ಆ್ಯಂಬುಲೆನ್ಸ್​ಗೆ ಕಾದು ಕಾದು ಸಾಕಾಗಿ ರಸ್ತೆ ಬದಿಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ! – Kannada News | Madhya Pradesh Woman Delivers Baby On Roadside After Ambulance Fails To Arrive At Her Village

ನವದೆಹಲಿ, ಫೆಬ್ರವರಿ 2: ಆ ಮಹಿಳೆ ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದರು. ಅವರು ಅಂದುಕೊಂಡದ್ದಕ್ಕಿಂತ ಮೊದಲೇ ಹೆರಿಗೆ ನೋವು (Delivery Pain) ಕಾಣಿಸಿಕೊಂಡಿದ್ದರಿಂದ ತಕ್ಷಣ ತಮ್ಮ ಹಳ್ಳಿಯಿಂದ ಆಸ್ಪತ್ರೆಗೆ ಹೋಗಲೇಬೇಕಾಗಿತ್ತು. ಆದರೆ, ಆ ಊರಿಗೆ ರಸ್ತೆ ಸರಿ ಇಲ್ಲದ ಕಾರಣದಿಂದ ಆ್ಯಂಬುಲೆನ್ಸ್​ (Ambulance) ಬರುವುದೇ ಕಷ್ಟವಾಗಿತ್ತು. ಆದರೂ ಅನಿವಾರ್ಯವಾದ್ದರಿಂದ ಹಾಗೂ ಬೇರೆ ವಾಹನಗಳಲ್ಲಿ ಅವರನ್ನು ಕರೆದುಕೊಂಡು ಹೋಗಲಾಗದ ಸ್ಥಿತಿ ಇದ್ದುದರಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆ್ಯಂಬುಲೆನ್ಸ್​ ಕಳುಹಿಸಲು ಮನವಿ ಮಾಡಲಾಗಿತ್ತು.

ಆದರೆ, ಈಗ ಬರುತ್ತೇವೆಂದು ಆ್ಯಂಬುಲೆನ್ಸ್​ನವರು ಹೇಳಿದ್ದರಿಂದ ಆ ಮಹಿಳೆ ರಸ್ತೆಯ ಬಳಿ ಹೋಗಿ ನಿಂತು ಕಾಯುತ್ತಿದ್ದರು. ಎಷ್ಟೇ ಹೊತ್ತು ಕಾದರೂ ಆ್ಯಂಬುಲೆನ್ಸ್ ಬರಲೇ ಇಲ್ಲ. ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಅವರು ಇನ್ನು ಕಾಯಲು ಸಾಧ್ಯವೇ ಇಲ್ಲ ಎಂದು ರಸ್ತೆಬದಿಯಲ್ಲೇ ಕುಳಿತರು. ತಾತ್ಕಾಲಿಕ ಪರದೆಯಂತೆ ಟಾರ್ಪಲ್ ಕಟ್ಟಿದ ಆ ಊರಿನ ಮಹಿಳೆಯರು ಟಾರ್ಚ್ ಬೆಳಕು ಹಾಕಿಕೊಂಡು ರಸ್ತೆ ಬದಿಯಲ್ಲೇ ಆ ಮಹಿಳೆಗೆ ಹೆರಿಗೆ ಮಾಡಿಸಿದರು. ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಗರ್ಭಿಣಿ ಮಹಿಳೆಯೊಬ್ಬರು ಟಾರ್ಚ್ ಬೆಳಕಿನಲ್ಲಿ ರಸ್ತೆಬದಿಯಲ್ಲಿಯೇ ಮಗುವನ್ನು ಹೆತ್ತಿದ್ದಾರೆ.

ಇದನ್ನೂ ಓದಿ: ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಮಹಿಳೆಗೆ ಹೆರಿಗೆ: ಸರ್ಕಾರಿ ಆಸ್ಪತ್ರೆ ಅವಸ್ಥೆ ವಿಡಿಯೋ ವೈರಲ್

ಕುಟುಂಬದವರ ಪ್ರಕಾರ, ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಗರ್ಭಿಣಿ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಅದಾದ ನಂತರ 108 ಆ್ಯಂಬುಲೆನ್ಸ್ ಸೇವೆಗೆ ಪದೇ ಪದೇ ಫೋನ್ ಮಾಡಲಾಯಿತು. ಆ ಕುಟುಂಬವು ಸುಮಾರು 3 ಗಂಟೆಗಳ ಕಾಲ ಕಾಯುತ್ತಿತ್ತು. ಆದರೆ, ಯಾವುದೇ ಆಂಬ್ಯುಲೆನ್ಸ್ ಬರಲಿಲ್ಲ. ಅಷ್ಟರಲ್ಲಿ ಆ ಮಹಿಳೆಗೆ ನೋವು ಹೆಚ್ಚಾಗಿತ್ತು. ಹೀಗಾಗಿ, ಅವರ ಕುಟುಂಬವು ಅವರನ್ನು ಕಾಲ್ನಡಿಗೆಯಲ್ಲಿಯೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿತು.

ಇದನ್ನೂ ಓದಿ: Viral: ಹೆರಿಗೆಯಾದ 17 ದಿನಕ್ಕೆ ಯುಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದ ಕೇರಳದ ಮಹಿಳೆ

ಆದರೆ, ಮಧ್ಯದಲ್ಲಿಯೇ ಹೆರಿಗೆ ನೋವು ತೀವ್ರಗೊಂಡ ಕಾರಣ ರಸ್ತೆಬದಿಯಲ್ಲೇ ಹೆರಿಗೆಯನ್ನು ಮಾಡಬೇಕಾಯಿತು. ತೀವ್ರವಾದ ಚಳಿಯಲ್ಲಿಯೇ ಆ ಮಹಿಳೆ ರಸ್ತೆಬದಿ ಮಗುವಿಗೆ ಜನ್ಮ ನೀಡಿದರು. ಆ ಮಹಿಳೆ ಮತ್ತು ಅವರ ಶಿಶುವನ್ನು ಶೀತದಿಂದ ರಕ್ಷಿಸಲು, ಗ್ರಾಮಸ್ಥರು ಬಟ್ಟೆ, ಪ್ಲಾಸ್ಟಿಕ್ ಹಾಳೆಗಳು ಮತ್ತು ಸಾಮಗ್ರಿಗಳನ್ನು ತಂದು ಬೆಚ್ಚಗಿಡಲು ಬೆಂಕಿಯನ್ನು ಹಚ್ಚಿದರು. ಬೆಳಗಿನ ಜಾವ 3.20ರ ಸುಮಾರಿಗೆ ವ್ಯಾನ್ ಚಾಲಕನೊಬ್ಬ ಬಂದು ತಾಯಿ ಮತ್ತು ನವಜಾತ ಶಿಶುವನ್ನು ತನ್ನ ವ್ಯಾನ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದನು.

ಆರೋಗ್ಯ ಇಲಾಖೆಯ ಪ್ರಕಾರ, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಆದರೂ ಈ ಘಟನೆಯು ರಾಜ್ಯದಲ್ಲಿ ತುರ್ತು ಆರೋಗ್ಯ ಸೇವೆ ಮತ್ತು ತಾಯಿಯ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಅಹಿತಕರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:35 pm, Mon, 2 February 26

Source link

ಮಗುವಿಗೆ ಜನ್ಮ ನೀಡಿದ 8ನೇ ಕ್ಲಾಸ್ ಬಾಲಕಿ; ಹಾಸ್ಟೆಲ್​ನಲ್ಲಿದ್ದ ಬಾಲಕಿ ಗರ್ಭಿಣಿಯಾಗಿದ್ದು ಹೇಗೆ? – Kannada News | Class 8 student gets pregnant in Government Hostel Gave Birth to Child

ನವದೆಹಲಿ, ಫೆಬ್ರವರಿ 2: ಆಕೆಗೆ ಕೇವಲ 13 ವರ್ಷ. ಓದುವ ಸಲುವಾಗಿ ಮನೆಯಲ್ಲಿ ಹಠ ಮಾಡಿ ಹಾಸ್ಟೆಲ್ ಸೇರಿದ್ದ ಆಕೆ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ತಮ್ಮ ಮಗಳು ಸರ್ಕಾರಿ ಹಾಸ್ಟೆಲ್​ನಲ್ಲಿ ಸುರಕ್ಷಿತಳಾಗಿದ್ದಾಳೆ ಎಂದು ಆಕೆಯ ಪೋಷಕರು ಕೂಡ ನಿರಾಳವಾಗಿದ್ದರು. ಆದರೆ, ಆಕೆ ಗರ್ಭಿಣಿಯಾಗಿದ್ದಾಳೆ ಎಂಬ ವಿಷಯ ತಿಳಿದು ಅವರ ಎದೆ ಒಡೆದುಹೋಗಿತ್ತು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಗುವನ್ನು ಹೆರಲು ಸಾಧ್ಯವಿಲ್ಲವೆಂದು ಆ ಮಗುವನ್ನು ಅಬಾರ್ಷನ್ ಮಾಡಿಸೋಣ ಎಂದು ಅವರು ನಿರ್ಧಾರ ಮಾಡುವಷ್ಟರಲ್ಲಿ ಸಮಯ ಮೀರಿ ಹೋಗಿತ್ತು. ಇನ್ನೇನು 3-4 ತಿಂಗಳಲ್ಲಿ ಡೆಲಿವರಿಯೇ ಆಗುತ್ತದೆ ಎಂದು ವೈದ್ಯರು ಹೇಳಿದ್ದರು. ಅಲ್ಲಿಯವರೆಗೂ ತಾನು ಗರ್ಭಿಣಿ (Pregnant) ಎಂಬ ವಿಷಯ ಆ ಬಾಲಕಿಗೂ ಗೊತ್ತಿರಲಿಲ್ಲ.

ಮಧ್ಯ ಪ್ರದೇಶದ ಬಾಲಘಾಟ್​​ನ ಸರ್ಕಾರಿ ಹಾಸ್ಟೆಲ್‌ನಲ್ಲಿ 8ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದಿತ್ತು. ಹಲವು ತಿಂಗಳುಗಳ ಕಾಲ ಆಕೆಯ ಮೇಲೆ ದೌರ್ಜನ್ಯ ನಡೆಸಿದ ಕಾಮುಕರು ಆಕೆಗೆ ಕೊಲೆ ಬೆದರಿಕೆ ಹಾಕಿದ್ದರು. ಆಕೆ ಗರ್ಭಿಣಿಯಾದ ನಂತರ ಈ ಘೋರ ಕೃತ್ಯ ಬಯಲಾಗಿತ್ತು. ಇದೀಗ ಆಕೆ ಮಗುವಿಗೂ ಜನ್ಮ ನೀಡಿದ್ದಾಳೆ.

ಹಾಸ್ಟೆಲ್​ನಲ್ಲಿ ಓದುತ್ತಿದ್ದ 13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಆದರೆ, ಆಕೆ ಈ ಬಗ್ಗೆ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಆರೋಪಿಯು ಸುಮಾರು 4 ತಿಂಗಳ ಕಾಲ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡುತ್ತಲೇ ಇದ್ದ. ಆತ ಆಕೆಗೆ ಕೊಲೆ ಬೆದರಿಕೆ ಹಾಕುತ್ತಿದ್ದ. ಇತ್ತೀಚೆಗೆ ಆ ಬಾಲಕಿಯ ಆರೋಗ್ಯ ಹದಗೆಟ್ಟಾಗ ಆಕೆಯನ್ನು ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ತಪಾಸಣೆ ಮಾಡಿದಾಗ ಆಕೆ 5 ತಿಂಗಳ ಗರ್ಭಿಣಿ ಎಂದು ತಿಳಿದುಬಂದಿತ್ತು. ಈ ಘಟನೆಯು ಖುರೈನಲ್ಲಿರುವ ಬುಡಕಟ್ಟು ಸರ್ಕಾರಿ ಹಾಸ್ಟೆಲ್‌ನಲ್ಲಿ ನಡೆದಿದೆ. ವಿದ್ಯಾರ್ಥಿನಿಯನ್ನು ಭೋಪಾಲ್‌ನ ಹಮೀದಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ: ಹೆತ್ತ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯವೆಸಗಿ ಗರ್ಭಿಣಿ ಮಾಡಿದ ಅಪ್ಪನಿಗೆ ಗಲ್ಲು ಶಿಕ್ಷೆ!

ಆ ಬಾಲಕಿ 2 ವರ್ಷಗಳಿಂದ ಹಾಸ್ಟೆಲ್​ನಲ್ಲಿ ವಾಸವಾಗಿದ್ದಳು. ಆರೋಪಿಗಳು ಹಾಸ್ಟೆಲ್‌ಗೆ ತರಕಾರಿ ಕೊಡಲು ಬರುತ್ತಿದ್ದರು. ಅಲ್ತಾಫ್ ಎಂಬ ಯುವಕ ಹಾಸ್ಟೆಲ್‌ಗೆ ತರಕಾರಿ ನೀಡಲು ಬರುತ್ತಿದ್ದ. ಸೆಪ್ಟೆಂಬರ್ 2025ರಲ್ಲಿ ಆತ ಆ ವಿದ್ಯಾರ್ಥಿನಿಯ ಕೋಣೆಗೆ ಬಲವಂತವಾಗಿ ನುಗ್ಗಿ ಬಾಗಿಲು ಮುಚ್ಚಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದ. ಆಕೆ ವಿರೋಧಿಸಿದಾಗ, ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.

ಭಯಗೊಂಡ ವಿದ್ಯಾರ್ಥಿನಿ ಈ ಬಗ್ಗೆ ಯಾರಿಗೂ ಹೇಳಲಿಲ್ಲ. ನಂತರ, ಆರೋಪಿಗೆ ಅವಕಾಶ ಸಿಕ್ಕಾಗಲೆಲ್ಲಾ ಆಕೆಯ ಮೇಲೆ ಅತ್ಯಾಚಾರ ಮಾಡುತ್ತಲೇ ಇದ್ದ. ಆ ವಿದ್ಯಾರ್ಥಿನಿಗೆ ಹೊಟ್ಟೆ ನೋವು ಕಾಣಿಸಿಕೊಂಡಾಗ, ಅವಳು ವಾರ್ಡನ್ ಮತ್ತು ಕಾವಲುಗಾರನಿಗೆ ಮಾಹಿತಿ ನೀಡಿದ್ದಳು. ಆ ವಾರ್ಡನ್ ವಿದ್ಯಾರ್ಥಿನಿಯ ಪೋಷಕರಿಗೆ ಕರೆ ಮಾಡಿದ್ದರು. ಕುಟುಂಬದ ಸದಸ್ಯರು ಆಕೆಯನ್ನು ಭೋಪಾಲ್‌ನ ಹಮೀದಿಯಾ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಪರೀಕ್ಷೆಯ ಸಮಯದಲ್ಲಿ ವೈದ್ಯರು ಆಕೆ ಗರ್ಭಿಣಿ ಎಂದು ಬಹಿರಂಗಪಡಿಸಿದ್ದರು.

ಇದನ್ನೂ ಓದಿ: ಐದು ವರ್ಷದ ಬಾಲಕಿಯನ್ನು ಬೆದರಿಸಿ 55 ವರ್ಷದ ವ್ಯಕ್ತಿಯಿಂದ 5 ದಿನಗಳ ಕಾಲ ಅತ್ಯಾಚಾರ

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಬುಡಕಟ್ಟು ವ್ಯವಹಾರಗಳ ಇಲಾಖೆಯ ಸಹಾಯಕ ಆಯುಕ್ತರು ಕಸ್ತೂರ್ಬಾ ಗಾಂಧಿ ಬಾಲಿಕಾ ಹಾಸ್ಟೆಲ್‌ನ ಸೂಪರಿಂಟೆಂಡೆಂಟ್ ಚೈನ್‌ಬಾಟಿ ಸೈಯಂ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ. ಆ ಬಾಲಕಿಯ ದೇಹದಲ್ಲಿ ಯಾವ ಬದಲಾವಣೆಯನ್ನೂ ನೀವು ಗುರುತಿಸಲಿಲ್ಲವೇ? ಎಂಬ ಪ್ರಶ್ನೆ ಮಾಡಿರುವ ಅವರು ಈ ಆದೇಶ ಹೊರಡಿಸಿದ್ದಾರೆ.

ಈ ಘಟನೆ ವರದಿಯಾದ ತಕ್ಷಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಬಾಲಕಿಯ ಹೇಳಿಕೆಯ ಆಧಾರದ ಮೇಲೆ, ಪೊಲೀಸರು ಆ ಗ್ರಾಮದ ಯುವಕನನ್ನು ಬಂಧಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಈ ಎರಡು ದಿನ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ, ಯಾವಾಗ-ಎಲ್ಲೆಲ್ಲಿ? – Kannada News | Bengaluru to face 2 day Cauvery water disruption on Feb 5 And 6 due to BWSSB emergency pipeline works

ಬೆಂಗಳೂರು, (ಫೆಬ್ರವರಿ 02): ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ವ್ಯಾಪ್ತಿಯಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಲಿದೆ. ಹೀಗಾಗಿ ಇದೇ ಫೆಬ್ರವರಿ 5 ಮತ್ತು 6ರಂದು ಬೆಂಗಳೂರು ನಗರದ ವಿವಿಧೆಡೆ ಕಾವೇರಿ ನೀರು (Cauvery water )ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ. ಈ ಬಗ್ಗೆ ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌ ಮಾಹಿತಿ ನೀಡಿದ್ದು, ನಾಗರಿಕರು ಮುಂಜಾಗ್ರತೆಯಾಗಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಸೂಚಿಸಿದ್ದಾರೆ.

ಬೆಂಗಳೂರು ನೀರು ಸರಬರಾಜು ಮತ್ತು ಮಂಡಳಿಯ ವತಿಯಿಂದ ಸರಬರಾಜು ವತಿಯಿಂದ ನಿರ್ಮಾಣ 1200ಎಂಎಂ, 900 ಎಂಎಂ ಹಾಗೂ 700ಎಂಎಂ ವ್ಯಾಸದ ನೀರು ಸರಬರಾಜು ಪೈಪ್ ಲೈನ್ ಅಳವಡಿಕೆ ಕಾಮಗಾರಿ ನಡೆಯಲಿದೆ. ಈ ಕಾರಣದಿಂದ ಕಾವೇರಿ ನೀರು ಸರಬರಾಜು ಯೋಜನೆಯ ಮೊದಲನೇ ಮತ್ತು ಎರಡನೇ ಹಂತಗಳ ಜಲರೇಚಕ ಯಂತ್ರಗಾರಗಳನ್ನು ಫೆಬ್ರವರಿ 5 ಗುರುವಾರದಂದು ಬೆಳಗ್ಗೆ 6ರಿಂದ ಫೆಬ್ರವರಿ 6 ಶುಕ್ರವಾರ ಬೆಳಗ್ಗೆ 6 ಗಂಟೆವರೆಗೆ ರವರೆಗೆ ಒಟ್ಟು 24 ಗಂಟೆ ಸ್ಥಗಿತಗೊಳಿಸಲಾಗುತ್ತಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರೇ ಎಚ್ಚರ: ನಿಮ್ಮೇಲೆ ಇರಲಿದೆ ವಿಶೇಷ ಸಿಬ್ಬಂದಿಗಳ ಕಣ್ಣು, ಈ ತಪ್ಪುಗಳನ್ನು ಮಾಡಬೇಡಿ

ಯಾವ್ಯಾವ ಏರಿಯಾದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ?

ಬೆಂಗಳೂರು ನಗರದ ಮಾಗಡಿ ರಸ್ತೆ, ಕದ್ರೆನಹಳ್ಳಿ, ಗಂಗಾಧರ ನಗರ, ಪ್ರಗತಿಪುರ, ಪದ್ಮನಾಭ ನಗರ, ಆರ್.ಕೆ ಲೇಔಟ್, ಚಿಕ್ಕಲ್ಲಸಂದ್ರ, ಹನುಮಗಿರಿ ನಗರ, ಮುನೇಶ್ವರ ನಗರ, ಬೇಂದ್ರೆನಗರ, ಕುಮಾರಸ್ವಾಮಿ ಬಡಾವಣೆ 1ನೇ ಮತ್ತು 2ನೇ ಹಂತ, ಚಂದ್ರನಗರ, ಮಾರುತಿ ಬಡಾವಣೆ, ವಿಠ್ಠಲ್ ನಗರ, ಇಸ್ರೋ ಬಡಾವಣೆ, ಟೀಚರ್ಸ್ ಕಾಲೋನಿ, ಯಲಚೇನಹಳ್ಳಿ, ಕನಕಪುರ ಮುಖ್ಯರಸ್ತೆ, ಇಲಿಯಾಸ್ ನಗರ, ಪೂರ್ಣ ಪ್ರಜ್ಞಾ ಬಡಾವಣೆ, ಮಿನಜ್ ನಗರ, ಉತ್ತರಹಳ್ಳಿ, ಕೆ.ಎಸ್.ಆರ್.ಟಿ.ಸಿ ಬಡಾವಣೆ, ಅಂಕಪ್ಪ ಬಡಾವಣೆ, ಗುಮ್ಮಯ್ಯ ಬಡಾವಣೆ, ಬನಶಂಕರಿ 5ನೇ ಹಂತ.

ಎ.ಜಿ.ಎಸ್ ಬಡಾವಣೆ, ಸಾರ್ವಭೌಮನಗರ ಸುಬ್ರಮಣ್ಯಪುರ, ಬಿ.ಹೆಚ್.ಸಿ.ಎಸ್ ಬಡಾವಣೆ, ಕೆನರಾ ಬ್ಯಾಂಕ್ ಕಾಲೋನಿ, ಕಾಕತೀಯ ನಗರ, ಸುದ್ದಗುಂಟೆಪಾಳ್ಯ, ಮಾರುತಿ ನಗರ, ಭವಾನಿ ಲೇಔಟ್‌, ವೆಂಟೇಶ್ವರ ಬಡಾವಣೆ, ಬೃಂದಾವನ ಲೇಔಟ್‌, ಮಡಿವಾಳ, ಚಿನ್ನಮ್ಮ ಲೇಔಟ್‌, ಕೋರಮಂಗಲ 2,4,5,6,7 ಮತ್ತು 8 ನೇ ಬ್ಲಾಕ್‌, ಚಿಕ್ಕಆಡುಗೋಡಿ, ಸೆಂಟ್‌ ಜಾನ್‌ ಆಸ್ಪತ್ರೆ, ರಾಜೇಂದ್ರ ನಗರ, ಆಡುಗೋಡಿ, ಜಾನ್ಸ್‌ನ್‌ ಮಾರ್ಕೆಟ್‌, ಸಿಎಲ್‌ಆರ್‌, ಶಾಂತಿನಗರ, ಲಾಗ್‌ ಪೋರ್ಡ್‌ ಟೌನ್‌, ಎಂಜಿ ರಸ್ತೆ, ರಿಚ್‌ಮಂಡ್‌ ಟೌನ್‌, ನೀಲಸಂದ್ರ, ಅಶೋಕ್‌ ನಗರ, ಆಸ್ಟಿನ್‌ ಟೌನ್‌, ವಿವೇಕ್‌ ನಗರ, ಈಜಿಪುರ, ದೊಮ್ಮಲೂರು ಲೇಔಟ್‌, ದೊಮ್ಮಲೂರು ವಿಲೇಜ್‌, ಕೋಡಿಹಳ್ಳಿ, ಕಮಾಂಡೋ ಆಸ್ಪತ್ರೆ, ಜೋಗಿಪಾಳ್ಯ, ಕೇಂಬ್ರಿಡ್ಜ್‌ ಲೇಔಟ್‌ ಚಾಮರಾಜಪೇಟೆ, ಶ್ರೀನಗರ ಬಿಎಸ್‌ಕೆ 1ನೇ ಹಂತ.

ಅಶೋಕ್‌ ನಗರ ಪೈಪ್‌ ಲೈನ್‌ ರಸ್ತೆ, ಜಯನಗರ 4ನೇ ಮತ್ತು ʼಟಿʼ ಬ್ಲಾಕ್‌, ತಿಲಕ್‌ ನಗರ, ಮಾಧವನ ಪಾರ್ಕ್‌ , ಹೊಂಬೇಗೌಡ ನಗರ, ಲಕ್ಕಸಂದ್ರ, ಶಾಂತಿನಗರ ಲೇಔಟ್‌, ಜೆಕೆಪುರ, ಅಕ್ಕಿತಿಮ್ಮನ ಹಳ್ಳಿ, ಜಗಜೀವನರಾಮನಗರ, ರುದ್ರಪ್ಪ ಗಾರ್ಡನ್‌, ವಾಲ್ಮೀಕಿ ನಗರ, ಮಾವಳ್ಳಿ, ಶಂಕರಪುರಂ, ಕೆಂಪೇಗೌಡನಗರ, ಸುಧಾಮನಗರ, ಬನಗಿರಿ, ಜಯನಗರ, 6,7 ಮತ್ತು 8ನೇ ಬ್ಲಾಕ್‌, ಯಡಿಯೂರು, ಇಟ್ಟಮಡು, ಎಸ್‌ಬಿಎಂ ಕಾಲೋನಿ, ಹೊಸಕೆರೆಹಳ್ಳಿ, ಐಟಿಐ ಲೇಔಟ್‌, ಶ್ರೀನಿವಾಸ ನಗರ, ಡಿಸೋಜಾ ನಗರ, ಕೆರೆಕೋಡಿ, ಮುನೇಶ್ವರ ನಗರ, ಜೆಪಿನಗರ 1, 2 ಮತ್ತು 3ನೇ ಹಂತ, ಮಾರೇನಹಳ್ಳಿ, ಜಯನಗರ 5 ಮತ್ತು 9ನೇ ಬ್ಲಾಕ್‌, ಭೈರಸಂದ್ರ, ಎಲ್‌ ಐ ಸಿ ಕಾಲೋನಿ, ಸಿದ್ದಾಪುರ, ವಿಲ್ಸ್‌ನ್‌ ಗಾರ್ಡನ್, ನಿಮಾನ್ಸ್ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್  ಮಾಡಿ

Published On – 8:13 pm, Mon, 2 February 26

Source link

ಭಾರತ-ಅಮೆರಿಕ ಟ್ರೇಡ್ ಡೀಲ್ ಮಾತುಕತೆ ಬಹುತೇಕ ಪೂರ್ಣ: ವಾಣಿಜ್ಯ ಕಾರ್ಯದರ್ಶಿ – Kannada News | India US trade deal talks near completion, says commerce secretary Rajesh Agarwal

ನವದೆಹಲಿ, ಫೆಬ್ರುವರಿ 2: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (India US trade deal) ಅಂತಿಮ ಹಂತದಲ್ಲಿದ್ದು, ಬಹುತೇಕ ಪೂರ್ಣಗೊಂಡಿದೆ ಎಂದು ವಾಣಿಜ್ಯ ಕಾರ್ಯದರ್ಶಿ ಹಾಗೂ ಈ ಡೀಲ್​ಗೆ ಭಾರತದ ಮುಖ್ಯ ಸಂಧಾನಕಾರರಾದ ರಾಜೇಶ್ ಅಗರ್ವಾಲ್ ಹೇಳಿದ್ದಾರೆ. ಡೀಲ್ ಮುಗಿದೇ ಹೋಯಿತು ಎಂದು ಆಗಾಗ್ಗೆ ಮಿಂಚಿ ಮಾಯವಾಗುತ್ತಿದ್ದ ಭರವಸೆಗೆ ರಾಜೇಶ್ ಅಗರ್ವಾಲ್ ಜೀವ ತುಂಬಿದ್ದಾರೆ. ಎರಡು ದೇಶಗಳ ನಡುವೆ ವ್ಯಾಪಾರ ಸಂಧಾನ ಸರಿಯಾದ ದಿಸೆಯಲ್ಲಿದೆ ಎನ್ನುವ ಸುಳಿವನ್ನು ಅವರು ನೀಡಿದ್ದಾರೆ.

ದೊಡ್ಡ ಡೀಲ್​ಗೆ ಹೆಚ್ಚು ಸಮಯ ಬೇಕು

ದೊಡ್ಡ ಆರ್ಥಿಕತೆಗಳ ನಡುವೆ ವ್ಯಾಪಾರ ಒಪ್ಪಂದ ಏರ್ಪಡಲು ಸಮಯ ಹಿಡಿಯುತ್ತದೆ ಎಂದು ವಾಣಿಜ್ಯ ಕಾರ್ಯದರ್ಶಿಗಳು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ‘ಅಮೆರಿಕವು ದೊಡ್ಡ ಆರ್ಥಿಕತೆಯಾದ್ದರಿಂದ ಸಮಗ್ರವಾದ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮ ಗೊಳಿಸಲು ಹೆಚ್ಚು ಸಮಯ ಹಿಡಿಯುತ್ತದೆ’ ಎಂದಿದ್ದಾರೆ ಅವರು. ಆದರೆ, ವಿಸ್ತೃತವಾದ ಒಪ್ಪಂದ ಯಾವಾಗ ಪೂರ್ಣಗೊಳ್ಳುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಭಾರತ ಕಳೆದ ತಿಂಗಳಷ್ಟೇ ಐರೋಪ್ಯ ಒಕ್ಕೂಟದ ಜೊತೆ ಬಹಳ ದೊಡ್ಡ ಒಪ್ಪಂದ ಮಾಡಿಕೊಂಡಿದೆ. ಬ್ರಿಟನ್, ಇಎಫ್​ಟಿಎ ದೇಶಗಳೊಂದಿಗೂ ಭಾರತ ಕಳೆದ ವರ್ಷ ಒಪ್ಪಂದ ಮಾಡಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜೇಶ್ ಅಗರ್ವಾಲ್, ‘ಈ ಎಲ್ಲಾ ಒಪ್ಪಂದಗಳು ಚಾಲನೆಗೆ ಬಂದ ಬಳಿಕ ಶೇ. 55-60ರಷ್ಟು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತದ ರಫ್ತಿಗೆ ಆದ್ಯತೆಯ ಪ್ರವೇಶ ಸಿಗುತ್ತದೆ. ಇದರಿಂದ ಭಾರತದ ರಫ್ತು ಸ್ಪರ್ಧಾತ್ಮಕತೆ ಬಲಗೊಳ್ಳುತ್ತದೆ’ ಎಂದು ವಾಣಿಜ್ಯ ಕಾರ್ಯದರ್ಶಿಯಾದ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಭಾರತದ ಬಗ್ಗೆ ಇಲಾನ್ ಮಸ್ಕ್ ಟ್ವೀಟ್; ರಾಹುಲ್ ಮತ್ತು ವಿಪಕ್ಷಗಳನ್ನು ಝಾಡಿಸಿದ ಕೇಂದ್ರ ಸಚಿವರು

ಭಾರತ 2024-25ರಲ್ಲಿ 825 ಬಿಲಿಯನ್ ಡಾಲರ್​ನಷ್ಟು ರಫ್ತು ಮಾಡಿತ್ತು. 2025-26ರಲ್ಲಿ 850 ಬಿಲಿಯನ್ ಡಾಲರ್ ರಫ್ತಿಗೆ ಗುರಿ ಇಡಲಾಗಿದೆ. ಭಾರತದ ರಫ್ತಿಗೆ ಅಮೆರಿಕವೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಆದರೆ, ಶೇ. 50ರಷ್ಟು ಟ್ಯಾರಿಫ್ ಇರುವ ಪರಿಣಾಮ ಭಾರತದ ರಫ್ತು ಹೆಚ್ಚಳಕ್ಕೆ ಪ್ರಮುಖ ತಡೆಯಾಗಿದೆ. ಐರೋಪ್ಯ ಒಕ್ಕೂಟ ಸೇರಿದಂತೆ ವಿವಿಧ ದೇಶಗಳ ನಡುವೆ ಮಾಡಿಕೊಂಡಿರುವ ಟ್ರೇಡ್ ಡೀಲ್​ಗಳು ಭಾರತದ ರಫ್ತಿಗೆ ಹೆಚ್ಚಿನ ವೈವಿಧ್ಯತೆ ಮತ್ತು ವಿಸ್ತೃತತೆ ತರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಚಿತ್ರೋತ್ಸವ: ಫೆ.3ರಂದು ವೀಕ್ಷಿಸಬಹುದಾದ 10 ಬೆಸ್ಟ್ ಸಿನಿಮಾಗಳಿವು.. – Kannada News | Watch these 10 movies on Feb 3 in Bengaluru International Film Festival

ಹಲವು ದೇಶಗಳ ಸಿನಿಮಾಗಳನ್ನು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (BIFFes) ಪ್ರದರ್ಶನ ಮಾಡಲಾಗುತ್ತಿದೆ. ಸುಚಿತ್ರಾ ಫಿಲ್ಮ್ ಸೊಸೈಟಿ, ಲುಲು ಮಾಲ್ ಹಾಗೂ ಕಲಾವಿದರ ಸಂಘದಲ್ಲಿ ಸಿನಿಮಾಗಳ ಪ್ರದರ್ಶನ ಆಗುತ್ತಿದೆ. ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಎಂಬ ಥೀಮ್​​ನಲ್ಲಿ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. ಯಾವ ಸಿನಿಮಾ ನೋಡಬೇಕು ಎಂಬ ಗೊಂದಲ ಇದ್ದವರಿಗೆ ಉಪಯುಕ್ತ ಮಾಹಿತಿ ಇಲ್ಲಿದೆ..

1. ಡೆಡ್ ಡಾಗ್ – ಲೆಬನಾನ್/ ಫ್ರಾನ್ಸ್. (ಸಮಯ: ಮಧ್ಯಾಹ್ನ 3:10, ಸ್ಕ್ರೀನ್ 1). ವಿವರ: ಸಾರಾ ಫ್ರಾನ್ಸಿಸ್ ನಿರ್ದೇಶನದ ಈ 2025ರ ಅರೇಬಿಕ್ ಚಿತ್ರವು ಸಮಕಾಲೀನ ಸಂಬಂಧಗಳ ಸಂಕೀರ್ಣತೆಯನ್ನು ತೆರೆದಿಡುತ್ತದೆ. 92 ನಿಮಿಷಗಳ ಅವಧಿಯ ಈ ಸಿನಿಮಾ ಅಂತರಾಷ್ಟ್ರೀಯ ವಿಭಾಗದಲ್ಲಿ ಗಮನ ಸೆಳೆದಿದೆ.

2. ದ ಪೋರ್ಚುಗೀಸ್ ಹೌಸ್ – ಸ್ಪೇನ್ (ಸಮಯ: ಬೆಳಗ್ಗೆ 10:10, ಸ್ಕ್ರೀನ್ 2). ವಿವರ: ಅವೆಲಿನಾ ಪ್ರಾಟ್ ನಿರ್ದೇಶನದ ಈ ಸ್ಪ್ಯಾನಿಷ್ ಚಿತ್ರವು ಮಾನವ ಸಂಬಂಧಗಳ ಸೂಕ್ಷ್ಮತೆಯನ್ನು ಕಟ್ಟಿಕೊಡುತ್ತದೆ. ಇದು 114 ನಿಮಿಷಗಳ ಭಾವನಾತ್ಮಕ ಪ್ರಯಾಣವಾಗಿದೆ.

3. ಆ್ಯಶಸ್ ಆ್ಯಂಡ್ ಡೈಮಂಡ್ಸ್ – ಪೋಲೆಂಡ್ (ಸಮಯ: ಬೆಳಗ್ಗೆ 9:50, ವಿಐಪಿ ಸ್ಕ್ರೀನ್ 3). ವಿವರ: ಆಂಡ್ರೆಜ್ ವಾಜ್ದಾ ನಿರ್ದೇಶನದ 1958ರ ಈ ಸಿನಿಮಾ ವಿಶ್ವ ಚಿತ್ರರಂಗದ ಸರ್ವಕಾಲಿಕ ಶ್ರೇಷ್ಠ ಕೃತಿಗಳಲ್ಲಿ ಒಂದು. ಪೋಲಿಷ್ ಭಾಷೆಯ ಈ ಚಿತ್ರವು ಯುದ್ಧದ ನಂತರದ ಪರಿಸ್ಥಿತಿಯನ್ನು ಅದ್ಭುತವಾಗಿ ಚಿತ್ರಿಸುತ್ತದೆ.

4. ಮದರ್ ಟಂಗ್ – ಚೀನಾ (ಸಮಯ: ಮಧ್ಯಾಹ್ನ 12:00, ಸ್ಕ್ರೀನ್ 3). ವಿವರ: ಜಾಂಗ್ ಲು ನಿರ್ದೇಶನದ ಈ ಮ್ಯಾಂಡರಿನ್ ಭಾಷೆಯ ಚಿತ್ರವು ಭಾಷೆ ಮತ್ತು ಸಂಸ್ಕೃತಿಯ ನಡುವಿನ ಕೊಂಡಿಯನ್ನು ವಿವರಿಸುತ್ತದೆ. 122 ನಿಮಿಷಗಳ ಈ ಚಿತ್ರವು ಸಿನಿಮಾ ಪ್ರೇಮಿಗಳಿಗೆ ಉತ್ತಮ ಆಯ್ಕೆ.

5. ದ ನೇಚರ್ ಆಫ್ ಇನ್ವಿಸಿಬಲ್ ಥಿಂಗ್ಸ್- ಬ್ರೇಜಿಲ್ (ಸಮಯ: ಸಂಜೆ 6:00, ಸುಚಿತ್ರಾ ಫಿಲ್ಮ್ ಸೊಸೈಟಿ). ವಿವರ: ರಾಫೆಲಾ ಕ್ಯಾಮೆಲೊ ನಿರ್ದೇಶನದ ಈ 2025ರ ಪೋರ್ಚುಗೀಸ್ ಚಿತ್ರವು ವಿಭಿನ್ನ ಕಥಾವಸ್ತುವನ್ನು ಹೊಂದಿದೆ. ಕಲಾತ್ಮಕ ಸಿನಿಮಾಗಳನ್ನು ಇಷ್ಟಪಡುವವರಿಗೆ ಇದು ಹೇಳಿ ಮಾಡಿಸಿದಂತಿದೆ.

6. ಚಾಪಿನ್, ಎ ಸೋನಾಟಾ ಇನ್ ಪ್ಯಾರಿಸ್ – ಪೋಲೆಂಡ್ (ಸಮಯ: ಬೆಳಗ್ಗೆ 10:10, ಸ್ಕ್ರೀನ್ 4). ವಿವರ: ಮೈಕಲ್ ಕ್ವಿನ್ಸಿನ್ಸ್ಕಿ ನಿರ್ದೇಶನದ ಈ ಪೋಲಿಷ್ ಸಿನಿಮಾ ಸಂಗೀತ ಪ್ರೇಮಿಗಳಿಗೆ ಇಷ್ಟವಾಗಲಿದೆ. 133 ನಿಮಿಷಗಳ ಸುದೀರ್ಘ ಕಥಾಹಂದರವನ್ನು ಇದು ಹೊಂದಿದೆ.

ಇದನ್ನೂ ಓದಿ: ಬೇರೆ ದೇಶಗಳ ಸಿನಿಮಾ ಯಾಕೆ ನೋಡಬೇಕು? ವಿವರಿಸಿದ ಸಿಎಂ ಸಿದ್ದರಾಮಯ್ಯ

7. ಭವನಿ ಭವಾಯಿ – ಗುಜರಾತಿ (ಸಮಯ: ರಾತ್ರಿ 8:10, ವಿಐಪಿ ಸ್ಕ್ರೀನ್ 3). ವಿವರ: ಕೇತನ್ ಮೆಹ್ತಾ ನಿರ್ದೇಶನದ 1980ರ ಈ ಕ್ಲಾಸಿಕ್ ಚಿತ್ರವು ಜಾನಪದ ಶೈಲಿಯಲ್ಲಿದೆ. ಜಾತಿ ಪದ್ಧತಿಯ ವಿಡಂಬನೆ ಮಾಡುವ ಈ ಸಿನಿಮಾ ಭಾರತೀಯ ಚಿತ್ರರಂಗದ ಮೈಲಿಗಲ್ಲುಗಳಲ್ಲಿ ಒಂದು.

8. ವಾಸ್ತುಹಾರ – ಮಲಯಾಳಂ (ಸಮಯ: ರಾತ್ರಿ 8:30, ವಿಐಪಿ ಸ್ಕ್ರೀನ್ 2). ವಿವರ: ಜಿ. ಅರವಿಂದನ್ ನಿರ್ದೇಶನದ ಈ 1991ರ ಸಿನಿಮಾ ಬಂಗಾಳದ ವಿಭಜನೆಯ ಸಂದರ್ಭದ ನಿರಾಶ್ರಿತರ ಕಥೆಯನ್ನು ಹೇಳುತ್ತದೆ. ಇದು ಬಹಳ ಗಂಭೀರವಾದ ಮತ್ತು ಅರ್ಥಪೂರ್ಣವಾದ ಸಿನಿಮಾ.

9. ಎ ಪೋಯೆಟ್ – ಕೊಲಂಬಿಯಾ/ ಸ್ಪೇನ್ (ಸಮಯ: ರಾತ್ರಿ 8:00, ಸ್ಕ್ರೀನ್ 5). ವಿವರ: ಸಿಮೋನ್ ಮೆಸಾ ಸೊಟೊ ನಿರ್ದೇಶನದ ಈ ಸ್ಪ್ಯಾನಿಷ್ ಚಿತ್ರವು ಕವಿ ಮತ್ತು ಅವನ ಬದುಕಿನ ಸುತ್ತ ಸಾಗುತ್ತದೆ.

10. ಎ ಪ್ರೆಗ್ನೆಂಟ್ ವಿಡೋ – ಮಲಯಾಳಂ (ಸಮಯ: ಮಧ್ಯಾಹ್ನ 3:10, ಸ್ಕ್ರೀನ್ 2). ವಿವರ: ಉಣ್ಣಿ ಕೆ.ಆರ್. ನಿರ್ದೇಶನದ ಈ ಹೊಸ ಚಿತ್ರವು ಸಮಕಾಲೀನ ಕೇರಳದ ಸಾಮಾಜಿಕ ಚಿತ್ರಣವನ್ನು ನೀಡುತ್ತದೆ. 125 ನಿಮಿಷಗಳ ಈ ಸಿನಿಮಾ ಗಂಭೀರ ಚರ್ಚೆಗೆ ಹಾದಿ ಮಾಡಿಕೊಡುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸೋಲಾರ್ ಪ್ಲಾಂಟ್ ಹೆಸರಲ್ಲಿ ಗುಡ್ಡ ಅಗೆದು ಮರಗಳ ಮಾರಣಹೋಮ: ಇದರ ಹಿಂದೆ ‘ಲಕ್ಷ್ಮೀ’ ಕೃಪಾಕಟಾಕ್ಷ? – Kannada News | Belagavi Forest Destruction: Illegal Sandalwood Felling for Solar Plant Outrages Locals

ಬೆಳಗಾವಿ, ಫೆಬ್ರವರಿ 02: ಅದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರ ತವರು ಕ್ಷೇತ್ರ. ಸಂಗೊಳ್ಳಿ ರಾಯಣ್ಣ ಕೂಡ ಈ ಕೌರಿ ಗುಡ್ಡದಲ್ಲಿ ಉಳಿದಿದ್ದ ಅನ್ನೋದು ಇತಿಹಾಸ. ಈ ಗುಡ್ಡದಲ್ಲಿ ಶ್ರೀಗಂಧದ ಮರ ಸೇರಿದಂತೆ ಹಲವು ಬಗೆಯ ಗಿಡಗಳು, ಪ್ರಾಣಿ-ಪಕ್ಷಿಗಳು ವಾಸವಾಗಿವೆ. ಆದರೆ ಇದೀಗ ಸೋಲಾರ್ ಪ್ಲಾಂಟ್ ಹೆಸರಿನಲ್ಲಿ  ಗುಡ್ಡವನ್ನೇ ಅಗೆಯಲಾಗಿದ್ದು, ಸಾವಿರಾರು ಮರಗಳ (tree) ಮಾರಣಹೋಮವೇ ನಡೆದಿದೆ. ಸದ್ಯ ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿ ತಾಲೂಕಿನ ಬಡಲಾ ಅಂಕಲಗಿ ಗ್ರಾಮದಲ್ಲಿ ಕಳೆದ ಒಂದೂವರೆ ತಿಂಗಳಿಂದ ನಿರಂತರವಾಗಿ ಗುಡ್ಡ ಅಗೆಯುವ ಹಾಗೂ ಮರಗಳನ್ನ ಕಟ್ ಮಾಡುವ ಕೆಲಸ ನಡೆಯುತ್ತಿದೆಯಂತೆ. ವಿಚಾರ ಗೊತ್ತಾಗುತ್ತಿದ್ದಂತೆ ಗ್ರಾಮಸ್ಥರು ತಡೆಯುವ ಕೆಲಸ ಮಾಡಿದ್ದು, ಅವರಿಗೂ ಬೆದರಿಕೆ ಹಾಕಿ ಕೆಲಸ ಮುಂದುವರೆಸಿದ್ದಾರೆ. ಯಾವಾಗ ರೈತರು ವಿರೋಧ ವ್ಯಕ್ತಪಡಿಸಿದರೂ ಆಗ ಜೆಸಿಬಿ ಸಮೇತ ಕಾಲ್ಕಿತ್ತಿದ್ದಾರೆ. ಈವರೆಗೂ 40 ಎಕರೆಗೂ ಹೆಚ್ಚು ಪ್ರದೇಶವನ್ನ ಅಗೆದು ಹಾಳು ಮಾಡಲಾಗಿದೆ.

ಸಚಿವೆ ಕುಮ್ಮಕ್ಕು ಆರೋಪ

ಶ್ರೀಗಂಧದ, ತೇಗು ಮತ್ತು ವಿವಿಧ ಹಣ್ಣಿನ ಗಿಡಗಳು, ರಾಷ್ಟ್ರೀಯ ಪಕ್ಷಿ ನವಿಲು ಸೇರಿದಂತೆ ಹಲವು ಪ್ರಾಣಿ ಪಕ್ಷಿಗಳು ಈ ಜಾಗದಲ್ಲಿ ವಾಸಿಸುತ್ತಿದ್ದವು. ಸೋಲಾರ್ ಪ್ಲಾಂಟ್ ನಿರ್ಮಾಣದ ಹೆಸರಿನಲ್ಲಿ ಈ ರೀತಿ ಮರಗಿಡಗಳನ್ನ ಕಟಾವು ಮಾಡಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತವರು ಕ್ಷೇತ್ರದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮರಗಳ ಮಾರಣಹೋಮ ನಡೆಯುತ್ತಿದ್ರೂ ಅವರಿಗೆ ಈ ವಿಚಾರ ಗೊತ್ತಿಲ್ಲವಾ ಅಥವಾ ಅವರ ಕುಮ್ಮಕ್ಕಿನಿಂದ ಈ ರೀತಿ ಆಗಿದೆ ಅಂತಾನೂ ರೈತರು ಆರೋಪ ಮಾಡುತ್ತಿದ್ದಾರೆ.

ಇದನ್ನೂ ಓದಿ: Belagavi: ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ

ಇನ್ನು ಟಿವಿ9 ಮರಗಳ ಮಾರಣಹೋಮ ಕುರಿತು ವಿಸ್ತೃತವಾದ ಸುದ್ದಿ ಬಿತ್ತರಿಸುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿದರು. ಅಷ್ಟೇ ಅಲ್ಲದೆ ಹೆಸ್ಕಾಂ ಅಧಿಕಾರಿಗಳು ಕೂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಕಂದಾಯ ಇಲಾಖೆಗೆ ಸೇರಿರುವ ಸರ್ವೇ ನಂಬರ್ 359ರ ಗೈರಾಣು ಜಾಗದಲ್ಲಿ 67ಎಕರೆ ಜಮೀನು ಪ್ರದೇಶದಲ್ಲಿ ಸೊಲಾರ್ ಪ್ಲಾಂಟ್ ಮಾಡಲು ತಹಶಿಲ್ದಾರ್​ ಬಸವರಾಜ್ ನಾಗರಾಳ ಅನುಮತಿ ನೀಡಿದ್ದಾರೆ. ಇದು ಹೆಸ್ಕಾಂ ಇಲಾಖೆಗೆ ಕಳುಹಿಸಿದ್ದು, ಇಂಧನ ಇಲಾಖೆಯಿಂದ ಈ ಪ್ಲಾಂಟ್ ನಿರ್ಮಾಣ ಮಾಡಲಾಗುತ್ತಿದೆ.

ಪಿಎಂ ಕುಸುಮ ಪೀಡರ್ ಲೇವಲ್ ಸೊಲ್ ರೈಸೇಷನ್ ಯೋಜನೆಯಡಿ ಸೌರಘಟಕ ಸ್ಥಾಪನೆಗೆ ಅನುಮತಿ ನೀಡಲಾಗಿದೆ. ಗೈರಾಣು ಜಾಗವಿದ್ರೂ ಅರಣ್ಯ ಇರುವ ಕಾರಣಕ್ಕೆ ಅರಣ್ಯ ಇಲಾಖೆಗೆ ಹೆಸ್ಕಾಂ ಇಲಾಖೆಯಿಂದ ಪತ್ರ ಕೂಡ ಬರೆದಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಪತ್ರ ಬರೆದಿದ್ದು, ಅನುಮತಿ ನೀಡಿಲ್ಲ. ಅರಣ್ಯ ಇಲಾಖೆಯಿಂದ ಅನುಮತಿ ಸಿಗದಿದ್ರೂ ಮರಗಳನ್ನ ಕಟ್ ಮಾಡಲಾಗಿದೆ. ಈ ಬಗ್ಗೆ ಸ್ಥಳಕ್ಕೆ ಬಂದ ಹೆಸ್ಕಾಂ ಅಧಿಕಾರಿಗಳನ್ನ ಕೇಳಿದರೆ ಮೌಖಿಕವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದು, ಹೀಗಾಗಿ ಕೆಲಸ ಆರಂಭಿಸಿದ್ದೇವೆ ಅಂತಾ ಹೇಳಿದ್ದಾರೆ.

ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡ ರೈತರು

ಸ್ಥಳಕ್ಕೆ ಬಂದಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಹೆಸ್ಕಾಂ ಎಇಇ ಅಣ್ಣಪ್ಪ ಅವರ ಮಾತು ಕೇಳ್ತಿದ್ದಂತೆ ತರಾಟೆಗೆ ತೆಗೆದುಕೊಂಡರು. ಎಸಿಎಫ್ ನಾಗರಾಜ್ ಅವರೇ ತರಾಟೆಗೆ ತೆಗೆದುಕೊಂಡು ದಿಕ್ಕು ತಪ್ಪಿಸದಂತೆ ಹೇಳಿದರು. ಇದೇ ವೇಳೆ ರೈತರು ಎರಡು ಇಲಾಖೆಯ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡರು. ಮರಗಳನ್ನ ಕಟ್ ಮಾಡಿರುವ ಅಧಿಕಾರಿ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯ ಮಾಡಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸಿಎಫ್ ನಾಗರಾಜ್, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಜೀರೋ ಹೆಸರಿನಲ್ಲಿ ಭೂ ಹಗರಣ: ವಾರಸುದಾರರಿಲ್ಲದ ಭೂಮಿ ಲಪಟಾಯಿಸಿದ ಪ್ರಭಾವಿಗಳು

ಸದ್ಯ ಪ್ರಕರಣವನ್ನ ಬೆಳಗಾವಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಕೂಡ ಗಂಭೀರವಾಗಿ ತೆಗೆದುಕೊಂಡಿದ್ದು ಅನುಮತಿ ಇಲ್ಲದೇ ಮರಗಳನ್ನ ಕಟ್ ಮಾಡಿರುವುದೇಕೆ ಅನ್ನೋ ನಿಟ್ಟಿನಲ್ಲಿ ತನಿಖೆ ಆಗುತ್ತಿದೆ. ಇನ್ನೊಂದು ಕಡೆ ಶ್ರೀಗಂಧದ ಮರಗಳಿರುವ ಕಾಡನ್ನ ತರಾತುರಿಯಲ್ಲಿ ಯಾರ ಗಮನಕ್ಕೆ ತರದೇ ಕಟ್ ಮಾಡಿರುವುದೇಕೆ ಇದರ ಹಿಂದೆ ಯಾರಿದ್ದಾರೆ ಅನ್ನೊದು ಕೂಡ ಹೊರಬರಬೇಕಿದೆ. ಸದ್ಯ ಸಾವಿರಾರು ಮರಗಳ ಮಾರಣಹೋಮ ನಡೆದಿದ್ದು, ಇದಕ್ಕೆ ಹೊಣೆ ಯಾರು, ತಪ್ಪಿತಸ್ಥರ ವಿರುದ್ದ ಕ್ರಮವಾಗುತ್ತಾ ಅನ್ನೋದನ್ನ ಕೂಡ ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಾತ್ರಿ ಮಲಗುವ ಮುನ್ನ ಮಾಡುವ ಈ ತಪ್ಪುಗಳು ನಿಮ್ಮ ನಿದ್ರಗೆ ಭಂಗ ತರಬಹುದು ಎಚ್ಚರ! – Kannada News | Never make these mistakes before going to bed at night

ದೇಹಾರೋಗ್ಯಕ್ಕೆ ಆಹಾರದಂತೆ ನಿದ್ರೆಯೂ (sleep) ಅತೀ ಅವಶ್ಯಕ. ಅದರಲ್ಲೂ ಪ್ರತಿಯೊಬ್ಬ ವ್ಯಕ್ತಿಯೂ ಕನಿಷ್ಟ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆ ಮಾಡಲೇಬೇಕು. ನಾವು ಸಾಕಷ್ಟು ನಿದ್ರೆ ಮಾಡಿದಾಗ, ನಮ್ಮ ದೇಹವು ದಿನದ ಆಯಾಸದಿಂದ ಚೇತರಿಸಿಕೊಳ್ಳುತ್ತದೆ ಮತ್ತು ಮನಸ್ಸು ಉಲ್ಲಾಸಗೊಳ್ಳುತ್ತದೆ. ಅದೇ ಏಳೆಂಟು ಗಂಟೆ ನಿದ್ರೆ ಮಾಡಲು ಸಾಧ್ಯವಾಗದಿದ್ದರೆ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವುದಲ್ಲದೆ, ದೈನಂದಿನ ಚಟುವಟಿಕೆಯ ಮೇಲೂ ಇದು ಪರಿಣಾಮ ಬೀರುತ್ತದೆ. ಹೀಗೆ ಸರಿಯಾಗಿ ನಿದ್ರೆ ಬಾರದಿರಲು, ನಿದ್ರಾಹೀನತೆ ನಾವು ಮಾಡುವ ಕೆಲವು ತಪ್ಪುಗಳು ಸಹ ಕಾರಣವಂತೆ. ಹಾಗಿದ್ರೆ ನಿದ್ರೆಗೆ ಭಂಗ ತರುವ ಆ ತಪ್ಪುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ನಿದ್ರೆಗೆ ಭಂಗ ತರುವ ಅಭ್ಯಾಸಗಳಿವು:

ಮಲಗುವ ಮುನ್ನ ಮೊಬೈಲ್ ಮತ್ತು ಲ್ಯಾಪ್‌ಟಾಪ್ ನೋಡುವುದು: ಇದು ನಾವು ಮಾಡುವ ಅತ್ಯಂತ ಸಾಮಾನ್ಯ ತಪ್ಪು. ಮೊಬೈಲ್, ಲ್ಯಾಪ್‌ಟಾಪ್ ಪರದೆಗಳಿಂದ ಹೊರಸೂಸುವ ನೀಲಿ ಬೆಳಕು ನಮ್ಮ ದೇಹದಲ್ಲಿ ಮೆಲಟೋನಿನ್ ಎಂಬ ಹಾರ್ಮೋನ್ ಉತ್ಪಾದನೆಯನ್ನು ಪ್ರತಿಬಂಧಿಸುತ್ತದೆ. ಮೆಲಟೋನಿನ್ ನಮ್ಮ ನಿದ್ರೆ-ಎಚ್ಚರ ಚಕ್ರವನ್ನು ನಿಯಂತ್ರಿಸುವ ಹಾರ್ಮೋನ್ ಆಗಿದ್ದು, ಇದಕ್ಕೆ ಅಡಿಯುಂಟಾದಾಗ, ಸರಿಯಾಗಿ ನಿದ್ರೆ ಮಾಡಲು ಆಗುವುದಿಲ್ಲ. ಆದ್ದರಿಂದ, ಮಲಗುವ ಸಮಯಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಎಲ್ಲಾ ಗ್ಯಾಜೆಟ್‌ಗಳಿಂದ ದೂರವಿರಿ.

ಮಲಗುವ ಮುನ್ನ ಭಾರವಾದ ಅಥವಾ ಮಸಾಲೆಯುಕ್ತ ಆಹಾರ ಸೇವಿಸವುದು: ರಾತ್ರಿ ಊಟ ಹಗುರವಾಗಿರಬೇಕು ಮತ್ತು ಸುಲಭವಾಗಿ ಜೀರ್ಣವಾಗಬೇಕು. ಮಲಗುವ ಮುನ್ನ ಹುರಿದ ಅಥವಾ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಆಮ್ಲೀಯತೆ ಮತ್ತು ಅಜೀರ್ಣ ಉಂಟಾಗುತ್ತದೆ. ಮತ್ತು ರಾತ್ರಿಯ ಸಮಯ ದೇಹವು ಆಹಾರವನ್ನು ಜೀರ್ಣಿಸಿಕೊಳ್ಳುವುದರಲ್ಲಿಯೇ ನಿರತವಾಗಿರುತ್ತದೆ, ಇದು ವಿಶ್ರಾಂತಿ ಪಡೆಯುವುದನ್ನು ತಡೆಯುತ್ತದೆ ಮತ್ತು ನಿದ್ರೆಗೂ ಅಡ್ಡಿಪಡಿಸುತ್ತದೆ. ಅಷ್ಟೇ ಅಲ್ಲದೆ ಈ ತಪ್ಪಿನಿಂದ  ಬೊಜ್ಜು ಮತ್ತು ಇತರ ಜೀರ್ಣಕಾರಿ ಅಸ್ವಸ್ಥತೆಗಳ ಅಪಾಯ ಉಂಟಾಗುವ ಸಾಧ್ಯತೆಯೂ ಇದೆ.

ಕೆಫೀನ್ ಮತ್ತು ಮದ್ಯ ಸೇವನೆ: ಮಲಗುವ ಮುನ್ನ ಕಾಫಿ, ಟೀ, ತಂಪು ಪಾನೀಯಗಳು ಅಥವಾ ಮದ್ಯಪಾನ ಸೇವನೆ ಮಾಡುವ ಅಭ್ಯಾಸವು ನಿದ್ರೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಮಲಗುವ ಮುನ್ನ ಈ ಪಾನೀಯಗಳನ್ನು ಸೇವನೆ ಮಾಡಬೇಡಿ.

ಇದನ್ನೂ ಓದಿ: ಒತ್ತಡ, ಆಯಾಸವಿಲ್ಲದೆ ನೆಮ್ಮದಿಯಿಂದ ನಿದ್ರೆ ಮಾಡಲು ರಾತ್ರಿ ವೇಳೆ ಅಭ್ಯಾಸಗಳನ್ನು ಪಾಲಿಸಿ

ಒಳ್ಳೆಯ ನಿದ್ರೆ ಪಡೆಯುವುದು ಹೇಗೆ?

ರಾತ್ರಿಯ ಉತ್ತಮ ನಿದ್ರೆ ಪಡೆಯಲು, ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ. ಮೊದಲಿಗೆ ಮಲಗುವ ಸಮಯವನ್ನು ನಿಗದಿಪಡಿಸಿ ಮತ್ತು ಪ್ರತಿದಿನ ಆ ಸಮಯದಲ್ಲಿಯೇ ಮಲಗಲು ಪ್ರಯತ್ನಿಸಿ. ಮಲಗುವ ಮುನ್ನ ಕೋಣೆಯನ್ನು ಕತ್ತಲೆಯಾಗಿಡಿ. ಶಾಂತ ಮತ್ತು ಆರಾಮದಾಯಕ ವಾತಾವರಣವನ್ನು ರಚಿಸಿ. ಮಲಗುವ ಮುನ್ನ ಪುಸ್ತಕ ಓದುವುದು ಸಹ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ಉತ್ತಮ ನಿದ್ರೆಗಾಗಿ ನೀವು ಮಲಗುವ ಮುನ್ನ ಧ್ಯಾನವನ್ನೂ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೀರೋಗೆ ಕಾಂಡೋಮ್ ಕೊಡ್ತಾರೆ ಎಂದ ಚಂದ್ರಚೂಡ್ ಮಾತಿಗೆ ಕೆ. ಮಂಜು ಗರಂ – Kannada News | Producer K Manju reaction on Chakravarthy Chandrachud controversy

ನಟ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ (Chakravarthy Chandrachud) ಅವರು ಇತ್ತೀಚೆಗೆ ನಿರ್ಮಾಪಕರ ಬಗ್ಗೆ ಮಾತನಾಡಿದ್ದು ವಿವಾದಕ್ಕೆ ಕಾರಣ ಆಗಿದೆ. ನಿರ್ಮಾಪಕರು ಹೀರೋಗಳಿಗೆ ಕಾಂಡೋಮ್ ಕೊಡುತ್ತಾರೆ ಅಂತ ಚಂದ್ರಚೂಡ್ ಹೇಳಿದ್ದಾರೆ. ಅದನ್ನು ‘ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ’ ಖಂಡಿಸಿದೆ. ಅಲ್ಲದೇ, ಚಂದ್ರಚೂಡ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ಬಗ್ಗೆ ಹಿರಿಯ ನಿರ್ಮಾಪಕ ಕೆ. ಮಂಜು ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಚಂದ್ರಚೂಡ್ ಹೇಳಿಕೆಗೆ ಕೆ. ಮಂಜು (Producer K Manju) ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

‘ನಿನ್ನೆ ಸಂಜೆ ನಿರ್ಮಾಪಕರ ಸಂಘದಿಂದ ತುಂಬಾ ನಿರ್ಮಾಪಕರು ಕರೆ ಮಾಡಿದರು. ಈ ವಿಡಿಯೋ ನೋಡಿದ್ರಾ ಅಂತ ಕೇಳಿದರು. ಪೂರ್ತಿ ವಿಡಿಯೋ ನೋಡಿದೆ. ಕೆವಿಎನ್ ಸಂಸ್ಥೆ ಬಗ್ಗೆ ಚಂದ್ರಚೂಡ್ ಮಾತನಾಡಿದ್ದಾರೆ. ಅದನ್ನೆಲ್ಲ ಮಾತನಾಡೋಕೆ ಚಂದ್ರಚೂಡ್ ಯಾರು? ಸೆನ್ಸಾರ್ ಮಂಡಳಿ ಬಗ್ಗೆ, ನ್ಯಾಯಾಲಯದ ಬಗ್ಗೆ ಕೂಡ ಚಂದ್ರಚೂಡ್ ಮಾತನಾಡಿದ್ದಾರೆ. ಗೊತ್ತಿಲ್ಲದೇ ಏನೇನೋ ಮಾತನಾಡಬಾರದು. ಹೀರೋಗೆ ನಿರ್ಮಾಪಕರು ಕಾಂಡೋಮ್ ಕೊಟ್ಟಿದ್ದಾರೆ ಅಂತ ಚಂದ್ರಚೂಡ್ ಹೇಳಿದ್ದಾರೆ. ಅದನ್ನು ಇವರು ನೋಡಿದ್ದಾರಾ? ಅಂಥ ನಿರ್ಮಾಪಕ ಯಾರು ಅನ್ನೋದು ಹೇಳಿದರೆ ಅಂಥವರನ್ನು ನಾವು ದೂರ ಇಡುತ್ತೇವೆ’ ಎಂದಿದ್ದಾರೆ ಕೆ. ಮಂಜು.

‘ಇದು ಚಂದ್ರಚೂಡ್ ಅವರ ದುರಹಂಕಾರದ ಪರಮಾವಧಿ. ತಮ್ಮ ಯೂಟ್ಯೂಬ್​​ನಲ್ಲಿ ನೋಡುಗರ ಸಂಖ್ಯೆ ಜಾಸ್ತಿ ಮಾಡಿಕೊಳ್ಳಲು ಹೇಳಿರಬಹುದು. ಆ ರೀತಿ ಆಗಬಾರದು. ನಿರ್ಮಾಪಕರ ಕಷ್ಟ ಏನು ಎಂಬುದು ನಿರ್ಮಾಪಕರಿಗೆ ಮಾತ್ರ ಗೊತ್ತು. ಕಳೆದ 3 ತಿಂಗಳಿಂದ ಸುಮಾರು 200 ಕೋಟಿ ರೂಪಾಯಿ ನಷ್ಟ ಆಗಿದೆ. ಇನ್ನು 9 ತಿಂಗಳು ಲೆಕ್ಕ ಹಾಕಿಕೊಳ್ಳಿ. ನಿರ್ಮಾಪಕರು ಸಂಕಷ್ಟದಲ್ಲಿ ಇದ್ದಾರೆ. ನೀವು ಯಾಕೆ ಈ ರೀತಿ ಮಾತನಾಡುತ್ತೀರಿ’ ಎಂದು ಕೆ. ಮಂಜು ಪ್ರಶ್ನಿಸಿದ್ದಾರೆ.

‘ಚಿತ್ರರಂಗಕ್ಕೆ ಏನು ಒಳ್ಳೆಯದು ಮಾಡಬೇಕು ಎಂಬ ಬಗ್ಗೆ ಆಲೋಚನೆ ಮಾಡೋಣ. ಒಳ್ಳೆಯ ಕಥೆ ಕ್ರಿಯೇಟ್ ಮಾಡೋಣ. ಬಂದ ತಕ್ಷಣ ದುಡ್ಡು ಬೇಕು ಎಂದರೆ ನಿರ್ಮಾಪಕ ಎಲ್ಲಿಂದ ತರುತ್ತಾನೆ. ಅಲ್ಲದೇ ಈ ರೀತಿ ನಿಂದನೆ ಯಾಕೆ ಮಾಡಬೇಕು? ಚಿತ್ರರಂಗಕ್ಕೆ ಚಂದ್ರಚೂಡ್ ಕೊಡುಗೆ ಏನು? ಯಾರೂ ಕೂಡ ಇನ್ಮುಂದೆ ಈ ರೀತಿ ಮಾತನಾಡಬಾರದು ಎಂಬ ಉದ್ದೇಶದಿಂದ ಕ್ರಿಮಿನಲ್ ಕೇಸ್ ದಾಖಲಿಸಿದ್ದೇವೆ’ ಎಂದು ಕೆ. ಮಂಜು ಅವರು ಹೇಳಿದ್ದಾರೆ.

ಇದನ್ನೂ ಓದಿ: ಚಕ್ರವರ್ತಿ ಚಂದ್ರಚೂಡ್ ವಿರುದ್ಧ ದೂರು ನೀಡಿದ ನಿರ್ಮಾಪಕರ ಸಂಘ

ಸುದೀಪ್ ಜೊತೆ ಚಂದ್ರಚೂಡ್ ಇದ್ದಾರೆ. ಆ ಬಗ್ಗೆ ಕೂಡ ಕೆ. ಮಂಜು ಮಾತನಾಡಿದ್ದಾರೆ. ‘ಸುದೀಪ್ ಅವರಿಗೆ ಇಂಥದ್ದೆಲ್ಲ ಗೊತ್ತಿರಲ್ಲ. ಈ ರೀತಿ ಆದರೆ ಇಂಥವರನ್ನು ಅವರು ಹತ್ತಿರಕ್ಕೆ ಸೇರಿಸಿಕೊಳ್ಳಲ್ಲ. ಯಾಕೆಂದರೆ ಸುದೀಪ್ ಅವರು ಕ್ಲೀನ್ ವ್ಯಕ್ತಿ’ ಎಂದು ಕೆ. ಮಂಜು ಅವರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್ – Kannada News | CM Siddaramaiah Reacts on BJP Leader Alleged about Karnataka Governmnet

ಬೆಂಗಳೂರು, ಫೆಬ್ರವರಿ 2): ವಿಧಾನಸಭೆ ಅಧಿವೇಶನದಲ್ಲಿ (Karnataka Assembly Session) ಇಂದು (ಫೆಬ್ರವರಿ 02) ಕಾಂಗ್ರೆಸ್ ಅಧಿಕಾರ ಹಂಚಿಕೆ ಬಗ್ಗೆಯೂ ಸಹ ಪ್ರಸ್ತಾಪವಾಗಿದ್ದು, ಈ ಬಗ್ಗೆ ಆಸಕ್ತಿಕರ ಚರ್ಚೆ ನಡೆದಿದೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಭಾರೀ ಚರ್ಚೆಯಾಗಿದೆ. ಇನ್ನೂ ಇದೇ ವೇಲೆ ವಿರೋಧ ಪಕ್ಷದ ನಾಯಕ ಅಶೋಕ್ ಅವರು ಮಾತನಾಡಿ ರಾಜ್ಯದಲ್ಲಿ ಕಾನುನು ಸುವ್ಯವಸ್ಥೆ ಹದಗೆಟ್ಟಿದೆ. ಸಿಎಂ ಸಹ ಅಸಹಾಯಕರಾಗಿದ್ದಾರೆ ಎಂದರು.

ಇದಕ್ಕೆ ಸಿದ್ದರಾಮಯ್ಯ  (Siddaramaiah) ಪ್ರತಿಕ್ರಿಯಿಸಿ, ಕಾನೂನು ಹದಗೆಟ್ಟಿಲ್ಲ. ಸರ್ಕಾರ ಹಾದಿನೂ ತಪ್ಪಿಲ್ಲ. ನಾನು ಅಸಹಾಯಕ ಸಿಎಂ ಅಲ್ಲ ಎಂದು ಖಡಕ್ ಆಗಿ ಹೇಳಿದರು. ಈ ಮೂಲಕ ವಿರೋಧಿಗಳಿಗೆ ಹೊಸ ಸಂದೇಶ ರವಾನಿಸಿದ್ದಾರೆ. ಸಿದ್ದರಾಮಯ್ಯ ಹೇಗೆಲ್ಲಾ ಖಡಕ್ ಆಗಿ ಉತ್ತರಿಸಿದ್ದಾರೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಚಿಕ್ಕಬಳ್ಳಾಪುರದಲ್ಲಿ ಹೆಲಿಕಾಪ್ಟರ್ ಮೂಲಕ ಚಿನ್ನ ನಿಕ್ಷೇಪ ಹುಡುಕಾಟ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಸಿ – Kannada News | Chikkaballapur: GSI Aerial Survey for gold deposits by helicopter; DC reveals explosive information

ಹೆಲಿಕಾಪ್ಟರ್ ಮೂಲಕ ಶೋಧImage Credit source: tv9 kannada

ಚಿಕ್ಕಬಳ್ಳಾಪುರ, ಫೆಬ್ರವರಿ 02: ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿ ಹೆಲಿಕಾಪ್ಟರ್ (Helicopter survey) ಮೂಲಕ ಬಂಗಾರ ಸೇರಿದಂತೆ ಭೂಗರ್ಭದಲ್ಲಿರುವ ನಿಧಿ-ನಿಕ್ಷೇಪಗಳ ಶೋಧಕಾರ್ಯ ನಡೆಯುತ್ತಿದೆ. ಇದರಿಂದ ಸ್ಥಳೀಯರಲ್ಲಿ ಕುತೂಹಲ ಹೆಚ್ಚಾಗಿದೆ. ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ (ಜಿಎಸ್‌ಐ) ವತಿಯಿಂದ ಈ ಏರಿಯಲ್ ಸರ್ವೆ ನಡೆಸಲಾಗುತ್ತಿದೆ. ಹೆಲಿಕಾಪ್ಟರ್ ಹಾಗೂ ಅತ್ಯಾಧುನಿಕ ವೈಜ್ಞಾನಿಕ ಸಲಕರಣೆಗಳನ್ನು ಬಳಸಿ ಭೂಗರ್ಭದ ಖನಿಜ ಸಂಪತ್ತಿನ ಕುರಿತು ಸಮಗ್ರ ಶೋಧ ಕಾರ್ಯ ಕೈಗೊಳ್ಳಲಾಗಿದೆ.

ಕೆ.ಜಿ.ಎಫ್. ಗೋಲ್ಡ್ ಮೈನಿಂಗ್ ಬೆಟ್ಟದ ಸಾಲಿಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಶೋಧಕಾರ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಬೀಚಗಾನಹಳ್ಳಿ ಕ್ರಾಸ್ ಪ್ರದೇಶದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಹಾಗೂ ಟೇಕಾಫ್ ಸಹಿತವಾಗಿ ಏರಿಯಲ್ ಸರ್ವೆ ನಡೆಸಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದ ಅಗತ್ಯ ಅನುಮತಿ ಪಡೆಯಲಾಗಿದೆ.

ದಿಢೀರ್​ ಶೋಧಕಾರ್ಯ ಏಕೆ?

ಈ ಹಿಂದೆ ಕೂಡ ಜಿಲ್ಲೆಯಲ್ಲಿ ಬಂಗಾರದ ಕಣಗಳು ಪತ್ತೆಯಾಗಿತ್ತು. ಬಾಗೇಪಲ್ಲಿ ಹಾಗೂ ಗುಡಿಬಂಡೆ ತಾಲೂಕಿನ ಕೆಲ ರೈತರ ಜಮೀನುಗಳ ಮಣ್ಣಿನಲ್ಲೇ ಬಂಗಾರದ ಕಣಗಳು ಕಂಡುಬಂದಿದ್ದವು. ಇದೇ ಹಿನ್ನೆಲೆಯಲ್ಲೇ ಇದೀಗ ಹೆಲಿಕಾಪ್ಟರ್ ಮೂಲಕ ಭೂಗರ್ಭ ನಿಧಿ-ನಿಕ್ಷೇಪಗಳ ಶೋಧಕಾರ್ಯ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಮೇ 31ರವರೆಗೂ ಸರ್ವೆ ನಡೆಯುತ್ತೆ: ಜಿಲ್ಲಾಧಿಕಾರಿ ಜಿ.ಪ್ರಭು 

ಈ ಬಗ್ಗೆ ಟಿವಿ9ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ.ಪ್ರಭು ಪ್ರತಿಕ್ರಿಯಿಸಿದ್ದು, ಜಿಲ್ಲೆಯಲ್ಲಿ 2019-2020ರಲ್ಲಿ ಸರ್ವೆ ಕಾರ್ಯ ನಡೆದಿತ್ತು. ಆ ಸರ್ವೆ ಆಧರಿಸಿ ಈಗ ಆಳ ಅಧ್ಯಯನ ನಡೆದಿದೆ. ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ಭೌಗೋಳಿಕ ಮಾಹಿತಿ ವ್ಯವಸ್ಥೆ ವಿಭಾಗ ಹಾಗೂ ರಿಮೋಟ್ ಸೆನ್ಸಿಂಗ್ ವಿಭಾಗದಿಂದ ಸರ್ವೆ ನಡೆಯುತ್ತಿದೆ ಎಂದರು.

ಇದನ್ನೂ ಓದಿ: ಗುಡಿಬಂಡೆ ಬಳಿ ಇದೆಯಾ ಚಿನ್ನದ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ನಡೆಯಿತು ಶೋಧಕಾರ್ಯ

ಮೂಲ ಲೋಹಗಳು ಸೇರಿದಂತೆ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ ಸೇರಿದಂತೆ ಲೋಹಗಳ ಇರುವಿಕೆಯ ಬಗ್ಗೆ ಸರ್ವೆ ಮಾಡಲಾಗುತ್ತಿದ್ದು, ಮೇ 31ರವರೆಗೂ ಸರ್ವೆ ನಡೆಯುತ್ತೆ. ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸರ್ವೆ ನಡೆಯಲಿದ್ದು, ಹೆಲಿಕಾಪ್ಟರ್ ತೀರ ಕೆಳ ಹಂತದಲ್ಲಿ ಸಂಚಾರ ಮಾಡಲಿದೆ. ಹೀಗಾಗಿ ಸಾರ್ವಜನಿಕರು ಭಯ ಬೀಳದಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಎಸ್​​ಪಿ ಕುಶಲ್ ಚೌಕ್ಸೆ ಹೇಳಿದ್ದಿಷ್ಟು 

ಇನ್ನು ಚಿಕ್ಕಬಳ್ಳಾಪುರ ಎಸ್​​ಪಿ ಕುಶಲ್ ಚೌಕ್ಸೆ ಮಾತನಾಡಿದ್ದು, ಸುಮಾರು 15 ದಿನಗಳ ಹಿಂದೆಯೇ ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ. ಮತ್ತೊಂದೆಡೆ ಹೆಲಿಕಾಪ್ಟರ್ ಹಾರಾಟ ಮತ್ತು ಶೋಧ ಕಾರ್ಯ ನೋಡಲು ಸ್ಥಳೀಯ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:06 pm, Mon, 2 February 26

Source link

Exit mobile version