೆ ಆಕೆ ಪಾರ್ಕ್​ನಲ್ಲಿ ಕುಳಿತಿದ್ದಳು. ಮಗು ರಂಜಾನ್ ಹಬ್ಬಕ್ಕೆ ತನ್ನ ತಾಯಿಯೊಂದಿಗೆ ತನ್ನ ಅಜ್ಜಿಯ ಮನೆಗೆ ಹೋಗಿತ್ತು. ಆಗ ಅಲ್ಲಿಗೆ ಬಂದಿದ್ದ ಆ ಮಗುವಿನ ತಾಯಿಯ ತಂಗಿ ಮಗುವನ್ನು ಕರೆದುಕೊಂಡು ಪಾರ್ಕ್​ಗೆ ಹೋಗಿ ಕೊಲೆ ಮಾಡಿದ್ದಾಳೆ.

ನಂತರ ಆಕೆ ಉದ್ಯಾನವನದಲ್ಲಿ ಕುಳಿತು ಮಗುವಿನ ಶವವನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಅಳುತ್ತಾ ನಾಟಕವಾಡಿದ್ದಾಳೆ. ಸ್ಥಳೀಯರು ಮಹಿಳೆಯನ್ನು ಈ ಸ್ಥಿತಿಯಲ್ಲಿ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಮಹಿಳೆಯಿಂದ ಶವವನ್ನು ಪಡೆದುಕೊಂಡಿದ್ದಾರೆ. ಆಗ ಆ ಮಹಿಳೆ ಮಗುವಿನ ಶವವನ್ನು ಬಿಡಲು ನಿರಾಕರಿಸಿದ್ದಾಳೆ. ಪೊಲೀಸರು ಆಕೆಯ ಮನವೊಲಿಸಿ ಮಗುವಿನ ಶವವನ್ನು ವಶಕ್ಕೆ ಪಡೆದಿದ್ದಾರೆ. ಆ ಮಹಿಳೆ ಮಗುವಿನ ಜೀವವನ್ನು ಏಕೆ ತೆಗೆದಳು ಎಂಬುದನ್ನು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: 3 ವರ್ಷದ ಮಗುವಿನ ಮೇಲೆ ಅಪ್ಪನ ಗೆಳೆಯನಿಂದಲೇ ಅತ್ಯಾಚಾರ

ದೆಹಲಿ ಪೊಲೀಸರ ಪ್ರಕಾರ, ಇಂದು ಮಧ್ಯಾಹ್ನ 1.30ರ ಸುಮಾರಿಗೆ ಮುಖರ್ಜಿ ನಗರ ಪೊಲೀಸ್ ಠಾಣೆಗೆ ಫೋನ್ ಬಂದಿತು. ಎಸ್‌ಎಫ್‌ಎಸ್ ಫ್ಲಾಟ್‌ಗಳ ಬಳಿಯ ಉದ್ಯಾನವನದಲ್ಲಿ ಅಜ್ರಾ (30) ಎಂಬ ಮಹಿಳೆ 2 ವರ್ಷದ ಮಗುವನ್ನು ಕತ್ತು ಹಿಸುಕಿ ಕೊಂದಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತು. ಅಜ್ರಾ ಮಗುವಿನ ಚಿಕ್ಕಮ್ಮನಾಗಿದ್ದು, ಆಕೆ ಮಗುವಿನ ಶವವನ್ನು ಹಿಡಿದು ಉದ್ಯಾನವನದಲ್ಲಿ ಕುಳಿತಿದ್ದಳು. ಅಜ್ರಾಳನ್ನು ಈ ಸ್ಥಿತಿಯಲ್ಲಿ ನೋಡಿ ಸ್ಥಳೀಯ ವ್ಯಕ್ತಿಯೊಬ್ಬರು ಆಘಾತಕ್ಕೊಳಗಾದರು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.

ಹಾದಿ ಎಂಬ ಮೃತ 2 ವರ್ಷದ ಮಗು ದೆಹಲಿಯ ಸೀಲಾಂಪುರದಲ್ಲಿ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದ. ಹಾದಿ ಮತ್ತು ಆತನ ತಾಯಿ ಉಜ್ಮಾ ಎಸ್‌ಎಫ್‌ಎಸ್ ಫ್ಲಾಟ್‌ನಲ್ಲಿ ತಾಯಿಯ ಮನೆಗೆ ಬಂದಿದ್ದರು. ಈ ವೇಳೆ ಆಕೆಯ ತಂಗಿ ಮಗುವನ್ನು ಪಾರ್ಕ್​ಗೆ ಕರೆದುಕೊಂಡು ಹೋಗಿದ್ದಳು. ಆಗ ಈ ಕೃತ್ಯ ನಡೆದಿದೆ. ವೈಯಕ್ತಿಕ ದ್ವೇಷದಿಂದ ಈ ರೀತಿ ಮಾಡಲಾಗಿದೆಯೇ ಎಂಬ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಆರಂಭಿಸಿದ್ದಾರೆ. ಹಾದಿಯ ಚಿಕ್ಕಮ್ಮ ಅಜ್ರಾಳನ್ನೂ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಮರು ಮದುವೆಯಾದರೂ ಬಿಡಲಿಲ್ಲ, ಮನೆಗೆ ನುಗ್ಗಿ ಮೂರು ತಿಂಗಳ ಗರ್ಭಿಣಿಯಾಗಿದ್ದ ಮಾಜಿ ಪತ್ನಿಯ ಇರಿದು ಕೊಂದ ಟೆಕ್ಕಿ

ಈ ಘಟನೆಯಿಂದಾಗಿ ಸುತ್ತಲೂ ಭಯದ ವಾತಾವರಣ ಉಂಟಾಗಿದೆ. ಚಿಕ್ಕಮ್ಮ ಮಗುವನ್ನು ಕತ್ತು ಹಿಸುಕಿ ಕೊಂದಿದ್ದು ಏಕೆ ಎಂದು ಜನರು ಆಶ್ಚರ್ಯ ಪಡುತ್ತಿದ್ದಾರೆ. ಉದ್ಯಾನವನದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಆಜ್ರಾ ಮಗುವನ್ನು ಕತ್ತು ಹಿಸುಕುವುದನ್ನು ನೋಡಿದ್ದ. ಅವನು ಕಿರುಚಿದಾಗ ಜನರು ಬಂದು ಪೊಲೀಸರಿಗೆ ವಿಷಯ ತಿಳಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version