
ಹಾಸನ, ಜೂನ್ 30: ಹಾಸನದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 (SIR) ಪ್ರಕ್ರಿಯೆಯು ಆರಂಭವಾಗಿದ್ದು, ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಮನೆಯಿಂದಲೇ ಇದಕ್ಕೆ ಚಾಲನೆ ದೊರೆತಿದೆ. ಪ್ರಕ್ರಿಯೆಯ ಕುರಿತು ಆರಂಭದಲ್ಲಿ ತನಗೂ ಭಯವಿತ್ತು ಎಂದು ಹೇಳಿರುವ ಬಾನು ಮುಷ್ತಾಕ್, ಇದೊಂದು ಕಠಿಣ ಪ್ರಕ್ರಿಯೆ ಎಂಬ ಫೋಬಿಯಾ ರಾಜಕೀಯ ಕಾರ್ಯಕರ್ತರ ಮತ್ತು ಪ್ರಮುಖರ ಮಾತಿನಿಂದಾಗಿ ಸಾರ್ವಜನಿಕರಲ್ಲಿ ಸೃಷ್ಟಿಯಾಗಿದೆ ಎಂದಿದ್ದಾರೆ. ಆದರೆ, ಪ್ರಕ್ರಿಯೆಗೆ ಒಳಗಾದ ನಂತರ ತಮ್ಮ ಭಯ ನಿವಾರಣೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳು ಮತ್ತು ಇತರೆ ಅಧಿಕಾರಿಗಳೊಂದಿಗೆ ಎನ್ಯೂಮರೇಷನ್ ಫಾರ್ಮ್ ಭರ್ತಿ ಮಾಡಿದಾಗ, ಕೇವಲ ಎರಡು ದಾಖಲೆಗಳು, ಅಂದರೆ ಆಧಾರ್ ಕಾರ್ಡ್ ಮತ್ತು ಹಳೆಯ ಮತದಾರರ ಗುರುತಿನ ಚೀಟಿ ಮಾತ್ರ ಬೇಕಾಗಿತ್ತು. ಈ ಪ್ರಕ್ರಿಯೆ ಬಹಳ ಸುಲಭ ಮತ್ತು ಸರಳವಾಗಿದ್ದು, ಯಾವುದೇ ನಾಗರಿಕರು ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದು ಅವರು ಹೇಳಿದರು. ಅಧಿಕಾರಿಗಳು ತಾಳ್ಮೆಯಿಂದ ಮತ್ತು ಸಂಯಮದಿಂದ ಜನರಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿಗಳಿಗೆ ಬಾನು ಮುಷ್ತಾಕ್ ಮನವಿ ಮಾಡಿದ್ದಾರೆ. ಒಂದು ವೇಳೆ ತೊಂದರೆ ಎದುರಾದಲ್ಲಿ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ