ಮತಗಳ ಮರುಎಣಿಕೆ ಬಗ್ಗೆ ಬಿಜೆಪಿ ಶಾಸಕ ಜೀವರಾಜ್ ಬಿಚ್ಚಿಟ್ಟ ರಹಸ್ಯ ಕೇಳಿ – Kannada News | Sringeri assembly constituency Result Row: BJP MLA Jeevaraj Talks about Vote Recounting

ಬೆಂಗಳೂರು, (ಮೇ 05): ಹೈಕೋರ್ಟ್ ಆದೇಶದಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಮರು ಎಣಿಕೆ ಮುಗಿದಿದ್ದು, ಇದರಲ್ಲಿ ಬಿಜೆಪಿಯ ಜೀವರಾಜ್ ಗೆಲುವು ಸಾಧಿಸಿದ್ದಾರೆ. ಇದರಿಂದ ಕೆರಳದ ಡಿಸಿಎ. ಡಿಕೆ ಶಿವಕುಮಾರ್, ಇಡೀ ದೇಶದಲ್ಲಿ ಇಂತಹ ಕ್ರಿಮಿನಲ್ ಎಲ್ಲೂ ನಡೆದಿಲ್ಲ. ತನಿಖೆ ನಡೆಸುತ್ತೇವೆ ಮತ್ತು ಕಾನೂನುಬದ್ಧವಾಗಿ ಹೋರಾಡುವುದಾಗಿ ಹೇಳಿದ್ದಾರೆ. ಇದರ ಬೆನ್ನಲ್ಲೇ ಇದಕ್ಕೆ ಬಿಜೆಪಿಯ ಜೀವರಾಜ್ ಪ್ರತಿಕ್ರಿಯಿಸಿದ್ದು, 2023ರಲ್ಲಿ ಮತ ಎಣಿಕೆ ವೇಳೆ ಏನೇನಾಯ್ತು? ಕೋರ್ಟ್​​ ಗೆ ಮನವಿ ಮಾಡಿದ್ದೇನು ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಅಂದು ಕರುಣಾನಿಧಿ ಹಿಂದೆ ನಿಂತಿದ್ದ ಹುಡುಗ ಇಂದು ಅವರ ಪಕ್ಷವನ್ನೇ ಮುಗಿಸಿದ’: ಆರ್​ಜಿವಿ – Kannada News | Thalapathy Vijay TVK wins Tamil Nadu election Ram Gopal Varma reaction on DMK MK Stalin defeat

ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಮನ್ವಂತರ ಆರಂಭವಾಗಿದೆ. ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸುವ ಮೂಲಕ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. ಈ ಮೂಲಕ ಆರು ಬಾರಿ ತಮಿಳುನಾಡನ್ನು ಆಳಿದ್ದ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ (DMK) ಪಕ್ಷಕ್ಕೆ ಭಾರಿ ಮುಖಭಂಗವಾಗಿದೆ. ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ವಿಜಯ್ ಅವರ ಬಗ್ಗೆ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರು ಪೋಸ್ಟ್ ಮಾಡಿದ್ದಾರೆ.

ದಳಪತಿ ವಿಜಯ್ ಅವರ ಈ ಸ್ಮರಣೀಯ ಗೆಲುವಿನ ಕುರಿತು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಡಿಎಂಕೆ ಮುಖಂಡ, ದಿವಂಗತ ಎಂ. ಕರುಣಾನಿಧಿ ಅವರ ಹಿಂದೆ ವಿಜಯ್ ನಿಂತಿರುವ ಹಳೆಯ ಫೋಟೋವೊಂದನ್ನು ವರ್ಮಾ ಹಂಚಿಕೊಂಡಿದ್ದಾರೆ.

ಇದಕ್ಕೆ ಕ್ಯಾಪ್ಷನ್ ನೀಡಿರುವ ರಾಮ್ ಗೋಪಾಲ್ ವರ್ಮಾ ಅವರು, ‘ತನ್ನ ಹಿಂದೆ ನಿಂತಿರುವ ಈ ಹುಡುಗ ಒಂದು ದಿನ ತಮ್ಮ ಪಕ್ಷವನ್ನೇ ನಾಶ ಮಾಡುತ್ತಾನೆ ಎಂದು ಕರುಣಾನಿಧಿ ಅವರು ಕನಸಿನಲ್ಲೂ ಯೋಚಿಸಿರಲಿಕ್ಕಿಲ್ಲ’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಡಿಎಂಕೆ ಭದ್ರಕೋಟೆಯನ್ನು ವಿಜಯ್ ತಲ್ಲಣಗೊಳಿಸಿರುವುದನ್ನು ವರ್ಮಾ ವ್ಯಂಗ್ಯವಾಗಿ ಶ್ಲಾಘಿಸಿದ್ದಾರೆ.

ಚುನಾವಣಾ ಫಲಿತಾಂಶದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಿರ್ಗಮಿತ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ‘ನಾವು ನೋಡದ ಗೆಲುವಿಲ್ಲ, ನಾವು ಎದುರಿಸದ ಸೋಲು ಕೂಡ ಇಲ್ಲ’ ಎಂದು ಹೇಳುವ ಮೂಲಕ ಪರಾಜಯವನ್ನು ವಿನಮ್ರವಾಗಿ ಒಪ್ಪಿಕೊಂಡಿದ್ದಾರೆ. ರಾಜಕೀಯದಲ್ಲಿ ಮೊದಲ ಯತ್ನದಲ್ಲೇ ಭರ್ಜರಿ ಗೆಲುವು ದಾಖಲಿಸಿದ ವಿಜಯ್ ಅವರಿಗೆ ರಜನಿಕಾಂತ್, ಕಮಲ್ ಹಾಸನ್, ವಿಕ್ರಮ್, ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ, ಎ.ಆರ್. ರೆಹಮಾನ್, ಮೋಹನ್ ಲಾಲ್ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ಚಿತ್ರತಾರೆಯರು ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ: ಜಯಭೇರಿ ಬಾರಿಸಿದ ಟಿವಿಕೆ: ದಳಪತಿ ವಿಜಯ್ ಮನೆ ಎದುರು ಪೊಲೀಸ್ ಬಿಗಿ ಭದ್ರತೆ

1992ರಲ್ಲಿ ‘ನಾಳಯ ತೀರ್ಪು’ ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ವಿಜಯ್, 34 ವರ್ಷಗಳ ಕಾಲ ಚಿತ್ರರಂಗವನ್ನು ಆಳಿದರು. 2024ರಲ್ಲಿ ಟಿವಿಕೆ ಪಕ್ಷವನ್ನು ಸ್ಥಾಪಿಸಿ ಅಧಿಕೃತವಾಗಿ ರಾಜಕೀಯಕ್ಕೆ ಧುಮುಕಿದರು. ಅವರ ಅಭಿನಯದ ಕೊನೆಯ ಚಿತ್ರ ಎನ್ನಲಾದ ‘ಜನ ನಾಯಕನ್’ ಇನ್ನೂ ಬಿಡುಗಡೆಯಾಗಬೇಕಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Capital Inflow: ಚೀನಾವನ್ನು ಹಿಂದಿಕ್ಕಿದ ಭಾರತ; ಜಾಗತಿಕ ಹೂಡಿಕೆದಾರರ ಮೊದಲ ಆಯ್ಕೆ ‘ಇಂಡಿಯಾ’ – Kannada News | India Becomes Global Investment Magnet, Surpassing China in Attracting Foreign Capital during April

ನವದೆಹಲಿ, ಮೇ 5: ಜಾಗತಿಕ ಆರ್ಥಿಕ ಮಾರುಕಟ್ಟೆಯಲ್ಲಿ (Stock Market) ಭಾರತದ ಹವಾ ಜೋರಾಗಿದೆ. ಜಾಗತಿಕ ಹೂಡಿಕೆಯನ್ನು ಆಕರ್ಷಿಸುವ ರೇಸ್‌ನಲ್ಲಿ ಭಾರತವು ತನ್ನ ನೆರೆಯ ಬಲಿಷ್ಠ ದೇಶವಾದ ಚೀನಾವನ್ನು ಹಿಂದಿಕ್ಕಿ ಭಾರಿ ಪ್ರಮಾಣದ ವಿದೇಶಿ ಬಂಡವಾಳವನ್ನು ತನ್ನತ್ತ ಸೆಳೆಯುತ್ತಿದೆ ಎಂದು ಇತ್ತೀಚಿನ ಆರ್ಥಿಕ ವರದಿಗಳು ತಿಳಿಸಿವೆ. ಮಾರ್ಚ್ ತಿಂಗಳಿನ ಕುಸಿತದ ನಂತರ ಏಪ್ರಿಲ್‌ನಲ್ಲಿ ಜಾಗತಿಕ ಮಾರುಕಟ್ಟೆಗಳು ಚೇತರಿಸಿಕೊಂಡಿದ್ದು, ಹೂಡಿಕೆದಾರರು ಚೀನಾಕ್ಕಿಂತ ಭಾರತದ ಮಾರುಕಟ್ಟೆಯ ಮೇಲೆಯೇ ಹೆಚ್ಚು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಹೀಗೆಂದು ಕ್ವಾಂಟ್ ಮ್ಯೂಚುವಲ್ ಫಂಡ್​ನ ವಿಶ್ಲೇಷಣಾ ವರದಿಯಲ್ಲಿ ಹೇಳಲಾಗಿದೆ.

ಭಾರತದ ಜಿಡಿಪಿ ಮತ್ತು ಷೇರು ಮಾರುಕಟ್ಟೆ ಜಿಗಿತ

ವರದಿಯ ಪ್ರಕಾರ, ಭಾರತದ ನಾಮಮಾತ್ರದ ಜಿಡಿಪಿ (Nominal GDP) ಬೆಳವಣಿಗೆಯು ಚೀನಾ ದೇಶಕ್ಕಿಂತ ಹೆಚ್ಚಿನ ವೇಗದಲ್ಲಿ ಮುನ್ನುಗ್ಗುತ್ತಿದೆ. ಇದು ಜಾಗತಿಕ ಹೂಡಿಕೆದಾರರನ್ನು ಭಾರತದ ಕಡೆಗೆ ಆಕರ್ಷಿಸಲು ಪ್ರಮುಖ ಕಾರಣವಾಗಿದೆ. ಏಪ್ರಿಲ್​ನಲ್ಲಿ ಅಮೆರಿಕದ ಷೇರು ಮಾರುಕಟ್ಟೆ ಶೇ. 9 ರಷ್ಟು ಬೆಳವಣಿಗೆ ಕಂಡಿತು. ಈ ವೇಳೆ ಭಾರತದ ನಿಫ್ಟಿ (Nifty) ಶೇ. 6.7 ರಷ್ಟು ಬೆಳೆದಿದೆ. ಅಮೆರಿಕದ ಈಕ್ವಿಟಿಗಳಿಗೆ ಹೋಲಿಸಿದರೆ ಭಾರತದ ಈಕ್ವಿಟಿ ಬೆಳವಣಿಗೆ ಕಡಿಮೆ ಎನಿಸಿದರೂ ವಿಶ್ವದ ಹೆಚ್ಚಿನ ಮಾರುಕಟ್ಟೆಗಳಿಗಿಂತ ಹೆಚ್ಚು ಉಬ್ಬಿರುವುದು ವೇದ್ಯವಾಗಿದೆ. ಚೀನಾದ ಶಾಂಘೈ ಸೂಚ್ಯಂಕವು ಅತ್ಯಂತ ಸಾಧಾರಣ ಬೆಳವಣಿಗೆಯನ್ನು ಮಾತ್ರ ದಾಖಲಿಸಿದೆ.

ಇದನ್ನೂ ಓದಿ: ಲೈವ್ ವೆದರ್​ನಿಂದ ಹಿಡಿದು ವಿವಿಧ ಅಲರ್ಟ್​ಗಳವರೆಗೆ ಹಲವು ಫೀಚರ್​ಗಳನ್ನು ಹೊಂದಿರುವ ಮೌಸಮ್ ಆ್ಯಪ್

ಸ್ಥಿರತೆಗೆ ಮರಳಿದ ಭಾರತೀಯ ಮಾರುಕಟ್ಟೆ

ಕಳೆದ ಮಾರ್ಚ್ ತಿಂಗಳಿನಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ, ವಿಶೇಷವಾಗಿ ಸ್ಮಾಲ್-ಕ್ಯಾಪ್ (Smal-cap) ಮತ್ತು ಮಿಡ್-ಕ್ಯಾಪ್ ಷೇರುಗಳಲ್ಲಿ ಕಂಡುಬಂದಿದ್ದ ಮಾರ್ಕೆಟ್ ಕರೆಕ್ಷನ್ (Correction) ಅಥವಾ ಕುಸಿತವು ಈಗ ಸ್ಥಿರತೆಗೆ ಮರಳಿದೆ. ಕಂಪನಿಗಳ ಉತ್ತಮ ಆರ್ಥಿಕ ಗಳಿಕೆ (Corporate Earnings) ಮತ್ತು ದೇಶದ ಸದೃಢ ಆರ್ಥಿಕತೆಯು ಮಾರುಕಟ್ಟೆಯ ಮುಂದಿನ ಬೆಳವಣಿಗೆಗೆ ದಾರಿದೀಪವಾಗಿದೆ ಎಂದು ಕ್ವಾಂಟ್ ಮ್ಯೂಚುವಲ್ ಫಂಡ್‌ನ ವರದಿ ಎತ್ತಿ ತೋರಿಸಿದೆ.

ಹೂಡಿಕೆದಾರರ ನಂಬಿಕೆಗೆ ಕಾರಣಗಳೇನು?

  • ಸ್ಥಿರ ಹಣಕಾಸು ನೀತಿಗಳು: ಭಾರತ ಸರ್ಕಾರದ ಸ್ಥಿರವಾದ ಆರ್ಥಿಕ ಮತ್ತು ಹಣಕಾಸು ನೀತಿಗಳು ವಿದೇಶಿ ಹೂಡಿಕೆದಾರರಿಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತಿವೆ.
  • ಸಾಲದ ವಿಸ್ತರಣೆ (Credit Expansion): ದೇಶದ ಬ್ಯಾಂಕಿಂಗ್ ವಲಯದಲ್ಲಿ ಸಾಲದ ವಿತರಣೆ ಮತ್ತು ವಿಸ್ತರಣೆ ಬಲವಾಗಿರುವುದು ಆರ್ಥಿಕ ಚಟುವಟಿಕೆಗಳು ವೇಗವಾಗಿ ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ.
  • ಲಾರ್ಜ್-ಕ್ಯಾಪ್ ಷೇರುಗಳಿಗೆ ಬೇಡಿಕೆ: ಜಾಗತಿಕ ಹೂಡಿಕೆದಾರರು ಸದ್ಯ ಭಾರತದ ಲಾರ್ಜ್-ಕ್ಯಾಪ್ (ದೊಡ್ಡ ಕಂಪನಿಗಳ) ಷೇರುಗಳ ಮೇಲೆ ಹೆಚ್ಚು ಒಲವು ತೋರುತ್ತಿದ್ದು, ಆಯ್ದ ಮಿಡ್ ಮತ್ತು ಸ್ಮಾಲ್-ಕ್ಯಾಪ್ ಕಂಪನಿಗಳಲ್ಲೂ ಹೂಡಿಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಎಐ ಹೆಸರಲ್ಲಿ ಲೇ ಆಫ್; ಉದ್ಯೋಗಿಗಳಿಗೆ ಆಶಾಕಿರಣವಾದ ಚೀನೀ ಕೋರ್ಟ್ ತೀರ್ಪು

ಮುಂಚೂಣಿಯಲ್ಲಿರುವ ಕ್ಷೇತ್ರಗಳು

ಭಾರತದ ಈ ಐತಿಹಾಸಿಕ ಆರ್ಥಿಕ ಬೆಳವಣಿಗೆಗೆ ಪ್ರಮುಖವಾಗಿ ಇಂಧನ (Energy), ಮೂಲಸೌಕರ್ಯ (Infrastructure), ಟೆಲಿಕಾಂ (Telecom) ಮತ್ತು ಫಾರ್ಮಾಸ್ಯುಟಿಕಲ್ಸ್ (Pharmaceuticals – ಔಷಧ ವಲಯ) ಕ್ಷೇತ್ರಗಳು ಭಾರಿ ಕೊಡುಗೆ ನೀಡುತ್ತಿವೆ. ಜಾಗತಿಕ ಮಟ್ಟದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು (Geopolitical Tensions) ಸ್ವಲ್ಪ ಮಟ್ಟಿಗೆ ತಿಳಿಯಾಗುತ್ತಿರುವುದು ಸಹ ಮಾರುಕಟ್ಟೆಯ ಹೂಡಿಕೆಗೆ ಪೂರಕ ವಾತಾವರಣ ಸೃಷ್ಟಿಸಿದೆ.

ಒಟ್ಟಾರೆಯಾಗಿ ತಿಳಿಸುವುದಾದರೆ, ಏಷ್ಯಾದಲ್ಲಿ ಆರ್ಥಿಕ ಚೇತರಿಕೆಯ ರೇಸ್‌ನಲ್ಲಿ ಚೀನಾವನ್ನು ಮಣಿಸಿ ಭಾರತವು ಜಾಗತಿಕ ಹೂಡಿಕೆದಾರರ ಪಾಲಿಗೆ ಅತ್ಯಂತ ಸುರಕ್ಷಿತ ಮತ್ತು ಲಾಭದಾಯಕ ತಾಣವಾಗಿ ಹೊರಹೊಮ್ಮುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಐಷಾರಾಮಿ ಕಾರಿನಲ್ಲಿ ಬಂದ್ರು, ಬೀದಿಯಲ್ಲಿದ್ದ ಹಸುವನ್ನೇ ಕದ್ದುಕೊಂಡು ಹೋದ್ರು!

ಹುಬ್ಬಳ್ಳಿ, ಮೇ 05: ನಗರದಲ್ಲಿ ಐಷಾರಾಮಿ ಕಾರುಗಳಲ್ಲಿ ಬಂದು ರಸ್ತೆ ಬದಿಯ ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದ ಶಿವಮೊಗ್ಗ ಮೂಲದ ಮುಬಾರಕ್ ಮತ್ತು ಆತನ ಇಬ್ಬರು ಸ್ನೇಹಿತರನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್ ಬೇರೆ ಬೇರೆ ಜಿಲ್ಲೆಗಳಿಂದ ಐಷಾರಾಮಿ ಕಾರುಗಳನ್ನು ತಂದು, ಅವುಗಳಿಗೆ ಕಪ್ಪು ಬಣ್ಣದ ಸ್ಟಿಕ್ಕರ್ ಅಂಟಿಸಿ ಗುರುತು ಸಿಗದಂತೆ ಸಂಚರಿಸುತ್ತಿದ್ದರು. ಹುಬ್ಬಳ್ಳಿಯ ಸೆಟಲ್‌ಮೆಂಟ್ ಹಾಗೂ ಹಳೇ ಹುಬ್ಬಳ್ಳಿ ಭಾಗದಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ಜಾನುವಾರುಗಳನ್ನು ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯಗಳನ್ನೇ ಆಧಾರವಾಗಿಟ್ಟುಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳಿಗೆ ಹೆಡೆಮುರಿ ಕಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಳೆಯಿಂದ ಮಂಗಳೂರಿನ ಜನ ಕೂಲ್​ ಕೂಲ್: ದಕ್ಷಿಣ ಕನ್ನಡ ಮತ್ತು ಉಡುಪಿಯ ಈ ಭಾಗಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ – Kannada News | Mangaluru Weather Update: Rain Forecast Across Karnataka from May 6 7, Stay Safe

ಮಂಗಳೂರು, ಮೇ.5: ಕರಾವಳಿ ಕರ್ನಾಟಕದ ಜನತೆಗೆ ಹವಾಮಾನ ಇಲಾಖೆಯು ಮಳೆಯ ಸಿಹಿ ಸುದ್ದಿ ನೀಡಿದೆ. ಮೇ 6ರ ಬುಧವಾರದಿಂದ ಕರಾವಳಿ ಪ್ರದೇಶದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ.ಮಂಗಳವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಬುಧವಾರದಿಂದ ವಾರಾಂತ್ಯದವರೆಗೆ ಕರಾವಳಿಯುದ್ದಕ್ಕೂ ಮಳೆಯಾಗಲಿದ್ದು, ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ.

ಈ ಮಳೆಯ ಅವಧಿಯಲ್ಲಿ ಬಿರುಗಾಳಿ ಹಾಗೂ ಸಿಡಿಲು ಸಹಿತ ಗುಡುಗು ಸಂಭವಿಸುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರು ಜಾಗರೂಕರಾಗಿರಲು ಸೂಚಿಸಲಾಗಿದೆ. ಇದೇ ಸಮಯದಲ್ಲಿ ಉತ್ತರ ಒಳನಾಡಿನ ಕರ್ನಾಟಕದಲ್ಲೂ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಸೋಮವಾರ ಮಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿ.ಸೆ. ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 0.3 ಡಿ.ಸೆ. ಕಡಿಮೆಯಾಗಿದೆ. ಕನಿಷ್ಠ ತಾಪಮಾನ 26.1 ಡಿ.ಸೆ. ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 0.8 ಡಿ.ಸೆ. ಹೆಚ್ಚಾಗಿದೆ.

ಸೋಮವಾರ ಕರಾವಳಿಯ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣವಿದ್ದರೂ ಮಳೆಯಾಗಿರಲಿಲ್ಲ. ಆದರೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಈಗಾಗಲೇ ಸಾಧಾರಣ ಮಳೆಯಾಗಿರುವುದು ವರದಿಯಾಗಿದೆ. ಮೇ 6 ಮತ್ತು 7 ರಂದು ಕೊಡಗು, ಹಾಸನ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಸಂಜೆ ಅಥವಾ ರಾತ್ರಿಯ ಅವಧಿಯಲ್ಲಿ ಲಘು ಅಥವಾ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಇನ್ನೂ 3 ದಿನ ಮಳೆರಾಯನದ್ದೇ ಹವಾ! ದಕ್ಷಿಣ ಒಳನಾಡಿಗೆ ಯೆಲ್ಲೋ ಅಲರ್ಟ್​

ಉತ್ತರ ಒಳನಾಡು (ಬೀದರ್, ಕಲಬುರಗಿ, ಯಾದಗಿರಿ) ಈ ಭಾಗದಲ್ಲಿ ಮೇ 7 ರಂದು ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಉಳಿದಂತೆ ತಾಪಮಾನದಲ್ಲಿ ಸ್ಥಿರತೆ ಕಂಡುಬರಲಿದೆ. ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ವಾರಾಂತ್ಯದಲ್ಲಿ ಗುಡುಗು ಸಹಿತ ಮಳೆ ಹೆಚ್ಚಾಗಲಿದ್ದು, ಪ್ರವಾಸಿಗರು ಜಾಗರೂಕರಾಗಿರಲು ಸೂಚಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:34 pm, Tue, 5 May 26

Source link

ಪಶ್ಚಿಮ ಬಂಗಾಳದಿಂದ ಕೇರಳ ವರೆಗೆ… ಶಾಸಕರಾಗಿ ಆಯ್ಕೆಯಾದ ಮುಸ್ಲಿಮರೆಷ್ಟು ಗೊತ್ತೇ? ಅಚ್ಚರಿಯ ಅಂಕಿಅಂಖ್ಯೆ ಇಲ್ಲಿದೆ ನೋಡಿ – Kannada News | Assembly Election 2026: Statistics of Muslim MLAs Won in West Bengal, Assam, Kerala, and Tamil Nadu

ನವದೆಹಲಿ, ಮೇ 5: ದೇಶದ ರಾಜಕೀಯ ದಿಕ್ಸೂಚಿ ಎಂದೇ ಪರಿಣಮಿಸಿದ್ದ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ (Assembly Election Result 2026) ಹೊರಬಿದ್ದಿದೆ. ಈ ಬಾರಿಯ ಫಲಿತಾಂಶದಲ್ಲಿ ಮುಸ್ಲಿಂ ಸಮುದಾಯದ ಶಾಸಕರ ಸಂಖ್ಯಾಬಲಕ್ಕೆ ಸಂಬಂಧಿಸಿದಂತೆ ಕುತೂಹಲಕಾರಿ ಅಂಕಿಅಂಖ್ಯೆಗಳು ಲಭ್ಯವಾಗಿವೆ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಶಾಸಕರ ಪ್ರಭಾವ ತಗ್ಗಿದರೆ, ಕೇರಳದಲ್ಲಿ ಅವರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.

ಬಂಗಾಳ ಮತ್ತು ಅಸ್ಸಾಂನಲ್ಲಿ ಮುಸ್ಲಿಂ ಶಾಸಕರ ಸಂಖ್ಯೆ ಇಳಿಕೆ

ಜಮ್ಮು ಮತ್ತು ಕಾಶ್ಮೀರದ ನಂತರ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಈ ಬಾರಿ ಶಾಸಕರ ಸಂಖ್ಯೆ ಗಮನಾರ್ಹವಾಗಿ ಇಳಿಕೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ (ಒಟ್ಟು 294 ಸ್ಥಾನಗಳು) ಕಳೆದ ಬಾರಿ 42 ಮುಸ್ಲಿಂ ಶಾಸಕರಿದ್ದರೆ, ಈ ಬಾರಿ ಆ ಸಂಖ್ಯೆ 36ಕ್ಕೆ ಕುಸಿದಿದೆ. ಇವರಲ್ಲಿ 31 ಮಂದಿ ಟಿಎಂಸಿಯಿಂದ ಹಾಗೂ 5 ಮಂದಿ ಕಾಂಗ್ರೆಸ್-ಸಿಪಿಎಂ ಮೈತ್ರಿಯಿಂದ ಗೆದ್ದಿದ್ದಾರೆ.

ಅದೇ ರೀತಿ, ಅಸ್ಸಾಂನಲ್ಲಿ (ಒಟ್ಟು 126 ಸ್ಥಾನಗಳು) ಈ ಬಾರಿ 22 ಮುಸ್ಲಿಂ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಅಸ್ಸಾಂ ಮತ್ತು ಬಂಗಾಳದಲ್ಲಿ ಒಟ್ಟಾರೆಯಾಗಿ 15 ಮುಸ್ಲಿಂ ಶಾಸಕರು ಕಡಿಮೆಯಾಗಿದ್ದಾರೆ. ಅಸ್ಸಾಂನಲ್ಲಿ ಕಾಂಗ್ರೆಸ್‌ನಿಂದ 18, ಬದ್ರುದ್ದೀನ್ ಅಜ್ಮಲ್ ಪಕ್ಷದಿಂದ 2 ಹಾಗೂ ಅಖಿಲ್ ಗೋಗೊಯ್ ಪಕ್ಷದಿಂದ ಒಬ್ಬರು ಗೆದ್ದಿದ್ದಾರೆ.

ಕೇರಳ, ತಮಿಳುನಾಡಿನಲ್ಲಿ ಹೇಗಿದೆ ಮುಸ್ಲಿಂ ಶಾಸಕಸ ಸಂಖ್ಯೆ?

ಬಂಗಾಳಕ್ಕೆ ವ್ಯತಿರಿಕ್ತವಾಗಿ ಕೇರಳದಲ್ಲಿ (ಒಟ್ಟು 140 ಸ್ಥಾನಗಳು) ಮುಸ್ಲಿಂ ಶಾಸಕರ ಸಂಖ್ಯೆ 32 ರಿಂದ 35ಕ್ಕೆ ಏರಿಕೆಯಾಗಿದೆ. ಇಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ನಿಂದ ಅತಿ ಹೆಚ್ಚು ಅಂದರೆ 22 ಶಾಸಕರು ಮತ್ತು ಕಾಂಗ್ರೆಸ್‌ನಿಂದ 8 ಶಾಸಕರು ಆಯ್ಕೆಯಾಗಿದ್ದಾರೆ. ತಮಿಳುನಾಡಿನಲ್ಲಿ ಈ ಬಾರಿ ಒಟ್ಟು 9 ಮುಸ್ಲಿಂ ಶಾಸಕರು ವಿಧಾನಸಭೆ ಪ್ರವೇಶಿಸಿದ್ದಾರೆ.

ಕಾಂಗ್ರೆಸ್ ಮೈತ್ರಿಕೂಟದಲ್ಲಿ ಮುಸ್ಲಿಂ ಅಭ್ಯರ್ಥಿಗಳ ಭರ್ಜರಿ ಯಶಸ್ಸು: ಅಂಕಿಅಂಖ್ಯೆಗಳು ಇಲ್ಲಿವೆ

  • ಅಸ್ಸಾಂ: ಅಸ್ಸಾಂನಲ್ಲಿ ಕಾಂಗ್ರೆಸ್ ಗೆದ್ದಿರುವ ಒಟ್ಟು 19 ಸ್ಥಾನಗಳ ಪೈಕಿ ಬರೋಬ್ಬರಿ 18 ಸ್ಥಾನಗಳಲ್ಲಿ ಮುಸ್ಲಿಂ ಶಾಸಕರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಕಣಕ್ಕಿಳಿಸಿದ್ದ 20 ಮುಸ್ಲಿಂ ಅಭ್ಯರ್ಥಿಗಳಲ್ಲಿ 18 ಮಂದಿ ಗೆಲುವು ಸಾಧಿಸಿದ್ದಾರೆ. ಆದರೆ, ಕಾಂಗ್ರೆಸ್ ಟಿಕೆಟ್ ನೀಡಿದ್ದ ಇತರ 79 ಮುಸ್ಲಿಮೇತರ ಅಭ್ಯರ್ಥಿಗಳಲ್ಲಿ ಗೆದ್ದಿರುವುದು ಕೇವಲ ಒಬ್ಬರು ಮಾತ್ರ.
  • ರಾಯ್​ಜೋರ್ ದಳ: ಕಾಂಗ್ರೆಸ್ ಮಿತ್ರಪಕ್ಷವಾದ ರೈಜೋರ್ ದಳ 2 ಸ್ಥಾನಗಳನ್ನು ಗೆದ್ದಿದ್ದು, ಅದರಲ್ಲಿ ಒಬ್ಬರು ಮುಸ್ಲಿಂ ಅಭ್ಯರ್ಥಿ. ಮತ್ತೊಬ್ಬರು ಅಖಿಲ್ ಗೋಗೊಯ್.
  • ಕೇರಳ: ಕೇರಳ ವಿಧಾನಸಭೆಯ 140 ಸ್ಥಾನಗಳ ಪೈಕಿ ಈ ಬಾರಿ 35 ಮುಸ್ಲಿಂ ಶಾಸಕರು ಆಯ್ಕೆಯಾಗಿದ್ದಾರೆ. ಇವರಲ್ಲಿ 30 ಶಾಸಕರು ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟದವರು. ಕಾಂಗ್ರೆಸ್‌ನ 8 ಮುಸ್ಲಿಂ ಶಾಸಕರು ಮತ್ತು ಮಿತ್ರಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ (IUML) ಎಲ್ಲಾ 22 ಶಾಸಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
  • ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಕೇವಲ 2 ಸ್ಥಾನಗಳನ್ನು ಗೆದ್ದಿದ್ದು, ಇಬ್ಬರೂ ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರಗಳ ಮುಸ್ಲಿಂ ಅಭ್ಯರ್ಥಿಗಳಾಗಿದ್ದಾರೆ. ವಿಶೇಷವೆಂದರೆ, ಟಿಎಂಸಿ (47) ಗಿಂತಲೂ ಹೆಚ್ಚು, ಅಂದರೆ 63 ಮುಸ್ಲಿಂ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು.
  • ತಮಿಳುನಾಡು: ತಮಿಳುನಾಡಿನಲ್ಲಿ ಕಾಂಗ್ರೆಸ್ ಇಬ್ಬರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು, ಅವರಲ್ಲಿ ಒಬ್ಬರು ಗೆದ್ದಿದ್ದಾರೆ.
  • ಗಮನಾರ್ಹ ಅಂಶ: ಕೇರಳ ಮತ್ತು ಅಸ್ಸಾಂ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಮೈತ್ರಿಕೂಟದಿಂದ ಸ್ಪರ್ಧಿಸಿದ್ದ ಮುಸ್ಲಿಂ ಅಭ್ಯರ್ಥಿಗಳ ಗೆಲುವಿನ ಪ್ರಮಾಣ ಶೇಕಡಾ 80ಕ್ಕಿಂತ ಹೆಚ್ಚಿದೆ.

ಇದನ್ನೂ ಓದಿ: ಮನೆ ಕೆಲಸದಾಕೆ ಈಗ ಪಶ್ಚಿಮ ಬಂಗಾಳದ ಶಾಸಕಿ: ಅತ್ಯಾಚಾರ, ಕೊಲೆ ಸಂತ್ರಸ್ತೆಯ ತಾಯಿಯೂ ಆದ್ರು MLA!

ರಾಷ್ಟ್ರ ಮಟ್ಟದಲ್ಲಿ ಮುಸ್ಲಿಂ ಸಮುದಾಯದ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಈ ಬಾರಿಯ ವಿಧಾನಸಭಾ ಫಲಿತಾಂಶಗಳು ಮಿಶ್ರ ಪ್ರತಿಕ್ರಿಯೆಯನ್ನು ನೀಡಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸೋತು ಸುಣ್ಣವಾಗಿರುವ LSG ತಂಡಕ್ಕೆ ಪ್ಲೇಆಫ್​ಗೇರಲು ಇನ್ನೂ ಇದೆ ಚಾನ್ಸ್​!

Source link

ದಾವಣಗೆರೆ ದಕ್ಷಿಣ ಉಪ ಚುನಾವಣೆ ಗೆದ್ದರೂ ಕಾಂಗ್ರೆಸ್​​ಗೆ ತಪ್ಪದ ಚಿಂತೆ: ಕಾರಣ ಇಲ್ಲಿದೆ – Kannada News | Davangere By election: Congress Wins but Margin Sparks Concern Over Muslim Vote Shift

ದಾವಣಗೆರೆ, ಮೇ 05: ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಜಯಗಳಿಸಿದೆ. ಆದರೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಫಲಿತಾಂಶ ಕಾಂಗ್ರೆಸ್‌ಗೆ ಆತಂಕ ಮೂಡಿಸಿದೆ. ಕಾಂಗ್ರೆಸ್ ಗೆದ್ದಿದ್ದರೂ, ವಿಜಯದ ಅಂತರ ಬಹಳ ಕಡಿಮೆಯಾಗಿದೆ. ಇದು ಮುಸ್ಲಿಂ ಮತದಾರರು ಕಾಂಗ್ರೆಸ್‌ನಿಂದ ದೂರ ಸರಿದಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಎಸ್ಡಿಪಿಐ ಅಭ್ಯರ್ಥಿಗೆ ದಾಖಲೆಯ ಸುಮಾರು 19,000 ಮತಗಳು ಬಂದಿದ್ದು, ಇತರೆ ಮುಸ್ಲಿಂ ಅಭ್ಯರ್ಥಿಗಳಿಗೆ 2-3 ಸಾವಿರ ಮತಗಳು ಲಭಿಸಿವೆ. ಈ ಬೆಳವಣಿಗೆಯು ಮುಂದಿನ ದಿನಗಳಲ್ಲಿ 40-50 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ದೊಡ್ಡ ಮಟ್ಟದ ಹಾನಿಯನ್ನುಂಟು ಮಾಡಬಹುದು ಎಂದು ವಿಶ್ಲೇಷಿಸಲಾಗಿದೆ. ಅಲ್ಪಸಂಖ್ಯಾತ ಸಮುದಾಯದ ಅಸಮಾಧಾನವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎನ್ನಲಾಗ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

TV9 Kannada News Live: ಪಶ್ಚಿಮ ಬಂಗಾಳ, ತಮಿಳುನಾಡು ಸರ್ಕಾರ ರಚನೆ ಕಸರತ್ತು; ನೇರ ಪ್ರಸಾರ – Kannada News | Government Formation Efforts Intensify in West Bengal and Tamil Nadu; Thalapathy Vijay’s TVK Eyes Power

ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಪುದುಚೇರಿ, ಕೇರಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಪ್ರಕಟವಾಗಿದ್ದು ಪಶ್ಚಿಮ ಬಂಗಾಳ, ಪುದುಚೇರಿ ಮತ್ತು ಅಸ್ಸಾಂನಲ್ಲಿ ಬಿಜೆಪಿ ಭರ್ಜರಿ ಬಹುಮತ ಗಳಿಸಿದೆ. ಮತ್ತೊಂದೆಡೆ, ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಬಹುಮತ ಗಳಿಸಿದ್ದರೆ, ತಮಿಳುನಾಡಿನಲ್ಲಿ ದಳಪತಿ ವಿಜಯ್ ಅವರ ಟಿವಿಕೆ ಸರಳ ಬಹುಮತಕ್ಕೆ ಸನಿಹದಲ್ಲಿದೆ. ಸದ್ಯ ಟಿವಿಕೆ 107 ಸ್ಥಾನ ಗಳಿಸಿದ್ದು, ಸರ್ಕಾರ ರಚನೆಗೆ 11 ಸದಸ್ಯರ ಬೆಂಬಲ ಟಿವಿಕೆಗೆ ಅಗತ್ಯವಿದೆ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚನೆಯ ಕಸರತ್ತು ಜೋರಾಗಿದೆ. ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ರಾಜಕೀಯ ವಿದ್ಯಮಾನಗಳ ಮತ್ತು ಸರ್ಕಾರ ರಚನೆ ಕಸರತ್ತಿನ ನೇರ ಪ್ರಸಾರ ಇಲ್ಲಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Rishabh Pant: ಹೆಚ್ಚುತ್ತಿದೆ ವಿವಾದ.. ಲಕ್ನೋ ತಂಡದ ನಾಯಕ ಸ್ಥಾನದಿಂದ ಪಂತ್ ವಜಾ?, ಮುಂದಿನ ಕ್ಯಾಪ್ಟರ್ ಯಾರು? – Kannada News | IPL 2026 Consecutive defeats, poor form Rishabh Pant sacked as captain of LSG team?

ಬೆಂಗಳೂರು (ಮೇ. 05): ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಐಪಿಎಲ್ 2026 ಸೀಸನ್ ಅದ್ಭುತವಾಗಿಲ್ಲ. ಸತತ ಸೋಲುಗಳಿಂದ ಕಂಗೆಟ್ಟಿರುವ ತಂಡದ ಪ್ಲೇಆಫ್ ಭರವಸೆ ಬಹುತೇಕ ಕಮರಿಹೋಗಿದೆ. ಇದರ ಜೊತೆಗೆ, ತಂಡದ ಪ್ರದರ್ಶನದ ಬಗ್ಗೆಯೂ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಮಾಜಿ ಕ್ರಿಕೆಟಿಗರು ನಾಯಕ ರಿಷಭ್ ಪಂತ್ (Rishabh Pant) ನಾಯಕತ್ವವನ್ನು ಟೀಕಿಸುತ್ತಿದ್ದಾರೆ. ಮಾಜಿ ಆಟಗಾರರಾದ ಮನೋಜ್ ತಿವಾರಿ ಮತ್ತು ರೋಹನ್ ಗವಾಸ್ಕರ್ ಪಂತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಮುಕ್ತವಾಗಿ ಬ್ಯಾಟಿಂಗ್ ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡವು ಹೀನಾಯ ಸೋಲು ಅನುಭವಿಸಿದ ನಂತರ ಈ ಚರ್ಚೆ ತೀವ್ರಗೊಂಡಿದೆ. ಕಳೆದ ವರ್ಷ ಪಂತ್ ಅವರನ್ನು ಭಾರಿ ಬೆಲೆಗೆ ಖರೀದಿಸಿದ ಲಕ್ನೋ ಆಡಳಿತ ಮಂಡಳಿ, ಅವರನ್ನು ತಮ್ಮ ತಂಡದ ಭವಿಷ್ಯವೆಂದು ಪರಿಗಣಿಸಿತು. ಆದರೆ ಕಳೆದ ವರ್ಷ 14 ಇನ್ನಿಂಗ್ಸ್‌ಗಳಲ್ಲಿ ಕೇವಲ 269 ರನ್ ಗಳಿಸಿದ್ದ ಪಂತ್, ಈ ಋತುವಿನಲ್ಲಿ 9 ಪಂದ್ಯಗಳಲ್ಲಿ 204 ರನ್‌ಗಳಿಗೆ ಸೀಮಿತರಾಗಿದ್ದಾರೆ. ಅವರ ಸ್ಟ್ರೈಕ್ ರೇಟ್ (128.30) ತುಂಬಾ ಚಿಂತಾಜನಕವಾಗಿದೆ. ನಾಯಕತ್ವದ ಒತ್ತಡದಿಂದಾಗಿ ಪಂತ್ ತಮ್ಮ ವಿನಾಶಕಾರಿ ಬ್ಯಾಟಿಂಗ್ ಅನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ರೋಹನ್ ಗವಾಸ್ಕರ್ ಹೇಳಿದ್ದಾರೆ.

“ಪಂತ್ ಒಬ್ಬ ಅದ್ಭುತ ಪ್ರತಿಭೆ ಹೊಂದಿರುವ ಆಟಗಾರ. ಆದರೆ ನಾಯಕತ್ವದ ಹೊರೆ ಅವರನ್ನು ವಿಫಲಗೊಳಿಸುತ್ತಿದೆ. ತಂಡ ಸೋತಾಗ, ಒತ್ತಡ ನಾಯಕನ ಮೇಲೆ ಬೀಳುತ್ತದೆ. ಅದಕ್ಕಾಗಿಯೇ ಅವರನ್ನು ಆ ಜವಾಬ್ದಾರಿಯಿಂದ ಮುಕ್ತಗೊಳಿಸಿ ಬ್ಯಾಟ್ಸ್‌ಮನ್ ಆಗಿ ಮಾತ್ರ ಆಡಿಸಬೇಕು” ಎಂದು ರೋಹನ್ ಗವಾಸ್ಕರ್ ಹೇಳಿದರು. ಮನೋಜ್ ತಿವಾರಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ಪಂತ್‌ರಂತಹ ಅಂತರರಾಷ್ಟ್ರೀಯ ಮಟ್ಟದ ಆಟಗಾರನನ್ನು ನಾವು ಕಳೆದುಕೊಳ್ಳಬಾರದು ಮತ್ತು ಅವರಿಗೆ ಸ್ವಾತಂತ್ರ್ಯ ನೀಡುವುದು ತಂಡಕ್ಕೆ ಮತ್ತು ಅವರಿಗೆ ಒಳ್ಳೆಯದು ಎಂದು ಅವರು ಸಲಹೆ ನೀಡಿದರು.

MI vs LSG: ಪೋಸ್ಟ್ ಮ್ಯಾಚ್​ನಲ್ಲಿ ಉಲ್ಟಾ ಹೊಡೆದ ರಿಷಭ್ ಪಂತ್: ಸೋಲಿಗೆ ಬೌಲರ್ಸ್ ಅಲ್ಲ ಬ್ಯಾಟರ್ಸ್ ಕಾರಣವಂತೆ

ಪಂತ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿದರೆ, ದಕ್ಷಿಣ ಆಫ್ರಿಕಾದ ಟಿ20 ನಾಯಕ ಐಡೆನ್ ಮಾರ್ಕ್ರಾಮ್ ಅವರ ಸ್ಥಾನಕ್ಕೆ ಬರಲು ಸಿದ್ಧರಿದ್ದಾರೆ. ಮಾರ್ಕ್ರಾಮ್ ನಾಯಕತ್ವದಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಸತತ ಎರಡು SA20 ಪ್ರಶಸ್ತಿಗಳನ್ನು ಗೆದ್ದಿದೆ. ವಾಸಿಮ್ ಜಾಫರ್‌ರಂತಹ ಮಾಜಿ ಆಟಗಾರರು ಕೂಡ ಮಾರ್ಕ್ರಾಮ್ ತುಂಬಾ ಶಾಂತ ಮತ್ತು ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಮಾರ್ಕ್ರಾಮ್ ಅತ್ಯುತ್ತಮ ಟಾಪ್-ಆರ್ಡರ್ ಬ್ಯಾಟ್ಸ್‌ಮನ್ ಮಾತ್ರವಲ್ಲ, ತಂತ್ರಗಳನ್ನು ಕಾರ್ಯಗತಗೊಳಿಸುವಲ್ಲಿಯೂ ನಿಪುಣರು ಎಂದಿದ್ದಾರೆ.

ಆದರೆ, ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರಿಗೆ ಪಂತ್ ಮೇಲೆ ಸಾಕಷ್ಟು ಭರವಸೆ ಇದೆ. ಪಂತ್ ಈ ತಂಡದಲ್ಲಿ ಇನ್ನೂ 10-15 ವರ್ಷಗಳ ಕಾಲ ಮುಂದುವರಿಯಲಿದ್ದಾರೆ ಎಂದು ಅವರು ಆಶಿಸಿದ್ದಾರೆ. ಆದರೆ ಪ್ರಸ್ತುತ ಫಲಿತಾಂಶಗಳು ಮತ್ತು ಆಟಗಾರನ ವೈಯಕ್ತಿಕ ಫಾರ್ಮ್ ಅನ್ನು ಗಮನದಲ್ಲಿಟ್ಟುಕೊಂಡು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಲಕ್ನೋ ತಂಡವನ್ನು ಮತ್ತೆ ಹಳಿಗೆ ತರಲು ನಾಯಕತ್ವದಲ್ಲಿ ಬದಲಾವಣೆ ಅಗತ್ಯವಿದೆ ಎಂದು ವಿಶ್ಲೇಷಕರು ನಂಬಿದ್ದಾರೆ. ಪಂತ್ ಮುಂದಿನ ಋತುವಿನಲ್ಲಿ ಅಥವಾ ಈ ಋತುವಿನ ಕೊನೆಯಲ್ಲಿ ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿಯುತ್ತಾರೋ ಅಥವಾ ತಮ್ಮ ಆಟದ ಮೂಲಕ ಟೀಕೆಗಳಿಗೆ ಉತ್ತರಿಸುತ್ತಾರೋ ಎಂಬುದನ್ನು ನೋಡಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version