MI vs LSG: 6,6,6,6,6,6,6.. 2ನೇ ವೇಗದ ಅರ್ಧಶತಕ ಬಾರಿಸಿದ ಪೂರನ್ – Kannada News | IPL 2026: Nicholas Pooran’s Explosive Fifty Smashes MI at Wankhede

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 47 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಪರ ಸ್ಫೋಟಕ ಬ್ಯಾಟರ್ ನಿಕೋಲಸ್ ಪೂರನ್ ಸಿಡಿಲಬ್ಬರದ ಅರ್ಧಶತಕ ಬಾರಿಸಿದರು. ಇಡೀ ಆವೃತ್ತಿಯಲ್ಲಿ ರನ್ ಬರ ಎದುರಿಸುತ್ತಿದ್ದ ಪೂರನ್, ಮುಂಬೈ ವಿರುದ್ಧ ಅಬ್ಬರಿಸುವ ಮೂಲಕ ಈ ಆವೃತ್ತಿಯ ಮೊದಲ ಹಾಗೂ ಲಕ್ನೋ ಪರ ಎರಡನೇ ವೇಗದ ಅರ್ಧಶತಕ ಸಿಡಿಸಿದರು.

ಈ ಪಂದ್ಯದಲ್ಲಿ ಲಕ್ನೋಗೆ ಉತ್ತಮ ಆರಂಭ ಸಿಗಲಿಲ್ಲ. ಜೋಸ್ ಇಂಗ್ಲಿಸ್ ಬೇಗನೇ ಔಟಾದರು. ಆ ಬಳಿಕ ಜೊತೆಯಾದ ಪೂರನ್ ಹಾಗೂ ಮಾರ್ಷ್​ ಮುಂಬೈ ಬೌಲರ್​ಗಳ ಬೆವರಿಳಿಸಿದರು. ಅದರಲ್ಲೂ ಮೊದಲ ಎಸೆತದಿಂದಲೇ ಹೊಡಿಬಡಿ ಆಟಕ್ಕೆ ಮುಂದಾದ ಪೂರನ್ ಬರೋಬ್ಬರಿ 7 ಸಿಕ್ಸರ್ ಸಹಿತ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹಾಗೆಯೇ ಮಾರ್ಷ್​ ಅವರೊಂದಿಗೆ ಶತಕದ ಜೊತೆಯಾಟವನ್ನು ಕಟ್ಟಿದರು. ಪೂರನ್ ಅಬ್ಬರದಿಂದಾಗಿ ಲಕ್ನೋ ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಪವರ್​ಪ್ಲೇನಲ್ಲಿ ಅತ್ಯಧಿಕ ಮೊತ್ತ ಕಲೆಹಾಕಿದ ದಾಖಲೆಯನ್ನು ಮಾಡಿತು. ಅಂತಿಮವಾಗಿ ಪೂರನ್ 21 ಎಸೆತಗಳಲ್ಲಿ 1 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 63 ರನ್ ಬಾರಿಸಿ ಔಟಾದರು.

Source link

ಎಂಜಿಆರ್​ನಿಂದ ರೊನಾಲ್ಡ್ ರೀಗನ್​ವರೆಗೆ ರಾಜಕೀಯದಲ್ಲಿ ಗೆಲುವು, ಸೋಲು ಕಂಡ ಸಿನಿಮಾ ಸೆಲಬ್ರಿಟಿಗಳು – Kannada News | Cinema stars who met with success and failures in politics in India and world

ಬೆಂಗಳೂರು, ಮೇ 4: ದಳಪತಿ ವಿಜಯ್ ಅವರ ಟಿವಿಕೆ ಪಕ್ಷವು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu assembly elections) ಜಯಭೇರಿ ಭಾರಿಸಿದ ಬಳಿಕ ಸಿನಿಮಾ ಮತ್ತು ಪೊಲಿಟಿಕ್ಸ್ ನಂಟಿನ ಕುರಿತು ಟಾಕ್ ಶುರುವಾಗಿದೆ. ರಾಜಕೀಯಕ್ಕೆ ಸಿನಿಮಾ ಒಳ್ಳೆಯ ರಹದಾರಿ ಎಂದು ಅನೇಕರು ಭಾವಿಸಿದ್ದಾರೆ. ಅದು ಅರ್ಧಸತ್ಯ ಎಂಬುದು ಅಂಕಿ ಅಂಶಗಳಿಂದ ತಿಳಿದುಬರುತ್ತದೆ. ಚಿತ್ರರಂಗದಿಂದ ಅನೇಕರು ರಾಜಕೀಯ ಪ್ರವೇಶಕ್ಕೆ ಯತ್ನಿಸಿದ್ದುಂಟು. ಅದರಲ್ಲಿ ಕೆಲವರು ಮಾತ್ರ ಯಶಸ್ಸು ಪಡೆದಿದ್ದಾರೆ. ಅನೇಕರಿಗೆ ಸೋಲಾಗಿದೆ. ಉಕ್ರೇನ್​ನ ಈಗಿನ ಅಧ್ಯಕ್ಷ ಝೆಲೆನ್ಸ್​ಕಿ ಅವರು ಕಾಮಿಡಿಯನ್ ಆಗಿ ಜನಪ್ರಿಯರಾಗಿದ್ದವರು. ಅಮೆರಿಕದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಅವರು ಸಿನಿಮಾ ತಾರೆಯಾಗಿದ್ದವರು.

ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಚಿತ್ರರಂಗದ ಮೂಲಕ ರಾಜಕೀಯ ಪ್ರವೇಶಿಸುವ ಪ್ರಯತ್ನಗಳು ಬಹಳಷ್ಟು ಆಗಿವೆ. ಇತ್ತೀಚಿನ ದಿನಗಳಲ್ಲಿ ಪವನ್ ಕಲ್ಯಾಣ್, ವಿಜಯ್, ಕಮಲಹಾಸನ್, ಉಪೇಂದ್ರ ಹೆಸರು ಪ್ರಮುಖವಾಗಿ ಕೇಳಿಬರುತ್ತದೆ. ನಟಿ ರಮ್ಯಾ ಕೂಡ ಸಂಸದೆಯಾಗಿ ಮತ್ತು ಸಕ್ರಿಯ ರಾಜಕಾರಣಿಯಾಗಿ ಕೆಲಸ ಮಾಡಿದ್ದಾರೆ. ಆದರೆ, ಯಶಸ್ಸು ಸಿಕ್ಕಿದ್ದು ಕಡಿಮೆ. ರಾಜಕೀಯದಲ್ಲಿ ಯಶಸ್ಸು ಮತ್ತು ಸೋಲು ಕಂಡ ಸಿನಿಮಾ ಸೆಲಬ್ರಿಟಿಗಳ ವಿವರ ಇಂತಿದೆ:

ಇದನ್ನೂ ಓದಿ: ತಮಿಳುನಾಡು ಇತಿಹಾಸದಲ್ಲಿ ಸಿಎಂ ಆದ ಚಿತ್ರರಂಗದ ತಾರೆಯರಿವರು

ರಾಜಕೀಯದಲ್ಲಿ ಯಶಸ್ಸು ಕಂಡ ಸಿನಿಮಾ ತಾರೆಗಳು

ತಮಿಳುನಾಡು

  • ಎಂ.ಜಿ. ರಾಮಚಂದ್ರನ್ (MGR): ತಮಿಳುನಾಡಿನ ರಾಜಕೀಯ ಇತಿಹಾಸವನ್ನೇ ಬದಲಿಸಿದವರು. 1977 ರಿಂದ 1987 ರವರೆಗೆ ಸತತವಾಗಿ ಮುಖ್ಯಮಂತ್ರಿಯಾಗಿದ್ದರು.
  • ಜೆ. ಜಯಲಲಿತಾ: ಎಂಜಿಆರ್ ಅವರ ಉತ್ತರಾಧಿಕಾರಿಯಾಗಿ ಬಂದ ಇವರು ಆರು ಬಾರಿ ಮುಖ್ಯಮಂತ್ರಿಯಾಗಿ ತಮಿಳುನಾಡನ್ನು ಆಳಿದರು.
  • ಸಿ.ಎನ್. ಅಣ್ಣಾದೊರೈ: ಇವರು ನೇರವಾಗಿ ನಟರಲ್ಲದಿದ್ದರೂ, ಚಿತ್ರಕಥೆಗಾರರಾಗಿ ಸಿನಿಮಾ ಮೂಲಕವೇ ರಾಜಕೀಯ ತಳಹದಿ ನಿರ್ಮಿಸಿಕೊಂಡವರು.
  • ಕರುಣಾನಿಧಿ: ಇವರೂ ಕೂಡ ಚಿತ್ರಸಾಹಿತಿಯಾಗಿ ಕೆಲಸ ಮಾಡುತ್ತಿದ್ದವರು. ಮುಂದೆ ಸಿಎಂ ಆಗಿ ತಮಿಳುನಾಡಿನಲ್ಲಿ ಹೆಸರುವಾಸಿಯಾದರು.

ಆಂಧ್ರಪ್ರದೇಶ

  • ಎನ್.ಟಿ. ರಾಮರಾವ್ (NTR): ತೆಲುಗು ಚಿತ್ರರಂಗದ ಈ ಮಹಾನ್ ನಟ ತೆಲುಗು ದೇಶಂ ಪಾರ್ಟಿ (TDP) ಸ್ಥಾಪಿಸಿದ ಕೇವಲ 9 ತಿಂಗಳಲ್ಲೇ ಅಧಿಕಾರ ಹಿಡಿದು ಇತಿಹಾಸ ಸೃಷ್ಟಿಸಿದರು.
  • ಪವನ್ ಕಲ್ಯಾಣ್: ‘ಜನಸೇನಾ’ ಪಕ್ಷದ ಮೂಲಕ ಇಂದು ಆಂಧ್ರ ರಾಜಕಾರಣದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದ್ದಾರೆ.

ಕರ್ನಾಟಕ

  • ಅಂಬರೀಶ್: ಕೇಂದ್ರ ಸಚಿವರಾಗಿ, ರಾಜ್ಯದ ಸಚಿವರಾಗಿ ಮತ್ತು ಸಂಸದರಾಗಿ ಸುದೀರ್ಘ ಕಾಲ ರಾಜಕೀಯದಲ್ಲಿ ಯಶಸ್ವಿಯಾದವರು.
  • ಬಿ.ಸಿ. ಪಾಟೀಲ್, ಸುಮಲತಾ ಅಂಬರೀಶ್, ಉಮಾಶ್ರೀ, ರಮ್ಯಾ: ಇವರು ಕೂಡ ಶಾಸಕರಾಗಿ ಮತ್ತು ಸಚಿವರಾಗಿ ಯಶಸ್ಸು ಕಂಡಿದ್ದಾರೆ.

ರಾಜಕೀಯದಲ್ಲಿ ನಿರೀಕ್ಷಿತ ಯಶಸ್ಸು ಕಾಣದವರು

ಸಿನಿಮಾದಲ್ಲಿ ಸೂಪರ್ ಸ್ಟಾರ್ ಆಗಿದ್ದರೂ, ರಾಜಕೀಯದಲ್ಲಿ ನೆಲೆ ಕಂಡುಕೊಳ್ಳಲು ವಿಫಲರಾದವರ ಪಟ್ಟಿ ಕೂಡ ದೊಡ್ಡದಿದೆ:

  1. ಶಿವಾಜಿ ಗಣೇಶನ್: ತಮಿಳುನಾಡಿನ ಶ್ರೇಷ್ಠ ನಟರಾಗಿದ್ದರೂ, ರಾಜಕೀಯದಲ್ಲಿ ಅವರು ದೊಡ್ಡ ಯಶಸ್ಸು ಕಾಣಲಿಲ್ಲ.
  2. ವಿಜಯಕಾಂತ್: ‘ಡಿಎಂಡಿಕೆ’ ಪಕ್ಷದ ಮೂಲಕ ಈ ಕ್ಯಾಪ್ಟನ್ ಭರವಸೆ ಮೂಡಿಸಿದರೂ, ನಂತರದ ದಿನಗಳಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
  3. ಕಮಲ್ ಹಾಸನ್: ‘ಮಕ್ಕಳ್ ನೀಧಿ ಮೈಯಂ’ ಮೂಲಕ ರಾಜಕೀಯಕ್ಕೆ ಬಂದರೂ, ಚುನಾವಣೆಯಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಲಿಲ್ಲ.
  4. ಅಮಿತಾಭ್ ಬಚ್ಚನ್: 1984ರಲ್ಲಿ ಅಲಹಾಬಾದ್‌ನಿಂದ ಸಂಸದರಾಗಿ ಆಯ್ಕೆಯಾದರೂ, ಕೆಲವೇ ವರ್ಷಗಳಲ್ಲಿ ರಾಜಕೀಯಕ್ಕೆ ವಿದಾಯ ಹೇಳಿದರು.
  5. ಚಿರಂಜೀವಿ: ‘ಪ್ರಜಾರಾಜ್ಯಂ’ ಪಕ್ಷ ಸ್ಥಾಪಿಸಿ ನಂತರ ಕಾಂಗ್ರೆಸ್ ಜೊತೆ ವಿಲೀನಗೊಳಿಸಿದರು, ಆದರೆ ಎನ್‌ಟಿಆರ್ ತರಹದ ಯಶಸ್ಸು ಅವರಿಗೆ ಸಿಗಲಿಲ್ಲ.
  6. ಉಪೇಂದ್ರ: ‘ಪ್ರಜಾಕೀಯ’ ಮೂಲಕ ಹೊಸ ಉಪ್ಪಿ ಹೊಸ ಆಲೋಚನೆ ತಂದರೂ, ಮತದಾರರನ್ನು ಗೆಲ್ಲುವಲ್ಲಿ ಇನ್ನೂ ಯಶಸ್ವಿಯಾಗಿಲ್ಲ.

ಇದನ್ನೂ ಓದಿ: ಜನನಾಯಗನ್ ‘ಸೇಡು’?; ಬಿಜೆಪಿ ಕಾರಣಕ್ಕೆ ಎಐಎಡಿಎಂಕೆ ಬೇಡ ಅಂತಾರಾ ವಿಜಯ್?; ದಳಪತಿ ಮುಂದಿರುವ ಆಯ್ಕೆಗಳೇನು?

ವಿಶ್ವ ಮಟ್ಟದಲ್ಲಿ ಸಿನಿಮಾ ತಾರೆಗಳ ರಾಜಕೀಯ ಪಯಣ

ಭಾರತಕ್ಕೆ ಮಾತ್ರವಲ್ಲ, ವಿಶ್ವದಾದ್ಯಂತ ಸಿನಿಮಾ ನಟರು ರಾಜಕೀಯದಲ್ಲಿ ಮಿಂಚಿದ್ದಾರೆ:

  • ರೊನಾಲ್ಡ್ ರೇಗನ್ (ಅಮೆರಿಕಾ): ಹಾಲಿವುಡ್ ನಟರಾಗಿದ್ದ ಇವರು ಅಮೆರಿಕಾದ 40ನೇ ಅಧ್ಯಕ್ಷರಾಗಿ (1981-1989) ಆಯ್ಕೆಯಾಗಿ ವಿಶ್ವದ ಅತ್ಯಂತ ಪ್ರಭಾವಶಾಲಿ ನಾಯಕರಾದರು.
  • ಆರ್ನಾಲ್ಡ್ ಶ್ವಾರ್ಜಿನೆಗರ್: ‘ಟರ್ಮಿನೇಟರ್’ ಖ್ಯಾತಿಯ ಈ ನಟ ಕ್ಯಾಲಿಫೋರ್ನಿಯಾದ ಗವರ್ನರ್ ಆಗಿ ಎರಡು ಬಾರಿ ಆಯ್ಕೆಯಾದರು.
  • ವೊಲೊಡಿಮಿರ್ ಝೆಲೆನ್ಸ್ಕಿ (ಉಕ್ರೇನ್): ಹಾಸ್ಯ ನಟನಾಗಿದ್ದ ಇವರು ಇಂದು ಉಕ್ರೇನ್‌ನ ಅಧ್ಯಕ್ಷರಾಗಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
  • ಕ್ಲಿಂಟ್ ಈಸ್ಟ್ ವುಡ್: ಖ್ಯಾತ ಹಾಲಿವುಡ್ ನಟ ಕಾರ್ಮೆಲ್-ಬೈ-ದಿ-ಸೀ ನಗರದ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದರು.

ತಮಿಳುನಾಡಿನಲ್ಲಿ ಈವರೆಗೆ 5 ಮಂದಿ ಮುಖ್ಯಮಂತ್ರಿಗಳು ಸಿನಿಮಾ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಅಮೆರಿಕಾದಲ್ಲಿ ಇಬ್ಬರು ಪ್ರಮುಖ ನಟರು ಉನ್ನತ ಸ್ಥಾನಕ್ಕೇರಿದ್ದಾರೆ. ಒಟ್ಟಾರೆಯಾಗಿ, ಸಿನಿಮಾದ ಜನಪ್ರಿಯತೆ ರಾಜಕೀಯಕ್ಕೆ ಬಾಗಿಲು ತೆರೆಯಬಹುದು, ಆದರೆ ಅಲ್ಲಿ ನೆಲೆ ನಿಲ್ಲಲು ಜನರೊಂದಿಗಿನ ನಿರಂತರ ಸಂಪರ್ಕ ಮತ್ತು ಆಡಳಿತ ಚಾತುರ್ಯ ಬಹಳ ಮುಖ್ಯ ಎಂಬುದು ಇತಿಹಾಸ ಸಾರುವ ಸತ್ಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದಾವಣಗೆರೆ ದಕ್ಷಿಣ ಗೆಲುವಿನ ಕ್ರೆಡಿಟ್ ಯಾರಿಗೆ? ಸಲೀಂ ಅಹ್ಮದ್ ಹೇಳಿದ್ದಿಷ್ಟು – Kannada News | MLC salim ahmed Talks about Congress Candidate Samarth Shamanur Won In Davanagere South By Poll

ದಾವಣಗೆರೆ, (ಮೇ 04): ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಸಮರ್ಥ್ ಶಾಮನೂರು ಗೆಲುವು ಸಾಧಿಸಿದ್ದಾರೆ. ತೀವ್ರ ಪೈಪೋಟಿ ನಡುವೆಯೂ ಅವರು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್​ ದಾಸಕರಿಯಪ್ಪ ಅವರ ವಿರುದ್ಧ 5,708 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಟಿಕೆಟ್ ವಿಚಾರದಲ್ಲಿ ನಡೆದ ಮುಸುಕಿನ ಗುದ್ದಾಟದಿಂದ ಕಾಂಗ್ರೆಸ್​​ ಲೀಡ್ ಕಡಿಮೆಯಾಗಿದೆ, ಯಾಕಂದ್ರೆ, ಟಿಕೆಟ್ ನೀಡದಿದ್ದಕ್ಕೆ ಅಸಮಾಧಾನಗೊಂಡಿರುವ ಮುಸ್ಲಿಮರು ಎಸ್​ಡಿಪಿಐಗೆ ಬೆಂಬಲಿಸಿದ್ದಾರೆ. ಹೀಗಾಗಿ ಕಾಂಗ್ರೆಸ್​ ಮತ ಬ್ಯಾಂಕ್​​​ ಗೆ ಡಿಮ್ಯಾಜ್ ಆಗಿದೆ. ಸಮರ್ಥ್ ಗೆಲುವು ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹ್ಮದ್ ಬಣಕ್ಕೆ ಪ್ಲಸ್ ಪಾಯಿಂಟ್ ಅದರೆ ಸಚಿವ ಜಮೀರ್‌ ಅಹ್ಮದ್ ಖಾನ್ ಅವರಿಗೆ ಇದು ಹಿನ್ನಡೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. ಇನ್ನು ಬಗ್ಗೆ ಸ್ವತಃ ಸಲೀಂ ಅಹ್ಮದ್ ಮಾತನಾಡಿದ್ದು, ಏನು ಹೇಳಿದ್ದಾರೆ ಕೇಳಿ.

ಇದನ್ನೂ ಓದಿ: ಸಮರ್ಥ್ ಶಾಮನೂರು ಜಸ್ಟ್‌ ಪಾಸ್: ಕಾಂಗ್ರೆಸ್​​ಗೆ ಶಾಕ್ ಕೊಟ್ಟ ದಾವಣಗೆರೆ ದಕ್ಷಿಣ ರಿಸಲ್ಟ್

Source link

PM Modi Speech: ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಕಮಲ ಅರಳಿದೆ; ಬಂಗಾಳದ ಗೆಲುವು ಐತಿಹಾಸಿಕವೆಂದ ಪ್ರಧಾನಿ ಮೋದಿ  – Kannada News | PM Narendra Modi Address The Nation Post BJP Victory in West Bengal, Assam, Puducherry Assembly Election Latest News in Kannada

ನವದೆಹಲಿ, ಮೇ 4: ಮೂರು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿಯ ಗೆಲುವನ್ನು ಸಂಭ್ರಮಿಸಲು ನವದೆಹಲಿಯ ಭಾರತೀಯ ಜನತಾ ಪಕ್ಷದ ಪ್ರಧಾನ ಕಚೇರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು. ಬಂಗಾಳಿ ಧೋತಿ ಧರಿಸಿ ಬಂದ ಪ್ರಧಾನಿ ಮೋದಿ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ಇಡೀ ಆವರಣದ ಸುತ್ತ “ಮೋದಿ, ಮೋದಿ!” ಎಂಬ ಘೋಷಣೆಗಳು ಪ್ರತಿಧ್ವನಿಸಿತು. ಪ್ರಧಾನಿ ಮೋದಿ “ಭಾರತ್ ಮಾತಾ ಕಿ ಜೈ” ಎಂಬ ಘೋಷಣೆಯೊಂದಿಗೆ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಇಂದು ಐತಿಹಾಸಿಕ ಮತ್ತು ಅಭೂತಪೂರ್ವ ದಿನ ಎಂದ ಅವರು ಈ ಗೆಲುವಿಗೆ ಕಾರಣರಾದ ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸಿದರು.

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ಸಾಧಿಸಿದ ಕುರಿತು ಮಾತನಾಡಿದ ಪ್ರಧಾನಿ ಮೋದಿ, “ತಲೆಮಾರುಗಳಿಂದ ಅಸಂಖ್ಯಾತ ಕಾರ್ಯಕರ್ತರ ಪ್ರಯತ್ನ ಮತ್ತು ಹೋರಾಟಗಳಿಲ್ಲದೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ದಾಖಲೆಯ ಗೆಲುವು ಸಾಧ್ಯವಾಗುತ್ತಿರಲಿಲ್ಲ. ನಾನು ಅವರೆಲ್ಲರನ್ನೂ ವಂದಿಸುತ್ತೇನೆ. ಹಲವು ವರ್ಷಗಳಿಂದ ಅವರು ಎಲ್ಲಾ ರೀತಿಯ ತೊಂದರೆಗಳನ್ನು ನಿವಾರಿಸಿಕೊಂಡು, ಪಕ್ಷದ ಅಭಿವೃದ್ಧಿಗೆ ತಳಮಟ್ಟದಲ್ಲಿ ಶ್ರಮಿಸಿದ್ದಾರೆ. ಅವರು ನಮ್ಮ ಪಕ್ಷದ ಶಕ್ತಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: PM Modi Speech Live ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ಗೆದ್ದ ಬಿಜೆಪಿ, ಮೋದಿ ಭಾಷಣದ ನೇರಪ್ರಸಾರ

“ಗಂಗಾ ಮಾತೆಯ ಜೊತೆಗೆ ಬ್ರಹ್ಮಪುತ್ರ ಕೂಡ ನಮ್ಮನ್ನು ಆಶೀರ್ವದಿಸಿದೆ. ಅಸ್ಸಾಂನ ಜನರು ಮೂರನೇ ಬಾರಿಗೆ ಬಿಜೆಪಿಯ ಮೇಲೆ ತಮ್ಮ ನಂಬಿಕೆಯನ್ನು ಇಟ್ಟಿದ್ದಾರೆ. ಇದು ಅಸ್ಸಾಂ ಇತಿಹಾಸದಲ್ಲಿ ಮಹತ್ವದ ಘಟನೆಯಾಗಿದೆ. ಅಸ್ಸಾಂ ತನ್ನ ಅಭಿವೃದ್ಧಿಯನ್ನು ಮತ್ತಷ್ಟು ವೇಗಗೊಳಿಸುತ್ತದೆ ಎಂದು ನಾನು ಭರವಸೆ ನೀಡುತ್ತೇನೆ. ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಕಮಲ ಅರಳಿದೆ. ಗಂಗಾ ಮಾತೆಯ ದಡದಲ್ಲಿರುವ ರಾಜ್ಯಗಳಲ್ಲಿ ಈಗ ಬಿಜೆಪಿ-ಎನ್‌ಡಿಎ ಸರ್ಕಾರಗಳಿವೆ” ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು.

“ಪ್ರಜಾಪ್ರಭುತ್ವ ಮತ್ತು ಚುನಾವಣಾ ರಾಜಕೀಯದಲ್ಲಿ ಗೆಲುವು ಮತ್ತು ಸೋಲು ಸಹಜವಾದ ಭಾಗ. ಆದರೆ ಈ 5 ರಾಜ್ಯಗಳ ಜನರು ನಮ್ಮ ಭಾರತ ಏಕೆ ಪ್ರಜಾಪ್ರಭುತ್ವದ ತಾಯಿ ಎಂಬುದನ್ನು ಇಡೀ ಜಗತ್ತಿಗೆ ತೋರಿಸಿದ್ದಾರೆ. ಪ್ರಜಾಪ್ರಭುತ್ವ ನಮಗೆ ಕೇವಲ ಒಂದು ವ್ಯವಸ್ಥೆಯಲ್ಲ. ಅದು ನಮ್ಮ ರಕ್ತನಾಳಗಳಲ್ಲಿ ಹರಿಯುವ ಸಂಸ್ಕೃತಿ. ಹಲವು ವರ್ಷಗಳ ಪರಿಶ್ರಮ ಸಾಧನೆಯಾಗಿ ಪರಿವರ್ತನೆಗೊಂಡಾಗ ಆಗುವ ಸಂತೋಷವನ್ನು ನಾನು ಇಂದು ದೇಶಾದ್ಯಂತದ ಬಿಜೆಪಿ ಕಾರ್ಯಕರ್ತರ ಮುಖಗಳಲ್ಲಿ ನೋಡುತ್ತಿದ್ದೇನೆ” ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ: ಬಂಗಾಳಿ ಧೋತಿ ಧರಿಸಿ ಬಿಜೆಪಿ ಕಚೇರಿಗೆ ಭರ್ಜರಿ ಎಂಟ್ರಿ ಕೊಟ್ಟ ಪ್ರಧಾನಿ ಮೋದಿ

ಕೇರಳ ಮತ್ತು ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರು ಹಲವಾರು ದೌರ್ಜನ್ಯಗಳಿಗೆ ಒಳಗಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು. ಬಂಗಾಳದಲ್ಲಿ ಇಂದು ಬಿಜೆಪಿಯ ಯಶಸ್ಸಿಗೆ ಅಂತಹ ಎಲ್ಲಾ ಕಾರ್ಯಕರ್ತರು ಮತ್ತು ಅವರ ಕುಟುಂಬಗಳು ಕಾರಣ ಎಂದು ಅವರು ಹೇಳಿದರು. ಈ ಗೆಲುವನ್ನು ನಾನು ಬಂಗಾಳದ ಜನರಿಗೆ ಅರ್ಪಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.

“ಪುದುಚೇರಿಯ ಜನರು ನಮಗೆ ತಮ್ಮ ಆಶೀರ್ವಾದ ನೀಡಿದ್ದಾರೆ. ಕಳೆದ 5 ವರ್ಷಗಳಲ್ಲಿ ಎನ್‌ಡಿಎ ಸರ್ಕಾರ ಸಂಪೂರ್ಣ ಸಮರ್ಪಣಾಭಾವದಿಂದ ಕೆಲಸ ಮಾಡಿದೆ. ಇಂದು ಮತ್ತೊಮ್ಮೆ ಜನರು ಎನ್‌ಡಿಎ ಮೇಲೆ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ. ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಎನ್‌ಡಿಎ ಸರ್ಕಾರವು ಅವಿಶ್ರಾಂತವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ನಾನು ಪುದುಚೇರಿಯ ಯುವಕರಿಗೆ ಭರವಸೆ ನೀಡುತ್ತೇನೆ. ಇಂದು, ದೇಶಾದ್ಯಂತ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ-ಎನ್‌ಡಿಎ ಸರ್ಕಾರಗಳು ಅಧಿಕಾರದಲ್ಲಿವೆ. ನಾವು ಜನರಿಗೆ ಸೇವೆ ಸಲ್ಲಿಸಲು ಸಮರ್ಪಿತರಾಗಿದ್ದೇವೆ. ಅದಕ್ಕಾಗಿಯೇ ಜನರು ಬಿಜೆಪಿಯನ್ನು ನಂಬುತ್ತಿದ್ದಾರೆ. ಬಿಜೆಪಿ ಇರುವಲ್ಲಿ ಉತ್ತಮ ಆಡಳಿತವಿದೆ, ಬಿಜೆಪಿ ಇರುವಲ್ಲಿ ಅಭಿವೃದ್ಧಿ ಇದೆ ಎಂಬುದನ್ನು ಜನರು ಸ್ಪಷ್ಟವಾಗಿ ನೋಡುತ್ತಿದ್ದಾರೆ” ಎಂದು ಪ್ರಧಾನಿ ಮೋದಿ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:56 pm, Mon, 4 May 26

Source link

ಅತಿಯಾಗಿ ಸನ್‌ಸ್ಕ್ರೀನ್ ಬಳಕೆ ಮಾಡುವುದರಿಂದಲೂ ವಿಟಮಿನ್ ಡಿ ಕೊರತೆ ಉಂಟಾಗುತ್ತದೆಯೇ? – Kannada News | Using Sunscreen Daily: Will It Lower Your Vitamin D Levels?

ಇಂದಿನ ಜೀವನಶೈಲಿಯಲ್ಲಿ ವಿಟಮಿನ್ ಡಿ (Vitamin D) ಕೊರತೆ ಸಾಮಾನ್ಯ ಸಮಸ್ಯೆಯಾಗುತ್ತಿದೆ. ಮನೆಯೊಳಗೆ ಹೆಚ್ಚು ಸಮಯ ಕಳೆಯುವುದು, ಸೂರ್ಯನ ಬೆಳಕಿಗೆ ಕಡಿಮೆ ಒಡ್ಡಿಕೊಳ್ಳುವುದು ಮತ್ತು ಅಸಮತೋಲನ ಆಹಾರ ಪದ್ಧತಿ ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ. ತಜ್ಞರ ಪ್ರಕಾರ, ಸೂರ್ಯನ ಬೆಳಕು ವಿಟಮಿನ್ ಡಿಗೆ ಪ್ರಮುಖ ಮೂಲವಾದರೂ, ಎಲ್ಲರಿಗೂ ಇದು ಸಾಕಾಗುವುದಿಲ್ಲ. ಕೆಲವರು ನಿಯಮಿತವಾಗಿ ಸೂರ್ಯನ ಬೆಳಕಿನಲ್ಲಿ ಇದ್ದರೂ ಕೂಡ ವಿಟಮಿನ್ ಡಿ ಕೊರತೆಯಿಂದ ಬಳಲುತ್ತಾರೆ. ಇದಕ್ಕೆ ಚರ್ಮದ ಬಣ್ಣ, ವಯಸ್ಸು, ದೇಹದ ಸ್ಥಿತಿ ಮತ್ತು ವಿಟಮಿನ್ ಶೋಷಣೆಯ ಸಾಮರ್ಥ್ಯ ಕಾರಣವಾಗಬಹುದು. ಸರಿಯಾದ ಸಮಯದಲ್ಲಿ ಸೂರ್ಯನ ಬೆಳಕನ್ನು ಪಡೆಯದಿದ್ದರೆ ಅದರ ಪ್ರಯೋಜನ ಕಡಿಮೆಯಾಗುತ್ತದೆ. ಹಾಗಾದರೆ ವಿಟಮಿನ್ ಡಿ ಕೊರತೆ ಉಂಟಾಗುವುದಕ್ಕೆ ಕಾರಣವೇನು, ಅತಿಯಾಗಿ ಸನ್‌ಸ್ಕ್ರೀನ್ (Sunscreen) ಬಳಕೆ ಮಾಡುವುದರಿಂದ ಈ ರೀತಿಯ ಸಮಸ್ಯೆ ಉಂಟಾಗುತ್ತದೆಯೇ, ವಿಟಮಿನ್ ಡಿ ಹೆಚ್ಚಿಸಿಕೊಳ್ಳಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ವಿಟಮಿನ್ ಡಿ ಕೊರತೆ ಉಂಟಾಗುವುದಕ್ಕೆ ಕಾರಣ:

ಅತಿಯಾಗಿ ಸನ್‌ಸ್ಕ್ರೀನ್ ಬಳಕೆ, ಮಾಲಿನ್ಯ ಮತ್ತು ಜೀವನಶೈಲಿಯ ಬದಲಾವಣೆಗಳು ಸೂರ್ಯನ ಕಿರಣಗಳಿಂದ ದೊರೆಯುವುದನ್ನು ಕಡಿಮೆ ಮಾಡುತ್ತವೆ. ಜೊತೆಗೆ, ದೇಹದಲ್ಲಿ ವಿಟಮಿನ್ ಡಿ ಸರಿಯಾಗಿ ಸಿಗದಿದ್ದರೂ ಕೊರತೆ ಉಂಟಾಗಬಹುದು. ಆದ್ದರಿಂದ ಕೇವಲ ಸೂರ್ಯನ ಬೆಳಕಿನ ಮೇಲೆ ಅವಲಂಬಿಸಿಕೊಳ್ಳುವುದು ಸಾಕಾಗುವುದಿಲ್ಲ.

ಇದನ್ನೂ ಓದಿ: ಡಾರ್ಕ್ ಸ್ಕಿನ್ ಮತ್ತು ಒಬೆಸಿಟಿ ಇರುವವರಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಂಡು ಬರುವುದಕ್ಕೆ ಕಾರಣ ಏನ್ ಗೊತ್ತಾ?

ವಿಟಮಿನ್ ಡಿ ಹೆಚ್ಚಿಸಲು ಏನು ಮಾಡಬೇಕು?

ಸಮತೋಲನ ಆಹಾರ ಬಹಳ ಮುಖ್ಯ. ಹಾಲು, ಮೊಸರು, ಮೊಟ್ಟೆ, ಮೀನು ಮತ್ತು ಫೋರ್ಟಿಫೈಡ್ ಆಹಾರಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಬೇಕು. ಅಗತ್ಯವಿದ್ದರೆ ವೈದ್ಯರ ಸಲಹೆಯಂತೆ ಸಪ್ಲಿಮೆಂಟ್ಸ್ ತೆಗೆದುಕೊಳ್ಳಬಹುದು. ನಿಯಮಿತ ವ್ಯಾಯಾಮ ಮತ್ತು ಸಕ್ರಿಯ ಜೀವನಶೈಲಿಯೂ ಸಹ ದೇಹದ ಆರೋಗ್ಯವನ್ನು ಉತ್ತಮವಾಗಿಡಲು ಸಹಕಾರಿ. ಈ ವಿಟಮಿನ್ ಡಿ ಕೊರತೆಯನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಸರಿಯಾದ ಆಹಾರ, ಜೀವನಶೈಲಿ ಮತ್ತು ವೈದ್ಯಕೀಯ ಸಲಹೆಯೊಂದಿಗೆ ಮಾತ್ರ ಈ ಕೊರತೆಯನ್ನು ನಿಯಂತ್ರಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೇಸಿಗೆಯಲ್ಲಿ ಬೆವರಿನ ದುರ್ವಾಸನೆಯನ್ನು ಹೋಗಲಾಡಿಸಲು ಸ್ನಾನದ ನೀರಿಗೆ ಈ ವಸ್ತುವನ್ನು ಸೇರಿಸಿ – Kannada News | Adding these items to your bath water can help control the smell of sweat in summer

ಬೇಸಿಗೆಯಲ್ಲಿ ಬೆವರುವುದು (sweat)  ಸಾಮಾನ್ಯ. ಕೆಲವೊಮ್ಮೆ ಈ ಸಮಯದಲ್ಲಿ ದೇಹ ವಿಪರೀತವಾಗಿ ಬೆವರುತ್ತದೆ. ಈ ಅತಿಯಾದ ಬೆವರು ದೇಹದಲ್ಲಿ ದುರ್ವಾಸನೆ ಉಂಟಾಗಲು ಕಾರಣವಾಗುತ್ತದೆ.  ಚರ್ಮದ ಮೇಲಿರುವ ಬ್ಯಾಕ್ಟೀರಿಯಾಗಳು ಬೆವರಿನೊಂದಿಗೆ ಸಂವಹನ ನಡೆಸಿದಾಗ ವಾಸನೆ ಉಂಟಾಗುತ್ತದೆ. ಈ ದುರ್ವಾಸನೆಯಿಂದಾಗಿ ಅನೇಕರು ಮುಜುಗರಕ್ಕೆ ಒಳಗಾಗುವುದುಂಟು ಮತ್ತು ಬೆವರಿನ ವಾಸನೆಯನ್ನು ಹೋಗಲಾಡಿಸಲು ಪರ್‌ಫ್ಯೂಮ್‌ ಸಹ ಹಾಕ್ತಾರೆ. ಹಾಗಿದ್ರೂ ಕೂಡ ಬೆವರಿನ ವಾಸನೆ ಹೋಗುವುದಿಲ್ಲ. ನೀವು ಕೂಡ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ? ಹಾಗಿದ್ರೆ ಸ್ನಾನದ ರೀತಿಗೆ ಈ ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿ, ಇದು ಬೆವರಿನ ದುರ್ವಾಸನೆಯನ್ನು ಹೋಗಲಾಡಿಸುವುದು ಮಾತ್ರವಲ್ಲ ನಿಮ್ಮನ್ನು ದಿನವಿಡೀ ತಾಜಾತನದಿಂದ ಇರಿಸುತ್ತದೆ.

ಬೆವರಿನ ವಾಸನೆಯನ್ನು ಹೋಗಲಾಡಿಸಲು ಸ್ನಾನದ ನೀರಿಗೆ ಈ ವಸ್ತುವನ್ನು ಬೆರೆಸಿ:

ಬೇವು:   ಬೇವಿನ ನೀರಿನಿಂದ ಸ್ನಾನ ಮಾಡುವುದರಿಂದ ದೇಹದ ವಾಸನೆಯೂ ಕಡಿಮೆಯಾಗುತ್ತದೆ. ಬೇವು ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದ್ದು ಅದು ಚರ್ಮವನ್ನು ಸ್ವಚ್ಛವಾಗಿರಿಸುತ್ತದೆ ಮತ್ತು ವಾಸನೆ ಉಂಟುಮಾಡುವ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ. ಬೇಸಿಗೆಯಲ್ಲಿ ಸ್ನಾನದ ನೀರಿನಲ್ಲಿ ಬೇವಿನ ಎಲೆಗಳು ಅಥವಾ ಬೇವಿನ ಎಣ್ಣೆಯನ್ನು ಬೆರೆಸಿ ಬಳಸಬಹುದು. ಇದು ಚರ್ಮದ ತುರಿಕೆ, ದದ್ದುಗಳು ಮತ್ತು ಕಿರಿಕಿರಿಯನ್ನು ತಡೆಯಲು ಸಹಾಯ ಮಾಡುತ್ತದೆ, ಇದು ದಿನವಿಡೀ ನಿಮ್ಮನ್ನು ಉಲ್ಲಾಸದಿಂದ ಇರಿಸುತ್ತದೆ.

ನಿಂಬೆ: ನಿಂಬೆಹಣ್ಣಿನ ವಾಸನೆಯು ಬೆವರಿನ ವಾಸನೆಯನ್ನು ಕಡಿಮೆ ಮಾಡುತ್ತದೆ . ನೀವು ನಿಂಬೆ ರಸವನ್ನು ನೀರಿನೊಂದಿಗೆ ಬೆರೆಸಬಹುದು ಅಥವಾ ನಿಂಬೆ ಸಿಪ್ಪೆಗಳನ್ನು ನೀರಿನಲ್ಲಿ ನೆನೆಸಬಹುದು. ಇದಲ್ಲದೆ ನೀರಿಗೆ 5 ಹನಿ ನಿಂಬೆ ಸಾರಭೂತ ಎಣ್ಣೆಯನ್ನು ಸೇರಿಸಿ ಸ್ನಾನ ಮಾಡಬಹುದು.

ಅಡುಗೆ ಸೋಡಾ: ಸ್ನಾನದ ನೀರಿಗೆ ಒಂದು ಚಿಟಿಕೆ ಅಡುಗೆ ಸೋಡಾ ಸೇರಿಸುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಇದು ನಿಮ್ಮ ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ, ಹೌದು ಇದು ಚರ್ಮವನ್ನು ಮೃದುಗೊಳಿಸುತ್ತದೆ ಇದಲ್ಲದೆ, ಈ ನೀರಿನಿಂದ ಸ್ನಾನ ಮಾಡುವುದರಿಂದ ದೇಹದ ವಾಸನೆಯೂ ಕಡಿಮೆಯಾಗುತ್ತದೆ.

ರೋಸ್ ವಾಟರ್: ನೀವು ಸ್ನಾನದ ನೀರಿಗೆ ಗುಲಾಬಿ ದಳಗಳು ಅಥವಾ ರೋಸ್ ವಾಟರ್ ಸೇರಿಸಬಹುದು. ಇದು ದೇಹದ ವಾಸನೆಯನ್ನು ಕಡಿಮೆ ಮಾಡಲು ಉತ್ತಮ ಮಾರ್ಗವಾಗಿದೆ. ರೋಸ್ ವಾಟರ್ ನೈಸರ್ಗಿಕ ಮಾಯಿಶ್ಚರೈಸರ್‌ಗಳನ್ನು ಹೊಂದಿದ್ದು, ಇದು ಶುಷ್ಕತೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಗಿಡಗಳನ್ನು ಮನೆ ಸುತ್ತ ನೆಟ್ಟರೆ ಇನ್ನೆಂದೂ ಸೊಳ್ಳೆಗಳ ಹಾವಳಿಯೇ ಇರೋದಿಲ್ಲ

ಪಟಿಕ: ಪಟಿಕವನ್ನು ಬಳಸುವುದರಿಂದ ದೇಹದ ವಾಸನೆಯನ್ನು ನಿವಾರಿಸಬಹುದು. ಬೆವರಿನಿಂದ ಉಂಟಾಗುವ ವಾಸನೆಯನ್ನು ನಿಯಂತ್ರಿಸುವಲ್ಲಿ ಪಟಿಕವು ತುಂಬಾ ಸಹಾಯಕವಾಗಿದೆ. ಸ್ನಾನದ ನಂತರ ಒದ್ದೆ ಚರ್ಮದ ಮೇಲೆ ಪಟಿಕದ ತುಂಡನ್ನು ಉಜ್ಜುವುದರಿಂದ ಬೆವರು ಉಂಟುಮಾಡುವ ಬ್ಯಾಕ್ಟೀರಿಯಾಗಳು ನಿವಾರಣೆಯಾಗುತ್ತವೆ ಮತ್ತು ದಿನವಿಡೀ ತಾಜಾತನದಿಂದ ಇರಬಹುದು.

ಸ್ನಾನದ ನಂತರ ಸರಿಯಾದ ಆರೈಕೆಯೂ ಅಗತ್ಯ:

ಸ್ನಾನ ಮಾಡಿದ  ನಂತರ ನಿಮ್ಮ ದೇಹವನ್ನು ಚೆನ್ನಾಗಿ ಒಣಗಿಸುವುದು ಸಹ ಮುಖ್ಯವಾಗಿದೆ. ಒದ್ದೆಯಾದ ಚರ್ಮದ ಮೇಲೆ ಬ್ಯಾಕ್ಟೀರಿಯಾಗಳು ವೇಗವಾಗಿ ಗುಣಿಸುತ್ತವೆ, ಇದು ವಾಸನೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಹಾಗಾಗಿ ದೇಹವನ್ನು ಸರಿಯಾಗಿ ಒಣಗಿಸಿ. ಇದಲ್ಲದೆ ಹತ್ತಿ ಬಟ್ಟೆಗಳನ್ನು ಧರಿಸುವುದು ಉತ್ತಮ ಏಕೆಂದರೆ ಅದು ಬೆವರು ಹೀರಿಕೊಳ್ಳುತ್ತದೆ ಮತ್ತು ಚರ್ಮವು ಉಸಿರಾಡಲು ಅನುವು ಮಾಡಿಕೊಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀವು ಇತಿಹಾಸ ಸೃಷ್ಟಿ ಮಾಡಿದ್ರಿ: ಟಿವಿಕೆ ಗೆಲುವಿನ ಬಳಿಕ ವಿಜಯ್​ಗೆ ಸೆಲೆಬ್ರಿಟಿಗಳ ಅಭಿನಂದನೆ – Kannada News | Celebrities congratulate Thalapathy Vijay after TVK win in Tamil Nadu Assembly Election 2026

ನಟ ದಳಪತಿ ವಿಜಯ್ (Thalapathy Vijay) ಅವರು ರಾಜಕೀಯದ ಅಖಾಡಕ್ಕೆ ಇಳಿದು ಮೊದಲ ಪ್ರಯತ್ನದಲ್ಲೇ ಜಯಭೇರಿ ಬಾರಿಸಿದ್ದಾರೆ. ಅವರ ಟಿವಿಕೆ (TVK) ಪಕ್ಷವು ತಮಿಳುನಾಡಿನಲ್ಲಿ ಭಾರಿ ಮುನ್ನಡೆ ಸಾಧಿಸಿದೆ. ಸ್ಪರ್ಧಿಸಿದ ಎರಡೂ ಕ್ಷೇತ್ರಗಳಲ್ಲೂ ವಿಜಯ್ ಅವರು ಜಯ ಸಾಧಿಸಿದ್ದಾರೆ. ವಿಜಯ್ ಅವರ ಈ ಗೆಲುವಿಗಾಗಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ದಳಪತಿ ವಿಜಯ್ ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಚಿಯಾನ್ ವಿಕ್ರಮ್ (Chiyaan Vikram), ನಾನಿ, ವಿಜಯ್ ದೇವರಕೊಂಡ, ಕಾಜಲ್ ಅಗರ್​ವಾಲ್ ಸೇರಿದಂತೆ ಹಲವರು ಶುಭಾಶಯ ತಿಳಿಸಿದ್ದಾರೆ.

ಚುನಾವಣೆ ವೇಳೆ ಚಿಯಾನ್ ವಿಕ್ರಮ್ ಅವರು ಟಿವಿಕೆ ಡ್ರೆಸ್ ಕೋಡ್ ಧರಿಸಿ ಬಂದು ಮತದಾನ ಮಾಡಿದ್ದರು. ಈಗ ದಳಪತಿ ವಿಜಯ್ ವಿನ್ ಆಗಿದ್ದು, ಅವರ ಜೊತೆಗಿರುವ ಫೋಟೋವನ್ನು ವಿಕ್ರಮ್ ಹಂಚಿಕೊಂಡಿದ್ದಾರೆ. ‘ಅಭಿನಂದನೆಗಳು ಗೆಳಯ ವಿಜಯ್. ನೀನು ಇಂದು ಇತಿಹಾಸ ಸೃಷ್ಟಿಸಿದೆ’ ಎಂದು ಚಿಯಾನ್ ವಿಕ್ರಮ್ ಅವರು ಪೋಸ್ಟ್ ಮಾಡಿದ್ದಾರೆ.

ತೆಲುಗು ನಟ ನಾನಿ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ‘ವಿಜಯ್ ಸರ್ ನಿಮಗೆ ಅಭಿನಂದನೆಗಳು. ತಮ್ಮ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸಿದ ತಮಿಳುನಾಡು ಜನರಿಗೆ ಒಳ್ಳೆಯದೇ ಆಗುತ್ತದೆ ಎಂಬ ಭರವಸೆ ಇದೆ’ ಎಂದು ನಾನು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘ವಿಜಯ್ ಅವರಿಗೆ ಅಭಿನಂದನೆ. ಈ ಗೆಲುವು ಭಾರಿ ದೊಡ್ಡದು. ಇದು ಐತಿಹಾಸಿಕ ವಿಜಯ’ ಎಂದು ಜಿವಿ ಪ್ರಕಾಶ್ ಕಮಾರ್ ಅವರು ಟ್ವೀಟ್ ಮಾಡಿದ್ದಾರೆ. ‘ಈ ರೀತಿ ಆಗುತ್ತದೆ ಎಂದು ನಾನು ನಿಜವಾಗಿಯೂ ನಂಬಿದ್ದೆ. ಈ ದೊಡ್ಡ ಗೆಲುವಿಗಾಗಿ ವಿಜಯ್ ಅವರಿಗೆ ಅಭಿನಂದನೆಗಳು. ನಿಮ್ಮ ಈ ಹೊಸ ಅಧ್ಯಾಯಕ್ಕೆ ಒಳ್ಳೆಯದಾಗಲಿ. ಯಾವಾಗಲೂ ಮುಂದಾಳು ಆಗಿರಿ’ ಎಂದು ನಟ ರವಿ ತೇಜ ಅವರು ಪೋಸ್ಟ್ ಮಾಡಿದ್ದಾರೆ.

‘ತಮಿಳುನಾಡು ರಾಜಕೀಯದಲ್ಲಿ ಈ ಹೊಸ ಮುಖ ಮತ್ತು ಹೊಸ ಅಧ್ಯಾಯ ನೋಡಲು ಉತ್ಸುಕನಾಗಿದ್ದೇನೆ. ಜನರಿಗೆ ಮತ್ತು ಹೊಸ ಮುಖ್ಯಮಂತ್ರಿಗೆ ಒಳ್ಳೆಯದಾಗಲಿ’ ಎಂದು ವಿಜಯ್ ದೇವರಕೊಂಡ ಅವರು ಶುಭ ಹಾರೈಸಿದ್ದಾರೆ. ಅಭಿಮಾನಿಗಳಿಂದ ಸಾವಿರಾರು ಸಂದೇಶಗಳು ಬರುತ್ತಿವೆ.

‘ತಮಿಳುನಾಡಿನ ಜನರು ಅತ್ಯಂತ ಹೆಮ್ಮೆಯಿಂದ, ಸ್ಪಷ್ಟವಾಗಿ ಮತ್ತು ಗಟ್ಟಿಯಾಗಿ ತಮ್ಮ ತೀರ್ಪನ್ನು ನೀಡಿದ್ದಾರೆ. ಇದು ಕೇವಲ ಗೆಲುವಲ್ಲ, ಇದು ಲಕ್ಷಾಂತರ ಜನರೊಂದಿಗಿನ ಆಳವಾದ ಮತ್ತು ಶಕ್ತಿಯುತವಾದ ಒಡನಾಟದ ಸಂಭ್ರಮವಾಗಿದೆ. ನೀವು ಈ ಪ್ರೇರಣಾದಾಯಕ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ನಿಮಗೆ ಅಪಾರ ಶಕ್ತಿ ಮತ್ತು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಅನೇಕ ಜನರು ನಿರೀಕ್ಷಿಸುತ್ತಿರುವ ಬದಲಾವಣೆಯನ್ನು ನೀವು ತರುವಂತಾಗಲಿ’ ಎಂದು ನಟಿ ಕಾಜಲ್ ಅಗರ್​ವಾಲ್ ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಜಯಭೇರಿ ಬಾರಿಸಿದ ಟಿವಿಕೆ: ದಳಪತಿ ವಿಜಯ್ ಮನೆ ಎದುರು ಪೊಲೀಸ್ ಬಿಗಿ ಭದ್ರತೆ

‘ಮೊದಲ ಚುನಾವಣೆಯಲ್ಲಿ ಜನರ ಮೇಲೆ ಇಂಥ ದೊಡ್ಡ ಪರಿಣಾಮ ಬೀರಿದ್ದಕ್ಕಾಗಿ ಮತ್ತು ಈ ಬಹುದೊಡ್ಡ ಗೆಲುವಿಗಾಗಿ ವಿಜಯ್ ಅವರಿಗೆ ಅಭಿನಂದನೆಗಳು. ಜನಸೇವೆಯ ನಿಮ್ಮ ಕೆಲಸಕ್ಕೆ ಒಳಿತಾಗಲಿ’ ಎಂದು ಶಿವಕಾರ್ತಿಕೇಯನ್ ಅವರು ವಿಶ್ ಮಾಡಿದ್ದಾರೆ. ಬಾಲಿವುಡ್ ನಟ ಟೈಗರ್ ಶ್ರಾಫ್, ನಟಿ ರಂಭಾ, ಕೆವಿಎನ್ ಪ್ರೊಡಕ್ಷನ್ಸ್ ಸೇರಿದಂತೆ ಹಲವರು ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಂಚರಾಜ್ಯ ಚುನಾವಣೆ ಫಲಿತಾಂಶ: ಪ್ರಧಾನಿ ಮೋದಿ ಸರಣಿ ಟ್ವೀಟ್ ಮೂಲಕ ಕಾರ್ಯಕರ್ತರು, ಮತದಾರರಿಗೆ ಧನ್ಯವಾದ – Kannada News | PM Narendra Modi series of tweets hailing NDA performance in five states assembly elections

ನವದೆಹಲಿ, ಮೇ 4: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಬಹುತೇಕ ಹೊರಬಿದ್ದಿದೆ. ಐದು ರಾಜ್ಯಗಳ ಪೈಕಿ ಎನ್​ಡಿಎ ಮೈತ್ರಿಕೂಟ ಮೂರರಲ್ಲಿ ಅಧಿಕಾರ ಪಡೆಯಲಿದೆ. ಪಶ್ಚಿಮ ಬಂಗಾಳ, ಅಸ್ಸಾಮ್ ಮತ್ತು ಪುದುಚೆರಿಯಲ್ಲಿ ಬಿಜೆಪಿ ನೇತೃತ್ವದಲ್ಲಿ ಎನ್​ಡಿಎ ನಿಚ್ಚಳ ಬಹುಮತ ಪಡೆಯುತ್ತಿದೆ. ಕೇರಳದಲ್ಲೂ 3 ಸ್ಥಾನ ಗೆದ್ದು ತನ್ನ ಇರುವಿಕೆಯನ್ನ ಬಲಪಡಿಸಿಕೊಂಡಿದೆ. ತಮಿಳುನಾಡಿನಲ್ಲಿ ಎನ್​ಡಿಎ ಒಂದಷ್ಟು ಸ್ಥಾನ ಕಳೆದುಕೊಂಡರೂ ಪ್ರಬಲ ಉಪಸ್ಥಿತಿ ಹೊಂದಿದೆ. ಬಹುಮತ ಪಡೆದಿರುವ ಮೂರು ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳದ ಗೆಲುವು ಬಿಜೆಪಿಗೆ ಐತಿಹಾಸಿಕವಾದುದು. ಇಲ್ಲಿ ಅದರ ಚೊಚ್ಚಲ ಗೆಲುವು. ಅಸ್ಸಾಮ್ ಮತ್ತು ಪುದುಚೇರಿಯಲ್ಲಿ ಅಧಿಕಾರ ಉಳಿಸಿಕೊಳ್ಳಲು ಯಶಸ್ವಿಯಾಗಿದೆ. ಒಟ್ಟಾರೆ ಈ ಪಂಚರಾಜ್ಯ ಚುನಾವಣೆಗಳು ಬಿಜೆಪಿಗೆ ಸಕಾರಾತ್ಮಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಹಜವಾಗಿಯೇ ಎನ್​ಡಿಎ ಸಾಧನೆಯನ್ನು ಪ್ರಶಂಸಿಸಿ ಸರಣಿ ಟ್ವೀಟ್​ಗಳನ್ನು ಮಾಡಿದ್ದಾರೆ.

ಬಂಗಾಳದಲ್ಲಿ ಅರಳಿದ ಕಮಲ

‘ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಅವಿಸ್ಮರಣೀಯವಾಗಿ ಉಳಿಯಲಿದೆ. ಜನರ ಅಧಿಕಾರ ಉಳಿದಿದೆ. ಬಿಜೆಪಿಯ ಉತ್ತಮ ಆಡಳಿತದ ರಾಜಕಾರಣಕ್ಕೆ ಗೆಲುವಾಗಿದೆ. ಬಂಗಾಳದ ಪ್ರತಿಯೊಬ್ಬ ವ್ಯಕ್ತಿಗೂ ತಲೆಬಾಗುತ್ತೇನೆ. ಬಿಜೆಪಿಗೆ ಅದ್ಬುತ ಜನಾದೇಶ ಸಿಕ್ಕಿದೆ. ಜನರ ಆಶೋತ್ತರ ಈಡೇರಿಸಲು ಸಾಧ್ಯವಾದ ಎಲ್ಲವನ್ನೂ ನಮ್ಮ ಪಕ್ಷ ಮಾಡುತ್ತದೆ’ ಎಂದು ನರೇಂದ್ರ ಮೋದಿ ತಮ್ಮ ಎಕ್ಸ್ ಪೋಸ್ಟ್​ವೊಂದರಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Assam Assembly Election Results: ಅಸ್ಸಾಂನಲ್ಲಿ ಮತ್ತೆ ಅಧಿಕಾರಕ್ಕೇರಲಿರುವ ಬಿಜೆಪಿ ನೀಡಿದ ಭರವಸೆಗಳೇನು?

ತಮಿಳುನಾಡಿಲ್ಲಿ ಮತದಾರರಿಗೆ ಮೋದಿ ಧನ್ಯವಾದ

ತಮಿಳುನಾಡಿನಲ್ಲಿ ಎಐಎಡಿಎಂಕೆ ನೇತೃತ್ವದ ಎನ್​ಡಿಎ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಆದರೂ ನರೇಂದ್ರ ಮೋದಿ ಅವರು ಎನ್​​ಡಿಎಗೆ ಬೆಂಬಲಿಸಿದ ಮತದಾರರಿಗೆ ಕೃತಜ್ಞತೆ ಅರ್ಪಿಸಿದ್ದಾರೆ. ಅತಿಹೆಚ್ಚು ಸ್ಥಾನ ಪಡೆದ ಟಿವಿಕೆ ಪಕ್ಷಕ್ಕೆ ಧನ್ಯವಾದಹೇಳಿದ್ದಾರೆ. ತಮಿಳುನಾಡನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಕೇಂದ್ರ ಪ್ರಯತ್ನ ನಿಲ್ಲಿಸದು ಎಂದೂ ಅವರು ಭರವಸೆ ನೀಡಿದ್ದಾರೆ.

ಪುದುಚೇರಿಯಲ್ಲಿ ಎನ್​ಡಿಎ ಕಾರ್ಯಕರ್ತರ ಪರಿಶ್ರಮಕ್ಕೆ ಮೋದಿ ಮೆಚ್ಚುಗೆ

ತಮಿಳುನಾಡಿಗೆ ಅಂಟಿಕೊಂಡಿರುವ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಎನ್​ಡಿಎ ಅಧಿಕಾರ ಉಳಿಸಿಕೊಂಡಿದೆ. ಮೋದಿ ಈ ಸಂಬಂಧ ಟ್ವೀಟ್ ಮಾಡಿದ್ದು, ಪುದುಚೇರಿಯಲ್ಲಿ ಎನ್​ಡಿಎ ಕಾರ್ಯಕರ್ತರ ಪರಿಶ್ರಮವನ್ನು ಮೆಚ್ಚಿಕೊಂಡಿದ್ದಾರೆ.

ಕೇರಳದಲ್ಲಿ ಎನ್​ಡಿಎ ಬೆಂಬಲಿಸಿದ ಮತದಾರರಿಗೆ ಮೋದಿ ಧನ್ಯವಾದ

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 3 ಸ್ಥಾನ ಗೆಲ್ಲಲು ಯಶಸ್ವಿಯಾಗಿದೆ. ಕಳೆದ ಬಾರಿ ಶೂನ್ಯ ಇತ್ತು. ಈ ಬಾರಿ ಎನ್​ಡಿಎಗೆ ಮತ ಚಲಾಯಿಸಿ ಮತದಾರರಿಗೆ ಮೋದಿ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ದಾರೆ. ಹಾಗೆಯೇ ಬಹುಮತ ಪಡೆದ ಯುಡಿಎಫ್ ಅನ್ನೂ ಅಭಿನಂದಿಸಿದ್ದಾರೆ.

ಇದನ್ನೂ ಓದಿ: ಜನನಾಯಗನ್ ‘ಸೇಡು’?; ಬಿಜೆಪಿ ಕಾರಣಕ್ಕೆ ಎಐಎಡಿಎಂಕೆ ಬೇಡ ಅಂತಾರಾ ವಿಜಯ್?; ದಳಪತಿ ಮುಂದಿರುವ ಆಯ್ಕೆಗಳೇನು?

ಅಸ್ಸಾಮ್​ನಲ್ಲಿ ಬಿಜೆಪಿ ಗೆಲುವು; ಕಾರ್ಯಕರ್ತರಿಗೆ ಮೋದಿ ಧನ್ಯವಾದ

ಅಸ್ಸಾಮ್​ನಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ನಿಚ್ಚಳ ಬಹುಮತ ಪಡೆದಿದೆ. ಕಳೆದ ಬಾರಿಗಿಂತಲೂ ಹೆಚ್ಚಿನ ಸ್ಥಾನ ಗಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಎನ್​ಡಿಎ ಸಾಧನೆಯನ್ನು ಶ್ಲಾಘಿಸಿದ್ದಾರೆ. ಉತ್ತಮ ಆಡಳಿತವು ಜನರ ಬೆಂಬಲ ಪಡೆದಿದೆ ಎಂಬುದನ್ನು ಎತ್ತಿ ತೋರಿಸಿ ಟ್ವೀಟ್ ಮಾಡಿದ್ದಾರೆ.

ಒಟ್ಟಾರೆಯಾಗಿ ಪಂಚರಾಜ್ಯ ಚುನಾವಣೆಗಳು ಬಿಜೆಪಿ ಪಾಲಿಗೆ ಸಕಾರಾತ್ಮಕವಾಗಿವೆ. ಎಡಪಕ್ಷಗಳ ಕೈಯಲ್ಲಿದ್ದ ಇದ್ದ ಒಂದೇ ಒಂದು ರಾಜ್ಯವು ಕೈತಪ್ಪಿದೆ. ಕಾಂಗ್ರೆಸ್ ಅಧಿಕಾರದ ರಾಜ್ಯಗಳ ಸಂಖ್ಯೆಯಲ್ಲಿ ಒಂದು ಹೆಚ್ಚಿದೆ. ಬಿಜೆಪಿಯದ್ದೂ ಒಂದು ಹೆಚ್ಚಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

MI vs LSG Playing XI: ಮುಂಬೈ ತಂಡದಲ್ಲಿ ನಾಯಕ ಸೇರಿದಂತೆ ನಾಲ್ಕು ಬದಲಾವಣೆ – Kannada News | MI vs LSG Playing XI Mumbai Indians vs Lucknow Super Giants Today IPL 2026 match Confirmed playing 11 details with name in Kannada

ಐಪಿಎಲ್ 2026 (IPL 2026) ರ 47 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (MI vs LSG) ನಡುವೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇದುವರೆಗೆ ಈ ಆವೃತ್ತಿಯಲ್ಲಿ ಉಭಯ ತಂಡಗಳ ಪ್ರದರ್ಶನ ನಿರಸವಾಗಿದೆ. ಏಕೆಂದರೆ ಮುಂಬೈ ಆಡಿರುವ 9 ಪಂದ್ಯಗಳಲ್ಲಿ 7 ರಲ್ಲಿ ಸೋತಿದ್ದರೆ, ಇತ್ತ ಲಕ್ನೋ ಆಡಿರುವ 8 ಪಂದ್ಯಗಳಲ್ಲಿ 6 ರಲ್ಲಿ ಸೋತಿದೆ. ಇದರರ್ಥ ಮುಂಬೈ ಲೀಗ್ ಹಂತದಲ್ಲೇ ತನ್ನ ಪ್ರಯಾಣವನ್ನು ಅಂತ್ಯಗೊಳಿಸುವುದು ಭಾಗಶಃ ಖಚಿತವಾಗಿದೆ. ಇತ್ತ ಲಕ್ನೋ ಮುಂದಿನ ಸುತ್ತಿಗೆ ಅರ್ಹತೆ ಪಡೆಯಬೇಕಾದರೆ ಉಳಿದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಿದೆ. ಹೀಗಾಗಿ ಈ ಪಂದ್ಯ ಲಕ್ನೋಗೆ ಬಹಳ ಮುಖ್ಯವಾಗಿದೆ.

ಟಾಸ್ ಗೆದ್ದ ಮುಂಬೈ

ಈ ಪಂದ್ಯಕ್ಕೆ ಮುಂಬೈ ತಂಡದ ನಾಯಕನನ್ನು ಬದಲಿಸಲಾಗಿದೆ. ಗಾಯದ ಕಾರಣದಿಂದಾಗಿ ಹಾರ್ದಿಕ್ ಪಾಂಡ್ಯ ಈ ಪಂದ್ಯವನ್ನು ಆಡುತ್ತಿಲ್ಲ. ಹೀಗಾಗಿ ಅವರ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಮುಂಬೈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಸೂರ್ಯಕುಮಾರ್ ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ. ಹೀಗಾಗಿ ಲಕ್ನೋ ತಂಡ ಮೊದಲು ಬ್ಯಾಟಿಂಗ್‌ ಮಾಡಲಿದೆ. ಇದರ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ.

ಅದರಂತೆ ಮುಂಬೈ ತಂಡದಲ್ಲಿ ನಾಯಕ ಸೇರಿದಂತೆ ಮೂರು ಬದಲಾವಣೆಗಳನ್ನು ಮಾಡಲಾಗಿದೆ. ಗಾಯದ ಕಾರಣದಿಂದಾಗಿ ಕೆಲವು ಪಂದ್ಯಗಳಿಗೆ ಗೈರಾಗಿದ್ದ ಮಾಜಿ ನಾಯಕ ರೋಹಿತ್ ಶರ್ಮಾ ಈ ಪಂದ್ಯದಿಂದ ತಂಡದಲ್ಲಿ ಆಡುತ್ತಿದ್ದಾರೆ. ಹಾಗೆಯೇ ಹಾರ್ದಿಕ್ ಪಾಂಡ್ಯ ಬದಲಿಗೆ ದೀಪಕ್ ಚಾಹರ್ ಆಡುತ್ತಿದ್ದರೆ, ಟ್ರೆಂಟ್ ಬೌಲ್ಟ್ ಬದಲಿಗೆ ಕಾರ್ಬಿನ್ ಬಾಷ್ ಆಡಲಿದ್ದಾರೆ. ಇತ್ತ ಲಕ್ನೋ ತಂಡದಲ್ಲೂ ಮೂರು ಬದಲಾವಣೆಗಳನ್ನು ಮಾಡಲಾಗಿದೆ.

ಉಭಯ ತಂಡಗಳ ಪ್ಲೇಯಿಂಗ್ 11

ಮುಂಬೈ ಇಂಡಿಯನ್ಸ್: ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್), ನಮನ್ ಧೀರ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ವಿಲ್ ಜಾಕ್ಸ್, ರಾಜ್ ಬಾವಾ (ರಾಬಿನ್ ಮಿಂಜ್ ಬದಲಿಗೆ), ಕಾರ್ಬಿನ್ ಬಾಷ್ (ಟ್ರೆಂಟ್ ಬೌಲ್ಟ್ ಬದಲಿಗೆ), ದೀಪಕ್ ಚಹಾರ್ (ಹಾರ್ದಿಕ್ ಪಾಂಡ್ಯ ಬದಲಿಗೆ), ಜಸ್ಪ್ರೀತ್ ಬುಮ್ರಾ, ಎಎಮ್ ಗಜನ್ಫರ್, ಮತ್ತು ರಘು ಶರ್ಮಾ (ಕ್ರಿಶ್ ಭಗತ್ ಬದಲಿಗೆ).

ಇಂಪ್ಯಾಕ್ಟ್ ಪ್ಲೇಯರ್ಸ್​: ರೋಹಿತ್ ಶರ್ಮಾ, ಮಯಾಂಕ್ ರಾವತ್, ರಾಬಿನ್ ಮಿಂಜ್, ಶಾರ್ದೂಲ್ ಠಾಕೂರ್ ಮತ್ತು ಟ್ರೆಂಟ್ ಬೌಲ್ಟ್.

ಲಕ್ನೋ ಸೂಪರ್​ಜೈಂಟ್ಸ್: ಮಿಚೆಲ್ ಮಾರ್ಷ್, ಜೋಶ್ ಇಂಗ್ಲಿಸ್ (ಆಯುಷ್ ಬಡೋನಿ ಬದಲಿಗೆ), ನಿಕೋಲಸ್ ಪೂರನ್, ಐಡೆನ್ ಮಾರ್ಕ್ರಾಮ್, ರಿಷಭ್ ಪಂತ್ (ನಾಯಕ), ಅಕ್ಷತ್ ರಘುವಂಶಿ (ಮುಕುಲ್ ಚೌಧರಿ ಬದಲಿಗೆ), ಹಿಮ್ಮತ್ ಸಿಂಗ್ (ದಿಗ್ವೇಶ್ ಸಿಂಗ್ ಬದಲಿಗೆ), ಮೊಹಮ್ಮದ್ ಶಮಿ, ಮೊಹ್ಸಿನ್ ಖಾನ್, ಅವೇಶ್ ಖಾನ್, ಮತ್ತು ಪ್ರಿನ್ಸ್ ಯಾದವ್.

ಇಂಪ್ಯಾಕ್ಟ್ ಪ್ಲೇಯರ್ಸ್​: ಮಣಿಮಾರನ್ ಸಿದ್ಧಾರ್ಥ್, ದಿಗ್ವೇಶ್ ಸಿಂಗ್, ಮಯಾಂಕ್ ಯಾದವ್, ಶಹಬಾಜ್ ಅಹಮದ್ ಮತ್ತು ಅಬ್ದುಲ್ ಸಮದ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:25 pm, Mon, 4 May 26

Source link

ಬಂಗಾಳಿ ಧೋತಿ ಧರಿಸಿ ಬಿಜೆಪಿ ಕಚೇರಿಗೆ ಭರ್ಜರಿ ಎಂಟ್ರಿ ಕೊಟ್ಟ ಪ್ರಧಾನಿ ಮೋದಿ – Kannada News | PM Modi arrives at BJP headquarters in Delhi wearing a Bengali dhoti for victory speech

ನವದೆಹಲಿ, ಮೇ 4: ಪಶ್ಚಿಮ ಬಂಗಾಳ (West Bengal Elections) ಮತ್ತು ಅಸ್ಸಾಂನಲ್ಲಿ ಬಿಜೆಪಿ ಭಾರೀ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಗೆ ಪ್ರಧಾನಿ ಮೋದಿ (PM Modi Speech) ಆಗಮಿಸಿದ್ದಾರೆ. ತಾವು ಹೋಗುವ ರಾಜ್ಯಗಳಲ್ಲಿ ಅಲ್ಲಿನ ಸಾಂಪ್ರದಾಯಿಕ ಉಡುಗೆ ತೊಡುವ ಮೂಲಕ ಗಮನ ಸೆಳೆಯುವ ಪ್ರಧಾನಿ ಮೋದಿ ಬಂಗಾಳದ ಐತಿಹಾಸಿಕ ಗೆಲುವನ್ನು ಸಂಭ್ರಮಿಸಲು ಮತ್ತು ಬಂಗಾಳದ ಜನತೆಗೆ ತಮ್ಮ ಕೃತಜ್ಞತೆ ಸಲ್ಲಿಸಲು ಇಂದಿನ ಭಾಷಣಕ್ಕೆ ಬಂಗಾಳಿ ಧೋತಿಯನ್ನು ಧರಿಸಿ ಆಗಮಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಉಡುಗೆ-ತೊಡುಗೆಗಳ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ ನಂತರ ಇಂದು ಅವರು ಬಂಗಾಳಿ ಶೈಲಿಯಲ್ಲಿ ಧೋತಿ-ಕುರ್ತಾ ಧರಿಸಿ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಗೆ ಆಗಮಿಸಿದರು. ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version