ಭಾರತದಲ್ಲಿ ಬರಲಿವೆ 50ಕ್ಕೂ ಹೆಚ್ಚು ಡೀಪ್​ಟೆಕ್ ಕಂಪನಿಗಳು: ಅಶ್ವಿನಿ ವೈಷ್ಣವ್ – Kannada News | Expecting arrival of over 50 deep tech Indian companies, says Ashwini Vaishnaw at India AI Impact Summit

ನವದೆಹಲಿ, ಫೆಬ್ರುವರಿ 17: ‘ಕ್ರಿಯೇಟ್ ಇನ್ ಇಂಡಿಯಾ’ ಉಪಕ್ರಮದ ಅಡಿಯಲ್ಲಿ ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ 50ಕ್ಕೂ ಹೆಚ್ಚು ಡೀಪ್-ಟೆಕ್ ಕಂಪನಿಗಳು ತಲೆ ಎತ್ತುವ ನಿರೀಕ್ಷೆ ಇದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಡಾ. ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ದೆಹಲಿಯಲ್ಲಿ ನಿನ್ನೆಯಿಂದ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯ ಭಾಗವಾಗಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ಎಐ ಆವಿಷ್ಕಾರಗಳಿಗೆ ಪೂರಕವಾಗಿ ಭಾರತದ ಸೆಮಿಕಂಡಕ್ಟರ್ ಮಿಷನ್ನ ಹಾದಿ ಸಾಗುತ್ತದೆ ಎಂದಿದ್ದಾರೆ. ಹಾಗೆಯೇ, ಮಿಷನ್​ನ ಮುಂದಿನ ಹಂತದಲ್ಲಿ ಚಿಪ್ ಡಿಸೈನ್ ಮೇಲೆ ಪ್ರಧಾನ ಗಮನ ಇರುತ್ತದೆ ಎಂದು ವಿವರಿಸಿದ್ದಾರೆ.

ಇದೇ ವೇಳೆ, ಭಾರತದಲ್ಲಿ 38,000 ಜಿಪಿಯುಗಳಿದ್ದು, ಈಗ ಮತ್ತಷ್ಟು 20,000 ಜಿಪಿಯುಗಳು ಸೇರ್ಪಡೆಯಾಗಲಿವೆ. ಇದರಿಂದ ದೇಶದ ಎಐ ಕಂಪ್ಯೂಟ್ ಇನ್​ಫ್ರಾಸ್ಟ್ರಕ್ಚರ್ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಇದನ್ನೂ ಓದಿ: AI Impact Summit: ಜನಕಲ್ಯಾಣಕ್ಕೆ ಎಐ ಬಳಕೆ, ಇದು ಭಾರತಕ್ಕಿರುವ ಬದ್ಧತೆ: ಅಶ್ವಿನಿ ವೈಷ್ಣವ್

ಕೌಶಲ್ಯ ಮರುಪೂರಣಕ್ಕೆ ಕ್ರಮ

‘ಭಾರತದ ಐಟಿ ಸೆಕ್ಟರ್ ನಮ್ಮ ಪಾಲಿಗೆ ಮಹತ್ವದ ಆಸ್ತಿ ಎನಿಸಿದೆ. ಯಾವುದೇ ತಂತ್ರಜ್ಞಾನ ಪರಿವರ್ತನೆಯ ಸಂದರ್ಭದಲ್ಲಿ ಉದ್ಯಮ, ಶೈಕ್ಷಣಿಕ ಮತ್ತು ಸರ್ಕಾರದ ನಡುವೆ ಸಹಭಾಗಿತ್ವ ಸಾಧಿಸುವುದು ಅಗತ್ಯ. ಈಗಿರುವ ಕೆಲಸಗಾರರಿಗೆ ಕೌಶಲ್ಯ ಮರುಪೂರಣ, ಕೌಶಲ್ಯ ಅಭಿವೃದ್ಧಿ, ಹೊಸ ಪ್ರತಿಭೆಗಳ ಬೆಳವಣಿಗೆ, ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಗೆ ಭವಿಷ್ಯದ ತಲೆಮಾರುಗಳನ್ನು ಸಜ್ಜುಗೊಳಿಸುವುದು, ಈ ಮೂರು ಕ್ಷೇತ್ರಗಳಲ್ಲಿ ಉದ್ಯಮ ಮತ್ತು ಶಿಕ್ಷಣ ವಲಯದ ಜೊತೆ ಸಹಭಾಗಿತ್ವ ಮಾಡಿಕೊಳ್ಳುತ್ತಿದ್ದೇವೆ’ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಐದನೇ ಕೈಗಾರಿಕಾ ಕ್ರಾಂತಿ ಇದು…

ಎಐ ಅಳವಡಿಕೆಯ ಕಾರ್ಯವನ್ನು ಅಶ್ವಿನಿ ವೈಷ್ಣವ್ ಅವರು ಐದನೇ ಕೈಗಾರಿಕಾ ಕ್ರಾಂತಿ ಎಂದು ಬಣ್ಣಿಸಿದ್ದಾರೆ. ‘ಎಲ್ಲಾ ಸೆಕ್ಟರ್​ನಲ್ಲೂ ಎಐ ಅಳವಡಿಕೆ ಆಗುತ್ತಿದೆ. ಇದು ಐದನೇ ಕೈಗಾರಿಕಾ ಕ್ರಾಂತಿಯ ದ್ಯೋತಕವಾಗಿದೆ. ಆರ್ಥಿಕತೆ ಮತ್ತು ಸಮಾಜದ ಪ್ರತಿಯೊಂದು ಅಂಶದ ಮೇಲೂ ಇದರ ಪ್ರಭಾವ ಇರುತ್ತದೆ. ಎಐನಿಂದ ಪರಿವರ್ತನಾತ್ಮಕ ಪರಿಹಾರಗಳನ್ನು ಕಾಣುತ್ತಿದ್ದೇವೆ. ಹೆಲ್ತ್​ಕೇರ್ ಸೇವೆಗಳು ಎಐನಿಂದ ಅಗ್ಗದ ಬೆಲೆಗೆ ಸಿಗುವಂತಾಗುತ್ತದೆ. ಶಿಕ್ಷಣದಲ್ಲಿ ಎಐ ಅಳವಡಿಕೆಯಿಂದ ಪ್ರತೀ ವಿದ್ಯಾರ್ಥಿಯ ಅಗತ್ಯಕ್ಕೆ ತಕ್ಕಂತೆ ಕಲಿಕೆ ಕೊಡಬಹುದು’ ಎಂದು ಎಐನ ಬಹು ಉಪಯುಕ್ತತೆಯ ಸಾಧ್ಯತೆಗಳನ್ನು ಸಚಿವರು ತೆರೆದಿಟ್ಟಿದ್ದಾರೆ.

ಇದನ್ನೂ ಓದಿ: ಎಐ ಶೃಂಗಸಭೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ವಸ್ತುವೇ ಕಳ್ಳತನ; ಹುಮ್ಮಸ್ಸಿನಲ್ಲಿದ್ದ ಬೆಂಗಳೂರು ಸ್ಟಾರ್ಟಪ್ ಸ್ಥಾಪಕನಿಗೆ ಶಾಕ್

ವಿದ್ಯುತ್ ತಯಾರಿಕೆಯ ಸಾಮರ್ಥ್ಯ

ಎಐ ಅಭಿವೃದ್ಧಿಗೆ ಬೇಕಾದ ಇನ್​ಫ್ರಾಸ್ಟ್ರಕ್ಚರ್ ಅಗತ್ಯಗಳಲ್ಲಿ ವಿದ್ಯುತ್ ಪೂರೈಕೆಯೂ ಒಂದು. ಭಾರತದಲ್ಲಿ ವಿದ್ಯುತ್ ತಯಾರಿಕೆಗೆ ರಿನಿವಬಲ್ ಎನರ್ಜಿ ಬಳಕೆ ದಿನೇ ದಿನೇ ಹೆಚ್ಚುತ್ತಿದೆ. ಈ ವಿಚಾರವನ್ನು ಸಚಿವ ಎ ವೈಷ್ಣವ್ ಪ್ರಸ್ತಅಪಿಸಿದ್ದಾರೆ. ಭಾರತದಲ್ಲಿ ಶೇ. 51ರಷ್ಟು ವಿದ್ಯುತ್ ಉತ್ಪಾದನೆಯು ನವೀಕರಣ ಶಕ್ತಿ ಮೂಲಗಳಿಂದ ಬರುತ್ತಿರುವುದನ್ನು ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣವಚನ ಸ್ವೀಕಾರ – Kannada News | Tarique Rahman takes oath as Bangladesh New Prime Minister

ಢಾಕಾ, ಫೆಬ್ರವರಿ 17: ಬಿಎನ್​ಪಿ ನಾಯಕ ತಾರಿಕ್ ರೆಹಮಾನ್ ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ತಾರಿಕ್ ರೆಹಮಾನ್ ಎಲ್ಲಾ ಚುನಾಯಿತ ಬಿಎನ್‌ಪಿ ಸಂಸದರೊಂದಿಗೆ ಇಂದು ಢಾಕಾದ ರಾಷ್ಟ್ರೀಯ ಸಂಸತ್ ಕಟ್ಟಡದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಫೆಬ್ರವರಿ 12ರಂದು ನಡೆದ 13ನೇ ಸಂಸತ್ ಚುನಾವಣೆಯ ನಂತರ ಈ ಮಹತ್ವದ ಸಮಾರಂಭ ನಡೆಯಿತು. ಬಾಂಗ್ಲಾದೇಶದಲ್ಲಿ ಈ ಬಾರಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ಭರ್ಜರಿ ಜಯ ಸಾಧಿಸಿತ್ತು.

ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ತಾರಿಕ್ ರೆಹಮಾನ್ ಮತ್ತು ಅವರ ನೂತನ ಸಚಿವ ಸಂಪುಟಕ್ಕೆ ಪ್ರಮಾಣವಚನ ಬೋಧಿಸಿದರು. ಈ ಸಮಾರಂಭವು ರಾಷ್ಟ್ರೀಯ ಸಂಸತ್ತಿನ ಸಂಕೀರ್ಣದ ದಕ್ಷಿಣ ಪ್ಲಾಜಾದಲ್ಲಿ ನಡೆಯಿತು. ಸುಮಾರು 1,200 ಜನ ಅತಿಥಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) 25 ಚುನಾಯಿತ ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಹೊಸದಾಗಿ ಆಯ್ಕೆಯಾದ 24 ಇತರ ಸಂಸದರು ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಫೆ.17ರಂದು ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣವಚನ, ಪ್ರಧಾನಿ ಮೋದಿಗೆ ಆಹ್ವಾನ

ರೆಹಮಾನ್ ಅವರ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (BNP) 297 ಸ್ಥಾನಗಳಲ್ಲಿ 209 ಸ್ಥಾನಗಳನ್ನು ಗೆದ್ದಿದೆ. 13ನೇ ಸಂಸತ್ ಚುನಾವಣೆಯಲ್ಲಿ ರೆಹಮಾನ್ ಅವರ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (BNP) 297 ಸ್ಥಾನಗಳಲ್ಲಿ 209 ಸ್ಥಾನಗಳನ್ನು ಗೆದ್ದಿದೆ. ಬಲಪಂಥೀಯ ಪಕ್ಷವಾದ ಜಮಾತ್-ಇ-ಇಸ್ಲಾಮಿ 68 ಸ್ಥಾನಗಳನ್ನು ಗಳಿಸಿದೆ. ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಈ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ನಿಷೇಧ ಹೇರಲಾಗಿತ್ತು.

ಇದನ್ನೂ ಓದಿ: ಬಾಂಗ್ಲಾದೇಶದ ಚುನಾವಣಾ ಗೆಲುವಿನ ಬಳಿಕ ಭಾರತದ ಬಗ್ಗೆ ತಾರಿಕ್ ರೆಹಮಾನ್ ಮೊದಲ ಹೇಳಿಕೆಯೇನು?

ಭಾರತದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ತಾರಿಕ್ ರೆಹಮಾನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಿದರು. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಉತ್ಪಲ್ ಕುಮಾರ್ ಸಿಂಗ್ ಕೂಡ ಬಿರ್ಲಾ ಅವರೊಂದಿಗೆ ತೆರಳಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

3 ಹೆಸರಲ್ಲಿ ಪ್ರೀತಿ, ಮದ್ವೆ ನಾಟಕ: ಯುವಕರಿಗೆ ಗಾಳ ಹಾಕುತ್ತಿದ್ದವಳು ಮಾಡಿದ್ದೇನು ಗೊತ್ತಾ? – Kannada News | A Woman Cheating Youths On Love And Marriage Name at Dharwad

ಧಾರವಾಡ, (ಫೆಬ್ರವರಿ 17): ಯುವತಿಯೋರ್ವಳು ಮೂರ್ಮೂರು ಹೆಸರಿಟ್ಟುಕೊಂಡು ಯುವಕರನ್ನು ವಂಚಿಸಿದ್ದಾಳೆ ಎನ್ನುವ ಆರೋಪ (Accusation) ಕೇಳಿ ಬಂದಿದೆ. ಶ್ರೀಮಂತ ಹುಡುಗರಿಗೆ ಗಾಳ ಹಾಕ್ತಿದ್ದ ಐಶ್ವರ್ಯ ಎನ್ನುವ ಯುವತಿ, ಪ್ರೀತಿ (Love) ನಾಟಕವಾಡಿ ಯುವಕರಿಂದ ಹಣ ಪಡೆದು ವಂಚಿಸಿದ್ದಾಳಂತೆ. ಅದರಂತೆ ಐಶ್ವರ್ಯ, ಯುವಕನನ್ನು ಮದ್ವೆಯಾಗುವುದಾಗಿ ಲಕ್ಷಾಂತರ ರೂಪಾಯಿ ಮೋಸ ಮಾಡಿದ್ದಾಳೆ. ಐಶ್ವರ್ಯ, ರೇಣುಕಾ, ಆರೋಹಿ ಎಂಬ ಮೂರು ವಿಭಿನ್ನ ಹೆಸರಿನಲ್ಲಿ ಯುವಕರನ್ನು ಪರಿಚಯಿಸಿಕೊಂಡಿದ್ದ ಯುವತಿ, ಆರ್ಥಿಕವಾಗಿ ಸಹಾಯ ಮಾಡುವ ಯುವಕರನ್ನೇ ಟಾರ್ಗೆಟ್ ಮಾಡುತ್ತಿದ್ದಳಂತೆ. ಸಂಜು ದೊಡಮನಿ ಹಾಗೂ ಗುರು ವಕ್ಕುಂದ ಸೇರಿದಂತೆ ಮೂವರು ಯುವಕರಿಗೆ ಮದುವೆಯ ಭರವಸೆ ನೀಡಿ ಹಣ ಪಡೆದುಕೊಂಡಿದ್ದಾಳೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಇನ್ನು ರೊಚ್ಚಿಗೆದ್ದ ಸ್ಥಳೀಯರು ರಸ್ತೆಯಲ್ಲೇ ಐಶ್ವರ್ಯಗೆ ಧರ್ಮದೇಟು ಕೊಟ್ಟಿದ್ದಾರೆ. ಈ ಘಟನೆ ಧಾರವಾಡ (Dharwad) ಉಪನಗರ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ಶ್ರೀಮಂತ ಹುಡುಗರೇ ಈಕೆಯ ಟಾರ್ಗೆಟ್! ಪ್ರೀತಿಯ ನಾಟಕವಾಡಿ ಈಕೆ ಮಾಡಿದ್ದು ಏನು ಗೊತ್ತಾ?

Source link

ರಿಷಬ್ ಶೆಟ್ಟಿ ಜೊತೆ ನಟಿಸಲಿರುವ ‘ಬಾಹುಬಲಿ’ಯ ‘ಸಹೋದರ’ – Kannada News | Rana Daggubati joins Rishab Shetty’s Jai Hanuman movie

ರಿಷಬ್ ಶೆಟ್ಟಿ (Rishab Shetty) ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಲಕ ಅಭೂತಪೂರ್ವ ಗೆಲುವು ಕಂಡಿದ್ದಾರೆ. ‘ಕಾಂತಾರ 1’ ಸಿನಿಮಾದ ಬಳಿಕ ಇದೀಗ ರಿಷಬ್ ತಮ್ಮ ಹೊಸ ಪ್ರಾಜೆಕ್ಟ್​ನಲ್ಲಿ ತೊಡಗಿಸಿಕೊಳ್ಳುವ ಸಮಯ ಬಂದಾಗಿದೆ. ‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಮಾಡುತ್ತಿರುವಾಗಲೇ ಅವರಿಗೆ ತೆಲುಗಿನ ‘ಜೈ ಹನುಮಾನ್’ ಸಿನಿಮಾದ ಆಫರ್ ಬಂದಿತ್ತು, ಸಿನಿಮಾದ ಪೋಸ್ಟರ್ ಸಹ ಬಿಡುಗಡೆ ಆಗಿದೆ. ಕೆಲವೇ ದಿನಗಳಲ್ಲಿ ಸಿನಿಮಾದ ಚಿತ್ರೀಕರಣವೂ ಪ್ರಾರಂಭ ಆಗಲಿದೆ. ಇದೀಗ ಸ್ಟಾರ್ ನಟರೊಬ್ಬರು ರಿಷಬ್ ಜೊತೆಗೆ ನಟಿಸಲಿರುವ ಸುದ್ದಿ ಹೊರಬಿದ್ದಿದೆ.

‘ಬಾಹುಬಲಿ’ ಸಿನಿಮಾನಲ್ಲಿ ಬಹಳ ಪವರ್​​ಫುಲ್ ಆಗಿರುವ ಪ್ರತಿ ನಾಯಕ ಬಲ್ಲಾಳದೇವನ ಪಾತ್ರದಲ್ಲಿ ನಟಿಸಿದ್ದ ರಾಣಾ ದಗ್ಗುಬಾಟಿ ಅವರು ರಿಷಬ್ ಶೆಟ್ಟಿ ಜೊತೆಗೆ ‘ಜೈ ಹನುಮಾನ್’ ಸಿನಿಮಾನಲ್ಲಿ ನಟಿಸಲಿದ್ದಾರೆ. ಆದರೆ ರಾಣಾ ದಗ್ಗುಬಾಟಿ ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ಇನ್ನೂ ಖಾತ್ರಿ ಆಗಿಲ್ಲ. ‘ಜೈ ಹನುಮಾನ್’ ಸಿನಿಮಾನಲ್ಲಿ ರಾಣಾ ರಾಮನ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ, ಇನ್ನು ಕೆಲವು ವರದಿಗಳಲ್ಲಿ ರಾಣಾ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ರಾಣಾ ದಗ್ಗುಬಾಟಿ ಯಾವ ರೀತಿಯ ಪಾತ್ರಕ್ಕಾದರೂ ಫಿಟ್ ಆಗುವ ನಟ. ಹೀರೋ ನಟಿಸಬೇಕು ಎಂಬ ಗಡಿ ಹಾಕಿಕೊಳ್ಳದ ಅವರು ವಿಲನ್ ಆಗಿ, ಪ್ರಮುಖ ಪೋಷಕ ಪಾತ್ರದಲ್ಲಿ, ಅತಿಥಿ ಪಾತ್ರಗಳಲ್ಲಿ ಸಹ ನಟಿಸಿದ್ದಾರೆ. ಇದೀಗ ರಿಷಬ್ ಶೆಟ್ಟಿ ಜೊತೆಗೆ ನಟಿಸಲು ಎಸ್ ಎಂದಿದ್ದಾರೆ. ಅಂದಹಾಗೆ ಈ ಹಿಂದೆ ರಾಣಾ ದಗ್ಗುಬಾಟಿ ಅವರು ತಮ್ಮ ಟಾಕ್ ಶೋ ಒಂದಕ್ಕಾಗಿ ರಿಷಬ್ ಅವರ ಊರಾದ ಕೆರಾಡಿಗೆ ಬಂದು ರಿಷಬ್ ಅವರ ಸಂದರ್ಶನ ಸಹ ಮಾಡಿದ್ದರು. ಇಬ್ಬರ ನಡುವೆ ಒಳ್ಳೆಯ ಗೆಳೆತನ ಇದೆ. ಹಾಗಾಗಿ ಇಬ್ಬರೂ ಒಟ್ಟಿಗೆ ನಟಿಸುವುದು ಇಬ್ಬರಿಗೂ ಹೆಚ್ಚು ಕಂಫರ್ಟ್ ಆಗಿರಲಿದೆ.

ಇದನ್ನೂ ಓದಿ:ಟಿವಿ9 ನವನಕ್ಷತ್ರ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ ಭಾವುಕ ಮಾತು

‘ಜೈ ಹನುಮಾನ್’ ಸಿನಿಮಾ ಹೆಸರೇ ಸೂಚಿಸುತ್ತಿರುವಂತೆ ಹನುಮಂತ ದೇವರ ಕುರಿತಾದ ಕತೆಯನ್ನು ಹೊಂದಿರಲಿದೆ. ಈ ಹಿಂದೆ ‘ಹನುಮ್ಯಾನ್’ ಹೆಸರಿನ ಫ್ಯಾಂಟಸಿ ಸೂಪರ್ ಹೀರೋ ಮಾದರಿಯ ಸಿನಿಮಾ ನಿರ್ದೇಶಿಸಿದ್ದ ಪ್ರಶಾಂತ್ ವರ್ಮಾ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಟಿ-ಸೀರೀಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಫೆಬ್ರವರಿ 22 ರಂದು ಸಿನಿಮಾದ ಮುಹೂರ್ತ ಹಂಪಿಯಲ್ಲಿ ಬಲು ಅದ್ಧೂರಿಯಾಗಿ ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹಿಂದೂ ಯುವತಿಯರೇ ಟಾರ್ಗೆಟ್: ಶಾಕಿಂಗ್ ಆಗಿದೆ ‘ದಿ ಕೇರಳ ಸ್ಟೋರಿ 2’ ಟ್ರೇಲರ್ – Kannada News | The Kerala Story 2 trailer shows the shocking scenes of love Jihad

2023ರಲ್ಲಿ ಬಿಡುಗಡೆ ಆಗಿದ್ದ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಸಿನಿಮಾದಲ್ಲಿ ಹಿಂದೂ ಹುಡುಗಿಯರನ್ನು ಬಲವಂತದಿಂದ ಭಯೋತ್ಪಾದಕ ಕೃತ್ಯಕ್ಕೆ ಬಳಸಿಕೊಳ್ಳುವ ಕಥೆಯನ್ನು ತೋರಿಸಲಾಗಿತ್ತು. ಈಗ ‘ದಿ ಕೇರಳ ಸ್ಟೋರಿ 2’ (The Kerala Story 2) ಸಿನಿಮಾ ಸಿದ್ಧವಾಗಿದೆ. ಈ ಸಿನಿಮಾದಲ್ಲಿ ಕೂಡ ಲವ್ ಜಿಹಾದ್ ಬಗ್ಗೆ ತೋರಿಸಲಾಗುತ್ತದೆ. ‘ದಿ ಕೇರಳ ಸ್ಟೋರಿ 2’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು, ಅದರಲ್ಲಿ ಕಥೆಯ ಬಗ್ಗೆ ಝಲಕ್ ನೀಡಲಾಗಿದೆ. ಟ್ರೇಲರ್ (The Kerala Story 2 Trailer) ನೋಡಿದ ಸಿನಿಪ್ರಿಯರಿಗೆ ಶಾಕ್ ಆಗಿದೆ.

ಕಾಮಾಕ್ಯ ನಾರಾಯಣ್ ಸಿಂಗ್ ಅವರು ‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ವಿಪುಲ್ ಅಮೃತ್​ಲಾಲ್ ಶಾ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅದಿತಿ ಭಾಟಿಯಾ, ಐಶ್ವರ್ಯಾ ಊಜಾ, ಉಲ್ಕಾ ಗುಪ್ತಾ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಲವ್ ಜಿಹಾದ್ ಜಾಲಕ್ಕೆ ಬಲಿಯಾಗುವ ಹಿಂದೂ ಯುವತಿಯರಾಗಿ ಈ ಮೂವರು ಕಾಣಿಸಿಕೊಳ್ಳುತ್ತಿದ್ದಾರೆ.

ಮುಂದಿನ 25 ವರ್ಷಗಳಲ್ಲಿ ಭಾರತವು ಇಸ್ಲಾಮಿಕ್ ಸ್ಟೇಟ್ ಆಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ಸಂದೇಶದೊಂದಿಗೆ ‘ದಿ ಕೇರಳ ಸ್ಟೋರಿ 2’ ಸಿನಿಮಾದ ಟ್ರೇಲರ್ ಆರಂಭ ಆಗುತ್ತದೆ. ಕೇರಳ, ಮಧ್ಯಪ್ರದೇಶ, ರಾಜಸ್ತಾನದಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾ ತೋರಿಸುತ್ತದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಟ್ರೇಲರ್ ಮಿಲಿಯನ್​ಗಟ್ಟಲೆ ವೀಕ್ಷಣೆ ಪಡೆದಿದೆ.

‘ದಿ ಕೇರಳ ಸ್ಟೋರಿ 2’ ಟ್ರೇಲರ್:

ಹಿಂದೂ ಯುವತಿಯರನ್ನು ಪ್ರೀತಿ, ಪ್ರೇಮದ ಹೆಸರಿನಲ್ಲಿ ಯಾವ ರೀತಿ ಯಾಮಾರಿಸಲಾಗುತ್ತದೆ? ಬಳಿಕ ಅವರನ್ನು ಹೇಗೆ ಮತಾಂತರ ಮಾಡಲಾಗುತ್ತದೆ? ಆ ನಂತರ ಅವರ ಪರಿಸ್ಥಿತಿ ಎಷ್ಟು ಹೀನಾಯವಾಗುತ್ತದೆ ಎಂಬುದರ ಝಲಕ್ ‘ದಿ ಕೇರಳ ಸ್ಟೋರಿ 2’ ಸಿನಿಮಾದ ಟ್ರೇಲರ್​​ನಲ್ಲಿ ಕಾಣಿಸಿದೆ. ಈ ಎಲ್ಲ ದೃಶ್ಯಗಳನ್ನು ನೋಡಿದ ಪ್ರೇಕ್ಷಕರು ಹೌಹಾರಿದ್ದಾರೆ.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ 2’ ಚಿತ್ರದಲ್ಲಿ ಲೈಂಗಿಕ ಹಗರಣದ ಕಥೆ ಇರುತ್ತಾ? ಸ್ಪಷ್ಟನೆ ನೀಡಿದ ನಿರ್ದೇಶಕ

‘ದಿ ಕೇರಳ ಸ್ಟೋರಿ’ ಸಿನಿಮಾ 2023ರಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಈಗ ಅದರ ಸೀಕ್ವೆಲ್ ಆಗಿರುವ ‘ದಿ ಕೇರಳ ಸ್ಟೋರಿ 2’ ಸಿನಿಮಾ ಕೂಡ ವಿವಾದ ಎಬ್ಬಿಸುವ ಎಲ್ಲ ಲಕ್ಷಣಗಳು ಕಾಣಿಸಿವೆ. ‘ಹಲವು ಸತ್ಯ ಘಟನೆಗಳಿಂದ ಸ್ಫೂರ್ತಿ ಪಡೆದು ನಿರ್ಮಾಣವಾದ ಸಿನಿಮಾ’ ಎಂಬುದನ್ನು ಟ್ರೇಲರ್​ನ ಆರಂಭದಲ್ಲೇ ತೋರಿಸಲಾಗಿದೆ. ಫೆಬ್ರವರಿ 27ರಂದು ಈ ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅವಳಿಗೆ ಮೊಬೈಲ್ ಚಟ ಇತ್ತು: ಹಲವು ಪುರುಷರ ಜತೆ ಸಂಪರ್ಕ ಇದೆ ಎಂದು ಪತ್ನಿಯನ್ನು ಬರ್ಬರವಾಗಿ ಕೊಂದ ಪತಿ – Kannada News | Birur Husband Murders Wife Over Suspicion, Children Orphaned

ಅನುಮಾನದಿಂದ ಹೆಂಡತಿಯನ್ನೇ ಕೊಂದ ಪತಿ

ಚಿಕ್ಕಮಗಳೂರು, ಫೆ.17: ಪ್ರೀತಿಸಿ ಮದುವೆಯಾಗಿ 12 ವರ್ಷಗಳ ಸುಖ ಸಂಸಾರ ನಡೆಸಿದ್ದ ದಂಪತಿಗಳ ನಡುವೆ ಅನುಮಾನದ ಕಿಚ್ಚು ಹತ್ತಿ, ದಾಂಪತ್ಯ ಜೀವನವೇ ನಾಶವಾಗಿದೆ. ಈ ಅನುಮಾನದ ಭೂತದಿಂದ ಪತ್ನಿಯ ಕೊಲೆ ಮಾಡಿರುವ ಘಟನೆ ಬೀರೂರು ಪಟ್ಟಣದ ಚೌಡೇಶ್ವರಿಯಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಮಮತಾ (32) ಎಂದು ಗುರುತಿಸಲಾಗಿದೆ. ಇದೀಗ ಕೊಲೆ ಮಾಡಿದ ಪತಿ ರಂಗನಾಥ್ ಪೊಲೀಸರ ವಶದಲ್ಲಿದ್ದಾನೆ. ಅಜ್ಜಂಪುರ ತಾಲೂಕಿನ ಬುರುಡೆಕಟ್ಟೆ ಗ್ರಾಮದ ರಂಗನಾಥ್ ಮತ್ತು ಮಮತಾ ಪರಸ್ಪರ ಪ್ರೀತಿಸಿ 12 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 7 ವರ್ಷಗಳ ಹಿಂದೆ ಇವರು ಬೀರೂರಿಗೆ ಬಂದು ನೆಲೆಸಿದ್ದರು.

ಗಾರೆ ಕೆಲಸ ಮಾಡುತ್ತಿದ್ದ ರಂಗನಾಥ್ ಸುಖ ಸಂಸಾರವನ್ನು ಮಾಡುತ್ತಿದ್ದ, ಗಂಡನಿಗೆ ಸಹಾಯವಾಗಲಿ ಎಂದು ಮಮತಾ ಕೂಡ ಅಡಿಕೆ ಸುಲಿಯುವ ಮತ್ತು ಮದುವೆ ಮಂಟಪಗಳಲ್ಲಿ ಕೆಲಸ ಮಾಡುತ್ತಿದ್ದಳು. ಕೆಲಸದ ನಿಮಿತ್ತ ಹೊರಹೋಗುತ್ತಿದ್ದ ಮಮತಾಗೆ ಮೊಬೈಲ್ ಚಟ ಹೆಚ್ಚಾಗಿತ್ತು. ಇದರಿಂದ ಹಲವಾರು ಪುರುಷರ ಜೊತೆ ಅವರು ಸಂಪರ್ಕದಲ್ಲಿದ್ದಾಳೆ ಎಂಬ ಸಂಶಯ ರಂಗನಾಥ್ ಮನಸ್ಸಿನಲ್ಲಿ ಇತ್ತು. ಫೆಬ್ರವರಿ 4ರ ಸಂಜೆ ಮಗನ ಹುಟ್ಟುಹಬ್ಬದ ಆಚರಣೆಗೆ ಮನೆಯಲ್ಲಿ ಸಿದ್ಧತೆ ನಡೆದಿತ್ತು. ಇದೇ ವೇಳೆ ಮಮತಾ ಮೊಬೈಲ್‌ನಲ್ಲೇ ಬ್ಯುಸಿಯಾಗಿರುವುದನ್ನು ನೋಡಿ ರಂಗನಾಥ್ ಅವರ ಕೋಪ ನೆತ್ತಿಗೇರಿತ್ತು. ಆಕ್ರೋಶಗೊಂಡ ರಂಗನಾಥ್, ಮಕ್ಕಳ ಮುಂದೆಯೇ ಗಲಾಟೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಅಪಘಾತದಿಂದ ಯುವಕ-ಯುವತಿ ರಸ್ತೆ ಮಧ್ಯೆ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ಬಾರದ ಆಂಬುಲೆನ್ಸ್

ಜಗಳ ವಿಕೋಪಕ್ಕೆ ಹೋಗಿ, ಮಮತಾಳನ್ನು ನೆಲಕ್ಕೆ ಕೆಡವಿ ಕತ್ತು ಹಿಸುಕಿ, ವೇಲ್‌ನಿಂದ ಬಿಗಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಹತ್ಯೆಯ ನಂತರ ರಾತ್ರಿಯಿಡೀ ಹೆಂಡತಿಯ ಶವ ಮತ್ತು ಮಕ್ಕಳ ಜೊತೆಯೇ ಕಳೆದ ಹಂತಕ ರಂಗನಾಥ್, ಫೆಬ್ರವರಿ 5ರ ಗುರುವಾರ ಬೆಳಿಗ್ಗೆ ಬೀರೂರು ಪೊಲೀಸ್ ಠಾಣೆಗೆ ಹೋಗಿ, ಸರ್, ನನ್ನ ಹೆಂಡತಿ ರಾತ್ರಿ ಚೆನ್ನಾಗಿದ್ದಳು, ಬೆಳಿಗ್ಗೆ ಎದ್ದೇಳುತ್ತಿಲ್ಲ ಎಂದು ಕಥೆ ಕಟ್ಟಿದ್ದಾನೆ. ಆದರೆ ಮನೆಗೆ ಬಂದು ಪರಿಶೀಲಿಸಿದ ಪೊಲೀಸರಿಗೆ ಕುತ್ತಿಗೆಯ ಮೇಲಿದ್ದ ಗುರುತುಗಳನ್ನು ನೋಡಿ ಇದು ಕೊಲೆ ಎಂದು ಖಚಿತವಾಗಿದೆ. ವಿಚಾರಣೆ ನಡೆಸಿದಾಗ ರಂಗನಾಥ್ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಹೆಂಡತಿ ಬರ್ಬರವಾಗಿ ಹತ್ಯೆಯಾಗಿದ್ದು, ಗಂಡ ಜೈಲು ಪಾಲಾಗಿದ್ದಾನೆ. ತಂದೆ-ತಾಯಿಯ ನಡುವಿನ ಜಗಳ ಮತ್ತು ಅನುಮಾನಕ್ಕೆ ಇಬ್ಬರು ಮುಗ್ಧ ಮಕ್ಕಳು ಅನಾರ್ಥರಾಗಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಐ ಶೃಂಗಸಭೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ವಸ್ತುವೇ ಕಳ್ಳತನ; ಹುಮ್ಮಸ್ಸಿನಲ್ಲಿದ್ದ ಬೆಂಗಳೂರು ಸ್ಟಾರ್ಟಪ್ ಸ್ಥಾಪಕನಿಗೆ ಶಾಕ್ – Kannada News | Bengaluru startup’s patented AI product stolen at Delhi summit, NeoSapien CEO expresses disappointment

ನವದೆಹಲಿ, ಫೆಬ್ರುವರಿ 17: ಇಲ್ಲಿಯ ಭಾರತ್ ಮಂಟಪಂನಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಸಮಿಟ್ (AI Impact Summit) ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ. ಅದರ ಹೊರತಾಗಿಯೂ ಕೆಲವರಿಗೆ ಕಹಿ ಅನುಭವವನ್ನೂ ನೀಡುತ್ತಿದೆ. ಬೆಂಗಳೂರಿನ ನಿಯೋಸೇಪಿಯೆನ್ (NeoSapien) ಎನ್ನುವ ಕಂಪನಿಯ ಪೇಟೆಂಟ್ ಉತ್ಪನ್ನದ ಸ್ಯಾಂಪಲ್​ವೊಂದು ಎಕ್ಸ್​ಪೋ ವೇಳೆ ಕಳ್ಳತನವಾದ ಘಟನೆ ನಡೆದಿದೆ. ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಧನಂಜಯ್ ಯಾದವ್ (Dhananjay Yadav) ಈ ಘಟನೆಯನ್ನು ಎಕ್ಸ್​ನಲ್ಲಿ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.

ಶೃಂಗಸಭೆಯ ಎಕ್ಸ್​ಪೋ ಹಾಲ್​ನಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಇದ್ದಾಗ್ಯೂ ನಿಯೋಸೇಪಿಯನ್​ನ ಎಐ ದಿರಿಸು ಕಳ್ಳತನ ಆಗಿರುವುದು ವಿಪರ್ಯಾಸ. ನಿನ್ನೆ ಸಮಾವೇಶದ ಮೊದಲ ದಿನವೇ (ಫೆ. 16) ಈ ದುರದೃಷ್ಟಕರ ಅನುಭವ ಆಗಿದೆ. ಆ ಘಟನೆ ಹೇಗೆ ನಡೆಯಿತು ಎನ್ನುವುದನ್ನು ಯಾದವ್ ಹಂಚಿಕೊಂಡಿದ್ದು ಹೀಗೆ…

ಇದನ್ನೂ ಓದಿ: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಬಿಲ್ ಗೇಟ್ಸ್; ವಕ್ತಾರರಿಂದ ಸ್ಪಷ್ಟನೆ

‘ಎಐ ಇಂಪ್ಯಾಕ್ಟ್ ಸಮಿಟ್​ನ ಮೊದಲ ದಿನವೇ ನಮಗೆ ನೋವಿನ ಅನುಭವ ಕೊಟ್ಟಿತು. ಭಾರತದಲ್ಲಿ ಈ ಸಮಿಟ್ ಮೊದಲ ಬಾರಿಗೆ ಆಯೋಜನೆಯಾಗಿದೆ. ಎಐ ಇಕೋಸಿಸ್ಟಂ ಹಾಗೂ ಸರ್ಕಾರದ ಕ್ರಮಗಳಿಗೆ ಬೆಂಬಲ ಕೊಡಲು ವೈಯಕ್ತಿಕವಾಗಿ ಈ ಶೋನಲ್ಲಿ ಪಾಲ್ಗೊಳ್ಳಲು ಹೋಗಿದ್ದೆ. ಆದರೆ, ನಂತರ ನಡೆದದ್ದು ನಿಜಕ್ಕೂ ಆಘಾತಕಾರಿ.

‘ಮಧ್ಯಾಹ್ನ 2 ಗಂಟೆಗೆ ಪ್ರಧಾನಿ ಮೋದಿ ಬರಲಿರುವ ಹಿನ್ನೆಲೆಯಲ್ಲಿ ಜಾಗವನ್ನು ತೆರವುಗೊಳಿಸಲು 12 ಗಂಟೆಗೆ ಭದ್ರತಾ ಸಿಬ್ಬಂದಿ ಆಗಮಿಸಿದರು. ಪೇಟೆಂಟ್ ಪಡೆದ ಭಾರತದ ಮೊದಲ ಎಐ ದಿರಿಸನ್ನು (Neo AI wearable) ಅಭಿವೃದ್ಧಿಪಡಿಸುತ್ತಿರುವುದಾಗಿ ವಿವರಿಸಿ, ಅದನ್ನು ಪ್ರದರ್ಶಿಸಲು ಅವಕಾಶ ಕೊಡಬೇಕೆಂದು ಕೇಳಿಕೊಂಡೆ. ಒಬ್ಬ ಅಧಿಕಾರಿಯು ನನಗೆ ಉಳಿಯಲು ಅವಕಾಶ ಕೊಡುವಂತೆ ಇತರರಿಗೆ ತಿಳಿಸಿದರು. ನಂತರ ಭದ್ರತಾ ಸಿಬ್ಬಂದಿ ಹೊರಟಿತು.

‘ಆ ನಂತರ ಮತ್ತೊಂದು ಗುಂಪು ಬಂದು ಕೂಡಲೇ ಹೊರಹೋಗಬೇಕೆಂದು ನಮಗೆ ಆದೇಶಿಸಿತು. ಭದ್ರತಾ ಸಿಬ್ಬಂದಿ ಮಧ್ಯೆಯೇ ತಾಳಮೇಳದ ಕೊರತೆ ಇದ್ದಂತೆ ಕಂಡಿತು. ನಮ್ಮ ವೇರಬಲ್​ಗಳನ್ನು ತೆಗೆದುಕೊಂಡು ಹೋಗಬೇಕಾ ಎಂದು ಕೇಳಿದೆ. ಹಲವರು ಲ್ಯಾಪ್​ಟಾಪ್​ಗಳನ್ನೇ ಬಿಟ್ಟು ಹೋಗುತ್ತಿದ್ದಾರೆ. ಸೆಕ್ಯೂರಿಟಿಯವರು ನೋಡಿಕೊಳ್ಳುತ್ತಾರೆ ಎಂದರು. ಅವರನ್ನು ನಂಬಿ ನಾನು ಅಲ್ಲಿಂದ ಹೊರಟೆ. ಎಐ ದಿರಿಸು ಸುರಕ್ಷಿತವಾಗಿರುತ್ತೆ ಮತ್ತು ಪ್ರಧಾನಿಗಳ ಗಮನ ಸೆಳೆಯುತ್ತೆ ಅನ್ನೋ ಭರವಸೆ ಇಟ್ಟುಕೊಂಡಿದ್ದೆ.

‘ಮಧ್ಯಾಹ್ನ 12ರಿಂದ ಸಂಜೆ 6ರವರೆಗೆ ಗೇಟ್​ಗಳು ಬಂದ್ ಆದವು. ಅಂದುಕೊಂಡಿದ್ದಕ್ಕಿಂತ ಹೆಚ್ಚು ಹೊತ್ತು ಮುಚ್ಚಿತ್ತು. ಒಳಗೆ ಹೋಗಿ ನೋಡಿದಾಗ ವೇರಬಲ್​ಗಳು ಕಳುವಾಗಿದ್ದವು.

ಇದನ್ನೂ ಓದಿ: AI Impact Summit: ಜನಕಲ್ಯಾಣಕ್ಕೆ ಎಐ ಬಳಕೆ, ಇದು ಭಾರತಕ್ಕಿರುವ ಬದ್ಧತೆ: ಅಶ್ವಿನಿ ವೈಷ್ಣವ್

‘ಅಲ್ಲಿಗೆ ಭದ್ರತಾ ಸಿಬ್ಬಂದಿ ಮಾತ್ರವೇ ಪ್ರವೇಶಾವಕಾಶ ಹೊಂದಿದ್ದರು, ಈ ಕಳ್ಳತನ ಹೇಗೆ ನಡೆಯಿತು? ಇದು ಬಹಳ ನಿರಾಸೆಯ ಘಟನೆ’ ಎಂದು ನಿಯೋ ಸೇಪಿಯನ್ ಸಿಇಒ ಧನಂಜಯ್ ಯಾದವ್ ಬೇಸರ ವ್ಯಕ್ತಪಡಿಸಿದ್ದಾರೆ.

ನಿಯೋಸೇಪಿಯನ್ ಸಿಇಒ ಅವರ ಟ್ವೀಟ್

ಯಾವುದಿದು ನಿಯೋಸೇಪಿಯನ್ ಎಐ ದಿರಿಸು?

ನಿಯೋಸೇಪಿಯನ್ ಕಂಪನಿಯು ನಿಯೋ1 ಎನ್ನುವ ಎಐ ದಿರಿಸನ್ನು ಅಭಿವೃದ್ಧಿಪಡಿಸಿದೆ. ಇದು ಪೆಂಡೆಂಟ್ ರೀತಿ ಕೊರಳಿಗೆ ಧರಿಸಿಕೊಳ್ಳಬಹುದು. ನಮ್ಮ ಮಾತುಗಳನ್ನು ಆಲಿಸಿ, ದಿನದ ಸಾರಾಂಶವನ್ನು ಇದು ಹಿಡಿದಿಟ್ಟು ನಮಗೆ ಉಪಯುಕ್ತ ಮಾಹಿತಿ, ಅಲರ್ಟ್​ಗಳನ್ನು ಇದು ನೀಡಬಲ್ಲುದು. ಇದರ ಬೆಲೆ ಸುಮಾರು 11-15 ಸಾವಿರ ರೂ ಆಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಿಯಮ ಉಲ್ಲಂಘಿಸಿ ಸಚಿವ ಸ್ಥಾನಮಾನ: ಸಿದ್ದರಾಮಯ್ಯ ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ಸೂಚನೆ – Kannada News | Karnataka high Court asks His Stand about minister status to CM advisers And corporation heads

ಬೆಂಗಳೂರು, (ಫೆಬ್ರವರಿ 17): ಸಂವಿಧಾನದ 164(1)A ನಿಯಮ ಉಲ್ಲಂಘಿಸಿ ನಿಗಮ ಮಂಡಳಿ ಅಧ್ಯಕ್ಷರಿಗೆ (corporation heads) ಸಚಿವ ಸ್ಥಾನಮಾನ ಹಾಗೂ ಸಿಎಂ ಸಲಹೆಗಾರರ ನೇಮಕ ಪ್ರಶ್ನಿಸಿ ಸಲ್ಲಿಸಲಾಗಿದ್ದ ಪಿಐಎಲ್​​ ವಿಚಾರಣೆ ನಡೆಸಿದ ಹೈಕೋರ್ಟ್ (Karnataka high Court) ವಿಭಾಗೀಯ ಪೀಠ, ಈ ಬಗ್ಗೆ ನಿಲುವು ತಿಳಿಸಲು ರಾಜ್ಯ ಸರ್ಕಾರಕ್ಕೆ ಖಡಕ್ ಸೂಚನೆ ನೀಡಿದೆ. ಸಚಿವರ ಸಂಖ್ಯೆ ಶಾಸಕರ ಸಂಖ್ಯೆಯ ಶೇ.15ರಷ್ಟನ್ನು ಮೀರುವಂತಿಲ್ಲ. ಆದರೆ ಸಚಿವ ಸ್ಥಾನಮಾನದ ಮೂಲಕ ಸಂವಿಧಾನದ ನಿಯಮ ಉಲ್ಲಂಘಿಸಿದ್ದಾರೆಂದು ದೂರುದಾರ ಸೂರಿ ಪಾಯಲ ಪರ ವಕೀಲರು ವಾದ ಮಂಡಿಸಿದ್ದು, ಈ ಸಂಬಂಧ ರಾಜ್ಯ ಸರ್ಕಾರದ ನಿಲುವು ತಿಳಿಸಲು ಸೂಚಿಸಿ ವಿಚಾರಣೆಯನ್ನು ಮಾರ್ಚ್ 4ಕ್ಕೆ ಮುಂದೂಡಿದೆ.

ಇತ್ತೀಚೆಗಷ್ಟೇ ರಾಜ್ಯ ಸರ್ಕಾರವು, ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರಾಗಿರುವ ಒಟ್ಟು 54 ಮಂದಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡಿ ಸರ್ಕಾರ ಆದೇಶ ಹೊರಡಿಸಿತ್ತು. ಇದಕ್ಕೆ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಭಾರೀ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪರ ವಿರೋಧದ ಚರ್ಚೆಗಳು ಸಹ ನಡೆದಿದ್ದವು. ಈ ಎಲ್ಲಾ ಬೆಳವಣಿಗೆಗಳ ನಡುವೆ ಸೂರಿ ಪಾಯಲ ಎಂಬುವರು ಹೈಕೋರ್ಟ್​​ಗೆ ಪಿಐಎಲ್ ಸಲ್ಲಿಸಿದ್ದು, ನಿಗಮ ಮಂಡಳಿ ಅಧ್ಯಕ್ಷರಿಗೆ ಸಚಿವ ಸ್ಥಾನಮಾನ ಹಾಗೂ ಸಿಎಂ ಸಲಹೆಗಾರರನ್ನು ನೇಮಿಸುವ ಮೂಲಕ ಸಂವಿಧಾನದ 164(1)A ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಸಿಎಂ ರಾಜಕೀಯ ಕಾರ್ಯದರ್ಶಿ, ಮಾಧ್ಯಮ ಸಲಹೆಗಾರರ ನೇಮಕ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಜಾ

ಇನ್ನು ಈ ಹಿಂದೆ ಸಹ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನೇಮಕ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು. ಸಿಎಂ ಸಿದ್ದರಾಮಯ್ಯನವರ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಕೆ.ಗೋವಿಂದರಾಜ್‌, ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರ ಸುನೀಲ್ ಕನಗೋಲು, ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ನೇಮಕಾತಿ ಪ್ರಶ್ನಿಸಿ ವಕೀಲ ಎಸ್.ಉಮಾಪತಿ ಎಂಬುವರಯ ಹೈಕೋರ್ಟ್ ಮೆಟ್ಟಿಲೇರಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 5:39 pm, Tue, 17 February 26

Source link

ಕೋಲಾರದ ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ – Kannada News | Kolar’s Tata Airbus Mini Helicopter Unit Launched by Modi and Macron Virtually

ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆImage Credit source: Google

ಕೋಲಾರ, ಫೆಬ್ರವರಿ 17: ಕೋಲಾರ ತಾಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಾರಂಭ ಮಾಡಲಿರುವ ಟಾಟಾ ಏರ್‌ಬಸ್ ಮಿನಿ ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಮುಂಬೈನಿಂದ ವರ್ಚುವಲ್ ಮೂಲಕ​​ ಉದ್ಘಾಟಿಸಿದ್ದಾರೆ. ಭಾರತದ ಮೊದಲ ಖಾಸಗಿ ಹೆಲಿಕಾಪ್ಟರ್ ತಯಾರಿಕಾ ಘಟಕ ಇದಾಗಿದ್ದು, 2027ರಲ್ಲಿ ಮೊದಲ ಹೆಲಿಕಾಪ್ಟರ್ ಇಲ್ಲಿ ಸಿದ್ಧಗೊಳ್ಳುವ ನಿರೀಕ್ಷೆಯಿದೆ. ಕೋಲಾರ ತಾಲೂಕಿನ ವೇಮಗಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್​​ ಸಿಂಗ್​, ಫ್ರಾನ್ಸ್ ರಕ್ಷಣಾ ಸಚಿವೆ ಕ್ಯಾಥರಿನ್ ವೌಟ್ರಿನ್, ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಕೋಲಾರ ಕ್ಷೇತ್ರದ ಸಂಸದ ಮಲ್ಲೇಶ್ ಬಾಬು ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಸುಮಾರು 16 ಎಕರೆ ಪ್ರದೇಶದಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ವತಿಯಿಂದ ಈ ಘಟಕ ನಿರ್ಮಾಣಗೊಂಡಿದ್ದು, ಇದು ದೇಶದಲ್ಲೇ ಮೊದಲ ಮಿನಿ ನಾಗರಿಕ ಹೆಲಿಕಾಪ್ಟರ್ ಜೋಡಣಾ ಘಟಕ ಎನ್ನಲಾಗಿದೆ. ವರ್ಷಕ್ಕೆ H125 ಮಾದರಿಯ ಹತ್ತು ಹೆಲಿಕಾಪ್ಟರ್‌ಗಳನ್ನು ಮೊದಲ ಹಂತದಲ್ಲಿ ತಯಾರಿಸುವ ಸಾಮರ್ಥ್ಯ ಈ ಘಟಕಕ್ಕಿದೆ. ರಕ್ಷಣಾ ಇಲಾಖೆಗೆ ಸೇರಿದ ಹೆಲಿಕಾಪ್ಟರ್​​ಗಳು ಇಲ್ಲಿ ತಯಾರಾಗಲಿದ್ದು, ಮುಂದಿನ ದಿನಗಳಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕೆ ಪ್ಲ್ಯಾನ್​​ ಸಿದ್ಧವಾಗಿರುವ ಮಾಹಿತಿ ಇದೆ.

(ಮಾಹಿತಿ ಅಪ್ಡೇಟ್​​ ಆಗುತ್ತಿದೆ.)

Source link

RBI Recruitment 2026: ಭಾರತೀಯ ರಿಸರ್ವ್ ಬ್ಯಾಂಕ್​ನಲ್ಲಿ 650 ಸಹಾಯಕ ಹುದ್ದೆಗೆ ನೇಮಕಾತಿ – Kannada News | RBI Assistant Recruitment 2026: Eligibility, Exam Dates and How to Apply for 650 Jobs

ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಹಾಯಕ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, 650 ಸಹಾಯಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ದೇಶಾದ್ಯಂತ 18 RBI ಕಚೇರಿಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. RBI ಸಹಾಯಕ ನೇಮಕಾತಿ ಅಧಿಸೂಚನೆಯ ಬಿಡುಗಡೆಯೊಂದಿಗೆ ಅರ್ಜಿ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 8 ಎಂದು ನಿಗದಿಪಡಿಸಲಾಗಿದೆ.

RBI ಸಹಾಯಕ ನೇಮಕಾತಿ ಅಧಿಸೂಚನೆ ವೇಳಾಪಟ್ಟಿ:

  • RBI ಸಹಾಯಕ ನೇಮಕಾತಿ 2026 ಹುದ್ದೆಗಳ ಸಂಖ್ಯೆ: 650
  • ಅರ್ಜಿ ಸಲ್ಲಿಸುವ ಪ್ರಕ್ರಿಯೆ: ಫೆಬ್ರವರಿ 16 ರಿಂದ ಮಾರ್ಚ್ 8, 2026 ರವರೆಗೆ
  • ಅರ್ಜಿ ಸಲ್ಲಿಸುವ ಪ್ರಕ್ರಿಯೆ: rbi.org.in ಮೂಲಕ ಆನ್‌ಲೈನ್ ಮೂಲಕ
  • ಪೂರ್ವಭಾವಿ ಪರೀಕ್ಷೆ (ತಾತ್ಕಾಲಿಕ): ಏಪ್ರಿಲ್ 11, 2026
  • ಮುಖ್ಯ ಪರೀಕ್ಷೆ (ತಾತ್ಕಾಲಿಕ): ಜೂನ್ 7, 2026

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲು RBI ಅಧಿಕೃತ ವೆಬ್‌ಸೈಟ್ rbi.org.in ಗೆ ಹೋಗಿ .
  • 2025 ರ ಅಡಿಯಲ್ಲಿ ಸಹಾಯಕ ನೇಮಕಾತಿಗಾಗಿ ಲಿಂಕ್ ತೆರೆಯಿರಿ.
  • ನೋಂದಾಯಿಸಿ ಮತ್ತು ತಾತ್ಕಾಲಿಕ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಪಡೆಯಿರಿ.
  • ವೈಯಕ್ತಿಕ, ಶೈಕ್ಷಣಿಕ ವಿವರಗಳು, ಛಾಯಾಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ. ಫಾರ್ಮ್ ಅನ್ನು ಸಲ್ಲಿಸಿ.

ಆರ್‌ಬಿಐನ ಈ ಕಚೇರಿಗಳಿಗೆ ನೇಮಕಾತಿ:

ಚಂಡೀಗಢ, ಚೆನ್ನೈ, ಅಹಮದಾಬಾದ್, ಬೆಂಗಳೂರು, ಭೋಪಾಲ್, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ ಮತ್ತು ಲಕ್ನೋ, ಕೋಲ್ಕತ್ತಾ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ ಮತ್ತು ತಿರುವನಂತಪುರಂನಲ್ಲಿರುವ ತನ್ನ ಕಚೇರಿಗಳಲ್ಲಿ ಸಹಾಯಕರ ನೇಮಕಾತಿಗಾಗಿ ಆರ್‌ಬಿಐ ಅರ್ಜಿಗಳನ್ನು ಆಹ್ವಾನಿಸಿದೆ.

ಯಾರು ಅರ್ಜಿ ಸಲ್ಲಿಸಬಹುದು?

ಭಾರತೀಯ ಪ್ರಜೆಗಳು, ಹಾಗೆಯೇ ನೇಪಾಳಿ, ಭೂತಾನ್ ಮತ್ತು ಟಿಬೆಟಿಯನ್ ನಿರಾಶ್ರಿತರು (ಜನವರಿ 1, 1962 ಕ್ಕಿಂತ ಮೊದಲು ಭಾರತಕ್ಕೆ ಬಂದವರು) RBI ಸಹಾಯಕ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಭಾರತದಲ್ಲಿ ಶಾಶ್ವತವಾಗಿ ನೆಲೆಸುವ ಉದ್ದೇಶದಿಂದ ಅಧಿಸೂಚಿತ ದೇಶಗಳಿಂದ ವಲಸೆ ಬಂದಿರುವ ಮತ್ತು ಭಾರತ ಸರ್ಕಾರ ನೀಡಿದ ಅರ್ಹತಾ ಪ್ರಮಾಣಪತ್ರವನ್ನು ಹೊಂದಿರುವ ಭಾರತೀಯ ಮೂಲದ ಜನರು ಸಹ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ವಯಸ್ಸಿನ ಮಿತಿಗೆ ಸಂಬಂಧಿಸಿದಂತೆ, 20 ರಿಂದ 28 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ವಯಸ್ಸಿನ ಮಿತಿಯನ್ನು ಫೆಬ್ರವರಿ 1, 2026 ರಿಂದ ಲೆಕ್ಕಹಾಕಲಾಗುತ್ತದೆ. ಆದಾಗ್ಯೂ, ಮೀಸಲಾತಿ ವರ್ಗದ ನಿಯಮಗಳ ಪ್ರಕಾರ, SC/ST ಅಭ್ಯರ್ಥಿಗಳಿಗೆ 5 ವರ್ಷಗಳ ವಯಸ್ಸಿನ ಸಡಿಲಿಕೆ ಮತ್ತು OBC ಅಭ್ಯರ್ಥಿಗಳಿಗೆ 3 ವರ್ಷಗಳ ವಯಸ್ಸಿನ ಸಡಿಲಿಕೆ ನೀಡಲಾಗುತ್ತದೆ. PwBD ಮತ್ತು ಮಾಜಿ ಸೈನಿಕರಿಗೆ ಸಹ ಸೇವಾ ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ನೀಡಲಾಗುತ್ತದೆ.

ಇದನ್ನೂ ಓದಿ: ಕರ್ನಾಟಕದ ಹಾಲು ಒಕ್ಕೂಟದಲ್ಲಿ 194 ಹುದ್ದೆಗಳಿಗೆ ನೇಮಕಾತಿ; 10ರಿಂದ ಪದವೀಧರರವರೆಗೆ ಅರ್ಜಿ ಸಲ್ಲಿಸಲು ಅವಕಾಶ

ಅರ್ಹತಾ ಮಾನದಂಡ:

RBI ಸಹಾಯಕ ನೇಮಕಾತಿಯಲ್ಲಿ ಭಾಗವಹಿಸಲು ಅರ್ಹತಾ ಮಾನದಂಡಗಳಿಗೆ ಸಂಬಂಧಿಸಿದಂತೆ, ಕನಿಷ್ಠ ಶೇ.50 ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಯಾವುದೇ ಸ್ಟ್ರೀಮ್‌ನಲ್ಲಿ ಪದವಿ ಮಾನ್ಯವಾಗಿರುತ್ತದೆ. ಅಭ್ಯರ್ಥಿಗಳು ಕಂಪ್ಯೂಟರ್ ವರ್ಡ್ ಪ್ರೊಸೆಸಿಂಗ್‌ನ ಕಾರ್ಯ ಜ್ಞಾನವನ್ನು ಹೊಂದಿರಬೇಕು. ಸ್ಥಳೀಯ ಭಾಷೆಯ ಜ್ಞಾನವೂ ಸಹ ಅಗತ್ಯವಿದೆ. ಮಾಜಿ ಸೈನಿಕರಿಗೆ, 15 ವರ್ಷಗಳ ರಕ್ಷಣಾ ಸೇವೆಯನ್ನು ಪದವಿ ಪದವಿಗೆ ಸಮಾನವೆಂದು ಪರಿಗಣಿಸಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

RBI ಸಹಾಯಕ ನೇಮಕಾತಿ ಆಯ್ಕೆ ಪ್ರಕ್ರಿಯೆಯನ್ನು ಮೂರು ಹಂತಗಳಲ್ಲಿ ನಡೆಸಲಾಗುವುದು. ಮೊದಲ ಹಂತವು ಪ್ರಾಥಮಿಕ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಮುನ್ನಡೆಯುತ್ತಾರೆ. ಮೂರನೇ ಹಂತವು ಭಾಷಾ ಪ್ರಾವೀಣ್ಯತೆಯ ಪರೀಕ್ಷೆ (LPT) ಆಗಿರುತ್ತದೆ. LPT ಯಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳನ್ನು ನೇಮಕಾತಿ ಪ್ರಕ್ರಿಯೆಯಿಂದ ಅನರ್ಹಗೊಳಿಸಲಾಗುತ್ತದೆ. LPT ಮತ್ತು ಮುಖ್ಯ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಅರ್ಹತೆಯನ್ನು ನಿರ್ಧರಿಸಲಾಗುತ್ತದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version