ಎಲ್ಲಾ 108 ಟಿವಿಕೆ ಶಾಸಕರ ರಾಜೀನಾಮೆ ಬೆದರಿಕೆ; ಡಿಎಂಕೆ ಜೊತೆ ಮೈತ್ರಿಗೆ ಎಐಎಡಿಎಂಕೆ ಪ್ರಯತ್ನ; ತಮಿಳುನಾಡಿನಲ್ಲಿ ರಾಜಕೀಯ ರಂಗು – Kannada News | TVK warns of resignation of all its MLAs, as AIADMK tries coalition with DMK for Power in Tamil Nadu

ಚೆನ್ನೈ, ಮೇ 8: ತಮಿಳುನಾಡು ವಿಧಾನಸಭಾ ಚುನಾವಣೆಯು (Tamil Nadu Assembly Elections) ಅತಂತ್ರ ಫಲಿತಾಂಶ ಕೊಟ್ಟಿರುವುದು ವಿವಿಧ ರಾಜಕೀಯ ಬಣ್ಣಗಳು ಹೊರಬರಲು ಕಾರಣವಾಗಿದೆ. 108 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಬಹುಮತ ಸಿಗುವಂತಹ ಬೆಂಬಲ ಬಂದಿಲ್ಲ. ಹೀಗಾಗಿ, ಸರ್ಕಾರ ರಚನೆಗೆ ರಾಜ್ಯಪಾಲರಿಂದ ಅನುಮತಿ ಸಿಕ್ಕಿಲ್ಲ. ಇನ್ನೊಂದೆಡೆ, ತನ್ನ ಬದ್ಧ ವೈರಿ ಡಿಎಂಕೆ ಜೊತೆ ಕೈ ಜೋಡಿಸಿ ಸರ್ಕಾರ ರಚನೆಗೆ ಎಐಎಡಿಎಂಕೆ ಇಂಗಿತ ಹೊಂದಿದಂತಿದೆ. ರೆಸಾರ್ಟ್ ಪೊಲಿಟಿಕ್ಸ್ ಕೂಡ ಶುರುವಾಗಿದೆ.

ತಮಿಳಗ ವೆಟ್ರಿ ಕಳಗಂನ ಎಲ್ಲಾ ಶಾಸಕರು ರಾಜೀನಾಮೆಗೆ ಸಿದ್ಧ

ತಮಿಳುನಾಡು ಜನಾದೇಶ ತಮ್ಮ ಪಕ್ಷದ ಪರವಾಗಿದೆ. ಇದನ್ನೂ ಮೀರಿ ಡಿಎಂಕೆ ಮತ್ತು ಎಐಡಿಎಂಕೆ ಸಮ್ಮಿಶ್ರ ಸರ್ಕಾರ ರಚನೆಗೆ ಮುಂದಾದಲ್ಲಿ ತಮ್ಮ ಎಲ್ಲಾ 108 ಶಾಸಕರೂ ರಾಜೀನಾಮೆ ನೀಡುತ್ತಾರೆ ಎಂದು ಟಿವಿಕೆ ಬೆದರಿಕೆ ಹಾಕಿದೆ.

234 ವಿಧಾನಸಭಾ ಕ್ಷೇತ್ರಗಳಿರುವ ತಮಿಳುನಾಡಿನಲ್ಲಿ ಟಿವಿಕೆ 108 ಸ್ಥಾನ ಪಡೆದಿದೆ. ಡಿಎಂಕೆ ಮೈತ್ರಿಕೂಟ 73, ಎಐಎಡಿಎಂಕೆ ಮೈತ್ರಿಕೂಟ 53 ಸ್ಥಾನಗಳನ್ನು ಹೊಂದಿವೆ. ಇಲ್ಲಿ ಡಿಎಂಕೆ 59 ಸ್ಥಾನ ಹಾಗೂ ಎಐಎಡಿಎಂಕೆ 47 ಸ್ಥಾನಗಳನ್ನು ಹೊಂದಿವೆ. ಎರಡೂ ಸೇರಿಸಿದರೆ 106 ಸ್ಥಾನಗಳಾಗುತ್ತವೆ. ಆಗಲೂ ಬೇರೆ ಬೇರೆ ಪಕ್ಷಗಳ ಬೆಂಬಲ ಬೇಕಾಗುತ್ತದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಸರ್ಕಾರ ರಚನೆ ಬಿಕ್ಕಟ್ಟು; ಎಡಪಕ್ಷಗಳ ಬೆಂಬಲ ಕೋರಿದ ಟಿವಿಕೆ

ಡಿಎಂಕೆ ಜೊತೆ ಕೈಜೋಡಿಸಲು ಎಐಎಡಿಎಂಕೆ ಪಕ್ಷವು ಎನ್​ಡಿಎ ಮೈತ್ರಿಕೂಟ ತ್ಯಜಿಸಲು ಸಿದ್ಧವಿದೆ. ಸಮ್ಮಿಶ್ರ ಸರ್ಕಾರದ ಪ್ರಸ್ತಾಪವನ್ನು ಈ ಪಕ್ಷವೇ ಮಾಡಿದೆ. ಡಿಎಂಕೆಯಿಂದ ಇನ್ನೂ ಕೂಡ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಟಿವಿಕೆಗೆ ಸರ್ಕಾರ ರಚಿಸುವ ಅವಕಾಶ ತಪ್ಪಿಸಿದ ಆರೋಪ ತನಗೆ ಬಂದುಬಿಟ್ಟರೆ ಎನ್ನುವ ಭಯ ಡಿಎಂಕೆಯದ್ದು. ಹೀಗಾಗಿ, ಟಿವಿಕೆ ಸರ್ಕಾರ ರಚನೆಯಾಗಿ ಆರು ತಿಂಗಳು ಕಾದು ಆ ನಂತರ ಯೋಚಿಸೋಣ ಎಂದು ಡಿಎಂಕೆ ಹೇಳುತ್ತಿದೆ.

ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಈಗಾಗಲೇ ಬೆಂಬಲ ನೀಡುವುದಾಗಿ ಘೋಷಿಸಿದೆ. ಕಾಂಗ್ರೆಸ್​ನ ಐವರು ಶಾಸಕರಿದ್ದಾರೆ. ಒಟ್ಟು ನಾಲ್ವರು ಶಾಸಕರಿರುವ ಎರಡು ಎಡಪಕ್ಷಗಳ ಬೆಂಬಲವನ್ನು ಟಿವಿಕೆ ಯಾಚಿಸಿದೆ. ಮುಸ್ಲಿಮ್ ಲೀಗ್​ನ ಇಬ್ಬರು ಶಾಸಕರಿದ್ದಾರೆ. ಇವರೆಲ್ಲರೂ ಕೈಜೋಡಿಸಿದರೆ ಟಿವಿಕೆಗೆ ಬಹುಮತ ಸಿಗಬಹುದು. ಆದರೂ ಕೂಡ ತಮಿಳುನಾಡಿನಲ್ಲಿ ರಾಜಕೀಯ ಚದುರಂಗದಾಟ ಚಾಲನೆಗೊಂಡಿದೆ.

ಎಲ್ಲಾ ಟಿವಿಕೆ ಶಾಸಕರು ರಾಜೀನಾಮೆ ನೀಡಿದರೆ ಏನಾಗುತ್ತೆ?

ಎಲ್ಲಾ 108 ಟಿವಿಕೆ ಶಾಸಕರು ರಾಜೀನಾಮೆ ನೀಡಿದರೆ ಆಗ ವಿಧಾನಸಭೆಯ ಗಾತ್ರ 234ರಿಂದ 126ಕ್ಕೆ ಇಳಿಯುತ್ತದೆ. ಬಹುಮತ ಸಾಬೀತು ಮಾಡಲು ಬೇಕಾದ ಶಾಸಕರ ಬೆಂಬಲ 64 ಮಾತ್ರವೇ ಬೇಕಾಗುತ್ತದೆ. ಆಗ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಸುಲಭವಾಗಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಬಹುದು.

ಇದನ್ನೂ ಓದಿ: ತಮಿಳುನಾಡಲ್ಲಿ ಸರ್ಕಾರ ರಚನೆಗೆ ಟಿವಿಕೆಗೆ ಸಂಖ್ಯಾಬಲದ ಹೋರಾಟ, ಅತ್ತ ಬಿಹಾರ ರಾಜಕಾರಣದಲ್ಲಿ ಹೊಸ ಚದುರಂಗದಾಟ!

ಟಿವಿಕೆ ಶಾಸಕರ ರಾಜೀನಾಮೆ ಬಳಿಕ ಆ 108 ಸ್ಥಾನಗಳಿಗೆ ಉಪಚುನಾವಣೆ ನಡೆಯಬಹುದು. ಅಲ್ಲಿ ಮತ್ತೆ ಎಲ್ಲಾ ಸ್ಥಾನಗಳಿಗೂ ಟಿವಿಕೆ ಅಭ್ಯರ್ಥಿಗಳೇ ಆಯ್ಕೆಯಾದರೆ ಮತ್ತೆ ರಾಜಕೀಯ ಸಮಸ್ಯೆ ಎದುರಾಗುತ್ತದೆ. ತಮಿಳುನಾಡಿಗೆ ಮತ್ತೊಮ್ಮೆ ಮರುಚುನಾವಣೆ ನಡೆಸಿದರೂ ಅಚ್ಚರಿ ಇಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಾಜಕೀಯದ ಕಾರಣಕ್ಕೆ ತಂದೆ-ತಾಯಿ ಮೇಲೆ ದೂರು ನೀಡಿದ್ದ ವಿಜಯ್ – Kannada News | Vijay once gave complaint against his own parents related to politics

ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ (Thalapathy Vijay), ತಮಿಳುನಾಡಿನ ಸಿಎಂ ಆಗುವ ಹೊಸ್ತಿಲಲ್ಲಿದ್ದಾರೆ. ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆ (ತಮಿಳ್ ವೆಟ್ರಿ ಕಳಗಂ) ಪಕ್ಷ 108 ಸೀಟುಗಳಲ್ಲಿ ಜಯಗಳಿಸಿದೆ. ಕಾಂಗ್ರೆಸ್ ಪಕ್ಷದ ಐದು ಸದಸ್ಯರು ಟಿವಿಕೆಗೆ ಬೆಂಬಲ ಘೋಷಿಸಿದ್ದಾರೆ. ವಿಜಯ್ ಸಿಎಂ ಆಗಲು ಇನ್ನೈದು ಸೀಟುಗಳ ಅವಶ್ಯಕತೆ ಇದೆ. ಪಕ್ಷ ಕಟ್ಟಿದ ಕೇವಲ ಎರಡು ವರ್ಷದಲ್ಲಿ ವಿಜಯ್ ಜಯ ಗಳಿಸಿರುವುದು ಸಹಜವಾಗಿಯೇ ಅಭಿಮಾನಿಗಳಿಗೆ ಖುಷಿ ತಂದಿದೆ. ಅವರ ಪೋಷಕರು ಹಾಗೂ ಕುಟುಂಬದವರಿಗೂ ಖುಷಿ ತಂದಿದೆ. ಆದರೆ ಆರು ವರ್ಷದ ಹಿಂದೆ ಇದೇ ವಿಜಯ್ ಅವರು ರಾಜಕೀಯದ ಕಾರಣಕ್ಕೆ ತಮ್ಮ ಸ್ವಂತ ಪೋಷಕರ ವಿರುದ್ಧವೇ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ವಿಜಯ್ ಅವರ ತಂದೆ ಎಸ್​​ಎ ಚಂದ್ರಶೇಖರ್ ತಮಿಳು ಚಿತ್ರರಂಗದ ಜನಪ್ರಿಯ ನಿರ್ದೇಶಕ, ನಿರ್ಮಾಪಕ ಮತ್ತು ನಟ ಸಹ. ತಮ್ಮ ಮಗ ಸ್ಟಾರ್ ಆಗುವಲ್ಲಿ ಎಸ್​​ಎ ಚಂದ್ರಶೇಖರ್ ಅವರ ಪಾಲು ದೊಡ್ಡದಿದೆ. ಆರಂಭದ ದಿನಗಳಲ್ಲಿ ವಿಜಯ್ ಅವರಿಗೆ ಸಿನಿಮಾ ನಿರ್ದೇಶನ, ನಿರ್ಮಾಣ ಮಾಡುವ ಜೊತೆಗೆ ಮಗನ ಸಿನಿಮಾಗಳ ಚಿತ್ರಕತೆ, ಶೂಟಿಂಗ್ ಇನ್ನಿತರೆಗಳ ನಿರ್ವಹಣೆಯನ್ನು ಎಸ್​​ಎ ಚಂದ್ರಶೇಖರ್ ಅವರೇ ಖುದ್ದಾಗಿ ಮಾಡುತ್ತಿದ್ದರು.

ವಿಜಯ್ ಅವರ ಇಂದಿನ ರಾಜಕೀಯ ಯಶಸ್ಸಿಗೆ ಕಾರಣವಾದ ವಿಜಯ್ ಅವರ ಅಭಿಮಾನಿ ಸಂಘ ‘ವಿಜಯ್ ಮಕ್ಕಳ್ ಇಯಕ್ಕಂ’ ಸ್ಥಾಪನೆ ಮತ್ತು ಅದರ ಕಾರ್ಯಚಟುವಟಿಕೆಯಲ್ಲಿಯೂ ಎಸ್​​ಎ ಚಂದ್ರಶೇಖರ್ ಸಕ್ರಿಯವಾಗಿ ತೊಡಗಿಕೊಂಡಿದ್ದರು. ವಿಜಯ್ ಅವರು ರಾಜಕೀಯಕ್ಕೆ ಬರಬೇಕು ಎಂಬ ಕೂಗು ದೊಡ್ಡದಾಗುತ್ತಿದ್ದ ಸಮಯದಲ್ಲಿ ಅಂದರೆ 2020ರ ಸಮಯದಲ್ಲಿ ಎಸ್​​ಎ ಚಂದ್ರಶೇಖರ್ ‘ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ’ ಹೆಸರಿನ ರಾಜಕೀಯ ಪಕ್ಷವನ್ನು ನೊಂದಣಿ ಮಾಡಿಸಿದ್ದರು. ಅದರಲ್ಲಿ ಸ್ವತಃ ತಾವು ಹಾಗೂ ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ ಅವರು ಆಫೀಸ್ ಬೇರರ್ ಆಗಿದ್ದರು.

ಇದನ್ನೂ ಓದಿ:ದಳಪತಿ ವಿಜಯ್ 80 ಕೋಟಿ ರೂ. ನಿವಾಸಕ್ಕೆ ಹಾಲಿವುಡ್​ ನಟನ ಈ ಮನೆಯೇ ಸ್ಫೂರ್ತಿ

ಆದರೆ ಇದು ವಿಜಯ್ ಅವರಿಗೆ ಸರಿ ಬರಲಿಲ್ಲ, ಬಹಿರಂಗ ಪ್ರಕಟಣೆ ಹೊರಡಿಸಿದ ವಿಜಯ್, ತಮ್ಮ ತಂದೆ ಕಟ್ಟಿರುವ ಪಾರ್ಟಿಗೂ ತಮಗೂ ಸಂಬಂಧವಿಲ್ಲ ಎಂದರು. ಬಳಿಕ ವಿಜಯ್ ಅವರು ಚೆನ್ನೈ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ತಮ್ಮ ತಂದೆ ಪ್ರಾರಂಭಿಸಿರುವ ಪಕ್ಷವನ್ನು ರದ್ದು ಮಾಡಬೇಕೆಂದು ಹಾಗೂ ಆ ಪಕ್ಷದಲ್ಲಿ ತಮ್ಮ ಹೆಸರು ಹಾಗೂ ಚಿತ್ರವನ್ನು ಬಳಸಬಾರದೆಂದು ಆದೇಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅಂತೆಯೇ ನ್ಯಾಯಾಲಯ ಸಹ ವಿಜಯ್ ಪರವಾಗಿಯೇ ಆದೇಶ ನೀಡಿತ್ತು. ಬಳಿಕ ಎಸ್​​ಎ ಚಂದ್ರಶೇಖರ್ ಅವರು ನ್ಯಾಯಾಲಯಕ್ಕೆ ಅಪಿಢವಿಟ್ ಸಲ್ಲಿಸಿ, ಪಕ್ಷಕ್ಕೆ ಸಂಬಂಧಿಸಿದಂತೆ ವಿಜಯ್ ಅವರ ಚಿತ್ರ, ಹೆಸರು ಬಳಸುವುದಿಲ್ಲ ಎಂದರು. ಅದರ ಮರು ವರ್ಷ ಅಂದರೆ 2021 ರಲ್ಲಿ ಆ ಪಕ್ಷವನ್ನು ರದ್ದು ಸಹ ಮಾಡಿದರು.

ವಿಜಯ್ ಮೊದಲಿನಿಂದಲೂ ಬಹಿರಂಗವಾಗಿ ಮಾತನಾಡಿದವರಲ್ಲ, ಆದರೆ ವಿಜಯ್ ಅವರ ತಂದೆ ಮಗನ ಪರವಾಗಿ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡುತ್ತಲೇ ಬರುತ್ತಿದ್ದರು. ‘ಮರ್ಸೆಲ್’ ಸಿನಿಮಾ ವಿವಾದ ಸೇರಿದಂತೆ ವಿಜಯ್ ಬಗ್ಗೆ ಯಾವುದೇ ವಿವಾದಗಳು ಬಂದಾಗಲೆಲ್ಲ ಎಸ್​ಎ ಚಂದ್ರಶೇಖರ್ ಮಗನ ಪರವಾಗಿ ಸಮರ್ಥನೆಗಳನ್ನು ನೀಡುತ್ತಿದ್ದರು. ವಿಜಯ್ ರಾಜಕೀಯಕ್ಕೆ ಬರಬೇಕೆಂಬುದು ಅವರ ತಂದೆಯ ಆಸೆಯಾಗಿತ್ತು. ಅದರಂತೆ ಈಗ ವಿಜಯ್ ರಾಜಕೀಯ ಪಕ್ಷ ಕಟ್ಟಿ ಭಾರಿ ಯಶಸ್ಸು ಸಾಧಿಸಿದ್ದಾರೆ. ಈಗ ವಿಜಯ್ ಅವರಿಗೆ ಸಿಎಂ ಆಗಲು ಇನ್ನೈದು ಸೀಟುಗಳ ಅವಶ್ಯಕತೆ ಇದೆ. ವಿಜಯ್ ಸಿಎಂ ಆಗುತ್ತಾರಾ? ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

NCS Portal: ಕೇಂದ್ರ ಸರ್ಕಾರದಿಂದ ಬಂಪರ್ ಆಫರ್, ಮನೆಯಿಂದಲೇ ಕೆಲಸ ಮಾಡಿ ಹಣ ಗಳಿಸಿ; ಇಲ್ಲಿದೆ ಉದ್ಯೋಗಗಳ ಮಹಾಪೂರ – Kannada News | NCS Portal: 7 Lakh WFH Jobs! Apply Now for Government Backed Online Work in India

ಕೇಂದ್ರ ಸರ್ಕಾರದಿಂದ ಬಂಪರ್ ಆಫರ್Image Credit source: Ai generated

ಇಂದಿನ ವೇಗದ ಬದುಕಿನಲ್ಲಿ ‘ವರ್ಕ್ ಫ್ರಮ್ ಹೋಮ್‘ (Work From Home) ಎಂಬುದು ಕೇವಲ ಒಂದು ಆಯ್ಕೆಯಾಗಿ ಉಳಿದಿಲ್ಲ, ಅದೊಂದು ಅವಶ್ಯಕತೆಯಾಗಿದೆ. ವಿದ್ಯಾರ್ಥಿಗಳು, ಗೃಹಿಣಿಯರು ಮತ್ತು ವೃತ್ತಿಪರರು ಪ್ರಯಾಣದ ಸಮಯ ಉಳಿಸಲು ಮತ್ತು ವೃತ್ತಿ-ವೈಯಕ್ತಿಕ ಜೀವನದ ಸಮತೋಲನಕ್ಕಾಗಿ ಮನೆಯಿಂದಲೇ ಕೆಲಸ ಮಾಡಲು ಇಚ್ಛಿಸುತ್ತಾರೆ. ಇಂತಹವರಿಗಾಗಿ ಭಾರತ ಸರ್ಕಾರದ ರಾಷ್ಟ್ರೀಯ ವೃತ್ತಿ ಸೇವೆ (NCS) ಪೋರ್ಟಲ್ ಈಗ ಬೃಹತ್ ಅವಕಾಶಗಳನ್ನು ಹೊತ್ತು ತಂದಿದೆ.

ಏನಿದು NCS ಪೋರ್ಟಲ್?

ರಾಷ್ಟ್ರೀಯ ವೃತ್ತಿ ಸೇವೆ (National Career Service – NCS) ಎಂಬುದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಒಂದು ಡಿಜಿಟಲ್ ವೇದಿಕೆಯಾಗಿದೆ. ದೇಶದ ಯುವಜನತೆಗೆ ಉದ್ಯೋಗ, ತರಬೇತಿ ಮತ್ತು ವೃತ್ತಿ ಸಮಾಲೋಚನೆಯನ್ನು ಒಂದೇ ಸೂರಿನಡಿ ನೀಡುವುದು ಇದರ ಮುಖ್ಯ ಉದ್ದೇಶ. ಇಲ್ಲಿ ಸರ್ಕಾರಿ ಮತ್ತು ಪ್ರತಿಷ್ಠಿತ ಖಾಸಗಿ ಕಂಪನಿಗಳ ಉದ್ಯೋಗ ಮಾಹಿತಿಗಳು ಲಭ್ಯವಿರುತ್ತವೆ.

NCS ಪೋರ್ಟಲ್‌ನ ಪ್ರಮುಖ ಅಂಶಗಳು:

ಸದ್ಯ ಪೋರ್ಟಲ್‌ನಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 7 ಲಕ್ಷಕ್ಕೂ ಅಧಿಕ ಉದ್ಯೋಗಾವಕಾಶಗಳಿವೆ. ಸಾವಿರಾರು ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವ (WFH) ಅವಕಾಶಗಳನ್ನು ಪಟ್ಟಿ ಮಾಡಿವೆ. ಅಭ್ಯರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಹುಡುಕಬಹುದು.

ಬೃಹತ್ ಕಂಪನಿಗಳ ಸಹಯೋಗ:

ಇತ್ತೀಚೆಗೆ ಅಮೆಜಾನ್ ಮತ್ತು ಸ್ವಿಗ್ಗಿ ಸೇರಿದಂತೆ 10ಕ್ಕೂ ಹೆಚ್ಚು ಪ್ರಮುಖ ಕಂಪನಿಗಳೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು, ಸುಮಾರು 5 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಇದು ನೇರವಾಗಿ ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವುದರಿಂದ, ಉದ್ಯೋಗಾಕಾಂಕ್ಷಿಗಳಿಗೆ ಭದ್ರತೆ ಮತ್ತು ಪಾರದರ್ಶಕತೆಯ ಭರವಸೆ ಇರುತ್ತದೆ.

ಉದ್ಯೋಗ ಹುಡುಕುವುದು ಹೇಗೆ?

NCS ಪೋರ್ಟಲ್ ಮೂಲಕ ಉದ್ಯೋಗ ಪಡೆಯಲು ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು:

  • ಮೊದಲು www.ncs.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ‘Sign Up’ ಬಟನ್ ಕ್ಲಿಕ್ ಮಾಡುವ ಮೂಲಕ ನೋಂದಾಯಿಸಿಕೊಳ್ಳಿ.
  • ನಿಮ್ಮ ಶಿಕ್ಷಣ, ಕೌಶಲ್ಯ (Skills) ಮತ್ತು ಅನುಭವದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಪ್‌ಲೋಡ್ ಮಾಡಿ.
  • ಸರ್ಚ್ ಬಾರ್‌ನಲ್ಲಿ ‘Work from Home’ ಅಥವಾ ನಿಮ್ಮ ಇಷ್ಟದ ಹುದ್ದೆಯ ಹೆಸರನ್ನು ಟೈಪ್ ಮಾಡಿ.
  • ನಿಮ್ಮ ಅರ್ಹತೆಗೆ ಸರಿಹೊಂದುವ ಉದ್ಯೋಗವನ್ನು ಆರಿಸಿ ‘Apply’ ಬಟನ್ ಕ್ಲಿಕ್ ಮಾಡಿ.

ಇದನ್ನೂ ಓದಿ: ಇನ್ಫೋಸಿಸ್‌ನಿಂದ ಭರ್ಜರಿ ಉದ್ಯೋಗಾವಕಾಶ; 20,000 ಫ್ರೆಶರ್ಸ್‌ ನೇಮಕಾತಿ ಘೋಷಣೆ

ವೃತ್ತಿಜೀವನಕ್ಕೆ ಹೊಸ ತಿರುವು:

ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಅವರ ನೇತೃತ್ವದಲ್ಲಿ NCS ಪೋರ್ಟಲ್ ಅನ್ನು ಇ-ಮೈಗ್ರೇಟ್ ಮತ್ತು ಮೈ ಭಾರತ್ (My Bharat) ಪ್ಲಾಟ್‌ಫಾರ್ಮ್‌ಗಳೊಂದಿಗೆ ಸಂಯೋಜಿಸಲಾಗಿದೆ. ಇದರಿಂದಾಗಿ ಉದ್ಯೋಗಾಕಾಂಕ್ಷಿಗಳಿಗೆ ಕೇವಲ ಕೆಲಸ ಮಾತ್ರವಲ್ಲದೆ, ಕೌಶಲ್ಯ ಅಭಿವೃದ್ಧಿ ತರಬೇತಿ ಮತ್ತು ವೃತ್ತಿ ಸಮಾಲೋಚನೆಯೂ ಸುಲಭವಾಗಿ ದೊರೆಯುತ್ತಿದೆ.

ನೀವು ಮನೆಯಿಂದಲೇ ಕೆಲಸ ಮಾಡುವ ಮೂಲಕ ಸ್ವಾವಲಂಬಿಯಾಗಲು ಬಯಸುತ್ತಿದ್ದರೆ, ಇಂದೇ NCS ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಿ ಮತ್ತು ನಿಮ್ಮ ಕನಸಿನ ವೃತ್ತಿಜೀವನವನ್ನು ಆರಂಭಿಸಿ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಫಿತೋಟದಲ್ಲಿ ನಾಪತ್ತೆಯಾಗಿದ್ದ 1.5 ವರ್ಷದ ಮಗು 12 ಗಂಟೆ ಬಳಿಕ ಸುರಕ್ಷಿತವಾಗಿ ಪತ್ತೆ!: ಹೇಗಿತ್ತು ಗೊತ್ತಾ ಖಾಕಿ ಕಾರ್ಯಾಚರಣೆ? – Kannada News | Chikmagalur Police Rescue Lost Toddler in Coffee Estate After 12 Hour Operation

ಚಿಕ್ಕಮಗಳೂರು, ಮೇ 08: ಆಟವಾಡುವ ವೇಳೆ ಕಾಫಿ ತೋಟದಲ್ಲಿ ನಾಪತ್ತೆಯಾಗಿದ್ದ ಮಗುವನ್ನು 12 ಗಂಟೆ ಕಾರ್ಯಾಚರಣೆ ನಡೆಸಿ ಪೊಲೀಸರು ಪತ್ತೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೆಳಗೂರು ಗ್ರಾಮದಲ್ಲಿ ನಡೆದಿದೆ. ಟೀ ಎಸ್ಟೇಟ್​ನಲ್ಲಿ ಕೆಲಸಕ್ಕೆ ಬಂದಿದ್ದ ಮಧ್ಯಪ್ರದೇಶ ಮೂಲದ ಗೋನು, ಸೋನು ದಂಪತಿಯ 1.5 ವರ್ಷದ ಗಂಡು ಮಗು ನಿನ್ನೆ ಸಂಜೆ ಕಳೆದುಹೋಗಿತ್ತು. ಮೂಡಿಗೆರೆ ಸಿಪಿಐ, ಬಾಳೂರು ಪಿಎಸ್​​ಐ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಮಗುವನ್ನು ಪತ್ತೆ ಹಚ್ಚುವಲ್ಲಿ ತಂಡ ಯಶಸ್ವಿಯಾಗಿದೆ.

  • ಆಟವಾಡುವ ವೇಳೆ ಕಾಫಿ ತೋಟದಲ್ಲಿ ನಾಪತ್ತೆಯಾಗಿದ್ದ ಮಗು ಪತ್ತೆ
  • 12 ಗಂಟೆ ಕಾರ್ಯಾಚರಣೆ ನಡೆಸಿ 1.5 ವರ್ಷದ ಗಂಡು ಮಗುವಿನ ರಕ್ಷಣೆ
  • ಚಿಕ್ಕಮಗಳೂರಿನ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಮೂವರು ಮಕ್ಕಳ ಜೊತೆ ಆಡವಾಡುತ್ತಾ ಕಾಫಿ ತೋಟಕ್ಕೆ ಬಂದಿದ್ದ ಮಗು ನಾಪತ್ತೆಯಾಗಿತ್ತು. ತೀವ್ರ ಹುಡುಕಾಟದ ನಂತರ ಮಗು ಸುರಕ್ಷಿತವಾಗಿ ಪತ್ತೆಯಾಗಿದ್ದು, ಶೋಧ ನಡೆಸುವವರ ಕಣ್ಣಿಗೆ ಮಗು ಬೀಳುವಾಗ ಅದು ಮಲಗಿತ್ತು ಎಂಬುದು ಗೊತ್ತಾಗಿದೆ. ನಿನ್ನೆ ಸಂಜೆ ಕಳೆದುಹೋಗಿದ್ದ ಮಗುವನ್ನು ಸತತ ಕಾರ್ಯಾಚರಣೆ ನಡೆಸಿರುವ ಪೊಲೀಸರು ಇಂದು ಬೆಳಗ್ಗೆ ತೋಟದಲ್ಲಿ ಪತ್ತೆಮಾಡಿ, ಹೆತ್ತವರ ಮಡಿಲಿಗೆ ಮರಳಿ ಸೇರಿಸಿದ್ದಾರೆ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

(ಮಾಹಿತಿ ಅಪ್ಡೇಟ್​​ ಆಗುತ್ತಿದೆ)

Source link

ಜೀವ ಉಳಿಸುವ ಆಸ್ಪತ್ರೆಯೆದುರೇ ಇದೆ ಜೀವಕ್ಕೆ ಮಾರಕವಾದ ಗೋಡೆ! ಶಿಥಿಲಗೊಂಡ ಕಲ್ಲು ಗೋಡೆಗಳು ಹೇಗಿವೆ ನೋಡಿ – Kannada News | Bengaluru Reality Check: Deadly Minto Hospital Wall Poses Threat to Public After Bowring Tragedy

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ನ್ಯೂ ತರಗುಪೇಟೆ ಮುಖ್ಯರಸ್ತೆಯಲ್ಲಿರುವ ವಿಕ್ಟೋರಿಯಾ ಆಸ್ಪತ್ರೆ ಆವರಣದ ಮಿಂಟೋ ಕಣ್ಣಿನ ಆಸ್ಪತ್ರೆಯ ಕಲ್ಲಿನ ಗೋಡೆ ಸಂಪೂರ್ಣ ಶಿಥಿಲಗೊಂಡಿದೆ. ದಶಕಗಳಷ್ಟು ಹಳೆಯದಾದ ಈ ಕಲ್ಲಿನ ಗೋಡೆ ಯಾವಾಗ ಬೇಕಾದರೂ ಕುಸಿಯುವ ಸ್ಥಿತಿಯಲ್ಲಿದ್ದು, ಹಾದಿಹೋಕರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದೆ.

Source link

‘ಏಕ್ ದಿನ್’ ಸೋಲು, ಪಾತ್ರದ ಬಗ್ಗೆ ಸಾಯಿ ಪಲ್ಲವಿ ನೆಗೆಟಿವ್ ಕಮೆಂಟ್ – Kannada News | Sai Pallavi said she was mis cast in Ek Din movie

ಸಾಯಿ ಪಲ್ಲವಿ (Sai Pallavi) ದಕ್ಷಿಣ ಭಾರತದ ಸ್ಟಾರ್ ನಟಿ. ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಸಾಯಿ ಪಲ್ಲವಿ ದೊಡ್ಡ ಅಭಿಮಾನಿ ವರ್ಗವನ್ನು ಇಲ್ಲಿ ಹೊಂದಿದ್ದಾರೆ. ಅವರ ನೃತ್ಯ, ನಟನಾ ಪ್ರತಿಭೆ ಮತ್ತು ವ್ಯಕ್ತಿತ್ವಕ್ಕೆ ಅಭಿಮಾನಿಗಳು ಮಾರು ಹೋಗಿದ್ದಾರೆ. ಜಾಹೀರಾತುಗಳಲ್ಲಿ ನಟಿಸದ ಮತ್ತು ಸಿನಿಮಾಗಳನ್ನು ಸಹ ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುವ ಈ ನಟಿ ಇತ್ತೀಚೆಗೆ ಹಿಂದಿ ಸಿನಿಮಾ ಒಂದರಲ್ಲಿ ನಟಿಸಿದ್ದು, ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಫ್ಲಾಪ್ ಆಗಿದೆ. ಆದರೆ ಸಿನಿಮಾ ಫ್ಲಾಪ್ ಆದ ಬಳಿಕ ಸಾಯಿ ಪಲ್ಲವಿ ನೀಡಿರುವ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಆಮಿರ್ ಖಾನ್ ಪುತ್ರ ಜುನೈದ್ ಖಾನ್ ನಾಯಕನಾಗಿ ನಟಿಸಿರುವ ‘ಏಕ್ ದಿನ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾ ಫ್ಲಾಪ್ ಆಗಿದೆ. ಸಿನಿಮಾ ನೋಡಿದವರು ಸಾಯಿ ಪಲ್ಲವಿಯ ಹಿಂದಿಯ ಬಗ್ಗೆ ಟ್ರೋಲ್ ಮಾಡಿದ್ದಾರೆ. ಸಿನಿಮಾಕ್ಕೆ ಸಾಯಿ ಪಲ್ಲವಿ ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ಸಹ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ಚಿತ್ರತಂಡವು ‘ಏಕ್ ದಿನ್ ಕಿ ಮೆಹಫಿಲ್’ ಎಂಬ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಸಾಯಿ ಪಲ್ಲವಿ ಅವರು ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುವಾಗ ಹಿಂದಿ ಭಾಷೆಯಲ್ಲಿ ಮಾತನಾಡಲು ಕಷ್ಟಪಟ್ಟಿದ್ದರು. ಇದಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅವರು ತೀವ್ರವಾಗಿ ಟ್ರೋಲ್‌ಗೆ ಒಳಗಾಗಿದ್ದರು. ಅಷ್ಟೇ ಅಲ್ಲದೆ, ನಿತೇಶ್ ತಿವಾರಿ ಅವರ ‘ರಾಮಾಯಣ: ಭಾಗ 1’ ಚಿತ್ರದಲ್ಲಿ ಸೀತೆಯ ಪಾತ್ರಕ್ಕೆ ಅವರು ಸೂಕ್ತವಲ್ಲ ಎಂದೂ ನೆಟ್ಟಿಗರು ಕಮೆಂಟ್ ಮಾಡಿದ್ದರು. ಈ ಎಲ್ಲಾ ಟೀಕೆಗಳ ಬೆನ್ನಲ್ಲೇ, ಆಮೀರ್ ಖಾನ್ ನಿರ್ಮಾಣದ ‘ಏಕ್ ದಿನ್’ ಚಿತ್ರಕ್ಕೆ ತಾವು ‘ಮಿಸ್‌ಕಾಸ್ಟ್’ (ತಪ್ಪು ಆಯ್ಕೆ) ಎಂದು ಸಾಯಿ ಪಲ್ಲವಿ ಇತ್ತೀಚೆಗೆ ಹೇಳಿಕೊಂಡಿದ್ದಾರೆ.

ಆಮೀರ್ ಖಾನ್ ಟಾಕೀಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋವೊಂದರಲ್ಲಿ, ಸಾಯಿ ಪಲ್ಲವಿ ಅವರು ಚಿತ್ರದ ಪ್ರೀಮಿಯರ್ ಸಮಯದಲ್ಲಿ ಆಮೀರ್ ಖಾನ್ ಅವರೊಂದಿಗೆ ನಡೆಸಿದ ಸಂಭಾಷಣೆಯ ಬಗ್ಗೆ ಜುನೈದ್ ಖಾನ್ ಬಳಿ ಹಂಚಿಕೊಂಡಿದ್ದಾರೆ. “ನಾನು ಈ ಪಾತ್ರಕ್ಕೆ ಸರಿಹೊಂದುವುದಿಲ್ಲ ಮತ್ತು ನಾನು ಈ ಚಿತ್ರಕ್ಕೆ ತಪ್ಪು ಆಯ್ಕೆ ಎಂದು ನನಗೆ ಅನ್ನಿಸುತ್ತಿದೆ. ಸ್ವಲ್ಪ ಆಡಂಬರ ಅಥವಾ ಚುರುಕುತನವಿರುವ ಹೊಸಬರು ಈ ಪಾತ್ರ ಮಾಡಬೇಕಿತ್ತು ಎಂದು ನನಗೆ ಅನ್ನಿಸುತ್ತದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:‘ಏಕ್ ದಿನ್’ ಶೂಟಿಂಗ್ ಸಮಯದಲ್ಲಿ ಸಾಯಿ ಪಲ್ಲವಿ: ವಿಡಿಯೋ

ತಾವು ಯಾಕೆ ‘ಏಕ್ ದಿನ್’ ಚಿತ್ರವನ್ನು ಒಪ್ಪಿಕೊಂಡೆ ಎಂಬುದನ್ನು ವಿವರಿಸಿದ ಅವರು, ‘ನಾನು ಯಾವಾಗಲೂ ಚಿತ್ರದ ವ್ಯಾಪ್ತಿಯನ್ನು ನೋಡಿ ಸಿನಿಮಾ ಆಯ್ಕೆ ಮಾಡುವುದಿಲ್ಲ. ಆ ಸಮಯದಲ್ಲಿ ನಾನು ಬಹಳಷ್ಟು ಗಂಭೀರವಾದ ಪಾತ್ರಗಳನ್ನು ಮಾಡಿದ್ದೆ, ಆದ್ದರಿಂದ ಮನಸ್ಸಿಗೆ ಹಗುರವೆನಿಸುವ ಪಾತ್ರವನ್ನು ಮಾಡಲು ಬಯಸಿದ್ದೆ. ಚಿತ್ರೀಕರಣದ ಸಮಯದಲ್ಲಿ ಅಥವಾ ನಂತರವೂ ನನ್ನ ಮೇಲೆ ಯಾವುದೇ ಮಾನಸಿಕ ಒತ್ತಡ ಅಥವಾ ಟ್ರೌಮಾ ಇರಬಾರದು ಎಂದುಕೊಂಡಿದ್ದೆ. ಈ ಕಥೆ ಕೇಳಿದಾಗ ಇದು ‘ಬಿಫೋರ್ ಸನ್ ರೈಸ್’ ಹಾಲಿವುಡ್ ಚಿತ್ರದ ಶೈಲಿಯಲ್ಲಿದೆ ಎಂದು ಭಾವಿಸಿ ಒಪ್ಪಿಕೊಂಡೆ’ ಎಂದಿದ್ದಾರೆ. ಆದರೆ ಜುನೈದ್ ಖಾನ್ ಅವರು ಸಾಯಿ ಪಲ್ಲವಿ ಅವರ ಅನುಮಾನಗಳನ್ನು ತಳ್ಳಿಹಾಕಿದ್ದು, ಈ ಪಾತ್ರಕ್ಕೆ ಅವರೇ ಸೂಕ್ತ ಎಂದು ಹೇಳಿದ್ದಾರೆ.

ಸುನಿಲ್ ಪಾಂಡೆ ನಿರ್ದೇಶನದ ಈ ರೋಮ್ಯಾಂಟಿಕ್ ಡ್ರಾಮಾವನ್ನು ಆಮೀರ್ ಖಾನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಆಮೀರ್ ಖಾನ್, ಮನ್ಸೂರ್ ಖಾನ್ ಮತ್ತು ಅಪರ್ಣಾ ಪುರೋಹಿತ್ ನಿರ್ಮಿಸಿದ್ದಾರೆ. ಜುನೈದ್ ಖಾನ್ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು 2016ರ ಥಾಯ್ ಚಿತ್ರ ‘ಒನ್ ಡೇ’ ನ ರಿಮೇಕ್ ಆಗಿದ್ದು, ತನ್ನ ಸಹೋದ್ಯೋಗಿಯನ್ನು ಪ್ರೀತಿಸುವ ಆದರೆ ಅದನ್ನು ಹೇಳಿಕೊಳ್ಳಲು ಧೈರ್ಯವಿಲ್ಲದ ಯುವಕನ ಕಥೆಯನ್ನು ಹೊಂದಿದೆ. ಕೇವಲ ಒಂದು ದಿನ ಅವಳೊಂದಿಗೆ ಇರಬೇಕೆಂಬ ಅವನ ಆಸೆ ಅನಿರೀಕ್ಷಿತವಾಗಿ ಈಡೇರುವುದೇ ಚಿತ್ರದ ಕಥಾಹಂದರ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 12:05 pm, Fri, 8 May 26

Source link

ಕೇಬಲ್ ಅಳವಡಿಕೆ, ದುರಸ್ತಿ ಕಾಮಗಾರಿ ಮತ್ತು ಲೋಡ್​​ ಟೆಸ್ಟಿಂಗ್​​ ಕಂಪ್ಲೀಟ್​​: ಪೀಣ್ಯ ಫೈಓವರ್​​ ಸಂಚಾರಕ್ಕೆ ಮುಕ್ತ – Kannada News | Peenya Elevated Flyover Reopens: Bengaluru Traffic Relief After Major Repairs

ಪೀಣ್ಯ ಫೈಓವರ್​​ ಸಂಚಾರಕ್ಕೆ ಮುಕ್ತImage Credit source: Tv9 Kannada

ಬೆಂಗಳೂರು, ಮೇ 08:  ಕೇಬಲ್ ಅಳವಡಿಕೆ, ದುರಸ್ತಿ ಕಾಮಗಾರಿ ಹಾಗೂ ಅಂತಿಮ ಲೋಡ್ ಟೆಸ್ಟಿಂಗ್ ಹಿನ್ನೆಲೆ ಮೇ 5ರಿಂದ ಬಂದ್​​ ಆಗಿದ್ದ ಬೆಂಗಳೂರಿನ (Bengaluru) ಪೀಣ್ಯ ಎಲಿವೇಟೆಡ್ ಫ್ಲೈಓವರ್​ ಈಗ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ. ಫ್ಲೈ ಓವರ್ ಕೇಬಲ್ ಚೇಂಜ್, ಲೋಡ್ ಟೆಸ್ಟಿಂಗ್ ಸಕ್ಸಸ್ ಆಗಿರುವ ಹಿನ್ನೆಲೆ ಡಾ. ಶಿವಕುಮಾರ್ ಸ್ವಾಮೀಜಿ ಮೇಲ್ಸೇತುವೆ ಮತ್ತೆ ಸಹಜ ಸ್ಥಿತಿಗೆ ಮರಳಿದೆ. ಫ್ಲೈಓವರ್​​ ಬಂದ್​​ ಆಗಿದ್ದ ಹಿನ್ನೆಲೆ ಟ್ರಾಫಿಕ್​​ ಸಮಸ್ಯೆ ಎದುರಿಸುತ್ತಿದ್ದ ವಾಹನ ಸವಾರರು ಈಗ ನಿರಾಳರಾಗಿದ್ದಾರೆ.

  • ಪೀಣ್ಯ ಎಲಿವೇಟೆಡ್ ಫ್ಲೈಓವರ್​ ದುರಸ್ತಿ ಕಾಮಗಾರಿ ಪೂರ್ಣ
  • ವಾಹನಗಳ ಸಂಚಾರಕ್ಕೆ ಬೆಳಿಗ್ಗೆ 11ರಿಂದ ಮೇಲ್ಸೇತುವೆ ಮುಕ್ತ
  • ಡಾ. ಶಿವಕುಮಾರ್ ಸ್ವಾಮೀಜಿ ಫ್ಲೈಓವರ್ ಮತ್ತೆ ಸಹಜ ಸ್ಥಿತಿಗೆ

ಇದನ್ನೂ ಓದಿ: ಬೆಂಗಳೂರಿನ ಪೀಣ್ಯ ಎಲಿವೇಟೆಡ್ ಫ್ಲೈಓವರ್​ 4 ದಿನ ಬಂದ್

72 ಗಂಟೆಗಳ ಬಳಿಕ ಸಂಚಾರಕ್ಕೆ ಮುಕ್ತ


ಬುಧವಾರ ಬೆಳಿಗ್ಗೆ 5 ಗಂಟೆಗೆ ಕ್ಲೋಸ್​​ ಆಗಿದ್ದ ಫ್ಲೈಓವರ್​​ 72 ಗಂಟೆಗಳ ಬಳಿಕ ಅಂದರೆ ಇಂದು (ಮೇ 8) ಬೆಳಿಗ್ಗೆ 11 ಗಂಟೆಗೆ ಮತ್ತೆ ವಾಹನಗಳ ಸಂಚಾರಕ್ಕೆ ಮುಕ್ತಗೊಂಡಿದೆ. ಈ ಬಾರಿ 1,422 ಕೇಬಲ್​​ಗಳನ್ನು ಚೇಂಜ್ ‌ಮಾಡಲಾಗಿದ್ದು, 4 ದಿನಗಳ ಕಾಲ 32 ಟನ್ ಲೋಡ್ ಟೆಸ್ಟಿಂಗ್ ನಡೆಸಲಾಗಿದೆ. ಸುಮಾರು 10ಕ್ಕೂ ಹೆಚ್ಚು ಟ್ರಕ್​​ಗಳಲ್ಲಿ 32 ಟನ್​​ನಷ್ಟು ಲೋಡ್ ಹಾಕಿ ಪರೀಕ್ಷೆ ನಡೆದಿದ್ದು, ಬದಲಾಯಿಸಲಾದ ಕೇಬಲ್​​ಗಳ ಮೊತ್ತ 32 ಕೋಟಿ ರೂಪಾಯಿ ಎನ್ನಲಾಗಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಈ ಕೇಬಲ್​​ಗಳಿಗೆ ಯಾವುದೇ ಹಾನಿಯಾಗದಂತೆ ಅಗತ್ಯ ಮುಂಜಾಗೃತಾ ಕ್ರಮಗಳನ್ನೂ NHAI ಕೈಗೊಂಡಿದೆ.

ಪೀಣ್ಯ ಮೇಲ್ಸೇತುವೆಯ ಕೆನ್ನಮೆಟಲ್ ವಿಡಿಯಾ ಅಪ್ ರ್‍ಯಾಂಪ್‌ನಿಂದ ಎಸ್‌ಆರ್‌ಎಸ್ ಡೌನ್ ರ್‍ಯಾಂಪ್‌ವರೆಗೆ ಎರಡೂ ಬದಿಯಲ್ಲಿ ವಾಹನ ಸಂಚಾರಕ್ಕೆ ಮೇ 5ರಿಂದ ಅವಕಾಶವಿರಲಿಲ್ಲ. ಇಂದು ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗುತ್ತಿದ್ದಂತೆ ಸವಾರರು ನಾ ಮುಂದು ತಾ ಮುಂದು ವಾಹನಗಳನ್ನು ಚಲಾಯಿಸಿದ ದೃಶ್ಯಗಳು ಕಂಡುಬಂದಿವೆ. ಫ್ಲೈ ಓವರ್ ವಾಹನಗಳ ಸಂಚಾರಕ್ಕೆ ಮತ್ತೆ ಮುಕ್ತವಾಗಿರುವ ಕಾರಣ ಟ್ರಾಫಿಕ್ ಸಮಸ್ಯೆ ತುಂಬಾ ಕಡಿಮೆ ಆಗಲಿದೆ ಎಂದು ವಾಹನ ಸವಾರರು ಸಂತಸವನ್ನೂ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಭಾರೀ ಮೊತ್ತಕ್ಕೆ ‘ಅಯೋಗ್ಯ 2’ ಆಡಿಯೋ ಹಕ್ಕು ಮಾರಾಟ; ಲೆಕ್ಕ ಕೊಟ್ಟ ಸತೀಶ್ – Kannada News | Ayogya 2 Audio Rights Bagged by Anand Audio for 2 Crores; Film Releasing This Monsoon

2018ರಲ್ಲಿ ರಿಲೀಸ್ ಆಗಿ ಕನ್ನಡ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಸಿನಿಮಾ ಎಂದರೆ ಅದು ‘ಅಯೋಗ್ಯ’. ಈ ಚಿತ್ರ ನೀನಾಸಂ ಸತೀಶ್ ವೃತ್ತಿ ಜೀವನಕ್ಕೆ ಸಾಕಷ್ಟು ಮೈಲೇಜ್ ನೀಡಿತ್ತು. ಸತೀಶ್ ಹಾಗೂ ರಚಿತಾ ರಾಮ್ ಕಾಂಬಿನೇಷನ್ ಕಮಾಲ್ ಮಾಡಿತ್ತು. ಈಗ ‘ಅಯೋಗ್ಯ 2’ ರಿಲೀಸ್​​ಗೂ ಮೊದಲೇ ಸಖತ್ ಸೌಂಡ್ ಮಾಡುತ್ತಿದೆ. ಚಿತ್ರೀಕರಣದ ಹಂತದಲ್ಲಿರುವ ಈ ಸಿನಿಮಾ ಈಗ ತನ್ನ ಆಡಿಯೋ ಹಕ್ಕನ್ನು ಮಾರಿದೆ. ಅದು ಕೂಡ 2 ಕೋಟಿ ರೂಪಾಯಿಗೆ.

‘ಅಯೋಗ್ಯ’ ಸಿನಿಮಾ 2018ರಲ್ಲಿ ರಿಲೀಸ್ ಆಯಿತು. ಮಹೇಶ್ ಕುಮಾರ್ ಇದನ್ನು ನಿರ್ದೇಶಿಸಿದ್ದರು. ಅರ್ಜುನ್ ಜನ್ಯ ಸಂಗೀತ ಕಮಾಲ್ ಮಾಡಿತ್ತು. ಮೊದಲ ಭಾಗದ ‘ಏನಮ್ಮಿ ಏನಮ್ಮಿ’ ಹಾಡು ಇಂದಿಗೂ ಕನ್ನಡಿಗರ ಫೇವರೆಟ್. ಅದೇ ಕ್ರೇಜ್ ಈಗ ಎರಡನೇ ಭಾಗಕ್ಕೂ ಮುಂದುವರಿದಿದೆ. ಲೇಟೆಸ್ಟ್ ಮಾಹಿತಿ ಪ್ರಕಾರ, ‘ಅಯೋಗ್ಯ 2’ ಚಿತ್ರದ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಬರೋಬ್ಬರಿ 2 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಈ ಸುದ್ದಿ ಗಾಂಧಿನಗರದಲ್ಲಿ ಸಂಚಲನ ಮೂಡಿಸಿದೆ.

‘ಅಯೋಗ್ಯ’ ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ ಅವರೇ ‘ಅಯೋಗ್ಯ 2’ ಚಿತ್ರವನ್ನೂ ನಿರ್ದೇಶಿಸುತ್ತಿದ್ದು, ಸತೀಶ್ ನಿನಾಸಂ ಹಾಗೂ ರಚಿತಾ ರಾಮ್ ಜೋಡಿ ಮತ್ತೊಮ್ಮೆ ಪರದೆಯ ಮೇಲೆ ಮೋಡಿ ಮಾಡಲು ಸಜ್ಜಾಗಿದೆ. ಆಡಿಯೋ ಹಾಡಿನ ಹಕ್ಕುಗಳ ಮಾರಾಟದ ಬಗ್ಗೆ ವಿಡಿಯೋ ಮಾಡಿ ಪೋಸ್ಟ್ ಮಾಡಲಾಗಿದೆ.

ಇದನ್ನೂ ಓದಿ: ‘ಅಯೋಗ್ಯ 2’ ಸಿನಿಮಾಗೆ ಮುಹೂರ್ತ; ಸತೀಶ್, ರಚಿತಾ ಚಿತ್ರಕ್ಕೆ ಅಶ್ವಿನಿ ಹಾರೈಕೆ

ನಿರ್ಮಾಪಕ ಎಂ. ಮುನೇಗೌಡ ಅವರು ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದು, ಮಳೆಗಾಲದಲ್ಲಿ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಮೊದಲ ಭಾಗದ ಹಾಡುಗಳು ಸೂಪರ್ ಹಿಟ್ ಆಗಿದ್ದರಿಂದ, ಎರಡನೇ ಭಾಗದ ಮ್ಯೂಸಿಕ್ ಮೇಲೂ ನಿರೀಕ್ಷೆ ಇದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರೇ ಸಂಗೀತ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Mother’s Day 2026: ಗರ್ಭದಲ್ಲೇ ಸಂಸ್ಕಾರ ನೀಡುವ ಶಕ್ತಿ ತಾಯಿಯದ್ದು; ಹಿಂದೂ ಧರ್ಮದ ದೃಷ್ಟಿಯಲ್ಲಿ ಮಾತೃತ್ವದ ಮಹತ್ವ – Kannada News | Sacred Mother in Hinduism: Matru Devo Bhava and Her Divine Influence

ಹಿಂದೂ ಧರ್ಮದಲ್ಲಿ ತಾಯಿಗೆ ಅತ್ಯುನ್ನತ ಮತ್ತು ಪವಿತ್ರವಾದ ಸ್ಥಾನ ನೀಡಲಾಗಿದೆ. ಸನಾತನ ಸಂಸ್ಕೃತಿಯ ಪ್ರಕಾರ, ತಾಯಿಯು ಕೇವಲ ಕುಟುಂಬದ ಸದಸ್ಯೆಯಲ್ಲ, ಬದಲಿಗೆ ಮನೆಯ ಬೆಳಗುವ ದೀಪ ಮತ್ತು ‘ಪ್ರತ್ಯಕ್ಷ ದೈವ’. “ಮಾತೃ ದೇವೋ ಭವ” ಎಂಬ ವೇದವಾಕ್ಯವು ಅತಿಥಿ ಅಥವಾ ದೇವರಿಗಿಂತ ಮೊದಲು ತಾಯಿಯನ್ನು ಪೂಜಿಸಬೇಕು ಎಂದು ಕಲಿಸುತ್ತದೆ. ಮಗುವಿಗೆ ಜನ್ಮ ನೀಡಿ, ಪೋಷಿಸಿ, ಸಂಸ್ಕಾರ ನೀಡುವ ತಾಯಿಯನ್ನು ಮಗುವಿನ ‘ಪ್ರಥಮ ಗುರು’ ಎಂದು ಪರಿಗಣಿಸಲಾಗುತ್ತದೆ. ತಾಯಿಯ ಪ್ರೀತಿ ಮತ್ತು ತ್ಯಾಗವು ದೈವಿಕ ಗುಣಗಳಿಗೆ ಸಮಾನವೆಂದು ಶಾಸ್ತ್ರಗಳು ಬಣ್ಣಿಸುತ್ತವೆ.

ಗರ್ಭದಲ್ಲೇ ಸಂಸ್ಕಾರ ನೀಡುವ ಶಕ್ತಿ ತಾಯಿಯದ್ದು:

ಪುರಾಣಗಳಲ್ಲಿ ತಾಯಿಯ ಪ್ರಭಾವ ಎಷ್ಟಿತ್ತೆಂದರೆ, ಗರ್ಭದಲ್ಲಿರುವಾಗಲೇ ಮಕ್ಕಳು ಜ್ಞಾನವನ್ನು ಪಡೆಯುತ್ತಿದ್ದರು ಎಂಬ ಉಲ್ಲೇಖವಿದೆ. ಭಕ್ತ ಪ್ರಹ್ಲಾದನು ತನ್ನ ತಾಯಿ ಕಯಾದುವಿನ ಗರ್ಭದಲ್ಲಿದ್ದಾಗಲೇ ನಾರದ ಮುನಿಗಳಿಂದ ಹರಿನಾಮದ ಮಹಿಮೆಯನ್ನು ತಿಳಿದುಕೊಂಡಿದ್ದನು. ಅದೇ ರೀತಿ ಅರ್ಜುನನ ಮಗ ಅಭಿಮನ್ಯು ಕೂಡ ಗರ್ಭದಲ್ಲಿರುವಾಗಲೇ ಯುದ್ಧತಂತ್ರದ ಬಗ್ಗೆ ಕೇಳಿಸಿಕೊಂಡಿದ್ದನು. ಇದು ತಾಯಿಯು ಮಗುವಿನ ವ್ಯಕ್ತಿತ್ವ ರೂಪಿಸುವಲ್ಲಿ ವಹಿಸುವ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತದೆ. ಮಗುವಿನ ಶೀಲ ಮತ್ತು ನಡತೆಗೆ ತಾಯಿಯೇ ಅಡಿಪಾಯವಾಗಿದ್ದಾಳೆ.

ಸನಾತನ ಧರ್ಮದ 7 ಶ್ರೇಷ್ಠ ತಾಯಂದಿರು:

ಹಿಂದೂ ಸಂಪ್ರದಾಯವು ಕೇವಲ ಜನ್ಮ ನೀಡಿದವಳನ್ನು ಮಾತ್ರವಲ್ಲದೆ, ಏಳು ಮಂದಿಯನ್ನು ತಾಯಿಯ ಸ್ಥಾನದಲ್ಲಿಟ್ಟು ಗೌರವಿಸುತ್ತದೆ. ಇದರಲ್ಲಿ ನಿಜವಾದ ತಾಯಿ, ಗುರುವಿನ ಪತ್ನಿ, ಬ್ರಾಹ್ಮಣ ಪತ್ನಿ, ರಾಜನ ಪತ್ನಿ (ರಾಣಿ), ಸಾಕು ತಾಯಿ, ನಮಗೆ ಹಾಲು ನೀಡುವ ಗೋಮಾತೆ ಮತ್ತು ನಮಗೆ ಆಶ್ರಯ ನೀಡಿರುವ ಭೂಮಾತೆ ಸೇರಿದ್ದಾರೆ. ಈ ಏಳು ರೂಪಗಳಲ್ಲಿ ಸ್ತ್ರೀಶಕ್ತಿಯನ್ನು ಕಾಣುವುದು ಭಾರತೀಯ ಸಂಸ್ಕೃತಿಯ ಹೆಮ್ಮೆಯಾಗಿದೆ. ದೈವಿಕವಾಗಿ ನಾವು ಪಾರ್ವತಿ, ಲಕ್ಷ್ಮಿ ಮತ್ತು ಸರಸ್ವತಿಯನ್ನು ಜಗನ್ಮಾತೆಯರೆಂದು ಆರಾಧಿಸುತ್ತೇವೆ, ಇದು ಸ್ತ್ರೀತ್ವಕ್ಕೆ ನೀಡುವ ಗೌರವದ ಸಂಕೇತವಾಗಿದೆ.

ಇದನ್ನೂ ಓದಿ: ನಿಮ್ಮ ಜನ್ಮ ದಿನಾಂಕದಲ್ಲೇ ಅಡಗಿದೆ ಮದುವೆಯ ರಹಸ್ಯ; ನಿಮಗಾಗುವುದು ಪ್ರೇಮ ವಿವಾಹವೋ ಅಥವಾ ಅರೇಂಜ್ ಮ್ಯಾರೇಜ್?

ಮೇ 10 ವಿಶ್ವ ತಾಯಂದಿರ ದಿನ:

ಈ ವರ್ಷ ಮೇ 10 ರಂದು ನಾವು ‘ವಿಶ್ವ ತಾಯಂದಿರ ದಿನ’ವನ್ನು ಆಚರಿಸುತ್ತಿದ್ದೇವೆ. ಇದು ಕೇವಲ ಒಂದು ದಿನದ ಆಚರಣೆಯಾಗದೆ, ದಿನನಿತ್ಯವೂ ತಾಯಿಯನ್ನು ಗೌರವಿಸುವ ಸಂಕಲ್ಪವಾಗಬೇಕು. ಆಧುನಿಕ ಯುಗದಲ್ಲಿ ತಾಯಂದಿರು ಮನೆ ಮತ್ತು ಕೆಲಸ ಎರಡನ್ನೂ ಸಮತೋಲನ ಮಾಡುತ್ತಾ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಈ ತಾಯಂದಿರ ದಿನದಂದು ಅವರಿಗೆ ವಿಶ್ರಾಂತಿ ನೀಡುವುದು, ಅವರ ಆರೋಗ್ಯದ ಕಡೆ ಗಮನ ಹರಿಸುವುದು ಮತ್ತು ಅವರ ನಿಸ್ವಾರ್ಥ ಸೇವೆಗೆ ಕೃತಜ್ಞತೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೋಮನಾಥ ದೇಗುಲ: ಸರ್ದಾರ್ ಪಟೇಲರ ಕನಸು, ಭಾರತದ ಹೆಮ್ಮೆ, ಅಖಂಡತೆಯ ಸಂಕೇತ – ಪಿಎಂ ಮೋದಿ ಲೇಖನ – Kannada News | Somnath Temple, Sardar Patel’s Dream, India’s Pride, Symbol of Integrity, PM Modi blog

ಸೋಮನಾಥನ ಸನ್ನಿಧಿಯಲ್ಲಿ ನರೇಂದ್ರ ಮೋದಿImage Credit source: Narendra Modi’s X account

ಈ ವರ್ಷದ ಆರಂಭದಲ್ಲಿ ಸೋಮನಾಥ್ ಸ್ವಾಭಿಮಾನಪರ್ವ (Somnath Swabiman Parv) ಕಾರ್ಯಕ್ರಮಕ್ಕಾಗಿ ಸೋಮನಾಥ್​ಗೆ ಹೋಗಿದ್ದೆ. ಸೋಮನಾಥ ಮಂದಿರದ ಮೇಲೆ ಆದ ದಾಳಿಗೆ ಒಂದು ಸಾವಿರ ವರ್ಷ ಗತಿಸಿದ ಸಂದರ್ಭವದು. ಈಗ ಮತ್ತೊಮ್ಮೆ ಮೇ 11ಕ್ಕೆ ಅಲ್ಲಿಗೆ ಹೋಗುತ್ತಿದ್ದೇನೆ. 75 ವರ್ಷದ ಹಿಂದೆ ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಈ ಮಂದಿರದ ಪುನರ್ನಿರ್ಮಾಣ ಮಾಡಿದ ಪುಣ್ಯ ಸಂದರ್ಭವದು. ಸೋಮನಾಥದ ಧ್ವಂಸ ಮತ್ತು ಪುನರ್ನಿರ್ಮಾಣವೆಂಬ ಎರಡು ಪ್ರಮುಖ ಮೈಲಿಗಲ್ಲುಗಳಲ್ಲಿ ಪಾಲ್ಗೊಳ್ಳುತ್ತಿರುವುದು ನನ್ನ ಪುಣ್ಯ.

ಸೋಮನಾಥ ನಮಗೆ ನಾಗರಿಕತೆಯ ಸಂದೇಶ ಸಾರುತ್ತದೆ. ಅದರ ಮುಂದಿರುವ ವಿಶಾಲ ಸಾಗರವು ಕಾಲಾತೀತತೆಯನ್ನು ಬಿಂಬಿಸುತ್ತದೆ. ಬಿರುಗಾಳಿ ಎಷ್ಟೇ ಭೀಕರವಾಗಿರಲಿ, ಕಡಲಬ್ಬರ ಹೇಗೇ ಇರಲಿ, ಅಲೆಗಳು ಸಮುದ್ರ ತೀರವನ್ನು ಸೇರುವಂತೆ, ಒಬ್ಬ ವ್ಯಕ್ತಿ ಎಂಥ ಸಂದರ್ಭದಲ್ಲೂ ಗೌರವ ಮತ್ತು ಬಲ ಕಂಡುಕೊಳ್ಳಲು ಸಾಧ್ಯ ಎಂಬುದನ್ನು ಅರಿತುಕೊಳ್ಳಬಹುದು.

ಪ್ರಭಾಸಂ ಚ ಪರಿಕ್ರಮ್ಯ ಪೃಥ್ವಿಕ್ರಮಸಂಭವಮ್’ ಎಂದು ಹೇಳಲಾಗುತ್ತದೆ. ಅಂದರೆ, ಪ್ರಭಾಸನ (ಸೋಮನಾಥ) ಪ್ರದಕ್ಷಿಣೆ ಹಾಕಿದರೆ ಇಡೀ ಭೂಮಿಯ ಪ್ರದಕ್ಷಿಣೆಗೆ ಸಮ. ಯಾವತ್ತೂ ನಾಶವಾಗದ ನಾಗರಿಕತೆಯ ದ್ಯೋತಕವಾಗಿ ಸೋಮನಾಥದ ದರ್ಶನವಾಗುತ್ತದೆ.

ಸೋಮನಾಥನ ನಾಶಕ್ಕೆ ನಡೆಯುತ್ತಿದ್ದ ಪ್ರಯತ್ನಗಳ ನಡುವೆ ಅದನ್ನು ಕಾಪಾಡಲು ನಿಂತ ಶ್ರೇಷ್ಠರು ಅನೇಕರಿದ್ದಾರೆ. ಅವರನ್ನು ಸ್ಮರಿಸುವ ಸಂದರ್ಭ ಬಂದಿದೆ. ಲಕುಲಿಶಾ ಮತ್ತು ಸೋಮ ಸರ್ಮನ್ ಅವರು ಪ್ರಭಾಸನನ್ನು ತತ್ವಶಾಸ್ತ್ರದ ಕೇಂದ್ರವಾಗಿ ಮಾರ್ಪಡಿಸಿದರು. ವಲ್ಲಾಭಿಯ ಚಕ್ರವರ್ತಿ ಮಹಾರಾಜ 4ನೇ ಧರ್ಮಸೇನಾ ಅವರು ಶತಮಾನಗಳ ಹಿಂದೆ ಅಲ್ಲಿ ಎರಡನೇ ದೇವಸ್ಥಾನ ಕಟ್ಟಿದರು. ಭೀಮ ದೇವ, ಜಯಪಾಲ ಮತ್ತು ಆನಂದಪಾಲ ಅವರು ವೈರಿಗಳ ದಾಳಿಗಳ ವಿರುದ್ಧ ಹೋರಾಟ ನಡೆಸಿದ್ದರು. ಮಂದಿರದ ಪುನರ್ನಿರ್ಮಾಣಕ್ಕೆ ರಾಜ ಭೋಜನೂ ಸಹಾಯ ಮಾಡಿದ್ದನೆಂದು ಹೇಳಲಾಗುತ್ತದೆ.

ಕರ್ಣ ದೇವ, ಸಿದ್ಧರಾಜ ಜಯಸಿಂಹ, ಭವ ಬಹಸ್ಪತಿ, ಕುಮಾರಪಾಲ ಸೋಳಂಕಿ, ಪಾಶುಪತ ಆಚಾರ್ಯರು, ವಿಶಾಲದೇವ ವಘೇಲಾ, ತ್ರಿಪುರಾಂತಕ, ಮಹಿಪಾಲದೇವ, ರಾ ಖಾಂಗರ್, ಪುಣ್ಯಶ್ಲೋಕ್ ಅಹಲ್ಯಾಬಾಯ್ ಹೋಳ್ಕರ್, ಬರೋಡಾದ ಗಾಯಕ್ವಾಡರು, ವೀರ್ ಹಮೀರ್​ಜಿ ಗೋಹಿಲ್, ವೀರ್ ವೇಗಡಜಿ ಭಿಲ್ ಮೊದಲಾದವರ ತ್ಯಾಗ, ಬಲಿದಾನ, ಬದ್ಧತೆ, ಭಕ್ತಿ ಇತ್ಯಾದಿಯು ಸೋಮನಾಥನ ರಕ್ಷಣೆ, ಪುನರ್ನಿರ್ಮಾಣದಲ್ಲಿ ಸಹಾಯವಾಗಿವೆ.

20ನೇ ಶತಮಾನದ 40ರ ದಶಕದಲ್ಲಿ ಸ್ವಾತಂತ್ರ್ಯದ ಕೆಚ್ಚು ದೇಶಾದ್ಯಂತ ಪಸರಿಸಿತ್ತು. ಆದರೆ, ಸರ್ದಾರ್ ಪಟೇಲ್​ರಂತಹ ನಾಯಕರಿಗೆ ಸೋಮನಾಥನ ದೈನೀಯ ಪರಿಸ್ಥಿತಿ ಸರಿಕಾಣಲಿಲ್ಲ. 1947ರ ನವೆಂಬರ್ 13ರಂದು ದೀಪಾವಳಿ ಸಂರ್ಭದಲ್ಲಿ ಸರ್ದಾರ್ ಪಟೇಲರು ಸೋಮನಾಥನ ಭಗ್ನಾವಶೇಷದ ಮುಂದೆ ನಿಂತು ಶಪಥ ಮಾಡುತ್ತಾರೆ:

‘ಈ ಶುಭ ದಿನದಂದು ಸೋಮನಾಥನ ಪುನರ್ನಿರ್ಮಾಣ ಮಾಡಲು ನಿರ್ಧರಿಸಿದ್ದೇವೆ’. ಪಟೇಲರ ಈ ಒಂದು ಕರೆಗೆ ಗುಜರಾತಿಗಳು ಮಾತ್ರವಲ್ಲ, ಇಡೀ ಭಾರತೀಯರೇ ಸ್ಪಂದಿಸಿದರು. ದುರ್ದೈವವೆಂದರೆ, ಸರ್ದಾರ್ ಪಟೇಲರ ಆ ಅದಮ್ಯ ಆಸೆ ನೆರವೇರುವ ಮುಂಚೆಯೇ ಅವರು ಶಿವನ ಪಾದ ಸೇರಿದರು. ಅವರ ಕನಸನ್ನು ಸಾಕಾರ ಮಾಡಲು ಹಲವರು ಅವಿರತ ಯತ್ನಿಸಿದರು. ಶ್ರೀ ಕೆಎಂ ಮುನ್ಷಿ, ನವನಗರ್​ನ ಜಾಮ್​ಸಾಹೇಬ್ ಮೊದಲಾದವರು ನಿಂತು ಪುನರ್ನಿರ್ಮಾನ ಕಾರ್ಯಕ್ಕೆ ಶಕ್ತಿ ತುಂಬಿದರು. 1951ರಲ್ಲಿ ಮಂದಿರ ಸಿದ್ಧವಾಯಿತು. ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಪಿಎಂ ನೆಹರೂ ಅವರ ವಿರೋಧದ ನಡುವೆಯೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಗಮನಾರ್ಹ.

ಸೋಮನಾಥನ ರಕ್ಷಣೆಗಾಗಿ ಬಹಳಷ್ಟು ಜನರು ಬಲಿದಾನ ಮಾಡಿದ್ದಾರೆ, ತ್ಯಾಗ ಮಾಡಿದ್ದಾರೆ. ಅದರ ಪುನರ್ನಿರ್ಮಾಣಕ್ಕಾಗಿ ದೇಶದ ಮೂಲೆ ಮೂಲೆಗಳಿಂದ ಲೆಕ್ಕವಿಲ್ಲದಷ್ಟು ಜನರು ಕೊಡುಗೆ ನೀಡಿದ್ದಾರೆ. ಸೋಮನಾಥನು ಏಕತೆಯ ಸಂಕೇತವಾಗಿ ನಿಂತಿದ್ದಾನೆ. ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನಾಗರಿಕತೆ ಸಾಕ್ಷಿಪ್ರಜ್ಞೆಯಾಗಿ ನೆಲಸಿದ್ದಾನೆ. ಮುಂದಿನ ಸಾವಿರ ದಿನಗಳವರೆಗೆ ಸೋಮನಾಥದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.

ಈ ವಿಶೇಷ ಸಂದರ್ಭದಲ್ಲಿ ಸೋಮನಾಥನ ದರ್ಶನ ಮಾಡಬೇಕೆಂದು ನಮ್ಮ ದೇಶವಾಸಿಗಳಲ್ಲಿ ಕೇಳಿಕೊಳ್ಳುತ್ತೇನೆ. ಸೋಮನಾಥನ ಸನ್ನಿಧಿಯಲ್ಲಿ ನಿಂತಾಗ ಪ್ರಾಚೀನತೆಯ ವಿಚಾರಗಳು ನಿಮ್ಮನ್ನು ಎಡತಾಕುತ್ತವೆ. ವಿನಾಶಕ್ಕೆ ಯಾರೆಷ್ಟೇ ಪ್ರಯತ್ನಪಟ್ಟರೂ ನಮ್ಮ ಸಂಸ್ಕೃತಿಯನ್ನು ಸೋಲಿಸಲು ಆಗಿಲ್ಲ. ಸೋಮನಾಥನ ದರ್ಶನವು ನಿಮಗೆ ಅವಿಸ್ಮರಣೀಯವಾಗಿರಲಿದೆ.

ಜೈ ಸೋಮನಾಥ್

(ಇದು ನರೇಂದ್ರ ಮೋದಿ ಅವರು ತಮ್ಮ ವೈಯಕ್ತಿಕ ವೆಬ್​ಸೈಟ್​ನಲ್ಲಿ ಬರೆದಿರುವ ಬ್ಲಾಗ್​ನ ಸಂಕ್ಷಿಪ್ತ ರೂಪ. ಇಂಗ್ಲೀಷ್​ನಿಂದ ಕನ್ನಡಕ್ಕೆ ತರ್ಜುಮೆ ಮಾಡಲಾಗಿದೆ. ಇವರ ಇಂಗ್ಲೀಷ್ ಲೇಖನದ ಪೂರ್ಣ ಪಠ್ಯ ಈ ಲಿಂಕ್​ನಲ್ಲಿದೆ.)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version