ನೀಟ್ ಮರುಪರೀಕ್ಷೆ: ಭದ್ರತೆ, ಗುಪ್ತಚರ ಮತ್ತು ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳೊಂದಿಗೆ ಸಚಿವ ಧರ್ಮೇಂದ್ರ ಪ್ರಧಾನ್ ಸಭೆ – Kannada News | Neet UG re exam: Dharmendra Pradhan chairs high level meeting with Security and Intelligence agencies

ನವದೆಹಲಿ, ಮೇ 20: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ಮುಂಬರುವ ನೀಟ್-ಯುಜಿ (NEET-UG) ಮರು-ಪರೀಕ್ಷೆಯ (Re-examination) ಹಿನ್ನೆಲೆಯಲ್ಲಿ ಕೇಂದ್ರ ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ್ದಾರೆ. ಪರೀಕ್ಷೆಯನ್ನು ಸುರಕ್ಷಿತ, ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ನಡೆಸಲು ಕಟ್ಟುನಿಟ್ಟಿನ ನಿಗಾ ಮತ್ತು ದೋಷರಹಿತ ಭದ್ರತಾ ವ್ಯವಸ್ಥೆಗಳನ್ನು ಮಾಡುವಂತೆ ಅವರು ಒತ್ತಿಹೇಳಿದ್ದಾರೆ.

ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಮಹಾನಿರ್ದೇಶಕರು ಸಹ ಈ ಸಭೆಯಲ್ಲಿ ಭಾಗವಹಿಸಿದ್ದರು. ಪರೀಕ್ಷಾ ಪ್ರಕ್ರಿಯೆಯಲ್ಲಿ ಎದುರಾಗಬಹುದಾದ ಯಾವುದೇ ರೀತಿಯ ಲೋಪದೋಷಗಳನ್ನು ಮುಂಚಿತವಾಗಿಯೇ ಗುರುತಿಸಲು ಮತ್ತು ಸಮಯಕ್ಕೆ ಸರಿಯಾಗಿ ತಡೆಗಟ್ಟುವ ಹಾಗೂ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧತೆಗಳನ್ನು ವಿವರವಾಗಿ ಪರಿಶೀಲಿಸಲಾಯಿತು.

ಧರ್ಮೇಂದ್ರ ಪ್ರಧಾನ್ ಸಭೆ ನಡೆಸುತ್ತಿರುವ ವಿಡಿಯೋ

ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳೊಂದಿಗೆ ಸಭೆ

ಇದೇ ಸಂದರ್ಭದಲ್ಲಿ ಪ್ರಮುಖ ಸಾಮಾಜಿಕ ಮಾಧ್ಯಮಗಳಾದ ಮೆಟಾ (Meta), ಗೂಗಲ್ (Google) ಮತ್ತು ಟೆಲಿಗ್ರಾಮ್ (Telegram) ಪ್ರತಿನಿಧಿಗಳೊಂದಿಗೆ ಮತ್ತೊಂದು ಪ್ರತ್ಯೇಕ ಸಭೆ ನಡೆಸಲಾಯಿತು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ, ವಿಶೇಷವಾಗಿ ಟೆಲಿಗ್ರಾಮ್ ಚಾನೆಲ್‌ಗಳು ಮತ್ತು ಅನಾಮಧೇಯ ಆನ್‌ಲೈನ್ ಗ್ರೂಪ್‌ಗಳ ಮೂಲಕ ಹರಡುತ್ತಿರುವ ಸುಳ್ಳು ಸುದ್ದಿಗಳ (Misinformation) ಬಗ್ಗೆ ಸಭೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಲಾಯಿತು.

ಇದನ್ನೂ ಓದಿ: ಒಂದು ರಾಷ್ಟ್ರ, ಒಂದು ಚುನಾವಣೆಯಿಂದ 7 ಲಕ್ಷ ಕೋಟಿ ರೂ ಉಳಿತಾಯ, ಜಿಡಿಪಿ ಶೇ. 1.6 ವೃದ್ಧಿ: ಜೆಪಿಸಿ ಅನಿಸಿಕೆ

ಸುಳ್ಳು ಸುದ್ದಿಗಳ ಜಾಲ ಮತ್ತು ತನಿಖೆ

ಅಧಿಕಾರಿಗಳು ಗಮನಿಸಿದಂತೆ, ಪ್ರಮುಖ ಪರೀಕ್ಷೆಗಳು ಹತ್ತಿರ ಬರುತ್ತಿದ್ದಂತೆ ಇಂತಹ ಹಲವಾರು ಚಾನೆಲ್‌ಗಳು ಸಕ್ರಿಯಗೊಳ್ಳುತ್ತವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಸುಳ್ಳು ಹಕ್ಕುಗಳು, ಕ್ಲಿಕ್‌ಬೈಟ್ (clickbait) ಕಂಟೆಂಟ್‌ಗಳು ಮತ್ತು ಧೃಢೀಕರಿಸದ ಮಾಹಿತಿಗಳನ್ನು ಹರಡುವ ಮೂಲಕ ಇವು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮತ್ತು ಗೊಂದಲವನ್ನು ಸೃಷ್ಟಿಸುತ್ತವೆ. ಇಂತಹ ಲಿಂಕ್‌ಗಳು ಬಳಕೆದಾರರನ್ನು ಸ್ವಯಂಚಾಲಿತ ಬೋಟ್‌ಗಳು (bots) ಮತ್ತು ಸುಳ್ಳು ಮಾಹಿತಿಯನ್ನು ಹರಡುವ ನಕಲಿ ಗ್ರೂಪ್‌ಗಳಿಗೆ ಕರೆದೊಯ್ಯುತ್ತವೆ ಎಂದು ಸಭೆಯಲ್ಲಿ ಎತ್ತಿ ತೋರಿಸಲಾಯಿತು.

ಗುಪ್ತಚರ ಸಂಸ್ಥೆಗಳು ನೀಡಿದ ಮಾಹಿತಿಯ ಪ್ರಕಾರ, ಕೇವಲ ಕೆಲವು ನಿರ್ದಿಷ್ಟ ಫೋನ್ ಸಂಖ್ಯೆಗಳನ್ನು ಬಳಸಿಕೊಂಡು ಇಂತಹ ನಕಲಿ ಮತ್ತು ಸಂಶಯಾಸ್ಪದ ಚಾನೆಲ್‌ಗಳನ್ನು ನಿರ್ವಹಿಸಲಾಗುತ್ತಿದೆ. ಇದು ವ್ಯವಸ್ಥಿತ ಮತ್ತು ಸಂಘಟಿತ ಜಾಲವಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಸೂಚಿಸುತ್ತದೆ.

ಇದನ್ನೂ ಓದಿ: ಭಾರತ-ಇಟಲಿ ನಡುವೆ ವಿಶೇಷ ಕಾರ್ಯತಂತ್ರಾತ್ಮಕ ಪಾಲುದಾರಿಕೆ: ಪಿಎಂ ಮೋದಿ ಘೋಷಣೆ

ಶಿಕ್ಷಣ ಸಚಿವರ ಕಡಕ್ ಸೂಚನೆಗಳು

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂತಹ ಜಾಲಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ:

  • ಪರೀಕ್ಷೆಗೂ ಮುನ್ನ ಸುಳ್ಳು ಮಾಹಿತಿ, ಪ್ರಚಾರ ಮತ್ತು ಆತಂಕವನ್ನು ಹರಡುವ ಚಾನೆಲ್‌ಗಳನ್ನು ಮುಂಚಿತವಾಗಿಯೇ ಗುರುತಿಸಿ, ಬ್ಲಾಕ್ ಮಾಡಲು ಮತ್ತು ಅವುಗಳನ್ನು ಡಿಲೀಟ್ (takedown) ಮಾಡಲು ಆದೇಶಿಸಿದ್ದಾರೆ.
  • ಸುಳ್ಳು ಸುದ್ದಿಗಳನ್ನು ತಕ್ಷಣವೇ ತಡೆಗಟ್ಟಲು ಮತ್ತು ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಕಾಪಾಡಲು ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಶಿಕ್ಷಣ ಸಚಿವಾಲಯ, ಎನ್‌ಟಿಎ (NTA) ಮತ್ತು ಕಾನೂನು ಜಾರಿ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡಬೇಕು ಎಂದು ಸಚಿವರು ಒತ್ತಿಹೇಳಿದ್ದಾರೆ.
  • ವಿದ್ಯಾರ್ಥಿಗಳನ್ನು ಇಂತಹ ದಾರಿ ತಪ್ಪಿಸುವ ಜಾಲಗಳಿಂದ ರಕ್ಷಿಸುವುದು ಮತ್ತು ಪರೀಕ್ಷಾ ಪ್ರಕ್ರಿಯೆಯ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಉಳಿಸಿಕೊಳ್ಳುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 7:02 pm, Wed, 20 May 26

Source link

KKR vs MI Live Updates, IPL 2026: ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆ – Kannada News | IPL 2026 Live Updates, KKR vs MI Live Match Scorecard Kolkata Knight Riders vs Mumbai Indians online at Eden Gardens Kolkata in Kannada

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಐಪಿಎಲ್‌ನ 19 ನೇ ಸೀಸನ್‌ನ 65 ನೇ ಪಂದ್ಯದಲ್ಲಿ ಪರಸ್ಪರ ಎದುರಾಗುತ್ತಿವೆ. 19 ನೇ ಸೀಸನ್‌ನಲ್ಲಿ ಕೋಲ್ಕತ್ತಾ ಮತ್ತು ಮುಂಬೈ ನಡುವಿನ 13 ನೇ ಪಂದ್ಯ ಇದಾಗಿದೆ. ಮುಂಬೈ ತಂಡವು ಟೂರ್ನಿಯಿಂದ ಹೊರಗುಳಿದಿದೆ. ಇತ್ತ ಕೆಕೆಆರ್ ಈ ಪಂದ್ಯವನ್ನು ಗೆದ್ದು, ಪ್ಲೇಆಫ್‌ನಲ್ಲಿ ತನ್ನ ಭರವಸೆಯನ್ನು ಜೀವಂತವಾಗಿಡಲು ಪ್ರಯತ್ನಿಸಲಿದೆ.

Source link

ಹುಟ್ಟುಹಬ್ಬದ ದಿನ ಪ್ರಶಾಂತ್ ನೀಲ್​​ಗೆ ಧನ್ಯವಾದ ಹೇಳಿದ ಜೂ ಎನ್​​ಟಿಆರ್ – Kannada News | Jr NTR praised director Prashanth Neel on his Birthday

ಇಂದು (ಮೇ 20) ಜೂ ಎನ್​​ಟಿಆರ್ (Jr NTR) ಹುಟ್ಟುಹಬ್ಬ. ತಮ್ಮ 43ನೇ ಹುಟ್ಟುಹಬ್ಬವನ್ನು ಜೂ ಎನ್​​ಟಿಆರ್ ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನ ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಜೂ ಎನ್​​ಟಿಆರ್, ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಧನ್ಯವಾದ ಹೇಳಿದ್ದಾರೆ. ‘ಕೆಜಿಎಫ್’ ಅಂಥಹಾ ಬೃಹತ್ ಸಿನಿಮಾಗಳನ್ನು ನೀಡಿರುವ ಕನ್ನಡದ ಹೆಮ್ಮೆಯ ನಿರ್ದೇಶಕ ಪ್ರಶಾಂತ್ ನೀಲ್ ಈಗ ಜೂ ಎನ್​​ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾ ನಿರ್ದೇಶಿಸುತ್ತಿದ್ದು, ಆ ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿ ಭಾರಿ ವೈರಲ್ ಆಗಿದೆ. ಮೆಚ್ಚುಗೆಯ ಸುರಿಮಳೆಯೇ ಸುರಿಯುತ್ತಿದೆ. ಇದೇ ಕಾರಣಕ್ಕೆ ಜೂ ಎನ್​​ಟಿಆರ್, ಪ್ರಶಾಂತ್ ನೀಲ್​​ಗೆ ಧನ್ಯವಾದ ಹೇಳಿದ್ದಾರೆ.

ತಮ್ಮ ಇನ್​​ಸ್ಟಾಗ್ರಾಂ ಪೋಸ್ಟ್‌ನಲ್ಲಿ ಅಭಿಮಾನಿಗಳಿಗೆ ವಿಶೇಷ ಕೃತಜ್ಞತೆ ಸಲ್ಲಿಸಿರುವ ಜೂನಿಯರ್ ಎನ್‌ಟಿಆರ್, ‘ವರ್ಷಗಳಿಂದ ನೀವು ತೋರುತ್ತಿರುವ ಪ್ರೀತಿ, ಹಾರೈಕೆ ಮತ್ತು ನಿರಂತರ ಬೆಂಬಲ ನನ್ನ ಸಿನಿ ಪಯಣದಲ್ಲಿ ಸಿಗುತ್ತಿರುವ ಅತಿ ದೊಡ್ಡ ಆಶೀರ್ವಾದಗಳಾಗಿವೆ. ನನ್ನ ಪ್ರತಿಯೊಂದು ಹಂತದಲ್ಲೂ ಇಷ್ಟೊಂದು ಪ್ರೀತಿಯಿಂದ ನನ್ನ ಜೊತೆ ನಿಂತಿರುವ ನನ್ನ ಪ್ರೀತಿಯ ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು ‘ಡ್ರ್ಯಾಗನ್’ ಸಿನಿಮಾದ ಟೀಸರ್​​ನ ಯಶಸ್ಸಿನ ಸಂಪೂರ್ಣ ಕ್ರೆಡಿಟ್ ಅನ್ನು ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ನೀಡಿರುವ ತಾರಕ್, ‘ಡ್ರ್ಯಾಗನ್ ಗ್ಲಿಂಪ್ಸ್‌ಗೆ ಸಿಕ್ಕ ಪ್ರತಿಕ್ರಿಯೆಯನ್ನು ನೋಡಿ ನಮ್ಮ ಮುಖದಲ್ಲಿ ದೊಡ್ಡ ನಗು ಮೂಡಿದೆ. ಅಷ್ಟೇ ಅಲ್ಲದೆ, ನಿಮ್ಮೆಲ್ಲರಿಗೂ ಒಂದು ಮರೆಯಲಾಗದ ಸಿನಿಮೀಯ ಅನುಭವವನ್ನು ನೀಡಲು ಇದು ನಮಗೆ ಮತ್ತಷ್ಟು ಆತ್ಮವಿಶ್ವಾಸ ಮತ್ತು ಉತ್ಸಾಹವನ್ನು ತುಂಬಿದೆ. ಆದರೆ ಈ ಎಲ್ಲ ಯಶಸ್ಸಿನ ಸಂಪೂರ್ಣ ಶ್ರೇಯಸ್ಸು ಆ ಒಬ್ಬನೇ ವ್ಯಕ್ತಿಗೆ ಸಲ್ಲಬೇಕು, ಅವರೇ ‘ಡ್ರ್ಯಾಗನ್’ ಎಂಬ ಅದ್ಭುತ ಲೋಕದ ಕನಸು ಕಂಡ ನನ್ನ ಪ್ರಶಾಂತ್ ನೀಲ್’ ಎಂದು ನಿರ್ದೇಶಕರ ಬೆನ್ನು ತಟ್ಟಿದ್ದಾರೆ.

ಇದನ್ನೂ ಓದಿ:‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ ಗಿಲ್ಲಿ ನಟನ ಹೊಸ ಸಿನಿಮಾ ‘ಸರ್ವೇ ನಂಬರ್ 45’

ಕೊನೆಯದಾಗಿ ಚಿತ್ರರಂಗದ ಸಹೋದ್ಯೋಗಿಗಳಿಗೆ ಹಾಗೂ ಮಾಧ್ಯಮ ಮಿತ್ರರಿಗೆ ವಂದಿಸಿರುವ ನಟ, ‘ನನಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ ಮತ್ತು ಚಿತ್ರಕ್ಕೆ ಬೆಂಬಲ ನೀಡಿದ ಎಲ್ಲಾ ಹಿತೈಷಿಗಳು, ಚಿತ್ರರಂಗದ ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಮಾಧ್ಯಮ ಮಿತ್ರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿ ಹೀಗೆಯೇ ಇರಲಿ’ ಎಂದು ಬರೆಯುವ ಮೂಲಕ ತಮ್ಮ ಸಹಿಯಿರುವ ಪತ್ರವನ್ನು ಪೋಸ್ಟ್ ಮಾಡಿದ್ದಾರೆ.

ಜೂ ಎನ್​ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದು, ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದೆ. ಮಾದಕ ವಸ್ತು ಲೋಕದ ಮೇಲೆ ಹಿಡಿತ ಸಾಧಿಸಲು ಬಡಿದಾಡುವ ಗ್ಯಾಂಗುಗಳ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಕನ್ನಡತಿ ರುಕ್ಮಿಣಿ ವಸಂತ್ ನಾಯಕಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ – Kannada News | Basangouda Patil Yatnal Drops Explosive Remarks on Harihar Panchamasali Peeth Dispute

ಹುಬ್ಬಳ್ಳಿ, ಮೇ 20: ಹರಿಹರ ಪೀಠದ ವಿವಾದ ಬಗೆಹರಿಸುವ ಕೆಲಸ ಮಾಡಿದ್ದೇವೆ. ಟ್ರಸ್ಟ್ ಲೆಕ್ಕಪತ್ರ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಸಮಾಜಕ್ಕೆ ಧಕ್ಕೆ ಬರುವ ಘಟನೆಗಳು ನಡೆದಿವೆ, ಅವುಗಳನ್ನು ಎರಡು ಕಡೆಯವರನ್ನು ಸೇರಿಸಿ ನಿವಾರಣೆ ಮಾಡುವ ಕೆಲಸ ಮಾಡಿದ್ದೇವೆ. ಇಂದು ಶೇಕಡಾ 90ರಷ್ಟು ಸಮಸ್ಯೆ ಬಗೆಹರಿದಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್​ ಹೇಳಿದ್ದಾರೆ. ಪಂಚಮಸಾಲಿ ಪೀಠಗಳ ವಿವಾದಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಅವರು, ಸಮಾಜದ ಗೊಂದಲ ನಿವಾರಣೆಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಎರಡೂ ಕಡೆಯವರ ಮನಸ್ತಾಪ ನಿವಾರಿಸುವ ಕೆಲಸ ನಡೆಯುತ್ತಿದೆ. ಹರಿಹರ ಪೀಠದ ಜೊತೆಗೆ ಕೂಡಲಸಂಗಮ ಪೀಠ ವಿವಾದವನ್ನೂ ಬಗೆಹರಿಸಲಾಗುವುದು. ಯಾವುದೇ ಹೊಸ ಪೀಠ ಸ್ಥಾಪನೆ ಅಥವಾ ಮರುಸ್ಥಾಪನೆಯ ಉದ್ದೇಶವಿಲ್ಲ. ಇರುವ ಮಠಗಳನ್ನು ಸುಧಾರಿಸುವುದೇ ನಮ್ಮ ಉದ್ದೇಶ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಹೈದರಾಬಾದ್​​ನಲ್ಲಿ ಇರುವಂತೆ ಬೆಂಗಳೂರು ರಸ್ತೆಗಳು ಯಾಕಿಲ್ಲ? ಕೆನಡಾ ವ್ಯಕ್ತಿಯ ವಿಡಿಯೋ ವೈರಲ್ – Kannada News | Canadian Man’s Hyderabad vs Bangalore Road Video Sparks Online Debate

ವೈರಲ್​​ ಆದ ಕೆನಡಾ ವ್ಯಕ್ತಿಯ ಹೈದರಾಬಾದ್ vs ಬೆಂಗಳೂರು ರಸ್ತೆ ವಿಡಿಯೋ

ಬೆಂಗಳೂರು, ಮೇ 20: ರಾಜಧಾನಿ ಬೆಂಗಳೂರಿನ (Bengaluru) ರಸ್ತೆಗಳು ದುರಾವಸ್ಥೆ ವಿಚಾರಕ್ಕೆ ಮೇಲಿಂದ ಮೇಲೆ ಸುದ್ದಿಯಾಗುತ್ತಲೇ ಇರುತ್ತವೆ. ಈ ನಡುವೆ ಕೆನಡಾದ ವ್ಯಕ್ತಿಯೊಬ್ಬರು ಹೈದರಾಬಾದ್ ನಗರದಲ್ಲಿನ ರಸ್ತೆಗಳನ್ನು ಹೊಗಳಿ, ಅದನ್ನು ಬೆಂಗಳೂರಿನೊಂದಿಗೆ ಹೋಲಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹೈದರಾಬಾದ್‌ನ ರಸ್ತೆಗಳು ಎಷ್ಟು ಸುಗಮ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟಿವೆ. ಆದರೆ ಬೆಂಗಳೂರಿನ ರೋಡ್​​ಗಳು ಯಾಕೆ ಹೀಗಿಲ್ಲ ಎಂದು ಪ್ರಶ್ನಿಸಿ ಕ್ಯಾಲೆಬ್ ಫ್ರೀಸೆನ್ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ ಭಾರಿ ವೈರಲ್​​ ಆಗಿದೆ.

ಪೋಸ್ಟ್​​ನಲ್ಲಿ ಏನಿದೆ?

ಹೈದರಾಬಾದ್‌ನಲ್ಲಿ ರಸ್ತೆಗಳು ಅದ್ಭುತವಾಗಿದೆ. ಬೆಂಗಳೂರಿನಲ್ಲಿ ಯಾಕೆ ಇಂತಹ ರಸ್ತೆಗಳು ಇರಲಾರವು ಎಂಬುದು ನನಗೆ ಅರ್ಥವಾಗುತ್ತಿಲ್ಲ. ನಾವು ಈಗ ನಗರದ ಮಧ್ಯದಲ್ಲಿದ್ದೇವೆ. ಎಲ್ಲೆಡೆ ಉತ್ತಮ ರಸ್ತೆಗಳಿವೆ. ವಿವಿಧ ಪ್ರದೇಶಗಳನ್ನು ಸಂಪರ್ಕಿಸಿ ಸಂಚಾರ ಸುಲಭಗೊಳಿಸುತ್ತಿವೆ. ರಸ್ತೆಗಳು ತುಂಬಾ ಚೆನ್ನಾಗಿ ನಿರ್ಮಾಣಗೊಂಡಿವೆ. ಪಾದಚಾರಿಗಳು ಹಠಾತ್ ವಾಹನದ ಮುಂದೆ ಬರುವುದಿಲ್ಲ, ಪ್ರಾಣಿಗಳಿಲ್ಲ, ಗುಂಡಿಗಳಿಲ್ಲ. ರಸ್ತೆಗಳು ಪರಿಪೂರ್ಣ ಸ್ಥಿತಿಯಲ್ಲಿವೆ. ಬೆಂಗಳೂರಿನಲ್ಲಿ ಯಾಕೆ ಹೀಗಿಲ್ಲ? ಎಂದು ಅವರು ಪ್ರಶ್ನಿಸಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.

ಇದನ್ನೂ ಓದಿ:

ನನ್ನ ಗಮನಕ್ಕೆ ಬಂದಂತೆ ಬೆಂಗಳೂರಲ್ಲಿ ಇರುವ ರೀತೀ ಭಾರೀ ಟ್ರಾಫಿಕ್ ಸಮಸ್ಯೆ ಇಲ್ಲಿ ಕಡಿಮೆ. ಟ್ರಾಫಿಕ್ ಇಲ್ಲ ಎಂದಲ್ಲ, ಆದರೆ ಉತ್ತಮ ರಸ್ತೆ ನಿರ್ಮಾಣದ ಮೂಲಕ ಸಮಸ್ಯೆಯನ್ನು ನಿಯಂತ್ರಿಸಲು ನಗರ ಆಡಳಿತ ಯಶಸ್ವಿಯಾಗಿದೆ. ಹೈದರಾಬಾದ್‌ನಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಸಾಮಾನ್ಯವಾಗಿ ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದವರು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಹೈದರಾಬಾದ್ vs ಬೆಂಗಳೂರು ಎಂಬ ಹೊಸ ಚರ್ಚೆ ಶುರುವಾಗಿದೆ.

ಇನ್ನು ಹಲವರು ಫ್ರೀಸೆನ್ ಅಭಿಪ್ರಾಯವನ್ನು ಬೆಂಬಲಿಸಿದ್ದು, ಇನ್ನೂ ಕೆಲವರು ಹೋಲಿಕೆ ಸಂಪೂರ್ಣ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೈದರಾಬಾದ್‌ನ ಹಲವು ಪ್ರಮುಖ ರಸ್ತೆಗಳು ಖಂಡಿತವಾಗಿಯೂ ಉತ್ತಮವಾಗಿವೆ ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ಬೆಂಗಳೂರುಗೂ ಇಂತಹ ಯೋಜಿತ ರಸ್ತೆ ಅಭಿವೃದ್ಧಿ ತುರ್ತಾಗಿ ಬೇಕಾಗಿದೆ. ಟ್ರಾಫಿಕ್ ಅಸಹನೀಯವಾಗುತ್ತಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಪ್ರತಿ ನಗರದಲ್ಲೂ ಒಳ್ಳೆಯ ಮತ್ತು ಕೆಟ್ಟ ರಸ್ತೆಗಳಿರುತ್ತವೆ. ನೀವು ಹೈದರಾಬಾದ್‌ನ ಉತ್ತಮ ಭಾಗಗಳಲ್ಲೇ ಸಂಚರಿಸಿದ್ದೀರಿ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ಹಾಸ್ಯವಾಗಿ ಹೈದರಾಬಾದ್‌ನ್ನು ಇಷ್ಟು ಹೊಗಳಬೇಡಿ, ಇಲ್ಲಿಯೂ ಮನೆ ಬಾಡಿಗೆ ಏರಿಬಿಡುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:33 pm, Wed, 20 May 26

Source link

Karnataka Weather Forecast: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಬ್ಬರ, ಯೆಲ್ಲೋ-ಆರೇಂಜ್ ಅಲರ್ಟ್ – Kannada News | Heavy pre monsoon rains lash In Karnataka till May 22. The IMD has issued yellow and orange alerts for several districts.

ಬೆಂಗಳೂರು, (ಮೇ 20): ನೈಋತ್ಯ ಮುಂಗಾರು (Monsoon) ಇದೇ ಮೇ 26ಕ್ಕೆ ಕೇರಳಕ್ಕೆ ಆಗಮಿಸುವ ಸಾಧ್ಯತೆಯಿದೆ. ಹೀಗಾಗಿ ಕರ್ನಾಟಕದಲ್ಲೂ ಮಳೆಯಾಗಲಿದೆ (Karnataka Rains) ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಆದ್ರೆ, ಅದಕ್ಕೂ ಮುನ್ನ ಅಂದರೆ  ಮುಂಗಾರು ಆಗಮನಕ್ಕೂ ಮುನ್ನವೇ ರಾಜ್ಯದಲ್ಲಿ ಇಂದಿನಿಂದ (ಮೇ 20)  ಮೇ 22ರವರೆಗೆ  ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಗಾಳಿ (ಗಂಟೆಗೆ 50-60 ಕಿ.ಮೀ) ಸಹಿತ ಭಾರಿ ಮಳೆಯಾಗುವ ಸಾಧ್ಯತೆಗಳಿವೆ.

ಮುಖ್ಯಾಂಶಗಳು

  • ಇದೇ ಮೇ 26ಕ್ಕೆ ಕೇರಳಕ್ಕೆ ಮುಂಗಾರು ಆಗಮಿಸುವ ಸಾಧ್ಯತೆ ಎಂದ ಐಎಂಡಿ
  • ಮುಂಗಾರು ಆಗಮನಕ್ಕೂ ಮುನ್ನವೇ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ
  • ದಕ್ಷಿಣ ಒಳನಾಡಿನಲ್ಲಿ ಯೆಲ್ಲೋ-ಆರೇಂಜ್ ಅಲರ್ಟ್
  • ಕರಾವಳಿಯಲ್ಲಿ ಗಾಳಿ ಸಮೇತ ಮಳೆ

ದಕ್ಷಿಣ ಒಳನಾಡಿನಲ್ಲಿ ಯೆಲ್ಲೋ-ಆರೇಂಜ್ ಅಲರ್ಟ್

ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಇಂದು (ಮೇ20) ಮತ್ತು ಮೇ 21ರಂದು ವೇಳೆಗೆ ಗುಡುಗು ಸಹಿತ ಭಾರಿ ಮಳೆ ಹಾಗೂ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ (Orange Alert) ಘೋಷಿಸಲಾಗಿದೆ. ಇನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ನಿರೀಕ್ಷೆ ಇದ್ದು, ಯೆಲ್ಲೋ ಅಲರ್ಟ್ (Yellow Alert) ನೀಡಲಾಗಿದೆ.

ಉತ್ತರ ಒಳನಾಡು

ಬೆಳಗಾವಿ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಗುಡುಗು ಮತ್ತು ಬಿರುಗಾಳಿ ಸಹಿತ ಸಾಧಾರಣ ಮಳೆಯಾಗುವ ಲಕ್ಷಣಗಳಿವೆ.ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ತಾಪಮಾನವು ಗರಿಷ್ಠ 39°C ನಿಂದ 42°C ವರೆಗೆ ಇರಲಿದ್ದು, ಒಣಹವೆ ಮುಂದುವರಿಯಲಿದೆ. ಆದರೆ ಸಂಜೆ ವೇಳೆ ತಂಪಾದ ಗಾಳಿ ಅಥವಾ ಹಗುರ ಮುಂಗಾರು ಪೂರ್ವ ಮಳೆಯಾಗಬಹುದು.

ಕರಾವಳಿಯಲ್ಲಿ ಗಾಳಿ ಸಮೇತ ಮಳೆ

ಮೇ 20 ಮತ್ತು 21ರ ವರೆಗೆ ದಕ್ಷಿಣ ಒಳನಾಡು ಕರ್ನಾಟಕದ ಒಂದೆರಡು ಕಡೆಗಳಲ್ಲಿ ಗಂಟೆಗೆ 40-50 ಕಿಲೋಮೀಟರ್ ವೇಗದಲ್ಲಿ ಬೀಸುವ ಬಿರುಗಾಳಿ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಇನ್ನು 22 ರಿಂದ 24ರವರೆಗೆ ಕರಾವಳಿ ಕರ್ನಾಟಕದ ಒಂದೆರಡು ಕಡೆಗಳಲ್ಲಿ ಗಂಟೆಗೆ 30-40 ಕಿಲೋಮೀಟರ್ ವೇಗದಲ್ಲಿ ಬೀಸುವ ಬಿರುಗಾಳಿ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಇದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ವಿಜಯ್ ಅನ್ನು ಭೇಟಿಯಾದ ಸಿನಿಮಾ ನಿರ್ದೇಶಕರ ತಂಡ: ಕಾರಣ? – Kannada News | Tamil Nadu movie industry directors association members meet CM Vijay

ವಿಜಯ್ (Vijay) ತಮಿಳುನಾಡಿನ ಸಿಎಂ ಆಗಿ ವಾರವಾಗುತ್ತಾ ಬಂದಿದೆ. ಸಿಎಂ ಆದ ಬಳಿಕ ಕೆಲವು ಪ್ರಮುಖ ನಿರ್ಧಾರಗಳನ್ನು ವಿಜಯ್ ಪ್ರಕಟಿಸಿರುವ ಜೊತೆಗೆ ಮಂತ್ರಿ ಮಂಡಲದ ರಚನೆಯನ್ನೂ ಮಾಡಿದ್ದಾರೆ. ಇತ್ತೀಚೆಗಷ್ಟೆ ತಮಿಳಿನ ಸ್ಟಾರ್ ನಟ ಕಮಲ್ ಹಾಸನ್, ಸಿಎಂ ವಿಜಯ್ ಅವರನ್ನು ಭೇಟಿಯಾಗಿ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಕೆಲವು ಬೇಡಿಕೆಗಳನ್ನು, ಮನವಿಗಳನ್ನು ಮಾಡಿದ್ದರು. ಅದರ ಬೆನ್ನಲ್ಲೆ ಇದೀಗ ತಮಿಳುನಾಡು ಚಿತ್ರರಂಗದ ನಿರ್ದೇಶಕ ಸಂಘದ ಸದಸ್ಯರು ವಿಜಯ್ ಅವರನ್ನು ಭೇಟಿ ಆಗಿದ್ದಾರೆ. ಅದರಲ್ಲಿ ಕೆಲವಾರು ಮಂದಿ ಈಗಾಗಲೇ ವಿಜಯ್ ಜೊತೆಗೆ ಕೆಲಸ ಮಾಡಿರುವವರೇ ಆಗಿರುವುದು ವಿಶೇಷ.

ತಮಿಳು ಚಿತ್ರರಂಗದಲ್ಲಿ ನಟ, ನಿರ್ದೇಶಕ, ಟಿವಿ ಆಂಕರ್ ಆಗಿ ಗುರುತಿಸಿಕೊಂಡಿರುವ ರಾಜ್‌ಮೋಹನ್ ಅವರನ್ನು ವಿಜಯ್ ಸಿನಿಮಾಟೊಗ್ರಫಿ ಸೇರಿದಂತೆ ಶಾಲಾ ಶಿಕ್ಷಣ, ತಮಿಳು ಅಭಿವೃದ್ಧಿ, ಮಾಹಿತಿ ಮತ್ತು ಪ್ರಚಾರ ಇಲಾಖೆಯ ಸಚಿವರನ್ನಾಗಿ ನೇಮಿಸಿದರು. ಇದೇ ಕಾರಣಕ್ಕೆ ತಮಿಳು ಚಿತ್ರರಂಗದ ನಿರ್ದೇಶಕರ ಸಂಘದವರು ವಿಜಯ್ ಅವರನ್ನು ಭೇಟಿಯಾಗಿ ಅವರನ್ನು ಅಭಿನಂದಿಸಿದ್ದಾರೆ. ಮೇ 19 ರಂದು, ತಮಿಳು ಚಿತ್ರೋದ್ಯಮದ ನಿರ್ದೇಶಕರ ಸಂಘದ ಸದಸ್ಯರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದರು.

ವಿಜಯ್ ಅವರನ್ನು ಭೇಟಿ ಮಾಡಿದ ನಿರ್ದೇಶಕರಲ್ಲಿ ಅವರ ನಟನೆಯ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ (ಗೋಟ್) ಸಿನಿಮಾದ ನಿರ್ದೇಶಕ ವೆಂಕಟ್ ಪ್ರಭು ಕೂಡ ಇದ್ದರು. ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ‘ನನ್ನ ನಿರ್ದೇಶಕರ ಸಂಘದ ಕುಟುಂಬಕ್ಕೆ ಧನ್ಯವಾದಗಳು. ನಮ್ಮ ಸಚಿವಾಲಯದಲ್ಲಿ ಗೌರವಾನ್ವಿತ ಮುಖ್ಯಮಂತ್ರಿ ಅಣ್ಣನ ಜೊತೆ ಎರಡನೇ ಸುತ್ತಿನ ಭೇಟಿ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:‘ದಳಪತಿ’ ರಾಜಕೀಯ ತಮಿಳುನಾಡಿಗೆ ಮಾತ್ರ ಸೀಮಿತವೇ? ಕೇರಳಂ ಸಿಎಂ ವಿಡಿ ಸತೀಶನ್ ಪದಗ್ರಹಣಕ್ಕೆ ವಿಜಯ್ ಗೈರು

ಕೆಲವು ದಿನಗಳ ಹಿಂದೆ, ಅವರು ತಮ್ಮ 2024 ರ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಚಿತ್ರದ ವೈರಲ್ ಆಗಿದ್ದ ‘TN07 CM 2026’ ನಂಬರ್ ಪ್ಲೇಟ್ ಅನ್ನು ವಿಜಯ್ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಆ ನಂಬರ್ ಪ್ಲೇಟ್ ಅನ್ನು ಮೂಲತಃ ಸಿನಿಮಾದಲ್ಲಿ ಬಳಸಲಾಗಿತ್ತು. ಸಿನಿಮಾನಲ್ಲಿ ಅವರು ಊಹಿಸಿದಂತೆ ಇದೀಗ ನಿಜಕ್ಕೂ 2026ರಲ್ಲಿ ವಿಜಯ್ ಸಿಎಂ ಆಗಿದ್ದಾರೆ.

ವಿಜಯ್ ಅವರನ್ನು ಭೇಟಿಯಾದ ತಂಡದಲ್ಲಿ ನಿರ್ದೇಶಕ ಕೆಎಸ್ ರವಿಕುಮಾರ್ ಅವರು ಸಹ ಇದ್ದು, ‘ಕೆಲವು ಕ್ಷಣಗಳು ನಿಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತವೆ, ಅಂತಹ ಕ್ಷಣಗಳಲ್ಲಿ ಇದೂ ಒಂದು. ನಮ್ಮ ಪ್ರೀತಿಯ ವಿಜಯ್ ಅವರನ್ನು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅವರ ಹೊಸ ಪಾತ್ರದಲ್ಲಿ ಭೇಟಿ ಮಾಡಿದ್ದು ಮತ್ತು ನಮ್ಮ ನಿರ್ದೇಶಕರ ಸಂಘದ ಪರವಾಗಿ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದು ಅದ್ಭುತವಾಗಿತ್ತು. ಈ ವಿಶೇಷ ಮತ್ತು ಸ್ಮರಣೀಯ ಕ್ಷಣವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.

ಮೇ 16 ರಂದು, ಹಿರಿಯ ನಟ ಕಮಲ್ ಹಾಸನ್ ಅವರು ವಿಜಯ್ ಅವರನ್ನು ಭೇಟಿ ಮಾಡಿ, ತಮಿಳು ಚಿತ್ರೋದ್ಯಮಕ್ಕೆ ಬೆಂಬಲ ನೀಡುವ ಅಗತ್ಯದ ಕುರಿತು 6 ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದ್ದರು. ಅವರು, “ವಿವಿಧ ಅಡೆತಡೆಗಳನ್ನು ಎದುರಿಸುತ್ತಿರುವ ತಮಿಳು ಚಿತ್ರೋದ್ಯಮಕ್ಕೆ ಬೆಂಬಲ ಮತ್ತು ಸಹಕಾರದ ಅಗತ್ಯವನ್ನು ಒತ್ತು ತೇಳಿ ನಾನು ತಮಿಳುನಾಡು ಸರ್ಕಾರಕ್ಕೆ 6 ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದೇನೆ. ಇದರ ಪ್ರಯೋಜನಗಳು ವೃದ್ಧಿಸಲಿ’ ಎಂದು ಅವರು ಬರೆದುಕೊಂಡಿದ್ದರು. ತಮಿಳುನಾಡು ಸರ್ಕಾರದ ಒಟಿಟಿ (OTT) ಪ್ಲಾಟ್‌ಫಾರ್ಮ್ ಪ್ರಾರಂಭಿಸುವುದು, ಸ್ಥಳೀಯ ಸಂಸ್ಥೆಗಳ ಮನರಂಜನಾ ತೆರಿಗೆ ರದ್ದುಪಡಿಸುವುದು ಮತ್ತು ಬಲಿಷ್ಠ ಪೈರಸಿ ವಿರೋಧಿ ತಂಡವನ್ನು ರಚಿಸುವುದು ಈ ವಿನಂತಿಗಳಲ್ಲಿ ಸೇರಿದ್ದವು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸೋಷಿಯಲ್ ಮೀಡಿಯಾದಿಂದ ದೂರ ಉಳಿಯಲು ನಿರ್ಧರಿಸಿದ ನಟಿ ರಿಯಾ ಚಕ್ರವರ್ತಿ – Kannada News | Rhea Chakraborty announces social media break and acting comeback Family Business

ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಮಾಜಿ ಗೆಳತಿ, ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಿಂದ ತಾತ್ಕಾಲಿಕವಾಗಿ ದೂರ ಉಳಿಯುವುದಾಗಿ ಘೋಷಿಸಿದ್ದಾರೆ. ಡಿಜಿಟಲ್ ಲೋಕದಲ್ಲಿನ ನಿರಂತರವಾದ ಗದ್ದಲ ಮತ್ತು ಒತ್ತಡಗಳು ತಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ರಿಯಾ ಚಕ್ರವರ್ತಿ (Rhea Chakraborty) ಅವರು ತಿಳಿಸಿದ್ದಾರೆ. ತಮ್ಮ 3.6 ಮಿಲಿಯನ್ ಫಾಲೋವರ್ಸ್ ಹೊಂದಿರುವ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ರಿಯಾ, ಆನ್‌ಲೈನ್ ಪ್ರಪಂಚದ ಒತ್ತಡದಿಂದ ಹೊರಬಂದು ನೈಜ ಜಗತ್ತಿನೊಂದಿಗೆ ಮರುಸಂಪರ್ಕ ಸಾಧಿಸಲು ಬಯಸಿದ್ದಾರೆ.

‘ಇತ್ತೀಚೆಗೆ ನನ್ನನ್ನು ನಾನೇ ಸ್ವಲ್ಪ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿರಂತರವಾದ ಗದ್ದಲ, ಸ್ಕ್ರೋಲಿಂಗ್ ಮತ್ತು ಎಲ್ಲದರ ಜೊತೆ ಅಪ್‌ಡೇಟ್ ಆಗಿರುವುದು. ಇದೆಲ್ಲವೂ ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚು ಭಾರ ಎನಿಸುತ್ತಿದೆ. ಅದಕ್ಕಾಗಿಯೇ ನಾನು ಸ್ವಲ್ಪ ಸಮಯದವರೆಗೆ ಇವುಗಳಿಂದ ದೂರ ಸರಿಯುತ್ತಿದ್ದೇನೆ. ನಿಧಾನವಾಗಿ ಸಾಗಲು, ಆಳವಾಗಿ ಉಸಿರಾಡಲು ಮತ್ತು ಯಾವುದು ನೈಜವೋ ಅದರೊಂದಿಗೆ ಮತ್ತೆ ಕನೆಕ್ಟ್ ಆಗಲು ಈ ನಿರ್ಧಾರ ಮಾಡಿದ್ದೇನೆ. ಸದ್ಯಕ್ಕೆ ಪೋಸ್ಟ್ ಮಾಡುವ ಕ್ಷಣಗಳಿಗಿಂತ, ಬದುಕುವ ಕ್ಷಣಗಳನ್ನು ಆರಿಸಿಕೊಳ್ಳುತ್ತಿದ್ದೇನೆ’ ಎಂದು ರಿಯಾ ಬರೆದುಕೊಂಡಿದ್ದಾರೆ.

2020ರಲ್ಲಿ ನಟ ಸುಶಾಂತ್ ಸಿಂಗ್ ರಜ್‌ಪೂತ್ ನಿಧನದ ನಂತರ ರಿಯಾ ಚಕ್ರವರ್ತಿ ತೀವ್ರವಾಗಿ ಸಾರ್ವಜನಿಕ ಟೀಕೆಗಳನ್ನು ಎದುರಿಸಬೇಕಾಗಿತ್ತು. ಆ ಕಠಿಣ ದಿನಗಳ ನಂತರ ಅವರು ನಿಧಾನವಾಗಿ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಮತ್ತೆ ಕಟ್ಟಿಕೊಳ್ಳುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಪ್ರಚಾರದಿಂದ ದೂರವಿದ್ದ ಅವರು, ಆಯ್ದ ಕಾರ್ಯಕ್ರಮಗಳು ಮತ್ತು ಪ್ರಾಜೆಕ್ಟ್‌ಗಳ ಮೂಲಕ ಮತ್ತೆ ಸಾರ್ವಜನಿಕ ಜೀವನಕ್ಕೆ ಮರಳುತ್ತಿದ್ದಾರೆ.

ರಿಯಾ ಚಕ್ರವರ್ತಿ ಈಗ ನಟನೆಗೆ ಭರ್ಜರಿ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಪ್ರಸಿದ್ಧ ನಿರ್ದೇಶಕ ಹನ್ಸಲ್ ಮೆಹ್ತಾ ಅವರ ಮುಂಬರುವ ನೆಟ್‌ಫ್ಲಿಕ್ಸ್ ಡ್ರಾಮಾ ಸರಣಿ ‘ಫ್ಯಾಮಿಲಿ ಬಿಸ್ನೆಸ್’ನಲ್ಲಿ ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಸರಣಿಯಲ್ಲಿ ಅನಿಲ್ ಕಪೂರ್, ವಿಜಯ್ ವರ್ಮಾ, ನೇಹಾ ಧೂಪಿಯಾ ಮತ್ತು ಧ್ರುವ್ ಸೆಹಗಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. 2021ರಲ್ಲಿ ಅಮಿತಾಭ್ ಬಚ್ಚನ್ ಜೊತೆ ನಟಿಸಿದ್ದ ‘ಚೆಹ್ರೆ’ ಚಿತ್ರದ ನಂತರ ರಿಯಾ ಅವರು ನಟನೆಗೆ ಮರಳುತ್ತಿರುವುದು ಇದೇ ಮೊದಲು.

ಇದನ್ನೂ ಓದಿ: ಸುಶಾಂತ್ ಸಿಂಗ್ ಸಾವಿನ ಕೇಸ್​ನಲ್ಲಿ ರಿಯಾ ಚಕ್ರವರ್ತಿಗೆ ಕ್ಲೀನ್ ಚಿಟ್; ದೇವಸ್ಥಾನಕ್ಕೆ ಬಂದ ನಟಿ

ಇತ್ತೀಚೆಗಷ್ಟೇ ರಿಯಾ ಚಕ್ರವರ್ತಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ನ್ಯಾಯಾಲಯವು ಅವರ ಬ್ಯಾಂಕ್ ಖಾತೆಗಳನ್ನು ಬಳಸಲು ಅನುಮತಿ ನೀಡಿದೆ. 2020ರಲ್ಲಿ ಸುಶಾಂತ್ ಸಿಂಗ್ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಮಾದಕವಸ್ತು ನಿಯಂತ್ರಣ ದಳವು ರಿಯಾ ಅವರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿತ್ತು. ವರ್ಷಗಟ್ಟಲೆ ಖಾತೆಗಳನ್ನು ಫ್ರೀಜ್ ಮಾಡಿಟ್ಟಿರುವುದರಿಂದ ತಮಗೆ ಆರ್ಥಿಕ ಸಂಕಷ್ಟ ಎದುರಾಗಿದೆ ಮತ್ತು ಇನ್ನು ಮುಂದೆ ಅದನ್ನು ಮುಂದುವರಿಸುವುದು ಸರಿಯಲ್ಲ ಎಂಬ ರಿಯಾ ಅವರ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೇ 24ರಂದು ನಿರ್ದೇಶಕಿಯರ ಕಿರುಚಿತ್ರೋತ್ಸವ ‘ಅವಳ ಹೆಜ್ಜೆ’; ವಿಜೇತರಿಗೆ 1 ಲಕ್ಷ ರೂ. ಬಹುಮಾನ – Kannada News | Avala Hejje Womens Short Film Festival 2026 Bengaluru Cash Prize and Date

ಚಿತ್ರರಂಗದಲ್ಲಿ ಮಹಿಳಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗುಬ್ಬಿವಾಣಿ ಟ್ರಸ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಮೇ 24ರ ಭಾನುವಾರದಂದು ‘ಅವಳ ಹೆಜ್ಜೆ ಕಿರುಚಿತ್ರೋತ್ಸವ 2026’ (Avala Hejje Women’s Short Film Festival) ಚಲನಚಿತ್ರ ಹಬ್ಬ ಆಯೋಜನೆಗೊಂಡಿದೆ. ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 7ರವರೆಗೆ ನಡೆಯಲಿರುವ ಈ ಸಿನಿಮಾ ಉತ್ಸವದಲ್ಲಿ ಮಹಿಳೆಯರೇ ನಿರ್ದೇಶಿಸಿದ ಆಯ್ದ ಕಲಾತ್ಮಕ ಹಾಗೂ ವಿಭಿನ್ನ ಕಿರುಚಿತ್ರಗಳು (Short Films) ಪ್ರದರ್ಶನಗೊಳ್ಳಲಿದ್ದು, ಅತ್ಯುತ್ತಮ ಚಿತ್ರಕ್ಕೆ ಭರ್ಜರಿ 1 ಲಕ್ಷ ರೂಪಾಯಿ ನಗದು ಬಹುಮಾನ ಘೋಷಣೆಯಾಗಿದೆ.

ಅಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿರುವ ಈ ಚಿತ್ರೋತ್ಸವದಲ್ಲಿ ಒಟ್ಟು 2 ಹಂತಗಳಲ್ಲಿ ಪ್ರದರ್ಶನಗಳು ನಡೆಯಲಿವೆ. ಮೊದಲ ಅವಧಿಯಲ್ಲಿ ಅನು ಕುಲಕರ್ಣಿ ಅವರ ‘ಕಾಶಿ ಕೈಲಾಸ’, ಅಶ್ವಿನಿ ಅನೀಶ್ ಅವರ ‘ಸೋರುತಿಹುದು ಮನೆಯ ಮಾಳಿಗಿ’, ಸುಪ್ರಿಯಾ ಶಂಕರ ನಿಪ್ಪಾಣಿ ಅವರ ‘ರೊಟ್ಟಿ’, ಸೀಮಾ ಶಶಿಧರ್ ಅವರ ‘ಎ ಲಿಟ್ಲ್ ಕೇರ್’ ಹಾಗೂ ಸೌರಭಾ ರಾವ್ ನಿರ್ದೇಶನದ ‘ಹುಲಿಯಪ್ಪ’ ಚಿತ್ರಗಳ ಪ್ರದರ್ಶನ ಆಗಲಿದೆ.

ಮಧ್ಯಾಹ್ನದ ನಂತರದ ದ್ವಿತೀಯ ಅವಧಿಯಲ್ಲಿ ಸುಷ್ಮಾ ಭಾರದ್ವಾಜ್ ಅವರ ‘ದಾರಿ’, ಸುನಯನಾ ಸುರೇಶ್ ಅವರ ‘ಮೌನ ರಾಗ’, ಶ್ರೇಯ ಸುನಿಲ್ ಅವರ ‘ಆ ಮಾಡಿ’, ಹರ್ಷಿತಾ ಜಿ. ಮತ್ತು ರಚನಾ ಸುವರ್ಣ ಜಂಟಿಯಾಗಿ ನಿರ್ದೇಶಿಸಿರುವ ‘ಗೆಜ್ಜೆ’ ಹಾಗೂ ವನು ಪಾಟೀಲ್ ಅವರ ‘ನಿತ್ಯ’ ಕಿರುಚಿತ್ರಗಳು ಪ್ರದರ್ಶನಗೊಳ್ಳಲಿವೆ. ಕೇವಲ ಸಿನಿಮಾ ವೀಕ್ಷಣೆಗಷ್ಟೇ ಸೀಮಿತವಾಗದೆ, ಚಿತ್ರಪ್ರೇಮಿಗಳಿಗೆ ನಿರ್ದೇಶಕಿಯರೊಂದಿಗೆ ನೇರವಾಗಿ ಸಂವಹನ ನಡೆಸಲು ಪ್ರಶ್ನೋತ್ತರ ಅವಧಿಯನ್ನು ಕೂಡ ಹಮ್ಮಿಕೊಳ್ಳಲಾಗಿದೆ.

ಚಿತ್ರೋತ್ಸವದ ಪ್ರಮುಖ ಆಕರ್ಷಣೆಯಾಗಿ ಸಂಜೆ 5 ಗಂಟೆಗೆ ‘ಸಿನಿಮಾದಲ್ಲಿ ಅವಳ ಹೆಜ್ಜೆ ಅ-ಅಃ ವರೆಗೆ’ ಎಂಬ ವಿಶೇಷ ಚರ್ಚಾಗೋಷ್ಠಿ ಆಯೋಜಿತವಾಗಿದೆ. ಚಿತ್ರೋತ್ಸವದ ನಿರ್ದೇಶಕಿ ಶಾಂತಲಾ ದಾಮ್ಲ ನಡೆಸಿಕೊಡಲಿರುವ ಈ ಗೋಷ್ಠಿಯಲ್ಲಿ ಸ್ಯಾಂಡಲ್‌ವುಡ್ ನಟಿ ನೀತು ಶೆಟ್ಟಿ, ಗ್ರೀಷ್ಮಾ ಶ್ರೀಧರ್, ಸಂಗೀತಾ ನಂಜುಂಡಸ್ವಾಮಿ ಮತ್ತು ಸಂಜೋತಾ ಭಂಡಾರಿ ಭಾಗವಹಿಸಿ ಚಿತ್ರರಂಗದಲ್ಲಿ ಮಹಿಳೆಯರ ಪಯಣದ ಕುರಿತು ಮಹತ್ವದ ಚರ್ಚೆ ನಡೆಸಲಿದ್ದಾರೆ.

ಇದನ್ನೂ ಓದಿ: ‘ಕುಣಿ’ ಕಿರುಚಿತ್ರಕ್ಕೆ ಫಿದಾ ಆದ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು

ಸಂಜೆ 6 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ವಿಜೇತರ ಹೆಸರುಗಳನ್ನು ಪ್ರಕಟಿಸಿ, ಪ್ರಶಸ್ತಿ ಹಾಗೂ 1 ಲಕ್ಷ ರೂಪಾಯಿ ನಗದು ಬಹುಮಾನವನ್ನು ವಿತರಿಸಲಾಗುವುದು. ಸಿನಿಮಾ ಆಸಕ್ತರಿಗೆ ಇದೊಂದು ಅತ್ಯುತ್ತಮ ಸಾಂಸ್ಕೃತಿಕ ವೇದಿಕೆಯಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಟ್ರಸ್ಟ್ ಕೋರಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೈಗೆ ಬಂದ ತುತ್ತು ಬಾಯಿಗಿಲ್ಲ! ಪ್ರವಾಸಿಗರಿಗೆ ಸ್ವರ್ಗ, ಸ್ಥಳೀಯರಿಗೆ ನರಕ: ಇದು ಉತ್ತರ ಕನ್ನಡದ ಕುಗ್ರಾಮದ ಕಥೆ – Kannada News | Heaven for Tourists, Hell for Locals: The Untold Story of Medini Village in Uttara Kannada

ರಸ್ತೆ ಇಲ್ಲದೆ ಗ್ರಾಮಸ್ಥರು ಪರದಾಟImage Credit source: tv9 kannada

ಉತ್ತರ ಕನ್ನಡ, ಮೇ 20: ಉತ್ತರ ಕನ್ನಡ (uttara kannada) ಜಿಲ್ಲೆಯ ನೈಸರ್ಗಿಕ ಸೌಂದರ್ಯಕ್ಕೆ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಅದೇ ಜಿಲ್ಲೆಯ ಘಟ್ಟದ ಮೇಲಿನ ಮೇದಿನಿ ಗ್ರಾಮದ ಜನ ಇಂದಿಗೂ ಮೂಲಭೂತ ಸೌಕರ್ಯಕ್ಕಾಗಿ ಹೋರಾಡುತ್ತಿದ್ದಾರೆ. ನಿತ್ಯಹರಿದ್ವರ್ಣ ಕಾಡಿನ ಮಧ್ಯದಲ್ಲಿರುವ ಈ ಗ್ರಾಮಕ್ಕೆ ಸೂಕ್ತ ರಸ್ತೆ (Road) ಇಲ್ಲದ ಕಾರಣ ದಶಕಗಳಿಂದ ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ರಸ್ತೆ ಇಲ್ಲದಕ್ಕೆ ಯುವಕರಿಗೆ ಕನ್ಯಾ ಕೂಡ ಕೊಡುತ್ತಿಲ್ಲ.

ಮುಖ್ಯಾಂಶಗಳು

  • ಮೂಲಭೂತ ಸೌಕರ್ಯಕ್ಕಾಗಿ ದಶಕಗಳಿಂದ ಹೋರಾಟ
  • ರಸ್ತೆ ಇಲ್ಲದಕ್ಕೆ ಯುವಕರಿಗಿಲ್ಲ ವಿವಾಹ ಭಾಗ್ಯ!
  • ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ನಿಯಮಗಳ ತೊಡಕು?

ಉತ್ತರ ಕನ್ನಡ ಜಿಲ್ಲೆ ಹತ್ತು ಹಲವು ವಿಶೇಷತೆಗಳ ತವರೂರು. ಚಿಕ್ಕ ಮಕ್ಕಳಿಂದ ವಯೋ ವೃದ್ಧರ ವರೆಗೆ ಪ್ರತಿಯೊಬ್ಬರೂ ಎಂಜಾಯ್ ಮಾಡಬಹುದಾದ ಸ್ಥಳ ಮತ್ತ ವಾತಾವರಣ ಈ ಜಿಲ್ಲೆ ಹೊಂದಿದೆ. ಹೀಗಾಗಿ ಕೇವಲ ಕರ್ನಾಟಕ ಅಷ್ಟೆ ಅಲ್ಲ ದೇಶ ವಿದೇಶಗಳಿಂದಲೂ ಜನ ಬಂದು ಇಲ್ಲಿ ಕಾಲ ಕಳೆಯುತ್ತಾರೆ. ಆದರೆ ನಿತ್ಯಹರಿದ್ವರ್ಣದ ಕಾಡಿನಿಂದ ಆವೃತ್ತವಾಗಿರುವ ಘಟ್ಟದ ಮೇಲಿನ ಗ್ರಾಮ ಮೇದಿನಿ ಜನ ಪಡುವ ಕಷ್ಟ ನೋಡಿದರೆ ನಿಜಕ್ಕೂ ಪಾಪ ಅನಿಸುತ್ತೆ. ಇಲ್ಲಿನ ಜನ ಕನಿಷ್ಟ ಮೂಲಭೂತ ಸೌಕರ್ಯಗಳಿಂದ ವಂಚಿತ ಆಗುವುದಕ್ಕೆ ವ್ಯವಸ್ಥೆಯೇ ಕಾರಣವಾಗಿದೆ. ಈ ಗ್ರಾಮಕ್ಕೆ ಬರಲು ಸೂಕ್ತ ರಸ್ತೆ ಇಲ್ಲ. ದಶಕಗಳ ಹೋರಾಟದ ಫಲವಾಗಿ ರಸ್ತೆ ಮಂಜೂರುಗೊಂಡಿದ್ದರೂ ಅರಣ್ಯ ಇಲಾಖೆಯ ನೀತಿನಿಯಮಗಳಿಂದ ರಸ್ತೆ ಕಾಮಗಾರಿಗೆ ಅವಕಾಶ ಸಿಗುತ್ತಿಲ್ಲ.

ಇದನ್ನೂ ಓದಿ: ಕಾರವಾರ: ರಸ್ತೆ ಇಲ್ಲವೆಂದು ಈ ಗ್ರಾಮದ ಯುವಕರಿಗೆ ಕನ್ಯೆ ಕೊಡ್ತಿಲ್ಲ

ಮೇದಿನಿ ಗ್ರಾಮಸ್ಥರ ಸಮಸ್ಯೆ ಹೊಸದಲ್ಲ. ರಸ್ತೆ ಇಲ್ಲದ ಕಾರಣ ಕಳೆದ 10 ವರ್ಷಗಳಿಂದ ಇಲ್ಲಿನ ಯುವಕರಿಗೆ ಮದುವೆಗೆ ಕನ್ಯೆ ಸಿಗುತ್ತಿಲ್ಲ ಎಂಬ ವರದಿಯನ್ನು ಟಿವಿ9 ಈ ಹಿಂದೆಯೇ ಪ್ರಸಾರ ಮಾಡಿತ್ತು. ಈ ಬಗ್ಗೆ ಸುದ್ದಿ ಪ್ರಸಾರವಾದ ನಂತರ ಶಾಸಕ ದಿನಕರ ಶೆಟ್ಟಿ ರಸ್ತೆ ಮಂಜೂರಾತಿಗೆ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ರಸ್ತೆ ಕಾಮಗಾರಿಗೆ ಹಣವನ್ನು ಮಂಜೂರು ಮಾಡಿದ್ದಾರೆ. ಆದರೆ ನಿತ್ಯ ಹರಿದ್ವರ್ಣದ ಕಾಡಿನ ನಡುವೆ ರಸ್ತೆ ನಿರ್ಮಾಣವಾಗಿರುವುದರಿಂದ ಅರಣ್ಯ ಇಲಾಖೆಯ ಅನುಮತಿಯ ಕೊರತೆಯಿಂದ ‘ಕೈಗೆ ಬಂದ ತುತ್ತು ಬಾಯಿಗೆ ಬಾರದ’ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ರಸ್ತೆ ಇಲ್ಲದ ಈ ಕುಗ್ರಾಮದ ಯುವಕರಿಗೆ ಯಾರೂ ಹುಡುಗಿ ಕೊಡುತ್ತಿಲ್ಲ! ಪಕ್ಕದೂರಲ್ಲೇ ಸಂಪುಟ ಸಭೆ ನಡೆದರೂ ಇವರ ಸಮಸ್ಯೆಗಿಲ್ಲ ಮುಕ್ತಿ

ಒಟ್ಟಾರೆಯಾಗಿ ಅರಣ್ಯ ಇಲಾಖೆಯ ನಿಯಮಗಳ ತೊಡಕಿನಿಂದ ಮೇದಿನಿ ಗ್ರಾಮಸ್ಥರ ಕಷ್ಟಕ್ಕೆ ಅಂತ್ಯವಿಲ್ಲದಂತಾಗಿದೆ. ಅರಣ್ಯ ಇಲಾಖೆ ಆದಷ್ಟು ಬೇಗ ಪರವಾನಗಿ ನೀಡಿದರೆ ಮಾತ್ರ ಈ ಗ್ರಾಮದ ಜನರ ದಶಕಗಳ ಸಮಸ್ಯೆಗೆ ಪರಿಹಾರ ಸಿಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version