ಗ್ಯಾಂಗ್ಟಾಕ್, ಜುಲೈ 22: ಸಿಕ್ಕಿಂನ ನಾಮ್ಚಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಮೀಥೇನ್ ಅನಿಲ ಸ್ಫೋಟಗೊಂಡು ಸಂಭವಿಸಿದ ಭೂಕುಸಿತ(Landslide)ದಿಂದಾಗಿ ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಜುಲೈ20ರಂದು ಮಧ್ಯಾಹ್ನ ಸಮರ್ದುಂಗ್ನಲ್ಲಿರುವ ಎನ್ಎಚ್ಪಿಸಿ ತೀಸ್ತಾ ಹಂತ VI ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿದ ಪರಿಣಾಮ 25 ಮಂದಿ ಅವಶೇಷಗಳಡಿ ಸಿಲುಕಿಕೊಂಡಿದ್ದರು. ಒಳಗೆ ಸಿಲುಕಿದ್ದ 25 ಮಂದಿ ಪೈಕಿ 20 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ.
ಸ್ಫೋಟಕ್ಕೆ ಕಾರಣವೇನು?
ಎನ್ಎಚ್ಪಿಸಿ ನೀಡಿರುವ ಮಾಹಿತಿಯ ಪ್ರಕಾರ, ಸುರಂಗದ ಒಳಗಿದ್ದ ಬಂಡೆಗಳ ನಡುವಿದ್ದ ಮೀಥೇನ್ ಅನಿಲವು ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಇದರ ಪರಿಣಾಮವಾಗಿ ಸುರಂಗದೊಳಗೆ ದಟ್ಟವಾದ ವಿಷಕಾರಿ ಹೊಗೆ ಮತ್ತು ಅನಿಲ ಆವರಿಸಿಕೊಂಡು ಕಾರ್ಮಿಕರು ಉಸಿರುಗಟ್ಟಿ ಹಾಗೂ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ.
ಪ್ರಧಾನಿ ಮೋದಿ ಸಾಂತ್ವನ, ಪರಿಹಾರ ಘೋಷಣೆ
ಘಟನೆಯ ಕುರಿತು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಪರಿಸ್ಥಿತಿಯ ಪೂರ್ಣ ವಿವರ ಪಡೆದುಕೊಂಡರು ಹಾಗೂ ಕೇಂದ್ರದಿಂದ ಅಗತ್ಯವಿರುವ ಎಲ್ಲಾ ನೆರವು ನೀಡುವ ಭರವಸೆ ನೀಡಿದರು. ಪ್ರಧಾನಿ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರ ಘೋಷಿಸಲಾಗಿದೆ. ಸಿಕ್ಕಿಂ ಮುಖ್ಯಮಂತ್ರಿ ತಮಾಂಗ್ ಅವರು ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50,000 ರೂ.ಪರಿಹಾರ ಘೋಷಿಸಿದ್ದಾರೆ.
ಮತ್ತಷ್ಟು ಓದಿ: ನಾಗಾಲ್ಯಾಂಡ್ನಲ್ಲಿ ಭೀಕರ ಭೂಕುಸಿತ; 4 ಜನ ಸಾವು, ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ
ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ತಮಾಂಗ್, ಸುರಂಗದೊಳಗಿನ ಆಕ್ಸಿಜನ್ ಕೊರತೆ ನಿವಾರಣೆ ಮತ್ತು ವಿಷಕಾರಿ ಅನಿಲವನ್ನು ತೆರವುಗೊಳಿಸಲು ನೆರೆಯ ಪಶ್ಚಿಮ ಬಂಗಾಳದಿಂದ ‘ವಿಶೇಷ ಗಣಿಗಾರಿಕೆ ರಕ್ಷಣಾ ತಂಡ’ ಕರೆಸಲಾಗಿದೆ ಎಂದು ತಿಳಿಸಿದರು. ಅಲ್ಲದೆ, ಈ ಸ್ಫೋಟದ ನಿಖರ ಕಾರಣವನ್ನು ಪತ್ತೆಹಚ್ಚಲು ವಿಶೇಷ ತನಿಖಾ ಸಮಿತಿ ರಚಿಸಲಾಗುವುದು ಎಂದು ತಿಳಿಸಿದ್ದಾರೆ.
ವಿಡಿಯೋ
Namchi, Sikkim: The Samardung tunnel incident at Mamring in South Sikkim was caused by a methane gas explosion during excavation, rather than a landslide as initially reported. The resulting gas leak hampered rescue efforts. Ten bodies have been recovered, and NDRF teams continue… pic.twitter.com/rppvq3pPWa
— IANS (@ians_india) July 21, 2026
ದುರಂತದಲ್ಲಿ ಪ್ರಾಣ ಕಳೆದುಕೊಂಡ ಅಮಾಯಕರ ಆತ್ಮಕ್ಕೆ ಶಾಂತಿ ಕೋರಿ ಸಿಕ್ಕಿಂ ಶಾಸನಸಭೆಯಲ್ಲಿ ಮಂಗಳವಾರ ಎರಡು ನಿಮಿಷಗಳ ಮೌನಾಚರಣೆ ನಡೆಸಿ ಸಂತಾಪ ಸೂಚಿಸಲಾಯಿತು. ಮೃತಪಟ್ಟ ಕಾರ್ಮಿಕರಲ್ಲಿ ಹೆಚ್ಚಿನವರು ಹೊರರಾಜ್ಯದವರಾಗಿರುವುದರಿಂದ, ಅವರ ಮೃತದೇಹಗಳ ಪತ್ತೆ ಹಾಗೂ ಕುಟುಂಬಸ್ಥರಿಗೆ ಹಸ್ತಾಂತರಿಸಲು ರಂಗ್ಪೋದಲ್ಲಿ ವಿಶೇಷ ಕೇಂದ್ರವನ್ನು ಸ್ಥಾಪಿಸಲು ನಾಮ್ಚಿ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.
ವಿಡಿಯೋ
Conducted a joint inspection with Hon’ble Governor Shri Om Prakash Mathur Ji at the under-construction tunnel of the NHPC Teesta Stage VI Hydroelectric Project at Samardung, Jholungey, in Namchi District.
We inspected the tunnel where the tragic incident of July 20 claimed the… pic.twitter.com/zjdsxVINQM
— Prem Singh Tamang (Golay) (@PSTamangGolay) July 21, 2026
ಸಿಕ್ಕಿಂ ಸರ್ಕಾರದ ಮುಖ್ಯ ಕಾರ್ಯದರ್ಶಿ ರವೀಂದ್ರ ತೆಲಂಗ್ ಮತ್ತು ಪೊಲೀಸ್ ಮಹಾನಿರ್ದೇಶಕ ಅಕ್ಷಯ್ ಸಚ್ದೇವ ಅವರು ಎನ್ಎಚ್ಪಿಸಿ ಮತ್ತು ಕಾಮಗಾರಿ ನಡೆಸುತ್ತಿರುವ ‘ಪಟೇಲ್ ಎಂಜಿನಿಯರಿಂಗ್’ ಸಂಸ್ಥೆಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ, ಆಮ್ಲಜನಕ ಪೂರೈಕೆಯೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ಶೀಘ್ರ ಪೂರ್ಣಗೊಳಿಸಲು ನಿರ್ದೇಶಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
