ಕಮಿಷನ್ ಆರೋಪಕ್ಕೆ ಅಂದು ಸಾಕ್ಷಿ ಕೊಡದವರು ಇಂದು ಕೇಳ್ತಿರೋದೇಕೆ: ‘ಕೈ’ ಸರ್ಕಾರಕ್ಕೆ ಅಶೋಕ್ ಪ್ರಶ್ನೆ

ಬೆಂಗಳೂರು, ಫೆಬ್ರವರಿ 18: ಕಮಿಷನ್ ಆರೋಪದ ವಿಚಾರದಲ್ಲಿ ಕರ್ನಾಟಕ ಕಾಂಗ್ರೆಸ್ (Congress) ಸರ್ಕಾರ ದ್ವಂದ್ವ ಧೋರಣೆ ಅನುಸರಿಸುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ (R Ashoka) ಟೀಕಿಸಿದರು. ವಿಧಾನಸೌಧದಲ್ಲಿ ಬುಧವಾರ ಮಾತನಾಡಿದ ಅವರು, ಹಿಂದಿನ ಸರ್ಕಾರದ ಆರೋಪಗಳಿಗೆ ಸಾಕ್ಷಿ ಕೇಳದವರು ಈಗ ಏಕೆ ಕೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು. ಸರ್ಕಾರದ ಮೇಲೆ ಗುತ್ತಿಗೆದಾರರ ಸಂಘ ಮಾಡಿರುವ 80 % ಕಮಿಷನ್ ಆರೋಪ ಗಂಭೀರ ವಿಷಯವಾಗಿದ್ದು, ಅದು ಸುಳ್ಳು ಎಂದು ಹೇಳುವ ಕಾಂಗ್ರೆಸ್ ನಾಯಕರು ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿ ಎಂದು ಸವಾಲು ಹಾಕಿದರು. ನಾವು ಸತ್ಯಹರಿಶ್ಚಂದ್ರನ ಮಕ್ಕಳು ಎಂದು ಹೇಳಿಕೊಳ್ಳುವ ಸಚಿವರು ಮೊದಲು ಈ ಆರೋಪಗಳಿಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದ ಟೆಂಡರ್‌ಗಳು ನೆರೆಯ ಆಂಧ್ರಪ್ರದೇಶದ ಗುತ್ತಿಗೆದಾರರಿಗೆ ಹೋಗುತ್ತಿವೆ ಎಂದು ಆರೋಪಿಸಿದ ಅವರು, ಕೆಕೆಆರ್‌ಡಿಬಿ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಯಾವ್ಯಾವ ಕೆಲಸಕ್ಕೆ ಎಷ್ಟು ಕಮಿಷನ್? ಅಶೋಕ್ ಹೇಳಿದ್ದೇನು?

ಕಸದ ಟೆಂಡರ್ ಪಡೆಯಲು 7% ಕಮಿಷನ್, ಬಿಲ್ ಬಿಡುಗಡೆಗೆ 7% ಹಾಗೂ ವಿಶೇಷ ಎಲ್‌ಒಸಿ ಪಡೆಯಲು 7% ನೀಡಬೇಕಾಗಿದೆ. ಇದರಿಂದ ಒಟ್ಟಾರೆ 21% ಕಮಿಷನ್ ಸರ್ಕಾರಕ್ಕೆ ಹೋಗುತ್ತಿದೆ ಎಂದು ಆರೋಪಿಸಿದರು. ಇಂಜಿನಿಯರ್‌ಗಳಿಗೆ ಬೇರೆ ಕಮೀಷನ್ ನೀಡಬೇಕಾಗುತ್ತಿದೆ, ಕಸದ ಸಮಸ್ಯೆಗೆ ಸರ್ಕಾರದ ‘ಮಾಫಿಯಾ’ವೇ ಕಾರಣ ಎಂದು ಅಶೋಕ್ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಸರ್ಕಾರದಿಂದಲೇ ಭೂಕಬಳಿಕೆ: ಜಿಲ್ಲೆಜಿಲ್ಲೆಗಳಲ್ಲಿ ಕಾಂಗ್ರೆಸ್​ ಭವನಕ್ಕೆ ಭೂಮಿ ನೀಡಿದ ದಾಖಲೆ ಸಮೇತ ಬಿಜೆಪಿ ಗಂಭೀರ ಆರೋಪ

ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಕ್ರಮವನ್ನು ಖಂಡಿಸಿದ ಅವರು, ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಬಗ್ಗೆ ಅಶೋಕ್ ಏನಂದ್ರು?

ಜಿಬಿಎ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ವಿಚಾರವಾಗಿ ಮಾತನಾಡಿದ ಅಶೋಕ್, ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆದಿದ್ದು, ಮೈತ್ರಿ ಸುಗಮವಾಗಿ ಚುನಾವಣೆ ಎದುರಿಸಲಿದೆ ಎಂದರು. ಸಣ್ಣಪುಟ್ಟ ಗೊಂದಲಗಳನ್ನು ಬೇಗನೆ ಬಗೆಹರಿಸಲಾಗುವುದು, ಅಂತಿಮ ತೀರ್ಮಾನ ಹೈಕಮಾಂಡ್‌ದ್ದು ಎಂದು ಹೇಳಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೀಡಿಂಗ್ ಸಿಸ್ಟಂ… ಭಾರತ vs ಪಾಕಿಸ್ತಾನ್ ಮುಖಾಮುಖಿಗೆ ಇಲ್ಲ ಅವಕಾಶ! – Kannada News | India and Pakistan cannot meet in the Super 8 stage

T20 World Cup 2026: ಟಿ20 ವಿಶ್ವಕಪ್​ನ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಭಾರತ, ಸೌತ್ ಆಫ್ರಿಕಾ, ನ್ಯೂಝಿಲೆಂಡ್, ಝಿಂಬಾಬ್ವೆ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ತಂಡಗಳು ಸೂಪರ್-8 ಹಂತಕ್ಕೇರಿದೆ. ಇನ್ನು ನಮೀಬಿಯ ವಿರುದ್ಧದ ಪಂದ್ಯದಲ್ಲಿ ಗೆದ್ದರೆ ಪಾಕಿಸ್ತಾನ್ ತಂಡ ಕೂಡ ದ್ವಿತೀಯ ಸುತ್ತಿಗೆ ಪ್ರವೇಶಿಸಲಿದೆ.

ಇದಾಗ್ಯೂ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಸೂಪರ್-8 ಸುತ್ತಿನಲ್ಲಿ ಮುಖಾಮುಖಿಯಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಐಸಿಸಿ ನಿಗದಿಪಡಿಸಿರುವ ಸೀಡಿಂಗ್ ಸಿಸ್ಟಂ.

ಟಿ20 ವಿಶ್ವಕಪ್​ನ ಆರಂಭದಲ್ಲೇ ಐಸಿಸಿ ಸೀಡಿಂಗ್ ವ್ಯವಸ್ಥೆಯನ್ನು ರೂಪಿಸಿದೆ. ಈ ಮೂಲಕ ಪಂದ್ಯಾವಳಿಗೂ ಮುನ್ನವೇ ತಂಡಗಳ ಶ್ರೇಯಾಂಕದ ಆಧಾರದ ಮೇಲೆ ಅವುಗಳು ಮುಂದಿನ ಹಂತದಲ್ಲಿ (Super 8) ಯಾವ ಗುಂಪಿನಲ್ಲಿ ಇರಬೇಕೆಂಬುದನ್ನು ಎಂಬುದನ್ನು ನಿರ್ಧರಿಸಲಾಗಿದೆ.

ಅಂದರೆ ಗುಂಪು ಹಂತದಲ್ಲಿ ಒಂದು ತಂಡ ಮೊದಲ ಸ್ಥಾನ ಪಡೆಯಲಿ ಅಥವಾ ಎರಡನೇ ಸ್ಥಾನ ಪಡೆಯಲಿ, ಅದು ತನ್ನ ಸೀಡಿಂಗ್‌ಗೆ ನಿಗದಿಯಾದ ಸೂಪರ್ 8 ಗುಂಪನ್ನೇ ಸೇರುತ್ತದೆ. ಉದಾಹರಣೆಗೆ, ಭಾರತವು ತನ್ನ ಗುಂಪಿನಲ್ಲಿ ಎಷ್ಟನೇ ಸ್ಥಾನದಲ್ಲಿದ್ದರೂ ಸೂಪರ್ 8ರಲ್ಲಿ ‘X1’ ಸ್ಥಾನವನ್ನೇ ಪಡೆಯುತ್ತದೆ.  ಅತ್ತ ಪಾಕಿಸ್ತಾನಕ್ಕೆ Y3 ಸ್ಥಾನವನ್ನು ನೀಡಲಾಗಿದೆ.

ಹೀಗಾಗಿ ಸೂಪರ್-8 ಹಂತದಲ್ಲಿ ಭಾರತ ತಂಡವು ಗ್ರೂಪ್- 1 ರಲ್ಲಿ ಕಣಕ್ಕಿಳಿದರೆ, ಪಾಕ್ ತಂಡವು ಅರ್ಹತೆ ಪಡೆದರೆ ಗ್ರೂಪ್-2 ನಲ್ಲಿ ಕಣಕ್ಕಿಳಿಯಲಿದೆ.

ಸೀಡಿಂಗ್ ಸಿಸ್ಟಂ ಯಾಕೆ?

ವಾಣಿಜ್ಯ ಮತ್ತು ಸಾರಿಗೆ ಅನುಕೂಲಕ್ಕಾಗಿ ಟಿ20 ವಿಶ್ವಕಪ್​ನ ಆರಂಭದಲ್ಲೇ ಸೀಡಿಂಗ್ ಸಿಸ್ಟಂ ಪರಿಚಯಿಸಲಾಗಿದೆ. ಇದರಿಂದ ಪ್ರಸಾರಕರು ಮತ್ತು ಅಭಿಮಾನಿಗಳಿಗೆ ಯಾವ ತಂಡ ಯಾವ ದಿನ ಎಲ್ಲಿ ಆಡಲಿದೆ ಎಂಬುದು ಮೊದಲೇ ತಿಳಿಯಲು  ಸಹಾಯ ಮಾಡುತ್ತದೆ. ಇದರಿಂದ ಟಿಕೆಟ್ ಬುಕ್ಕಿಂಗ್ ಹಾಗೂ ಪ್ರಯಾಣ ಕೂಡ ಸುಲಭವಾಗುತ್ತದೆ.

ಹೀಗಾಗಿ ಈ ಬಾರಿ ಸೂಪರ್-8 ಸುತ್ತಿಗೆ ಸೀಡಿಂಗ್ ವ್ಯವಸ್ಥೆ ಮಾಡಲಾಗಿದ್ದು, ಅದರಂತೆ ಗ್ರೂಪ್- 1 ರಲ್ಲಿ ಕಣಕ್ಕಿಳಿಯುವ ತಂಡಗಳು ತನ್ನೆಲ್ಲಾ ಪಂದ್ಯಗಳನ್ನು ಭಾರತದಲ್ಲೇ ಆಡಲಿದೆ. ಹಾಗೆಯೇ ಗ್ರೂಪ್-2 ನಲ್ಲಿರುವ ತಂಡಗಳ ಪಂದ್ಯಗಳು ಶ್ರೀಲಂಕಾದಲ್ಲಿ ಜರುಗಲಿದೆ.

ಸೂಪರ್-8 ಗ್ರೂಪ್:

  • ಗ್ರೂಪ್ 1 (X): ಭಾರತ (X1), ಝಿಂಬಾಬ್ವೆ (X2), ವೆಸ್ಟ್ ಇಂಡೀಸ್ (X3), ಸೌತ್ ಆಫ್ರಿಕಾ (X4).
  • ಗ್ರೂಪ್ 2 (Y): ಇಂಗ್ಲೆಂಡ್ (Y1), ನ್ಯೂಝಿಲೆಂಡ್ (Y2), ಪಾಕಿಸ್ತಾನ್ (ಅರ್ಹತೆ ಪಡೆದರೆ) (Y3), ಶ್ರೀಲಂಕಾ (Y4).

ಈ ಎಂಟು ತಂಡಗಳು ಸೂಪರ್-8 ಸುತ್ತಿನಲ್ಲಿ ಗ್ರೂಪ್ ತಂಡಗಳ ವಿರುದ್ಧ ಸೆಣಸಲಿದೆ. ಅಂದರೆ ಭಾರತ ತಂಡವು ತನ್ನ ಗ್ರೂಪ್​ನಲ್ಲಿರುವ ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಎದುರಿಸಲಿದೆ.

ಇತ್ತ ಪಾಕಿಸ್ತಾನ್ ತಂಡವು ಸೂಪರ್-8 ಸುತ್ತಿಗೆ ಪ್ರವೇಶಿಸಿದರೆ ಇಂಗ್ಲೆಂಡ್, ನ್ಯೂಝಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ಸೆಣಸಬೇಕಿದೆ.

ಇದನ್ನೂ ಓದಿ: ಭಾರತದಲ್ಲಿ ‘ಬಿಗ್ ಬ್ಯಾಷ್ ಲೀಗ್’

ಇಲ್ಲಿ ಗ್ರೂಪ್​ನಲ್ಲಿನ ತಂಡಗಳ ನಡುವೆ ಪಂದ್ಯ ನಡೆಯುವುದರಿಂದ ಸೂಪರ್-8 ಸುತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗುವುದಿಲ್ಲ. ಇದಾಗ್ಯೂ ಉಭಯ ತಂಡಗಳು ಸೆಮಿಫೈನಲ್​ಗೆ ಪ್ರವೇಶಿಸಿದರೆ ಮತ್ತೆ ಮುಖಾಮುಖಿಯಾಗುವ ಸಾಧ್ಯತೆಯಿದೆ. ಹೀಗಾಗಿ ಇಂಡೊ-ಪಾಕ್ ಕದನವನ್ನು ಮತ್ತೆ ವೀಕ್ಷಿಸಲು ಸೆಮಿಫೈನಲ್ ಅಥವಾ ಫೈನಲ್​ವರೆಗೆ ಕಾಯಲೇಬೇಕು.

Source link

ಶಾಸಕ ಸ್ಥಾನ ಅಸಿಂಧುಗೊಂಡ ಬಗ್ಗೆ ಸುಬ್ಬಾರೆಡ್ಡಿ ಫಸ್ಟ್​ ರಿಯಾಕ್ಷನ್​​: ಕಾಂಗ್ರೆಸ್​​ ನಾಯಕ ಹೇಳಿದ್ದೇನು? – Kannada News | S.N. Subbareddy Reacts to Bagepalli MLA Seat Invalidation Verdict

ದೇವನಹಳ್ಳಿ, ಫೆಬ್ರವರಿ 18: ಬಾಗೇಪಲ್ಲಿ ಶಾಸಕ ಸ್ಥಾನ ಅಸಿಂಧುಗೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಎಸ್.ಎನ್. ಸುಬ್ಬಾರೆಡ್ಡಿ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ನ್ಯಾಯಾಲಯದ ತೀರ್ಪನ್ನು ಸಂಪೂರ್ಣವಾಗಿ ಗೌರವಿಸುವುದಾಗಿ ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು , ಇದು ದೊಡ್ಡ ಪ್ರಕರಣವೇನಲ್ಲ. ಸೋತಿರುವವರೆಲ್ಲರೂ ಈ ರೀತಿ ರಾಜಕೀಯ ದ್ವೇಷ ತೀರಿಸಿಕೊಳ್ಳಲು ಮುಂದಾದರೆ, ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಕಷ್ಟವಾಗುತ್ತದೆ.  ಪ್ರಸ್ತುತ ತಾನು ದೆಹಲಿಗೆ ತೆರಳುತ್ತಿದ್ದು, ಅಲ್ಲಿಂದ ಮರಳಿದ ನಂತರ ಈ ಕುರಿತು ವಿಸ್ತೃತವಾಗಿ ಪ್ರತಿಕ್ರಿಯೆ ನೀಡುವುದಾಗಿ ಅವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಜನೀಕಾಂತ್ ಸಿಗರೇಟು ಸ್ಟೈಲು ಕಲಿತಿದ್ದು ಕನ್ನಡದ ಆ ಸ್ಟಾರ್ ನಟನಿಂದ – Kannada News | Rajinikanth said he copied his cigarette style from Ambareesh

ರಜನೀಕಾಂತ್ (Rajinikanth), ಭಾರತದ ನಂಬರ್ 1 ಸೂಪರ್ ಸ್ಟಾರ್. ರಜನೀಕಾಂತ್ ಅವರನ್ನು ಸ್ಟೈಲ್ ಕಿಂಗ್ ಎಂದೂ ಸಹ ಕರೆಯಲಾಗುತ್ತದೆ. ರಜನೀಕಾಂತ್ ಅವರಿಗೆ ಮೊದಲು ತಮಿಳು ಸಿನಿಮಾಗಳಲ್ಲಿ ಅವಕಾಶ ಸಿಕ್ಕಿದ್ದೇ ಅವರು ಮಾಡುತ್ತಿದ್ದ ಸ್ಟೈಲ್​​ನಿಂದ ಅದರಲ್ಲೂ ಅವರು ಸಿಗರೇಟನ್ನು ಬಾಯಿಗೆ ಎಸೆದುಕೊಳ್ಳುವ ಸ್ಟೈಲ್ ಈಗಲೂ ಜನಪ್ರಿಯ. ರಜನೀಕಾಂತ್ ತಮ್ಮ ಹಲವಾರು ಸಿನಿಮಾಗಳಲ್ಲಿ ಈ ಸಿಗರೇಟು ಸ್ಟೈಲ್ ಬಳಸಿದ್ದಾರೆ. ಅದರಿಂದಲೇ ಅವರಿಗೆ ದೊಡ್ಡ ಗುರುತು ಸಿಕ್ಕಿದೆ ಸಹ. ಆದರೆ ಆ ಸಿಗರೇಟು ಸ್ಟೈಲ್ ಅನ್ನು ರಜನೀಕಾಂತ್ ಕಲಿತಿದ್ದು ಕನ್ನಡದ ಸ್ಟಾರ್ ನಟನಿಂದ. ಈ ಬಗ್ಗೆ ಸ್ವತಃ ರಜನೀಕಾಂತ್ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ರಜನೀಕಾಂತ್ ಆಗಿನ್ನೂ ಬೆಂಗಳೂರಿನಲ್ಲಿ ಬಿಎಂಟಿಸಿ ಕಂಡೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಆಗ ವಿಷ್ಣುವರ್ಧನ್ ನಟನೆಯ ‘ನಾಗರಹಾವು’ ಸಿನಿಮಾ ಬಿಡುಗಡೆ ಆಗಿತ್ತು. ರಜನೀಕಾಂತ್ ಸಂದರ್ಶನದಲ್ಲಿ ಹೇಳಿಕೊಂಡಿರುವಂತೆ, ಅವರು ಡ್ಯೂಟಿ ಮುಗಿಸಿ, ಯೂನಿಫಾರ್ಮ್ ಸಹ ಕಳಚಿಡದೆ, ಟಿಕೆಟ್ ಬುಕ್​​ಗಳನ್ನು ಸಹ ಮರಳಿಸದೆ ‘ನಾಗರಹಾವು’ ಸಿನಿಮಾ ನೋಡಲು ಹೋಗಿದ್ದರಂತೆ.

ಇದನ್ನೂ ಓದಿ:ಸ್ವಚ್ಛತಾ ಕಾರ್ಮಿಕ ಮಹಿಳೆ ಪದ್ಮಮ್ಮನ ಸನ್ಮಾನಿಸಿದ ರಜನೀಕಾಂತ್: ಕಾರಣ?

ಅದೇ ‘ನಾಗರಹಾವು’ ಸಿನಿಮಾನಲ್ಲಿ ಅಂಬರೀಶ್ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ್ದರು. ಅವರ ಇಂಟ್ರೊಡಕ್ಷನ್ ಸೀನ್ ಸಖತ್ ಜನಪ್ರಿಯ ಆಗಿತ್ತು. ‘ಕ್ಯಾರೆ ಬುಲ್ ಬುಲ್ ಮಾತಾಡಕಿಲ್ವ’ ಎಂದು ಅಂಬರೀಶ್ ಸಖತ್ ಎಂಟ್ರಿ ಕೊಟ್ಟಿದ್ದರು. ಆ ಸೀನ್​​ನಲ್ಲಿ ಅಂಬರೀಶ್ ಸಿಗರೇಟನ್ನು ಬಾಯಿಗೆ ಎಸೆದುಕೊಳ್ಳುತ್ತಾರೆ. ಆ ಸೀನ್ ನೋಡಿದ್ದ ರಜನೀಕಾಂತ್ ಅದೇ ಸ್ಟೈಲ್ ಅನ್ನು ಕಾಪಿ ಮಾಡಿದರಂತೆ. ರಜನೀಕಾಂತ್, ಆ ಸಮಯದಲ್ಲಿ ಅಂಬರೀಶ್ ಫ್ಯಾನ್ ಆಗಿಬಿಟ್ಟಿದ್ದರಂತೆ. ‘ನಾಗರಹಾವು’ ಸಿನಿಮಾ 1972ರಲ್ಲಿ ಬಿಡುಗಡೆ ಆಗಿತ್ತು. ಅದಾಗಿ ಮೂರು ವರ್ಷಗಳ ಬಳಿಕ 1975 ರಲ್ಲಿ ರಜನೀಕಾಂತ್ ಅವರು ಮೊದಲ ಸಿನಿಮಾ ‘ಅಪೂರ್ವ ರಾಗಂಗಳ್’ನಲ್ಲಿ ನಟಿಸಿದರು.

ರಜನೀಕಾಂತ್ ಮತ್ತು ಅಂಬರೀಶ್ ಅವರು ಬಹಳ ಆತ್ಮೀಯ ಗೆಳೆಯರಾಗಿದ್ದರು. ಅಂಬರೀಶ್ ಕಾಲವಾದಾಗ ಬೆಂಗಳೂರಿಗೆ ಬಂದಿದ್ದ ರಜನೀಕಾಂತ್, ತಮ್ಮ ಹಾಗೂ ಅಂಬರೀಶ್ ನಡುವೆ ಇದ್ದ ಆತ್ಮೀಯತೆ ಬಗ್ಗೆ ಮಾತನಾಡಿದ್ದು, ಇಬ್ಬರೂ ಏಕವಚನದ ಗೆಳೆಯರಾಗಿದ್ದರು. ತಮ್ಮ ಆತ್ಮೀಯ ಗೆಳೆಯನನ್ನು ಕಳೆದುಕೊಂಡ ದುಃಖದಲ್ಲಿ ಕಣ್ಣೀರು ಹಾಕಿದ್ದರು ರಜನೀಕಾಂತ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸ್ಟೀವ್ ಸ್ಮಿತ್ ಬರುವಷ್ಟರಲ್ಲಿ ವಿಶ್ವಕಪ್​ನಿಂದಲೇ ಹೊರಬಿದ್ದ ಆಸ್ಟ್ರೇಲಿಯಾ

Source link

ಮಂಗಳಮುಖಿ ಎಂದು ಗೊತ್ತಿದ್ದರೂ ಪ್ರೀತಿಯಲ್ಲಿ ಬಿದ್ದ ಯುವಕ: ಆಮೇಲಾಗಿದ್ದು ದುರಂತ – Kannada News | Love Turns Tragic in Ballari: Transgender Partner Youth Found Dead, Police Probe Suicide or Murder Angle

ಶೇಖರ್ ಅಲಿಯಾಸ್ ಮಣಿ, ಸುಹಾಸಿನಿImage Credit source: tv9

ಬಳ್ಳಾರಿ, ಫೆಬ್ರವರಿ 18: ಬಳ್ಳಾರಿ (Ballari) ನಗರದ ಕೆಎಂಎಫ್ (KMF) ಡೈರಿ ಕ್ರಾಸ್ ಬಳಿಯ ಬಾಡಿಗೆ ಮನೆಯಲ್ಲಿ ಪರಸ್ಪರ ಪ್ರೀತಿಸುತ್ತಿದ್ದ ಮಂಗಳಮುಖಿ ಮತ್ತು ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಮನೆಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮೃತರನ್ನು ಮಂಗಳಮುಖಿ ಸುಹಾಸಿನಿ (29) ಹಾಗೂ ಶೇಖರ್ ಅಲಿಯಾಸ್ ಮಣಿ (31) ಎಂದು ಗುರುತಿಸಲಾಗಿದೆ. ಶೇಖರ್ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮಲ್ಪನಗುಡಿ ಗ್ರಾಮದ ನಿವಾಸಿಯಾಗಿದ್ದು, ಆಟೋ ಚಾಲಕರಾಗಿ ಜೀವನ ನಡೆಸುತ್ತಿದ್ದ. ಸುಹಾಸಿನಿ ಬಳ್ಳಾರಿ ತಾಲೂಕಿನ ಚಾಗನೂರು ಗ್ರಾಮದವರಾಗಿದ್ದರು.

ಇಬ್ಬರೂ ಕಳೆದ ಆರು ವರ್ಷಗಳಿಂದ ಒಟ್ಟಿಗೆ ವಾಸವಾಗಿದ್ದರು. ಸುಹಾಸಿನಿ ಮಂಗಳಮುಖಿ ಎಂದು ಗೊತ್ತಿದ್ದರೂ ಶೇಖರ್ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಬಳ್ಳಾರಿ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ಸಂಬಂಧ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮಂಗಳಮುಖಿಯರಿಂದ ಗಂಭೀರ ಆರೋಪ

ಮಂಗಳಮುಖಿ ಸಮುದಾಯದ ಸದಸ್ಯರು ಶೇಖರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹಣಕ್ಕಾಗಿ ಸುಹಾಸಿನಿಯ ಜೊತೆ ಇದ್ದ ಶೇಖರ್, ನಂತರ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದರ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಫ್ರೀಯಾಗಿ ಮೂವಿ ಸಿಗುತ್ತೆ ಎಂದು ಡೌನ್ ಲೋಡ್ ಮಾಡ್ತಿದ್ದಿರಾ? ಡೌನ್ ಲೋಡ್ ಆಗುವ ಸಮಯವೇ ಆಗುತ್ತೆ ವಂಚಕರಿಗೆ ವರದಾನ, ಹೇಗೆ ಗೊತ್ತಾ?

ಮತ್ತೊಂದೆಡೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸಾವಿನ ನಿಖರ ಕಾರಣ ಮರಣೋತ್ತರ ವರದಿ ನಂತರವೇ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಂಥ್ರೋಪಿಕ್ vs ಆಂಥ್ರೋಪಿಕ್; ಅಮೆರಿಕನ್ ಎಐ ದೈತ್ಯನಿಗೆ ಕರ್ನಾಟಕ ಕೋರ್ಟ್​ನಿಂದ ಸಮನ್ಸ್ – Kannada News | Karnataka court summons US company Anthropic on basis of complaint by Anthropic Software

ಕರ್ನಾಟಕದ ಅಂಥ್ರೋಪಿಕ್ ಸಾಫ್ಟ್​ವೇರ್ ಕಂಪನಿ ಸಿಇಒ ಮೊಹಮ್ಮದ್ ಆಯಾಜ್

ಬೆಳಗಾವಿ, ಫೆಬ್ರುವರಿ 18: ಜಾಗತಿಕವಾಗಿ ಸಂಚಲನ ಮೂಡಿಸುತ್ತಿರುವ ಮತ್ತು ಬೆಂಗಳೂರಿನಲ್ಲಿ ಮೊನ್ನೆ ಕಚೇರಿ ತೆರೆದಿರುವ ಅಮೆರಿಕನ್ ಎಐ ಕಂಪನಿಯಾದ ಆಂಥ್ರೋಪಿಕ್ (Anthropic) ವಿರುದ್ಧ ಅದೇ ಹೆಸರಿನ ಕರ್ನಾಟಕದ ಮತ್ತೊಂದು ಕಂಪನಿ ಕೇಸ್ ದಾಖಲಿಸಿದೆ. ಆಂಥ್ರೋಪಿಕ್ ಸಾಫ್ಟ್​ವೇರ್ ಪ್ರೈ ಲಿ (Anthropic Software Pvt Ltd) ಸಂಸ್ಥೆ ಬೆಳಗಾವಿ ಜಿಲ್ಲಾ ನ್ಯಾಯಾಲಯದ ಕಮರ್ಷಿಯಲ್ ವಿಭಾಗದಲ್ಲಿ ಅಮೆರಿಕದ ಆಂಥ್ರೋಪಿಕ್ ವಿರುದ್ಧ ದೂರು ದಾಖಲಿಸಿದೆ. ತನ್ನ ಹೆಸರನ್ನು ಬಳಸುತ್ತಿರುವುದರಿಂದ ತನಗೆ ಬ್ಯುಸಿನೆಸ್ ಕಡಿಮೆ ಆಗಿದೆ. ಟ್ರೇಡ್​ಮಾರ್ಕ್ ಹಕ್ಕು ಉಲ್ಲಂಘನೆಯಾಗಿದೆ ಎಂದು ಅದು ತನ್ನ ದೂರಿನಲ್ಲಿ ಹೇಳಿದೆ. ಈ ಸಂಬಂಧ, ನ್ಯಾಯಾಲಯವು ಅಮೆರಿಕನ್ ಕಂಪನಿಗೆ ಸಮನ್ಸ್ ಜಾರಿ ಮಾಡಿದೆ.

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮುಖ್ಯಕಚೇರಿ ಹೊಂದಿರುವ ಆಂಥ್ರೋಪಿಕ್ ಕಂಪನಿಗೆ ಈ ಹಿಂದೆ ಫೆಬ್ರುವರಿ 16ಕ್ಕೆ ಬರುವಂತೆ ಸಮನ್ಸ್ ಕೊಡಲಾಗಿತ್ತು. ಆದರೆ, ಪ್ರತಿನಿಧಿಗಳು ಬಾರದೇ ಇದ್ದರಿಂದ ಈಗ ಹೊಸದಾಗಿ ಸಮನ್ಸ್ ಕೊಡಲಾಗಿದ್ದು, ಮಾರ್ಚ್ 9ಕ್ಕೆ ಕೋರ್ಟ್​ಗೆ ಹಾಜರಾಗಬೇಕೆಂದು ಸೂಚಿಸಿದೆ.

ಇದನ್ನೂ ಓದಿ: ಭಾರತಕ್ಕೂ ಬಂದ ಆಂಥ್ರೋಪಿಕ್; ಬೆಂಗಳೂರಿನಲ್ಲಿ ಅಂಗಡಿ ತೆರೆದ ಎಐ ಕಂಪನಿ

ಕರ್ನಾಟಕದ ಅಂಥ್ರೋಪಿಕ್ ಸಾಫ್ಟ್​ವೇರ್ ಪ್ರೈ ಲಿ ಸಂಸ್ಥೆ ಸ್ಥಾಪನೆಯಾಗಿದ್ದು 2017ರಲ್ಲಿ. ಆದರೆ, ಅಮೆರಿಕದ ಆಂಥ್ರೋಪಿಕ್ ಆರಂಭವಾಗಿದ್ದು 2021ರಲ್ಲಿ. ಹೀಗಾಗಿ, ಹೆಸರು ಬಳಕೆಯ ಹಕ್ಕು ಕರ್ನಾಟಕದ ಕಂಪನಿಗೆ ಇರುತ್ತದೆ. ಆಂಥ್ರೋಪಿಕ್ ಡಾಟ್ ಇನ್ ಎನ್ನುವ ಡೊಮೈನ್ ಹೊಂದಿದೆ. ಆದರೆ, ಅಮೆರಿಕದ ಆಂಥ್ರೋಪಿಕ್ ಕಂಪನಿ ಅದೇ ಹೆಸರಿನಲ್ಲಿ ಡಾಟ್ ಕಾಮ್​ನಲ್ಲಿ ಡೊಮೈನ್ ಹೊಂದಿದೆ. ಅಂಥ್ರೋಪಿಕ್ ಅನ್ನು ಇಂಟರ್ನೆಟ್​ನಲ್ಲಿ ಸರ್ಚ್ ಮಾಡಿದಾಗ ಬಹುತೇಕ ರಿಸಲ್ಟ್​ಗಳು ಆಂಥ್ರೋಪಿಕ್ ಡಾಟ್ ಕಾಮ್ ಅನ್ನು ಪ್ರದರ್ಶಿಸುತ್ತವೆ. ಇದು ಕರ್ನಾಟಕದ ಆಂಥ್ರೋಪಿಕ್ ಕಂಪನಿಯ ಅಳಲು.

‘ನಮ್ಮ ಗ್ರಾಹಕರಿಗೆ ಆಂಥ್ರೋಪಿಕ್ ಎಂದೇ ಪರಿಚಿತರಿದ್ದೇವೆ. ಜನರು ಆಂಥ್ರೋಪಿಕ್ ಎಂದು ಶೋಧಿಸಿದಾಗ ಅಮೆರಿಕನ್ ಕಂಪನಿಯ ವೆಬ್​ಸೈಟ್ ಸಿತುತ್ತದೆ. ನಾವು ಸಂಪೂರ್ಣ ಮರೆಯಾದಂತಾಗಿದ್ದೇವೆ. ನಮ್ಮ ಬ್ಯುಸಿನೆಸ್​ಗೆ ಸಂಚಕಾರ ಆಗುತ್ತಿದೆ’ ಎಂದು ಆಂಥ್ರೋಪಿಕ್ ಸಾಫ್ಟ್​ವೇರ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಂಸ್ಥಾಪಕ ನಿರ್ದೇಶಕರಾದ ಮೊಹಮ್ಮದ್ ಆಯಾಜ್ ಮುಲ್ಲಾ ಹೇಳಿದ್ದಾರೆ.

ಇದನ್ನೂ ಓದಿ: ಐದು ವರ್ಷದಲ್ಲಿ ಐಟಿ ಉದ್ಯೋಗಗಳೇ ಇರೋದಿಲ್ಲ ಎಂದಿದ್ದಾರೆ ವಿನೋದ್ ಖೋಸ್ಲಾ; ಎಐನಿಂದ ಭಾರತವೇನು ಮಾಡಬೇಕು?

ಶಿಕ್ಷಣ, ಕನೆಕ್ಟಿವಿಟಿ, ಸೇಫ್ಟಿ ಕ್ಷೇತ್ರಗಳಲ್ಲಿ ಆಂಥ್ರೋಪಿಕ್ ಸಾಫ್ಟ್​ವೇರ್ ಕಂಪನಿಯು ಡಿಜಿಟಲ್ ಪ್ಲಾಟ್​ಫಾರ್ಮ್​ಗಳನ್ನು ಅಭಿವೃದ್ಧಿಪಡಿಸುವ ಸೇವೆ ಒದಗಿಸುತ್ತದೆ. ಅಚಾತುರ್ಯ ಡ್ರೈವಿಂಗ್​ನಿಂದ (Distracted driving) ಸಾವು ಸಂಭವಿಸುವುದನ್ನು ತಪ್ಪಿಸಲು ಈ ಕಂಪನಿ ಕ್ವಿಕ್ ಟ್ಯೂನ್ಸ್ (QuickTunes) ಎನ್ನುವ ಸಾಫ್ಟ್​ವೇರ್ ಪರಿಹಾರ ಅಭಿವೃದ್ಧಿಪಡಿಸಿತ್ತು. ಕರ್ನಾಟಕ ಸರ್ಕಾರ ಇದನ್ನು ಗುರುತಿಸಿ ಈ ಕಂಪನಿಗೆ ನಗದು ಬಹುಮಾನ ಕೊಟ್ಟು ಗೌರವಿಸಿತ್ತು ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Bengaluru: ಚಾಲಕನ ಜೊತೆ ಮಾತಾಡಿದ್ದಕ್ಕೆ ಪತ್ನಿಯನ್ನೇ ಕೊಚ್ಚಿಕೊಂದ ಪತಿ! – Kannada News | Marital Suspicions Lead to Wife’s Brutal Murder in Bengaluru; Police Arrest Accused

ಮೃತ ದೇವಿಕಾ ಮತ್ತು ಆರೋಪಿ ಕುಮಾರ್​Image Credit source: Tv9 Kannada

ಬೆಂಗಳೂರು, ಫೆಬ್ರವರಿ 18: ಪತ್ನಿ ಮೇಲೆ ಅನುಮಾನ ಕಾರಣಕ್ಕೆ ಮಚ್ಚಿನಿಂದ ಕೊಚ್ಚಿ ಆಕೆಯನ್ನು ಪತಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದೇವಿಕಾ(50) ಮೃತರಾಗಿದ್ದು, ಆರೋಪಿ ಕುಮಾರ್​​ನನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಕುಟುಂಬ ಸಮೇತ ಕೇರಳ ಪ್ರವಾಸಕ್ಕೆ ತೆರಳಿದ್ದ ವೇಳೆ ದೇವಿಕಾ ಚಾಲಕನ ಜೊತೆ ಮಾತನಾಡಿದ್ದರು. ಇದರಿಂದ ಅನುಮಾನಗೊಂಡಿದ್ದ ಕುಮಾರ್​​, ನಿನ್ನೆ ರಾತ್ರಿ ಮಲಗಿದ್ದ ವೇಳೆ ಮಚ್ಚಿನಿಂದ ಕೊಚ್ಚಿ ಪತ್ನಿಯ ಕೊಲೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಕೂಡಲೇ ಆತನನ್ನ ಮಕ್ಕಳು ತಡೆದಿದ್ದಾರೆ.

ಇನ್ನು ಘಟನೆ ಬಗ್ಗೆ ದೇವಿ ಮತ್ತು ಕುಮಾರ್ ಪುತ್ರಿ ಶಾಲಿನಿ ಪ್ರತಿಕ್ರಿಯಿಸಿದ್ದು, ನಮ್ಮ ತಂದೆ-ತಾಯಿ ಮದುವೆ ಆಗಿ 40 ವರ್ಷ ಆಗಿದೆ. ಈ ಮೊದಲು ನಮ್ಮ ತಂದೆ ಈ ರೀತಿ ಇರಲಿಲ್ಲ. ಕಳೆದ ಒಂದು ತಿಂಗಳಿಂದ ಅನುಮಾನ ಅಂತ ಶುರು ಮಾಡಿದ್ದ. ಮಲಗಿದ್ದಾಗಲೇ ನಮ್ಮ ತಾಯಿಯನ್ನ ಕೊಚ್ಚಿ ಕೊಲೆ ಮಾಡಿದ್ದಾನೆ. ಈ ಪರಿಸ್ಥಿತಿ ಯಾರಿಗೂ ಬರಬಾರದು. ಕೊಲೆ ಮಾಡಿದ ಬಳಿಕ ಆತ ನಮ್ಮ ತಮ್ಮನಿಗೆ ಫೋನ್ ಮಾಡಿ ನಿಮ್ಮ ತಾಯಿಯನ್ನ ಕೊಂದಿದ್ದೀನಿ ಎಂದು ಹೇಳಿದ್ದಾನೆ. ಅಲ್ಲದೆ, ತಾನು ಕೂಡ ನೇಣು ಹಾಕಿಕೊಳ್ತೇನೆ ಬನ್ನಿ ಎಂದಿದ್ದಾನೆ. ಹೀಗಾಗಿ ವಿಚಾರ ಪೊಲೀಸರಿಗೆ ತಿಳಿಸಿ ಕೂಡಲೇ ಸ್ಥಳಕ್ಕೆ ಹೋಗಲಾಗಿದೆ. ನಮಗೆ ತಂದೆ ಬೇಡ. ಜಾಮೀನು ಎಂದು ನಾವೇನೂ ಹೋಗಲ್ಲ ಎಂದು ಶಾಲಿನಿ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ:  ಪ್ರೇಯಸಿಯ ಕೊಂದು ಶವದ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ಮಾಧ್ಯಮಗಳೆದುರು ನಕ್ಕು ಹೇಳಿದ್ದೇನು?

ಸದ್ಯ ಕೊಲೆ ಆರೋಪಿ ಕುಮಾರ್​ನನ್ನು ಪೊಲೀಸರು ಬಂಧಿಸಿದ್ದು, ಘಟನೆ ಬಗ್ಗೆ ಗೋವಿಂದರಾಜನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 4 ದಶಕಗಳ ಕಾಲ ಜೊತೆಯಾಗಿ ಸಂಸಾರ ನಡೆಸಿದ್ದ ದೇವಿಕಾ ಮತ್ತು ಕುಮಾರ್​​ ದಾಂಪತ್ಯ ದುರಂತ ಅಂತ್ಯ ಕಂಡಿದ್ದು, ಆರೋಪಿ ಕುಮಾರ್​​ ಅದ್ಯಾಕೆ ತನ್ನ ಹೆಂಡತಿಯ ಮೇಲೆ ವಿಪರೀತ ಅನುಮಾನ ಹೊಂದಿದ್ದ ಎಂಬುದು ತನಿಖೆಯಿಂದ ಬಯಲಾಗಬೇಕಿದೆ. ತಂದೆಯ ವರ್ತನೆಯಿಂದ ಮಕ್ಕಳೂ ಬೆಚ್ಚಿಬಿದ್ದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವರದಿ: ವಿಕಾಸ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಕಥೆ ಬಗ್ಗೆ ಸಿಕ್ತು ದೊಡ್ಡ ಅಪ್​​ಡೇಟ್ – Kannada News | Toxic Movie: Yash’s Film Plot, Release Date and Competition Details Revealed

‘ಟಾಕ್ಸಿಕ್’ ಸಿನಿಮಾ ರಿಲೀಸ್​​ಗೆ ಇನ್ನು ಒಂದು ತಿಂಗಳು ಕೂಡ ಬಾಕಿ ಉಳಿದಿಲ್ಲ. ಈ ಚಿತ್ರದ ಪ್ರಚಾರ ಕಾರ್ಯ ಇನ್ನೂ ಆರಂಭ ಆಗಿಲ್ಲ ಎಂಬ ಬೇಸರ ಯಶ್ ಅಭಿಮಾನಿಗಳಿಗೆ ಇದೆ. ಈ ಮಧ್ಯೆ ಸಿನಿಮಾದ ಕಥೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಒಂದಿ ಹರಿದಾಡುತ್ತಿದೆ. ಸಿನಿಮಾದ ಥೀಮ್ ಯಾವ ರೀತಿ ಇರಬಹುದು ಎಂಬ ಕುತೂಹಲಕ್ಕೆ ತೆರೆ ಬಿದ್ದಂತೆ ಆಗಿದೆ.

‘ಟಾಕ್ಸಿಕ್’ ಸಿನಿಮಾದ ಕಥೆಯ ಬಗ್ಗೆ ಫಾರ್​ ಫಿಲ್ಮ್ಸ್ ಕೋ ಎಲ್​​ಎಲ್​ಎಲ್​ಸಿ ಎಂಬುವವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಟಾಕ್ಸಿಕ್’ ಸಿನಿಮಾ 1940-70ರ ಅವಧಿಯಲ್ಲಿ ಗೋವಾದಲ್ಲಿ ನಡೆಯುವ ಕಥೆಯಂತೆ. ಕ್ರೈಮ್ ಲೋಕವನ್ನು ಹಿಂಸೆ, ಭಯ ಮೊದಲಾದ ವಿಷಯಗಳ ಮೂಲಕ ಕಟ್ಟುವ ಕಥೆಯನ್ನು ಈ ಸಿನಿಮಾ ಹೊಂದಿದೆ ಎಂದು ಹೇಳಲಾಗುತ್ತಾ ಇದೆ.

ಸಾಮಾನ್ಯವಾಗಿ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ಒಂದಷ್ಟು ಥಿಯರಿಗಳು ಹುಟ್ಟಿಕೊಳ್ಳೋದು ಸಾಮಾನ್ಯ. ಈಗ ‘ಟಾಕ್ಸಿಕ್’ ವಿಷಯದಲ್ಲೂ ಹೀಗೆಯೇ ಆಗಿರಬಹುದು ಎಂಬುದು ಕೆಲವರ ಊಹೆ. ‘ಟಾಕ್ಸಿಕ್’ ಟ್ರೇಲರ್ ರಿಲೀಸ್ ಆದ ಬಳಿಕವೇ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಮಾರ್ಚ್ ಮೊದಲ ವಾರದಲ್ಲಿ ಟಾಕ್ಸಿಕ್ ಟ್ರೇಲರ್ ಬರಲಿದೆ.

ಮಾರ್ಚ್ 19ರಂದು ‘ಟಾಕ್ಸಿಕ್’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದ ಎದುರು ‘ಧುರಂಧರ್ 2’ ಸಿನಿಮಾ ರಿಲೀಸ್ ಆಗುತ್ತಿದೆ. ಯಶ್ ಎದುರು ರಿಲೀಸ್ ಆಗಿ ಗೆಲುವು ಸಾಧಿಸಿದವರೇ ಇಲ್ಲ ಎಂದರೂ ತಪ್ಪಾಗಲಾರದು. ಶಾರುಖ್ ಖಾನ್ (ಝೀರೋ), ದಳಪತಿ ವಿಜಯ್ (ಬೀಸ್ಟ್​) ಈ ಮೊದಲು ಯಶ್ ಸಿನಿಮಾ ಎದುರು ಬಂದು ಮಂಡಿ ಊರಿದ್ದಾರೆ. ಇದೇ ಪರಿಸ್ಥಿತಿ ‘ಧುರಂಧರ್ 2’ ಚಿತ್ರಕ್ಕೂ ಬರಲಿದೆ ಎಂಬ ಮಾತು ಕೇಳಿ ಬಂದಿವೆ.

‘ಟಾಕ್ಸಿಕ್’ ಸಿನಿಮಾನ ಮಲಯಾಳಂ ಗೀತು ಮೋಹನ್​ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕಿಯಾರಾ ಅಡ್ವಾಣಿ,ರುಕ್ಮಿಣಿ ವಸಂತ್, ಹುಮಾ ಖುರೇಶಿ, ನಯನತಾರಾ, ತಾರಾ ಸುತಾರಿಯಾ ಮೊದಲಾದವರು ನಟಿಸಿದ್ದಾರೆ.

Source link

SBI Youth for India Fellowship: SBI ಯೂತ್ ಫಾರ್ ಇಂಡಿಯಾ ಫೆಲೋಶಿಪ್‌ಗೆ ಅರ್ಜಿ ಆಹ್ವಾನ; ತರಬೇತಿಯ ಜೊತೆಗೆ ಆರ್ಥಿಕ ನೆರವು – Kannada News | SBI Youth for India Fellowship: Empowering Rural Development for Young Indians

ಎಸ್‌ಬಿಐ ಫೌಂಡೇಶನ್ ಯೂತ್ ಫಾರ್ ಇಂಡಿಯಾ ಫೆಲೋಶಿಪ್‌

ಎಸ್‌ಬಿಐ ಫೌಂಡೇಶನ್ ಯೂತ್ ಫಾರ್ ಇಂಡಿಯಾ ಫೆಲೋಶಿಪ್‌ನ 13ನೇ ಬ್ಯಾಚ್‌ಗಾಗಿ ನೋಂದಣಿಗಳನ್ನು ಆರಂಭಿಸಿದೆ. ಈ ಫೆಲೋಶಿಪ್‌ ಮೂಲಕ ವಿದ್ಯಾವಂತ ಮತ್ತು ಉತ್ಸಾಹಿ ಯುವಕರಿಗೆ ದೇಶದ ಹಳ್ಳಿಗಳಲ್ಲಿ ಅಭಿವೃದ್ಧಿ ಯೋಜನೆಗಳೊಂದಿಗೆ ನೇರವಾಗಿ ಕೆಲಸ ಮಾಡುವ ಅವಕಾಶ ಸಿಗುತ್ತದೆ. ಆಯ್ಕೆಯಾದ ಫೆಲೋಗಳು ವಿವಿಧ ರಾಜ್ಯಗಳಲ್ಲಿನ ಅನುಭವೀ ಸರ್ಕಾರೇತರ ಸಂಸ್ಥೆಗಳ (NGO) ಜೊತೆಗೆ ಕೈಜೋಡಿಸಿ ಶಿಕ್ಷಣ, ಆರೋಗ್ಯ, ಜೀವನೋಪಾಯ, ಪರಿಸರ ಹಾಗೂ ಮಹಿಳಾ ಸಬಲೀಕರಣ ಮುಂತಾದ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಕಾರ್ಯಕ್ರಮವು ಕೇವಲ ಸಾಮಾಜಿಕ ಸೇವೆಯ ಅವಕಾಶವಷ್ಟೇ ಅಲ್ಲ, ನಾಯಕತ್ವ ಕೌಶಲ್ಯ, ತಳಮಟ್ಟದ ಅರಿವು ಮತ್ತು ಸಮಸ್ಯೆ ಪರಿಹಾರ ಸಾಮರ್ಥ್ಯವನ್ನು ವೃದ್ಧಿಸುವ ವಿಶಿಷ್ಟ ವೇದಿಕೆಯಾಗಿದೆ.

ಫೆಲೋಶಿಪ್ ಅವಧಿ ಮತ್ತು ಉದ್ದೇಶ:

ಈ ಫೆಲೋಶಿಪ್ 13 ತಿಂಗಳ ಪೂರ್ಣಾವಧಿ ಕಾರ್ಯಕ್ರಮವಾಗಿದೆ. ಆಯ್ಕೆಯಾದ ಯುವಕರನ್ನು ಗ್ರಾಮೀಣ ಪ್ರದೇಶಗಳಿಗೆ ನಿಯೋಜಿಸಲಾಗುತ್ತದೆ, ಅಲ್ಲಿ ಅವರು ಸಮಸ್ಯೆಗಳನ್ನು ಅರಿತು, ಸಮುದಾಯದೊಂದಿಗೆ ಕೆಲಸ ಮಾಡಿ ಶಾಶ್ವತ ಪರಿಹಾರಗಳನ್ನು ರೂಪಿಸುವಲ್ಲಿ ಪಾಲ್ಗೊಳ್ಳುತ್ತಾರೆ. ಯುವಜನರಿಗೆ ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ನೇರ ಅನುಭವ ಕಲ್ಪಿಸುವುದೇ ಇದರ ಮುಖ್ಯ ಗುರಿಯಾಗಿದೆ.

ಯಾರು ಅರ್ಜಿ ಸಲ್ಲಿಸಬಹುದು?

ಅರ್ಜಿ ಸಲ್ಲಿಸಲು ಕೆಳಗಿನ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಲಾಗಿದೆ:

  • ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು. OCI, ನೇಪಾಳ ಮತ್ತು ಭೂತಾನ್ ನಾಗರಿಕರೂ ಅರ್ಹರು.
  • ವಯಸ್ಸು 21 ರಿಂದ 32 ವರ್ಷಗಳ ನಡುವೆ ಇರಬೇಕು.
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಪಡೆದಿರಬೇಕು.
  • ಪದವಿಯನ್ನು ಅಕ್ಟೋಬರ್ 1, 2026ರೊಳಗೆ ಪೂರ್ಣಗೊಳಿಸಿರಬೇಕು.

ಕೆಲಸದ ಕ್ಷೇತ್ರಗಳು:

ಫೆಲೋಗಳಿಗೆ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಗ್ರಾಮೀಣ ಉದ್ಯಮಶೀಲತೆ, ಜೀವನೋಪಾಯ ವೃದ್ಧಿ, ಮಹಿಳಾ ಸಬಲೀಕರಣ ಸೇರಿದಂತೆ ಸುಮಾರು 12 ಪ್ರಮುಖ ಅಭಿವೃದ್ಧಿ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅವಕಾಶ ದೊರೆಯುತ್ತದೆ. ಇದರಿಂದ ಸಮಾಜ ಮತ್ತು ಅಭಿವೃದ್ಧಿ ಕ್ಷೇತ್ರದ ಕುರಿತು ನೈಜ ಅನುಭವ ಲಭಿಸುತ್ತದೆ.

ಆರ್ಥಿಕ ನೆರವು ಮತ್ತು ಸೌಲಭ್ಯಗಳು:

ಆಯ್ಕೆಯಾದ ಅಭ್ಯರ್ಥಿಗಳಿಗೆ ವಿವಿಧ ಆರ್ಥಿಕ ಮತ್ತು ಭದ್ರತಾ ಸೌಲಭ್ಯಗಳನ್ನು ನೀಡಲಾಗುತ್ತದೆ:

  • ತಿಂಗಳಿಗೆ 15,000 ರೂ. ಸ್ಟೈಪೆಂಡ್
  • ಸ್ಥಳೀಯ ಪ್ರಯಾಣಕ್ಕೆ ತಿಂಗಳಿಗೆ 1,000 ರೂ.
  • ಕಾರ್ಯಕ್ರಮ ಪೂರ್ಣಗೊಂಡ ನಂತರ 70,000 ರೂ. ಒಂದು ಬಾರಿಯ ಭತ್ಯೆ
  • ಆರೋಗ್ಯ ಮತ್ತು ಅಪಘಾತ ವಿಮೆ
  • ಕಾರ್ಯಕ್ರಮ ಪೂರ್ಣಗೊಳಿಸಿದ ಬಳಿಕ ಅಧಿಕೃತ ಪ್ರಮಾಣಪತ್ರ

ಇದನ್ನೂ ಓದಿ: ಕರ್ನಾಟಕದ ಹಾಲು ಒಕ್ಕೂಟದಲ್ಲಿ 194 ಹುದ್ದೆಗಳಿಗೆ ನೇಮಕಾತಿ; 10ರಿಂದ ಪದವೀಧರರವರೆಗೆ ಅರ್ಜಿ ಸಲ್ಲಿಸಲು ಅವಕಾಶ

ಆಯ್ಕೆ ಪ್ರಕ್ರಿಯೆ:

ಆಯ್ಕೆ ಪ್ರಕ್ರಿಯೆ ಮೂರು ಹಂತಗಳಲ್ಲಿ ನಡೆಯುತ್ತದೆ:

  • ಆನ್‌ಲೈನ್ ನೋಂದಣಿ ಮತ್ತು ಪ್ರಾಥಮಿಕ ಮೌಲ್ಯಮಾಪನ
  • ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಸಂದರ್ಶನ
  • ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆ

ಎಸ್‌ಬಿಐ ಯೂತ್ ಫಾರ್ ಇಂಡಿಯಾ ಫೆಲೋಶಿಪ್‌ ಕೇವಲ ಉದ್ಯೋಗಾವಕಾಶವಲ್ಲ; ಇದು ದೇಶದ ಗ್ರಾಮೀಣ ಅಭಿವೃದ್ಧಿಯಲ್ಲಿ ನೇರವಾಗಿ ಪಾಲ್ಗೊಳ್ಳುವ, ಜೀವನಪಾಠ ಕಲಿಸುವ ಮತ್ತು ಸಮಾಜದೊಂದಿಗೆ ಬಲವಾದ ಬಾಂಧವ್ಯ ನಿರ್ಮಿಸುವ ಮಹತ್ವದ ಅನುಭವವಾಗಿದೆ. ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಲು ಬಯಸುವ ಯುವಕರಿಗೆ ಇದು ಒಂದು ಅಪರೂಪದ ಅವಕಾಶವಾಗಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version