
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ನಾಲ್ಕನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ರೋಚಕ ಜಯ ಸಾಧಿಸಿದೆ. ಮುಲ್ಲನ್ಪುರ್ನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಶುಭ್ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ 20 ಓವರ್ಗಳಲ್ಲಿ 162 ರನ್ ಕಲೆಹಾಕಿದ್ದರು. ಈ ಗುರಿಯನ್ನು ಪಂಜಾಬ್ ಕಿಂಗ್ಸ್ 19.1 ಓವರ್ಗಳಲ್ಲಿ ಚೇಸ್ ಮಾಡಿ ಮೂರು ವಿಕೆಟ್ಗಳ ರೋಚಕ ಜಯ ಸಾಧಿಸಿತು.
ಈ ರೋಚಕ ಸೋಲಿನ ಬಳಿಕ ಮಾತನಾಡಿದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್, ಮೊದಲು ಬ್ಯಾಟ್ ಮಾಡಿದ ಸಂದರ್ಭದಲ್ಲಿ ಕೊನೆಯ 5-6 ಓವರ್ಗಳಲ್ಲಿ ನಿರೀಕ್ಷಿತ ವೇಗದಲ್ಲಿ ರನ್ ಗಳಿಸಲು ಸಾಧ್ಯವಾಗಲಿಲ್ಲ. “ಇದು 210-220 ರನ್ ಗಳಿಸುವ ಪಿಚ್ ಆಗಿರಲಿಲ್ಲ. ನಾವು ಕನಿಷ್ಠ 175-180 ರನ್ ಗುರಿ ಹೊಂದಿದ್ದೆವು. ಚೆಂಡು ಹಳೆಯದಾದಂತೆ ಮೈದಾನದ ನೇರ ಹೊಡೆತಗಳನ್ನು ಹೊಡೆಯುವುದು ಕಷ್ಟವಾಯಿತು,” ಎಂದು ಅವರು ವಿವರಿಸಿದರು.
ಇನ್ನು ವೇಗಿ ಪ್ರಸಿದ್ಧ್ ಕೃಷ್ಣ ಅವರನ್ನು ತಡವಾಗಿ ಕಣಕ್ಕಿಳಿಸಿದ ನಿರ್ಧಾರದ ಬಗ್ಗೆ ಮಾತನಾಡಿದ ಗಿಲ್, “ವಿಕೆಟ್ ನಿಧಾನವಾಗಿದ್ದರಿಂದ, ಹೆಚ್ಚು ವೇಗವಿರುವ ಬೌಲರ್ ವಿಕೆಟ್ ತಂದುಕೊಡಬಲ್ಲರು ಎಂದು ನಾವು ಭಾವಿಸಿದ್ದೆವು. ಪ್ರಸಿದ್ಧ್ ಸರಿಯಾದ ಸಮಯಕ್ಕೆ ಬಂದು ವಿಕೆಟ್ ಪಡೆಯುವ ಮೂಲಕ 18ನೇ ಓವರ್ವರೆಗೂ ನಮ್ಮನ್ನು ಪಂದ್ಯದಲ್ಲಿ ಜೀವಂತವಾಗಿರಿಸಿದ್ದರು.
ಇದರ ಜೊತೆಗೆ ಯುವ ವೇಗಿ ಅಶೋಕ್ ಶರ್ಮಾ ಕೂಡ ಉತ್ತಮ ದಾಳಿ ಸಂಘಟಿಸಿದ್ದರು. “ಅಶೋಕ್ ಶ್ರಮಜೀವಿ ಮತ್ತು ಉತ್ತಮ ಫೀಲ್ಡರ್. ಹೊಸ ಚೆಂಡಿನಲ್ಲಿ ಅವರ ಬೌಲಿಂಗ್ ಶೈಲಿ ನನಗೆ ಶಿಬಿರದಲ್ಲೇ ಇಷ್ಟವಾಗಿತ್ತು. ಅನುಭವ ಹೆಚ್ಚಾದಂತೆ ಅವರು ತಂಡದ ಅಮೂಲ್ಯ ಆಸ್ತಿಯಾಗಲಿದ್ದಾರೆ,” ಎಂದು ಶುಭ್ಮನ್ ಗಿಲ್ ಹೇಳಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಸೋಲಿಗೆ ಕಾರಣವಾಗಿದ್ದು ಮಳೆ. ನಾವು ಅಂತಿಮ ಓವರ್ಗಳ ವೇಳೆ ಕಂಬ್ಯಾಕ್ ಮಾಡಿದರೂ ಮಳೆ ಬಂದಿದ್ದರಿಂದ ಚೆಂಡು ಒದ್ದೆಯಾಗಿತ್ತು. ಇದರಿಂದ ಪಂಜಾಬ್ ಕಿಂಗ್ಸ್ ತಂಡಕ್ಕೆ ಬ್ಯಾಟಿಂಗ್ ಸುಲಭವಾಯಿತು ಎಂದು ಶುಭ್ಮನ್ ಗಿಲ್ ಅಭಿಪ್ರಾಯಪಟ್ಟಿದ್ದಾರೆ.
- ಈ ಪಂದ್ಯದ ದ್ವಿತೀಯ ಇನಿಂಗ್ಸ್ ವೇಳೆ ತುಂತುರು ಮಳೆಯಾಗಿತ್ತು.
- ತುಂತುರು ಮಳೆ ಬಂದರೂ ಪಂದ್ಯವನ್ನು ಮುಂದುವರೆಸಲಾಗಿತ್ತು.
- ಚೆಂಡು ಒದ್ದೆಯಾದರೆ ಬೌಲರ್ಗಳಿಗೆ ಬಾಲ್ ಮೇಲೆ ಹೆಚ್ಚಿನ ಗ್ರಿಪ್ ಸಿಗುವುದಿಲ್ಲ.
ಅಂತಿಮವಾಗಿ ಈ ಸೋಲಿನಿಂದ ಕಂಗೆಡದಂತೆ ತಂಡದ ಸದಸ್ಯರಿಗೆ ಕಿವಿಮಾತು ಹೇಳಿದ ಶುಭ್ಮನ್ ಗಿಲ್, “ನಾವು ಉತ್ತಮವಾಗಿಯೇ ಆಡಿದ್ದೇವೆ. ಮುಂದಿನ ಪಂದ್ಯಗಳಲ್ಲಿ ಹೆಚ್ಚಿನ ಇಂಟೆನ್ಸಿಟಿ ಮತ್ತು ಶ್ರಮದೊಂದಿಗೆ ಮರಳೋಣ. ತಪ್ಪುಗಳಿಂದ ಕಲಿತು ಸಾಗುವುದೇ ಮುಖ್ಯ ಎಂದು ತಂಡದ ಹುಮ್ಮಸ್ಸು ಹೆಚ್ಚಿಸುವ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ: ಈ ಕೂಪರ್ ಕೊನೊಲಿ ಯಾರು ಗೊತ್ತಾ?
ಇನ್ನು ಮೊದಲ ಮ್ಯಾಚ್ನಲ್ಲಿ ಸೋಲನುಭವಿಸಿರುವ ಗುಜರಾತ್ ಟೈಟಾನ್ಸ್ ತಂಡವು ಏಪ್ರಿಲ್ 4 ರಂದು ನಡೆಯಲಿರುವ ತನ್ನ ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.