ಆಲಿಯಾ ಭಟ್‌ಗೆ ಮನೆ ಮಾರಿ 10 ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸವಿರುವ ಬಾಲಿವುಡ್ ನಟ – Kannada News | Anupam Kher sold house to Alia Bhatt and living in rented house

ಒಂದು ಸಿನಿಮಾ (Cinema) ಹಿಟ್ ಆದರೂ ಸಾಕು, ನಟ-ನಟಿಯರ ಜೀವನ ಶೈಲಿಯೇ ಬದಲಾಗುತ್ತದೆ. ಎರಡನೇ ಸಿನಿಮಾಕ್ಕೆ ಕೋಟಿಗಳಲ್ಲಿ ಸಂಭಾವನೆ ಪಡೆಯುತ್ತಾರೆ. ಐಶಾರಾಮಿ ಕಾರು, ಮನೆಗಳನ್ನು ಖರೀದಿಸುತ್ತಾರೆ. ಆದರೆ ದಶಕಗಳಿಂದಲೂ ಚಿತ್ರರಂಗದಲ್ಲಿರುವ ಮತ್ತು ಸ್ಟಾರ್ ನಟರುಗಳಿಗೆ ಸಮಾನವಾದ ಸಂಭಾವನೆ ಪಡೆಯುವ ಸ್ಟಾರ್ ನಟರೊಬ್ಬರು ಕಳೆದ ಹತ್ತು ವರ್ಷದಿಂದಲೂ ಮುಂಬೈನಲ್ಲಿ ಬಾಡಿಗೆ ಮನೆಯಲ್ಲಿದ್ದಾರೆ. ಇದ್ದ ಮನೆಯನ್ನೂ ಸಹ ಆಲಿಯಾ ಭಟ್ ಅವರಿಗೆ ಮಾರಾಟ ಮಾಡಿದ್ದಾರೆ. ಈ ಸರಳ ಜೀವಿಯ ಹೆಸರು ಅನುಪಮ್ ಖೇರ್.

ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಯಶಸ್ವಿ ವೃತ್ತಿಜೀವನವನ್ನು ಹೊಂದಿರುವ ಅನುಪಮ್ ಖೇರ್ ಈಗಲೂ ಸಹ ಬಾಲಿವುಡ್​​ನ ಬ್ಯುಸಿ ನಟರಲ್ಲೊಬ್ಬರು. 550ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು ಆರ್ಥಿಕವಾಗಿ ಅತ್ಯಂತ ಸದೃಢರಾಗಿದ್ದರೂ, ಕಳೆದ ಒಂದು ದಶಕದಿಂದ ಮುಂಬೈನಲ್ಲಿ ಸ್ವಂತ ಮನೆ ಹೊಂದಿಲ್ಲ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ತಾವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವುದರ ಹಿಂದಿನ ತತ್ವ ಮತ್ತು ಕಾರಣಗಳನ್ನು ಹಂಚಿಕೊಂಡಿದ್ದಾರೆ.

ಕೆಲವು ವರ್ಷಗಳ ಹಿಂದೆ ಅನುಪಮ್ ಖೇರ್ ಅವರು ಮುಂಬೈನ ಜುಹು ಪ್ರದೇಶದಲ್ಲಿದ್ದ ತಮ್ಮ ಐಷಾರಾಮಿ ಅಪಾರ್ಟ್‌ಮೆಂಟ್ ಅನ್ನು ನಟಿ ಆಲಿಯಾ ಭಟ್ ಅವರಿಗೆ ಮಾರಾಟ ಮಾಡಿದರು. ಆ ಮನೆಯನ್ನು ಮಾರಿದ ನಂತರ ಅವರು ಮತ್ತೊಂದು ಮನೆಯನ್ನು ಖರೀದಿಸುವ ಬದಲು ಬಾಡಿಗೆ ಮನೆಯಲ್ಲಿ ಇರಲು ನಿರ್ಧರಿಸಿದರು. ಕಳೆದ ಹತ್ತು ವರ್ಷಗಳಿಂದಲೂ ಅವರು ಬಾಡಿಗೆ ಮನೆಯಲ್ಲಿಯೇ ಇದ್ದಾರೆ. ಇದು ಅವರೇ ಬೇಕೆಂದು ಮಾಡಿಕೊಂಡಿರುವ ಆಯ್ಕೆ. ಇದಕ್ಕೆ ಕಾರಣವನ್ನೂ ವಿವರಿಸಿದ್ದಾರೆ ಅನುಪಮ್ ಖೇರ್.

ಇದನ್ನೂ ಓದಿ:‘ಧುರಂಧರ್ 2’ ಪ್ರೊಪಗಾಂಡ ಸಿನಿಮಾ ಎಂದವರಿಗೆ ತಿರುಗೇಟು ನೀಡಿದ ಅನುಪಮ್ ಖೇರ್

ಅನುಪಮ್ ಖೇರ್ ಅವರ ಪ್ರಕಾರ, ‘ಜೀವನವು ಯಾವುದೇ ಹಂತದಲ್ಲೂ ಸರಳವಾಗಿರಬೇಕು’ ಎಂಬ ನಿಯಮ ಪಾಲಿಸುವವರು. ‘ನಾನು ನನ್ನ ಜೀವನದ ಬಹುಪಾಲು ಸಮಯವನ್ನು ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ಈಗ ನಾನು ನನ್ನ ಜೀವನವನ್ನು ಯಾವುದೇ ಹೊರೆಯಿಲ್ಲದೆ ಆನಂದಿಸಲು ಬಯಸುತ್ತೇನೆ. “ನಾನು ಕಳೆದ 10 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ ಮತ್ತು ಇದು ನನಗೆ ತುಂಬಾ ಸಮಾಧಾನ ನೀಡಿದೆ. ನಾನು ಆ ಮನೆಯನ್ನು ಬಿಟ್ಟು ಹೋಗಬೇಕೆಂದಾಗ ಸುಲಭವಾಗಿ ಹೊರಬರಬಹುದು. ದೊಡ್ಡ ಆಸ್ತಿಗಳನ್ನು ನಿರ್ವಹಿಸುವ ಜವಾಬ್ದಾರಿ ನನಗಿಷ್ಟವಿಲ್ಲ’ ಎಂದು ಅವರು ಹೇಳಿದ್ದಾರೆ.

ಅನುಪಮ್ ಖೇರ್ ಅವರಿಗೆ ಸ್ವಂತ ಮನೆ ಇಲ್ಲವಾದರೂ, ಶಿಮ್ಲಾದಲ್ಲಿ ತಮ್ಮ ತಾಯಿಗಾಗಿ ಒಂದು ಸುಂದರವಾದ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಅವರ ತಾಯಿಯೂ ಸಹ ದಶಕಗಳಿಂದಲೂ ಬಾಡಿಗೆ ಮನೆಯಲ್ಲಿದ್ದರಂತೆ. ತಾಯಿಯವರಿಗೆ ಶಿಮ್ಲಾನಲ್ಲಿ ಸಣ್ಣ ಮನೆ ಮಾಡಿಕೊಳ್ಳಬೇಕು ಎಂಬ ಆಸೆಯಿತ್ತಂತೆ. ಅದರಂತೆ ಅನುಪಮ್ ಖೇರ್, ತಾಯಿಗಾಗಿ ಶಿಮ್ಲಾನಲ್ಲಿ ದೊಡ್ಡ ಮನೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ.

ಅನುಪಮ್ ಖೇರ್ ಅವರು 1982 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ನಾಯಕ, ವಿಲನ್, ಹಾಸ್ಯನಟ, ಪೋಷಕ ಪಾತ್ರ ಹೀಗೆ ಹಲವಾರು ರೀತಿಯ ಪಾತ್ರಗಳಲ್ಲಿ ಅನುಪಮ್ ಖೇರ್ ನಟಿಸಿದ್ದಾರೆ. ಹಿಂದಿ ಮಾತ್ರವಲ್ಲದೆ, ತೆಲುಗು, ತಮಿಳು, ಇಂಗ್ಲೀಷ್, ಕನ್ನಡದ ಕೆಲ ಸಿನಿಮಾಗಳಲ್ಲಿಯೂ ಸಹ ಅನುಪಮ್ ಖೇರ್ ನಟನೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಸ ಮುಕ್ತ ಬೆಂಗಳೂರಿಗೆ ಜಿಬಿಎ ಮಾಸ್ಟರ್ ಪ್ಲಾನ್: ಕಸ ವಿಂಗಡಿಸದಿದ್ದರೆ ಬೀಳಲಿದೆ ಭಾರಿ ದಂಡ! – Kannada News | Garbage Free Bengaluru Master Plan: Heavy Fines for Not Segregating Waste

ಹಸಿ, ಒಣ ತ್ಯಾಜ್ಯ (ಸಂಗ್ರಹ ಚಿತ್ರ)Image Credit source: INKDABBI

ಬೆಂಗಳೂರು, ಏಪ್ರಿಲ್​ 18: ರಾಜಧಾನಿ ಬೆಂಗಳೂರಿಗೆ ಅಂಟಿಕೊಂಡಿರುವ ಬಹುದೊಡ್ಡ ಶಾಪ ಅಂದರೆ ಅದು ಕಸ (Garbage). ಗಾರ್ಬೇಜ್ ಸಿಟಿ ಎಂಬ ಕುಖ್ಯಾತಿ ಹೋಗಿಲ್ಲ. ಹೀಗಾಗಿ ಘನತ್ಯಾಜ ನಿರ್ವಹಣೆಗೆ ಕಟ್ಟುನಿಟ್ಟಿನ ನಿಯಮ ಜಾರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮುಂದಾಗಿದೆ. ಕಸ ವಿಂಗಡಣೆ ನಿಯಮ ಪಾಲನೆ ಮಾಡಿಲ್ಲ ಅಂದ್ರೆ ಒಂದು ಸಾವಿರ ರೂಪಾಯಿ ದಂಡ ಬೀಳೋದು ಗ್ಯಾರಂಟಿ.

ಕಸ ವಿಂಗಡಣೆ ಕಡ್ಡಾಯ

ಸಿಲಿಕಾನ್​ ಸಿಟಿಗೆ ಗಾರ್ಬೇಜ್​​ನ​​ದ್ದೇ ಟೆನ್ಷನ್. ಕಸ ವಿಂಗಡಣೆ ಮಾಡಿಕೊಡಿ ಅಂದರೂ ಕೆಲವರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ನಗರದಲ್ಲಿ ಕಸ ನಿರ್ವಹಣೆ ನಿಯಮ ಬಿಗಿಗೊಳಿಸಲು ಜಿಬಿಎ ಮುಂದಾಗಿದೆ. ಏಪ್ರಿಲ್ 1ರಿಂದಲೇ ಮನೆಮನೆಗಳಲ್ಲಿ ಕಸ ವಿಂಗಡಣೆ ಕಡ್ಡಾಯಗೊಳಿಸಲು ನಿರ್ಧರಿಸಿದೆ.

ಇದನ್ನೂ ಓದಿ: ಕಸದ ರಾಶಿಗೆ ರಸ್ತೆ, ಫುಟ್​ಪಾತ್ ಮಾಯ! ಜಿಬಿಎ ವಿರುದ್ಧ ರೊಚ್ಚಿಗೆದ್ದ ಜನ

ಹೊಸ ನಿಯಮದಂತೆ ಹಸಿ, ಒಣ ತ್ಯಾಜ್ಯವನ್ನು ವಿಂಗಡಿಸಿ ನೀಡದಿದ್ದರೆ 1 ಸಾವಿರ ರೂ ದಂಡ ವಿಧಿಸಲಾಗುತ್ತದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ನಿಗಮ ಎಚ್ಚರಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ತಲೆದೂರಿದ ಕಸದ ಸಮಸ್ಯೆ: ಜಿಬಿಎ ವಿರುದ್ಧ ಉದ್ಯಮಿ ಕಿರಣ್ ಮಜುಂದಾರ್ ಶಾ ಗರಂ

ಹೊಸ ನಿಯಮದಂತೆ ಹಸಿ, ಒಣ, ನೈರ್ಮಲ್ಯ ಹಾಗೂ ವಿಶೇಷ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡದಿದ್ದರೆ 1 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ಇದೇ ತಪ್ಪು ಮಾಡಿದರೆ, ಎರಡು ಸಾವಿರ ರೂಪಾಯಿ ದಂಡ ವಿಧಿಸಲಾಗುವುದು.

ಕಸದ ಮೇಲಿನ ತೆರಿಗೆ ಹೊರೆ: ಸಾರ್ವಜನಿಕರು ಅಸಮಾಧಾನ

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಗಳು-2026 ಅನ್ವಯ ದಂಡ ವಿಧಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ಈ ಕ್ರಮ ಅವೈಜ್ಞಾನಿಕವಾಗಿದ್ದು, ಕಸದ ಮೇಲಿನ ತೆರಿಗೆ ಹೊರೆಯಾಗುತ್ತಿದೆ ಅಂತ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ. ಹೊಸ ನಿಯಮಗಳ ಮೂಲಕ ಕಸ ಮುಕ್ತ ಬೆಂಗಳೂರಿಗೆ ನೂರೆಂಟು ಸರ್ಕಸ್ ನಡೆಯುತ್ತಿವೆ. ಆದರೆ ಇದಕ್ಕೆ ಪೂರಕವಾಗಿ ನಾಗರಿಕರು ಸಾಥ್ ನೀಡುತ್ತಾರಾ ಅಂತ ಕಾದು ನೋಡಬೇಕಿದೆ.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬದಲಾಗುತ್ತಾ ಸಿದ್ದರಾಮಯ್ಯ ಟೀಮ್? ಸಂಪುಟ ಪುನಾರಚನೆಯ ಬಗ್ಗೆ ಬೇಲೂರು ಗೋಪಾಲಕೃಷ್ಣ ಮಹತ್ವದ ಸುಳಿವು! – Kannada News | Congress Leader Belur Gopalkrishna on Cabinet Changes and Womens Reservation Bill Debate

ದೆಹಲಿ, ಏ,18: ಕಾಂಗ್ರೆಸ್ ನಾಯಕ ಬೇಲೂರು ಗೋಪಾಲಕೃಷ್ಣ ಅವರು ದೆಹಲಿ ಭೇಟಿ ಬಳಿಕ ಸಂಪುಟ ಪುನಾರಚನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಮುಂದಿನ ತಿಂಗಳೊಳಗೆ ಸಂಪುಟದಲ್ಲಿ ಬದಲಾವಣೆಗಳ ಕುರಿತು ಉತ್ತಮ ಸುದ್ದಿ ಹೊರಬೀಳಬಹುದು ಎಂದು ಅವರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ನಾರಿಶಕ್ತಿ ವಂದನ್ ಅಧಿನಿಯಮ (ಮಹಿಳಾ ಮೀಸಲಾತಿ ಮಸೂದೆ) ಬಗ್ಗೆಯೂ ಬೇಲೂರು ಗೋಪಾಲಕೃಷ್ಣ ಮಾತನಾಡಿದರು. ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವುದಕ್ಕೆ ಕಾಂಗ್ರೆಸ್ ವಿರೋಧವಿಲ್ಲ. ಹಿಂದೆ 2011ರಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲೂ ಈ ಕುರಿತು ಪ್ರಯತ್ನ ನಡೆದಿತ್ತು ಎಂದು ಅವರು ಹೇಳಿದರು. ಆದರೆ, ಮುಂಬರುವ ಪಂಚರಾಜ್ಯ ಚುನಾವಣೆಗಳ ಹಿನ್ನೆಲೆಯಲ್ಲಿ ಮತಬ್ಯಾಂಕ್ ರಾಜಕಾರಣಕ್ಕಾಗಿ ಈ ಮಸೂದೆಯನ್ನು ಅವಸರದಲ್ಲಿ ಮಂಡಿಸಲಾಗಿದೆ ಎಂದು ಅವರು ಆಕ್ಷೇಪಿಸಿದರು. ಒಂದೇ ಬಾರಿಗೆ ಮಹಿಳಾ ಮೀಸಲಾತಿ, ಕ್ಷೇತ್ರ ವಿಂಗಡಣೆ (ಬೈಪರ್ಕೇಶನ್) ಸೇರಿದಂತೆ ಮೂರು ಮಸೂದೆಗಳನ್ನು ಚರ್ಚೆಯಿಲ್ಲದೆ ಮಂಡಿಸುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಯೊಂದು ಮಸೂದೆಗೂ ಪ್ರತ್ಯೇಕವಾಗಿ, ಕನಿಷ್ಠ 15-20 ದಿನಗಳ ಕಾಲ ಸಂಸತ್ತಿನಲ್ಲಿ ಮುಕ್ತ ಚರ್ಚೆ ನಡೆಸಬೇಕು ಎಂದು ಗೋಪಾಲಕೃಷ್ಣ ಆಗ್ರಹಿಸಿದರು. ವಿಶೇಷವಾಗಿ ಕ್ಷೇತ್ರ ವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಆಗಬಹುದಾದ ಸಂಭವನೀಯ ತೊಂದರೆಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PM Modi Speech Today: ವಿಪಕ್ಷಗಳು ಮಹಿಳೆಯರ ಹಕ್ಕು ಕಸಿದುಕೊಂಡು ಸಂಭ್ರಮಿಸಿದ್ದು ವಿಪರ್ಯಾಸ; ಪ್ರಧಾನಿ ಮೋದಿ ವಾಗ್ದಾಳಿ – Kannada News | PM Modi Speech Highlights PM Modi apologises says Opposition Snatched Womens Rights

ನವದೆಹಲಿ, ಏಪ್ರಿಲ್ 18: ಪ್ರಧಾನಿ ನರೇಂದ್ರ ಮೋದಿ (PM Narendra Modi) ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದಾರೆ. ಈ ವೇಳೆ ನಿನ್ನೆ ಸಂಸತ್​ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ವಿರುದ್ಧ ಮೋದಿ ಹರಿಹಾಯ್ದಿದ್ದಾರೆ. ಶಾಸಕಾಂಗಗಳಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ಮಸೂದೆಯು ಲೋಕಸಭೆಯಲ್ಲಿ ಸೋತ ನಂತರ ಪ್ರಧಾನಿ ನರೇಂದ್ರ ಮೋದಿ ಇಂದು ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.

“ಮಹಿಳಾ ಪ್ರಗತಿಗಾಗಿ ನಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ನಾವು ಯಶಸ್ವಿಯಾಗಲಿಲ್ಲ. ಇದಕ್ಕಾಗಿ ನಾನು ರಾಷ್ಟ್ರದ ಎಲ್ಲಾ ತಾಯಂದಿರು ಮತ್ತು ಸಹೋದರಿಯರಲ್ಲಿ ಕ್ಷಮೆಯಾಚಿಸುತ್ತೇನೆ. ಮಹಿಳೆಯರ ಹಕ್ಕುಗಳನ್ನು ಕಸಿದುಕೊಂಡ ವಿರೋಧ ಪಕ್ಷಗಳು ಈ ಮಸೂದೆ ಅಂಗೀಕಾರವಾಗದಿದ್ದುದಕ್ಕೆ ಚಪ್ಪಾಳೆ ತಟ್ಟುತ್ತಾ ಸಂಭ್ರಮಿಸಿದ್ದು ವಿಪರ್ಯಾಸ” ಎಂದು ಮೋದಿ ಟೀಕಿಸಿದ್ದಾರೆ.

ಇದನ್ನೂ ಓದಿ: PM Modi Speech Today Live: ಪ್ರಧಾನಿ ಮೋದಿ ದೇಶದ ಜನರನ್ನು ಉದ್ದೇಶಿಸಿ ಭಾಷಣ ನೇರಪ್ರಸಾರ

“ನಮಗೆ ರಾಷ್ಟ್ರದ ಹಿತಾಸಕ್ತಿ ಅತ್ಯಂತ ಮುಖ್ಯ. ಆದರೆ ಕೆಲವರಿಗೆ ಪಕ್ಷದ ಹಿತಾಸಕ್ತಿಯನ್ನು ರಾಷ್ಟ್ರೀಯ ಹಿತಾಸಕ್ತಿಗಿಂತ ಹೆಚ್ಚು. ಅದರ ಪರಿಣಾಮವನ್ನು ಮಹಿಳೆಯರು ಮತ್ತು ದೇಶವು ಅನುಭವಿಸಬೇಕಾಗುತ್ತದೆ. ಈ ಬಾರಿಯೂ ಇದೇ ಆಗಿದೆ. ಕಾಂಗ್ರೆಸ್, ಡಿಎಂಕೆ, ಟಿಎಂಸಿ ಮತ್ತು ಸಮಾಜವಾದಿ ಪಕ್ಷದಂತಹ ಪಕ್ಷಗಳ ಸ್ವಾರ್ಥ ರಾಜಕೀಯದಿಂದಾಗಿ, ದೇಶದ ಮಹಿಳೆಯರು ತೊಂದರೆ ಅನುಭವಿಸಿದ್ದಾರೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

2029 ರಲ್ಲಿ ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಜಾರಿಗೆ ತರುವ ಮತ್ತು ಲೋಕಸಭೆಯ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಶುಕ್ರವಾರ ಕೆಳಮನೆಯಲ್ಲಿ ಸೋಲಿಸಲಾಯಿತು. ಹಾಜರಿರುವ ಮತ್ತು ಮತ ಚಲಾಯಿಸುವ ಕನಿಷ್ಠ ಮೂರನೇ ಎರಡರಷ್ಟು ಸದಸ್ಯರ ಬೆಂಬಲವನ್ನು ಪಡೆದರೆ ಸಂವಿಧಾನ ಆ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಗುತ್ತದೆ. ಆದರೆ ಮೂರು ಮಸೂದೆಗಳ ಮೇಲಿನ ಚರ್ಚೆಯ ನಂತರ ನಡೆದ ಸಭೆಯಲ್ಲಿ, 298 ಸದಸ್ಯರು ಮಸೂದೆಯನ್ನು ಬೆಂಬಲಿಸಿದರೆ, 230 ಸದಸ್ಯರು ಅದರ ವಿರುದ್ಧ ಮತ ಚಲಾಯಿಸಿದರು.

ಇದನ್ನೂ ಓದಿ: ಮಹಿಳಾ ಮೀಸಲಾತಿಗೆ ವಿರೋಧಿಸಿದ್ದಕ್ಕೆ ವಿಪಕ್ಷ ಬೆಲೆ ತೆರಬೇಕಾಗುತ್ತದೆ; ಪಿಎಂ ಮೋದಿ ವಾಗ್ದಾಳಿ

ಈ ನಿರ್ಣಾಯಕ ಮಸೂದೆ ಅಂಗೀಕಾರಕ್ಕೆ ಮೂರನೇ ಎರಡರಷ್ಟು ಬಹುಮತದ ಅಗತ್ಯವಿತ್ತು. ಆದರೆ ಆಡಳಿತಾರೂಢ ಬಿಜೆಪಿ ನೇತೃತ್ವದ ಮೈತ್ರಿಕೂಟವು ಸಂಖ್ಯೆಗಳನ್ನು ಒಟ್ಟುಗೂಡಿಸಲು ಸಾಧ್ಯವಾಗಲಿಲ್ಲ. ಶುಕ್ರವಾರ ರಾತ್ರಿ ಲೋಕಸಭೆಯಲ್ಲಿ ಮಸೂದೆಯ ಮೇಲಿನ ಮತದಾನದ ಸಮಯದಲ್ಲಿ, 298 ಸದಸ್ಯರು ಅದರ ಪರವಾಗಿ ಮತ ಚಲಾಯಿಸಿದರೆ, 230 ಸಂಸದರು ಅದರ ವಿರುದ್ಧ ಮತ ಚಲಾಯಿಸಿದರು. ಮತ ಚಲಾಯಿಸಿದ 528 ಸದಸ್ಯರಲ್ಲಿ ಮಸೂದೆಗೆ ಮೂರನೇ ಎರಡರಷ್ಟು ಬಹುಮತಕ್ಕೆ 352 ಮತಗಳು ಬೇಕಾಗಿದ್ದವು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SRH vs CSK: ಈ ಆವೃತ್ತಿಯ ವೇಗದ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ – Kannada News | Abhishek Sharma’s Fastest IPL Fifty: SRH Star Smashes Record vs CSK in 2026!

ಐಪಿಎಲ್ 2026 ರ 27 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಸನ್​ರೈಸರ್ಸ್​ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಅಭಿ ಅವರ ಈ ಅರ್ಧಶತಕದ ಇನ್ನಿಂಗ್ಸ್​ನಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು. ಅಂದರೆ, ಅವರು ಕೇವಲ 9 ಎಸೆತಗಳಲ್ಲಿ 44 ರನ್ ಗಳಿಸಿದರು. ಉಳಿದ ಆರು ಎಸೆತಗಳಲ್ಲಿ ಆರು ರನ್‌ ಕಲೆಹಾಕಿ ತಮ್ಮ ಅರ್ಧಶತಕ ಪೂರೈಸಿದರು.

ಇದರೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ಪರ ಅತಿ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾತ್ರವಲ್ಲದೆ ಈ ಹಿಂದೆ ತಮ್ಮ ಹೆಸರಿನಲ್ಲಿದ್ದ ದಾಖಲೆಯನ್ನು ಸಹ ಮುರಿದಿದ್ದಾರೆ. 2024 ರಲ್ಲಿ, ಮುಂಬೈ ಇಂಡಿಯನ್ಸ್ ವಿರುದ್ಧ ಅಭಿಷೇಕ್ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಇದೀಗ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಭಿಷೇಕ್ ದಾಖಲೆ ನಿರ್ಮಿಸಿದ್ದಾರೆ. ಅಂತಿಮವಾಗಿ ಅಭಿಷೇಕ್ ಶರ್ಮಾ 22 ಎಸೆತಗಳಲ್ಲಿ 59 ರನ್ ಗಳಿಸಿ ಔಟಾದರು. ಅವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

“ಪಾಪ ರಾಹುಲ್​​ ಗಾಂಧಿಗೆ ವಿಷಯವೇ ಗೊತ್ತಿಲ್ಲ, ಪೆದ್ದು ಪೆದ್ದಾಗಿ ಮಾತನಾಡುತ್ತಾರೆ”: ಪ್ರಹ್ಲಾದ್ ಜೋಶಿ ವ್ಯಂಗ್ಯ!

ದೆಹಲಿ, ಏ,18: ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿ ವಿಧೇಯಕವನ್ನು ವಿರೋಧಿಸಿ ಈಗ ಸದನದಲ್ಲಿ ಸಮರ್ಥನೆ ಮಾಡಿಕೊಳ್ಳಲು ಪರದಾಡುತ್ತಿದೆ ಎಂದು ಜೋಶಿ ಆರೋಪಿಸಿದ್ದಾರೆ. ಅನೇಕ ಕಾಂಗ್ರೆಸ್ ಸಂಸದರಿಗೆ ಮಹಿಳಾ ಮೀಸಲಾತಿಯನ್ನು ವಿರೋಧಿಸಬಾರದು ಎಂದು ತಿಳಿದಿದ್ದರೂ, ರಾಹುಲ್ ಗಾಂಧಿ ಅವರ ಅಪ್ರಬುದ್ಧ ಮತ್ತು ಗಂಭೀರತೆ ಇಲ್ಲದ, ಬೇಜವಾಬ್ದಾರಿಯ ಪಾರ್ಟ್ ಟೈಮ್ ರಾಜಕಾರಣಿಯ ನಾಯಕತ್ವದಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದು ಪ್ರಹ್ಲಾದ್ ಜೋಶಿ ಕಟುವಾಗಿ ಟೀಕಿಸಿದರು.ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್ ಪಕ್ಷವನ್ನು ಒಬಿಸಿ ವಿರೋಧಿ ಎಂದು ಕರೆದರು. ರಾಜೀವ್ ಗಾಂಧಿ, ನೆಹರು ಮತ್ತು ಇಂದಿರಾ ಗಾಂಧಿ ಅವರ ಕಾಲದಲ್ಲಿಯೂ ಒಬಿಸಿ ಕಮಿಷನ್‌ಗೆ ಸಾಂವಿಧಾನಿಕ ಸ್ಥಾನಮಾನ ನೀಡಲಿಲ್ಲ ಎಂದು ಅವರು ಹೇಳಿದರು. ವಿಶೇಷವಾಗಿ, ಮಂಡಲ ಆಯೋಗದ ಸಂದರ್ಭದಲ್ಲಿ ರಾಜೀವ್ ಗಾಂಧಿಯವರು ಒಬಿಸಿ ಮೀಸಲಾತಿಯನ್ನು ತೀವ್ರವಾಗಿ ವಿರೋಧಿಸಿದ್ದರು ಎಂಬುದನ್ನು ಜೋಶಿ ಉಲ್ಲೇಖಿಸಿದರು. 1984 ರಿಂದ 1989 ರವರೆಗೆ ಪ್ರಧಾನಮಂತ್ರಿಯಾಗಿದ್ದ ರಾಜೀವ್ ಗಾಂಧಿ ಅವರು ಸಂಸತ್ತಿನಲ್ಲಿ ಅತಿ ಉದ್ದದ ಭಾಷಣವನ್ನು ಒಬಿಸಿ ಮೀಸಲಾತಿ ಮತ್ತು ಮಂಡಲ ಕಮಿಷನ್ ವಿರುದ್ಧ ಮಾಡಿದ್ದರು ಎಂದು ಅವರು ಸ್ಮರಿಸಿದರು. ಇಂದು ರಾಹುಲ್ ಗಾಂಧಿ ಈ ಬಗ್ಗೆ ಜ್ಞಾನವಿಲ್ಲದೆ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷವು ಮಹಿಳಾ ವಿರೋಧಿ ಕೂಡ ಹೌದು ಎಂದು ಜೋಶಿ ಪ್ರತಿಪಾದಿಸಿದರು. 1996 ರಲ್ಲಿ ದೇವೇಗೌಡರ ಸರ್ಕಾರ ಮಹಿಳಾ ಮೀಸಲಾತಿಯನ್ನು ತಂದಾಗ, ಕಾಂಗ್ರೆಸ್ ಪಕ್ಷವು ಆ ಸರ್ಕಾರಕ್ಕೆ ಬೆಂಬಲ ನೀಡಿದ್ದರೂ, ಮಹಿಳಾ ಮೀಸಲಾತಿ ವಿಧೇಯಕವನ್ನು ವಿರೋಧಿಸಿತ್ತು. ಇದು ಐತಿಹಾಸಿಕ ದಾಖಲೆ ಎಂದು ಜೋಶಿ ತಿಳಿಸಿದರು. “ಅವರು ಅದನ್ನು ವಿರೋಧಿಸಿದರು” ಎಂದು ಜೋಶಿ ಪುನರುಚ್ಚರಿಸಿದರು. ಮಹಿಳಾ ಮೀಸಲಾತಿ ಜಾರಿಗೆ ಬಾರದೆ ಇರಲು ಕಾಂಗ್ರೆಸ್ ಕಾರಣವಾಗಿದ್ದು, ಆ ಮಸೂದೆಯನ್ನು ಜಾರಿಗೆ ತರುವುದು ಸಂಪೂರ್ಣವಾಗಿ ಅವರ ಕೈಯಲ್ಲಿತ್ತು ಎಂದರು. ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಪ್ರಹ್ಲಾದ್ ಜೋಶಿ, ರಾಜಕಾರಣಿಗಳು ಹೇಳಿದ್ದನ್ನು ಕೇವಲ ವರದಿ ಮಾಡುವುದಷ್ಟೇ ಅಲ್ಲದೆ, ಪ್ರತಿಯೊಬ್ಬರೂ ವಿಷಯದ ಬಗ್ಗೆ ಅಧ್ಯಯನ ಮಾಡಿ, ವಾಸ್ತವಾಂಶಗಳನ್ನು ಪರಿಶೀಲಿಸಿ ವರದಿ ಮಾಡುವಂತೆ ವಿನಂತಿಸಿದರು. 1996ರಲ್ಲಿ ಅವರು ಮಹಿಳಾ ಮೀಸಲಾತಿಯನ್ನು ವಿರೋಧಿಸಿದ್ದರೂ, ನಂತರ ಬೆಂಬಲ ನೀಡಿದಂತೆ ವರ್ತಿಸುವುದು ವಿಪರ್ಯಾಸ ಎಂದರು. ಒಟ್ಟಾರೆ, ರಾಹುಲ್ ಗಾಂಧಿ ಅವರ ಅಪ್ರಬುದ್ಧ ನಾಯಕತ್ವ ಮತ್ತು ಕಾಂಗ್ರೆಸ್‌ನ ಐತಿಹಾಸಿಕ ನಿಲುವುಗಳ ಬಗ್ಗೆ ಪ್ರಹ್ಲಾದ್ ಜೋಶಿ ತಮ್ಮ ಸುದ್ದಿಗೋಷ್ಠಿಯಲ್ಲಿ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ಹಡಗಿನ ಮೇಲೆ ಗುಂಡು ಹಾರಿಸಿದ್ದಕ್ಕೆ ಇರಾನ್​ಗೆ ಸಮನ್ಸ್ ಜಾರಿ – Kannada News | India summons Iranian envoy After Gunfire on Indian Vessels In Hormuz

ಟೆಹ್ರಾನ್, ಏಪ್ರಿಲ್ 18: ಇರಾನ್ ಇಂದು ಹಾರ್ಮುಜ್ ಜಲಸಂಧಿಯನ್ನು (Strait Of Hormuz) ದಾಟುತ್ತಿದ್ದ ಗುಂಡಿನ ದಾಳಿ ನಡೆಸಿದ್ದ 2 ಹಡಗುಗಳಲ್ಲಿ ಭಾರತದ 1 ಹಡಗು ಕೂಡ ಸೇರಿತ್ತು. ಈ ತೈಲ ಟ್ಯಾಂಕರ್ ಸುಮಾರು 2 ಮಿಲಿಯನ್ ಬ್ಯಾರೆಲ್ ಇರಾಕ್ ತೈಲವನ್ನು ಸಾಗಿಸುತ್ತಿತ್ತು. ಇದರ ಮೇಲೆ ಓಮನ್‌ನ ಉತ್ತರಕ್ಕೆ ಇರಾನ್ ನೌಕಾಪಡೆ ಗುಂಡಿನ ದಾಳಿ ನಡೆಸಿತ್ತು. ಈ ದಾಳಿಯಿಂದ 2 ಭಾರತೀಯ ಹಡಗುಗಳು ಹಾರ್ಮುಜ್ ಜಲಸಂಧಿಯಲ್ಲಿ ಯು-ಟರ್ನ್ ತೆಗೆದುಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಭಾರತ ಇರಾನ್​ಗೆ ಸಮನ್ಸ್ ಜಾರಿ ಮಾಡಿದೆ.

ಜಗ್ ಅರ್ನವ್ ಮತ್ತು ಸನ್ಮಾರ್ ಹೆರಾಲ್ಡ್ ಎಂಬ ಭಾರತದ 2 ಹಡಗುಗಳು ಹಾರ್ಮುಜ್ ಜಲಸಂಧಿಯಲ್ಲಿ ಹೋಗುತ್ತಿದ್ದಾಗ ದಾಳಿ ನಡೆಸಲಾಗಿತ್ತು. ಅವುಗಳಲ್ಲಿ ಜಗ್ ಅರ್ನವ್ ಮೇಲೆ ದಾಳಿ ನಡೆಸಲಾಯಿತು. ಇದು ಹಾರ್ಮುಜ್ ಜಲಸಂಧಿಯಲ್ಲಿ ಸಮುದ್ರ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿತು. ಹತ್ತಿರದಲ್ಲಿದ್ದ ಇನ್ನೊಂದು ಹಡಗು ಸನ್ಮಾರ್ ಹೆರಾಲ್ಡ್ ಹಾನಿಗೊಳಗಾಗಿಲ್ಲ. ಜಗ್ ಅರ್ನವ್​ಗೆ ಸಣ್ಣಪುಟ್ಟ ಹಾನಿಯಾಗಿದೆ. ಆದರೆ, ಸಿಬ್ಬಂದಿ ಸುರಕ್ಷಿತರಾಗಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ದಾಟುತ್ತಿದ್ದ ಭಾರತದ 2 ಹಡಗುಗಳ ಮೇಲೆ ಇರಾನ್​ನಿಂದ ಗುಂಡಿನ ದಾಳಿ

ಹಾರ್ಮುಜ್‌ನಲ್ಲಿರುವ ಭಾರತೀಯ ಹಡಗುಗಳ ಬಳಿ ಗುಂಡಿನ ದಾಳಿ ನಡೆದ ನಂತರ ಭಾರತವು ಇರಾನಿನ ರಾಯಭಾರಿಯನ್ನು ಕರೆಸಿ ಸಮನ್ಸ್ ನೀಡಿದೆ. ಭಾರತದ ವಿದೇಶಾಂಗ ಸಚಿವಾಲಯ ಇರಾನಿನ ರಾಯಭಾರಿ ಡಾ. ಮೊಹಮ್ಮದ್ ಫಥಾಲಿಯವರನ್ನು ಕರೆಸಿ ಈ ವಿಷಯದ ಬಗ್ಗೆ ಔಪಚಾರಿಕವಾಗಿ ನೋಟಿಸ್ ನೀಡಿದೆ.

ಇರಾನ್ ಸಂಬಂಧಿತ ಹಡಗು ಸಾಗಣೆಯ ಮೇಲಿನ ದಿಗ್ಬಂಧನವನ್ನು ಕೊನೆಗೊಳಿಸುವುದಿಲ್ಲ ಎಂದು ಅಮೆರಿಕ ಹೇಳಿದ ನಂತರ ಇರಾನ್ ಮತ್ತೆ ಹಾರ್ಮುಜ್ ಜಲಸಂಧಿಯ ಮೇಲೆ ನಿರ್ಬಂಧ ಹೇರಿದೆ. ಇರಾನ್ ಬಂದರುಗಳ ಮೇಲಿನ ಅಮೆರಿಕದ ದಿಗ್ಬಂಧನ ಜಾರಿಯಲ್ಲಿರುವವರೆಗೆ ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸಾಗಾಟವನ್ನು ನಿರ್ಬಂಧಿಸುವುದಾಗಿ ಇರಾನ್ ಎಚ್ಚರಿಸಿದೆ.

ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಹೆಜ್ಬೊಲ್ಲಾ ಉಗ್ರಗಾಮಿ ಗುಂಪಿನ ನಡುವೆ ಲೆಬನಾನ್‌ನಲ್ಲಿ 10 ದಿನಗಳ ಕದನ ವಿರಾಮದ ನಂತರ ಹಾರ್ಮುಜ್ ಜಲಸಂಧಿಯನ್ನು ವಾಣಿಜ್ಯ ಹಡಗುಗಳಿಗೆ ಸಂಪೂರ್ಣವಾಗಿ ತೆರೆಯಲಾಗಿದೆ ಎಂದು ಇರಾನ್ ನಿನ್ನೆ ಹೇಳಿತ್ತು. ಆದರೂ ಇರಾನ್​ನ ಹಡಗುಗಳ ಮೇಲಿನ ದಿಗ್ಬಂಧನ ಮುಂದುವರಿಯುತ್ತದೆ ಎಂದು ಟ್ರಂಪ್ ಪುನರುಚ್ಚರಿಸಿದ ನಂತರ ಇರಾನ್ ಅಧಿಕಾರಿಗಳು ಈ ಕ್ರಮವು ಕಳೆದ ವಾರದ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಹಾರ್ಮುಜ್ ಜಲಸಂಧಿಯನ್ನು ತೆರೆಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PM Modi Speech Today Live: ಪ್ರಧಾನಿ ಮೋದಿ ದೇಶದ ಜನರನ್ನು ಉದ್ದೇಶಿಸಿ ಭಾಷಣ ನೇರಪ್ರಸಾರ – Kannada News | PM Narendra Modi Addressing the Nation Modi Speech Live Streaming Online In Kannada

ನವದೆಹಲಿ, ಏಪ್ರಿಲ್ 18: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇದೀಗ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ನಿನ್ನೆ ನಡೆದ ವಿಶೇಷ ಸಂಸತ್ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು (Women’s Reservation Bill) ಒಳಗೊಂಡ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಸಂಸತ್ ಅಧಿವೇಶನದಲ್ಲಿ ಬಹುಮತ ಲಭ್ಯವಾಗಲಿರಲಿಲ್ಲ. ಇದರಿಂದಾಗಿ ಎನ್​ಡಿಎ ಸರ್ಕಾರದ ಬಹು ನಿರೀಕ್ಷಿತ ಮಸೂದೆ ಅಂಗೀಕಾರವಾಗಲಿಲ್ಲ. ಈ ವಿಷಯದ ಕುರಿತೂ ಇಂದಿನ ಭಾಷಣದಲ್ಲಿ ಪ್ರಧಾನಿ ಮೋದಿ ಪ್ರಸ್ತಾಪ ಮಾಡುವ ನಿರೀಕ್ಷೆಯಿದೆ. 2014ರಲ್ಲಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದಾಗಿನಿಂದ ಇದುವರೆಗೂ ನರೇಂದ್ರ ಮೋದಿ ಒಟ್ಟು 17 ಬಾರಿ ಈ ರೀತಿ ಭಾರತ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕೊನೆಯ ಬಾರಿ 2025ರ ಸೆಪ್ಟೆಂಬರ್ ತಿಂಗಳಲ್ಲಿ ಜಿಎಸ್​ಟಿ 2.0 ಸುಧಾರಣೆಯ ಬಗ್ಗೆ ಪ್ರಧಾನಿ ಮೋದಿ ಭಾಷಣ ಮಾಡಿದ್ದರು. ಇದೀಗ 18ನೇ ಬಾರಿ ದೇಶವನ್ನು ಉದ್ದೇಶಿಸಿ ಮೋದಿ ಮಾತನಾಡುತ್ತಿದ್ದಾರೆ.

Source link

ಬ್ಯಾಂಕ್​ ಕ್ಯಾಶಿಯರ್​ನಿಂದ ಅಸಭ್ಯ ವರ್ತನೆ: ಗ್ರಾಹಕರ ಎದುರೇ ಕ್ಲಾಸ್​​ ತೆಗೆದುಕೊಂಡ ಮಹಿಳಾ ಸಿಬ್ಬಂದಿ – Kannada News | Bank Cashier Misbehaves, Female Staff Member Reprimanded Publicly in Front of Customers

ಬ್ಯಾಂಕ್​​ ಸಿಬ್ಬಂದಿ ನಡುವೆ ಗಲಾಟೆ

ಚಿಕ್ಕಮಗಳೂರು, ಏಪ್ರಿಲ್​ 18: ಬ್ಯಾಂಕಿನ ಒಳಗೆ ಗ್ರಾಹಕರು ಇರುವುದನ್ನೂ ಲೆಕ್ಕಿಸದೆ ಬ್ಯಾಂಕ್ ಸಿಬ್ಬಂದಿಗಳಿಬ್ಬರು ಪರಸ್ಪರ ಕಿತ್ತಾಡಿಕೊಂಡಿರುವ ಅಹಿತಕರ ಘಟನೆ ಜಿಲ್ಲೆಯ ಎನ್.ಆರ್. ಪುರದ ಕೆನರಾ ಬ್ಯಾಂಕ್ (Canara Bank) ಶಾಖೆಯಲ್ಲಿ ನಡೆದಿದೆ. ಮಹಿಳಾ ಸಿಬ್ಬಂದಿಯೊಬ್ಬರು ಕ್ಯಾಶಿಯರ್‌ನ ಕೊರಳಪಟ್ಟಿ ಹಿಡಿದು ತರಾಟೆಗೆ ತೆಗೆದುಕೊಂಡಿರುವ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗಿದ್ದು, ಅಸಭ್ಯ ವರ್ತನೆ ಆರೋಪ ಕೇಳಿಬಂದಿದೆ.

ನಡೆದಿದ್ದೇನು?

ಎನ್.ಆರ್. ಪುರ ಕೆನರಾ ಬ್ಯಾಂಕ್ ಶಾಖೆಯ ಸಿಬ್ಬಂದಿ ದೀಪಾ ಹಾಗೂ ಆಂಧ್ರ ಮೂಲದ ಕ್ಯಾಶಿಯರ್ ಚಾಣಕ್ಯ ಎಂಬುವವರ ನಡುವೆ ಗಲಾಟೆ ನಡೆದಿದೆ. ಬ್ಯಾಂಕಿನ ದೈನಂದಿನ ಕೆಲಸದ ಅವಧಿಯಲ್ಲೇ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿ, ಅದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.

ಕೈ ಹಿಡಿದು ಎಳೆದಿದ್ದಾರೆ: ಮಹಿಳಾ ಸಿಬ್ಬಂದಿ ಗಂಭೀರ ಆರೋಪ

ಕ್ಯಾಶಿಯರ್ ಚಾಣಕ್ಯ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೀಪಾ ಆರೋಪಿಸಿದ್ದಾರೆ. ಬ್ಯಾಂಕಿಗೆ ಸಂಬಂಧಿಸಿದ ಹಣವನ್ನು ಕಟ್ಟಲು ಹೋದ ಸಂದರ್ಭದಲ್ಲಿ ಕ್ಯಾಶಿಯರ್ ತನ್ನ ಕೈ ಹಿಡಿದು ಎಳೆದಿದ್ದಾರೆ ಎಂದು ಮಹಿಳಾ ಸಿಬ್ಬಂದಿ ಗಂಭೀರ ಆರೋಪ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ದೀಪಾ, ಗ್ರಾಹಕರ ಮುಂದೆಯೇ ಕ್ಯಾಶಿಯರ್‌ನ ಕೊರಳಪಟ್ಟಿ ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಈ ವೇಳೆ ಇಬ್ಬರೂ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದ್ದಾರೆ.

ಇದನ್ನೂ ಓದಿ: ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಎನ್.ಆರ್. ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಘಟನೆ ನಡೆದಿದ್ದರೂ, ಈವರೆಗೂ ಇಬ್ಬರು ಸಿಬ್ಬಂದಿ ಪರಸ್ಪರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಯಾವುದೇ ಅಧಿಕೃತ ದೂರು ನೀಡಿಲ್ಲ. ಇನ್ನು ಬ್ಯಾಂಕಿನ ಸಾರ್ವಜನಿಕ ಸ್ಥಳದಲ್ಲಿ ನಡೆದ ಈ ಗಲಾಟೆಯನ್ನು ಅಲ್ಲಿಯೇ ಇದ್ದ ಗ್ರಾಹಕರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈ ದೃಶ್ಯಗಳು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಬ್ಯಾಂಕಿನಂತಹ ಜವಾಬ್ದಾರಿಯುತ ಸಂಸ್ಥೆಯಲ್ಲಿ ಸಿಬ್ಬಂದಿಗಳ ಇಂತಹ ವರ್ತನೆಯು ಗ್ರಾಹಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:09 pm, Sat, 18 April 26

Source link

Chanakya Niti: ಆಫೀಸ್‌ ಪಾಲಿಟಿಕ್ಸ್‌ನಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿ – Kannada News | Chanakya Niti: How to deal with office politics effectively?

ಕೆಲಸದ ಸ್ಥಳಗಳಲ್ಲಿ ಆಫೀಸ್‌ ಪಾಲಿಟಿಕ್ಸ್‌ (office politics), ಸಹದ್ಯೋಗಿಗಳ ನಡುವೆ ಮನಸ್ತಾನ, ಶೀತಲ ಸಮರ ಇದ್ದೇ ಇರುತ್ತದೆ. ಕೆಲಸದ ಟೆನ್ಷನ್‌ ಜೊತೆಗೆ ಈ ಕಿರಿಕಿರಿಗಳು ಒತ್ತಡವನ್ನು ಇನ್ನಷ್ಟು ಹೆಚ್ಚಿಸುತ್ತದೆ, ಮಾನಸಿಕ ಶಾಂತಿಯನ್ನು ಹಾಳು ಮಾಡುತ್ತದೆ. ಅಲ್ಲದೆ ಈ ಆಫೀಸ್‌ ಪಾಲಿಟಿಕ್ಸ್‌ ವೃತ್ತಿ ಜೀವನದ ಯಶಸ್ಸಿಗೂ ಅಡ್ಡಿಯನ್ನು ಉಂಟು ಮಾಡುತ್ತದೆ. ಹೀಗಿರುವಾಗ ಈ ಎಲ್ಲಾ ಕಿರಿಕಿರಿಗಳನ್ನು ಸಮರ್ಥವಾಗಿ ನಿಭಾಯಿಸೋದು ತುಂಬಾನೇ ಮುಖ್ಯವಾಗಿದೆ. ಆದರೆ ಹೆಚ್ಚಿನವರಿಗೆ ಆಫೀಸ್‌ ಒಳ ರಾಜಕೀಯಗಳನ್ನು ಸಮರ್ಥವಾಗಿ ನಿಭಾಯಿಸೋದು ಹೇಗೆ ಎಂಬುದೇ ಗೊತ್ತಿಲ್ಲ. ಚಾಣಕ್ಯರು ನೀಡಿರುವ ಈ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ಖಂಡಿತವಾಗಿಯೂ ಆಫೀಸ್‌ ಪಾಲಿಟಿಕ್ಸ್‌ ಕಿರಿಕಿರಿಯಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಬಹುದು.

ಆಫೀಸ್‌ ಪಾಲಿಟಿಕ್ಸ್‌ ಕಿರಿಕಿರಿಯನ್ನು ಸಮರ್ಥವಾಗಿ ಎದುರಿಸುವುದು ಹೇಗೆ?

ಹೆಚ್ಚು ಮಾತನಾಡುವುದನ್ನು ತಪ್ಪಿಸಿ: ಆಚಾರ್ಯ ಚಾಣಕ್ಯರ ಪ್ರಕಾರ, ನೀವು ಕಚೇರಿ ರಾಜಕೀಯವನ್ನು ತಪ್ಪಿಸಲು ಬಯಸಿದರೆ, ನೀವು ಅಗತ್ಯವಿರುವಷ್ಟು ಮಾತ್ರ ಮಾತನಾಡಬೇಕು. ಅಗತ್ಯಕ್ಕಿಂತ ಹೆಚ್ಚು ಮಾತನಾಡುವುದು ಮುಂದೊಂದು ದಿನ ನಿಮಗೆ ಹಾನಿಕಾರಕವಾಗಿ ಪರಿಣಾಮಿಸಬಹುದು.  ಮತ್ತು ಮಾತನಾಡುತ್ತಾ ನಿಮ್ಮ ಎಲ್ಲಾ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳುವ ತಪ್ಪನ್ನು ಮಾಡಬೇಡಿ. ಮಾತುಕತೆ ಯಾವಾಗಲೂ ಹಿತಮಿತವಾಗಿರಲಿ.

ಎಲ್ಲರನ್ನೂ ನಂಬಬೇಡಿ: ಕಚೇರಿಯಲ್ಲಿ, ನಿಮ್ಮ ಸ್ನೇಹಿತರು ಯಾರು ಮತ್ತು ನಿಮ್ಮ ಶತ್ರುಗಳು ಯಾರು ಎಂಬುದನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ. ನಮ್ಮ ಜೊತೆ ಒಳ್ಳೆಯವರಂತೆ ಇದ್ದುಕೊಂಡೇ ನಮ್ಮ ಬೆನ್ನಿಗೆ ಚೂರಿ ಹಾಕುವವರು ಅನೇಕರಿದ್ದಾರೆ. ಆದ್ದರಿಂದ, ಎಲ್ಲರನ್ನೂ ನಂಬಬೇಡಿ.

ಇದನ್ನೂ ಓದಿ: ಜೀವನದಲ್ಲಿ ವೇಗವಾಗಿ ಪ್ರಗತಿ ಸಾಧಿಸಲು ಚಾಣಕ್ಯರ ಸಲಹೆಗಳನ್ನು ಪಾಲಿಸಿ

ಕೆಲಸದ ಮೇಲೆ ಗಮನಹರಿಸಿ: ಆಫೀಸ್‌ ಒಳ ರಾಜಕೀಯ ಕಿರಿಕಿರಿಯಿಂದ  ತಪ್ಪಿಸಿಕೊಳ್ಳಲು ಉತ್ತಮ ಮಾರ್ಗವೆಂದರೆ ಇತರ ಸಹದ್ಯೋಗಿಗಳು ನಡೆಸುವ ಗಾಸಿಪ್‌ಗಳಲ್ಲಿ ಭಾಗಿಯಾಗದೆ ನಿಮ್ಮ ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸುವುದು. ಈ ಒಂದು ಗುಣ ನಿಮ್ಮ ಯಶಸ್ಸಿಗೂ ತುಂಬಾನೇ ಮುಖ್ಯ.  ಗಾಸಿಪ್‌ಗಳಿಗೆ ತಲೆ ಹಾಕುವುದು ಬಿಟ್ಟು ನಿಮ್ಮ ಕೆಲಸದ ಮೇಲಷ್ಟೇ ಗಮನ ವಹಿಸಿ.

ಶಾಂತವಾಗಿರಲು ಕಲಿಯಿರಿ: ಕಚೇರಿಯಲ್ಲಿ ಎಲ್ಲದಕ್ಕೂ ಪ್ರತಿಕ್ರಿಯಿಸುವುದು ಅನಿವಾರ್ಯವಲ್ಲ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ನೀವು ಶಾಂತವಾಗಿದ್ದಷ್ಟೂ ನಿಮ್ಮ ಆಲೋಚನೆ ಮತ್ತು ತಿಳುವಳಿಕೆ ಬಲವಾಗಿರುತ್ತದೆ. ಕೆಲಸದಲ್ಲಿ ವೃತ್ತಿಪರ ನಡವಳಿಕೆಯನ್ನು ಕಾಪಾಡಿಕೊಳ್ಳಿ. ಇದು ನಿಮ್ಮ ಪ್ರಗತಿಗೂ ತುಂಬಾನೇ ಮುಖ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:09 pm, Sat, 18 April 26

Source link

Exit mobile version