Parliament Monsoon Session: ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ – Kannada News | Parliament Monsoon Session to begin from July 20 says Union Minister Kiren Rijiju

ನವದೆಹಲಿ, ಜುಲೈ 4: ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಇಂದು ಪ್ರಕಟಿಸಿರುವಂತೆ, ಸಂಸತ್ತಿನ ಮುಂಗಾರು ಅಧಿವೇಶನವು (Parliament Monsoon Session) ಜುಲೈ 20ರಿಂದ ಪ್ರಾರಂಭವಾಗಿ ಆಗಸ್ಟ್ 13ರವರೆಗೆ ಮುಂದುವರಿಯಲಿದೆ. ದೇಶದ ಪ್ರಮುಖ ವಿಷಯಗಳ ಕುರಿತು ಸಕಾರಾತ್ಮಕ ಚರ್ಚೆಗಳು ನಡೆಯಲಿವೆ ಎಂದು ಅವರು ಆಶಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಕೇಂದ್ರ ಸರ್ಕಾರದ ಶಿಫಾರಸ್ಸನ್ನು ಅನುಮೋದಿಸಿದ ನಂತರ ಉಭಯ ಸದನಗಳನ್ನು ಕರೆಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

“ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳ ಕುರಿತು ಅರ್ಥಪೂರ್ಣ ಚರ್ಚೆ ಮತ್ತು ನಿರ್ಧಾರಗಳಿಗಾಗಿ ಈ ಅಧಿವೇಶನವು ಜುಲೈ 20ರಿಂದ ಆರಂಭವಾಗಿ ಆಗಸ್ಟ್ 13ರವರೆಗೆ ನಡೆಯಲಿದೆ” ಎಂದು ಅವರು ಎಕ್ಸ್ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಮತ್ತೊಂದು ಹಿನ್ನಡೆ; ಪಕ್ಷದ ಎಲ್ಲ ಹುದ್ದೆಗೂ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನೆ (ಯುಬಿಟಿ) ಪಕ್ಷಗಳಲ್ಲಿ ಬಿರುಕು ಮೂಡಿದ ನಂತರ ನಡೆಯುತ್ತಿರುವ ಮೊದಲ ಸಂಸತ್ ಅಧಿವೇಶನ ಇದಾಗಿದೆ. ಟಿಎಂಸಿಯ 28 ಲೋಕಸಭಾ ಸದಸ್ಯರಲ್ಲಿ 20 ಸಂಸದರು ಬಂಡಾಯವೆದ್ದು ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಅದೇ ರೀತಿ, ಯುಬಿಟಿಯ 9 ಲೋಕಸಭಾ ಸಂಸದರಲ್ಲಿ 6 ಮಂದಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯನ್ನು ಸೇರಿಕೊಂಡಿದ್ದಾರೆ.

ಈ ಬೆಳವಣಿಗೆಯಿಂದಾಗಿ ಲೋಕಸಭೆಯಲ್ಲಿ ಎನ್‌ಡಿಎ ಬಲ ಹೆಚ್ಚಾಗಿದೆ. ಆದರೆ, ಬಂಡಾಯ ಟಿಎಂಸಿ ಮತ್ತು ಯುಬಿಟಿ ಸದಸ್ಯರನ್ನು ಪ್ರತ್ಯೇಕ ಗುಂಪುಗಳಾಗಿ ಗುರುತಿಸಬೇಕೆಂಬ ಬೇಡಿಕೆಯ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ನಿರ್ಧಾರ ಇನ್ನೂ ಬಾಕಿ ಇದೆ. ಇತ್ತೀಚಿನ ಚುನಾವಣೆಗಳ ನಂತರ ರಾಜ್ಯಸಭೆಯಲ್ಲೂ ಎನ್‌ಡಿಎ ಪರವಾಗಿ ಸಂಖ್ಯಾಬಲ ಹೆಚ್ಚಾಗಿದೆ.

ಸರ್ಕಾರದ ಕಾರ್ಯಸೂಚಿಯಲ್ಲಿರುವ ಪ್ರಮುಖ ಮಸೂದೆಗಳು:

ಸುಮಾರು 4 ವಾರಗಳ ಕಾಲ ನಡೆಯಲಿರುವ ಈ ಅಧಿವೇಶನದಲ್ಲಿ ಹಲವು ಪ್ರಮುಖ ಕಾನೂನುಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರವು ಈ ಕೆಳಗಿನ ಪ್ರಮುಖ ವಿಧೇಯಕಗಳನ್ನು ಮಂಡಿಸುವ ಸಾಧ್ಯತೆಯಿದೆ.

130ನೇ ಸಂವಿಧಾನ ತಿದ್ದುಪಡಿ ಮಸೂದೆ: ಭ್ರಷ್ಟಾಚಾರ ಸೇರಿದಂತೆ ಗಂಭೀರ ಅಪರಾಧಗಳ ಆರೋಪದ ಮೇಲೆ ಪ್ರಧಾನಿ ಅಥವಾ ಮುಖ್ಯಮಂತ್ರಿಗಳು 30 ದಿನ ಅಥವಾ ಅದಕ್ಕಿಂತ ಹೆಚ್ಚು ಕಾಲ ಬಂಧನದಲ್ಲಿದ್ದರೆ, ಅವರನ್ನು ಸ್ವಯಂಚಾಲಿತವಾಗಿ ಹುದ್ದೆಯಿಂದ ತೆಗೆದುಹಾಕಲು ಈ ಮಸೂದೆ ಅವಕಾಶ ಕಲ್ಪಿಸುತ್ತದೆ.

ಮಹಿಳಾ ಮೀಸಲಾತಿ ಅನುಷ್ಠಾನ ಮಸೂದೆ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಸ್ಥಾನಗಳನ್ನು ಮೀಸಲಿಡುವ ಗುರಿ ಹೊಂದಿದೆ.

ಕ್ಷೇತ್ರ ಮರುವಿಂಗಡಣೆ (ಡೆಲಿಮಿಟೇಷನ್) ಮಸೂದೆ.

ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (FCRA) ತಿದ್ದುಪಡಿ ಮಸೂದೆ.

ಪ್ರಸ್ತಾವಿತ ಕಾನೂನುಗಳಲ್ಲಿ 130ನೇ ಸಂವಿಧಾನ ತಿದ್ದುಪಡಿ ಮಸೂದೆ, ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಮಸೂದೆಗಳನ್ನು ಅಂಗೀಕರಿಸಲು ಸಂಸತ್ತಿನ ಉಭಯ ಸದನಗಳಲ್ಲಿ ಹಾಜರಿದ್ದು ಮತ ಚಲಾಯಿಸುವ ಕನಿಷ್ಠ 3ನೇ 2ರಷ್ಟು (2/3) ಸದಸ್ಯರ ಬೆಂಬಲ ಅಂದರೆ ‘ವಿಶೇಷ ಬಹುಮತ’ದ ಅಗತ್ಯವಿದೆ. ಕಳೆದ ಅಧಿವೇಶನದಲ್ಲಿ ಅಗತ್ಯ ಸಂಖ್ಯಾಬಲದ ಕೊರತೆಯಿಂದಾಗಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಮಸೂದೆಗಳು ವಿಫಲವಾಗಿದ್ದವು.

ಸರ್ಕಾರದ ಬಳಿ ಅಗತ್ಯ ಸಂಖ್ಯಾಬಲವಿದೆಯೇ?:

ಸಾಮಾನ್ಯ ಮಸೂದೆಗಳನ್ನು ಅಂಗೀಕರಿಸಲು ಎನ್‌ಡಿಎ ಮೈತ್ರಿಕೂಟಕ್ಕೆ ಉಭಯ ಸದನಗಳಲ್ಲಿ ಸ್ಪಷ್ಟ ಬಹುಮತವಿದೆ. ಆದರೆ ಸಂವಿಧಾನ ತಿದ್ದುಪಡಿಗಳಿಗೆ ಅಗತ್ಯವಿರುವ ವಿಶೇಷ ಬಹುಮತದ ವಿಷಯದಲ್ಲಿ ಸರ್ಕಾರಕ್ಕೆ ಇನ್ನೂ ಸಣ್ಣ ಕೊರತೆಯಿದೆ. ಲೋಕಸಭೆಯಲ್ಲಿ ಪಶ್ಚಿಮ ಬಂಗಾಳ ಚುನಾವಣೆಯ ನಂತರ 20 ಟಿಎಂಸಿ ಶಾಸಕರು ಎನ್‌ಸಿಪಿಐ (NCPI) ಸೇರಿ ಎನ್‌ಡಿಎಗೆ ಬೆಂಬಲ ನೀಡಿದ್ದಾರೆ. ಲೋಕಸಭೆಯಲ್ಲಿ ಶಿವಸೇನೆಯ ಸಂಸದರ ಸೇರ್ಪಡೆಯೊಂದಿಗೆ ಎನ್‌ಡಿಎ ಬಲ ಸುಮಾರು 330ಕ್ಕೆ ಏರಿದೆ. ಆದರೂ ಇದು ಮೂರನೇ ಎರಡರಷ್ಟು ಬಹುಮತಕ್ಕಿಂತ ಸ್ವಲ್ಪ ಕಡಿಮೆಯಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ಜೋಧ್‌ಪುರ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟನೆ

ರಾಜ್ಯಸಭೆಯಲ್ಲಿ ಆಮ್ ಆದ್ಮಿ ಪಕ್ಷದ (AAP) 7 ಸಂಸದರು ಬಿಜೆಪಿಗೆ ಸೇರ್ಪಡೆಗೊಂಡ ನಂತರ, 242 ಸದಸ್ಯರ ಬಲದ ಸದನದಲ್ಲಿ ಎನ್‌ಡಿಎ ಬಲ 141ಕ್ಕೆ ಏರಿದೆ. 10 ನಾಮನಿರ್ದೇಶಿತ ಮತ್ತು ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಈ ಸಂಖ್ಯೆ 151ಕ್ಕೆ ತಲುಪುತ್ತದೆ. ಇದು ಸಾಮಾನ್ಯ ಬಹುಮತಕ್ಕಿಂತ ಹೆಚ್ಚಿದ್ದರೂ, ಸಂವಿಧಾನ ತಿದ್ದುಪಡಿಗೆ ಬೇಕಾದ ಮೂರನೇ ಎರಡರಷ್ಟು ಬಹುಮತಕ್ಕಿಂತ 11 ಮತಗಳು ಕಡಿಮೆಯಾಗಿದೆ.

ಹೀಗಾಗಿ, ಈ ಪ್ರಮುಖ ಮಸೂದೆಗಳನ್ನು ಅಂಗೀಕರಿಸಲು ಬಿಜು ಜನತಾದಳ (BJD) ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (YSRCP) ನಂತಹ ಪ್ರಾದೇಶಿಕ ಪಕ್ಷಗಳ ಬೆಂಬಲವು ಸರ್ಕಾರಕ್ಕೆ ನಿರ್ಣಾಯಕವಾಗಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *