ಭಾರತ ಮತ್ತು ಝಿಂಬಾಬ್ವೆ ನಡುವಣ ಟಿ20 ಸರಣಿಯು ಇಂದಿನಿಂದ ಶುರುವಾಗಲಿದೆ. ಈ ಸರಣಿ ಆರಂಭಕ್ಕೆ ಕೌಂಟ್ ಡೌನ್ ಶುರುವಾದರೂ ಟೀಮ್ ಇಂಡಿಯಾದ ಆಯ್ಕೆ ಬಗ್ಗೆಗಿನ ಚರ್ಚೆ ನಿಂತಿಲ್ಲ. ಇದಕ್ಕೆ ಮುಖ್ಯ ಕಾರಣ ಝಿಂಬಾಬ್ವೆ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾದ ತಂಡದಲ್ಲಿ ಸತತ ಎರಡು ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಒಬ್ಬೇ ಒಬ್ಬ ಆಟಗಾರ ಇಲ್ಲದಿರುವುದು. ಬಿಸಿಸಿಐ ಆಯ್ಕೆ ಸಮಿತಿಯ ಈ ಧೋರಣೆಯನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ಸಡಗೋಪನ್ ರಮೇಶ್ “ಸಂಪೂರ್ಣ ತಾರತಮ್ಯ ಮತ್ತು ಬೂಟಾಟಿಕೆ” ಕರೆದಿದ್ದಾರೆ.
ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯ ನಿರ್ಧಾರಗಳನ್ನು ಸಡಗೋಪನ್ ರಮೇಶ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಪ್ರಶ್ನಿಸಿದ್ದಾರೆ.
ಕೆಲವು ಆಟಗಾರರನ್ನು ಆಯ್ಕೆ ಮಾಡಲು ಐಪಿಎಲ್ ಪ್ರದರ್ಶನವನ್ನು ಪ್ರಮುಖ ಮಾನದಂಡವಾಗಿ ಬಳಸುವ ಆಯ್ಕೆಗಾರರು, ಆರ್ಸಿಬಿ ಆಟಗಾರರ ವಿಷಯದಲ್ಲಿ ಅದನ್ನು ಸಂಪೂರ್ಣವಾಗಿ ಮರೆತಿದ್ದಾರೆ ಎಂದು ರಮೇಶ್ ಆರೋಪಿಸಿದ್ದಾರೆ.
ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣಕ್ಕೆ ಶ್ರೇಯಸ್ ಅಯ್ಯರ್ಗೆ ತಂಡದ ನಾಯಕತ್ವ ಹಾಗೂ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಆದರೆ ಇದೇ ನಿಯಮ ಆರ್ಸಿಬಿ ಆಟಗಾರರಿಗೆ ಏಕೆ ಅನ್ವಯಿಸಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಆರ್ಸಿಬಿ ಆಟಗಾರರಿಗೆ ಅನ್ಯಾಯ:
2025 ಮತ್ತು 2026ರ ಐಪಿಎಲ್ ಸೀಸನ್ಗಳಲ್ಲಿ ಸತತವಾಗಿ ಟ್ರೋಫಿ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಆರ್ಸಿಬಿ ತಂಡದ ರಜತ್ ಪಾಟೀದಾರ್ ಅಥವಾ ಭುವನೇಶ್ವರ್ ಕುಮಾರ್ ಅವರಂತಹ ಪ್ರಮುಖ ಆಟಗಾರರನ್ನು ಕಡೆಗಣಿಸಿರುವುದು ಸರಿಯಲ್ಲ. ಒಬ್ಬರಿಗೆ ಒಂದು ನ್ಯಾಯ, ಮತ್ತೊಬ್ಬರಿಗೆ ಅನ್ಯಾಯ ಮಾಡಬಾರದು ಎಂದು ಸಡಗೋಪನ್ ರಮೇಶ್ ಹೇಳಿದ್ದಾರೆ.
ಐಪಿಎಲ್ ಟೂರ್ನಿಯ ದ್ವಿತೀಯಾರ್ಧದಲ್ಲಿ ತಮ್ಮದೇ ಫ್ರಾಂಚೈಸಿಯ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದ ರವಿ ಬಿಷ್ಣೋಯ್ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿರುವುದನ್ನು ಆಯ್ಕೆ ಸಮಿತಿಯ ದ್ವಂದ್ವ ನೀತಿಗೆ ಹಿಡಿದ ಕನ್ನಡಿ. ನೀವು ಐಪಿಎಲ್ ಪ್ರದರ್ಶನದ ಆಧಾರದ ಮೇಲೆ ಆಯ್ಕೆ ಮಾಡಿದ್ದರೆ ಆರ್ಸಿಬಿ ಆಟಗಾರರಿಗೆ ಚಾನ್ಸ್ ಸಿಗಬೇಕಿತ್ತು. ಇಲ್ಲಿ ನೀವು ನಿಮಗೆ ಬೇಕಾದವರನ್ನು ಮಾತ್ರ ಆಯ್ಕೆ ಮಾಡಿದ್ದೀರಿ ಎಂದು ಸಡಗೋಪನ್ ರಮೇಶ್ ಆಕ್ರೋಶ ಹೊರಹಾಕಿದ್ದಾಋಎ.
ರ್ಯಾಂಕ್ ಮಾನದಂಡ:
ಒಂದು ವೇಳೆ 104 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ ಅದರ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆದರೆ, ಅತಿ ಹೆಚ್ಚು ಅಂಕ ಗಳಿಸಿದ ಮೊದಲ 10 ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವುದು ಸಾಮಾನ್ಯ ಮತ್ತು ನ್ಯಾಯಯುತ ನಿಯಮವಾಗಿದೆ ಎಂದು ರಮೇಶ್ ಹೇಳಿದ್ದಾರೆ.
ಇದೇ ನಿಯಮವನ್ನು ಐಪಿಎಲ್ಗೆ ಹೋಲಿಸಿದರೆ, 2026ರ ಐಪಿಎಲ್ ಸೀಸನ್ನಲ್ಲಿ ಕನಿಷ್ಠ ಒಂದು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ರೇಸ್ನಲ್ಲಿದ್ದ ಒಟ್ಟು ಬೌಲರ್ಗಳ ಸಂಖ್ಯೆ 104. ಈ ಪೈಕಿ ಅತಿ ಹೆಚ್ಚು ವಿಕೆಟ್ ಪಡೆದ ಮೊದಲ 10 ಬೌಲರ್ಗಳಲ್ಲಿ ಐದು ಜನ ಭಾರತೀಯರೇ ಇದ್ದಾರೆ. ಈ ಟಾಪ್ 10 ಪಟ್ಟಿಯಲ್ಲಿ ಆರ್ಸಿಬಿ ತಂಡದ ಭುವನೇಶ್ವರ್ ಕುಮಾರ್ (28 ವಿಕೆಟ್) ಕೂಡ ಒಬ್ಬರಾಗಿದ್ದಾರೆ. ಪರೀಕ್ಷೆಯಲ್ಲಿ ಟಾಪ್ ಅಂಕ ಗಳಿಸಿದ ವಿದ್ಯಾರ್ಥಿಯಂತೆ ಅತ್ಯುತ್ತಮ ಪ್ರದರ್ಶನ ನೀಡಿದ್ದರೂ, ಅವರನ್ನು ಝಿಂಬಾಬ್ವೆ ಸರಣಿಗೆ ಆಯ್ಕೆ ಮಾಡದಿರುವುದು ಸಂಪೂರ್ಣ ತಾರತಮ್ಯ ಎಂದು ಸಡಗೋಪನ್ ರಮೇಶ್ ಕಿಡಿಕಾರಿದ್ದಾರೆ.
ಸರಳವಾಗಿ ಹೇಳುವುದಾದರೆ, “ಅತಿ ಹೆಚ್ಚು ವಿಕೆಟ್ ಪಡೆದು ‘ಪರೀಕ್ಷೆ’ಯಲ್ಲಿ ಪಾಸ್ ಆದ ಟಾಪ್ ಆಟಗಾರರನ್ನು ಬಿಟ್ಟು, ಆಯ್ಕೆ ಸಮಿತಿಯು ತನಗೆ ಇಷ್ಟ ಬಂದವರನ್ನು ತಂಡಕ್ಕೆ ಸೇರಿಸಿಕೊಂಡಿದೆ” ಎಂಬುದು ಸಡಗೋಪನ್ ರಮೇಶ್ ಅವರ ನೇರ ಆರೋಪವಾಗಿದೆ.
ಇದನ್ನೂ ಓದಿ: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕ್ರಿಕೆಟ್ ಯಾಕಿಲ್ಲ? ಇಲ್ಲಿದೆ ಉತ್ತರ
ಒಟ್ಟಾರೆಯಾಗಿ ಹೇಳುವುದಾದರೆ, ಸತತ ಎರಡು ಬಾರಿ ಐಪಿಎಲ್ ಮುಕುಟ ಧರಿಸಿದರೂ ಆರ್ಸಿಬಿ ಆಟಗಾರರನ್ನು ಕಡೆಗಣಿಸಿರುವುದು ಬಿಸಿಸಿಐ ಆಯ್ಕೆ ಮಾನದಂಡಗಳ ಮೇಲೆಯೇ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದೆ.
